Saturday, February 1, 2014

ಬೆಂಗಾಲಿ ಸುಂದರಿ-5

                    ವಿನಯಚಂದ್ರ ಹಾಗೂ ಜೊತೆಗಾರರು ನವದೆಹಲಿಯನ್ನು ತಲುಪುವ ವೇಳೆಗೆ ದೆಹಲಿಯನ್ನು ದಟ್ಟ ಮಂಜು ಆವರಿಸಿತ್ತು. ಕಣ್ಣೆದುರು 10-15 ಮೀಟರ್ ದೂರದವರೆಗೆ ಏನೂ ಕಾಣಿಸದು ಎನ್ನುವಷ್ಟು ಮಂಜು. ಮಿಳಿಯ ಪರದೆ. ಚುಮು ಚುಮು ಚಳಿ. ನಾಲ್ವರೂ ಏರ್ ಪೋರ್ಟಿನಿಂದ ಸೀದಾ ಕಬ್ಬಡ್ಡಿ ತರಬೇತಿಗೆಂದು ನಿಗದಿ ಪಡಿಸಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಾಗಲೇ ತಂಡದ ಬಹುತೇಕ ಎಲ್ಲ ಆಟಗಾರರೂ ಬಂದಿದ್ದರು. ಒಟ್ಟೂ 12 ಜನರ ತಂಡ. ಏಳು ಜನ ಕಬ್ಬಡ್ಡಿ ಆಡುವವರಾದರೆ ಐವರು ಇತರೆ ಆಟಗಾರರು. ಆಟಗಾರರಲ್ಲಿ ಹೆಚ್ಚಿನವರು ದಕ್ಷಿಣ ಭಾರತದವರಾಗಿದ್ದರು. ಕರ್ನಾಟಕದಿಂದ ವಿನಯಚಂದ್ರನಿದ್ದರೆ ತಮಿಳುನಾಡಿನಿಂದ ಇಬ್ಬರು, ಕೇರಳದಿಂದ ಒಬ್ಬಾತ, ಮಹಾರಾಷ್ಟ್ರದಿಂದ ಇಬ್ಬರು, ಆಂದ್ರದಿಂದ ಇಬ್ಬರು, ಓರಿಸ್ಸಾದ ಒಬ್ಬಾತ, ಇದ್ದರೆ ಉಳಿದ ಆಟಗಾರರು ಮದ್ಯಪ್ರದೇಶ, ಜಾರ್ಖಂಡ್, ಉತ್ತರಪ್ರದೇಶಕ್ಕೆ ಸೇರಿದವರಾಗಿದ್ದರು. ಇಬ್ಬರು ಪಂಜಾಬಿನವರೂ ಇದ್ದರು. ಎಲ್ಲ ಒಟ್ಟು ಸೇರುವ ವೇಳೆಗೆ ಮದ್ಯಾಹ್ನವೂ ಆಗಿತ್ತು.
                   ಅಷ್ಟರಲ್ಲಿ ಕೋಚ್ ಪ್ರಕಾಶ ಜಾಧವ್ ಅವರೂ ಆಗಮಿಸಿದ್ದರು. ಅವರಿಗೆ ಟೀಮಿನಲ್ಲಿದ್ದ ಹಳೆಯ ಆಟಗಾರರ ಪರಿಚಯವಿತ್ತು. ಎಲ್ಲರನ್ನೂ ಮಾತನಾಡಿಸಿ ಕೊನೆಯದಾಗಿ ವಿನಯಚಂದ್ರ ಹಾಗೂ ಸೂರ್ಯನ್ ಬಳಿಗೆ ಆಗಮಿಸಿದರು. ಬಂದವರೇ ಸೂರ್ಯನ್ ನ್ನು ಮಾತನಾಡಿಸಿದರು. ನಂತರ ವಿನಯಚಂದ್ರನ ಬಳಿ ತಿರುಗಿ `ವಿನಯ್ ಅವರೆ ಚಿದಂಬರ್ ಅವರು ಎಲ್ಲಾ ಹೇಳಿದ್ದಾರೆ. ಆಲ್ ದಿ ಬೆಸ್ಟ್.. ಚನ್ನಾಗಿ ಆಡಿ' ಎಂದರು.
                 ವಿನಯಚಂದ್ರ `ಥ್ಯಾಂಕ್ಸ್..ಖಂಡಿತ.. ಎಲ್ಲಾ ನಿಮ್ಮ ಆಶೀರ್ವಾದ ಸರ್' ಎಂದ.
                 ನಂತರ ತರಬೇತಿ ಶುರುವಾದವು. ವಿಶ್ವಕಪ್ ವಿಜಯಕ್ಕೆ ಅಗತ್ಯವಾದಂತಹ ಎಲ್ಲ ತರಬೇತಿಗಳನ್ನೂ ಅಲ್ಲಿ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ವಿನಯಚಂದ್ರ ಹೊಸತನ್ನು ಕಲಿಯುತ್ತ ಹೋದ. ವಿನಯಚಂದ್ರ ಇದುವರೆಗೂ ಏನು ಕಲಿತಿದ್ದನೋ ಅದಕ್ಕಿಂತಲೂ ಹೆಚ್ಚಿನದನ್ನೇನೋ ಕಲಿಯುತ್ತಿದ್ದೇನೆ ಎನ್ನಿಸಿತು. ಚುಮು ಚುಮು ಚಳಿಯಲ್ಲಿಯೂ ಬೆವರು ಸುರಿಸುವಂತೆ ತರಬೇತಿ ನಡೆಯುತ್ತಿತ್ತು. ಕಬ್ಬಡ್ಡಿ ತರಬೇತಿ ನಡೆಯುತ್ತಿದ್ದ ನ್ಯಾಶನಲ್ ಗ್ರೌಂಡ್ ನಲ್ಲಿ ಆಗೊಮ್ಮೆ ಈಗೊಮ್ಮೆ ಸೂರ್ಯಕಿರಣದ ಪರಿಚಯವಾಗುತ್ತಿತ್ತಾದರೂ ದಿನದ ಬಹು ಸಮಯ ತಿಳಿಮೋಡವೋ, ಮಂಜಿನ ಪೊರೆಯೋ ಆವರಿಸುತ್ತಿತ್ತು. ಇಂತಹ ವಾತಾವರಣದಲ್ಲಿಯೂ ಕಷ್ಟಪಟ್ಟು ತರಬೇತಿ ನಡೆಸುತ್ತಿದ್ದರು ಆಟಗಾರರು.

**

                      ನವದೆಹಲಿ ವಿನಯಚಂದ್ರನ ಪಾಲಿಗೆ ನಿತ್ಯನೂತನವಾಗಿತ್ತು. ಪ್ರತಿದಿನ ಹೊಸ ತರವಾಗಿ ಆತನಿಗೆ ಕಲಿಸುತ್ತ ಹೋಯಿತು. ಈ ಮುನ್ನ ಆರೆಂಟು ಸಾರಿ ವಿನಯಚಂದ್ರ ನವದೆಹಲಿಗೆ ಬಂದಿದ್ದನಾದರೂ ದೆಹಲಿಯ ಬೀದಿಗಳಲ್ಲಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಾರಿ ಸಾಕಷ್ಟು ಸಮಯ ಸಿಕ್ಕಿತು. ತಿರುಗಾಡಲು ಜೊತೆಗೆ ಸೂರ್ಯನ್ ಸಿಕ್ಕಿದ್ದ. ಆ ಕಾರಣದಿಂದ ನವದೆಹಲಿಯ ಬೀದಿಗಳತ್ತ ವಿನಯಚಂದ್ರ ಮುಖ ಮಾಡಿದ್ದ.
                     ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಾಕಷ್ಟು ಹೆಸರು ಮಾಡಿಕೊಂಡಿರುತ್ತಾರೆ. ಈ ಕಾರಣದಿಂದ ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಟೆನ್ನಿಸ್ ಹಾಗೂ ಫುಟ್ ಬಾಲ್ ಆಟಗಾರರಿಗೂ ಕೆಲವೊಮ್ಮೆ ಅಭಿಮಾನಿಗಳ ಕಾಟವಿರುತ್ತದೆ. ಹಾಕಿಗೂ ಆಗೀಗ ಅಭಿಮಾನಿಗಳು ಕಾಣುತ್ತಾರೆ. ಆದರೆ ಕಬ್ಬಡ್ಡಿಯನ್ನು ಕೇಳುವವರು ಬಹಳ ಕಡಿಮೆಯೇ ಎನ್ನಬಹುದು. ಈ ಕಾರಣಕ್ಕಾಗಿ ಯಾವುದೇ ತೊಂದರೆಯಿಲ್ಲದೇ ವಿನಯಚಂದ್ರ ದೆಹಲಿಯಲ್ಲಿ ಸುತ್ತಾಡಿದ. ತನ್ನಿಷ್ಟದ ದಾಲ್ ಚಾವಲ್ ತಿಂದ. ಪಾನಿಪುರಿಯನ್ನೂ ತಿಂದ. ಸೂರ್ಯನ್ ಕೂಡ ಆತನಿಗೆ ಜೊತೆಗಾರಿಕೆ ನೀಡಿದ. ದೆಹಲಿಯ ರಾಜಪಥ, ಹೊಸ ದಿಲ್ಲಿಯ ಬೀದಿಗಳು, ಫಿರೋಜ್ ಷಾ ಕೋಟ್ಲಾ ಮೈದಾನಗಳಿಗೆಲ್ಲ ಹೋಗಿ ಬಂದ. ಮಂಜಿನ ಮುಂಜಾವಿನಲ್ಲಿ, ಮೋಡಕವಿದ ವಾತಾವರಣದಲ್ಲಿ ದೆಹಲಿಯಲ್ಲಿ ಓಡಾಡುವುದು ಹೊಸ ಖುಷಿಯನ್ನು ನೀಡುತ್ತಿತ್ತು.
                   ದಿನಕಳೆದಂತೆ ವಿನಯಚಂದ್ರನ ಮನದ ದುಗುಡ ಹೆಚ್ಚುತ್ತ ಹೋಯಿತು. ಬಾಂಗ್ಲಾದೇಶಕ್ಕೆ ಹೋಗುವ ದಿನವೂ ಹತ್ತಿರ ಬರುತ್ತಿತ್ತು. ಬಾಂಗ್ಲಾದೇಶದಲ್ಲಿ ಹೇಗೋ ಏನೋ ಅನ್ನುವ ತಳಮಳ ಆತನಲ್ಲಿ ಶುರುವಾದಂತಿತ್ತು. ಆದರೂ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದ.
                  `ವಿನು.. ಬಾಂಗ್ಲಾದೇಶಕ್ಕೆ ಹೋಗೋಕೆ ಇನ್ನು ಮೂರೇ ದಿನ ಇದೆ ಕಣೋ.. ಬಾಂಗ್ಲಾದೇಶದಲ್ಲಿ ಬೇರೆ ಗಲಾಟೆ ಆರಂಭವಾಗುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧಿ ಪಕ್ಷದ ನಡುವೆ ಬಹಳ ಘರ್ಷಣೆ ನಡೆಯುತ್ತಿದೆಯಂತೆ.. ವಿಶ್ವಕಪ್ ನಡೆಯುವುದು ಅನುಮಾನ ಎಂದು ಜಾಧವ್ ಹೇಳುತ್ತಿದ್ದರು..' ಎಂದು ಸೂರ್ಯನ್ ವಿನಯಚಂದ್ರನ ಬಳಿ ಹೇಳಿದಾಗ ವಿನಯಚಂದ್ರನಲ್ಲಿ ಒಮ್ಮೆ  ನಿರಾಸೆಯ ಕಾರ್ಮೋಡ ಸುಳಿದಿದ್ದು ಸುಳ್ಳಲ್ಲ. ಮುಂದೇನು ಮಾಡೋದು ಎನ್ನುವ ಭಾವನೆ ಮೂಡಿದ್ದೂ ಸುಳ್ಳಲ್ಲ. ವಿಶ್ವಕಪ್ ಪಂದ್ಯಾವಳಿ ರದ್ದಾದರೆ ಇದುವರೆಗೂ ಮಾಡಿಕೊಂಡ ತಯಾರಿಗಳೆಲ್ಲ ವ್ಯರ್ಥವಾಗುತ್ತವೆ. ಇದೇ ಮೊದಲ ಬಾರಿಗೆ ತಾನು ಕಬ್ಬಡ್ಡಿ ಪಂದ್ಯಾವಳಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ. ಈಗ ಪಂದ್ಯಾವಳಿಯೇ ರದ್ಧಾದರೆ ಇದರಿಂದ ಬೇಜಾರಾಗುತ್ತದೆ. ಮೊದಲ ಪ್ರಯತ್ನವೇ ಹೀಗಾಗಿಬಿಟ್ಟಿತಲ್ಲ ಎನ್ನುವ ಕೊರಗೂ ಇರುತ್ತದೆ. ಸಿಕ್ಕ ಅವಕಾಶದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಆಟವಾಡಬೇಕು ಎಂದುಕೊಂಡಿದ್ದ ವಿನಯಚಂದ್ರ ಒಮ್ಮೆ ಮಂಕಾಗಿದ್ದು ಸುಳ್ಳಲ್ಲ.
               ನಡೆಯುತ್ತದೆ, ನಡೆಯುವುದಿಲ್ಲ.. ಈ ಗೊಂದಲಗಳ ನಡುವೆ ವಿಶ್ವಕಪ್ ನಡೆದೇ ನಡೆಯುತ್ತದೆ ಎಂದು ಬಾಂಗ್ಲಾ ಸರ್ಕಾರ ಕೊನೆಗೊಮ್ಮೆ ಘೋಷಣೆ ಮಾಡಿತ್ತು. ಬಾಂಗ್ಲಾದೇಶಕ್ಕೆ ಆಗಮಿಸುವ ಬೇರೆ ಬೇರೆ ದೇಶಗಳ ಆಟಗಾರರಿಗೆ ಎಲ್ಲ ಸೌಕರ್ಯ ಕೈಗೊಳ್ಳಲಾಗುತ್ತದೆ. ಸುರಕ್ಷತೆಯ ಬಗ್ಗೆ ಅನುಮಾನ ಬೇಡ. ಭಾರಿ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಬಾಂಗ್ಲಾದೇಶ ಭರವಸೆಯನ್ನು ನೀಡಿತು. ಇಷ್ಟೆಲ್ಲ ಆದ ನಂತರ ಕೊನೆಗೊಮ್ಮೆ ಬಾಂಗ್ಲಾದೇಶಕ್ಕೆ ಹೋಗೋದು ಪಕ್ಕಾ ಆದಾಗ ಮಾತ್ರ ವಿನಯಚಂದ್ರ ನಿರಾಳನಾಗಿದ್ದ. ಜಾಧವ್ ಅವರು ಎಲ್ಲ ಆಟಗಾರರನ್ನು ಕರೆದು ಬಾಂಗ್ಲಾದೇಶದಲ್ಲಿ ನಡೆದುಕೊಳ್ಳುವ ಬಗ್ಗೆ ತಿಳಿ ಹೇಳಿದರು. ಹಿರಿಯ ಆಟಗಾರರಿಗೆ ಇದು ಮಾಮೂಲಿ ಸಂಗತಿಯಾಗಿದ್ದರೂ ವಿನಯಚಂದ್ರನಿಗೆ ಮೊದಲ ಅನುಭವವಾಗಿತ್ತು. ಜಾಧವ್ ಅವರು `ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಾಟೆಯ ಬಗ್ಗೆ ತುಣುಕಾಗಿ ವಿವರಿಸಿ ಯಾರೂ ಕೂಡ ತಮ್ಮ ತಮ್ಮ ಹೊಟೆಲ್ ಹಾಗೂ ವಿಶ್ವಕಪ್ ನಡೆಯುವ ಸ್ಥಳಗಳನ್ನು ಬಿಟ್ಟು ಹೊರಗೆ ಹೋಗಬಾರದು. ಹೋಗಲೇಬೇಕೆಂಬ ಅನಿವಾರ್ಯತೆ ಒದಗಿಬಂದರೆ ತಂಡದ ಮ್ಯಾನೇಜ್ ಮೆಂಟಿಗೆ ವಿಷಯವನ್ನು ತಿಳಿಸಿ, ಅವರಿಂದ ಒಪ್ಪಿಗೆ ಪಡೆದು, ಭದ್ರತೆಗಾಗಿ ಜೊತೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯಬೇಕು ಎಂದು ತಾಕೀತು ಮಾಡಿದ್ದರು. ವಿನಯಚಂದ್ರ ಎಲ್ಲರಂತೆ `ಹೂಂ' ಅಂದಿದ್ದ.
              ಮರುದಿನ ಬಾಂಗ್ಲಾದೇಶಕ್ಕೆ ಹೊರಡುವ ಸಲುವಾಗಿ ತಯಾರಿ ನಡೆದಿತ್ತು. ತನ್ನ ತಾಲೀಮನ್ನು ಮುಗಿಸಿ ವಿನಯಚಂದ್ರ ರೂಮಿನತ್ತ ಮರಳುತ್ತಿದ್ದಾಗ ಜಾಧವ್ ಆತನನ್ನು ಕರೆದರು. ಕುತೂಹಲದಿಂದಲೇ ಹೋದ.
`ವಿನಯ್.. ಹೇಗಿದ್ದೀರಿ?'
`ಚನ್ನಾಗಿದ್ದೇನೆ ಸರ್..'
`ಇದು ನಿನ್ನ ಮೊದಲ ವಿಶ್ವಕಪ್ ಅಲ್ಲಾ.. ಏನನ್ನಿಸ್ತಾ ಇದೆ..?'
`ಏನ್ ಹೇಳಬೇಕು ಅಂತಾನೇ ಗೊತ್ತಾಗುತ್ತಿಲ್ಲ ಸರ್.. ಬಹಳ ತಳಮಳ ಆಗ್ತಾ ಇದೆ..ಹೇಗಾಗುತ್ತೋ, ಏನಾಗುತ್ತೋ ಎನ್ನುವ ಭಾವ ಕಾಡುತ್ತಿದೆ'
`ಓಹ್.. ಹೌದಾ.. ಗುಡ್.. ಎಲ್ಲರಿಗೂ ಹಾಗೆ ಆಗುತ್ತೆ.. ಇರ್ಲಿ.. ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರಬೇಕಪ್ಪ.. ಅಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಅಲ್ಲಿನ ಸರ್ಕಾರ ಎಲ್ಲ ಸರಿಯಿದೆ ಅಂತ ಹೇಳಿದೆ. ಆದರೂ ನಾವು ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ನಿನ್ನನ್ನು ಹುಷಾರಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿದಂಬರ ಅವರು ನನಗೆ ವಹಿಸಿದ್ದಾರೆ..'
`ಸರ್.. ಸರಿ ಸರ್..'
`ನೋಡು.. ಬಾಂಗ್ಲಾದೇಶದ ಕುರಿತು ನಾನು ನಿಂಗೆ ಹೆಚ್ಚು ಹೇಳಬೇಕಿಲ್ಲ ಅಂದ್ಕೋತೀನಿ.. ಮೈಯೆಲ್ಲಾ ಕಣ್ಣಾಗಿರಬೇಕು.. ಆಟದ ಕುರಿತು ಬಂದ್ರೆ ಯಾವ ಸಮಯದಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಬಲ್ಲೆ ಎಂಬ ಛಾತಿ ಬೇಕು.. ತಿಳೀತಾ..' ಎಂದರು.
`ಹುಂ ಸರ್.. ಅಲ್ಲಿ ಗಲಾಟೆ ಇದೆ ಅಂದಿದ್ದರು. ನಮಗೆ ಸಮಸ್ಯೆ ಇಲ್ವಾ..?' ವಿನಯಚಂದ್ರ ಮನದಾಳದ ತುಮುಲವನ್ನು ಹೊರ ಹಾಕಿದ್ದ.
`ನಮಗೆ ಟೈಟ್ ಸೆಕ್ಯೂರಿಟಿ ಅರೇಂಜ್ ಮಾಡಿದ್ದಾರಂತೆ.. ಸಮಸ್ಯೆ ಆಗೋದಿಲ್ಲ ಅಂದ್ಕೊಂಡಿದ್ದೀವಿ. ಅಂತಹ ಸಮಸ್ಯೆಗಳು ಎದುರಾದರೆ ಬಾಂಗ್ಲಾ ಮಿಲಿಟರಿಯವರು ನಮ್ಮನ್ನು ಕಾಪಾಡೋಕೆ ಹೊಣೆ ಹೊತ್ತಿದ್ದಾರಂತೆ..ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.. ಆದರೂ ನೋಡೋಣ..' ಎಂದು ಹೇಳಿದರು ಜಾಧವ್.
ವಿನಯಚಂದ್ರ ಮಾತಾಡಲಿಲ್ಲ.

**

               ರೂಮಿನಲ್ಲಿ ಸೂರ್ಯನ್ ತಯಾರಾಗಿದ್ದ. `ವಿನು ಬೇಗ ತಯಾರಾಗು.. ಜಾಧವ್ ಸರ್ ನಮಗೆಲ್ಲ ಬಾಂಗ್ಲಾದೇಶದ ಕುರಿತು ಮಾಹಿತಿ ನೀಡೋ ಸಿಡಿ ಕೊಟ್ಟಿದ್ದಾರೆ ನೋಡೋಣ..' ಎಂದ.
              ಸಿಡಿಯನ್ನು ಹಾಕಿ ನೋಡುತ್ತಿದ್ದಂತೆ ಬಾಂಗ್ಲಾದೇಶ ಅವರ ಕಣ್ಮುಂದೆ ಅನಾವರಣಗೊಂಡಿತು.
              ಒಂದಾನೊಂದು ಕಾಲದಲ್ಲಿ ಭಾರತದ್ದೇ ಒಂದು ಭಾಗವಾಗಿದ್ದ ಆ ನಾಡು ನಂತರ ಪಾಕಿಸ್ತಾನದ ಪ್ರದೇಶವಾಗಿ ಆ ನಂತರ ಪಾಕಿಸ್ತಾನಕ್ಕೂ ಈಗಿನ ಬಾಂಗ್ಲಾದೇಶಕ್ಕೂ ಘರ್ಷಣೆ ನಡೆದಿತ್ತು. ಕೊನೆಗೆ 1971ರಲ್ಲಿ ಭಾರತದ ಐರನ್ ಲೇಡಿ ಇಂದಿರಾಗಾಂಧಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಳು. ನಂತರದ ದಿನಗಳಲ್ಲಿ ಭಾರತದ ಕಡೆಗೆ ಬಹಳ ನಿಷ್ಟವಾಗಿದ್ದ ಬಾಂಗ್ಲಾದೇಶ ಕೊನೆ ಕೊನೆಗೆ ಭಾರತದ ವಿರುದ್ಧ ಭಯೋತ್ಪಾದಕ ಕಾರ್ಯಗಳನ್ನು ಕೈಗೊಳ್ಳುವಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಾರಂಭಿಸಿತ್ತು.
              ಸಾವಿರ ಕಿಲೋಮೀಟರುಗಟ್ಟಲೆ ಗಡಿಯನ್ನು ಬಾಂಗ್ಲಾದೇಶ ಭಾರತದೊಂದಿಗೆ ಹಂಚಿಕೊಂಡಿದೆ. ಆದರೆ ಗಡಿಗುಂಟ ಬೇಲಿಯೇ ಇಲ್ಲ. ಈ ಕಾರಣದಿಂದ ಪ್ರತಿ ದಿನ ನೂರಾರು ಜನ ಭಾರತದತ್ತ ನುಸುಳಿ ಬರುತ್ತಲೇ ಇದ್ದಾರೆ. ಭಾರತ ಈ ಸಮಸ್ಯೆಗೆ ಎಚ್ಚರಿಕೆಯ ಮೂಲಕ ತಡೆ ಹಾಕಲು ಯತ್ನಿಸುತ್ತಲೇ ಇದೆ. ಆಗಾಗ ಒಂದಷ್ಟು ಜನರನ್ನು ಗುಂಡಿಕ್ಕಿ ಸಾಯಿಸುವ ಮೂಲಕ ಭಾರತದೊಳಗೆ ನುಸುಳಿ ಬರುವ ಬಾಂಗ್ಲಾದೇಶಿಯರಿಗೆ ಎಚ್ಚರಿಕೆ ನೀಡುವ ಯತ್ನವನ್ನೂ ಮಾಡುತ್ತಿದೆ. ಟಿ.ವಿ ಪರದೆಯ ಮೇಲೆ ಮಾಹಿತಿ ಬರುತ್ತಲೇ ಇತ್ತು.
              `ತಥ್.. ಏನ್ ವೀಡಿಯೋನಪ್ಪಾ.. ಒಳ್ಳೇದು ಏನೂ ಇಲ್ವಾ?' ಎಂದು ಗೊಣಗಿದ. ವಿನಯಚಂದ್ರ ನೋಡುತ್ತಲೇ ಇದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವೀಡಿಯೋದಲ್ಲಿ ಬಾಂಗ್ಲಾದೇಶಿ ಮಹಿಳೆಯರು, ಹುಡುಗಿಯರ ಬಗ್ಗೆ ವಿವರಣೆ ಬರಲಾರಂಭಿಸಿತು. ತಕ್ಷಣ ಚುರುಕಾದ ಸೂರ್ಯನ್ `ಅಬ್ಬಾ.. ಅಂತೂ ನಮಗೆ ಬೇಕಾದ ವಿಷಯ ಬಂತಪ್ಪಾ..ಇನ್ನು ಕಣ್ಣಿಗೆ ಹಬ್ಬ' ಎಂದ.
               ಬಾಂಗ್ಲಾದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾದರೂ ಕೆಲವು ಪ್ರದೇಶಗಳಲ್ಲಿ ಹಿಂದೂಗಳೂ ಇದ್ದಾರೆ. ಅಲ್ಲಲ್ಲಿ ಬೌದ್ಧರನ್ನೂ ಕಾಣಬಹುದಾಗಿದೆ. ಬೆಂಗಾಲಿ ಹಿಂದುಗಳಲ್ಲಿ ಬೆಂಗಾಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ಬೆಂಗಾಲಿ ಹುಡುಗಿಯರು ಖಾದಿ, ಕಾಟನ್ ಸೀರೆಯ ಮೂಲಕ ಸೆಳೆಯುತ್ತಾರೆ. ಈಗೀಗ ಅವರ ಮೇಲೆ ದೌರ್ಜನ್ಯಗಳು ಹೆಚ್ಚಳವಾಗುತ್ತಿವೆ ಎಂದು ವೀಡಿಯೋ ಹೇಳುತ್ತಿತ್ತು.
                `ಬೆಂಗಾಲಿ ಹುಡುಗಿಯರು ಚನ್ನಾಗಿರ್ತಾರಂತೆ ವಿನು.. ನಾವು ಒಂದು ಕೈ ನೋಡೋಣ ಅಲ್ವಾ..'  ಎಂದ ಸೂರ್ಯನ್.
                `ಖಂಡಿತ.. ನೋಡೋಣ.. ನಿನಗೆ ಬೇಕಾದ್ರೆ ಹೇಳು ನಾನು ಸೆಲೆಕ್ಟ್ ಮಾಡ್ತೀನಿ.. ಹುಡುಗಿಯರನ್ನು ನೋಡಿದ ತಕ್ಷಣ ಅವರ ಗುಣವನ್ನು ಅಳೆಯುವಲ್ಲಿ ನಾನು ವಿಶೇಷತೆಗಳನ್ನು ಹೊಂದಿದ್ದೇನೆ..' ಎಂದ ವಿನಯಚಂದ್ರ.
                `ಹೋ.. ಖಂಡಿತ.. ನನಗೊಂದು ಬೆಂಗಾಲಿ ಹಿಂದೂ ಹುಡುಗಿ ಹುಡುಕು ಮಾರಾಯಾ.. ಈ ವೀಡಿಯೋ ಏನು ತೋರಿಸಿತೋ ಅದು ನನಗೆ ಅರ್ಥವಾಗಲಿಲ್ಲ. ಆದರೆ ಬೆಂಗಾಲಿ ಹುಡುಗಿಯರ ಕುರಿತು ಹೇಳಿದ ವಿಷಯಗಳು ಮಾತ್ರ ಶಬ್ದಶಬ್ದವೂ ನೆನಪಿನಲ್ಲಿದೆ..ಬೆಂಗಾಲಿ ಹುಡುಗಿಯರು ಬಹಳ ಚನ್ನಾಗಿ ಕಂಡರಪ್ಪಾ..' ಎಂದ ಸೂರ್ಯನ್..
                 `ಹೇಯ್.. ಬಾಂಗ್ಲಾದೇಶದ ಪ್ರಧಾನಿ ಕೂಡ ಹೆಣ್ಣು ಮಾರಾಯಾ..' ವಿನಯಚಂದ್ರ ಛೇಡಿಸಿದ.
                 `ಹೋಗೋ ಮಾರಾಯಾ.. ನನಗೆ ಅದು ಗೊತ್ತಿಲ್ಲ ಅಂದುಕೊಂಡೆಯಾ..? ಅಲ್ಲಿ ಪ್ರಧಾನಿ ವಿರುದ್ಧ ಪ್ರತಿಸ್ಪರ್ಧಿಯಾಗಿ ನಿಂತವಳೂ ಹೆಣ್ಣೇ ಮಾರಾಯಾ..ಈಗ ಗಲಾಟೆ ನಡೆಯುತ್ತಿರುವುದು ಇಬ್ಬರು ಹೆಂಗಸರ ಪಕ್ಷಗಳ ನಡುವೆ...' ಸೂರ್ಯನ್ ಮಾತಿನ ತಿರುಗುತ್ತರ ನೀಡಿದ.
               `ಹೌದು ಹೌದು ಈ ಇಬ್ಬರು ಹೆಂಗಸರಿದಂಲೇ ಅಲ್ಲವಾ ಬಾಂಗ್ಲಾದೇಶದಲ್ಲಿ ಒಳಜಗಳ, ಅರಾಜಕತೆ, ದಂಗೆ, ಹೋರಾಟ, ಗಲಾಟೆಗಳಾಗ್ತಾ ಇರೋದು.. ಚಂದ ಇದ್ದಾರೆ ಅಂತ ನಂಬೋಕಾಗೋಲ್ಲ ಅನ್ನೋದು ಇದಕ್ಕೇ ಇರಬೇಕು ನೋಡು..' ಎಂದ ವಿನಯಚಂದ್ರ.
                  ಮಾತು ತಮಾಷೆಯಿಂದ ಗಂಭೀರ ವಿಷಯದ ಕಡೆಗೆ ಹೊರಳುತ್ತಿತ್ತು. ಬಾಂಗ್ಲಾದೇಶದ ಕುರಿತು ಏನೇ ಮಾತು ಶುರುವಿಟ್ಟುಕೊಂಡರೂ ಕೊನೆಗೆ ಅದು ಅಲ್ಲಿನ ಅರಾಜಕತೆ, ದಂಗೆಯ ವಿಷಯಕ್ಕೇ ಬಂದು ಮುಟ್ಟುತ್ತಿತ್ತು. ಆ ವಿಷಯ ಬಂದ ನಂತರ ಮಾತು ಮುಂದುವರಿಯುತ್ತಿರಲಿಲ್ಲ. ಮೌನ ಆವರಿಸುತ್ತಿತ್ತು. ಮನಸ್ಸಿನಲ್ಲಿ ಎಷ್ಟೇ ಭೀತಿ, ಗೊಂದಲ, ಮುಂದೇನು ಎನ್ನುವ ಭಾವನೆಗಳು ಮೂಡಿದರೂ ಸಹ ಸೂರ್ಯನ್ ಹಾಗೂ ವಿನಯಚಂದ್ರ ಈ ಕುರಿತು ಹೆಚ್ಚಿಗೆ ಮಾತನಾಡುತ್ತಿರಲಿಲ್ಲ.
                  ಇಷ್ಟರ ನಡುವೆ ಸೂರ್ಯನ್ ವ್ಯಕ್ತಿ ಚಿತ್ರಣ ನೀಡದಿದ್ದರೆ ಕಥೆ ಮುಂದುವರಿಯುವುದಿಲ್ಲ. ನೋಡಲು ಪಕ್ಕಾ ತಮಿಳಿನವನಂತೆ ಕಾಣುವ, ಕಪ್ಪು ಬಣ್ಣವನ್ನು ಹೊಂದಿರುವ ಸೂರ್ಯನ್ ಗೆ  ಒಂದು ರೀತಿಯ ರಂಗೀನ್ ಮನುಷ್ಯ. ಯಾವುದೇ ಹುಡುಗಿ ಕಣ್ಣಿಗೆ ಬಿದ್ದರೂ ಅವಳನ್ನು ಮಾತನಾಡಿಸುವ ಪ್ರವೃತ್ತಿಯವನು. ವಯೋಸಹಜ ಫ್ಲರ್ಟಿಂಗ್ ಗುಣವಿತ್ತಾದರೂ ಅದು ಅತಿಯಾಗಿರಲಿಲ್ಲ. ಹುಡುಗಿಯರು ಸ್ವಲ್ಪ ಪರಿಚಯವಾದರು ಎಂದರೆ ಹರಟೆಗೆ ಬಿದ್ದು ಬಿಡುವ ವ್ಯಕ್ತಿತ್ವದವನಾಗಿದ್ದ ಸೂರ್ಯನ್. ಇಂತವನಿಗೆ ಬಾಂಗ್ಲಾದೇಶದ ಹುಡುಗಿಯರು ಸೆಳೆದಿರುವುದರಲ್ಲಿ ತಪ್ಪಿಲ್ಲ ಬಿಡಿ.

(ಮುಂದುವರಿಯುತ್ತದೆ..)

No comments:

Post a Comment