Monday, June 24, 2013

ಆ ಸಾಲಿಗೆ ಸೇರದ ಹನಿಚುಟುಕಗಳು

ಆ ಸಾಲಿಗೆ ಸೇರದ ಹನಿಚುಟುಕಗಳು

ಮೊದಲೊಂಚೂರು : ಬರಿ ಹನಿಕವಿಯಾಗಬೇಡ ಮಾರಾಯಾ.. ಜಾಸ್ತಿ ಕಾಲ ನಿಲ್ಲೋದಿಲ್ಲ.. ಹನಿಯಿದ್ದದ್ದು ಬನಿಯಾಗಲಿ.. ಎಂದು ಅನೇಕ ಮಿತ್ರರು ಅಮದಕಾಲತ್ತಿಲೆ ಸಲಹೆ ನೀಡುತ್ತಿದ್ದರು.. ಆ ಸಲಹೆಯನ್ನು ಮನ್ನಿಸಿ ಆಗಾಗ ಅನೇಕ  ವ್ಯರ್ಥ ಪ್ರಯತ್ನಗಳನ್ನೂ ಮಾಡಿದ್ದೆ. ಅಂದಿನ ಸಮಯದಲ್ಲಿ ನಾನು ನಡೆಸಿದ ಕೆಲವು ವ್ಯರ್ಥ ಪ್ರಯತ್ನಗಳು ಈ ಹನಿಗಳು.. ಎಲ್ಲೋ ಅಡಿಯಲ್ಲಿ ಬಿದ್ದಿದ್ದು ಸಿಕ್ಕಿತು.. ಓದಿ ಹೇಳಿ.. ನಿಮ್ಮಭಿಪ್ರಾಯ

58.ಬಯಕೆ

ಉರುಳುತ್ತಿರುವ ತಲೆ
ಅರಳುತ್ತಿರುವ ಹೂ
ಎರಡೂ ಬಯಸಿದ್ದು
ಪ್ರೀತಿ ಮಾತ್ರ ||



59.ಸಾಂತ್ವನ
ಅಳುವ ಮನಕ್ಕಷ್ಟು ಸಮಾಧಾನ
ಭಾವನೆಗಳು ಜೋಪಾನ
ಪ್ರೀತಿಯ ಸೋಪಾನ
ಅಳುವೆಡೆಗೆ ನಗುವಿಡುವ ತೀರ್ಮಾನ
ಅದು ಬದುಕ ಸಾಂತ್ವನ ||


60.ಕೊನೆ ಮೊದಲು
ಗೆದ್ದಾಗ ನಗು,
ಅತ್ತಾಗ ದುಃಖ |
ನಡುವೆ ಸಾಧನೆ,
ಒಳಗೆ ವೇದನೆ.|
ಬಾಳಲ್ಲಿ ಸರಸ
ಜೊತೆಯಲ್ಲಿ ವಿರಸ..||
ಕೊನೆಯಿಲ್ಲ ಮೊದಲಿಲ್ಲ
ಎರಡೂ ಬೇರೆ.., ಎರಡೂ ಒಂದೇ ..||

61.ಅಂತ್ಯ
ಅವರೋ ಜೋಡಿ
ಅಮರ ಪ್ರೇಮಿ |
ಅವರಿಗೆ ಸಿಕ್ಕಿದ್ದು ಮಾತ್ರ
ಮರಣ ಭೂಮಿ ||


62.ನನ್ನ-ನಿನ್ನ ಪ್ರೀತಿ
ಗೆಳತೀ.., ನನ್ನ ನಿನ್ನ ಪ್ರೀತಿ
ರೈಲ್ವೆ ಕಂಬಿಗಳಂತೆ,
ಎಂದೂ ಜೊತೆಗೂಡುವುದಿಲ್ಲ..
ಕೊಬೆತನಕ ಬೇರೆ ಬೇರೆ
ಜೊತೆ ಸೇರಿಲ್ಲ..
ಸೇರುವುದೂ ಇಲ್ಲ..!!

63.ಕ-ವನ
ಪ್ರತಿಯೊಂದು
ಉತ್ತಮ ವನಗಳೂ
ಅತ್ಯುತ್ತಮ
ಕ-ವನಗಳು..||


64.ಕುಮಾರ ಸಂಭವ
ಕೆಲವರಿಗೆ ಮಲೆನಾಡು
ಕಾಲೀದಾಸನ ಕಾವ್ಯ..||
ಆದರೆ
ಕುಮಾರ ಸಂಭವವಾಗುವುದು ಎಲ್ಲೋ..?

65.ಗುಲಾಬಿ
ಒಡಲಲ್ಲಿ ಮುಳ್ಳಿದ್ದೂ
ಮೇಲೆ ಮಾತ್ರ
ಚೆಂದನೆಯ ನಗೆ
ಸೂಸುವುದು..|

Sunday, June 16, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಊಟಿಗೆ ಬಂದಿದ್ದರ ಕುರುಹಾಗಿ ಚಳಿ ನಮ್ಮನ್ನು ಆವರಿಸಿತು..
ಬೈಕಿನ ಎಕ್ಸಲರೇಟರ್ ಹಿಡಿದ ಕೈ ಚಳಿಯಿಂದಾಗಿ ಕೊರಟಾಗುತ್ತಿತ್ತು.
ಆದರೂ ನಮ್ಮ ಹುಮ್ಮಸ್ಸಿಗೆ ತಡೆಯಿಲ್ಲ.  ವೇಗಕ್ಕೆ ಮಿತಿಯಿಲ್ಲ ..
ಒಮ್ಮೆ ರಾಘವ-ಕಿಟ್ಟುವಿನ ಬೈಕ್ ಮುಂದೆ.. ಮತ್ತೊಮ್ಮೆ ನಮ್ಮದು..

ಅಂತೂ ಇಂತೂ ಊಟಿಯನ್ನು ತಲುಪಿದೆವು..
ಗುಡ್ಡ ಬೆಟ್ಟಗಳ ನಡುವೆ ತಂಪಾಗಿರುವ ಊರು.. ನಮ್ಮ ಶಿರಸಿಯಷ್ಟು ದೊಡ್ಡದಿರಬಹುದು..
ಕರ್ನಾಟಕ ಹಾಗೂ ಕೇರಳಗಳ ಮಧ್ಯ ಸಿಲುಕಿ ಅಪ್ಪಚ್ಚಿಯಂತಾಗಿರುವ ಊರು.. ಅದ್ಯಾಕೆ ತಮಿಳುನಾಡಿಗೆ ಸೇರಿತೋ..
ಈ ಊರಿನಲ್ಲಿ ಮೋಡಗಳು ಬಂದು ಚುಂಬಿಸುತ್ತವೆ..
ನಮ್ಮನ್ನು ಆವರಿಸುತ್ತವೆ.. ಕಾಡುತ್ತವೆ.. ಗೊತ್ತಿಲ್ಲದಂತೆ ಕವನವಾಗಿ ಹರಿಯುತ್ತವೆ..

ನಾವು ಊಟಿಯನ್ನು ತಲುಪಿದಾಗ ಗಂಟೆ 9 ದಾಟಿರಬೇಕು..
ಇನ್ನೂ ಮಂಜಿನ ಮುಸುಕಿನಿಂದ ಎದ್ದಿರಲಿಲ್ಲ..
ಸೂರ್ಯ ಊಟಿಯ ಪಾಲಿಗೆ ರಜಾ ಡ್ಯೂಟಿ ಇರಬೇಕೇನೋ..
ಕಾಣೆಯಾಗಿದ್ದ..
ಊಟಿಯ ಕೆಳ ಭಾಗದಲ್ಲಿ ನಮ್ಮನ್ನು ಕಂಡು ನೆತ್ತಿ ಸುಡಲು ಯತ್ನಿಸಿದ್ದ ಸೂರ್ಯ ಇಲ್ಲಿ ಸದ್ದಿಲ್ಲದೇ ಓಡಿ ಹೋಗಿದ್ದ..
ಸೂರ್ಯನನ್ನು ಅಣಕಿಸೋಣ ಎನ್ನುವ ಭಾವ ನಮ್ಮಲ್ಲಿ ಕಾಡಿದ್ದು ಸುಳ್ಳಲ್ಲ..
ಹಾಳು ಹೊಟ್ಟೆಗೆ ಎಷ್ಟು ತಿಂದರೂ ಸಾಕಾಗೋದಿಲ್ಲ ಕಣ್ರಿ..
ಮತ್ತೆ ಹಸಿವಾಗಿತ್ತು.... ಏನಾದರೂ ತಿನ್ನಬೇಕು...
ಹೊಟೆಲ್ ಹುಡುಕಾಟ ಜಾರಿಯಾಯಿತು..

ಹಿಂದಿನ ಸಾರಿ ನಾನು, ರಾಘವ ಬಂದಿದ್ದೆವಲ್ಲ..
ಅದೇ ಹೋಟೆಲ್ ಹೋದೆವು..
ಒಳ ಹೋಗಿ ಕೈಕಾಲು ತೊಳೆಯೋಣ ಎಂದು ವಾಷಿಂಗ್ ಸಿಂಕಿಗೆ ಕೈಯೊಡ್ಡಿದರೆ ಆಹಾ ಸ್ವರ್ಗ ಸುಖ...
ನಳದಲ್ಲಿ ಬರುತ್ತಿದ್ದುದು ಬಿಸಿ ನೀರು...
ಮುತ್ತಿಕ್ಕುವ ಚಳಿಯಲ್ಲಿ.. ಕೊರೆಯುವ ಚಳಿಯಲ್ಲಿ... ಕಾಡುವ ಚಳಿಯಲ್ಲಿ...
ಬೆನ್ನಟ್ಟಿ ಆವರಿಸುವ ಚಳಿಯಲ್ಲಿ ಬಿಸಿನೀರನ್ನು ಕೊಟ್ಟರೆ ಏನಾಗಬೇಡ ನೀವೇ ಹೇಳಿ ಸಾರ್...
ಆಹಾ... ಎಷ್ಟು ಹೊತ್ತಾದೂ ಕೈ ತೊಳೆಯುವುದು ಮುಗಿಯುವುದೇ ಇಲ್ಲವೇನೋ..
ಹೊಟೆಲಿನ ಸಪ್ಲಾಯರ್ ಬಂದು ಬಯ್ಯಬಹುದೆಂಬ ಭಯದ ನಡುವೆ ಕೈ ತೊಳೆಯುವ ದೀರ್ಘ ಶಾಸ್ತ್ರ ಮುಗಿಯಿತು..

ಆರ್ಡರ್ ಮಾಡಬೇಕಲ್ಲ..
ನಾನು, ರಾಘು, ಕಿಟ್ಟು ನಮ್ಮ ಎಂದಿನ ಮಸಾಲೆ ದೋಸೆಯನ್ನು ಆರ್ಡರ್ ಮಾಡಿದೆವು..
ಇದೇನಿದು ಊಟಿಗೆ ಹೋಗಿ ಮಸಾಲೆದೋಸೆಯೇ ಎಂದು ಕೇಳಬೇಡಿ..
ನಮಗೆ ತಮಿಳು ಬರೋದಿಲ್ಲ..
ಬೇರೆ ತಿಂಡಿ ಸಿಗುತ್ತಿತ್ತೇನೋ..
ನಮಗೆ ಆರ್ಡರ್ ಮಾಡಲು ಭಾಷೆ ಬರಲಿಲ್ಲ..
ಮಸಾಲೆ ದೋಸೆ ಎಂದೆವು..
ತಿಂದೆವು...

ಮೋಹನ ಮಾತ್ರ ದೋಸೆಯಲ್ಲಿಯೇ ಇನ್ನೊಂದೆನೋ ಬಗೆ ಆರ್ಡರ್ ಮಾಡಿದ..
ತಂದಿಟ್ಟರು ನೋಡಿ.. ಅಬ್ಬಬ್ಬಾ...
ದೋಸೆಯ ತುಂಬಾ ಬೇವಿನ ಸೊಪ್ಪಿನ ರಾಶಿ..
ಆಗ ಮೋಹನನ ಮುಖ ನೋಡಬೇಕಿತ್ತು...
ಅದ್ಹೇಗೆ ತಿಂದನೋ... ಪಾಡು ಪಟ್ಟನೋ... ನಾವಂತೂ ನಕ್ಕೆವು...
ಹೊಟ್ಟೆಗಂತೂ ಬಿದ್ದಿತು.. ಮುಂದೆನು ಮಾಡೋದು..?

ಊಟಿಯಲ್ಲಿ ವರ್ಡ್ ಫೇಮಸ್ಸಾಗಿರುವ ಬೊಟಾನಿಕ್ಕಲ್ ಗಾರ್ಡನ್ ನೋಡೋಣ್ವಾ ಎಂಬ ಚರ್ಚೆ ನಮ್ಮದು..
ನೋಡುವಂತದ್ದು ಎಂತದೂ ಇಲ್ಲ.. ಬರಿ ಗಾರ್ಡನ್ನು ಎನ್ನುವ ತೀರ್ಮಾನಕ್ಕೆ ಬಂದು ಬೇರೆ ಎಲ್ಲಾದರೂ ಹೋಗಬಹುದಾ..? ಎನ್ನುವ ಚರ್ಚೆ ಮತ್ತೆ ಸಾಗಿತು..
ಊಟಿಯಲ್ಲಿಯೇ ಅತ್ಯಂತ ಎತ್ತರವಾದ  ಹಾಗೂ ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಳ ಎಂದು ಹೆಸರಾಗಿರುವ `ದೊಡ್ಡಬೆಟ್ಟ'ಕ್ಕೆ ಹೋಗೋಣ ಎಂದು ಗಾಡಿಯನ್ನು ಗುರ್ರೆನ್ನಿಸಿದೆವು...
ಊಟಿಯ ರಸ್ತೆಗಳು ತುಂಬಾ ವಿಚಿತ್ರ ಕಣ್ರೀ.. ಬಳುಕಿ ಬಳುಕಿ ಸಾಗುತ್ತವೆ.. ಎಲ್ಲಲೆಲ್ಲೋ ಒಳಹೊಕ್ಕಿ ಮತ್ತೆಲ್ಲೋ ಹೊರಬರುತ್ತವೆ..
ಊಟಿಯನ್ನು ತಲುಪುವ ಎರಡು ಪ್ರಮುಖ ರಸ್ತೆಗಳೆಂದರೆ ಒಂದು ಮೈಸರೂ ಇನ್ನೊಂದು ಕೂನೂರು..
ಸುತ್ತಮುತ್ತ ಚಿಕ್ಕ ಪುಟ್ಟ ಊರುಗಳಿವೆ..
ಟೈಮಿದ್ದರೆ ಹೋಗಬಹುದು.. ಆದರೆ ದೊಡ್ಡಬೆಟ್ಟವನ್ನು ಮರೆಯುವ ಹಾಗಿಲ್ಲ..
ಸುತ್ತುಬಳಸಿ, ಇಣುಕಿ, ಬಳುಕಿ ದೊಡ್ಡಬೆಟ್ಟವನ್ನು ಹತ್ತತೊಡಗಿದೆವು..

ದಾರಿಯಲ್ಲೆಲ್ಲೋ ಫಾರಿನ್ನು ಮಂದಿಗಳ ಗುಂಪು ಸಿಕ್ಕಿತು.. ಅದ್ಯಾರೋ ಗೂಡು ಅವರನ್ನು ಪಾದಯಾತ್ರೆಯ ಮೂಲಕ ದೊಡ್ಡಬೆಟ್ಟಕ್ಕೆ ಕರೆದೊಯ್ಯುತ್ತಿದ್ದ.
ಅವರನ್ನು ನಿಲ್ಲಿಸಿ ಹಾಯ್ ಎಂದೆವು... ನಡು ನಡುವೆ ನಮ್ಮ ಕ್ಯಾಮರಾ ಕೆಲಸದಲ್ಲಿ ನಿರತವಾಗಿತ್ತು.

ಅಂತೂ ಇಂತೂ ದೊಡ್ಡ ಬೆಟ್ಟವನ್ನು ಹತ್ತಿದೆವು..
ಆಗಲೇ ಮಂಜಿನ ಮುಸುಕು ಅದನ್ನು ಆವರಿಸಿತ್ತು..
ಏನೋ ಅವ್ಯಕ್ತ ಖುಷಿಯಲ್ಲಿ ಮನಸ್ಸು ಪ್ರಫುಲ್ಲವಾಗಿತ್ತು..
ಬ್ರಿಟೀಷರು ಎಂತ ಚಂದ ಜಾಗ ಹುಡುಕ್ತಾರಲ್ಲ ಅನ್ನಿಸಿತು.

ಯಾಕೋ ಮನಸ್ಸು ಮಾತ್ರ..

ಮಂಜು ತಬ್ಬಿತು ನೆಲವ ಬಿಮ್ಮನೆ... ಎಂದು ಹಾಡೋಣ ಎನ್ನಿಸತು.. ಆದರೆ ಅಶ್ವತ್ ಅವರು ನೆನಪಾಗಿ ಸುಮ್ಮನಾದೆ..
ಚಳಿಯಲಿ ಜೊತೆಯಲಿ.. ಆಗಾ.. ನಿಸರ್ಗ ಸುಂದರ ಸ್ಥಳಕ್ಕೆ ವರ್ಣನೆ ಮಾಡಲು ಪದಪುಂಜಗಳು ಸಾಲುತ್ತಿಲ್ಲ...

ದೊಡ್ಡಬೆಟ್ಟದ ತುದಿಯಲ್ಲೊಂದು ಬಿಎಸ್ಸೆನ್ನೆಲ್ ಟವರ್ ಇದೆ.. ನಮ್ಮಲ್ಲಿ ಟವರ್ ಗಳ ಹಾಗೆ ಸಿಗ್ನಲ್ ಪ್ರಾಬ್ಲಮ್ಮಾ ಗೊತ್ತಿಲ್ಲ..
ನಮ್ಮ ಮೊಬೈಲಿನಲ್ಲಿದ್ದ ಐಡಿಯಾ ಅಲ್ಲಿ ಏರ್ ಸೆಲ್ ಆಗಿ ಧೋನಿಯನ್ನು ನೆನಪು ಮಾಡ್ತಾ ಇತ್ತು..
ದೊಡ್ಡಬೆಟ್ಟದ ತುದಿಯಲ್ಲೊಂದು ದೂರದರ್ಶಕ ಇಡಲಾಗಿದೆ..

ಫೀಸಿನೊಂದಿಗೆ ನೋಡಬಹುದು..
ಬೆಟ್ಟದ ತುದಿಯಿಂದ ಊಟಿಯ ಯಾವುದೋ ಮೂಲೆಯನ್ನೋ, ಜನಜಂಗುಳಿಯನ್ನೋ ತೋರಿಸುತ್ತಾರೆ..
ಎರಡು ಸಾರಿ ನೋಡಿದ ಮೇಲೆ ಮುಗಿಯಿತು..
ಮುಂದಿನವರಿಗೆ ಬಿಟ್ಟುಕೊಡಬೇಕು... ಸಕ್ಕತ್ ಲಾಸ್ ಬಡ್ಡಿಮಕ್ಕಳು ಅಂತ ಬಯ್ದು ಬಂದಿದ್ದಾಯ್ತು..

ಅಲ್ಲೆ ಹತ್ತಿರದಲ್ಲಿ ಡೆತ್ ಪಾಯಿಂಟಿದೆ..
ಅಮೃತವರ್ಷಿಣಿಯಲ್ಲಿ ತೋರಿಸ್ತಾರಲ್ಲ ಅದೇ.. ಸುಹಾಸಿನಿ, ಶರತ್ ಬಾಬು ಬೀಳುವ ಜಾಗ..
ಅಲ್ಲಿಗೆ ಹೋಗಿ ನಿಂತರೆ ಏನೋ ಭಯ ನಮ್ಮನ್ನು ಕಾಡುತ್ತದೆ...

ಸಾಲು ಸಾಲಿಗೆ ಬೇಲಿಗಳು... ವಾರ್ನಿಂಗನ್ನು ಮಾಡುವ ವಾಚ್ ಮೆನ್ನುಗಳು..
ಕಬ್ಬಿಣದ ಬೇಲಿ ಸಾಕಾಗದು ಎಂಬಂತೆ ಹಗ್ಗವನ್ನು ಹಾಕಿರುತ್ತಾರೆ...
ಮುಂದೆ ಹೋಗಬೇಡಿ ಎಂದು ತಮಿಳಿನಲ್ಲಿ ಹೇಳುತ್ತಾರೆ.. ನಮಗೆ ಅರ್ಥವಾಗುವುದಿಲ್ಲ... ಇರಲಿ..


ಅಲ್ಲಿಂದ ಮತ್ತೆ ಮರಳಿ ಬಂದು ದೊಡ್ಡಬೆಟ್ಟದ ತುದಿಯಲ್ಲಿರುವ ಕಲ್ಲಿನ ಬೇಂಚಿನ ಮೇಲೆ ನಾವು ನಾಲ್ವರು ಕುಳಿತುಕೊಳ್ಳುವ ವೇಳೆಗೆ ಆಗಲೇ ನಮ್ಮ ಸುತ್ತಮುತ್ತ ಮಂಜಿನ ಮೋಡ ಬರಲಾರಂಭಿಸಿತ್ತು..
ಮುಖವನ್ನೆಲ್ಲ ತಣ್ಣಗೆ ಮಾಡುತ್ತ.. ಹನಿಯನ್ನು ತೊಟ್ಟಿಕ್ಕುತ್ತ ಮಂಜು ನಮ್ಮನ್ನು ಆವರಿಸಿತು..
ಏನೋ ಸಂತೋಷ.. ಮತ್ತಷ್ಟು ಪೋಟೋಗಳು ಕ್ಲಿಕ್ಕಿಸಲ್ಪಟ್ಟವು...
ಮರಳಿ ಬರುವಾಗ ಅಲ್ಲಿನ ಲೋಕಲ್ ಮಾರ್ಕೆಟ್ ಗೆ ಹೋದೆವು.. ತರಹೇವಾರಿ ಚಸ್ಮಾಗಳಿದ್ದವು.. ಟೋಪಿಗಳಿದ್ದವು.. ಇನ್ನೂ ಏನೇನೋ ಚಿತ್ರ ವಿಚಿತ್ರ ಐಟೆಮ್ಮುಗಳಿದ್ದೆವು..
ಕೊಳ್ಳುವವರ ಪೋಸಿನಲ್ಲಿ ಹೋಗಿ ರೇಟು ಕೇಳಿ.. ಚೌಕಾಸಿ ಮಾಡಿ.. ಬ್ಯಾಡ ಎಂದು ಬಿಟ್ಟು ಬಂದೆವು...
ಹಳೆಯಕಾಲದ ಯಾವುದೋ ಸೇಡನ್ನು ತೀರಿಸಿಕೊಂಡ ಖುಷಿ ನಮಗೆ..
ಕೆಕ್ಕರುಗಣ್ಣಿನ ಉತ್ತರ ನೀಡಿದ್ದ ಅಂಗಡಿಯ ಹುಡುಗಿ.../ಮಧ್ಯವಯಸ್ಸಿನ ಹೆಂಗಸು...
ಅಂತೂ ದೊಡ್ಡ ಬೆಟ್ಟ ನೋಡಿದ್ದಾಯ್ತು.. ಕಣ್ತುಂಬಿಕೊಂಡಿದ್ದಾಯ್ತು.. ಮರಳಬೇಕಲ್ಲ...
ಸೂರ್ಯ ನೆತ್ತಿಗೆ ಬರುವ ಹೊತ್ತಾಗಿದ್ದರೂ ಪತ್ತೆಯಿರಲಿಲ್ಲ.. ಹಾಳು ಹೊಟ್ಟೆ ಮತ್ತೆ ಮತ್ತೆ ಬೆಲ್ಲು ಬಾರಿಸುತ್ತದೆ ನೋಡಿ...

ಬರ್ರೋ ಹೋಗೋಣ ಎಂದು ವಾಪಸ್ಸಾಗಲು ಹೊರಟೆವು...
ಊಟಿಯಲ್ಲಿ ಊಟಕ್ಕೊಂದು ಹೋಟೆಲ್ ಹುಡುಕಬೇಕು... ಲೋಕಲ್ ಮಾರ್ಕೇಟನ್ನು ಸುತ್ತಾಡುವ ಕುತೂಹಲವಿತ್ತು..
ಊಟದ ನಂತರ ಮಾಡೋಣ ಎನ್ನುವ ಚರ್ಚೆ.. ತಿಂಡಿ ತಿಂದು ಹೋಗೋಣ.. ಊಟಿಯಿಂದ ಮರಳುವ ದಾರಿಯಲ್ಲಿ ಒಂದು ಕಡೆ ಒಳ್ಳೆಯ ಊಟ ಸಿಗುತ್ತದೆ.. 60 ರು. ಆದರೂ ಚನ್ನಾಗಿದೆ.. ಎಂದು ರಾಘವ ಐಡೀರಿಯಾ ಕೊಟ್ಟ..
ಸರಿ ಎಂದೆವು..
ಅಲ್ಲಿ ಮಾರ್ಕೇಟ್ ಸುತ್ತಾಡಿ ಕೊಳ್ಳುವುದನ್ನು ಕೊಳ್ಳೊಣ ಎಂದು ಹೊರಟೆವು..

(ಮುಂದುವರಿಯುತ್ತದೆ)

Friday, June 7, 2013

ಸುಜುಕಿ ಸರದಾರ

ಸುಜುಕಿ ಸರದಾರ

        ಅವನು ಹೆಸರಿಗೆ ತಕ್ಕಂತೆ ಸುಝುಕಿಯ ಸರದಾರ. ಊರಿನಲ್ಲೆಲ್ಲಾ ಆತನನ್ನು ಹಾಗೇಯೇ ಕರೆದು ಕರೆದು ಆತನ ಮೂಲನಾಮಧೇಯವೇ ಮರೆತಂತೆ ಆಗಿಬಿಟ್ಟಿತ್ತು. ಹಾಂ. ಸುಝುಕಿ ಸರದಾರನಿಗೆ ಆ ಹೆಸರು ಬರಲು ಮುಖ್ಯ ಕಾರಣವಾದ ಸುಝುಕಿ ಸಮುರಾಯ್ ಎಂಬ ಬೈಕೇ ಆತನ ಅತ್ಯಮೂಲ್ಯ ಆಸ್ತಿ. ಹಳೆಯದಾಗಿ, ಲಟ್ಟು ಹಿಡಿದು, ಪ್ರತಿಭಾಗವೂ ಗಡ ಗಡ ಅಲುಗುತ್ತಿದ್ದ ಆ ಬೈಕನ್ನು ಅದ್ಯಾವ ಕಾಲದಲ್ಲಿ ತಯಾರುಮಾಡಿದ್ದೋ..?
    ಹಾಗೆಯೇ, ಆ ಜುಝುಕಿಗೆ ಈತ ಬಹುಶಃ ಇಪ್ಪತ್ತೈದನೆಯ ಯಜಮಾನನಿರಬೇಕು..! ಸರದಾರನಿಗೂ ಅಷ್ಟೇ ತಂದ ಯಾವುದೇ ಕಂಪನಿಯ ಬೈಕುಗಳೂ ಅದೃಷ್ಟ ತರಲಿಲ್ಲ. ಕೈ ಹಿಡಿಯಲಿಲ್ಲ. ಕೊನೆಗೆ ಈ ಸಮುರಾಯ್ ಸುಝುಕಿ ಬೈಕನ್ನು ಗೆಳೆಯ ಅಮೀರ್ ಖಾನನಿಂದ ಚೌಕಾಸಿಗೆ ಕೊಂಡುಕೊಂಡಿದ್ದ. ಸರದಾರ ಅದನ್ನು ಕೊಂಡುಕೊಂಡ ನಂತರ ಕನಿಷ್ಠವೆಂದರೂ ಒಂದು ದಶಕದಿಂದೀಚೆಗೆ ಅದು ಆತನ ಸಾಥಿಯಾಗಿತ್ತು.
    ಸುಝುಕಿ ಸರದಾರ ಆ ಬೂಕು ಸಿಕ್ಕ ಮೇಲೆ ಅದೆಷ್ಟು ಪ್ರದೇಶಗಳವರೆಗೆ ಸವಾರಿ ಮಾಡಿದ್ದಾನೋ.. ಮೂಡುಬಂತೆಂದರೆ ಸಾಕು ಹೊಟ್ಟೆಗಷ್ಟು ಪೆಟ್ರೂಲು ಸುರಿದು ಯಾವುದಾದರೊಂದು ದಿಕ್ಕಿನ ಹಾದಿ ಹಿಡಿದು ಹೊರಟುಬಿಡುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ಮನೆಯ ನೆನಪಾದಾಗಲೇ.
    ಈ ಸುಝುಕಿ ಸರದಾರನಿಗೆ ಹೆಂಡಲಿಯಿಲ್ಲ. ಮಕ್ಕಳಿಲ್ಲ. ಈತನೊಬ್ಬ ಅಖಂಡ ಬ್ರಹ್ಮಚಾರಿ.. ಹಾಂ. ಈತ ಅನಾಥನೇನಲ್ಲ. . ಹೆತ್ತವರಿದ್ದಾರೆ., ತಕ್ಕಮಟ್ಟಿಗೆ ಇಂಗ್ಲೀಷನ್ನು ಎತ್ತಿ ಬಿಸಾಡುವಷ್ಟು ಓದಿಕೊಂಡಿದ್ದಾನೆ ಕೂಡ. ಹರೆಯದ ಹುಮ್ಮಸ್ಸಿನಲ್ಲಿ ಬೈಕು ಹೊಡೆಯುವ ಚಟ ಆತನಿಗೆ ಅಂಟಿಕೊಳ್ಳದೇ ಇದ್ದಿದ್ದರೆ ಇಷ್ಟುಹೊತ್ತಿಗೆ ಯಾವುದಾದರೂ ದೊಡ್ಡ ಕಾಂಟ್ರಾಕ್ಟ್ ಕೆಲಸ ಸಿಕ್ಕಿ ಮದುವೆಯೂ ಆಗಿ ಹೋಗಿತ್ತು.
    ಇಷ್ಟೆಲ್ಲ ಹೇಳಿಯೂ ಆತನ ಉದ್ಯೋಗದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ ನೋಡಿ.. ಆತ ತನ್ನ ಊರಿನ ಸರಹದ್ದಿನಲ್ಲಿ ಎಲ್ಲೇ ಮನೆಯ ಗಿಲಾವು ಕೆಲಸವಿದ್ದಲ್ಲಿ ಮುದ್ದಾಂ ಮಾಡಿಬರುತ್ತಿದ್ದ.. ಗಿಲಾಯವೇ ಆತನಿಗ ಬರುತ್ತಿದ್ದ ಪರಮೋಚ್ಛ ಕೆಲಸ. ಹೀಗಿರುವ ಈ ಸರದಾರನ ಪರಿಚಯ ನನಗಾಗಿದ್ದು ಆಕಸ್ಮಿಕ. ಕೆಲವು ದಿನಗಳ ಹಿಂದೆ ನನಗೂ ಬೈಕೊಂದನ್ನು ಕೊಳ್ಳುವ ಉಮೇದಿಯಾಯಿತು. ಅದಕ್ಕಾಗಿಯೇ ಹುಡುಕುತ್ತಿದ್ದಾಗ ಯಾರೋ ಒಬ್ಬರು ಈ ಸರದಾರನನ್ನು ಪರಿಚಯಿಸಿ, ಈತನಿಗೆ ಬೈಕುಗಳ ಬಗ್ಗೆ ಸಂಪೂರ್ಣ ಗೊತ್ತು ಎಂದರು..
    ನನಗೆ ಪರಿಚಯವಾದ ಕೂಡಲೇ ಈ ಸರದಾರ ಎಲ್ಲಾ ಬೈಕುಗಳೂ `ವೇಸ್ಟ್..' ಎಂದೂ, ತನ್ನ ಸುಝುಕಿ ಸಮುರಾಯ್ ಬೈಕೇ ಬೆಸ್ಟ್ ಎಂದೂ ಹೇಳಿ, ಬಹಳೇ ಬಹಳ `ಕಾಯ್ದೆ ಕೊಚ್ಚಲಾರಂಭಿಸಿದ..'. ನಾನು ಅವನ ಹೊಗಳಿಕೆಗೆ ಮರುಳುಬಿದ್ದು ಬೈಕನ್ನು ಕೊಂಡುಕೊಳ್ಳುತ್ತಿದ್ದೆನೇನೋ.. ಆದರೆ ಒಮ್ಮೆ ಏಕೋ ಆ ಬೈಕನ್ನು ನೋಡಿಬಿಡಬೇಕೆಂದು ಅನ್ನಿಸಿತು... ನೋಡಿದೆ.. ನೋಡಿದರೆ ಅದನ್ನು ಬೈಕೆಂದು ಕರೆಯುವುದು ಹೇಗೆ..? ಯಾವ ದಿಕ್ಕಿನಿಂದ ಅದು ಬೈಕಿನಂತೆ ಕಾಣುತ್ತದೆ ಎಂಬ ಸಂದೇಹ ಮನದಲ್ಲಿ ಕಾಡಿತು. ಆ ಬೈಕು ಎಲುಬಿನ ಹಂದರವಾಗಿತ್ತು. ಮೂಳೆ ಚಕ್ಕಳವಾಗಿಬಿಟ್ಟಿತ್ತು... ಅಷ್ಟೇ ಅಲ್ಲದೇ ಆ ಬೈಕಿಗೆ ಮೈ ತುಂಬಾ ಕಲೆಗಳು, ಗಾಯದ ಗುರುತು.. `ಸಾಕಪ್ಪಾ ಸಾಕು..' ಎಂದು ಬೈಕನ್ನು ದೂರವಿಟ್ಟೆ.. ಸುಝುಕಿ ಸರದಾರ ನಕ್ಷತ್ರಿಕನಂತೆ ನನ್ನ ಪರಿಚಯಸ್ತನಾಗಿ ಕಾಡಲಾರಂಭಿಸಿದ.
    ಮರೆತೆಬಿಟ್ಟಿದ್ದೆ.. ಅವನ ಒತ್ತಾಯಕ್ಕೆ ಮಣಿದು ನಾಲ್ಕೈದು ಬಾರಿ ಅವನೊಡನೆ ಬೇರೆ ಬೇರೆಯ ಒಂದೆರಡು ಪ್ರಸಿದ್ಧ ತಾಣಗಳಿಗೆ ಆ ಬೈಕಿನೊಂದಿಗೆ ಹೋಗಿದ್ದೆ.. ದಾರಿಯ ನಡುವೆ ಎಲ್ಲಾದರೂ ಕೈ ಕೊಡಬಹುದೇನೋ ಎನ್ನುವ ಭಯ ಕೊನೆಯವರೆಗೂ ನನ್ನನ್ನು ಕಾಡದೇ ಬಿಡಲಿಲ್ಲ. ಕೈಕೊಟ್ಟಿದ್ದರೆ ಕಥೆ ಕರ್ಮಕಾಂಡವಾಗಿಬಿಡುತ್ತಿತ್ತು.. ಅದನ್ನು ನಾನೇ ತಳ್ಳಬೇಕಿತ್ತಲ್ಲ... ಆದರೆ ಸಧ್ಯ ಹಾಗಾಗಲಿಲ್ಲ.. ಬೈಕಿಗೆ ಸಲಾಂ ಹೊಡೆದರೂ ನನ್ನನ್ನು ಯಾವುದೋ ಮಾಯೆಯಲ್ಲಿ ಕಾಡಲು ಪ್ರಾರಂಭಿಸಿಯೂ ಇತ್ತು.
    ಜಪಾನಿನ ಯಾವುದೋ ಕಂಪನಿಯಲ್ಲಿ ತಯಾರಾಗಿ ಭಾರತದ ಮಾರುಕಟ್ಟೆಯನ್ನು ಹೊಕ್ಕಿದ್ದ ಸಮುರಾಯ್ ನ ಸುಝುಕಿ ಬೈಕು ಯಾರ್ಯಾರದ್ದೋ ಮೂಲಕ ನಮ್ಮೂರ ಸರದಾರನ ಕೈ ತಲುಪಿತ್ತು.. ಆ ಬೈಕು ತನ್ನ ಯವ್ವನದ ಹಾದಿಯಲ್ಲಿ ಒಂದು ಗುಟುಕು ಪೆಟ್ರೂಲಿಗೆ ಅದೆಷ್ಟು ದೂರದ ವರೆಗೆ ಕುದುರೆಯಂತೆ ಓಡುತ್ತಿತ್ತೋ.. ಆದರೆ ಈಗ ಅದರ ಹೊಟ್ಟೆಗೆ ಕುಡಿದಷ್ಟೂ ಪೆಟ್ರೂಲು ಸಾಲದು.. ಜೊತೆಗೆ ಬೈಕೂ ಸಹ ಕೆಲವು ಕಿಲೋಮೀಟರುಗಳವರೆಗೆ ಜೋರಾಗಿ ಓಡಿದರೂ ದಮ್ಮು ಹಿಡಿದ ರೋಗಿಯು ಕೆಮ್ಮುವಂತೆ ಆಗಾಗ ಕೆಮ್ಮುತ್ತಾ ನಿಂತುಬಿಡುತ್ತದೆ.
    ಇಷ್ಟರ ಜೊತೆಗೆ ಪೆಟ್ರೂಲಿನ ಬೆಲೆಯೂ ಗಗನಮುಖಿಯಾಗಿದೆ.. 2 ರು. ಕಡಿಮೆ ಯಾಗುವ ಪೆಟ್ರೂಲ್ ಮರುದಿನವೇ 3.50 ರು ಜಾಸ್ತಿಯಾಗಿ ಬಿಡುತ್ತದೆ. ಇಂತಹ ಸಮಯದಲ್ಲಿಯೇ ಸರದಾರ ಬುದ್ಧಿವಂತಿಕೆಯನ್ನು ಪ್ರದರ್ಶಿಸತೊಡಗಿದ್ದಾನೆ. ಸುಮ್ಮನೆ ಆ ಬೈಕಿನ ಹೊಟ್ಟೆಗೆ ಪೆಟ್ರೂಲು ಹಾಕುವ ಬದಲಾಗಿ ಎಷ್ಟು ಬೇಕೋ.. ಅಷ್ಟು ಕುಡಿ ಎಂದು ಸೀಮೆಎಣ್ಣೆಯನ್ನು ಹಾಕತೊಡಗಿದ್ದಾನೆ. ಹಾಗಾಗಿ ಆತನ ಬೈಕು ಆ ದಾರಿಯಲ್ಲಿ ಸಾಗಿಹೋದ ಹತ್ತು ನಿಮಿಷಗಳಾದರೂ ಅಲ್ಲಿ ಸೀಮೆ ಎಣ್ಣೆಯ ಘಮಲು ಮೂಗಿಗೆ ರಪ್ಪಂತ ಬಡಿಯುತ್ತಲೇ ಇರುತ್ತದೆ.
    ಇತ್ತೀಚೆಗೆ ಅವನಿಗೆ ಆ ಬೈಕನ್ನು ಮಾರಾಟ ಮಾಡಬೇಕೆಂಬ ಹುಚ್ಚು ಹತ್ತಿಬಿಟ್ಟಿತ್ತು. ತಾನು ಅಲ್ಲಿ ಇಲ್ಲಿ ಮನೆಯ ಗಿಲಾಯ ಮಾಡಿ ದುಡಿಯುತ್ತಿದ್ದ ಕಾಸನ್ನೆಲ್ಲ ಆ ಬೈಕು ಒಂದೇ ಗುಕ್ಕಿಗೆ ನುಂಗಲಾರಂಭಿಸಿದಾಗ ಆತನಿಗೆ ಆಗ ಬೈಕೆಂಬುದು ಬಿಳಿ ಆನೆಯನ್ನು ಕಟ್ಟಿ ಸಾಕಿದಂತೆ ಅನ್ನಿಸಿತ್ತು.. ಆದರೆ ಲಡಕಾಸಿ ಬೈಕನ್ನು ಕೊಳ್ಳುವವರು ಬೇಕಲ್ಲ..!! ಹಾಗಾಗಿಯೇ ಆತ `ಏನಯ್ಯಾ.. ಸರದಾರ . ಬೈಕನ್ನು ಮಾರ್ತೀಯಂತೆ..' ಎಂದು ಯಾರಾದರೂ ಕೇಳಿದ ತಕ್ಷಣ `ಯಾಕೆ..? ತಗೋಳ್ತೀಯಾ..? ಹೆಚ್ಚೇನೂ ಬೇಡ . ಒಂದು ಸಾವ್ರ ಸಾಕು ಅಷ್ಟೇ ' ಎನ್ನುತ್ತಿದ್ದ. ಕೆಳಿದವರು ನಗುತ್ತ ಸದ್ದಿಲ್ಲದೇ ಎದ್ದು ಬರುತ್ತಿದ್ದರು.

    ಸರದಾರನ ಪುರಾಣ ಹೇಳುವದರಲ್ಲಿ ಮುಳುಗಿದ್ದ ನಾನು ಮುಖ್ಯ ವಿಷಯವನ್ನು ಹೇಳಲು ಮರೆತೇಬಿಟ್ಟಿದ್ದೆ ನೋಡಿ.. ನಾನೊಮ್ಮೆ ಏನೋ ತುರ್ತು ಕಾರಣವೆಂದು ಆ ಬೈಕನ್ನು ತೆಗೆದುಕೊಂಡು ಹೋಗಿದ್ದೆ. ಅದರ ಆತ್ಮಚರಿತ್ರೆಯನ್ನು ನಾನು ತಿಳಿದಿದ್ದರೂ, ಏನೋ ಅರ್ಜೆಂಟು ಕೆಲಸವಿತ್ತಾದ್ದರಿಂದ ಸರ್ದಾರನ ಬಳಿ `ಪೆಟ್ರೂಲ್ ಹಾಕಿಸ್ತೀನಿ ಮಾರಾಯಾ..' ಎನ್ನುವ ಆಣೆ ಮುತ್ತುಗಳನ್ನು ಉದುರಿಸಿ ಬೈಕನ್ನು ಒಯ್ದಿದ್ದೆ.. ಆ ಬೈಕು ನಾನು ಕೊಂಡು ಹೋಗುವಾಗಲೇನೋ ಸರಿಯಾಗಿಯೇ ಇತ್ತು. ತವರಿಗೆ ಹೊರಟ ಹೆಂಡತಿಯಂತೆ.. ಆದರೆ ಮರಳಿ ಬರುವಾಗ ಶುರುಹಚ್ಚಿಕೊಂಡಳು ನೋಡಿ ತನ್ನ ವರಾತವ.. !! ಒಮ್ಮೆ ಕೆಮ್ಮಿತು.. ಸುಮ್ಮನಾಗಿಸಿದೆ. ಚೈನಿನ ಆಳದಲ್ಲೆಲ್ಲೋ ಶಬ್ದಮಾಡಿತು. ಬಿಚ್ಚಿ ಸರಿ ಮಾಡಿದೆ. ಏನೇನೋ ತರಲೆ ತಾಪತ್ರಯ ಶುರುಮಾಡಿತು.. ನಾನು ಸರಿಮಾಡಿಯೇ ಸಿದ್ಧ ಎಂದು ಮುಂದುವರಿದೆ. ಕೊನೆಗೊಮ್ಮೆ ಎಲ್ಲ ಸರಿಯಾಯಿತೆಂದು ಗಾಡಿ ಚಾಲೂಮಾಡಿ ಹೊರಟೆ. ಗಾಡಿಗೂ ಸ್ವಲ್ಪ ಸುಸ್ತಾಗಿತ್ತೇನೆಓ.. ಕೆಲವು ಕಿ.ಮಿಗಳ ವರೆಗೆ ನಿರಾತಂಕವಾಗಿ ಸಾಗಿತು.. ಆದರೆ ನಮ್ಮೂರು ಇನ್ನೂ 5 ಕಿಲೋಮೀಟರ್ ಇದೆ ಎನ್ನುವಾಗ ಮಾತ್ರ ನೋಡಿ.. ಗ್ರಾಚಾರ ಭಯಂಕರ ಖರಾಬ್ ಇತ್ತು.. ವೇಗದೂತನಂತೆ ಸಾಗುತ್ತಿದ್ದೆ. ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿಬಿಟ್ಟಿತು. ಗೇರ್ ಹಾಕಿ ವೇಗ ಕಡಿಮೆ ಮಾಡೋಣ ಎಂದರೆ ಊಹೂಂ ಸರಿಯಾದ ಸಮಯಕ್ಕೆ ಸಿಕ್ಕಿಬಿದ್ದೀದೀಯಾ ಎನ್ನುವಂತೆ ಗೇರಿಗೂ ಬೀಳೋದಿಲ್ಲ.. ಏನೇ ಶತಪ್ರಯತ್ನ ಮಾಡಿದರೂ ಬೈಕು ನಿಲ್ಲುತ್ತಿಲ್ಲ.. ಸಾಬರ ತರಾ ಕಾಲನ್ನು ನೆಲಕ್ಕೆ ಒತ್ತಿ ಹಿಡಿದು ಬೈಕ್ ನಿಲ್ಲಿಸಲು ಯತ್ನಿಸಿದೆ. ಕಾಲು ನೋವು ಮಾಡಿಕೊಂಡದ್ದೇ ಬಂತು.. ಕೊನೆಗೂ ದೇವರು ದೊಡ್ಡವನಿದ್ದ.. ಗಾಡಿ ಅದ್ಹೇಗೋ ನಿಂತಿತು.. ಉಸಿರನ್ನು ಎರಡೆರಡು ಸಲ ಬಿಟ್ಟೆ..
    ಇನ್ನು ಮುಂದೆ ಈ ಬೈಕಿನಲ್ಲಿಯೇ ನಮ್ಮೂರಿಗೆ ಹೋದರೆ `ಬಿದಿರು ಮೋಟಾರಿನ ಪ್ರಯಾಣ' ಕಟ್ಟಿಟ್ಟ ಬುತ್ತಿ ಎನ್ನಿಸಿತು. ತಳ್ಳಲು ಪ್ರಾರಂಭಿಸಿದೆ.. ನಾನು ಬೈಕ್ ತಳ್ಳುವುದನ್ನು ನೋಡಿದ ಇತರರಿಗೆ ನಗುವೋ ನಗು.. ನಾನು, ಸರದಾರನ ಸುಝುಕಿ ಬೈಕನ್ನು ತಳ್ಳುವುದು ಅವರಿಗೆ ಅತ್ಯಾನಂದ ನೀಡಿರಬೇಕು..!! ಯಾರೋ ಒಬ್ಬಿಬ್ಬರು `ಮಾರಾಯ್ರೆ ನಿಮಗೆ ನಾನಾದ್ರೂ ನನ್ನ ಸೈಕಲ್ಲನ್ನಾದ್ರೂ ಕೊಡ್ತಿದ್ದೆ.. ಈ ಸರದಾರನ ಬೈಕೆಂತಕ್ಕೆ ಬೇಕಿತ್ರಾ..? ನೋಡಿ.. ಈಗ ಹಣೆಬರಹ ನಿಮ್ದು.. ತಳ್ಳಿ.. ' ಎಂದು ನನ್ನ ನಸೀಬಿಗಷ್ಟು ಉಪ್ಪುಖಾರ ಹಚ್ಚಿದರು. ಮನಸ್ಸು ಚುರ್ರೆಂದು ಸಿಟ್ಟಾಯಿತಾದರೂ ಸುಮ್ಮನಾದೆ.. ಕೊನೆಗೂ ಮದ್ಯಾಹ್ನದ ಉರಿಬಿಸಿಲಿನಲ್ಲಿ 3-4 ಕಿ.ಮಿ ದೂರ ಬೈಕನ್ನು ತಳ್ಳಿಕೊಂಡು ಸರದಾರನಿಗೆ ಬೈಕನ್ನು ಕೊಟ್ಟೆ.. ಆಗಲೇ ಮಿರಾಕಲ್ ಸಂಭವಿಸಿದ್ದು ನೋಡಿ.. ಹಾಳಾದ ಬೈಕು ತಕ್ಷಣವೇ `ಕೈ ಮರಚಲು ಎಮ್ಮೆಯಂತೆ.. ಆತ ಹೇಳಿದಂತೆ ಕೇಳಲು ಪ್ರಾರಂಭಿಸಿತು.. ನಾನು ಬೈಕಿಗೆ ಸಲಾಮು ಹೊಡೆದೆ..
    ಇಂತಹ ಸುಝುಕಿ ಸಮುರಾಯ್ ಬೈಕನ್ನು ಕೊನೆಗೂ ಕೊಳ್ಳುವವರು ಸಿಗಲಿಲ್ಲ. ಅದು ಮತ್ತೊಮ್ಮೆ ಮಾರಾಟವಾಗಿ ಗಿನ್ನಿಸ್ ದಾಖಲೆಗೆ ಪಾತ್ರವಾಗುವ ಸುಸಂದರ್ಭ ತಪ್ಪಿಹೋಯಿತು ಎಂದು ನಮಗೆ ಅನ್ನಿಸತೊಡಗಿತು. ಆದರೆ ಸರದಾರ ಸುಮ್ಮನೆ ಇರುವವನಲ್ಲ ನೋಡಿ.. ಬುದ್ಧಿ ಓಡಿಸಿದ.. ಪರಿಣಾಮ ಗುಜರಿ ಅಂಗಡಿಗೆ ಕೆ.ಜಿ. ಗೆ 10ರುಪಾಯಿಯಂತೆ 95 ಕೆಜಿಯ ಬೈಕನ್ನು ಮಾರಿ 950 ರೂಪಾಯಿ ಮಾಡಿಕೊಂಡು ಬದುಕಿದೆಯಾ ಬಡಜೀವವೆ ಎಂದುಕೊಂಡ.. ಬೈಕು ಮಾರಿದರೂ ಆತ ಈಗಲೂ ಸುಝುಕಿ ಸರದಾರನಾಗಿಯೇ ಇದ್ದಾನೆ.
    ಈಗಲೂ ನಮ್ಮೂರಿನ ಜಡ್ಡೀರಾಮನ ಗುಜರಿ ಅಂಗಡಿಯ ಟಾಪಿನ ಮೇಲೆ ಸುಝುಕಿ ಸಮುರಾಯ್ ಬೈಕಿನ ಪಳೆಯುಳಿಕೆಗಳಾದ ಎರಡು ಗಾಲಿಗಳು ಹುಡುಕಿದರೆ ಕಣ್ಣಿಗೆ ಬೀಳುತ್ತವೆ.. ಶತಮಾನದ ಪಳೆಯುಳಿಕೆಗಳಂತೆ.. ವೀರಗಲ್ಲುಗಳಂತೆ.

Sunday, June 2, 2013

ಚಿನ್ನು ಮೊಲ ಹಾಗೂ ಕಣ್ಣೀರು..

ಚಿನ್ನು ಮೊಲ ಹಾಗೂ ಕಣ್ಣೀರು..


ಬಾಂಧವ್ಯ ನೋಡಿ ಹೇಗಿರುತ್ತದೆ ಅಂತ,...
ಅದೆಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿ ಹಾಲು ಕುಡಿಯಬೇಕಿತ್ತೋ...
ಅದೆಷ್ಟು ಚೆಂದವಾಗಿ ಚೆಂಗನೆ ನೆಗೆಯುತ್ತ ಹುಲ್ಲು ಹಾಸಿನ ಮೇಲೆ ನರ್ತನ ಮಾಡಬೇಕಿತ್ತೋ...
ಆದರೆ ಹಾಗಾಗಲಿಲ್ಲ...

ಈಗ ಎರಡು ದಿನಗಳ ಹಿಂದೆ  ನನ್ನ ಭಾವ ಬೈಕೇರಿ ಮನೆಯ ಕಡೆಗೆ ಮರಳುತ್ತಿದ್ದಾಗ ರಸ್ತೆ ಮಧ್ಯ ಮಳೆಯಲ್ಲಿ ಏನೋ ಬಿದ್ದುಕೊಂಡಿದ್ದು ಕಾಣಿಸಿತು... ರಾತ್ರಿಯಾಗಿತ್ತು. ಲೈಟಿನ ಬೆಳಕಿನಲ್ಲಿ ಅದೇನೆಂಬುದು ಸ್ಪಷ್ಟವಾಗಿರಲಿಲ್ಲ..
ಗಾಡಿ ನಿಲ್ಲಿಸದಾಗ ನಿಧಾನವಾಗಿ ಪಕ್ಕಕ್ಕೆ ಸರಿದು ಹೋಯಿತೆಂಬುದು ಆತನೇ ಹೇಳಿದ ಸಂಗತಿ..
ಬೈಕಿನಡಿಯಲ್ಲಿ ಬಿತ್ತೇ?
ಹುಡುಕಿದಾಗ ಕಂಡಿದ್ದ ಪುಟ್ಟ ಮೊಲದ ಮರಿ..
ಅದೆಷ್ಟು ಪುಟ್ಟದು ಅಂದರೆ ಗುಬ್ಬಿಗಿಂತ ಸ್ವಲ್ಪ ದೊಡ್ಡ ಗಾತ್ರವಿರಬೇಕು ಅಷ್ಟೇ..

ಮಳೆಯಲ್ಲಿ ನಡುಗುತ್ತಾ.. ಓಡಿಹೋಗಲೂ ಶಕ್ತಿಯಿಲ್ಲದೇ..
ಅಮ್ಮನ ಸುಳಿವಿಲ್ಲದೆ ಕಂಗಾಲಾಗಿತ್ತು...
ಸಾಮಾನ್ಯವಾಗಿ ರಾತ್ರಿಯ ವೇಳೆಯಲ್ಲಿ ನಾನು ಬೈಕ್ ಮೇಲೆ ಹೋಗುವಾಗಲೆಲ್ಲ ದೊಡ್ಡ ದೊಡ್ಡ ಮೊಲಗಳು ಬೈಕಿನ ಲೈಟಿಗೆ ಕಣ್ಣು ಕೊಡುತ್ತ ಬೆಳಕು ಕಂಡಲ್ಲಿ ದಾರಿಗಡ್ಡವಾಗಿ ಓಡುತ್ತವೆ.. ನಮಗಿನಂತ ಮುಂದೆ.. ನಾವು ಅಥವಾ ಮೊಲ ಸ್ವಲ್ಪ ಯಾಮಾರಿದರೂ ಮೈಕಡಿಗೆ ಜೀವ ಕೊನೆಯಾಗುತ್ತದೆ.. ಅದಕ್ಕೆ ರಾತ್ರಿ ನಾನು ಮೊಲ ಕಂಡಾಗಲೆಲ್ಲ ಬಹಳ ಸ್ಲೋ ರೈಡಿಂಗ ಮಾಡುತ್ತೇನೆ..

ಬಹುಶಃ ಆ ಮರಿಯ ತಾಯಿ ಯಾವುದೋ ಬೈಕಿನಡಿ ಬಿದ್ದಿರಬೇಕು..
ಅಥವಾ ಮೊಲವನ್ನು ತಿನ್ನುವವರ ಕೈಗೆ ಸಿಕ್ಕಿತೋ ಕಾಣೆ..
ಮಳೆಯಿತ್ತಲ್ಲ ಪುಟ್ಟಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಾಗ ಅಮ್ಮ ಎಲ್ಲೋ ಕಾಣೆಯಾಯಿತು..
ಮರಿಗೆ ದಿಕ್ಕೇ ತೋಚಲಿಲ್ಲ..
ಭಾವನ ಕೈಗೆ ಸಿಕ್ಕಿತು..
ಕಾಲು ಮೈ, ಕಣ್ಣಲೆಲ್ಲ ಮಣ್ಣುರಾಡಿ.. ಮನ್ಣಿನ ಮುದ್ದೆಯಂತಾಗಿದ್ದ ಮರಿಯನ್ನು ನಾಜೂಕಿನಿಂದ ಎತ್ತಿಕೊಂಡು ಬಂದಿದ್ದ..
ಮನೆಗೆ ಬಂದು ಬೆಚ್ಚನೆಯ ಬಟ್ಟೆಯಲ್ಲಿ ಒರೆಸಿ ಬೆಚ್ಚಗೆ ಗೋಣಿಯ ಚಾದರ ಮಾಡಿ ಹೊದೆಸಿ ಬೆಕ್ಕಿನ ಕಾಟ ತಪ್ಪಿಸುವ ಸಲುವಾಗಿ ಡಬ್ಬಿಯಲ್ಲಿ ಗೂಡು ಮಾಡಿ ಮಲಗಿಸಿದ್ದ..

ಆಮೇಲೆ ಸಮಸ್ಯೆ ಶುರು..
ತಂದಿದ್ದೇವೆ..? ಅದೆಂತ ತಿನ್ನುತ್ತದೆ ಎಂಬುದು ಗೊತ್ತಿಲ್ಲ
ಮೊಲಕೆ ಉಪ್ಪು ಅಂದರೆ ಆಗದು ಹುಷಾರು ಅಂತ ಯಾರೋ ಹೇಳಿದ್ದರು..
ಉಪ್ಪನ್ನು ದೂರವಿಟ್ಟೆವು..
ಮೊಲ ತಾಯಿ ಹಾಲನ್ನು ಬಿಟ್ಟು ಉಳಿದಂತೆ ನೀರನ್ನು ಮಾತ್ರ ಕುಡಿಯುತ್ತದೆ ಎಂದು ಯಾರೋ ಹೇಳಿದರು..
ಗೊಂದಲವಾಯಿತು.. ಒಂದಷ್ಟು ಎಳೆಯ ಹುಲ್ಲು, ಬೆಂಡೆಕಾಯಿ ಮುಂತಾದ ತರಕಾರಿ ತಂದೆವು..
ಚಿಕ್ಕ ಚಿಕ್ಕ ತುಂಡನ್ನಾಗಿ ಮಾಡಿ ಅದರ ಎದುರು ಇಟ್ಟದ್ದೂ ಆಯ್ತು..
ಕ್ಯಾರೇಟ್ ಇಸ್ಟ ಎಂದು ಯಾರದ್ದೋ ಮನೆಯಿಂದ ತಂದು ಇಟ್ಟದ್ದಾಯ್ತು..
ನಮ್ಮೆದುರು ಏನೆಂದರೆ ಏನನ್ನೂ ತಿನ್ನಲಿಲ್ಲ..

ಆದರೆ ನಾವು ಅತ್ತ ಇತ್ತ ಹೋದಾಗ ತಿನ್ನುತ್ತಿತ್ತೆಂದು ಕಾಣುತ್ತದೆ..
ಅರ್ಧ ತಿಂದು ಬಿಟ್ಟಿದ್ದ ಹಣ್ಣಿನ ಸಿಪ್ಪೆಗಳು ಸಾಕ್ಷಿ ಹೇಳುತ್ತಿದ್ದವು..
ಆದರೆ ನಮ್ಮೆದುರು ಮಾತ್ರ ಮಂಗನ ಉಪವಾಸ...

ಈ ಮರಿ ಬಂದದ್ದೇ ತಡ ಮನೆಯಲ್ಲಿ ಜೀವಕಳೆ..
ತಂಗಿಗಂತೂ ಸ್ವರ್ಗವೇ ಧರೆಗಿಳಿದಂತೆ ಆಗಿತ್ತು..
ಇನ್ನು ತಂಗಿ ಮಗನಿಗೆ ಬಹಳ ಸಂತೋಷವಾಗಿತ್ತು..
ಒಂದೂ ವರೆ ವರ್ಷದ ಆತನಿಗೆ ಎಲ್ಲ ಪ್ರಾಣಿಗಳೂ, ಪಕ್ಷಗಳೂ ಸೇರಿದಂತೆ ಸಕಲ ಜಗತ್ತುಗಳೂ ಕುತೂಹಲದ, ಬೆರಗುಹುಟ್ಟಿಸುವ ಅಂಶಗಳು.. ಮನೆಗೆ ಬಂದು ಕಾಟ ಕೊಡುತ್ತಿದ್ದ ಮಾಳಬೆಕ್ಕನ್ನು ಮನೆಯ ಸದಸ್ಯನನ್ನಾಗಿ ಮಾಡಿದ್ದ ಕೀರ್ತಿ ಆತನಿಗೆ ಸಲ್ಲಬೇಕು.. (ಅದಕ್ಕೇ ನಾವು ಕಾಮರಾಜ ಅಂತ ಹೆಸರನ್ನಿಟ್ಟಿದ್ದೆವು.) ಆ ಬೆಕ್ಕೂ ಕೂಡ ಆತನಿಗೆ ಬಹಳ ಒಗ್ಗಿಬಿಟ್ಟಿದೆ...
ನಾವು ಮುಟ್ಟಲು ಹೋದರೆ ಓಡಿಹೋಗುವ ಆಥವಾ ಸಿಟ್ಟನ್ನು ಮಾಡಿಕೊಳ್ಳುವ ಆ ಬೆಕ್ಕಿಗೆ ಆತ ಏನು ಮಾಡಿದರೂ ತೊಂದರೆಯಿಲ್ಲ.. ತಂಗಿಮಗ ಶ್ರೀವತ್ಸ ಅದಕ್ಕಾಗಿಯೇ  ಬೆಕ್ಕಿನ ಬಾಲವನ್ನು ಎಳೆಯುವುದರ ಆದಿಯಾಗಿ ಅದನ್ನು ಗೊಂಬೆಯಂತೆ ತಿರುಗಿಸುವುದು, ಅದರ ಜೊತೆಗೆ ಆಡುವುದು ಮಾಡುತ್ತಿದ್ದ.. ಅದಕ್ಕೆ ತಕ್ಕಂತೆ ಅದೂ ಕೂಡ ಆಡುತ್ತಿತ್ತು...
ಈಗ ಮೊಲದ ಮರಿ ಮನೆಗೆ ಬಂದರೆ ಆತನನ್ನು ತಡೆಯುವವರ್ಯಾರು..?

ಮೊಲವನ್ನು ಇಟ್ಟಿದ್ದ ಡಬ್ಬಿಯತ್ತ ನಿಮಿಷಕ್ಕೊಂದು ಬಾರಿ ಹೋಗಿ ಕುಕ್ಕರುಗಾಲಲ್ಲಿ ಕುಳಿತು ಕುತೂಹಲದಿಂದ ಅದನ್ನು ನೋಡುವುದು ಕಣ್ಣರಳಿಸುವುದು, ಅಚ್ಚರಿಯಿಂದ ಆಮ್ಮನನ್ನು ಕರೆಯುವುದು ಆತನ ಆಟವಾಗಿಬಿಟ್ಟಿತು..
ಮೊಲದ ಮರಿಗೂ ಏನನ್ನಿಸಿತೋ ಗೊತ್ತಿಲ್ಲ..
ಆತ ಬಂದಾಗಲೆಲ್ಲ ಚಂಗನೆ ನೆಗೆದು ಕುಣಿಯುತ್ತಿತ್ತು..
ಡಬ್ಬಿಯಿಂದ ಹೊರಬರಲು ಯತ್ನಿಸುತ್ತಿತ್ತು..
ಇದನ್ನು ನೋಡಿ ಮತ್ತಷ್ಟು ಹರ್ಷ ಗೊಳ್ಳುತ್ತಿದ್ದುದು ಶ್ರೀವತ್ಸ...

ತಂಗಿ ಈ ಮೊಲದ ಮರಿಗೆ ಚಿನ್ನು ಎನ್ನುವ ಹೆಸರನ್ನಿಟ್ಟೇ ಬಿಟ್ಟಳು...
ಮೊದಲಿಂದಲೂ ಮೊಲವನ್ನು ಸಾಕಬೇಕೆಂಬ ನಮ್ಮ ಉತ್ಕಟ ಇಚ್ಛೆ ಈ ಮೂಲಕ ಪೂರ್ತಿಯಾಗಿತ್ತು..
ಜೊತೆಯಲ್ಲಿ ಹೊಸ ಸಮಸ್ಯೆಗಳು ಹುಟ್ಟಿದ್ದವು.. ಬೆಕ್ಕಿನ ಕಾಟ ತಡೆಯುವುದು, ಆಹಾರ ಹುಡುಕುವುದು, ರಕ್ಷಣೆ ಮಾಡುವುದು ಇತ್ಯಾದಿ.. ಇದಕ್ಕೆ ತಕ್ಕಂತೆ ನನ್ನ ಅಪ್ಪನ ಬಳಿ ಅದ್ಯಾರೋ ಮೊಲವನ್ನು ಮನೆಯಲ್ಲಿ ಸಾಕಿದರೆ ಮಕ್ಕಳು ಸಾಯುತ್ತಾರೆ ಎಂದು ಹೇಳಿದರಂತೆ... ಪ್ರಾರಂಭವಾಯಿತು ವಿರೋಧ ಪಕ್ಷದ ಧರಣಿ... ಬಹುಮತ ನಮ್ಮ ಪರವಿತ್ತು... ವಿರೋಧಿಗಳ ಅಲೆ ಸಣ್ಣದಾಯಿತು.. ಬಡಪಾಯಿ ಮೊಲ ಉಳಿಯಿತು..

ಎರಡು ದಿನ ಮೊಲದೊಡನೆ ಸಹಜವಾಗಿ, ತಮಾಷೆಯಾಗಿ ಕಳೆಯಿತು..
ಆದರೆ ನಿನ್ನೆ ರಾತ್ರಿ (ಜೂನ್ 1ರಂದು) ಮೊಲ ಇದ್ದಕ್ಕಿದ್ದಂತೆ ಮಲಗಿತು.. ಎಂದಿನ ಲವಲವಿಕೆಯಿಲ್ಲ.. ಮಲಗಿಯೇ ಇತ್ತು.. ಹುಷಾರಿಲ್ಲವೋ ಗೊತ್ತಾಗಲಿಲ್ಲ.. ಸತ್ತೇ ಹೋಯಿತೆ..? ಊಹುಂ.. ಉಸಿರಾಟ ಮಾಡುತ್ತಿದೆ. ಆದರೆ ಮೊಲವನ್ನು ನಿಲ್ಲಿಸ ಹೋದರೆ ಬುಡುಕ್ಕನೆ ಬೀಳುವುದು, ಮುಂದಿನ ಎರಡು ಕಾಲನ್ನು ಒದ್ದುಕೊಳ್ಳುವುದು ಮಾಡಲು ಆರಮಬಿಸಿತು. ಹಸಿವಾಯಿತೆ ಎಂದುಕೊಂಡು ತಿಂಡಿ ಕೊಟ್ಟೆವು, ಕ್ಯಾರೆಟ್ ಇಟ್ಟೆವು..ಊಹೂಂ ಏನನ್ನೂ ಮುಟ್ಟುತ್ತಿಲ್ಲ...
ಯಾಕೋ ಮನಸ್ಸಿನಲ್ಲಿ ಅಳುಕು..

ಅಷ್ಟರಲ್ಲಿ ಅದನ್ನು ನೋಡಿದ ಅಮ್ಮ `ತಮಾ.. ಇದು ಬದುಕುವುದು ಕಷ್ಟ .. ತಾಯಿ ಹಾಲು ಕುಡಿದು ಬೆಳೆದ ಮೊಲಕ್ಕೆ ನಾವು ತಿಂಡಿಕೊಟ್ಟರೂ ಒಗ್ಗಿಕೊಳ್ಳಲಿಲ್ಲ.. ಏನೋ ಹೆಚ್ಚು ಕಡಿಮೆ ಆದಂತಿದೆ..'ಎಂದಾಗ ಮನಸ್ಸು ಭಾರ ಭಾರ...
`ಮೊಲಕ್ಕೆ ಅಷ್ಟುದ್ದದ ಹಲ್ಲಿದೆ.. ಏನನ್ನಾದರೂ ತಿನ್ನುತ್ತದೆ..' ಎಂದು ವಿಚಿತ್ರ ವಾದವನ್ನು ಮಾಡಿದ್ದು ತಂಗಿ..
ಶ್ರೀವತ್ಸ ಮಲಗಿದ್ದನಾದ್ದರಿಂದ ಈ ಸಂದರ್ಭದಲ್ಲಿ ಅವನ ಉಪಸ್ಥಿತಿ ಇರಲಿಲ್ಲ..
ಭಾವನಿಗೆ ಯಾಕಾದರೂ ತಂದೆನೋ ಎನ್ನುವಷ್ಟು ಮನಸ್ಸು ವಿಚಲಿತವಾಗಿತ್ತು..
ಮಳೆಯಲ್ಲಿ ಸಾಯುತ್ತಿತ್ತು.. ಕಾಗೆ ಗೆ ಆಹಾರವಾಗುತ್ತಿತ್ತು.. ಛೇ.. ಇಲ್ಲಿ ತಂದರೂ ಬದುಕುತ್ತಿಲ್ಲವಲ್ಲ ಎಂದು ಪೇಚಾಡಿದ..

ರಾತ್ರಿ ಅದಕ್ಕೆ ಸಾಕಷ್ಟು ಬಂದೋಬಸ್ತು ಮಾಡಿ ಬೆಚ್ಚಗೆ ಮಲಗಿಸಿದೆವು..
ಬೆಳಗಾಗುವ ವೇಳೆಗೆ ಮೊಲ ಬದುಕಿರಲಿಲ್ಲ..
ಚಿನ್ನು ಜೀವ ಬಿಟ್ಟಿತ್ತು...

ಯಾಕೋ ಮನಸ್ಸೆಲ್ಲ ಒದ್ದೆಯಾದಂತೆನಿಸಿತು..
ಬೆಳಿಗ್ಗೆ ಎದ್ದವನೆ ಓಡಿಬಂದು ಡಬ್ಬಿಯನ್ನು ನೋಡಿದ ಶ್ರೀವತ್ಸ ನೋಡುತ್ತಲೇ ಇದ್ದ..
ನೋಡುತ್ತಲೇ ಇದ್ದ..
ಮೊಲ ಕುಣಿಯುತ್ತಲೇ ಇಲ್ಲ...
ಕೊನೆಗೆ ಆತನಿಗೆ ಏನನ್ನಿಸಿತೋ ಏನೋ.. ಅಳಲು ಪ್ರಾರಂಭಿಸಿದ... ಹೇಳಲು ಆತನಿಗಿನ್ನೂ ಮಾತು ಬರುವುದಿಲ್ಲವಲ್ಲ...
ಅಮ್ಮಾ..  ಮೀ.. ಮೀ... ಅಮ್ಮಾ.. ಮೀ.. ಮೀ.. ಎಂದು ಮೊಲವನ್ನು ತೋರಿಸುತ್ತ ಻ಳಲು ಪ್ರಾರಮಭಿಸಿದ.. ಚಾಕ್ಲೆಟ್ ತೋರಿಸಿ ಆಮಿಷವೊಡ್ಡಿದರೂ ಮರುಳಾಗುತ್ತಿಲ್ಲ..
ಮೊಲದ ಮರಿ ಆತನನ್ನು ಅಷ್ಟು ಕಾಡಿತ್ತು.. ಆತ ಅಷ್ಟು ಹಚ್ಚಿಕೊಂಡಿದ್ದ..

ಈ ಚಿತ್ರಣವನ್ನು ನೋಡಿ ನಮ್ಮ ಕಣ್ಣಂಚಲ್ಲೂ ನೀರು...
ನೆನಪಾದಾಗ ಮನಸ್ಸು ಕಲ್ಲವಿಲ...

Saturday, June 1, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3


ಮಾಸಿಲ ಮಣಿಯಿಂದ ಕಣ್ಣೆತ್ತಿ ನೋಡಿದರೆ ದೂರದಲ್ಲಿ ಊಟಿಯ ಗಿರಿಶಿಖರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ...
ಬಾನು ಚುಂಬಿಸಿದಂತೆ ಕಾಣು ಈ ಗಿರಿಶಿಖರಗಳ ಮರೆಯಿಂದ ಸೂರ್ಯ ಆಣುಕುತ್ತಾನೆ..
ಆಗ ಕಾಣುವ ದೃಶ್ಯ ಚಿತ್ತಾರ ವರ್ಣನೆಗೆ ನಿಲುಕದ್ದು..

ಇಲ್ಲಿ ಕೊಂಚ ಮಾಸಿಲಮಣಿಯ ರಸ್ತೆಯ ಬಗ್ಗೆ ಹೇಳಬೇಕು...
ಮೈಸೂರಿನಿಂದ ಊಟಿಗೆ ಹೋಗುವುದಾದರೆ ಮುಖ್ಯವಾಗಿ ಇರುವುದು ರಾಷ್ಟ್ರೀಯ ಹೆದ್ದಾರಿ.. ಬಂಡಿಪುರದಿಂದ ಮಧುಮಲೈ ಅರಣ್ಯಕ್ಕೆ ಪ್ರವೇಶ ಮಾಡುವಾಗ ಒಂದು ಡಾಂಬರು ರಸ್ತೆ ಸಾಗುತ್ತದೆ.. ಇದು ಮಾಸಿಲಮಣಿಯ ಮೂಲಕ ಊಟಿಗೆ ಹೋಗುತ್ತದೆ.. ರಾಷ್ಟ್ರೀಯ ಹೆದ್ದಾರಿಯ ಮೂಲಕ ಘಟ್ಟ ಹತ್ತಿದರೆ 65-70 ಕಿ.ಮಿ ದೂರ. ಆದರೆ ಮಾಸಿಲ ಮಣಿಯದ್ದು ಶಾರ್ಟ್ ಕಟ್ ರಸ್ತೆ.. 36-40 ಕಿ.ಮಿಗೆ ಊಟಿ ಕಾಣಬಲ್ಲದು..

ರಸ್ತೆ ಚನ್ನಾಗಿದೆ ಎಂದು ಯಾರೋ ಹೇಳಿದರು..
ನಾವು ಹೊರಟೆವು..
ಅದು ನೋಡಿದರೆ ಯದ್ವಾತದ್ವಾ ಘಟ್ಟ...
36 ಕಿ.ಮಿ ಏರುವಷ್ಟರಲ್ಲಿ 70 ಕಿ.ಮಿ ಸುತ್ತಿಬಂದಷ್ಟೇ ಅನುಭವವಾಗುತ್ತದೆ.. ಹೆಚ್ಚೂ ಕಡಿಮೆ 65 ಡಿಗ್ರಿ ಕೋನದಲ್ಲಿ ಏರಬೇಕು..
ಹತ್ತಿರ ಹತ್ತಿರ 70ಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳು.. ಟೆರ್ರಿಬಲ್...
ನಮ್ಮ ಹುಚ್ಚುಖೋಡಿಗೆ ಇದೆಲ್ಲಾ ಎಲ್ಲಿ ತಾಗ್ತದೆ ಹೇಳಿ...

ಸಿನೆಮಾ ಇದ್ದಿದ್ದು ತ್ರೀ ಈಡಿಯೆಟ್ಸ್ ಆದರೂ ನಾವು ಫೋರ್ ಈಡಿಯೆಟ್ಸ್ ಹೊರಟಿದ್ದೆವು...
ಏನೋ ಥ್ರಿಲ್ಲು... ಮನಸ್ಸು ಫ್ರಿಲ್ಲು...

ಮಂಗದ ಜೊತೆಗೆ ಮಂಗನಾಟ... 

ಮಾಸಿಲಮಣಿಯಲ್ಲಿ ಚಾ ಕುಡಿದ ಸುದ್ದಿ ಆಗಲೆ ಹೇಳಿದ್ದೇನೆ...
ಇಬ್ಬನಿ ತಬ್ಬಿದ ಇಳೆಯಲ್ಲಿ...4-5 ಕಿ.ಮಿ ಸಾಗಿದೆವು...
ಅಲ್ಲೊಂದು ಸೇತುವೆ...
ಮಂಗಗಳ ಸಾಲು..
ರಸ್ತೆಗಡ್ಡಲಾಗಿ ನಿಂತಿದ್ದವು...

ನಾವು ಗಾಡಿ ನಿಲ್ಲಿಸಿದೆವು..
ಮಂಗಗಳು ಮುಗಿಬಿದ್ದಿದ್ದವು..
ಓಡಿಸಿದೆವಾದರೂ ಒಂದು ಮಂಗ ಅಲ್ಲಾಡಲೇ ಇಲ್ಲ...
ಸುತ್ತೆಲ್ಲ ಕಾಡು..
ನಾವು ನಿಂತದ್ದು ಸೇತುವೆಯ ಮೇಲೆ...
ಬೈಕಿನ ಹಾರನ್ ಸದ್ದಿಗೆ ಮಂಗ ಹೆದರಲಿಲ್ಲ...
ನಮ್ಮಂತವರನ್ನು ಅದೆಷ್ಟು ಜನರನ್ನು ಕಂಡಿತ್ತೋ...
ಹಫ್ತಾ ವಸೂಲಿಗೆ ನಿಂತು ಬಿಟ್ಟಿತ್ತು ಅನ್ನಿಸುತ್ತದೆ.. ನಮ್ಮ ಕೈಯಲ್ಲಿ ಏನೆಂದರೆ ಏನೂ ಇರಲಿಲ್ಲ.. ಅದು ತಿನ್ನುವಂತದ್ದು...
ಇದೊಳ್ಳೆ ಗ್ರಾಚಾರಕ್ಕೆ ಬಂತಲ್ಲಾ ಸಿವಾ ಅಂದ್ಕೊಂಡೆವು...
ಮಂಗ ದಾರಿಯನ್ನು ಬಿಡುತ್ತಿಲ್ಲ...

ನಾವು ಬೈಕಿಂದ ಇಳಿದೆವು..
ಮೋಹನ ಫುಲ್ ಜೋಷಲ್ಲಿದ್ದ..
ಕೈತೋಳು ಮಡಿಸುತ್ತಲೂ ಇದ್ದ...
ಹಿಂದೆ ಕಿಟ್ಟು ಕ್ಯಾಮರಾ ರೆಡಿ ಇಟ್ಕೊಂಡಿದ್ದ...
ನಾನು ಕಾಮೆಂಟರಿ ಹೇಳಬೇಕಾ.. ಸುದ್ದಿ ಬರೆಯಲು ರೆಡಿ ಆಗಬೇಕಾ.. ಅನ್ನೋ ಗೊಂದಲದಲ್ಲಿದ್ದೆ..
ಮಂಗಕ್ಕೂ ಮೋಹನನಿಗೂ ಮಾರಾಮಾರಿ ಗ್ಯಾರಂಟಿ ಅಂದ್ಕೊಂಡಿದ್ದೆವು..
ಮೋಹನ ಬರುವ ಸ್ಟೈಲಿಗೆ ಮಂಗ ಗುರ್ ಎಂದಿತು..
ಒಮ್ಮೆ ಹಿಂದೇಟು ಹಾಕಿದ..
`ಸಾಯ್ಲಪಾ.. ಇದೊಳ್ಳೆ ಗ್ರಾಚಾರ ಬಂತಲೋ ಮಾರಾಯಾ..' ಅಂದ...
ಮಾರಾಮಾರಿಗೆ ಮುಗಿಯುವುದಿಲ್ಲ ಪ್ರಕರಣ ಅನ್ನಿಸಿತು..
ರಾಜಿ ಪಂಚಾಯ್ತಿಗೆ ಮಾಡುವುದೊಂದೆ ಬಾಕಿ...

ಇಳಿದು ರಸ್ತೆ ಪಕ್ಕದಲ್ಲಿ ಹೋಗಿ ನಿಂತೆವು.. ಸೇತುವೆ ತಡೆಗೋಡೆಯಬಳಿ ಆಪ್ತ ಸಮಾಲೋಚನೆ ಸಾಗಿತು..
ಮಂಗಕ್ಕೂ ಕುತೂಹಲ ಅನ್ನಿಸ್ತು.. ಸೀದಾ ಬಂದು ನಮ್ಮ ನಡುವೆ ಕುಳಿತಿತು..
ರಾಘವ ಸಿಕ್ಕಿದ್ದೇ ಛಾನ್ಸು ಅಂದುಕೊಂಡು ಪೋಟೋ ತೆಗೆದ...
ಮಂಗನ ಜೊತೆಗೂ ಫೋಟೋ ಸೆಷನ್ನು... ಮುಗಿಯಿತು...
ಮಂಗ ಪೋಟೋಕ್ಕೆ ಪೋಸು ಕೊಟ್ಟು... ಸುಮ್ಮನೆ ಹೋಯಿತು...
ಮಂಗನ ಭಾಷೆ ನಮೆಗ ಬರೋದಿಲ್ಲವಲ್ಲ...
`ಕಂಜೂಸಿ ನನ್ಮಕ್ಕಳು..' ಅಂತ ಬೈದಿರಬೇಕು... ಇನ್ನೇನೇನು.. `ಎ..' ಸರ್ಟಿಪೀಕೇಟ್ ಡೈಲಾಗುಗಳನ್ನು ಹೊಡೆಯಿತೋ.. ನಮಗೆ ಅರ್ಥವಾಗಲಿಲ್ಲ... ಮಂಗಕ್ಕೆ ಮಂಗನಾಟಕ್ಕೆ ಸಲಾಮು ಹೊಡೆದು ಮುಂದಕ್ಕೆ ಹೊರಟೆವು...

****

ಅಲ್ಲಿಂದ ಮುಂದೆ ಶುರುವಾದದ್ದು ಊಟಿಯ ಘಟ್ಟ..
ಅಂಕುಡೊಂಕಿನ ಹಾದಿ...
ಎಂಟೆದೆಯ ಭಂಟರೆಂಬ ಪೋಸಿನಲ್ಲಿ ನಾವು ಹತ್ತಲು ಗಾಡಿಯನ್ನು ಗುರ್ರೆನ್ನಿಸಿದೆವು...
ಎಷ್ಟೇ ಎಕ್ಸಲರೇಟರ್ ವತ್ತಿದರೂ ಗಾಡಿಯ ಕಿಲೋಮೀಟರ್ ಕಡ್ಡಿ 5-10ಕ್ಕಿಂತ ಜಾಸ್ತಿಯನ್ನು ತೋರಿಸುತ್ತಿರಲಿಲ್ಲ..
ಹೊಸ ಗಾಡಿಯಾದರೂ ಉಬ್ಬಸ ಬಿಡುತ್ತದೆಯೇ..
ಆಗಾಗ ಇಂಜಿನ್ನನ್ನು ತಣಿಸಲು 5 ನಿಮಿಷಗಳ ಬಿಡುವು...


ಅಲ್ಲೆಲ್ಲೋ...
ಬಾನಿನಿಂದ ಮುತ್ತಿನ ನೀರ ಹನಿ ಕೆಳಗಿಳಿದು ಬರುತ್ತಿತ್ತು...
ಹಣೆಯ ಮೇಲೆ ವಿಭೂತಿಯಂತೆ ನೀಳ...
ಬಿಳಿ ಮುತ್ತುಗಳು...
ದೂರದಲ್ಲಿ ಜುಳು ಜುಳು ನಿನಾದ...
ತಮಿಳು ಭಾಷೆಯಲ್ಲಿ ಜಲಪಾತದ ಹೆಸರು ಬರೆದಿತ್ತು...
ಈ ಜಲಪಾತಕ್ಕೆ ಎಂತಾ ಹೆಸರು ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ಆಂಗ್ಲರು `ಕಲ್ಲಟ್ಟಿ ಫಾಲ್ಸ್...' ಎಂದು ಬರೆದಿಟ್ಟಿದ್ದೂ ಕಂಡಿತು..
ತಮಿಳರಿಗೆ ಬೈದು...
ಇಂಗ್ಲೀಷಿನವರಿಗೆ ಥ್ಯಾಂಕ್ಸುಗಳನ್ನು ಹೇಳಿ ಮುಂದೆ ಹೆಜ್ಜೆ ಹಾಕಿದೆವು...

ಏರಿದಂತೆಲ್ಲ... ತೂಕ ಕಳೆದುಕೊಳ್ಳುತ್ತ ಹೋದೆವೇನೋ ಅನ್ನುವ ಅನುಭವ..
ನಾವು ಚಿಕ್ಕವರಾದಂತೆ... ಕಾಡುವ ಭಾವ..
ಮನಸ್ಸು ಉಲ್ಲಾಸಂಗಾ ಉತ್ಸಾಹಂಗಾ...

ಮೇಲೆರಿ ಒಮ್ಮೆ ಹಿಂತಿರುಗಿ ನೋಡಿದರೆ ನಾವು ಬಂದ ಜಾಗದ ಸುಳಿವೇ ಇಲ್ಲ..
ಮೋಡ ಮುತ್ತಿಕ್ಕಿ ಸಂಪೂರ್ಣ ಪ್ರದೇಶವನ್ನು ತನ್ನ ತೆಕ್ಕೆಯೊಳಗೆ ಸೆಳೆದು ಬಚ್ಚಿಟ್ಟುಕೊಂಡಿದೆ...
ಚಿಕ್ಕ ಚಿಕ್ಕ ಮನೆಗಳು ಕಾಣುತ್ತಿತ್ತು..
ಹೂಕೋಸು, ಎಲೆಕೋಸು, ಚಹಾ ಗಿಡಗಳ ಪ್ಲಾಂಟೇಷನ್ನುಗಳು ಕಾಣತೊಡಗಿದೆವು...
ವಾಸ್ತುಪ್ರಕಾರ ಊಟಿಗೆ ಬಂದಂತಾಯಿತು.. ಎಂದುಕೊಂಡೆವು...

ಬಂಡೆಗಲ್ಲಿನ ಗುಡ್ಡ, ಒಂದಕ್ಕಿಂತ ಒಂದು ದೊಡ್ಡದು.. ಅದರ ಎದುರು ನಾವು ಇರುವೆಯಂತವರು ಎನ್ನಿಸುವಂತಹ ದೈತ್ಯದೇಹಿ ಗುಡ್ಡಗಳು... ಒಂದೊಂದು ಗುಡ್ಡಕ್ಕೂ ಅಲ್ಲಿ ನೋಡಲೆ.. ಇಲ್ಲಿ ನೋಡಲೆ ವಾಹ್... ಸೂಪರ್ರ ಎನ್ನವು ಉದ್ಗಾರ..

ನಾವು ಚಳಿಗಾಲ ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಲ್ಲುತ್ತೇವೆ..
ಹವ್ಯಕರು ಅದನ್ನು ಬಿಸಿಲು ಕಾಸುವುದು ಎನ್ನುತ್ತಾರೆ..
ಊಟಿಯ ಜನರು ಬಿಸಿಲು ಕಾಯಿಸುತ್ತ ರಸ್ತೆ ಪಕ್ಕ ನಿಂತಿದ್ದರೆಂದರೆ ಊಹಿಸಿಕೊಳ್ಳಿ ಚಳಿಯ ಅಗಾಧತೆ ಎಷ್ಟಿರಬಹುದೆಂದು..

ಅಷ್ಟರಲ್ಲಿ ನಾವು ಬಿಟ್ಟು ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಸುತ್ಹಾಕಿಕೊಂಡು ಬಂದಿದ್ದು.. ಅದನ್ನು ಹಿಡಿದು ಹೊರಟೆವು...
ಅಲ್ಲೆಲ್ಲೋ.. ಎತ್ತೆತ್ತರದ ನೀಲಗಿರಿ ಮರಗಳು...
ಮೂಗಿನ ತುಂಬ ನೀಲಗಿರಿಯ ಕಂಪು..
ಜೊತೆ ಜೊತೆಗೆ ಮೆಂಥಾಲನ್ನು ಹಾಕಿದಂತಹ ತಂಪು ತಂಗಾಳಿ ನಮ್ಮ ಮೂಗಿನ ಮೂಲಕ ನಮ್ಮ ಹೃದಯವನ್ನು ನಾಟಿ ಹಾಯೆನಿಸಿತಯ,,,..

ರಸ್ತೆಗೆ ಫ್ಲೆವರ್ಸುಗಳನ್ನು ಹಾಕಿದ್ದರು..
ಟಾರು ರಸ್ತೆಯಲ್ಲ.. ಇಂಗ್ಲೆಂಡೋ.. ನೆದರ್ಲೆಂಡೋ...
ಯಾವುದೋ ಕೌಂಟಿಯನ್ನು ನೆನಪಿಗೆ ತಂದವು...
ಊಟಿಯ ಸರಹದ್ದಿಗೆ ಬಂದಿದ್ದರೂ ಊಟಿಯ ನಗರದೊಳಗೆ ನಾವುನ್ನೂ ಕಾಲಿರಿಸಿರಲಿಲ್ಲ...
ಅದಿನ್ನೂ ಬೋರ್ಡುಗಳ ಮೂಲಕ ಹೀಗೆ ಬನ್ನಿ.. ಹೀಗೆ ಬನ್ನಿ ಎಂದು ಹೇಳುತ್ತಲೇ ಇತ್ತು...

---

ತಮಿಳರಿಗೆ ಲೆಕ್ಖ ಬರೋದಿಲ್ವಾ ಸಾರ್...

ಈ ತಮಿಳರಿಗೆ ಲೆಕ್ಖ ಸರಿಯಾಗಿ ಬರೋದಿಲ್ಲವೇ ಅನ್ನುವ ಅನುಮಾನ ಊಟಿಗೆ ಹೋಗುವಾಗ ನಮಗೆ ಆಯಿತು..
ಕಿಲೋಮೀಟರು ಕಲ್ಲುಗಳಲ್ಲೆಲ್ಲ ತಪ್ಪು ತಪ್ಪು ಲೆಕ್ಖ..
ಒಂದು ಕಡೆ ಊಟಿ 10 ಕಿ.ಮಿ ಎಂದು ಬರೆಯುತ್ತಾರೆ.. ಮತ್ತೆ ನಾಲ್ಕೈದು ಕಿ.ಮಿ ಹಾದು ಬಂದ ನಂತರ ಊಟಿಯ ದೂರ 12 ಕಿಮಿ ಆಗಿರುತ್ತದೆ..
ದಾರಿ ಸಾಗಿದಂತೆಲ್ಲ ಖರ್ಚಾಗಬೇಕು ತಾನೆ.. ಆದರೆ ತಮಿಳಿಗರ ಲೆಕ್ಖ ಹೆಚ್ಚಾಗಿತ್ತು..
ನಾಲ್ಕೈದು ಕಡೆಗಳಲ್ಲಿ ಇಂತಹ ಅನುಭವ ಆದ ನಂತರ ನಮಗೆ ಲೆಕ್ಖ ಬರೋದಿಲ್ಲ ಎನ್ನುವುದು ಕನ್ ಫರ್ಮ್ ಆಯಿತು...

ಇತ್ತೀಚೆಗೆ ಜಯಲಲಿತಾ ಮು.ಮಂ ಆದ ನಂತರ ಕಾವೇರಿ ವಿಷಯದಲ್ಲಿ ಎಷ್ಟು ನೀರು ಕೊಟ್ಟರೂ ಕಡಿಮೆ ಎಂದಳಲ್ಲಾ.. ಆಗ ಪಕ್ಕಾ ಆಯ್ತು ನೋಡಿ.. ತಮಿಳಿಗರ ಲೆಕ್ಖ ಹಾಕುವ ರೀತಿ...
ಅವರಿಗೊಂಡು ವಣಕ್ಕಂ ಹೇಳುತ್ತ ನಾವು ಒಣಗಿದೆವು...


(ಮುಂದುವರಿಯುತ್ತದೆ...)