Sunday, September 26, 2010

ಕೆಲವು ಹನಿಗಳು

ಕರ್ಮವೀರ ವಿಶೇಷಾಂಕ ಕ್ಕೆ ನೀಡಿರುವ ಕೆಲವು ಚುಟುಕಗಳು..
ನಿಮ್ಮ ಓದಿಗಾಗಿ.
ಅನಿಸಿಕೆ ತಿಳಿಸಿ..

11) ಹೃದಯದ ಸ್ಥಿತಿ
ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದು !
       
12) ತಾಳಿ
ಹರೆಯಕ್ಕೆ,
ಯವ್ವನದೊಡಲಿಗೆ
ಸಿಕ್ಕ ಒಂದು
ಕಡಿವಾಣ.
ಗಂಡಿನ ಲಗಾಮು.

13) ಸೂರ್ಯ
ಭೂಮಿಯೊಡಲ
ಸಂಪತ್ತು ಹುಡುಕಲು
ದೇವರು ಬಿಡುವ
ಟಾರ್ಚು !

14)ಸ್ವಾತಂತ್ರ್ಯ ದಿನ
ದೇಶ
ಬ್ರಿಟೀಷರ ಕೈತಪ್ಪಿ
ರಾಜಕಾರಣಿಗಳ ಕೈ
ಅಪ್ಪಿದ ದಿನ !

15)ಚಂದ್ರ
ರಾತ್ರಿ ಭೂಮಿಗೆ
ನಿದ್ರೆಯ ಕೊಡದೇ,
ಕಾವಲು ನಿಂತು
ಲೈನ್ ಹೊಡೆಯುತ್ತಿರುವ ಭೂಪ !!

16)ಹನಿಗವಿ
ಯುವ ಕವಿಯಾದ ನಾನು
ಅವಳನ್ನು ಕಂಡಾಗಲೆಲ್ಲಾ
ಆಗುತ್ತೇನೆ ಠಟಿಜಥಿ ಕವಿ
ಹನಿ ಕವಿ ಹಾಗೂ `ಹನಿ' ಕವಿ !!

17).ಮದುವೆ
ಮದುವೆಯೆಂದರೆ
ಎರಡು ನಿಷ್ಪಾಪಿ
ಜೀವಿಗಳನ್ನು
ನರಕಕ್ಕೆ ಕಳಿಸುವ
ದಾರಿ!

18)ದೀಪಾವಳಿ
ಬಾಳನ್ನು ಬೆಳಗಿದೆ
ದೀಪಾವಳಿ!
ಸಂತಸ ಪಡುವವನ
ಕಿಸೆಯೊಳಗಣ ಹಣವಾಗಿದೆ
ದಿವಾಳಿ!!

19)ಕಾರಣ
ವಿಶ್ವಕ್ಕೆಲ್ಲ ಜಾಗತೀಕರಣ,
ಔದ್ಯೋಗೀಕರಣ, ಖಾಸಗೀಕರಣ,
ಸಾಮಾಜೀಕರಣ, ಆಧುನೀಕರಣ
ಹೀಗೆಲ್ಲ ಇದ್ದರೆ, ಭಾರತಕ್ಕೆ
ಒಂದೇ ಕಾರಣ, ರಾಜಕಾರಣ !!

20)ಗೋರ್ಮೆಟ್ ನೌಕರ
ಜನರ ಸೇವೆಯನ್ನು
ದನದ ಸೇವೆ
ಎಂದು ತಿಳಿದವ
ಸರಕಾರಿ ನೌಕರ!!

21)ಹುಚ್ಚು
ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು !
ಅದರಲ್ಲೂ ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು !!

22)ಚಂದ್ರನಲ್ಲಿ ಬಾವುಟ
ನಮ್ಮ ಜನ
ಚಂದ್ರನಿಗೂ ಕೊಟ್ಟರು ಕಾಟ!
ನೆಟ್ಟರು ಗೂಟ, ಜೊತೆಗೆ
ಅಮೆರಿಕೆಯ ಬಾವುಟ !!

23)ನಾಕ-ನರಕ
ನಾಕ ನಾಕ ಎನ್ನುತ್ತಿದ್ದ
ಜನರಿಗೆ ಅರ್ಥವಾಗಲಿಲ್ಲ,
ಜಗತ್ತಿನ ಅತಿದೊಡ್ಡ ನರಕವೆಂದರೆ
ಅದು ಅಮೆರಿಕ !!

24)(ವಾ)ನರ
ನರ, ನಾಗರಿಕತೆಯಲ್ಲಿ
ಸಿಲುಕಿ, ಆಧುನೀಕತೆಯಲ್ಲಿ
ಮುಂದುವರಿದು ಆಗುತ್ತಿದ್ದಾನೆ
ವಾನರ !!

25)ವಾಸ್ತವ
ದೂರದ ಗುಡ್ಡ
ಕಣ್ಣಿಗೆ ನುಣುಪು!
ಗೆಳತೀ ಹಾಗೇ ನಿನ್ನ
ಮುಖವೂ ಕೂಡ !!
ದೂರವಿದ್ದರಷ್ಟೇ
ಕಾಣುವುದು ನುಣುಪು !!!

26)ಮೊಡವೆ
ಮದುವೆಗೆ ಮುನ್ನ
ಹುಡುಗಿಯರ ಕಾಡುವ
ಅವರ ಸೊಕ್ಕನ್ನು ಮುರಿಯುವ
ಏಕೈಕ ಸಾಧನ ಮೊಡವೆ !!

27)ಜಮ್ಮು-ಕಾಶ್ಮೀರ
ಭಾರತದ ಅತ್ಯಂತ ಚೆಂದದ ಭಾಗ
ಜಮ್ಮು ಕಾಶ್ಮೀರ !
ಆದರೆ ಅಲ್ಲಿದೆ ಪ್ರತಿದಿನ ಗುಂಡಿನ
ನೆಗಡಿ, ಕೆಮ್ಮು, ದಮ್ಮು, ಜ್ವರ !!

Monday, September 13, 2010

ಏಕ ರೇಖಾ ಗಣಪ ಬಲು ಅಪರೂಪ

ವಿಘ್ನನಿವಾರಕ ಗಣೇಶನ ಚಿತ್ರವನ್ನು ಬಿಡಿಸುವವರು, ಮೂರ್ತಿ ಕೆತ್ತುವವರು ಬಹಳ ಮಂದಿ ಇದ್ದಾರೆ. ಆದರೆ ಕೇವಲ ಒಂದೇ ಸಾಲಿನ ಮೂಲಕ ಗಣೇಶನನ್ನು ಮೂಡಿಸುವ ಚಿತ್ರಕಾರರು ಸ್ವಲ್ಪ ವಿರಳವೆಂದೇ ಹೇಳಬಹುದು. ಈ ರೀತಿಯ ಅಪರೂಪದ ಚಿತ್ರ ಬಿಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಬಹು ಕಠಿಣ ಕಲೆಯನ್ನು ಒಲಿಸಿಕೊಂಡು ಚಿತ್ರವನ್ನು ರಚಿಸುವ ಕಲಾವಿದರೊಬ್ಬರಿದ್ದಾರೆ. ಅವರೇ ಸೈಯದ್ ಹುಸೈನಿ.
ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಏಕ ರೇಖೆಯಲ್ಲಿ ಗಣೇಶನನ್ನು ಚಿತ್ರಿಸುತ್ತಾರೆ. ಇವರ ಚಿತ್ರದಲ್ಲಿ ಗಣೇಶನ ಕಿರೀಟದಿಂದ ಇಲಿಯ ಬಾಲದವರೆಗೂ ಕೇವಲ ಒಂದೇ ರೇಖೆ ಇರುವುದು ವಿಶೇಷ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಏಕರೇಖಾ ಗಣೇಶನ ಚಿತ್ರ ಬಿಡಿಸಿದ್ದಾರೆ.
ಹುಸೈನಿ ಮೊದಲ ಸಾರಿ ಚಿತ್ರ ಬಿಡಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಆ ನಂತರ ಅವರು ಇದುವರೆಗೂ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಲಲಿತಕಲೆಯಲ್ಲಿ ಪದವಿ ಮುಗಿಸಿರುವ ಇವರಿಗೆ ಚಿತ್ರ ಬಿಡಿಸುವುದು ನೀರು ಕುಡಿದಷ್ಟು ಸುಲಭ.
ಇವರು ಸುಮಾರು 3000ಕ್ಕೂ ಹೆಚ್ಚು ಏಕರೇಖಾ ಚಿತ್ರವನ್ನು ಬಿಡಿಸಿದ್ದಾರೆ. ಕೇವಲ ಗಣೇಶನ ಚಿತ್ರವನ್ನಷ್ಟೇ ಅಲ್ಲ, ಕುದುರೆ ಮುಂತಾದ ಹಲವು ಚಿತ್ರಗಳನ್ನು, ಹಲವು ವ್ಯಕ್ತಿಗಳ ಭಾವ ಚಿತ್ರಗಳನ್ನೂ ರಚಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಗಣೇಶನ ಚಿತ್ರ ಬಿಡಿಸಲು ಪ್ರಾರಂಭಿಸಿದ ಇವರಿಗೆ ಇಂದು ಏಕರೇಖಾ ಗಣೇಶನ ಚಿತ್ರ ಬಿಡಿಸಲು ಕನಿಷ್ಟ ಅರ್ಧ ಗಂಟೆ ಸಾಕು. ಕೆಲವೊಮ್ಮೆ ಕೆಲವು ಚಿತ್ರ ಬಿಡಿಸಲು ದಿನಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದೂ ಇದೆ. ಹುಸೈನಿ ಪ್ರಾರಂಭದಲ್ಲಿ ಗಣೇಶನ ಆಯಿಲ್ ಪೇಂಟ್ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಆ ನಂತರ ಒಂದು ದಿನ ಗಣೇಶನ ಚಿತ್ರವನ್ನು ಏಕರೇಖೆಯಲ್ಲಿ ಬಿಡಿಸುವ ಆಲೋಚನೆ ಮೂಡಿತು. ಆ ನಂತರ ಕೆಲವು ದಿನಗಳು ಪ್ರಯತ್ನಿಸಿ ಚಿತ್ರ ಬಿಡಿಸಲು ಪ್ರಾರಂಭಿಸಿದರು.
ಚಿಕ್ಕಂದಿನಲ್ಲಿ ಹುಸೈನಿ ಅವರ ತಾಯಿ ಉಲ್ಲನ್ನಿನ ಸ್ವೆಟರ್ ಹಾಕುವ ವೇಳೆ ಇವರು ಆ ಉಲ್ಲನ್ನಿನ ಉಂಡೆಯ ಜೊತೆ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೆ ಅದರಿಂದ ವಿವಿಧ ಚಿತ್ರಗಳನ್ನು ನೆಲದ ಮೇಲೆ ಮೂಡಿಸುತ್ತಿದ್ದರು. ಇದೇ ಅವರ ಏಕ ರೇಖಾ ಚಿತ್ರಕ್ಕೆ ಸ್ಫೂರ್ತಿ ನೀಡಿತು. ನಂತರ ಅವರ ತಾಯಿ ಹುಸೈನಿ ಅವರ ಕಲೆಗೆ ನೀರೆರೆದು ಪೋಷಿಸಿದರು.
ಚಿಕ್ಕಂದಿನಿಂದಲೆ ಒಲಿದುಬಂದ ಕಲೆಯನ್ನು ಬೆಳೆಸಿಕೊಂಡ ಇವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದರೂ ಹೆಸರು ಗಳಿಸಿದ್ದು ಏಕರೇಖೆಯ ಗಣಪನ ಚಿತ್ರಗಳ ಮೂಲಕ. ಕಷ್ಟದ ಕಲೆಯಲ್ಲೂ ವಿಭಿನ್ನತೆ ಮೆರೆದ ಇವರು, ನಿಂತಿರುವ ಗಣೇಶ, ಕುಳಿತ ಏಕದಂತ, ಇಲಿಯ ಮೇಲೆ ಗಣೇಶನ ಸವಾರಿ, ನೃತ್ಯ ಮಾಡುತ್ತಿರುವ ಗಣಪ-ಹೀಗೆ ಹಲವು ಬಗೆಯ ಗಣಪನ ಚಿತ್ರಗಳನ್ನು ಬಿಡಿಸಿದ್ದಾರೆ.
ಚಿತ್ರ ಬಿಡಿಸುವುದೇ ಇವರ ವೃತ್ತಿ. ಅವರು ಬಿಡಿಸಿರುವ ಅದೆಷ್ಟೋ ಚಿತ್ರಗಳು ಉತ್ತಮ ಬೆಲೆಗೆ ಮಾರಾಟವಾಗಿವೆ.
ಕೇವಲ ಚಿತ್ರ ಬಿಡಿಸುವುದು ಮಾತ್ರ ಇವರ ಕೆಲಸವಲ್ಲ. ಪೇಪರ್ ಕಟಿಂಗ್ನಲ್ಲೂ ಇವರದ್ದು ಎತ್ತಿದ ಕೈ. ಬಗೆಬಗೆಯ ನಮೂನೆ ಗಳು, ಹಲವು ಆಕಾರಗಳು ಇವರ ಕೈಯಲ್ಲಿ ಅರಳಿವೆ. ಇವರ ಕೈಗೆ ಕುಂಚ ಸಿಕ್ಕರೆ ಹೇಗೆ ಗೆರೆಗಳು ಮಾತನಾಡುತ್ತವೆಯೋ ಹಾಗೆಯೆ ಖಾಲಿ ಪೇಪರ್ ಹಾಗೂ ಕತ್ತರಿ ಸಿಕ್ಕರೆ ಸಾಕು ಅವು ಜೀವ ತಳೆಯುತ್ತವೆ.
ಬೆಂಗಳೂರಿನ ಜಯನಗರದಲ್ಲಿ ವಾಸ ಮಾಡುತ್ತಿರುವ ಹುಸೈನಿ ಏಕರೇಖೆಯ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ಬಗ್ಗೆ ಹಲವು ಕಡೆ ತರಬೇತಿ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 34 ವರ್ಷದ ಹುಸೈನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು.
ಅಂಚೆಕುಂಚ ಪ್ರಶಸ್ತಿಯನ್ನು ನಾಲ್ಕು ಸಾರಿ ಮುಡಿಗೇರಿಸಿ ಕೊಂಡಿರುವ ಹುಸೈನಿ 2009ರಲ್ಲಿ ಜಪಾನ್ ಹಬ್ಬದಲ್ಲೂ ಭಾಗವಹಿಸಿ ಬಂದಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಧಾರವಾಡ ಮುಂತಾದ ಕಡೆಗೆಲ್ಲ ಇವರು ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿದ್ದಾರೆ. ಹುಸೈನಿ ಅವರನ್ನು 9845153277. ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Tuesday, August 24, 2010

ವಿದ್ಯುತ್ ಬಿಲ್ ಗೆ ವಿನಾಯಿತಿ ಇಲ್ಲವೆ?

ಕರ್ನಾಟಕ ವಿದ್ಯುತ್ ಮಂಡಳಿ ಪ್ರತಿ ಸಾರಿ ವಿದ್ಯುತ್ ಬಿಲ್ ನೀಡುವಾಗಲೂ ಅದರಲ್ಲಿ ಅಧಿಕ ಪ್ರಮಾಣದ ಮೇಲೆ ದಂಡ ಎಂಬ ವಾಖ್ಯವೊಂದು ಕಾಣಿಸುತ್ತದೆ. ಈ ಬಗ್ಗೆ ಇಲಾಖೆಯಯನ್ನು ಕೇಳಿದರೆ ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯುತ್ ಬಳಸಿದರೆ ಈ ದಂಡವನ್ನು ಹಾಕಲಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ವಿದ್ಯುತ್ ಬಳಸಿದಾಗ ಹೆಚ್ಚಿನ ದಂಡವನ್ನೂ ಹಾಕಿದ ಉದಾಹರಣೆಗಳಿವೆ.
ಆದರೆ ನನ್ನಲ್ಲಿ ಮೂಡುತ್ತಿರುವ ಪ್ರಶ್ನೆ ಇಷ್ಟೇ. ವಿದ್ಯುತ್ತನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸಿದಾಗ ದಂಡ ಹಾಕುವ ವಿದ್ಯುತ್ ಇಲಾಖೆ ಅತ್ಯಲ್ಪ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕುಟುಂಬಗಳಿಗೆ ವಿನಾಯಿತಿ ಯಾಕೆ ನೀಡುವುದಿಲ್ಲ?
ಕೆಲವು ಕುಟುಂಬಗಳು ತಿಗಳಿಗೆ 10 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ. ಅವುಗಳ ವಿದ್ಯುತ್ ಬಿಲ್ ಮೊತ್ತ 50 ರೂಪಾಯಿಗಳನ್ನೂ ಮುಟ್ಟುವುದಿಲ್ಲ. ಇಂತಹ ಕುಟುಂಬಗಳ ವಿದ್ಯುತ್ ಬಿಲ್ಗೆ ವಿನಾಯಿತಿಯನ್ನು ಇಲಾಖೆ ನೀಡದೇ ಇರುವುದು ವಿಚಿತ್ರ ಎನಿಸುತ್ತದೆ.
ಇಲಾಖೆ ಈ ಬಗ್ಗೆ ತಕ್ಷಣ ಚಿಂತಿಸಿ ವಿದ್ಯುತ್ ಬಿಲ್ ವಿನಾಯಿತಿಯನ್ನು ನೀಡುತ್ತದೆ ಎಂಬುದು ನಮ್ಮ ಆಶಯ.

Monday, August 23, 2010

`ಆಸರೆ' ಸಖ್ಯವಾಗುವಂತಾದರೆ...

ಅಲ್ಲಲ್ಲಿ ಮೂತ್ರದ ವಾಸನೆ, ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಭಿಕ್ಷುಕರು, ಸುಕ್ಕು ಗಟ್ಟಿದ ಮುಖ. ಹರಡಿಕೊಂಡ ತಲೆಕೂದಲು, ಆ ಕೂದಲುಗಳಿಗೆ ಎಣ್ಣೆಯಿಲ್ಲ, ದೇಹಕ್ಕೆ ಸ್ನಾನವಿಲ್ಲ. ಎತ್ತ ನೋಡಿದರತ್ತ ಕೊಳಕು, ಅಸಹ್ಯ ವಾತಾವರಣ, ಕೆಲವರು ಕಾಯಿಲೆಯಿಂದ ನರಳುತ್ತಿರುವವರು. ಇಂತಹವರನ್ನು ಸರಿಯಾಗಿ ನೋಡುವವರಿಲ್ಲ. ಸ್ನಾನ ಮಾಡಿಸುವವರಿಲ್ಲ. ದನದ ಕೊಟ್ಟಿಗೆಯಂತೆ ಕಾಣುವ ಕೊಠಡಿಗಳು. ಇದು  ಬೆಂಗಳೂರು ಮಹಾನಗರಿಯ ನಿರಾಶ್ರಿತರ ಕೇಂದ್ರದಲ್ಲಿ ಕಂಡುಬಂದ ಸ್ಥಿತಿ-ಗತಿ. ಇದೇ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರದ ಪರಿಸ್ಥಿತಿ.
ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಪುನರ್ವಸತಿ ನೀಡಬೇಕೆಂದು ಸ್ಥಾಪಿಸಲಾಗಿರುವ ಈ ಕೇಂದ್ರದಲ್ಲಿನ ಸರಣಿ ಸಾವು ಮತ್ತು ಅದರ ದುಸ್ಥಿತಿಯಿಂದಾಗಿ ಈಗ ಸುದ್ದಿ ಮಾಡಿದೆ.
ಈ ಭಿಕ್ಷುಕರ ಪುನರ್ವಸತಿ ಕೇಂದ್ರದ ಒಳಗೆ ಕಾಲಿಟ್ಟರೆ ಸಾಕು ಅಸಹ್ಯಕರ ವಾತಾವರಣ. ಆರೋಗ್ಯವಂತರು, ಅನಾರೋಗ್ಯಕ್ಕೊಳಗಾದವರು, ಬಡಕಲು ಶರೀರದವರು ಹೀಗೆ ವಿವಿಧ ರೀತಿಯ ನಿರಾಶ್ರಿತರು, ಭಿಕ್ಷುಕರ ಕಣ್ಣುಗಳಲ್ಲಿನ ಯಾಚನೆ, ಅಸಹಾಯಕ ನೋಟ ಎಂತಹವರಲ್ಲಾದರೂ ಮರುಕ ಹುಟ್ಟಿಸುತ್ತದೆ.
ಎಲ್ಲೋ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರನ್ನು ಹಿಡಿದು ತಂದು ಈ ನಿರಾಶ್ರಿತರ ಶಿಬಿರದಲ್ಲಿಡಲಾಗಿದೆ. ಈ ಭಿಕ್ಷುಕರ ದುಸ್ಥಿತಿ ಹೇಳತೀರದು. ಸರಿಯಾದ ಆಹಾರವಿಲ್ಲದೆ, ದಿನನಿತ್ಯ ಸ್ನಾನವಿಲ್ಲ, ರೋಗಬಂದರೆ ಸೂಕ್ತ ಚಿಕಿತ್ಸೆಯಿಲ್ಲ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಈ ಭಿಕ್ಷುಕರದ್ದು ನಾಯಿಪಾಡು ಎಂದರೂ ತಪ್ಪಾಗಲಾರದು.
ಈ ಜನರ ಪಾಲಿಗೆ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳು ಬಂತೆಂದರೆ ಹಬ್ಬ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮುಂತಾದ ಸಕರ್ಾರಿ ಕಾರ್ಯಕ್ರಮಗಳಂದು ಇವರಿಗೆ ಸಿಹಿ ತಿಂಡಿ ಹಾಗೂ ವಿಶೇಷ ಊಟಗಳು ಲಭ್ಯ. ಇಲ್ಲದಿದ್ದರೆ ಹಳಸಲನ್ನವೇ ಗತಿ.
ಈ ಪುನರ್ವಸತಿ ಕೇಂದ್ರದಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿರುವ ಭಿಕ್ಷುಕರು ಒಂದೆಡೆಯಾದರೆ, ಲೋಕದ ಪರಿವೆಯೆ ಇಲ್ಲದಂತೆಮಲಗಿಕೊಂಡಿರುವವರು ಮತ್ತೊಂದೆಡೆ. ಇನ್ನು ಈ ಕೇಂದ್ರದಲ್ಲಿರುವ ಹಲವು ಭಿಕ್ಷುಕರು ಬುದ್ದಿಮಾಂದ್ಯರು. ಇವರನ್ನು ಇಲ್ಲಿ ಯಾರೂ ಕೇಳುವವರೇ ಇಲ್ಲ.
 ಇವರನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಈ ಭಿಕ್ಷುಕರ ಕೈಯಲ್ಲಿ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗಾಯಾಳುಗಳಿಗೆ ಸೂಕ್ತ ಔಷಧ ನೀಡದ ಪರಿಣಾಮ ಗಾಯದಿಂದ ಕೀವು ಸೋರುತ್ತಿದ್ದ ದೃಶ್ಯವೂ ಕಾಣಬಹುದಾಗಿತ್ತು.
ಈ ವಸತಿಗೃಹವೂ ಅಷ್ಟೇ. ಅದರ ಒಳಗೆ ಕಾಲಿಟ್ಟರೆ ಸಾಕು ಗಬ್ಬು ವಾಸನೆ. ರೋಗಗಳಿಂದ ಹಾಸಿಗೆ ಹಿಡಿದ ಭಿಕ್ಷುಕರು ಅಲ್ಲೆ ಮಲ, ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಿಂದ ಒಳಗಡೆ ಗಬ್ಬು ವಾಸನೆ. ಇಂತಹ ವಾತಾವರಣದಲ್ಲೇ ಅವರು ಮಲಗಿ ನಿದ್ರಿಸಬೇಕಾಗುತ್ತದೆ. ಇವರು ಊಟ ಮಾಡುವ ಕೋಣೆಯ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಶುಚಿತ್ವ ಇಲ್ಲದ ಈ ಕೋಣೆಯಲ್ಲಿಯೇ ಊಟ ನೀಡಲಾಗುತ್ತಿದೆ.
ಭಿಕ್ಷುಕರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ಆದರೆ ಇವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಕೆಲಸ ನಡೆದಿಲ್ಲ. ಇವರನ್ನೂ ಆರೋಗ್ಯವಂತ ವ್ಯಕ್ತಿಗಳ ಜೊತೆ ಇರಿಸಲಾಗುತ್ತಿದೆ. ಇದರಿಂದ ಆರೋಗ್ಯವಂತರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಬುದ್ಧಿಮಾಂದ್ಯರ ಜೊತೆಗೆ ಆರೋಗ್ಯವಂತ ಭಿಕ್ಷುಕರನ್ನು ಇಡಲಾಗುತ್ತಿದೆ. ಇದು ಆರೋಗ್ಯವಂತ ಭಿಕ್ಷುಕರ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತಿದೆ.
 ಈ ನರಕದ ಸಹವಾಸ ಸಾಕು ಎಂದೇ ಹಲವು ಭಿಕ್ಷುಕರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಈ ಕೇಂದ್ರದಲ್ಲಿ ಈಗಾಗಲೆ 286 ಜನರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಒಟ್ಟಿನಲ್ಲಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ ಈ ಭಿಕ್ಷುಕರ ಸ್ಥಿತಿ. ಕಳೆದ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯರೂಪ್ಪ ಅವರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತಿದ್ದು, ಈ ನಿರಾಶ್ರಿತರ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಆದಷ್ಟು ಬೇಗ ಬಂದು, ನಿರಾಶ್ರಿತರಿಗೆ `ಆಸರೆ' ನೀಡುತ್ತಿರುವ ಕೇಂದ್ರವು ಅಲ್ಲಿರುವವರಿಗೆ ಸಖ್ಯವಾಗುವಂತಾದರೆ ಸ್ಥಾಪನೆಯ ಉದ್ದೇಶವೂ ಸಾರ್ಥಕವಾಗುತ್ತದೆ.

Saturday, August 21, 2010

ಮನ ಸೆಳೆಯುವ ಉತ್ತರ ಕನ್ನಡ ಜಲಪಾತಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಸುಂದರ ಜಲಪಾತಗಳಿವೆ. ಸುರಿಯುತ್ತಿರುವ ಮುಂಗಾರಿನಿಂದ ಇಲ್ಲಿನ ಜಲಪಾತಗಳಿಗೆ ಮತ್ತೆ ಜೀವಕಳೆ ಬಂದಿದೆ. ಮುಂಗಾರಿನಲ್ಲಿ ಹೊಸ ಜೀವ ಪಡೆಯುವ ಈ ಜಲಪಾತಗಳು ಎಲ್ಲರ ಆಕರ್ಷಣೆಯ ತಾಣಗಳು. ಮಳೆ ಹನಿಯಿಂದಾಗಿ ಮನಸೆಳೆಯುತ್ತಿರುವ ಈ ಜಲಪಾತಗಳ ಬಗ್ಗೆ ಕಿರು ಪರಿಚಯ ಹೀಗಿದೆ.

ಬಳುಕುವ ಉಂಚಳ್ಳಿ ಜಲಪಾತ
ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸವರ್ೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.

ಸೊಬಗಿನ ಸಾತೊಡ್ಡಿ ಜಲಪಾತ
ಯಲ್ಲಾಪುರ ತಾಲೂಕಿನಲ್ಲಿರುವ ಈ ಜಲಪಾತ ತಾಲೂಕಿನ ಮುಖ್ಯ ಪಟ್ಟಣದಿಂದ 30 ಕಿ.ಮಿ ದೂರದಲ್ಲಿದೆ. ಕಾಳಿ ನದಿಯ ಉಪ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಮಿನಿ ಜೋಗ ಎಂದೂ ಕರೆಯುತ್ತಾರೆ. ನಿಸರ್ಗದ ನಟ್ಟ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಅತ್ಯಂತ ಆಕರ್ಷಣೀಯ. ಬಳುಕುತ್ತಾ ಕಮರಿಗೆ ಇಳಿಯುವ ಈ ಜಲಪಾತದ ಸೊಬಗು ವರ್ಣನಾತೀತ. ಜಲಪಾತದ ದಾರಿಯಲ್ಲಿ ಕಾಣಸಿಗುವ ಕಾಳಿ ಹಿನ್ನೀರಿನ ದೃಶ್ಯ ಪ್ರವಾಸಿಗರಿಗೆ ಬೋನಸ್ ಖುಷಿ ನೀಡುತ್ತದೆ.

ಹೊಳೆಯುವ ಬೆಣ್ಣೆಹೊಳೆ ಜಲಪಾತ
ಅಘನಾಶಿನಿಯ ಉಪನದಿಯ ಸೃಷ್ಟಿ ಈ ಬೆಣ್ಣೆಹೊಳೆ ಜಲಪಾತ. ದಟ್ಟ ಕಾನನದ ನಡುವೆ ಇರುವ ಈ ಜಲಪಾತದ ಎತ್ತರ 200 ಅಡಿಗಿಂತ ಹೆಚ್ಚು. ಜಲಪಾತಕ್ಕೆ ಸಾಗುವ ಮಾರ್ಗ ಕೊಂಚ ಕಷ್ಟಕರವಾದುದು. ಆದರೆ ಕಣ್ಮನ ಸೆಳೆಯುವ ದೃಶ್ಯವೈಭವ ಜಲಪಾತದಿಂದ ಸಾಧ್ಯ. ಶಿರಸಿಯಿಂದ ಕುಮಟಾ ಕಡೆಗೆ ಸಾಗುವ ದಾರಿಯ ನಡುವೆ ಈ ಜಲಪಾತದ ಮಾರ್ಗ ಸಿಗುತ್ತದೆ. ಅತ್ಯುತ್ತಮ ಟ್ರೆಕ್ಕಿಂಗ್ ಸ್ಪಾಟ್. ಮಳೆಗಾಲದಲ್ಲಿ ಜಲಪಾತದ ಬಳಿ ಸಾಗುವುದು ಅಪಾಯಕಾರಿ. ಆದರೆ ಉಳಿದ ಕಾಲಗಳಲ್ಲಿ ಜಲಪಾತದ ದರ್ಶನಕ್ಕೆ ಹೇಳಿಮಾಡಿಸಿದ ಹಾಗಿದೆ. ಕಾಡು, ಕಾಡುಪ್ರಾಣಿಗಳ ಪ್ರದೇಶ ಇದು.

ಅಭಯಾರಣ್ಯದ ಒಡಲಿನ ಕೂಸು ಅಣಶಿ ಜಲಪಾತ
ಕಾರವಾರ ದಾಂಡೆಲಿ ಮಾರ್ಗ ಮಧ್ಯ ಇರುವ ಅಣಶಿ ಜಲಪಾತ ನೋಡುಗರನ್ನು ತಟ್ಟನೆ ಸೆಳೆಯುವಂತಹುದು. ಅಣಶಿ ರಾಷ್ಟ್ರೀಯ ಉದ್ಯಾನದ ನಡುವೆ ಇರುವ ಈ ಜಲಪಾತ ಕಾರವಾರದಿಂದ 32 ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟದ ಹಾಗೂ ಕಾನನದ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಮೈದುಂಬುತ್ತದೆ. ಈ ಜಲಪಾತ ಹಲವು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಇದರ ಎಲ್ಲರ 150 ಅಡಿಗಳು. ಈ ಜಲಪಾತ ಛಾಯಾಚಿತ್ರಕಾರರಿಗೆ ಹಬ್ಬ ಉಂಟುಮಾಡುತ್ತದೆ. ಕದ್ರಾ ಅಣೆಕಟ್ಟೆಯಿಂದ 8 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಇದರ ಬುಡಕ್ಕೆ ತಲುಪಲು ಕಷ್ಟಪಡಬೇಕಿಲ್ಲ.


ಲವಲವಿಕೆಯ ಲಾಲಗುಳಿ ಜಲಪಾತ
ಮಳೆಗಾಲದಲ್ಲಿ ಮೈದುಂಬುವ ಜಲಪಾತಗಳ ಜಾತಿಗೆ ಇದು ಸೇರುತ್ತದೆ. ಕಾಳಿ ನದಿಗೆ ಬೊಮ್ಮನಹಳ್ಳಿಯಲ್ಲಿ ಅಣೆಕಟ್ಟು ನಿಮರ್ಾಣವಾಗುವ ಮೊದಲು ವರ್ಷದ ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಿದ್ದ ಈ ಜಲಪಾತ ಈಗ ಮಳೆಗಾಲದಲ್ಲಿ ಮಾತ್ರ ಮೈದುಂಬುತ್ತದೆ. ಯಲ್ಲಾಪುರದಿಂದ 13 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ಧುಮ್ಮಿಕ್ಕುವುದನ್ನು ನೋಡುವುದು ಬಲು ಅಂದ.



ಮನ ಸೆಳೆಯುವ ಮಾಗೋಡು ಜಲಪಾತ
ಯಲ್ಲಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಮಾಗೋಡು ಜಲಪಾತ ಬೇಡ್ತಿ (ಗಂಗಾವಳಿ) ನದಿಯ ಸೃಷ್ಟಿ. 200 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ವರ್ಷದ ಎಲ್ಲ ಕಾಲದಲ್ಲಿಯೂ ವೀಕ್ಷಿಸಬಹುದು. ಮಳೆಗಾಲದಲ್ಲಿ ರುದ್ರರಮಣೀಯವಾಗಿ ಕಾಣುವ ಈ ಜಲಪಾತ ಎರಡು ಹಂತಗಳಲ್ಲಿ ದುಮ್ಮಿಕ್ಕುತ್ತದೆ. ಈ ಜಲಪಾತದ ಬಳಿ ವೀಕ್ಷಣಾ ಗೋಪುರ ನಿಮರ್ಿಸಿರುವ ಪ್ರವಾಸೋದ್ಯಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜಲಪಾತದವರೆಗೂ ಉತ್ತಮ ರಸ್ತೆ ಇರುವುದರಿಂದ ಯಾವುದೆ ಕಾಲದಲ್ಲಿಯೂ ಪ್ರವಾಸ ಮಾಡಬಹುದಾಗಿದೆ.

ಭಯ ಹುಟ್ಟಿಸುವ ಬುರುಡೆ ಜಲಪಾತ
ಮಲೆನಾಡ ಮಡಿಲಿನಲ್ಲಿರುವ ಈ ಸುಂದರ ಜಲಪಾತ ಅಘನಾಶಿನಿ ನದಿಯ ಉಪನದಿಯ ಸೃಷ್ಟಿ. ನಾಲ್ಕು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಹೋಗಲು ಸಾಧ್ಯವೇ ಇಲ್ಲ. ಸಿದ್ದಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ದರ್ಶನ ಮಾಡಬೇಕೆಂದರೆ ಕನಿಷ್ಟ 6 ಕಿಲೋಮೀಟರ್ ನಡಿಗೆಯನ್ನು ಕೈಗೊಳ್ಳಲೇಬೇಕು. ಇಳಿಮನೆ ಜಲಪಾತ ಎಂದೂ ಕರೆಯಲಾಗುವ ಈ ಜಲಪಾತದ ಎರಡು ಹಂತಗಳನ್ನು ಸುಲಭವಾಗಿ ನೋಡಬಹುದು.

ಸ್ನಿಗ್ಧ ಸುಂದರ ವಿಭೂತಿ ಜಲಪಾತ
ಶಿರಸಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ವಿಭೂತಿ ಜಲಪಾತ ವಿಭೂತಿ ಹೊಳೆಯ ಸೃಷ್ಟಿ. ವಿಶ್ವ ಪ್ರಸಿದ್ಧ ಯಾಣದ ಹತ್ತಿರದಲ್ಲಿರುವ ಈ ಜಲಪಾತದ ಎತ್ತರ 100 ಅಡಿಗಿಂತ ಹೆಚ್ಚು. ಎರಡು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತದೆ. ವರ್ಷದ ಎಲ್ಲ ಸಮಯದಲ್ಲಿಯೂ ಜಲಪಾತವನ್ನು ನೋಡಬಹುದು. ನಿಸರ್ಗದ ನಡುವೆ ಇರುವ ಈ ಜಲಪಾತ ಒಳ್ಳೆಯ ಪಿಕ್ನಿಕ್ ಸ್ಪಾಟ್.


ಶಿವಗಂಗಾ ಜಲಪಾತ
74 ಅಡಿ ಎತ್ತರದ ಶಿವಗಂಗಾ ಜಲಪಾತ ಶಿರಸಿಯಿಂದ 22 ಕಿಲೋಮೀಟರ್ ದೂರದಲ್ಲಿದೆ. ಸೋಂದಾ ಹೊಳೆಯಿಂದ ಸೃಷ್ಟಿಯಾಗಿರುವ ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣುವ ಈ ಜಲಪಾತ ಅತ್ಯಂತ ಅಪಾಯಕಾರಿಯಾದುದು. ಜಲಪಾತಕ್ಕೆ ಸಾಗುವ ಮಾರ್ಗದಲ್ಲಿ ಸೋಂದಾ, ವಾದಿರಾಜ ಮಠ ಮುಂತಾದ ಕ್ಷೇತ್ರಗಳಿವೆ. ಅವುಗಳನ್ನು ನೋಡಿ ಬರಲು ಸಾಧ್ಯ.


ಕಾನನದ ಮಡಿಲ ವಾಟೆಹಳ್ಳ ಜಲಪಾತ
ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯದಲ್ಲಿರುವ ಜಲಪಾತ ವಾಟೆಹಳ್ಳ. ಹಲವು ಹಂತಗಳಲ್ಲಿ ಧುಮ್ಮಿಕ್ಕುಪ ಈ ಜಲಪಾತದ ಸೊಬಗು ಬಹು ಸುಂದರ. ಸಿದ್ದಾಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ವೀಕ್ಷಣೆ ಮಾಡಲು ಸಾಧ್ಯವೇ ಇಲ್ಲ. ನಿಲ್ಕುಂದ ಬಳಿ ಇರುವ ಈ ಜಲಪಾತವನ್ನು ವೀಕ್ಷಿಸಲು ಕನಿಷ್ಟ 2 ಕಿಲೋಮೀಟರ್ ಕಾಲ್ನಡಿಗೆ ಸವೆಸಬೇಕು. ಕಡಿದಾದ ಬೆಟ್ಟವನ್ನು ಜಾಗ್ರತೆಯಿಂದ ಇಳಿದರೆ ಇದರ ದರ್ಶನ ಸಾಧ್ಯ. ಅದೃಷ್ಟವಿದ್ದರೆ ವನ್ಯ ಮೃಗಗಳೂ ಕಾಣಬಹುದು. ಹಲವು ಹಂತಗಳು ಜಲಪಾತಕ್ಕೆ ಇದ್ದರೂ ಒಂದೆ ದಿನದಲ್ಲಿ ಅವುಗಳಷ್ಟನ್ನೂ ನೋಡುವುದು ಕಷ್ಟ. ಚಿಕ್ಕ ಹಳ್ಳ ಸೃಷ್ಟಿಸಿದ ಈ ಜಲಪಾತ ನೋಡುಗರನ್ನು ಸೇಳೆಯುತ್ತದೆ. ಒಳ್ಳೆಯ ಟ್ರೆಕ್ಕಿಂಗ್ ತಾಣ

ಇಷ್ಟೇ ಅಲ್ಲದೆ ಉತ್ತರ ಕನ್ನಡದಲ್ಲಿ ಇನ್ನೂ ಹಲವಾರು ಜಲಪಾತಗಳಿವೆ. ಪಶ್ಚಿಮ ಘಟ್ಟಗಳ ಶ್ರೇಣಿ ಈ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಈ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ನೂರಾರು ಜಲಪಾತಗಳಿವೆ. ಮಳೆಗಾಲ ಬಂತೆಂದರೆ ಈ ಜಲಪಾತಗಳಿಗೆ ಮತ್ತೆ ಜೀವಕಳೆ ಬರುತ್ತವೆ. ತುಂಬ್ರಿಕೊಡ್ಲು, ಸೂಸಬ್ಬಿಕೊಡ್ಲು, ವಜ್ರದುಂಡಿ, ಮುರೇಗಾರ, ಕರೂರು ಈ ಮುಂತಾದ ಹಲವಾರು ಜಲಪಾತಗಳು ಉತ್ತರ ಕನ್ನಡದ ಕಾನನದ ನಡುವೆ ಇವೆ. ಮಳೆಗಾಲದಲ್ಲಿ ಇವುಗಳು ನಯನಮನೋಹರ.

Thursday, August 19, 2010

ಇವರಿಗೆ ವಯಸ್ಸೇ ಆಗೋಲ್ವಾ?



ಭಾರತದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಸನತ್ ಜಯಸೂರ್ಯ, ವೆಸ್ಟ್ ಇಂದಿಸ ನ ಶಿವನಾರಾಯಣ್ ಚಂದ್ರಪಾಲ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಈ ಮುಂತಾದ ಕ್ರಿಕೆಟ್ ಆಟಗಾರರ ಉತ್ಸಾಹವನ್ನು, ಆಟದ ವೈಖರಿಯನ್ನು ಗಮನಿಸಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.
ಈ ಎಲ್ಲ ಆಟಗಾರರಿಗೆ 35ರ ಆಜುಬಾಜು ವಯಸ್ಸು. ಆದರೆ ಇವರ ಕಲಾತ್ಮಕ ಆಟಗಳು ಮಾತ್ರ ಯುವ ಹೊಡೆಬಡಿ ಆಟಗಾರರನ್ನು ಮೀರಿಸುವಂತಿದೆ. ಯುವ ಆಟಗಾರರು ಕ್ರೀಸಿನಲ್ಲಿ ನೆಲೆನಿಂತು ಬಾಲನ್ನು ಎದುರಿಸಲು ಪರದಾಡುವ ಸಮಯದಲ್ಲಿಯೇ ಇವರು ಆಟದ ಮರ್ಮ ಅರಿತು ಸಮಯಕ್ಕೆ ತಕ್ಕಂತೆ ಆಟವಾಡುತ್ತಾರೆ.
ಈ ಆಟಗಾರರದ್ದು ಎಲ್ಲ ರೀತಿಯ ಕ್ರೀಡೆಗೆ ಹೇಳಿಮಾಡಿಸಿದಂತಹ ಆಟ. ಅದು ಟೆಸ್ಟ್ ಇರಲಿ. ಒಂದು ದಿನದ ಪಂದ್ಯಗಳೇ ಇರಲಿ ಅಥವಾ ಇಂದಿನ ಜಮಾನಾದ ಟಿ20 ಪಂದ್ಯಗಳೇ ಇರಲಿ ಅಗತ್ಯಕ್ಕೆ ತಕ್ಕ ಆಟ ಇವರಿಂದ ಸಾಧ್ಯ. ಯುವ ಆಟಗಾರರು ಪ್ರತಿ ಪಂದ್ಯಗಳಲ್ಲಿ ಒಂದೇ ರೀತಿಯ ಆಟವನ್ನು ಪ್ರದರ್ಶಿಸಲು ವಿಫಲರಾಗುತ್ತಾರೆ. ಆದರೆ ಇವರು ಹಾಗಲ್ಲ. ಯಾವಾಗಲೂ ಉತ್ತಮ ಕ್ರಿಕೆಟ್ ಇವರಿಂದ ಸಾಧ್ಯ. ಈ ಆಟಗಾರರು ಆಡುವ ಕ್ರಿಕೆಟ್ ಸಹ ಅಷ್ಟೇ ಕಾವ್ಯಾತ್ಮಕ. ಪುಟ್ ವರ್ಕ್ ಗಳು, ಕವರ್ ಡ್ರೈವಳು, ಬ್ಯಾಕಪುಟ್ ಆಟಗಳು, ಹುಕ್ ಶಾಟ್ಗಳು  ಪ್ರತಿಯೊಂದೂ ಬಹಳ ಸುಂದರ.
ಈ ಆಟಗಾರರ ಆಟದ ವೈಖರಿಯೆ ಬದಲಾದುದು. ಇವರು ಮೇಲ್ನೋಟಕ್ಕೆ ನಿಧಾನವಾದ ಆಟವನ್ನು ಆಡಿದರೂ ಉತ್ತಮ ಸರಾಸರಿಯನ್ನೇ ಹೊಂಡಿರುತ್ತಾರೆ. ಇವರ ಇನ್ನೊಂದು ಮುಖ್ಯ ಲಕ್ಷಣಗಳೆಂದರೆ ಇವರು ಸಿಕ್ಸರ್ ಬಾರಿಸಲು ಹೆಚ್ಚು ಮುಂದಾಗುವುದಿಲ್ಲ. ಆದರೆ ಬೌಂಡರಿಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುತ್ತಾರೆ. ಬೌಲರ್ಗಳ ಸಹನೆಯನ್ನು ಪರೀಕ್ಷಿಸಿ ಬೆವರಿಳಿಸುತ್ತಾರೆ.
ಇವರು ಪಂದ್ಯಗಳಲ್ಲಿ ಪಕ್ಕಾ ಆಪತ್ಭಾಂದವರು. ಸೋಲಿನ ಸುಳಿಯಲ್ಲಿ ತಂಡವಿದ್ದರೆ ಅದನ್ನು ಬದಲಾಯಿಸುವ ಛಾತಿಯನ್ನು ಹೊಂದಿರುವವರು. ಇವರ ಕಲಾತ್ಮಕ ಆಟಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಗಾಯಗಳಾದರೂ ಇವರು ಅದಕ್ಕೆ ಜಗ್ಗವುದಿಲ್ಲ. ಗಾಯಕ್ಕಿಂತ ತಂಡ, ದೇಶ, ಗೆಲುವು ಮುಖ್ಯ ಎಂಬುದು ಇವರ ಗುಣ.
ಹಿರಿಯರ ಆಟಕ್ಕೆ ಅವರೆ ಸಾಕ್ಷಿ. ಯುವಕರ ಪಡೆ ಸಾಲು ಸಾಲು ಸೋಲನ್ನು ಅನುಭವಿಸುತ್ತಿರುವುದರಿಂದಲೆ ಪಾಕ್ ತಂಡ ನಿವೃತ್ತಿ ಹೊಂದಿದ್ದ ಮೊಹಮ್ಮದ್ ಯುಸುಫ್ರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ದು. ಅನುಭವ, ಉತ್ತಮ ಆಟವೇ ಇವರ ಆಸ್ತಿ. ಯುವ ಆಟಗಾರರು ನೂರು ರನ್ನುಗಳನ್ನು ಹೊಡೆಯಲು ಇವರು ಕಷ್ಟಪಟ್ಟರೆ, ಹಿರಿಯ ಆಟಗಾರರಿಗೆ ಅದು ಸಲೀಸು. ಶತಕ, ದ್ವಿಶತಕ ಇವರಿಗೆ ಸುಲಭ. ಯುವಕರು ಫಿಟ್ನೆಸ್ ಇಲ್ಲದೆ ಬಳಲಿ, ಸೋತು, ರನ್ನರ್ ಸಹಾಯದಿಂದ ಹಾಗೂ ಹೀಗೂ ರನ್ ಹೊಡೆದರೆ, ಇವರು ಯುವಕರನ್ನೇ ನಾಚಿಸುವಂತೆ ಆಡುತ್ತಾರೆ. ಎರಡು ಮೂರು ರನ್ನುಗಳನ್ನು ಸುಲಭವಾಗಿ ತೆಗೆಯುತ್ತಾರೆ.
ವೆಸ್ಟ್ ಇಂಡೀಸ್ನ ತಂಡವನ್ನೇ ತೆಗೆದುಕೊಳ್ಳಿ, ಆ ತಂಡದಲ್ಲಿ ಎಷ್ಟೇ ಹೊಸ, ಹೊಡೆ ಬಡಿ ಆಟಗಾರರು ಬಂದರೂ ತಂಡದ ಪಾಲಿಗೆ ಆಪದ್ಭಾಂದವನಂತೆ ಇರುವುದು ಚಂದ್ರಪಾಲ್ ಮಾತ್ರ. ಅದೇ ರೀತಿ ದಕ್ಷಿಣ ಆಫ್ರಿಕಾ ತಂಡದ ಜೀವಾಳ ಜಾಕ್ ಕಾಲಿಸ್ ಎಂದರೂ ತಪ್ಪಿಲ್ಲ. ಅದೆ ಆಸ್ಟ್ರೇಲಿಯಾ ತಂಡವನ್ನು ಗಮನಿಸಿ ಅಲ್ಲಿ ಸ್ಟೀವ್ ವಾ, ಹೇಡನ್ ಅಂತಹ ಆಟಗಾರರು ಇದ್ದಾಗ ಸಾಲು ಸಾಲು ಗೆಲುವನ್ನು ಅದು ಕಂಡಿದ್ದು ಇತಿಹಾಸ. ಆದರೆ ಅಂತಹ ಆಟಗಾರರು ಇಗ ಇಲ್ಲವೇ ಇಲ್ಲ. ಪರಿಣಾಮ ಅದಕ್ಕೆ ಸೋಲಿನ ರುಚಿ ಗೊತ್ತಾಗತೊಡಗಿದೆ.
ಶ್ರೀಲಂಕಾದ ಅರವಿಂದ್ ಡಿಸಿಲ್ವಾ ಅಂತೂ ತನ್ನ 40ನೇ ವರ್ಷದ ವರೆಗೆ ಕ್ರಿಕೆಟ್ ಆಡಿದ್ದ. ಈಗ ಸನತ್ ಜಯಸೂರ್ಯ ಸಹ ಹಾಗೆಯೇ ಆಡುತ್ತಿದ್ದಾನೆ. ಅಷ್ಟು ವಯಸ್ಸಾಗಿದ್ದರೂ ಅವರ ಆಟಕ್ಕೆ ಯಾವುದೆ ಕುಂದು ಉಂಟಾಗಿಲ್ಲ. ಮೊದಲಿಗಿಂತ ಉತ್ತಮವಾಗಿಯೆ ಆಡುತ್ತಿದ್ದಾರೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎನ್ನುವುದು ಇದಕ್ಕೇ ಇರಬೇಕು.
ತಂಡದ ಪಾಲಿನ ಆಪದ್ಭಾಂಧವ ಆಟಗಾರರಾದ ಇವರಿಗೆ ಹ್ಯಾಟ್ಸಾಪ್...

Friday, August 13, 2010

ರಂಗಾನುಭವ ~`ಅಣೇಕಟ್ಟು' ~

ಕಾಲೇಜು ದಿನಮಾನದಲ್ಲಿ ಯುವಜನ ಮೇಳಕ್ಕಾಗಿ ನಾವು ಬರೆದು, ನಟಿಸಿ, ಪ್ರಶಸ್ತಿಗಳಿಸಿದ `ಅಣೆಕಟ್ಟು' ಎಂಬ ನಾಟಕದ ಕುರಿತು ನಮ್ಮ ಅನುಭವಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಸೀಮಿತ ಸಮಯದಲ್ಲಿ ಪ್ರಸ್ತುತ ಜಗತ್ತಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ವಸ್ತುವನ್ನು ಒಳಗೊಂಡಿದ್ದ ನಮ್ಮ ನಾಟಕ ಬಹಳ ಪ್ರಸಿದ್ಧಿ ಪಡೆಯಿತು. `ಅಣೆಕಟ್ಟು' ನಾಟಕದ ಹಿಂದಿನ ನಮ್ಮ ಕಾರ್ಯ, ಕೆಲಸ, ಅನುಭವ ಇಂತಿದೆ.
---------------------------------------
ಕೇವಲ ಅರ್ಧಗಂಟೆಯ ಅವಧಿಯಲ್ಲಿ ಪ್ರಸ್ತುತ ದಿನಮಾನದ ಸಮಸ್ಯೆಯನ್ನು ನಾಟಕದ ವಿಷಯವನ್ನಾಗಿಸಿಕೊಂಡು ನಾಟಕ ಮಾಡಬೇಕು ಎಂಬ ನಿಯಮದ ಹಿನ್ನೆಲೆಯಲ್ಲಿ ನಾವು `ಅಣೆಕಟ್ಟು' ನಾಟಕ ನಡೆಸಲು ಮುಂದಾದೆವು. ಕರ್ನಾಟಕ ವಿಶ್ವವಿದ್ಯಾಲಯದ ಯುವಜನ ಮೇಳದಲ್ಲಿ ಅಂತರಕಾಲೇಜು ಮಟ್ಟದಲ್ಲಿ ನಾಟಕ ಸ್ಪರ್ಧೆಯಲ್ಲಿ ನಮ್ಮ ಈ ನಾಟಕವನ್ನು ಅಭಿನಯಿಸಿ ತೋರಿಸಬೇಕಿತ್ತು. ಶಿರಸಿ ಕಾಲೇಜಿನ ಸಹಯೋಗದೊಂದಿಗೆ ನಮ್ಮ ಗೆಳೆಯರು ನಾಟಕವನ್ನು ನಡೆಸಲು ಬಲು ಉತ್ಸಾಹದಿಂದಲೇ ಮುಂದಾದರು.
ನಾನು ಬರೆದಿದ್ದ `ಅಣೆಕಟ್ಟು' ಎಂಬ ಸಣ್ಣ ಕಥೆಯನ್ನು ನಾಟಕದ ಕಥಾವಸ್ತುವನ್ನಾಗಿ ನಾವು ಆಯ್ಕೆ ಮಾಡಿಕೊಂಡಿದ್ದೆವು. ಅಣೆಕಟ್ಟು ಕಥೆಯನ್ನೇ ಕೊಂಚ ಬದಲಾಯಿಸಿ ನಾಟಕರೂಪಕ್ಕೆ ಇಳಿಸಿದ್ದೆವು. ಗೆಳೆಯ ರಾಘವ ಹೆಗಡೆ ನಾಟಕದ ನಿದರ್ೇಶನದ ಜವಾಬ್ದಾರಿಯನ್ನು ಹೊತ್ತಿದ್ದ. ಗಣೇಶ್ ಹೆಗಡೆ ಪಾಲಿಕೆ ಕಥಾನಾಯಕ ಬಸವರಾಜುವಿನ ಪಾತ್ರ ಸಿಕ್ಕಿತ್ತು.
ಜೊತೆಗೆ ನಾನು ಗೂಂಡಾ ರಾಜಕಾರಣಿ ರಾಮಪ್ಪನ ಪಾತ್ರ ಮಾಡಿದ್ದೆ. ರಾಘವ ಹೆಗಡೆ ರಾಜಕಾರಣಿಯಾಗಿ ನಟಿಸಿದ್ದರೆ, ವಿನಾಯಕ ಹಾಗೂ ಗಣೇಶ್ ವಾನಳ್ಳಿ ಊರಿನ ಗ್ರಾಮಸ್ಥರ ಪಾತ್ರ ಮಾಡಿದ್ದರು. ನಾಗರಾಜ್ ಹೆಗಡೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದ. ಮೃತ್ಯುಂಜಯ ಕೆ. ಎಂ. ಪೊಲೀಸ್ ಪೇದೆಯಾಗಿ ಜೊತೆಗೆ ಸೌಮ್ಯಾ, ವಂದನಾ ಜೋಶಿ ಊರಿನ ಮಹಿಳೆಯರ ಪಾತ್ರದಲ್ಲಿ ಅಭಿನಯಿಸಿದ್ದರು.

ಕಥಾವಸ್ತು
ನಿಸರ್ಗದ ನಡುವಿನ, ನದಿ ದಡದ ಊರಿನಲ್ಲಿ ಅಣೆಕಟ್ಟು ನಿಮರ್ಾಣವಾಗುವ ಸುದ್ದಿ ಊರಿನ ಅನಕ್ಷರಸ್ಥ ಜನರಲ್ಲಿ ವಿವಿಧ ಅಭಿಪ್ರಾಯ ಬದಲಾವಣೆಗೆ ಕಾರಣವಾಗುತ್ತದೆ. ಕೆಲವರು ಅಣೆಕಟ್ಟೆಯ ಪರ ಮಾತನಾಡಿದರೆ ಮತ್ತೆ ಕೆಲವರು ಅಣೆಕಟ್ಟೆಯ ವಿರುದ್ಧ ದನಿ ಎತ್ತುತ್ತಾರೆ. ಈ ಊರಿನ ಅಕ್ಷರಸ್ಥ ಯುವಕ ಬಸವರಾಜು ಅಣೆಕಟ್ಟೆ ನಿಮರ್ಾಣವನ್ನು ವಿರೋಧಿಸುತ್ತಾನೆ. ಅಣೆಕಟ್ಟೆ ನಿರಮಾಣದಿಂದ ಉಂಟಾಗುವ ತೊಂದರೆಗಳನ್ನು ಊರಿನ ಜನರಿಗೆ ವಿವರಿಸಿ ಹೇಳಿ ಅಣೆಕಟ್ಟೆಯ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಾನೆ.
ಅಣೆಕಟ್ಟೆಯ ವಿರುದ್ಧ ಬಸವರಾಜು ಮುಂದಾಳತ್ವದಲ್ಲಿ ಹೋರಾಟ ಜೋರಾದಾಗ ಆ ಕ್ಷೇತ್ರದ ಶಾಸಕನ ರಂಗಪ್ರವೇಶವಾಗುತ್ತದೆ. ಹೋರಾಟಕ್ಕೆ ಕಾರಣಗಳನ್ನು ತಿಳಿದ ರಾಜಕಾರಣಿ ಹೋರಾಟಗಾರರ ಪರವಾಗಿ ನಿಲ್ಲುತ್ತಾನೆ. ವಿದ್ಯಾವಂತ ಅನಾಥ ಯುವಕ ಬಸವರಾಜು ರಾಜಕಾರಣಿಯ ಮನಗೆಲ್ಲುತ್ತಾನೆ. ಬಸವರಾಜುವಿನ ಹೋರಾಟಕ್ಕೆ, ಜನಪರ ನಿಲುವಿಗೆ ಮನಸೋತ ರಾಜಕಾರಣಿ ಬಸವರಾಜುನನ್ನು ತನ್ನ ಮಗನನ್ನಾಗಿ ದತ್ತು ತೆಗೆದುಕೊಳ್ಳುತ್ತಾನೆ.
ಕೆಲ ಕಾಲದ ನಂತರ ರಾಜಕಾರಣಿ ಬಸವರಾಜುನ ಮದುವೆಗೆ ಮುಂದಾಗುತ್ತಾನೆ. ಪರಿಚಿತ ರಾಜಕಾರಣಿಯ ಮಗಳನ್ನು ಆತನಿಗೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಮದುವೆಗೆ ಒಪ್ಪದ ಬಸವರಾಜುನನ್ನು ಮದುವೆಗೆ ಒಪ್ಪಿಸುತ್ತಾನೆ.
ಅದೇ ಪ್ರದೇಶದ ಮತ್ತೊಬ್ಬ ರಾಜಕಾರಣಿ ರಾಮಪ್ಪ ಬಸವರಾಜುಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಾನೆ. ಮದುವೆಯ ಬಗ್ಗೆ ಮಾತುಕತೆಯೂ ನಡೆಯುತ್ತದೆ. ರಾಮಪ್ಪ ಬಸವರಾಜುವಿಗೆ ವರದಕ್ಷಿಣೆ ರೂಪದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗುತ್ತಾನೆ. ಆದರೆ ಬಸವರಾಜು ಇದಕ್ಕೊಪ್ಪುವುದಿಲ್ಲ. ಕೊನೆಗೆ ಅನಾಥ ಬಸವರಾಜು ಮದುವೆ  ಸಮಾರಂಭದ ಅಗತ್ಯ ಪೂರೈಸುವ ಸಲುವಾಗಿ ಆ ಹಣವನ್ನು ಸ್ವೀಕರಿಸಬೇಕು ಎಂದು ರಾಮಪ್ಪ ಒತ್ತಾಯಿಸುತ್ತಾನೆ. ಬಸವರಾಜು ಇದಕ್ಕೆ ಅನಿವಾರ್ಯವಾಗಿ ಒಪ್ಪಿ ಹಣ ಸ್ವೀಕರಿಸುತ್ತಾನೆ.
ಆದರೆ ಮರುದಿನ ರಾಮಪ್ಪ ತನ್ನ ಎರಡು ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾನೆ. ಪೊಲೀಸರು ಹುಡುಕಿದಾಗ ಬಸವರಾಜುನ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಸಿಗುತ್ತದೆ. ಬಸವರಾಜು ಮೇಲೆ ಕಳ್ಳತನದ ಆರೋಪ ಬರುತ್ತದೆ. ಪೊಲೀಸರು ಬಸವರಾಜುನನ್ನು ಬಂಧಿಸಲು ಮುಂದಾಗುತ್ತಾರೆ. ಬಸವರಾಜು ಎಷ್ಟು ಸಮಜಾಯಿಶಿ ನೀಡಿದರೂ ಪೊಲೀಸರು ಹಾಗೂ ಜನರು ಅದನ್ನು ನಂಬುವುದಿಲ್ಲ. ಶಾಸಕನಿಗೆ ಸುದ್ದಿ ತಿಳಿದು ಬಸವರಾಜುನನ್ನು ವಿಚಾರಿಸುತ್ತಾನೆ. ಆದರೆ ಕೊನೆಗೆ ಶಾಸಕನೂ ಬಸವರಾಜುವಿನ ಮಾತನ್ನು ನಂಬದಾದಾಗ ಊರಿನ ಗ್ರಾಮಸ್ಥರು ಬಸವರಾಜುವಿನ ವಿರುದ್ಧ ತಿರುಗಿ ಬೀಳುತ್ತಾರೆ. ಆತನ ಮೇಲೆ ಹಲ್ಲೆಗೂ ಮುಂದಾಗುತ್ತಾರೆ. ಆಗ ನಡೆಯುವ ಗಲಾಟೆಯಲ್ಲಿ ರೌಡಿಗಳು ಬಸವರಾಜುನ ಹತ್ಯೆ ಮಾಡುತ್ತಾರೆ.
ಹತ್ಯೆಯ ಆರೋಪ ಊರಿನ ನಾಗರಿಕರ ಮೇಲೆ ಬರುತ್ತದೆ. ರಾಜಕಾರಣಿ ಊರಿನ ನಾಗರಿಕರ ಪರವಾಗಿ ನಿಂತು ಪೊಲೀಸರನ್ನು ವಿರೋಧಿಸುತ್ತಾನೆ. ಗ್ರಾಮಸ್ಥರ ಪರವಾಗಿ ವಾದಿಸಿ ಅವರನ್ನು ಪೊಲೀಸರು ಬಿಟ್ಟುಬಿಡುವಂತೆ ಮಾಡುತ್ತಾನೆ. ಈ ಮೂಲಕ ಜನಬೆಂಬಲ ಗಳಿಸುತ್ತಾನೆ. ಅಣೆಕಟ್ಟೆಯ ಹೋರಾಟ ನಿಧಾನವಾಗಿ ತಣ್ಣಗಾಗುತ್ತದೆ.
ಕೊನೆಯಲ್ಲಿ ತಿಳಿದುಬರುವ ಅಂಶವೆಂದರೆ ಶಾಸಕನ ಕುತಂತ್ರದಿಂದ ನಾಯಕ ಬಸವರಾಜು ಮೇಲೆ ಕಳ್ಳತನದ ಆರೋಪ ಬರುತ್ತದೆ. ಅಷ್ಟೆ ಅಲ್ಲದೆ ಜನರು ಗಲಾಟೆ ಪ್ರಾರಂಭಿಸಿದಾಗ ಶಾಸಕನ ಕಡೆಯ ಜನರೇ ಬಸವರಾಜುನ ಹತ್ಯೆಯನ್ನೂ ಮಾಡುತ್ತಾರೆ. ಆದರೆ ಮಂತ್ರಿಯ ದೆಸೆಯಿಂದ ಇದು ತಿಳಿಯುವುದೇ ಇಲ್ಲ. ಇದು ನಾಟಕದ ಕಥಾವಸ್ತು.

ಗಿಮಿಕ್...
ನಾಟಕ ಯಶಸ್ವಿಯಾಗಬೇಕೆಂದರೆ ಗಿಮಿಕ್ಗಳು ಇರಬೇಕು. ಇದು ಆಧುನಿಕ ನಾಟಕರಂಗದಲ್ಲಿ ಅತ್ಯಂತ ಅವಶ್ಯಕ. ನಾವೂ ಇದಕ್ಕೆ ತಕ್ಕಂತೆ ನಾಟಕದಲ್ಲಿ ಹಲವು ಗಿಮಿಕ್ಗಳನ್ನು ಅಳವಡಿಸಿದ್ದೆವು.
ಅಣೆಕಟ್ಟು ನಾಟಕ ಪ್ರಾರಂಭವಾಗುವುದೇ ವ್ಯಕ್ತಿಯೋಬ್ಬನ ಶವದ ಮೆರವಣಿಗೆಯಿಂದ. ಜನರಲ್ಲಿ ಕುತೂಹಲ ಹುಟ್ಟಿಸಲಿ ಎಂಬ ಉದ್ದೇಶದಿಂದ ಇದನ್ನು ನಾವು ಅಳವಡಿಸಿದ್ದೆವು. ಇದು ಬಹಳ ಯಶಸ್ವಿಯೂ ಆಯಿತು.
ಇಂದಿನ ಜಮಾನಾದಲ್ಲಿ ಹಲವು ಸಿನಿಮಾಗಳಲ್ಲಿ ನಿರೂಪಕನ ಪಾತ್ರ ಬರುತ್ತದೆ. ಯಾರೋ ಒಬ್ಬಾತ ಕಥೆಯನ್ನು ಕೇಳುತ್ತಾ ಹೋಗುತ್ತಾನೆ. ನಾವೂ ಈ ನಿರೂಪಣೆಯ ತಂತ್ರವನ್ನು ಬಳಸಿದ್ದೆವು. ಆದರೆ ನಮ್ಮ ನಾಟಕದಲ್ಲಿ ನಿರೂಪಕ ತೆರೆಯ ಮೇಲೆ ಬರದೆ ತೆರೆಯ ಹಿಂದಿನಿಂದಲೇ ಕಥೆಯನ್ನು ಹೇಳುವಂತೆ ಮಾಡಿದ್ದೆವು. ಈ ಕಥೆಯನ್ನು ಹಾಡಿನ ಮೂಲಕ ಹೇಳಿದೆವು. ಈ ತಂತ್ರವೂ ಸಾಕಷ್ಟು ಯಶಸ್ವಿಯಾಯಿತು.
ನಾಟಕದ ಕೊನೆಯ ಭಾಗದಲ್ಲಿ ಇನ್ನೊಂದು ತಂತ್ರವನ್ನು ಬಳಸಿದೆವು. ಹಾಡೊಂದನ್ನು ಬಳಕೆ ಮಾಡಿಕೊಂಡು ಆ ಹಾಡಿನಲ್ಲಿ ಪ್ರಸ್ತುತ ರಾಜಕಾರಣಿಗಳ, ಖಾಕಿಯ ಇತರ ಸಮಾಜದ ವಿವಿಧ ವ್ಯಕ್ತಿಗಳು ಜನಸಾಮಾನ್ಯರನ್ನು ಶೋಷಿಸುವ ರೀತಿಯನ್ನು ಅಭಿನಯಿಸಿದೆವು. ಸಮಾಜದಲ್ಲಿ ದುಡ್ಡು ಯಾವ ರೀತಿ ಜನರನ್ನು ಬದಲಾಯಿಸುತ್ತದೆ ಎಂಬುದನ್ನು ಅಭಿನಯಿಸಿದೆವು. ಈ ತಂತ್ರವೂ ಯಶಸ್ವಿಯಾಯಿತು.
ಈ ನಾಟಕದಲ್ಲಿ ನಾಯಕ ಸಾಯುತ್ತಾನೆ. ಖಳನಾಯಕ ವಿಜ್ರಂಭಿಸುತ್ತಾನೆ. ಪ್ರಸ್ತುತ ಜಗತ್ತಿನ ಕುತಂತ್ರಿ ರಾಜಕಾರಣಿಗಳನ್ನು ನಾಟಕ ತೋರಿಸುತ್ತದೆ. ಈ ರಾಜಕಾರಣಿಗಳು ಜನರ ನಡುವೆಯೆ ಇದ್ದು, ಪರಿಸ್ಥಿತಿಯನ್ನು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ನಾಟಕ ವಿವರಿಸಿದ್ದರಿಂದ ಬಹಳ ಪ್ರಸಿದ್ಧಿಯನ್ನು ಪಡೆಯಿತು.
ಈ ಗಿಮಿಕ್ಗೆ ಅಗತ್ಯವಿದ್ದ ಅಮೋಘ ಅಭಿನಯವನ್ನು ರಾಘವ್, ಗಣೇಶ್, ನಾಗರಾಜ್ ಹಾಗೂ ಇತರರು ನೀಡಿದ್ದರಿಂದ ನಾಟಕ ಸುಂದರವಾಗಿ ಮೂಡಿ ಬಂದಿತು.
`ಅಣೆಕಟ್ಟು' ಇದೊಂದು ಏಕಾಂಕ ನಾಟಕ. ಈ ನಾಟಕಕ್ಕೆ ನಾಗರಾಜ್ ವಿಶೇಷವಾದ ಬಿದಿರಿನ ಮನೆಯೊಂದನ್ನು ತಯಾರಿಸಿದ್ದ. ಸುಪ್ರಿತಾ ಶಿರೂರ್ ಅವರ ಕೈಚಳಕದಲ್ಲಿ ರಂಗದ ಮೇಲಿನ ವಸ್ತುಗಳಿಗೆ ಜೀವಕಳೆ ಬಂದಿತ್ತು. ಅವರ ಕೈಚಳಕದಲ್ಲಿ ತಯಾರಾಗಿದ್ದ ಮರದ ಕಲಾಕೃತಿಗಳು ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆದವು.

ಹಾಡು-ಸಂಗೀತ
ನಾಟಕಕ್ಕೆ ನಾಗರಾಜ್ ಜೋಗಿ ಸುಂದರ ಸಂಗೀತವನ್ನು ನೀಡಿದ್ದರು. ನಾಟಕದಲ್ಲಿ ಮೂರು ಹಾಡುಗಳನ್ನು ಬಳಸಲಾಗಿತ್ತು. ಹಸಿರು ಗ್ರಾಮವೊಂದರ ಎಲ್ಲ ಗುಣಗಳನ್ನು ಸಾರುವ ನಾಲ್ಕು ಸಾಲಿನ ಚಿಕ್ಕ ಪದ್ಯ, ಅಣೆಕಟ್ಟಿನ ಬಗ್ಗೆ ಜನರು ತಮ್ಮ ತಮ್ಮಲ್ಲಿಯೇ ಹಾಡಿಕೊಳ್ಳುವ ಚಿಕ್ಕ ಹಾಡನ್ನು ಮೊದಲು ಬಳಸಿದ್ದೆವು. ನಾಟಕದ ಕೊನೆಯಲ್ಲಿ ಸಮಾಜದ ವಿವಿಧ ಕ್ರೂರತೆಯನ್ನು ಸಾರುವ ರೂಪಕ ಅಂಶಗಳನ್ನು ಹೊಂದಿರುವ `ಸಾವು...' ಎಂಬ ಹಾಡನ್ನೂ ಬಳಸಿಕೊಂಡಿದ್ದೆವು.
ಸಾವು, ಸಾವು.. ಭೃಷ್ಟಾಚಾರಕ್ಕೆ ಬಂದಂತ ಗೆಲುವು
ಆಸೆಯ ಕನಸಿನ ಸಾವು...
ಎಂಬ ಸಾಲನ್ನು ಹೊಂದಿದ್ದ ಈ ಹಾಡು ಅತ್ಯಂತ ಪರಿಣಾಮಕಾರಿಯಾಯಿತು ಅಲ್ಲದೆ ಜನಮನ ಸೂರೆಗೊಂಡಿತು.

ಪ್ರಶಸ್ತಿ
ಈ ನಾಟಕಕ್ಕೆ ಜಿಲ್ಲಾಮಟ್ಟದಲ್ಲಿ ಮೊದಲ ಪ್ರಶಸ್ತಿ ದೊರಕಿತು. ಅಲ್ಲದೆ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಯುವಜನ ಮೇಳದಲ್ಲಿ ಮೂರನೆ ಸ್ಥಾನ ಗಳಿಸಿತು. ನಾಯಕನ ಸಾವು, ಖಳನಾಯಕನ ಜಯವನ್ನು ಬಿಂಬಿಸಿದ ಅಣೆಕಟ್ಟು ನಾಟಕ ಜನಮನ ಸೂರೆಗೊಂಡಿತು.

ವಿನಯ್ ದಂಟಕಲ್

Tuesday, August 3, 2010

ಬೀದಿ ಬದಿ ಸೃಷ್ಟಿಯಾಗುವ ಕಲಾಕೃತಿಗಳು


ಅವರು ರಸ್ತೆ ಬದಿಯ ಕಲಾಕಾರರು. ಬೆಂಗಳೂರಿನ ಹಲವು ಪ್ರದೇಶಗಳ ಬೀದಿ ಬದಿಗಳಲ್ಲಿ ಟೆಂಟು ಕಟ್ಟಿಕೊಂಡು ತಾವು ತಯಾರಿಸಿದ ಅಚ್ಚಿನ ಸುಂದರ ಮೂತರ್ಿಗಳನ್ನು, ಕಲಾಕೃತಿಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿರುವ ಉತ್ತರ ಭಾರತೀಯ ಮೂಲದ ಈ ವ್ಯಕ್ತಿಗಳ ಕೈಯಲ್ಲಿ ಮಣ್ಣುಗಳು ಒಂದು ರೂಪ ತಳೆಯುತ್ತವೆ, ಭಾವವನ್ನು ಹೊರಸೂಸುತ್ತವೆ.  
ಈ ಬೀದಿ ಬದಿಯ ವಿಶಿಷ್ಟ ಕಲಾವಿದರ ಕೈಯಲ್ಲರಳಿದ ಕಲಾಕೃತಿಗಳನ್ನು ಬಳಸಿ ಮನೆಯನ್ನು ಸುಂದರಗೊಳಿಸಿಕೊಂಡಿರುವವರು ಹಲವರು. ಹೊಸ ಮನೆ ಕಟ್ಟಿಸುವವರು, ಮನೆ ಅಲಂಕಾರ ಮಾಡುವವರು, ಮನೆಯೊಳಗಿನ ಶೋಕೇಸ್ನ್ನು ಅಂದಗೊಳಿಸುವವರು, ಗಾರ್ಡನಿಂಗ್ನಲ್ಲಿ ಆಸಕ್ತಿ ಇರೋರು ಹೀಗೆ ಕಲಾರಸಿಕರು ಈ ಬೀದಿ ಬದಿಯ ಕಲಾಕಾರರು ತಯಾರಿಸುವ ಮೂತರ್ಿಗಳನ್ನು ತೆಗೆದುಕೊಂಡು ಹೋಗಿ ಮನೆಯನ್ನು ಅಂದ-ಚಂದಗೊಳಿಸಿಕೊಳ್ಳುತ್ತಾರೆ.
ಬೀದಿ ಬದಿಯಲ್ಲಿ ದೊರೆಯುವ ಮಣ್ಣಿನ ಕಲಾಕೃತಿಗಳು ತುಂಬ ಆಕರ್ಷಕ ಹಾಗೂ ಸುಂದರವಾದವುಗಳು. ನಿಮರ್ಾಣಗೊಳ್ಳುತ್ತಿರುವ ಮನೆಗೆ ದೃಷ್ಟಿ ಬೀಳಬಾರದೆಂದು ಕಟ್ಟುವ ದೃಷ್ಟಿ ಬೊಂಬೆಯಿಂದ ಹಿಡಿದು ವಿವಿಧ ರೀತಿಯ ಮನಸೆಳೆಯುವ ವಸ್ತುಗಳು ಅಂದರೆ ಹೂದಾನಿಗಳು, ಬೊಂಬೆಗಳು, ಸಾಯಿಬಾಬಾ, ರಾಧಾಕೃಷ್ಣ ಮುಂತಾದ ದೇವರ ಮೂತರ್ಿಗಳು, ಮನೆಯ ಸಿಂಗಾರಕ್ಕೆ ಬಳಸುವ ನವಿಲು, ಗಿಳಿ ಇತ್ಯಾದಿ ಪಕ್ಷಿಗಳ ಮಾದರಿಗಳು, ಗೋಡೆಗಳ ಸಿಂಗಾರಕ್ಕೆ ಬಳಸುವಂತವುಗಳು ಹೀಗೆ ವಿವಿಧ ರೀತಿಯ ಮೋಹಕ ವಸ್ತುಗಳು  ಅಲ್ಲಿ ಮೈದಳೆಯುತ್ತವೆ, ಮಾರಾಟವಾಗುತ್ತವೆ.
ಇಲ್ಲಿನ ಕಲಾಕೃತಿಗಳಿಗೆ ಕೊಡಲಾಗುವ ಬಣ್ಣಗಳೂ ತುಂಬ ವಿಶಿಷ್ಟವಾದದ್ದು. ಈ ಬೀದಿ ಬದಿಯ ಕಲಾಕಾರರು ಬಣ್ಣವನ್ನು ಮಿಶ್ರಣ ಮಾಡಿ ಈ ಮಣ್ಣಿನ ಕಲಾಕೃತಿಗಳಿಗೆ ಲೇಪಿಸಿದರೆ ಅವುಗಳನ್ನು ನೋಡಲು ಸುಂದರ ಅನುಭವವಾಗುತ್ತದೆ. ಅವರ ಕೈಚಳಕದಲ್ಲಿ ಆಕೃತಿ ಪಡೆದ ಬಣ್ಣವನ್ನು ಧರಿಸಿ ಹೊರಬರುವ ವಿಶಿಷ್ಟ ಕಲಾಕೃತಿಗಳು ನೋಡುಗರನ್ನು ಥಟ್ಟನೆ ಸೆಳೆಯುತ್ತವೆ.
ತಮ್ಮ ಕಲಾ ಸೊಬಗನ್ನು ಪ್ರದಶರ್ಿಸುವ ಈ ಬೀದಿ ಬದಿಯ ಕಲಾಕಾರರು ಉತ್ತರ ಭಾರತದವರಾದರು ಇವರಲ್ಲಿ ಅನೇಕರು ರಾಜಾಸ್ತಾನಕ್ಕೆ ಸೇರಿದವರು. ಸಾಮಾನ್ಯವಾಗಿ  ಹತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರಿರುವ ಇವರ ಕುಟುಂಬದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ವಿವಿಧ ರೀತಿಯ ಕರುಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ರಾಜಧಾನಿಯ ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ, ಕೆ.ಆರ್. ಪುರಂ, ಬಾಣಸವಾಡಿ, ಯಶವಂತಪುರ ಮುಂತಾದ ಕಡೆಗಳಲ್ಲಿ ಬೀದಿ ಬದಿಯಲ್ಲಿ ಟೆಂಟು ಕಟ್ಟಿಕೊಂಡು ತಾವು ತಯಾರಿಸುವ ಮಣ್ಣಿನ ವಿಶಿಷ್ಟ ಕಲಾಕೃತಿಗಳನ್ನು ಮಾರಾಟ ಮಾಡುತ್ತಾರೆ. 50 ರೂ.ಗಳಿಂದ 500 ರೂಪಾಯಿಗಳವರೆಗೆ ಬೆಲೆ ಇದೆ. ಚೆಂದದ ಮೂತರ್ಿಗಳನ್ನು ಕೆಲವರು ಕೊಂಡುಕೊಂಡರೂ ಹಲವರು ಅದನ್ನು ನೋಡಿ ರೇಟು ಕೇಳಿ ಚೌಕಾಸಿ ಮಾಡಿ ಖರೀದಿಸುವವರೂ ಇದ್ದರೆ, ಮತ್ತೆ ಕೆಲವರು ವಸ್ತುಗಳ ವೀಕ್ಷಣೆ ಮಾಡಿ, ಏನೂ ಖರೀದಿಸದೆ ಹೋಗುತ್ತಾರೆ.
ಮಣ್ಣಿನಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಈ ಬಡ ಕಲಾಕಾರರು ಎದುರಿಸುವ ಸಮಸ್ಯೆಗಳು ಹಲವಾರು. ಗೊತ್ತಿರುವ ಕಲೆಯೊಂದಿಗೆ ಗೊತ್ತಿರದ ಪ್ರದೇಶಕ್ಕೆ ಧೈರ್ಯಮಾಡಿ ಬಂದಿರುವ ಈ ಮಂದಿಗೆ ಈ ವೃತ್ತಿ ಹೆಚ್ಚಿನ ಲಾಭ ತರದಿದ್ದರೂ ಜೀವನ ನಿರ್ವಹಣೆಯಾದರೆ ಸಾಕು ಎಂಬ ಭಾವನೆಯೂ ಇಟ್ಟುಕೊಂಡೇ ದಿನ ನೂಕುತ್ತಿದ್ದಾರೆ. ತಾವು ತಯಾರಿಸಿದ ವಸ್ತುಗಳು ಮಾರಾಟವಾದರೆ ಆದೀತು, ಇಲ್ಲದಿದ್ದರೆ ಇಲ್ಲ. ಇಂತಹ ಮಣ್ಣಿನ ಮೂತರ್ಿ, ಇತರ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕು ನಿರ್ವಹಣೆ ಮಾಡುತ್ತಿರುವ ರಾಜಸ್ತಾನ ಮೂಲದ ವ್ಯಕ್ತಿ ಸುಂಕದಕಟ್ಟೆಯಲ್ಲಿ ಮಾತಿಗೆ ಸಿಕ್ಕಾಗ ಹೇಳಿದ್ದು: `ದೊಡ್ಡ ದೊಡ್ಡ ಮಾಲ್ಗಳಲ್ಲಿ ಕೇಳಿದ ಬೆಲೆಗೆ ಖರೀದಿಸುವ ಗ್ರಾಹಕರು ನಮ್ಮ ವಸ್ತುಗಳಿಗೆ ಬಹಳ ಚೌಕಾಸಿ ಮಾಡುತ್ತಾರೆ. ಅವರು ಹೇಳುವ ರೇಟು ನಮಗೆ ಹೊಂದುವುದಿಲ್ಲ. ಈ ವೃತ್ತಿ ಲಾಭದಾಯಕ ಅಲ್ಲ. ಈ ಮೂತರ್ಿಗಳ ಮಾರಾಟದಿಂದ ನಮ್ಮ ಜೀವನ ನಡೆಯಬೇಕು. ತಂತ್ರಜ್ಞಾನ ಮುಂದುವರಿದಂತೆ ನಮ್ಮ ಬದುಕು ದುಸ್ತರವಾಗುತ್ತಿದೆಯೇನೋ ಎಂಬ ಶಂಕೆಯೂ ಬರುತ್ತದೆ'.
ಮನೆಯ ಅಂದಕ್ಕೆ ತಮ್ಮದೇ ಆದ ಹೊಳಪು ನೀಡುವ ಈ ಕಲಾಕೃತಿಗಳು ಅದರ ತಯಾರಕರ ಬದುಕನ್ನೂ ಕಟ್ಟಿಕೊಡುವ ಕಾರ್ಯ ಮಾಡುತ್ತವೆ. ಈ ಬೀದಿಬದಿಯ ಕಲಾಕಾರರ ಭಾವನೆಗೆ ಸೂಕ್ತ ಬೆಲೆ ದೊರೆತರೆ ಇವರ ಕಾರ್ಯಕ್ಕೆ ಅದು ಒತ್ತಾಸೆಯಾದಂತೆ.
ವಿನಯ್ ದಂಟಕಲ್

Friday, July 9, 2010

ನೀನು

ಎದೆಯ ಬೃಂದಾವನದ
ಹಸಿರು ಹೂಗಿಡ ನೀನು,
ನನ್ನೊಳಗೆ ನೀನಿರಲು
ಬಾಳಿಗದು ಶೋಭೆ ||


ನನ್ನ ಬಯಕೆಯ ಮನದ
ಕಣ್ಣರೆಪ್ಪೆಯು ನೀನು,
ನನ್ನುಳಿಸೆ ನೀನಿರಲು
ಬಾಳಿಗದು ರಕ್ಷೆ ||


ನನ್ನ ಅಕ್ಷಿ ಆಳದೊಳು
ಕಿಡಿ ಕಾಂತಿ ನೀನು,
ಬದುಕೊಳಗೆ ನೀನಿರಲು
ಕಡೆಗೋಲು ಛಲ ||

ಒಡಲ ತಿಳಿ ನೀರಿನಲಿ
ಹಸಿರು ಹಾವಸೆ ನೀನು,
ನೀರೊಳಗೆ ನೀನಿರಲು
ಅಲ್ಲಹುದು ಸೃಷ್ಟಿ ||


-ವಿನಯ್ ದಂಟಕಲ್

Monday, July 5, 2010

ಕನ್ನಡದ ಕ್ಲಾಸಿಕ್ `ಭೂತಯ್ಯನ ಮಗ ಅಯ್ಯು'

ನಿರ್ದೆಶಕ : ಸಿದ್ಧಲಿಂಗಯ್ಯ
ಕಥೆ : ಗೋರೂರು ರಾಮಸ್ವಾಮಿ ಅಯ್ಯಂಗಾರ್

ನಿರ್ಮಾಪಕ : ಜೈನ್ ಕಂಬೈನ್ಸ್
ಛಾಯಾಗ್ರಹಣ : ಡಿ. ವಿ. ರಾಜಾರಾಂ
ಚಿತ್ರ ಬಿಡುಗಡೆ : 1974
ಸಂಗೀತ : ಜಿ. ಕೆ. ವೆಂಕಟೇಶ್
ತಾರಾಗಣದಲ್ಲಿ : ವಿಷ್ಣುವರ್ಧನ್, ಲೋಕೇಶ್, ಎಂ. ಪಿ. ಶಂಕರ್, ಬಾಲಕೃಷ್ಣ, ಲೋಕನಾಥ್ ಮುಂತಾದವರು.

ಕನ್ನಡದ ಕ್ಲಾಸಿಕ್ ಚಿತ್ರಗಳ ಬಗ್ಗೆ ಕಣ್ಣಾಡಿಸಿದಾಗ ಎಲ್ಲಕ್ಕಿಂತ ಮೊದಲು ಕಂಡುಬರುವ ಚಿತ್ರ `ಭೂತಯ್ಯನ ಮಗ ಅಯ್ಯು'. ಸಾಹಿತ್ಯ ಆಕಾಡಮಿ ಪ್ರಶಸ್ತಿ ವಿಜೇತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಕಾದಂಬರಿ ಆಧಾರಿತ ಭೂತಯ್ಯನ ಮಗ ಅಯ್ಯು, ಚಿತ್ರರಂಗದಲ್ಲಿ ವಿಷ್ಣುವರ್ಧನ್ಗೆ ಭದ್ರವಾದ ನೆಲೆ ನೀಡಿದ ಚಿತ್ರ.
ಜಮೀನ್ದಾರ ಭೂತಯ್ಯ(ಎಂ.ಪಿ. ಶಂಕರ್) ಭಾರಿ ಜುಗ್ಗ. ಇನ್ನೊಬ್ಬರ ತಲೆಒಡೆದು ದುಡ್ಡುಮಾಡುವ ವ್ಯಕ್ತಿ. ಸುಳ್ಳು ದಾಖಲೆಗಳ ಮೂಲಕ ಇನ್ನೊಬ್ಬರ ಜಮೀನು ಕಬಳಿಸುವಾತ. ಊರಿನ ಜನರಿಗೆ ಆತನೆಂದರೆ ತಿರಸ್ಕಾರ. ಆತನ ಹಾದಿಯಲ್ಲೇ ಸಾಗುವ ಮಗ ಅಯ್ಯು(ಲೋಕೇಶ್). ಊರ ಮಂದಿಗೆ ಮೋಸ ಮಾಡಿ ತನ್ನ ಬದುಕು ಕಟ್ಟಿಕೊಳ್ಳುವ ಭೂತಯ್ಯ ಮೋಸ ಮಾಡುತ್ತಲೆ ಜೀವ ಬಿಡುತ್ತಾನೆ. ಆತನ ನಂತರ ಮಗ ಅಯ್ಯು ಸಹ ಅದೇ ರೀತಿ ನಡವಳಿಕೆ ಪ್ರದರ್ಶಿಸುತ್ತಾನೆ. ನಡುವೆ ಊರಿನ ವ್ಯಕ್ತಿಯೊಬ್ಬನ ಮಗ ಗುಳ್ಳ (ವಿಷ್ಣುವರ್ಧನ್)ನೊಂದಿಗೆ ಹಗೆ ಬೆಳೆಯುತ್ತದೆ. ಅಯ್ಯುವಿನ ವಿರುದ್ಧ ಗುಳ್ಳ ತಿರುಗಿ ಬೀಳುತ್ತಾನೆ. ಇಬ್ಬರ ನಡುವೆ ಆಸ್ತಿ ಪತ್ರಕ್ಕಾಗಿ ಗಲಾಟೆ ಆಗುತ್ತದೆ. ಇಬ್ಬರೂ ಕೋರ್ಟ್  ಮೆಟ್ಟಿಲನ್ನು ಏರುತ್ತಾರೆ. ಅಲ್ಲಿ ಗುಳ್ಳ ಸೋಲುತ್ತಾನೆ. ಆ ನಂತರ ಚಿತ್ರ ಅನೇಕ ತಿರುವುಗಳನ್ನು ಕಾಣುತ್ತದೆ.
ಪರಸ್ಪರ ವಿರೋಧಿಗಳಾದ ಅಯ್ಯು ಹಾಗೂ ಗುಳ್ಳ ಕೊನೆಯಲ್ಲಿ ಮಿತ್ರರಾಗುತ್ತಾರೆ. ತಂದೆ ಭೂತಯ್ಯನಂತೆ ದುರ್ಗುಣವನ್ನು ಪ್ರದರ್ಶಿಸುತ್ತಿದ್ದ ಅಯ್ಯು ಒಳ್ಳೆಯವನಾಗುತ್ತಾನೆ ಇದು ಚಿತ್ರದ ತಿರುಳು. ಸಂಪೂರ್ಣ ಚಿತ್ರ ಚಿಕ್ಕಮಂಗಳೂರಿನ ಕಳಸಾಪುರದಲ್ಲಿ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ವಿಷ್ಣು, ಲೋಕೇಶ್, ಎಂ. ಪಿ ಶಂಕರ್, ಬಾಲಕೃಷ್ಣ, ಲೋಕೇಶ್, ದಿನೇಶ್ ಸೇರಿದಂತೆ ಹಲವರು ಅಮೋಘ ಅಭಿನಯ ನೀಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. ಪಿ. ಬಿ ಶ್ರೀನಿವಾಸ್ ಹಾಗೂ ಎಸ್. ಜಾನಕಿ ಅವರ ಸ್ವರಗಳಲ್ಲಿ ಮೂಡಿಬಂದ `ಮಲೆನಾಡ ಹೆಣ್ಣ ಮೈಬಣ್ಣ' ಹಾಡನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಚಿತ್ರದಲ್ಲಿ ಅನೇಕ ಮರೆಯಲಾರದ ಸನ್ನಿವೇಶಗಳಿವೆ. ಕೋರ್ಟ್ ಪ್ರಕರಣ ಮುಗಿಸಿ ವಾಪಸ್ ಬರುವ ಗುಳ್ಳನ ಮಿತ್ರರು ಹೊಟೆಲಲ್ಲಿ ಊಟ ಮಾಡುವುದು, ಲೋಕನಾಥ್ ಉಪ್ಪಿನಕಾಯಿಗಾಗಿ ಹಾತೊರೆಯುವುದು, ಭೂತಯ್ಯ ಸಿದ್ದಿಯ ಎತ್ತುಗಳನ್ನು ಕದ್ದು ಮಾರಾಟ ಮಾಡುವುದು, ಮಾವ ಬಾಲಕೃಷ್ಣ ಅಯ್ಯುವಿಗೆ ಬುದ್ಧಿಕಲಿಸಲು ಪ್ರಯತ್ನಿಸುವುದು, ಮಳೆಯಿಂದ ಅಣೆಕಟ್ಟು ಒಡೆದು ಅಯ್ಯುವಿನ ಮನೆ ಮುಳುಗುವುದು, ಗುಳ್ಳ ಅಯ್ಯುವಿನ ಹೆಂಡತಿ ಮಕ್ಕಳನ್ನು ಕಾಪುಡುವ ಸನ್ನಿವೇಶಗಳನ್ನು ಎಂದಿಗೂ ಮರೆಯುವಂತಿಲ್ಲ.
ಭೂತಯ್ಯನ ಮಗ ಅಯ್ಯು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಸಮಾಜಕ್ಕೆ ಉತ್ತಮ ಅಂಶಗಳನ್ನು ತಿಳಿಸುವ ಚಿತ್ರ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲೊಂದು. ಕನ್ನಡ ನಾಡಿನ ಎಲ್ಲ ಉತ್ತಮ ಅಂಶಗಳನ್ನು ಸಾರುವ ಚಿತ್ರ ಇದು. ಮಲೆನಾಡು, ಬಯಲು ಸೀಮೆ ಮುಂತಾದ ವಿವಿಧ ಭಾಗಗಳ ಜನಜೀವನವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಎಲ್ಲ ವಯೋಮಾನದವರೂ ನೋಡಲೇ ಬೇಕಾದ ಚಿತ್ರ ಇದು.

ವಿನಯ್ ದಂಟಕಲ್

Tuesday, June 29, 2010

ಹೆಣ್ಣಿನ ಮಾನಸಿಕ ತುಮುಲದ ಅನಾವರಣ ಶರಪಂಜರ

 ಚಿತ್ರ ಬಿಡುಗಡೆ : ೧೯೭೧ 
ನಿರ್ದೇಶಕ : ಪುಟ್ಟಣ್ಣ ಕಣಗಾಲ್
ಚಿತ್ರಕಥೆ : ಪುಟ್ಟಣ್ಣ ಕಣಗಾಲ್
ಕಥೆ : ತ್ರಿವೇಣಿ
ನಿರ್ಮಾಪಕ : ಸಿ. ಎಸ್. ರಾಜಾ
ಸಂಗೀತ : ವಿಜಯಭಾಸ್ಕರ್
ಛಾಯಾಗ್ರಹಣ : ಡಿ. ವಿ. ರಾಜಾರಾಮ್
ತಾರಾಗಣದಲ್ಲಿ : ಕಲ್ಪನಾ, ಗಂಗಾಧರ್, ಶಿವರಾಮ್, ಲೀಲಾವತಿ ಮುಂತಾದವರು


ಪುಟ್ಟಣ್ಣನವರ ಮೇರು ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಶರಪಂಜರ. ಕಾದಂಬರಿಗಾರ್ತಿ  ತ್ರಿವೇಣಿ ಅವರ ಕಾದಂಬರಿ ಆಧಾರಿತ ಕಥೆಯೇ ಶರಪಂಜರ. ಕಥಾನಾಯಕ ಸತೀಶ್ (ಗಂಗಾಧರ್) ಹಾಗೂ ನಾಯಕಿ ಕಾವೇರಿ (ಕಲ್ಪನಾ) ದಂಪತಿಗಳ ಸುತ್ತ ಹೆಣೆಯಲ್ಪಟ್ಟ ಕಥೆಯೇ ಶರಪಂಜರ. ಪ್ರೇಮ ವಿವಾಹದ ನಂತರ ಕಾವೇರಿ ಬದುಕು ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆ ಎಂಬುದು ಕಥಾವಸ್ತು. ಮದುವೆಯ ನಂತರ ಎಲ್ಲರೀತಿಯ ಸುಖಗಳನ್ನೂ ಅನುಭವಿಸುತ್ತಿರುವ ಹೊತ್ತಿನಲ್ಲಿ ಮದುವೆಗೆ ಮುನ್ನ ನಡೆದ ಘಟನೆಯ ಕಾರಣದಿಂದ ಕಾವೇರಿ ತನ್ನ ಎರಡನೇ ಹೆರಿಗೆಯ ವೇಳೆ ಮಾನಸಿಕವಾಗಿ ಅಸ್ವಸ್ಥಳಾಗುತ್ತಾಳೆ. ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳುತ್ತಾಳೆ. ಆ ನಂತರ ಮನೆ, ಮಗ, ಸಮಾಜ ಆಕೆಯನ್ನು ಯಾವ ರೀತಿ ಕಾಣುತ್ತದೆ, ಆಕೆಯ ಜೊತೆ ಹೇಗೆ ನಡೆದುಕೊಳ್ಳುತ್ತದೆ ಎಂಬುದೇ ಕಥಾ ಹಂದರ. ಗಂಡ ಹಾಗೂ ಮನೆಯ ಸದಸ್ಯರ ಅಸಡ್ಡೆ, ಹಳೆಯ ಘಟನೆ ನೀಡುವ ಮಾನಸಿಕ ತುಮುಲ ಕಾವೇರಿಯನ್ನು ಕಾಡುತ್ತವೆ. ಕೊನೆಯಲ್ಲಿ ಆಕೆ ಈ ಎಲ್ಲ ತೊಂದರೆಗಳಿಂದ ಬಿಡುಗಡೆ ಹೊಂದುತ್ತಾಳೆಯೆ? ಅಸಡ್ಡೆಯಿಂದ ಕಾಣುವ ಗಂಡ ಆಕೆಯನ್ನು ಮತ್ತೆ ಒಪ್ಪಿಕೊಳ್ಳುತ್ತಾನೆಯೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್.
ಕಲ್ಪನಾ ಅಭಿನಯದ ಸರ್ವಶ್ರೇಷ್ಠ ಪ್ರದರ್ಶನವನ್ನು ಚಿತ್ರದಲ್ಲಿ ಕಾಣಬಹುದು. ಮಾನಸಿಕ ವೇದನೆಯನ್ನು ಕಲ್ಪನಾ ಎಂದೂ ಮರೆಯಲು ಸಾಧ್ಯವೇ ಇಲ್ಲದಂತೆ ಕಟ್ಟಿಕೊಡುತ್ತಾಳೆ. ಚಿತ್ರದಲ್ಲಿ ಆಕೆಯ ನಟನೆ ಎಲ್ಲರ ಕಣ್ಣಿನಲ್ಲಿಯೂ ನೀರು ತರಿಸುವಂತಿದೆ. ಮತ್ತೆ ಮತ್ತೆ ಈಕೆ ಬಿಡದೇ ಕಾಡುತ್ತಾಳೆ. ಇಂತಹ ಶ್ರೇಷ್ಠ ಅಭಿನಯ ಆಕೆಗೆ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಸತೀಶನ ಪಾತ್ರದಾರಿ ಗಂಗಾಧರ್, ಅಡುಗೆ ಭಟ್ಟ ಶಿವರಾಂ ಸಹ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳೂ ಅಷ್ಟೆ ಮಧುರವಾದವುಗಳು. ವಿಜಯ್ ಭಾಸ್ಕರ್ ಸಂಗೀತದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿವೆ. `ಕೊಡಗಿನ ಕಾವೇರಿ', `ಹದಿನಾಲ್ಕು ವರ್ಷ ವನವಾಸದಿಂದ..', `ಬಿಳಿಗಿರಿ ರಂಗಯ್ಯ..' `ಸಂದೇಶ ಮೇಘ ಸಂದೇಶ..' ವರಕವಿ ಬೇಂದ್ರೆ ವಿರಚಿತ `ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...' ಈ ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ಈ ಚಿತ್ರದ ನಂತರ ನಟಿ ಕಲ್ಪನಾ ಕನ್ನಡದಲ್ಲಿ ಬಿಡುವಿಲ್ಲದ ನಟಿಯಾದರೆ ನಿದರ್ೇಶಕ ಪುಟ್ಟಣ್ಣ ಕಣಗಾಲ್ ಅತ್ಯುತ್ತಮ ನಿದರ್ೇಶಕ ರಾಜ್ಯ ಪ್ರಶಸ್ತಿ ಲಭಿಸಿತು. ಇಂದಿನ ನಟಿಯರೂ ತಾವು ಶರಪಂಜರದ ಕಲ್ಪನಾರಂತೆ ನಟಿಸಬೇಕು ಎಂದು ಬಯಸುವುದು ಈ ಚಿತ್ರದಲ್ಲಿ ಅವರ ನಟನೆಗೆ ನಿದರ್ಶನ. ಈ ಚಿತ್ರದ ನಂತರ ಕನ್ನಡದಲ್ಲಿ ಅದೆಷ್ಟೋ ಮಾನಸಿಕ ತುಮುಲಗಳನ್ನು ಬಿಂಬಿಸುವ ಚಿತ್ರಗಳು ಬಂದವು. ಆದರೆ ಅವ್ಯಾವವೂ ಈ ಚಿತ್ರದಷ್ಟು ಯಶಸ್ವಿಯಾಗಲಿಲ್ಲ.
ಪುಟ್ಟಣ್ಣ, ಕಲ್ಪನಾ, ವಿಜಯ್ ಭಾಸ್ಕರ್ ಮುಂತಾದ ಮೇರು ಕಲಾವಿದರು, ತಂತ್ರಜ್ಞರ ಶ್ರಮದ ಪರಿಣಾಮ ಶರಪಂಜರ ಮೂರು ದಶಕಗಳ ನಂತರವೂ ಕ್ಲಾಸಿಕ್ ಚಿತ್ರಗಳ, ಕನ್ನಡದ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಒಂದೆನಿಸಿಕೊಂಡಿದೆ.

Monday, June 21, 2010

ಸಕಲಕಾಲಕ್ಕೂ ಸಲ್ಲುವ `ಕಸ್ತೂರಿ ನಿವಾಸ'


ನಿರದೆಶಕರು : ದೊರೈ-ಭಗವಾನ್
ಸಂಗೀತ : ಜಿ. ಕೆ. ವೆಂಕಟೇಶ್
ಚಿತ್ರ ಬಿಡುಗಡೆ : 1971
ಚಿತ್ರಕಥೆ, ಸಂಭಾಷಣೆ : ಚಿ. ಉದಯ್ಶಂಕರ್
ಮೂಲ ಕಥೆ : ಜಿ. ಬಾಲಸುಬ್ರಮಣ್ಯಂ (ತಮಿಳು)
ತಾರಾಗಣದಲ್ಲಿ : ಡಾ. ರಾಜ್ಕುಮಾರ್, ಜಯಂತಿ, ಕೆ. ಎಸ್. ಅಶ್ವಥ್, ಆರತಿ ಮುಂತಾದವರು.

ಕಸ್ತೂರಿ ನಿವಾಸ ಕನ್ನಡ ಚಿತ್ರರಂಗದ ಎಂದೂ ಮರೆಯದ ಚಿತ್ರ. ಹಲವು ವಿಶಿಷ್ಟ ಕಾರಣಗಳಿಂದ ಇದು ಸೆಳೆಯಲ್ಪಡುತ್ತದೆ. ತಮಿಳಿನಲ್ಲಿ ಶಿವಾಜಿ ಗಣೇಶನ್ ಗಾಗಿ ರಚನೆಯಾದ ಕಥೆಯನ್ನು ಅಲ್ಪಸ್ವಲ್ಪ ಮಾರ್ಪಡಿಸಿ ಕನ್ನಡದಲ್ಲಿ ಚಿತ್ರ ನಿರ್ಮಿಸಲಾಗಿದೆ. ಬೆಂಕಿಪೊಟ್ಟಣ ನಿರ್ಮಾಣದ ಕಾರಖಾನೆಯ ಉದ್ಯಮಿಯ ವಿಫಲ ಪ್ರೇಮಕಥೆಯೇ ಕಸ್ತೂರಿ ನಿವಾಸ. ಈ ಕಥೆಗೆ ಶಿವಾಜಿ ಗಣೇಶನ್ ಒಪ್ಪಿಗೆ ನೀಡದ ಕಾರಣ ಕನ್ನಡದಲ್ಲಿ ಕ್ಲಾಸಿಕ್ ಚಿತ್ರವಾಗಿ ಮೂಡಿ ಬಂದಿತು. ಈ ಚಿತ್ರ ಕನ್ನಡದಲ್ಲಿ ತಯಾರಾಗಲು ಚಿತ್ರ ಸಂಭಾಷಣಕಾರ ಚಿ. ಉದಯ್ ಶಂಕರ್, ದೊರೈ ಭಗವಾನ್ ಹಾಗೂ ಡಾ. ರಾಜ್ ಅವರ ಪಾತ್ರ ಬಹಳ ದೊಡ್ಡದು.
ಕಥಾನಾಯಕ ರವಿ ಅಮೆರಿಕಾದಲ್ಲಿ ಬ್ಯುಸಿನೆಸ್ ಕೋರ್ಸ್  ಮುಗಿಸಿ ಭಾರತಕ್ಕೆ ಮರಳುವ ಉದ್ಯಮಿ. ಭಾರತದಲ್ಲಿ ಆತ ಬೆಂಕಿಪೊಟ್ಟಣ ಕಾರಖಾನೆ ಪ್ರಾರಂಭಿಸುತ್ತಾನೆ. ನಡುವೆಯೇ ತನ್ನ ಕಾರ್ಯದರಷಿ  ಲೀಲಾ(ಜಯಂತಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಆಕೆ ರವಿಯ ಮಿತ್ರ ಚಂದ್ರೂನನ್ನು ಕಾರಣಾಂತರಗಳಿಂದ ಮದುವೆಯಾಗುತ್ತಾಳೆ. ರವಿ ಸಹ ಬೇರೊಬ್ಬಳನ್ನು ಮದುವೆಯಾಗುತ್ತಾನೆ. ಅಲ್ಲದೆ ಅಪಘಾತವೊಂದರಲ್ಲಿ ಹೆಂಡತಿ ಹಾಗೂ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆ. ಈ ನಡುವೆ ಲಾಭದ ಹಾದಿಯಲ್ಲಿದ್ದ ಆತನ ಕಾಖರ್ಾನೆ ನಷ್ಟದೆಡೆಗೆ ಮುಖಮಾಡುತ್ತದೆ. ಅದಕ್ಕೆ ಮಿತ್ರ ಚಂದ್ರು ಸಹ ಕಾರಣನಾಗಿರುತ್ತಾನೆ. ಈ ಹಂತದಲ್ಲಿ ಲೀಲಾ ಮತ್ತೊಮ್ಮೆ ಆತನ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಹಚ್ಚಿಕೊಳ್ಳುತ್ತಾನೆ. ಹೀಗೆ ಏರಿಳಿತದ ಬದುಕನ್ನು ಕಾಣುವ ರವಿ ಕೊನೆಯಲ್ಲಿ ಏನಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ.
ರವಿ ಪಾತ್ರಧಾರಿ ರಾಜ್ಕುಮಾರ್ ಮನೋಜ್ಞವಾಗಿ ನಟಿಸಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಮನೆಯ ಕೆಲಸಗಾರನ ಪಾತ್ರದಲ್ಲಿ ನಟಿಸಿರುವ ಅಶ್ವಥ್ರಂತೂ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಜಯಂತಿ, ಆರತಿ ತಕ್ಕಮಟ್ಟಿಗೆ ನಟಿಸಿದ್ದಾರೆ.
ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಅತ್ಯಂತ ಸುಂದರವಾಗಿವೆ. ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡುಗಳು ಜೀವನ ತತ್ವವನ್ನು ಸಾರುವಂತವುಗಳು. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. `ಆಡಿಸಿ ನೋಡು ಬೀಳಿಸಿನೋಡು',`ಆಡಿಸಿದಾತಾ ಬೇಸರಮೂಡಿ', `ಎಲ್ಲೇ ಇರು ಹೇಗೇ ಇರು', `ಆಡೋಣ ನೀನು ನಾನು', `ನೀ ಬಂದು ನಿಂತಾಗ' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. `ಆಡಿಸಿ ನೋಡು ಬೀಳಿಸಿ ನೋಡು' ಹಾಗೂ `ಆಡಿಸಿದಾತಾ ಬೇಸರ ಮೂಡಿ' ಈ ಗೀತೆಗಳು ಜೀವನ ತತ್ವವನ್ನು ಸಾರುತ್ತವೆ.
ಕನ್ನಡದ ಎವರ್ಗ್ರೀನ್ ಚಿತ್ರ ಕಸ್ತೂರಿ ನಿವಾಸವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡಂತಹ ಅನುಭವ. ಎರಡೂ ಮುಕ್ಕಾಲು ತಾಸುಗಳ ಈ ಚಿತ್ರ ವೀಕ್ಷಿಸಿದವರಿಗೆ ನೀಡುವ ಅನುಭವವೇ ಬೇರೆ. `ಕಸ್ತೂರಿ ನಿವಾಸ' ಕನ್ನಡದ ಕಂಪನ್ನು ಕಸ್ತೂರಿಯಂತೆ ಬೀರಿದ ಚಿತ್ರ.

Monday, June 14, 2010

ಬಡ ಕವಿಯ ಭಾವಗೀತೆ ಪ್ಯಾಸಾ

ನಿರದೆಶಕ : ಗುರುದತ್
ನಿರಮಾಪಕ : ಗುರುದತ್
ಕಥೆ : ಅಬ್ರಾರ್ ಅಲ್ವಿ
ಛಾಯಾಗ್ರಹಣ : ವಿ.ಕೆ. ಮೂರ್ತಿ 
ಸಂಗೀತ : ಎಸ್. ಡಿ. ಬರ್ಮನ್
ಚಿತ್ರ ಬಿಡುಗಡೆ : ಫೆಬ್ರವರಿ 19, 1957
ತಾರಾಗಣದಲ್ಲಿ : ಗುರುದತ್, ವಹೀದಾ ರೆಹಮಾನ್, ಮಾಲಾ ಸಿನ್ಹ, ಜಾನಿ ವಾಕರ್, ರೆಹಮಾನ್ ಮುಂತಾದವರು.

ಬಡ ಕವಿಯೊಬ್ಬನ ವಿಫಲ ಪ್ರೇಮ, ಪ್ರೇಮವನ್ನು ಪಡೆಯಲು ಆ ಕವಿ ತೊಳಲಾಡುವುದು, ಪ್ರೇಯಸಿಯ ಮೋಸ ಈ ಮುಂತಾದ ಕಥಾ ಹಂದರವನ್ನಿಟ್ಟುಕೊಂಡು ಸುಂದರ ಚಿತ್ರವನ್ನು ತಯಾರಿಸಿದ್ದಾರೆ ಗುರುದತ್. ಬದುಕಿನಲ್ಲಿ ನೆಲೆ ನಿಲ್ಲಲಾಗದೇ, ಬರೆದ ಕವಿತೆಗಳನ್ನು ಪ್ರಕಟಿಸಲು ಹಣವಿಲ್ಲದೆ ಪರಿತಪಿಸುವ ಕವಿ ವಿಜಯ್ನ ಪಾತ್ರದಲ್ಲಿ ಮೋಹಕ ಅಭಿನಯ ನೀಡಿದ್ದು ಗುರುದತ್. ಈ ಕವಿಯ ಕಾಲೇಜು ದಿನಗಳ ಪ್ರೇಯಸಿಯಾಗಿ ಗುರುದತ್ಗೆ ಮೋಸಮಾಡುವ ಪಾತ್ರ ನಿರ್ವಹಿಸಿದ್ದು ಮಾಲಾ ಸಿನ್ಹಾ. ಈಕೆ ಮಾಡುವ ಮೋಸ ನೋಡುಗರ ಕಣ್ಣಿನಲ್ಲಿ ನೀರು ತರಿಸುತ್ತದೆ.
ಈ ಚಿತ್ರದ ಮುಖ್ಯ ಆಕರ್ಷಣೆ ವಹೀದಾ ರೆಹಮಾನ್. ಈ ಚಿತ್ರ ವಹೀದಾಗೆ ಪಾದಾರ್ಪಣೆಯ ಚಿತ್ರ. ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ಈಕೆ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡುಬಿಡುತ್ತಾಳೆ. ಚಿತ್ರದಲ್ಲಿ ಈಕೆಯದು ಗುಲಾಬೂ ಎಂಬ ವೇಶ್ಯೆಯ ಪಾತ್ರ. ವೇಶ್ಯೆಯಾದರೂ ಈಕೆಗೆ ವಿಜಯ್ನ ಕವನಗಳನ್ನು ಕೇಳುವ ಆಸೆ. ಆತನ ಕವನಗಳನ್ನು ಆಲಿಸುತ್ತಲೇ ವಿಜಯ್ನ ಪ್ರೇಮದಲ್ಲಿ ಬೀಳುತ್ತಾಳೆ. ಆತನ ಕವನಗಳನ್ನು ಪ್ರಕಟಿಸುತ್ತಾಳೆ. ಈ ಸಂದರ್ಭದಲ್ಲಿ ಆತನ ಬದುಕು ವಿಚಿತ್ರ ತಿರುವುಗಳನ್ನು ಪಡೆಯುತ್ತದೆ. ಶ್ರೀಮಂತ ಉದ್ಯಮಿ (ಮಾಲಾ ಸಿನ್ಹಾಳ ಪತಿ) ವಿಜಯ್ನ ಕೊಲೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ವಿಜಯ್ ಬದುಕಿರುವಂತೆಯೇ ಸತ್ತುಹೋಗಿದ್ದಾನೆಂದು ಘೋಷಿಸಲ್ಪಡುತ್ತಾನೆ. ಇದು ಚಿತ್ರದ ಸಾರಾಂಶ. ಚಿತ್ರದ ಕ್ಲೈಮ್ಯಾಕ್ಸ್ ಅತ್ಯುತ್ತಮವಾಗಿ ಮೂಡಿಬಂದಿದೆ.
ಚಿತ್ರದಲ್ಲಿ ಗುರುದತ್ರದ್ದು ಅಮೋಘ ನಟನೆ. ವಿಜಯ್ ಪಾತ್ರವನ್ನು ನಿರ್ವಹಿಸಲು ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬಂತಹ ನಟನೆ ಅವರದ್ದು. ವಹೀದಾ ರೆಹಮಾನ್ ನೋಡುಗರನ್ನು ಸೆಳೆಯುತ್ತಾರೆ. ಗುರುದತ್ನ ಮಿತ್ರನ ಪಾತ್ರದಲ್ಲಿ ನಟಿಸಿರುವ ಜಾನಿವಾಕರ್ ತಮ್ಮ ಕಾಮಿಡಿಯಿಂದ ನಗೆ ಉಕ್ಕಿಸುತ್ತಾರೆ.
`ಜಾನೆ ಕ್ಯಾ ತೂನೆ ಕಹಿ ಭಿ',`ಹಮ್ ಆಪ್ ಕಿ ಆಂಖೋ ಮೇ',`ಜಾನೆ ವೋ ಕೈಸೆ ಲೋಗ್' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಚಿತ್ರಕ್ಕೆ ಸಂಗೀತ ನೀಡಿದ್ದು ಎಸ್. ಡಿ. ಬರ್ಮನ್. ಮೊಹಮ್ಮದ್ ರಫಿ ಹಾಗೂ ಗುರುದತ್ ಅವರಿಂದ ಒಳ್ಳೊಳ್ಳೆಯ ಹಾಡುಗಳನ್ನು ಹಾಡಿಸಿದ ಖ್ಯಾತಿ ಬರ್ಮನ್ಗೆ ಸಲ್ಲುತ್ತದೆ.
ಬಾಲಿವುಡ್ನ ಎಂದೂ ಮರೆಯದ ಚಿತ್ರ ಪ್ಯಾಸಾ. ಎಲ್ಲ ಕಾಲದ ಜನರನ್ನು ಇದು ಸೆಳೆಯುತ್ತದೆ.
 

Thursday, June 10, 2010

ಶಹಬ್ಬಾಸ್ ತಮನ್ನಾ


ಈಯಮ್ಮ ಪರದೆ ಮೇಲೆ ಬಂದರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುತ್ತಾರೆ. ಈಕೆಯ ಸ್ನಿಗ್ಧ ಕಣ್ಣಿಗೆ ಮರುಳಾಗುತ್ತಾರೆ. ಈಕೆಯೂ ಅಷ್ಟೆ ಹುಡುಗರ ಹುಚ್ಚಿಗೆ ಮತ್ತಷ್ಟು ತುಪ್ಪ ಸುರಿದು ಹಾಯ್ ಹೇಳಿ ಹೊರಟು ಬಿಡುತ್ತಾಳೆ.
ಇವಳೇ ತಮನ್ನಾ. ತಮಿಳು, ತೆಲಗು ಮುಂತಾದ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಬಯಸುವ ಹುಡುಗಿ. ನಿಮರ್ಾಪಕರು ಈಕೆಯ ಮನೆಯ ಮುಂದೆ ಕಾಲ್ಶೀಟ್ಗಾಗಿ ಕಾದುಕುಳಿತು ಬಿಡುತ್ತಾರೆ. ಇಂತಹ ತಮನ್ನಾ ವಲಸೆ ಹುಡುಗಿ ಎಂದರೆ ನಂಬಲೇ ಬೇಕು.
ಅಹುದು, ತಮನ್ನಾ ಹುಟ್ಟಿದ್ದು ದೂರದ ಸಿಂಧ್ ಪ್ರಾಂತ್ಯದಲ್ಲಿ. ಈಕೆಯ ತಂದೆ ತಾಯಿಗಳು ಸಿಂಧಿಗಳು. ಹಾಗೆಯೇ ಈಕೆ ಬೆಳೆದಿದ್ದು, ಓದಿದ್ದು, ಅಕ್ಷರಾಭ್ಯಾಸ ಮಾಡಿದ್ದು ಮುಂಬಯಿಯಲ್ಲ. ಆದರೆ ಈಗ ಈಕೆಯ ಪಾಲಿಗೆ ಸಿನಿಮಾ ಜಗತ್ತಿನ ಬಾಗಿಲು ತೆರೆದಿದ್ದು ಹೈದರಾಬಾದ್ ಹಾಗೂ ಚೆನ್ನೈ.
ಸಿಂಧಿಯಾಗಿ, ಹಿಂದಿಯಾಗಿ ಬೆಳೆದ ತಮನ್ನಾ ಈಗ ಪಕ್ಕಾ ತಮಿಳರ ಪೊಣ್ಣು, ತೆಲುಗರ ಪಿಲ್ಲಾ ಆಗಿಬಿಟ್ಟಿದ್ದಾಳೆ. ತೆಲುಗಿನ ಹಾಲಿಡೇಸ್, ತಮಿಳಿನ ಆಯನ್ ಚಿತ್ರಗಳಲ್ಲಿ ನಟಿಸಿ ಭಾರಿ ಹೆಸರು ಮಾಡಿದ ಈಕೆ ಈಗ ತಮಿಳು, ತೆಲಗು ಚಿತ್ರರಂಗದಲ್ಲಿ ತುಂಬಾ ಬ್ಯೂಸಿ. ಆದರೆ ಈ ನಡುವೆ ಈಕೆ ತಮಿಳು ಭಾಷೆಯನ್ನು ಅದು ಹೆಂಗೋ ಕಲಿತು ಬಿಟ್ಟಿದ್ದಾಳೆ.
ಇದರಿಂದ ತಮಿಳು ಮಂದಿಗಳು ಬಹಳ ದಿಲ್ಖುಷ್ ಆಗಿಬಿಟ್ಟಿದ್ದಾರಂತೆ. ತಮನ್ನಾ ತಮಿಳು ಕಲಿತಿರುವುದು ಹಿರಿಯ ನಟಿ ಖುಷ್ಬೂಗಂತೂ ಬಹಳ ಖುಷಿ ಕೊಟ್ಟಿದೆಯಂತೆ. ಇದ್ದರೆ ತಮನ್ನಾ ಹಾಗೆ ಇರಬೇಕು ಎಂದು ಬೆನ್ನು ತಟ್ಟಿರುವ ಖುಷ್ಬೂ ತಮಿಳು ಕಲಿಯದ ಹೀರೊಯಿನ್ಗಳ ಬಗ್ಗೆ ಸಖತ್ ಸಿಟ್ಟಾಗಿದ್ದಾರಂತೆ.
ಇನ್ನೂ ಒಂದು ವಿಶೇಷ ಸುದ್ದಿ ಏನೆಂದರೆ ತಮನ್ನಾ ಇದೀಗ ತೆಲುಗು ಭಾಷೆಯನ್ನೂ ಕಲಿಯಲು ಪ್ರಾರಂಭಿಸಿದ್ದಾಳಂತೆ. ತಮ್ಮದೇ ನಾಡಿನಲ್ಲಿ ಜನಿಸಿ ಮಾತ್ರಭಾಷೆ ಬಂದರೂ ಅದನ್ನು ಮರೆತು ಟಸ್ ಪುಸ್ ಅಂತ ಇಂಗ್ಲೀಷ್ನಲ್ಲಿ ಹರಟೆಕೊಚ್ಚುವ ನಟಿಯರಿಗಿಂತ ಭಿನ್ನ ಈ ತಮನ್ನಾ. ಶಹಬ್ಬಾಸ್ ತಮನ್ನಾ.

Sunday, June 6, 2010

ಸತ್ಯದ ಸಾರ ಸಾರುವ ಸತ್ಯಹರಿಶ್ಚಂದ್ರ


ನಿರದೆಶನ : ಹುಣಸೂರು ಕೃಷ್ಣಮೂರ್ತಿ 
ನಿರಮಾಪಕರು : ವಿಜಯಾ ಪ್ರೊಡಕ್ಷನ್
ಸಂಗೀತ : ಪಿ. ಎಂ. ರಾವ್
ಚಿತ್ರ ಬಿಡುಗಡೆ : 1965
ತಾರಾಗಣದಲ್ಲಿ : ಡಾ. ರಾಜಕುಮಾರ್, ಫಂಡರೀಬಾಯಿ, ನರಸಿಂಹರಾಜೂ, ಎಂ. ಪಿ. ಶಂಕರ್ ಮುಂತಾದವರು

ಸತ್ಯ ಹರಿಶ್ಚಂದ್ರ ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು. 1965ರಲ್ಲಿಯೇ ಭಾರೀ ವೆಚ್ಚದಲ್ಲಿ ನಿರಮಾಣವಾಗಿದ್ದ ಈ ಚಿತ್ರವನ್ನು ನೋಡದವರೆ ಇಲ್ಲ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ಮಹಾಮುನಿ ವಿಶ್ವಾಮಿತ್ರನ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆಲ್ಲುವ ಕಥೆಯೇ ಸತ್ಯ ಹರಿಶ್ಚಂದ್ರ.
ರಾಜಾ ಹರಿಶ್ಚಂದ್ರನಾಗಿ ಡಾ. ರಾಜ್ಕುಮಾರ್ ಅವರದ್ದು ಚಿತ್ರದಲ್ಲಿ ಮೇರು ಅಭಿನಯ. ಹರಿಶ್ಚಂದ್ರನ ಮಡದಿಯಾಗಿ ಫಂಡರಿಬಾಯಿ ಮನೋಜ್ಞವಾಗಿ ನಟಿಸಿದ್ದಾರೆ. ವಿಶ್ವಾಮಿತ್ರನಾಗಿ ಉದಯ್ಕುಮಾರ್ ಸಿಟ್ಟಿನ ಪ್ರತಿರೂಪವಾಗಿಕಾಣುತ್ತಾರೆ. ರಾಜನನ್ನು ಕಾಡುವ ವಿಶ್ವಾಮಿತ್ರನ ಬಂಟ ನಕ್ಷತ್ರಿಕನ ಪಾತ್ರದಲ್ಲಿ ನಟಿಸಿದ್ದು ಕಾಮಿಡಿ ಕಿಂಗ್ ನರಸಿಂಹರಾಜೂ. ಚಿತ್ರದಲ್ಲಿ ಇವರು ಹಾಸ್ಯ, ಭಯ, ಸಿಟ್ಟು ಮುಂತಾದ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿ ನೋಡುಗರನ್ನು ಸೆಳೆಯುತ್ತಾರೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಆಕಷರ್ಿಸುತ್ತಾರೆ.
ಚಿತ್ರದ ಹಾಡುಗಳೂ ಅಷ್ಟೆ, ಮತ್ತೆ ಮತ್ತೆ ಕೇಳುವಂತಿದೆ. `ನಮೋ ಭೂತನಾಥ..', `ವಿಧಿ ವಿಪರೀತ...', `ಆನಂದ ಸದನ ಅರವಿಂದನಯನ..' ಹಾಡುಗಳು, ಜೊತೆಗೆ ಎಂ. ಪಿ. ಶಂಕರ್ ಅಭಿನಯಿಸಿದ `ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಹಾಗೂ `ನನ್ನ ನೀನು ನಿನ್ನ ನಾನು..' ಎಂಬ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.
ನಾಲ್ಕು ದಶಕಗಳ ಹಿಂದೆಯೇ ಕಪ್ಪು ಬಿಳುಪು ಬಣ್ಣದಲ್ಲಿ ಅದ್ದೂರಿಯಾಗಿ ನಿರಮಾಣವಾಗಿದ್ದ ಈ ಚಿತ್ರವನ್ನು 2008ರಲ್ಲಿ ಬಹುವರ್ಣಗಳ ಮೂಲಕ ಮತ್ತೆ ಬಿಡುಗಡೆ ಮಾಡಲಾಯಿತು. 1965ರಲ್ಲಿ ಶತದಿನ ಆಚರಿಸಿದ್ದ ಚಿತ್ರ 2008ರಲ್ಲಿ ಬಾಕ್ಸಾಫೀಸ್ನಲ್ಲಿ ಸಂಪೂರ್ಣ ನೆಲಕಚ್ಚಿತು.
ಸತ್ಯದ ನೀತಿಯನ್ನು ಸಾರುವ ಆದರ್ಶಮಯ ಚಿತ್ರ ಎಲ್ಲ ಕಾಲದಲ್ಲಿಯೂ, ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೆಸರಾಗಿದೆ.

ವಿನಯ್ ದಂಟಕಲ್

Sunday, May 23, 2010

ಚಿತ್ರವಿಮರ್ಷೆ : ಶಂಕರ್ ಐಪಿಎಸ್

ವಿಜಯ್ ತಾಕತ್ತಿನ ಪ್ರದರ್ಶನ

ಶಂಕರ್ ಐಪಿಎಸ್ ಇದು ವಿಜಯನ  ದಾಢಸಿತನ ಅನಾವರಣ ಮಾಡುವ ಚಿತ್ರ. ಒಳ್ಳೆಯವರಿಗೆ ಒಳ್ಳೆಯವನಾಗಿ ಕೆಟ್ಟವರಿಗೆ ಕೆಟ್ಟವನಾಗಿ ಕಾಣಿಸಿಕೊಳ್ಳುವ ಶಂಕರ್ (ವಿಜಯ್)ಗೆ ಅಪರಾಧಿಗಳನ್ನು ಮಟ್ಟಹಾಕುವುದೇ ಕೆಲಸ. ಕಂಡಕಂಡಲ್ಲಿ ಅಪರಾಧಿಗಳನ್ನು, ರೌಡಿಗಳನ್ನು, ಅತ್ಯಾಚಾರಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡುವ ಶಂಕರ್, ಮಿಸ್ ಇಂಡಿಯಾ ಆಗಬೇಕೆಂಬ ಕನಸನ್ನು ಹೊಂದಿರುವ ಹುಡುಗಿ(ಕ್ಯಾಥರೀನ್ ಥೆರೇಸಾ) ಗೆ ಸಹಾಯ ಮಾಡುತ್ತಾನೆ. ಆಕೆಗೆ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ತರಬೇತಿ ಕೊಡಿಸುತ್ತಾನೆ. ಆದರೆ ಆಕೆಯ ಮೇಲೆ ಆಸಿಡ್ ದಾಳಿಯಾಗುತ್ತಾದೆ. ಹೆಸರಾಂತ ಉದ್ಯಮಿಯೊಬ್ಬನ ಮಗ ಆಕೆಯ ಮೇಲೆ ಆಸಿಡ್ ದಾಳಿ ಮಾಡುತ್ತಾನೆ. ಆಸಿಡ್ ದಾಳಿಗೆ ಒಳಗಾದ ಆಕೆಗೆ ನ್ಯಾಯವನ್ನು ಕೊಡಿಸಿ, ಸಮಾಜಕ್ಕೆ ಬುದ್ಧಿಹೇಳುವ ದಕ್ಷ ಅಧಿಕಾರಿಯಾಗಿ ವಿಜಯ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಮಾಡೆಲ್ ಟ್ರೈನಿಯಾಗಿ ಕೆಲಸ ಮಾಡುವ ನಾಯಕಿ (ರಾಗಿಣಿ) ವಿಜಯ್ಗೆ ಬೆಂಗಾವಲಾಗಿ ನಿಂತು ಅಪರಾಧಿಗಳ ಮಟ್ಟಹಾಕುವ ನಾಯಕನ ಕಾರ್ಯದಲ್ಲಿ ಸಹಾಯ ಮಾಡುತ್ತಾಳೆ.
ಹೆಸರಿಗೆ ತಕ್ಕಂತೆ ಇದು ಖಾಕಿ ಚಿತ್ರ. ಹಾಗಾಗಿ ಚಿತ್ರದುದ್ದಕ್ಕೂ ಚಾಲೆಂಜುಗಳು, ಧಮಕಿಗಳು, ಫೈಟ್ಗಳು ಇದ್ದೇ ಇವೆ. ಚಿತ್ರದಲ್ಲಿ ಖಾಕಿ ಹಾಗೂ ಕಪ್ಪುಕೋಟುಗಳು ಪರಸ್ಪದ ಎದುರಾಳಿಗಳಾಗುತ್ತವೆ. ಇವೆರಡೂ ಪರಸ್ಪರ ಮೇಲಾಟದಲ್ಲಿ ತೊಡಗುತ್ತವೆ. ಪೊಲೀಸ್ ಅಧಿಕಾರಿ ಶಂಕರ್ಗೆ ಎದುರಾಗಿ ನಿಂತು ಸವಾಲು ಹಾಕುವ ಪಾತ್ರದಲ್ಲಿ ರಂಗಾಯಣ ರಘು ಬೊಂಬಾಟಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಅವಿನಾಶ್ ಹಾಗೂ ಶೋಭರಾಜ್ ಅವರುಗಳಿಗೆ ಅಪರೂಪಕ್ಕೆ ಒಳ್ಳೆಯ ಪಾತ್ರಗಳು ದೊರಕಿವೆ. ಚಿತ್ರಗಳಲ್ಲಿ ಯಾವಾಗಲೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ ಶೋಭರಾಜ್ ಹಾಗೂ ಅವಿನಾಶ್ ಈ ಚಿತ್ರದಲ್ಲಿ ಬೇರೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ವಿಜಯ್ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೆ ಕಾಮಿಡಿಯನ್, ಅವರೇ ಆಕ್ಷನ್ ಕಿಂಗ್, ಅವರೇ ಚಾಲೇಂಜರ್ ಕೊನೆಗೆ ಅವರೇ ಐಟಂ ಸಾಂಗಿಗೂ ಹೆಜ್ಜೆ ಹಾಕುತ್ತಾರೆ. ಎಲ್ಲಾ ಸಂಭಾಷಣೆಯನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಛರಿಸಿ ಎಲ್ಲರ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ವೇಗವಾಗಿ ಹೇಳಿದ್ದರೆ ವಿಜಯ್ನ್ನು ಮತ್ತೊಬ್ಬ `ಸಾಯಿಕುಮಾರ್' ಅನ್ನಬಹುದು. ಆದರೂ ಕೆಲವೊಮ್ಮೆ ಸಡನ್ನಾಗಿ ಸಿಟ್ಟಿಗೇಳುವುದು ನೋಡುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಫೈಟುಗಳನ್ನು ಚೆನ್ನಾಗಿಯೇ ಮಾಡಿ ಪ್ರೇಕ್ಷಕರನ್ನು ಸೆಳೆಯುವ ವಿಜಯ್ ಚಿತ್ರದಲ್ಲಿ ಬೇಜಾನಾಗಿ ಬಟ್ಟೆ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಶರೀರ ಪ್ರದಶರ್ಿಸುವ ಮೂಲಕ ತಾಕತ್ತು ತೋರಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರಿಗೆ ಕೊಂಚ ಸ್ಕೋಪ್ ಕಡಿಮೆ. ಮಾಡೆಲ್ ಆಗಿದ್ದ ಕ್ಯಾಥರೀನ್ಗೆ ಇದು ಕನ್ನಡದ ಮೊದಲ ಚಿತ್ರ. ಚಿತ್ರದಲ್ಲಿ ಅವರದ್ದು ಮಿಸ್ ಇಂಡಿಯಾ ಸ್ಪಧರ್ಿಯ ಪಾತ್ರ. ಆದರೂ ಅವರು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗಾಯಣ ರಘು ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಒಂದು. ಚಿತ್ರದಲ್ಲಿ 5 ಹಾಡುಗಳಿವೆ. ಆದರೆ ಈ ಹಾಡುಗಳು ಮಾತ್ರ ಏನು ಮಾಡಿದರೂ ನೆನಪಲ್ಲಿ ಉಳಿಯಲಾರವು. ಇದಕ್ಕೆ ಸಂಗೀತ ನಿದರ್ೆಶಕರು ಕಾರಣವೋ ಗೀತೆಗಳನ್ನು ಬರೆದವರು ಕಾರಣವೋ ತಿಳಿಯುವುದಿಲ್ಲ. ವಿಜಯ್ ತೆರೆಯ ಮೇಲೆ ಇದ್ದಷ್ಟೂ ಹೊತ್ತು ಇತರ ಪಾತ್ರಗಳು ಮಾತೇ ಆಡದಿರುವುದು ಚಿತ್ರದ ಮೈನಸ್ ಪಾಯಿಂಟ್ಗಳಲ್ಲಿ ಒಂದು.
ಇನ್ನುಳಿದಂತೆ ದಾಸರಿ ಸೀನು ಅವರು ಕ್ಯಾಮರಾ ಮೂಲಕ ಉತ್ತಮ ದೃಷ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಸಂಭಾಷಣೆಯಲ್ಲಿರುವ ಗಟ್ಟಿತನ ಸೆಳೆಯುತ್ತದೆ. ವಿಜಯ್ ವಿಜ್ರಂಭಣೆಗೆ ಬೇಕಾದ ಸಂಭಾಷಣೆಗಳನ್ನು ನಿದರ್ೇಶಕ ರಮೇಶ್ ಬಾಬೂ ಕೆತ್ತಿದ್ದಾರೆ. ಉತ್ತಮ ಸಂದೇಶವನ್ನು ಹೇಳಲು ಹೊರಟ ರಮೇಶ್ ಬಾಬೂ ಅದನ್ನು ಮಾಸ್ ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಕೆಲವೊಮ್ಮೆ ವಿಫಲರಾಗಿದ್ದಾರೆ. ಚಿತ್ರವನ್ನೂ ಇನ್ನೂ ಉತ್ತಮವಾಗಿ ಮಾಡಲು ರಮೇಶ್ ಬಾಬೂ ಪ್ರಯತ್ನಿಸಿದ್ದರೆ ಮಾಸ್ ಜೊತೆಗೆ ಕ್ಲಾಸ್ ಜನರನ್ನು ಸೆಳೆಯಬಹುದಿತ್ತು.
ಮಾಸ್ಗೆ ಬೇಕಾಗಿರುವ ಎಲ್ಲ ಮಸಾಲೆ ಅಂಶಗಳನ್ನೂ ಒಳಗಿರಿಸಿಕೊಂಡು, ಸಂಪೂರ್ಣ ವಿಜಯ್ ತಾಕತ್ ಹಾಗೂ ದಾಢಸಿತನದ ಮೇಲೆ ಹೊರಬಂದಿರುವ ಶಂಕರ್ ಐಪಿಎಸ್ ವಿಜಿ ಅಭಿಮಾನಿಗಳಿಗೆ ಹಬ್ಬದೂಟ ನೀಡುತ್ತದೆ.

ವಿನಯ್ ದಂಟಕಲ್

Saturday, May 22, 2010

ಕ್ಲಾಸಿಕ್ ಸಿನೆಮಾ

ನಗಿಸುತ್ತಲೇ ಅಳಿಸುವ
ಮೇರಾ ನಾಮ್ ಜೋಕರ್

ನಿರದೆಶಕ : ರಾಜ್ ಕಪೂರ್
ನಿರಮಾಪಕ : ರಾಜ್ ಕಪೂರ್
ಕಥೆ : ಕೆ. ಏ. ಅಬ್ಬಾಸ್
ಸಂಗೀತ : ಶಂಕರ್ ಜೈಕಿಷನ್
ಸಂಕಲನ : ರಾಜ್ ಕಪೂರ್
ಚಿತ್ರ ಬಿಡುಗಡೆ : 18 ಡಿಸೆಂಬರ್ 1970

ಮೇರಾ ನಾಮ್ ಜೋಕರ್ ಹಿಂದಿ ಚಿತ್ರರಂಗದ ಪ್ರಸಿದ್ದ ಚಲನಚಿತ್ರಗಳಲ್ಲೊಂದು. ರಾಜ್ ಕಪೂರ್ ಎಂಬ ವಿಶಿಷ್ಟ, ವಿಚಿತ್ರ ಹಾಗೂ ವಿಲಕ್ಷಣ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಚಿತ್ರ ಮೇರಾ ನಾಮ್ ಜೋಕರ್. 
ಮೂರು ಭಾಗಗಳಲ್ಲಿರುವ ಈ ಚಿತ್ರ ರಾಜು ಎಂಬ ಜೋಕರ್ ಬದುಕಿನ ಮೂರು ಕಾಲಘಟ್ಟಗಳನ್ನು ವಿವರಿಸುತ್ತದೆ. ಮೊದಲ ಭಾಗದಲ್ಲಿ ಯುವ ರಾಜೂ (ರಿಷಿ ಕಪೂರ್) ತನ್ನ ಶಿಕ್ಷಕಿ ಮೇರಿ (ಸಿಮಿ ಅಗರವಾಲ್)ಯ ಆಕರ್ಷಣೆಗೆ ಒಳಗಾದರೆ ಎರಡನೇ ಭಾಗದಲ್ಲಿ ರಾಜೂ (ರಾಜ್ ಕಪೂರ್) ಜೆಮಿನಿ ಸರ್ಕಸ್ನ ಪಾತ್ರಧಾರಿ ರಷ್ಯಾದ ಮರೀನಾ (ಕ್ಷೇನಿಯಾ ರ್ಯಾರಬೆಂಕಿನಾ)ಳನ್ನು ಪ್ರೀತಿಸುತ್ತಾನೆ. ಈ ಭಾಗ ಹೆಚ್ಚು ತಮಾಷೆಯಿಂದ ಕೂಡಿದ್ದು ನೋಡುಗರ ಹೊಟ್ಟೆ ಹುಣ್ಣಾಗಿಸುತ್ತದೆ. ಮೂರನೇ ಭಾಗದಲ್ಲಿ ರಾಜೂ, ಮೀನಾ(ಪದ್ಮಿನಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಚಿತ್ರನಟಿಯಾಗುವ ಕನಸನ್ನು ಹೊಂದಿದ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ರಾಜುವನ್ನು ಬಳಸಿಕೊಂಡು ನಂತರ ಆತನನ್ನು ಮರೆತು ಬಿಡುತ್ತಾಳೆ. ಕೊನೆಯಲ್ಲಿ ರಾಜು ಏನಾಗುತ್ತಾನೆ ಎಂಬುದು ಚಿತ್ರದ ಕಥೆ. ರಿಷಿ ಕಪೂರ್ಗೆ ಇದು ಪಾದಾರ್ಪಣೆಯ ಚಿತ್ರ. ಚಿತ್ರದಲ್ಲಿ ಹಲವು ಅಂಶಗಳು ನೋಡುಗರನ್ನು ಸೆಳೆಯುತ್ತವೆ.
ಜೊಕರ್ ರೀತಿಯ ಗೊಂಬೆ, ಅದರ ಜೊತೆ ರಾಜೂ ಮಾತನಾಡುವುದು, ಸರ್ಕಸ್ ನೋಡುತ್ತಿದ್ದಾಗಲೇ ರಾಜೂನ ತಾಯಿ ಸಾಯುವುದು, ಆಕೆ ಸತ್ತಾಗ ರಾಜೂ ಕಪ್ಪು ಕನ್ನಡಕ ಧರಿಸಿ ಅಳುವುದು, ನಂತರ ದುಃಖದ ನಡುವೆಯೂ ಎಲ್ಲರನ್ನೂ ನಗಿಸುವುದು, ಹಿಂದಿ ಭಾಷೆ ಬರದ ಮರೀನಾಗೆ ತನ್ನ ಪ್ರೇಮ ನಿವೇದನೆ ಮಾಡುವುದು, ಆಕೆ ಹರುಕು ಮುರುಕು ಹಿಂದಿಯಲ್ಲಿ ರಾಜೂನ ತಾಯಿಯ ಜೊತೆ ಮಾತನಾಡುವುದು ಈ ಮುಂತಾದ ದೃಷ್ಯಗಳು ಅತ್ಯಂತ ಸುಂದರವಾಗಿ ಮೂಡಿಬಂದಿದೆ.
ಹಾಡುಗಳು ಈ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಒಂದಕ್ಕಿಂತ ಇನ್ನೊಂದು ಉತ್ತಮವಾಗಿ ಮೂಡಿ ಬಂದಿವೆ. ಮುಖೇಶ್ ಸಿರಿಕಂಠದಲ್ಲಿ ಒಡಮೂಡಿದ `ಜಾನೇ ಕಹಾಂ ಗಯೇ ವೋ ದಿನ್', `ಜೀನಾ ಯಹಾಂ ಮರ್ನಾ ಯಹಾಂ', `ಕಾಟೇ ನಾ ಕಾಟೆ ರೈನಾ', `ಕೆಹ್ತಾ ಹೈ ಜೋಕರ್', ಲತಾ ಮಂಗೇಶ್ಕರ್ ಹಾಡಿದ `ಅಂಗ್ ಲಗ್ ಜಾ ಬಲ್ಮಾ', ಮನ್ನಾ ಡೇ ಹಾಡಿದ ಕಾಮಿಡಿ ಗೀತೆ `ಏ ಭಾಯ್ ಜರಾ ದೇಖೆ ಚಲೋ' ಈ ಮುಂತಾದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ.
ಚಿತ್ರದಲ್ಲಿ ಧರಮೇಂದ್ರ, ಮನೋಜ್ ಕುಮಾರ್, ಧಾರಾ ಸಿಂಗ್, ಅಚಲಾ ಸಚ್ದೇವ್ ಮುಂತಾದವರೂ ನಟಿಸಿದ್ದಾರೆ. 255 ನಿಮಿಷದ ಜಿತ್ರ ನೀಡುಗರಿಗೆ ಬಹಳ ಖುಷಿ ಕೊಡುವ ಚಿತ್ರ. ಸುಮಾರು ನಾಲ್ಕು ತಾಸು ಅರಾಮವಾಗಿ ನೋಡಬಹುದಾದ ಚಿತ್ರ. ಹಿಂದಿ ಚಿತ್ರರಂಗದ ಕ್ಲಾಸಿಕ್ ಸಿನೆಮಾಗಳಲ್ಲಿ ಒಂದೆಂದು ಹೆಸರಾಗಿದೆ.

ವಿನಯ್ ದಂಟಕಲ್

Tuesday, May 18, 2010

ಮರೆತರೂ ಮರೆಯದ ಮೊಘಲ್-ಇ-ಆಝಂ

ಎವರ್ ಗ್ರೀನ್ ಲವ್ ಸ್ಟೋರಿ...

ಮರೆತರೂ ಮರೆಯದ
ಮೊಘಲ್-ಇ-ಆಝಂ

ಚಿತ್ರ ನಿರದೆಶಕ : ಕೆ. ಆಸಿಫ್
ಕಥೆ : ಅಮನ್, ಕೆ. ಆಸಿಫ್, ಕಮಲ್ ಅಮ್ರೋಹಿ, ವಜಾಹತ್ ಮಿರಜಾ, ಎಹಸಾನ್ ರಿಜ್ವಿ
ಸಂಗೀತ : ನೌಶಾದ್
ಚಿತ್ರಬಿಡುಗಡೆ : 5 ಆಗಸ್ಟ್ 1960
ತಾರಾಗಣ : ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ, ದುರ್ಗ ಕೋಟೆ ಮುಂತಾದವರು.

ಹಿಂದಿ ಚಿತ್ರರಂಗದಲ್ಲಿ ಎವರ್ಗ್ರೀನ್ ಲವ್ಸ್ಟೋರಿ ಎಂಬ ಖ್ಯಾತಿ ಪಡೆದುಕೊಂಡಿದ್ದು ಕೆ. ಆಸಿಫ್ ನಿದರ್ೇಶನದ ಮೊಘಲ್-ಇ-ಆಝಂ. 1960ರ ದಶಕದ ಹಿಂದಿ ಚಿತ್ರರಂಗದ ಹಣೆಬರಹವನ್ನು ಬದಲಿಸಿದ ಈ ಚಿತ್ರ ಈಗಲೂ ಪ್ರೇಮಿಗಳ ಪಾಲಿನ ಬೈಬಲ್.
ಹಿಂದಿ ಹಾಗೂ ಉದರ್ು ಭಾಷೆಗಳಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ ಮೊಘಲ್ ಆಳ್ವಿಕೆಯ ಕಾಲದಲ್ಲಿ ನಡೆದ ಅಮರ ಪ್ರೇಮಕಥೆಯನ್ನು ಹೊಂದಿದೆ. ಆಸ್ಥಾನದ ನೃತ್ಯಗಾತಿ ಅನಾರ್ಕಲಿ (ಮಧುಬಾಲಾ)ಯನ್ನು ಮೊಘಲ್ ರಾಜಕುವರ ಸಲೀಂ (ದಿಲೀಪ್ ಕುಮಾರ್) ಪ್ರೇಮಿಸಿ ಮದುವೆಯಾಗಲು ಬಯಸುತ್ತಾನೆ. ಆದರೆ ಸಲೀಂ ಹಾಗೂ ಅನಾರ್ಕಲಿ ಇವರ ಪ್ರೇಮವನ್ನು ಮಹಾರಾಜ ಅಕ್ಬರ್ (ಪೃಥ್ವಿರಾಜ್ ಕಪೂರ್) ವಿರೋಧಿಸುತ್ತಾನೆ. ಸುಖದ ಸುಪ್ಪತ್ತಿಗೆಯಲ್ಲಿ ವಾಸಿಸುವ ದೇಶವನ್ನು ಆಳುವ ಮಹಾರಾಜನ ಮಗನೊಬ್ಬ ಸಾಮಾನ್ಯ ನೃತ್ಯಗಾತಿಯನ್ನು ಮದುವೆಯಾಗುವುದನ್ನು ಅಕ್ಬರ್ ತಡೆಯುತ್ತಾನೆ. ಅಲ್ಲದೆ ಅಕ್ಬರ್ ಅನಾರ್ಕಲಿಯನ್ನು ಜೈಲಿಗೆ ತಳ್ಳುತ್ತಾನೆ. ಸಲೀಂನನ್ನು ಪ್ರೀತಿಸಿದ ಆಕೆಗೆ ಚಿತ್ರಹಿಂಸೆ ನೀಡುತ್ತಾನೆ. ಆದರೂ ಆಕೆ ಸಲೀಂನ ಮೇಲಿನ ಪ್ರೀತಿಯನ್ನು ಮರೆಯುವುದಿಲ್ಲ.
ಕೊನೆಗೊಮ್ಮೆ ಸಲೀಂ ಪಕ್ಕದ ರಾಜ್ಯದ ಜೊತೆಗೆ ನಡೆದ ಯುದ್ಧದಲ್ಲಿ ಸೋಲುತ್ತಾನೆ. ಅಲ್ಲದೆ ಆತನನ್ನು ಗಲ್ಲಿಗೇರಿಸಲು ಮುಂದಾಗುತ್ತಾರೆ. ಆಗ ಅದನ್ನು ತಪ್ಪಿಸುವ ಅನಾರ್ಕಲಿ ಸಲೀಂನ ಬದಲು ತಾನು ಸಾಯಲು ಸಿದ್ಧಳಾಗುತ್ತಾಳೆ. ಕೊನೆಗೆ ಅನಾರ್ಕಲಿ ಬದುಕಿದ್ದಂತೆಯೇ ಆಕೆಯನ್ನು ಗೋರಿಯೊಳಕ್ಕೆ ತಳ್ಳಿ ಗೋಡೆಕಟ್ಟಲಾಗುತ್ತದೆ. ರಾಜಕುವರ ಸಲೀಂನ ಮೇಲಿನ ಪ್ರೀತಿಗಾಗಿ ಸಾಮಾನ್ಯ ನೃತ್ಯಗಾತಿ ತನ್ನ ಜೀವವನ್ನೇ ಬಲಿಕೊಡುತ್ತಾಳೆ.
ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಈ ಮೂವರೂ ನೀಡಿರುವ ಭಾವಪೂರ್ಣ ಅಭಿನಯ ನೋಡುಗರನ್ನು ಸೆಳೆಯುತ್ತದೆ. ಅನಾರ್ಕಲಿ ಹಾಗೂ ಸಲೀಂರ ನಡುವಿನ ಪ್ರೇಮಮಯ ಸನ್ನಿವೇಶಗಳು, ಇಬ್ಬರೂ ಒಬ್ಬರನ್ನೊಬ್ಬರು ಅಗಲಿರುವಾಗಿನ ದೃಶ್ಯಗಳು ಹಾಗೂ ಕ್ಲೈಮ್ಯಾಕ್ಸ್ ಚಿತ್ರದ ವಿಶೇಷತೆಗಳಲ್ಲಿ ಒಂದೆನಿಸಿವೆ. ಚಿತ್ರದಲ್ಲಿನ ಹಾಡುಗಳೂ ಅಷ್ಟೆ. ಒಂದಕ್ಕಿಂತ ಇನ್ನೊಂದು ಚೆನ್ನಾಗಿ ಮೂಡಿಬಂದಿವೆ. ಮೊಹಮ್ಮದ್ ರಫಿ ಹಾಗೂ ಇತರರು ಹಾಡಿದ ಲತಾ ಮಂಗೇಶ್ಕರ್ ಹಾಡಿದ `ಏ ಮೊಹಬ್ಬತ್ ಜಿಂದಾಬಾದ್' ಹಾಗೂ `ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಎಂಬ ಹಾಡುಗಳು ಈಗಲೂ ಜನರನ್ನು ಸೆಳೆಯುತ್ತಿವೆ.
1960ರಲ್ಲಿಯೇ 1 ಕೋಟಿ ಹಣವನ್ನು ಖಚರ್ುಮಾಡಿ ಈ ಚಿತ್ರವನ್ನು ನಿರಮಾಣ ಮಾಡಿದ ಖ್ಯಾತಿ ಆಸಿಫ್ಗೆ ಸಲ್ಲುತ್ತದೆ. ಅತ್ಯಂತ ವೈಭವೋಪೇತವಾಗಿ ಚಿತ್ರೀಕರಣವಾಗಿರುವ ಈ ಚಿತ್ರ ಹಿಂದಿಚಿತ್ರರಂಗದಲ್ಲೊಂದು ಮೈಲಿಗಲ್ಲು ಎಂದೇ ಖ್ಯಾತಿ ಪಡೆದಿದೆ.

Sunday, May 16, 2010

ನೋವು-ನೆರವು ದಾಖಲಾದಾಗ....

ಕಳೆದ ವರ್ಷ ಉತ್ತರ ಕರ್ನಾಟಕ ಹಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ-ನೆರೆಯ ಭೀಕರತೆ ಈಗ ಇತಿಹಾಸ. ಆದರೆ ಸಂಕಷ್ಟಕ್ಕೀಡಾಗಿ ಜೀವನದ ಹಳಿ ತಪ್ಪಿದವರ ಬದಕು-ಬವಣೆ, ಸಮಯದಲ್ಲಿ ಸ್ಪಂದಿಸಿದವರ ಕಾರ್ಯವನ್ನು ದಾಖಲು ಮಾಡುವ ಅಪರೂಪದ ಕೆಲಸ  ರಾಜಧಾನಿಯ ಚ್ರೈತ್ರ ರಶ್ಮಿ ಪ್ರಕಾಶನದಿಂದ ನಡೆದಿದೆ.
ಈ ಪ್ರಕಾಶನ ಸಂಸ್ಥೆ ಹೊರತಂದ `ನೆರೆಯ ನೋವಿಗೆ ಸ್ಪಂದನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ಪುಳಿಯೋಗರೆ ಪಾಯಿಂಟ್ ಕಟ್ಟಡದಲ್ಲಿ ನಡೆದಾಗ, ನೋವಿನ ನೆನಪು ಸಭಿಕರ ಹೃದಯವನ್ನು ಆವರಿಸಿಕೊಂಡಿತೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಈ ಮೂರು ಘಟನಾವಳಿಗಳೇ ತುಣುಕುಗಳೇ ಸಹೃದಯರ ಎದೆತುಂಬಿಬರಲು ಸಾಕಾಗಿತ್ತು.


`ನಮ್ಮ ಹಣಿಬಾರ ಛಂದ ಇಲ್ಲ ಬಿಡ್ರಿ. ತುಸು ಕಾಳು ಪಾಳ ನಿತ್ಯದ ಗಂಜಿಗೆ ಇಟಕೊಂಡಿದ್ವಿ. ಅದೂ ಹೋತು. ಜೀವ ಇದ್ದೂ ಇಲ್ಲದಂಗಾಗೇದ. ನಾವೂ ಹೊಳೆ ನೀರಿನಾಗ ಕೊಚ್ಚಿಕೊಂಡು ಹೋಗಿದ್ರ ಭೇಷಿತ್ತು'.
-----
`ಕುಡಿಯಾಕ ಬೇರೆ ನೀರೇ ಇಲ್ರಿ. ಈ ಪ್ರವಾಹದ ರಾಡಿ ನೀರಲ್ಲೇ ಅನ್ನ-ಸಾರು ಮಾಡ್ತಾರ್ರಿ. ಎಷ್ಟು ದಿನ ಬದುಕ್ತೀವಿ ಅನ್ನಾದು ಆ ದೇವ್ರಿಗೆ ಗೊತ್ತದ...'
----
`ಮಳೀ ಸಂಜೀಕ ಅಥವಾ ರಾತ್ರೀಗ ನಿಲ್ಲಬಹ್ದು ಅಂತಾ ಅಂದ್ಕೊಂಡಿದ್ವಿ. ರಾತ್ರಿ ಮಲಗಿದ ಮ್ಯಾಗ ಮಳಿ ಆರ್ಭಟ ಮತ್ತೂ ಜೋರಾತು. ಡೋಣಿ ಊರೊಳಗ ನುಗ್ತಾ ಐತಿ ಅಂತ ಗೊತ್ತಾತು. ಮನಿಗಳೆಲ್ಲಾ ಕುಸಿಯಾಕ ಹತ್ತಿದ್ವು. ತುಂಬಿದ ಮನಿ ಬಿಟ್ಟು ಹೋಗೋದು ಹ್ಯಾಂಗ ಅಂತ ಚಿಂತಿ ಆತು. ಆದ್ರ ಮೊದಲು ಜೀಂವಾ ಉಳೀಲಿ. ನಂತ್ರ ಮನೀ ಅಂತ ಇದ್ದ ಬದ್ದ ಆಹಾರ, ಅಕ್ಕಿ-ಬ್ಯಾಳಿ ಎಲ್ಲ ಗಂಟು ಕಟಗೊಂಡ ಮನಿಯಿಂದ ಹೊರಗ ಓಡಿದ್ವಿ. ಹತ್ತೇ ನಿಮಿಷಕ್ಕ ಮನೀ ಕೊಚಿಗಂಡು ಹೋತು...'
-------
ಎಸ್. ಎಂ. ಜಾಮದಾರ ಹಾಗೂ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ. ಶ್ರೀ. ಆನಂದ್ ನೆರೆಯ ಸಮಯದಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು. ನೊಂದವರಿಗೆ ಸಹಾಯ ಮಾಡಿದ ಸಾವಯವ ಕೃಷಿ ಮಿಷನ್ನಿನ ಕಾರ್ಯಗಳನ್ನು ವಿವರಿಸಲಾಯಿತು.
ಉತ್ತರ ಕರ್ನಾಟಕದ ಮಂದಿಯ ಆಹಾರ, ಉತ್ಪಾದನೆ, ಬೇಳೆ ಕಾಳು ಬೆಳೆಯುವಿಕೆ, ರೈತಾಪಿ ಕೆಲಸಗಳ ಬಗ್ಗೆ ಆನಂದ್ ಸಾಕಷ್ಟು ಮಾಹಿತಿ ನೀಡಿದರು.
ನೆರೆ ಹಾವಳಿಯಲ್ಲಿ ಸಿಲುಕಿ ಹಲವು ಜನರನ್ನು ರಕ್ಷಿಸಿದ ಬಯಲು ನಾಡಿನ ತಿಮ್ಮಣ್ಣ ಹುಳಸದ್ ಉಪಸ್ಥಿತರಿದ್ದರು. ಪ್ರವಾಹ ಬಂದಾಗ ತಮ್ಮ ಹೊಲ ಹಾಳಾಗುವುದನ್ನೂ ಲೆಕ್ಕಿಸದೇ ಕೆರೆಯ ಕೋಡಿ ಒಡೆದು ಊರನ್ನು ಉಳಿಸಿದ ನೆರೆ ಸಂತ್ರಸ್ಥ ಭೀಮನಗೌಡ ಪಾಟೀಲರು ದೂರದ ಬಾಗಲಕೋಟೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ನೆರೆಯ ಸಂದರ್ಭದಲ್ಲಿ ತಾವು ಹಾಗೂ ಉತ್ತರ ಕರ್ನಾಟಕದ ಜನರು ಅನುಭವಿಸಿದ ನೋವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ `ನೆರೆಯ ನೋವಿಗೆ ಸ್ಪಂದನ' ಪುಸ್ತಕದ ಸಂಪಾದಕ ರಾಮಚಂದ್ರ ಹೆಗಡೆ ಸಿ ಎಸ್ ತಾವು ಉತ್ತರ ಕರ್ನಾಟಕಕ್ಕೆ ನೆರೆ ಸಂತ್ರಸ್ಥರ ಜೊತೆ ಮಾತನಾಡಲು ಹೋದಾಗ ಆದ ಅನುಭವವನ್ನು ಸಭೆಯ ಮುಂದಿಟ್ಟರು.

ಪುಸ್ತಕದ ಬಗ್ಗೆ
`ನೆರೆ ನೋವಿಗೆ ಸ್ಪಂದನ' ಪುಸ್ತಕ ಸಂಪೂರ್ಣವಾಗಿ ನೆರೆ ಸಂತ್ರಸ್ತರ ಜೀವನ ಹಾಗೂ ನೆರೆ ಹಾವಳಿಯ ಭೀಕರತೆಯನ್ನು ತೆರೆದಿಡುತ್ತದೆ. ನೆರೆ ಪೀಡಿತ ಪ್ರದೇಶಗಳಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಅನುಭವಗಳನ್ನು ದಾಖಲಿಸಿದ ರಾಮಚಂದ್ರ ಹೆಗಡೆ ಹಾಗೂ ಅವರ ಬಳಗದ ಕಾರ್ಯ ಮಚ್ಚುವಂತಹದ್ದು. ದಾಖಲಾಗದ ಹಲವು ನೆರೆ ಸಂಗತಿಗಳನ್ನು, ನೆರೆಯ ನೋವಿಗೆ ತಕ್ಷಣವೇ ಸ್ಪಂದಿಸಿದವರ ಮತ್ತು ನೆರೆಯಲ್ಲಿ ಸಿಲುಕಿದ ಜನರನ್ನು ಉಳಿಸಿದ ವ್ಯಕ್ತಿಗಳ ಕಾರ್ಯವನ್ನು ಈ ಪುಸ್ತಕ ವಿವರಿಸುತ್ತದೆ.
ರಾಮಚಂದ್ರ ಹೆಗಡೆ, ಎನ್ವೀ ವೈದ್ಯ ಹೆಗ್ಗಾರ ಅವರ ಲೇಖನ, ಸಂಜಯ ಭಟ್ಟ ಬೆಣ್ಣೆಗದ್ದೆ, ಅರ್ಪಿತಾ ಭಟ್ಟ, ನವೀನ ಗಂಗೋತ್ರಿ, ಪ್ರಿಯಾ ಕಲ್ಲಬ್ಬೆ ಅವರ ಕವನಗಳು ಓದುಗರ ಮನಸ್ಸಿಗೆ ನಾಟುವ ಈ ಪುಸ್ತಕದ ಬೆಲೆ 20ರೂ. ಮಾನವೀಯ ಉದ್ದೇಶವೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗಿರುವ ಪುಸ್ತಕ ಇದಾಗಿದೆ ಎನ್ನುವುದು ಪ್ರಕಾಶಕರ ನುಡಿ.

 -----------------------------------------------
ವಿ.ಸೂ ..
ಇದು ನೆರೆ ನೋವಿನಲ್ಲಿ ನೊಂದವರ ಕಥೆ..
ನೆರೆಯಲ್ಲಿ ಬಸವಳಿದವರಿಗೆ ಸಮಾಧಾನ ಹೇಳಿದವರ ಕಥೆ..
ಇಂತಹ ಹಲವು ಸಂಗತಿಗಳನ್ನು ಸಂಗ್ರಹಿಸಿದ್ದಾರೆ ರಾಚಮ್ ಅಣ್ಣ..
ಅವರಿಗೆ ಧನ್ಯವಾದ.. 
ಪುಸ್ತಕ ನೆರೆ ನೋವಿಗೆ ಸಿಕ್ಕ ಜನರಿಗೆ ಸಮಾಧಾನ ಹೇಳುತ್ತದೆ..
ಈ ಪುಸ್ತಕದ ಬೆಲೆ ಕೇವಲ ೨೦ ರೂಪಾಯಿಗಳು..
ಇದನ್ನು ಕೊಂಡು ಓದಿರಿ...

-ವಿನಯ ದಂಟಕಲ್

Monday, April 26, 2010

ಸಾನಿಯಾ ಕಾಲಿಟ್ಟೊಡನೆ ಪವರ್ ಕಟ್.., ಗುಟ್ಕಾ ಔಟ್..

ಅಯ್ಯೋ ಪಾಪಾ. ಮೂಗುತಿ ಸುಂದರಿಗೆ ಇಂತಹ ಪಾಡು ಬರಬಾರದಿತ್ತು. ಮೊನ್ನೆಯಷ್ಟೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ನನ್ನು ಮದುವೆಯಾಗಿ ಭಾರತಕ್ಕೆ ಬಾಯ್ ಬಾಯ್ ಹೇಳಿದ ಈಕೆಗೆ ಪಾಕಿಸ್ತಾನದಲ್ಲಿ ದೊರಕಿದ್ದು ಭವ್ಯ ಸ್ವಾಗತ. ಆದರೆ ಅದಾದ ಕೆಲವೇ ದಿನಗಳಲ್ಲಿ ಆಕೆಗೆ ಪಾಕಿಸ್ತಾನದ ಜನರ ಅಸಲಿ ಮುಖದ ಪರಿಚಯವಾಗತೊಡಗಿದೆ.
ಮದುವೆಯ ಔತಣಕೂಟ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನದಲ್ಲಿ ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದ ಶೋಯೆಬ್ ಕುಟುಂಬಕ್ಕೆ ಮೊದಲನೆಯದಾಗಿ ಶಾಕ್ ನೀಡಿದ್ದು ಅಲ್ಲಿನ ವಿದ್ಯುತ್ ಇಲಾಖೆ. ಈ ಕಾರ್ಯಕ್ರಮದಲ್ಲಿ ಅತಿಯಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದರ ಬಗ್ಗೆ ನೋಟಿಸ್ ನೀಡಿದ ಪಾಕ್ ವಿದ್ಯುತ್ ಮಂಡಳಿ ಶೋಯೆಬ್ ಮನೆಯ `ಪವರ್ ಕಟ್' ಮಾಡಿಬಿಟ್ಟಿತು. ಇದರಿಂದ ಪಾಪಾ ಸಾನಿಯಾಗೆ ಅದೆಷ್ಟು ನೋವಾಗಿರಬೇಡ..?
ಪಾಕಿಸ್ತಾನಿಯನನ್ನು ಮನಮೆಚ್ಚಿ ಮದುವೆಯಾಗಿದ್ದಾಗಿದೆ. ಇನ್ನು ಆತನ ಜೊತೆ ಪಾಕಿಸ್ತಾನದಲ್ಲಿ ಆರಾಮವಾಗಿ ಬದುಕಿ ಜೀವಿಸಬಹುದು ಎಂದು ಕನಸು ಕಂಡಿದ್ದ ಆಕೆಗೆ ಈ ಪವರ್ ಕಟ್ ಅಲ್ಲಿನ ವಾಸ್ತವತೆಯ ಪರಿಚಯ ಮಾಡಿಕೊಟ್ಟಿರಬೇಕು.
ಪಾಪ ಇಷ್ಟೇ ಆಗಿದ್ದರೆ ಚೆನ್ನಾಗಿತ್ತು. ಈಗ ಪಾಕ್ನಲ್ಲಿ ಅವಳ ಹೆಸರಿನಲ್ಲಿ ಗುಟ್ಕಾವೊಂದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಆ ಗುಟ್ಕಾದ ಹೆಸರು `ಸಾನಿಯಾ ಭಾಭಿ '. ಅದರ ಜೊತೆಗೆ `72% ಎಕ್ಸ್ಟ್ರಾ ಸ್ಟ್ರಾಂಗ್' ಎಂಬ ಅಡಿಬರಹ ಬೇರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಆ ಗುಟ್ಕಾ ಕಂಪನಿ ಆ ಗುಟ್ಕಾ ಪ್ಯಾಕ್ ಮೇಲೆ `ತಾಜಗೀ ಬರ್ ಹೋ ಅಂಗ್ ಅಂಗ್.... ಜಬ್ ಹೋ ಸಾನಿಯಾ ಭಾಬಿ ಗುಟ್ಕಾ ಸಂಗ್' ಎಂಬ ಬರಹವನ್ನೂ ಮುದ್ರಿಸಿಬಿಟ್ಟಿದೆ.
ಇದರಿಂದ ಬಹಳ ಪರಿಶಾನ್ ಆಗಿರುವ ಸಾನಿಯಾ ಯಾಕಾದರೂ ಭಾರತ ಬಿಟ್ಟೆನೋ ಎಂದು ಕನವರಿಸುತ್ತಿರಬಹುದು...

Thursday, April 22, 2010

ಮಧ್ಯಮ ಶೂರರು...

ಟೆಸ್ಟ್ ಕ್ರಿಕೆಟ್ಗೆ ಅದರದೇ ಆದ ಖದರಿದೆ. ಎಷ್ಟೇ ಹೊಸ ನಮೂನೆಯ ಕ್ರಿಕೆಟ್ ಆಟಗಳು ಬಂದರೂ ಟೆಸ್ಟ್ನ ವೈಭವ ಎಲ್ಲೂ ಸಿಗಲಾರದು. ಟೆಸ್ಟ್ ಆಡುವ ಆಟಗಾರರೂ ಅಷ್ಟೇ. ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲ ರೀತಿಯ ಆಟದ ಶಾಟ್ಗಳನ್ನೂ ಪ್ರದರ್ಶಿಸಿ  ನೋಡುಗರಿಗೆ ಹಬ್ಬದೂಟವನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಟೆಸ್ಟ್ ಕ್ರಿಕೆಟ್ ಹೊಸತನವನ್ನೂ ಹೊಸ ಆಟಗಾರರನ್ನೂ ಹೊಂದಿ ಉತ್ತಮ ರೀತಿಯಲ್ಲಿ ಬದಲಾಗುತ್ತಾ ಬಂದಿದೆ. ಬ್ರಾಡಮನ್, ಗೂಚ್, ಹ್ಯಾಡ್ಲಿ, ಕಪಿಲ್ ದೇವ್, ಸೋಬರ್ರ್ಸ್ ತಹ ಆಟಗಾರರನ್ನು ಕಂಡ ಟೆಸ್ಟ್ ಲಾರಾ, ಸಚಿನ್, ಹೇಡನ್ರಂತಹ ಆಟಗಾರರನ್ನೂ ಕಂಡಿದೆ.
ಇಂದಿನ ದಿನಮಾನದಲ್ಲಿ ಟೆಸ್ಟ್ ಸಹ ಹೊಡೆಬಡೆಯ ಆಟಕ್ಕೆ ಮಾರುಹೋಗುತ್ತಿದೆ. ಸೆಹವಾಗ್, ಯುವರಾಜ್ರಂತಹ ಆಟಗಾರರು ಒಂದು ದಿನದ ಪಂದ್ಯದಂತೆ ಟೆಸ್ಟನಲ್ಲೂ ಹೊಡೆ ಬಡಿ ಆಟ ಆಡಲು ಪ್ರಾರಂಭಿಸಿದ್ದಾರೆ. ಕ್ಲಾಸಿಕ್ ಹಾಗೂ ಸುಂದರ ಆಟದ ಗೂಡು ಎಂದು ಹೆಸರಾಗಿದ್ದ ಟೆಸ್ಟ್ ಈಗ ಅಬ್ಬರದ ಆಟವಾಗಿ ಬದಲಾಗುತ್ತಿದೆ. ಇಂತಹ ಬದಲಾಗುತ್ತಿರುವ ಟೆಸ್ಟ್ ಆಟದಲ್ಲಿ ಕೆಲವರು ಆ ಆಟಗಾರರಿದ್ದಾರೆ. ಹಳೆಯ ಶೈಲಿ, ಬ್ಯಾಟ್ ಬೀಸುವಿಕೆಯನ್ನು ಹೊಂದಿರುವಂತಹ ಆಟಗಾರರು. ದ್ರಾವಿಡ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಚಂದ್ರಪಾಲ್, ಕಾಲಿಂಗ್ವುಡ್ ಮುಂತಾದವರೇ ಈ ಆಟಗಾರರು.
ಇವರ ಶೈಲಿ ಅದೇ ಹಳೆಯ ರೀತಿಯದು. ಬ್ಯಾಟಿಂಗಿಗೆ ಬಂದರಂತೂ ಮಿನಿಮಂ 100 ಗ್ಯಾರಂಟಿ. ಇವರ ಆಟವನ್ನು ನೋಡುವುದೆಂದರೆ ಸುಂದರ ಸಿನೆಮಾ ವೀಕ್ಷಿಸಿದಂತೆ. ಆಟವೂ ಅಷ್ಟೆ ಗಂಭೀರ ಹಾಗೂ ವೈಭವೋಪೇತ. ಈ ಆಟಗಾರರು ಸಾಮಾನ್ಯವಾಗಿ ಕ್ರೀಸಿಗೆ ಬರುವ ವೇಳೆಗೆ ತಂಡದಲ್ಲಿ 3-4 ವಿಕೆಟ್ಗಳು ಬಿದ್ದಿರುತ್ತವೆ. ತಂಡದ ಪಾಲಿಗೆ ಆಪದ್ಭಾಂದವರಂತೆ ಬರುವ ಇವರು ಸೋಲಿನತ್ತ ಸಾಗುವ ತಂಡವನ್ನು ಗೆಲುವಿನೆಡೆಗೆ ತಂದು ನಿಲ್ಲಿಸುತ್ತಾರೆ.
ಈ ಆಟಗಾರರು ಸೆಹವಾಗ್, ಅಫ್ರೀದಿಯಂತೆ ಗುಡುಗುವುದಿಲ್ಲ. ಬದಲಾಗಿ ಕ್ರೀಸಿಗೆ ಕಚ್ಚಿಕೊಂಡು ನಿಂತುಬಿಡುತ್ತಾರೆ. ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾರೆ. ಬೌಲರ್ಗಳ ಬೆವರಿಳಿಸುತ್ತಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ನಿಂದ ತಂಡದ ಭವಿಷ್ಯವನ್ನೇ ಬದಲಾಯಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಆಡುವ ತಂಡಗಳಲ್ಲೆಲ್ಲ ಇಂತಹ ಒಬ್ಬಿಬ್ಬರು ಆಟಗರರು ಇದ್ದೇ ಇರುತ್ತಾರೆ. ದಕ್ಷಿಣ ಆಫ್ರಿಕಾದ ಪಾಲಿಗೆ ಕಾಲಿಸ್, ಆಮ್ಲಾ, ಶ್ರೀಲಂಕಾ ಪಾಲಿಗೆ ಜಯವರ್ಧನೆ, ಆಸ್ಟ್ರೇಲಿಯಾದಲ್ಲಿ ಪಾಂಟಿಂಗ್, ಮೈಕ್ ಹಸ್ಸಿ, ಕ್ಲಾರ್ಕ, ಇಂಗ್ಲೆಂಡ್ನಲ್ಲಿ ಕಾಲಿಂಗ್ವುಡ್, ಪಾಕಿಸ್ತಾನದಲ್ಲಿ ಮೊಹಮ್ಮದ್ ಯುಸುಫ್ ಹಾಗೂ ಮಿಸ್ಬಾ ಉಲ್ ಹಕ್, ವೆಸ್ಟ್ ಇಂಡಿಸ್ ಪಾಲಿಗೆ ಚಂದ್ರಪಾಲ್ ಹಾಗೂ ಭಾರತದ ಪಾಲಿಗೆ ದಿ ವಾಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇಂತಹ ಆಟವನ್ನು ಆಡುತ್ತಾರೆ. ತಂಡದ ಹಾಗೂ ದೇಶದ ಪಾಲಿಗೆ ಇವರು ಬಹಳ ನಂಬಿಕಸ್ತ ಬ್ಯಾಟ್ಸ್ಮನ್ನುಗಳು. ಯಾರೇ ಔಟಾಗಲಿ, ಎಸ್ಟೇ ವಿಕೆಟ್ ಬೀಳಲಿ. ಇವರಿದ್ದಾರಲ್ಲ ಎಂಬ ಭಾವನೆ ಎಲ್ಲರ ಮನದಲ್ಲಿಯೂ ಅಚ್ಚೊತ್ತಿರುತ್ತದೆ. ಇವರು ಎಷ್ಟೇ ಬಾಲ್ಗಳನ್ನು ಹಾಳು ಮಾಡಲಿ, ಎಷ್ಟೇ ಕುಟುಕಲಿ ಅದರ ಹಿಂದೆ ಗೆಲುವಿನ ಉದ್ದೇಶ ಇದ್ದೇ ಇರುತ್ತದೆ.
ಈ ಬ್ಯಾಟ್ಸ್ಮನ್ಗಳ ಎದುರು ಬಾಲ್ ಮಾಡುವುದು ಎಂತಹ ಯಶಸ್ವಿ ಬೌಲರ್ಗೇ ಆದರೂ ಅದು ಬಹಳ ಕಷ್ಟ. ಯಾವುದೇ ರೀತಿಯ ಬೌಲ್ ಹಾಕಲಿ ಇವರದ್ದು ಒಂದೇ ಧ್ಯಾನ ಅದನ್ನು ಕಟ್ ಮಾಡುವುದು ಹಾಗೂ ಅದೇ ರೀತಿ ಬೌಂಡರಿ ಗಳಿಸುವುದು. ದಿನಗಟ್ಟಲೇ ಕ್ರೀಸಿನಲ್ಲಿ ನಿಂತುಬಿಡುವ ಇವರು ಬೌಲರ್ಗಳ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಬೌಲರ್ ಎಷ್ಟೇ ಒದ್ದಾಡಿದರೂ ಇವರ ವಿಕೆಟ್ ಪಡೆಯುವುದು ಮಾತ್ರ ಬಹಳ ಕಷ್ಟ.
ಭಾರತದ ಟೆಸ್ಟ್ ತಂಡವನ್ನೇ ತೆಗೆದುಕೊಂಡರೆ ಇಲ್ಲಿ ಸೆಹವಾಗ್ರನ್ನು ಬೇಗನೆ ಔಟ್ ಮಾಡಬಹುದು, ಸಚಿನ್ನ್ನು ಬೇಗನೆ ಔಟ್ ಮಾಡಬಹುದು, ಇನ್ನುಳಿದಂತೆ ಗಂಭೀರ್ ಯುವರಾಜ್, ಧೋನಿ ಅಂತವರನ್ನೂ ಔಟ್ ಮಾಡಬಹುದು ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಒಮ್ಮೆ ಕ್ರೀಸಿನಲ್ಲಿ ಝಾಂಡಾ ಊರಿದರೆಂದರೆ ಊಹು ಯಾರೆಂದರೆ ಯಾರಬಳಿಯೂ ಅವರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ. ಶತಕಗಳನ್ನು ಹೊಡೆದ ನಂತರವೇ ಅವರು ವಿಕೆಟ್ ಒಪ್ಪಿಸುವುದು. ಅಂತಹ ಆಟದ ವೈಖರಿ ಅವರದ್ದು. ತೀರಾ ಇತ್ತೀಚೆಗೆ ಈ ಇಬ್ಬರೂ ಆಟಗಾರರೂ ತಂಡದಲ್ಲಿ ಆಡದಿದ್ದರಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತಿದ್ದು ನೆನಪಿನಲ್ಲಿ ಇರಬಹುದು. ಕೊನೆಗೆ ಮರು ಪಂದ್ಯದಲ್ಲಿ ಲಕ್ಷ್ಮಣ್ ಶತಕ ಹೊಡೆದು ಮ್ಯಾಚ್ ಗೆದ್ದಿದ್ದು ಯಾವಾಗಲೂ ನೆನಪಿರುತ್ತದೆ.
ಟೆಸ್ಟ್ ಇತಿಹಾಸವನ್ನು ಕೆದಕಿದಾಗ ಇಂತಹ ಆಟಗಾರರು ಬಹಳಷ್ಟು ಜನರಿದ್ದರು. ತಮ್ಮ ಮನಮೋಹಕ ಆಟದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದ ಇವರು ಮ್ಯಾಚುಗಳನ್ನೂ ಸಲೀಸಾಗಿ ಗೆದ್ದುಬಿಡುತ್ತಿದ್ದರು. ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಬ್ರಾಡಮನ್ ಹಾಗೆಯೇ ಬ್ರಿಯಾನ್ ಲಾರಾ, ಇಂಜಮಾಮ್-ಉಲ್-ಹಕ್, ಅಜರ್ುನ ರಣತುಂಗಾ, ಸ್ಟೀವ್ ವಾ ಇಂತವರೆಲ್ಲ ಹೊಡೆ ಬಡಿ ಆಟಕ್ಕಿಂತ ಭಿನ್ನವಾದ ಕ್ರಿಕೆಟ್ ಆಡಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಎಷ್ಟೇ ಸೆಹವಾಗ್, ಅಫ್ರೀದಿ, ಪೀಟರ್ಸನ್, ಸ್ಮಿತ್ರಂತಹ ಆಟಗಾರರು ಬಂದರೂ ಟೆಸ್ಟ್ ಅಂದಕೂಡಲೇ ಇವರು ಪದೆ ಪದೆ ನೆನಪಾಗುತ್ತಾರೆ. ಬಹುಶಃ ಇಂತಹ ಆಟಗಾರರಿಲ್ಲದ ಟೆಸ್ಟ್ ಕ್ರಿಕೆಟ್ನ್ನು ನೋಡಿದರೆ ಮೊದಲಿನ ಖುಷಿ ದಕ್ಕಲಾರದು.


Thursday, April 15, 2010

ಒಂದಷ್ಟು ಹನಿಗಳು...

ಹಿಂದೆ ಯಾವಾಗಲೋ ಬರೆದ ಒಂದೆರಡು ಹನಿ ಕವನಗಳನ್ನು ನಿಮ್ಮ ಮುಂದೆ ಬರೆದು ಇಡುತ್ತಿದ್ದೇನೆ..


9)ಪ್ರೀತಿಗೆ ಕಾರಣ

ಪ್ರಿಯಾ,
ನೀನು 
ನಿನ್ನ ಕೈಯಲ್ಲಿ 
ಫಳ ಫಳನೆ 
ಹೊಳೆಯುತ್ತಿರುವ 
ಚಿನ್ನದ ನೆಕ್ಲೆಸ್ ನಷ್ಟೇ 
ಸುಂದರ......!!!!


10)ಧನ್ವಂತರಿ...!!!

ಧನ್ವಂತರಿ ಧನ್ವಂತರಿ
ರೋಗಗಳೆಲ್ಲ ಓಡಿಹೊಯಿತ್ರಿ..
ಆದ್ರೂ ಮೈ ಮರಿಬ್ಯಾದ್ರಿ,
ಆಗಾಗ್ ಇಲ್ಲಿಗೆ ಬರ್ತಾ ಇರ್ರಿ...!!!

Monday, April 12, 2010

ಅರ್ಜಿಗಿರಿ



ಅರ್ಜಿ ಗಿರಿ

ನಿಮಗೆ ನಮ್ಮೂರಿನಲ್ಲಿರುವ ಅನೇಕ ವಿಶೇಷತೆಗಳ ಬಗ್ಗೆ ಹೇಳಲೇಬೇಕು. ಹಲವು ವೈಶಿಷ್ಟ್ಯ ಹಾಗೂ ವೈಚಿತ್ರ್ಯಗಳು ಇಲ್ಲಿ ತುಂಬಿ ಕಣ್ಣಿಗೆ ರಾಚುತ್ತವೆಯಾದರೂ ಎದ್ದು ಕಾಣುವುದು ಇಲ್ಲಿನ `ಅರ್ಜಿ ಗಿರಿ'.
ಹಲೋ ಒಂದು ನಿಮಿಷ. ನೀವೇನು ಅರ್ಜಿ ಗಿರಿ ಹೆಸರು ಕೇಳಿದ ಕೂಡ್ಲೇ ಇದೇನೋ ಗೂಂಡಾಗಿರಿ, ಗಾಂಧಿಗಿರಿ ಇಂಥವುಗಳ ಸಾಲಿಗೆ ಸೇರುವಂಥದ್ದು ಅಂದ್ಕೊಂಡ್ರಾ? ಅಲ್ಲ.. ಈ ಅರ್ಜಿ ಗಿರಿ ಇವೆಲ್ಲಕ್ಕಿಂತ ಡಿಫರೆಂಟು..
ನಮ್ಮೂರಿನ ಈ ಅರ್ಜಿ ಗಿರಿಯ ಬಗ್ಗೆ ಹೇಳಬೇಕಂದ್ರೆ ರಾಮಾಯಣದ ಹಾಗೇ ಅರ್ಜಿಯಾಯಣ ಎಂಬ ಇನ್ನೊಂದು ಭಾರಿ ಗೃಂಥವನ್ನೆ ಬರೆಯಬೇಕಾಗಲೂ ಬಹುದು. ಅಷ್ಟು ದೊಡ್ಡದು ಅದು..
ಹಿಂದೆ ಎಲ್ಲೋ ಎರಡು ಶತಮಾನಗಳ ಹಿಂದೆ ಊರಿಗೆ ರಸ್ತೆ ಮಾಡಿಸುವ ಮಹದುದ್ದೇಶದಿಂದ ಯಾವುದೋ ಹಿರಿ ತಲೆ ಬ್ರಿಟೀಷ್ ಸಕರ್ಾರಕ್ಕೆ ಕೊಟ್ಟ ಅರ್ಜಿಯಿಂದಲೇ ಈ ಅರ್ಜಿ ಗಿರಿಕಾಂಡ ಪ್ರಾರಂಭವಾಗುತ್ತದೆ. ಈಗಂತೂ ಈ ಅರ್ಜಿ ಗಿರಿಗೆ ಕೈಹಾಕದ ವ್ಯಕ್ತಿಯೇ ಇಲ್ಲ ನಮ್ಮೂರಲ್ಲಿ ಅಂದರೆ ಅದರ ತೀವ್ರಗತಿ ನಿಮಗರ್ಥವಾದೀತು.!!
ಅರ್ಜಿ ಗಿರಿಎಂದರೆ ಬೇರೇನೂ ಅಲ್ಲ.  ಊರಿಗೆ ಯಾವುದೇ ಕೆಲಸವಾಗಬೇಕಾದರಾಗಲಿ, ಕಾರ್ಯಗಳು ಆಗಬೇಕಾದರಾಗಲೀ, ಯಾವುದೋ ಜನಪ್ರತಿನಿಧಿಗೋ, ಅಧಿಕಾರಿಗೋ, ಜಿಲ್ಲಾ ಕಲೆಕ್ಟರಿಗೊ ಗ್ರಾಮ ಪಂಚಾಯತಿ ಮೇಂಬರ್ರಿಗೋ ಅರ್ಜಿ ಗುಜರಾಯಿಸೋದೆ ಆಗಿದೆ.
ಇವರು ಉಳಿದೆಲ್ಲ ವಿಷಯಗಳಲ್ಲಿ ಹೇಗೆಯೆ ಇರಲಿ, ಅರ್ಜಿ ಗಿರಿಯ ವಿಷಯ ಬಂದಾಗ ಪಕ್ಕಾ ಅಹಿಂಸಾ ವೃತಸ್ಥರು. ಮಂದಗಾಮಿಗಳು.. ಇಲ್ಲಿಯವರಿಗೆ ಏನು ಗೊತ್ತಿಲ್ಲದಿದ್ದರೂ ಯಾರ್ಯಾರಿಗೆ ಅರ್ಜಿ ಕೊಟ್ಟರೆ ಹೇಗೆ ಎಂಬ ಸುದ್ದಿ ಗೊತ್ತಿದೆ. ವಿದ್ಯುತ್ ತೊಂದರೆಗೆ ಸೆಕ್ಷನ್ ಆಫೀಸರು, ಬಸ್ಸಿಗೆ ಡಿಪೊ ಮ್ಯಾನೇಜರು, ರಸ್ತೆಗೆ ರಾಜಕಾರಣಿ, ಬರ-ನೆರೆ ಬಂದರೆ ಕಂದಾಯ ಇಲಾಖೆ ಈ ಮುಂತಾದ ಕೆಲವು ವಿಭಾಗದವರಿಗೆ ನಮ್ಮೂರಿಗರ ಹ್ಯಾಂಡ್ ರೈಟಿಂಗಿನ ಪರಿಚಯ ಅದ್ಯಾವಾಗಲೂ ಆಗಿ ಹೋಗಿದೆಯಂತೆ.
ನಿಮಗೆ ಗೊತ್ತಿಲ್ಲ. ಯಾವುದೆ ಊರಿನಲ್ಲಾದರೂ ಎಲ್ಲರಿಗೂ ಸಂಬಂದಿಸಿದಂತೆ ಏನಾದರೊಂದು ಕಾಮನ್ ಸುದ್ದಿ ಇರಲಿಕ್ಕಿಲ್ಲ. ಆದರೆ ಇಲ್ಲಿ ತೊಂಭತ್ತರ ಹಿರಿಯರಾದಿಯಾಗಿ ಒಂಭತ್ತರ ಕಿರಿಯರವರೆಗೂ ಅರ್ಜಿಯೆಂಬ ಕಾಮನ್ ಸಂಗತಿ ಗೊತ್ತೇ ಇದ್ದು ಬಿಟ್ಟಿದೆ. ಪರೀಕ್ಷಿಸಿ ನೋಡಿ ಬೇಕಾದರೆ, ಇಲ್ಲಿಯವರೆಗೂ ನಮ್ಮೂರಿಗರು ಕೊಟ್ಟ ಅರ್ಜಿಗಳನ್ನು ಲೆಖ್ಖ ಹಾಕಿದರೆ, ಗಿನ್ನಿಸ್ಸು ಬುಕ್ಕಿನಲ್ಲಿ ಮೊದಲ ಸ್ಥಾನ ಯಾರ ಪೈಪೋಟಿಯೂ ಇಲ್ಲದೆಯೇ ಇಲ್ಲಿಗರಿಗೆ ದಕ್ಕಿಬಿಡುತ್ತದೆ.
ಇಲ್ಲಿ ಯಾರಾದರೂ ಹಿರಿಯರು ಕಿರಿಯರ ಬಳಿ `ತಮಾ, ಪೆನ್ನು  ಪಟ್ಟಿ ತಗೊಂಡು ಬಾ' ಅಂದಕೂಡಲೇ ಊರಿಗರು ಯಾವುದಕ್ಕೋ ಅರ್ಜಿ ಬಿತ್ತು ಎಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಕಿರಿಯರು `ಶುರುವಾಯ್ತು ಅರ್ಜಿ ಕಾಟ' ಎಂದು ಗೊಣಗಲು ಮೊದಲಾಗುತ್ತಾರೆ. ಹಾಗೆಯೇ ಇಲ್ಲಿಯ ಕಿರಿಯರು, ಮಕ್ಕಳು ಸಂಜೆಯ ವೇಳೆ ಬಾಯಿಪಾಠ ಹೇಳಿ ಹೋಂ ವರ್ಕರ್  ಮಾಡದಿದ್ದರೂ ಅರ್ಜಿ ಬರೆಯುವ ಕೆಲಸ ಮಾಡೆಮಾಡುತ್ತವೆ.
ಇಲ್ಲಿಯ ಹೆಂಗಸರೂ ಕೂಡ ಅರ್ಜಿ ಗಿರಿಯ ವಿಷಯದಲ್ಲಿ ಹಿಂದೆ ಬಿದ್ದವರಲ್ಲ. ಅಂತ-ಇಂತ ಯಾವುದೇ ಸ್ತ್ರೀವಾದಿ ಸಂಘಟನೆಗಳು ಇಲ್ಲಿ ಇಲ್ಲದಿದ್ದರೂ ಅವರು ಅರ್ಜಿ ಕೊಡುವ ಕೈಂಕರ್ಯ ಮರೆತಿಲ್ಲ. ಇಲ್ಲಿ ಪುರುಷರು ಅರ್ಜಿ ಕೊಡುವ ಇಲಾಖೆಗಳೇ ಬೇರೆ.. ಅದೇ ರೀತಿ ಸ್ತ್ರೀಯರ ರೂಟೇ ಬೇರೆ. ಪುರುಷರದ್ದು ಬಹುತೇಕ ವ್ಯಾವಹಾರಿಕವಾದರೆ ಸ್ತ್ರೀಮಣಿಗಳು ಸ್ಥಳಿಯ ಶಾಲೆಗೆ, ಆಸ್ಪತ್ರೆಗೆ, ಪತ್ರಿಕೆಗಳಿಗೆಲ್ಲ ಅರ್ಜಿ  ಕೊಡುವ ಕಾರ್ಯವನ್ನು ಮದುವೆ ಮನೆಯಲ್ಲಿ ಕೇರಿ ಕರೆಯುವ ಹಾಗೇ ಹಲವರ ಜೊತೆಗೆ ಸೇರಿ ಕೈಗೊಳ್ಳುತ್ತಾರೆ.
ನಮ್ಮೂರಲ್ಲಿ ಅರ್ಜಿ ಕೊಡುವವರದ್ದು ಒಂದು ಗುಂಪಾದರೆ ಅರ್ಜಿ  ಜಡಿಯುವವರದ್ದು ಮತ್ತೊಂದು ಗುಂಪು. ಇಲ್ಲಿ ಅರ್ಜಿ ಕೊಡುವವರು ಸಮಾಜಸೇವಕರು. ಸ್ವಾರಥರು ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೆಲಸ ಮಾಡುವಂಥವರು. ಆದರೆ ಈ ಅರ್ಜಿ  ಜಡಿಯುವವರು ಇದ್ದಾರಲ್ಲ ಇವರು ಮಾತ್ರ ಪಕ್ಕಾ ಅಡ್ಡ ಪಿಕರ್ಿಗಳು. ಇವರಿಗೆ ಮಾಡಲು ಬೇರೆ ಕೆಲಸವೇ ಇಲ್ಲವೇನೋ ಎಂಬಂತೆ ಇದ್ದು, ಆಗಾಗ ಏನಾದರೂ ಅಡ್ಡ ಅರ್ಜಿ ಗಳನ್ನು ಜಡಿಯುತ್ತಿರುತ್ತಾರೆ. ಇವರ ಕೆಲಸ ಮತ್ತೇನಲ್ಲ, ಏನಾದರೂ ಆಗುವಂಥ ಕೆಲಸಗಳಿದ್ದರೆ ಅವು ಆಗದಂತೆ ಮಾಡಿ ಮಜಾ ತೆಗೆದುಕೊಳ್ಳುವುದು.  ಯಾವುದೇ ರಸ್ತೆ ಕಾರ್ಯಗಳಿದ್ದರೆ ಅವನ್ನು ತಡೆಯುವುದು. ಪಕ್ಕದ ಮನೆಯ ಹಸುಗೂಸು ಅಳುತ್ತದೆಂದು ಶಬ್ದಮಾಲಿನ್ಯದ ಕಾರಣ ನೀಡಿ ಗ್ರಾಮ ಪಂಚಾಯ್ತಿಗೆ ತಳ್ಳಿ ಅರ್ಜಿ ಕೊಡುವುದು. ಇಂಥದ್ದೇ ಈ ಮಂದಿಗಳು ನಡೆಸುವ ಪುಂಡರಪೂಟಿಗೆ ಉದಾಹರಣೆಗಳು.
ನಮ್ಮೂರಿನ ಈ ಅರ್ಜಿ ಗಿರಿಯ ಸುದ್ದಿ ಕೇಳಿದ ಯಾವುದೋ ಬುದ್ಧಿಜೀವಿ ಈ ಬಗ್ಗೆ ಅಧ್ಯಯನ ನಡೆಸಲು ಬರುವವರಿದ್ದಾರೆಂಬ ಗಾಳಿ ಸುದ್ದಿ ಬಂದಿದೆ. ಅವರು ಹಾಗೆ ಬಂದರೆಂದರೆ ಖಂಡಿತ ಒಂದು ಪಿ.ಎಚ್.ಡಿ ಸಿಕ್ಕೇ ಸಿಗುತ್ತದೆಂಬುದು ಎಲ್ಲರ ವಾದ.
ನಮ್ಮೂರಿನಲ್ಲಿರುವ ಸೂರಕ್ಕಿ ಸೀತಾರಾಮ ಅಲಿಯಾಸ್ ಶೀತೂಭಾವ, ಉಳಿದ ಎಲ್ಲ ಕೆಲಸಗಳಲ್ಲಿ ಹಿಂದುಳಿದಿದ್ದರೂ ಅರ್ಜಿ  ಕೊಡುವುದರಲ್ಲಿ ಫೇಮಸ್ಸು. ಆದರೆ ಈತ ಇಲ್ಲಿಯವರೆಗೆ ಕೊಟ್ಟ ಅರ್ಜಿ ಯಿಂದ ಒಂದೇ ಒಂದು ಉಪಯೋಗವೂ ಆಗದೆ ಇರುವುದು ವಿಧಿ ವಿಲಾಸವೋ, ದುರಂತವೂ ಗೊತ್ತಾಗದು. ಅಲ್ಲದೇ ಈ ಶೀತೂಭಾವ ಅರ್ಜಿ ಯ ಕುರಿತಾಗಿ `ಅರ್ಜಿ ನಿನ್ನೆ ಇಂದು ನಾಳೆ' ಎಂಬ ಮಹಾನ್ ಪುಸ್ತಕವೊಂದನ್ನೂ ಬರೆಯುತ್ತಿದ್ದಾರೆ. ಇದು ಅರ್ಜಿ ಟ್ರೇನಿಂಗ್ ಕೋರ್ಸ್ಗೆ ಒಳ್ಳೆಯ ಹ್ಯಾಂಡ್ಬುಕ್ ಆದೀತು ಎಂಬುದು ಎಲ್ಲರ ಅನಿಸಿಕೆ. ಇನ್ನೂ ವಿಚಿತ್ರವೆಂದರೆ ಬೆಂಗಳೂರಿನ ಯಾವುದೋ ದೇಸಾಯಿ, ಬಾಬೂ ಮುಂತಾದ ನಿದರ್ೇಶಕರು `ನಮ್ಮ ಪ್ರೀತಿಯ ಅರ್ಜಿ ' ಎಂಬ ಚಲನಚಿತ್ರ ಮಾಡಲು ಮುಂದಾಗಿದ್ದಾರಂತೆ.
ಇಷ್ಟಕ್ಕೇ ನಿಲ್ಲುವುದಿಲ್ಲ ಈ ಅರ್ಜಿ ಗಿರಿಯ ಪ್ರತಾಪ.. ಪ್ರತಿ ಸಲ ಚುನಾವಣೆ ಬಂದಾಗ ಊರೂರಿಗೆ ತೆರಳುವ ಜನಪ್ರತಿನಿಧಿಗಳು ಈ ಊರಿಗೆ ಬರುವುದೇ ಇಲ್ಲ. ಯಾಕಂದರೆ ನಮ್ಮೂರಿನಲ್ಲಿ ತುಂಬಾ ಅರ್ಜಿ ಗಿರಿಯ ಘಾಟಿದೆಯಂತೆ. ಇದು ನಮ್ಮೂರಿನ ಅರ್ಜಿ ಗಿರಿಯ ಪುಂಡರಪೂಟು. ಈಗಿನ ನಮ್ಮೂರಿನಲ್ಲಿ ಅದರ ಘಮಲು ನೋಡಿದರೆ ಕನಿಷ್ಟ ಒಂದೆರಡು ಶತಮಾನಗಳಷ್ಟಾದರೂ ಗಟ್ಟಿಯಾಗಿ ಇಲ್ಲಿ ಅರ್ಜಿ ಗಿರಿ ನಿಲ್ಲಬಹುದೆಂಬ ಗುಮಾನಿಯಿದೆ.
ಅಂದ ಹಾಗೆ ಲೇಟೆಸ್ಟಾದ ಬ್ರೆಕಿಂಗ್ ನ್ಯೂಸ್ ಏನಂದ್ರೆ ನಮ್ಮೂರಿಗರು ಅರ್ಜಿ ಗಿರಿಯ ಟ್ರೇನಿಂಗ್ ಕೋರ್ಸನ್ನು ಪ್ರಾರಂಭಿಸಲು ಮುಂದಾಗಿದ್ದಾರಂತೆ. ಆ ಟ್ರೇನಿಂಗು ಪ್ರಾಕ್ಟಿಕಲ್ಲು ಹಾಗೂ ಥಿಯರಿ ಎರಡೂ ಪ್ರಕಾರಗಳಲ್ಲಿ ಇದೆಯಂತೆ ಎಂಬುದು ಅಚ್ಚರಿ. ಜೊತೆಗೆ ಪೋಸ್ಟಲ್ ಕೋರ್ಸ್ ಕೂಡ  ಇದೆ ಎಂಬುದು ಹುಬ್ಬೇರುವ ಸಂಗತಿ.
ಆದರೆ ನಮ್ಮೂರಿನ ಅರ್ಜಿ ಗಿರಿಯಲ್ಲಿ ದೊಡ್ಡದೊಂದು ದೋಷವಿರುವುದು ನಾಡಿನ ಹೆಮ್ಮೆಯ ಟಿವಿಯೊಂದರ ಲೈವ್ ಆಪರೇಷನ್ನಿನಿಂದ ಬೆಳಕಿಗೆ ಬಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ನಮ್ಮೂರಿಗರು ಬರೆಯುತ್ತಿರುವ ಅರ್ಜಿ ಗಳಲ್ಲಿ ಸರಿಯಾದ ರೀತಿ, ನೀತಿ, ರಿವಾಜು ಇಲ್ಲದಿರುವುದು ಆ ಆಪರೇಷನ್ ಟೀವಿಯಿಂದ ತಿಳಿದುಬಂದಿದೆ. ಅಂದರೆ, ನಮ್ಮೂರಿಗರು ಕೊಡುವ ಅರ್ಜಿಯ ಫಾರಮೆಟು ಉಲ್ಟಾ-ಪಲ್ಟಾ ಆಗಿರುತ್ತದಂತೆ. ಅಲ್ಲದೇ ಅರ್ಜಿ ಗೆ ಉದ್ದನೆಯ ಹಾಳೆಯೂ ಬಳಕೆಯಾಗುತ್ತಿಲ್ಲವಂತೆ.... ಎಂಬುದನ್ನು ನಾನು ಯಾವುದೋ ಇಲಾಖೆಯ ಮುಖ್ಯಸ್ಥರ ಮೂಲಕ ತಿಳಿದೆ.
ನನಗೂ ಒಮ್ಮೆ ಈ ಅರ್ಜಿ ಗಿರಿಯ ರೋಗ ಹಿಡಿದಿತ್ತು.. ಯಾರ್ಯಾರೋ ಕೆಳಿಕೊಂಡರೆಂದು ಅರ್ಜಿ  ಬರೆದೂ ಬರೆದೂ ಬೆವರು ಸುರಿಸಿದ್ದೆ.,. ಕೊನೆಗೊಮ್ಮೆ ಅರ್ಜಿ ಬರೆಯುವುದರ ವಿರುದ್ಧ ಒಂದು ದಿನ ಟ್ಯೂಬ್ಲೈಟ್ ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಜ್ಞಾನೋದಯವಾದ ಮೇಲೆ ಬಿಟ್ಟುಬಿಟ್ಟೆ.!!!
ಇಂತಿಪ್ಪ ಅರ್ಜಿ ಗಿರಿ ನಿಮ್ಮಲ್ಲಿಗೂ ಬಂದು ಕಾಲಿಟ್ಟೀತು.. ಅಂದಹಾಗೆ ಅಜಿ ಬರೆಯುವುದಕ್ಕೆ ನೀವೂ ಉತ್ಸುಕರಾಗಿದ್ದೀರಾ? ನಿಮಗೆ ಅರ್ಜಿ ಬರೆಯಲು ಟ್ರೇನಿಂಗು ಬೇಕಾ? ಹಾಗಾದ್ರೆ ಯಾಕೆ ತಡ? ಈಗಲೇ ಅರ್ಜಿ ಗಿರಿಯ ಪೋಸ್ಟಲ್ ಟ್ರೇನಿಂಗ್ ಕೋರ್ಸ್ಗೆ ಸೇರ್ರಲಾ...

-ವಿನಯ್ ಹೆಗಡೆ