Sunday, May 3, 2020

ಅಂ-ಕಣ - 12

ಇಲ್ಲೊಬ್ಬಳು
ರಾತ್ರಿ ನನಗೆ
ಭಯವೇ ಆಗೋಲ್ಲ
ಎನ್ನುತ್ತಿದ್ದಾಳೆ!
ಹಗಲಲ್ಲಿ
ಬೆಚ್ಚಿ ಬೀಳುತ್ತಾಳೆ!


-------------


(2013 ರಲ್ಲಿ ಬರೆದಿದ್ದು)

ನಿನ್ನೆಯಿಂದ ಮನಸ್ಸು ಕಲ್ಲವಿಲವಾಗಿದೆ...
ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿವೇಚನೆ...

ಎಲೆಕ್ಷನ್ ಬಿಸಿಯ ನಡುವೆಯೂ ಮನಸ್ಸು ಮರುಗುತ್ತಿದೆ....
ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಸರಬ್ ಜಿತ್ ಸಿಂಗ್
ಸಾವನ್ನಪ್ಪಿರುವ ಕುರಿತು.. ಮನಸ್ಸು ಕುದಿಯುತ್ತಿದೆ...

ಅದೆಷ್ಟು ಜನ ಹೀಗೆ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ...
ಇನ್ನೆಷ್ಟು ಜನ ಸಾಯಬೇಕೋ...
ಸರಬ್ ಜಿತ್ ಅಂತಿಮವಾಗಿ ಹೀಗೆ ಸಾಯಲಿಕ್ಕಾಗಿಯೇ 22 ವರ್ಷ ಜೈಲಿನಲ್ಲಿ ಕಳೆದು ಬಿಟ್ಟನಲ್ಲ..?
ನಮ್ಮ ಸರ್ಕಾರ ಆನತನ್ನು ಬಿಡುಗಡೆ ಗೊಳಿಸುವ ಬಗ್ಗೆ 22 ವರ್ಷಗಳಿಂದ ಬಾಯಿ ಮಾತಿನಲ್ಲಿಯೇ ಕಾಲ ಕಳೆಯಿತೆ..?
ಒಬ್ಬ ಸೈನಿಕ ತನ್ನ ನಾಡಿನವನು ಸತ್ತ, ಆತನನ್ನು ನೆರೆಯ ಪ್ಯಾಲಿಸ್ಟೈನ್ ದವರು ಕೊಂದರೆಂದರೆ ಸಾಕು.. ಪುಟ್ಟ ಇಸ್ರೇಲಿಗರು ಅಪ್ಪಟ ಸ್ವಾಭಿಮಾನಿಗಳು... ಅದಕ್ಕೆ ಪ್ರತಿಯಾಗಿ ಬಾಂಬು ದಾಳಿ ಮಾಡಿಯೋ., ರಾಕೆಟ್ಟು ಹಾರಿಸಿಯೋ 8-10 ಜನರನ್ನು ಕೊಂದು ಸೇಡಿ ತೀರಿಸಿಕೊಳ್ಳುತ್ತಾರೆ...
ಆದರೆ ನಾವ್ಯಾಕೆ ಹೀಗೆ..?

ಅಮಾಯಕನೋ.. ಅಲ್ಲವೋ... ಭಾರತೀಯ ಜನಸಾಮಾನ್ಯ.. ಸರಬ್ ಜೀತ್...
ನಿಜವಾಗಿಯೂ ಖೈದಿಗಳಿಂದ ಹಲ್ಲೆಗೊಳಗಾಗಿ ಸತ್ತ ಎನ್ನುವುದು ಖಂಡಿತ ಸುಳ್ಳು...
ಯಾವುದೋ ಅಧಿಕಾರಿ ಹಲ್ಲೆ ಮಾಡಿಯೇ ಕೊಂದಿರಬೇಕು... ಎಂದು ಮನಸ್ಸು ಶಂಕಿಸುತ್ತದೆ...
ಕಸಬ್, ಅಪ್ಝಲ್ ಗುರು ಹೀಗೆ ಉಗ್ರರನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಸೇಡನ್ನು ತೀರಿಸಿಕೊಂಡಿರಲೂ ಬಹುದು..
ಆದರೆ ನಾವೇಕೆ ಸುಮ್ಮನಿದ್ದೇವೆ..?
ಪಾಕಿಸ್ತಾನದ ವಿರುದ್ಧ ಒಮ್ಮೆ ಗುಡುಗಿದರೆ ಸಾಕಿತ್ತು... ನಾಯಿ ಬುದ್ಧಿಯ ಪಾಕಿಸ್ತಾನ ಕುಂಯ್ ಗುಟ್ಟುತ್ತಿತ್ತು...
ನಮ್ಮ `ಮೌನ'ಮೋಹನ ಯಾಕೆ ಇನ್ನೂ ಮುರುಳಿ ಗಾನ ನುಡಿಸ್ತಾ ಇದ್ದಾರೆ ಅರ್ಥವಾಗುತ್ತಿಲ್ಲ...

`ಪಾಕಿಸ್ತಾನದ ಜೈಲಿನಲ್ಲಿ ಸರಬ್ ಜಿತ್ ಸಾವು.. ತಿಹಾರ್ ಜೈಲಿನಲ್ಲಿ ಪಾಕ್ ಖೈದಿಗಳಿಗೆ ಬಂದೋಬಸ್ತ್ ಎನ್ನುವ ಸುದ್ದಿಗಳು ಬರುತ್ತಿವೆ... ಮತ್ತೆ ಮನಸ್ಸು ಬೆಂಕಿಯ ಆಗರ...
ಇನ್ನೆಷ್ಟು ಹತ್ಯೆಯಾಗಬೇಕು ನಾವು ಎಚ್ಚೆತ್ತುಕೊಳ್ಳಲು..?
ಪಾಕಿಸ್ತಾನ ಕೊಲ್ಲುತ್ತಲೇ ಇರಬೇಕೇ..?
ನಾವು ಸಾಯುತ್ತಲೇ ಇರಬೇಕೆ..?

ಈ ನಡುವೆ `ನಮೋ' ಎಂದರೂ ನಾಯಕ ಬದಲಾಗುವ ಸೂಚನೆ ಸಿಗುತ್ತಿಲ್ಲ....
ಈಗಿರುವವರೆಲ್ಲ ಸತ್ತು ಮಲಗಿದ್ದಾರೆ...
ಉತ್ತರದ ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಿ ಡ್ರಾಗನ್ ಗಳು ನಮ್ಮ ನೆಲವನ್ನು ಚುನ್ ಚುನ್ ಕರ್ ಎನ್ನುವಂತೆ... ಕಿತ್ತು ಕೊಳ್ಳುತ್ತಿವೆ...
ಆದರೂ ನಾವು ಸುಮ್ಮನಿದ್ದೇವೆ...

ಇದು ಸಹನೆಯಾ..?
ಅಸಹಾಯಕತೆಯಾ..?
ಸೋಗಲಾಡಿತನವಾ..?
ಯಾರನ್ನೋ ಮೆಚ್ಚಿಸುವಂತಹ ಮಹಾನುಭಾವತನವಾ..?

ಏನನ್ನಬೇಕು..?
ಸತ್ತಮೇಲೆ ಭಾರತಕ್ಕೆ ಬಂದು ಮಣ್ಆಗುತ್ತಿರುವ ಸರ್ಬಜಿತ್ ಸಿಂಗ್ ಗೆ ಅಶ್ರುತರ್ಪಣ..
ಸೌಂಡು ಮಾಡದ ನಾಯಕರಿಗೆ ಧಿಕ್ಕಾರ...

---------------

ಎಲ್ಲ ಕೂಲಿ ಕಾರ್ಮಿಕರು ಅವರವರ ಊರುಗಳಿಗೆ ವಾಪಾಸಾಗುತ್ತಿದ್ದಾರೆ..!
ಬಾಂಗ್ಲಾದವರು....?


--------

ಸಂಭವಾಮಿ
ಯುಗೇ ಯುಗೇ...

ರಾಮಾಯಣ ಧಾರವಾಹಿಗೂ ಅನ್ವಯ ಆಗುತ್ತದೆ!

----------

ಅವಳ ಬಳಿ
ಕವಿಯಾಗು ಎಂದೇ
ಕವಿತೆಯಾಗುವ
ಕಷ್ಟ ನಂಗೆ ಬೇಡ,
ನನ್ನ ಆತ್ಮಕಥೆಯನ್ನು
ನೀನೆ ಬರೆದುಬಿಡು ಎಂದಳು!

Saturday, March 28, 2020

ಕತ್ತಲೆಕಾನು (ಕಥೆ ಭಾಗ- 3)

ನನಗೆ ಈಗ ನಿಜಕ್ಕೂ ಗಾಬರಿಯಾಯಿತು. ` ತಮಾಷೆ ಮಾಡಬೇಡಿ, ಹೇಳಿ, ಒಂದು ಲಾರಿ ಹೋಗಿರಬೇಕಲ್ಲ ಇದೆ ದಾರಿಯಾಗಿ..' ಎಂದೇ.
`ರೀ ನನಗೇನು ತಲೆ ಹಾಳಾಗಿದೆಯಾ. ಯಾವ ಲಾರಿನೂ ಇಲ್ಲ ಏನೂ ಇಲ್ಲ. ಹೋಗ್ರಿ ಸುಮ್ನೆ' ಎಂದ ಗಾರ್ಡ್. ನಾನು ನಿಧಾನವಾಗಿ ಮುಂದೆ ಹೋದೆ. ನನ್ನ ತಲೆಯಲ್ಲಿ ನೂರಾರು ಪ್ರಶ್ನೆಗಳು ತರಂಗಗಳಂತೆ ಎದ್ದು ಬಂದಿದ್ದವು.
ಮಾವಿನಗುಂಡಿಯಲ್ಲಿ ಒಂದು ಚಹಾ ಅಂಗಡಿ ಬಾಗಿಲು ಹಾಕುತ್ತಿತ್ತು. ಸೀದಾ ಅತ್ತ ಹೋಗಿ `ಒಂದು ಟಿ ಕೊಡಿ' ಎಂದೇ. ಆತ ನನ್ನನ್ನು ಒಮ್ಮೆ ದುರುಗುಟ್ಟಿಕೊಂಡು ನೋಡಿ, ಹ್ಮ್ ಎಂದು ಚಹಾ ತರಲು ಹೋದ.
ಅರೆ ನಾನು ಗೇರುಸೊಪ್ಪದಿಂದ ಆ ಲಾರಿಯ ಜೊತೆ ಬಂದಿದ್ದೇನಲ್ಲ. ಎಲ್ಲಿ ಹೋಗಲು ಸಾಧ್ಯ. ದಾರಿ ಮಧ್ಯದಲ್ಲಿ ಎಲ್ಲಾದರೂ ಕಳ್ಳ ನಟ ಹೊಡೆಯಲು ಅದು ಹೋಯಿತೇ? ಅಥವಾ ಬೇರೆ ಮಧ್ಯದಲ್ಲಿ ಯಾವುದಾದರು ಊರಿಗೆ ಹೋಯಿತೇ ಎಂಬ ಆಲೋಚನೆಗಳು ಬಂದವು. ಆದರೆ ಯಾರೇ ಆಗಿದ್ದರೂ ಕೂಡ ಅಂಕುಡೊಂಕಿನ ಹಾದಿಯಲ್ಲಿ ಅಷ್ಟೆಲ್ಲ ವೇಗವಾಗಿ ಗಡಿ ಓಡಿಸಲು ಸಾಧ್ಯವೇ ಇಲ್ಲ. ಇದರಲ್ಲಿ ಏನೋ ಇದೆ ಎಂದುಕೊಂಡೆ.
ನೋಡೋಣ ಈ ಚಹಾ ಅಂಗಡಿಯವನಿಗಾದರು ಗೊತ್ತಿರಬಹುದು, ಬರಲಿ ಅವ ಎಂದು ಸುಮ್ಮನಾದೆ. ಕೆಲ ಹೊತ್ತಿನ ನಂತರ ಹಬೆಯಾಡುತ್ತಿದ್ದ ಬಿಸಿ ಬಿಸಿ ಚಹಾ ಜೊತೆಗೆ ಬಂದ ಅವ. ಅವನ ಬಳಿ `ಹೊಯ್, ಈ ದಾರಿಯಲ್ಲಿ ಈಗಷ್ಟೇ ಯಾವುದಾದ್ರೂ ಲಾರಿ ಹೋಗಿದ್ದು ನೋಡಿದ್ರಾ' ಎಂದು ಕೇಳಿದೆ.
`ಲಾರಿಯಾ? ಯಾವ ಲಾರಿ? ಹೇಗಿದೆ ಬಣ್ಣ?' ಎಂದು ನನ್ನ ಬಳಿಯೇ ಮರು ಪ್ರಶ್ನೆ ಹಾಕಿದ. ಅದಕ್ಕೆ ನಾನು ಮೊದಲಿಂದ ನಡೆದ ಎಲ್ಲ ವಿಷಯ ಹೇಳಿದೆ.
ಅದಕ್ಕೆ ಕೊನೆಗೆ ಅವನು ಹೇಳಿದ ` ಹೊಯ್ ಮಾರಾಯ್ರೆ, ನಿಮ್ಮ ಅದೃಷ್ಟ ಚೊಲೋ ಇದೆ ಬಿಡಿ'ಎಂದ
ನಾನು ಗಾಬರಿಯಾಗಿ `ಯಾಕೆ ಎಂತ ಆಯಿತು?' ಎಂದೇ.
`ಅದು ಲಾರಿಯಲ್ಲ. ನೀವು ಬಂದಿದ್ದು ಲಾರಿಯ ಜೊತೆಗೂ ಅಲ್ಲ'
`ಮತ್ತೆ.. ಎಂತದ್ದು ಅದು?'
`ಅದು ಈ ಭಾಗದ ಭೂತ'
`ತಮಾಷೆ ಮಾಡಬೇಡಿ ಮಾರಾಯ್ರೆ.. ನಾನು ಆ ಲಾರಿಯ ಜೊತೆಗೆ ಬಂದಿದ್ದೆ, ಅದರ ಬೆಳಕು ಕಂಡಿದ್ದೇನೆ. ಆ ಲಾರಿ ಸೂಸುತ್ತಿದ್ದ ಹೊಗೆಗೆ ಮುಖ ಕೊಟ್ಟಿದ್ದೇನೆ. ಆ ಹೊಗೆಯ ಬಿಸಿ ಅನುಭವ ನನಗಾಗಿದೆ..' ಎಂದೇ.
`ಹ್ಮ್ಮ್,. ಈ ಥರ ಅನುಭವ ಹಲವರಿಗಾಗಿದೆ. ಬಹಳ ಜನರು ಇದೆ ರೀತಿ ಹೇಳಿದ್ದಾರೆ. ಆದರೆ ನಿಜಕ್ಕೂ ಅಂತಹ ಲಾರಿ ಇಲ್ಲವೇ ಇಲ್ಲ..' ಎಂದ.
ನಾನು ಬೆಪ್ಪಾಗಿ ನೋಡಲು ಆರಂಭಿಸಿದೆ.
`ಸುಮಾರು ವರ್ಷಗಳ ಹಿಂದೆ ಕತ್ತಲೆಕನು ಘಟ್ಟದಲ್ಲಿ ತಮಿಳುನಾಡಿನ ಲಾರಿಯೊಂದು ಉರುಳಿ ಶರಾವತಿ ಕಣಿಗೆಗೆ ಬಿದ್ದಿತ್ತು. ಆ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಇಬ್ಬರೂ ಸಾವನ್ನಪ್ಪಿದ್ದರು. ಅವರ ಹೆಣ ಕೂಡ ಸಿಕ್ಕಿರಲಿಲ್ಲ. ಅಂದಿನಿಂದ ಈ ಲಾರಿ ಭೂತ ಹಲವರನ್ನು ಕಾಡುತ್ತಿದೆ ನೋಡಿ.' ಎಂದ.
` ಈ ಲಾರಿ ಹಲವರಿಗೆ ಸಿಕ್ಕಿದೆ. ಹಲವರನ್ನು ಹೆದರಿಸಿದೆ,. ಕಾಡಿದೆ. ಬೀಳಿಸಿದೆ. ಹಲವಾರು ಗಾಯಗೊಂಡಿದ್ದಾರೆ. ಹಲವಾರು ತೀವ್ರ ಜ್ವರದಿಂದ ಬಳಲಿದ್ದಾರೆ. ಹಲವಾರು ಮತಿಭ್ರಮಣೆಗೆ ಒಳಗಾಗಿದ್ದಾರೆ. ಅದರಲ್ಲಿ ಇಷ್ಟುಹೊತ್ತು ಸರಿಯಾಗಿ ಇದ್ದಿದ್ದು ಎಂದರೆ ನೀವೊಬ್ಬರೇ ಇರಬೇಕು ನೋಡಿ' ಎಂದ.
ತಕ್ಷಣ ನನಗೆ ಆ ಲಾರಿ, ಅದರ ಹೊಗೆಯ ಅನುಭವ, ಅದರಿಂದ ಕೇಳಿ ಬರುತ್ತಿದ್ದ ತಮಿಳು ಹಾಡು ಎಲ್ಲ ನೆನಪಾಯಿತು. ಅದು ಭೂತವಾಗಿತ್ತು ಎಂದು ಕೇಳಿದಾಗಿನಿಂದ ಬರಲು ಶುರುವಾಗಿದ್ದ ಬೆವರು ಇನ್ನಷ್ಟು ಧಾರಾಕಾರವಾಗಿತ್ತು.
ನಾನು ಚಹಾದ ಬಿಲ್ಲು ಕೊಡುವಂತೆ ನನ್ನ ಮುಂದೆ ನಿಂತಿದ್ದ ಹೋಟೆಲಿನವನ ಕಾಲಿನ ಕಡೆಗೆ ದೃಷ್ಟಿ ಹೋಯಿತು. ಏನೋ ಸರಿ ಇಲ್ಲ ಎನ್ನುವಂತೆ ಅನ್ನಿಸಿತು. ದಿಟ್ಟಿಸಿ ನೋಡಿದೆ. ಆತನ ಕಾಲು ನೋಡಿ ಒಮ್ಮೆ ಎದೆಯಲ್ಲಿ ಚಳುಕು ಶುರುವಾಯಿತು. ಆತನ ಕಾಲು ತಿರುಗಾಮುರುಗ ಇತ್ತು. ಅಂದರೆ ಈತನೂ ಭೂತನೇ? ಅಯ್ಯೋ ದೇವರೇ.. ಎಲ್ಲಿಗೆ ಬಂದೇನಪ್ಪಾ ನಾನು ಎಂದುಕೊಳ್ಳುತ್ತಿರುವಂತೆ ಮೈಯಲ್ಲಿ ನಡುಕ ಶುರುವಾಗಿತ್ತು. ಎದೆಯಲ್ಲಿ ಅದೇನೋ ನೋವು. `ಅಹ್...' ಎಂದೇ. ಅದೇ ನನ್ನ ಕೊನೆಯ ಶಬ್ಧವಾಗಿತ್ತು.

(ಮುಗಿಯಿತು)