Tuesday, March 23, 2010

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು

ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.

* ಸಿ.ಎಸ್. ರಾಮಚಂದ್ರ ಹೆಗಡೆ


"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!

ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!

ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ 'ಯಾಕೆ ನಗುತ್ತಿದ್ದೀರಿ?' ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . 'ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?' ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ 30 ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"

ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.

ಅಂದು 23 ಮಾರ್ಚ್ 1931. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. 'ಈ ದೇಶಕಾಗಿ ಸಾಯಲೂ ಸಿದ್ಧ' ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ 23 ವರ್ಷ, ಸುಖದೇವ್ ಗೆ 27 ವರ್ಷ ಹಾಗೂ ರಾಜಗುರು ಗೆ 25 ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.

ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ 'ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ' ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ 'ನಾನು ಮೊದಲು ನಾನು ಮೊದಲು' ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?

ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.

ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ 23 ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ!






***************************************************
 ಇದು ನಮ್ಮ ರಾಮಚಂದ್ರ ಹೆಗಡೆ ಸಿ. ಎಸ ಅವರು ಬರೆದ ಲೇಖನ..
ಅವರು ದಟ್ಸ್ ಕನ್ನಡ ದಲ್ಲಿ ಬರೆದಿದ್ದರು.. ಅದನ್ನು ನಿಮಗಾಗಿ ಹಾಗೆ ಎತ್ತಿ ಇಟ್ಟಿದ್ದೇನೆ..- ವಿನಯ್

Wednesday, March 17, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು ದಿನ-೧

 ದಿನ-೧..
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ...

ಕೆಲವು ದಿನಗಳ ಹಿಂದೆ ನಾವು ಮಿತ್ರರು ಸೇರಿ ಊಟಿಗೆ ಹೋಗೋಣ ಎಂಬ ಪ್ಲಾನ್ ಹಾಕಿಕೊಂಡೆವು..
ಆ ಪ್ರಕಾರವಾಗಿ ಪೆಬ್ರವರಿ ೧೮ ರಂದು ಸಂಜೆಯ ವೇಳೆಗೆ ರಾಘವ ನ ಜೊತೆ ನಾನು ಹೊರಟೆ..
ನಮ್ಮ ತಂಡದ ಸದಸ್ಯರಾದ ಕಿಟ್ಟು ಹಾಗು ಮೋಹನ ಮೊದಲೇ ಮೈಸೂರು ತಲ್ಲುಪಿದ್ದರು...
ನಾವು ಬೆಂಗಳೂರನ್ನು ಬಿಡುವ ವೇಳೆಗೆ ಬಾನಲ್ಲಿ ಸೂರ್ಯ ಇಳಿಯುತ್ತಿದ್ದ.. ಸಂಜೆ ೫ ಮೀರಿತ್ತು..
ರಾಘವನ ಮೋಟರ್ ಸೈಕಲ್ ಏರಿ ಹೊರಟೆವು.. ಮೈಸೂರಿನ ಕಡೆ ನಮ್ಮ ಪಯಣ ಬಲು ನಿಧಾನವಾಗಿ ಸಾಗಿತು.
ಬಿಡದಿ ಬಳಿ ಏಳನೀರು ಕುಡಿದು ಹೊರಟೆವು.. ಬಾಯಿಯಲ್ಲಿ ಹಳೆಯ ಹಾಡುಗಳಿದ್ದವು..
ಕೆಳವು ಕಡೆ ರಾಘು, ಹಲವು ಕಡೆ  ನಾನು ವಾಹನ ಚಲಾಯಿಸಿದೆ..
ಮೈಸೂರು ರಸ್ತೆಯಂತೂ ವಾಹನಗಳ ಭರಾಟೆಯಿಂದ ಕೂಡಿತ್ತು..
ಅಂತು ಇಂತೂ ಮೈಸೂರು ತಲುಪಿದಾಗ ಸಂಜೆ ೮ ಗಂಟೆ..
ಅಲ್ಲಿನ ಹುಣಸೂರು ಸರ್ಕಲ್ನಲ್ಲಿ ಮಿರ್ತರಿಗಾಗಿ ಕಾದೆವು..
ಕೆಳವು ಸಮಯದ ನಂತರ ಅವರು ಬಂದರು..
ನಂತರ ಕೊಂಚ ಮಾತುಕತೆ ನಡೆಯಿತು..
ಆ ಪ್ರಕಾರವಾಗಿ ನಾವು ರಾತ್ರಿ ಉಳಿಯುವುದು ಗುಂಡ್ಲುಪೇಟೆಯಲ್ಲಿ ಎಂಬ ನಿರ್ಧಾರವಾಯಿತು..
ಇಲ್ಲಿಂದ ನಾವು ಬದಲಾವಣೆ ಮಾಡಿ ಹೊರಟೆವು..
ನಾನು ಮೋಹನನ ಬೈಕ್ ಏರಿದೆ..ರಾಘು ಬೈಕ್ಗೆ ಕಿಟ್ಟು ಬಂದ..
 ರೇಸ್ ಬಾಬಾ ರೇಸ್
ಇಲ್ಲಿ ಮಿತ್ರರು ರೇಸ್ ಗೆ ಬಿದ್ದರು..
ಒಬ್ಬರಿಗಿಂತ ಮತ್ತೊಬ್ಬರು ವೇಗವಾಗಿ ಹೋಗಬೇಕೆಂಬ ತವಕ..
ಅದೆಸ್ತು ವೇಗವಾಗಿ ಸಾಗಿದರೋ..?
ಕೊನೆಗೆ ನಂಜನಗೂಡಿನಲ್ಲಿ ಊಟ ಮಾಡಿದೆವು..
ನಂತರ ಮತ್ತೆ ಮುಂದೆ ಹೊರಟೆವು..
ಇಲ್ಲೂ ಮತ್ತೆ ರೇಸ್..!!!
ಕೊನೆಗೆ ಗುಂಡ್ಲುಪೇಟೆ ತಲುಪುವ ವೇಳೆಗೆ ಆಗಲೇ ಸಮಯ ೧೧ ಆಗಿತ್ತು..
ಎಲ್ಲಿ ಉಳಿಯೋದು ಎಂದು ಚಿಂತಿಸಿದೆವು..
ಕೊನೆಗೆ ಉಳಿಯಲು ಲಾಡ್ಜ್ ಹುಡುಕಿದೆವು..
ಸಿಕ್ಕಿತು.. ಕಡಿಮೆ ಬೆಲೆಗೆ..
ಅಲ್ಲಿ ಸ್ನಾನ ಮಾಡಿ ಮಲಗಿದೆವು..
ಮರುದಿನದ ಪಯಣದ ಕನಸು ಕಣ್ಣಿನಲ್ಲಿತ್ತು....

(ಮುಂದುವರಿಯುತ್ತದೆ...)

Monday, March 15, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು

ಅಲ್ಲಿಗೆ ಹೋಗಿ ಬಂದೆ..
ಮಿತ್ರರ ಜೊತೆಗೆ.. ಬಹು ದಿನಗಳ ಆಸೆ ಇತ್ತು..
ಅಂತೂ ಕೈಗೂಡಿತು..
ನಮ್ಮ ಪ್ರಯಾಣ ಬಹಳ ಚನ್ನಾಗಿತ್ತು..
ಮೊದಲು ಬೆಂಗಳೂರಿನಿಂದ ಮೈಸೂರು, ನಂತರ ಬಂಡೀಪುರ, ಊಟಿ, ಗುದಳುರಿಗೆ ತೆರಳಿದೆವು...
ನಂತರ ಸುಲ್ತಾನ್ ಬತ್ತೇರಿ ಹಾಗು ಎಡಕ್ಕಲ್ ಗುಡ್ಡಕ್ಕೆ ಸಹ ಹೋಗಿ ಬಂದೆವು...
ಅದರ ವಿವರ ಇನ್ನೊಮ್ಮೆ........

Sunday, March 14, 2010

Yugaadi ...

ಯುಗ ಯುಗಾದಿ ಕಳೆದರು...
ಯುಗಾದಿ ಮರಳಿ ಬರುತಿದೆ...
ನವ ವಸಂತದ ಸಂತಸದ ಯುಗಾದಿ ಮತ್ತೆ ಬಂದಿದೆ..
ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು...

ಜೀವನದಲ್ಲಿ ಸಿಹಿ-ಕಹಿ ಎರಡು ಸಮನಾಗಿ ಇರಬೇಕು ಎಂಬ ತತ್ವ ಸಾರುವ ಯುಗಾದಿ ಮನುಷ್ಯನ ಬದುಕಿನ ಪ್ರಪುಲ್ಲತೆಯ ಸಂಕೇತ...
ಈ ದಿನದ ನೆನಪಿನಲ್ಲಿ ಬದುಕಿನಲ್ಲಿ ಹೊಸ ಹೆಜ್ಜೆ ಇಡೋಣ ಬನ್ನಿ...

ಈ ಖುಷಿ ಗೆ ಒಂದು ಹನಿ ಚುಟುಕ...


8) ಯುಗಾದಿ..

ಯುಗಾದಿ ಎಂದ ಕೂಡಲೇ
ನನಗೆ ನೆನಪಾಗುವುದು 
you ಮತ್ತು ಗಾದಿ...!!!

ಮತ್ತೆ ಸಿಗೋಣ...
ಮತ್ತಸ್ಟು ಹೊಸ ಹುರುಪಿನ ಜೊತೆಗೆ...