Wednesday, February 19, 2014

ಇದ್ದಡ

ನಾನು-ನೀನು
ಒಂದು ನದಿಯ
ಇಕ್ಕೆಲದ ದಡದ ಪಯಣಿಗರು
ನಾನಿತ್ತ ನೀನತ್ತ...

ಆಗಾಗ ನಿನ್ನ ಮುಂಗುರಳ
ನಡುವಿಂದ ಸುಳಿದು ಬರುವ
ಗಾಳಿ ನನ್ನ ಮನಸ್ಸಿಗೆ ತಾಕಿ
ಹಕ್ಕಿಯಂತೆ ರೆಕ್ಕೆಪುಕ್ಕ
ನಾನು ಬಾನಾಡಿ

ಹೆಚ್ಚಿನ ಕಾಲ ನಿನ್ನ ಬಯಸಿ
ಸನಿಹಕ್ಕೆ ಬರಲು ಕಾತರಿಸಿ
ಎಷ್ಟೆಲ್ಲ ದಿಟ್ಟಿಸಿದರೂ
ನದಿಯ ತಡೆಗೋಡೆ
ಭ್ರಮ ನಿರಸನ ನಿಟ್ಟುಸಿರು

ನಿನಗೂ ನನ್ನೆಡೆಗೆ ಕುಡಿನೋಟ.
ಸೇರುವ ಕಾತರ-ಬಯಕೆ
ನದಿಯ ದೆಸೆಯಿಂದ ದೂರ ದೂರ..
ಒಂಟಿ ಪಯಣ

ಆಗಾಗ ಸಿಗುವ ದ್ವೀಪಗಳು
ನಮ್ಮ ಕನಸಿಗೆ ಮತ್ತೆ ಚಾಲನೆ
ನದಿ ದಾಟೋಣ್ವಾ..?
ಆಗುತ್ತೋ ಇಲ್ವೋ..?
ಭಯ, ದುಗುಡ.. ನದಿ ಆಳವಿದ್ದರೆ
ಮುಳುಗಿ ಹೋದರೆ ಎಂಬ ಶಂಕೆ

ಮತ್ತಷ್ಟು ದೂರ ಸಾಗಿದರೆ ನದಿಯ
ನಡು ನಡುವಲ್ಲೆಲ್ಲ ಬಂಡೆಗಳು
ಗಟ್ಟಿ ಗಟ್ಟಿ ಜಗಜಟ್ಟಿಗಳು
ಇಲ್ಲೂ ದಾಟುವಾ ಎಂದರೆ
ಮತ್ತದೇ ಭಯ..
ನೀನಿಲ್ಲ ನಾನಿಲ್ಲ..
ನೀನಲ್ಲಿ ನಾನಲ್ಲಿ
ಮನಸು ಇದ್ದಡ.. ಇದ್ದಡ

ಕೊನೆಗೂ ಸಿಕ್ಕಿದೆ..
ಯಾರೋ ಪುಣ್ಯಾತ್ಮ ಕಟ್ಟಿದ ಸೇತುವೆ
ನನಗೂ ನಿನಗೂ ಬಾಳುವೆ..
ನೀನೂ ದಾಟಿದೆ..
ನಾನೂ ದಾಟಿದೆ..

ಮಾತಿನ ಮೊದಲು ಕೇಳಿದೆ..
ಮನಸಿದೆಯಾ..? ತಲೆ ತಗ್ಗಿಸಿದಳು..
ನಿನಗೂ ನನಗೂ
ಮನಸು ಇದ್ದಡ.. ಇದ್ದಡ..

**
(ಈ ಕವಿತೆ ಬರೆದಿದ್ದು 19-02-2014ರಂದು ಶಿರಸಿಯಲ್ಲಿ)

No comments:

Post a Comment