Tuesday, September 30, 2014

ವರ್ಷದ ಹರ್ಷ

ಅಬ್ಬರದ ಮಳೆ..
ಬಾನು ಬೊಬ್ಬಿರಿದಿದೆ..

ಗುಡುಗು ಢುಂ ಢುಂ
ಸಿಡಿಲು ಛಟ್ ಛಟ್...

ಮಳೆಹನಿಯ ಚಿಟಪಟ
ಮನದ ತುಂಬ ನರ್ತನ

ಹಸಿರು, ಜಗಕೆ ಚೇತನ
ಮಳೆ ನೀಡಿದೆ ಹೊಸತನ 

ಗುಡುಗಿನ ಅಬ್ಬರಕೆ
ಮೈಮನ ರೋಮಾಂಚನ

ಸಿಡಿಲಿನ ಧೀಶಕ್ತಿಗೆ
ಲೋಕವೆಲ್ಲ ಝಲ್ಲಣ..

ನದಿತೊರೆಗಳು ತುಂಬಿದೆ
ಕೆಂಪು ನೀರು ಹರಿದಿದೆ

ಹಸಿರು ಚಿಗುರು ಮೊಳೆತಿದೆ
ಹೂ ಹಕ್ಕಿ ನಲಿದಿದೆ.

ಮತ್ತೆ ಪ್ರೀತಿ ಮೊಳೆತಿದೆ
ವರ್ಷಧಾರೆ ಸುರಿದಿದೆ

ಮಳೆಯೆಂದರೆ ಚೇತನ
ಮಳೆಯಿಂದಲೇ ಜೀವನ |

***

(ಈ ಕವಿತೆ ಬರೆದಿದ್ದು ಸೆ.30, 2014ರಂದು)
(ಇವತ್ತು ಸುರಿಯುತ್ತಿರುವ ಮಳೆ ನೋಡಿ ಸುಮ್ಮನೆ ಗೀಚಿದ್ದು)

ಆಡೋಣ ಬಾ

ಆಡೋಣ ಬಾ
ಅಕ್ಷರಗಳ ಜೊತೆಗೊಮ್ಮೆ ಆಡೋಣ ಬಾ |

ಶಬ್ದ ಶಬ್ದಗಳ ಮಿಲನ
ಕೂಡಿ ಕಳೆವ ತನನ
ಆಡೋಣ ಬಾ, ಅಕ್-ಶರದ ಜೊತೆಗೊಮ್ಮೆ |

ಪದಗಳ ಕಟ್ಟೋಣ, ಹೊಸ
ಅರ್ಥ ವಿನ್ಯಾಸ ಹುಡುಕೋಣ,
ಕವನ ಕಟ್ಟೋಣ, ಹಾಡೋಣ
ಆಡೋಣ ಬಾ, ಅಕ್ಷರ-ರದ ಜೊತೆಗೊಮ್ಮೆ |

ಅಕ್ಷರವ ಅರಿಯೋಣ
ಒಳಹುಗಳೊಡಲ ತಿಳಿಯೋಳ
ಬಾ ಅ-ಕ್ಷರಗಳ ಜೊತೆಗೊಮ್ಮೆ ಆಡೋಣ |

ಕವಿ ವರ ಬೇಂದ್ರೆಯಂತೆ
ಕುವೆಂಪುರಂತೆ, ಆಡೋಣ
ಅಕ್ಷರದ ಆಟದಿಂದಲೇ
ಸಾಧನೆಯ ಶಿಖರವೇರೋಣ |

ಬಾ ಆಡೋಣ
ಅಕ್ಷರಗಳ ಜೊತೆಗೊಮ್ಮೆ |

***
(ಈ ಕವಿತೆ ಬರೆದಿರುವುದು 05-08-2006ರಂದು ದಂಟಕಲ್ಲಿನಲ್ಲಿ )

Monday, September 29, 2014

ಎರಡು ಹನಿ ಪ್ರೇಮ ಕಥೆಗಳು

(ಚಿತ್ರ : ವಿನಾಯಕ ಹೆಗಡೆ)
ಚಂದಮಾಮ

`ನಾನು ನಿಂಗೋಸ್ಕರ ಬಾನಿನ ಚಂದಮಾಮನನ್ನೇ ಕೈಯಲ್ಲಿ ಹಿಡಿದು ತಂದುಕೊಡುತ್ತೇನೆ...' ಅದೊಂದು ಸಿನಿಮಾದಲ್ಲಿ ಹೀರೋ ಹೇಳುತ್ತಿದ್ದಂತೆ ಅವಳು ಕೇಳಿದಳು `ನೀನೂ ನಂಗೋಸ್ಕರ ಚಂದಮಾಮನನ್ನು ತರುತ್ತೀಯಾ..?'
ನಾನೆಂದೆ `ಊಹೂಂ..' ಅವಳ ಕಣ್ಣಲ್ಲಿ ಹನಿಗೂಡಿತ್ತು... ಅದು ಭೂಮಿಗಿಳಿಯುವ ಮೊದಲೇ ಹೇಳಿದ್ದೆ..
`ಚಂದಮಾಮನನ್ನು ತರುವುದು ಅಸಾಧ್ಯ ಎನ್ನೋದು ನಿಂಗೂ ಗೊತ್ತು ನಂಗೂ ಗೊತ್ತು... ಅದರ ಬದಲು ಒಂದು ಕೆಲಸ ಮಾಡೋಣ.. ನಾನು-ನೀನು ಇಬ್ಬರೂ ಸೇರಿ ಚಂದಮಾಮನ ನಾಡಿಗೊಂದು ಯಾನ ಮಾಡೋಣ... ಅಲ್ಲಿ ನಾನು ನೀನು ಇಬ್ಬರೇ ಇದ್ದುಬಿಡೋಣ...' ಎಂದೆ.
ಕಣ್ಣೀರು ಇಂಗಿ ಆನಂದಭಾಷ್ಪ ಸುರಿದಿತ್ತು. ಬೆಚ್ಚಗೆ ಅವಳು ತಬ್ಬಿಕೊಂಡಿದ್ದಳು..

***

ಪ್ಯಾಂಟು-ಪ್ರೀತಿ

`ಪ್ರೀತಿ ಅಂದರೆ ಜೀನ್ಸ್ ಪ್ಯಾಂಟಿನ ಥರಾ ಕಣೋ..'  ಅವಳಂದಳು
`ಯಾಕೆ..ಹಾಗೆ..?' ನಾನು ಕೇಳಿದೆ..
`ಜೀನ್ಸ್ ಪ್ಯಾಂಟ್ ನೋಡು ಎಷ್ಟು ರಫ್ & ಟಫ್. ಅಂತ.. ಎಷ್ಟೇ ಸಾರಿ ಹಾಕಿದ್ರೂ ಹಾಳಾಗೋಲ್ಲ. ಕೊಳಕಾದ್ರೂ ತೊಂದ್ರೆ ಇಲ್ಲ.. ಮತ್ತೆ ಮತ್ತೆ ಹಾಕ್ಕೋಬಹುದು.. ಒಂಥರಾ ಖುಷಿ ಕೊಡುತ್ತೆ... ಪ್ರೀತಿ ಕೂಡ ಹಾಗೇ ಅಲ್ವಾ..' ಅವಳೆಂದಳು..
`ಆದ್ರೆ ಜೀನ್ಸು ಹರಿಯಬಾರದ ಜಾಗದಲ್ಲೇ ಹರಿಯುತ್ತಲ್ಲೇ...ಅದಕ್ಕೆ ಹೊಲಿಗೆ ಕೂಡ ಬಹಳ ಕಷ್ಟ ಮಾರಾಯ್ತಿ..' ಎಂದೆ..
`ತೂ.. ಹೋಗೋ' ಎಂದಳು..
`ಪ್ರೀತಿ ಅಂದರೆ ಫಾರ್ಮಲ್ಸ್ ಪ್ಯಾಂಟ್ ಥರಾ ಕಣೆ...' ಅಂದೆ.
`ಓಹೋ...' ಅಂದವಳು `ಹೇಗೆ..?' ಅಂದಳು..
`ಆ ಪ್ಯಾಂಟುಗಳು ಎಷ್ಟು ಡೀಸೆಂಟ್ ಅಲ್ವಾ..? ನೋಡಿದ ತಕ್ಷಣ ಏನೋ ಗೌರವ ಮೂಡುತ್ತದೆ. ಮತ್ತೆ ಮತ್ತೆ ಫಾರ್ಮಲ್ಸ್ ಹಾಕಬೇಕು ಎನ್ನಿಸುತ್ತದೆ...' ಎಂದೆ.
`ಆದರೆ..' ಎಂದ ಅವಳು `ನನ್ನಂತಹ ಮಾಸ್ ನವರಿಗೆ ಫಾರ್ಮಲ್ಸ್ ಇಷ್ಟ ಆಗೋದಿಲ್ಲ ಕಣೋ..' ಎಂದಳವಳು..
ನಾನು ಆಲೋಚಿಸಿದೆ.. ಕೊನೆಗೆ ಹೇಳಿದೆ.
`ಬಿಡು.. ಪ್ರೀತಿ ಜೀನ್ಸ್ ಬೇಕಾದರೂ ಆಗಿರಲಿ.. ಫಾರ್ಮಲ್ಸ್ ಬೇಕಾದರೂ ಆಗಿರಲಿ. ಆಯ್ಕೆ ನಮ್ಮದೇ ಅಲ್ಲವಾ..? ಎರಡನ್ನೂ ಪ್ರಯತ್ನಿಸಿದರಾಯಿತು..' ಎಂದೆ.. ಕಣ್ಣುಮಿಟುಕಿಸಿದೆ..
ಒಮ್ಮೆ ಕೈಯನ್ನು ಚಿವುಟಿದಳು..
ಹಾಯ್ ಎಂದೆ.. ನಕ್ಕಳು..

***

Sunday, September 28, 2014

ಖುಷಿಯಾಗಿರಲಷ್ಟು ಹನಿ ಚುಟುಕಗಳು

ಹೆಂಡ(ತಿ)

ಹೆಂಡಕ್ಕೂ ಹೆಂಡತಿಗೂ
ಏನಂತೆ ವ್ಯತ್ಯಾಸ ?
ಹೆಂಡ `ಕಿಕ್' ಕೊಟ್ಟರೆ
ಹೆಂಡತಿಯೋ ಕಿಕ್ (kick)
ಮಾಡುತ್ತಾಳೆ |

ವ(ವಾ)ಯಸ್ಸು

ನನ್ನನ್ನು ಸೆಳೆದಿದ್ದು
ಅವಳ ಸುಂದರ voiceಊ|
ಜೊತೆಗೆ ಅವಳ ವಯಸ್ಸೂ ||

ದಿನಕರ ದೇಸಾಯಿಗೆ

ನಮ್ಮೂರ ಕವಿ ದಿನಕರ
ಅವರ ಚುಟುಕುಗಳೆಂದೂ ಅಮರ |
ಚಿಕ್ಕದಾದರೂ ಬಲು ಸವಿಯಂತೆ ಚುಟುಕು
ಎತ್ತಿ ತೋರುವುದದು ಸಮಾಜದ ಹುಳುಕು ||

NUMBER ONE

ಎಲ್ಲರೂ ಹೇಳ್ತಾರೆ
ಅಮೇರಿಕ NUMBER ONE |
ಆದರೆ ಅಮೆರಿಕಾವನ್ನೂ
ಹೆದರಿಸ್ತಿದ್ದ ಬಿನ್ ಲಾಡೆನ್ ||

ಕನಸು

ಆತ ಹೇಳುತ್ತಿದ್ದ
ನಿನ್ನೆ ನನ್ನ ಬಳಿ
`ಐಶ್ವರ್ಯ ಬಂದು ಮುತ್ತು
ಕೊಡೆಂದಳು, ಮುತ್ತು
ಕೊಡಲು ಹವಣಿಸಿದಾಗಲೇ
ನನಗೆ ಎಚ್ಚರಾಯಿತು' |

Saturday, September 27, 2014

ಗುಲಾಬಿ

(ಚಿತ್ರ ಕೃಪೆ : ಅಮಿತ್ ಕಾನಡೆ)

ಬಾಗಿಲೊಳು ಅಂಗಳದಿ
ಹೂ ಗುಲಾಬಿ ಅರಳಿತ್ತು |
ಸೂರ್ಯ ರಶ್ಮಿಯ ಎದುರು
ಅರಳಿ ನಿಂತಿತ್ತು ||

ಕಂಪಿಲ್ಲ-ನಗುತಿತ್ತು
ಹೂವು ನಲಿದು |
ಒಡಲೊಳಗೆ ಮುಳ್ಳಿತ್ತು
ಒಲವು ಕರೆದು ||

ಹೂ ಚೆಲುವು ಮೆರೆದಿದೆ
ಲೋಕ ತುಂಬ |
ಹೊಸ ಕಾಂತಿ ಹೊಂದಿದೆ
ಹಗಲ ತುಂಬ ||

ಬಣ್ಣಗಳು ನೂರಾರು
ಒಡಲು ಒಂದೇ |
ಹೂ ರಾಶಿ ನೂರಿರಲಿ
ಈ ಚೆಲುವೇ ಮುಂದೆ ||

***
(ಈ ಕವಿತೆ ಬರೆದಿರುವುದು 06-02-2006ರಂದು ದಂಟಕಲ್ಲಿನಲ್ಲಿ )

Thursday, September 25, 2014

ಬೆಂಗಾಲಿ ಸುಂದರಿ-26

(ರೋಕಿಯಾ ಮಹಲ್, ಕಟಾರಿಯಾ, ಬಾಂಗ್ಲಾದೇಶ)
             ಸಲೀಂ ಚಾಚಾನೊಂದಿಗೆ ಮಾತಾಡದೇ ಮೌನವಾಗಿ ವಾಪಾಸಾಗುತ್ತಿದ್ದ ವಿನಯಚಂದ್ರನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲ. ಏನನ್ನೋ ಕಳೆದುಕೊಂಡ ಅನುಭವ. ಅದೆಷ್ಟೋ ವರ್ಷ ತಾನು ಅಂದುಕೊಂಡಿದ್ದ ನಂಬಿಕೆ, ಸಿದ್ಧಾಂತಗಳು ಅರೆಘಳಿಗೆಯಲ್ಲಿ ಕತ್ತರಿ ಪ್ರಯೋಗದಲ್ಲಿ ಕಳೆದುಕೊಂಡ ಅನುಭವವಾಗಿತ್ತು. ಛೇ. ತಾನು ವಿರೋಧಿಸಬಾರದಿತ್ತೇ.. ಎಂಬ ಭಾವನೆ ಮೂಡಿದ್ದು ಸುಳ್ಳಲ್ಲ. ಸಲೀಂ ಚಾಚಾ ಕೂಡ ಮಾತಾಡದೇ ಸಾಗುತ್ತಿದ್ದ. ವಿನಯಚಂದ್ರನಿಗೆ ಮುಂಜಿಯ ಉರಿಗಿಂತ ಮನಸ್ಸಿನ ಉರಿ ಹೆಚ್ಚು ನೋವನ್ನು ಕೊಡುತ್ತಿತ್ತು. ಛೇ.. ತಪ್ಪು ಮಾಡಿಬಿಟ್ಟೆನಾ ಎಂದೂ ಅನ್ನಿಸದೇ ಇರಲಿಲ್ಲ.
             ಖಾದಿರ್ ಮನೆ ಮೆಟ್ಟಿಲು ತುಳಿಯುತ್ತಿದ್ದಂತೆ ಎದುರಿಗೆ ಬಂದ ಮಧುಮಿತಾ ವಿನಯ ಚಂದ್ರನನ್ನು ನೋಡಿ ಕಿಚಾಯಿಸುವಂತೆ ನಕ್ಕಳು. ತನಗೆಲ್ಲಾ ಗೊತ್ತಿದೆ ಎಂಬಂತಿತ್ತು ಆ ನಗು. ಮೊದಲೇ ಇವಳಿಗೆ ವಿಷಯ ಗೊತ್ತಿತ್ತೇ..? ಗೊತ್ತಿದ್ದೂ ಮುಚ್ಚಿಟ್ಟಳೇ ಎನ್ನುವ ಅಂಶವೂ ಕಾಡಿತು. ಗೊಂದಲಿಗನ ಮನಸ್ಸು ಎಲ್ಲವನ್ನೂ ಅನುಮಾನಿಸುತ್ತದಲ್ಲ ಹಾಗಾಗಿತ್ತು ಅವನ ಪಾಡು. ಛೇ ಇವಳೂ ಮುಚ್ಚಿಟ್ಟಳೇ ಎಂದುಕೊಂಡನಾದರೂ ಅರೆಘಳಿಗೆಯಲ್ಲಿ ತಲೆ ಕೊಡವಿ ಮುಂದಕ್ಕೆ ಹೋಗುತ್ತಿದ್ದ ವಿನಯಚಂದ್ರನ್ನು ಮತ್ತೊಮ್ಮೆ ಕಿಚಾಯಿಸಿದಳು ಮಧುಮಿತಾ. ವಿನಯಚಂದ್ರ ಮೌನದಿಂದ ಆಕೆಯನ್ನು ದಾಟಿ ಮುಂದಕ್ಕೆ ಹೋದ. ಮಧುಮಿತಾಳಿಗೂ ಪೆಚ್ಚೆನ್ನಿಸಿತು.
             ಖಾದೀರ್ ಮನೆಯಲ್ಲಿ ಇವರಿಗಾಗಿ ನೀಡಿದ್ದ ಕೋಣೆಯೊಳಕ್ಕೆ ವಿನಯಚಂದ್ರ ಹೋದ. ಹಿಂದೆಯೇ ಬಂದ ಮಧುಮಿತಾ ಕೋಣೆಯ ಬಾಗಿಲು ಹಾಕಿದಳು. ಬಂದವಳೇ ವಿನಯಚಂದ್ರನನ್ನು ತಬ್ಬಿ ಹಿಡಿದು ತಲೆಯನ್ನು ನೇವರಿಸುತ್ತ `ಏನಾಯ್ತು..' ಎಂದಳು.
             `ನಿಂಗೆ ಗೊತ್ತಿಲ್ವಾ?' ಎಂದ.
             `ನೀನು ಸಲೀಂ ಚಾಚಾನ ಜೊತೆ ಹೋದ ನಂತರ ಖಾದಿರ್ ಭಾಯ್ ಹೆಂಡತಿ ವಿಷಯ ತಿಳಿಸಿದಳು..' ಎಂದಳು ಮಧುಮಿತಾ. ವಿನಯಚಂದ್ರ ನಿರಾಳನಾದ.
              `ಆದರೆ ನಾನು ತಪ್ಪು ಮಾಡಿದೆನಾ ಎನ್ನಿಸುತ್ತಿದೆ. ಹುಟ್ಟಿದಂದಿನಿಂದ ಬಂದ ನಂಬಿಕೆಗೆ ಕತ್ತರಿ ಬಿದ್ದಿತಾ ಎಂಬಂತೆ ಆಗುತ್ತಿದೆ. ನಮ್ಮದಲ್ಲದ ನಡೆಯಲ್ಲಿ ಸಾಗಿದೆವಾ ಎಂದೂ ಎನ್ನಿಸುತ್ತಿದೆ. ಯಾಕೋ ತಳಮಳ..' ಎಂದ. ಮನಸ್ಸು ಗದ್ಗದಿತವಾಗುತ್ತಿತ್ತು.
               `ತಲೆಬಿಸಿ ಬೇಡ. ಖಂಡಿತವಾಗಿಯೂ ಸಲೀಂ ಚಾಚಾ ನಮ್ಮ ಕೆಟ್ಟದ್ದಕ್ಕೆ ಈ ಕೆಲಸ ಮಾಡೋದಿಲ್ಲ. ಆತ ಏನೋ ಮುಂದಿನ ಕಷ್ಟದ ಸಂದರ್ಭಗಳನ್ನು ಊಹಿಸಿಕೊಂಡು ಹೀಗೆ ಮಾಡಿರುತ್ತಾನೆ. ಭಯ ಬಿಟ್ಹಾಕು. ನಮ್ಮ ಒಳ್ಳೆಯ ದಿನಗಳಿಗಾಗಿ ಆತ ಹೀಗೆ ಮಾಡಿದ್ದಾನೆ ಎಂದುಕೊಳ್ಳೋಣ..' ಎಂದಳು.
               `ನನಗೆ ನಂಬಿಕೆಯೇ ಹುಟ್ಟುತ್ತಿಲ್ಲ ಮಧು.. ಸಲೀಂ ಚಾಚಾ ನನ್ನನ್ನು ಮರುಳು ಮಾಡಿ ಧರ್ಮಾಂತರ ಮಾಡುತ್ತಿದ್ದಾನಾ ಅಂತ ಅನ್ನಿಸುತ್ತಿದೆ'
               `ನೀನೆ ಹೇಳಿದೆಯಲ್ಲ ವಿನೂ.. ನಾವು ಏನನ್ನು ನಂಬುತ್ತೇವೆಯೋ ಅದೇ ನಮ್ಮ ಧೈರ್ಯ ಅಂತ.. ಆತ ಒಳ್ಳೆಯವನು ಎಂದು ನಂಬಿಕೊಂಡರೆ ಆ ರೀತಿಯಲ್ಲಿಯೇ ನಿನಗೆ ಕಾಣುತ್ತಾನೆ. ಕೆಟ್ಟವನು ಎಂದುಕೊಂಡರೆ ಆತನ ಪ್ರತಿಯೊಂದು ನಡೆಯನ್ನೂ ನಾವು ಅನುಮಾನ ಪಡುವಂತಾಗುತ್ತದೆ. ಎಲ್ಲವೂ ನಮ್ಮ ನಮ್ಮೊಳಗಿನ ನಂಬಿಕೆಗಳೇ ವಿನೂ.. ನಾನೂ ಅಷ್ಟೆ ನಿನ್ನನ್ನು ನಂಬಿ ನಿನ್ನ ಜೊತೆಗೆ ಬರಲು ಹೊರಟಿಲ್ಲವಾ? ಹುಟ್ಟಿ ಬೆಳೆದ ಈ ನಾಡನ್ನು ಬಿಟ್ಟು ಕಾಣದ, ಕೇಳದ ನಿಮ್ಮ ನಾಡಿಗೆ ಹೊರಟು ಬರಲು ತಯಾರಾಗಿದ್ದೇನೆ ಅಲ್ಲವಾ? ಇದೂ ಹೀಗೆಯೇ. ಇನ್ನೊಂದು ವಿಷಯ ಏನೂ ಅಂದ್ರೆ ನಾವೀಗ ಏನೂ ಮಾಡಲಿಕ್ಕೆ ಬರೋದಿಲ್ಲ. ಯಾಕಂದ್ರೆ ನಾವು ಈ ಬಾಂಗ್ಲಾ ದೇಶದಲ್ಲಿ ಬೆದರಿಕೆಯ ನಡುವೆ ಬದುಕಿ ಜೀವ ಉಳಿಸಿಕೊಂಡು ಪರಾರಿಯಾಗಲು ಯತ್ನಿಸುವಾಗ ಸಲೀಂ ಚಾಚಾನನ್ನು ನಂಬಲೇಬೇಕು. ಜೀವನ ಪೂರ್ತಿ ಬೇಡ. ಬಾಂಗ್ಲಾ ನಾಡಿನ ಫಾಸಲೆ ದಾಟುವವರೆಗಾದರೂ ಆತನನ್ನು ನಂಬಲೇಬೇಕು. ಇದು ಸ್ವಾರ್ಥಕ್ಕೆ ಬಳಕೆಯಾಗುತ್ತದೆ ಎಂದುಕೊಂಡರೂ ಸರಿ. ಒಂದು ವೇಳೆ ಆತ ಧರ್ಮಾಂತರ ಮಾಡಲು ಯತ್ನಿಸುತ್ತಿದ್ದಾನೆ ಎಂದುಕೋ.. ಅದನ್ನೂ ನಂಬಲೇಬೇಕು..' ಎಂದಳು.
             ವಿನಯಚಂದ್ರನಿಗೆ ಮಧುಮಿತಾಳ ಮಾತು ಅಚ್ಚರಿ ಹುಟ್ಟಿಸಿತ್ತು. ಹೀಗೂ ಆಲೋಚಿಸಬಹುದಲ್ಲ ಎಂದುಕೊಂಡ. ಅಷ್ಟರಲ್ಲಿ ಸಲೀಂ ಚಾಚಾ ಕೋಣೆಯ ಕದ ತಟ್ಟಿದ. ವಿನಯಚಂದ್ರನೇ ಹೋಗಿ ಬಾಗಿಲು ತೆಗೆದ. ಸಲೀಂ ಚಾಚಾನನ್ನು ಕಂಡೊಡನೆ ಏನು ಹೇಳಬೇಕೋ ತಿಳಿಯಲಿಲ್ಲ. ಸಲೀಂ ಚಾಚಾ ಸೀದಾ ಒಳಬಂದವನೇ `ಬೇಗ ತಯಾರಾಗಿ ನಾವು ಇವತ್ತೇ ಮಿರ್ಜಾಪುರದಿಂದ ಹೊರಡಬೇಕಾಗಿ ಬರಬಹುದು..' ಎಂದ.

***

            ಮಿರ್ಜಾಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದಿನ್ನೂ ಆರಿರಲಿಲ್ಲ. ಆದ್ದರಿಂದ ರಾತ್ರಿ ಪ್ರಯಾಣ ಬಹಳ ಸುಲಭದ್ದಾಗಿತ್ತು. ಹಗಲಿನಲ್ಲಿ ಪ್ರಯಾಣ ಮಾಡಿದರೆ ಅಪಾಯ ಎದುರಾಗುವ ಸಾಧ್ಯತೆಗಳು ಬಹಳ ಹೆಚ್ಚಿತ್ತು. ಸಲೀಂ ಚಾಚಾನೇ ಹೊರಡುವ ತಯಾರಿಗಳನ್ನು ಚುರುಕಿನಿಂದ ಮಾಡುತ್ತಿದ್ದ. ವಿನಯಚಂದ್ರ ಮಾತಿಲ್ಲದೇ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ. ಸುನ್ನತಿನ ಉರಿಯಿನ್ನೂ ಕಡಿಮೆಯಾಗಿರಲಿಲ್ಲ. ಕತ್ತರಿ ಹಾಕಿದಲ್ಲಿ ರಕ್ತಸ್ರಾವವಾಗುತ್ತಿದೆಯೇನೋ ಎಂದು ಪದೇ ಪದೆ ನೋಡಿಕೊಂಡಿದ್ದ ವಿನಯಚಂದ್ರ. ನಿಧಾನವಾಗಿ ರಕ್ತಸ್ರಾವ ಕಡಿಮೆಯಾಗಿತ್ತು.
                ಖಾದಿರ್ ಅಂತೂ ಮಿರ್ಜಾಪುರದಲ್ಲಿ ಹೇಗೆ ಸಾಗಬೇಕು, ಯಾವ ದಾರಿಯಿಂದ ಸಾಗಿದರೆ ಉತ್ತಮ ಎನ್ನುವುದನ್ನೆಲ್ಲ ವಿವರಿಸುತ್ತಿದ್ದ. ಯಾವುದಕ್ಕೂ ಇರಲಿ ಎಂಬಂತೆ ಖಾದಿರ್ ಬಾಂಗ್ಲಾ ದೇಶದ ಮ್ಯಾಪ್ ತಂದುಕೊಟ್ಟಿದ್ದ. ಇದರಿಂದ ಪಯಣಕ್ಕೆ ಸುಲಭವಾಗಬಹುದು ಎನ್ನುವ ನಂಬಿಕೆ ಆತನದ್ದು.
           ರಾತ್ರಿ ಆವರಿಸಿದ ತಕ್ಷಣ ಸಲೀಂ ಚಾಚಾ ಮಧುಮಿತಾ ಹಾಗೂ ವಿನಯಚಂದ್ರನನ್ನು ಹೊರಡಿಸಿದ. ಖಾದಿರ್ ಕೂಡ ಕೊಂಚ ದೂರದ ವರೆಗೆ ತಾನು ಬರುತ್ತೇನೆ ಎಂದ. ಖಾದಿರ್ ಮುಂದಕ್ಕೆ ತನ್ನ ಸೈಕಲ್ ರಿಕ್ಷಾ ಮೂಲಕ ಸಾಗಿದರೆ ಸಲೀಂ ಚಾಚಾ ಆತನನ್ನು ಹಿಂಬಾಲಿಸಿದ. ಅದ್ಯಾವ್ಯಾವ ಗಲ್ಲಿಗಳಲ್ಲಿ ತಿರುಗಿದನೋ, ಯಾವ ಯಾವ ಓಣಿಗಳಲ್ಲಿ ಸಾಗಿದನೋ. ಕತ್ತಲೆ ಮಿರ್ಜಾಪುರದ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಅರ್ಥವಾಗದಂತೆ ವಿನಯಚಂದ್ರ ಕುಳಿತಿದ್ದ. ಖಾದಿರ್ ಗೆ ಮಿರ್ಜಾಪುರದ ಗಲ್ಲಿಗಳು ಅಂಗೈಯೊಳಗಿನ ರೇಖೆಗಳಂತೆ ಸ್ಪಷ್ಟವಾಗಿದ್ದವೇನೋ. ಸರಸರನೆ ಸಾಗುತ್ತಿದ್ದ. ಸಲೀಂ ಚಾಚಾ ಆತನ ವೇಗಕ್ಕೆ ತಕ್ಕಂತೆ ಸೈಕಲ್ ತುಳಿಯಲು ಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಹಿಂದೆಬಿದ್ದ.
            ಸುತ್ತು ಬಳಸುವ ಮೂಲಕ ಸಾಗಿದವರಿಗೆ ಅರ್ಧಗಂಟೆಯ ನಂತರ ಮಿರ್ಜಾಪುರದ ಕೊನೆ ಸಿಕ್ಕಿತು. ಮಿರ್ಜಾಪುರದಿಂದ ಪಾಕುಲ್ಲಾವನ್ನು ತಲುಪಬೇಕಿತ್ತು. ರಾತ್ರಿಯಿಡೀ ಪಯಣ ಕೈಗೊಂಡರೆ ಪಾಕುಲ್ಲಾ ತಲುಪಬಹುದು ಎನ್ನುವುದು ಸಲೀಮ ಚಾಚಾನ ಯೋಚನೆಯಾಗಿತ್ತು. ಸದ್ದಿಲ್ಲದ ಮಿರ್ಜಾಪುರದ ಕೊನೆ ಬಂದ ತಕ್ಷಣ ಖಾದಿರ್ ತಾನು ಮರಳುತ್ತೇನೆ ಎಂದ. ಖಾದಿರ್ ಗೊಂದು ಧನ್ಯವಾದ ತಿಳಿಸಿದ ನಂತರ ಇವರ ಪ್ರಯಾಣ ಮುಂದಕ್ಕೆ ಸಾಗಿತು. ಢಾಕಾದಿಂದ ಬಂದಿದ್ದ ಹೆದ್ದಾರಿಯಲ್ಲಿ ಮತ್ತೆ ಇವರು ಮುಂದ ಮುಂದಕ್ಕೆ ಸಾಗಿದರು. ಹಿಂಸಾಚಾರದ ಕಾರಣವೋ ಏನೋ ರಸ್ತೆಯಲ್ಲಿ ವಾಹನಗಳು ವಿರಳವಾಗಿದ್ದವು. ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಸಿಗುತ್ತಿದ್ದ ವಾಹನಗಳೂ ಕೂಡ ಯಮವೇಗದಲ್ಲಿ ಸಾಗುತ್ತಿದ್ದವು.
            `ಬೇಟಾ... ಏನಾಯ್ತು.. ಯಾಕೆ ಮೌನವಾಗಿದ್ದೀಯಾ..? ಏನೋ ಬೇಜಾರು ಆಗಿರೋ ಹಾಗಿದೆ. ಏನಾದರೂ ಸಮಸ್ಯೆಯಾ?' ಸಲೀಂ ಚಾಚಾ ವಿನಯಚಂದ್ರನನ್ನು ಮಾತಿಗೆಳೆದಿದ್ದ.
              `ಏನಿಲ್ಲ..' ವಿನಯಚಂದ್ರ ಹೇಳಿದ್ದ.
              `ಮುಖ ನೋಡಿದ ತಕ್ಷಣ ಗೊತ್ತಾಗ್ತದೆ ಬೇಟಾ.. ಸುನ್ನತ್ ಆಗಿರೋದು ಏನಾದ್ರೂ ತೊಂದರೆ ಆಯ್ತಾ? ಮತ್ತೇನಾದ್ರೂ ಸಮಸ್ಯೆ?' ಎಂದ ಸಲೀಂ ಚಾಚಾ. `ಇಲ್ಲ... ಹಾಗೇನಿಲ್ಲ..' ಉತ್ತರಿಸಿದ ವಿನಯಚಂದ್ರ.
            `ನಂಗೆ ಗೊತ್ತಾಗ್ತದೆ ಬೇಟಾ.. ಮದ್ಯಾಹ್ನ ಹೇಳಿದ್ದೆಯಲ್ಲ ನಂಬಿಕೆ ಅಂತ.. ನಿನ್ನ ಈ ಅಸೌಖ್ಯಕ್ಕೆ ಅದೂ ಕಾರಣ ಅನ್ನೋದು ನನಗೆ ಗೊತ್ತು. ಖಂಡಿತವಾಗಿಯೂ ಸುನ್ನತ್ ಮಾಡಿಸಿಕೊಂಡಿದ್ದರಿಂದ ನಿನ್ನ ನಂಬಿಕೆಗೆ ಘಾಸಿಯಾಗಿಲ್ಲ ಎಂದುಕೊಳ್ಳುತ್ತೇನೆ. ನಾನು ಮಾಡಿದ್ದು ಸರಿ ಅಂತ ನನ್ನ ವಾದವಲ್ಲ. ಆದರೂ ಒಂದು ಮಾತು ಹೇಳ್ತೀನಿ ಕೇಳು.  ವಿಜ್ಞಾನ ಸಾಕಷ್ಟು ಮುಂದುವರಿದಿದೆಯಲ್ಲಾ.. ಒಂದು ವೇಳೆ ಏನಾದ್ರೂ ಸಮಸ್ಯೆ ನಿನಗೆ ಆಗಿತ್ತು ಅಂದಿಟ್ಟುಕೋ.. ಅಂದರೆ ಮದುವೆಯ ಸಂದರ್ಭದಲ್ಲಿಯೋ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಸಮಸ್ಯೆ ಉಂಟಾದರೆ ಆಗ ವೈದ್ಯರೇ ಮುಂಜಿಗೆ ಸೂಚಿಸುತ್ತಿದ್ದರು. ನಾನು ಹೀಗೆ ಆಗಿರುವ ವಿಷಯವನ್ನು ಹಲವು ಸಾರಿ ಕೇಳಿ ತಿಳಿದಿದ್ದೇನೆ. ನಮ್ಮ ಧರ್ಮದಲ್ಲೂ ಅನೇಕರು ಮೊದ ಮೊದಲು ಮುಂಜಿಗೆ ಹೆದರಿದ್ದರು. ಆದರೆ ಅದರಿಂದ ಯಾವುದೇ ತೊಂದರೆಯಿಲ್ಲ ಎಂದಾದಾಗ ಸುಮ್ಮನಾದರು. ನಿಮ್ಮಲ್ಲೂ ಹಲವರು ಅದನ್ನು ಮಾಡಿಸಿಕೊಳ್ಳುತ್ತಾರೆ... ಆದ್ದರಿಂದ ನೀನು ಚಿಂತೆ ಮಾಡಬೇಡ ಬೇಟಾ.. ಚಿಕ್ಕ ಚಿಕ್ಕ ಮಕ್ಕಳಿಗೆ ಸುನ್ನತ್ ಮಾಡಲಾಗುತ್ತದೆ ಬೇಟಾ. ಮುಂದೆ ಸಮಸ್ಯೆ ಏನೂ ಆಗುವುದಿಲ್ಲ ಅವರಿಗೆ' ಎಂದ ಸಲೀಂ ಚಾಚಾ.
             ವಿನಯಚಂದ್ರ ಮಾತಾಡಲಿಲ್ಲ. `ನಾನು ನಿನಗೆ ಮುಂಜಿ ಮಾಡಿಸಿದ್ದರ ಹಿಂದೆ ಏನಾದರೂ ತಂತ್ರ ಇರಬಹುದೆಂದು ನೀನು ಭಾವಿಸಬಹುದು. ಆದರೆ ಖಂಡಿತ ಹಾಗಿಲ್ಲ ಬೇಟಾ.. ನಿಂಗೆ ಗೊತ್ತಿರಬಹುದು ನಾವು ಈಗ ಎಂತಹ ಅಪಾಯಕರ ಸನ್ನಿವೇಶದಲ್ಲಿ ಇದ್ದೀವಿ ಅಂತ. ಇವತ್ತು ಬೆಳಿಗ್ಗೆ ಖಾದಿರ್ ಮನೆಯ ಟಿವಿಯಲ್ಲಿ ನಿನ್ನ ಪೋಟೋ ನೋಡಿದೆ. ಅಲ್ಲಿ ನೀನು ಕಬ್ಬಡ್ಡಿ ಪಂದ್ಯಾವಳಿ ಗೆದ್ದಿದ್ದು ತೋರಿಸುತ್ತಿದ್ದರು. ಇಂತಹ ವ್ಯಕ್ತಿ ಬಾಂಗ್ಲಾ ದೇಶದಲ್ಲಿ ಕಾಣೆಯಾಗಿದ್ದಾನೆ ಎಂದೂ ಪ್ರಕಟಣೆ ಬರುತ್ತಿತ್ತು. ನೀನು ಯಾವುದಾದರೂ ಅಧಿಕಾರಿಗಳಿಗೆ ಸಿಕ್ಕಿದರೆ ಸಮಸ್ಯೆಯಿಲ್ಲ. ಬದಲಾಗಿ ಯಾರಾದರೂ ಪುಂಡರಿಗೆ, ಹಿಂಸಾಚಾರ ಮಾಡುವವರ ಕೈಗೆ ಸಿಕ್ಕುಬಿದ್ದರೆ ಏನಾಗಬಹುದು ಊಹಿಸು. ನಿನ್ನ ಚಹರೆಯೇನೋ ಮೇಲ್ನೋಟಕ್ಕೆ ಬದಲಾಗಿದೆ. ನೋಡಲಿಕ್ಕೆ ಮುಸಲ್ನಾನನಾಗಿ ಕಾಣುವಂತೆ ವೇಷ ಬದಲು ಮಾಡಲಾಗಿದೆ. ಆದರೆ ಯಾರಿಗಾದರೂ ಖಂಡಿತವಾಗಿ ಅನುಮಾನ ಬರುವುದಿಲ್ಲವಾ.. ಯಾರೋ ಒಬ್ಬನಿಗೆ ಬಂದರೂ ಸಾಕಲ್ಲವಾ? ಒತ್ತೆಯಾಳಾಗಿಯೋ, ಹೆಣವಾಗಿಯೋ ಬಲಿಯಾಗಬೇಕಾಗುತ್ತದೆ...ಈ ಸಮಸ್ಯೆಯನ್ನು ತಪ್ಪಿಸಬೇಕು. ಹಿಂದೂವಾಗಿದ್ದರೆ ಸಮಸ್ಯೆ. ಚಹರೆಯನ್ನು ಬದಲಿಸಿಕೊಂಡರೆ ಆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಕಾರಣಕ್ಕೆ ನಿನಗೆ ಅನಿವಾರ್ಯವಾಗಿ ಸುನ್ನತ್ ಮಾಡಿಸುವ ನಿರ್ಧಾರಕ್ಕೆ ಬಂದೆ. ಬಾಂಗ್ಲಾದೇಶದಲ್ಲಿ ಚಿಕ್ಕ ಚಿಕ್ಕ ಸಂಗತಿಗಳಿಗೂ ಅನುಮಾನ ಪಡುತ್ತಾರೆ ಬೇಟಾ. ಅಂತದ್ದರಲ್ಲಿ ಒಬ್ಬ ಬೆಳೆದ ಮುಸಲ್ಮಾನ, ಮದುವೆಯಾಗಿರುವವನು ಸುನ್ನತ್ ಮಾಡಿಕೊಂಡಿಲ್ಲ ಎಂದರೆ ಸುಮ್ಮನೆ ಬಿಡುತ್ತಾರೆಯೇ? ನಮ್ಮ ಧರ್ಮದಲ್ಲಿ ಸುನ್ನತ್ ಕಡ್ಡಾಯ. ನಿನಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಸುನ್ನತ್ ಮಾಡಿಸಿದ್ದು' ಎಂದ ಸಲೀಂ ಚಾಚಾ
             ಆಗ ಬಾಯ್ತೆರೆದ ವಿನಯಚಂದ್ರ `ಚಾಚಾ.. ಮುಂಜಿ ಮಾಡಿಸಿಕೊಂಡ ಮಾತ್ರಕ್ಕೆ ಸಮಸ್ಯೆ ಬಗೆ ಹರಿದುಬಿಡುತ್ತದೆಯಾ..?' ಕೊಂಚ ಅಸಹನೆಯಿಂದಲೇ ಕೇಳಿದ.
           `ಖಂಡಿತ ಬಗೆ ಹರಿಯುವುದಿಲ್ಲ. ಆದರೆ ಸಮಸ್ಯೆ ಮುಕ್ಕಾಲು ಪಾಲು ಕಡಿಮೆಯಾಗುತ್ತದೆ. ಯಾಕೆ ಗೊತ್ತಾ ಯಾರಿಗಾದರೂ ಒಬ್ಬರಿಗೆ ನಿನ್ನ ಬಗ್ಗೆ ಅನುಮಾನ ಬಂತು ಅಂತಿಟ್ಟುಕೊ, ಅವರು ನಿನ್ನ ಬಳಿ ಹೆಸರು, ವಿಳಾಸ, ಇತ್ಯಾದಿ ಇತ್ಯಾದಿ ಎಲ್ಲ ಕೇಳುತ್ತಾರೆ. ನೀನು ಅದಕ್ಕೆ ಉತ್ತರ ನೀಡಿದರೂ ಆತನಲ್ಲಿ ಅನುಮಾನ ಹಾಗೇ ಉಳಿದುಬಿಡುತ್ತದೆ. ನಿನ್ನ ಹೆಸರನ್ನು ಬದಲಾಯಿಸಿದ್ದರೂ ನೀನು ಮುಸಲ್ಮಾನನೋ ಅಲ್ಲವೋ ಎನ್ನುವ ಪರೀಕ್ಷೆಗೆ ಮುಂದಾಗುತ್ತಾರೆ. ಕೆಲವು ವೇಳೆ ನೀನು ಮುಸಲ್ಮಾನನೋ ಅಲ್ಲವೋ ಅಂತ ಪರೀಕ್ಷೆಗೂ ಮುಂದಾಗಬಹುದು. ಆಗ ನಿನ್ನ ಬಟ್ಟೆ ಬಿಚ್ಚಿಸುತ್ತಾರೆ. ಮುಂಜಿ ಆಗಿದೆಯೋ ಎಂದೂ ಪರೀಕ್ಷೆ ಮಾಡುತ್ತಾರೆ. ಖಂಡಿತವಾಗಿಯೂ ಅವರಿಗೆ ಗೊತ್ತಿದೆ ನಿಮ್ಮ ಹಿಂಧೂಗಳಲ್ಲಿ ನಮ್ಮ ಹಾಗೆ ಮುಂಜಿ ಮಾಡುವುದಿಲ್ಲ ಅಂತ. ಆದರೆ ನಿನಗೆ ಈಗ ಮುಂಜಿ ಮಾಡಿದ್ದರಿಂದ ಅವರ ಅನುಮಾನವೂ ಪರಿಹಾರವಾಗುತ್ತದೆ. ನಿನ್ನ ಸಮಸ್ಯೆ ಬಹುತೇಕ ಕಡಿಮೆಯಾಗುತ್ತದೆ..' ಎಂದ.
             `ಅಂದರೆ ..' ಎಂದ ವಿನಯಚಂದ್ರ `ಅಲ್ಲಾ.. ಆ ರೀತಿ ಪರೀಕ್ಷೆ ಮಾಡುವುದು ಇನ್ನೂ ಜಾರಿಯಲ್ಲಿದೆಯಾ..?'
             `ಹುಂ.. ಹೌದು.. ಬಾಂಗ್ಲಾದಲ್ಲಿದೆ. ಕಾಶ್ಮೀರದಲ್ಲಿಯೂ ಇದೆ. ನಿಮ್ಮ ಕಾಶ್ಮೀರದಲ್ಲಿ ಇದು ಜಾಸ್ತಿ. ಯಾಕಂತೀಯಾ.. ಅಲ್ಲಿ ಭಾರತದ ಗೂಢಚಾರರು ಇರಬಹುದು ಎನ್ನುವ ಭಯವಿರುತ್ತದೆ. ಸೈನಿಕರೋ, ತಲೆಮರೆಸಿ ಬಂದವರೋ ಎಂಬ ಪರೀಕ್ಷೆ ಮಾಡುತ್ತಾರೆ. ಪಾಕಿಸ್ತಾನದಲ್ಲಿರುವ ಕಾಶ್ಮೀರ ಭಾಗದಲ್ಲಿ ಉಗ್ರರ ಶಿಬಿರಗಳಿದ್ದಲ್ಲಿ ಈ ರೀತಿಯ ಪರೀಕ್ಷೆ ಸದಾ ಇದ್ದೇ ಇದೆ. ಉಗ್ರ ತರಬೇತಿಗೆ ಬರುವ ಹೊಸ ಹೊಸ ಯುವಕರನ್ನು ಇದೇ ರೀತಿ ಪರೀಕ್ಷೆ ಮಾಡಿಯೇ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಾರಂತೆ..' ಎಂದ ಸಲೀಂ ಚಾಚಾ.. ವಿನಯಚಂದ್ರನ ಬಾಯಿಂದ ಅರಿವಿಲ್ಲದಂತೆಯೇ `ಛೇ...' ಎಂಬ ಶಬ್ದ ಹೊರಬಿದ್ದಿತ್ತು.
           ಸೈಕಲ್ಲು ಮುಂದಕ್ಕೆ ಸಾಗುತ್ತಲೇ ಇತ್ತು. ಮೇಘಾಲಯದ ಬೆಟ್ಟದ ಕಡೆಯಿಂದ ತೂರಿ ಬರುತ್ತಿದ್ದ ಗಾಳಿ ಪ್ರಯಾಣ ಮಾಡುತ್ತಿದ್ದವರಲ್ಲಿ ಚಳಿಯನ್ನು ಹುಟ್ಟುಹಾಕಿತ್ತು. ಈ ನಡುವೆ ಸೈಕಲ್ಲನ್ನು ವಿನಯಚಂದ್ರ ಚಾಲನೆ ಮಾಡತೊಡಗಿದ್ದ. ಬಾಂಗ್ಲಾ ನಾಡಿನ ಬಯಲು, ಬಯಲ ನಡುವೆ ರಸ್ತೆ.. ರಸ್ತೆಯಲ್ಲಿ ಸಾಗುತ್ತಿರುವ ಸೈಕಲ್. ನಡು ನಡುವೆ ಸಿಗುವ ಒಂದೊಂದೇ ಮನೆಗಳು. ವಿನಯಚಂದ್ರ ಬೆಳಗಿನಿಂದ ಗೊಂದಲದಲ್ಲಿದ್ದರೂ ಈಗ ನಿರಾಳನಾಗಿದ್ದ. ಸಲೀಂ ಚಾಚಾ ಖಂಡಿತ ಮೋಸ ಮಾಡಿಲ್ಲ. ತಮ್ಮ ಒಳ್ಳೆಯದಕ್ಕೇ ಮಾಡಿದ್ದಾನೆ ಎಂದು ಅನ್ನಿಸಿತ್ತು. ಧರ್ಮಾಂತರ ಮಾಡಬಹುದೇನೋ ಎನ್ನುವ ಭಯ ದೂರವಾಗಿತ್ತು. ಮನಸ್ಸು ಖುಷಿಯಿಂದ ಕುಣಿಯಲಾರಂಭಿಸಿತ್ತು.
             ಬೆಳಗಾಗುವ ವೇಳೆಗೆ ಪಾಕುಲ್ಲಾ ತಲುಪಬೇಕು ಎಂದುಕೊಂಡಿದ್ದವರು ಎಷ್ಟು ವೇಗವಾಗಿ ಬಂದಿದ್ದರೆಂದರೆ ಬೇಳಗಾಗಲೂ ಇನ್ನೂ ಎರಡು ಮೂರು ತಾಸುಗಳು ಬಾಕಿ ಇದ್ದವು. ಇದರಿಂದಾಗಿ ಪಾಕುಲ್ಲಾದಿಂದ ಮುಂದಕ್ಕೆ ಪ್ರಯಾಣ ಮಾಡುವುದೇ ಸರಿ ಎಂದುಕೊಂಡರು. ವಿನಯಚಂದ್ರ ಸಲೀಂ ಚಾಚಾನ ಬಳಿ ಚರ್ಚಿಸಿದ. ಪಾಕುಲ್ಲಾದಿಂದ ತಾಂಗೈಲ್ ತಲುಪಬೇಕಿತ್ತು. ಇದಕ್ಕೆ ಎರಡು ಮಾರ್ಗಗಳಿದ್ದವು. ದೇಲ್ದುವಾರ್ ಮೂಲಕ ಸಾಗುವುದೊಂದು ಮಾರ್ಗವಾಗಿದ್ದರೆ ಕರಾಟಿಯಾ ಮೂಲಕ ಸಾಗುವುದು ಇನ್ನೊಂದು ಮಾರ್ಗವಾಗಿತ್ತು. ಕೊನೆಗೆ ಚರ್ಚಿಸಿದ ನಂತರ ಕರಾಟಿಯಾ ಮೂಲಕ ಸಾಗುವುದೇ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದರು. ಬೆಳಗಾಗುವ ವೇಳೆಗೆ ಕರಾಟಿಯಾವನ್ನು ತಲುಪಲೇಬೇಕು ಎನ್ನುವ ನಿರ್ಧಾರವನ್ನೂ ಮಾಡಿಕೊಂಡರು. ವಿನಯಚಂದ್ರ ಸೈಕಲ್ ತುಳಿಯಲಾರಂಭಿಸಿದ.

(ಮುಂದುವರಿಯುತ್ತದೆ)

Wednesday, September 24, 2014

ಭಗವಂತ ಹಾಗೂ ಸಕಲಕಲಾ ವಲ್ಲಭ

                ನಾನು ಈ ಎರಡು ವಿಷಯಗಳ ಬಗ್ಗೆ ಹೇಳಲೇಬೇಕು. ಭಗವಂತ ಹಾಗೂ ಸಕಲಕಲವಾ ವಲ್ಲಭ ಎಂಬುದನ್ನು ನೋಡಿ ಇದೇನಿದು ಎಂದುಕೊಳ್ಳಬೇಡಿ. ಇದು ಇಬ್ಬರ ಹೆಸರು. ಒಬ್ಬ ಮಹಾನುಭಾವರಿಗೆ ಹುಟ್ಟಿದ ತಕ್ಷಣ ಇಟ್ಟ ಹೆಸರು ಭಗವಂತ ಎಂಬುದಾದರೆ ಇನ್ನೊಬ್ಬ ಮಹಾಶಯನಿಗೆ ನಾವಿಟ್ಟ ಹೆಸರು ಸಕಲಕಲಾ ವಲ್ಲಭ ಎಂಬುದು. ಈ ಇಬ್ಬರ ಬಗ್ಗೆ ಬಹು ದಿನಗಳ ಹಿಂದೆಯೇ ಹೇಳಬೇಕು ಎಂದುಕೊಂಡೆ. ಕಾರಣಾಂತರಗಳಿಂದ ಆಗಿರಲಿಲ್ಲ ನೋಡಿ.
                ಭಗವಂತನ ಬಗ್ಗೆ ಮೊದಲು ಹೇಳಿಬಿಡುತ್ತೇನೆ. ಈ ಭಗವಂತನಿದ್ದಾನಲ್ಲ ಹಾಗೆಂದರೆ ದೇವರ ಬಗ್ಗೆ ಹೇಳುತ್ತಿದ್ದೇನೆ ಎಂದು ಖಂಡಿತ ಅಂದುಕೊಳ್ಳಬೇಡಿ. ಭಗವಂತ ಇದು ಒಬ್ಬ ವ್ಯಕ್ತಿಯ ನಾಮಧೇಯ. ಅದ್ಯಾರು ಆತನ ಮಾತಾ ಪಿತರಿಗೆ ಐಡಿಯಾ ಕೊಟ್ಟರೋ ಮಗನ ಭಗವಂತನ ಸಮಾನ ಆಗಲಿ ಎಂದುಕೊಂಡರೋ ಏನೋ ಭಗವಂತ ಎಂದು ಹೆಸರಿಟ್ಟರು. ಮಗ ಹಾಗೆ ಆಗಲಿ ಹೀಗೆ ಆಗಲಿ ಎಂದು ಅವರು ಅಂದುಕೊಂಡಿದ್ದಿರಬಹುದು. ಆದರೆ ಭಗವಂತ ಆಗಿದ್ದು ಮಾತ್ರ ಮಟ್ಕಾದಲ್ಲಿ ಹೆಸರುವಾಸಿಯಾದ ಆಟಗಾರ. ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಆತ ನನ್ನ ದೊಡ್ಡಪ್ಪನ ಮನೆಗೆ ಬರುತ್ತಿದ್ದ. ವಯಸ್ಸು ಆ ದಿನಗಳಲ್ಲಿ 80ರ ಆಜುಬಾಜು ಇರಬೇಕು.  ಲಟೂರಿ ಸೈಕಲ್ ಹತ್ತಿಕೊಂಡು ವಾರಕ್ಕೆ ಮೂರು ಬಾರಿಯೋ ನಾಲ್ಕು ಬಾರಿಯೋ ಬರುತ್ತಿದ್ದ. ಆತನನ್ನು ನೋಡಿದರೆ ಸೈಕಲ್ ತುಳಿಯುವ ಶಕ್ತಿಯಿದೆಯಾ ಎನ್ನುವ ಅನುಮಾನ ಮೂಡುವುದು ಖಂಡಿತ. ಆದರೆ ಆತ ಮಾತ್ರ ಭಕ್ತಿಯಿಂದ ಬರುತ್ತಿದ್ದ. ಖುಷಿಯಿಂದ ಮಾತಾಡುತ್ತಿದ್ದ. `ಈ ಹುಡ್ಗ ಬಹಳ ಓದ್ಕತ್ತಾನೆ..' ಎನ್ನುವ ಪ್ರಶಂಸೆ ನನ್ನ ಮೇಲೆ.
         ಆ ದಿನಗಳಲ್ಲಿ ನನ್ನ ದೊಡ್ಡಪ್ಪ ಬಹಳ ಮಟ್ಕಾ ಆಡುತ್ತಿದ್ದ. ಭಗವಂತ ಹಾಗೂ ದೊಡ್ಡಪ್ಪ ಸೇರು ಅದೇನೋ ಲೆಕ್ಕಾಚಾರ ಮಾಡಿ ಓಸಿಯ ಅಂಕಿಸಂಖ್ಯೆಗಳನ್ನು ಹೆಕ್ಕಿ ತೆಗೆಯುತ್ತಿದ್ದರು. ನಾನು ಹಾಗೂ ನನ್ನ ಅಣ್ಣ ಅದನ್ನು ಸಂಖ್ಯಾಶಾಸ್ತ್ರ ಎಂದು ಕರೆಯುತ್ತಿದ್ದೆವು. ದೊಡ್ಡಪ್ಪ ಹಾಗೂ ಭಗವಂತ ಇಬ್ಬರೂ ಪಟ್ಟಾಗಿ ಕುಳಿತು ಮಟ್ಕಾ ಸಂಖ್ಯೆಗಳನ್ನು ಹೆಕ್ಕಿ ಹೆಕ್ಕಿ ಹುಡುಕುತ್ತ, ಅದೇನೋ ಸುಂದರ ವಿನ್ಯಾಸದಲ್ಲಿ ಪಿರಾಮಿಡ್ ಉಲ್ಟಾ ಇಟ್ಟಾಗ ಹೇಗೆ ಇರುತ್ತದೆಯೋ ಆ ರೀತಿಯಲ್ಲಿ ಬರೆಯುತ್ತ ಕುಳಿತಿದ್ದಾಗ ಕಳೆದ ಜನ್ಮದಲ್ಲಿ ಇಬ್ಬರೂ ಕಾಮರ್ಸ್ ವಿದ್ಯಾರ್ಥಿಗಳಾಗಿದ್ದರೆಂದೂ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಮೂರ್ನಾಲ್ಕು ಪಿ.ಎಚ್.ಡಿ. ಗಳಿಸಿಕೊಂಡಿದ್ದಾರೆಂದೂ ಅಂದುಕೊಳ್ಳುತ್ತಿದ್ದೆವು.
          ಇಂತಹ ಭಗವಂತನ ಬಳಿ ನಾನು ಅನೇಕ ಸಾರಿ ನಿಂಗ್ಯಾಕೆ ಭಗವಂತ ಅಂತ ಹೆಸರಿಟ್ಟಿದ್ದಾರೆ ಎಂದು ಕೇಳಿದ್ದೆ. ಆಗ ಅದಕ್ಕೆ ಆತನ ಬೊಚ್ಚು ಬಾಯಿಯ ನಗೆಯೇ ನನಗೆ ಉತ್ತರವಾಗುತ್ತಿತ್ತೇ ಹೊರತು ಭಗವಂತ ಎಂಬುದು ನೈಜ ನಾಮಧೇಯವೇ, ಅಡ್ಡ ಹೆಸರೇ ಎಂಬುದೂ ತಿಳಿಯುತ್ತಿರಲಿಲ್ಲ. ಹೀಗಿದ್ದ ಭಗವಂತ ಥೇಟು ನಮ್ಮ ಬೇಂದ್ರೆ ಅಜ್ಜನಂತೆ ಇದ್ದ. ಯಾವುದೋ ಆಂಗಲ್ಲಿನಲ್ಲಿ ವರಕವಿಗಳನ್ನು ಹೋಲುತ್ತಿದ್ದ ಭಗವಂತನ ಬಳಿ ನಾನು ಅನೇಕ ಸಾರಿ ಹೀಗೆ ಹೇಳಿದ್ದಿದೆ. ಆತ ಮಾತ್ರ ಬೇಂದ್ರೆ ಎಂದರೆ ಯಾರು ಎಂದು ಕೇಳುತ್ತಿದ್ದ. ಇಂತಹ ಭಗವಂತ ಬೇಂದ್ರೆ ಅಜ್ಜನ ಕುರುಡು ಕಾಂಚಾಣ, ನಾಕು ತಂತಿ ಈ ಮುಂತಾದ ಹಾಡುಗಳನ್ನು ಎಷ್ಟು ಚಂದಾಗಿ ಹಾಡುತ್ತಿದ್ದನೆಂದರೆ ಆಹ್... ಸಮಯ ಹರಿಯುತ್ತಿದ್ದುದು ಗೊತ್ತಾಗುತ್ತಿರಲಿಲ್ಲ. ಆತ ಹೀಗೆ ಹೇಳಿದಾಗಲೆಲ್ಲ ನಾನು `ಭಗವಂತಾ.. ನೀ ಹಾಡ್ತಾ ಇದ್ದೀಯಲ್ಲ.. ಈ ಹಾಡುಗಳನ್ನು ಬರೆದಿದ್ದು ಅದೇ ಬೇಂದ್ರೆ ಅಜ್ಜ..' ಎಂದಾಗ ಹೌದಾ.. ಎಂದು ಕಣ್ಣಗಲಿಸುತ್ತಿದ್ದ.
          ಮೊನ್ನೆ ದೊಡ್ಡಪ್ಪನ ಮನೆಗೆ ಹೋಗಿದ್ದೆ. ಯಾಕೋ ಭಗವಂತ ತುಂಬ ನೆನಪಾದ. ದೊಡ್ಡಪ್ಪನ ಬಳಿ ಭಗವಂತನ ವಿಷಯ ಕೇಳಿದೆ. ಆಗ ದೊಡ್ಡಪ್ಪ.. `ಹೋಗಾ.. ಈಗೆಲ್ಲ ಮಟ್ಕಾ ಬಿಟ್ಟುಬಿಟ್ಟಿದ್ದಾರೆ. ಭಗವಂತ ನೀನು ಹೈಸ್ಕೂಲು ಓದುತ್ತಿದ್ದ ಸಂದರ್ಭದಲ್ಲಿ ಬಂದಿದ್ದೇ ಕೊನೆ. ಆಮೇಲೆ ಇತ್ತ ಮುಖ ಹಾಕಿಲ್ಲ.. ವಯಸ್ಸಾಗಿದೆ. ಇನ್ನೂ ಜೀವಂತ ಇದ್ದಾನೆ. ಮನೆಯ ಹತ್ತಿರ ನಡೆದುಕೊಂಡು ಹೋಗಿಬಂದು ಮಾಡುತ್ತಿರುತ್ತಾನೆ. ಒಂದು ಕಣ್ಣು ಪೂರ್ತಿ ಕುರುಡಾಗಿ ಬೆಳ್ಳಗಾಗಿದೆ. 90 ವರ್ಷ ಆಯ್ತಲ್ಲ..' ಎಂದ. `ಹಂಗಾದ್ರೆ ಭಗವಂತ ಸೆಂಚೂರಿ ಸ್ಟಾರ್ ಆಗ್ತಾನಾ?' ಎಂದೆ. `ಹೋ.. ಖಂಡಿತ.. ಎಷ್ಟಂದ್ರೂ ಅಂವ ಭಗವಂತ ಅಲ್ಲವಾ..' ಎಂದು ಕಣ್ಣುಮಿಟುಕಿಸಿದರು.
           ಭಗವಂತನಷ್ಟೇ ವಿಶೇಷವಾಗಿ ನನಗೆ ಸೆಳೆದಿದ್ದೇ ಸಕಲಕಲಾ ವಲ್ಲಭ. ಇತ್ತೀಚೆಗೆ ಪರಿಚಯದವರ ಮನೆಯ ಮದುವೆಗೆ ಹೋಗಿದ್ದೆ. ಬಹು ವರ್ಷಗಳ ನಂತರ ಅಂವ ಸಿಕ್ಕಿದ್ದ. ಅವನನ್ನು ನೋಡದೇ ಮಾತಾಡಿ, ತಮಾಷೆ ಮಾಡದೇ ಐದಾರು ವರ್ಷಗಳೇ ಕಳೆದು ಹೋಗಿತ್ತೇನೋ. ಎದುರಿಗೆ ಕಂಡವನೇ ಭರತನಾಟ್ಯದ ಸ್ಟೈಲಿನಲ್ಲಿ ತಲೆಯನ್ನು ಕುಣಿಸುತ್ತ... `ಏನೋ.. ಅರಾಮನೋ.. ಏನ್ ಮಾಡ್ತಾ ಇದ್ಯೋ.. ಕಾಣಲಿಕ್ಕೇ ಇಲ್ಲವಲ್ಲೋ...' ಎಂದ.. ಈ ಪುಣ್ಯಾತ್ಮ ಹಾಗೇ ಇದ್ದಾನೆ ಒಂದು ಚೂರೂ ಬದಲಾಗಿಲ್ಲವಲ್ಲ ಎಂದುಕೊಂಡೆ ನಾನು.
                ಸಕಲಕಲಾವಲ್ಲಭ ಎಂದು ನಮ್ಮ ಕೈಲಿ ಕರೆಸಿಕೊಳ್ಳುತ್ತಿದ್ದ ಆತ ನನಗೆ ಬಹಳ ಹಳೆಯ ಕಾಲದಿಂದ ಪರಿಚಯ. ದಶಕಗಳ ಹಿಂದಿನಿಂದಲೂ ನಾನು ಅವನನ್ನು ನೋಡುತ್ತ ಬಂದಿದ್ದೇನೆ. ನಾನು ಮೊದಲ ಸಾರಿ ನೋಡಿದಾಗ ಹೇಗಿದ್ದನೋ ಈಗಲೂ ಹಾಗೆಯೇ ಇದ್ದಾನೆ. ಆ ವಿಷಯದಲ್ಲಿ ಮಾತ್ರ ನಾನು ಅನೇಕ ಸಾರಿ ಬೆರಗು ಪಟ್ಟಿದ್ದಿದೆ. ದೈಹಿಕವಾಗಿ ಸ್ವಲ್ಪ ಬದಲಾಗಿದ್ದು ಬಿಟ್ಟರೆ ಹಾವ-ಭಾವ, ಚಹರೆ, ಬಣ್ಣ, ಮಾತು, ನಗು ಎಲ್ಲ ಮೊದಲಿನಂತೆಯೇ ಇದ್ದಿದ್ದು ವಿಶೇಷ.
                ನಿಮಗೆ ಹೆಚ್ಚಿಗೆ ಹೇಳುವ ಮುನ್ನ ಸಕಲಕಲಾ ವಲ್ಲಭನ ಬಗ್ಗೆ ನಾನು ಮೊದಲೇ ತಿಳಿಸಿಬಿಡುತ್ತೇನೆ. ಸಕಲಕಲಾ ವಲ್ಲಭ, ಭರತನಾಟ್ಯ ಕಲಾ ಪ್ರವೀಣ ಎಂದು ಆತನಿಗೆ ಹೆಸರಿಟ್ಟವರು ನಾವೇ. ಹೀಗೆ ಆತನನ್ನು ನಾವು ಕರೆಯುವುದಕ್ಕೂ ಪ್ರಮುಖ ಕಾರಣಗಳಿವೆ. ಹೇಳಿದೆನಲ್ಲ ನನಗೆ ಅವನ ಪರಿಚಯ ಆಗಿದ್ದು ದಶಕಗಳ ಹಿಂದೆ ಅಂತ. ನಾನು ಅವನನ್ನು ನೋಡಿದಾಗ ನನಗಿನ್ನೂ ಹೈಸ್ಕೂಲು ವಿದ್ಯಾರ್ಥಿಯ ವಯಸ್ಸಿರಬೇಕು. ಅಂದರೆ ಹುರುಪಿನ ಹರೆಯದ ಕಾಲ. ಯಾರೇ ಕಂಡರೂ ಅವರಲ್ಲಿನ ದೋಷಗಳನ್ನು ಎತ್ತಿ ಹೇಳುತ್ತ, ನಾನೇ ಸರಿ, ಉಳಿದವರಲ್ಲೆಲ್ಲ ದೋಷವಿದೆ ಎಂದುಕೊಳ್ಳುತ್ತಿದ್ದ ಕಾಲ. ನನ್ನ ಮನಸ್ಥಿತಿಗೆ ತಕ್ಕಂತೆ ನನ್ನ ಅಣ್ಣನೂ ಸಿಕ್ಕಿಬಿಟ್ಟಿದ್ದ. ನಾನು-ಅಣ್ಣ ಸೇರಿಕೊಂಡು ಕಂಡ ಕಂಡವರಿಗೆಲ್ಲ ಹೆಸರಿಡುತ್ತ, ಅವರಲ್ಲಿನ ದೋಷಗಳನ್ನು ಆಡಿಕೊಳ್ಳುತ್ತ ಚನ್ನಾಗಿ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದುದು ಸುಳ್ಳಲ್ಲ. ನಮ್ಮ ಬಾಯಿಗೆ ಆಗ ಸಿಕ್ಕವನೇ ಈ ಸಕಲಕಲಾ ವಲ್ಲಭ ಉರುಫ್ ಭರತನಾಟ್ಯ ಕಲಾ ಪ್ರವೀಣ. ನಾವಿಟ್ಟ ಹೆಸರು ಅದ್ಹೇಗೋ ಊರಿನ ತುಂಬ ಹರಡಿ ಆತನ ನಿಜ ಹೆಸರು ಮರೆತು ನಾವಿಟ್ಟ ಹೆಸರಿನಿಮದಲೇ ಎಲ್ಲ ಕರೆಯತೊಡಗಿದ್ದು ವಿಶೇಷವಾಗಿತ್ತು
             ಆತನ ಬಳಿಯಿದ್ದ ಲೂನಾ ಎಂದಿಗೂ ಮರೆಯದ ಜೊತೆಗಾರ. ಲೂನಾ ಜೊತೆಗೆ ಟರ್ರೆಂದು ಸಾಗುತ್ತಿದ್ದರೆ ಊರು ತುಂಬ ಮೊಳಗುತ್ತಿತ್ತು. ಮನೆಯಿಂದ ಲೂನಾ ಚಾಲೂ ಮಾಡಿದರೆ ಸಾಕು ಸಕಲಕಲಾ ವಲ್ಲಭನ ಸವಾರಿ ಎತ್ತಲೋ ಹೊರಟಿದೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಲೂನಾ ಸದ್ದಿಗೆ ಬೆದರಿ ಕಿವಿಗೆ ಹತ್ತಿಯನ್ನು ತೂರಿಕೊಳ್ಳುತ್ತಿದ್ದರು. ನಾನಿದ್ದ ಆ ಊರಿನಲ್ಲಿ ರೈಲ್ವೆ ಹಳಿಯಿತ್ತು. ದಿನಕ್ಕೆರಡು ಬಾರಿ ರೈಲು ಕೂಡ ಬಂದು ಹೋಗುತ್ತಿತ್ತು. ಸಕಲಕಲಾವಲ್ಲಭನ ಲೂನಾದ ಶಬ್ದ ರೈಲಿನ ಕೂ.. ಕೂಗನ್ನೂ ಮೀರಿಸುವಂತಿತ್ತು. ಹಲವರು ಈ ಲೂನಾ ಸದ್ದಿಗೆ ಬೆಚ್ಚಿ ಬೆರಗಿನಿಂದ ಕಣ್ಣಗಲಿಸಿ ನೋಡುತ್ತಿದ್ದರು. ಅದರಲ್ಲಿ ನನ್ನ ದೊಡ್ಡಪ್ಪನ ಮನೆಯ ಎಮ್ಮೆಯೂ ಒಂದು.
             ಇಂತಹ ವ್ಯಕ್ತಿಗೆ ಭರತನಾಟ್ಯ ಕಲಾ ಪ್ರವೀಣ ಎನ್ನುವುದರ ಹಿಂದೆಯೂ ಮಜವಾದ ಕತೆಯಿದೆ. ಅದ್ಯಾಕೋ ಗೊತ್ತಿಲ್ಲ ಪಾ..ಪ ಆತ ಮಾತನಾಡುವಾಗವಿರಲಿ ಅಥವಾ ಸುಮ್ಮನಿದ್ದಾಗಲೇ ಇರಲಿ ತಲೆ ಕುಣಿಸುತ್ತಿದ್ದ. ಆತನೇ ಕುಣಿಸುತ್ತಿದ್ದನೋ ಅಥವಾ ಅರಿವಿಲ್ಲದಂತೆ ತಲೆಯೇ ಕುಣಿದುಬಿಡುತ್ತಿತ್ತೋ ನನಗೆ ಗೊತ್ತಿಲ್ಲ. ಆದರೆ ಆತನನ್ನು ನೋಡಿದ ನಮಗಂತೂ ಬಹಳ ತಮಾಷೆಯೆನ್ನಿಸುತ್ತಿತ್ತು. ನಮ್ಮಲ್ಲಿ ನಗು ಉಕ್ಕುತ್ತಿದ್ದರೂ ಕಷ್ಟಪಟ್ಟು ಅದನ್ನು ತಡೆದುಕೊಳ್ಳುತ್ತಿದ್ದೆವು. ಆತ ಹೊರಟುಹೋದ ನಂತರ ಬಿದ್ದು ಬಿದ್ದು ನಗುತ್ತಿದ್ದೆವು.
           ಇಂತಹ ಸಕಲಕಲಾವಲ್ಲಭನ ಇನ್ನೊಂದು ಗುಣ ಎಂದರೆ ಅದು ವಾಚಾಳಿತನ.  ವಾಚಾಳಿತನವೆಂದರೆ ಯಾವರೀತಿ ಅಂತೀರಿ.. ಥೋ.. ಥೋ.. ಮಾತು ಶುರುಮಾಡಿದ ಅಂದರೆ ಸರಪಟಾಕಿಯ ಚೀಲಕ್ಕೇ ಬೆಂಕಿ ಕೊಟ್ಟಂತೆ. ಮಾತಿನ ಭರದಲ್ಲಿ ಏನೇನು ಹೇಳುತ್ತಾನೆ ಎನ್ನುವುದು ಆತನಿಗೆ ಬಹುಶಃ ಅರಿವೇ ಇರುವುದಿಲ್ಲವೇನೋ. ಹೀಗೆ ಮಾತನಾಡುತ್ತಿದ್ದಾಗ ನಮ್ಮ ಬಳಿ ಆತ `ಮನಮೋಹನ ಸಿಂಗ್ ಎಂತಾ ಚಂದ ಮಾತಾಡ್ತಾರಲ್ಲಾ.. ಮನಮೋಹನ ಸಿಂಗ್ ಮಾತಾಡಲಿಕ್ಕೆ ಶುರು ಮಾಡಿದರೆಂದರೆ ಅದಕ್ಕೆ ಬ್ರೆಕೇ ಇಲ್ಲ...' ಎಂದು ಬಿಟ್ಟಿದ್ದ.. ಆ ದಿನ ಅವನ ಮಾತು ಕೇಳಿ ನಮಗೆ ಬಂದ ನಗು ಒಂದು ವಾರಗಳ ಕಾಲವಾದರೂ ಮರುಕಳಿಸುತ್ತಲೇ ಇತ್ತು. ಹೆಸರಾಂತ ಬರಹಗಾರರು, ಕವಿಗಳು, ಲೇಖಕರ ಕುರಿತು ಮಾತನಾಡುತ್ತಿದ್ದ ಈ ವಲ್ಲಭ ಅವರು ತನ್ನ ಬಾಲ್ಯ ಸ್ನೇಹಿತ ಎಂದೋ, ಕ್ಲಾಸ್ ಮೇಟ್ ಎಂದೋ, ಡಿಗ್ರಿಯಲ್ಲಿ ಹಾಸ್ಟೆಲ್ ನಲ್ಲಿ ಒಟ್ಟಿಗೇ ಇದ್ದವರೆಂದೋ ಹೇಳುತ್ತಿದ್ದ. ನಾವಂತೂ ಬಹಳ ಎಂಜಾಯ್ ಮಾಡುತ್ತಿದ್ದೆವು. ಆಗ ಸಿಕ್ಕಾಪಟ್ಟೆ ಓಡುತ್ತಿದ್ದ ಟ್ಯಾಬ್ಲಾಯ್ಡ್ ಪತ್ರಿಕೆಗಳು ನಮ್ಮನ್ನು ಬಹಳ ಆಕರ್ಷಿಸಿದ್ದವು. ಆ ಕಪ್ಪು ಬಿಳುಪಿನ ಸುಂದರಿ ತನ್ನ ವಿಶಿಷ್ಟ ಬಗೆಯಿಂದ ಎಲ್ಲರನ್ನು ಸೆಳೆದಿತ್ತು. ಈಗ ಅದೊಂಥರಾ ತಣ್ಣಗಾಗಿರುವ ನಕ್ಷತ್ರ.. ಬಿಡಿ ಅದನ್ನ.. ಆ ಪತ್ರಿಕೆಯ ಸಂಪಾದಕರ ಬಗ್ಗೆಯೂ ಈತ ಪುಂಖಾನುಪುಂಖವಾಗಿ ಹೇಳಿದ್ದ. ಆ ಸಂಪಾದಕರು ತಮ್ಮ ನೆಗೆ ಬಂದಿದ್ದರು ಹಾಗೆ ಹೀಗೆ ಎಲ್ಲ ಅಂದಿದ್ದ.. ನಾವು ಯಥಾ ಪ್ರಕಾರ ನಕ್ಕು ಸುಮ್ಮನಾಗಿದ್ದೆವು.
           ಆ ನಂತರ ನಾನು ಹುಬ್ಬಳ್ಳಿ-ಧಾರವಾಡದ ಯುನಿವರ್ಸಿಟಿಗೆ ಹೋದಾಗ ಅಲ್ಲೆಲ್ಲೋ ಒಂದು ರೂಮಿನಲ್ಲಿ ಸಕಲಕಲಾವಲ್ಲಭ ಹೇಳಿದ ಎಲ್ಲ ಮಾಹಿತಿಗಳೂ ಲಭ್ಯವಾದವು. ಆ ಹೆಸರಾಂತ ಟ್ಯಾಬ್ಲಾಯ್ಡಿನ ಸಂಪಾದಕರ ಪರಾಕ್ರಮಗಳೆಲ್ಲ ಸಿಕ್ಕವು. ಆಗಲೇ ನನಗನ್ನಿಸಿದ್ದೆಂದರೆ ಸಕಲಕಲಾವಲ್ಲಭ ಹೇಳಿದ್ದೆಲ್ಲವೂ ಸುಳ್ಳಲ್ಲ. ಕೆಲವು ಸತ್ಯವೂ ಇದೆ ಎಂಬುದು.
           ಇಂತಹ ಸಕಲಕಲಾವಲ್ಲಭ ಮೊನ್ನೆ ಮೊನ್ನೆ ಸಂಬಂಧಿಕರ ಮದುವೆಯಲ್ಲಿ ಸಿಕ್ಕಿದ್ದ. ನಾನು ಸಂಬಂಧಿಕರ ಮದುವೆಯ ಕಾರಣ ತಯಾರಿ ಅದು ಇದೂ ಅಂತ ಒಂದೆರಡು ದಿನ ಮೊದಲೇ ಹೋಗಿದ್ದೆ. ಆತನೂ ತಯಾರಿಗೆ ಬಂದಿದ್ದ. ನನ್ನ ಅಣ್ಣ ಅವನ ಬಳಿ ಹೋಗಿ ನನ್ನ ಬಗ್ಗೆ ಹೇಳಿ ಇಬ್ಬರೂ ಸೇರಿ ಕೆಲಸ ಮಾಡ್ರಪ್ಪಾ ಅಂತ ಜವಾಬ್ದಾರಿ ಹೊರಿಸಿಬಿಟ್ಟಿದ್ದ. ಅಲ್ಲಿಂದ ಶುರುವಾಗಿತ್ತು ನನ್ನ ಪೀಕಲಾಟ.
          ಅದೊಂದು ಕಾರಣಕ್ಕೆ ನನಗೆ ಅಣ್ಣನ ಮನೆಯಿಂದ 10-12 ಕಿ.ಮಿ ದೂರವೇ ಇರುವ ಪಟ್ಟಣಕ್ಕೆ ಹೋಗಿ ಅದೇನೇನೋ ವಸ್ತುಗಳನ್ನು ತರಬೇಕಿತ್ತು. ಅಣ್ಣ ನನಗೆ ಕೆಲಸ ವಹಿಸಿದ್ದ. ಜೊತೆಗೆ ಸಕಲಕಲಾ ವಲ್ಲಭನನ್ನು ಕರೆದುಕೊಂಡು ಹೋಗು ಅಂದಿದ್ದ. ತಥ್ ಎಂದುಕೊಂಡೆನಾದರೂ ನಾನು ನನ್ನ ಪಲ್ಸರ್ ನ ಕಿವಿ ಹಿಂಡಿದ್ದೆ. ಅಷ್ಟರಲ್ಲಿ ಸಕಲಕಲಾವಲ್ಲಭ ತನ್ನ ಹೊಸ ಬೈಕನ್ನು ತೆಗೆದುಕೊಂಡು ಬಂದ. ನಾನು ನನ್ನ ಗಾಡಿಯಲ್ಲಿ ಹೋಗೋಣ ಎಂದೆ. ಆತ ಪಟ್ಟು ಬಿಡದೇ ಅವನ ಗಾಡಿಯಲ್ಲಿ ನನ್ನನ್ನು ಕುಳ್ಳಿರಿಸಿಕೊಂಡ. ನಾಣು ಕುಳಿತೆ. ಕುಳಿತ ತಕ್ಷಣ `ತಮಾ.. ಗಟ್ಟಿ ಹಿಡಿದುಕೊ..' ಎಂದ. ನಾನು ಹುಂದೆ. ಮುಂದೇನೋ ಶೋ ಇದೆ ಎಂದುಕೊಂಡೆ. ಅದಕ್ಕೆ ತಕ್ಕಂತೆ ಗಾಡಿ ಚಾಲೂ ಮಾಡಿದವನೇ ಒಂದು ಸಾರಿ ಬೈಕನ್ನು ರೋಂಯ್...ಎಂದು ಕೂಗಿಸಿದ. ನಾನೂ ವೇಗವಾಗಿ ಬೈಕ್ ಚಾಲನೆ ಮಾಡ್ತೀನಾದರೂ ತೀರಾ ವೀಲಿಂಗು ಇತ್ಯಾದಿ ಇತ್ಯಾದಿಯೆಲ್ಲ ನನಗೆ ಗೊತ್ತಿಲ್ಲ. ಇಂವ ಬೇರೆ ಎಕ್ಸಲರೇಟರ್ ಹೈ ಮಾಡಿ ಗಾಡಿಯನ್ನು ಕೂಗಿಸುತ್ತಿದ್ದಾನೆ. ದೇವರೆ ಏನಪ್ಪಾ ಗತಿ ಎಂದುಕೊಂಡು ಗಟ್ಟಿಯಾಗಿ ಬೈಕ್ ಹಿಡಿದು ಕುಳಿತೆ.
          ಶುರುವಾಯಿತು ನೋಡಿ ಪಯಣ. 15-20-25 ಕಿ.ಮಿ ವೇಗ. ಮೂರ್ನಾಲ್ಕು ಕಿ.ಮಿ ದೂರ ಬಂದರೂ ಗಾಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತಾದರೂ ವೇಗ ಮಾತ್ರ 25ನ್ನು ದಾಟಿ ಹೋಗುತ್ತಿರಲಿಲ್ಲ. ನಂಗ್ಯಾಕೋ ಅನುಮಾನ. `ಗಾಡಿ ಸಮಾ ಇದೆಯಾ..' ಎಂದು ಕೇಳಿದೆ. `ಹೋ .. ಹೊಸ ಗಾಡಿ.. ಸಮಾ ಇದೆಯಾ ಎಂದು ಕೇಳ್ತೀಯಲ್ಲ ಮಾರಾಯಾ..' ಎಂದ ಆತ. ನಾನು ಸುಮ್ಮನಾದೆ. ಮತ್ತೊಂದಷ್ಟು ದೂರ ಹೋದ ನಂತರ ನನಗೆ ಅನುಮಾನ ಬಂದು `ನೀ ಇನ್ನೂ ಎರಡನೇ ಗೇರ್ ನಲ್ಲೇ ಇದ್ದೀಯ ಅನ್ನಿಸುತ್ತದೆ.. ನಿನ್ನ ಗಾಡಿಗೆ ಇನ್ನೂ ಎರಡು ಗೇರ್ ಗಳಿವೆ. ಹಾಕು ಮಾರಾಯಾ..' ಅಂದೆ. `ಥೋ.. ಥೋ.. ಹಂಗೇನಿಲ್ಲ.. ನಾನೇ ಬೇಕು ಅಂತಲೇ ಹೀಗೆ ಹೊಡೀತಾ ಇದ್ದೇನೆ. ನೀನು ಸುಮ್ಮನಿರು..' ಎಂದನಾದರೂ ಮತ್ತೊಂದು ಗೇರನ್ನು ಹಾಕಿದ. ನಾನು ನಿಟ್ಟುಸಿರು ಬಿಟ್ಟೆ. ಕಷ್ಟಪಟ್ಟು ಆತನ ಬಳಿ ಗಲಾಟೆ ಮಾಡಿ ಬಾಕಿ ಇದ್ದ ಇನ್ನೂ ಒಂದು ಗೇರನ್ನು ಹಾಕಿಸಿದೆ.  ಬೈಕು 30 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು. ಸಕಲಕಲಾವಲ್ಲಭ ಅಂದ `ಗಟ್ಟಿ ಹೊಡ್ಕೋ.. ನಾನು ಸಿಕ್ಕಾಫಟ್ಟೆ ಫಾಸ್ಟಾಗಿ ಹೋಗ್ತಾ ಇದ್ದೀನಿ.. ಇದು ನನ್ನ ಹೈಸ್ಪೀಡು..' ಅಂದ. ನಾನು ಪೆಚ್ಚಾದೆ.
         10-12 ಕಿಮಿ ದೂರದವನ್ನು ಆ ಪುಣ್ಯಾತ್ಮ ಒಂದು ತಾಸಿನಲ್ಲಿ ಮುಟ್ಟಿದಾಗ ಮಾತ್ರ ನನಗೆ ರೇಗಿ ಹೋಗಿತ್ತು. `ನಾನು ಬೈಕ್ ಹೊಡೆಯುತ್ತೇನೆ. ನೀನು ಕೂತಿರು ಹಿಂದೆ..' ಎಂದೆ. ಅದಕ್ಕಾತ ಸುತಾರಾಂ ಒಪ್ಪಲಿಲ್ಲ. ಇದೊಳ್ಳೆ ವಿಚಿತ್ರವಾಯಿತಲ್ಲ ತಥ್. ಎಂತಾ ಪೀಕಲಾಟ ಮಾರಾಯ್ರೆ ಎಂದುಕೊಂಡೆ. ಮತ್ತೊಮ್ಮೆ ಆ ಪುಣ್ಯಾತ್ಮನ ಜೊತೆಗೆ ಕುಳಿತುಕೊಂಡು ಬಂದೆ. ಬಂದು ತಕ್ಷಣವೇ ಅಣ್ಣನ ಬಳಿ ನಡೆದ ಎಲ್ಲ ವಿಷಯವನ್ನೂ ಹೇಳಿದೆ. ನಾನು ಬರುತ್ತಿದ್ದಂತೆಯೇ ನನ್ನ ಪಾಡು ನೋಡಿ ನಗಲಾರಂಭಿಸಿದ ಅಣ್ಣ ನನ್ನ ಕಥೆ ಕೇಳಿ ಸಿಕ್ಕಾಪಟ್ಟೆ ನಗಲಾರಂಭಿಸಿದ. ಸಕಲಕಲಾವಲ್ಲಭ ಸ್ವಲ್ಪ ದೂರಕ್ಕೆ ಹೋದ ತಕ್ಷಣವೇ `ಆತ ಬೈಕ್ ಹೆಂಗೆ ಹೊಡೀತಾನೆ ಅನ್ನೋದನ್ನು ನಿಂಗೆ ತೋರಿಸಬೇಕು ಅಂತಾನೇ ಈ ಜಾಲಿ ರೈಡ್ ಮಾಡಿಸಿದ್ದು..' ಎಂದ.
         `ಜಾಲಿರೈಡ್ ಮನೆ ಹಾಳಾಗಾ.. ನಾನು ಬೈಕ್ ಹೊಡಿತೇನೆ ಕೊಡೋ ಮಾರಾಯಾ ಅಂದ್ರೂ ಕೊಡಲಿಲ್ಲ,. ಇನ್ನು ಇವನ ಜೊತೆ ಎಲ್ಲೂ ಹೋಗೋದಿಲ್ಲ ಮಾರಾಯಾ..' ಎಂದೆ. ಮತ್ತೆ ನಕ್ಕ ಅಣ್ಣ.. `ನೀನು ಹೋಗುವ ಮುನ್ನ ನಾನು ಅವನಬಳಿ ನಿನ್ನನ್ನು ತೋರಿಸಿ ನಿಂಗೆ ಬೈಕ್ ಹೊಡೆಯೋಕೆ ಬರೋದಿಲ್ಲ.. ಬೈಕ್ ಕೇಳಿದರೂ ಕೊಡಬೇಡ. ನಿನ್ನ ಹೊಸ ಬೈಕ್ ಹಾಳುಮಾಡಿಕೊಳ್ಳಬೇಡ ಅಂತ ಸಕಲಕಲಾವಲ್ಲಭನ ಬಳಿ ಹೇಳಿದ್ದೆ..' ಎಂದ. ನಾನು ಪೆಚ್ಚಾದೆ. ಆ ನಂತರ ಅನೇಕ ಸಾರಿ  ಆತ ನನ್ನನ್ನು ಅಲ್ಲಿಗೆ ಹೋಗೋಣ ಬಾ, ಇಲ್ಲಿಗೆ ಹೋಗೋಣ ಬಾ ಎಂದರೂ ನಾನು ಮಾತ್ರ ಊಹೂಂ.. ಹೋಗಲಿಲ್ಲ.
                

Tuesday, September 23, 2014

ನೀನೆಂಬ ನನ್ನೊಲವು

(ರೂಪದರ್ಶಿ : ಅನುಷಾ ಹೆಗಡೆ)
ಕವಿತೆಯಾಗಿ ನೀನು
ನನ್ನ ಬಳಿಗೆ ಬಂದೆ
ಮರೆಯದ ನಗುವಾಗಿ
ನೂರು ಕಾಲ ನಿಂತೆ ||

ಹಾರುವ ಮುಂಗುರುಳು
ಮನಕೆ ರೆಕ್ಕೆ ನೀಡಿದೆ
ಸೆಳೆಯುವ ಕಣ್ಣೋಟ
ನನ್ನೊಲವನು ತೀಡಿದೆ ||

ನಿನ್ನ ಮಾತು ಸದಾಕಾಲ
ಕಿವಿಯೊಳಗೆ ರಿಂಗಣ
ಹಾಲಿನಂತ ಮುಗುಳ್ನಗು
ನನ್ನ ಮನವು ತಲ್ಲಣ ||

ನಿನ್ನ ನಾನು ಕಂಡಾಗಲೇ
ಮನದಿ ಹರುಷ ಹರುಷ
ನಿನಗಾಗಿ ಕಾಯುವೆನು
ನಾನು ನೂರು ವರುಷ ||


***
(ಎಂದೋ ಅರ್ಧ ಬರೆದು ಇಟ್ಟಿದ್ದ ಈ ಕವಿತೆಯನ್ನು ಪೂರ್ತಿ ಮಾಡಿದ್ದು ಸೆ.23, 2014ರಂದು ಶಿರಸಿಯಲ್ಲಿ )
(ಈ ಕವಿತೆಗೆ ರೂಪದರ್ಶಿಯಾಗಿ ಭಾವಚಿತ್ರ ಬಳಕೆಗೆ ಅನುಮತಿ ನೀಡಿದ ಅನುಷಾ ಹೆಗಡೆಗೆ ಧನ್ಯವಾದಗಳು)

Thursday, September 18, 2014

ನಿನಗಾಗಿ

ನಿನಗಾಗಿ ಕೇಳೆ ಓ ಗೆಳತಿ
ಹೃದಯವೊಂದು ಕಾದಿದೆ |
ನಿನ್ನ ನೆನಪ ನೆರಳಿನಲ್ಲಿ
ಜೀವ ಹಿಡಿದು ನಿಂತಿದೆ ||

ಧಮನಿಯ ಎಳೆ ಎಳೆಗಳಲ್ಲಿ
ನಿನ್ನ ಬಿಂಬ ತುಂಬಿದೆ |
ನಿನ್ನ ಪ್ರೀತಿ ಹಸಿರಿಗಾಗಿ
ಸಕಲ ಕಾಲವೂ ಕಾದಿದೆ ||

ನೀನೆಂದರೆ ಹೃದಯಕಾಯ್ತು
ಜೀವ-ಪ್ರೀತಿ-ಉಸಿರು |
ನೀನು ಮರೆತೆನೆಂದರಾಯ್ತು
ಹರಿದು ಬಿಡುವುದು ನೆತ್ತರು ||

ಹೃದಯ-ಮನಸು ನಿನ್ನದಂತೆ
ತನ್ನ ಜೀವ ಮರೆತಿದೆ |
ತನ್ನ ಪ್ರಾಣಕಿಂತ ಮಿಗಿಲು
ನಿನ್ನ ಒಲವ ಬಯಸಿದೆ ||

***
(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 05-12-2006ರಂದು)

ಸೋದೆ ಸದಾಶಿವರಾಯನ ನೆಪದಲ್ಲಿ ಇತಿಹಾಸದ ಪುಟಗಳಲ್ಲಿ ಓಡಾಟ


ಚರಿತ್ರೆಯ ಪುಟದಲ್ಲಿ ಮರೆಯಾದ ಸೋದೆಯ ವಿದ್ವಾಂಸ ದೊರೆ ಸದಾಶಿವರಾಯಯನ್ನು ಸ್ಮರಿಸುವ ಸಲುವಾಗಿ, ಸಾರಸ್ವತ ಲೋಕದಿಂದಲೂ ಕಡೆಗಣಿಸಲ್ಪಟ್ಟ ಶ್ರೇಷ್ಠ ಇತಿಹಾಸ ತಜ್ಞರಿಗೆ ಮತ್ತು ಇತಿಹಾಸ ಸಂಶೋಧಕರಿಗೆ ಇವನ ಹೆಸರಿನಲ್ಲಿಯೇ `ಸೋದೆ ಸದಾಶಿವರಾಯ ಪ್ರಶಸ್ತಿ'ಯನ್ನ ಕೊಡುವ ಕಾರ್ಯಕ್ರಮವೊಂದು ಶಿರಸಿಯಲ್ಲಿ ಆಯೋಜನೆಯಾಗಿದೆ.
ಈ ವರ್ಷದಿಂದ ಪ್ರತಿ ವರ್ಷ ಶಿರಸಿಯಲ್ಲಿ ಸೋದೆಯ ಮೂರು ಮಠಗಳಾದ ಸ್ವರ್ಣವಲ್ಲೀ ಮಠ, ಸೋದೆ ವಾದಿರಾಜಮಠ, ಸ್ವಾದಿ ಜೈನಮಠ ಹಾಗೂ ಶ್ರೀನಿಕೇತನ ವಿದ್ಯಾಲಯ ಸಹಯೋಗದಲ್ಲಿ ಜಾಗೃತವೇದಿಕೆ ಸೋಂದಾ(ರಿ) ಇವರು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿಯ ಮೂಲಕ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನವನ್ನ ಸಂಘಟಿಸಿ ಈ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುತ್ತದೆ. ಸೆ.20ರಂದು ಶಿರಸಿಯಲ್ಲಿ ಡಾ. ಶ್ರೀನಿವಾಸ ರಿತ್ತಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಾದೇಶಿಕ ಇತಿಹಾಸದ ಜಾಗೃತಿ, ವಿದ್ಯಾರ್ಥಿಗಳಲ್ಲಿ ಇತಿಹಾಸದಲ್ಲಿ ಆಸಕ್ತಿ ಮೂಡಿಸುವುದು ಮತ್ತು ಮರೆಯಲ್ಲಿರುವ ಇತಿಹಾಸ ತಜ್ಞರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಇನ್ಮೂಲಕ  ಸದಾಶಿವರಾಯನೂ ಚಿರಂತನವಾಗಲಿ ಎನ್ನುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಈಗಿನ ಸೋಂದಾ ಹಾಗೂ ಸುತ್ತಮುತ್ತಲ ಪ್ರದೇಶಗಳ ಅರಸರ ಆಳ್ವಿಕೆಯಲ್ಲಿ ರಾಜಧಾನಿಯಾಗಿ ಮೆರೆದ ಸುಂದರ ಸ್ಥಳ. ಪ್ರಕೃತಿಯ ರಮಣೀಯತೆಯ ಮಧ್ಯೆ ಕಂಗೊಳಿಸುತ್ತಿರುವ ಸೋದೆ ಪ್ರದೇಶದಲ್ಲಿ ಮಠಗಳು, ಮಂದಿರಗಳು ಕೋಟೆ ಕೊತ್ತಲೆಗಳು, ಇನ್ನಿತರ ಐತಿಹಾಸಿಕ ಕುರುಹುಗಳು ಸೋದೆ ಅರಸರ ಆಳ್ವಿಕೆಯ ಕುರುಹುಗಳೇ ಆಗಿವೆ. ಸೋದೆಯ ಅರಸರ ಸಾಮ್ರಾಜ್ಯದ ಪ್ರಮುಖ ಅರಸರುಗಳೆಂದರೆ ಇಮ್ಮಡಿ ಅರಸಪ್ಪ ನಾಯಕ, ರಾಮಚಂದ್ರ ನಾಯಕ, ಮಧುಲಿಂಗ ನಾಯಕ, ರಘುನಾಥ ನಾಯಕ, ಇಮ್ಮಡಿ ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶ, ಘಟ್ಟದ ಕೆಳಗಿನ ಪ್ರದೇಶ, ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸೊರಬ ಈ ಮುಂತಾದ ಪ್ರದೇಶಗಳಲ್ಲಿ ಅಜಮಾಸು 230ವರ್ಷ ಸಮೃದ್ಧ ಆಳ್ವಿಕೆಯನ್ನು ನೀಡಿದ್ದ ಈ ಸೋದೆ ಸಾಮ್ರಾಜ್ಯ ಮೈಸೂರಿನ ಹೈದರಾಲಿಯ ದಾಳಿಗೆ ಸಿಲುಕಿ ಕ್ರಿ.ಶ. 1763ರಲ್ಲಿ ಅವನತಿಯನ್ನ ಕಂಡಿತು.
ಇಂತಹ ಸುಂದರ ಸಾಮ್ರಾಜ್ಯದ ಪ್ರಬಲ ಅರಸನಾಗಿ ಆಳ್ವಿಕೆ ಮಾಡಿದ ಮಹಾನ್ ವ್ಯಕ್ತಿತ್ವದ ಅರಸನೇ ಸೋದೆಯ ಇಮ್ಮಡಿ ಸದಾಶಿವರಾಯ. ಚರಿತ್ರೆಯ  ಪುಟಗಳಲ್ಲಿ ಸಾಮಂತ ಸಾಮ್ರಾಜ್ಯದ ಸಾಮಂತ ಅರಸರು ಸ್ವತಂತ್ರ ಅರಸರಿಗಿಂತ ಮಿಗಿಲಾದ ವ್ಯಕ್ತಿತ್ವವನ್ನು ಹೊಂದಿದ್ದು ಅವರಿಗಿಂತ ಹೆಚ್ಚು ಸಾಧನೆ ಮಾಡಿದ್ದರೂ ಇತಿಹಾಸ ಪುಟಗಳಲ್ಲಿ  ಹೊಳೆಯದಿದ್ದರೂ ಕನಿಷ್ಠ ಪಕ್ಷ ಒಂದು ಸಾಲಿನ ಸ್ಥಾನವನ್ನು ಪಡೆಯದಿರುವುದು ದುರದೃಷ್ಟಕರ. ಇಂತಹ ಅನೇಕ ಸಾಮಂತ ಅರಸರು ನಮ್ಮ ನೆಲದಲ್ಲಿ ಮಿಂಚಿ ಮರೆಯಾಗಿದ್ದಾರೆ. ಅವರಲ್ಲಿ ಅಗ್ರಗಣ್ಯನೇ ಸೋದೆಯ ಸದಾಶಿವರಾಯ. ಈತ ಸೋದೆಯನ್ನ ಕ್ರಿ.ಶ. 1618ರ ವರೆಗೆ ಅರಸನಾಗಿ ಆಳ್ವಿಕೆ ಮಾಡಿದ್ದ. ತನ್ನ 26 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಕಲೆ, ಸಂಸ್ಕೃತಿ, ಧರ್ಮ, ಸಾಹಿತ್ಯ, ವಾಸ್ತು ಶಿಲ್ಪಕ್ಕೆ ಈತನ ಕೊಡಿಗೆ ಅನನ್ಯ, ಅನುಪಮವಾದುದು.
ಸದಾಶಿವರಾಯ ಮಧುಲಿಂಗ ನಾಯಕನ ಪುತ್ರ. ಪ್ರಸಿದ್ಧಳಾಗಿರುವ ಬೆಳವಡಿ ಮಲ್ಲಮ್ಮಳ ಸಹೋದರ ಬಾಲ್ಯದಿಂದಲೇ ಚುರುಕುಮತಿಯಾಗಿದ್ದ ಸದಾಶಿವರಾಯ ಚತುರ್ಭಾಷಾ ಪಂಡಿತ. ಕನ್ನಡ, ಸಂಸ್ಕೃತ, ಉರ್ದು, ಮರಾಠಿ ಭಾಷೆಯಲ್ಲಿ ಪರಿಣಿತಿಯನ್ನು ಸಾಧಿಸಿದ್ದ. ನಂತರ ಅಣ್ಣನಾದ ರಾಮಚಂದ್ರ ನಾಯಕನ ಆಳ್ವಿಕೆಯ ನಂತರ ವಂಶಪಾರಂಪರ್ಯವಾಗಿ ಸೋದೆಯ ಅರಸನಾಗಿ ಸಿಂಹಾಸನ ಅಲಂಕರಿಸಿದ.
ಆಡಳಿತದಲ್ಲಿ ನಿಷ್ಣಾತನಾಗಿದ್ದ ಈತ ಸಾಮ್ರಾಜ್ಯವನ್ನು ಘಟ್ಟದ ಕೆಳಗಿನ ಕಾರವಾರದವರೆಗೆ ವಿಸ್ತರಿಸಿ ಅಲ್ಲಿ ತನ್ನ ಹೆಸರಿನಲ್ಲಿ ಸದಾಶಿವಗಡ ಕೋಟೆಯನ್ನು ನಿರ್ಮಿಸಿದ. ಪೋರ್ಚುಗೀಸರ ಜೊತೆ ಒಡಂಬಡಿಕೆಯನ್ನ ಮಾಡಿಕೊಂಡು ವ್ಯಾಪಾರದಲ್ಲಿ ಹಿಡಿತಸಾಧಿಸಿ ರಾಜ್ಯವನ್ನ ಆರ್ಥಿಕವಾಗಿ ಬಲಪಡಿಸಿದ ಅವನ ಆಳ್ವಿಕೆಯ ಕಾಲದಲ್ಲಿ ಸೋದೆ ರಾಜ್ಯದ ಮೇಲೆ ಕಣ್ಣಿಟ್ಟಿದ್ದ ಕೆಳದಿ ಅರಸರು ಮತ್ತು ಮೊಘಲರ ದಾಳಿಯನ್ನ ತಡೆಗಟ್ಟಲು ಬಿಜಾಪುರದ ಆದಿಲ್ಷಾಹಿಗಳ ಸಹಾಯವನ್ನು ಪಡೆದಿದ್ದ. ಬಿಜಾಪುರದ ಅದಿಲ್ ಶಾಹಿಗಳ ಜೊತೆ ಉತ್ತಮ ಬಾಂಧವ್ಯವನ್ನ ಹೊಂದಿದ್ದ ಈತನ ಸಾಮ್ರಾಜ್ಯದ ಮೇಲೆ ವೈರಿಗಳು ದಾಳಿ ಮಾಡಿದಾಗ ಸಹಾಯಕ್ಕೆ ಬರುತ್ತಿದ್ದವರು ಬಿಜಾಪುರದ ಆದಿಲ್ಷಾಹಿಗಳು.
ಸದಾಶಿವರಾಯನ ಮೇಲೆ ಆದಿಲ್ಷಾಹಿಗಳ ಪ್ರಭಾವ ಹೇಗಿತ್ತೆಂದರೆ ಈತನು ಇದೇ ಇಸ್ಲಾಮಿಕ್ ಶೈಲಿಯ ಅನೇಕ ಸ್ಮಾರಕಗಳನ್ನ ಶಿರಸಿ ಮತ್ತು ಸೋದೆಯಲ್ಲಿ ನಿರ್ಮಿಸಿದ್ದ. ಮುಖ್ಯವಾಗಿ ಸೋದೆಯಲ್ಲಿರುವ ಗದ್ದಿಗೆ ಸ್ಮಾರಕ ಇದೊಂದು ತೀರಾ ಅಪರೂಪದ ಸ್ಮಾರಕ. ಇಡೀ ದಕ್ಷಿಣ ಭಾರತದಲ್ಲೇ ಇದು ಅಪರೂಪದ್ದು  ಎನ್ನಿಸಿಕೊಂಡಿದೆ. ಇದು 40 ಅಂಕಣದ ಕರಿಕಲ್ಲಿನ ಬೃಹತ್ ಅರಮನೆಯಾಗಿದೆ. ಮುಂದೆ ಇವನ ಸಮಾಧಿಯನ್ನ ಇಲ್ಲೇ  ಮಾಡಲಾಯಿತು. ಇಂದಿಗೂ ಸದಾಶಿವರಾಯನ ಸಮಾಧಿಯನ್ನು ಸೋದೆಯ ಗದ್ದಿಗೆ ಮನೆಯಲ್ಲಿ ಕಾಣಬಹುದು. ಇವನ ಗದ್ದಿಗೆಯಿಂದಾಗಿಯೇ ಈ ಸ್ಥಳಕ್ಕೆ ಆ ಹೆಸರು ಬಂದಿದೆ. ಸದಾಶಿವರಾಯನ ಇನ್ನೊಂದು ಪ್ರಮುಖ ಇಂಡೋ ಇಸ್ಲಾಮಿಕ್ ವಸ್ತುಶಿಲ್ಪೀಯ ಕೊಡುಗೆ ಎಂದರೆ ಶಿರಸಿಯಲ್ಲಿರುವ ' ಮುಸುಕಿನ ಬಾವಿ'. ಇದನ್ನು ತನಗೆ  ಸ್ಪೂರ್ತಿ ಯಾಗಿದ್ದ ತನ್ನ ಪ್ರೇಯಸಿಯೋರ್ವಳಿಗೆ ಆತ ನಿರ್ಮಿಸಿದ್ದ, ಇದೊಂದು  ಪ್ರೇಮ ಸ್ಮಾರಕವಾಗಿ ಮೌನವಾಗಿ ನಿಂತಿದೆ.
ಸೋದೆಯ ಹಳೆಯೂರು ಎಂಬಲ್ಲಿ ಶಂಕರನಾರಾಯಣ ದೇವಾಲಯ ನಿರ್ಮಿಸಿದವನೂ ಕೂಡ ಸದಾಶಿವರಾಯನೇ. ಇದರಲ್ಲಿ ಶಂಕರ ಮತ್ತು ನಾರಾಯಣರ ಎರಡು ಪ್ರತ್ಯೇಕ ಗರ್ಭಗುಡಿಗಳಿದ್ದು ಶೈವ ಮತ್ತು ವೈಷ್ಣವರ ಮಧ್ಯೆ ಮಧುರ ಬಾಂಧವ್ಯ ಸ್ಥಾಪನೆಗೆಂದೇ ಸದಾಶಿವರಾಯ ಇದನ್ನು ನಿಮರ್ಮಿಸಿದ್ದು ಇದರಿಂದ ಆತನ ಸೌಹಾರ್ದ ಭಾವನೆ ಅರ್ಥವಾಗುತ್ತದೆ. ಹಾಗೆಯೇ ಸೋದೆಯಲ್ಲಿ ಸದಾಶಿವ ದೇವಸ್ಥಾನ ಮತ್ತು ಮೊಘಲರಿಂದ ರಕ್ಷಣೆ ಪಡೆಯಲೆಂದು ಸ್ವರ್ಣವಲ್ಲೀ ಮಠದ ಸಮೀಪ ನಿರ್ಮಿಸಿರುವ ಕೋಟೆ ಇವನ  ನಿರ್ಮಾಣವೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಕರ್ನಾಟಕದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಿರಸಿಯ ಮಾರಿಕಾಂಬಾ ದೇವಾಲಯವನ್ನು ನಿರ್ಮಿಸಿದವನು ಇದೇ ಸದಾಶಿವರಾಯ ಎಂಬುದು ಉಲ್ಲೇಖನೀಯ ಸಂಗತಿ. ಬನವಾಸಿಯಲ್ಲಿ ಸದಾಶಿವೇಶ್ವರ ದೇವಾಲಯ ನಿರ್ಮಾಣ ಮತ್ತು ಸುಂದರವಾದ ತ್ರಿಲೋಕಮಂಟಪವೂ ಸದಾಶಿವ ರಾಯನ ಕೊಡುಗೆಯೇ ಆಗಿದೆ.
ಆತನ ಸಾಂಸ್ಕೃತಿಕ ಕಳಕಳಿ ಬಹು ವಿಶಿಷ್ಟವಾದುದು. ಬಿಜಾಪುರ ಆದಿಲ್ಷಾಹಿಗಳಿಗೆ ತೋರಿಸುವ ಸಲುವಾಗಿ ತನ್ನ ರಾಜ್ಯದ ಒಂದು ಯಕ್ಷಗಾನ ಮೇಳವನ್ನ ಬಿಜಾಪುರಕ್ಕೆ ಕರೆದುಕೊಂಡುಹೋಗಿ ಆಡಿಸಿದ್ದ ಎಂಬುದು ಯಕ್ಷಗಾನದ ಚರಿತ್ರೆಗೆ ಸಂಬಂಧಿಸಿದಂತೆಯೂ ಮಹತ್ವದ ಸಂಗತಿಯಾಗುತ್ತದೆ. ಇದು ಸದಾಶಿವರಾಯನ ಒಂದು ಮುಖವಾದರೆ ಇನ್ನೊಂದು ಮುಖ ಆತನ ಸಾಹಿತ್ಯದ ಮುಖ. ಆತ ಆಡಳಿತಾತ್ಮಕವಾಗಿ ಎಷ್ಟು ಉತ್ತಮ ಅರಸನಾಗಿದ್ದನೋ ಸಾಹಿತ್ಯಿಕವಾಗಿಯೂ ಅಷ್ಟೇ ದೊಡ್ಡ ವಿದ್ವಾಂಸನಾಗಿದ್ದ.
ಆ ಕಾಲದಲ್ಲೇ ಆತ ಹದಿನೇಳು ಕೃತಿಗಳನ್ನ ರಚಿಸಿದ್ದ, ಅದರಲ್ಲಿ ಈಗ ಒಂದು ಪ್ರಕಟಗೊಂಡಿದೆ. 'ಸದಾಶಿವ ನೀತಿ'. ಇದನ್ನ ಹೊರತುಪಡಿಸಿ ಆತನ ಇನ್ನಿತರರ ಕೃತಿಗಳೆಂದರೆ ಸ್ವರವಚನಗಳು, ಸಮಸ್ಯಾಪೂರ್ಣ ವೃತ್ತಕಂದ, ರಾಗಮಾಲಿಕೆ, ಪಂಚವಿಂಶತಿ ಲೀಲೆಯ ರಗಳೆ, ತ್ರಿವಿಧಿ, ಉಳುವೆಯ ಮಹಾತ್ಮೆ, ಜೋಗುಳ ಪದಗಳು, ನವರಸ ಜಕ್ಕಿಣಿ, ಪಂಚವಿಂಶತಿ ಲೀಲೆಯ ಮೂಲ ಪದ್ಯ, ಜಾವಡಿ, ಭಿಕ್ಷಾಟನಾ ಲೀಲೆಯ ಕಂದ, ಖಡ್ಗ ಪ್ರಬಂಧ, ಮಂಗಲಾಷ್ಟಿಕೆಗಳು, ಪ್ರಭುಲಿಂಗ ಲೀಲೆಯ ಜಾವಡಿ ಮಹಾ ಚದುರಂಗ ಲಕ್ಷಣ, ಕಲಹಕೇತಯ್ಯಗಳ ಲಕ್ಷಣ, ಕಂದಪದ್ಯ, ಮುಂತಾದವು. ಇಂತಹ ನಾಯಕನ ನೆನಪಿಗೋಸ್ಕರ ಹಾಗೂ ಇತಿಹಾಸದ ಪುಟಗಳಲ್ಲಿ ಮತ್ತೊಮ್ಮೆ ಕನ್ಣಾಡಿಸುವ ಸಲುವಾಗಿ ರಾಜ್ಯಮಟ್ಟದ ಇತಿಹಾಸ ಮೇಳಕ್ಕೆ ಶಿರಸಿ ಸಜ್ಜಾಗುತ್ತಿದೆ. ಇತಿಹಾಸ ತಜ್ಞರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

***
(ಸೆ.18ರ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)
(ಪೂರಕ ಮಾಹಿತಿ ನಿಡಿದವರು ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಸೋಂದಾ)

Wednesday, September 17, 2014

ಚಿತ್ರ-ವಿಚಿತ್ರ

ಪಪ್ಪುವಿನ ಬಯಕೆ

ಮೋದಿಯ ಫ್ಯಾನಿಗೆ
ಬಿರುಗಾಳಿಗೆ ಬಲಿಯಾಗಿ
ಪಪ್ಪೂ ಅಳಲು
`ನನಗೂ ಕಮಲ ಬೇಕು...'

***
ಆಗ್ರಹ

ನಮ್ಮೂರ ಹಾಲು ಡೇರಿ ಸಂಘದ ಚುನಾವಣೆಯಲ್ಲಿ ರಂಗಣ್ಣಂಗೆ ಗೆಲುವು..
`ಇದು ಮೋದಿ ವೈಫಲ್ಯದ ಪರಮಾವಧಿ. ಕೂಡಲೇ ಪಿ. ಎಂ. ಸ್ಥಾನಕ್ಕೆ ರಾಜಿನಾಮೆ ಕೋಡಬೇಕು' : ಪಪ್ಪೂ

***

ಕಲಿ

ಯಾರೇ ಕೂಗಾಡಲಿ..
ಊರೇ ಹೋರಾಡಲಿ
ವಾಟಾಳ ಮಾತ್ರ
ಗಂಡುಗಲಿ |

***

ಚಿತ್ರನಟ

ಅಂಬರೀಶ್ ಚಿತ್ರದ ಹೆಸರು
ಮಂಡ್ಯದ ಗಂಡು
ಕುಮಾರಣ್ಣನ ಮಗ ನಿಖಿಲ
ಸಿನಿಮಾ ಹೀರೋ ಆದರೆ
ಚಿತ್ರದ ಹೆಗಡೆ
ಹಾಸನದ ಗುಂಡು |

**

ಲೈಕ್ ಪ್ರಿಯ

ಬಾಕ್ಸಿಂಗ್ ಚತುರ
ಮೈಕ್ ಟೈಸನ್..
ಲೈಕ್ ಒತ್ತುವ ಚತುರ
ಲೈಕ್ ಟೈಸನ್ |

Monday, September 15, 2014

ಸುಮ್ನೆ ತಮಾಷೆಗೆ

ಸುಮ್ನೆ ತಮಾಷೆಗೆ
ಪಗ್ ನಾಯಿಯ ಹಚ್ ಪುರಾಣ

ಕ್ಯೂಟ್ ಕ್ಯೂಟ್ ಪಗ್ ನಾಯಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.
ಹಚ್ ಜಾಹಿರಾತಿಗೆ ಬಂದು ಎಲ್ಲರ ಮನಗೆದ್ದ ಪಗ್ ನಾಯಿಯನ್ನು ಹಚ್ ನಾಯಿ ಎಂದೇ ಕರೆಯುತ್ತಾರೆ.
ಇಂತಹ ಹಚ್ ನಾಯಿಯ ಮುಖ ಎಷ್ಟು ಚನ್ನಾಗಿದೆಯಲ್ಲ.
ಕುಳ್ಳು ಆಕಾರ, ಕಪ್ಪು ಮೂತಿ, ಊದ್ದ ನಾಲಿಗೆ ಸದಾ ಹೊರಚಾಚಿರುತ್ತದೆ. 
ನನಗೆ ಹಚ್ ನಾಯಿಯ ಮುಖ ಕಂಡಾಗಲೆಲ್ಲ ಮುಖಾ ಮುಖಿ ಡಿಕ್ಕಿಯಾದ ಟಾಟಾ ಏಸೋ ಅಥವಾ ಮಾರುತಿ ಓಮ್ನಿಯೋ ಕಂಡಂತೆ ಕಾಣುತ್ತದೆ. ಆ ವಾಹನಗಳು ಢಿಕ್ಕಿಯಾದರೆ ಹಚ್ ನಾಯಿಯ ಕುತ್ತಿಗೆಯಲ್ಲಿ ದಪ್ಪ ದಪ್ಪ ರೋಮ ಇರುತ್ತದಲ್ಲ ಹಾಗೆ ಇರುತ್ತದೆ ಎನ್ನಿಸುತ್ತದೆ.

ಈ ಹಚ್ ನಾಯಿಯ ಕಣ್ಣು ನೋಡಿದ್ದೀರಾ..
ಯಾವಾಗಲೂ ಟೆನ್ಶನ್ ಮಾಡಿಕೊಂಡೇ ಇದೆಯೇನೋ ಎಂಬಂತೆ, ಬೆದರಿದಂತೆ, ಗೊಂದಲದಲ್ಲಿ ಇದ್ದಂತೆ ಕಾಣುತ್ತದೆ.
ಆಕ್ಚುಲಿ ಇದಕ್ಕೊಂದು ಕಾರಣವೂ ಇದೆ. ಮಜವಾಗಿದೆ ಹೇಳ್ತೀನಿ ಕೇಳಿ.
ಹಚ್ ನಾಯಿ ಯುವಕ-ಯುವತಿಯರ ಪರಮ ಪ್ರಿಯ ನಾಯಿ.
ಹುಡುಗಿಯರು ಈ ಹಚ್ ನಾಯಿಯನ್ನು ಕರೆದುಕೊಂಡು ಹೋಗುತ್ತಿರುತ್ತಾರೆ ಎನ್ನಿ.
ಆಗೆಲ್ಲ ಹುಡುಗರು ಹುಡುಗಿಯರನ್ನು ಕಿಚಾಯಿಸುವುದು, ಲೈನ್ ಹೊಡೆಯುವುದು ಮಾಡುತ್ತಾರಲ್ಲ.. ಅದಕ್ಕೆ ಪ್ರತಿಯಾಗಿ ಹುಡುಗಿಯರ ರಿಯಾಕ್ಷನ್ನೂ ಇರುತ್ತದಲ್ಲ..
ಇದನ್ನೆಲ್ಲ ಗಮನಿಸಿ `ಛೇ.. ಇವರನ್ನು ಹೇಗೆ ಸಂಭಾಳಿಸುವುದು ಮಾರಾಯ್ರೆ.. ನಾನೇ ನೋಡ್ಬೇಕಲ್ಲ..' ಎಂದ್ಕೊಂಡ ಪರಿಣಾಮವೇ ಹಚ್ ನಾಯಿಯ ಕಣ್ಣು ಹಾಗಿಗಿರುವುದು.
ಹುಡುಗರು ಹಚ್ ನಾಯಿಯನ್ನು ಕರೆದೊಯ್ಯುತ್ತಿದ್ದರೂ ಅದರ ಕಣ್ಣು ಅದೇ ರೀತಿ ಇರುತ್ತದೆ. ಯಾಕೆ ಗೊತ್ತಾ.
ಈ ಹುಡುಗರು ಸುಮ್ಮನಿರದೇ ಹುಡುಗಿರನ್ನು ಕಿಚಾಯಿಸುವುದು, ಲೈನ್ ಹೊಡೆಯೋದು, ಚುಡಾಯಿಸೋದು ಮಾಡ್ತಾರಲ್ಲಾ.. ಈ ಹುಡುಗರನ್ನು ಹೇಗೆ ಸಂಭಾಳಿಸೋದಪ್ಪಾ.. ಇಷ್ಟು ಕೆಟ್ಟದಾಗಿ ಬಿಹೇವ್ ಮಾಡ್ತಾರೆ.. ಇವರ ಜೊತೆಗೆ ಹೋಗ್ತೀರೋ ನನ್ನ ಮರ್ಯಾದೆನೂ ತೆಗೀತಾರಲ್ಲಪ್ಪಾ.. ಇವರಿಗೆ ಹೇಗೆ ಒಳ್ಳೆ ಬುದ್ಧಿ ಹೇಳೋದು ಎಂದುಕೊಳ್ಳುವ ಹಚ್ ನಾಯಿಯ ಕಣ್ಣು ಮತ್ತಷ್ಟು ಗಲಿಬಿಲಿ ಗೊಳ್ಳುತ್ತದೆ. ಅಗಲವಾಗಿ ಕಣ್ಣನ್ನು ಬಿಡುತ್ತದೆ.



***
ಸೆಲ್ಲು

ಕೆಲವು ಪಕ್ಷಗಳಲ್ಲಿ ಈಗ ಅಲ್ಪಸಂಖ್ಯಾತ ಸೆಲ್ ಗಳು ಇವೆ.
ಯಾವ ಪ್ರಮಾಣದಲ್ಲಿ ಈ ಅಲ್ಪ ಸಂಖ್ಯಾತ ಸೆಲ್ ಇವೆ ಎಂದರೆ ಈ ಸೆಲ್ಲುಗಳಿಗೆ ಬೋಪರಾಕ್ ಹಾಕುವಷ್ಟು.
ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಹಿಂದೂಗಳ ಕುರಿತು ಪಕ್ಷಗಳು ಅಲ್ಪ ಸಂಖ್ಯಾತ ಸೆಲ್ಲುಗಳನ್ನು ತೆರೆಯಬಹುದು.
ಈಗಿನ ವೇಗ ನೋಡಿದರೆ ಆ ದಿನಗಳು ದೂರವಿಲ್ಲವೇನೋ ಅನ್ನಿಸುತ್ತದೆ.

***

ಫರ್ಮಾನು

ವೋಡಾ..... ಪೋನ್ ಬಳಕೆದಾರರಿಗೆ ಹೀಗೊಂದು ಫರ್ಮಾನು ಹೊರಡಿಸಿದರೆ ಹೇಗಿರುತ್ತದೆ?

`ಹಚ್ ನಾಯಿಗೆ ಹಚ್ಯಾ ಎಂದು ಕನ್ನಡದಲ್ಲಿ ಬರೆಯುವುದನ್ನು ನಿಷೇಧಿಸಲಾಗಿದೆ..'
`ಇಂಗ್ಲೀಷಿನಲ್ಲಿಯೇ ಹಚ್ ನಾಯಿಯನ್ನು ಬಯ್ಯತಕ್ಕದ್ದು..'

@@@@@

Sunday, September 14, 2014

ಬೆಂಗಾಲಿ ಸುಂದರಿ-25

(ಮಿರ್ಜಾಪುರದ ಬೀದಿ)
           ಮದುಮಿತಾ ಹಾಗೂ ವಿನಯಚಂದ್ರರಿಗೆ ಸಲೀಂ ಚಾಚಾ ಅಚ್ಚರಿಯೋ ಅಚ್ಚರಿ. ಢಾಕಾದ ಸಲೀಂ ಚಾಚಾ, ಹೈದರಾಬಾದಿನಿಂದ ಓಡಿಬಂದ ಸಲೀಂ ಚಾಚಾ ಬಾಂಗ್ಲಾ ದೇಶವನ್ನು ಅರ್ಥ ಮಾಡಿಕೊಂಡಿದ್ದ ಪರಿ ಬಹಳ ಬೆರಗನ್ನು ಮೂಡಿಸಿತ್ತು. ಢಾಕಾದಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಿದ್ದ ಸಲೀಂ ಚಾಚಾ ಮಿರ್ಜಾಪುರದ ಗಲ್ಲಿಗಲ್ಲಿಗಳನ್ನು ತಿಳಿದುಕೊಂಡಿದ್ದನಲ್ಲ. ಮುಪ್ಪಿನ ವಯಸ್ಸಾಗಿದ್ದರೂ ಎಳವೆಯಂತೆ ಸೈಕಲ್ ತುಳಿಯುವ ಸಲೀಂ ಚಾಚಾನ ಬಗ್ಗೆ ಆಲೋಚಿಸಿದಷ್ಟೂ ಕುತೂಹಲ ಹುಟ್ಟುಹಾಕುತ್ತ ಹೋಗುತ್ತಿದ್ದ. ಈ ನಡುವೆಯೇ ವಿನಯಚಂದ್ರನ ಮನಸ್ಸಿನಲ್ಲಿ ಸಲೀಂ ಚಾಚಾ ಯಾತಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದಾನೆ? ಒಳ್ಳೆಯದನ್ನು ಮಾಡುವ ನೆಪದಲ್ಲಿ ತಮ್ಮನ್ನು ಹಿಡಿದು ಹಾಕುವ ಹುನ್ನಾರ ನಡೆಸುತ್ತಿಲ್ಲವಷ್ಟೇ ಎಂದು ಆಲೋಚಿಸಿದ. ಸಹಾಯ ಮಾಡುವ ನೆಪದಲ್ಲಿ ನಮ್ಮನ್ನು ಯಾವುದೋ ಕೂಪಕ್ಕೆ ತಳ್ಳುತ್ತಿದ್ದಾನೆಯಾ ಎಂದೂ ಶಂಕೆ ಮೂಡಿತು. ಕೊನೆಗೆ ಖಂಡಿತ ಹಾಗೆ ಮಾಡಲಾರ. ಹಾಗೆ ಮಾಡುವುದೇ ಆಗಿದ್ದರೆ ಢಾಕಾದಲ್ಲೇ ತಮ್ಮನ್ನು ಹಿಂಸಾಚಾರಿಗಳ ವಶಕ್ಕೋ ಮತ್ಯಾರಿಗೋ ಕೊಟ್ಟು ಸುಮ್ಮನಾಗುತ್ತಿದ್ದ. ನಮ್ಮ ಪಾಲಿಗೆ ಸಲೀಂ ಚಾಚಾ ಆಪದ್ಭಾಂಧವನಂತೆ ಬಂದಿದ್ದಾನೆ. ಈಗ ಆತನ ಸಹಾಯ ನಮಗೆ ಬೇಕೇ ಬೇಕು. ಹೀಗಾಗಿ ಆತನನ್ನು ನಂಬುವುದು ಅನಿವಾರ್ಯ ಎಂದುಕೊಂಡ.
           ಮನೆಯೊಳಗೆ ಹೋಗಿದ್ದ ಸಲೀಂ ಚಾಚಾ ಹತ್ತು ನಿಮಿಷದ ನಂತರ ಹೊರಗೆ ಬಂದಿದ್ದ. ಜೊತೆಯಲ್ಲಿ ಒಬ್ಬರನ್ನು ಕರೆತಂದಿದ್ದ. ಅವರ ಬಳಿ ಅದೇನು ಹೇಳಿದ್ದನೋ. ಮೊದಲ ನೋಟದಲ್ಲೇ ಆ ಮನೆಯ ಯಜಮಾನರು ಎಂಬುದು ಅರ್ಥವಾಯಿತು. ಸಲೀಂ ಚಾಚಾ ಆ ಮನುಷ್ಯನನ್ನು ಖಾದಿರ್ ಎಂದು ಪರಿಚಯಿಸಿದ. ಖಾದಿರ್ ಗೆ ವಿನಯಚಂದ್ರ ಹಾಗೂ ಮಧುಮಿತಾಳನ್ನು ಪರಿಚಯ ಮಾಡಿಸಿದ. ಖಾದಿರ್ ಇವರನ್ನು ತನ್ನ ಮನೆಯೊಳಗೆ ಕರೆದೊಯ್ದ. ಮನೆಯೊಳಗೆ ಹೋದ ತಕ್ಷಣ ಖಾದಿರ್ ಬಾಯಿ ಇವರಿಗೆ ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ತಂದಿಟ್ಟರು. ಸಲೀಂ ಚಾಚಾ ಖಾದಿರ್ ತನ್ನ ಹಳೆಯ ಸ್ನೇಹಿತನೆಂದೂ ತನ್ನಂತೆ ಭಾರತದಿಂದ ಹೊಟ್ಟೆಪಾಡಿಗೆ ಓಡಿಬಂದವನೆಂದೂ ತಿಳಿಸಿದ. ವಿನಯಚಂದ್ರ ಹಾಗೂ ಮಧುಮಿತಾ ಸಂತಸ ಪಟ್ಟರು.
          ಮಾತಿಗೆ ನಿಂತ ಖಾದಿರ್ `ಮಿರ್ಜಾಪುರದಲ್ಲಿ ಇವತ್ತು ಬೆಳಿಗ್ಗೆಯಿಂದ ಹಿಂಸಾಚಾರ ಭುಗಿಲೆದ್ದಿದೆ. ಪುಂಡರ ಗುಂಪು ಕಂಡಕಂಡಲ್ಲಿ ದಾಳಿ ಮಾಡಿ, ಸಿಕ್ಕಿದ್ದನ್ನು ದೋಚುತ್ತಿದೆ. ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದೆ. ಎಲ್ಲೆಡೆ ಕರ್ಫ್ಯೂ ವಿಧಿಸಲಾಗಿದೆ. ಯಾವಾಗ ಸುಮ್ಮನಾಗುತ್ತೋ ಮಿರ್ಜಾಪುರ..' ಎಂದರು.
          `ಅರೇ ನಮಗೆ ಕಾಣಿಸಲೇ ಇಲ್ಲವಲ್ಲ. ನಾವು ಆರಾಮಾಗಿ ಮಿರ್ಜಾಪುರ ಬಂದೆವು ನೋಡಿ..' ವಿನಯಚಂದ್ರ ಅಚ್ಚರಿಯಿಂದ ಹೇಳಿದ.
           `ನನಗೂ ಅದೇ ಅಚ್ಚರಿಗೆ ಕಾರಣವಾಗಿದೆ. ಎಲ್ಲೆಡೆ ಗಲಾಟೆ ನಡೆಯುತ್ತಿದ್ದರೂ ಪುಂಡರ ಗುಂಪಿಗೆ ನೀವು ಸಿಗಲಿಲ್ಲವಲ್ಲ. ಪುಂಡರು ಹೋಗಲಿ ಪೊಲೀಸರಿಗೂ ನೀವು ಸಿಗಲಿಲ್ಲ ಎಂಬುದೇ ಅತ್ಯಾಶ್ಚರ್ಯ ನೋಡಿ.' ಖಾದಿರ್ ಹೇಳುತ್ತಿದ್ದರೆ ವಿನಯಚಂದ್ರ ತಮ್ಮ ಅದೃಷ್ಟವನ್ನು ನೆನೆದು ಖುಷಿಪಟ್ಟ. ಮಧುಮಿತಾ ಮಾತ್ರ ಆಲೋಚನಾ ಲಹರಿಯಲ್ಲಿ ಜಾರಿದ್ದಳು. ಯಾಕೋ ಏನೋ ತಾವು ಹೋದ ಕಡೆಯಲ್ಲೆಲ್ಲ ಹಿಂಸಾಚಾರ ನಡೆಯುತ್ತಿದೆ. ಬಿಟ್ಟೆನೆಂದರೂ ಬಿಡದೀ ಮಾಯೆ. ಯಾಕೆ ಹೀಗೆ. ತಮಗೆ ಶಾಂತಿ ದೊರಕುವುದೇ ಇಲ್ಲವೇ ಎಂದುಕೊಂಡಳು. ಸಲೀಂ ಚಾಚಾ ಅದಕ್ಕೆ ಸರಿಯಾಗಿ `ಬೇಟಿ ನೀವು ಭಾರತ ತಲುಪಿದರೆ ಮಾತ್ರ ನಿಮಗೆ ಶಾಂತಿ ಸಿಗುತ್ತದೇನೋ.. ಅಲ್ಲಿಯವರೆಗೂ ಉಸಿರುಕಟ್ಟಿ ಓಡುತ್ತಲೇ ಇರಬೇಕು. ಇವತ್ತು ಏಜೆಂಟ ನಮ್ಮನ್ನು ಭೆಟಿ ಮಾಡುತ್ತಾನೆ. ಸಂಜೆ ವೇಳೆಗೆ ನಾವು ಇಲ್ಲಿಮದ ಹೊರಡಲೇ ಬೇಕು. ಹಿಂಸಾಚಾರ ತಣ್ಣಗಾಗಿರಲಿ ಅಥವಾ ಗಲಭೆ ಹೆಚ್ಚಿಯೇ ಇರಲಿ. ನಾವು ನಿಲ್ಲುವಂತಿಲ್ಲ.. ತಿಳೀತಾ ಮಕ್ಕಳಾ' ಎಂದರು ಪ್ರೀತಿಯಿಂದ. ಪ್ರೇಮಿಗಳು ತಲೆಯಲ್ಲಾಡಿಸಿದರು.
            ಇರುಕಾದ ಬಾಗಿಲಿನಿಂದ ಓಳಹೋಗುವಂತ ಮನೆ ಅದಾಗಿದ್ದರೂ ಖಾದಿರ್ ಭಾಯಿಯ ಮನೆ ವಿಶಾಲವಾಗಿತ್ತು. 50-60 ಜನ ಬೇಕಾದರೂ ಆರಾಮಾಗಿ ಇರಬಹುದಿತ್ತು. ಮನೆಯ ತುಂಬ ಜನವೋ ಜನ. ವಿನಯಚಂದ್ರ ಎಣಿಸಲು ನೋಡಿ ಸುಸ್ತಾಗಿದ್ದ. ಎಣಿಸಿದಂತೆಲ್ಲ ಜನರು ಜಾಸ್ತಿಯಾಗುತ್ತಿದ್ದಾರೋ ಹೇಗೆ ಎಂದನ್ನಿಸುತ್ತಿತ್ತು. ಮನೆಯ ಒಳ ಕೋಣೆಗಳಿಂದ ಮಧ್ಯ ವಯಸ್ಕರು, ಹಿರಿಯರು, ಮಕ್ಕಳು, ಮರಿಗಳು ಬರುತ್ತಲೇ ಇದ್ದರು. ಬಂದವರನ್ನೆಲ್ಲ ಖಾದರ್ ಈತ ತನ್ನ ಮಗ ಎಂದೋ, ಸೊಸೆ ಎಂದೋ, ಮೊಮ್ಮಗ ಎಂದೋ, ಇವಳು ಹೆಂಡತಿ ಎಂದೋ ಪರಿಚಯಿಸುತ್ತಲೇ ಇದ್ದ. ಖಾದಿರ್ ನ ಒಂದಿಬ್ಬರು ಮಡದಿಯರಂತೂ ಆತನದ್ದೇ ಹೆಣ್ಣುಮಕ್ಕಳಿಗಿಂತ ಚಿಕ್ಕವರಿದ್ದರು. ಬೆಪ್ಪಾಗಿ ವಿನಯಚಂದ್ರ ನೋಡುತ್ತಿದ್ದಾಗಲೇ ಸಲೀಂ ಚಾಚಾ `ಖಾದಿರ್ ಗೆ 12 ಜನ ಮಡದಿಯರು... ಮಕ್ಕಳ ಸಂಖ್ಯೆ ಎಷ್ಟು ಎನ್ನುವುದನ್ನು ಆತನ ಬಳಿಯೇ ಕೇಳಬೇಕು..' ಎಂದು ತಮಾಷೆ ಮಾಡಿ ಕಣ್ಣು ಮಿಟುಕಿಸಿದರು.
         ಖಾದಿರ್ `38 ಮಕ್ಕಳು.. ಈ ವರ್ಷ ಇನ್ನೆರಡು ಸೇರ್ಪಡೆಯಾಗುತ್ತವೆ. 8 ಮೊಮ್ಮಕ್ಕಳು. ಒಬ್ಬ ಮರಿ ಮಗ ಇದ್ದಾನೆ.. ಎಲ್ಲ ಅಲ್ಲಾಹುವಿನ ಕೃಪೆ..' ಎಂದಾಗ ಮಾತ್ರ ವಿನಯಚಂದ್ರ ಸುಸ್ತಾಗಿ ಬೀಳುವುದೊಂದೇ ಬಾಕಿ. `ನಿಮ್ಮ ತಾಕತ್ತು ಭಾರಿ ಬಿಡಿ..' ಎಂದು ಹೇಳಿ ಸುಮ್ಮನಾದ ವಿನಯಚಂದ್ರ. ಮಧುಮಿತಾಳನ್ನು ನೋಡಿ ಕಣ್ಣುಮಿಟಿಕಿಸಿ `ನೋಡಿದೆಯಾ ಖಾದಿರ್ ಭಾಯಿಯ ತಾಕತ್ತು..' ಎಂದು ಪಿಸುಗುಟ್ಟಿದ. ಒಮ್ಮೆ ಕಣ್ಣರಳಿಸಿದ ಮಧುಮಿತಾ ವಿನಯಚಂದ್ರ ಹೇಳಿದ್ದು ಅರ್ಥವಾದ ತಕ್ಷಣ ನಾಚಿಕೊಂಡಳು.
                 ಆ ದಿನ ಹಾಗೆಯೇ ಕಳೆಯಿತು. ಆದರೆ ಮಿರ್ಜಾಪುರದಲ್ಲಿ ಹಿಂಸಾಚಾರ ಕಡಿಮೆಯಾಗುವ ಲಕ್ಷಣ ತೋರಲಿಲ್ಲ. ಸಲೀಂ ಚಾಚಾ ಏಜೆಂಟನಿಗಾಗಿ ಕಾಯುತ್ತಿದ್ದ. ಸಮಯ ಸರಿಯುತ್ತಿತ್ತಾದರೂ ಏಜೆಂಟನ ಪತ್ತೆಯಿರಲಿಲ್ಲ. ಮಿರ್ಜಾಪುರದಿಂದ ಅಂದು ಶತಾಯಗತಾಯ ಪಯಣ ಆರಂಭಿಸಲೇ ಬೇಕಿತ್ತು. ಏಜೆಂಟ ಬರದೇ ಇದ್ದರೆ ಏನು ಮಾಡುವುದು ಎಂಬ ಆಲೋಚನೆ ಎಲ್ಲರ ಮನಸ್ಸಿನಲ್ಲಿ ಮೂಡಿದರೂ ಸಲೀಂ ಚಾಚಾ `ಭಾರತದ ಗಡಿಯತ್ತ ಪ್ರಯಾಣ ಮಾಡುವ ದಾರಿ ನನಗೆ ಗೊತ್ತಿದೆ. ಏಜೆಂಟ ಬರಲಿ, ಅಥವಾ ಬರದೇ ಇರಲಿ.. ನೀವು ಸಾಗಬೇಕು. ನಿಮ್ಮನ್ನು ಅಲ್ಲಿಯವರೆಗೆ ನಾನು ಕಳಿಸಿ ಬರಲೇಬೇಕು..' ಎಂದ.
                   ಇಷ್ಟರ ನಡುವೆ ಮಾಡಲೇಬೇಕಾದ ಕೆಲವು ಕೆಲಸಗಳಿದ್ದವು. ಎಲ್ಲರ ಬಳಿ ಹಣ ಖರ್ಚಾಗಿತ್ತು. ಅಗತ್ಯ ವಸ್ತುಗಳನ್ನೆಲ್ಲ ನದೀ ತೀರದ ದರೋಡೆಕೋರರು ಕದ್ದೊಯ್ದಿದ್ದರು. ಹೀಗಾಗಿ ಅವನ್ನೆಲ್ಲ ಸಂಪಾದಿಸಬೇಕಿತ್ತು. ಅಥವಾ ಯಾರ ಬಳಿಯಾದರೂ ಪಡೆಯಬೇಕಿತ್ತು. ಖಾದಿರ್ ಈ ವಿಷಯವನ್ನು ಅರಿತ ತಕ್ಷಣ ಹಣ, ಆಹಾರ ಹಾಗೂ ಅಗತ್ಯ ವಸ್ತುಗಳನ್ನೆಲ್ಲ ಪೂರೈಸಿದ್ದ. ಇವೆಲ್ಲವುಗಳ ಜೊತೆಗೆ ಇನ್ನೊಂದು ಕೆಲಸ ಬಾಕಿ ಇತ್ತು. ಖಾದಿರ್ ಬಳಿ ಮಾತನಾಡಿದ ಸಲೀಂ ಚಾಚಾ ತಕ್ಷಣವೇ ವಿನಯಚಂದ್ರನನ್ನು ಮನೆಯಿಂದ ಹೊರಗೆ ಕರೆದೊಯ್ದ. ಮಿರ್ಜಾಪುರದ ನಿರ್ಮಾನುಷವೆನ್ನಿಸುವಂತಹ ಒಂದೆರಡು ಬೀದಿಗಳನ್ನು ಹಾದು ಅವರು ಸಾಗಿ ಅದೆಲ್ಲೋ ಒಂದು ದುಕಾನ್ ಎದುರು ನಿಂತರು. ಬೆಂಗಾಲಿ ಹಾಗೂ ಉರ್ದುವಿನಲ್ಲಿ ಬರೆದಿದ್ದ ಆ ಅಂಗಡಿ ಏನು ಎನ್ನುವುದು ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ಮೇಲ್ನೋಟಕ್ಕೆ ಆಸ್ಪತ್ರೆಯೆಂಬಂತೆ ಕಂಡಿತು. ಆದರೆ ತನ್ನನ್ನೇಕೆ ಅಲ್ಲಿಗೆ ಸಲೀಂ ಚಾಚಾ ಕರೆತಂದಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ.
              ಆ ದುಕಾನ್ ಒಳಹೋದಗ ಮಾತ್ರ ಅದು ಆಸ್ಪತ್ರೆಯೆನ್ನುವುದು ವಿನಯಚಂದ್ರನಿಗೆ ಸ್ಪಷ್ಟವಾಯಿತು. ಆಗಲೇ ಸಲೀಂ ಚಾಚಾ `ಬೇಟಾ.. ಇದು ಬಾಂಗ್ಲಾ ದೇಶ. ನೀವು ಬಾಂಗ್ಲಾದಲ್ಲಿ ಇರುವಷ್ಟು ಕಾಲ ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನನ್ನದು. ಹೀಗಿರುವಾಗ ನನಗೇನಾದರೂ ಸಮಸ್ಯೆ ಆದರೆ ನೀವೇ ಬಾಂಗ್ಲಾ ನಾಡಿನಲ್ಲಿ ಸಂಚರಿಸಿ ಭಾರತ ತಲುಪಬೇಕು. ಇದಕ್ಕಾಗಿಯೇ ನಾನು ನಿನ್ನನ್ನು ಇಲ್ಲಿಗೆ ಕರೆತಂದಿದ್ದು..' ಎಂದ.
(ಮಿರ್ಜಾಪುರದ ಇನ್ನೊಂದು ನೋಟ)
         `ಇಲ್ಲಿಗೆ ಸರಿ.. ಇಲ್ಲೇನು ಮಾಡುವುದು..?' ವಿನಯಚಂದ್ರ ಅರ್ಥವಾಗದೇ ಕೇಳಿದ್ದ.
         `ಎಷ್ಟೇ ಚಹರೆ ಬದಲಾಯಿಸಿದರೂ ಕೂಡ ಸಾಮಾನ್ಯವಾಗಿ ಮುಸ್ಲೀಮರು ಹಾಗೂ ಮುಸ್ಲೀಮರಲ್ಲದವರ ನಡುವೆ ವ್ಯತ್ಯಾಸ ಕಂಡು ಹಿಡಿಯಲು ಪ್ರಮುಖವಾಗಿ ಆತನಿಗೆ ಮುಂಜಿ ಆಗಿದೆಯೇ ಇಲ್ಲವೇ ಎಂದು ಪರೀಕ್ಷೆ ಮಾಡುತ್ತಾರೆ. ಮುಸ್ಲೀಮರಲ್ಲದವರಲ್ಲಿ ಮುಂಜಿ (ಖತ್ನಾ) ಮಾಡುವುದಿಲ್ಲ. ಯಾರು ಮುಂಜಿ ಮಾಡಿಸಿಕೊಂಡಿರುತ್ತಾನೋ ಆತ ಮುಸ್ಲೀಂ ಎಂದುಕೊಳ್ಳುತ್ತಾರೆ. ನೀನು ಸುರಕ್ಷಿತವಾಗಿರಬೇಕು ಎಂದಾದಲ್ಲಿ ನೀನು ಮುಂಜಿ ಮಾಡಿಸಿಕೊಳ್ಳಬೇಕು. ಮುಂಜಿ ಮಾಡಿಸಿಕೊಂಡರೆ ಬಾಂಗ್ಲಾದಲ್ಲಿ ಇರುವಷ್ಟು ಸಮಯ ನಿನಗೆ ಸಮಸ್ಯೆ ಇಲ್ಲ. ಮುಂದಿನ ಅಪಾಯವನ್ನು ತಪ್ಪಿಸಿಕೊಳ್ಳಲೋಸುಗ ಈ ಕಾರ್ಯ...ಅದಕ್ಕೆ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು. ತಯಾರಾಗಬೇಕು ನೀನು ಅದಕ್ಕಾಗಿ. ಈ ವಿಷಯವನ್ನು ನಾನು ನಿನಗೆ ಮೊದಲೇ ಹೇಳಬಹುದಿತ್ತು. ಆದರೆ ಸುಮ್ಮನೆ ನೀನು ಗಾಬರಿಯಾಗಬಹುದು ಎಂದು ಹೇಳಲಿಲ್ಲ ಅಷ್ಟೇ' ಎಂದ ಸಲೀಂ ಚಾಚಾ.
         `ಅಲ್ಲಾ ಚಾಚಾ.. ಮುಂಜಿ ಮಾಡಿಸಿಕೊಳ್ಳುವುದು ಅಂದರೆ...' ಚಿಕ್ಕಂದಿನಿಂದ ಆ ಕುರಿತು ಕೇಳಿದ್ದನಾದರೂ ಯಾವುದೇ ಮುನ್ಸೂಚನೆ ಇಲ್ಲದೇ ಸಲೀಂ ಚಾಚಾ ಮುಂಜಿ ಕುರಿತು ಪ್ರಸ್ತಾಪಿಸಿ ಈಗಿಂದೀಗಲೇ ಅದಕ್ಕೆ ತಯಾರಾಗು ಎಂದು ಹೇಳಿದ್ದರಿಂದ ಕೊಂಚ ಗಲಿಬಿಲಿಗೆ ಒಳಗಾಗಿದ್ದ ವಿನಯಚಂದ್ರ.
          `ನಾವು ಜೀವನದಲ್ಲಿ ಅದೆಷ್ಟೋ ನೋವನ್ನು ಸಹಿಸಿಕೊಳ್ಳುತ್ತೇವೆ. ಅಂತವುಗಳ ಎದುರು ಈ ಮುಂಜಿ ಯಾವ ನೋವನ್ನೂ ಕೊಡುವುದಿಲ್ಲ. ನಮ್ಮಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಮುಂಜಿ ಮಾಡುತ್ತಾರೆ ಗೊತ್ತಾ. ಅವರೇ ಸಹಿಸಿಕೊಳ್ಳುತ್ತಾರೆ. ನೀನು ಬೆಳೆದವನು ನಿನಗೆ ಇದನ್ನು ಸಹಿಸಲು ಆಗುವುದಿಲ್ಲವೇ..?' ಎಂದು ಕೇಳಿದಾಗ ಮತ್ತೆ ಮುಜುಗರ ಪಟ್ಟುಕೊಂಡ ವಿನಯಚಂದ್ರ `ಥೋ ಚಾಚಾ.. ಉರಿ ಅಥವಾ ನೋವಿನ ಪ್ರಶ್ನೆಯಲ್ಲ. ನಾನು ಇಷ್ಟು ವರ್ಷಗಳವರೆಗೆ ಬೆಳೆಸಿಕೊಂಡು ಬಂದ ಕಟ್ಟುಪಾಡುಗಳು ಏನೆನ್ನುತ್ತಾವೆಯೋ ಎನ್ನುವ ಭಯ. ಎಂತದ್ದೇ ನೋವನ್ನೂ ನಾನು ಸಹಿಸಿಕೊಳ್ಳಬಲ್ಲೆ. ಆದರೆ ನಂಬಿಕೆಗಳು.. ನಮ್ಮ ಹಿಂದೂಗಳಲ್ಲಿ ಅದನ್ನು ಮಾಡಿಕೊಳ್ಳುವುದು ಅಪರಾಧ ಎನ್ನುವ ಭಾವನೆ ಇದೆ ಚಾಚಾ. ಖತ್ನಾ ಮಾಡಿಕೊಳ್ಳುವುದು ಎಂದರೆ ಧರ್ಮದಿಂದ ಹೊರಕ್ಕೆ ಹೋದ ಎಂಬಂತೆ ನೋಡುತ್ತಾರೆ ಚಾಚಾ' ಎಂದ ಗಲಿಬಿಲಿಯಿಂದ
          `ಬದುಕಿ ಉಳಿದರೆ ತಾನೆ ನಂಬಿಕೆಗಳು, ಧರ್ಮ ಎಲ್ಲ. ಬದುಕಿ ಉಳಿಯುವುದೇ ಅಸಾಧ್ಯ ಎಂದಾದರೆ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕು ಅಲ್ಲವೇ. ನಾವು ಬದುಕಿದರಷ್ಟೇ ನಮ್ಮ ನಂಬಿಕೆಗಳೂ ಜೀವಂತ ಇರುತ್ತವೆ.. ನೀನು ಮುಂಜಿ (ಖತ್ನಾ) ಮಾಡಿಕೊಳ್ಳುವುದು ಖಂಡಿತವಾಗಿಯೂ ತಪ್ಪಲ್ಲ. ನನಗೆ ತಿಳಿದ ಮಟ್ಟಿಗೆ ನಿಮ್ಮ ಧರ್ಮದಲ್ಲಿ ಎಲ್ಲೂ ಮುಂಜಿ ಮಾಡುವುದು ನಿಷಿದ್ಧ ಎಂದು ಹೇಳಿಲ್ಲ.. ಅಲ್ಲವೇ.. ಮತ್ಯಾಕೆ ಹಿಂಜರಿಕೆ.. ಇನ್ನೊಂದು ವಿಷಯ. ನೀನಾಗಿಯೇ ಹೇಳದ ಹೊರತು ನಿನಗೆ ಮುಂಜಿಯಾಗಿದೆ ಎಂದು ಯಾರಿಗೆ ಗೊತ್ತಾಗುತ್ತದೆ? ಸೊಕಾ ಸುಮ್ಮನೆ ನಿನ್ನ ಚೆಡ್ಡಿ ಬಿಚ್ಚಿ ಯಾರು ಅದನ್ನು ನೋಡುತ್ತಾ ಇರುತ್ತಾರೆ ಹೇಳು' ಎಂದ ಚಾಚಾ.
          ಅರೆಘಳಿಗೆಯ ಆಲೋಚನೆಯ ನಂತರ ವಿನಯಚಂದ್ರ ಒಪ್ಪಿಕೊಂಡ. ಆ ಆಸ್ಪತ್ರೆಯ ಹಿರಿಯ ವೈದ್ಯನಾರೋ ವಿನಯಚಂದ್ರನನ್ನು ಒಳಗೆ ಕರೆದೊಯ್ದು ತೊಟ್ಟಿದ್ದ ಪೈಜಾಮಾ ಬಿಚ್ಚಿಸಿಯೇ ಬಿಟ್ಟ. ಒಂದೆರಡು ಕ್ಷಣದಲ್ಲಿಯೇ ಶಿಶ್ನ ಮುಂದೊಗಲನ್ನು ಕತ್ತರಿಸಿ ಮುಂಜಿ ಕಾರ್ಯವನ್ನು ಮುಗಿಸಿದ.  ಈ ಕ್ಷಣದಲ್ಲಿಯೇ ವಿನಯಚಂದ್ರನ ಮನಸ್ಸಿನಲ್ಲಿ `ಸಲೀಂ ಚಾಚಾ ಯಾಕೋ ನಮ್ಮ ಮನಸ್ಸನ್ನು ಪರಿವರ್ತಿಸಿ ತನ್ನನ್ನು ಧರ್ಮಾಂತರ ಮಾಡಲು ಯತ್ನಿಸುತ್ತಿದ್ದಾನೆಯೇ? ಒಳ್ಳೆಯ ಮಾತುಗಳನ್ನು ಆಡಿ, ಒಳ್ಳೆಯವನಂತೆ ವರ್ತಿಸಿ ಸಹಾಯ ಮಾಡುವ ನೆಪದಲ್ಲಿ ತಮ್ಮನ್ನು ಆತನ ಧರ್ಮಕ್ಕೆ ಸೇರಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದಾನೆಯೇ? ಈ ಮುಂಜಿ ಕಾರ್ಯವೂ ಆತನ ಹುನ್ನಾರದ ಒಂದು ಭಾಗವೇ? ಯಾಕೋ ಮುಂದಿನ ದಿನಗಳಲ್ಲಿ ಹುಷಾರಾಗಿರಬೇಕು...' ಎಂದುಕೊಂಡ.
          ಸಲೀಂ ಚಾಚಾ ಮುಂಜಿ ಮಾಡಿದ್ದ ವೈದ್ಯನಿಗೆ ದುಡ್ಡುಕೊಟ್ಟು ಹೊರಡಲು ಅನುವಾದ. ಆ ವೈದ್ಯ ಗಾಯಗೊಂಡ ಭಾಗಕ್ಕೆ ಹಚ್ಚಲು ಅದೇನೋ ಚಿಕ್ಕ ಟ್ಯೂಬಿನ ಮುಲಾಮನ್ನು ನೀಡಿದ. ವಿನಯಚಂದ್ರನಿಗೆ ಕತ್ತರಿಸುವಾಗ ಉರಿಯಾಗದಿದ್ದರೂ ಈಗ ಉರಿಯಾಗಲಾರಂಭಿಸಿತ್ತು. `ಚಲ್ ಬೇಟಾ.. ದೊಡ್ಡ ಕೆಲಸ ಮುಗಿಯಿತು. ಇನ್ನು ಯಾವುದೇ ಅಪಾಯವಿಲ್ಲ.. ಇನ್ನು ಯಾರೇ ಬಂದರೂ ಬಾಂಗ್ಲಾವಿರಲಿ ವಿಶ್ವದ ಯಾವುದೇ ಕಡೆ ನೀನು ಚಹರೆ ಬದಲಿಸಿಕೊಂಡಿದ್ದರೂ ಮುಸ್ಲೀಮನಲ್ಲ ಎಂದು ಹೇಳುವುದು ಕಷ್ಟ...' ಎಂದ. ವಿನಯಚಂದ್ರನಿಗೆ ಮತ್ತೊಮ್ಮೆ ಮನಸ್ಸು ಧಸಕ್ಕೆಂದಿತು. ಕತ್ತರಿ ಹಾಕಿದ್ದ ಜಾಗದಲ್ಲಿ ಉರಿ ಹೆಚ್ಚಾಗಿತ್ತು.

(ಮುಂದುವರಿಯುತ್ತದೆ...)

Saturday, September 13, 2014

ಹರಟೆ

ಒಂದು ಇತಿಹಾಸ

ಇತ್ತೀಚೆಗೆ ಪರಿಚಯದವರ ಜೊತೆಗೆ ಮಾತನಾಡುತ್ತಿದ್ದೆ.
ಅವರೊಂದು ಇಂಟರೆಸ್ಟಿಂಗ್ ವಿಷಯವನ್ನು ತಿಳಿಸಿದರು.

ಶಿರಸಿ ತಾಲೂಕಿನ ಕರೂರಿನಲ್ಲಿ ಒಂದು ಕೋಟೆಯಿರುವ ವಿಷಯ ನನಗೆ ಬಾಲ್ಯದಿಂದಲೇ ತಿಳಿದಿದೆ.
ದಿನದಿಂದ ದಿನಕ್ಕೆ ಈ ಕೋಟೆ ನನ್ನಲ್ಲಿ ಅಪಾರ ಕುತೂಹಲವನ್ನೂ ಹುಟ್ಟುಹಾಕಿತ್ತು.
ಅದನ್ನು ನೋಡಬೇಕು ಎಂದುಕೊಂಡು ಎಂದು ಹಲವು ಸಾರಿ ಕರೂರಿನ ಕಡೆಗೆ ಪಯಣ ಬೆಳೆಸಿದ್ದೆ.
ಆದರೆ ಕಾರಣಾಂತರಗಳಿಂದ ಆಗಲಿಲ್ಲ.
ನಮ್ಮ ಮಾತು ಕರೂರಿನ ಗೌಡರಾಳ್ವಿಕೆಯ ಕಡೆಗೆ ಸರಿಯಿತು.
ಕರೂರಿನ ಗೌಡರು ಸೋದೆಯ ಅರಸರ ಸಾಮಂತರು ಎಂದು ತಿಳಿಸಿದರು ಅವರು.
ಅವರ ಕೋಟೆ ಸೋಂದಾ ಕೋಟೆಯಂತೆ ಇದೆ ಎನ್ನುವ ಮಾಹಿತಿ ತಿಳಿಸಿ ಕೋಟೆಯ ಸುತ್ತ ಮಾಸ್ತಿಗಲ್ಲುಗಳು, ವೀರಗಲ್ಲುಗಳೂ ಇವೆ. ಸ್ಥಳೀಯವಾಗಿ ಪ್ರಭುದೇವರು, ಆಂಜನೇಯನ ಗುಡಿಯನ್ನು ನಿರ್ಮಾಣ ಮಾಡಿದ್ದು ಇವರೇ ಎಂಬ ಮಾಹಿತಿಯನ್ನು ಅವರು ನೀಡಿದರು. 
ನನಗೆ ಕುತೂಹಲಗೊಂಡು ಕೇಳಿದೆ. 
ನನ್ನೂರಿನಿಂದ ಕರೂರು ನಾಲ್ಕು ಕಿ.ಮಿ.
ಕರೂರಿನ ದಿಕ್ಕಿನಲ್ಲಿ ಸಮಾ ವಿರುದ್ಧವಾಗಿ ನಾಲ್ಕು ಕಿ.ಮಿ ಹೋದರೆ ಬಾಳೂರು.
ಅಲ್ಲೂ ಒಂದು ಕೋಟೆಯಿತ್ತು. ಅಲ್ಲೂ ಗೌಡರ ಆಳ್ವಿಕೆಯಿತ್ತು. ಈಶ್ವರ, ಸುಬ್ರಹ್ಮಣ್ಯ, ಗಣಪತಿಯ ದೇವಾಲಯ ಕಟ್ಟಿಸಿದವರು ಅವರು. ಹೆಸರಾಂತ ಗುಡ್ಡೇತೋಟದ ಕೋಟೆ ವಿನಾಯಕನ ದೇವಾಲಯ ಕಟ್ಟಿದ್ದು ಇದೇ ಗೌಡರು.
ನನ್ನೂರು ಬಾಳೂರು ಗೌಡರ ಆಳ್ವಿಕೆಗೆ ಬರುತ್ತಿತ್ತೋ ಅಥವಾ ಕರೂರು ಗೌಡರ ಅಧೀನಕ್ಕೆ ಬರುತ್ತಿತ್ತೋ ಎಂಬುದು ನನ್ನೊಳಗಿನ ಕುತೂಹಲವಾಗಿ ಅವರ ಬಳಿ ಕೇಳಿದೆ.
ಅದಕ್ಕವರು ಗೊತ್ತಿಲ್ಲ ಎಂದರು. ಕೊನೆಗೆ ಯಾರದ್ದೇ ಆಳ್ವಿಕೆಗೆ ಬರಲಿ. ಸೋದೆ ಅರಸರ ಸಾಮಂತರು ಇವರಾದ ಕಾರಣ ಸೋದೆ ಅರಸರ ಅಧೀನಕ್ಕೆ ಬರುತ್ತದೆ ಎಂದರು. ನಾನು ಹುಂ ಎಂದು ಸುಮ್ಮನಾದೆ.

ಕರೂರು ಅರಸರ ಬಗ್ಗೆ ಇನ್ನೊಂದು ವಿಷಯವನ್ನು ಅವರು ತಿಳಿಸಿದರು.
ಕರೂರು ಅರಸ ತನ್ನ ಮಗಳನ್ನು ಆಂದ್ರಪ್ರದೇಶದ ನಾಗಾರ್ಜುನಕೊಂಡಕ್ಕೆ ಮದುವೆ ಮಾಡಿಕೊಟ್ಟಿದ್ದನಂತೆ.
ಕರೂರು ಅರಸನ ಮಗಳ ಮನೆತನದವರು ಇಂದಿಗೂ ಇದ್ದಾರಂತೆ ಎಂದರು.
ನನಗೆ ಅಚ್ಚರಿಯಾಯಿತು. ಅವರನ್ನು ಹುಡುಕಿ ಹೋಗುವ ಸಾಹಸ ಮಾಡುವ ತುಡಿತ ಹುಟ್ಟಿತು.
ಸುಮ್ಮನೇ ಕೇಳಿದೆ.
`ಅಲ್ಲಾ ಮಾರಾಯ್ರೆ.. ಈಗ ಬಸ್ಸು ಕಾರುಗಳಿವೆ. ಅವುಗಳ ಮೇಲೆ  ಕರೂರಿನಿಂದ ಅಜಮಾಸು 500 ಕಿ.ಮಿ ದೂರವಿರುವ ನಾಗಾರ್ಜುನ ಕೊಂಡಕ್ಕೆ ಹೋಗಿ ಹುಡುಕಿ ಅದ್ಹೇಗೆ ಮಗಳನ್ನು ಕೊಟ್ಟರು? ಅಲ್ಲ ಅವರು ಕುದುರೆ ಮೇಲೆ ಹೋದರು ಕನಿಷ್ಟ ಒಂದು ವಾರ ಬೇಕಲ್ಲ. ಇನ್ನು ನಡೆದುಕೊಂಡು ಹೋದರೆ ಒಂದು ತಿಂಗಳೇ ಬೇಕು. ನಡುವೆ ಕೃಷ್ಣಾ, ತುಂಗಭದ್ರಾ ನದಿಗಳು ಸಿಗುತ್ತವೆ. ಆಗ ಆ ನದಿಗಳು ಈಗಿನದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತ ಹರಿಯುತ್ತಿದ್ದವು. ಅದನ್ನು ಹೇಗೆ ದಾಟಿದರು? ಅಲ್ಲ ಕರೂರಿನ ಗೌಡರು ನಾಗಾರ್ಜುನ ಕೊಂಡದ ವರೆಗೆ ಹೋಗಿ ತಮ್ಮ ಮಗಳಿಗೆ ಅನುರೂಪ ಗಂಡನ್ನು ಹುಡುಕಿ, ಆ ಗಂಡು ಅಲ್ಲಿಂದ ಇಲ್ಲಿಗೆ ಬಂದು ಹೆಣ್ಣು ನೋಡಿ, ಮದುವೆ ನಿಶ್ಚಯಿಸಿ, ಮದುವೆಯಾಗಿ ಮತ್ತೆ ಮರಳಿ ಹೋಗಲು ಏನಿಲ್ಲವೆಂದರೂ ಕನಿಷ್ಟ ಮೂರ್ನಾಲ್ಕು ತಿಂಗಳೇ ಬೇಕಾಗಿರಬಹುದಲ್ಲವೇ? ಇನ್ನು ತಂದೆ-ತಾಯಿ ಮಗಳನ್ನು ನೋಡಲು ಹೋಗಬೇಕು ಅಥವಾ ಮಗಳು ತವರಿಗೆ ಮರಳಬೇಕು ಎಂದರೆ ಮತ್ತೆ ತಿಂಗಳುಗಟ್ಟಲೆ ಪಯಣ ನಡೆಯಲೇಬೇಕು.. ಎಂತಾ ಕಾಲ ಮಾರಾಯ್ರೆ..' ಎಂದೆ.
ಅವರೂ ಹೌದು.. ಎಂದು ವಿಸ್ಮತರಾದರು.

ಕೊನೆಗೆ ಮೊನ್ನೆ ಇದೇ ವಿಷಯವನ್ನು ಶಿರಸಿಯ ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಅವರ ಮುಂದಿಟ್ಟೆ.
ಅವರು ಹೇಳಿದ್ದು `ಅಲ್ಲ ಗಂಡನ್ನು ಹುಡುಕಿಕೊಂಡು ಕರೂರು ಗೌಡರು ನಾಗಾರ್ಜುನ ಕೊಂಡಕ್ಕೆ ಹೋದರು ಅಂತ ಹೇಗೆ ಭಾವಿಸುತ್ತೀರಿ? ಸೋದೆ ಅರಸರಿಗೆ ನಾಗಾರ್ಜುನ ಕೊಮಡದ ಅರಸರ ಮಿತ್ರರಿದ್ದು ಕರೂರು-ನಾಗಾರ್ಜುನಕೊಂಡದ ನಡುವೆಯೆಲ್ಲೋ ಭೇಟಿಯಾಗಿ, ಸ್ನೇಹ ಬೆಳೆದು ಕರೂರು ಅರಸರು ಮಗಳ ಮದುವೆ ಪ್ರಸ್ತಾಪ ಮಾಡಿರಬಹುದಲ್ಲ.. ಹಾಗೆಯೇ ಅಲ್ಲಿಂದಲೇ ಬಂದು ಮದುವೆ ಮಾಡಿಕೊಂಡು ಹೋಗಿರಬಹುದು..' ಎಂದರು.
ನನಗೆ ಹೌದಲ್ಲ ಅನ್ನಿಸಿತಾದರೂ ಅರಸರ ಮಗಳು ತವರಿಗೆ ಬರುವುದು ಹಾಗೂ ಕರೂರು ಅರಸರು ನಾಗಾರ್ಜುನ ಕೊಂಡಕ್ಕೆ ಮಗಳ ನೋಡುವುದನ್ನು ಹೋಗುವುದರ ಬಗ್ಗೆ ಕೇಳಿದೆ.
ಅದಕ್ಕವರು `ಆಗ ಕುದುರೆಗಳೇ ಸಂಚಾರಕ್ಕೆ ಬಳಕೆಯಾಗುತ್ತಿದ್ದವು. ಕುದುರೆಗಳು ನಮ್ಮ ಕಾರುಗಳಿಗಿಂತ ವೇಗವಾಗಿ ಓಡಬಲ್ಲ ತಾಕತ್ತು ಹೊಂದಿವೆ. ಈಗಿನದಕ್ಕಿಂತ ಮೂರ್ನಾಲ್ಕು ದಿನಗಳು ವಿಳಂಬವಾಗಿ ಆಗಿನ ಪ್ರಯಾಣ ಇರುತ್ತಿತ್ತು. ತೀರಾ ತಿಂಗಳುಗಟ್ಟಲೆ ಪ್ರಯಾಣ ನಡೆಯುವುದಿಲ್ಲ.. ಕುದುರೆಗಳು ಸಲೀಸಾಗಿ ನದಿ ದಾಟುತ್ತವೆ..' ಎಂದರು. ಅವರ ಉತ್ತರ ನನಗೆ ಸಮಾಧಾನ ತಂದಿತ್ತು.


ಆದರೆ ನಾಗಾರ್ಜುನ ಕೊಂಡದಲ್ಲಿ ಇರುವ ಕರೂರು ಗೌಡರ ಮಗಳ ಕುಟುಂಬಸ್ಥರನ್ನು ಹುಡುಕುವ ಹಂಬಲ ಮನಸ್ಸಿನಲ್ಲಿ ಮೂಡುತ್ತಿದೆ. ನಾಗಾರ್ಜುನ ಕೊಂಡ ಸೆಳೆಯುತ್ತಿದೆ. 

********


`ಅಣಾ ನಾನೊಂದು ಧಾರವಾಹಿ ಮಾಡೋಣ ಅಂತಿದ್ದೇನೆ' ಎಂದಳು ತಂಗಿ.
`ಎಂತದ್ದೇ ಅದು?' ಎಂದೆ ನಾನು.
`ವಿನಯನ ಲೈಫ್ ಸ್ಟೋರಿ ಅಂತ ಮಾಡೋಣ ಅಂದುಕೊಂಡಿದ್ದೇನೆ' ಎಂದಳವಳು.
`ಶಿ.. ಬ್ಯಾಡ.. ನನ್ ಲೈಫ್ ಸ್ಟೋರಿ ಅಷ್ಟು ಇಂಟರೆಸ್ಟಿಂಗ್ ಆಗಿಲ್ಲ. ಟಿ.ಆರ್.ಪಿ. ಬರೋದಿಲ್ಲ.. ಬ್ಯಾಡ..ಬಿಡು' ಎಂದೆ.
`ಅಯ್ಯೋ.. ಮಾರಾಯಾ.. ಯಾರಂದಿದ್ದು ನಿನ್ ಲೈಫ್ ಸ್ಟೋರಿ ಅದರಲ್ಲಿ ಇರ್ತದೆ ಅಂತ?' ಎಂದಳು ಅವಳು.
`ಮತ್ತೆ... ನನ್ ಹೆಸರು ಇಟ್ಟಿದ್ದೀಯಲ್ಲೆ...' ಎಂದೆ.
`ಅಯ್ಯೋ ಮಾರಾಯಾ.. ಹೆಸರಷ್ಟೇ ವಿನಯನ ಲೈಫ್ ಸ್ಟೋರಿ ಅಂತ. ಕಥೆಯಲ್ಲೆಲ್ಲೂ ನೀನು ಬರೋದಿಲ್ಲ. ನಿನಗೆ ಸಂಬಂಧಿಸಿದ್ದೂ ಅಲ್ಲ. ಒಂದು ಕೌಟುಂಬಿಕ ಧಾರವಾಹಿ ಅದು. ಸುಮ್ನೆ ನೆಪಕ್ಕಷ್ಟೆ ನಿನ್ ಹೆಸರು.' ಎಂದಳವಳು.
ನಾನು ಪೆಚ್ಚಾಗಿ ನೋಡುತ್ತಿದ್ದಾಗಲೇ ಅವಳು ಮುಂದುವರಿಸಿದಳು `ಅಲ್ಲಾ.. ಈಗಿನ ಎಷ್ಟೋ ಸಿನಿಮಾಗಳನ್ನು ನೋಡು ಕತೆಗೂ ಟೈಟಲ್ಲಿಗೂ ಸಂಬಂಧವೇ ಇರೋದಿಲ್ಲ. ಎಂತದ್ದೋ ಕಥೆ ಇನ್ನೆಂತದ್ದೋ ಹೆಸರು. ಹಂಗೆ ಈ ಧಾರವಾಹಿ ಕೂಡ. ಹೆಸರಷ್ಟೇ ನಿಂದು. ಕಥೆ ಇನ್ನೇನೋ. ನಿಂಗೆ ಬೇಜಾರಾಗ್ತದೆ ಅಂತಾದ್ರೆ ಎಲ್ಲಾದರೂ ಧಾರವಾಹಿಯ ಒಂದೆರಡು ಸಾಲಲ್ಲಿ ನಿನ್ನ ಲೈಫು ಅನ್ನೋ ಒಂದೆರಡು ಸಾಲಿನ ಡೈಲಾಗು ಸೇರಿಸಿಬಿಡ್ತೀನಿ.. ಥೇಟು ಈಗಿನ ಕನ್ನಡ ಸಿನೆಮಾಗಳಲ್ಲಿ ಬರೋ ಥರಾ..' ಎಂದಳು.
ನಾನು ಪೆಚ್ಚಾದೆ. ತಂಗಿ ನಕ್ಕಳು..!



********


ವಾದ್ರಾ ಬಿಸಿನೆಸ್. :

2004ರಿಂದ2014ರ ನಡುವೆ ಪಂಜಾಬಿನಲ್ಲಿ ನಾನು ತಗೊಂಡಿದ್ದ ನೂರಾರು ಎಕರೆ ಜಮೀನಿತ್ತು.
ನನ್ನಲ್ಲಿ ಸಿಕ್ಕಾಪಟ್ಟೆ ಅಕೌಂಟ್ಸ್ ಇತ್ತು ಆದ್ರೂ ದುಡ್ಡು ಬೇಕಿತ್ತು.
ತಕ್ಷಣ ನನ್ನ ಮೊಬೈಲಿನಲ್ಲಿ ನನ್ನ ಜಮೀನಿನ ಐದಾರು ಪೋಟೋ ತೆಗೆದೆ.
ಮೋಬೈಲಿನಲ್ಲಿ OLX appsನ ಡೌನ್ ಲೊಡ್ ಮಾಡದೆ.
ಪೋಟೋ ಅಪ್ಲೋಡ್ ಮಾಡದರೆ `ಬಿಟ್ಟಿ ಜಮಿನು ಬೇಕಾದವ್ರು ತಗೋಳಿ..' ಅಂತ ಕ್ಯಾಚಿ ಟೈಟಲ್ ಕೊಟ್ಟೆ
ಶೇರ್ ಮಾಡದೆ.. ನಾನ್ ಶೇರ್ ಮಾಡಿದ ಅರ್ಧ ಗಂಟೇಲೆ ಹೆಸರಾಂತರಿಂದ, ಖ್ಯಾತನಾಮರಿಂದ, ವಿದೇಶಿಯರಿಂದೆಲ್ಲ ಪೋನ್ಸ್ ಬರೋಕೆ ಶುರುವಾಯ್ತು.
ಒಂದಿಬ್ಬರು ಒಳ್ಳೆ ರೇಟಿಗೆ ಜಮೀನು ತಗೋಳೋಕೆ ತಯಾರಾಗಿದ್ರು.
ನಾನು ಅವರಿಗೆ ಕೂಡಲೇ ಜಮೀನು ಮಾರಿಬಿಟ್ಟೆ.
ಬಂದ ದುಡ್ಡಲ್ಲಿ ಅರ್ಧ ಅತ್ತೆಗೆ ಕೊಟ್ಟೆ.

ಈ ನಡುವೆ ಹೆಂಗೆ ಮಾರಾಟ ಮಾಡ್ಬೇಕು ಗೊತ್ತಾ?
OLX..!!

Friday, September 12, 2014

ಸಾಗುವ ಬಾ ಜೊತೆಗಾರ

ಸಾಗುವ ಬಾ ಜೊತೆಗಾರ
ಮೆರೆವ ಮರೀಚಿಕೆಯ
ಮರುಳು ಗಾಡಿನ ನಾಡೊಳಗೆ |

ತಲೆಯ ಮೇಲೆ ಸುಡುವ
ರಣ ಬಿಸಿಲು, ಬಸವಳಿಕೆ
ಬಾಯಾರಿಕೆ, ಜೊತೆಗಿರುವ
ಕಷ್ಟ-ನಕ್ಷತ್ರಿಕರು |

ಸಾಗುವ ಬಾ ಜೊತೆಗಾರ.
ಅಳುಕಿಲ್ಲ, ಬಳುಕಿಲ್ಲ
ಕೊನೆಗಾಣದ ರವೆ ರವೆಯ
ಮರಳ ಕಣ ಕಣವ
ಪಾದದಿಂದೊದ್ದು ಸಾಗುವಾ,
ಗಮ್ಯ ತಲುಪುವಾ |

ಹಲ್ಕಿರಿಯುವ ನೆರಳು
ಸಾವ ಸೆಳವು,
ಹಾಗೆಯೇ ಇರಲಿ ಬಿಡು |
ಮೆರೆವ ಮರುಳು
ಮರಳು ದಿಬ್ಬವ
ಮರೆತು ಬಿಡು |

ನಾನು ನೀನಷ್ಟೇ
ಜೊತೆಗಾರರು ಕೊನೆತನಕ.
ಅಳುಕ ಬೇಡ ನೀ,
ಸ್ವರ್ಗದ ಮೆಟ್ಟಿಲೇರುವವರೆಗೆ
ಧರ್ಮರಾಜನ ಜೊತೆಗೊಂದು
ಶ್ವಾನವಿತ್ತಲ್ಲವೇ ಹಾಗೆ
ನನ್ನೊಡನೆ ನೀನು |

ಬಿಡಿಸದ ಬಂಧ, ನಂಟು
ಗಟ್ಟೀ ಛಲ, ದಿಟ್ಟತನ
ಸಾಗುವ ಬಾ ಜೊತೆಗಾರ |

**

(ಈ ಕವಿತೆಯನ್ನು ಬರೆದಿರುವುದು 04-02-2007ರಂದು ದಂಟಕಲ್ಲಿನಲ್ಲಿ)

Tuesday, September 9, 2014

ಪರಾಮಶಿ (ಕಥೆ)

                `ರಾಮಚಂದ್ರ ಆತ್ಮಹತ್ಯೆ ಮಾಡ್ಕ್ಯಂಡನಡಾ.. ನಿಂಗೊತ್ತಾತಾ' ಎಂದು ಮುಂಜಾನೆ ನಾನು ಏಳುತ್ತಿದ್ದಂತೆಯೇ ಮಾಬಲು ಹೇಳಿದ್ದ. ನಾನು ಒಮ್ಮೆ ಅಚ್ಚರಿಗೊಂಡೆ. ಚಿಕ್ಕ ಶಾಕ್ ನೊಂದಿಗೆ `ಹೌದನಾ..?, ಎಂತಕ್ಕಡಾ? ಯಾವತ್ತು ಆತ್ಮಹತ್ಯೆ ಮಾಡಿಕೊಂಡಿದ್ದು..?' ಎಂದು ವಿಚಾರಿಸಲಾಗಿ ಮಾಬಲು `ಗೊತ್ತಿಲ್ಲೆ ಮಾರಾಯಾ.. ನಿನ್ನೆ ರಾತ್ರಿ ಅದ್ಯಾವುದೋ ಲಾಡ್ಜಿಗೆ ಹೋಗಿ ರೂಂ ಮಾಡಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡ್ಕ್ಯಂಜಾ ಅಂತ ಎಲ್ಲ ಕಡೆ ಸುದ್ದಿ. ಯಂಗೂ ಖರೆ ವಿಷ್ಯ ಇನ್ನೂ ತೆಳದ್ದಿಲ್ಲೆ ನೋಡು. ಆದ್ರೆ ಸಣ್ಣ ವಯಸ್ಸಾಗಿತ್ತಲಾ ಮಾರಾಯಾ.. ಅಂವ ಆತ್ಮಹತ್ಯೆ ಮಾಡ್ಕ್ಯತ್ತಾ  ಅಂದ್ರೆ ಯಾರೂ ನಂಬಲೆ ಸಾಧ್ಯ ಇಲ್ಲೆ ನೋಡು..' ಎಂದ ಮಾಬಲು.
               `ಹೌದಾ ಮಾರಾಯಾ.. ಆರಡಿ ಆಳು ಆಗಿದ್ನಲಾ.. ಮೊನ್ನೆ ಅಷ್ಟೆ ಎಂತದ್ದೋ ಜಾಬ್ ಸಿಕ್ಕಿದ್ದು ಹೇಳಿ ಸ್ವೀಟ್ ಕೊಟ್ಟಿಕ್ಕೆ ಹೋಗಿದ್ದ. ಖರೆ ಅಂವ ಆತ್ಮಹತ್ಯೆ ಮಾಡ್ಕ್ಯಂಡಿದ್ದೇ ಹೌಡನಾ..? ' ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಲು ನಾನು ಮತ್ತೊಮ್ಮೆ ಕೇಳಿದ್ದೆ.
               `ಥೋ ಮಾರಾಯಾ.. ಆನೂ ಹಿಂಗೆ ಅಂದಕಂಡಿದ್ನಾ.. ಎಲ್ಲಾರೂ ಹಂಗೆ ಅಂದ್ವಾ.. ಅದಕ್ಕಾಗಿ ನಂಬಲೇ ಬೇಕಾತು ನೋಡು..' ಎಂದು ಮಾಬಲು ಹೇಳಿದಾಗ ನಾನು ನಂಬಲೇಬೇಕಾಯಿತು. `ಬಾ ಅವ್ನ ಅಂತ್ಯಸಂಸ್ಕಾರ ನೋಡ್ಕ್ಯಂಡಾದ್ರೂ ಬಪ್ಪನ..' ಎಂದು ಮಾಬಲುವನ್ನು ರಾಮಚಂದ್ರನ ಮನೆಯ ಕಡೆಗೆ ಕರೆದೊಯ್ದೆ.
               ಮೂಲೆಮನೆ ರಾಮಚಂದ್ರ ಅಂದರೆ ನಮ್ಮ ಬಳಗದಲ್ಲಿಯೇ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮದೆಲ್ಲ ಒಂದೇ ವಯಸ್ಸು. ಆತನಿಗೂ ನನ್ನಷ್ಟೇ ಅಂದರೆ 25ರ ಆಜುಬಾಜಿನ ವಯಸ್ಸು. ಉಕ್ಕುವ ಯೌವನ. ಹುಚ್ಚುಖೋಡಿಯ ಮನಸ್ಸು. ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ರಾಮಚಂದ್ರನನ್ನು ಬಿಟ್ಟರೆ ಇನ್ನೊಬ್ಬರಿರಲಿಲ್ಲ. ಎಲ್ಲದರಲ್ಲಿಯೂ ಆತನೇ ಮುಂದು. ಆರಡಿಯ ಆಜಾನುಬಾಹು ಬೇರೆ. ಹುಡುಗಿಯರಂತೂ ಆತನನ್ನು ಮುತ್ತಿಕೊಳ್ಳುತ್ತಿದ್ದರು. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದರೆ ನಂಬಲು ಅಸಾಧ್ಯವೇ. ಯಾಕೋ ಏನೆಲ್ಲ ಆಲೋಚನೆಗಳು ಮನಸ್ಸಿನಲ್ಲಿ ಮೂಡಿದವು. ಥಟ್ಟನೆ ತಲೆ ಕೊಡವಿ ಮಾಬಲುವಿನ ಜೊತೆ ಅವರ ಮನೆಯ ಕಡೆಗೆ ಮುನ್ನಡೆದೆ.
                ನಮ್ಮ ಗೆಳೆಯರ ಬಳಗದಲ್ಲಿ ರಾಮಚಂದ್ರನದ್ದು ವಿಶೇಷ ಪಾತ್ರ. ಎಲ್ಲ ಕಡೆ ಕಾಣಿಸಿಕೊಂಡು ಎಲ್ಲೆಡೆ ಸಲ್ಲುವವನಾಗಿದ್ದ. ನಗುತ್ತ, ನಗಿಸುತ್ತ ಖುಷಿ ಖುಷಿಆಯಗಿ ಇರುತ್ತಿದೆ. ಆತನಿದ್ದ ಕಡೆಯಲ್ಲಿ ಕ್ರಿಯಾಶೀಲತೆಯೇ ಇದೆಯೇನೋ ಎನ್ನುವಂತಿದ್ದ. ಆತನ ಮನೆಯಲ್ಲೂ ಕೂಡ ಆತನಿಗೆ ಪೂರಕವಾಗಿಯೇ ಇದ್ದರು. ಕೇಳಿದ್ದನ್ನು ಕೊಡಿಸುವ ಅಪ್ಪ, ಮಗನ ನಡೆ ನುಡಿಗಳಿಗೆಲ್ಲ ಸೈ ಎನ್ನುವ ಅಮ್ಮ. ಒಟ್ಟಿನಲ್ಲಿ ಆತನ ಬದುಕಿನಲ್ಲಿ ಎಲ್ಲವೂ ಇದ್ದವು. ಅಂತವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ನಂಬುವುದು ಕಷ್ಟವೇ.
              ರಾಮಚಂದ್ರನನ್ನು ನಾನು ಅನೇಕ ಸಾರಿ ಅರ್ಥಮಾಡಿಕೊಳ್ಳಲು ಯತ್ನಿಸಿ ಸೋತಿದ್ದಿದೆ. ಆಗೊಮ್ಮೆ ಈಗೊಮ್ಮೆ ನಗುತ್ತಾನೆ. ತಮಾಷೆ ಮಾಡುತ್ತಾನೆ. ತಾನಿರುವ ವಾತಾವರಣವನ್ನು ಸದಾ ಖುಷಿ ಖುಷಿಯಾಗಿ ಇಡಲು ಪ್ರಯತ್ನಿಸುತ್ತಿದ್ದಂತಹ ವ್ಯಕ್ತಿ. ಆದರೆ ತನ್ನ ಹಾಸ್ಯವನ್ನು ಎಂದೂ ಎಲ್ಲೆ ಮೀರಲು ಬಿಟ್ಟವನಲ್ಲ. ಗಂಭೀರ ಅಂಶಗಳು ಆತನಲ್ಲಿ ಸಾಕಷ್ಟಿದ್ದವು. ಜೀವನದಲ್ಲಿ ಎಂದೂ ನಿರಾಸೆಯನ್ನು ಅನುಭವಿಸಿದವನಲ್ಲ. ಸೋಲಿಗೆ ಹೆದರಿದವನಂತೂ ಅಲ್ಲವೇ ಅಲ್ಲ. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಹೇಗೆ ಸಾಧ್ಯ ಎನ್ನುವ ಆಲೋಚನೆಯಲ್ಲಿಯೇ ಆತನ ಮನೆಗೆ ಹೋದೆ.
             ಮನೆ ನೀರವವಾಗಿತ್ತು. ತಂದೆ-ತಾಯಿಗಳು ದುಃಖದಲ್ಲಿದ್ದರು. ಆತನ ಶವ ಹೊರ ಮನೆಯಲ್ಲಿತ್ತು. ಬಂಧುಗಳು ಆಗಲೇ ಮುಂದಿನ ಕಾರ್ಯವನ್ನು ಕೈಗೊಂಡಾಗಿತ್ತು. ನಾನು ಅರೆಘಳಿಗೆ ರಾಮಚಂದ್ರನ ಶವದ ಮುಂದೆ ನಿಂತೆ. ಮನಸ್ಸಿನಲ್ಲಿ ಆತನ ಆತ್ಮಕ್ಕೆ ಶಾಂತಿ ಸಿಗಲಿ ಭಗವಂತ ಎಂದು ಹಾರೈಸಿದೆ. ಮೆಚ್ಚಿನ ಗೆಳೆಯನನ್ನು ಕಳೆದುಕೊಂಡ ದುಃಖ ಬಹಳೆ ಕಾಡಿತು. ಕೆಲ ಹೊತ್ತಿನ ನಂತರ ಆತನ ಅಂತ್ಯ ಸಂಸ್ಕಾರ ಕೂಡ ನಡೆಯಿತು. ಭಾರವಾದ ಹೃದಯದೊಂದಿಗೆ ನಾನು ಅಲ್ಲಿಂದ ಮರಳಿದೆ.
              ರಾಮಚಂದ್ರನ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ನನಗೆ ಕೊನೆಗೂ ತಿಳಿದಿರಲಿಲ್ಲ. ನಾನು ಅದನ್ನು ತಿಳಿಯಬೇಕಲ್ಲ ಎಂದುಕೊಂಡು ಹೊರಟೆ. ಸೊಕಾಸುಮ್ಮನೆ ಪತ್ತೆದಾರಿಕೆ ಕೆಲಸಕ್ಕೆ ಇಳಿದೆ ಎನ್ನಿ. ಆತನ ಪರಿಚಯ ಇದ್ದವರ ಬಳಿ ವಿಚಾರಿಸಿದೆ. ನಾನು ವಿಚಾರಿಸಿದವರೆಲ್ಲರೂ ಬಗೆ ಬಗೆಯ ಕಾರಣಗಳನ್ನು ತಿಳಿಸಿದರು. ಒಬ್ಬ ಅನಾರೋಗ್ಯ ಎಂದರೆ ಮತ್ತೊಬ್ಬ ಪ್ರೇಮವೈಫಲ್ಯ ಎಂದರು. ಮತ್ತಿನ್ಯಾರೋ ಆತ ಕೆಲಸ ಮಾಡುತ್ತಿದ್ದ ಆಫೀಸಿನಲ್ಲಿ ಮೇಲಧಿಕಾರಿಗಳ ಜೊತೆ ವೈಮನಸ್ಸು ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದೂ ತಿಳಿಸಿದರು. ಆದರೆ ಯಾರೊಬ್ಬರೂ ನಿಖರ ಕಾರಣವನ್ನು ತಿಳಿಸಲಿಲ್ಲ. ನನಗೆ ಉತ್ತರ ಗೊತ್ತಾಗುವ ಬದಲು ಮತ್ತಷ್ಟು ಗೊಂದಲವೇ ಹೆಚ್ಚಿತು. ಕೊನೆಗೆ ಆತನ ಮನೆಗೆ ಹೋಗಿ ವಿಚಾರಿಸಿದರೆ ನಿಖರ ಕಾರಣ ಗೊತ್ತಾಗುತ್ತದೆ ಎಂದುಕೊಂಡೆ. ನಾಲ್ಕೈದು ದಿನಗಳ ನಂತರ ಆತನ ಮನೆಗೆ ಹೋದೆ.
           ಮನೆಯಲ್ಲಿ ವಿಷಯವನ್ನು ಹೇಗೋ ತಿಳಿಸಿದೆ. ದುಃಖದ ಮಡುವಿನಲ್ಲಿದ್ದ ಆತನ ಮನೆಯವರು ಆತನ ಕೋಣೆಯನ್ನು ತೋರಿಸಿದರು. ನಾನು ರಾಮಚಂದ್ರನ ಕೋಣೆಗೆ ತೆರಳಿ ಆತನ ಆತ್ಮಹತ್ಯೆಗೆ ಕಾರಣ ಸಿಗಬಹುದಾ ಎಂದು ಹುಡುಕಾಡಲಾರಂಭಿಸಿದೆ. ಆತ ಕೂರುತ್ತಿದ್ದ ಜಾಗ, ಟೇಬಲ್, ಮಂಚದ ಕೆಳಗೆ ಎಲ್ಲ ಹುಡುಕಿದೆ. ಹೀಗೆ ಹುಡುಕುತ್ತಿದ್ದಾಗ ಅಚಾನಕ್ಕಾಗಿ ಮೆಡಿಕಲ್ ರಿಪೋರ್ಟ್ ಒಂದು ಸಿಕ್ಕಿತು. ಬೇಗನೆ ತೆಗೆದು ನೋಡಿದೆ. ರಾಮಚಂದ್ರನ ಬ್ಲಡ್ ಟೆಸ್ಟ್ ರಿಪೋರ್ಟ್ ಇತ್ತು. ಯಾವು ಯಾಔಉದೋ ಟೆಸ್ಟುಗಳು. ಏನೇನೋ ತಪಾಸಣೆ ಮಾಡಿದ್ದರು. ಮೊದಲಿಗೆ ನನಗೆ ತಲೆಬುಡ ಅರ್ಥವಾಗಲಿಲ್ಲ. ಆದರೆ ಅಲ್ಲೊಂದು ಕಡೆಗೆ ನನ್ನ ಕಣ್ಣು ಹಾಗೆಯೇ ನಿಂತಿತು. ಬ್ಲಡ್ ರಿಪೋರ್ಟಿನ ಕೊನೆಯಲ್ಲಿ ಎಚ್.ಐ.ವಿ. ಟೆಸ್ಟ್ ಮಾಡಲಾಗಿತ್ತು. ಅದು ಪಾಸಿಟಿವ್ ರಿಪೋರ್ಟ್ ತೋರಿಸುತ್ತಿತ್ತು. ನನಗೆ ಒಂದರೆಘಳಿಗೆ ಕೈಕಾಲು ಕಂಪಿಸತೊಡಗಿತು. ಅಂದರೆ ರಾಮಚಂದ್ರನಿಗೆ ಏಡ್ಸ್ ಇತ್ತೇ? ಒಂದು ಕ್ಷಣ ನನ್ನಲ್ಲಿ ಆತಂಕ ಕಾಡಿತು. ಮನಸ್ಸು ಒಪ್ಪಲು ನಿರಾಕರಿಸಿತು.
             ತಕ್ಷಣವೇ ಆತನ ಮನೆಯವರಿಗೆ ಈ ರಿಪೋರ್ಟ್ ತೋರಿಸಿದೆ. ಅವರಿಗೂ ಒಂದು ಕ್ಷಣ ನಂಬುವುದು ಸಾಧ್ಯವಾಗಲಿಲ್ಲ. ಕಣ್ಣಲ್ಲಿ ಅಚ್ಚರಿಗಳಿತ್ತು. ಆತಂಕವೂ ಇತ್ತು. ಮನೆಯವರಂತೂ ಆ ರಿಪೋರ್ಟನ್ನು ನಂಬಲು ತಯಾರಿರಲಿಲ್ಲ. ಆತನ ತಾಯಿಯಂತೂ `ರಾಮಚಂದ್ರನಿಗೆ ಮದುವೆ ಗೊತ್ತಾಗಿತ್ತು. ಎಂಗೇಜ್ ಮೆಂಟಿಗೆ ತಯಾರಿ ಕೂಡ ನಡೆದಿತ್ತು. ಹುಡುಗಿ ಕಡೆಯವರು ಜಾತಕದ ಜೊತೆಗೆ ಮೆಡಿಕಲ್ ಚೆಕ್ ಅಪ್ ರಿಪೋರ್ಟ್ ಕೇಳಿದ್ದರು. ಅದಕ್ಕೆ ರಾಮಚಂದ್ರ ಬ್ಲಡ್ ಟೆಸ್ಟ್ ಮಾಡಿಸಿಕೊಂಡು ಬಂದಿದ್ದ. ಆದರೆ ನನ್ನ ಮನಸ್ಸು ಹೇಳುತ್ತಿದೆ. ಆತನಿಗೆ ಏಡ್ಸ್ ಇರಲಿಲ್ಲ. ಖಂತಿವಾಗಿಯೂ ರಾಮಚಂದ್ರ ತೀರಾ ಹೆಂಗಸರ ಸಹವಾಸ ಮಾಡುವಂತವನಲ್ಲ. ಏನೇ ಇದ್ದರೂ ನಮ್ಮ ಬಳಿ ಹೇಳುತ್ತಿದ್ದ. ಈಗ ಆತನ ಮದುವೆಗೆ ಗೊತ್ತು ಮಾಡಿದ್ದ ಹುಡುಗಿ ಕೂಡ ಪರಿಚಯದವಳೇ ಇದ್ದಳು. ಅವರು ಒಬ್ಬರಿಗೊಬ್ಬರು ಒಪ್ಪಿದ್ದರೂ ಕೂಡ. ಮದುವೆಗೆ ಈಗ ಎಲ್ಲರೂ ಬ್ಲಡ್ ಟೆಸ್ಟ್ ಮಾಡಿಸಬೇಕು ಎನ್ನುತ್ತಾರಲ್ಲ. ಅದಕ್ಕೆ ಈತನೂ ಟೆಸ್ಟ್ ಮಾಡಿಸಿದ್ದ..' ಎಂದು ಹೇಳಿದರು.
         ರಾಮಚಂದ್ರನ ತಾಯಿ ಹೇಳಿದ ಮಾತಿನಲ್ಲೂ ಸತ್ಯವಿದೆ ಎನ್ನಿಸಿತು. ಅಷ್ಟೇ ಏಕೆ. ನನಗೆ ರಾಮಚಂದ್ರನ ಮೇಲೆ ನಂಬಿಕೆ ಇತ್ತಲ್ಲ. ಆತನಿಗೆ ಏಡ್ಸ್ ಇದೆ ಎನ್ನುವ ಕಳಂಕ ಬೇರೆ ಬಂದಿತಲ್ಲ. ಈ ಕಾರಣದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡನಲ್ಲ ಎನ್ನಿಸಿತು. ಹೊರ ಜಗತ್ತಿಗೆ ಈ ವಿಷಯ ತಿಳಿದರೆ ರಾಮಚಂದ್ರನನ್ನು ಕೀಳಾಗಿ ಕಾಣುತ್ತಾರಲ್ಲ ಛೆ.. ಎಂದೂ ಅನ್ನಿಸಿತು. ಮನಸ್ಸು ಬೇಜಾರಾಗಿದ್ದಾಗಲೇ ಹೊರಗಡೆ ಪೋಸ್ಟ್ ಮ್ಯಾನ್ ಬಂದು ಬಾಗಿಲು ತಟ್ಟಿದ್ದ. ರಾಮಚಂದ್ರನ ತಂದೆ ಪತ್ರವನ್ನು ತೆಗೆದುಕೊಂಡು ಒಡೆದು ನೋಡಿದರು. ಲಕೋಟೆಯನ್ನು ಒಡೆದು ನೋಡಿದವರೇ ಕುಸಿದು ಕುಳಿತರು.
          ಹೌಹಾರಿದ ನಾನು ಅವರ ಬಳಿಯಿದ್ದ ಲಕೋಟೆ ಪಡೆದು ಓದಲಾರಂಭಿಸಿದೆ. ಅದರಲ್ಲೊಂದು ಬ್ಲಡ್ ರಿಪೋರ್ಟ್ ಇತ್ತು. ಜೊತೆಗೊಂದು ಪತ್ರ. ಬ್ಲಡ್ ರಿಪೋರ್ಟ್ ರಾಮಚಂದ್ರನ ಹೆಸರಿನಲ್ಲಿತ್ತು. ಅದರಲ್ಲಿ ಎಚ್.ಐ.ವಿ. ಕಾಲಮ್ಮಿನಲ್ಲಿ ನೆಗೆಟಿವ್ ಎಂದಿತ್ತು. ನನಗೆ ಮತ್ತೆ ಗೊಂದಲ. ರಾಮಚಂದ್ರನಿಗೆ ಏಡ್ಸ್ ಇತ್ತೋ ಇಲ್ಲವೋ ಅಂತ. ಕೊನೆಗೆ ಜೊತೆಯಲ್ಲಿದ್ದ ಪತ್ರವನ್ನು ಓದಲಾರಂಭಿಸಿದೆ. ಆತನ ಬ್ಲಡ್ ಟೆಸ್ಟ್ ಮಾಡಿದ್ದ ಲ್ಯಾಬಿನವರು ಬರೆದಿದ್ದ ಪತ್ರ ಅದು.
           ರಾಮಚಂದ್ರನಿಗೆ ಬರೆದಿದ್ದ ಆ ಪತ್ರದಲ್ಲಿ `ಬ್ಲಡ್ ಟೆಸ್ಟ್ ರಿಪೋರ್ಟಿನಲ್ಲಿ ಪ್ರಮಾದವಾಗಿದೆಯೆಂದೂ, ಹಿಂದೆ ಕಳಿಸಿದ್ದ ರಿಪೋರ್ಟ್ ನಲ್ಲಿ ಟೆಸ್ಟ್ ಮಾಹಿತಿ ಕೊಂಚ ಹೆಚ್ಚೂ ಕಡಿಮೆಯಾಗಿದೆಯೆಂದೂ, ಕಣ್ತಪ್ಪಿನಿಂದ ಒಂದೆರಡು ಪ್ರಮಾದವಾಗಿದೆ. ಎಚ್.ಐ.ವಿ ನೆಗೆಟಿವ್ ಇದ್ದಿದ್ದನ್ನು ಎಚ್.ಐ.ವಿ. ಪಾಸಿಟಿವ್ ಎಂದು ಬರೆಯಲಾಗಿದೆ. ಆದರೆ ತಮಗೆ ಎಚ್.ಐ.ವಿ. ಪಾಸಿಟಿವ್ ಆಗಿಲ್ಲ. ನೆಗೆಟಿವ್ ಆಗಿದೆ. ತಾವು ಈ ಕುರಿತು ಭಯಪಡಬೇಕಿಲ್ಲ. ತಮಗೆ ಈಗ ನೀಡಲಾಗಿರುವ ರಿಪೊರ್ಟ್ ಬೇರೊಬ್ಬರದ್ದಾಗಿದೆ.  ಹಳೆಯ ಮೆಡಿಕಲ್ ರಿಪೋರ್ಟ್ ಬದಲು ಸರಿಪಡಿಸಿ ಕಳಿಸಿರುವ ಈ ಹೊಸ ರಿಪೋರ್ಟ್ ತೆಗೆದುಕೊಳ್ಳಿ. ಲ್ಯಾಬಿನ ಕೆಲಸಗಾರರ ಪರಾಮಶಿಯಿಂದ ಈ ರೀತಿಯಾಗಿದೆ. ದಯವಿಟ್ಟು ಕ್ಷಮೆಯಿರಲಿ' ಎಂದು ಬರೆದಿತ್ತು.
          ಪತ್ರ ಓದಿ ಮುಗಿಸುತ್ತಿದ್ದಂತೆ ನನ್ನೊಳಗೆ ಹೇಳಿಕೊಳ್ಳಲಾಗದ ತಳಮಳ. ಸಿಟ್ಟೋ, ಸೆಡವೋ ಏನೊಂದೂ ಅರ್ಥವಾಗಲಿಲ್ಲ. ಲ್ಯಾಬಿನ ಕೆಲಸಗಾರರ ತಪ್ಪಿನಿಂದಾಗಿ ಒಂದು ಜೀವ ಬಲಿಯಾಗಿತ್ತು. ಲ್ಯಾಬಿನವರು ಪರಾಮಶಿಯ ಹೆಸರು ಹೇಳುತ್ತಿದ್ದರೂ ಈಗೊಂದು ಪ್ರಮಾದ ಜರುಗಿಬಿಟ್ಟಿತ್ತು. ಯಾವುದೇ ರೋಗವಿಲ್ಲದೇ ಆರಾಮಾಗಿದ್ದ ರಾಮಚಂದ್ರ ಟೆಸ್ಟಿನಲ್ಲಿದ್ದ ತಪ್ಪಿನ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದ. ಏನೂ ಇಲ್ಲದಿದ್ದರೂ ತಾನೇ ಬಲಿಯಾಗಿದ್ದ. ರಾಮಚಂದ್ರನಿಗೆ ಏಡ್ಸ್ ಇರಲಿಲ್ಲ ಎಂದು ಖುಷಿಪಡಲೋ ಅಥವಾ ಆತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ದುಃಖ ಪಡಲೋ, ಲ್ಯಾಬಿನ ಕೆಲಸಗಾರರ ನಿರ್ಲಕ್ಷ್ಯಕ್ಕೆ ಸಿಟ್ಟಾಗಲೋ ಅರ್ಥವಾಗಲಿಲ್ಲ. ಏನೂ ಇಲ್ಲದೇ ಏಡ್ಸ್ ಹಣೆಪಟ್ಟಿ ಹೊತ್ತು, ಆ ಹಣೆಪಟ್ಟಿಯನ್ನು ಕಳಚಿಡುವ ಸಮಸಯದಲ್ಲಿ ಆತನೇ ಇರಲಿಲ್ಲ. ಹನಿಗೂಡಿದ ಕಣ್ಣಿನೊಂದಿಗೆ ಆತನ ಮನೆಯಿಂದ ವಾಪಾಸಾಗಿದ್ದೆ.

**
(ಈ ಕಥೆಯನ್ನು ಬರೆದಿದ್ದು 09-09-2014ರಂದು ಶಿರಸಿಯಲ್ಲಿ)

Monday, September 8, 2014

ಹನಿಗಳೊಂದಿಗೆ ಎಂಜಾಯ್ ಮಾಡಿ

ಪಾಕಿಸ್ತಾನ

ಪಾಕಿಸ್ತಾನವೆಂದರೆ ನಿಲುಕಿಗೆ
ಕಾಣುವ ಮರುಭೂಮಿ ನಾಡು |
ಒಡಲೊಳಗೆ ಅರಾಜಕತೆಯ ಗೂಡು ||
ಆದರೂ ತುಂಬಿ ತುಳುಕುತ್ತಿದೆ
ಭಾರತದ ವಿರುದ್ಧ ಸೇಡು ||

ಹೊಸ ಆಶ್ರಮ

ಅಭಲಾಶ್ರಮ, ಅನಾಥಾಶ್ರಮ,
ವೃದ್ಧಾಶ್ರಮ, ಪಾದುಕಾಶ್ರಮ
ಇವೆಲ್ಲವನ್ನೂ ಕಂಡದ್ದಾಯ್ತು |
ಇನ್ನು ಕಮಂಡಲಾಶ್ರಮ
ಲಾಂಗೂಲಾಶ್ರಮ ಹಾಗೂ
ಕೌಪೀನ ಆಶ್ರಮಗಳನ್ನಷ್ಟು
ನೋಡುವುದೊಂದೇ ಬಾಕಿ ||

ಸಾನಿಯಾ ಆಟ

ಹಿಂದೊಮ್ಮೆ ಅಧ್ಬುತವಾಗಿ ಆಡುತ್ತಿದ್ದಳು
ಸಾನಿಯಾ ಆಟ |
ಹುಡುಗರಿಗಂತೂ ಆಕೆಯ ಕಡೆಗೇ ನೋಟ ||
ಆನಂತರ ಪ್ರಸಿದ್ಧವಾಗಿದ್ದು ಮಾತ್ರ
ಆಕೆಯ ಮೈಮಾಟ ||

ರೈತನ ಕಥೆ

ನಮ್ಮ ನಾಡಿನ ರೈತ
ಬೆಳೆದ ಬೆಳೆಗೆ
ಬೆಲೆ ಬಂದರೆ
ಆತ ಧನಿಕ |
ಬೆಲೆ ಬರದಿದ್ದರೆ ಮಾತ್ರ
ಕುಡಿಯುವ ಕೀಟನಾಶಕ ||

ಗೋರ್ಮೆಂಟು ಬಸ್ಸು

ಜೋರಾಗಿ ಓಡಲು ಪ್ರಯತ್ನಿಸಿ
ಸಾಧ್ಯವಾಗದೇ ನಿಲ್ಲುವ ಹಾಗೂ
ಪ್ರತಿ ಘಟ್ಟದಲ್ಲೂ ದಮ್ಮು
ಕೆಮ್ಮುಗಳನ್ನು ಪ್ರದರ್ಶಿಸುವುದೇ
ಗೋರ್ಮೆಂಟು ಬಸ್ಸು ||


Sunday, September 7, 2014

ನನ್ನ ಒಲವು

ನೀನೆಂದರೆ ಒಲವ ಖನಿ
ಪ್ರೀತಿಯ ಬನಿ |

ಎದೆಯಾಳದಲ್ಲಿ ಹುದುಗಿಟ್ಟ
ಅವ್ಯಕ್ತ ಬಾವ ನೀನು |
ಕಣ್ಣಲ್ಲಿ ಜಿನುಗಿದ್ದರೂ 
ಉದುರದ ನೀರು ನೀನು |

ಬಾಯಿ ಬೊಚ್ಚಾಗಿದ್ದರೂ
ಉಕ್ಕುವ ನಗು ನೀನು |
ಮಗುವಿನ ಒಡಲಿನಿಂದ 
ಇಳಿವ ಕೇಕೆ ನೀನು |

ಶತಮಾನಗಳಿಂದ ಬಂದ
ಸಂಪ್ರದಾಯ ನೀನು |
ಹರಿವ ನದಿಗೆ ಅಡ್ಡಾಗಿ
ಕಟ್ಟಿದ ಒಡ್ಡು ನೀನು |

ಮರೆತರೂ ಮರೆಯದ
ಸೇಡಿನ ಕಿಡಿ ನೀನು |
ವರ್ಷಗಳುರುಳಿದರೂ ಮಾಯದ
ಗಾಯದ ಕಲೆ ನೀನು |

ಒಲವೇ ಹೀಗೆ ಸದಾ ಕಾಲ ಕಾಡುತ್ತದೆ
ಬಿಡದೇ ಸೆಳೆಯುತ್ತದೆ. |
ಒಳಗೊಳಗೆ ಮೊಳೆಯುತ್ತದೆ.
ಹೆಮ್ಮರವಾಗಿ ನಿಲ್ಲುತ್ತದೆ |

**

(ಈ ಕವಿತೆಯನ್ನು ಬರೆದಿದ್ದು 07-09-2014ರಂದು ಶಿರಸಿಯಲ್ಲಿ)

Friday, September 5, 2014

ಬೆಂಗಾಲಿ ಸುಂದರಿ-24

(ಬಾಂಗ್ಲಾದಲ್ಲಿ ಹಿಂದೂ ಹಬ್ಬದ ಆಚರಣೆ)
             ತುಳಿದಷ್ಟೂ ದಾರಿ ದೂರವಾಗುತ್ತಿದೆಯಾ ಎನ್ನಿಸುತ್ತಿತ್ತು. ಬಂಗಾಳದಲ್ಲಿ ಮುಂಜಾವು ಆಗಷ್ಟೆ ಕಣ್ತೆರೆಯುತ್ತಿತ್ತು. ಸೂರ್ಯ ನಿಧಾನವಾಗಿ ಮೂಡಣದಲ್ಲಿ ಏರಿ ಬರುತ್ತಿದ್ದ. ಬಾನು ರಂಗೇರಿತ್ತು. ಬೆಳಗಿನ ಹೊಸ ಹುಮ್ಮಸ್ಸು ವಿನಯಚಂದ್ರ ಸಾಕಷ್ಟು ವೇಗವಾಗಿ ಸೈಕಲ್ ತುಳಿಯುತ್ತಲೇ ಇದ್ದ. ಸಲೀಂ ಚಾಚಾ ರಾತ್ರಿಯೆಲ್ಲ ಸೈಕಲ್ ತುಳಿದ ಕಾರಣ ಈಗತಾನೆ ನಿದ್ದೆಗೆ ಜಾರಿದ್ದ. ಚಾಚಾನಿಗೆ ವಯಸ್ಸಾಗಿದ್ದರೂ ಕೂಡ ಮೈಯಲ್ಲಿ ಬಹಳ ಕಸುವನ್ನು ಹೊಂದಿದ್ದಾನೆ. ಅದೆಷ್ಟು ದಶಕಗಳ ಕಾಲ ಸೈಕಲ್ ತುಳಿದಿದ್ದನೋ ಚಾಚಾ. ಈಗಲೂ ಯುವಕರನ್ನು ನಾಚಿಸುವಂತೆ ಸೈಕಲ್ ತುಳಿಯಿತ್ತಿದ್ದ. ಚಾಚಾನ ವೇಗ, ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆ ವಿನಯಚಂದ್ರನನ್ನು ಬೆರಗುಗೊಳಿಸಿದ್ದವು. ಈ ಚಾಚಾನ ಸಹಾಯ, ಸಹಯೋಗ ಇಲ್ಲದಿದ್ದರೆ ಬಾಂಗ್ಲಾದ ಯಾವುದೋ ಗಲ್ಲಿಯಲ್ಲಿ ಹೆಣವಾಗಿ ಬೀಳುತ್ತಿದ್ದೆವು ತಾವು ಎಂದುಕೊಂಡ ವಿನಯಚಂದ್ರ.
                ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಹಾದು ಹೋಗುತ್ತಿದ್ದವು. ಕಾಲಿಯಾಖೈರ್ ನ ಹೊರ ರಸ್ತೆಯಲ್ಲಿ ಸಾಗಿ ಮಿರ್ಜಾಪುರದ ರಸ್ತೆಯ ಕಡೆಗೆ ಹೊರಳುವ ವೇಳೆಗೆ ಆಗಲೇ ಸೂರ್ಯ ತನ್ನ ಮೊದಲ ಕಿರಣಗಳನ್ನು ಭೂಮಿಯ ಮೇಲೆ ಚೆಲ್ಲಿಯಾಗಿತ್ತು. ಕಾಲಿಯಾಖೈರ್ ದಾಟುತ್ತಿದ್ದಂತೆ ಮತ್ತೆ ವಿಸ್ತಾರವಾದ ಗದ್ದೆಯ ಬಯಲುಗಳು ಕಾಣಿಸಿದವು. ಗದ್ದೆಬಯಲಿನ ಕೊನೆಯಲ್ಲಿ ಗೆರೆ ಎಳೆದಂತೆ ನದಿಯೊಂದು ಹಾದು ಹೋಗಿತ್ತು. ಬ್ರಹ್ಮಪುತ್ರಾ ನದಿಯ ಒಡಲನ್ನು ಸೇರುವ ಈ ನದಿಯನ್ನು ನಾವು ದಾಟಿ ಬಂದಿದ್ದೇವೆ ಎಂದುಕೊಂಡ ವಿನಯಚಂದ್ರ.
               ಮಾತಿನ ಹುಕಿಗೆ ಬಿದ್ದಿದ್ದ ಮಧುಮಿತಾ `ಮಳೆಗಾಲದಲ್ಲಿ ಪ್ರವಾಹ ಉಕ್ಕೇರಿದಾಗ ಬ್ರಹ್ಮಪುತ್ರಾ ನದಿ ಈ ಪ್ರದೇಶವನ್ನೆಲ್ಲ ಮುಳುಗಿಸಿಬಿಡುತ್ತದೆ..' ಎಂದಳು.
              `ಹಾಗಾದರೆ ಬ್ರಹ್ಮಪುತ್ರಾ ನದಿ ಕೂಡ ಇಲ್ಲೇ ಎಲ್ಲೋ ಹತ್ತಿರದಲ್ಲಿರಬೇಕು..' ಎಂದು ಕೇಳಿದ ವಿನಯಚಂದ್ರ.
                `ಊಹೂಂ. ಆ ನದಿ ಸಾಕಷ್ಟು ದೂರದಲ್ಲಿಯೇ ಇದೆ. ಆದರೆ ಮಳೆಗಾಲದಲ್ಲಿ ಅದರಲ್ಲಿ ನೀರಿನ ಹರಿವು ಸಿಕ್ಕಾಪಟ್ಟೆ ಜಾಸ್ತಿಯಾಗಿರುತ್ತದೆ. ಬಾಂಗ್ಲಾ ನಾಡು ಬಯಲು. ಈ ಗದ್ದೆ ಬಯಲಿನ ತುಂಬೆಲ್ಲ ನೀರು ತುಂಬಿ ಬಿಡುತ್ತವೆ. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಯ ಉಪನದಿಗಳೂ ಉಕ್ಕೇರುವ ಕಾರಣ ನೀರು ಎಲ್ಲೆಂದರಲ್ಲಿ ನಿಲ್ಲುತ್ತವೆ. ಮಳೆಗಾಲದಲ್ಲಿ ನೋಡಬೇಕು. ಆಗ ಈ ರಸ್ತೆಯಿದೆಯಲ್ಲ ಇದರ ಅಕ್ಕಪಕ್ಕದಲ್ಲೆಲ್ಲ ನೀರು ನಿಂತಿರುತ್ತವೆ. ನಡುವೆ ಮಾತ್ರ ಕರ್ರಗೆ ಉದ್ದಾನುದ್ದ ಟಾರು ರಸ್ತೆ ಹಾದು ಹೋಗಿದ್ದು ಎಂತ ಚಂದ ಕಾಣಿಸುತ್ತೆ ಅಂತೀಯಾ..'
           `ಓಹೋ.. ನೀನು ಈ ಪ್ರದೇಶದಲ್ಲಿ ಅನೇಕ ಸಾರಿ ಓಡಾಡಿದ್ದೀಯಾ ಅನ್ನು...'
           `ಹುಂ.. ಬಹಳಷ್ಟು ಸಾರಿ ಓಡಾಡಿದ್ದೀನಿ. ಆದರೆ ಸೈಕಲ್ಲಿನ ಮೇಲೆ ಹೀಗೆ ಭಯದ ನೆರಳಿನಲ್ಲಿ ಓಡಾಡುತ್ತಿರುವುದು ಇದೇ ಮೊದಲು ನೋಡು. ನನ್ನದು ಸರ್ಕಾರಿ ಕೆಲಸವಾಗಿರೋ ಕಾರಣ ಒಂದೆರಡು ಸಾರಿ ಇಲ್ಲಿಗೆ ಕೆಲಸದ ನಿಮಿತ್ತ ಬಂದಿದ್ದೆ. ಮಳೆಗಾಲದಲ್ಲಿ ಪ್ರವಾಹದ ರಿಪೋರ್ಟ್ ಗೂ ಬಂದಿದ್ದೆ. ಆಗಲೇ ನನಗೆ ಅನುಭವವಾಗಿದ್ದು.' ಎಂದಳು ಮಧುಮಿತಾ.
          `ನಾನೊಂದು ಮಾತು ಕೇಳಲಾ..?' ಎಂದ ವಿನಯಚಂದ್ರ
          `ಹುಂ..ಕೇಳು.. ಅದಕ್ಕೆಂತ ಸಂಕೋಚ? ನೀನು ಒಂದು ಬಿಟ್ಟು ಹತ್ತು ಮಾತು ಕೇಳು.. ನಾನು ಉತ್ತರಿಸುತ್ತೇನೆ..'
          `ನಿಂದು ಸರ್ಕಾರಿ ನೌಕರಿ ಅಂತೀಯಾ.. ಆದರೆ ಇಂತಹ ನೌಕರಿಯಲ್ಲಿದ್ದೂ ನಾವು ಹೀಗೆ ಕದ್ದು ಓಡಿ ಬರಬೇಕಾ? ಸರ್ಕಾರದ ಮಟ್ಟದಲ್ಲಿ ಪರಿಚಯದವರನ್ನು ಹಿಡಿದು ಹೇಗಾದರೂ ಮಾಡಿ ನಾವು ಭಾರತ ತಲುಪಬಹುದಿತ್ತಲ್ಲ.. ಈ ರಿಸ್ಕು, ಭಯ, ಭೀತಿ, ದುಗುಡ ಇವೆಲ್ಲ ಬೇಕಿತ್ತಾ?' ಎಂದ ವಿನಯಚಂದ್ರ.
           `ಹುಂ.. ನೀನು ಹೇಳೋದು ಸರಿ. ಆದರೆ ಬಾಂಗ್ಲಾದಲ್ಲಿ ಸರ್ಕಾರಿ ಕೆಲಸ ಅಂದರೆ ಅಷ್ಟಕ್ಕಷ್ಟೆ. ನಾನು ನನಗೆ ಪರಿಚಯ ಇರೋ ಯಾರನ್ನೋ ಹಿಡಿದು ಭಾರತಕ್ಕೆ ಹೋಗಲು ತಯಾರಿ ನಡೆಸಿದೆ ಅಂತ ಇಟ್ಟುಕೊಂಡರೆ ಅವರಿಗೆ ಆಗದವರ ಮೂಲಕ ಹಿಂಸಾವಾದಿಗಳಿಗೆ ಮಾಹಿತಿ ಸಿಕ್ಕು ಏನೇನೋ ಮಾಡಿಬಿಡುತ್ತಾರೆ. ಅಲ್ಲದೇ ಇಲ್ಲಿ ಬಹುತೇಕ ಪ್ರತಿಯೊಬ್ಬ ಸರ್ಕಾರಿ ನೌಕರನೂ ಒಂದೊಂದು ರಾಷ್ಟ್ರೀಯ ಪಕ್ಷಕ್ಕೆ ನಿಷ್ಟನಾಗಿರಬೇಕು. ಅಂದರೆ ಆತ ತಾನು ಯಾರ ಆಡಳಿತದ ಅವಧಿಯಲ್ಲಿ ನೌಕರಿ ಮಾಡಲು ಆರಂಭಿಸುತ್ತಿದ್ದಾನೋ ಆ ಪಕ್ಷಕ್ಕೆ ಆತ ನಿಷ್ಟನಾಗಿರುತ್ತಾನೆ. ಬಿಡು ಹಾಗೆ ನಿಷ್ಟನಾಗಿರುವುದು ಆತನಿಗೆ ಅನಿವಾರ್ಯವೂ ಆಗಿರುತ್ತದೆ. ಇಂತಹ ವ್ಯಕ್ತಿಗಳು ತಮಗಾಗದವರ ಅಂದರೆ ತಮ್ಮ ಪಕ್ಷಕ್ಕೆ ನಿಷ್ಟನಾಗಿರದ ಅಧಿಕಾರಿಗಳ ತಪ್ಪು ಹುಡುಕುವಲ್ಲಿ, ಅವರ ವಿರುದ್ಧ ಕೆಲಸ ಮಾಡುವಲ್ಲಿ ಉತ್ಸುಕರಾಗಿರುತ್ತಾರೆ. ನಾನು ಯಾವುದೇ ಪಕ್ಷಕ್ಕೆ ನಿಷ್ಟೆ ತೋರಿಸಿಲ್ಲ. ಅದೂ ಕೂಡ ತಪ್ಪಾಗಿದೆ. ನಾನು ಯಾವುದೇ ಪಕ್ಷಕ್ಕೆ ಸೇರಿರದ ಕಾರಣ ಎಲ್ಲ ರಾಷ್ಟ್ರೀಯ ಪಕ್ಷಗಳೂ ನನ್ನ ವಿರುದ್ಧ ಸೇಡು ತೀರಿಕೊಳ್ಳಲು ಕಾಯುತ್ತಿರುವುದು ಸಾಮಾನ್ಯ. ನಾನು ಹಾಗೂ ನೀನು ಭಾರತಕ್ಕೆ ಹೊರಡಲು ತಯಾರಿ ನಡೆಸುತ್ತಿರುವುದು, ವಿಮಾನಯಾನ  ಮಾಡಲು ಯತ್ನಿಸುವುದನ್ನು ತಡೆಯಲು ಎಂತಹ ಕಾರ್ಯಕ್ಕೂ ಅವರು ಮುಂದಾಗುತ್ತಾರೆ. ಹತ್ಯೆಯನ್ನೂ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಬಹುಶಃ ನಾವೀಗ ಕದ್ದು ಭಾರತದ ಗಡಿಯೊಳಕ್ಕೆ ನುಸುಳುವ ಪ್ರಯತ್ನ ನಡೆಸುವುದು ಆ ವಿಧಾನಕ್ಕಿಂತ ಸುಲಭವನ್ನಿಸುತ್ತದೆ. ಅದಕ್ಕೇ ಸಲೀಂ ಚಾಚಾ ಈ ವಿಧಾನವನ್ನು ಹೇಳಿದಾಗ ನಾನು ಒಪ್ಪಿಕೊಂಡಿದ್ದು.' ಎಂದಳು ಮಧುಮಿತಾ.
          `ಹುಂ..' ಎಂದು ತಲೆಕೊಡವಿದ ವಿನಯಚಂದ್ರ `ಹಾಳಾದ ರಾಜಕಾರಣ.. ಏನೆಲ್ಲಾ ಮಾಡಿಬಿಡುತ್ತದೆ.. ಶಿಟ್..' ಎಂದ.
          `ವಿನೂ ಒಂದು ಮಾತು ಹೇಳಲಾ. ನಾವು ವಿಮಾನಯಾನ ಮಾಡಿ ಭಾರತಕ್ಕೆ ಹೋಗಿದ್ದರೆ ಒಮದು ತಾಸು ಅಥವಾ ಎರಡು-ಮೂರು ತಾಸುಗಳಲ್ಲಿ ಭಾರತವನ್ನು ತಲುಪಿಬಿಡುತ್ತಿದ್ದೆವು. ಆದರೆ ನಾವು ಈ ರೀತಿಯಲ್ಲಿ ರಸ್ತೆಯ ಮೂಲಕ ಭಾರತವನ್ನು ತಲುಪುವುದು ಮಾತ್ರ ಬಹಳ ಖುಷಿ ಕೊಡುವ ವಿಚಾರ ನೋಡು. ಬದುಕಿನಲ್ಲಿ ಅದೆಷ್ಟೋ ಕಷ್ಟಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಇದು ಕಷ್ಟಕರವೇ ಹೌದು. ಈ ಕಷ್ಟವನ್ನೂ ಒಮ್ಮೆ ನಾವು ಅನುಭವಿಸಿಬಿಡೋಣ. ಸವಾಲುಗಳಿಗೆ ಒಡ್ಡಿಕೊಳ್ಳುವುದು ಅಂದರೆ ನನಗೆ ಬಹಳ ಖುಷಿ ಕೊಡುವ ವಿಚಾರ. ನಿನಗೂ ಕೂಡ ಸವಾಲುಗಳಿಗೆ ಎದುರು ನಿಲ್ಲುವುದು ಅಂದರೆ ಇಷ್ಟ ಅಂತ ಹೇಳಿದ್ದೆಯಲ್ಲ. ಮುಂದೇನಾಗುತ್ತದೆಯೋ ಅಂತ ನೋಡಿಬಿಡೋಣ.. ಅಲ್ಲವಾ' ಎಂದಳು ಮಧುಮಿತಾ.
           `ಹೌದು ಮಧು. ನೀ ಹೇಳುವುದು ನಿಜ. ಬಾಂಗ್ಲಾ ನಾಡಿನಲ್ಲಿ ಹೀಗೆ ಪ್ರಯಾಣ ಮಾಡಿ ಗಡಿಯೊಳಗೆ ನುಸುಳುವುದು ಒಂಥರಾ ಮಜಾ ಇರುತ್ತದೆ. ಅದರಲ್ಲಿಯೂ ಭಾರತದ ಗಡಿಯನ್ನು ನುಸುಳುವುದಿದೆಯಲ್ಲ. ನಾನು ಕನಸು, ಮನಸಿನಲ್ಲಿಯೂ ಇಂತಹದ್ದೊಂದು ಜರುಗಬಹುದು ಎಂದು ಆಲೋಚನೆ ಮಾಡಿರಲಿಲ್ಲ ನೋಡು..' ಎಂದ ವಿನಯಚಂದ್ರ. ಮುಂದುವರಿದವನೇ ಬಾಂಗ್ಲಾದೇಶದ ಹಿಂಸಾಚಾರ, ಅಲ್ಲಿಯ ರಾಜಕಾರಣ, ರಾಜಕೀಯ ಪಕ್ಷಗಳ ನಡೆ ಇವುಗಳ ಬಗ್ಗೆ ಮಾತನಾಡಿ ಹಿಡಿಶಾಪ ಹಾಕಿದ
          ಮಧುಮಿತಾ ಮಾತನ್ನು ಕೇಳಿಸಿಕೊಂಡು ನುಡಿದಳು. `ಇಷ್ಟೇ ಅಲ್ಲ ವಿನೂ. ನಮ್ಮ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಮಸಾಚಾರಕ್ಕೆಲ್ಲ ರಾಜಕಾರಣವೇ ಕಾರಣ. ಮುಖ್ಯವಾಗಿ ಇರುವುದು ಎರಡು ಪಕ್ಷ. ಇವರನ್ನು ಬೆಂಬಲಿಸಿದರೆ ಅವರು, ಅವರನ್ನು ಬೆಂಬಲಿಸಿದರೆ ಇವರು ನಮ್ಮ ಮೇಲೆ ಹಿಂಸಾಚಾರ ಮಾಡುತ್ತಾರೆ. ಹೋಗಲಿ ಮೂರನೇ ಪಕ್ಷವಾದರೂ ಇದೆಯಾ? ಅದನ್ನೂ ಬೆಳೆಯಲು ಕೊಡುವುದಿಲ್ಲ ಈ ಎರಡು ಪಕ್ಷಗಳು. ಹಿಂದೂಗಳೇ ಪಕ್ಷವನ್ನು ಕಟ್ಟಲು ಹಲವು ಸಾರಿ ಯೋಚನೆ ಮಾಡಿದ್ದರಂತೆ. ಆದರೆ ಅದು ಸಾಧ್ಯವೇ ಆಗಿಲ್ಲ. ಬಹುಶಃ ಕುಟಿಲ ರಾಜಕಾರಣದಲ್ಲಿ ಸಿಲುಕಿ ಹಿಂದೂಗಳ ಪಕ್ಷ ಕಟ್ಟುವ ಕನಸು ಕನಸಾಗಿಯೇ ಉಳಿದಿರಬೇಕು. ' ಎಂದಳು ಮಧುಮಿತಾ.
          `ಛೇ.. ಇಷ್ಟು ಪುಟ್ಟ ದೇಶವನ್ನು ಹೇಗೆಲ್ಲ ತಯಾರು ಮಾಡಬಹುದಿತ್ತು. ಆದರೆ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಡೆಸುವ ದಾಳಕ್ಕೆ ಇಲ್ಲಿನ ಜನರು ಬಲಿಯಾಗುತ್ತಿದ್ದಾರಲ್ಲ.. ಇಂತಹ ಕಾರಣಗಳಿಗಾಗಿ ಈ ದೇಶ ಪ್ರತ್ಯೇಕವಾಗಬೇಕಿತ್ತೇ? ಮೊದಲು ಭಾರತದಿಂದ ಆಮೇಲೆ ಪಾಕಿಸ್ತಾನದಿಂದ.. ಏನೋ ಆಗಬೇಕು ಎಂದುಕೊಂಡವರು ಮತ್ತೇನೋ ಆಗಿಬಿಟ್ಟರಲ್ಲ. ಗಂಗೆಯ ಮುಖಜ ಭೂಮಿ, ಸುಂದರಬನ್ಸ್, ಚಿತ್ತಗಾಂಗ್ ಬೆಟ್ಟಗಳು, ಮೇಘಾಲಯ, ತುರಾ ಬೆಟ್ಟಗಳ ಒಂದು ಪಾರ್ಶ್ವ, ಅಸಂಖ್ಯಾತ ಹಿಂದೂ ದೇಗುಲಗಳು, ಢಾಕಾ ಎಂಬ ಸುಂದರ ನಗರಿ, ಭತ್ತವನ್ನು ಬೆಳೆಯುವ ಲಕ್ಷಗಟ್ಟಲೆ ಎಕರೆ ಪ್ರದೇಶಗಳು.. ಓಹ್.. ಸ್ವರ್ಗವಾಗಲು ಇನ್ನೆಂತದ್ದು ಬೇಕಿತ್ತು. ತಾನೇ ತನ್ನನ್ನು ನರಕಕ್ಕೆ ದೂಡಿಕೊಳ್ಳುವುದು ಎಂದರೆ ಇದೇ ಏನೋ..' ಎಂದು ತನ್ನೊಳಗಿನ ಅಸಮಧಾನ ತೋಡಿಕೊಂಡ ವಿನಯಚಂದ್ರ.
           `ಹುಂ. ಖಂಡಿತ ಹೌದು. ಈ ದೇಶದಲ್ಲಿ ಸಮಸ್ಯೆಗಳು ಖಂಡಿತ ಕೊನೆಗೊಳ್ಳುವುದಿಲ್ಲ ನೋಡು. ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಯಾವಾಗ ಬ್ರಿಟೀಷರು ಒಡೆದರೋ ಆಗಲೇ ಶುರುವಾಯಿತು ನರಕ. ಮೊಟ್ಟಮೊದಲು ಬ್ರಿಟೀಷರ ವಿರುದ್ಧ ಸೋತ ಸಿರಾಜುದ್ದೌಲ, ಆತನಿಗೆ ಮೋಸ ಮಾಡಿದ ಮಿರ್ ಸಾಧಿಕ್ ಎಲ್ಲ ಆ ನಂತರ ನಡೆದ ಸಾಲು ಸಾಲು ಯುದ್ಧಗಳು, ನಡುವೆ ಮಿಚಿಂನಂತೆ ಬಂದು ಕ್ಷಣಕಾಲ ಸ್ವಾತಂತ್ರ್ಯವನ್ನು ಕೊಡಿಸಿದ ಸೇನಾನಿ ನೇತಾಜಿ.. ಈ ಎಲ್ಲವನ್ನೂ ಕಂಡಿದ್ದು ಇದೇ ನಾಡು. ಭಾರತದಿಂದ ಪ್ರತ್ಯೇಕವಾದ ನಂತರವಾದರೂ ಬಾಂಗ್ಲಾ ನಾಡು ಆರಾಮಾಗಿದೆಯಾ ಅದೂ ಇಲ್ಲ. ಪಾಕಿಸ್ತಾನದ ಸತ್ಯಾಚಾರಕ್ಕೆ ಸತತ 2 ದಶಕ ನಲುಗಿದೆ. ಭಾರತದ ಸಹಾಯದಿಂದಲೇ ಸ್ವತಂತ್ರವಾಗಿದ್ದರೂ ಕೂಡ ಭಾರತದ ವಿರುದ್ಧವೇ ಭಯೋತ್ಪಾದನೆಯಂತಹ ಕೆಲಸಗಳನ್ನು ಈ ದೇಶ ನಡೆಸುತ್ತಿದೆ. ಬಾಂಗ್ಲಾ ನಾಡಿನ ಸ್ವಾತಂತ್ರ್ಯಕ್ಕಾಗಿ ಶೇಕ್ ಮುಜೀಬುರ್ ರೆಹಮಾನ್ ಹೋರಾಡಿದರು. ಗಾಂಧೀಜಿಯವರಂತೆ ಇವರನ್ನೂ ಹತ್ಯೆ ಮಾಡಲಾಯಿತು. ಇದೀಗ ಅವರ ಮಗಳು ಇಲ್ಲಿನ ರಾಜಕಾರಣಿ. ವಿಚಿತ್ರವೆಂದರೆ ಅವರ ಆಡಳಿತವಾಗಿದ್ದರೂ ಇಲ್ಲಿ ಹಿಂಸಾಚಾರ ನಿಂತಿಲ್ಲ. ಬಹುಶಃ ನಿಲ್ಲುವುದೂ ಇಲ್ಲ. ಮತೋನ್ಮಾದ, ರಾಜಕಾರಣ, ಯುದ್ಧೋತ್ಸಾಹ ಈ ನಾಡನ್ನು ಹಾಳುಮಾಡಿದೆ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಟ 5000ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಬಲಾತ್ಕಾರ ನಡೆಯುತ್ತದೆ. ಆದರೆ ಪೊಲೀಸ್ ಸ್ಟೇಷನ್ನುಗಳಲ್ಲಿ ಇವುಗಳ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಪ್ರಕರಣ ದಾಖಲು ಮಾಡಲು ಹೋದರೆ ಅವರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಇಲ್ಲವೇ ಹೆದರಿಸಿ, ಬೆದರಿಸಿ ಸುಮ್ಮನಿರಿಸಲಾಗುತ್ತದೆ. ಇದು ನಾನು ಅತ್ಯಂತ ಹತ್ತಿರದಿಂದ ನೋಡಿದ ಅನುಭವವೂ ಹೌದು.' ಎಂದು ಮಧುಮಿತಾ ಹೇಳಿದಳು.
          `ಮಧು.. ಈ ದೇಶದಲ್ಲಿ ಎಷ್ಟು ಹಿಂದುಗಳಿರಬಹುದು? ಮೊದಲೆಷ್ಟಿದ್ದರು? ಈಗ ಎಷ್ಟಾಗಿದ್ದಾರೆ? ಅವರ್ಯಾಕೆ ಬಾಂಗ್ಲಾ ಹಿಂಸಾಚಾರದ ವಿರುದ್ಧ ತಿರುಗಿಬೀಳಬಾರದು? ಶಸ್ತ್ರದ ಮೂಲಕವಾದರೂ ಸರಿ ಯಾಕೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಾರದು? ಹಿಂಸೆಗೆ ಹಿಂಸೆಯೇ ಉತ್ತರವಲ್ಲವಾ? ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂದು ಶಿವಾಜಿಯಾದಿಯಾಗಿ ಅನೇಕರು ಹೇಳಿಲ್ಲವಾ? ಯಾಕೆ ಬಾಂಗ್ಲಾ ದೇಶದ ಹಿಂದೂಗಳು ಹಾಗೆ ಮಾಡುತ್ತಿಲ್ಲ? ಯಾಕೆ ನೋವನ್ನು ಉಂಡು ಸುಮ್ಮನೆ ಉಳಿದಿದ್ದಾರೆ? ಯಾಕೆ ಎಲ್ಲರೂ ಹಿಂದುಗಳನ್ನು ಕೊಂದರೂ ಏನು ಮಾಡದೇ ಸುಮ್ಮನೆ ಉಳಿದುಹೋಗಿದ್ದಾರೆ?' ಎಂದು ಅಸಹನೆಯಿಂದ ಕೇಳಿದ ವಿನಯಚಂದ್ರ.
(ಹಿಂಸಾಚಾರಕ್ಕೆ ಮನೆ ಕಳೆದುಕೊಂಡ ಹಿಂದೂ ಯುವತಿ ರೋಧಿಸುತ್ತಿರುವುದು)
           `ಬಾಂಗ್ಲಾದೇಶದಲ್ಲಿ 1941ರ ವೇಳೆಗೆ ಹಿಂದೂಗಳ ಸಂಖ್ಯೆ ಶೆ.28ರಷ್ಟಿತ್ತು. ಆ ನಂತರ ಆ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತ ಬಂದಿದೆ. 1974ರಲ್ಲಿ ಹಿಂದೂಗಳ ಪ್ರಮಾಣ ಶೆ.13.5ಕ್ಕೆ ಇಳಿಕೆಯಾಯಿತು. ಅಂದರೆ ಎರಡು ದಶಕದಲ್ಲಿ ಶೆ.50ರಷ್ಟು ಕಡಿಮೆಯಾಯಿತು. 2001ರಲ್ಲಿ ಹಿಂದೂಗಳ ಪ್ರಮಾಣ ಶೆ.9.6ಕ್ಕೆ ಇಳಿಕೆಯಾಗಿದೆ. ಭಾರತವನ್ನು ವಿಭಜಿಸಿ ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನ ಎಂದು ವಿಭಾಗಿಸಲಾಯಿತು. ಆ ಸಂದರ್ಭದಲ್ಲಿ ಈಗ ಬಾಂಗ್ಲಾ ಎಂದು ಕರೆಯುವ ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ತಗಾಂಗ್ ಪ್ರದೇಶ ಕೂಡ ಕಣ್ತಪ್ಪಿನಿಂದಲೋ ಅಥವಾ ಬ್ರಿಟೀಶರ ಕುಟಿಲ ನೀತಿಯಿಂದಲೋ ಬಾಂಗ್ಲಾದಲ್ಲೇ ಉಳಿದುಹೋಯಿತು. ಭಾರತಕ್ಕೆ ಸೇರಲೇಬೇಕಾಗಿದ್ದ ಪ್ರದೇಶ ಬಾಂಗ್ಲಾದಲ್ಲಿ ಉಳಿದುಬಿಟ್ಟಿತು. ಈಗಲೂ ಕೂಡ ಬಾಂಗ್ಲಾದಲ್ಲೇ ಅತ್ಯಂತ ಹೆಚ್ಚು ಹಿಂದೂಗಳಿರುವ ಪ್ರದೇಶವೆಂದರೆ ಅದು ಚಿತ್ತಗಾಂಗ್. ಆದರೆ ತೀರಾ ಇತ್ತೀಚೆಗಂತೂ ಹಿಂದೂಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತವಾಗುತ್ತಿದೆ. ಬಾಂಗ್ಲಾದ ಹಿಂದೂಗಳು ಬಡವರು. ಎರಡು ಹೊತ್ತಿನ ಊಟಕ್ಕೆ ಕಷ್ಟಪಡಬೇಕು. ಅಂತದ್ದರಲ್ಲಿ ಹೋರಾಟ ಹೇಗೆ ಮಾಡಬೇಕು? ಅವರು ಯಾವ ರೀತಿ ಸಶಸ್ತ್ರ ಹೋರಾಟ ಮಾಡಬೇಕು? ಭಾರತ ಏನಾದರೂ ಸಹಾಯ ಮಾಡಿದ್ದರೆ ತಮ್ಮ ರಕ್ಷಣೆಗಾದರೂ ಹೋರಾಟ ಮಾಡುತ್ತಿದ್ದರೇನೋ. ಆದರೆ ಭಾರತ ಸಹಾಯಕ್ಕೇ ಬರಲಿಲ್ಲ. ಇಲ್ಲಿನ ಹಿಂದೂಗಳ ಧ್ವನಿ ಈಗಾಗಲೇ ಕ್ಷೀಣಿಸಿದೆ. ಪಕ್ಕದ ಹಿಂದೂ ಬಹುಸಂಖ್ಯಾತ ರಾಷ್ಟ್ರ ನಮ್ಮ ದೇಶದ ತಾಯಿ. ಆದರೂ ಅದು ಸಹಾಯಕ್ಕೆ ಬಂದಿಲ್ಲ. ಎಲ್ಲೋ ಯಾರ್ಯಾರೋ ಹತ್ಯೆಯಾಗುತ್ತಿದ್ದರೆ ಮಾನವ ಹಕ್ಕುಗಳ ಸಂಘಟನೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹುಯ್ಯಲಿಡುತ್ತಾರೆ. ಆದರೆ ಬಾಂಗ್ಲಾ ದೇಶದ ಕುರಿತು ಮಾತ್ರ ಅವರು ಮಾತೇ ಆಡುವುದಿಲ್ಲ. ಖಂಡಿತವಾಗಿಯೂ ಬಾಂಗ್ಲಾ ಹಿಂದೂಗಳ ನೋವು, ದುಃಖ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಅಥವಾ ಜಾಣ ಕುರುಡೇ? ಯಾಕೋ ಮನಸ್ಸು ತುಂಬಾ ಪ್ರಕ್ಷುಬ್ಧಗೊಳ್ಳುತ್ತದೆ.' ಎಂದು ಹತಾಶಳಾಗಿ ನುಡಿದಳು ಮಧುಮಿತಾ.
          `ಬಾಂಗ್ಲಾ ದೇಶದ ಕಥೆ ಹಾಗಿರಲಿ. ನಿಮ್ಮದೇ ದೇಶದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆಯಲ್ಲ ವಿನೂ. ಅದಕ್ಕೇ ನಿಮ್ಮ ದೇಶ ಮಾತನಾಡುತ್ತಿಲ್ಲ. ಇನ್ನು ನಮ್ಮ ದೇಶದಲ್ಲಿ ನಡೆಯುವ ಕಗ್ಗೊಲೆಗಳ ಬಗ್ಗೆ ಮಾತನಾಡುತ್ತದೆಯಾ? ಕೋಮುಗಲಭೆ ಸಂಭವಿಸಿದಾಗೆಲ್ಲ ಹಿಂದೂಗಳದ್ದೇ ತಪ್ಪು ಎಂದು ಹೇಳಿ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತದೆ. ಆಗ ನಿಮ್ಮದೇ ಭಾರತ ಸರ್ಕಾರ ಏನಾದರೂ ಮಾಡಿದೆಯಾ? ನಾವೆಲ್ಲ ಗೋವನ್ನು ಪವಿತ್ರ ಪ್ರಾಣಿಯಾಗಿ ಪೂಜೆ ಮಾಡುತ್ತೇವೆ. ದೇವರು ಎನ್ನುತ್ತೇವೆ. ಅಂತಹ ಗೋವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಕೊಲ್ಲಲಾಗುತ್ತದೆ. ಅದನ್ನು ತಡೆಗಟ್ಟಲಾಗಿದೆಯಾ ಹೇಳು. ಹೀಗೆಲ್ಲಾ ಇದ್ದಾಗ ಪಕ್ಕದ ದೇಶದಲ್ಲಿ ತಮ್ಮದೇ ಬಾಂಧವರು ಸಾಯುತ್ತಿದ್ದರೂ ಅವರಿಗೆ ಹೇಗೆ ಸಹಾಯ ಮಾಡುತ್ತಾರೆ? ಶಸ್ತ್ರಕ್ಕೆ ಶಸ್ತ್ರವೇ ಉತ್ತರವಾಗುತ್ತದೆ ನಿಜ. ಆದರೆ  ಬಾಂಗ್ಲಾದ ಬಡ ಹಿಂದೂಗಳಿಗೆ ಶಸ್ತ್ರವನ್ನು ನೀಡುವವರು ಯಾರು? ಅದ್ಯಾರೋ ಕಣ್ಣಿಗೆ ಕಾಣದ ನಕ್ಸಲರಿಗೆ ಪುರೂಲಿಯಾದಂತಹ ಪ್ರದೇಶಗಳಲ್ಲಿ ಅನಾಮಧೇಯ ವಿಮಾನಗಳೂ ಕೂಡ ಶಸ್ತ್ರಾಸ್ತ್ರವನ್ನು ಎಸೆದು ಹೋಗುತ್ತವೆ. ಬಾಂಗ್ಲಾದಲ್ಲಿ ಇಂತದ್ದನ್ನೆಲ್ಲ ಕನಸು ಕಾಣಲು ಸಾಧ್ಯವಿಲ್ಲ ಬಿಡು. ಬಾಂಗ್ಲಾದ ಹಿಂದೂಗಳು ಮೊದಲು ಹೊಟ್ಟೆಗೆ ಸಿಗಲಿ ಎಂದು ಬಯಸುತ್ತಾರೆ. ಆ ನಂತರ ಅವರು ಶಸ್ತ್ರದ ಬಗ್ಗೆ ಆಲೋಚನೆ. ನೀನೇನಾದರೂ ಭಾರತಕ್ಕೆ ಹೋಗಿ, ಬಂದೂಕು ಅಥವಾ ಶಸ್ತ್ರಾಸ್ತ್ರ ತಯಾರು ಮಾಡುವ ಕಾರ್ಖಾನೆ ತೆಗೆದರೆ ಹೇಳು. ಬಾಂಗ್ಲಾದಲ್ಲಿ ಯಾವ ಯಾವ ಪ್ರದೇಶಕ್ಕೆ ಎಷ್ಟು ಪ್ರಮಾಣದಲ್ಲಿ ಹಿಂದೂಗಳಿಗಾಗಿ ಶಸ್ತ್ರವನ್ನು ಒದಗಿಸಬೇಕು ಎಂಬುದನ್ನು ನಾನು ಹೇಳುತ್ತೇನೆ..' ಎಂದು ಹೇಳಿದ ಮಧುಮಿತಾ ಕಣ್ಣುಮಿಟುಕಿಸಿದಳು.
          ವಿನಯಚಂದ್ರ ಒಮ್ಮೆ ಅಸಹನೆಯಿಂದ ಹೊಯ್ದಾಡಿದ. ನಂತರ ಮಾತನಾಡಿದ ಆತ `ಬಾಂಗ್ಲಾದಲ್ಲಿ ಇರುವ ಪಕ್ಷಗಳಲ್ಲಿ ಹಿಂದೂ ನಾಯಕರಿಲ್ಲವೇ? ಅವರೂ ಮಾತನಾಡುತ್ತಿಲ್ಲವೇ?' ಎಂದು ಕೇಳಿದ.
         `ಇದ್ದಾರೆ. ಹಲವರು ಪ್ರಮುಖ ಮಂತ್ರಿ ಸ್ಥಾನವನ್ನೂ ಪಡೆದಿದ್ದರು. ಆದರೆ ಅವರ್ಯಾರೂ ಹಿಂದೂಗಳ ಪರಿಸ್ಥಿತಿ ಬಗ್ಗೆ ಆಲೋಚಿಸಲೂ ಇಲ್ಲ. ಅವರ ಸಮಸ್ಯೆಗಳ ಬಗ್ಗೆ ಹೋರಾಟವನ್ನೂ ನಡೆಸಿಲ್ಲ. ಛೇ..' ಎಂದಳು ಮಧುಮಿತಾ.
         ವಿನಯಚಂದ್ರನ ಮನಸ್ಸಿನಲ್ಲಿ ನೂರಾರು ಹೊಯ್ದಾಟಗಳು ಶುರುವಾದಂತಿತ್ತು. ಅದೇ ಗುಂಗಿನಲ್ಲಿ ಸೈಕಲ್ ತುಳಿಯುತ್ತಿದ್ದ. ಸಲೀಂ ಚಾಚಾನಿಗೆ ನಿದ್ದೆ ಬಂದಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ  ಮಾತಾಡದೇ ಮಲಗಿದ್ದರು. ಕೆಲವೇ ಸಮಯದ ನಂತರ ಮಿರ್ಜಾಪುರ ಹತ್ತಿರಕ್ಕೆ ಬಂದಿತು. ಮಿರ್ಕಾಪುರದ ಫಾಸಲೆಗೆ ಬಂದ ತಕ್ಷಣ ಮಧುಮಿತಾ ಸಲೀಂ ಚಾಚಾನನ್ನು ಎಚ್ಚರಿಸಿದಳು. ಆತ ಯಾವು ಯಾವುದೋ ದಾರಿಯಲ್ಲಿ ಸೈಕಲ್ ತುಳಿಯುವಂತೆ ಹೇಳಿದ. ಸಲೀಂ ಚಾಚಾನ ಅಣತಿಯಂತೆ ವಿನಯಚಂದ್ರ ಮಿರ್ಜಾಪುರದ ಗಲ್ಲಿ ಗಲ್ಲಿಗಳಲ್ಲಿ ಸೈಕಲ್ ತುಳಿಯಲಾರಂಭಿಸಿದ. ಸಲೀಮ ಚಾಚಾ ಅದ್ಯಾವಾಗ ಮಿರ್ಜಾಪುರವನ್ನು ನೋಡಿದ್ದನೋ ಎಷ್ಟು ಸರಾಗವಾಗಿ ರಸ್ತೆಯನ್ನು ಹೇಳುತ್ತಿದ್ದನೆಂದರೆ ವಿನಯಚಂದ್ರ ಅಚ್ಚರಿಗೊಂಡಿದ್ದ. ಕೊನೆಗೆ ಅದೊಂದು ಮನೆಯ ಬಳಿ ಸೈಕಲ್ ನಿಲ್ಲಿಸುವಂತೆ ಹೇಳಿದ. ವಿನಯಚಂದ್ರ ಸೈಕಲ್ ನಿಲ್ಲಿಸಿದ. ಸಲೀಂ ಚಾಚಾ ಇಳಿದು ಮನೆಯೊಂದರ ಕದ ತಟ್ಟಿದ. ವಿನಯಚಂದ್ರ ಹಾಗೂ ಮಧುಮಿತಾ ವಿಸ್ಮಯದಿಂದ ನೋಡುತ್ತಿದ್ದರು.

(ಮುಂದುವರಿಯುತ್ತದೆ.)