Friday, July 16, 2021

ಇರುವುದೆಲ್ಲವ ಬಿಟ್ಟು... (ಕಥಾ ಸರಣಿ ಭಾಗ-5)

(2014 ರಲ್ಲಿ ಬರೆದಿದ್ದ, ವಾಣಿ-ವಿನಾಯಕರ ಪ್ರೇಮ ಕಥೆಯ ಮುಂದುವರಿದ ಭಾಗ.. )


 `ವಾಣಿ..ತಮ್ಮಂಗೆ ಉಪನಯನ ಮಾಡನ..' ಎಂದು ಸುಧೀಂದ್ರ ಹೇಳಿದ್ದಕ್ಕೆ ಸುಮ್ಮನೆ ತಲೆ ಅಲ್ಲಾಡಿಸಿ ಹೂಂ ಅಂದಿದ್ದಳು ವಾಣಿ.

ಅದಾಗಿ ಕೆಲವೇ ದಿನಗಳಲ್ಲಿ ಸುಧೀಂದ್ರ ಎಲ್ಲ ತಯಾರಿಗಳನ್ನೂ ಆರಂಭಿಸಿದ್ದ. ಉಪನಯನದ ದಿನಾಂಕವನ್ನೂ ತನ್ನ ಪುರೋಹಿತ ಭಟ್ಟರ ಬಳಿ ಕೇಳಿಸಿಕೊಂಡು ಬಂದಿದ್ದಲ್ಲದೇ ಉಪನಯನದ ಕಾರ್ಡನ್ನೂ ಮುದ್ರಿಸಿಯಾಗಿತ್ತು.

`ನಿನ್ನ ಬಳಗದವರನ್ನೂ ಉಪನಯನಕ್ಕೆ ಕರೆಯಲೆ ಶುರು ಮಾಡಿದ್ಯಾ..?' ಎಂದು ಸುಧೀಂದ್ರ ಕೇಳಿಯೂ ಆಗಿತ್ತು. ಆಗ ವಾಣಿಗೆ ಮೊದಲು ನೆನಪಾಗಿದ್ದೇ ವಿನಾಯಕ.

ಸುಧೀಂದ್ರನ ಜೊತೆಗೆ ಮದುವೆಯಾಗಿ ಮಗನೂ ಹುಟ್ಟಿ ಇದೀಗ ಉಪನಯನದ ಸಮಯ ಬರುವ ವೇಳೆಗೆ ಜಗತ್ತು ಅದೆಷ್ಟೋ ಬದಲಾವಣೆಯನ್ನು ಹೊಂದಿತ್ತು. ಜಗತ್ತಿನ ಓಟಕ್ಕೆ ತಕ್ಕಂತೆ ಶಿರಸಿಯೂ ಕೂಡ ಆಧುನಿಕತೆಯ ಜಾಲದೊಳಕ್ಕೆ ಸಿಲುಕಿಯಾಗಿತ್ತು. ಹಳೆಯ ಹಂಚಿನ ಮನೆಗಳೆಲ್ಲ ಸಿಮೆಂಟಿನ ಕಟ್ಟಡಗಳಾಗಿ ಬದಲಾಗಿದ್ದವು. ಎಲ್ಲ ಕಟ್ಟಡಗಳಿಗೂ ಕಪ್ಪು ಬಣ್ಣದ, ಬಿಸಿಲು ನಿರೋಧಕ ಗಾಜುಗಳ ಅಳವಡಿಕೆಯಾಗಿತ್ತು. ಎರಡು ಮಹಡಿಯ ಮನೆಗಳ ಬದಲಾಗಿ ನಾಲ್ಕು-ಐದು ಮಹಡಿಗಳ ಕಟ್ಟಡಗಳು ತಲೆ ಎತ್ತಿ, ಗಗನದ ಕಡೆಗೆ ಮುಖ ಮಾಡಿದ್ದವು.

ತಾಸಿಗೆ ಒಂದು ಬಸ್ಸು ಓಡಾಡುತ್ತಿದ್ದ ಕಡೆಗಳಲ್ಲೆಲ್ಲ ಐದು-ಆರು ಬಸ್ಸುಗಳು ಓಡಾಡತೊಡಗಿತ್ತು. ಅಷ್ಟೇ ಅಲ್ಲದೇ ಮನೆ ಮನೆಗೊಂದು ಬೈಕು-ಕಾರು ಸವರ್ೇಸಾಮಾನ್ಯ ಎನ್ನುವಂತಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಮಲೆನಾಡು ಇನ್ನೊಂದು ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಿತ್ತು.

ಮಲೆನಾಡಿನ ಮನೆ-ಮನಗಳನ್ನು ಬೆಸೆದಿದ್ದ ಅಂಚೆ ಇದೀಗ ಬಹುಜನರ ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು. ಪತ್ರ ಸಂಸ್ಕೃತಿಯನ್ನು ಹುಟ್ಟಹಾಕಿದ್ದ ಅಂಚೆಯ ಮೂಲಕ ಇದೀಗ ಯಾವುದೇ ಪತ್ರಗಳ ವಿನಿಮಯ ಇಲ್ಲ ಎನ್ನುವಂತಾಗಿತ್ತು. ವಾರಕ್ಕೊಮ್ಮೆಯೋ, ಹತ್ತು ದಿನಗಳಿಗೆ ಒಮ್ಮೆಯೋ ಮನೆ ಅಂಗಳಕ್ಕೆ ಬಂದು ಪತ್ರ ಬಂದಿದೆ ಎನ್ನುವ ಅಂಚೆಯ ಅಣ್ಣ ನಾಪತ್ತೆಯಾಗಿದ್ದ. ಎಲ್ಲೋ ಅಪರೂಪಕ್ಕೊಮ್ಮೆ ಸೊಸೈಟಿಯ ಅಢಾವೆ ಪತ್ರಿಕೆಯೋ, ಇನ್ಯಾವುದೋ ನೋಟಿಸು ಸರಬರಾಜಿಗೆ ಮಾತ್ರ ಅಂಚೆಯ ಅಣ್ಣ ಸೀಮಿತವಾಗಿದ್ದ. ಪತ್ರ ವಿನಿಮಯದ ಜಾಗದಲ್ಲೀಗ ಮೊಬೈಲ್ ಎಂಬ ಮಾಯಾ ರಾಕ್ಷಸ ಫೆವಿಕಾಲ್ ಅಂಟಿಸಿಕೊಂಡು ಕುಳಿತಿದ್ದ.

ಮಾಯಾವಿ ಮೊಬೈಲ್ ಕೂಡ ಮಲೆನಾಡಿನಲ್ಲಿ ಸುಮ್ಮನೆ ಬರಲಿಲ್ಲ. ಮೊದ ಮೊದಲ ದಿನಗಳಲ್ಲಿ ಬಿಸ್ಸೆನ್ನೆಲ್ ಮೂಲಕ ಬಂದವನು ಸಿಮ್ ಕಾಡರ್ಿಗಾಗಿ ಉದ್ದುದ್ದದ ಸರತಿ ಸಾಲಿನಲ್ಲಿ ಜನರನ್ನು ನಿಲ್ಲಿಸಿದ್ದ. ಶಿರಸಿ ನಗರದಲ್ಲಿ ಒಂದೋ ಎರಡೋ ಟವರ್ ಮೂಲಕ ಜನರನ್ನು ಬೆಸೆಯಲು ಆರಂಭಿಸಿದ ಮೊಬೈಲ್ ಮಾಯಾವು ನಂತರದ ದಿನಗಳಲ್ಲಿ ಹಳ್ಳಿ ಹಳ್ಳಿಗಳ ಕಡೆಗೂ ಮುಖ ಮಾಡಿದ್ದ. ಬಿಸ್ಸೆನ್ನೆಲ್ ಜೊತೆ ಜೊತೆಯಲ್ಲಿಯೇ ಖಾಸಗಿ ಮೊಬೈಲ್ ಕಂಪನಿಗಳೂ ಬಂದವು. ಅಗ್ಗದ ದೂರವಾಣಿ ಕರೆಗಳ ಜೊತೆಗೆ ಅಗ್ಗದ ಇಂಟರ್ನೆಟ್ ಕೂಡ ನೀಡಲು ಆರಂಭಿಸಿದ್ದವು. ಮೊಬೈಲ್ ಎನ್ನುವ ಮಾಯಾವುಯನ್ನು ಅಂಗೈನಲ್ಲಿ ಹಿಡಿದಿದ್ದ ಮಲೆನಾಡಿನ ಮಂದಿ ತಮ್ಮನ್ನು ತಾವು ಬದಲಾವಣೆಗೆ ಒಗ್ಗಿಸಿಕೊಂಡಿದ್ದರು. ಸದ್ದಿಲ್ಲದೆ ಪತ್ರ ಬರೆಯುವ ಸಂಸ್ಕೃತಿ ಮಾಯವಾಗಿತ್ತು.

ಪತ್ರವನ್ನು ಬರೆದು ಪೋಸ್ಟ್ ಮಾಡುತ್ತಿದ್ದ ದಿನಗಳೇ ಚನ್ನಾಗಿತ್ತಲ್ಲವಾ ಎಂದುಕೊಂಡಳು ವಾಣಿ. ಆ ದಿನಗಳಲ್ಲಿ ಪತ್ರ ಬರೆದು ಪೋಸ್ಟ್ ಮಾಡಿ, ಅದಕ್ಕೆ ತಿಂಗಳುಗಳ ವರೆಗೆ ಉತ್ತರ ಬರುವುದನ್ನೇ ನಿರೀಕ್ಷೆ ಮಾಡುತ್ತಿದ್ದ ದಿನಗಳು ಎಷ್ಟು ಹಸುರಾಗಿದ್ದವಲ್ಲವಾ ಎಂದುಕೊಂಡಳು ಅವಳು. ಪತ್ರ ಅದೆಷ್ಟೋ ಮನಸ್ಸುಗಳನ್ನು ಬೆಸೆದಿತ್ತು ಅಲ್ಲವೇ. ಪತ್ರ ಬರೆಯುತ್ತಿದ್ದ ದಿನಗಳ ಪ್ರೀತಿಗೆ ಅದಷ್ಟು ಪಾವಿತ್ರ್ಯತೆ ಇತ್ತು ಅಲ್ಲವೇ ಎಂದುಕೊಂಡಳು ವಾಣಿ. ಈಗಿನ ಪ್ರೀತಿ ಹಾಗೆ ಅಲ್ಲವೇ ಅಲ್ಲ. ಮೊಬೈಲ್ ನಲ್ಲಿ ಹುಟ್ಟಿ, ಚಾಟಿಂಗ್ ನಲ್ಲಿ ಬೆಳೆದು ಡೇಟಿಂಗ್ ನಲ್ಲಿ ಅಂತ್ಯವಾಗಿಬಿಡುತ್ತವೆ ಎಂದು ನಿಟ್ಟುಸಿರು ಬಿಟ್ಟಳು. ಈಗೆಲ್ಲ ಪ್ರೀತಿ ಹುಟ್ಟಿದ ತಾಸು ಘಳಿಗೆಯಲ್ಲಿಯೇ ಅದನ್ನು ನಿವೇದನೆ ಮಾಡಿಕೊಂಡು ಬಿಡುತ್ತಾರೆ. ಆದರೆ ಆಗ ಹಾಗಿರಲಿಲ್ಲ. ಒನ್ ವೇ ಲವ್ ಆಗಿದ್ದರೂ ಅದನ್ನು ಹೇಳಿಕೊಳ್ಳಲು ವರ್ಷಗಟ್ಟಲೆ ಕಾದಿದ್ದು, ಪರಿತಪಿಸಿದ್ದು ಇರುತ್ತದಲ್ಲ. ಹೇಳಿಕೊಳ್ಳಲಾಗದೆಯೇ ಪ್ರೀತಿ ಸತ್ತು ಹೋಗಿರುವ ನಿದರ್ಶನ ಇದೆಯಲ್ಲ ಎಂದುಕೊಂಡಳು. ತನ್ನದೂ ಹಾಗೆಯೇ ಆಗಿತ್ತಲ್ಲವಾ ಎಂದು ನಿಟ್ಟುಸಿರು ಬಿಟ್ಟಳು.

ಗಂಡ ಸುಧೀಂದ್ರ ತನಗಾಗಿಯೇ ಒಂದು ಮೊಬೈಲ್ ತಂದುಕೊಟ್ಟಿದ್ದ. ನಂತರ ತನ್ನನ್ನು ಕಾಲೇಜು ದಿನಗಳ ಗೆಳೆಯರ ವಾಟ್ಸಾಪ್ ಬಳಗಕ್ಕೆ ಗೆಳತಿಯರು ಸೇರಿಸಿದ್ದರು. ಅಲ್ಲೆಲ್ಲ ಆಕೆ ವಿನಾಯಕನನ್ನು ಹುಡುಕಿದ್ದಳು. ಆ ಗುಂಪಿನಲ್ಲಿ ವಿನಾಯಕ ಕಂಡಿದ್ದನಾದರೂ, ಒಂದೇ ಒಂದು ಮೆಸೆಜ್ ಮಾಡಿರಲಿಲ್ಲ. ವಿನಾಯಕ ಸಂಪೂರ್ಣವಾಗಿ ಬದಲಾಗಿರಬಹುದೇನೋ ಎಂದುಕೊಂಡಿದ್ದಳು ವಾಣಿ. ಮದುವೆಯಾಗಿ ಮಕ್ಕಳ ಜೊತೆ ಖುಷಿಯಾಗಿರುವ ವಿನಾಯಕನಿಗೆ ತನ್ನ ನೆನಪೂ ಇರಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದಳು.

   ಸುದೀರ್ಘ ಬಂಧ ಬೆಳೆಯುವುದಕ್ಕೆ ಸಣ್ಣ ನೆಪ ಸಾಕಾಗುತ್ತದೆ. ವಾಣಿಗೂ ಕೂಡ ಆಗಾಗ ವಿನಾಯಕನನ್ನು ಮಾತನಾಡಿಸಬೇಕು ಎನ್ನುವ ಆಸೆ ಆಗುತ್ತಲೇ ಇತ್ತು. ಆದರೆ ತಾನಾಗಿಯೇ ಮಾತನಾಡಿಸಿದರೆ ವಿನಾಯಕ ಮಾತನಾಡಬಹುದೇ? ಗೊತ್ತಿಲ್ಲದವರಂತೆ ನಡೆದುಕೊಳ್ಳಬಹುದೇ? ತಾನಾಗಿ ಮಾತನಾಡಿಸಿ ಅವಮಾನ ಮಾಡಿಸಿಕೊಳ್ಳಬೇಕೇ? ಸುಮ್ಮನೆ ಇದ್ದು ಬಿಡಲೇ? ಹೀಗೆ ಹಲವು ತಳಮಳ ತೊಳಲಾಟಗಳಲ್ಲಿ ಒದ್ದಾಡಿದ್ದಳು. ವಿನಾಯಕನನ್ನು ಮಾತನಾಡಿಸಲು ಇದೀಗ ನೆಪ ಒಂದು ಸಿಕ್ಕಂತಾಗಿತ್ತು.

   `ಹಾಯ್ ವಿನಾಯಕ, ಹೇಂಗಿದ್ದೆ? ನಾನು ವಾಣಿ..' ವಾಟ್ಸಾಪ್ ನಲ್ಲಿ ಹೀಗೆ ಮೆಸೇಜ್ ಮಾಡಿದ್ದ ವಾಣಿ, ತನ್ನ ಮೆಸೇಜಿಗೆ ಪ್ರತ್ಯುತ್ತರ ಬರುವ ವರೆಗೂ ಪಟ್ಟ ತಳಮಳ ಅಷ್ಟಿಷ್ಟಲ್ಲ. ನಿಮಿಷ ನಿಮಿಷಕ್ಕೂ ಮೊಬೈಲ್ ನೋಡುತ್ತಾ, ವಾಟ್ಸಾಪ್ ತೆರೆಯುತ್ತಾ, ಕುಂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ ಒದ್ದಾಡಿದ್ದಳು. ಚಡಪಡಿಸಿದ್ದಳು. ಕೊನೆಗೂ ಒಮ್ಮೆ ಉತ್ತರ ಬಂದಿತ್ತು. `ಹಾಯ್ ವಾಣಿ? ಎಂತ ಆಶ್ಚರ್ಯ. ನಾನು ಚನ್ನಾಗಿದ್ದಿ. ನೀ ಹೇಂಗಿದ್ದೆ?' ವಿನಾಯಕ ಉತ್ತರಿಸಿದ್ದ. ವಾಣಿಗೆ ಆಗ ಒಮ್ಮೆ ಸ್ವರ್ಗವೇ ಅಂಗೈಗೆ ಸಿಕ್ಕಿದೆಯೋ ಅನ್ನಿಸಿತ್ತು. ವಿನಾಯಕ ನನ್ನ ಮರೆತಿಲ್ಲ ಎಂದು ಖುಷಿ ಪಟ್ಟಳು ವಾಣಿ.

ಉಭಯ ಕುಶಲೋಪರಿ ಸಾಂಪ್ರತ ನಡೆದ ಬಳಿಕ ವಾಣಿ ತನ್ನ ಮಗನ ಉಪನಯನಕ್ಕಾಗಿ ವಿನಾಯಕನ್ನು ಕರೆದಳು. ಅದಕ್ಕೆ ವಿನಾಯಕ ಬರುತ್ತೇನೆ ಎಂದೂ ಹೇಳಿದ. ಈ ಎಲ್ಲ ಮಾತುಗಳ ನಂತರ ನಡೆದ ಕ್ಷಣಕಾಲದ ನಿಶ್ಯಬ್ಧ ಅದೆಷ್ಟೋ ಪ್ರಶ್ನೆಗಳನ್ನು ಕೇಳಿತು. ಅದೆಷ್ಟೋ ಉತ್ತರಗಳನ್ನೂ ಹೇಳಿತು.

      ಕಾಲೇಜು ಮುಗಿದ ನಂತರ ನಾನು ಒಮ್ಮೆ ಧೈರ್ಯ ಮಾಡಿ ವಿನಾಯಕನ ಬಳಿ ಹೇಳಿ ಬಿಡಬೇಕಿತ್ತು ಎಂದುಕೊಂಡಳು ವಾಣಿ. ಛೆ ತಾನೇ ಚೂರೇ ಚೂರು ಧೈರ್ಯ ಮಾಡಿದ್ದರೆ ವಿನಾಯಕ ನನ್ನವನಾಗುತ್ತಿದ್ದನಲ್ಲ ಎಂದುಕೊಂಡಳು. ಮರೆತ ವಿನಾಯಕನನ್ನು, ವಿನಾಯಕನ ಜೊತೆಗಿನ ಸಾಂಗತ್ಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಳು ವಾಣಿ.

ಇತ್ತ ವಿನಾಯಕನ ಮನಸ್ಸಿನಲ್ಲಿ ಕೂಡ ತರಂಗಗಳೆದ್ದಿತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವ ಹಾಗೆ ಆಗಿತ್ತು.


(ಮುಂದುವರಿಯುತ್ತದೆ)