Thursday, December 27, 2012

ಹಳೆಯ ನೆನಪು

ಹಳೆಯ ನೆನಪು


ಹಳೆಯ ಸಾಲಿಗೆ ಹೊಸತು ರಾಗವ
ಮನಸು ಸುಮ್ಮನೆ ಬೆಸೆದಿದೆ,
ಅಳಿದ ನೆನಪಿನ ತಳದ ಬುತ್ತಿಯ
ಮನವು ಮತ್ತೆ ಮೀಟಿದೆ..||


ಹಳೆಯ ಕವಿತೆಯ ಪದದ ಸಾಲಿಗೆ
ಹೊಸತು ಅರ್ಥವೆ ಹುಡುಕಿದೆ,
ಮೆಲ್ಲ ಮೆಲ್ಲನೆ ನಿನ್ನ ನೆನಪೇ
ಝಲ್ಲನೆದೆಯನು ತಟ್ಟಿದೆ..||


ಮರೆತು ಹೋದಕವನವೇಕೋ
ಮಧುರವೆನಿಸುತ ಮರಳಿದೆ,
ಕಳೆದು ಹೋಗಿಹ ಪದ ಸಮೂಹವೆ
ಹಾಡಲಾಗದೆ ಉಳಿದಿದೆ..||


ಹಳೆಯ ನೆನಹದು ಅಲೆಯ ತೆರದಲಿ
ಮನದ ದಡವನು ಮುತ್ತಿದೆ,
ಮರೆತೆನೆಂದರೂ ನಿನ್ನ ನೆನಪೇ
ಮನದ ಮಡಿಲಲಿ ಇಣುಕಿದೆ..||


(ಬರೆದಿದ್ದು ದಂಟಕಲ್ಲಿನಲ್ಲಿ ದಿ. 28.092008ರಂದು)

Sunday, December 23, 2012

ಮತ್ತೊಂದಿಷ್ಟು ಹನಿಚುಟುಕುಗಳು

ಮತ್ತೊಂದಿಷ್ಟು ಹನಿಚುಟುಕುಗಳು

38)ಪ್ರೀತಿಗೆ ಕಾರಣ

ಪ್ರಿಯಾ ನೀನು
ನಿನ್ನ ಕೈಯಲ್ಲಿ
ಫಳಫಳನೆ
ಹೊಳೆಯುತ್ತಿರುವ
ಚಿನ್ನದ ನೆಕ್ಲೆಸ್ಸಿನಷ್ಟೇ
ಸುಂದರ..|

39)ಧನ್ವಂತರಿ

ಧನ್ವಂತರಿ ಧನ್ವಂತರಿ
ರೋಗಗಳೆಲ್ಲಾ ಓಡಿ ಹೋಯ್ತ್ರೀ
ಆದ್ರೂ ಮೈ ಮರೀಬ್ಯಾಡ್ರಿ
ಆಗಾಗ ಇಲ್ಲಿಗ್ ಬರ್ತಾ ಇರ್ರಿ||

40)ಜೀಸಸ್

ಜೀಸಸ್
ನೀನು ಬಹಳ
ಜೀನಿಯಸ್
ನಮ್ಮನ್ನು ಕಾಪಾಡುವೆ ಎಂದು ಮಾಡು
ಪ್ರಾಮಿಸ್
ಅಷ್ಟಾದರೆ ನಿನ್ನೆದುರು ಉಳಿದ ದೇವರುಗಳೆಲ್ಲಾ
ನೋ ಯೂಸ್..||

41)ಪ್ರೀತಿ

ಪ್ರೀತಿ, ಪ್ರೀತಿ, ಪ್ರೀತಿ
ನೀ ಯಾಕ್ ಹಿಂಗ್ ಆದ್ತಿ.?
ನಂಗ ಕೋಪ ಬರತೈತಿ
ಆದರ ನೀ ನಂಗ ಎಲ್ಲಿ ಸಿಗ್ತಿ..?

42)ಪರೀಕ್ಷೆ

ಪರೀಕ್ಷೆ ಪರೀಕ್ಷೆ
ಬಹಳ ನಿರೀಕ್ಷೆ|
ಮಾಡಿದರೆ ಸಮೀಕ್ಷೆ
ಹಲವರಿಗಿಲ್ಲ ರಕ್ಷೆ||
ಸರಿಯಾಗಿ ಓದದಿದ್ರೆ ಮಾತ್ರ
ಫೇಲಾಗೋದೆ ಅವರಿಗೆ ಶಿಕ್ಷೆ||

(ಹೈಸ್ಕೂಲಿನ ಕೊನೆಯ ದಿನಗಳಲ್ಲಿ, ಇನ್ನೂ ಬರವಣಿಗೆಯೆಡೆಗೆ ತುಡಿಯುತ್ತಿದ್ದ ಮನಸ್ಸು. ಆ ಸಂದರ್ಭದಲ್ಲಿ ಮೂಡಿ ಬಂದ ಕೆಲವು ಹನಿ ಚುಟುಕುಗಳು. ಮೊದ ಮೊದಲ ಬರಹಗಳು ಇವು.. )

Wednesday, December 19, 2012

ಎಲ್ಲ ಮರೆತಿರುವಾಗ (ಕಥೆ ಭಾಗ-8)

ಎಲ್ಲ ಮರೆತಿರುವಾಗ

ಭಾಗ-8

(ಇಲ್ಲಿಯವರೆಗೆ- ರಚನಾಳಿಗೆ ತನ್ನ ಬದುಕಿನ ದುರಂತ ದಿನಗಳನ್ನು ಹೇಳುತ್ತಿರುವ ಜೀವನ್..)
ರಚನಾ ನೀನು ಏನೇ ಹೇಳು ಕಾಲೇಜು ಲೈಫಿದೆಯಲ್ಲ ಅದರಂತಹ ಸುಂದರ ಜೀವನ ಇನ್ನೊಂದಿಲ್ಲ. ಅಲ್ಲಿ ನಾವು ಏನೆಲ್ಲ ಮಾಡಬಹುದು. ಸಾಧಿಸಬಹುದು. ಬಹುಶಃ ಬದುಕನ್ನು ಸಂಪೂರ್ಣವಾಗಿ ರೂಪಿಸುವುದೇ ಕಾಲೇಜು ಎನ್ನಬಹುದು. ಅಲ್ವಾ?
ರಚನಾ ಸುಮ್ಮನೆ ತಲೆಯಾಡಿಸಿದಳು.
ಜೀವನ್ ಮುಂದುವರಿಸಿದ.
ನನ್ನ ಕಾಲೆಜು ಲೈಫು ಪ್ರಾರಂಭದ ಇರಡು ತಿಂಗಳು ಸೀದಾ ಸಾದಾ ಆಗಿಯೇ ಇತ್ತು. ಹೊಸ ಪರಿಚಯ, ಹೊಸ ವಾತಾವರಣ, ಹೊಸ ಗೆಳೆಯರು, ಹೀಗೆಯೇ ಸಾಗುತ್ತಿತ್ತು. ಯಥಾ ಪ್ರಕಾರ ಲೇಟ್ ಕಮ್ಮರ್ ನಾನಾದ್ದರಿಂದ ಶಿರಸಿಯಲ್ಲಿ ಸೂರ್ಯ ಹೇಗೆ ಹುಟ್ಟುತ್ತಾನೆ ಎಂಬುದು ನನಗೆ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲಿ ಬಿಡು.
ಕಾಲೇಜಿನ ದಿನಗಳು ಸರಿದಂತೆಲ್ಲ ಒಮ್ಮೆ ಆ ದಿನದ ಕ್ಲಾಸುಗಳನ್ನು ಮುಗಿಸಿ ಬೇಗ ಮನೆಗೆ ಹೋಗುವ ತರಾತುರಿಯಲ್ಲಿದ್ದೆ. ಆಫ್ಶನಲ್ ಇಂಗ್ಲೀಶ್ ಆದ್ದರಿಂದ ಹುಡುಗರು ಕಡಿಮೆಯಿದ್ದರು. ಮುಂದಿನ ಕ್ಲಾಸಿಗೆ ಬಂಕ್ ಮಾಡುವುದೆಂದು ತೀರ್ಮಾನಿಸಿ ಹೊರಡಲನುವಾಗಿದ್ದೆ. 
ನಾನು 3 ಗಂಟೆಯ ನಂತರ ಕಾಲೇಜಿನಲ್ಲಿರೋದಿಲ್ಲ ಎಂಬ ಸಂಗತಿ ಹೆಚ್ಚಿನ ಹುಡುಗರಿಗೆ ಗೊತ್ತಿತ್ತಾದ್ದರಿಂದ ನನ್ನೆಡೆಗಿನ ಜೋಕುಗಳಲ್ಲಿ ಅದೂ ಒಂದಾಗಿ ಸೇರಿ ಹೋಗಿತ್ತು. ಹೀಗಿರಲು ಅವಳು ಬಂದು ಇದ್ದಕ್ಕಿದ್ದಂತೆ ನನ್ನನ್ನು ಪರಿಚಯ ಮಾಡಿಕೊಂಡಳು. ಹೆಸರು ಸಂಗೀತಾ. 
ಪರಿಚಯಕ್ಕೆ ಮುನ್ನ ಅನೇಕ ಸಾರಿ ಕ್ಲಾಸಿನಲ್ಲಿ ಕಂಡಿದ್ದೆ. ಮಾತನಾಡಲು ಮುಜುಗರ. ಇನ್ನೂ ಮುಖ್ಯ ಸಂಗತಿ ಎಂದರೆ ನಾನಾಗಿ ಯಾರನ್ನೂ ಮಾತನಾಡಿಸದ ವ್ಯಕ್ತಿ. ಅದಕ್ಕಿಂತ ಹೆಚ್ಚಾಗಿ ನಾನು ಗುಮ್ಮನಗುಸ್ಕನಾಗಿದ್ದೆ. ಅದ್ಯಾರು ನನ್ನ ಬಗ್ಗೆ ಹೇಳಿದ್ದರೋ, ಅಥವಾ ನನ್ನ ಮೇಲಿನ ಲೇಟ್ ಕಮ್ಮರ್ ಜೋಕುಗಳು ಅವಳ ಕಿವಿಗೂ ಬಿದ್ದಿದ್ದವೋ ಏನೋ.. ಪರಿಚಯ ಮಾಡಿಕೊಂಡಳು. ನಾನು ದೊಡ್ಡ ಶಾಕಿನೊಂದಿಗೆ ನನ್ನನ್ನು ಪರಿಚಯಿಸಿಕೊಂಡಿದ್ದೆ. 
ಬಹುಶಃ ಆಕೆ ಪರಿಚಯ ಆದ ಗಳಿಗೆಯಲ್ಲಿ ಆಕಾಶದಲ್ಲಿ ಅದ್ಯಾವುದೋ ದೇವತೆಗಳು ನಮ್ಮನ್ನು ಹರಸಿದ್ದವು ಅಂತ ಕಾಣುತ್ತದೆ. ಒಂದೆರಡು ದಿನಗಳಲ್ಲಿ ಸಂಗೀತಾ ನನ್ನ ಪರಮಾಪ್ತ ಗೆಳತಿಯಾಗಿಬಿಟ್ಟಳು. ರಚನಾ ಇನ್ನೊಂದು ತಮಾಶೆಯ ಸಂಗತಿ ಏನ್ ಗೊತ್ತಾ., ಆಕೆ ಮೊದಲ ದಿನ ನನ್ನ ಪರಿಚಯ ಮಾಡಿಕೊಂಡಿದ್ದಳಲ್ಲ, ಮರು ದಿನ ಮತ್ತೆ ಸಿಕ್ಕಳು. ನನಗೆ ಅವಳು ಪರಿಚಯ ಮಾಡ್ಕೊಂಡಿದ್ದು ಮರೆತಿತ್ತು. ಹಾಯ್ ಅಂದಳು. ನಾನೊಮ್ಮೆ ತಲೆ ಕೆರೆದುಕೊಂಡಿದ್ದೆ. ಹೆಸರೂ ನೆನಪಾಗಿರಲಿಲ್ಲ. ಕೊನೆಗೆ ಪೆಕರನಂತೆ ಹಾಯ್ ಅಂದು ಮತ್ತೊಮ್ಮೆ ಹೆಸರು ಕೇಳಿದ್ದೆ. 
ಸಂಗೀತಾ ಕುರಿತು ಒಂದೆರಡು ಸಂಗತಿ ಹೇಳಲೇ ಬೇಕು. ನನ್ನದೇ ಕ್ಲಾಸಿನ ಹುಡುಗಿ. ನನ್ನೂರಿನ ಬಸ್ಸಿಗೆ ಬರುತ್ತಿದ್ದಳು ಎಂಬುದು ನನ್ನ ಪರಿಚಯ ಆದ ಮೇಲೆ ಗೊತ್ತಾದ ಸಂಗತಿ. ಮನೆಯಲ್ಲಿ ಬೇಜಾನ್ ಆಸ್ತಿ ಇದೆ. ಅಲ್ಲದೆ ಅವರ ಅಪ್ಪ ಸ್ಥಳೀಯ ರಾಜಕಾರಣಿಯಾಗಿ ಹೆಸರು ಮಾಡಿದವರು. ದುಡ್ಡಿಗೆ ಕೊರತೆಯಿರಲಿಲ್ಲ. ಮಗಳು ಆಸೆಪಟ್ಟಿದ್ದರೆ ಎಂಜಿನಿಯರಿಂಗೋ ಅಥವಾ ಇನ್ಯಾವುದೋ ದೊಡ್ಡ ಹೆಸರಿನ ಕೋರ್ಸಿಗೆ ಸೇರಿಸಬಲ್ಲ ತಾಕತ್ತನ್ನು ಹೊಂದಿದ್ದವನು. 
ಆದರೆ ಸಂಗೀತಾಳೇ ವಿಚಿತ್ರ ಸ್ವಭಾವದವಳು. ಆಕೆಗೆ ಇಷ್ಟವಿರಲಿಲ್ಲವೋ, ಅಥವಾ ಅಂತಹ ದೊಡ್ಡ ದೊಡ್ಡ ಕೋರ್ಸುಗಳನ್ನು ಮಾಡಿಕೊಂಡರೆ ಕಾಲೇಜು ಲೈಫಿನಲ್ಲಿ ಬರೀ ಓದು ಓದು ಎಂದು ಆ ಕಾಲದ ರಸನಿಮಿಷಗಳ ಸಂತಸ ಕಳೆದುಹೋಗುತ್ತದೆ ಎಂದುಕೊಂಡಿದ್ದಳೋ ಏನೋ.. ಅಂತೂ ನನ್ನ ಕ್ಲಾಸಿಗೆ ಬರ್ತಿದ್ದಳು. ನನ್ನದೇ ಆಫ್ಶಿನಲ್ ಇಂಗ್ಲೀಶ್ ಕ್ಲಾಸೂ ಆಗಿದ್ದರಿಂದ ನನ್ನ ಪರಿಚಯವಾದಳು ಎನ್ನಬಹುದು.
ಮುಂದಿನ ದಿನಗಳು ಬಹಳ ಸಂತಸದಿಂದ ಕೂಡಿದ್ದವು. ಕಾಲೇಜಿನಲ್ಲಿ ನಾವಿಬ್ಬರೂ ಪರಮಾಪ್ತರಾಗಿದ್ದೆವು. ಒಂದೆ ಬಸ್ ಆದ್ದರಿಂದ ಬಸ್ಸಿನಲ್ಲೂ ಒಟ್ಟಿಗೆ ಬರುತ್ತಿದ್ದೆವು. ಇಬ್ಬರು ಹೊಸದಾಗಿ ಮಿತ್ರರಾದರೆ ಪರಸ್ಪರ ಪ್ರಭಾವ ಬೀರುತ್ತಾರೆ ಎಂಬ ಮಾತಿದೆಯಲ್ಲ.. ಅವಳು ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿದಳೋ ಗೊತ್ತಾಗಲಿಲ್ಲ.ಆದರೆ ಆಕೆ ಮಾತ್ರ ನನ್ನಂತೆಯೇ ಕ್ಲಾಸಿಗೆ ಬಂಕ್ ಹೊಡೆಯಲು ಪ್ರಾರಂಭಿಸಿದ್ದಂತೂ ಸತ್ಯ. ಬೆಳಿಗ್ಗೆ 11ಕ್ಕೆ ಕ್ಲಾಸಿಗೆ ಹೋಗುವುದು, ಮದ್ಯಾಹ್ನ 3ಕ್ಕೆ ವಾಪಸ್ಸು.
ಆ ದಿನಗಳಲ್ಲಿ ಮಾತು, ಮಾತು ಮಾತು ಇವುಗಳೇ ನಮ್ಮ ಜೊತೆಗೆ ಇದ್ದಿದ್ದು. ಇಬ್ಬರು ಹುಡುಗಿಯರೂ ಆ ರೀತಿ ನಾನ್ ಸ್ಟಾಪ್ ಮಾತಾಡುವುದಿಲ್ಲವೇನೋ.. ಆದರೆ ನಾವಿಬ್ಬರು ಹಂಗೆ ಮಾತಾಡ್ತಿದ್ದೆವು.
ನಮ್ಮಿಬ್ಬರ ಈ ದೋಸ್ತಿ ನಿಧಾನವಾಗಿ ಕಾಲೇಜಿನಲ್ಲಿ ಮನೆಮಾತಾಯಿತು. ಅದಕ್ಕೆ ತಕ್ಕಂತೆ ಗಾಸಿಪ್ಪಾಯಣ, ರೂಮರಾಯಣಗಳೂ ಹುಟ್ಟಿಕೊಂಡವು. ಇದಕ್ಕೆ ನಾನು ತಲೆಕೆಡಿಸಿಕೊಂಡಿದ್ದೆನಾದರೂ ಆಕೆ ತಲೆಬಿಸಿ ಮಾಡಿಕೊಳ್ಳಲಿಲ್ಲ. ಹಾಗಾಗಿ ನಮ್ಮ ದೋಸ್ತಿಗೆ ಭಂಗ ಬರಲಿಲ್ಲ. ಜೊತೆಗೆ ದೋಸ್ತಿಯಲ್ಲಿ ಅಪಸವ್ಯಗಳೂ ಕಾಣಲಿಲ್ಲ.
ಈ ಕುರಿತು ಇನ್ನೂ ಹೇಳಬೇಕು. ಈ ಸಂಗೀತಾಳಿಂದಲೇ ನನ್ನ ಬದುಕು ಟರ್ನಾಗಿದ್ದು ಎಂದರೆ ನೀನು ನಂಬಲೇ ಬೇಕು. ಎಂದೋ ಆಕೆಯ ಎದುರು ಒಮ್ಮೆ ಹಾಡು ಗುನುಗಿದ್ದನ್ನು ಕೇಳಿ ಅದನ್ನು ಬೆಳೆಸಿದ್ದೇ ಆಕೆ. 
ಅದೇ ರೀತಿ ಒಂದು ಖಯಾಲಿಯ ದಿನ ಕಾಲೇಜಿನಲ್ಲಿ ಕ್ಲಾಸು ಆಫಾಗಿತ್ತು.
ಮನಸ್ಸು ಯಾವುದೋ ಲಹರಿಯಲ್ಲಿತ್ತು.
ಸುಮ್ಮನೆ ಚಾಕ್ ಪೀಸ್ ಪಡೆದುಕೊಂಡು ಬೋರ್ಡಿನ ಮೇಲೆ
`ನಿನ್ನ ಪ್ರೀತಿಗೆ ನಾನು ಒಳ್ಳೆಯವನಲ್ಲ..
ನಿಜ ಗೆಳತಿ..ಖಂಡಿತವಾಗಿಯೂ
ಒಳ್ಳೆಯವನಲ್ಲ..."
ಎನ್ನುವ ಸಾಲುಗಳನ್ನು ಬರೆದೆ.
ಈ ಸಾಲುಗಳು ಆಕೆಯ ಕಣ್ಣಿಗೆ ಬಿದ್ದವು. ಆಗಿಂದ ಶುರುವಾಯಿತು ನೋಡಿ..ಜೀವನ್ ನೀನು ಬಹಳ ಚನ್ನಾಗಿ ಬರೀತಿಯಾ ಕಣೋ.. ಕೀಪ್ ಇಟ್ ಅಪ್.. ಎಂದು ಮೊದಲು ಅಪ್ರಿಸಿಯೇಶನ್ ಮಾಡಿದ ಆಕೆ ಆ ನಂತರ ನನ್ನಲ್ಲಿ ಬರವಣಿಗೆಯ ಸಾಲುಗಳು ಮೂಡಲು ಕಾರಣವಾದಳು. ಅವಳ ದೆಸೆಯಿಂದಲೇ ನಾನು ಅದೆಂತೆಂತದ್ದೋ ಕವಿತೆಗಳನ್ನು ಬರೆದೆ. ಸಂಗ್ರಹ ಮಾಡಿಯೂ ಇಟ್ಟಿದ್ದೆ. ಈಗ ಅದೆಲ್ಲಿ ಹೋಗಿದೆಯೋ ಗೊತ್ತಿಲ್ಲ.
ಒಂದೊಳ್ಳೆ ಸಂಗತಿಯೆಂದರೆ ಆಕೆ ನನಗೆ ಅದೆಷ್ಟು ಒಳ್ಳೊಳ್ಳೆ ಕಾದಂಬರಿಗಳನ್ನು ಸಜೆಸ್ಟ್ ಮಾಡಿದ್ಲು ಗೊತ್ತಾ. ಆ ದಿನಗಳಲ್ಲಿಯೇ ನಾನು `ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ, ಕರ್ವಾಲೋ, ಭಾರತೀಪುರ, ಚಿದಂಬರ ರಹಸ್ಯ, ಒಂದು ಬದಿ ಕಡಲು, ಆವರಣ, ತಂತು, ಭಿತ್ತಿ ಈ ಮುಂತಾದ ಕನ್ನಡದ ಮೇರು ಕೃತಿಗಳನ್ನು ಓದಿದ್ದೆ. ಈಗಲೂ ನೀನು ನೋಡಬಹುದು ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ನನ್ನ ಐಕಾರ್ಡ್ ನಂಬರ್ 184 ಇದ್ದಷ್ಟು ಬೇರೆ ಯಾರ ನಂಬರುಗಳೂ ಲೈಬ್ರರಿಯ ಪುಸ್ತಕದಲ್ಲಿಲ್ಲ. 
ಇಷ್ಟೇ ಅಲ್ಲ. ಇಂಗ್ಲೀಷು ನನಗೆ ಬಹಳ ತಲೆ ತಿನ್ನುವ ವಿಷಯ ಆಗಿತ್ತು. ಆದರೂ ಕಾಲೇಜಿನಲ್ಲಿ ಅದನ್ನೇ ಒಂದು ವಿಷಯವಾಗಿ ತಗೊಂಡಿದ್ದೆ. 
ಆ ದಿನಗಳಲ್ಲಿ ಕಾರ್ನಾಡರ ತುಘಲಕ್, ಈ ಮುಂತಾದ ನಾಟಕಗಳು ನಮಗೆ ಸಿಲಬಸ್ ಆಗಿ ಇದ್ದವು. ಇಂಗ್ಲೀಷಿನ ಈ ಪುಸ್ತಕಗಳನ್ನು ಕೋಳ್ಳಲು ನನ್ನ ಬಳಿ ದುಡ್ಡಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಇವಳೇ ನನಗೆ ಈ ಪುಸ್ತಕಗಳನ್ನು ಎರವಲು ನೀಡಿದ್ದು. ಈ ಪುಸ್ತಕಗಳೆಲ್ಲ ಕನ್ನಡದಿಂದ ಇಂಗ್ಲೀಷಿನಲ್ಲಿ ಅನುವಾದ ಆಗಿರುವ ಕಾರಣ ನಾನು ಕನ್ನಡದಲ್ಲಿ ಓದುತ್ತಿದ್ದೆ. ನಂತರ ಪರೀಕ್ಷೆಗಳಲ್ಲಿ ನನ್ನದೇ ವಾಕ್ಯಗಳನ್ನು ಬಳಸಿ ಇಂಗ್ಲೀಷಿನಲ್ಲಿ ಬರೆಯುತ್ತಿದ್ದೆ. ಇದರಿಂದಾಗೀ ತೀರಾ 70-80 ಮಾರ್ಕುಗಳು ಬೀಳದಿದ್ದರೂ 45-50ಕ್ಕಂತೂ ಕೊರತೆಯಾಗುತ್ತಿರಲಿಲ್ಲ. ಇದನ್ನು ಅರಿಯದ ಸಂಗೀತಾ ಹಾಗೂ ಇತರ ಮಿತ್ರರು ಯದ್ವಾ ತದ್ವಾ ಓದಿಯೂ ನನ್ನಷ್ಟೇ ಮಾರ್ಕು ಪಡೆಯುತ್ತಿದ್ದರು. ಕೊನೆಗೆ ನನ್ನ ಈ ಐಡಿಯಾವನ್ನು ಹೇಳಿದ್ದೇ ತಡ ಎಲ್ಲರೂ ಅದನ್ನು ಪಾಲಿಸಿ ಮಾರ್ಕುಗಳನ್ನು ಪಡೆದ ಮೇಲೆಯೇ ನನ್ನ ಕುರಿತು ಜೋಕುಗಳನ್ನು ಆಡುತ್ತಿದ್ದುದು ಕಡಿಮೆಯಾಗಿದ್ದು.

(ಮುಂದುವರಿಯುವುದು..)

Tuesday, December 18, 2012

ನೀರೆ ನೀ ಯಾರೆ..?

ನೀರೆ ನೀ ಯಾರೆ..?

ಹೊತ್ತಲ್ಲದ ಹೊತ್ತಿನಲಿ
ಮನದೊಳಗೆ ಕಾಡುತಿಹ
ನೀರೆ ನೀ ಯಾರೆ?
ನನ್ನೆದುರು ಬಾರೆ..||

ನದಿಗುಂಟ ಬಂದಾಗ
ಮೌನವಾಗಿಯೇ ನಗುವ
ಮನವೆಲ್ಲ ಸೆಳೆ-ಸೆಳೆವ
ನೀರೆ, ನೀಯಾರೆ?
ನನ್ನೆದುರು ಬಾರೆ..||

ಕೆಂಪಂಚು ಜರಿ ಸೀರೆ
ಮುಸುಕೊಳಗೆ ನಗು ನಗುವ
ಕಣ್ಣಿನಲೇ ಬರಸೆಳೆವ
ನೀರೆ, ನೀ ಯಾರೆ?
ನನ್ನೆದುರು ಬಾರೆ...||

ಅಚ್ಚಮಲ್ಲೆಯ ಮುಡಿದು
ಕಾಲುಗೆಜ್ಜೆಯ ಬಡಿದು
ನಿಂತಲ್ಲೆ ಸೆಳೆಯುತಿಹ
ನೀರೆ, ನೀಯಾರೆ
ನನ್ನೆದುರು ಬಾರೆ..||

ದೂರದಿಂದಲೇ ಸೆಳೆವ
ಸನಿಹದಲಿ ಬರದಿರುವ
ಸಿಗಸಿಗದೇ ಓಡುವ
ನೀರೆ, ನೀ ಯಾರೆ?
ನನ್ನೆದುರು ಬಾರೆ..||

ಬರೆದಿದ್ದು ದಂಟಕಲ್ಲಿನಲ್ಲಿ ದಿನಾಂಕ 22-11-2007ರಂದು

Monday, December 17, 2012

ನಿಗೂಢ ದೇವರಕಾನಿನ ಜಾಡಿನಲ್ಲಿ...

ನಿಗೂಢ ದೇವರಕಾನಿನ ಜಾಡಿನಲ್ಲಿ... 

ದೇವರ ಕಾನು.. ಹಾಗೊಂದು ಹೆಸರಿನ ಚಿಕ್ಕ ಪ್ರದೇಶ ನಮ್ಮೂರಿನ ಫಾಸಲೆಯಲ್ಲಿದೆ. ನಮ್ಮೂರು ಹಾಗೂ ಹಿತ್ತಲಕೈ ನಡುವೆ ಇರುವ ಚಿಕ್ಕ ಕಾಡಿನಂತಹ ಸ್ಥಳ ಇದು. ಅಘನಾಶಿನಿ ನದಿಯ ದಡದ ಮೇಲೆ ಇದು ಇದೆ. ನಮ್ಮೂರಿನಿಂದ ದೇವರಕಾನಿಗೆ ಹೋಗಬೇಕೆಂದಾದಲ್ಲಿ ಅಘನಾಶಿನಿಯನ್ನು ದಾಟಿ, ವಾಟೆ ಮಟ್ಟಿಯ ಸಾಲನ್ನು ಹಾದು ಹೋಗಬೇಕು.
     ಮೇಲ್ನೋಟಕ್ಕೆ ಅಲ್ಲಿ ಏನೂ ಕಾಣುವುದಿಲ್ಲ. ಏಕೆಂದರೆ ಬೇಸಿಗೆಯ ದರಕು, ಕಾಡು ಬಳ್ಳಿಗಳು, ಗಣಪೆಕಾಯಿಯ ದೊಡ್ಡ ಬಳ್ಳಿಯ ಸಾಲುಗಳು ಅಲ್ಲಿ ಏನನ್ನೂ ಕಾಣದಂತೆ ಮಾಡಿಬಿಟ್ಟಿವೆ. ಆದರೆ ಸ್ವಪಲ್ಪ ಸೂಕ್ಷ್ಮವಾಗಿ, ಕೂಲಂಕಷವಾಗಿ ವೀಕ್ಷಿಸಿದರೋ ಗತಕಾಲದ ಪಳೆಯುಳಿಕೆಗಳ ಅನಾವರಣ ನೋಡುಗರಿಗೆ ಆಗುತ್ತದೆ.
    ಹೌದು ಅಲ್ಲಿ ಯಾವುದೋ ಕಾಲದ ಪ್ರಾಚೀನ ಗೊಂಬೆಗಳು, ಮಣ್ಣಿನ ಮಡಿಕೆಗಳು, ಮೃತ್ತಿಕೆಯಿಂದ ಮಾಡಿದ ಒಡೆದು ಹೋಗಿರುವ ಗೊಂಎಬಗಳು ಕಾಣಬಲ್ಲವು. ಹೂಕುಂಡ, ಸ್ತೀ, ವೇಷಧಾರಿ, ಆಭರಣಗಳು, ಈ ಮುಂತಾದವುಗಳು ಅಲ್ಲಿವೆ. ಪ್ರತಿಯೊಂದು ಮಡಿಕೆಗಳ ತುಂಡಿನ ಮೇಲೂ ಸೂಕ್ಷ್ಮ ಚಿತ್ತಾರಗಳು. ಕಷ್ಟಪಟ್ಟು ಕಣ್ಣಲ್ಲಿ ಕಣ್ಣಿಟ್ಟು ತಯಾರಿಸಿದ ಪರಿಶ್ರಮ ಎದ್ದು ಕಾಣುತ್ತದೆ.
    ಈ ಗೊಂಬೆಗಳನ್ನು ಅದ್ಯಾವ ಗತಶತಮಾನದಲ್ಲಿ ತಯಾರು ಮಾಡಲಾಗಿದೆಯೋ. ಅದ್ಯಾಕೆ ಅಲ್ಲಿ ತಂದಿಟ್ಟರೋ ಒಂದೂ ಗೊತ್ತಿಲ್ಲ. ಇದನ್ನು ಮುಟ್ಟಬಾರದು ಎಂಬ ವಿಚಿತ್ರ ನಿಗೂಢ ನಂಬಿಕೆ ನಮ್ಮೂರು ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿವೆ. ಆ ಕಾರಣದಿಂದಲೇ ದೇವರಕಾನಿನ ಪ್ರದೇಶ ಈಗಲೂ ನಮ್ಮೂರಿಗರಲ್ಲಿ ವಿಚಿತ್ರ ಹಾಗೂ ಭಯಭರಿತ ಪ್ರದೇಶವಾಗಿ ಉಳಿದುಬಿಟ್ಟಿದೆ.
    ಬಹುಶಃ ಈ ಕಾರಣದಿಂದಲೇ ಆ ಗೊಂಬೆಗಳು ಉಳಿದುಕೊಂಡಿದೆಯೇನೋ. ಇಲ್ಲವಾದಲ್ಲಿ ಆ ಗೊಂಬೆಗಳು ಅದೆಷ್ಟು ಮನೆಯ ಶೋಕೆಸುಗಳಲ್ಲಿ ಉಳಿದುಬಿಡುತ್ತಿದ್ದವೋ. ಅದೆಷ್ಟು ಮನೆಯ ಹೂವುಗಳನ್ನು ಇಡುವ ಕುಂಡಗಳಾಗಿಬಿಡುತ್ತಿದ್ದವೋ. ಸೋದೆಯ ಅರಸರ ಕಾಲದ್ದೋ ಅಥವಾ ಕೋಡಸಿಂಗೆಯ, ಕರೂರಿನ ಗೌಡರದ್ದೂ ಅಥವಾ ಬಾಳೂರು ಗೌಡರ ಕಾಲಕ್ಕೆ ಸೇರಿರ ಬಹುದಾದ ಈ ದೇವರ ಕಾನಿನ ಪಳೆಯುಳಿಕೆಗಳ ಕುರಿತು ನಮ್ಮೂರಿನ ಹಿರಿಯರಿಗೂ ಹೆಚ್ಚು ಗೊತ್ತಿಲ್ಲ. ಆ ಬಗ್ಗೆ ಹೇಳಿ ಅಂದರೆ ಅದು ದೇವರ ಕಾಡು. ಅಲ್ಲಿಗೆ ಹೋಗಬೇಡಿ ಎಂದು ಹೇಳಿ ಸುಮ್ಮನಾಗುತ್ತಾರೆ.
    ಅದೇನು ಸ್ಮಶಾನವೋ, ಅಥವಾ ಹೆಸರೇ ಹೇಳಿದಂತೆ ದೇವರಿಗೆ ಸೇರಿದ ತಾಣವೋ, ಚೌಡಿ, ಮಾಸ್ತಿಯ ಸ್ಥಳವೋ, ಅಥವಾ ಒಂದಾನೊಂದು ಕಾಲದಲ್ಲಿ ನಾಗರಬನ ಆಗಿತ್ತೋ ಯಾರಿಗೂ ಗೊತ್ತಿಲ್ಲ. ಮುಂಚೆ ಯಾವಾಗಲೂ ನಾವು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದೆವು. ಕೊನೆ ಕೊನೆಗೆ ಆ ದೇವರ ಕಾನಿನ ಸುತ್ತ ಕಿತ್ತಲಕೈ ಊರಿನವರ್ಯಾರದ್ದೂ ಬೇಲಿಯೂ ಎದ್ದು ನಿಂತಿದೆ. ಸೂರ್ಯನ ಕಿರಣಗಳು ನೆಲವನ್ನು ಏನು ಮಾಡಿದರೂ ಮುಟ್ಟದಂತಿರುವ ಈ ಸ್ಥಳದಲ್ಲಿ ಅದೇನೋ ಒಂದು ರೀತಿಯ ನೀರವ, ಭೀತಿಯುಕ್ತ ವಾತಾವರಣ ನೆಲೆಸಿರುವುದು ವಿಚಿತ್ರವೂ ವಿಶಿಷ್ಟವೂ ಹೌದು.
    ಈ ಕುರಿತು ಹೆಚ್ಚು ತಿಳಿದವರಿಲ್ಲ. ಈ ಸ್ಥಳವನ್ನು ಉತ್ಖನನ ಮಾಡಿದರೆ ಇನ್ನಷ್ಟು ಮಾಹಿತಿ ಸಿಗಬಹುದು. ಅಗೆದರೆ ಅಲ್ಲಿ ನಿಧಿ ಇದೆ, ಅದನ್ನು ಕಾಳಸರ್ಪವೊಂದು ಕಾಯುತ್ತಿದೆ, ಅಲ್ಲೇ ಜೊತೆಯಲ್ಲಿ ಹುತ್ತವೂ ಇದೆ ಎಂದು ವಾಡಿಕೆಯ ಮಾತುಗಳಿವೆ. ನನ್ನ ಕಣ್ಣಿಗೆ ಹುತ್ತ ಕಾಣಿಸಿದೆ. ಅಲ್ಲದೆ ಮಂಟಪದಂತಹ ಸ್ಥಳವೂ ಕಂಡಿದೆ. ನಿಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಶಿರಸಿಯ ನಮ್ಮ ಇತಿಹಾಸ ಪ್ರಾದ್ಯಾಪಕರೂ, ಪ್ರಾಚೀನ ವಸ್ತುವನ್ನು ಸಂಗ್ರಹಿಸಿ ಶಿರಸಿಯಲ್ಲಿ ಮ್ಯೂಸಿಯಂ ಮಾಡುತ್ತಿರುವ ಟಿ. ಎಸ್. ಹಳೆಮನೆ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗೆಲ್ಲ ನಮ್ಮೂರಿಗರು ಹಾಗೂ ಸುತ್ತಮುತ್ತಲ ಭಾಗದವರು ನನ್ನನ್ನು ವಿಚಿತ್ರವಾಗಿ, ಅನುಮಾನದಿಂದ ನೋಡಿದ್ದಿದೆ. ಜೊತೆಗೆ ಅಲ್ಲಿ ಮಣ್ಣಿನಲ್ಲಿ ಬಿದ್ದು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿ ಹೋಗುತ್ತಿದ್ದ ಗೊಂಬೆಗಳನ್ನು ತಂದು ಮ್ಯೂಸಿಯಂನಲ್ಲಿ ಇಡುತ್ತೇನೆ ಎಂಬ ಹಳೆಮನೆ ಸರ್ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
    ಹಾಗಿದ್ದರೆ ಅದೇನಿರಬಹುದು? ನಮ್ಮೂರಿನಲ್ಲೆ, ನಾನು ಓಡಾಡುವ ಜಾಗದಲ್ಲಿಯೇ ಇಂತಹ ಸ್ಥಳ ಇದ್ದರೂ ಅದರ ಹಿನ್ನೆಲೆ ಗೊತ್ತಿಲ್ಲವಲ್ಲಾ.. ಅದನ್ನು ಉಳಿಸೋಣ ಎಂದುಕೊಂಡು ಮಾಡಿದ ಕೆಲಸಗಳೆಲ್ಲ ವ್ಯರ್ಥವಾಗಿದೆಯಲ್ಲ ಎಂಬ ಬೇಸರವಿದೆ. ಮಳೆ, ಗಾಳಿ, ಕಾಡಿನ ಪ್ರಾಣಿಗಳ ಹಾವಳಿಗಳಿಂದ ಮಣ್ಣಾಗುತ್ತಿರುವ ಈ ಗೊಂಬೆಗಳನ್ನು ಕಾಪಾಡಲು ಆಗುತ್ತಿಲ್ಲವೆನ್ನುವ ವ್ಯಥೆಯೂ ಇದೆ. ಮೂಢನಂಬಿಕೆಯಿಂದಲೋ ಅಥವಾ ಇನ್ಯಾವ ಕಾರಣವೋ.. ನಮ್ಮ ಪ್ರಯತ್ನವನ್ನು ವಿರೋಧಿಸಿದ ಈ ಕುರಿತು ಕುತೂಹಲವೂ ಇದೆ. ಇತಿಹಾಸ ಅರಿಯುವ ಅವಕಾಶವಿದ್ದರೂ ಆಗುತ್ತಿಲ್ಲವೆನ್ನುವ ಅಸಹಾಯಕತೆ.
    ಇವೆಲ್ಲದರ ಜೊತೆಗೆ ಹಾಗೆಯೇ ಬಿದ್ದುಕೊಂಡಿರುವ ಆ ನಿಗೂಢ ಗೊಂಬೆಗಳು ಅಲ್ಲೇ ಕಣ್ಮರೆಯಾಗ್ತವಾ? ನಮ್ಮೂರಿನ ದೇವರಕಾನು, ದೇವರ ಹೆಸರಿನ ಮೂಲಕ ಕಾನು ಉಳಿದುಕೊಂಡಿದ್ದೆಲ್ಲ ಮರೆಯಾಗುತ್ತದಾ ಎಂಬ ಆಲೋಚನೆಯಲ್ಲಿದ್ದೇನೆ.

ಒಂದಷ್ಟು ಹನಿಗಳು

ಒಂದಷ್ಟು ಹನಿಗಳು

(ಐದು ಹನಿಚುಟುಕಗಳು, ಚುನಾವಣೆ, ನ್ಯೂ ಈಯರ್, ಹೃದಯದ ಸ್ಥಿತಿ, ಚುನಾವಣಾ ಸಮಯ ಹಾಗೂ ಇಂಡಿಯಾ ಶೈನಿಂಗ್)

33)ಚುನಾವಣೆ

ಚುನಾವಣೆ ಚುನಾವಣೆ
ಜನರ ಜಮಾವಣೆ
ನೋಟು, ಓಟುಗಳ ಚಲಾವಣೆ
ಅಭ್ಯರ್ಥಿಗಳ ಪ್ರಚಾರಣೆ, ಹಣಾಹಣಿ,
ಹೆಂಡ ಸಾರಾಯಿಗಳ ಸಮರ್ಪಣೆ,
ರೌಡಿ ಪಡೆಗಳ ದಬಾವಣೆ
ಗೆದ್ದ ಅಭ್ಯರ್ಥಿ ಹಿಡಿದ ಚುಕ್ಕಾಣಿ
ಇನ್ನೈದು ವರ್ಷ ಅವನ ಮುಖ ನಾಕಾಣೆ|
ನಾ ಕಾಣೆ..||

34) ನ್ಯೂ ಈಯರ್

ಹಳೆ ಸಮಸ್ಯೆ
ಮರೆಸಿ
ಹೊಸ ಸಮಸ್ಯೆಯ
ಜನನಕ್ಕೆ
ನಾಂದಿ ಆಗುವ ದಿನವೇ
ಹೊಸ ವರ್ಷ||

35)ಹೃದಯದ ಸ್ಥಿತಿ

ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದ್ಉ...||

36)ಚುನಾವಣಾ ಸಮಯ

ಹಿಂದೆ ನಡೆದಿತ್ತಂತೆ ಐದು
ವರ್ಷಕ್ಕೊಂದು ಚುನಾವಣೆ
ಆದರೆ ಈಗ ನಡೆಯುತ್ತಿದೆ
ವರ್ಷಕ್ಕೆ ಐದು ಚುನಾವಣೆ||

37)ಇಂಡಿಯಾ ಶೈನಿಂಗ್

ಅಲ್ಲಿ ನೋಡು ಇಲ್ಲಿ ನೋಡು
ಪ್ರಕಾಶಿಸಿದೆ ಭಾರತ
ಕಣ್ಣು ಬಿಟ್ಟು ಸರಿಯಾಗಿ ನೋಡು
ಬೆಳಕಿಲ್ಲದ ಟ್ಯೂಬ್ ಲೈಟಾ..|

Wednesday, December 12, 2012

ವಿಸ್ಮಯಗಳ ಗೂಡು ಈ ಮಲೆನಾಡು : ಭಾಗ-1

ವಿಸ್ಮಯಗಳ ಗೂಡು ಈ ಮಲೆನಾಡು 

ಭಾಗ-1

ಈ ಮಲೆನಾಡು ವಿಸ್ಮಯಗಳ ಆಗರ. ವೈಶಿಷ್ಟ್ಯತೆಗಳ ಸಾಗರ. ಈ ಪ್ರದೇಶವೇ ವಿಶಿಷ್ಟ, ವಿಚಿತ್ರ.. ಮಲೆನಾಡಿನಲ್ಲಿ ಅದರದೇ ಆದ ಬೆರಗಿನ ಲೋಕವಿದೆ. ಅದಕ್ಕೆ ಅದರದೇ ಆದ ಸೊಬಗಿದೆ. ಪ್ರಾಣಿ ಸಮುದಾಯ, ಪಕ್ಷಿ ಲೋಕ, ಚಿಟ್ಟೆ, ಜಂತು, ಕೀಟಗಳ ಸಾಗರವೇ ಇಲ್ಲಿದೆ. ಇತರ ಕಡೆಗಳಿಗಿಂತ ಇವು ಭಿನ್ನ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ಮಣ್ಣು ಹಾಗೂ ಮಣ್ಣಿನ ಗುಣಗಳೇ ಭಿನ್ನ. ಇಲ್ಲಿ ನಿಮ್ಮೆದುರು ನಾನು ಮಲೆನಾಡಿನ ಕೆಲವು ವಿಶಿಷ್ಟತೆಗಳ ಪಟ್ಟಿಮಾಡಿ ಇಡುತ್ತಿದ್ದೇನೆ ನೋಡಿ..,

ವಿಶಿಷ್ಟ ಹಣ್ಣುಗಳು;

    ಮಲೆನಾಡಿನ ಬೆಟ್ಟಗುಡ್ಡಗಳು ಸದಾಕಾಲ ಒಂದಲ್ಲ ಒಂದು ಹಣ್ಣುಗಳಿಂದ ತುಂಬಿಯೇ ಇರುತ್ತದೆ. ಬಿರು ಬೇಸಿಗೆಯಿರಲಿ, ಜೊರಗುಡುವ, ಜಿಟ ಜಿಟಿಯ ಮಳೆಗಾಲವಿರಲಿ ಅಥವಾ ಕೊರೆವ ಚಳಿಗಾಲವಿರಲಿ ಮಲೆನಾಡಿನ ಗುಡ್ಡಗಳಲ್ಲಿ ಒಂದಲ್ಲ ಒಂದು ಜಾತಿಯ ಗಿಡಗಳು ಹಣ್ಣನ್ನು ಬಿಟ್ಟೇ ಬಿಡುತ್ತವೆ. ಸುಮ್ಮನೆ ಗುಡ್ಡದ ಗುಂಟ ನೀವು ಅಲೆದಾಟ ನಡೆಸಿದರೆ ಸಾಕು ಅಲ್ಲೆಲ್ಲ ಒಂದೆಷ್ಟು ಬಗೆ, ರುಚಿಯಾದ, ಸವಿಯ ಹಣ್ಣುಗಳು ಬೊಗಸೆ ತುಂಬಾ ಸಿಗಬಲ್ಲವು. ಇಂತಹ ಹಣ್ಣುಗಳಲ್ಲಿ ಮುಖ್ಯವಾದವುಗಳೆಂದರೆ
    ಬಿಕ್ಕೆ ಹಣ್ಣು(ಬುಕ್ಕೆ ಹಣ್ಣು), ನೇರಲೆ ಹಣ್ಣು, ಕುಂಟ ನೇರಲೆ ಹಣ್ಣು, ಗುಂಡು ನೇರಲೆ ಹಣ್ಣು, ಸಳ್ಳೆ ಹಣ್ಣು, ಇವುಗಳು ಮಳೆಗಾಲಕ್ಕೆ ಮೆರಗುಕೊಟ್ಟರೆ, ಬಿಳಿ ಮುಳ್ಳೆ ಹಣ್ಣು, ಕರಿ ಮುಳ್ಳೆ ಹಣ್ಣು (ಪರಗೆ), ಪೆಟ್ಲ ಹಣ್ಣು, ಜಂಬೆ ಹಣ್ಣು ಇವುಗಳು ಚಳಿಗಾಲವನ್ನು ಸುಂದರವಾಗಿಸುತ್ತವೆ. ಗುಡ್ಡೇ ಗೇರು, ಕವಳೀ, ಬಿಳಿ ಮುಳ್ಳಣ್ಣು, ಹೂಡ್ಲು ಹಣ್ಣು, ದಾಸಾಳ, ಹಲಿಗೆ, ಸಂಪಿಗೆ ಇತ್ಯಾದಿ ಹಣ್ಣುಗಳು ಬೇಸಿಗೆಯ ಬೆಡಗನ್ನು ಹೆಚ್ಚಿಸುತ್ತವೆ. ಆಗೆಲ್ಲ ಮಲೆನಾಡು ಅದರದೇ ವಿಸ್ಮತೆಯನ್ನು ಹೊಂದಿ ಸುತ್ತೆಲ್ಲ ಹರಡುತ್ತದೆ.

ಕೆಲವು ವೈಶಿಷ್ಟ್ಯತೆಗಳು

    ಮಲೆನಾಡಿನ ಹೆಸರಿನಲ್ಲೇ ವೈಶಿಷ್ಟ್ಯತೆಗಳು ಅಡಗಿವೆ. ಇಲ್ಲಿನ ಪ್ರತಿಯೊಂದು ನದಿ-ಗಿರಿ-ಕಾನು-ವಿಷಯ-ವಸ್ತು-ಮೃಗ-ಖಗ-ಸಸ್ಯ-ಸೊಬಗು ಇವೆಲ್ಲವುಗಳಿಗೂ ಅದರದೇ ಆದ ವೈಶಿಷ್ಟ್ಯ ಹಾಗೂ ಸೊಬಗನ್ನು ಹೊಂದಿವೆ.
    ಮಳೆಗಾಲದಲ್ಲಿಯೇ ಕಾಣ ಸಿಗುವ ಸೀತಾದಂಡೆ, ದ್ರೌಪದಿ ದಂಡೆ ಎಂಬ ಎರಡು ಬಗೆಯ ಪರಾವಲಂಬಿ ಸಸ್ಯಗಳ ಹೂಗೊಂಚಲು ಮಲೆನಾಡಿನ ಮಳೆಗಾಲಕ್ಕೆ ದೃಷ್ಟಯಕಾವ್ಯವನ್ನು ಕಟ್ಟುತ್ತವೆ. ಯಾವುದೋ ಮರಗಳಿಗೆ ಅಂಟಿಕೊಂಡು ಬೆಳೆಯುವ ಈ ಸಸ್ಯಗಳು ಪರಾವಲಭಿಯಾಗಿದ್ದರೂ ಸುಂದರ ಹೂಗಳನ್ನು ಅರಳಿಸಿಕೊಂಡು ಮಳೆಗಾಲವನ್ನು ಅದರಲ್ಲೂ ಹೆಚ್ಚಾಗಿ ಜಿಟಿ ಜಿಟಿ ಮಳೆಯನ್ನು ಸ್ವಾಗತಿಸುತ್ತ ನಿಂತಿರುತ್ತವೆ. ಈ ಹೂಗಳ ಬಣ್ಣವೂ ಅಷ್ಟೆ ಸುಂದರ. ಬಿಳಿ-ತಿಳಿ ಗುಲಾಬಿ ಬಣ್ಣಗಳ ಈ ಚಿಕ್ಕ ಚಿಕ್ಕ ಹೂ ಪಕಳೆಗಳು ದಂಡೆಗಳಂತಿರುವ ಪೋಣಿಸಿ ಮಾಲೆಯನ್ನಾಗಿ ಮಾಡಿ ಇಟ್ಟಂತಿರುವ ಹೂಗೊಂಚಲಿನ ಬುಡದ ಹೂಗಳು ಅರಳಿದ್ದರೆ ತುದಿಯ ಹೂಗಳು ಇನ್ನೂ ಮೊಗ್ಗಾಗಿ ಅರಳಲು ಕಾಯುತ್ತ ಕುಳಿತಿರುವ ದೃಶ್ಯ ನೋಡುಗರಿಗಂತೂ ಹಬ್ಬವನ್ನೇ ಉಂಟುಮಾಡುತ್ತವೆ.
    ಅಷ್ಟೇ ಅಲ್ಲ. ಮಲೆನಾಡಿನ ಹೆಜ್ಜೆ ಹೆಜ್ಜೆಗಳಲ್ಲಿ ಕೌತುಕತೆ ಕಾಲಿಗೆ ತೊಡರುತ್ತದೆ. ಪದೆ ಪದೆ ತೊಡಕುತ್ತದೆ. ನೋಡುಗ ಸ್ವಲ್ಪ ಭಾವನಾ ಜೀವಿಯಾಗಿದ್ದರೂ ಸಾಕು ಎಂತಹವನೆ ಆದರೂ ಕವಿಯಾಬಲ್ಲ, ಕವಿತೆ ಕಟ್ಟಬಲ್ಲ. ಮತ್ತೆ ಮತ್ತೆ ಭಾವಲೋಕವನ್ನು ಕವಿತೆಗಳ ಮೂಲಕ ತೆರೆದಿಡಬಲ್ಲ. ಇನ್ನು ಹಾಡುವ ಖಯಾಲಿಯಿದ್ದರಂತೂ ಜಗತ್ತಿನ ಪರಿವೆಯೇ ಇಲ್ಲದಂತೆ ಸುಂದರ ಹಾಡುಗಳಿಗೆ ದನಿಯಾಗಬಲ್ಲ. ಅಂತಹ ಸಾಮರ್ಥ್ಯ ಮಲೆನಾಡಿಗಿದೆ.
    ಮಲೆನಾಡು ಅದೆಷ್ಟೇ ವಿಸ್ಮಿತವಾದರೂ ನೋಡುಗರ ದೃಷ್ಟಿಯೂ ಅಗತ್ಯ. ನೋಡುಗನ ಮನಸ್ಥಿತಿಯಲ್ಲಿ ಪ್ರದೇಶಗಳ ವಿಶೇಷತೆಯೂ ಇರುತ್ತದೆ. ಕೆಲವರಿಗೆ ಯಾವುದೇ ಸ್ಥಳಗಳೂ ಬೆರಗು ಮೂಡಿಸಬಲ್ಲದು. ಮತ್ತೆ ಕೆಲವರಿಗೆ ಊಹೂಂ ಅವರನ್ನು ಜೋಗದ ಒಡಲಿಗೆ ಕರೆದೊಯ್ದರೂ ಇಷ್ಟೇನಾ.. ನೀರು ಮೇಲಿಂದ ಕೆಳಕ್ಕೆ ಬೀಳ್ತದೆ.. ನಾವು ಮೂತ್ರ ಮಾಡಿದರೆ ಬೀಳಲ್ಲವಾ.. ಅನ್ನುವ ಮಾತುಗಳನ್ನು ಆಡುತ್ತಾರೆ.
    ಮಲೆನಾಡೂ ಅಷ್ಟೆ ನಮ್ಮೊಳಗಿನ ವಿಸ್ಮಯದ ಕಣ್ಣನು ತೆರೆದು ನೋಡಿದರೆ ಬಹಳ ಸುಂದರ. ಆಗ ಮಾತ್ರ ಸುತ್ತಲ ಸುಂದರ ವೈಭೋಗಗಳು ಮನದಣಿಸುತ್ತವೆ ಅಲ್ಲವೇ..

Tuesday, December 11, 2012

ಎಲ್ಲ ಮರೆತಿರುವಾಗ (ಕಥೆ ಭಾಗ -7)

ಎಲ್ಲ ಮರೆತಿರುವಾಗ


ಭಾಗ -7

(ಇಲ್ಲಿಯವರೆಗೆ : ಮೆಂಟಲ್ ಆಗಿದ್ದ ಜೀವನ್ ರಚನಾ ಕೈಗೆ ಸಿಕ್ಕಿ ಸರಿಯಾದ.. ಅಂದುಕೊಂಡಂತೆ ಹಾಡುಗಾರನಾದ.. ನೀಯಾಕೆ ಹೀಗಾಗಿದ್ದೆ ಗೆಳೆಯಾ ಎಂದು ಕೇಳಿದ ರಚನಾಗೆ ತನ್ನ ಕಥೆಯನ್ನು ಹೇಳಲು ಪ್ರಾರಂಭ ಮಾಡಿದ್ದ ಆತ..ಮುಂದೆ.. ಓದಿ..)
-----------------
ನಮ್ಮೂರು ಮಲೆನಾಡಿನ ಪುಟ್ಟ ಹಳ್ಳಿ. ನಿಂಗೆ ಗೊತ್ತಲ್ಲ ರಚನಾ ನಿಮ್ಮೂರಿನ ತರಹವೇ. ಹಸಿರು ಗಿರಿ, ಗುಡ್ಡ, ಬೆಟ್ಟ, ಅಡಿಕೆ ತೋಟ, ಕರಡದ ಬ್ಯಾಣ.. ಇವೆಲ್ಲ ನಮ್ಮೂರಿನ ವಿಶೇಷ ಗುಣಲಕ್ಷಣಗಳು. ಅಪ್ಪ-ಅಮ್ಮ ಟಿಪಿಕಲ್ ಶಿರಸಿ ಭಾಗದ ಹವಿಗರು. ನಮ್ಮೂರಿನಲ್ಲಿ 8-10 ಮನೆಗಳಿವೆ. ನಮ್ಮೂರಿನಿಂದ ಮುಖ್ಯ ಪಟ್ಟಣ ಶಿರಸಿಗೆ ಬರಬೇಕೆಂದರೆ ಅನಾಮತ್ತು 6-8 ಕಿ.ಮಿ ನಡೆದು, ಬಸವಳಿದು ಬರುವ ಬಸ್ಸಿಗೆ ಕಾದು ಕಾದು ಸುಸ್ತಾಗಿ ಬರಬೇಕು. ಅಂತಹ ಹಳ್ಳಿ.
ನಮ್ಮೂರಿನ ಸುತ್ತ ಮುತ್ತೆಲ್ಲ ಕಗ್ಗಾಡು. ಕಗ್ಗಾಡೆಂದರೆ ಅಲ್ಲಿ ಕಡವೆ, ಕಾಡೆಮ್ಮೆ, ಕಪ್ಪು ಹುಲಿ, ಚಿರತೆ, ಹಂದಿ ಇವೆಲ್ಲ ಕಾಮನ್ನುಗಳು. ನಾನು ಪ್ರೈಮರಿ ಓದಿದ್ದೆಲ್ಲ ನಮ್ಮೂರು ಬಳಿಯ ಹಿ.ಪ್ರಾ. ಶಾಲೆಯಲ್ಲಿ. ಆಮೇಲೆ ನೆಂಟರ ಮನೆಯಲ್ಲಿ ಉಳಿದು ಹೈಸ್ಕೂಲು, ಪಿಯುಸಿಯನ್ನೂ ಮುಗಿಸಿದೆ. ಸರಿ, ಮುಂದೆ ಓದಬೇಕೋ ಬೇಡವೋ ಎಂಬ ಗೊಡವೆಯಲ್ಲಿದ್ದಾಗ ಹಲವರು ಡಿಗ್ರಿ ಮಾಡು ಅಂದರು. ಮನೆಯಲ್ಲಿ ಹರಪೆ ಬಿದ್ದು ಡಿಗ್ರಿಗೆ ಜಾಯಿನಾದೆ. ಅಲ್ಲಿಂದ ಬದಲಾಯಿತು ನನ್ನ ಬದುಕು. 
ನಾನು ಡಿಗ್ರಿಗೆ ಬರುವ ವೇಳೆಗೆ ಜಗತ್ತೆಂದರೆ ಹಾಗೆ, ಹೀಗೆ ಅಂತೆಲ್ಲ ಕನಸು ಕಂಡಿದ್ದೆ. ಡಿಗ್ರಿಯ ನಂತರವೇ ಜಗತ್ತಿನ ಬವಣೆ ಅರ್ಥವಾಗಿದ್ದು ನನಗೆ. ನಾನಂದುಕೊಂಡಂತಿಲ್ಲ ಜಗತ್ತು. ಅದು ಸಮ್ ಥಿಂಗ್ .. ಬೇರೆಯ ಥರಾ ಅಂದುಕೊಂಡೆ.. ನಿಧಾನವಾಗಿ ಬದಲಾಯಿತು ಬದುಕು.
ಇಷ್ಟರ ಜೊತೆಗೆ ಇನ್ನೊಂದೆರಡು ವಿಷಯ ಹೇಳಲೇ ಬೇಕು ನಿನಗೆ. ನಮ್ಮ ಮನೆಯ ಕುರಿತು ಒಂದು ವಿಷಯ ಆದರೆ ನಮ್ಮೂರಿನ ಕುರಿತು ಇನ್ನೊಂದು.  ನಮ್ಮ ಮನೆ.. ಎಲ್ಲ ಹವ್ಯಕರ ಮನೆಗಳಂತೆಯೇ ಮಧ್ಯಮವರ್ಗದ ಜನ. ಆರಕ್ಕೆ ಏರುವ ಕನಸು, ಮೂರಕ್ಕಿಳಿಯದಂತೆ ಜೀವನ ನಡೆಸುವ ಸರ್ಕಸ್ಸು.. ಮನೆಯ ಸದಸ್ಯರಿಗೆ ತಂದು ಹಾಕಲು ಒದ್ದಾಡುವ ಅಪ್ಪ. ಇದ್ದಿದ್ದರಲ್ಲೇ ಮೃಷ್ಟಾನ್ನ ಭೋಜನ ತಯಾರಿಸುವ ಅಮ್ಮ. ಹೈಸ್ಕೂಲು ಓದಲು 6-8 ಕಿ.ಮಿ ನಡೆಯುವ ತಂಗಿ. ಇದು ನಮ್ಮ ಆಗಿನ ಬದುಕು ಅಂದರೆ ನೀನು ನಂಬ್ತೀಯಾ ರಚನಾ?
ನಾನಂತೂ ಬಿಡು ಹುಡುಗ. ನನ್ನ ತಂಗಿಯ ಪಾಡು ಬಹಳ ಕೆಟ್ಟದಾಗಿತ್ತು. ಜೀವನ ಆ ಸಂದರ್ಭದಲ್ಲಿ ಅದೆಷ್ಟು ಕಷ್ಟವನ್ನು ನೀಡಿತೋ. ಪ್ರೈಮರಿ ಸ್ಕೂಲು ಓದಿದ ನಂತರ ಹೈಸ್ಕೂಲು ಓದಬೇಕಲ್ಲ. ಹೇಗೆ ಓದಿಸಲಿ ಅಂತ ತಿಳಿಯದೆ ಅಸಹಾಯಕನಾಗಿ ಕೈಚೆಲ್ಲಿದ್ದ ಅಪ್ಪ.  ಇಲ್ಲ ಓದಿಸೋಕೆ ಸಾಧ್ಯವೇ ಇಲ್ಲ ಅಂತ ಖಂಡತುಂಡವಾಗಿ ಹೇಳಿಯೂಬಿಟ್ಟಿದ್ದ. ಪಾಪ ತಂಗಿ. ಓದಬೇಕು ಅಂತ ಅಮ್ಮನ ಬಳಿ ಕಾಡಿ ಬೇಡಿದಳು. ಅಮ್ಮ ಅದ್ಯಾವ ಸಾಮಾನು ಡಬ್ಬದಲ್ಲಿ ಯಾವತ್ತು ಹುದುಗಿಸಿ ಇಟ್ಟಿದ್ದಳೋ, ಾ ಹಣವನ್ನು ಕೊಟ್ಟು ಹೈಸ್ಕೂಲಿಗೆ ಸೇರಿಸಿದ್ದಳು.

ಹೈಸ್ಕೂಲಿಗೆ ಹೋದರೆ ಮುಗಿಯಿತಾ? ಯುನಿಫಾರ್ಮ್ ಬೇಡವಾ, ಪಟ್ಟಿ, ಪುಸ್ತಕಗಳು ಬೇಡವಾ..? ಶುರುವಾಯಿತಲ್ಲ ಸಮಸ್ಯೆಗಳ ಸರಮಾಲೆ.. ಆಕೆ ನಮ್ಮೂರಿನಲ್ಲೇ ಇದ್ದ ಅವಳಿಗಿಂತ ಒಂದೆರಡು ವರ್ಷದ ದೊಡ್ಡ ವಾರಿಗೆಯಲ್ಲಿ ಅಕ್ಕನಾಗಬೇಕಾದ ಹುಡುಗಿಯಿಂದ ಹಳೆಯ ಪುಸ್ತಕಗಳನ್ನು ಪಡೆದಿದ್ದೂ ಆಗಿದೆ. ಜೊತೆಗೆ ಆಕೆಯೇ ಬಳಸಿ ಬಿಟ್ಟ ಯುನಿಫಾರ್ಮನ್ನೂ ಕೂಡ. ವಿಷಿತ್ರವೆಂದರೆ ಆ ಯುನಿಫಾರ್ಮ್ ಕೊಡುವಾಗಲೂ ಸಾಕಷ್ಟು ಬಯ್ದು ಕೊಟ್ಟಿದ್ದಳಂತೆ. 
ಯುನಿಫಾರ್ಮು ಡ್ರೆಸ್ಸು, ಹಳೆಯದು ಹೇಗಿತ್ತು ಅಂತೀಯಾ.. ಬಿಳಿಯ ಅಂಗಿ, ನೀಲಿ ಸ್ಕರ್ಟು. ಆ ಸ್ಕರ್ಟು ಕೂಡ ಸೊಂಟದ ಬಳಿ ಹರಿದುಹೋಗಿತ್ತು. ಹಾಕಿಕೊಂಡರೆ ಹಾಗೆಯೇ ಬಿದ್ದು ಬಿಡುತ್ತದೆಯೇನೋ ಎನ್ನಿಸುತ್ತಿತ್ತು. ಅದಕ್ಕೆ ಪಿಟ್ಟಾಗಿ ಪಿನ್ನನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದಳು ನನ್ನ ತಂಗಿ.
ಬಿಡು ಬವಣೆಯ ಕಾಲ ಅದು. ಆದರೂ ಸ್ಪೋರ್ಟ್ಸ್ ಅಂದರೆ ಆಗೆ ಎಂದೂ ಮುಂದು. ಓಡೋಕೆ ಬರ್ತಿರಲಿಲ್ಲ. ಆಡೋಕೆ ಬರ್ತಿರಲಿಲ್ಲ. ಮನೆಯಲ್ಲಿ ಪ್ರತಿದಿನ ಬೆಳಗಿನ ತಿಂಡಿ ಲೇಟಾಗುತ್ತಿತ್ತು. ಹೈಸ್ಕೂಲಿನ ಟೈಮಿಗೆ ಹೋಗಿ ತಲುಪಬೇಕಲ್ಲ. ಗಬಗಬನೆ ತಿಂಡಿ ತಿಂದು ವೇಗವಾಗಿ ನಡೆಯುತ್ತಿದ್ದಳು ನನ್ನ ತಂಗಿ. ಆಕೆ ನಡೆಯುವ ವೇಗ ಹೇಗಿತ್ತು ಅಂದ್ರೆ ಸಾಮಾನ್ಯರು ಅವಳ ಸರಿಸಮಕ್ಕೆ ನಡೆಯಬೇಕೆಂದರೆ ತುಸು ಓಡಲೇಬೇಕಿತ್ತು. ಅದನ್ನೇ ಅವಳ ಶಿಕ್ಷಕರೊಬ್ಬರು ಗುರುತಿಸಿ, ಪ್ರೋತ್ಸಾಹವನ್ನೂ ನಿಡಿದರು. ಅದಕ್ಕೆ ತಕ್ಕಂತೆ ಆಕೆ ಸ್ಥಳೀಯ,ಹೋಬಳಿ, ಜಿಲ್ಲಾಮಟ್ಟ, ವಲಯಮಟ್ಟಗಳಲ್ಲೂ ಗೆದ್ದು ರಾಜ್ಯಮಟ್ಟದವರೆಗೆ ಹೋಗಿಬಂದಿದ್ದಳು ಎಂಬುದನ್ನು ನಂಬುತ್ತೀಯಾ? ಆದರೂ ಚನ್ನಾಗಿ ಓದಿಯೂ ಎಸ್ಸೆಸ್ಸೆಲ್ಸಿಯಲ್ಲಿ ಒಂದು ಸಬ್ಜೆಕ್ಟಿನಲ್ಲಿ ಫೇಲಾದಳು.
ಬಿಡು ಛಲದಂಕಮಲ್ಲಿ ಆಕೆ. ಮತ್ತೆ ಪಾಸಾಗಿ, ಎಕ್ಸಟರ್ನಲ್ ಆಗಿ ಪಿಯು ಪಾಸು ಮಾಡಿ, ನಂತರ ಡಿಗ್ರಿಯನ್ನೂ ಮುಗಿಸಿ ಬಯಸಿದವನನ್ನೇ ಮದುವೆಯಾಗಿ ಈಗ ಆರಾಮಾಗಿದ್ದಾಳೆ. ಯಾಕೆ ಈ ವಿಷಯ ಹೇಳಿದೆ ಅಂದರೆ ನನ್ನ ಮನೆಯ ಹಾಗೂ ನನ್ನ ತಂಗಿಯ ವಿಷಯಗಳನ್ನು ಹೇಳಿದ ಹೊರತು ನನ್ನ ಬಗ್ಗೆ ಹೇಳಿದರೆ ಸರಿಯಾಗಿ ಅರ್ಥವಾಗೋಲ್ಲ.
ಇನ್ನು ನನ್ನ ವಿಷಯಕ್ಕೆ ಬರ್ತೀನಿ. ನಾನು ಕಾಲೇಜು ಸೇರಿದ ಸಮಯದಲ್ಲಿ ನಮ್ಮೂರಿನ ಪರಿಸ್ಥಿತಿ ಹೇಗಿತ್ತೆಂದರೆ ನಮ್ಮೂರಿನಿಂದ ನಾನೊಬ್ಬನೆ ಪ್ರತಿದಿನ ಶಿರಸಿಗೆ ಹೋಗಿ ಬರುತ್ತಿದ್ದೆ. ಆದ್ದರಿಂದ ಇಡೀಯ ನಮ್ಮೂರಿಗರು ತುರ್ತಾಗಿ ಏನಾದರೂ ತರಬೇಕಿದ್ದಲ್ಲಿ ನನ್ನನ್ನು ಸಂಪರ್ಕ ಮಾಡುತ್ತಿದ್ದರು. ಬೆಳಿಗ್ಗೆ ಎಷ್ಟೇ ಬೇಗನೆ ಎದ್ದು ತಯಾರಾದರೂ 6-8 ಕಿಮಿ ನಡೆದು ಕಾಲೇಜು ತಲುಪುವ ವೇಳೆಗೆ ಗಂಟೆ 11 ಆಗುತ್ತಿತ್ತು. ಗೆಳೆಯರೆಲ್ಲ ರೇಗಿಸುತ್ತಿದ್ದರು. ನಿನ್ನ ಮನೆಯಲ್ಲಿ ಸೂರ್ಯ 11ಕ್ಕೆ ಬರ್ತಾನಾ ಅಂತ.
ವಿಚಿತ್ರ ನೋಡಿ ಸುತ್ತ ದಶ ದಿಕ್ಕುಗಳೂ ಕಾಡು ಹಾಗೂ ಗುಡ್ಡಗಳಿಂದ ಆವೃತವಾಗಿದ್ದ ನಮ್ಮೂರಿಗೆ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದುದು ಗಂಟೆ 11ಕ್ಕೆ. ಅಲ್ಲಿಯವರೆಗೂ ನಮ್ಮೂರನ್ನು ಇಬ್ಬನಿ ತಬ್ಬಿ ಆಳುತ್ತದೆ. ಆಗಲೂ.. ಈಗಲೂ.
ಸರಿ ನನ್ನ ಕಾಲೇಜು ಬದುಕಿನ ಕುರಿತು ಸ್ಪಲ್ಪವಾದರೂ ಹೇಳಬೇಕು. ಸ್ಪಲ್ಪವೇನು ಜಾಸ್ತಿಯೇ ಹೇಳಬೇಕು. ಯಾಕಂದರೆ ನನ್ನ ಬದುಕಿನಲ್ಲಿ ಔನ್ನತ್ಯ ಹಾಗೂ ಪಾತಾಳ ಎರಡನ್ನೂ ಕಾಣಿಸಿದ್ದು ಇದೇ ಕಾಲೇಜು ಬದುಕು ಎಂದರೆ ನೀನು ನಂಬಲೇ ಬೇಕು ರಚನಾ.
11 ಗಂಟೆಗೆ ಕಾಲೇಜಿಗೆ ಬರುತ್ತಿದ್ದೆನಾದ್ದರಿಂದ ಮೊದಲ ಎರಡು ಕ್ಲಾಸುಗಳು ಬಂಕಾಗಿರುತ್ತಿದ್ದವು. ಮತ್ತೆ ಮದ್ಯಾಹ್ನ 3ಅಥವಾ4ಕ್ಕೆ ಹೊರಡಲೇ ಬೇಕಿತ್ತು. ಇಲ್ಲವಾದಲ್ಲಿ ನಾನು ಕತ್ತಲೆಯಲ್ಲಿ ಕಾಡುಪಾಲಾಗುತ್ತಿದ್ದೆ. ಹೀಗಾಗಿ ಸಂಜೆಯೂ ಒಂದೆರಡು ಕ್ಲಾಸು ಬಂಕು. ನನ್ನ ಹಣೆಬರಹಕ್ಕೆ ನನಗೆ ದೋಸ್ತರ ದಂಡೂ ಬಹಳ ಇತ್ತು ನೋಡು.  ಆ ಕಾರಣಕ್ಕಾಗಿಯೇ ನಾನು ಅವರ ನಡುವೆ ಗೇಲಿಗೂ ತುತ್ತಾಗಿದ್ದೆ.
ಮೊದಲಿನಿಂದಲೂ ನಾನೊಂಥರಾ ಮೂಡಿ ಹುಡುಗ. ಎಲ್ಲೂ ತೆರೆದುಕೊಳ್ಳದ, ನನ್ನಷ್ಟಕ್ಕೆ ನಾನಿರುವ, ನನ್ನಲ್ಲೆ ನಾನು ಬಚ್ಚಿಟ್ಟುಕೊಳ್ಳುವ ಜಾಯಮಾನದವ. ಆ ಕಾರಣದಿಂದಲೇ ನನಗೆ ಗೊತ್ತಿಲ್ಲದ ನನ್ನೊಳಗಿನ ಅನೇಕ ವೈಶಿಷ್ಟಯಗಳು ಸುಪ್ತವಾಗಿದ್ದವು. ಈಗ ನನ್ನ ಕೈ ಹಿಡಿದಿರುವ ಸಂಗೀತವೂ ಅದರಲ್ಲಿ ಒಂದು.
ನಾನು ಹಾಡಬಲ್ಲೆ, ನಟನೆ ಮಾಡಬಲ್ಲೆ, ಅಪರೂಪಕ್ಕೆ ಬರೆಯಬಲ್ಲೆ ಎಂಬ ಯಾವ ಸಂಗತಿಗಳೂ ನನ್ನಿಂದ ಹೊರಬಂದಿರಲಿಲ್ಲ. ಆದರೆ ಕಾಲೇಜು ಲೈಫು ಅದಕ್ಕೊಂದು ವೇದಿಕೆಯಾಯಿತು.
ಈ ಸಂದರ್ಭದಲ್ಲೆ ನನ್ನ ಲೈಫಿನಲ್ಲಿ ಟರ್ನಿಂಗ್ ಪಾಯಿಂಟೂ ಬಂತು...

(ಮುಂದಿನದು.. ಇನ್ನೊಮ್ಮೆ...)

Monday, December 10, 2012

ನೀನು ಇಲ್ಲದ ವೇಳೆ : ಪ್ರೇಮ ಪತ್ರ-3

ಪ್ರೇಮ ಪತ್ರ-3

ನೀನು ಇಲ್ಲದ ವೇಳೆ

         ಅದೆಷ್ಟು ಸಹಸ್ರ ಸಾರಿ ನಾನು ನಿನ್ನನ್ನು ಮಿಸ ಮಾಡ್ಕೊಂಡಿದ್ದೀನಿ ಗೊತ್ತಾ..! ನಿನ್ನ ನೆನಪು ಬಂದಾಗಲೆಲ್ಲ ಜೊತೆಯಲ್ಲಿ ನೀನಿರಬೇಕಿತ್ತು ಕಣೆ ಅಂದ್ಕೊಂಡಿದ್ದೀನಿ. ಆಗೆಲ್ಲ ನಿನ್ನ ನೆನಪು ನನ್ನ ಕೈ ಹಿಡಿದಿದೆ.
    ಬೆಳಗಿನ ಮುಂಜಾನೆಯ ಸಂದರ್ಭದಲ್ಲಿ ಜಿಮ್ಮಿನಲ್ಲಿ ವರ್ಕೌಟ್ ಮಾಡುವಾಗ, ಸೆಮಿಸ್ಟರ್ ಮುಗಿದ ನಂತರ ಸಿಗುವ 15-20 ದಿನಗಳ ಬಿಡುವಿನ ವೇಳೆಯಲ್ಲಿ, ಸಂಜೆಯ ತಿಳಿ ಬೆಳಕಿನ ಓಡಾಟದಲ್ಲಿ, ಕಲ ಕಲನೆ ಹರಿಯುವ ಅಘನಾಶಿನಿಯ ಆಳದೊಡಲಿಗೆ ಧುಡುಮ್ಮನೆ ಜಿಗಿಯುವ ವೇಳೆಯಲ್ಲಿ, .. ಇನ್ನೂ ಅದೆಷ್ಟೋ ವೇಲೆಯಲ್ಲಿ ನಂಜೊತೆ ನೀನೂ ಇದ್ದಿದ್ರೆ ಅದೆಷ್ಟು ಹಿತವಾಗಿರ್ತಿತ್ತು.. ನನ್ನ ಜೊತೆ ನೀನು ಹೆಜ್ಜೆ ಹಾಕಿದ್ರೆ ಅದೆಷ್ಟು ಸೊಗಸಾಗಿತರ್ಿತ್ತು ಅಂತೆಲ್ಲಾ ಅಂದುಕೊಂದಿದ್ದೇನೆ.
    ನೀನು ನನ್ನ ಮನದಾಳದೊಳಗೆಲ್ಲೋ ಬಿಲ ತೋಡಿಕೊಂಡು ಕುಳಿತಿದ್ದೀಯಾ. ಹಾಗಾಗಿಯೇ ನೀನು ಬರಿ ನೆನಪಿಗೆ ಮಾತ್ರ ಬರ್ತೀಯಾ.. ಹಲೋ ಅಂದ್ರೆ ಮಾತಿಗೆ ಸಿಗೋಲ್ಲ.. ಸುಮ್ ಸುಮ್ನೆ `ಕಾಲ್ ಮಾಡು' ಅಂತೀಯಾ.. ಕಾಲ್ ಮಾಡಿದ್ರೆ ವಿಷಯವೇ ಇಲ್ಲ.. ಬರೀ ಕಾಡು ಹರಟೆ. ಮತ್ತೆ... ಮತ್ತೆ.. ಅನ್ನುವ ಶಬ್ದ ನಮ್ಮ ಒಂದು ಸಾರಿಯ ಸಂಬಾಷಣೆಯಲ್ಲಿ ಅದೆಷ್ಟೋ ಸಹಸ್ರ ಸಾರಿ ಇಣುಕಿ ಹೋಗುತ್ತೆ ಅಲ್ವಾ? ಬಿಡು.. ನೀನು ಅರಾಮಾಗಿ ಇದ್ದೀಯೇನೋ.. ನನಗೆ ನೆಮ್ಮದಿಯಿಂದೆ ನಿದ್ದೆ ಮಾಡೋಕಾದ್ರೂ ಬಿಡ್ತೀಯಾ ..? ಇಲ್ಲ.. ಕನಸ್ಸಿನಲ್ಲಿ ಬಂದುಯ ಕಾಡ್ತೀಯಾ.. !! ನಿಂಗೇನೋ ತುಂಟಾಟ. ತುಂಟ, ತಲರ್ೆ ಕ್ಷಣ. ಆದರೆ ನನ್ನ ಮನದ ಬೇಗುದಿ ನಿಂಗೆ ಹೇಗೆ ಅರ್ಥ ಆಗ್ಬೇಕು ಹೇಳು..
    ಆ ನಿನ್ನ ನಗು.. ಮನಸಾರೆ ಸಿನೆಮಾದಲ್ಲಿ ಐಂದ್ರಿತಾ ರೇ ತಿರುವುತ್ತಿದ್ದಳಲ್ಲ ಅಂತಹ ಮುಂಗುರುಳು ತಿರುಗಿಸುವಿಕೆ.. ಸುಮ್ಮನೆ ನಕ್ಕಂತೆ ಮಾಡುವ ಬಗೆ.. ಸಿಟ್ಟು ಬಂದಾಗ ರಂಗೇರುವ ಕೆನ್ನೆ ಇವೆಲ್ಲವನ್ನೂ ನಾನು ಅದೆಷ್ಟು ಮಿಸ್ ಮಾಡ್ಕೊಳ್ತಾ ಇದ್ದೀನಿ ಗೊತ್ತಾ.. ನಿನ್ನ ಬಯಕೆ ತುಂಬಿದ ಕಣ್ಣುಗಳನ್ನು ನನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ. ಅದಕ್ಕಾಗಿ ಕಾತರಿಸಿ ಕುಳಿತಿದ್ದೇನೆ..
    ದೋಸ್ತರೆಲ್ಲಾ ನಿನ್ನ ನೆನಪಿನ ಬಗ್ಗೆ ನಾನು ಹೇಳುವುದನ್ನು ಕೇಳಿ ನಗ್ತಾ ಇದ್ದಾರೆ. ಆದರೆ ಅವರೂ ಲವ್ ಮಾಡಿದವರೇ ಅಲ್ವಾ.. ಅವರ ಸಂಗತಿ ಬಂದಕೂಡ್ಲೇ ಗಂಭೀರವಾಗೋದನ್ನು ನೋಡಬೇಕು. ಮಜವಾಗಿರುತ್ತದೆ. ಹೇಯ್ ಇನ್ನೊಂದ್ವಿಷ್ಯ, ನಾನು ಕವನ ಬರೀದೆ ಅದೆಷ್ಟು ದಿನ ಆಗಿತ್ತು ಗೊತ್ತಾ. ಬಹು ದಿನಗಳೇ ಸರಿದಿದ್ದವು. ನಿನ್ನ ನೆನಪು ಸವಿ ಸುಖದ ಸಾನ್ನಿಧ್ಯ, ಸಾಂಗತ್ಯ ನನ್ನನ್ನು ಮತ್ತೆ ಮತ್ತೆ ಬರೆಯಲು ಪ್ರೇರೇಪಿಸುತ್ತಿದೆ. ಕವನ ಕಟ್ಟುವಂತೆ ಮಾಡುತ್ತಿದೆ.
    ಗೆಳತೀ, ಯಾಕ್ಹೀಗೆ..?
    ನೀನೆಂಬ ಭೃಂಗವೆದೆಯ
    ಗೂಡಿಗೆ ಕಿಂಡಿಕೊರೆದು
    ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲಾ...!!

ಹೀಗಾಗಿಬಿಟ್ಟಿದೆ ನನ್ನ ಬದುಕು.
    ಓ ಹಲ್ಕಟ್ಟು ಕೂಸೆ.. ಯಾವತ್ತು ಮತ್ತೆ ನನ್ನೆದುರು ಬರ್ತೀಯಾ? ಅದ್ಯಾವಾಗ ಬಂದು ನನ್ನ ಬಳಿ ಮಾತಾಡ್ತೀಯಾ ಅಂತ ಕಾದಿದ್ದೇನೆ.ನಿನ್ನನ್ನ ಭೇಟಿ ಮಾಡಿ ಮಾತಾಡುವ ಸವಿ ಘಳಿಗೆ ಅದೆಷ್ಟು ಬೇಗ ಬರುತ್ತೋ.. ಅಂತ ನನ್ನ ಕಣ್ಣ ಮುಂದೆರಡು ಭೂತಗನ್ನಡಿಗಳನ್ನು ಸಿಕ್ಕಿಸಿಕೊಂಡು ಕಾಯುತ್ತಿದ್ದೇನೆ. ಸವಿ ನೆನಪುಗಳು ಕರಗುವುದರೊಳಗೆ ಸಿಕ್ಕಿಬಿಡು ಮಾರಾಯ್ತಿ.
    ನಿಜ ಹೇಳಬೇಕೆಂದರೆ ನನ್ನ ಬದುಕಿಗೆ ನೀನೆಂಬುದು ಚೈತನ್ಯದ ಚಿಲುಮೆ. ನೀನು ಸಿಕ್ಕಾಗಲೆಲ್ಲ ನನ್ನ ಬದುಕೆಂಬ ಮೊಬೈಲಿನ ಬ್ಯಾಟರಿ ರೀಚಾರ್ಜ್ ಆದಹಂಗೆ ಅನ್ನಿಸುತ್ತದೆ. ನೀನು ಬಹಳ ಕಾಲ ಸಿಕ್ಕದೇ ಇದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ನೀನು ಸಿಕ್ಕಿಲ್ಲ ಅಂದರೆ ಯಾಕೋ ದಿನವೆಂಬದು ಯಾವಾಗಲೂ ಇಳಿ ಸಂಜೆಯ ಥರಾ ಕಾಣಿಸ್ತದೆ ನೋಡು. ನನ್ನ ಪಾಲಿಗೆ ಖುಷಿ ಕೊಡುವ ಅಘನಾಶಿನಿ ನದಿಯೂ ನನ್ನ ಬೇಸರ ಕಂಡು ಬೇಜಾರು ಮಾಡಿಕೊಳ್ಳುತ್ತದೆ. ಅದೇ ನೀನು ಸಿಕ್ಕ ದಿನ ಮಾತ್ರ ನನ್ನ ಉಲ್ಲಾಸ ಕಂಡು ತನಗೆ ಏನೋ ಆಯ್ತೆಂಬಂತೆ ಮತ್ತಷ್ಟು ಜುಳು ಜುಳು ಸದ್ದಿನೊಂದಿಗೆ ಕಾಕಾಲ ಗದ್ದೆಯ ಕಡೆಗೆ ನನ್ನ ಅಘನಾಶಿಸಿ ಹರಿದುಹೋಗುತ್ತಾಳೆ.
    ಇರ್ಲಿ ಬಿಡು. ನಾನೆಂದರೆ ಹೀಗೆ. ಭಾವುಕ. ನೀನು ಸಿಕ್ಕಿದ ಕೂಡಲೇ ಸೆಮಿಸ್ಟರ್ ರಜೆಯಲ್ಲಿ ಪಡೆದುಕೊಂಡ ಎಲ್ಲ ಅನುಭವಗಳ ಮೂಟೆಯನ್ನು ನಿನ್ನೆದುರಿಗೆ ಬಿಚ್ಚಿಡಬೇಕು. ದೇವಿಕೆರೆ ಏರಿಯ ಸಿಂಡೀಕೆಟ್ ಬ್ಯಾಂಕಿನ ಎದುರು ಸಿಗ್ತದಲ್ಲಾ ಬೇಯಿಸಿದ ಸೇಂಗಾ.. ಅದನ್ನು ತಿನ್ನುತ್ತಾ ನೀನು ಕೇಳಬೇಕು. ಬೇಗನೆ ಸಿಗು... ನಾನಂತೂ ಕಾಯ್ತಾ ಇರ್ತೀನಿ... ಅಲ್ಲಿಯವರೆಗೂ
    ನೀನೆಂದರೆ ನನ್ನೊಳಗೆ..
    ಏನೋ ಒಂದು ಸಂಚಲನ..

ಈ ಹಾಡು ಗುನುಗುತಾ ಇರ್ತೀನೀ.. ಬೇಗ ಬಾ ಪ್ಲೀಸ್..

ಇಂತಿ ನಿನ್ನವ
ಸೃಜನ

Sunday, December 9, 2012

ಹರಿಯುತಿರಲಿ ಅಂತರಗಂಗೆ

ಹರಿಯುತಿರಲಿ ಅಂತರಗಂಗೆ


ಹರಿಯುತಿರಲಿ ಎಂದೂ ಹೀಗೆ
ಬಾಳ ಅಂತರಗಂಗೆ
ಬತ್ತದಿರಲಿ ಕೊನೆಯ ತನಕ
ಅಂತರಾಳದ ತುಂಗೆ ||1||

ಕೊನೆಯ ತನಕ ತುಂಬಿಬರಲಿ
ಹೊಸತು ಹರಿವ ನೀರು
ಕೊಚ್ಚಿ ಕೊಚ್ಚಿ ಹೋಗುತಿರಲಿ
ಅಂತರಂಗದ ಕೆಸರು ||2||

ಈ ಗಂಗೆಗೆ ಉಸಿರಾಗಲಿ
ಭುವಿ-ಭಾನು-ಚೇತನಾ
ನೋವು-ದುಃಖ-ಬವಣೆಯೆಡೆಗೆ
ಮಿಡಿಯುತಿರಲಿ ಸ್ಪಂದನಾ ||3||

ಗಂಗೆಯೊಳಗೆ ಜನಿಸಿಬರಲಿ
ಶತ ಕನಸಿನ ಮೀನುಮರಿ
ಕನಸೆಲ್ಲವೂ ನನಸಾಗಲಿ
ಕರಗದಿರಲಿ ಜಾರಿ ||4||

ನಿಲ್ಲದಿರಲಿ ಅಂತರಗಂಗೆ
ಎಂದೂ ಹರಿಯುತಿರಲಿ
ಭಾವ-ಜೀವ-ಸ್ಫುರಿಸುತಿರಲಿ
ಎಂದೂ ನಲಿಯುತಿರಲಿ ||5||

ಒಂದು ಅಂತರಾತ್ಮದ ಕವಿತೆ.. ಭಾವಗಳು ಸ್ಪುರಿಸಿ ಕವಿತೆಯಾಗಿ ಹೊರ ಬರುತ್ತವೆ.. ಅಂತಹ ಭಾವನಾತ್ಮಕ ದಿನದಲ್ಲಿ ಬರೆದ ಕವಿತೆ ಇದು.
ದಂಟಕಲ್ಲಿನಲ್ಲಿ ಬರೆದ ಈ ಕವಿತೆ  ಹುಟ್ಟಿದ್ದು 28-11-2007ರಂದು

Saturday, December 8, 2012

ಉ.ಕ ರೋಧನ : ಭಾಗ-3

ಉ.ಕ ರೋಧನ ಭಾಗ-3

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಗೂಡಿನ ವ್ಯಥೆ

ನನ್ನ ಉ,ಕವೊಂದು ಬೆಚ್ಚನೆಯ ಗೂಡು
ಈಗೀಗ ಆಗುತ್ತಿದೆ ಕಸದ ಬೀಡು|
ಒಡಲೊಳಗೆ ಕುದಿಯುತ್ತಿದೆ ಕೈಗಾ
ನಾಶಮಾಡಲು ಸಿದ್ಧವಾಗುತ್ತಿದೆ ಬೇಗ||

ಗುಬ್ಬಿಯ ಮೇಲೆ

ನನ್ನ ಉ.ಕವೊಂದು ಹಕ್ಕಿಮರಿ ಗುಬ್ಬಿ
ಯಾರೂ ಆದರಿಸಿಲ್ಲ ಬಾಚಿ ಹಿಡಿದು ತಬ್ಬಿ|
ತ್ಯಾಗಿಯಿದು, ಎಂದೆಂದೂ ಹಿಡಿದಿಲ್ಲ ಶಸ್ತ್ರ
ತೂಗುತಿದೆ ಇದರ ಮೇಲೆ ಯೋಜನೆಗಳ ಬ್ರಹ್ಮಾಸ್ತ್ರ||

ಪ್ರಾಣ-ಹರಣ

ನನ್ನ ಉ.ಕವೊಂದು ಯುಗಪುರುಷರ ನಾಡು
ಜೊತೆಗೆ ಉಂಟಲ್ಲ ಗಮ್ಯತೆಯ ಕಾಡು|
ಹಲವು ಮೃಗಜಂತುಗಳೇ ಇದರ ಮಾನ
ಎಲ್ಲವೂ ಕಳೆದುಕೊಳ್ಳುತ್ತಿವೆ ಈಗ ಪ್ರಾಣ||

ಪುಸ್ತಕದ ಕಥೆ

ನನ್ನ ಉ.ಕವೊಂದು ಹಳೇ ಪುಸ್ತಕ
ಓದಿದರೆ ಜ್ಞಾನ ತುಂಬುವುದು ಮಸ್ತಕ|
ತಿಂದುಬಿಟ್ಟಿದೆ ಅಲ್ಲಲ್ಲಿ ಹುಳವಿದರ ಪೇಜು
ಕಣ್ಣೆತ್ತಿ ನೋಡುವವರಿಲ್ಲ ಇದರ ಗೋಜು||

ಮೂರ್ತಿಯ ಕಥೆ

ಉತ್ತರಕನ್ನಡವೊಂದು ಸುಂದರ ಮೂರ್ತಿ
ಇದುವೇ ನನ್ನ ಕವನಕ್ಕೆ ಸ್ಫೂರ್ತಿ|
ಸುತ್ತೆಲ್ಲ ಹಬ್ಬಿಹುಸು ಭವ್ಯ ಮಲೆನಾಡು
ಇಂಚಿಂಚೂ ಸೂರೆಹೋಗುತ್ತಿದೆ ಇಲ್ಲಿಯ ಕಾಡು||

ಸಂಗೀತ-ರೋಗ

ನನ್ನ ಉ.ಕವೊಂದು ಸಂಗೀತದ ರಾಗ
ಆದರೆ ಅದಕ್ಕೆ ಹಿಡಿದಿದೆ ಹೊಸದೊಂದು ರೋಗ|
ಆಲಾಪನೆ ಮಾಡಿದರೆ ಬಾಯಲ್ಲಿ ಕೆಮ್ಮು
ಎದೆಯೊಳಗೆ ಕಟ್ಟಿದೆ ನೋವೆಂಬ ದಮ್ಮು||

 (ಉತ್ತರಕನ್ನಡದ ಬಗ್ಗೆ ಎಷ್ಟು ಬರೆದರೂ ಕಡಿಮೆ ನೋಡಿ... ಅದೊಂಥರಾ ಗಣಿ.. ಬಗೆದಷ್ಟೂ ಕಾಲಿಯಾಗುವುದಿಲ್ಲ.. ಆದರೆ ಯೋಜನೆಗಳ ಬಲಾತ್ಕಾರಕ್ಕೆ ಬಲಿಯಾಗುತ್ತಿರುವ ನನ್ನ ಜಿಲ್ಲೆಯ ಕುರಿತು ಇನ್ನೊಂದಷ್ಟು ಹನಿಗಳು...)

Wednesday, December 5, 2012

ಕತ್ತೆ ಹೇಳಿದ ಭವಿಷ್ಯ

ಕತ್ತೆ ಹೇಳಿದ ಭವಿಷ್ಯ

    ಬಹುತೇಕ ಎಲ್ಲರ ಬದುಕಿನಲ್ಲೂ ಇಂತಹ ಫನ್ನಿ ಅನ್ನಿಸೋ ಸಂದರ್ಭಗಳು ಬಂದೇ ಬಂದಿರ್ತವೆ. ಮಸ್ತ್ ತಮಾಶೆಯ, ಮುಜುಗರ ಉಂಟುಮಾಡಿದ, ವಿಲಕ್ಷಣವಾದ, ವಿಚಿತ್ರ ಅನ್ನಿಸುವ ಇಂತಹ ಘಟನೆಗಳು ಬಾಳ ಗೋಡೆಯಲ್ಲಿ ಹಾಗೇ ಸುಮ್ಮನೆ ಬಂದು ಸಂತಸ ನೀಡಿ ಹೋಗಿರುತ್ತದೆ. ಇಂತವುಗಳಿದ್ದರೇ ಬಾಳು ಸಮರಸ ಎನ್ನಬಹುದು.
    ನನ್ನ ಬಾಳಿನಲ್ಲಿ ನಡೆದ ಒಂದು ವಿಲಕ್ಷಣ ಘಟನೆಯನ್ನು ಹೇಳಬೇಕು. ಇದು ವಿಲಕ್ಷಣವೋ, ತಮಾಶೇಯೋ.. ಏನೋ ಒಂದು. ನಾನು 3 ನೇ ಕ್ಲಾಸೋ ಅಥವಾ ನಾಲ್ಕೋ ಏನೋ ಇರಬೇಕು. ಆಗ ನಡೆದಿದ್ದು. ಅದನ್ನು ನಿಮ್ಮೆದುರು ಹೇಳಲೇ ಬೇಕು... ಬಿಕಾಸ್ ಇಟ್ ಈಸ್ ಸೋ ಫನ್ನಿ ಯು ನೋ..(ಇಲ್ಲಿ ನೀವು.. ಮ್ಯಾಚ್ ಮುಗಿದ ನಂತರ ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಮಾತನಾಡುವ ಧೋನಿ ಸ್ಟೈಲ್ ನೆನಪು ಮಾಡ್ಕೊಳ್ಳಿ..)
    ಸುಮಾರು 15-18 ವರ್ಷಗಳ ಹಿಂದಿನ ಕಥೆ. ಶಿರಸಿಯಲ್ಲಿ ಆ ವರ್ಷ ಜಾತ್ರೆಯ ಸಡಗರ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಬಂತೆಂದರೆ ಆಗ ನಮಗೆಲ್ಲ ಹೊಸದೊಂದು ಲೋಕ ಅನಾವರಣವಾಗುತ್ತಿತ್ತು. ಪ್ರತಿ ಸಾರಿಯೂ ಜಾತ್ರೆ ಅಂದರೆ ನನಗೆ ನಿಂತಲ್ಲಿ ನಿಲ್ಲೋಕಾಗೋಲ್ಲ.. ಕುಂತಲ್ಲಿ ಕೂರೋಕಾಗೋಲ್ಲ.. ತುಂಡುಗುಪ್ಪಳದವನಾದ ನನಗೆ ಜಾತ್ರೆಗೆ ಹೋಗಿ, ಪೀಪಿಳಿ ತಂದು ಪುಂಯ್ ಅಂತ ಊದಿ, ಒತ್ತಿದರೆ ಪೆಕ್ ಪೆಕ್ ಅನ್ನೀ ಕುನ್ನಿ ಗೊಂಬೆಯನ್ನು ತಂದು ಎರಡೇ ದಿನಕ್ಕೆ ಅದನ್ನು ಹಾಳುತೆಗೆಯದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ಅಷ್ಟರ ಜೊತೆಗೆ ಜಾತ್ರೆ ತಿರುಗಬೇಕು, ಸರ್ಕಸ್ ನೋಡಬೇಕು, ತೊಟ್ಟಿಲು(ಜಾಯಿಂಟ್ ವೀಲ್) ಹತ್ತಬೇಕು, ಟೊರ ಟೊರದ ಮೇಲೆ ತಲೆ ತಿರುಗುವಂತೆ ಕುಣಿಯಬೇಕು ಎಂಬೆಲ್ಲ ನೂರೆಂಟು ಕನಸುಗಳ ಗುಚ್ಛ.
    ಜಾತ್ರೆಗೆ 15 ದಿನ ಇದೆ ಎನ್ನುವಾಗಲೇ ಮನೆಯಲ್ಲಿ ಹರಪೆ ಪ್ರಾರಂಭವಾಗುತ್ತಿತ್ತು. ಶಾಲೆಯಲ್ಲಿ ಜಾತ್ರೆಗೆಂತಲೇ ಒಂದೆರಡು ದಿನ ಕಳ್ಳ ಬೀಳುವುದು ಖಾಯಂ ಆಗಿತ್ತು. ಬಿಡಿ ನಮ್ಮ ತಾರಾ ಮೇಡಮ್ಮು (ಪ್ರೀತಿಯಿಂದ ತಾರಕ್ಕೋರು) ಅಂತಹ ನಮ್ಮ ತಪ್ಪನ್ನು ಮಾಫಿ ಮಾಡ್ತಿದ್ದರು. ಜಾತ್ರೆ ಬಂತೆಂದರೆ ಅಪ್ಪನಿಗೆ ನನ್ನ ಹಾಗೂ ತಂಗಿಯ ರಗಳೆಯನ್ನು ತಡೆಯಲು ಆಗುತ್ತಲೇ ಇರಲಿಲ್ಲ. ಓದಿನ ಸಂದರ್ಭಗಳಲ್ಲಿ ಅಮ್ಮ ನಮ್ಮನ್ನು ಹಿಡಿದು ಬಡಿದು, ಬಯ್ಯುತ್ತಿದ್ದರೂ ಇಂತಹ ವಿಷಯಗಳಲ್ಲೆಲ್ಲ ಪಕ್ಷಾಂತರ ಮಾಡುವ ಅಮ್ಮ ನಮ್ಮನ್ನು ಸಪೋರ್ಟ್ ಮಾಡಿ `ಒಂಚೂರು ಅವ್ರನ್ನ ಜಾತ್ರಿಗೆ ಕರ್ಕಂಡು ಹೋಗಿಬಂದ್ರೆ ಬತ್ತಿಲ್ಯನು..? ' ಎಂದು ಕೇಳುತ್ತಿದ್ದಳು. ಆಗ ಅಪ್ಪನಿಗೆ ಅನಿವಾರ್ಯವಾಗಿಬಿಡುತ್ತಿತ್ತು.
    ಸರಿ ಆ ವರ್ಷ ಅಪ್ಪ ಜಾತ್ರೆಗೆ ಕರೆದುಕೊಂಡು ಹೋದ. ಅದೇನು ಕಾರಣವೋ ತಂಗಿ ನನ್ನ ಜೊತೆಗೆ ಬಂದಿರಲಿಲ್ಲ. ಗತ್ತಾಗಿ ಜಾತ್ರೆ ತಿರುಗಿದೆ. ಸಂಜೆ ಟೈಮಿನ ರಶ್ಶಲ್ಲಿ ಮಾರಿಕಾಂಬಾ ಗದ್ದುಗೆಗೆ ಬಂದು ದೇವರಿಗಡ್ಡ ಬಿದ್ದಿದ್ದು ಆಗಿತ್ತು. ಹಣ್ಣು ಕಾಯಿ ಮಾಡಿಸುವಾಗ ಅಲ್ಲಿನ ಗಬ್ಬು ವಾಸನೆ ತಾಳಲಾರದೇ ಹೊಟ್ಟೆ ತೊಳೆಸಿ ಬಂದಂತಾಗಿ ಅಪ್ಪನ ಬಳಿ `ಇದೆಂತಕ್ ಹಿಂಗೆ ಗಬ್ಬು ವಾಸನೆ..? ' ಅಂತ ಕೇಳಿದ್ದಕ್ಕೆ `ಅದೆ ಅಲ್ಲಿ ಕಾಯಿ ವಡಿತ್ವಲಾ.. ಅದು ಅಷ್ಟು ವಾಸನೆ ಬರ್ತಾ ಇದ್ದು' ಎಂದು ಅಪ್ಪ ಹೇಳಿದ್ದಿನ್ನೂ ನೆನಪಿದೆ.
    ಸರಿ ಮುಂದೆ ಜಾತ್ರೆ ಪೇಟೆ ಎಂದು ಕರೆಸಿಕೊಳ್ಳುವ ಬೀಡಕಿ ಬಯಲು ಸುತ್ತಾಡಿ, ಬಳೆ ಪೇಟೆಯಲ್ಲಿ ತಿರುಗಿ, ನಟರಾಜ ರೋಡಿನಲ್ಲಿ ಉದ್ದಾನುದ್ದಕ್ಕೆ ಎರಡೆರಡು ಬಾರಿ ಓಡಾಡಿ, ತೊಟ್ಟಿಲು ಹತ್ತಿ, ಸರ್ಕಸ್ ನಡೆಯುವ ಕೋಟೆಕೆರೆಯ ಗದ್ದೆ ಬಯಲಿಗೆ ಹೋಗಿ ಬಂದದ್ದಾಯ್ತು. ಅಷ್ಟರ ವೇಳಗೆ ಅಪ್ಪನ ಜೇಬೂ ಸುಮಾರು ಬರಿದಾಗಿರಬೇಕು, ಸಿಡಿಮಿಡಿ ಪ್ರಾರಂಭವಾಗಿತ್ತಲ್ಲದೆ `ನೀ ಹಿಂಗೆ ರಗಳೆ ಮಾಡ್ತಾ ಇದ್ರೆ ಜಾತ್ರೆ ಪೇಟೆಲಿ ಬಿಟ್ಟಿಕ್ಕೆ ಹೋಗ್ತಿ ಹಾ..' ಎಂಬ ತಾಕೀತುಗಳೂ ಶುರುವಾಗಿದ್ದವು. ಎಲ್ಲ ಆಯಿತು. ಕೊನೆಯದಾಗಿ `ಭವಿಷ್ಯ ಹೇಳುವ ಕತ್ತೆಯನ್ನು ನೋಡುವ ಅಂತ ಅಪ್ಪನಿಗೆ ಹರಪೆ ಬಿದ್ದೆ. ಅಪ್ಪನಿಗೆ ಸಿಟ್ಟು ಬಂದರೂ, ಬಯ್ಯುತ್ತಲೆ ಕರೆದೊಯ್ದ.
    ಒಳಗಡೆ ದೊಡ್ಡ ವರ್ತುಲಾಕಾರದಲ್ಲಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಅವುಗಳ ಮಾಲಿಕನೋ ಅಥವಾ ಗಾರ್ಡಿಯನ್ನೋ.. ಯಾರೋ ಒಬ್ಬಾತ ಕನ್ನಡ ಹಾಗೂ ಹಿಮದಿ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ, ಪ್ರಶ್ನೆಗಳನ್ನು ಕೇಳುತ್ತಿದ್ದ. ಆತನ ಮಾತನ್ನು ಕೇಳುತ್ತಿದ್ದ ಅವುಗಳು ಪ್ರಶ್ನೆಗೆ ಉತ್ತರ ಎಂಬಂತೆ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿದ್ದವು. `ಅತ್ಯಂತ ಉದ್ದದ ವ್ಯಕ್ತಿ ಯಾರು ತೋರಿಸು..?' ಯಾರ ತಲೆಯಲ್ಲಿ ಅತ್ಯಂತ ಕಡಿಮೆ ಕೂದಲಿವೆ..? ಯಾರಿಗೆ ಅತ್ಯಂತ ಹೆಚ್ಚು ವಯಸ್ಸಾಗಿದೆ..? ಯಾರು ಅತ್ಯಂತ ಕುಳ್ಳರು..? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕತ್ತೆ ಅಂತಹ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಅಂತಹ ಭವಿಷ್ಯ ಸುಮಾರು ಸತ್ಯವೂ ಆಗಿರುತ್ತಿದ್ದು ನನ್ನ ವಿಸ್ಮಯಕ್ಕೆ ಕಾರಣವಾಗಿತ್ತು.
    ಕೊನೆಗೊಮ್ಮೆ ಆ ಹಿಂದಿವಾಲಿ `ಈ ಗುಂಪಿನಲ್ಲಿರುವ ಅತ್ಯಂತ ಬುದ್ಧಿವಂತ ಹಾಗೂ ಚೂಟಿ ಹುಡುಗ ಯಾರು..?' ಎಂದು ಕೇಳಿದಳು. ಕತ್ತೆಗೆ ಬಹುಶಃ ತಲೆಕೆಟ್ಟಿತ್ತೇನೋ.. ಸೀದಾ ನನ್ನ ಎದುರು ಬಂದು ನಿಂತೇಬಿಟ್ಟಿತು. ನಾನೊಮ್ಮೆ ಕಕ್ಕಾಬಿಕ್ಕಿ. ಅಕ್ಕ-ಪಕ್ಕ, ಹಿಂದೆ ಮುಂದೆ ಎಲ್ಲ ನೋಡಿದೆ. ಕತ್ತೆ ನಿಂತಿದ್ದು ನನ್ನ ಬಳಿಯೇ. ನನಗೆ ಖುಷಿಯಾಗಬೇಕಿತ್ತು. ಊಹುಂ.. ಆಗಲಿಲ್ಲ. ಅವರ ಎದುರು ಮರ್ಯಾದೆಯೇ ಹೋದಂತಾಯಿತು. ಈ ಕತ್ತೆಯ ಬದಲು ಆ ನಾಯಿ ಆದ್ರೂ ನನ್ನೆದುರು ಬಂದು ನಿಲ್ಲಬಾರದಿತ್ತಾ.. ಅಂದುಕೊಂಡಿದ್ದಿದೆ.. ಕತ್ತೆ ಭವಿಷ್ಯ ನಿಜವೇ ಎಂದೆಲ್ಲಾ ಆಲೋಚನೆಗಿಟ್ಟುಕೊಂಡೆ ನಾನು. ಕತ್ತೆ ಭವಿಷ್ಯ ನುಡಿಯುವಷ್ಟು ಬುದ್ಧಿವಂತನೆ ನಾನು.. ಎಂಬ ಕ್ವಶ್ಚನ್ ಮಾರ್ಕ್ ಎದೆಯೊಳಗೆ..
    ಆ ಸಂದರ್ಭದಲ್ಲಿ ನಾನು ಹಾಗೆ ಚಿಂತಿಸಿದ್ದಕ್ಕೂ ಕಾರಣ ಇದೆ ನೋಡಿ... ಶಾಲೆಯಲ್ಲಿ ನಾನೆಂದರೆ ಬಹಳ ತಂಟೆಕೋರ, ಕಿಲಾಡಿ ಹುಡುಗ ಎಂಬ ಕುಖ್ಯಾತಿ ಇತ್ತು. `ಇಂವ ಓದಿದ್ರೆ ಜೋರಿದ್ದಿದ್ದ..' ಎಂಬ ಮಾತುಗಳು ನಮ್ಮ ಮಾಸ್ತರರಾದ ಸಿ. ಎಂ. ಹೆಗಡೆ ಅವರಿಂದ ನಾಲ್ಕಾರು ಬಾರಿ ಕೇಳಿದ್ದವು. ವಿಚಿತ್ರವೆಂದರೆ ನಾನು ಚನ್ನಾಗಿ ಓದುತ್ತಿದ್ದೆ. ಚನ್ನಾಗಿ ಬರೆಯುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್ುಗಳು ಬಿದ್ದು ಪಾಸಾಗಿದ್ದೇನೆ. ಆದರೆ ಶಾಲೆಯ ಟೆಸ್ಟುಗಳಲ್ಲಿ ಮಾತ್ರ ಪಾಸಿಗಿಂತ ಒಂದಂಕಿ ಮೇಲೆ ಇರುತ್ತಿದ್ದೆ.. ಅಂದರೆ ಸಕರ್ಾರದ ಲೆಕ್ಕದಲ್ಲಿ ಬಡತನ ರೇಖೆ ಅಂತಾರಲ್ಲ.. ಅಂತಹ ಮಾರ್ಜಿನ್ ಲೈನು. (ಇದಕ್ಕೆ ಕಾರಣ ಕೊನೆಗೆ ಗೊತ್ತಾಗಿದ್ದೆಂದರೆ ಮಾಸ್ತರ್ರು ಮಾಡುತ್ತಿದ್ದ ಹಕ್ಕಿಕತ್ತು ಅಂತ ಕೊನೆಗೆ ಗಿತ್ತಾಯಿತು.. ಅದನ್ನು ಇನ್ನೊಮ್ಮೆ ಹೇಳುವಾ.. ಆ ಸಂಗತಿ ಮಜವಾಗಿದೆ.,.)
    ಸರಿ ಕತ್ತೆ ಭವಿಷ್ಯ ಹೇಳಿತಲ್ಲ. ಇನ್ಯಾರಿದ್ದಾರ್ರೀ ನನ್ನ ಸಾಟಿ.. ಅದೆಂತದ್ದೂ ಹಮ್ಮು-ಬಿಮ್ಮು.. ತಲೆಯ ಮೇಲೆ. ಅಂದಿನಿಂದ ಪುಸ್ತಕ ಹಿಡಿಯುವುದು ಅರ್ಧಕ್ಕರ್ಧ ಬಂದಾಗಿತ್ತು. ಅಪ್ಪ-ಅಮ್ಮ ಬಯ್ದಾಗಲೆಲ್ಲ ಕತ್ತೆ ಭವಿಷ್ಯ ಹೇಳಿದ್ದನ್ನೇ ನೆನಪು ಮಾಡುತ್ತಿದ್ದೆ. ನನ್ನ ಬೆಲೆ ನಿಮಗೆ ಗೊತ್ತಾಗಲಿಲ್ಲ.. ಕತ್ತೆಗೆ ಗೊತ್ತಾಯಿತು ಎಂದು ಹೇಳುತ್ತಿದ್ದೆ. ಅಪ್ಪ-ಅಮ್ಮ ಅದೆಷ್ಟು ನಕ್ಕಿದ್ದರೋ. ಅವರ ನಗುವಿನ ಕಾರಣ ನನಗೆ ಆಗ ತಿಳಿದೇ ಇರಲಿಲ್ಲ.
    ಮುಂದಿನ ಪರಿಣಾಮ ಕೇಳಿ ಇನ್ನೂ ಮಜಬೂತಾಗಿದೆ. ಸರಿ ಆ ವರ್ಷ ಕತ್ತೆಯ ಭವಿಷ್ಯದ ನಶೆ ಯಾವ ರೀತಿ ಕೆಲಸ ಮಾಡ್ತಪ್ಪಾ ಅಂದ್ರೆ ಪಾಸಾಗಿದ್ದೇ ಪುಣ್ಯ ಎಂಬಂತಾಗಿತ್ತು. ಓದಿಗೆ ತಿಲಾಂಜಲಿ ಕೊಟ್ಟಿದ್ದೆ. ಕತ್ತೆ ಭವಿಷ್ಯ ನನ್ನನ್ನು ಮಳ್ಳು ಮಾಡಿತ್ತು. ಬಿಡಿ.. ಈ ಸಂಗತಿ ನನಗೆ ಈಗಲೂ ನೆನಪಾಗ್ತಾ ಇರ್ತದೆ. ಕತ್ತೆಯ ಭವಿಷ್ಯ ನನ್ನ ಪಾಲಿಗೆ ಗ್ರೇಡೋ..? ಡಿ.ಗ್ರೇಡೋ... ಊಹೂಂ.. ಒಂದೂ ತಿಳಿದಿಲ್ಲ. ಕತ್ತೆ ಭವಿಷ್ಯ ಹೇಳಿತ್ತು. ಹಿಂಗಾಗಿತ್ತು. ಅನ್ನೋ ಸುಂದರ ಸಂದರ್ಭ ನೆನಪಿದೆ. ಇದಕ್ಕಾಗಿ ಹೆಮ್ಮೆ ಪಡಲೋ, ಕತ್ತೆ ಭವಿಷ್ಯ ಹೇಳ್ ಬಿಡ್ತು.. ತಥ್ ನನ್ಮಗಂದು... ಅಂತ ವ್ಯಥೆ ಪಡಬೇಕೋ... ಊಹೂಂ ಏನೋಂದು ಗೊತ್ತಾಗಲಿಲ್ಲ.
    ಇಂತಹ ಮಜಬೂತು ಸಂಗತಿಗಳು ನಿಮ್ಮಲ್ಲೂ ಅನೇಕ ಇರುತ್ತವೆ. ಅವೆಲ್ಲ ಏಕಾಕಿತನದಲ್ಲಿ ನೆನಪಾದಾಗ ಕೊಡುವ ಅನುಭೂತಿ ಇದೆಯಲ್ಲ.. ಆಹ್.. ಅದೆಷ್ಟು ಮಜಬೂತು ಅಂತೀರಿ... ಹೋಗ್ಲಿ ಬಿಟ್ಹಾಕಿ.. ಇದು ಹ್ಯಾಂಗಿದೆ ಅನ್ನೋದನ್ನು ಹೇಳಿ ..

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..

Monday, December 3, 2012

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಇವನಿಗೆ ನೀವು ಸಹಾಯ ಮಾಡ್ತೀರಾ...??

ಆತನಿಗಿನ್ನೂ ಹದಿನಾಲ್ಕು ವರ್ಷ. ಶಾಲೆಗೆ ಹೋಗುತ್ತಾ, ಆಟವಾಡುತ್ತ ಬದುಕಬೇಕಿದ್ದ ವಯಸ್ಸು. ಆದರೆ ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್ ಭೂತ ಆತನ ಜೀವನವನ್ನೆ ತಿಂದು ಹಾಕುತ್ತಿದೆ.
    ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಧನಗನಹಳ್ಳಿಯ ನಿವಾಸಿಯಾದ ಹಜರತ್ ಅಲಿಯ ಪುತ್ರ ನೌಶಾದ್ ಅಲಿ ಎಂಬ ಬಾಲಕನಿಗೆ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಜೀವನವನ್ನೇ ಮಂಕಾಗಿಸಿದೆ. ಕಾಯಿಲೆಯಿಂದಾಗಿ ಶಾಲೆಗೆ ಹೋಗಲಾಗದೇ, ಇತರ ಮಕ್ಕಳ ಜೊತೆ ಆಡಲಾಗದೇ ದಿನಗಳನ್ನು ಕಳೆಯುವಂತಹ ಪರಿಉಸ್ಥಿತಿ ಎದುರಾಗಿದೆ.
    ಕ್ಯಾನ್ಸರ್ ಪೀಡಿತ ಬಾಲಕ ಶಾಲೆಗೆ ಹೋಗುತ್ತಿದ್ದರೆ ಇಷ್ಟರ ವೇಳೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ವಿಧಿಯಾಟದ ಪರಿಣಾಮ ಆತ ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿದೆ. ಮನೆಯಲ್ಲಿ ಕಡುಬಡತನದ ಕಾರಣ ತಂದೆ ಹಜರತ್ ಅಲಿ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಹಣ ಹೊಂದಿಕೆ ಮಾಡಲಾಗದೇ ಕಷ್ಟಪಡುತ್ತಿದ್ದಾರೆ.
    ಕಳೆದ ಒಂದು ವರ್ಷದ ಹಿಂದೆ ಆಟವಾಡುತ್ತಿದ್ದ ನೌಶಾದ್ ಇದ್ದಕ್ಕಿದ್ದಂತೆ ಜಾರಿಬಿದ್ದ. ಬಿದ್ದ ಪರಿಣಾಮ ಆತನ ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದು ಅಲ್ಲೊಂದು ದೊಡ್ಡ ಗಡ್ಡೆಯಾಯಿತು. ಅದಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನೂ ಕೊಡಿಸಲಾಯಿತು. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗಡ್ಡೆ ಒಂದೆರಡು ದಿನಗಳಲ್ಲಿಯೇ ದೊಡ್ಡದಾಗಲು ಪ್ರಾರಂಭಿಸಿತು. ಜೊತೆಗೆ ಜ್ವರವೂ ಬಂದ ಪರಿಣಾಮ ನೌಶಾದ್ ಅಲಿಯನ್ನು ತಂದೆ ತಾಯಿಯರು ಶಿರಸಿಯ ಒಂದೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರು.
    ಶಿರಸಿ ಪಟವರ್ಧನ್ ಆಸ್ಪತ್ರೆಯಲ್ಲಿ ಮೊದಲು ಪರೀಕ್ಷೆ ಮಾಡಲಾಯಿತು. ನಂತರ ಬಳಗಂಡಿ ವೈದ್ಯರನ್ನು ಸಂಪಕರ್ಿಸಿದರೂ ಪರಿಣಾಮ ಕಾಣಲಿಲ್ಲ. ಕೊನೆಗೆ ಡಾ. ದಿನೇಶ್ ಶೆಟ್ಟಿ ಅವರ ಬಳಿಯೂ ಚಿಕಿತ್ಸೆ ಕೊಡಿಸಲಾಯಿತು. ಈ ಆಸ್ಪತ್ರೆಗಳಲ್ಲಿ ಗಡ್ಡೆಯ ನೀರನ್ನು ತೆಗೆದು ಕಳಿಸಿದರಾದರೂ ಮತ್ತೆ ಕೆಲವು ದಿನಗಳಲ್ಲಿ ಗಡ್ಡೆ ಊದಿಕೊಂಡಿತು. ಇದರಿಂದ ಪರೀಕ್ಷೆ ಮಾಡಿದ ವೈದ್ಯರು ನೌಶಾದ್ನನ್ನು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯುವಂತೆ ತಿಳಿಸಿದರು. ಅಲ್ಲಿ ಪರೀಕ್ಷೆ ಮಾಡಿಸಿದಾಗ ಆಡುವ ಹುಡುಗ ನೌಶಾದ್ಗೆ ಕ್ಯಾನ್ಸರ್ ಮಾರಿ ಇರುವುದು ತಪಾಸಣೆಯಲ್ಲಿ ಪತ್ತೆಯಾಯಿತು.
   ಇಲ್ಲಿಯವರೆಗೂ ಎಲ್ಲ ಮಕ್ಕಳಂತೆ ಆಟವಾಡಿ, ಓದಿಕೊಂಡು ನಲಿಯುತ್ತಿದ್ದ ನೌಶಾದ್ ಬಾಳಿನಲ್ಲಿ ಕತ್ತಲೆಯ ಪುಟಗಳು ಆರಂಭವಾದವು. ಹುಬ್ಬಳ್ಳಿಯಲ್ಲಿ ನೂರಾರು ತರಹೇವಾರಿ ಪರೀಕ್ಷೆಗಳು, ಚಿಕಿತ್ಸೆಗಳನ್ನು ಮಾಡಲಾಯಿತು. ಅದೆಷ್ಟೋ ಬಗೆಯ ಇಂಜೆಕ್ಷನ್ಗಳನ್ನು ಕೊಡಲಾಯಿತು. ಕೊನೆಗೊಮ್ಮೆ ಹುಬ್ಬಳ್ಳಿಯ ವೈದ್ಯರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ಬಾಲಕ ನೌಶಾದ್ ಅಲಿ ಈಗ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಇದುವರೆಗೂ ನೌಶಾದ್ನನ್ನು ಕನಿಷ್ಟ ಏಳು ಬಾರಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕರೆದಿಕೊಂಡು ಹೋಗಿ ಬರಲಾಗಿದೆ. ಏಳು ಸಾರಿಯೂ ಭಾರಿ ಬೆಲೆಯ ಇಂಜೆಕ್ಷನ್ಗಳನ್ನು ನೀಡಲಾಗಿದೆ. ಒಂದೊಂದು ಚುಚ್ಚುಮದ್ದಿಗೂ 3 ರಿಂದ 5 ಸಾವಿರ ರು. ಖಚರ್ಾಗುತ್ತದೆ. ಒಮ್ಮೆ ಬೆಂಗಳೂರಿಗೆ ಹೋಗಿಬಂದರೆ ಕನಿಷ್ಟ 15 ಸಾವಿರ ರು. ಖಚರ್ಾಗಿರುತ್ತದೆ. ಮಗನ ಚಿಕಿತ್ಸೆಯ ಸಲುವಾಗಿಯೇ ಮನೆಯಲ್ಲಿದ್ದ ಕುರಿಮಂದೆಯನ್ನು ಮಾರಾಟ ಮಾಡಲಾಗಿದೆ. ಜೊತೆಗೆ ಕುಟುಂಬವನ್ನು ಸಾಕಬೇಕಾಗಿದ್ದ ಬಾಡಿಗೆ ಆಟೋವನ್ನೂ ಇದೀಗ ಮಾರಾಟ ಮಾಡಿ ನೌಶಾದ್ಗೆ ಅವರ ತಂದೆ ಹಜರತ್ ಅಲಿ ಚಿಕಿತ್ಸೆ ಕೊಡಿಸಿದ್ದಾರೆ.

    ನೌಶಾದ್ಗೆ ಈಗಾಗಲೇ ಕಿಮೋಥೆರಪಿಯನ್ನು ಮಾಡಲಾಗಿದೆ. ಅಲ್ಲದೇ 5 ಸಾವಿರ ರು.ಗಳ 5 ಚುಚ್ಚುಮದ್ದನ್ನು ನೀಡಲಾಗಿದೆ. ನೌಶಾದ್ಗೆ ಈಗ ಆಪರೇಶನ್ ಮಾಡುವ ಅಗತ್ಯವಿದೆ. ಅದಕ್ಕೆ 1.5 ಲಕ್ಷ ರು. ಮೊತ್ತದ ಅವಶ್ಯಕತೆಯಿದೆ. ಅದನ್ನು ಕಟ್ಟಿದರೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಕಿದ್ವಾಯಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ನೌಶಾದ್ನ ತಂದೆ ಹಜರತ್ ಅಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
    ಹಜರತ್ ಅಲಿ ಮಗನ ಶಸ್ತ್ರ ಚಿಕಿತ್ಸೆಗಾಗಿ ಅಗತ್ಯವಿರುವ ಹಣಕ್ಕಾಗಿ ಹಲವು ಜನರ ಬಳಿ ಅಂಗಲಾಚಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳ ಮನೆಯ ಬಾಗಿಲನ್ನೂ ತಟ್ಟಿ ಬಂದಿದ್ದಾರೆ. ಆದರೆ ಯಾರಿಂದಲೂ ಸಹಾಯವಾಗಿಲ್ಲ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು 25 ಸಾವಿರ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಕೊಡಿಸಿದ್ದಾರೆ (ಈ ಹಣವನ್ನು ಕೊಡಿಸಲು ಮೂರು-ನಾಲ್ಕು ತಿಂಗಳು ಸತಾಯಿಸಲಾಗಿದೆ ಎಂಬುದು ಹಜರತ್ ಅಲಿಯ ಹೇಳಿಕೆ..!!). ಇನ್ನೂ ಕೆಲವು ಸಂಸ್ಥೆಗಳು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದಾರಾದರೂ ಹಣವನ್ನು ನೀಡಲು ಮುಂದಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹಜರತ್ ಅಲಿ ಕುಟುಂಬ ನೌಶಾದ್ ಅಲಿಗೆ ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಚಿಂತೆಯಲ್ಲಿ ತೊಡಗಿದೆ.
    ಕುಟುಂಬದ ಪಾಲಿಗೆ ರೇಷನ್ ಕಾರ್ಡಿದ್ದರೂ ನಾಟ್ ವ್ಯಾಲಿಡ್ ಎಂದು ತೋರಿಸುತ್ತಿರುವುದರಿಂದ ಬೇಳಗಾವಿಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ನಡೆಸಬೇಕಿದ್ದ ಚಿಕಿತ್ಸೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಶಿರಸಿಯ ತಹಶೀಲ್ದಾರರು ಈ ಕುರಿತು ರೇಶನ್ಕಾರ್ಡ್ ವ್ಯಾಲಿಡ್ ಆಗಿದೆ ಎಂದು ಬರವಣಿಗೆಯ ಮೂಲಕ ಬರೆದುಕೊಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಣವಿಲ್ಲದೇ ಚಿಕಿತ್ಸೆ ಹೇಗೆ ಕೊಡಿಸುವುದೋ ತಿಳಿಯದಾಗಿದ್ದು, ಬಾಲಕನ ಬದುಕು ಬರ್ಭರವಾಗಿದೆ.
    ಸಮಾಜಮುಖಿ ವ್ಯಕ್ತಿಗಳು, ಸಹೃದಯಿಗಳು ನೌಶಾದ್ ಅಲಿಯ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ತಂದೆ ಹಜರತ್ ಅಲಿ ಕೇಳಿಕೊಂಡಿದ್ದಾರೆ. ಬಾಲಕನಿಗೆ ಸಹಾಯ ಮಾಡಲು ಇಚ್ಛಿಸುವವರು ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ದಾಸನಕೊಪ್ಪ ಶಾಖೆಯಲ್ಲಿ ತೆರೆಯಲಾಗಿರುವ ನೌಶಾದ್ ಅಲಿಯ ಸೇವಿಂಗ್ಸ್ ಖಾತೆ ನಂ. 029501000008062 ಈ ನಂಬರಿಗೆ ಹಣವನ್ನು ನೀಡಬಹುದಾಗಿದೆ. ಈ ಕುರಿತು ನೌಶಾದ್ ಅಲಿಯ ತಂದೆ ಹಜರತ್ ಅಲಿಯನ್ನು 9741579371 ಈ ದೂರವಾಣಿ ಸಂಖ್ಯೆಯ ಮೂಲಕ ಸಂಪಕರ್ಿಸಬಹುದಾಗಿದೆ.
ನೌಶಾದ್ ನ ಸ್ವಗತ...

(ನೌಶಾದ್ ಅಲಿಯನ್ನು ಮಾತನಾಡಿಸುವ ಸಲುವಾಗಿ ಅವನ ಮನೆಗೆ ಹೋದಾಗ ಆತ ಹೇಳಿದ್ದು..)



    ಒಂದು ವರ್ಷದ ಹಿಂದೆ ಶಾಲೆಗೆ ರಜಾ ಇದ್ದಾಗ ಕುರಿ ಕಾಯಲು ಹೋಗಿದ್ದೆ. ಆಗ ಜಾರಿ ಬಿದ್ದೆ. ಆಮೇಲೆ ಪರೀಕ್ಷೆ ಮಾಡಿದಾಗ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯ್ತು. ಈಗ ಪ್ರತಿ ತಿಂಗಳು ಕಿಮೋಥೆರಪಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ಸಾರಿ ಹೋದಾಗಲೂ 15 ದಿನ ಆಸ್ಪತ್ರೆಯಲ್ಲಿರಬೇಕು. ಚುಚ್ಚುಮದ್ದುಗಳನ್ನು ಕೊಡುತ್ತಾರೆ. ಅದನ್ನು ಕೊಟ್ಟಾಗ ಆಗುವ ಯಾತನೆಯನ್ನು ಹೇಳಲು ಆಗುವುದಿಲ್ಲ. ಆ ಚುಚ್ಚುಮದ್ದು ಕೊಟ್ಟ ನಂತರ 1 ತಿಂಗಳವರೆಗೆ ತೊಂದರೆಯಿಲ್ಲ. ಆಮೇಲೆ ಮತ್ತೆ ದೇಹದಲ್ಲಿ ತೊಂದರೆಗಳು ಕಾಣಿಸಲು ಶುರುವಾಗುತ್ತವೆ. ಮತ್ತೆ ಚಿಕಿತ್ಸೆಗೆ ಓಡಬೇಕು. ಒಂದು ಸಾರಿ ಆಸ್ಪತ್ರೆಗೆ ಹೋದಾಗಲೂ 10 ಸಾವಿರಕ್ಕಿಂತ ಹೆಚ್ಚು ಖಚರ್ಾಗುತ್ತದೆ ಎಂದು ನಮ್ಮ ಅಬ್ಬಾ ಹೇಳುತ್ತಾರೆ. ನನಗಾಗಿ ನನ್ನ ಅಬ್ಬಾ ಕುರಿಮಂದೆಯನ್ನು ಮಾರಿದರು. ನಮಗೆಲ್ಲ ಜೀವನಾಧಾರವಾಗಿದ್ದ ಬಾಡಿಗೆ ರಿಕ್ಷಾವನ್ನೂ ಮಾರಿದ್ದಾರೆ. ಆದರೆ ನನ್ನ ಚಿಕಿತ್ಸೆಗೆ ಇನ್ನೂ ಬಹಳ ಹಣಬೇಕಾಗುತ್ತದಂತೆ. ಯಾರಾದ್ರೂ ಸಹಾಯ ಮಾಡಬಹುದಲ್ವಾ? ಆಪರೇಶನ್ ಆಗಿ ಮತ್ತೆ ಎಲ್ಲ ಮಕ್ಕಳ ಜೊತೆ ಓಡಿ, ಆಡಿ ಖುಷಿಯಿಂದ ಇರಬಹುದಲ್ವಾ. ಯಾರಾದ್ರೂ ನನಗೆ ಸಹಾಯ ಮಾಡ್ತಾರಲ್ವಾ? 
--
ಈ ಬರಹದಲ್ಲಿ  ನೌಶಾದ್ ಅಲಿಯ ಅಕೌಂಟ್  ನಂಬರ್ ನೀಡಿದ್ದೇನೆ.. ಯಾರಾದ್ರೂ ಸಹಾಯ ಮಾಡುವ ಮನಸ್ಸು ಉಳ್ಳವರು ಮಾಡಬಹುದು... ಹಜರತ್ ಅಲಿಯ ದೂರವಾಣಿ ಸಂಖ್ಯೆಯೂ ಇದೆ ಸಂಪರ್ಕ ಮಾಡಬಹುದು...

Sunday, December 2, 2012

ಉಕರೋಧನ

ಉಕರೋಧನ


ಉತ್ತರಕನ್ನಡದ ಕುರಿತು ಬರೆದ ಒಂದಷ್ಟು ಚೌಪದಿಗಳು
ಯೋಜನೆಗಳ ಭಾರದಲ್ಲಿ ನಲುಗುತ್ತಿರುವ ಉತ್ತರಕನ್ನಡದ ಕುರಿತು ನಾಲ್ಕು ಸಾಲುಗಳ ಸಾಂತ್ವನ... ಚೌಪದಿಗಳ ಬ್ರಹ್ಮ ದಿನಕರ ದೇಸಾಯಿ ನನ್ನ ಈ ಚುಟುಕುಗಳಿಗೆ ಸ್ಫೂರ್ತಿಯ ಸೆಲೆ. ಅವರಿಗೆ ಧನ್ಯವಾದ.

ಅಳಲು

ಏರುತಿದೆ ತದಡಿಯ ಬಿಸಿ
ಜೀವ ಜನತೆ ಕಸಿಬಿಸಿ|
ಉತ್ತರಕನ್ನಡ ಹೋಗುತಿದೆ ಸೂರೆ
ಉಳಿಸುವವರಿಲ್ಲವಲ್ಲೇ ನೀರೆ..||

ಶಿಶುವಿನ ಗೋಳು

ನನ್ನ ಉತ್ತರಕನ್ನಡ ಪ್ರೀತಿಯ ಶಿಶು
ಹಲವು ಯೋಜನೆಗಳಿಗದೇ ಬಲಿಪಶು|
ಎಲ್ಲ ಜನರಿಗೆ ಇದು ನೀಡಿದರೂ ಕೂಳು
ಕೇಳುವವರಿಲ್ಲವಾಯ್ತಲ್ಲೇ ಇದರ ಗೋಳು..||

ಕವನದ ವ್ಯಥೆ

ನನ್ನ ಉ.ಕ ಒಂದು ಸುಂದರ ಕವನ
ಬಹು ಯೋಜನೆಗಳೇ ಇದರ ಚರಣ|
ದುಃಖ ಕಥೆ ಹೇಳುತಿದೆ ಪ್ರತಿಯೊಂದೂ ಪ್ಯಾರಾ
ಮುಗಿದುಹೋಗುತ್ತಿದೆ ಇದರ ಸಂಪತ್ತು ಪೂರಾ..|||

ಸೀರೆಯಂತೆ ಬದುಕು

ನನ್ನ ಉ.ಕವೆ ಒಂದು ರೇಶಿಮೆಯ ಸೀರೆ
ನಾಜೂಕು, ಜೋಪಾನ. ಇರಬೇಕು ನೀರೆ.|
ಛಂದವಿದ್ದರೆ ಅದು ಉಳಿಸುವುದು ಮಾನ
ಹರಿದು ಹೋದರೆ ನಿನ್ನ ಬದುಕೇ ಊನ||

ಮುತ್ತು ಕಾಶ್ಮೀರ

ನನ್ನ ಉಕವೆ ಒಂದು ಕಡಲ ಮುತ್ತು
ಬೆಸ್ತನ ತೀಟೆಯ ಬೇಟೆಗೆ ಬಲಿಯಾಗಿ ಬಿತ್ತು.|
ಈ ನಾಡೇ ಒಂದು ಮಿನಿ ಕಾಶ್ಮೀರ
ಪ್ರತಿಯೊಂದು ಭಾಗ ಎಂದೆಂದೂ ಅಸ್ಥಿರ|||

ಕಣ್ಣು-ಬೇನೆ

ನನ್ನ ಉ.ಕವೆ ಒಂದು ತೀಕ್ಷ್ಣ ಕಣ್ಣು
ನೂರೆಂಟು ಯೋಜನೆಗಳೇ ಅದರ ಹುಣ್ಣು|
ಜೊತೆಗೆ ಕಾಡುತಿವೆ ಹಲವೆಂಟು ಬೇನೆ
ಏನು ಮಾಡುವುದು ಇದಕೆ ಇಲ್ಲವಲ್ಲ ಕೊನೆ||


ಕಾಲೇಜು ಓದುತ್ತಿದ್ದ ದಿನಗಳಲ್ಲಿ ಬರೆದಿದ್ದ ಈ ಚುಟುಕಗಳನ್ನು ಶಿರಸಿಯ ಪತ್ರಕರ್ತ, ಕದಂಬವಾಣಿ, ನಾಗರೀಕ, ಕರ್ಮವೀರ, ಉತ್ತರಕನ್ನಡ ಜಿಲ್ಲಾ ವಾರ್ತಾ ಸಂಚಯ ಈ ಮುಂತಾದ ಅನೇಕ ಪತ್ರಿಕೆಗಳು ಪ್ರಕಟಿಸಿದ್ದವು. ಅದಕ್ಕೆ ಕಾರಣೀಭೂತರಾದವರಿಗೆ ಧನ್ಯವಾದಗಳು-ವಿನಯ್ ದಂಟಕಲ್