Tuesday, June 29, 2010

ಹೆಣ್ಣಿನ ಮಾನಸಿಕ ತುಮುಲದ ಅನಾವರಣ ಶರಪಂಜರ

 ಚಿತ್ರ ಬಿಡುಗಡೆ : ೧೯೭೧ 
ನಿರ್ದೇಶಕ : ಪುಟ್ಟಣ್ಣ ಕಣಗಾಲ್
ಚಿತ್ರಕಥೆ : ಪುಟ್ಟಣ್ಣ ಕಣಗಾಲ್
ಕಥೆ : ತ್ರಿವೇಣಿ
ನಿರ್ಮಾಪಕ : ಸಿ. ಎಸ್. ರಾಜಾ
ಸಂಗೀತ : ವಿಜಯಭಾಸ್ಕರ್
ಛಾಯಾಗ್ರಹಣ : ಡಿ. ವಿ. ರಾಜಾರಾಮ್
ತಾರಾಗಣದಲ್ಲಿ : ಕಲ್ಪನಾ, ಗಂಗಾಧರ್, ಶಿವರಾಮ್, ಲೀಲಾವತಿ ಮುಂತಾದವರು


ಪುಟ್ಟಣ್ಣನವರ ಮೇರು ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಶರಪಂಜರ. ಕಾದಂಬರಿಗಾರ್ತಿ  ತ್ರಿವೇಣಿ ಅವರ ಕಾದಂಬರಿ ಆಧಾರಿತ ಕಥೆಯೇ ಶರಪಂಜರ. ಕಥಾನಾಯಕ ಸತೀಶ್ (ಗಂಗಾಧರ್) ಹಾಗೂ ನಾಯಕಿ ಕಾವೇರಿ (ಕಲ್ಪನಾ) ದಂಪತಿಗಳ ಸುತ್ತ ಹೆಣೆಯಲ್ಪಟ್ಟ ಕಥೆಯೇ ಶರಪಂಜರ. ಪ್ರೇಮ ವಿವಾಹದ ನಂತರ ಕಾವೇರಿ ಬದುಕು ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆ ಎಂಬುದು ಕಥಾವಸ್ತು. ಮದುವೆಯ ನಂತರ ಎಲ್ಲರೀತಿಯ ಸುಖಗಳನ್ನೂ ಅನುಭವಿಸುತ್ತಿರುವ ಹೊತ್ತಿನಲ್ಲಿ ಮದುವೆಗೆ ಮುನ್ನ ನಡೆದ ಘಟನೆಯ ಕಾರಣದಿಂದ ಕಾವೇರಿ ತನ್ನ ಎರಡನೇ ಹೆರಿಗೆಯ ವೇಳೆ ಮಾನಸಿಕವಾಗಿ ಅಸ್ವಸ್ಥಳಾಗುತ್ತಾಳೆ. ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳುತ್ತಾಳೆ. ಆ ನಂತರ ಮನೆ, ಮಗ, ಸಮಾಜ ಆಕೆಯನ್ನು ಯಾವ ರೀತಿ ಕಾಣುತ್ತದೆ, ಆಕೆಯ ಜೊತೆ ಹೇಗೆ ನಡೆದುಕೊಳ್ಳುತ್ತದೆ ಎಂಬುದೇ ಕಥಾ ಹಂದರ. ಗಂಡ ಹಾಗೂ ಮನೆಯ ಸದಸ್ಯರ ಅಸಡ್ಡೆ, ಹಳೆಯ ಘಟನೆ ನೀಡುವ ಮಾನಸಿಕ ತುಮುಲ ಕಾವೇರಿಯನ್ನು ಕಾಡುತ್ತವೆ. ಕೊನೆಯಲ್ಲಿ ಆಕೆ ಈ ಎಲ್ಲ ತೊಂದರೆಗಳಿಂದ ಬಿಡುಗಡೆ ಹೊಂದುತ್ತಾಳೆಯೆ? ಅಸಡ್ಡೆಯಿಂದ ಕಾಣುವ ಗಂಡ ಆಕೆಯನ್ನು ಮತ್ತೆ ಒಪ್ಪಿಕೊಳ್ಳುತ್ತಾನೆಯೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್.
ಕಲ್ಪನಾ ಅಭಿನಯದ ಸರ್ವಶ್ರೇಷ್ಠ ಪ್ರದರ್ಶನವನ್ನು ಚಿತ್ರದಲ್ಲಿ ಕಾಣಬಹುದು. ಮಾನಸಿಕ ವೇದನೆಯನ್ನು ಕಲ್ಪನಾ ಎಂದೂ ಮರೆಯಲು ಸಾಧ್ಯವೇ ಇಲ್ಲದಂತೆ ಕಟ್ಟಿಕೊಡುತ್ತಾಳೆ. ಚಿತ್ರದಲ್ಲಿ ಆಕೆಯ ನಟನೆ ಎಲ್ಲರ ಕಣ್ಣಿನಲ್ಲಿಯೂ ನೀರು ತರಿಸುವಂತಿದೆ. ಮತ್ತೆ ಮತ್ತೆ ಈಕೆ ಬಿಡದೇ ಕಾಡುತ್ತಾಳೆ. ಇಂತಹ ಶ್ರೇಷ್ಠ ಅಭಿನಯ ಆಕೆಗೆ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಸತೀಶನ ಪಾತ್ರದಾರಿ ಗಂಗಾಧರ್, ಅಡುಗೆ ಭಟ್ಟ ಶಿವರಾಂ ಸಹ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳೂ ಅಷ್ಟೆ ಮಧುರವಾದವುಗಳು. ವಿಜಯ್ ಭಾಸ್ಕರ್ ಸಂಗೀತದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿವೆ. `ಕೊಡಗಿನ ಕಾವೇರಿ', `ಹದಿನಾಲ್ಕು ವರ್ಷ ವನವಾಸದಿಂದ..', `ಬಿಳಿಗಿರಿ ರಂಗಯ್ಯ..' `ಸಂದೇಶ ಮೇಘ ಸಂದೇಶ..' ವರಕವಿ ಬೇಂದ್ರೆ ವಿರಚಿತ `ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...' ಈ ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ಈ ಚಿತ್ರದ ನಂತರ ನಟಿ ಕಲ್ಪನಾ ಕನ್ನಡದಲ್ಲಿ ಬಿಡುವಿಲ್ಲದ ನಟಿಯಾದರೆ ನಿದರ್ೇಶಕ ಪುಟ್ಟಣ್ಣ ಕಣಗಾಲ್ ಅತ್ಯುತ್ತಮ ನಿದರ್ೇಶಕ ರಾಜ್ಯ ಪ್ರಶಸ್ತಿ ಲಭಿಸಿತು. ಇಂದಿನ ನಟಿಯರೂ ತಾವು ಶರಪಂಜರದ ಕಲ್ಪನಾರಂತೆ ನಟಿಸಬೇಕು ಎಂದು ಬಯಸುವುದು ಈ ಚಿತ್ರದಲ್ಲಿ ಅವರ ನಟನೆಗೆ ನಿದರ್ಶನ. ಈ ಚಿತ್ರದ ನಂತರ ಕನ್ನಡದಲ್ಲಿ ಅದೆಷ್ಟೋ ಮಾನಸಿಕ ತುಮುಲಗಳನ್ನು ಬಿಂಬಿಸುವ ಚಿತ್ರಗಳು ಬಂದವು. ಆದರೆ ಅವ್ಯಾವವೂ ಈ ಚಿತ್ರದಷ್ಟು ಯಶಸ್ವಿಯಾಗಲಿಲ್ಲ.
ಪುಟ್ಟಣ್ಣ, ಕಲ್ಪನಾ, ವಿಜಯ್ ಭಾಸ್ಕರ್ ಮುಂತಾದ ಮೇರು ಕಲಾವಿದರು, ತಂತ್ರಜ್ಞರ ಶ್ರಮದ ಪರಿಣಾಮ ಶರಪಂಜರ ಮೂರು ದಶಕಗಳ ನಂತರವೂ ಕ್ಲಾಸಿಕ್ ಚಿತ್ರಗಳ, ಕನ್ನಡದ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಒಂದೆನಿಸಿಕೊಂಡಿದೆ.

Monday, June 21, 2010

ಸಕಲಕಾಲಕ್ಕೂ ಸಲ್ಲುವ `ಕಸ್ತೂರಿ ನಿವಾಸ'


ನಿರದೆಶಕರು : ದೊರೈ-ಭಗವಾನ್
ಸಂಗೀತ : ಜಿ. ಕೆ. ವೆಂಕಟೇಶ್
ಚಿತ್ರ ಬಿಡುಗಡೆ : 1971
ಚಿತ್ರಕಥೆ, ಸಂಭಾಷಣೆ : ಚಿ. ಉದಯ್ಶಂಕರ್
ಮೂಲ ಕಥೆ : ಜಿ. ಬಾಲಸುಬ್ರಮಣ್ಯಂ (ತಮಿಳು)
ತಾರಾಗಣದಲ್ಲಿ : ಡಾ. ರಾಜ್ಕುಮಾರ್, ಜಯಂತಿ, ಕೆ. ಎಸ್. ಅಶ್ವಥ್, ಆರತಿ ಮುಂತಾದವರು.

ಕಸ್ತೂರಿ ನಿವಾಸ ಕನ್ನಡ ಚಿತ್ರರಂಗದ ಎಂದೂ ಮರೆಯದ ಚಿತ್ರ. ಹಲವು ವಿಶಿಷ್ಟ ಕಾರಣಗಳಿಂದ ಇದು ಸೆಳೆಯಲ್ಪಡುತ್ತದೆ. ತಮಿಳಿನಲ್ಲಿ ಶಿವಾಜಿ ಗಣೇಶನ್ ಗಾಗಿ ರಚನೆಯಾದ ಕಥೆಯನ್ನು ಅಲ್ಪಸ್ವಲ್ಪ ಮಾರ್ಪಡಿಸಿ ಕನ್ನಡದಲ್ಲಿ ಚಿತ್ರ ನಿರ್ಮಿಸಲಾಗಿದೆ. ಬೆಂಕಿಪೊಟ್ಟಣ ನಿರ್ಮಾಣದ ಕಾರಖಾನೆಯ ಉದ್ಯಮಿಯ ವಿಫಲ ಪ್ರೇಮಕಥೆಯೇ ಕಸ್ತೂರಿ ನಿವಾಸ. ಈ ಕಥೆಗೆ ಶಿವಾಜಿ ಗಣೇಶನ್ ಒಪ್ಪಿಗೆ ನೀಡದ ಕಾರಣ ಕನ್ನಡದಲ್ಲಿ ಕ್ಲಾಸಿಕ್ ಚಿತ್ರವಾಗಿ ಮೂಡಿ ಬಂದಿತು. ಈ ಚಿತ್ರ ಕನ್ನಡದಲ್ಲಿ ತಯಾರಾಗಲು ಚಿತ್ರ ಸಂಭಾಷಣಕಾರ ಚಿ. ಉದಯ್ ಶಂಕರ್, ದೊರೈ ಭಗವಾನ್ ಹಾಗೂ ಡಾ. ರಾಜ್ ಅವರ ಪಾತ್ರ ಬಹಳ ದೊಡ್ಡದು.
ಕಥಾನಾಯಕ ರವಿ ಅಮೆರಿಕಾದಲ್ಲಿ ಬ್ಯುಸಿನೆಸ್ ಕೋರ್ಸ್  ಮುಗಿಸಿ ಭಾರತಕ್ಕೆ ಮರಳುವ ಉದ್ಯಮಿ. ಭಾರತದಲ್ಲಿ ಆತ ಬೆಂಕಿಪೊಟ್ಟಣ ಕಾರಖಾನೆ ಪ್ರಾರಂಭಿಸುತ್ತಾನೆ. ನಡುವೆಯೇ ತನ್ನ ಕಾರ್ಯದರಷಿ  ಲೀಲಾ(ಜಯಂತಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಆಕೆ ರವಿಯ ಮಿತ್ರ ಚಂದ್ರೂನನ್ನು ಕಾರಣಾಂತರಗಳಿಂದ ಮದುವೆಯಾಗುತ್ತಾಳೆ. ರವಿ ಸಹ ಬೇರೊಬ್ಬಳನ್ನು ಮದುವೆಯಾಗುತ್ತಾನೆ. ಅಲ್ಲದೆ ಅಪಘಾತವೊಂದರಲ್ಲಿ ಹೆಂಡತಿ ಹಾಗೂ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆ. ಈ ನಡುವೆ ಲಾಭದ ಹಾದಿಯಲ್ಲಿದ್ದ ಆತನ ಕಾಖರ್ಾನೆ ನಷ್ಟದೆಡೆಗೆ ಮುಖಮಾಡುತ್ತದೆ. ಅದಕ್ಕೆ ಮಿತ್ರ ಚಂದ್ರು ಸಹ ಕಾರಣನಾಗಿರುತ್ತಾನೆ. ಈ ಹಂತದಲ್ಲಿ ಲೀಲಾ ಮತ್ತೊಮ್ಮೆ ಆತನ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಹಚ್ಚಿಕೊಳ್ಳುತ್ತಾನೆ. ಹೀಗೆ ಏರಿಳಿತದ ಬದುಕನ್ನು ಕಾಣುವ ರವಿ ಕೊನೆಯಲ್ಲಿ ಏನಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ.
ರವಿ ಪಾತ್ರಧಾರಿ ರಾಜ್ಕುಮಾರ್ ಮನೋಜ್ಞವಾಗಿ ನಟಿಸಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಮನೆಯ ಕೆಲಸಗಾರನ ಪಾತ್ರದಲ್ಲಿ ನಟಿಸಿರುವ ಅಶ್ವಥ್ರಂತೂ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಜಯಂತಿ, ಆರತಿ ತಕ್ಕಮಟ್ಟಿಗೆ ನಟಿಸಿದ್ದಾರೆ.
ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಅತ್ಯಂತ ಸುಂದರವಾಗಿವೆ. ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡುಗಳು ಜೀವನ ತತ್ವವನ್ನು ಸಾರುವಂತವುಗಳು. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. `ಆಡಿಸಿ ನೋಡು ಬೀಳಿಸಿನೋಡು',`ಆಡಿಸಿದಾತಾ ಬೇಸರಮೂಡಿ', `ಎಲ್ಲೇ ಇರು ಹೇಗೇ ಇರು', `ಆಡೋಣ ನೀನು ನಾನು', `ನೀ ಬಂದು ನಿಂತಾಗ' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. `ಆಡಿಸಿ ನೋಡು ಬೀಳಿಸಿ ನೋಡು' ಹಾಗೂ `ಆಡಿಸಿದಾತಾ ಬೇಸರ ಮೂಡಿ' ಈ ಗೀತೆಗಳು ಜೀವನ ತತ್ವವನ್ನು ಸಾರುತ್ತವೆ.
ಕನ್ನಡದ ಎವರ್ಗ್ರೀನ್ ಚಿತ್ರ ಕಸ್ತೂರಿ ನಿವಾಸವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡಂತಹ ಅನುಭವ. ಎರಡೂ ಮುಕ್ಕಾಲು ತಾಸುಗಳ ಈ ಚಿತ್ರ ವೀಕ್ಷಿಸಿದವರಿಗೆ ನೀಡುವ ಅನುಭವವೇ ಬೇರೆ. `ಕಸ್ತೂರಿ ನಿವಾಸ' ಕನ್ನಡದ ಕಂಪನ್ನು ಕಸ್ತೂರಿಯಂತೆ ಬೀರಿದ ಚಿತ್ರ.

Monday, June 14, 2010

ಬಡ ಕವಿಯ ಭಾವಗೀತೆ ಪ್ಯಾಸಾ

ನಿರದೆಶಕ : ಗುರುದತ್
ನಿರಮಾಪಕ : ಗುರುದತ್
ಕಥೆ : ಅಬ್ರಾರ್ ಅಲ್ವಿ
ಛಾಯಾಗ್ರಹಣ : ವಿ.ಕೆ. ಮೂರ್ತಿ 
ಸಂಗೀತ : ಎಸ್. ಡಿ. ಬರ್ಮನ್
ಚಿತ್ರ ಬಿಡುಗಡೆ : ಫೆಬ್ರವರಿ 19, 1957
ತಾರಾಗಣದಲ್ಲಿ : ಗುರುದತ್, ವಹೀದಾ ರೆಹಮಾನ್, ಮಾಲಾ ಸಿನ್ಹ, ಜಾನಿ ವಾಕರ್, ರೆಹಮಾನ್ ಮುಂತಾದವರು.

ಬಡ ಕವಿಯೊಬ್ಬನ ವಿಫಲ ಪ್ರೇಮ, ಪ್ರೇಮವನ್ನು ಪಡೆಯಲು ಆ ಕವಿ ತೊಳಲಾಡುವುದು, ಪ್ರೇಯಸಿಯ ಮೋಸ ಈ ಮುಂತಾದ ಕಥಾ ಹಂದರವನ್ನಿಟ್ಟುಕೊಂಡು ಸುಂದರ ಚಿತ್ರವನ್ನು ತಯಾರಿಸಿದ್ದಾರೆ ಗುರುದತ್. ಬದುಕಿನಲ್ಲಿ ನೆಲೆ ನಿಲ್ಲಲಾಗದೇ, ಬರೆದ ಕವಿತೆಗಳನ್ನು ಪ್ರಕಟಿಸಲು ಹಣವಿಲ್ಲದೆ ಪರಿತಪಿಸುವ ಕವಿ ವಿಜಯ್ನ ಪಾತ್ರದಲ್ಲಿ ಮೋಹಕ ಅಭಿನಯ ನೀಡಿದ್ದು ಗುರುದತ್. ಈ ಕವಿಯ ಕಾಲೇಜು ದಿನಗಳ ಪ್ರೇಯಸಿಯಾಗಿ ಗುರುದತ್ಗೆ ಮೋಸಮಾಡುವ ಪಾತ್ರ ನಿರ್ವಹಿಸಿದ್ದು ಮಾಲಾ ಸಿನ್ಹಾ. ಈಕೆ ಮಾಡುವ ಮೋಸ ನೋಡುಗರ ಕಣ್ಣಿನಲ್ಲಿ ನೀರು ತರಿಸುತ್ತದೆ.
ಈ ಚಿತ್ರದ ಮುಖ್ಯ ಆಕರ್ಷಣೆ ವಹೀದಾ ರೆಹಮಾನ್. ಈ ಚಿತ್ರ ವಹೀದಾಗೆ ಪಾದಾರ್ಪಣೆಯ ಚಿತ್ರ. ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ಈಕೆ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡುಬಿಡುತ್ತಾಳೆ. ಚಿತ್ರದಲ್ಲಿ ಈಕೆಯದು ಗುಲಾಬೂ ಎಂಬ ವೇಶ್ಯೆಯ ಪಾತ್ರ. ವೇಶ್ಯೆಯಾದರೂ ಈಕೆಗೆ ವಿಜಯ್ನ ಕವನಗಳನ್ನು ಕೇಳುವ ಆಸೆ. ಆತನ ಕವನಗಳನ್ನು ಆಲಿಸುತ್ತಲೇ ವಿಜಯ್ನ ಪ್ರೇಮದಲ್ಲಿ ಬೀಳುತ್ತಾಳೆ. ಆತನ ಕವನಗಳನ್ನು ಪ್ರಕಟಿಸುತ್ತಾಳೆ. ಈ ಸಂದರ್ಭದಲ್ಲಿ ಆತನ ಬದುಕು ವಿಚಿತ್ರ ತಿರುವುಗಳನ್ನು ಪಡೆಯುತ್ತದೆ. ಶ್ರೀಮಂತ ಉದ್ಯಮಿ (ಮಾಲಾ ಸಿನ್ಹಾಳ ಪತಿ) ವಿಜಯ್ನ ಕೊಲೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ವಿಜಯ್ ಬದುಕಿರುವಂತೆಯೇ ಸತ್ತುಹೋಗಿದ್ದಾನೆಂದು ಘೋಷಿಸಲ್ಪಡುತ್ತಾನೆ. ಇದು ಚಿತ್ರದ ಸಾರಾಂಶ. ಚಿತ್ರದ ಕ್ಲೈಮ್ಯಾಕ್ಸ್ ಅತ್ಯುತ್ತಮವಾಗಿ ಮೂಡಿಬಂದಿದೆ.
ಚಿತ್ರದಲ್ಲಿ ಗುರುದತ್ರದ್ದು ಅಮೋಘ ನಟನೆ. ವಿಜಯ್ ಪಾತ್ರವನ್ನು ನಿರ್ವಹಿಸಲು ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬಂತಹ ನಟನೆ ಅವರದ್ದು. ವಹೀದಾ ರೆಹಮಾನ್ ನೋಡುಗರನ್ನು ಸೆಳೆಯುತ್ತಾರೆ. ಗುರುದತ್ನ ಮಿತ್ರನ ಪಾತ್ರದಲ್ಲಿ ನಟಿಸಿರುವ ಜಾನಿವಾಕರ್ ತಮ್ಮ ಕಾಮಿಡಿಯಿಂದ ನಗೆ ಉಕ್ಕಿಸುತ್ತಾರೆ.
`ಜಾನೆ ಕ್ಯಾ ತೂನೆ ಕಹಿ ಭಿ',`ಹಮ್ ಆಪ್ ಕಿ ಆಂಖೋ ಮೇ',`ಜಾನೆ ವೋ ಕೈಸೆ ಲೋಗ್' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಚಿತ್ರಕ್ಕೆ ಸಂಗೀತ ನೀಡಿದ್ದು ಎಸ್. ಡಿ. ಬರ್ಮನ್. ಮೊಹಮ್ಮದ್ ರಫಿ ಹಾಗೂ ಗುರುದತ್ ಅವರಿಂದ ಒಳ್ಳೊಳ್ಳೆಯ ಹಾಡುಗಳನ್ನು ಹಾಡಿಸಿದ ಖ್ಯಾತಿ ಬರ್ಮನ್ಗೆ ಸಲ್ಲುತ್ತದೆ.
ಬಾಲಿವುಡ್ನ ಎಂದೂ ಮರೆಯದ ಚಿತ್ರ ಪ್ಯಾಸಾ. ಎಲ್ಲ ಕಾಲದ ಜನರನ್ನು ಇದು ಸೆಳೆಯುತ್ತದೆ.
 

Thursday, June 10, 2010

ಶಹಬ್ಬಾಸ್ ತಮನ್ನಾ


ಈಯಮ್ಮ ಪರದೆ ಮೇಲೆ ಬಂದರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುತ್ತಾರೆ. ಈಕೆಯ ಸ್ನಿಗ್ಧ ಕಣ್ಣಿಗೆ ಮರುಳಾಗುತ್ತಾರೆ. ಈಕೆಯೂ ಅಷ್ಟೆ ಹುಡುಗರ ಹುಚ್ಚಿಗೆ ಮತ್ತಷ್ಟು ತುಪ್ಪ ಸುರಿದು ಹಾಯ್ ಹೇಳಿ ಹೊರಟು ಬಿಡುತ್ತಾಳೆ.
ಇವಳೇ ತಮನ್ನಾ. ತಮಿಳು, ತೆಲಗು ಮುಂತಾದ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಬಯಸುವ ಹುಡುಗಿ. ನಿಮರ್ಾಪಕರು ಈಕೆಯ ಮನೆಯ ಮುಂದೆ ಕಾಲ್ಶೀಟ್ಗಾಗಿ ಕಾದುಕುಳಿತು ಬಿಡುತ್ತಾರೆ. ಇಂತಹ ತಮನ್ನಾ ವಲಸೆ ಹುಡುಗಿ ಎಂದರೆ ನಂಬಲೇ ಬೇಕು.
ಅಹುದು, ತಮನ್ನಾ ಹುಟ್ಟಿದ್ದು ದೂರದ ಸಿಂಧ್ ಪ್ರಾಂತ್ಯದಲ್ಲಿ. ಈಕೆಯ ತಂದೆ ತಾಯಿಗಳು ಸಿಂಧಿಗಳು. ಹಾಗೆಯೇ ಈಕೆ ಬೆಳೆದಿದ್ದು, ಓದಿದ್ದು, ಅಕ್ಷರಾಭ್ಯಾಸ ಮಾಡಿದ್ದು ಮುಂಬಯಿಯಲ್ಲ. ಆದರೆ ಈಗ ಈಕೆಯ ಪಾಲಿಗೆ ಸಿನಿಮಾ ಜಗತ್ತಿನ ಬಾಗಿಲು ತೆರೆದಿದ್ದು ಹೈದರಾಬಾದ್ ಹಾಗೂ ಚೆನ್ನೈ.
ಸಿಂಧಿಯಾಗಿ, ಹಿಂದಿಯಾಗಿ ಬೆಳೆದ ತಮನ್ನಾ ಈಗ ಪಕ್ಕಾ ತಮಿಳರ ಪೊಣ್ಣು, ತೆಲುಗರ ಪಿಲ್ಲಾ ಆಗಿಬಿಟ್ಟಿದ್ದಾಳೆ. ತೆಲುಗಿನ ಹಾಲಿಡೇಸ್, ತಮಿಳಿನ ಆಯನ್ ಚಿತ್ರಗಳಲ್ಲಿ ನಟಿಸಿ ಭಾರಿ ಹೆಸರು ಮಾಡಿದ ಈಕೆ ಈಗ ತಮಿಳು, ತೆಲಗು ಚಿತ್ರರಂಗದಲ್ಲಿ ತುಂಬಾ ಬ್ಯೂಸಿ. ಆದರೆ ಈ ನಡುವೆ ಈಕೆ ತಮಿಳು ಭಾಷೆಯನ್ನು ಅದು ಹೆಂಗೋ ಕಲಿತು ಬಿಟ್ಟಿದ್ದಾಳೆ.
ಇದರಿಂದ ತಮಿಳು ಮಂದಿಗಳು ಬಹಳ ದಿಲ್ಖುಷ್ ಆಗಿಬಿಟ್ಟಿದ್ದಾರಂತೆ. ತಮನ್ನಾ ತಮಿಳು ಕಲಿತಿರುವುದು ಹಿರಿಯ ನಟಿ ಖುಷ್ಬೂಗಂತೂ ಬಹಳ ಖುಷಿ ಕೊಟ್ಟಿದೆಯಂತೆ. ಇದ್ದರೆ ತಮನ್ನಾ ಹಾಗೆ ಇರಬೇಕು ಎಂದು ಬೆನ್ನು ತಟ್ಟಿರುವ ಖುಷ್ಬೂ ತಮಿಳು ಕಲಿಯದ ಹೀರೊಯಿನ್ಗಳ ಬಗ್ಗೆ ಸಖತ್ ಸಿಟ್ಟಾಗಿದ್ದಾರಂತೆ.
ಇನ್ನೂ ಒಂದು ವಿಶೇಷ ಸುದ್ದಿ ಏನೆಂದರೆ ತಮನ್ನಾ ಇದೀಗ ತೆಲುಗು ಭಾಷೆಯನ್ನೂ ಕಲಿಯಲು ಪ್ರಾರಂಭಿಸಿದ್ದಾಳಂತೆ. ತಮ್ಮದೇ ನಾಡಿನಲ್ಲಿ ಜನಿಸಿ ಮಾತ್ರಭಾಷೆ ಬಂದರೂ ಅದನ್ನು ಮರೆತು ಟಸ್ ಪುಸ್ ಅಂತ ಇಂಗ್ಲೀಷ್ನಲ್ಲಿ ಹರಟೆಕೊಚ್ಚುವ ನಟಿಯರಿಗಿಂತ ಭಿನ್ನ ಈ ತಮನ್ನಾ. ಶಹಬ್ಬಾಸ್ ತಮನ್ನಾ.

Sunday, June 6, 2010

ಸತ್ಯದ ಸಾರ ಸಾರುವ ಸತ್ಯಹರಿಶ್ಚಂದ್ರ


ನಿರದೆಶನ : ಹುಣಸೂರು ಕೃಷ್ಣಮೂರ್ತಿ 
ನಿರಮಾಪಕರು : ವಿಜಯಾ ಪ್ರೊಡಕ್ಷನ್
ಸಂಗೀತ : ಪಿ. ಎಂ. ರಾವ್
ಚಿತ್ರ ಬಿಡುಗಡೆ : 1965
ತಾರಾಗಣದಲ್ಲಿ : ಡಾ. ರಾಜಕುಮಾರ್, ಫಂಡರೀಬಾಯಿ, ನರಸಿಂಹರಾಜೂ, ಎಂ. ಪಿ. ಶಂಕರ್ ಮುಂತಾದವರು

ಸತ್ಯ ಹರಿಶ್ಚಂದ್ರ ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು. 1965ರಲ್ಲಿಯೇ ಭಾರೀ ವೆಚ್ಚದಲ್ಲಿ ನಿರಮಾಣವಾಗಿದ್ದ ಈ ಚಿತ್ರವನ್ನು ನೋಡದವರೆ ಇಲ್ಲ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ಮಹಾಮುನಿ ವಿಶ್ವಾಮಿತ್ರನ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆಲ್ಲುವ ಕಥೆಯೇ ಸತ್ಯ ಹರಿಶ್ಚಂದ್ರ.
ರಾಜಾ ಹರಿಶ್ಚಂದ್ರನಾಗಿ ಡಾ. ರಾಜ್ಕುಮಾರ್ ಅವರದ್ದು ಚಿತ್ರದಲ್ಲಿ ಮೇರು ಅಭಿನಯ. ಹರಿಶ್ಚಂದ್ರನ ಮಡದಿಯಾಗಿ ಫಂಡರಿಬಾಯಿ ಮನೋಜ್ಞವಾಗಿ ನಟಿಸಿದ್ದಾರೆ. ವಿಶ್ವಾಮಿತ್ರನಾಗಿ ಉದಯ್ಕುಮಾರ್ ಸಿಟ್ಟಿನ ಪ್ರತಿರೂಪವಾಗಿಕಾಣುತ್ತಾರೆ. ರಾಜನನ್ನು ಕಾಡುವ ವಿಶ್ವಾಮಿತ್ರನ ಬಂಟ ನಕ್ಷತ್ರಿಕನ ಪಾತ್ರದಲ್ಲಿ ನಟಿಸಿದ್ದು ಕಾಮಿಡಿ ಕಿಂಗ್ ನರಸಿಂಹರಾಜೂ. ಚಿತ್ರದಲ್ಲಿ ಇವರು ಹಾಸ್ಯ, ಭಯ, ಸಿಟ್ಟು ಮುಂತಾದ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿ ನೋಡುಗರನ್ನು ಸೆಳೆಯುತ್ತಾರೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಆಕಷರ್ಿಸುತ್ತಾರೆ.
ಚಿತ್ರದ ಹಾಡುಗಳೂ ಅಷ್ಟೆ, ಮತ್ತೆ ಮತ್ತೆ ಕೇಳುವಂತಿದೆ. `ನಮೋ ಭೂತನಾಥ..', `ವಿಧಿ ವಿಪರೀತ...', `ಆನಂದ ಸದನ ಅರವಿಂದನಯನ..' ಹಾಡುಗಳು, ಜೊತೆಗೆ ಎಂ. ಪಿ. ಶಂಕರ್ ಅಭಿನಯಿಸಿದ `ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಹಾಗೂ `ನನ್ನ ನೀನು ನಿನ್ನ ನಾನು..' ಎಂಬ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.
ನಾಲ್ಕು ದಶಕಗಳ ಹಿಂದೆಯೇ ಕಪ್ಪು ಬಿಳುಪು ಬಣ್ಣದಲ್ಲಿ ಅದ್ದೂರಿಯಾಗಿ ನಿರಮಾಣವಾಗಿದ್ದ ಈ ಚಿತ್ರವನ್ನು 2008ರಲ್ಲಿ ಬಹುವರ್ಣಗಳ ಮೂಲಕ ಮತ್ತೆ ಬಿಡುಗಡೆ ಮಾಡಲಾಯಿತು. 1965ರಲ್ಲಿ ಶತದಿನ ಆಚರಿಸಿದ್ದ ಚಿತ್ರ 2008ರಲ್ಲಿ ಬಾಕ್ಸಾಫೀಸ್ನಲ್ಲಿ ಸಂಪೂರ್ಣ ನೆಲಕಚ್ಚಿತು.
ಸತ್ಯದ ನೀತಿಯನ್ನು ಸಾರುವ ಆದರ್ಶಮಯ ಚಿತ್ರ ಎಲ್ಲ ಕಾಲದಲ್ಲಿಯೂ, ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೆಸರಾಗಿದೆ.

ವಿನಯ್ ದಂಟಕಲ್