Friday, February 28, 2014

ಹಿಸೆ ಪಂಚಾಯ್ತಿಕೆ-2

ಕೋರ್ಟು ಮುಂದೋದಂತೆ
ಮತ್ತೆ ಶುರು ಪಂಚಾಯ್ತಿ
ಸುಬ್ಬಣ್ಣ ಹೆಣ್ತಿಗಂದ
ತಲೆ ತಿನ್ನಡ ಮಾರಾಯ್ತಿ ||

ಪಟ್ಟಾಗಿ ಕುಂತ ಪಂಚರು
ಶುರು ಮಾಡಿದ ಹಿಸೆ
ದೊಡ್ಡಮನೆ ಅಣ್ಣತಮ್ಮಂದ್ರಲ್ಲಿ
ಆರೋಗಿತ್ತು ಪಸೆ ||

ಆರು ಬಣ್ಣ ಮಾಸ್ತರಂಗೆ
ಬಾಗಲಪಾಲು ನಾಗಣ್ಣಯ್ಯಂಗೆ
ದೊಡ್ಡಪಾಲಿಗೆ ಗಣಪತಿ
ಹೊಳೆ ಅಂಚಿಂದು ಸುಬ್ಬಣ್ಣಂಗೆ ||

ಗದ್ದಲೆಂತು ಪಾಲೆ ಇಲ್ಲೆ
ಎಲ್ಲಾ ಮಹೇಶನ್ನ ಸೇರ್ತು
ಮನೆ ಅಂಚಿನ ಗದ್ದೆ ಮಾತ್ರ
ಸುಬ್ಬಣ್ಣಂಗೆ ಬಂತು ||

ಎಲ್ಲಾ ಮುಗಿದು ಹೊರಡ ಹೊತ್ತಿಗೆ
ಯಂಕಣ್ಣಂದು ತಕರಾರು
ಚರಾಸ್ತಿ ಪಾಲಾಜಿಲ್ಲೆ
ಇರ್ಲಿ ಸ್ವಲ್ಪ ದರಕಾರು ||

ಗ್ಯಾಸ್ ಬಾವಿ ನಾಗಪ್ಪಂಗೆ
ಮಹೇಶಂಗೆ ಟಿ.ವಿ
ಯಂಕಣ್ಣಂಗೆ ಮೋಟಾರ್ ಬೈಕು
ಸುಬ್ಬಣ್ಣಂಗೆ ಕೋವಿ ||

ಮಂಕಾಳಕ್ಕ ಕೂಗಲೆ ಹಿಡತ್ತು
ಯಂಗೂ ಪಾಲು ಬೇಕಿತ್ತು
ಸುಮ್ಮನಿರಸಲ್ ಹೋದವ್ವಿಲ್ಲೆ
ಹಿಸೆ ಆಗಲೇ ಬೇಕಿತ್ತು ||

ಗದ್ದೆ ಮನೆ ಮಂಕಾಳಕ್ಕಂಗೆ
ಗಪ್ಗಪತಿಗೆ ಗದ್ದೆ ತೋಟ
ದೊಡ್ಡಪಾಲನ್ನು ಕೇಳವಿಲ್ಲೆ
ಯಾವಾಗ್ಲೂ ಮಂಗನ ಕಾಟ ||

ಮನೆಯಲ್ ಅರ್ಧ ಪಾಲಾಗಿತ್ತು
ಹೆಬ್ಬಾಗಲ್ಲಲ್ ನಾಗಪ್ಪ
ಮನೆಗೆ ಗೋಡೆ ಬಂದಾಗಿತ್ತು
ಹಿತ್ಲಾಕಡಿಗೆ ಸುಬ್ಬಣ್ಣ ||

ಪಂಚಾಯ್ತಿಗೆ ಕುಂತಿದ್ದವ್ವ
ಪಕ್ಕದಮನೆಯ ಮಂಞಾತ
ಹಳೆ ಹಿಸೆ ಸರಿಯಿತ್ತಿಲ್ಲೆ
ತನಗೆ ಪಾಲು ಕಮ್ಮಿ ಇತ್ತಾ ||

ತಕರಾರ್ ಪಕರಾರ್ ಇದ್ರೂ ಕೂಡ
ದೊಡ್ಡ ಮನೆ ಪಾಲಾತು
ಮನೆ ಮನದ ಜೊತೆಯಲ್ಲಂತೂ
ಎಲ್ಲವೂ ಚೂರಾತು ||

**
(ಹಿಸೆ ಪಂಚಾಯ್ತಿಕೆಯ ಮತ್ತರ್ಧ ಭಾಗ)

Thursday, February 27, 2014

ಬೆಂಗಾಲಿ ಸುಂದರಿ-9

ಕಾಂತಾಜಿ ದೇವಾಲಯದ ಗೋಡೆಯ ಮೇಲಣ ಕೆತ್ತನೆಗಳು
                  `ನನಗೆ ಬಹಳ ದಿನಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು ಈ ಬೆಂಗಾಲಿ ನಾಡು.. ನಮ್ಮ ಪ್ರೀತಿಯ ಸುಭಾಷ ಚಂದ್ರ ಭೋಸರು ಓಡಾಡಿದ ಸ್ಥಳ. ಇಲ್ಲೇ ಕೂಗಳತೆ ದೂರದಲ್ಲಿ ಅಲ್ಲವಾ ಸುಭಾಷರು ಹುಟ್ಟಿದ್ದು.. ಭಾರತದಲ್ಲಿ ಏನೇ ಬದಲಾವಣೆ ಆಗುತ್ತದೆ ಎಂದಾದರೂ ಮೊದಲು ಬೆಂಗಾಲಿ ನಾಡಿನಲ್ಲೇ ಆಗುತ್ತದೆ ಎನ್ನುತ್ತಾರೆ. ಹೌದಲ್ಲವಾ..? ಬುದ್ಧಿವಂತರ ನಾಡು ಎಂದೂ ಬಂಗಾಲವನ್ನು ಕರೆಯುತ್ತಾರೆ ಅಲ್ಲವಾ..' ಎಂದ ವಿನಯಚಂದ್ರ.
                   `ಹೌದು ಹೌದು.. ಎಲ್ಲ ಬದಲಾವಣೆಗಳೂ ಇಲ್ಲಿಂದಲೇ ಆಗಿದ್ದು..' ಎಂದವಳೇ `ಮೊಟ್ಟಮೊದಲು ಬ್ರಿಟೀಷರ ದಾಸ್ಯಕ್ಕೆ ಒಳಗಾಗಿದ್ದು ಇದೇ ಬೆಂಗಾಲಿ ಸ್ಥಳವೇ ಅಲ್ಲವಾ..' ಎಂದು ಹೇಳಿ ನಾಲಿಗೆ ಕಚ್ಚಿಕೊಂಡಳು.
                   ವಿನಯಚಂದ್ರನಿಗೆ ಅಚ್ಚರಿಯಾಯಿತು. ಬೆಂಗಾಲಿ ನಾಡಿನ ಈ ಹುಡುಗಿಗೆ ತನ್ನ ದೇಶದ ಕುರಿತು ಯಾಕೋ ಒಳ್ಳೆ ಭಾವನೆ ಇದ್ದಂತಿಲ್ಲ ಎಂದುಕೊಂಡನಾದರೂ ಕೇಳಲು ಹಿಂಜರಿದ. ಆಕೆಯ ಬಳಿ `ನನಗೆ ಇಲ್ಲಿ ಗಂಗಾನದಿ ಸಮುದ್ರವನ್ನು ಸೇರುವ ಸ್ಥಳವನ್ನು ನೋಡಬೇಕೆಂಬ ಆಸೆಯಿದೆ. ನಮ್ಮ ಪ್ರವಾಸದ ಪಟ್ಟಿಯಲ್ಲಿ ಅದೂ ಉಂಟಾ..?' ಎಂದ.
                 `ಇಲ್ಲ.. ಇಲ್ಲ.. ನೋಡೋಣ ನಮ್ಮ ಸೀನಿಯರ್ ಗೆ ತಿಳಿಸುತ್ತೇನೆ.. ಅವರೇನಾದರೂ ಕ್ರಮ ಕೈಗೊಳ್ಳಬಹುದು.. ಹೌದು ಅಲ್ಲೆಂತದ್ದು ನೋಡೋದು ನಿಮಗೆ..?'
                  `ಗಂಗಾನದಿ ಸಮುದ್ರ ಸೇರುವ ಸ್ಥಳದಲ್ಲಿರುವ ಸುಂದರಬನ್ಸ್ ನೋಡಬೇಕು. ಉದ್ದುದ್ದದ ಬೀಳಲುಗಳನ್ನು ಚಾಚಿ ನಿಂತ ಚಿತ್ರ ವಿಚಿತ್ರ ಕಾಂಡ್ಲಾ ಕಾಡನ್ನು ನೋಡಬೇಕು. ಬೆಂಗಾಲಿಯ ಭವ್ಯ ನಿಲುಕಿನ ಬಿಳಿಹುಲಿಗಳನ್ನು ನೋಡಬೇಕು. ಅಳಿವಿನ ಅಂಚಿನಲ್ಲಿದೆಯಂತಲ್ಲಾ.. ಬಹಳ ಕುತೂಹಲವಿದೆ. ನಮ್ಮೂರಿನಲ್ಲೆಲ್ಲ ಹಳದಿ ಪಟ್ಟೆ ಪಟ್ಟೆ ಹುಲಿ ನೋಡಿದ್ದೆ.. ಈ ಬಿಳಿ ಹುಲಿಗಳು ಹೇಳಿರ್ತವೆ ಅನ್ನೊದು ನೋಡಬೇಕೆಂಬ ಆಸೆಯಿದೆ.. ಜೊತೆಗೆ ಗಂಗಾನದಿ ಸಮುದ್ರ ಸೇರಿದ ನಂತರವೂ ಅನೇಕ ಕಿಲೋಮೀಟರ್ ಗಳವರೆಗೆ ಸಮುದ್ರದ ನೀರಿನಲ್ಲಿದ್ದರೂ ಹರಿಯುತ್ತ ಹೋಗುತ್ತದಂತಲ್ಲ ಅಲ್ಲೊಮ್ಮೆ ದೋಣಿ ಯಾತ್ರೆ ಕೈಗೊಳ್ಳಬೇಕು. ಸಮುದ್ರದೊಳಕ್ಕೆ ಸೇರಿದ್ದರೂ ಮೂರ್ನಾಲ್ಕು ಕಿ.ಮಿ ದೂರದ ವರೆಗೆ ಗಂಗೆಯ ನೀರು ಉಪ್ಪಾಗದೇ ಸಿಹಿ ಸಿಹಿಯಾಗಿಯೇ ಉಳಿಯುತ್ತದಂತಲ್ಲ.. ಅದನ್ನು ನೋಡಬೇಕು. ಆ ಸಿಹಿ ನೀರಿನಲ್ಲಿಯೇ ಇರುವ ಅತ್ಯಪರೂಪದ ಡಾಲ್ಫಿನ್ನುಗಳನ್ನು ನೋಡಬೇಕು. ಗಂಗೆಯ ಸೆಳವಿನಲ್ಲಿ ದೋಣಿ ಓಲಾಡುತ್ತಿದ್ದಾಗ ನಾನು ಹೋ ಎಂದು ಕಿರುಚಬೇಕು..' ಎಂದ ವಿನಯಚಂದ್ರ.
                   `ಎಂತಾ ವಿಚಿತ್ರ ಆಸೆ ನಿಮ್ಮದು.. ಮಜವಾಗಿದೆ ಕೇಳೋದಿಕ್ಕೆ.. ನನಗೆ ನಿಮ್ಮ ಕಡೆ ಕುತೂಹಲ ಮೂಡುತ್ತಿದೆ.. ಕಬ್ಬಡ್ಡಿ ಆಟಗಾರರು ಅಂತೀರಾ.. ನಾನ್ ವೆಜ್ ಆಗೋದಿಲ್ಲ.. ಕೇಳಿದರೆ ಬ್ರಾಹ್ಮಣರು ಅಂತೀರಾ.. ಬ್ರಾಹ್ಮಣರಿಗೂ ಕಬ್ಬಡ್ಡಿಗೂ ಎಂತ ಸಂಬಂಧ..? ಎತ್ತಲ ಕಬ್ಬಡ್ಡಿ ಎತ್ತಲ ನಿಮ್ಮ ಆಹಾರಪದ್ಧತಿ.. ವಿಚಿತ್ರ ಎನ್ನಿಸುತ್ತಿದೆ. ಅದ್ಹೇಗೆ ನಿಮ್ಮ ಶಕ್ತಿಯನ್ನು ಕಾಪಾಡಿಕೊಳ್ಳುತ್ತಿದ್ದೀರೋ.. ಈ ಬಡ ಬಾಂಗ್ಲಾದೇಶದವರೆಲ್ಲ ಭಾರತಕ್ಕೆ ಕದ್ದು ಹೋಗಿ ಅಲ್ಲಿ ಬದುಕಿ ಜೀವನ ಕಟ್ಟಿಕೊಂಡರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಆದರೆ ಬಾಂಗ್ಲಾದೇಶವನ್ನು ನೋಡೋದು ನಿನ್ನ ವಿಚಿತ್ರ ಆಸೆ.. ಗಂಗಾನದಿ ಕೊಳಕೆದ್ದು ಹೋಗಿದೆ ಎನ್ನುವವರ ನಡುವೆ ಗಂಗಾನದಿ ಸಮುದ್ರ ಸೇರುವುದನ್ನು ನೋಡಬೇಕು ಅಂತೀಯಾ.. ನಾಡಿಗೆ ದಾಳಿ ಮಾಡಿ ಹುಲಿ ಅವರಿವರನ್ನು ಕಚ್ಚಿಕೊಂಡು ಹೋಗುತ್ತಿದೆ ಅಂತ ಹುಲಿಯ ಬಗ್ಗೆ ಬೈದುಕೊಂಡು ಓಡಾಡುವವರ ನಡುವಿನಲ್ಲೂ ಹುಲಿಯನ್ನು ನೋಡಬೇಕು ಅಂತೀಯಾ.. ನನಗೆ ಬಹಳ ಅಚ್ಚರಿಯೆನ್ನಿಸುತ್ತಿದೆ ನಿನ್ನ ವ್ಯಕ್ತಿತ್ವ..' ಎಂದಳು ಮಧುಮಿತಾ.. ವಿನಯಚಂದ್ರ ಹೆಮ್ಮೆಯಿಂದ ಬೀಗಿದ.
                 `ನಿಮ್ಮೂರು ಎಲ್ಲಿ..? ನಿಮ್ಮ ಕುಟುಂಬದ ಕುರಿತು ನನಗೆ ಹೇಳಲೇ ಇಲ್ವಲ್ಲಾ.. ನಾನು ಕೇಳಿದರೆ ತಪ್ಪೇನೂ ಇಲ್ಲ ಅಲ್ಲವಾ..?' ವಿನಯಚಂದ್ರ ಕೇಳಿದ್ದ.
                 `ಕಿಶೋರ್ ಗಂಜ್ ಅಂತ ನಮ್ಮ ಊರು. ನನ್ನ ಕುಟುಂಬ ಅಲ್ಲಿ ವಾಸ ಮಾಡುತ್ತಿದೆ. ಆದರೆ ನಾನು ಮಾತ್ರ ಹೊಟ್ಟೆಪಾಡಿಗಾಗಿ ಢಾಕಾಕ್ಕೆ ಬಂದು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಬುರಿಗಂಗಾ ನದಿ ತೀರದ ಬಳಿಯ ಅಪಾರ್ಟ್ ಮೆಂಟಿನಲ್ಲಿ ನನ್ನ ವಾಸ. ಮನೆಯಲ್ಲಿ ತಂದೆ-ತಾಯಿ-ಇಬ್ಬರು ತಂಗಿಯರಿದ್ದಾರೆ. ತಂಗಿಯರು ಓದುತ್ತಿದ್ದಾರೆ. ಕಿಶೋರ್ ಗಂಜ್ ಕಾಲೇಜಿನಲ್ಲಿ. ತಂದೆಯವರು ಬೆಂಗಾಲಿ. ಹಿಂದುತ್ವವಾದಿ. ಆದರೆ ಬಾಂಗ್ಲಾದೇಶದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಸುಮ್ಮನಿರಿಸುವುದು ಕಷ್ಟವಾಗಿದೆ. ಅಪ್ಪ ಯಾವಾಗ ತನ್ನ ಧರ್ಮದ ಕುರಿತಂತೆ ಗಲಾಟೆ ಮಾಡಿಕೊಳ್ಳುತ್ತಾನೋ ಎನ್ನುವ ಭಯ ನನ್ನನ್ನು ಕಾಡುತ್ತಿದೆ. ಹಿಂದೂ ಧರ್ಮದ ಕುರಿತು ಮಾತು ಬಂದರೆ ಸಾಕು ಅಪ್ಪ ಗಂಟೆಗಟ್ಟಲೆ ಮಾತನಾಡುತ್ತ ನಿಂತು ಬಿಡುತ್ತಾರೆ. ಬಹಳಷ್ಟು ಸಾರಿ ಅಪ್ಪನಿಗೆ ಹೇಳಿದ್ದೆ ನಮ್ಮ ಈಗಿನ ಪರಿಸ್ಥಿತಿ ನೋಡಿಕೊಂಡು ಹಿಂದುತ್ವದ ಬಗ್ಗೆ ಮಾತನಾಡು ಅಂತ. ಆದರೆ ನಾನು ಆತನಿಗೆ ಹೇಳಿದ ನಂತರ ಆತ ಹಿಂದುತ್ವದ ಕುರಿತು ಮಾತನಾಡುವುದು ಜಾಸ್ತಿಯಾಗಿದೆ. ಇಲ್ಲಿ ರಾಜಕೀಯ ಕಾರಣಗಳಿಗಾಗಿ ಹಿಂದುಗಳಲ್ಲಿಯೇ ಪ್ರಮುಖರಾದವರನ್ನೆಲ್ಲ ಹುಡಕಿ ಹುಡುಕಿ ಕೊಲ್ಲಲಾಗುತ್ತದೆ. ನನ್ನ ಅಪ್ಪನ ಮೇಲೂ ದೃಷ್ಟಿ ಬಿದ್ದಿರಬೇಕು. ಭಯದ ನೆರಳಿನಲ್ಲಿ ಬದುಕುತ್ತಿದೆ ನಮ್ಮ ಕುಟುಂಬ.. ಅಪ್ಪ ಮಾತ್ರ ಎಷ್ಟು ತಿಳಿಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಸುಮ್ಮನಾದಳು ಮಧುಮಿತಾ..
                 ನಿಟ್ಟುಸಿರುಬಿಟ್ಟ ವಿನಯಚಂದ್ರ. `ಭಾರತ ಸ್ವಾತಂತ್ರ್ಯ ಪಡೆದಾಗ ಭಾರತಕ್ಕೆ ವಲಸೆ ಬಂದಿಲ್ಲ ನಿನ್ನ ತಂದೆ.. ಯಾಕೆ..?'
                   `ನನಗೆ ಗೊತ್ತಿಲ್ಲ... ಒಂದೆರಡು ಸಾರಿ ಕೇಳಿದ್ದೆ. ಆಗೆಲ್ಲಾ ನಾನು ಹುಟ್ಟಿದ ಸ್ಥಳವನ್ನು ಹೇಗೆ ತೊರೆದು ಹೋಗುವುದು..? ಎಂದು ಪ್ರಶ್ನೆ ಮಾಡಿದ್ದರು. ಈಗಲೂ ಅನೇಕ ಸಾರಿ ಹೇಳಿದ್ದೇನೆ. ಯಾರಾದರೂ ನಿನ್ನ ಪರಿಚಯದವರು ಭಾರತದಲ್ಲಿದ್ದರೆ ಹೇಳು ಅಲ್ಲಿಗೆ ಹೋಗಿ ಬದುಕಿ ಬಿಡೋಣ ಅಂತ.. ಆದರೆ ಕೇಳುತ್ತಿಲ್ಲ.. ಈ ಅಭದ್ರ ಬದುಕು ನನಗೆ ಸಾಕಾಗಿ ಹೋಗಿದೆ. ಭಯದ ನೆರಳಿನಲ್ಲಿ, ಯಾವಾಗ ಸಾಯುತ್ತೇವೋ ಎನ್ನುವ ಹೆದರಿಕೆಯ ನಡುವೆ ಬದುಕುವುದು ಬೇಡ. ನೆಮ್ಮದಿಯನ್ನರಸಿ ಭಾರತಕ್ಕೆ ಹೋಗಿ ಬಿಡೋಣ.. ಯಾವುದಾದರೊಂದು ಸಹಾಯ ಹಸ್ತ ನಮಗಾಗಿ ಕಾಯುತ್ತಿರಬಹುದು. ಕಾಪಾಡಬಹುದು ಎಂದುಕೊಂಡಿದ್ದೇನೆ. ಕಾಯುತ್ತಿದ್ದೇನೆ. ಮನೆಯಲ್ಲೂ ಹೇಳಿದ್ದೇನೆ. ಈಗೀಗ ಅಪ್ಪನೂ ಏನಾದರೂ ಮಾಡಿಕೊ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಆದರೂ ಅವರನ್ನು ತೀರಾ ಒತ್ತಾಯ ಮಾಡುವುದು ಕಷ್ಟ ಅಲ್ಲವಾ.. ಒತ್ತಾಯ ಮಾಡಿದರೆ ಇನ್ನೇನಾದರೂ ಮಾಡಿಕೊಂಡು ಬಿಟ್ಟಾರು ಎನ್ನುವ ಭಯ ಬಿಡದೇ ಕಾಡುತ್ತಿದೆ..'
               ಕ್ಷಣಕಾಲ ಸುಮ್ಮನಿದ್ದ ವಿನಯಚಂದ್ರ. ಏನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ. ನಂತರ ಆತ ಮಾತನಾಡಿದ `ನಾನೂ ಅದನ್ನೇ ಹೇಳಬೇಕೆಂದುಕೊಂಡಿದ್ದೆ. ಇಷ್ಟಕ್ಕೂ ಬಾಂಗ್ಲಾದೇಶದಲ್ಲಿ ಯಾಕಾಗಿ ಅರಾಜಕತೆ..? ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಕಾರಣ..? ಅಲ್ಪಸ್ವಲ್ಪ ಗೊತ್ತಿದೆ. ಆದರೆ ಸ್ಪಷ್ಟವಾಗಿಲ್ಲ..'
                `ನಾನು ಹೇಳಿದರೆ ತಪ್ಪಾಗುತ್ತದೆ. ಆದರೆ ಹೇಳದಿದ್ದರೆ ಮನಸ್ಸಿಗೆ ಏನೋ ಒಂಥರಾ.. ಇಲ್ಲಿ ಮಹಿಳೆಯರದ್ದೇ ಆಡಳಿತ. ಶೇಖ್ ಹಸೀನಾ ಇಲ್ಲಿಯ ಈಗಿನ ಪ್ರಧಾನಮಂತ್ರಿ. ವಿರೋಧಪಕ್ಷದ ಮುಖಂಡತ್ವವೂ ಮಹಿಳೆಯದ್ದೇ. ಅದರ ಮುಖ್ಯಸ್ಥೆ ಬೇಗಂ ಖಾಲಿದಾ ಜಿಯಾ. ಅವಾಮಿ ಲೀಗ್ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಇಲ್ಲಿನ ಪ್ರಮುಖ ಪಕ್ಷಗಳು. ಹಿಂದುಗಳು ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲರು. ಭಾರತದಲ್ಲಿ ಹೇಗೆ ಅಲ್ಪಸಂಖ್ಯಾತರಿದ್ದಾರೋ ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಈಗ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ನಮಗೆ ಚುನಾವಣೆ ಬಂತೆಂದರೆ ಮಾತ್ರ ಇತ್ತ ದರೆ ಅತ್ತ ಹುಲಿ ಎನ್ನುವಂತಹ ಪರಿಸ್ಥಿತಿ. ಈ ಪಕ್ಷ ಬೆಂಬಲಿಸಿದರೆ ಆ ಪಕ್ಷದವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ.. ಅವರನ್ನು ಬೆಂಬಲಿಸಿದರೆ ಇವರು ನಮ್ಮಮೇಲೆ ದೌರ್ಜನ್ಯ ಎಸಗುತ್ತಾರೆ. ಅನೇಕ ಕಡೆಗಳಲ್ಲಿ ನಮ್ಮ ಜಮೀನುಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಹಿಂದು ಮುಖಂಡರುಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತದೆ. ನಾವು ಮಹಿಳೆಯರು ಅವರ ದೃಷ್ಟಿಗೆ ಮೊದಲು ಬಿದ್ದು ಬದುಕು ದಾರುಣವಾಗುತ್ತದೆ.. ಸಾಕಾಗಿಬಿಟ್ಟಿದೆ ನಮಗೆ. .' ಎಂದು ಅಲವತ್ತುಕೊಂಡಳು ಮಧುಮಿತಾ.
                 ವಿನಯಚಂದ್ರನಿಗೆ ಮತ್ತೆ ಏನು ಮಾತಾಡಬೇಕು ತಿಳಿಯಲಿಲ್ಲ.. ಸುಮ್ಮನೆ ಕುಳಿತಿದ್ದ.
                 ಮಧುಮಿತಾ ಮುಂದುವರಿದಳು `ಆದರೆ ಒಂದು ವಿಚಿತ್ರ ಗಮನಕ್ಕಿದೆಯೋ ಇಲ್ಲವೋ ಗೊತ್ತಿಲ್ಲ.. ಇದು ನಿಮ್ಮ ದೇಶದ ಕುರಿತು ಹೇಳುವಂತದ್ದು. ಕಾರಣಗಳು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇಲ್ಲಿ ಈ ಪ್ರಮಾಣದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಬಹುಸಂಖ್ಯಾತ ಹಿಂದೂಗಳ ನಾಡು ಭಾರತ ಮಾತ್ರ ಈ ಕುರಿತು ಮಾತನ್ನೇ ಆಡುತ್ತಿಲ್ಲ. ಅಲ್ಲೆಲ್ಲೋ ಯೂರೋಪಿನಲ್ಲಿ ಕಾರ್ಟೂನುಗಳನ್ನು ಬಿಡಿಸದರೆ ಭಾರತದಲ್ಲಿ ಗಲಾಟೆಯಾಗುತ್ತದೆ. ಚರ್ಚುಗಳ ಮೇಲೆ ದಾಳಿಗಳಾದರೆ ಭಾರತ ಅದಕ್ಕೆ ಉಗ್ರ ಪ್ರತಿಕ್ರಿಯೆ ನೀಡುತ್ತದೆ. ಅಮೆರಿಕಾದ ಅಧ್ಯಕ್ಷ  ಭಾರತದಲ್ಲಿನ ಧರ್ಮ ಸಹಿಷ್ಣುತೆ ಸರಿಯಾಗಿರಬೇಕೆಂದು ಮಾತಾಡಿ ಹೋಗುತ್ತಾರೆ. ಆದರೆ ನಾವ್ಯಾಕೆ, ನಮ್ಮ ನೋವ್ಯಾಕೆ ನಿಮ್ಮ ದೇಶದ ಕುರಿತು ಮಾತನಾಡುವವರಿಗೆ, ನಿಮ್ಮ ದೇಶದವರಿಗೆ ಕಾಣುತ್ತಿಲ್ಲ..? ನಾವು ಬಾಂಗ್ಲಾದೇಶವನ್ನು ಬಿಟ್ಟು ಬರುತ್ತೇವೆ. ನಮಗೆ ಭಾರತದಲ್ಲಿ ಅವಕಾಶಕೊಡಿ ಎಂದರೆ ಕೊಡುತ್ತದೆಯೇ..? ಯಾಕೀಥರ ವಿನು..? ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮನ್ಯಾಕೆ ಬಲಿಕೊಡುತ್ತಾರೆ.? ಮತಕ್ಕಾಗಿ ಯಾಕೆ ಓಲೈಕೆ ನಡೆಯುತ್ತಿದೆ..? ಬಾಂಗ್ಲಾದೇಶದವರು ಅಸ್ಸಾಮಿಗೆ ಹೋದರೆ ನಿಮ್ಮ ದೇಶದವರನ್ನೇ ಕೊಲ್ಲುತ್ತಿದ್ದಾರೆ. ಅದಕ್ಕೂ ನೀವು ಉತ್ತರ ಹೇಳುತ್ತಿಲ್ಲವಲ್ಲ.. ಭಾರತದ ಕುರಿತು ಎಂತ ಅಭಿಮಾನವಿದೆ ನನಗೆ ಗೊತ್ತಾ..? ಆದರೆ ಇತ್ತಿಚಿನ ನಡೆಗಳು ನನ್ನೊಳಗಿನ ಅಭಿಮಾನದ ಗೋಡೆಗಳನ್ನು ಕೆಡವುತ್ತಿದೆ.. ಎಂತಾ ನಾಡು ಭಾರತ.. ಆದರೆ ನಿಮ್ಮವರೇಕೆ ನಿಮ್ಮವರ ಕಡೆಗೆ ಮಿಡಿಯುತ್ತಿಲ್ಲ..?'
                     ಅವಳ ಮಾತಿಗೆ ವಿನಯಚಂದ್ರನಲ್ಲಿ ಉತ್ತರವಿರಲಿಲ್ಲ.. ಸುಮ್ಮನೆ ಉಳಿದಿದ್ದ.. ಏನು ಮಾತಾನಾಡಬೇಕು ಎನ್ನುವುದು ಅರ್ಥವಾಗಲಿಲ್ಲ..? ಅವಳಿಗೆ ಏನು ಹೇಳಲಿ.? ಎಂಬ ದ್ವಂದ್ವದಲ್ಲಿ ಉಳಿದಿದ್ದ. ಭಾರತವೆಂದರೆ ಭವ್ಯ ರಾಷ್ಟ್ರ. ಸೂಪರ್ ಪವರ್ ಆಗುತ್ತಿದೆ.. ಹಾಗೆ ಹೀಗೆ ಎನ್ನುವ ಮಾತುಗಳೆಲ್ಲ ಕೇಳಿಬರುತ್ತವೆ. ಆದರೆ ಭಾರತದಲ್ಲಿ ನಡೆಯುತ್ತಿರುವ ವೈರುಧ್ಯಗಳ ಕುರಿತು ಏನು ಹೇಳಲಿ..? ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರೇಮಿಗಳಿರುವ ದೇಶ ಭಾರತ ಎನ್ನಲಾಗುತ್ತಿದೆ. ಆದರೆ ಒಳಗಿಂದೊಳಗೆ ಭಾರತದ ಪ್ರೇಮಸೌಧ ಕುಸಿದು ಬೀಳುತ್ತಿದೆ. ತನ್ನೊಳಗೆ ನೂರಾರು ಸಣ್ಣ ಸಣ್ಣ ಗಾಯಗಳಾಗುತ್ತಿವೆ. ತನಗೆ ಬೇಕು ಎಂದಾದರೆ ಭಾರತದಲ್ಲಿ ಹೊಸ ಹೊಸ ರಾಜ್ಯಗಳೇ ದಿನ ಬೆಳಗಾಗುವುದರೊಳಗೆ ಹುಟ್ಟಿ ಬಿಡುತ್ತವೆ. ಅಸ್ಸಾಮಿನಲ್ಲಿ ದಿನವಹಿ ಮಾರಣಹೋಮ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುವುದಿಲ್ಲ. ಕಾಶ್ಮೀರ ಮತ್ತೆ ಮತ್ತೆ ಕಾಡುತ್ತಿದೆ. ಇಷ್ಟಕ್ಕೆ ನಿಲ್ಲದೇ ಪಕ್ಕದ ಡ್ರಾಗನ್ ಚೀನಾ ಪದೆ ಪದೆ ಭಾರತದ ಗಡಿಯೊಳಗೆ ಕಾಲಿಟ್ಟು ರೆಡಿ ಆಟವನ್ನು ಆಡುತ್ತಿದ್ದರೂ ಅದರ ವಿರುದ್ಧ ಮಾತಾಡುವ ತಾಕತ್ತಿಲ್ಲದಂತೆ ವರ್ತನೆ ಮಾಡುತ್ತಿದೆ.. ಆದರೂ ಬಾಯಿ ಮಾತಿನಲ್ಲಿ ದೇಶ ಬದಲಾಗುತ್ತಿದೆ.. ಅಭಿವೃದ್ಧಿಯ ಪಥದಲ್ಲಿದೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.. ಎಲ್ಲವೂ ಅಂದುಕೊಂಡಂತಿಲ್ಲ ಎಂದು ಅವಳಿಗೆ ಹೇಳೋಣ ಅನ್ನಿಸಿತು ವಿನಯಚಂದ್ರನಿಗೆ. ಆದರೆ ಹೇಳಲಿಕ್ಕೆ ಆಗಲಿಲ್ಲ.
                 `ನನ್ನನ್ನೊಮ್ಮೆ ನಿನ್ನ ಮನೆಗೆ ಕರೆದೊಯ್ಯುತ್ತೀಯಾ..? ಯಾಕೋ ನಿಮ್ಮವರನ್ನು ನೋಡಬೇಕು ಎನ್ನಿಸುತ್ತಿದೆ..' ಮಾತು ಹೊರಳಿಸುತ್ತ ಕೇಳಿದ ವಿನಯಚಂದ್ರ.
                   `ಖಂಡಿತ ವಿನೂ.. ನೋಡೋಣ ಯಾವಾಗಲಾದರೂ ಕರೆದೊಯ್ಯುತ್ತೇನೆ. ನಿಮ್ಮ ವಿಶ್ವಕಪ್ಪಿದೆಯಲ್ಲ.. ಅಷ್ಟರೊಳಗೆ ಸಾಧ್ಯವಾದರೆ ಕರೆದೊಯ್ಯುತ್ತೇನೆ.. ಇಲ್ಲವಾದರೆ ಆ ನಂತರ ನೋಡೋಣ..' ಎಂದಳು.
                   ನಂತರ ಮಾತು ಹಲವಾರು ವಿಷಯಗಳ ಕಡೆಗೆ ಸರಿಯಿತು. ಮಾತಿನ ಭರದಲ್ಲಿ ವಿನಯಚಂದ್ರ ತಾನು ಹಾಗೂ ತನ್ನ ಕಬ್ಬಡ್ಡಿ ಪ್ರೇಮದ ಬಗ್ಗೆ ಹೇಳಿದ. ಜಗತ್ತಿನಲ್ಲಿ ಅತ್ಯುತ್ತಮ ಕ್ರೀಡೆಯೆಂದರೆ ಕಬ್ಬಡ್ಡಿ ಎನ್ನುವಂತೆಯೂ ಮಾತನಾಡಿದ. ಕ್ರಿಕೆಟ್ಟಿಗೆ ಹೇಗೆ ವಿವಿಧ ದೂರದರ್ಶನ ವಾಹಿನಿಗಳಿವೆಯೋ ಅದೇ ರೀತಿ ಕಬ್ಬಡ್ಡಿಗೂ ಒಂದು 24*7 ವಾಹಿನಿ ಮಾಡಿ ಕಬ್ಬಡ್ಡಿ ಪಂದ್ಯಗಳನ್ನು ಪ್ರಸಾರ ಮಾಡುವ ಕನಸಿದೆ ಎಂಬ ಮಾತುಗಳನ್ನೂ ಆಡಿದ. ಕಬ್ಬಡ್ಡಿಗೆ ಹೆಚ್ಚಿನ ಗೌರವವನ್ನು ನೀಡಿ ಕಬ್ಬಡ್ಡಿಯನ್ನು ಜಗದ್ವಿಖ್ಯಾತ ಮಾಡುವ ಕನಸಿನ ಬಗ್ಗೆ ಮಧುಮಿತಾಳ ಜೊತೆ ಹಲವಾರು ಸಂಗತಿಗಳನ್ನು ಹಂಚಿಕೊಂಡ ವಿನಯಚಂದ್ರ.
                  ಮಾತು ಸಾಗಿದಂತೆ ಬಸ್ಸೂ ಎಗ್ಗಿಲ್ಲದೇ ಸಾಗುತ್ತಿತ್ತು. ಸೂರ್ಯ ಪಶ್ಚಿಮದಲ್ಲಿ ನಿಧಾನವಾಗಿ ಇಳಿಯುತ್ತಿದ್ದ. ಕೆಂಪು ಕೆಂಪಾಗಿ ಸುಲಿದ ಕಿತ್ತಳೆ ಹಣ್ಣಿನಂತೆ ಕಾಣುತ್ತಿದ್ದ ಸಂದರ್ಭದಲ್ಲಿಯೇ ಬಸ್ಸು ಕೂಡ ಕಾಂತಾಜಿ ದೇವಸ್ಥಾನವಿರುವ ಊರಿನ ಫಾಸಲೆಯತ್ತ ಬರುತ್ತಿತ್ತು. ದಿನಾಜ್ ಪುರದಿಂದ ಕಾಂತಾನಗರದತ್ತ ತಿರುಗುವ ವೇಳೆಗೆ ಕತ್ತಲೆ ಸುಳಿ ಸುಳಿದು ಬರತೊಡಗಿತ್ತು.
ಕಾಂತಾನಗರಕ್ಕೆ ಬರುವ ಮಾರ್ಗದಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಯಾವುದೋ ಯುಗಗಳ ಗೆಳೆಯರಂತಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಇಬ್ಬರೂ ಒಬ್ಬರಿಗೊಬ್ಬರು ಕುತೂಹಲಕ್ಕೆ ಕಾರಣವಾಗಿದ್ದರು. ಇವರ ಆಪ್ತತೆ ಸೂರ್ಯನ್ ಗೆ ಖುಷಿಯನ್ನು ತಂದಿತ್ತು. ಇಬ್ಬರ ನಡುವೆ ತಾನು ಬಂದು ತೊಂದರೆ ಕೊಡಬಾರದೆಂದು ದೂರವೇ ಉಳಿದಿದ್ದ.

**

                   ಕಾಂತಾನಗರದ ಮುಖ್ಯ ಆಕರ್ಷಣೆ ಕಾಂತಾಜಿ ದೇವಾಲಯ. ನಗರದ ಪ್ರಮುಖ ಸ್ಥಳವಾದ ಇದು ಅಪ್ಪಟ ಹಿಂದೂ ಶೈಲಿಯಲ್ಲಿದೆ. ಥಟ್ಟನೆ ನೋಡಿದರೆ ಅಸ್ಸಾಮಿನ ಯಾವುದೋ ದೇವಾಲಯದಂತೆ ಕಾಣುತ್ತದೆ. ಅಸ್ಸಾಮಿಗಳ ಪ್ರಭಾವ ಸಾಕಷ್ಟಿದ್ದಂತೆ ಅನ್ನಿಸುತ್ತದೆ. ಕಾಂತಾನಗರ ಹಿಂದುಗಳೇ ಬಹುಸಂಖ್ಯೆಯಲ್ಲಿರುವ ಊರು. ಭಾರತದ ಗಡಿಯಲ್ಲಿರುವ ಸ್ಥಳವೂ ಹೌದು. ದೂರದಿಗಂತದಲ್ಲಿ ಪರ್ವತಗಳ ಸಾಲು ಕಾಣಿಸುತ್ತದೆ. ಕೊರೆಯುವ ಚಳಿಯೂ ಇಲ್ಲಿದೆ. ಭಾರತದ ಗಡಿ ಹತ್ತಿರವಿರುವ ಕಾರಣ ಭಾರತದ ನಗರಕ್ಕೂ ಇಲ್ಲಿಗೂ ಬಸ್ ಸೌಕರ್ಯವಿದೆ. ಭಾರತದಿಂದಲೂ ಹಲವರು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆಂದು ಮಧುಮಿತಾ ಹೇಳಿದ್ದಳು.
                    ಶ್ರದ್ಧಾಭಕ್ತಿಯ ತಾಣವಾದ ಕಾಂತಾಜಿ ದೇವಾಲಯ ನವರತ್ನ ಶೈಲಿಯಲ್ಲಿ ನಿರ್ಮಾಣವಾಗಿತ್ತು. ಕಾಂತಾಜಿ ದೇವಾಲಯದ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದಂತೆ ಅನ್ನಿಸಿತು. ಬೆಳಕಿನ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿತ್ತು. ಸಂಜೆಗತ್ತಲಿನಲ್ಲಿ ಹಾಕಿದ್ದ ಬೆಳಕಿನಲ್ಲಿ ದೇಗುಲ ಬೆಳಗುತ್ತಿತ್ತು. ದೇವಾಲಯದ ಒಳಗೆ ತೆರಳಿ ಆಟಗಾರರೆಲ್ಲ ಪೂಜೆಯನ್ನು ಕೈಗೊಂಡರು.  ವಿಶ್ವಕಪ್ಪು ಶುಭತರಲಿ ಎಂದು ಬೇಡಿಕೊಂಡರು. ವಿನಯಚಂದ್ರನೂ-ಮಧುಮಿತಾರೂ ಪೂಜೆಯಲ್ಲಿ ಪಾಲ್ಗೊಂಡಿದ್ದರೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಇಬ್ಬರೂ ಒಟ್ಟಾಗಿ ತಿರುಗಾಡಿದ್ದು ಮಾತ್ರ ವಿಶೇಷ ಸಂಗತಿಗಳಲ್ಲಿ ಒಂದಾಗಿತ್ತು. ಈ ವಿಶೇಷತೆ ಉಳಿದ ಆಟಗಾರರಿಗೆ ಅಚ್ಚರಿತಂದಿತ್ತು. ಸೂರ್ಯನ್ ಮಾತ್ರ ಸಹಜವಾಗಿದ್ದಿದ್ದ.
               `ಹಗಲಿನಲ್ಲಿ ನೋಡಬೇಕು ಈ ದೇವಾಲಯವನ್ನು..'
                `ರಾತ್ರಿಯೇ ಇಷ್ಟು ಚಂದ ಕಾಣ್ತಾ ಇದೆ.. ಖಂಡಿತ ಬೆಳಗ್ಗೆ ಇನ್ನೂ ಚನ್ನಾಗಿರಬಹುದಲ್ವಾ..?'
                `ಹುಂ.. ವಿಶಾಲ ದೇವಾಲಯ, ದೈತ್ಯ ಕಂಬಗಳು.. ಕಂಬಗಳ ಮೇಲೆ ವಿಶಿಷ್ಟ ಕೆತ್ತನೆಗಳು.. ಬೆಳಗ್ಗೆ ಸೂರ್ಯನ ಕಿರಣ ನೇರವಾಗಿ ಗರ್ಭಗುಡಿಯಲ್ಲಿ ಕಾಂತಾಜಿ ಮೂರ್ತಿಯ ಮೇಲೆ ಬಿದ್ದಾಗ ಕಾಣುವ ದೃಶ್ಯವಂತೂ ಬಣ್ಣಿಸಲು ಅಸಾಧ್ಯ. ನಾಳೆ ಬೆಳಿಗ್ಗೆ ನೀನ್ನನ್ನು ನಾನು ಖಂಡಿತ ಕರೆದುಕೊಂಡು ಬರುತ್ತೇನೆ..'
                 `ಅಷ್ಟು ಮಾಡು ಮಾರಾಯ್ತಿ.. ನನಗೆ ಬಹಳ ಕುತೂಹಲವಿದೆ..' ವಿನಯಚಂದ್ರನಿಗೆ ಹಂಪಿಯನ್ನು ನೋಡಿದ್ದು ನೆನಪಾಯಿತು. ಹಂಪಿಯ ವಿಜಯ ವಿಠಲ ದೇವಾಲಯದ ಮೇಲೆ ಸೂರ್ಯನ ಮೊದಲ ಕಿರಣ ಬಿದ್ದು ಮೆರಗು ಮೂಡುವುದು ಕಣ್ಣಿಗೆ ಅಂದವನ್ನು ತಂದಿತ್ತು. ಅದೇ ಅಚ್ಚರಿ ಈ ದೇವಾಲಯದಲ್ಲೂ ಆಗುತ್ತದೆಯಾ ಎಂದುಕೊಂಡ ವಿನಯಚಂದ್ರ.
                 `ಖಂಡಿತ..'
ಮಧುಮಿತಾ-ವಿನಯಚಂದ್ರರ ಮಾತುಕತೆ ಸಾಗಿತ್ತು.

(ಮುಂದುವರಿಯುತ್ತದೆ..)

Wednesday, February 26, 2014

ಸನ್ಯಾಸಿ

ಎಲ್ಲ ಬಿಟ್ಟು
ಕಾವಿಯುಟ್ಟು
ಆದ ಆತ
ಸನ್ಯಾಸಿ,
ಪರಿವ್ರಾಜಕ |

ಮನದೊಳಗೆ
ತುಂಬಿಹುದು
ಆಸೆ ಆಮಿಷಗಳ
ರಾಶಿ, ರಾಶಿ |

ಕರಿ ಕಾಮ,
ಮೋಹ, ಲೋಭ
ಹಗೆ ಸಿಟ್ಟು
ಎಲ್ಲದಕ್ಕೆ ಕಟ್ಟು,
ತೋರಿಕೆಗೆ ಕೆಂಪು
ಕಾವಿ. ಸನ್ಯಾಸಿ |

ಮುಂದೊಮ್ಮೆ
ಜವನೆದುರು
ಸತ್ವ ಪರೀಕ್ಷೆ,
ಅಸಲು ಜ್ಞಾನದ
ತೋರಿಕೆ, ಆ ಕ್ಷಣ
ಆತ ಸನ್ಯಾಸಿ ||

**
(ಈ ಕವಿತೆ ಬರೆದಿದ್ದು 04-02-2007ರಲ್ಲಿ ದಂಟಕಲ್ಲಿನಲ್ಲಿ)

Tuesday, February 25, 2014

ಶ್..! ಸೀರಿಯಸ್ ಹನಿಗಳು

* ಹುಚ್ಚು ಪ್ರೀತಿ*

ಅವನು ಅವಳನ್ನು
ಹುಚ್ಚನಂತೆ ಪ್ರೀತಿಸಿದ |
ಬದುಕು ಅರ್ಪಿಸಿದ ||
ಕೊನೆಗೆ ಆ ಪ್ರೀತಿ
ಅವಳಿಗೆ ಒಂದು
ಹುಚ್ಚಾಸ್ಪತ್ರೆಯಲ್ಲಿ ಸಿಕ್ಕಿತು ||


*ನಗ್ನ ಸತ್ಯ*

ದೀಪ ಆರಿದಾಗ
ಬದುಕೆಲ್ಲ ಕತ್ತಲು |
ಬಟ್ಟೆ ಬಿಚ್ಚಿದಾಗ
ಬರಿ ಬೆತ್ತಲು
ಸುತ್ತಲೂ ||


*ಗಾಂಧಾರಿಯ ಮಗ*

ಗಾಂಧಾರಿಯ ಮನದೊಳಗಣ
ಸುಪ್ತ ಧೂರ್ತತನಗಳ
ಮೂರ್ತ ರೂಪವೇ
ದುರ್ಯೋಧನ ||

*ಬಾರಿ*

ಅತ್ತೆಗೊಂದು ಬಾರಿ
ಸೊಸೆಗೊಂದು ಬಾರಿ
ಆದರೆ ಬಡವನ
ಪಾಲಿಗೆ ಇರುವುದೊಂದೇ
ದುಬಾರಿ ||

*ಸಂಸಾರ*

ಸಂಸಾರವೆಂದರೆ
ನಿಸ್ಸಾರ ಎಂದೆಲ್ಲಾ
ಹೇಳಿದ ಕವಿಗಳಿಗೆ
ಕೊನೆಗೂ ಗೊತ್ತಾಗಲಿಲ್ಲ
ಅದರಲ್ಲೂ  SOME
ಸಾರವಿದೆ ಎಂಬುದು ||

*ವಿರಹಧಾರೆ*

ಸೂರ್ಯ-ಚಂದ್ರರ ಪ್ರೇಮದ
ಕಣ್ಣಾಮುಚ್ಚಾಲೆಯಲ್ಲಿ
ಬೆಂದುಹೋದ ಭುವಿ
ಮಳೆಯಾಗಿ ಕಣ್ಣೀರು
ಸುರಿಸಿದಳು ||

*ಒಡಲಾಳ-1*

ಮಳೆ ಭೂಮಿಯೊಳಗಿನಿಂದ
ಬರತೊಡಗಿದರೆ ಏನಾಗುತ್ತೆ..?
ಸಿಡಿಲು-ಗುಡುಗು
ಭುವಿಯಲ್ಲಿ ಹುಟ್ಟುತ್ತೆ..||

*ಒಡಲಾಳ-2*

ಮಳೆ ಭೂಮಿಯೊಳಗಿನಿಂದ
ಬರತೊಡಗಿದರೆ
ಏನಾಗುತ್ತೆ..?
ಲಾವಾರಸ ಆಕಾಶದಿಂದ
ತೊಟ್ಟಿಕ್ಕುತ್ತದೆ ಅಷ್ಟೆ..||


*ಗೆಲುವು*

ಆತ ಅವಳ ಜೊತೆಗೆ
ಕಾಂಪಿಟೇಶನ್ನುಗಳಲ್ಲಿ
ಸೋತು ಸೋತು
ಅವಳ ಮನಸ್ಸನ್ನೇ
ಗೆದ್ದುಕೊಂಡುಬಿಟ್ಟ ||

*ಬೆಳಗು*

ಆಗಸದ ತುಟಿಗಳು
ಭುವಿಯ ಚುಂಬನದಿಂದ
ರಂಗೇರಿದೆ |
ಒಂದರೆಗಳಿಗೆಯಲ್ಲಿ ಬಾಳ
ಕತ್ತಲೆ ಮರೆತು ರಂಗು
ರಂಗಾಗಿ ಬೆಳಕಾಗುತ್ತಿದೆ ||

*ಬಾ-ನಲ್ಲ*

ಓಹ್... ಆ ಆಗಸವೇಕೆ
ಕೆಂಪು ಕೆಂಪಾಗಿದೆ..?
ಬಹುಶಃ ಅದಕ್ಕೆ
ಭುವಿಯ ನಲ್ಲನ
ಆಗಮನದ ಸುದ್ದಿಯ
ಅರಿತಿರಬೇಕು ||

*ನಾಚುವ ನೇಸರ*

ಸೂರ್ಯನಿಗೂ ಪ್ರಿಯತಮೆ ಭೂಮಿ
ಎಂದರೆ ಆಗಾಗ ನಾಚಿಕೆ |
ಅದಕ್ಕೇ ಆತ ಮೋಡದಲ್ಲಿ
ಮರೆಯಾಗುತ್ತಾನೆ ||

****
(ಲೈಟ್ ಕಾಮಿಡಿನ ಎಷ್ಟು ದಿನ ಅಂತ ಬರೀತಿಯಾ..? ಒಂಚೂರು ಸೀರಿಯಸ್ ಆದ ಬರಹಗಳನ್ನು ಬರಿ ಎಂದವರು ಕೆಲವರು. ಹಾಗೆ ನನಗೆ ಬರೆಯಲು ಬರುವುದೇ ಇಲ್ಲ ಎಂದುಕೊಂಡಿದ್ದೆ. ಒತ್ತಾಯ ಮಾಡಿದರು ದೋಸ್ತರು. ಸುಮ್ಮನೆ ನೋಡುವಾ ಎಂದು ಬರೆದಿದ್ದೇನೆ.. ಈ ರೀತಿಯಾಗಿದೆ.. ಹೇಗಿದೆ ಎನ್ನುವುದು ನಿಮ್ಮ ಅಭಿಪ್ರಾಯದಿಂದ ತಿಳಿಯಬೇಕು.. ಹೇಳ್ತೀರಲ್ವಾ.?)

Monday, February 24, 2014

ಹಿಸೆ ಪಂಚಾಯ್ತಿಕೆ-1

ಯಂಗ್ಳೂರಲ್ ನಡೆದಿತ್ತು
ಹಿಸೆ ಪಂಚಾಯತ್ಗೆ
ದೊಡ್ಡ ದೊಡ್ಡ ಪಂಚರು ಸೇರಿದ್ದ
ಸಂಜೆ ಹೊತ್ತಿಗೆ ||

ಗಂಡ್ ಮಕ್ಕ ಐದು ಜನ
ಪಾಲು ಕೇಳ್ತಿದ್ದ
ಮನೆ ಯಜಮಾನ್ ಸುಬ್ಬಣ್ಣಯ್ಯ
ಸಿಟ್ಟು ಮಾಡ್ತಿದ್ದ ||

ಜಮೀನಿತ್ತು ಐದೆಕರೆ
ತೋಟ ಅರ್ಧಮರ್ಧ
ಗದ್ದೆಲೆಂತೂ ಬೆಳಿತಿತ್ತಿಲ್ಲೆ
ಜಟಾಪಟಿ ನಡೆಸಿದ್ದ ||

ತುದಿಮನೆ ಗಪ್ಪಜ್ಜ
ಪಂಚರಲ್ಲೇ ಹಿರಿಯ
ಅಂವ ಹೇಳಿದ್ದೆ ಕೊನೆಯ ಮಾತು
ಎದುರು ಆಡಲಡಿಯ ||

ಸೋಮನಳ್ಳಿ ಶಿರಿ ಹೆಗಡೇಗೂ
ಪಂಚನ ಪಾರ್ಟು ಕೊಟ್ಟಿದ್ದ
ಹೊಸ ಮನೆ ಒಡೆದು ಹಾಕಲೆ
ಪಟ್ಟಾಗಿ ಕುಳಿತಿದ್ದ ||

ಹುಲಿ ಹೊಡೆದಿದ್ ಸುಬ್ಬಜ್ಜನೂ
ಪಂಚರ ಸಾಲು ಹೊಕ್ಕಿದ್ದ
ಮಾತಾಡಿದ್ರೆ ಮುಗಿದೇ ಹೋತು
ನ್ಯಾಯ ತೀರ್ಮಾನ ಮಾಡ್ತಿದ್ದ ||

ಪಕ್ಕದಮನೆ ಮಂಜಣ್ಣ
ಸುಮ್ಮಂಗಿಪ್ಪವಲ್ಲ
ಪಂಚರ ಸಾಲಲ್ ಇರದೇ ಇದ್ರೆ
ತಂಡು ಕೂರವಲ್ಲ ||

ಯಂಗ್ಲೂರಲ್ಲೇ ದೊಡ್ಡ ಮನೆ
ಹಿಸೆಯಾಗಲೆ ಹಣಕಿತ್ತು
ಮನೆ ಒಡೆಯದ್ ನೋಡಲಂತೂ
ಸುಮಾರ್ ಮನಸು ಕಾದಿತ್ತು ||

ನಾಲ್ಕೈದ್ ದಿನ ಪಂಚಾಯ್ತಿ
ನಡೆದರೂ ಕೂಡ
ಹಿಸೆಯಪ್ಪವ್ಕೆ ಒಮ್ಮನಸು
ಮೂಡ್ಲೇ ಇಲ್ಲ ನೋಡ ||

ಪಂಚಾಯತಿಕೆ ನಡೆಯುವಾಗ
ನಾಲ್ಕೈದು ಸಾರಿ ಚಾ ಆತು
ಮ್ಯಾಲಿಂದ ಮೇಲೆ ಮಾಡಿಟ್ಟಿದ್ದ
ಅವಲಕ್ಕಿ ಚುಡವಾ ಮುಗದಿತ್ತು ||

ಪದೆ ಪದೆ ಪಂಚಾಯತಿಕೆ
ಮುಂದ್ ಮುಂದಕ್ಕೆ ಹೋಗ್ತಿತ್ತು
ಎಷ್ಟು ಸಾರಿ ಒಟ್ ಗೂಡಿದ್ರೂ
ಮುಂದಿನ ದಿನಾಂಕ ಸಿಕ್ತಿತ್ತು ||

ಮತ್ತೆ ನಡೆದ ಪಂಚಾಯತಿಕೆ
ಫುಲ್ ಫೇಲ್ ಆಗೋಜು
ಎಲ್ಲಾ ಒಪ್ಪಿರೂ ಮನಸಾಜಿಲ್ಲೆ
ಪಂಚಾಯತಿಕೆ ಮುಂದಕ್ ಹೋಗಾಜು ||

**
(ನಾನು ಕಂಡ ಒಂದು ಹಿಸೆ ಪಂಚಾಯತಿಕೆಯನ್ನು ಹವ್ಯಕ ಶೈಲಿಯ ಹಾಡಿನ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಬಹಳ ದಿನಗಳ ಕಾಲ ನಡೆದ ಹಿಸೆ ಪಂಚಾಯತಿಕೆಯನ್ನು ಒಂದೇ ಕಂತಿನಲ್ಲಿ ಹೇಳಲು ಅಸಾಧ್ಯವಾದ ಕಾರಣ ಮುಂದಿನ ಕಂತುಗಳಿಗೂ ವಿಸ್ತರಿಸುವ ಪ್ರಯತ್ನ ಮಾಡಿದ್ದೇನೆ. ಸಾಕಷ್ಟು ದೀರ್ಘವೂ, ವಿಚಿತ್ರವೂ, ಕಣ್ಣೀರು ಜನಕವೂ ಆಗಿದ್ದ ಆ ಹಿಸೆ ಪಂಚಾಯತಿಕೆಯ ಮೊದಲ ಭಾಗ ಈ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗಿಷ್ಟವಾಗಬಹುದು.. )

Saturday, February 22, 2014

ಬೆಂಗಾಲಿ ಸುಂದರಿ-8

                   ಭಾರತ ಕಬ್ಬಡ್ಡಿ ತಂಡದವರನ್ನು ಹೊತ್ತ ಬಸ್ಸು ಢಾಕಾದ ಹೊಟೆಲಿನಿಂದ ನಿಧಾನವಾಗಿ ಕಾಂತಾಜಿ ದೇವಸ್ಥಾನದ ಕಡೆಗೆ ಹೊರಟಿತು. ಗಂಗಾನದಿಯ ಕಿನಾರೆಯಲ್ಲಿ ಬಸ್ಸು ಬಳುಕುತ್ತಾ ಹೋಗುತ್ತಿದ್ದರೆ ವಿನಯಚಂದ್ರನ ಮನಸ್ಸಿನಲ್ಲಿ ತೆರೆಗಳೇಳುತ್ತಿದ್ದವು. ಮಧುಮಿತಾಳ ಮಾತು, ನಡೆ, ನುಡಿ, ಹಾವ-ಭಾವ ವಿನಯಚಂದ್ರನ ಮನಸ್ಸನ್ನು ಕಲಕಿಬಿಟ್ಟಿದ್ದವು. ಬಸ್ಸಿನ ಕೊನೆಯ ಸೀಟಿಗಿಂತ ಒಂದು ಸೀಟು ಮುಂಚೆ ಕುಳಿತಿದ್ದ ವಿನಯಚಂದ್ರ ಚಟಪಡಿಕೆಯಿಂದ ಎದ್ದು ಬಂದ. ಎಲ್ಲರೂ ವಿಷ್ಮಯದಿಂದ ನೋಡಲಾರಂಭಿಸಿದ್ದರು.
                  ಸೂರ್ಯನ್ ಅಂತೂ ಹೋ.. ಎಂದ. ಬಂದವನೇ ಮಧುಮಿತಾಳ ಬಳಿ ಬಂದ. ಎದ್ದು ಬಂದುಬಿಟ್ಟವನಿಗೆ ಮಧುಮಿತಾಳ ಬಳಿ ಏನು ಮಾತನಾಡಬೇಕು ಎಂದು ತಿಳಿಯಲಿಲ್ಲ. `ಅದು.. ಅದು..' ಎನ್ನತೊಡಗಿದ.. ಕೊನೆಗೆ ಮಧುಮಿತಾಳ ಸೀಟಿನ ಬಳಿಯಿದ್ದ ನೀರಿನ ಬಾಟಲಿ ಕಂಡು `ವಾಟರ್..' ಎಂದ.. ಕೊಟ್ಟಳು.
                  ಕೊಡುವಾಗ ಅವಳ ಕೈ ಹಿತವಾಗಿ ತಾಗಿ ವಿನಯಚಂದ್ರ ಮತ್ತೊಮ್ಮೆ ಭ್ರಮಿತನಾದ. ಮೈ ಝುಂ ಎಂದಿತು. ವಾಪಾಸು ಹೋಗುವಾಗ ಸಿಕ್ಕ ಸೂರ್ಯನ್  `ಏನಲ್ಲಾ.. ಯಾವಾಗ್ಲೂ ಇಲ್ಲದ ಬಾಯಾರಿಕೆ ಇವತ್ತು ಜಾಸ್ತಿಯಾಗ್ತಾ ಇದೆಯಾ..? ಒಂದೇ ಬಾಟಲ್ ನೀರು ಸಾಕಾ ಅಥವಾ ಇನ್ನೂ ಜಾಸ್ತಿ... ಬೇಕಾಗಬಹುದಾ..? ಯಾಕೋ ಗಾಡಿ ಎಲ್ಲೆಲ್ಲೋ ಹೋಗ್ತಾ ಇದೆಯಲ್ಲ.. ನಾನು ನಿನಗೆ ಕಾಂಪಿಟೇಶನ್ ಕೊಡೋದಿಕ್ಕೆ ಬರಲಾ..?' ಎಂದ.
                 ವಿನಯಚಂದ್ರನಿಗೆ ಸಿಟ್ಟು ಬಂದಂತಾದರೂ ತೋರಿಸಿಕೊಳ್ಳದೇ ಸುಮ್ಮನೇ ತನ್ನ ಸೀಟಿಗೆ ಹೋಗಿ ಕುಳಿತ. ಕುಳಿತಿದ್ದನಾದರೂ ಮನಸ್ಸಿನ ತಳಮಳ ಮೇರೆ ಮೀರಿತ್ತು. ಬಸ್ಸಿನ ಕಿಟಕಿಯಲ್ಲಿ ಹೊರ ಜಗತ್ತಿನ ಕಡೆಗೆ ಕಣ್ಣು ಹಾಯಿಸಿದ. ಬಸ್ಸು ಗಂಗಾ ನದಿಯ ದಡದಲ್ಲಿ ಸುತ್ತು ಬಳಸುತ್ತಾ ಹೋಗುತ್ತಿತ್ತು. ಮಧುಮಿತಾಳ ನೆನಪಿನ ನಡುವೆಯೂ ನದಿಯ ಅಗಾಧತೆ ಕಂಡು ವಿಸ್ಮಿತನಾದ. ಭಾರತದಲ್ಲಿ ಗಂಗಾ ನದಿ ದೈತ್ಯವಾಗಿದ್ದರೂ ಬಾಂಗ್ಲಾದೇಶದಲ್ಲಿ ಅದರ ಅಗಾಧತೆ ಇನ್ನೂ ಹೆಚ್ಚು. ತನ್ನ ತೆಕ್ಕೆಗೆ ಇನ್ನೂ ನಾಲ್ಕೈದು ನದಿಗಳನ್ನು ತೆಗೆದುಕೊಂಡು ಹರಿಯುವ ಗಂಗೆ ಇಲ್ಲಿ ದೈತ್ಯೆಯಾಗಿ ಕಾಣುತ್ತಾಳೆ.  ಅಬ್ಬರಿಸುತ್ತಾಳೆ. ಸಮುದ್ರವನ್ನು ಸೇರುವ ತವಕದಲ್ಲಿ ಜೋರಾಗಿ ಹರಿಯುತ್ತಾಳೆ. ಯಾಕೋ ಈ ನದಿಯ ದಡದಲ್ಲಿ ಒಮ್ಮೆ ಇಳಿದು ನಡೆಯುತ್ತಾ ಹೋಗಬೇಕೆನ್ನಿಸಿತು ವಿನಯಚಂದ್ರನಿಗೆ.
                 ಅದೇ ಸಂದರ್ಭದಲ್ಲಿ ಬಸ್ಸಿನೊಳಗೆ ಕುಳಿತಿದ್ದ ಸೂರ್ಯನ್ ಸೀದಾ ಎದ್ದು ಹೋದವನೇ ಮಧುಮಿತಾಳ ಬಳಿ ತೆರಳಿ ಏನೋ ಹೇಳಿದ. ವಿನಯಚಂದ್ರನಿಗೆ ಕಂಡಿತಾದರೂ ಸೂರ್ಯನ್ ಏನು ಮಾತನಾಡಿದ ಎನ್ನುವುದು ತಿಳಿಯಲಿಲ್ಲ. ವಿನಯಚಂದ್ರ ಒಮ್ಮೆ ಉರಿದುಬಿದ್ದನಾದರೂ ಹೊರಗೆ ತೋರಿಸಿಕೊಳ್ಳಲಿಲ್ಲ. ಹಾಗೆಯೇ ಸ್ವಲ್ಪ ಸಮಯ ಕಳೆದ ನಂತರ ಆತನಿಗೆ ನಿದ್ದೆ ಬಂದಂತಾಯಿತು. ಕಣ್ಮುಚ್ಚಿ ನಿದ್ರಿಸಲು ಹವಣಿಸಿದ. ಇದ್ದಕ್ಕಿದ್ದಂತೆ ಒಂದು ಧ್ವನಿ `ಹಲೋ..' ಎಂದಿತು.. ಕಣ್ಣು ಬಿಟ್ಟು ನೋಡಿದರೆ ಎದುರಿಗೆ ಮಧುಮಿತಾ.. ವಿನಯಚಂದ್ರ ಒಮ್ಮೆ ಕಕ್ಕಾಬಿಕ್ಕಿ. ವಿನಯಚಂದ್ರನ ಪಕ್ಕದ ಖಾಲಿ ಸೀಟನ್ನು ನೋಡಿ `ನಾನಿಲ್ಲಿ ಕೂರಬಹುದಾ..' ಎಂದಳು. ಬಸ್ಸಿನಲ್ಲಿ ಸಾಕಷ್ಟು ಖಾಲಿ ಸೀಟಿದ್ದರೂ ಈ ಸೀಟಿಗೆ ಬಂದು ಕೂರುತ್ತಿದ್ದಾಳೆ ಎಂದುಕೊಂಡರೂ ವಿನಯಚಂದ್ರನಿಗೆ ಒಳಗೊಳಗೆ ಖುಷಿಯಾಯಿತು. `ಖಂಡಿತ..' ಎಂಬಂತೆ ಸನ್ನೆ ಮಾಡಿದ.
               ಕುಳಿತವಳೇ ಮಧುಮಿತಾ ವಿನಯಚಂದ್ರನ ಬಳಿ `ಅರಾಮಾಗಿದ್ದೀರಾ..? ಈಗ ಆರೋಗ್ಯ ಹೇಗಿದೆ..?' ಎಂದು ಕೇಳಿದಳು.
                  ವಿನಯಚಂದ್ರ  ಇದ್ದಕ್ಕಿದ್ದಂತೆ ಬೆಚ್ಚಿಬಿದ್ದು `ನನಗಾ..? ಆರೋಗ್ಯವಾ..? ನನಗೇನಾಗಿದೆ..?..' ಎಂದ.
                  `ಹಾಂ.. ನಿಮಗೆ ಆರೋಗ್ಯ ಸರಿಯಿಲ್ಲ.. ಜ್ವರ ಬಂದಿದೆ.. ಎಂದರಲ್ಲ ಅವರು..' ಎಂದು ಮಧುಮಿತಾ ಸೂರ್ಯನ್ ಕಡೆಗೆ ಕೈತೋರಿಸಿದಾಗ ಆತ ಬಿದ್ದು ಬಿದ್ದು ನಗಲಾರಂಭಿಸಿದ್ದ.
                 ಸೂರ್ಯನ್ ಏನೋ ಪ್ಲಾನ್ ಮಾಡಿದ್ದಾನೆ ಎಂದು ಅರಿತ ವಿನಯಚಂದ್ರ `ಹೌದು ನನಗೆ ಸ್ವಲ್ಪ ಹುಷಾರಿರಲಿಲ್ಲ. ಈಗ ಪರವಾಗಿಲ್ಲ. ರಾತ್ರಿ ಸ್ವಲ್ಪ ಜ್ವರ ಇತ್ತು.  ಬೆಳಿಗ್ಗೆ ಪ್ರಾಕ್ಟೀಸ್ ಮಾಡುತ್ತ ಮಾಡುತ್ತ ಸರಿಯಾಯಿತು..' ಎಂದ. ಆಕೆ ಬಂಗಾಳದಲ್ಲಿ ಜ್ವರದ ಬಗ್ಗೆ ಸ್ವಲ್ಪ ಹುಷಾರಾಗಿರಬೇಕೆಂದು ಚಿಕ್ಕದಾಗಿ ಹೇಳಿದಳು. ಸರಿಯೆಂದು ತಲೆಯಾಡಿಸಿದ.
ಇಷ್ಟಾದರೂ ಆಕೆ ತನ್ನ ಪಕ್ಕದ ಸೀಟಿನಿಂದ ಎದ್ದು ಹೋಗಲಿಲ್ಲ. ತನ್ನ ಮನಸ್ಸಿನಲ್ಲಿ ತಳಮಳವನ್ನೆಬ್ಬಿಸಿದ ಹುಡುಗಿ ಉಸಿರು ತಾಕುವಷ್ಟು ಸನಿಹ ಕುಳಿತಿದ್ದಾಳೆ. ಒಮ್ಮೆ ಬಾಚಿ ತಬ್ಬಿಕೊಳ್ಳಲೇ ಎಂದುಕೊಂಡ. ಮನಸ್ಸು ಹಿಂಜರಿಯಿತು.
                ಸುಮ್ಮನೆ ಹೊತ್ತು ಹೋಗಲಿಲ್ಲ. ವಿನಯಚಂದ್ರನೇ ಮಾತನಾಡಬೇಕು ಎಂದುಕೊಂಡನಾದರೂ ಮಾತು ಮುಂದುವರಿಯಲಿಲ್ಲ. ಕೊನೆಗೆ ಮಧುಮಿತಾಳೇ ವಿನಯಚಂದ್ರನ ಬಳಿ ತನ್ನ ಪರಿಚಯ ಹೇಳಿಕೊಳ್ಳಲಾರಂಭಿಸಿದಳು. ಆಕೆ ಮಾತನಾಡುತ್ತಿದ್ದುದನ್ನು ಕೇಳುತ್ತ ಕುಳಿತ. ಕೊನೆಗೆ ತಾನೂ ಏನಾದರೂ ಮಾತನಾಡಬೇಕೆಂದುಕೊಂಡು ತನ್ನ ಪರಿಚಯವನ್ನು ಹೇಳಿಕೊಂಡ. ತನ್ನೂರು, ತನ್ನ ಮನೆ, ಮನೆತನ, ತಾನು ಕಬ್ಬಡ್ಡಿ ಆಟಗಾರನಾಗಿದ್ದು, ಮನೆಯಲ್ಲಿ ಬೆಳೆದ ಪರಿಸರ ಇತ್ಯಾದಿಗಳ ಬಗ್ಗೆ ಮಾತಾಡಿದ. ಮಾತನಾಡುತ್ತಲೇ ಇದ್ದ. ಮಧುಮಿತಾ ಕುತೂಹಲದಿಂದ ಕೇಳುತ್ತಿದ್ದಳು. ಮಾತಿನ ಭರದಲ್ಲಿ ಬಸ್ಸು ಸಾಗಿದ ಅರಿವಾಗಲಿಲ್ಲ.
                 ಅವರಿದ್ದ ಬಸ್ಸು ಅಲ್ಲೆಲ್ಲೋ ಬ್ರಹ್ಮಪುತ್ರ ನದಿಯನ್ನೂ ದಾಟಿತು. ಭಾರತದಲ್ಲಿರುವ ಕೆಲವೇ ಕೆಲವು ಗಂಡು ಹೆಸರಿನ ನದಿಗಳಲ್ಲಿ ಬ್ರಹ್ಮಪುತ್ರವೂ ಒಂದು. ಅತಿದೊಡ್ಡ ನದಿಯೂ ಹೌದು. ಟಿಬೆಟಿನ ಯಾವುದೋ ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿ ದೂರ ದೂರಕ್ಕೆ ಹರಿದು ಇದ್ದಕ್ಕಿದ್ದಂತೆ ದೊಡ್ಡದೊಂದು ತಿರುವು ಪಡೆದು ಅರುಣಾಚಲದ ಮೂಲಕ ಭಾರತ ಪ್ರವೇಶ ಮಾಡುವ ಬ್ರಹ್ಮಪುತ್ರ ಮುಂದೆ ಬಾಂಗ್ಲಾದೇಶಕ್ಕೆ ಬಂದು ಗಂಗೆಯ ಒಡಲನ್ನು ಸೇರುವಲ್ಲಿಗೆ ಎರಡು ಸಹಸ್ರ ಕಿಲೋಮೀಟರ್ ದೂರ ಕ್ರಮಿಸುತ್ತದೆ.
               ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಗೆ ಸೇತುವೆ ನಿರ್ಮಾಣ ಮಾಡಿರದ ಕಾರಣ ಶಿವಾಲಯ ಎಂಬ ಸ್ಥಳದಲ್ಲಿ ಲಾಂಚಿನ ಮೂಲಕ ಬಸ್ಸನ್ನು ದಾಟಿಲಾಯಿತು. ತಂಡದ ಆಟಗಾರರು ಬಸ್ಸಿನಿಂದ ಕೆಳಗಿಳಿದು ಬ್ರಹ್ಮಪುತ್ರ ನದಿಯನ್ನು ನೋಡಲು ಲಾಂಚಿನ ಮೇಲೆ ಬಂದರು. ವಿನಯಚಂದ್ರನಿಗೂ ಹೋಗಬೇಕೆನ್ನಿಸಿತ್ತಾದರೂ ಪಕ್ಕದಲ್ಲಿ ಮಧುಮಿತಾ ಕುಳಿತಿದ್ದಳಲ್ಲ. ಹಾಗಾಗಿ ಏಳಲು ಮನಸ್ಸಾಗಲಿಲ್ಲ. ಬಸ್ಸಿನ ಕಿಡಕಿಯಿಂದಲೇ ನೋಡುತ್ತ ಕುಳಿತ. ಬ್ರಹ್ಮಪುತ್ರಾ ನದಿಯ ಮೇಲಿನಿಂದ ಹಾರಿ ಬಂದ ಗಾಳಿ ವಿನಯಚಂದ್ರನನ್ನು ಹಾದು ಮಧುಮಿತಾಳ ಮುಂಗುರಳನ್ನು ಹಾರಿಸುತ್ತಾ ಹೋದದ್ದನ್ನು ಬೆಪ್ಪಾಗಿ ನೋಡುತ್ತ ಕುಳಿತ ವಿನಯಚಂದ್ರ. ಯಾಕೋ ಮತ್ತೊಮ್ಮೆ ಆತನ ಮನಸ್ಸು ನದಿಯಂತಾಗಿತ್ತು. ಹೃದಯ ಹಾಡಲಾರಂಭಿಸಿತ್ತು. ಮತ್ತೆ ಮತ್ತೆ ಕಲರವ ಎದ್ದಿತ್ತು.
                  ಅಲ್ಲಿಂದ ಮುಂದೆ ಸಾಗಿದ ಅವರ ವಾಹನ ಸೀದಾ ಕಾಶೀನಾಥಪುರಕ್ಕೆ ಬಂದಿತು. ಹೆಸರನ್ನೆಲ್ಲ ನೋಡುತ್ತಿದ್ದ ವಿನಯಚಂದ್ರ ಬಾಂಗ್ಲಾದೇಶವೂ ಭಾರತದಲ್ಲೇ ಇದ್ದಿದ್ದರೆ ಎಷ್ಟು ಚನ್ನಾಗಿತ್ತಲ್ಲ ಎಂದುಕೊಂಡ. ಕಾಶೀನಾಥಪುರದಲ್ಲಿ ತಿಂಡಿಗಾಗಿ ಬಸ್ಸನ್ನು ನಿಲ್ಲಿಸಲಾಯಿತು. ಆಟಗಾರರೇ ಒತ್ತಾಯ ಮಾಡಿ ಯಾವುದೋ ಢಾಬಾ ಬಳಿ ಬಸ್ಸು ನಿಲ್ಲಿಸಲು ಹೇಳಿದ ಕಾರಣ ರಸ್ತೆ ಪಕ್ಕದಲ್ಲಿ ಬಸ್ಸನ್ನು ಹಾಕಲಾಗಿತ್ತು. ಇಳಿಯುವ ಮುನ್ನ ಮಧುಮಿತಾ ಮತ್ತೆ ಎಂದಿನ ರೂಲ್ಸುಗಳನ್ನು ಮತ್ತೆ ಮತ್ತೆ ಹೇಳಿದಳು. ಆಟಗಾರರೆಲ್ಲ ಕೇಳಿದಂತೆ ಮಾಡಿದರು. ಕಾಶೀನಾಥಪುರದ ಸರಹದ್ದಿನಲ್ಲಿ ಈ ಬಸ್ಸನ್ನು ನಿಲ್ಲಿಸಲಾಗಿತ್ತು. ಸಾಕಷ್ಟು ಜನರಿದ್ದರೂ ಯಾರೊಬ್ಬರೂ ಇವರನ್ನು ಗುರುತಿಸಲಿಲ್ಲ. ಗುರುತಿಸಲು ಇವರೇನು ಕ್ರಿಕೆಟ್ ಆಟಗಾರರೇ ಅಥವಾ ಬಾಲಿವುಡ್ ನಟರೇ. ಕಬ್ಬಡ್ಡಿ ಆಟಗಾರರು. ಯಾರೋ ಸೀದಾ ಸಾದಾ ಜನರಿರಬೇಕು ಎಂದುಕೊಂಡರು. ಆದರೆ ಇವರನ್ನು ಕರೆತಂದಿದ್ದ ಹೈಟೆಕ್ ಬಸ್ಸು ಮಾತ್ರ ಕಾಶೀನಾಥಪುರದ ಜನರನ್ನು ಸೆಳೆಯಿತು. ಬಂದವರ್ಯಾರೋ ದೊಡ್ಡ ಜನವೇ ಇರಬೇಕು ಎಂದುಕೊಂಡರು.
                 ಎಲ್ಲ ಆಟಗಾರರೂ ಬಸ್ಸಿನಿಂದ ಇಳಿದಿದ್ದರಾದರೂ ಸೂರ್ಯನ್ ಹಾಗೂ ವಿನಯಚಂದ್ರ  ಇಳಿದಿರಲಿಲ್ಲ. ಸೂರ್ಯನ್ ವಿನಯಚಂದ್ರನ ಬಳಿ ಬಂದು `ದೋಸ್ತ್.. ನಿನ್ ಪಾಡು ನನಗೆ ನೋಡ್ಲಿಕ್ಕೆ ಆಗಲಿಲ್ಲ ಮಾರಾಯಾ.. ಅದಕ್ಕೆ ನಿಂಗೆ ಹುಷಾರಿಲ್ಲ ಅಂದೆ.. ಅವಳ ಬಳಿ ಹೇಳಿ ನಿನ್ನನ್ನು ಮಾತನಾಡಿಸುವಂತೆ ಮಾಡಿದೆ.. ಸಾರಿ ಯಾ..' ಎಂದ.
                `ನೀನು ನನಗೆ ಹುಷಾರಿಲ್ಲ  ಎಂದು ಅವಳ ಬಳಿ ಹೇಳಿದೆ ಎಂದ ಕೂಡಲೇ ಏನೋ ನಾಟಕ ಮಾಡ್ತಿದ್ದಾನೆ ಎಂದುಕೊಂಡೆ. ಮೊದಲಿಗೆ ಒಂದು ಸಾರಿ ತಲೆಬುಡ ಗೊತ್ತಾಗಲಿಲ್ಲ. ಆದರೆ ಕೊನೆಗೆ  ನಾನು ನಿನ್ನ ಮಾತಿಗೆ ಪೂರಕವಾಗಿ ನಡೆದುಕೊಂಡೆ.. ಥ್ಯಾಂಕ್ಸ್ ದೋಸ್ತಾ.. ಅವಳ ಒಡನಾಟ ಕಲ್ಪಿಸಿಕೊಟ್ಟಿದ್ದಕ್ಕೆ..' ಎಂದ ವಿನಯಚಂದ್ರ.
                 `ಹಾಕ್ತೀನಿ ನೋಡು ಬುರುಡೆಗೆ.. ಥ್ಯಾಂಕ್ಸ್ ಹೇಳ್ತಾನಂತೆ.. ದೋಸ್ತನಿಗೆ ಇಷ್ಟಾದರೂ ನಾನು ಮಾಡಬಾರದೇ..' ಎಂದು ಕಣ್ಣು ಮಿಟುಕಿಸಿದ ಸೂರ್ಯನ್.. `ಬಾ ತಿಂಡಿ ತಿಂದು ಬರೋಣ..' ಎಂದು ಕರೆದ.
                  ವಿನಯಚಂದ್ರನಿಗೆ ಯಾಕೋ ಹೋಗಲು ಮನಸ್ಸಾಗಲಿಲ್ಲ. ಬೇಡ ಎಂದ. ಆದರೆ ಸೂರ್ಯನ್ ಕೇಳಲಿಲ್ಲ. ಎಳೆದುಕೊಂಡು ಹೋದ. ಇವರಿಬ್ಬರೂ ಕೊನೆಯವರಾಗಿ ಬಸ್ಸಿಳಿದಿದ್ದನ್ನು ಮಧಮಿತಾ ಗಮನಿಸಿದ್ದಳು. ಢಾಬಾದಲ್ಲಿ ಒಂದು ಟೇಬಲ್ ಹಿಡಿದು ಇವರಿಬ್ಬರಿಗಾಗಿ ಕಾಯುತ್ತಿದ್ದಳು. ಮತ್ತೊಮ್ಮೆ ಸೂರ್ಯನ್ ವಿನಯಚಂದ್ರನಿಗೆ ಹುಷಾರಿಲ್ಲ  ಎಂದು ಹೇಳಿದ್ದು ಇಲ್ಲಿ ಸಹಾಯ ಮಾಡಿತ್ತು. ಸೂರ್ಯನ್, ವಿನಯಚಂದ್ರ ಟೇಬಲ್ಲಿಗೆ ಹೋಗಿ ಕುಳಿತರು.
                ಎಗ್ ರೈಸ್ ತಿನ್ನುವ ವಿನಯಚಂದ್ರ ಸುತ್ತಮುತ್ತ ನೋಡಿದ. ಉಳಿದ  ಆಟಗಾರರೆಲ್ಲ ನಾನ್ ವೆಜ್ ಮೆಲ್ಲಲು ಆಗಲೇ ಆರಂಭಿಸಿದ್ದರು. ವಿನಯಚಂದ್ರ  ಅತ್ತ ಇತ್ತ ನೋಡಲಾರಂಭಿಸಿದಾಗಲೇ ಮಧುಮಿತಾ `ಏನಾಯ್ತು..' ಎಂದಿದ್ದಳು.
ಆಗ ನಡುವೆ ತಲೆಹಾಕಿದ ಸೂರ್ಯನ್ `ವಿನಯಚಂದ್ರ ವೆಜ್..' ಎಂದ.
                 ಅಚ್ಚರಿಗೊಂಡ ಮಧುಮಿತಾ `ನಿಜ್ಜಾನಾ? ನಿಮಗೆ ಇಲ್ಲಿ ತಿಂಡಿ ತಿನ್ನಿಸೋದು ಕಷ್ಟ ಇದೆ. ಏನ್ ಮಾಡೋದು..' ಎಂದು ಹೇಳಿದಳು.
                `ನಿನಗೆ ನೀರೇ ಗತಿ.. ತಗೋ..' ಎಂದು ಸೂರ್ಯನ್ ನೀರಿನ ಬಾಟಲಿಯನ್ನು ವಿನಯಚಂದ್ರನ ಮುಂದೆ ಇಟ್ಟ.
ಹೆ ಹೆ ಎಂದು ವಿನಯಚಂದ್ರ ಹಲ್ಲುಕಿರಿದ. ಕೊನೆಗೆ ಮಧುಮಿತಾಳ ಬಳಿ `ಎಗ್ ರೈಸ್ ಸಿಗುತ್ತಾ ಕೇಳಿ..' ಎಂದ.  `ಒಂದ್ ನಿಮಿಷ..' ಎಂದವಳೆ ಎದ್ದು ಹೋದಳು. ಸೂರ್ಯನ್ ವಿನಯಚಂದ್ರನ ಬಳಿ `ಪರವಾಗಿಲ್ಲ ಕಣೋ ನೀನು.. ನಿನ್ನ ಟೇಸ್ಟು ಚನ್ನಾಗಿದೆ. ಹುಡುಗಿ ಒಳ್ಳೆಯವಳಂತೆ ಕಾಣುತ್ತಾಳೆ. ಆದರೆ ದೇಶ ಮಾತ್ರ ಬೇರೆಯದಲ್ಲ.. ನಿನಗೂ ಇವಳಿಗೂ ಆಗಿಬರುವುದಿಲ್ಲ..' ಎಂದ.
                 `ಥೂ ನಿನ್ನ.. ಏನಯ್ಯಾ ನೀನು.. ಅಂಥದ್ದೇನಿಲ್ಲ ಮಾರಾಯಾ.. ಜಸ್ಟ್ ಇಸ್ಟ ಆದಳು ಅಷ್ಟೆ..' ಎಂದ ವಿನಯಚಂದ್ರ.
                  `ಇದೆಲ್ಲಾ ಬೇಡಪ್ಪಾ.. ನನಗೆ ಗೊತ್ತಾಗುತ್ತೆ.. ನಿನ್ನ ಮನಸ್ಸಿನ ತಳಮಳ...ನಿಂಗೆ ಅವಳು ಅಂದ್ರೆ ಬಹಳ ಇಷ್ಟ. ಆದರೆ ಹೇಳಿಕೊಳ್ಳೋದು ಕಷ್ಟ ಅಲ್ವಾ..' ಎಂದ ಸೂರ್ಯನ್..
                  ವಿನಯಚಂದ್ರ ಬೆಪ್ಪಾಗಿ ಅವನನ್ನೇ ನೋಡುತ್ತಿದ್ದಂತೆ ಮಧುಮಿತಾ ಬಂದವಳೇ `ಎಗ್ ರೈಸ್ ಸಿಗುತ್ತೆ.. ತೊಂದ್ರೆ ಇಲ್ಲ..' ಎಂದಳು. ವಿನಯಚಂದ್ರ ಉಸಿರಾಡಿದ. ಉಪವಾಸ ತಪ್ಪಿತು ಎಂದುಕೊಂಡ.
             ಮಧುಮಿತಾಳಿಗೆ ವಿನಯಚಂದ್ರ ಯಾಕೋ ಕುತೂಹಲವನ್ನು ಹುಟ್ಟುಹಾಕಿದ್ದ. ಸಾಮಾನ್ಯವಾಗಿ ಕಬ್ಬಡ್ಡಿ ಆಟಗಾರರೆಂದರೆ ನಾನ್ ವೆಜ್ ತಿನ್ನುತ್ತಿರುತ್ತಾರೆ ಎಂದುಕೊಂಡಿದ್ದಳಾಕೆ. ಆದರೆ ಎಗ್ ರೈಸ್ ಹೊರತು ಪಡಿಸಿ ಬೇರೆ ಯಾವುದೇ ನಾನ್ ವೆಜ್ ತಿನ್ನದ ವಿನಯಚಂದ್ರನ ಬಗ್ಗೆ ಏನೋ ಒಂದು ಭಾವನೆ. ತಾನೂ ನಾನ್ ವೆಜ್ ತಿನ್ನೋದಿಲ್ಲ  ಎನ್ನುವುದನ್ನು ಯಾರಿಗೂ ಹೇಳಲಿಲ್ಲ. ಆದರೆ ಸಪ್ಲಾಯರ್ ಎರಡು ಪ್ಲೇಟ್ ಎಗ್ ರೈಸ್ ತಂದಿಟ್ಟಾಗ ಮಾತ್ರ ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೂ ವಿಭಿನ್ನ ಆಲೋಚನೆಗಳನ್ನು ಮಾಡಿದ್ದರು.
                 ವಿನಯಚಂದ್ರನಿಗೆ ಬೇಜಾರಾಗುತ್ತದೆ ಎನ್ನುವ ಕಾರಣಕ್ಕಾಗಿ ಇವಳು ಎಗ್ ರೈಸ್ ಆರ್ಡರ್ ಮಾಡಿದ್ದಾಳೆ. ಅಥವಾ ವಿನಯಚಂದ್ರನ ಎದುರು ನಾನ್ ವೆಜ್ ತಿನ್ನುವುದು ಸರಿಯಲ್ಲ ಎನ್ನುವ ಕಾರಣಕ್ಕಾಗಿ ಇವಳೂ ಎಗ್ ರೈಸ್ ತಿನ್ನುತ್ತಿದ್ದಾಳೆ. ಅಂತೂ ವಿನಯಚಂದ್ರನ ಬಗ್ಗೆ ಇವಳಿಗೆ ಒಳ್ಳೆಯದೇ ಭಾವನೆ ಇದೆ ಎಂದುಕೊಂಡ ಸೂರ್ಯನ್. ಬಾಂಗ್ಲಾದೇಶದಲ್ಲಿದ್ದುಕೊಂಡು ಎಗ್ ರೈಸ್ ತಿನ್ನುವ ಮಧುಮಿತಾಳೂ ವೆಜಿಟೇರಿಯನ್ನಿರಬಹುದೇ ಎಂದುಕೊಂಡವನು ವಿನಯಚಂದ್ರ. ಆದರೆ ಯಾರೂ ಬಾಯಿಬಿಟ್ಟು ಕೇಳಲಿಲ್ಲ. ಮಧುಮಿತಾಳೂ ಹೇಳಲಿಲ್ಲ.
                  ಬಾಂಗ್ಲಾದೇಶದ ವಿಶಿಷ್ಟ ಬಗೆಯ ತಿಂಡಿಯೊಂದನ್ನು ಕೊನೆಯಲ್ಲಿ ತಂದಿಟ್ಟರು. ಅದನ್ನು ತಿನ್ನುತ್ತಿದ್ದಂತೆ ವಿನಯಚಂದ್ರನಿಗೆ ಮಲೆನಾಡಿನಲ್ಲಿ ಆಲೆಮನೆಯ ಸಂದರ್ಭದಲ್ಲಿ ಮಾಡುವ ತೊಡೆದೇವು ನೆನಪಿಗೆ ಬಂದಿತು. ತಕ್ಷಣವೇ ಸೂರ್ಯನ್ ಹಾಗೂ ಮಧುಮಿತಾಳ ಬಳಿ ಇದೇ ರೀತಿಯ `ತೊಡೆದೇವು' ಎನ್ನುವ ತಿಂಡಿಯನ್ನು ತಮ್ಮೂರ ಭಾಗದಲ್ಲಿ ಮಾಡುತ್ತಾರೆಂದೂ ಬಹಳ ಚನ್ನಾಗಿರುತ್ತದೆಂದೂ ತಿಳಿಸಿದ.
                  ಅದಕ್ಕೆ ಪ್ರತಿಯಾಗಿ ಸೂರ್ಯನ್ `ನೀನು ಎಲ್ಲಿ ಹೋದರೂ ನಿಮ್ಮೂರಿಗೆ ಹೋಲಿಕೆ ಮಾಡೋದನ್ನು ಬಿಡಬೇಡ.. ಯಾವಾಗ ನೋಡದ್ರೂ ನಮ್ಮೂರಲ್ಲಿ ಹಂಗೆ.. ನಮ್ಮೂರಲ್ಲಿ ಹಿಂಗೆ ಅಂತಾನೇ ಹೇಳ್ತಾ ಇರು..' ಎಂದ.
                 `ಹೌದಪ್ಪಾ.. ಹೌದು.. ನಮ್ಮೂರೇ ನಮಗೆ ಸವಿಬೆಲ್ಲ.. ನಮ್ಮೂರು ಅಂದರೆ ಸ್ವರ್ಗ.. ಅದಕ್ಕೆ ನಾನು ನಮ್ಮೂರಿನ ಬಗ್ಗೆ, ನಮ್ಮೂರಿನ ವಿಶೇಷತೆಗಳ ಬಗ್ಗೆ ಆಗಾಗ ಹೇಳ್ತಾ ಇರುತ್ತೇನೆ..' ಎಂದ ವಿನಯಚಂದ್ರ.
                  ಮಧುಮಿತಾಳಿಗೆ ತೊಡದೇವು ಕುತೂಹಲ ಹುಟ್ಟಿಸಿತು. ತೊಡದೇವಿನ ಕುರಿತು ವಿನಯಚಂದ್ರಬಳಿ ಕೇಳಿ ತಿಳಿದುಕೊಂಡಳು. ಮಾಡುವ ಬಗೆ, ಅದರ ರುಚಿ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಳು. ಸೂರ್ಯನ್ ಗೆ ಇದು ಬೋರೆನ್ನಿಸಿದ್ದರೂ ಅಪರೂಪಕ್ಕೆಂಬಂತೆ ಸುಮ್ಮನೆ ಉಳಿದಿದ್ದ. ಬಾಂಗ್ಲಾದೇಶದ ಹಿಂದೂ ದೇವಾಲಯದ ಟ್ರಿಪ್ಪು, ಅನಾರೋಗ್ಯದ ನಾಟಕ ಹಾಗೂ ಡಾಭಾಗಳು ವಿನಯಚಂದ್ರ ಹಾಗೂ ಮಧುಮಿತಾಳಲ್ಲಿ ಆತ್ಮೀಯತೆಯನ್ನು ಹುಟ್ಟುಹಾಕಿದ್ದವು. ಅವರಿಬ್ಬರೂ ಗೆಳೆತನದ ಪರೀಧಿಯೊಳಗೆ ಸೇರಿದ್ದರು. ಸೂರ್ಯನ್ ಇವರಿಬ್ಬರನ್ನೂ ಪರಿಚಯಿಸಿ ಆತ್ಮೀಯವಾಗಿಸಿದ್ದರೆ ವಿನಯಚಂದ್ರನ ಮನಸ್ಸು ಮಧುಮಿತಾಳ ಕಡೆಗೆ ವಾಲುತ್ತಿತ್ತು. ಮಧುಮಿತಾಳ ಮನಸ್ಸಿನಲ್ಲಿ ಏನಿದೆಯೋ ಎನ್ನುವ ಕುತೂಹಲ ಕಾಡುತ್ತಿತ್ತು.

**

                   ಮತ್ತೆ ಬಸ್ಸನ್ನೇರಿದಾಗ ಮಧುಮಿತಾಳೇ ಉದ್ದೇಶಪೂರ್ವಕವಾಗಿ ವಿನಯಚಂದ್ರನ ಪಕ್ಕ ಬಂದು ಕುಳಿತಳು. ವಿನಯಚಂದ್ರ ಅರಳಿದ ಹೂವಿನಂತಾಗಿದ್ದ. ಪಕ್ಕ ಕುಳಿತ ಮಧುಮಿತಾಳಿಗೆ ವಿನಯಚಂದ್ರ ಆಪ್ತನಾಗಿದ್ದ. ಅಷ್ಟೇ ಅಲ್ಲದೇ ಆತ ತನ್ನ ಒಂದೆರಡು ನಡೆ ನುಡಿಗಳ ಮೂಲಕ ಕುತೂಹಲವನ್ನೂ ಹುಟ್ಟುಹಾಕಿದ್ದ.
                  ವಿನಯಚಂದ್ರ ಹಾಗೂ ಮಧುಮಿತಾ ಒಟ್ಟಾಗಿ ಕುಳಿತು ಬರುತ್ತಿರುವುದು ಭಾರತದ ಕಬ್ಬಡ್ಡಿ ತಂಡದ ಆಟಗಾರರಿಗೆ ಅಚ್ಚರಿಯನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಒಂದಿಬ್ಬರಿಗಂತೂ ಇಲ್ಲೇನೋ ನಡೆಯುತ್ತಿದೆ ಎನ್ನುವಂತೆ ಇವರಿಬ್ಬರ ಕಡೆಗೆ ಇಣುಕಿ ನೋಡುತ್ತಿದ್ದರು, ಕದ್ದು ನೋಡುತ್ತಿದ್ದರು. ಮಧುಮಿತಾ ಹಾಗೂ ವಿನಯಚಂದ್ರನಿಗೆ ಇದು ಇರಿಸುಮುರುಸು ಉಂಟು ಮಾಡಿದ್ದಂತೂ ನಿಜ. ಆದರೆ ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಭಾರತ ತಂಡದ ಅನೇಕ ಆಟಗಾರರೂ ಮಧುಮಿತಾಳ ಸಾನ್ನಿಧ್ಯಕ್ಕೆ ಹಾತೊರೆದಿದ್ದರು. ಈ ಕಾರಣದಿಂದಾಗಿ ಮಧುಮಿತಾ ವಿನಯಚಂದ್ರನ ಬಳಿ ಕುಳಿತಿದ್ದು ಅನೇಕರ ಮನಸ್ಸಿನಲ್ಲಿ ಕಿಚ್ಚನ್ನೂ ಹಚ್ಚಿಸಿತ್ತು. ಆದರೆ ಯಾರೂ ಅದನ್ನು ತೋರ್ಪಡಿಸಿಕೊಳ್ಳಲಿಲ್ಲ ಅಷ್ಟೇ. ಆದರೂ ವಿನಯಚಂದ್ರನ ಪಕ್ಕ ಆಕೆ ಕುಳಿತಿದ್ದ ಕಾರಣ ಕುತೂಹಲದಿಂದ ನೋಡಿದ್ದು ಸಹಜವಾಗಿತ್ತು.
                  ಮಧುಮಿತಾಳಿಗೆ ವಿನಯಚಂದ್ರನ ಊರಿನ ಕುರಿತು ಕುತೂಹಲ ಮೂಡಿತ್ತು. ಅದೇ ರೀತಿ ವಿನಯಚಂದ್ರನಿಗೂ ಮಧುಮಿತಾಳ ಬಗೆಗೆ ಹಾಗೂ ಅವಳ ಕುಟುಂಬ, ಬಾಂಗ್ಲಾದಲ್ಲಿ ಅವಳಿರುವ ಜಾಗ, ಬಾಂಗ್ಲಾದೇಶದಲ್ಲಿರುವ ಹಿಂದುಗಳು, ಇಲ್ಲಿ ಅವರ ಪರಿಸ್ಥಿತಿ ಇತ್ಯಾದಿಗಳ ಬಗ್ಗೆ ಕೇಳಬೇಕೆಂದುಕೊಂಡಿದ್ದ. ಆದರೆ ಹೇಗೆ ಕೇಳುವುದು ಎಂದುಕೊಂಡ.
                    ಬಸ್ಸು ಮುಂದಕ್ಕೆ ಚಲಿಸುತ್ತಿತ್ತು. ಬಸ್ಸು ಸಾಗುತ್ತಿದ್ದ ದಾರಿಯಲ್ಲಿ ಸಿಗುತ್ತಿದ್ದ ಊರುಗಳೆಲ್ಲ ಹಿಂದೂ ಹೆಸರಿನವುಗಳೇ ಆಗಿದ್ದವು. `ಚನ್ನಾಗಿದೆ..ಹಿಂದೂ ಹೆಸರುಗಳು..' ಎಂದ ಮಧುಮಿತಾಳ ಬಳಿ ವಿನಯಚಂದ್ರ.
                    `ಒಂದಾನೊಂದು ಕಾಲದಲ್ಲಿ ಭಾರತದ್ದೇ ಭಾಗವಾಗಿತ್ತು. ಆಮೇಲೆ ಪಾಕಿಸ್ತಾನದ ಭಾಗವಾಗಿ ಈಗ ಬಾಂಗ್ಲಾದೇಶ ಎಂಬ ಹೆಸರನ್ನು ಪಡೆದುಕೊಂಡಿದ್ದರೂ ತನ್ನ ಹೆಸರನ್ನು ಬದಲು ಮಾಡಿಕೊಂಡಿಲ್ಲ. ಮಿರಪುರ, ಕಾಶೀನಾಥಪುರ, ಶಿವಾಲಯ, ಅಷ್ಟೇ ಏಕೆ ಢಾಕಾ ಎಂಬ ಹೆಸರೂ ತನ್ನ ಮೂಲ ಹೆಸರನ್ನೇ ಉಳಿಸಿಕೊಂಡಿವೆ. ಢಾಕಾ ಎಂದರೆ ಢಾಕಿಣಿ ದೇವಿಯ ಅಪಭ್ರಂಶವಾಗುತ್ತದೆ.  ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹೆಚ್ಚಿರಬಹುದು. ಆದರೆ ಅಲ್ಲಲ್ಲಿ ಅಪ್ಪಟ ಹಿಂದೂ ಸಂಸ್ಕೃತಿ ಎದ್ದು ಕಾಣುತ್ತದೆ. ಆದರೆ ಇತ್ತೀಚೆಗೆ ಮಾತ್ರ ಪರಿಸ್ಥಿತಿ ಬದಲಾಗುತ್ತಿದೆ. ಬಾಂಗ್ಲಾದೇಶ ಅರಾಜಕತೆಯ ಬೀಡಾಗುತ್ತಿದೆ..' ಎಂದು ಹೇಳಿದಳು.
                     ಬಾಂಗ್ಲಾದೇಶದಲ್ಲಿ ಎಲ್ಲವೂ ಸರಿಯಿಲ್ಲ. ಏನೋ ನಡೆಯುತ್ತಿದೆ. ಆದರೆ ಮೇಲ್ನೋಟಕ್ಕೆ ಮಾತ್ರ  ಎಲ್ಲವೂ ಸರಿಯಿದ್ದಂತೆ ಬಿಂಬಿಸಿಕೊಳ್ಳಲಾಗುತ್ತಿದೆ. ಯಾರದ್ದೋ ಕಣ್ಣುಕಟ್ಟಲು, ಯಾರನ್ನೋ ಮೆಚ್ಚಿಸಲು ಸರ್ಕಸ್ ಮಾಡುತ್ತಿದ್ದಂತೆ ವಿನಯಚಂದ್ರನಿಗೆ ಅನ್ನಿಸಿತು. ನಿಜಕ್ಕೂ ಬಂಗಾಲದ ನಾಡು ಸುಂದರಿಯಾಗಿಯೇ ಇದ್ದಾಳಾ ಅನ್ನಿಸಿತು. ಬಂಗಾಲದ ದೇಶ ಮೇಲ್ನೋಟಕ್ಕೆ ಚನ್ನಾಗಿದೆ. ಆದರೆ ಒಳಗೊಳಗೆ ಹುಣ್ಣಾಗಿದೆಯೇನೋ ಅನ್ನಿಸಿತು. ತಾನೇ ಸೃಷ್ಟಿಸಿಕೊಂಡ ಗೊಂದಲದ ಗೂಡಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಂತೆ ಅನ್ನಿಸಿತು.

(ಮುಂದುವರಿಯುತ್ತದೆ..)

Friday, February 21, 2014

ಪ್ರೀತಿಯಿಲ್ಲದೆಡೆಯಲ್ಲಿ

ಪ್ರೀತಿಯಿಲ್ಲದ ನಾಡಿನಲ್ಲಿ
ಮಳೆಯೇ ಇಲ್ಲ
ಬರವೇ ಎಲ್ಲ | ಉಸಿರೇ ಇಲ್ಲ  ||

ಪ್ರೀತಿಯಿಲ್ಲದ ಬಾಳಿನಲ್ಲಿ
ನಗುವೇ ಇಲ್ಲ
ಅಳುವೆ ಎಲ್ಲ | ಸಿಟ್ಟೇ ಎಲ್ಲ ||

ಪ್ರೀತಿಯಿಲ್ಲದ ಜಾಗದಲ್ಲಿ
ಗೆಲುವೇ ಇಲ್ಲ
ಸೋಲೆ ಎಲ್ಲ | ಜೀವವೇ ಇಲ್ಲ ||

ಪ್ರೀತಿಯಿಲ್ಲದ ಗುಡಿಯಲ್ಲಿ
ಶಾಂತಿಯೇ ಇಲ್ಲ
ನಿರಾಸೆಯೇ ಎಲ್ಲ | ಸುಖವೇ ಇಲ್ಲ ||

ಪ್ರೀತಿಯಿಲ್ಲದ ಬೀಡಿನಲ್ಲಿ
ಮಾತೇ ಇಲ್ಲ
ಮೌನವೇ ಎಲ್ಲ | ನೀ-ರವವೇ ಎಲ್ಲ ||

ಪ್ರೀತಿಯಿಲ್ಲದ ಕವನದಲ್ಲಿ
ಅರ್ಥವೇ ಇಲ್ಲ
ನೀ-ರಸವೇ ಎಲ್ಲ | ಸೊಲ್ಲೇ ಇಲ್ಲ ||

**
(ಈ ಕವಿತೆಯನ್ನು ಬರೆದಿದ್ದು ದಂಟಕಲ್ಲಿನಲ್ಲಿ 09.03.2006ರಂದು)

Thursday, February 20, 2014

ನಗಲೊಂದಿಷ್ಟು ಹನಿಗಳು

ನಗೋಣ ಬನ್ನಿ
*ಅಡಿಕೆ-ಕುಣಿಕೆ
ಹಿಂದೊಮ್ಮೆ ತರುತ್ತಿತ್ತು ಅಡಿಕೆ
ಹೊನ್ನಿನ ಕುಣಿಕೆ
ಆದರೆ ಈಗ ತರತೊಡಗಿದೆ
ನೇಣಿನ ಕುಣಿಕೆ ||

*ಸ್ವಯಂWARಅ
ಸ್ವಯಂವರ  ಎಂದರೆ
ಬೇರೇನೂ ಅಲ್ಲ
ತಾನೇ ತಾನಾಗಿ WARನ್ನು
ಹುಡುಕಿಕೊಳ್ಳುವುದು ಎಂದರ್ಥ ||

*ಹಸ್ತಾಂತರ
ಹಸ್ತಾಂತರ, ಅಧಿಕಾರ
ಹಸ್ತ-ಅಂತರ
ಎಂಬ ಅವಾಂತರದಲ್ಲಿ
ದೇವೇಗೌಡರಿಗಿಂತ ಹೆಚ್ಚು
ನಡುಗಿದ್ದು ಕುಮಾರ ||

* ಸೂರು-ಚೂರು
ನಾನಿನ್ನ ಬಯಸಿದಾಗ
ಹೃದಯವಾಗಿತ್ತು
ಪ್ರೀತಿಯ ಸೂರು|
ಆದರೆ ನೀನೀಗ
ಬಿಟ್ಟುಹೋದಾಗ
ಅದಾಗಿತ್ತು ಚೂರು ಚೂರು ||

*ವ್ಯತ್ಯಾಸ
ಆನೆ ಇದ್ದರೂ ಸಾವಿರ
ಸತ್ತರೂ ಸಾವಿರ|
ಆದರೆ ಮಾನವ?
ಇದ್ದರೂ ಸಾಲ
ಸತ್ತರೂ ಸಾಲ ||

*ಹೊಸ ಗಾದೆ
ಈಚಲ ಮರದಡಿಗೆ
ಕುಳಿತು ಮಜ್ಜಿಗೆ ಕುಡಿದಂತೆ |
ಈ ಗಾದೆ ಹಳೆಯದಾಯ್ತಂತೆ.
ನಯಾ ಜಮಾನಾಕ್ಕೆ
ಹೊಸತು ಬೇಕಂತೆ
ಅದಕ್ಕೇ ಬಂತ್ರೀ ಈ ಗಾದೆ
`ಬಾರಿಗೆ ಹೋಗಿ
ಕೂಲ್ ಡ್ರಿಂಕ್ಸ್, ನಿಂಬೆ ಪಾನಕ
ಕುಡಿದಂತೆ' ||

*ಟೈಟಲ್ಲು
ಅವನು
ಟೈಟಾದಾಗಲೆಲ್ಲ
ಟೈಟಲ್ಲುಗಳು
ಹುಟ್ಟಿಕೊಳ್ಳುತ್ತವೆ ||

*ನನ್ನ ಕವನ
ನನ್ನ ಕವನಗಳು
ಹಾಗೆಯೇ
ಕಾಲಿ, ಪೀಲಿ
ಪೋಲಿ ||

(ನಗಲಿಕ್ಕೊಂದಷ್ಟು ಹನಿಗಳು.. ಸುಮ್ಮನೆ ನಕ್ಕುಬಿಡಿ.. ಬೇಜಾರಾದಾಗ ಓದಿ ರಿಲ್ಯಾಕ್ಸ್ ಆಗಿ..)

Wednesday, February 19, 2014

ಇದ್ದಡ

ನಾನು-ನೀನು
ಒಂದು ನದಿಯ
ಇಕ್ಕೆಲದ ದಡದ ಪಯಣಿಗರು
ನಾನಿತ್ತ ನೀನತ್ತ...

ಆಗಾಗ ನಿನ್ನ ಮುಂಗುರಳ
ನಡುವಿಂದ ಸುಳಿದು ಬರುವ
ಗಾಳಿ ನನ್ನ ಮನಸ್ಸಿಗೆ ತಾಕಿ
ಹಕ್ಕಿಯಂತೆ ರೆಕ್ಕೆಪುಕ್ಕ
ನಾನು ಬಾನಾಡಿ

ಹೆಚ್ಚಿನ ಕಾಲ ನಿನ್ನ ಬಯಸಿ
ಸನಿಹಕ್ಕೆ ಬರಲು ಕಾತರಿಸಿ
ಎಷ್ಟೆಲ್ಲ ದಿಟ್ಟಿಸಿದರೂ
ನದಿಯ ತಡೆಗೋಡೆ
ಭ್ರಮ ನಿರಸನ ನಿಟ್ಟುಸಿರು

ನಿನಗೂ ನನ್ನೆಡೆಗೆ ಕುಡಿನೋಟ.
ಸೇರುವ ಕಾತರ-ಬಯಕೆ
ನದಿಯ ದೆಸೆಯಿಂದ ದೂರ ದೂರ..
ಒಂಟಿ ಪಯಣ

ಆಗಾಗ ಸಿಗುವ ದ್ವೀಪಗಳು
ನಮ್ಮ ಕನಸಿಗೆ ಮತ್ತೆ ಚಾಲನೆ
ನದಿ ದಾಟೋಣ್ವಾ..?
ಆಗುತ್ತೋ ಇಲ್ವೋ..?
ಭಯ, ದುಗುಡ.. ನದಿ ಆಳವಿದ್ದರೆ
ಮುಳುಗಿ ಹೋದರೆ ಎಂಬ ಶಂಕೆ

ಮತ್ತಷ್ಟು ದೂರ ಸಾಗಿದರೆ ನದಿಯ
ನಡು ನಡುವಲ್ಲೆಲ್ಲ ಬಂಡೆಗಳು
ಗಟ್ಟಿ ಗಟ್ಟಿ ಜಗಜಟ್ಟಿಗಳು
ಇಲ್ಲೂ ದಾಟುವಾ ಎಂದರೆ
ಮತ್ತದೇ ಭಯ..
ನೀನಿಲ್ಲ ನಾನಿಲ್ಲ..
ನೀನಲ್ಲಿ ನಾನಲ್ಲಿ
ಮನಸು ಇದ್ದಡ.. ಇದ್ದಡ

ಕೊನೆಗೂ ಸಿಕ್ಕಿದೆ..
ಯಾರೋ ಪುಣ್ಯಾತ್ಮ ಕಟ್ಟಿದ ಸೇತುವೆ
ನನಗೂ ನಿನಗೂ ಬಾಳುವೆ..
ನೀನೂ ದಾಟಿದೆ..
ನಾನೂ ದಾಟಿದೆ..

ಮಾತಿನ ಮೊದಲು ಕೇಳಿದೆ..
ಮನಸಿದೆಯಾ..? ತಲೆ ತಗ್ಗಿಸಿದಳು..
ನಿನಗೂ ನನಗೂ
ಮನಸು ಇದ್ದಡ.. ಇದ್ದಡ..

**
(ಈ ಕವಿತೆ ಬರೆದಿದ್ದು 19-02-2014ರಂದು ಶಿರಸಿಯಲ್ಲಿ)

ಮನದ ತುಂಬ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದ ಪರಿ..

(ಗೋಜಲು ಬದುಕಿಗೊಂದು ಸಾಂದರ್ಭಿಕ ಚಿತ್ರ)
              ಅವನ ಬದುಕೇ ಒಂದು ದೊಡ್ಡ ಟ್ರಾಜಿಡಿ ಎಂದರೂ ತಪ್ಪಾಗಲಿಕ್ಕಿಲ್ಲ. ಅವನು ಏನೆಲ್ಲಾ ಮಾಡ್ಬೇಕು ಅಂದ್ಕೊಂಡು ಪ್ರತಿ ಕೆಲಸಕ್ಕೆ ಕೈ ಹಾಕಿದ್ರೂ ಅದೆಲ್ಲಾ ಫೇಲ್ ಆಗಿಬಿಡುತ್ತೆ. ಆತ ಮತ್ಯಾರು ಅಲ್ಲ. ನನಗೆ ಹೈಸ್ಕೂಲಿನಲ್ಲಿ ಸಿಕ್ಕ  ಒಬ್ಬ  ಆತ್ಮೀಯ ಗೆಳೆಯ. ದೀಪಕ.  ಆತ ಮನಸ್ಸಿನಲ್ಲಿ ಏನೇನೋ ಇಟ್ಗೊಂಡಿರ್ತಾನಾದ್ರೂ ತಾನು ಅದನ್ನು ತಲುಪಲು ಆಗೋದೇ ಇಲ್ಲ.
              ಮೂಲತಃ ಅವನೊಬ್ಬ ಮುಂಗೋಪಿ. ಪೂರ್ ಫೆಲ್ಲೋ. ಎಂಟರಿಂದ ಹತ್ತನೇ ಕ್ಲಾಸಿನ ವರೆಗೆ ಆತ ನನಗೆ ಸಹಪಾಠಿಯಾಗಿ ಸಿಕ್ಕಿದಾಗಲೇ ಆತ ಹೇಗೆ, ಏನು, ಎತ್ತ  ಎಂಬುದು ನನಗೆ ಸಂಪೂರ್ಣ ಪರಿಚಯವಾಗಿದ್ದು. ಒಬ್ಬ ವ್ಯಕ್ತಿಯನ್ನು ನಂಬಿದ  ಎಂದಾದರೆ ಮುಗೀತು. ತನ್ನೊಳಗಿನ ಸಕಲ ಗುಟ್ಟನ್ನೂ ಆತನ ಬಳಿ ಒದರಿಬಿಡುವ ಗುಣವನ್ನು ದೀಪಕ ಹೊಂದಿದ್ದ.
              ನಾನು ಎಂಟನೇ ತರಗತಿಯಲ್ಲಿ ಓದ್ಲಿಕ್ಕೆ ಅಂತ ಸಾಗರದ ಕಾನ್ಲೆ ಹೈಸ್ಕೂಲನ್ನು ಸೇರಿದ ದಿನವೇ ಆತ ನನ್ನ ಪ್ರಾಣಮಿತ್ರನಾಗಿಬಿಟ್ಟಿದ್ದ. ಅವನಿಗೆ ನನ್ನ ಗೆಳೆತನ ಮಾಡಲೇಬೇಕೆಂಬ ದರ್ದೂ ಇತ್ತೆಂದು ಕಾಣುತ್ತದೆ. ಏಕೆಂದರೆ ಹೈಸ್ಕೂಲಿನಲ್ಲಿ ಆಗ ಇದ್ದ ಬ್ರಾಹ್ಮಣ ಹುಡುಗರೆಂದರೆ ಮೂರೂ ನಾಲ್ಕೋ ಅಷ್ಟೆ. ಅವರಲ್ಲಿ ನಾನೂ ಒಬ್ಬ-ಅವನೂ ಒಬ್ಬ.  ಹುಡುಗಿಯರಲ್ಲೂ ಒಂದಿಬ್ಬರು ಇದ್ದರು. ಜೊತೆಗೆ ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಮಾಸ್ತರ್ರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾನು ಸರಿಯುತ್ತರಗಳನ್ನು ಕೊಟ್ಟು ಕೊಟ್ಟು ಸ್ವಲ್ಪ ಬುದ್ಧಿವಂತ ಹುಡುಗ ಎನ್ನುವ ಹವಾ ಸೃಷ್ಟಿ ಮಾಡಿಕೊಂಡಿದ್ದೆ. ಓದಿನಲ್ಲಿ ಹಿಂದಿದ್ದರೂ ಮಾತಿನಲ್ಲಿ ಜೋರಾಗಿದ್ದ  ಆತ ಈ ಕಾರಣದಿಂದಲೇ ನನ್ನ ಜೊತೆಗೆ ಬಂದು ಮಿತೃತ್ವ ಪಡೆದುಕೊಂಡನೇನೋ ಅನ್ನಿಸುತ್ತದೆ.
               ಪ್ರತಿಸಾರಿ ಹೈಸ್ಕೂಲು ಚುನಾವಣೆ ಬಂದರೂ ಆತ ನಿಲ್ಲುತ್ತಿದ್ದ. ನಿಂತು ಸೋಲುತ್ತಿದ್ದ. ಚುನಾವಣೆಗೆ ನಿಂತಾಗಲೆಲ್ಲ ನೋಡಬೇಕು ದೀಪಕನ ಅಬ್ಬರ. ಥೇಟು ರಾಜಕಾರಣಿಗಳಂತೆ ಉದ್ದದ್ದ ಭಾಷಣವನ್ನು ಬಿಗಿಯುತ್ತಿದ್ದ. ಇತರ ಹುಡುಗರು ಆತನ ಮಾತನ್ನು ಭಕ್ತಿಯಿಂದ ಕೇಳುತ್ತಿದ್ದರು. ಪ್ರತಿ ಸಾರಿ ಚುನಾವಣೆಗಳಲ್ಲಿ ನಡೆಯುತ್ತಿದ್ದಂತೆ ಭಾಷಣ ಕೇಳಿದ ನಂತರ ಆತನನ್ನು ಮರೆತುಬಿಟ್ಟು ಬೇರೆಯವರಿಗೆ ಮತ ಹಾಕಿ ಬಿಡುತ್ತಿದ್ದರು.
               ಹೀಗಿದ್ದ ದೀಪಕನಿಗೆ ಮಾಸ್ಟ್ರಿಂದ ಪ್ರತಿ ದಿನ ಹೊಡೆತ ಬಿದ್ದೇ ಬೀಳುತ್ತಿತ್ತು. ನಾವು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ರಾಮಪ್ಪ  ಉರುಫ್ ಆರ್ಬಿಎನ್ ಎಂಬ ಮಾಸ್ಟ್ರರೊಬ್ಬರಿದ್ದರು.  ಹೊಡೆತಕ್ಕೆ ಹೆಸರುವಾಸಿ ಮಾಸ್ಟರ್ ಅವರು. ಅವರಂತೂ ಪ್ರತಿದಿನ ಇವನ ಬಳಿಯೇ ಹೊಡೆತದ ಕೋಲು ತರಲು ಹೇಳುತ್ತಿದ್ದರು. ಅವರು ಹೇಳಿದಾಗಲೆಲ್ಲಾ ಖುಷಿಯಿಂದ ಗಾಳಿ ಶೆಳಕೆಯನ್ನೋ, ಅಕೇಸಿಯಾ ಕೋಲನ್ನೋ ಮುರಿದು ತರುತ್ತಿದ್ದವನಿಗೆ ಸಿಗುತ್ತಿದ್ದುದು ಬೋನಸ್ಸು ಹಾಗೂ ಬೋಣಿ ಎಂಬಂತೆ ಅದೇ ಕೋಲಿನಿಂದ ಹೊಡೆತ. ಪಿಬಿಎನ್ ಹೊಡೆತಕ್ಕೆ ಪ್ರತಿಯಾಗಿ `ಅಯ್ಯಪ್ಪಾ... ಸಾ.. ನಾ ಸತ್ತೆ ಸತ್ತೆ..' ಎಂದು ಕೂಗುತ್ತಿದ್ದ ದೀಪಕನ ಧ್ವನಿಯಿನ್ನೂ ನನಗೆ ಹಸಿ ಹಸಿಯಾಗಿಯೇ ಇದೆ.
                ನಾಟಕಗಳಲ್ಲಿ ನಟನೆ ಮಾಡುವುದು ದೀಪಕನ ಹವ್ಯಾಸಗಳಲ್ಲಿ ಪ್ರಮುಖವಾದುದು. ಜೊತೆಗೆ ಆತ ಹಲವಾರು ಡ್ಯಾನ್ಸುಗಳಿಗೂ ಸ್ಟೆಪ್ ಹಾಕಿದ್ದಾನೆ. ನನ್ನ ಹಾಗೂ ಅವನ ನಡುವೆ ಅನೇಕ ಸಾರಿ ತಪ್ಪು ತಿಳುವಳಿಕೆ, ಇತರೆ ದೋಸ್ತರ ಫಿಟ್ಟಿಂಗ್ ಇತ್ಯಾದಿ ಕಾರಣಗಳಿಂದಾಗಿ ಮನಸ್ತಾಪ ಬಂದು ಮಾತು ಬಿಟ್ಟಿದ್ದೂ ಇದ್ದವು. ಕಾರಣಗಳು ಏನೇನಿದ್ದವೋ, ಏನೋ.. ಕೆಲವು ಕಾರಣಗಳು ಸಿಲ್ಲಿಯಾಗಿಯೂ ಇದ್ದವೆನ್ನಿ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ನನಗೂ ಅವನಿಗೂ ಜಗಳಗಳಾಗುತ್ತಿದ್ದುದು ಮಾಮೂಲು. ಪರಿಣಾಮವಾಗಿ ಆತ ನನ್ನ ಜೊತೆ ಅಥವಾ ನಾನು ಅವನ ಜೊತೆ ಮಾತನ್ನು ಬಿಡುತ್ತಿದ್ದೆ. ಇದರ ಪರಿಣಾಮ ಎಂಬಂತೆ ಆತ ಚುನಾವಣೆಯಲ್ಲಿ ಸೋಲುತ್ತಿದ್ದ. ಯಾಕಂದರೆ ಆ ದಿನಗಳಲ್ಲಿ ನಾನು ಚನ್ನಾಗಿ ಓದುತ್ತೇನೆ ಎನ್ನುವ ಹವಾ ಇದ್ದ ಕಾರಣ ನಾಲ್ಕೈದು ಮಿತ್ರರ ಗುಂಪು ಇರುತ್ತಿತ್ತು. ಅವರೆಲ್ಲ ನಾನು ಹೇಳಿದಂತೆ ಮಾಡುತ್ತಿದ್ದರು ಎನ್ನುವುದು ಆಗ ನನಗಿದ್ದ ಕೋಡಾಗಿತ್ತು. ನಾನು ಹೇಳಿದವರಿಗೆ ಓಟು ಹಾಕುತ್ತಿದ್ದರು. ನಾನು ಬೇಡ  ಎಂದರೆ ಓಟು ಹಾಕುತ್ತಿರಲಿಲ್ಲ. ಹೀಗೆ ದೀಪಕನೂ ಸೋತು ಹೋಗುತ್ತಿದ್ದ. ಆದರೆ ಒಂದು ಮಾತ್ರ ವಿಚಿತ್ರ ಹೇಳಲೇ ಬೇಕು. ಆತ ಹೀಗೆ ಮಾತು ಬಿಟ್ಟಾಗ ನಡೆದ ಚುನಾವಣೆಯಲ್ಲಿ ನಾನು ನನ್ನ ಮಿತ್ರರ ಬಳಿ ಅವನಿಗೆ ಓಟು ಹಾಕಬೇಡಿ ಎಂದು ಹೇಳಿ ಇತರರಿಗೆ ಮತ ಹಾಕಿಸಿದ್ದರೂ ನಾನು ಮಾತ್ರ ದೀಪಕನಿಗೆ ಹಾಕಿ ಮುಗುಮ್ಮಾಗಿ ಇದ್ದುಬಿಡುತ್ತಿದ್ದೆ. ನನ್ನೊಬ್ಬನ ಓಟು ಬಿದ್ದರೆ ಆತ ಗೆಲ್ಲುತ್ತಾನೆಯೇ ಬಿಡಿ.. ಈಗ ಅದನ್ನೆಲ್ಲ ನೆನಸಿಕೊಂಡ್ರೆ ಮನದ ತುಂಬಾ ಬೇಜಾರಿನ ಮೂಟೆ ತುಂಬಿಬಿಡುತ್ತದೆ.
                 ಎಲ್ಲಕ್ಕಿಂತ ಮುಖ್ಯವಾಗಿ ನಾನು, ದೀಪಕ ಹಾಗೂ ಹೈಸ್ಕೂಲಿನ ಇನ್ನೊಬ್ಬ ಗೆಳೆಯ ಸುರೇಂದ್ರ ಸೇರಿಕೊಂಡು ಮಾಡದ ಪುಂಡರಪೂಟೇ ಇಲ್ಲ  ಎನ್ನಬಹುದು. ಹೈಸ್ಕೂಲಿನ ಮಾಮೂಲಿ ಹೊಡೆದಾಟ, ಚರ್ಚೆ, ವಾದಗಳಲ್ಲೆಲ್ಲಾ ನಮ್ಮದು ಒಂದು ಕೈ ಜೋರೇ ಇರುತ್ತಿತ್ತು. ದೀಪಕನಂತೂ ಕೆಲವು ಸಾರಿ ಮಾಸ್ಟರುಗಳ ಜೊತೆಗೆ ವಾದಕ್ಕೆ ಇಳಿದಿದ್ದೂ ಇದೆ.
                 ಇನ್ನು ಪ್ರತಿ ಪರೀಕ್ಷೆಯಲ್ಲೂ ನಾನು-ದೀಪಕ ಹಾಗೂ ಸುರೇಂದ್ರ ಅವರ ಪಾಲಿಗೆ ದೇವರಂತಾಗಿಬಿಡುತ್ತಿದ್ದೆ. ಮಾಸ್ಟ್ರುಗಳು ಹೇಗೇ ಕೂರಿಸಲಿ ಇವರಿಬ್ಬರೂ ಅದು ಹ್ಯಾಗೋ ನನ್ನ ಅಕ್ಕಪಕ್ಕದ, ಹತ್ತಿರದಲ್ಲಿಯೇ ಕುಳಿತುಬಿಡುತ್ತಿದ್ದರು. ಅವರಿಗೆ ನಾನು ಉತ್ತರ ಹೇಳಿಕೊಡುತ್ತಿದ್ದೆ. ಪಾಸಾಗುತ್ತಿದ್ದರು. ಕೊನೆ ಕೊನೆಗೆ ನಮ್ಮ ಟೀಚರ್ರುಗಳಿಗೆ ಈ ಕುರಿತು ತಿಳಿದು ನಮ್ಮನ್ನು ಬೇರೆ ಕಡೆಗೆ ಕುಳ್ಳಿರಿಸಿದ್ದೂ ಇದೆ ಎನ್ನಿ.
                 ದೀಪಕ ಕುರಿತು ಇನ್ನೊಂದು ವಿಶೇಷ ಸಂಗತಿ ಖಂಡಿತ ಹೇಳಲೇಬೇಕು. ಅದೆಂದರೆ ಆತನ ಪ್ರೇಮಪುರಾಣ. ಆತ ನಮ್ಮದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಬಹಳ ಇಷ್ಟಪಡುತ್ತಿದ್ದ. ಅವನಿ ಅಥವಾ ಅನಿತಾ ಎಂದೇನೋ ಇರಬೇಕು ಅವಳ ಹೆಸರು.(ಕರೇಯೋಕೆ ಒಂದು ಹೆಸರು ಬೇಕಾದ ಕಾರಣ ಹಾಗೂ ಹೆಸರು ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕಾಗಿ ಅವಳ ಹೆಸರನ್ನು ಅನಿತಾ ಎಂದೇ ಮುಂದೆ ಕರೆಯುತ್ತೇನೆ. ) ಅದೆಷ್ಟೋ ಸಾರಿ ದೀಪಕ್ ನನ್ನ ಬಳಿ ಬಂದು `ಲೇ ವಿನೂ.. ನನ್ನ ಲವ್ ಸಕ್ಸಸ್ ಆಗ್ತದೇನಲೇ..' ಎಂದು ಕೇಳುತ್ತಿದ್ದವನಿಗೆ ಏನೇನೋ ಉತ್ತರಗಳನ್ನು ಕೊಟ್ಟು ಸಾಗ ಹಾಕುವಷ್ಟರಲ್ಲಿ ನನಗೆ ಸುಮಾರು ಸರ್ಕಸ್ಸುಗಳನ್ನು ಮಾಡಬೇಕಾಗುತ್ತಿತ್ತು.  ಆಗಾಗ ಅವನ ಮನಸ್ಸಿನಲ್ಲಿ ಮೂಡುತ್ತಿದ್ದ ಅನುಮಾನ ಹಾಗೂ ಭಯವೆಂದರೆ ನಾನೆಲ್ಲಾದರೂ ಆಕೆಯನ್ನು ಇಷ್ಟಪಟ್ಟುಬಿಡುತ್ತೇನೋ ಎನ್ನುವುದಾಗಿತ್ತು. ಹೀಗೆ ಅನುಮಾನ ಮೂಡಲು ಹಲವು ಕಾರಣಗಳೂ ಇತ್ತೆನ್ನಿ. ನಮ್ಮದೇ ಕ್ಲಾಸಿನ ಕೆಲವು ಹುಡುಗರು ನನಗೂ ಆ ಹುಡುಗಿಯ ಹೆಸರನ್ನೂ ಸೇರಿಸಿ ತಮಾಷೆ ಮಾಡುತ್ತಿದ್ದರು. ನಮ್ಮಿಬ್ಬರ ಜೋಡಿ ಮಸ್ತಾಗುತ್ತದೆಂದು ಕಾಡುತ್ತಿದ್ದರು. ಅವರು ಹೀಗೆ ಹೇಳಿದಾಗಲೆಲ್ಲ ದೀಪಕ  ಉರಿದುಹೋಗುತ್ತಿದ್ದ. ಒಂದೆರಡು ಸಾರಿ ಈ ಕಾರಣದಿಂದ ಕ್ಲಾಸಿನಲ್ಲಿ ದೀಪು ಗಲಾಟೆ ಮಾಡಿದ್ದೂ ಇದೆ. ಆದರೆ ಅದೇನು ಕಾರಣವೋ ಗೊತ್ತಿಲ್ಲ ಹೈಸ್ಕೂಲಿನ ಸಂದರ್ಭದಲ್ಲಿ ಆತನಿಗೆ ತನ್ನ ಪ್ರೇಮವನ್ನು ಆಕೆಯ ಬಳಿ ನಿವೇದನೆ ಮಾಡಲು ಸಾಧ್ಯವಾಗಲೇ ಇಲ್ಲ.
                  ನಮ್ಮಿಬ್ಬರಿಗೂ ಆಪ್ತರೆನ್ನಿಸಿದ ಬಿ. ಆರ್. ನಾರಾಯಣ ಉರುಫ್ ಬಿ.ಆರ್.ಎನ್. ಅವರಿಗಂತೂ ನಾವಿಬ್ಬರು ಯಡಗಣ್ಣು ಹಾಗೂ ಬಲಗಣ್ಣು ಎಂಬಂತಿದ್ದೆವು. ನಮ್ಮ, ಇಂಗ್ಲೀಷ್ ಸರ್ ಆಗಿದ್ದ ಅವರನ್ನು ನಾವು ಅದೆಷ್ಟು ಸಾರಿ ತಮಾಷೆ ಮಾಡಿದ್ದರೂ ಕೂಡ ಆಪ್ತರಾಗಿದ್ದರು. ಇಷ್ಟವಾಗಿದ್ದರು. ಇವರ ಹಳೆಯ ಚೆಸ್ಪಾ ಬೈಕಿನ ಕಿಕ್ ಹೊಡೆಯುವುದರಲ್ಲಿ ನನಗೂ ದೀಪುವಿಗೂ ಅನೇಕ ಸಾರಿ ಸ್ಪರ್ದೇ ಏರ್ಪಟ್ಟಿದ್ದೂ ಇದೆ. ಭಾರತ ತಂಡದ ಕ್ರಿಕೆಟ್ ಮ್ಯಾಚುಗಳು ನಡೆದಾಗಲೆಲ್ಲ ೀ ಬಿ.ಆರ್.ಎಲ್. ಅವರು ತರುತ್ತಿದ್ದ ಹ್ಯಾಡ್ ರೇಡಿಯೋಕ್ಕೆ ಕಿವಿಗೊಟ್ಟು ಸ್ಕೋರನ್ನು ಕೇಳಿ ಹೈಸ್ಕೂಲಿಗೆ ಹಂಚುವ ಘನಕಾರ್ಯವನ್ನು ನಾವೇ ಮಾಡುತ್ತಿದ್ದೆವು. ಹೀಗೆಲ್ಲಾ ನಡೆಯುತ್ತಿದ್ದಾಗ ನನ್ನ ಹಾಗೂ ಆತನ ಬದುಕು ಚನ್ನಾಗಿಯೇ ಇತ್ತು.
                 ಅಂತವನ ಬದುಕಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದುಹೋಯಿತು. ಬಹುಶಃ ಆವತ್ತು ಎಸ್ಸೆಎಸ್ಸೆಲ್ಸಿಯ ಗಣಿತ ಪಬ್ಲಿಕ್ ಪರೀಕ್ಷೆಯಿರಬೇಕು. ಆವತ್ತು ಬಂದವನೇ ದೀಪಕ ನನ್ನ ಬಳಿ `ಲೋ ವಿನೂ.. ಇವತ್ತು ನನ್ನ ಅಪ್ಪಂದು ಎರಡನೇ ಮದುವೆ ಕಣೋ.. ನಾನೇನ್ಮಾಡ್ಲೋ.. ನನ್ನ ಕಣ್ಣೆದುರು ಇನ್ನೊಬ್ಬಾಕೆಯ ಬದುಕು ಹಾಳಾಗ್ತಾ ಇದೆ.. ಆ ಅಪ್ಪ  ಎಂಬ ಬಡ್ಡೀಮಗ ನನ್ನ ಅಮ್ಮನಿಗೆ ಮೋಸ ಮಾಡಿ ನನ್ನನ್ನು ಹಾಗೂ ತಂಗಿಯನ್ನು ಅನಾಥರನ್ನಾಗಿ ಮಾಡಿದ್ದೂ ಅಲ್ದೆ ಈಗ ಇನ್ನೊಬ್ಬಾಕೆಯ ಲೈಫು ಹಾಳ್ಮಾಡ್ತಾ ಇದ್ದಾನೋ.. ನಂಗೆ ಈ ಗಣಿತ  ಎಕ್ಸಾಂ ಇಲ್ದಿದ್ರೆ ಅವನನ್ನ ಬಡಿದಾದ್ರೂ ಬುದ್ಧಿ ಕಲಿಸ್ತಿದ್ದೆ..' ಎಂದು ಹೇಳಿದ್ದ.
                 ಇವನ ಅಪ್ಪ ಭಾರಿ ಕುಡಿತಗಾರ. ದೀಪಕನ ತಾಯಿಯ ಜೊತೆಗೆ ಬಂದಿದ್ದ ಅಪಾರ ವರದಕ್ಷಿಣೆಯನ್ನು ನುಂಗಿ ನೀರ್ಕುಡಿದು ಮೋಸ ಮಾಡಿ ಓಡಿ ಹೋದ ಪರಿಣಾಮ ದೀಪಕನ ಜವಾಬ್ದಾರಿಯೆಲ್ಲ ಆತನ ತಾಯಿ ಹಾಗೂ ಸಂಬಂಧಿಕರ ಮೇಲೆ ಬಿದ್ದಿತ್ತು. ಕೊನೆಗೆ ತನ್ನ ಪರಿಚಯದವರೊಬ್ಬರ ಮನೆಯಲ್ಲಿ ಉಳಿದುಕೊಂಡು ಹೈಸ್ಕೂಲಿಗೆ ಬರುತ್ತಿದ್ದ ಆತ.  ಸಂಬಂಧಿಕರ ಮನೆಯಲ್ಲಿ ಅದೂ ಇದೂ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ  ಈತನ ಕುರಿತು ಹೈಸ್ಕೂಲಿನ ಮಿತ್ರರೆಲ್ಲ ಅಪ್ಪನ ಹೆಸರು ಹೇಳಿ ಚಾಳಿಸಿದ್ದೂ ಇದೆ. ಮೊದ ಮೊದಲೆಲ್ಲ ದೋಸ್ತರ ಜೊತೆಗೆ ಸೇರಿಕೊಂಡು ನಾನೂ ಚಾಳಿಸಿದ್ದೆ. ಆದರೆ ಕೊನೆಗೆ ಮಾತ್ರ ಸತ್ಯ ಗೊತ್ತಾಗಿತ್ತು. ಚಾಳಿಸುವುದನ್ನು ಬಿಟ್ಟು ಬಿಟ್ಟಿದ್ದೆ. ತದನಂತರ ನಾವು ಪಾಸಾಗಿ ಪಿಯುಸಿಯ ಮೆಟ್ಟಿಲು ಹತ್ತಿದ್ದೆವು. ಹೈಸ್ಕೂಲೆಂಬ ನದಿಯನ್ನು ದಾಟಿದ ನಾವು ಪಿಯುಸಿಯೆಂಬ ಕಡಲಿನಲ್ಲಿ ಈಜಲಿಕ್ಕಿಳಿದಾಗಲೇ ನಮಗೆ ನಿಜವಾದ ಬದುಕಿನ ಅರಿವಾಗಿದ್ದು. ಆ ನಂತರವೇ ದೀಪಕನೆಂಬ ದುರದೃಷ್ಟವಂತನ, ಕ್ರಿಯೇಟಿವ್ ಹುಡುಗನ ಟ್ರಾಜಿಡಿ ಲೈಫು ಶುರುವಾಗಿದ್ದು ಎನ್ನಬಹುದು. ಈ ನಂತರದ ಅವನ ಜೊತೆಗೆ ನನ್ನ ಒಡನಾಟ ಕಡಿಮೆಯಾಯಿತಾದರೂ ಆಗೊಮ್ಮೆ ಈಗೊಮ್ಮೆ ಆತನ ಬದುಕಿನ ಕುರಿತು ಹಲವು ಸಂಗತಿಗಳು ನನ್ನ ಕಿವಿಗೆ ಬೀಳುತ್ತಿದ್ದವು.
                 ನಾನು ಆ ನಂತರ ನಾಣಿಕಟ್ಟಾ ಕಾಲೇಜನ್ನು ಸೇರಿದೆ. ಆತ ಅವನ ಊರಿನ ಬಳಿಯಲ್ಲಿಯೇ ಇದ್ದ ಯಾವುದೋ ಪಿಯು ಕಾಲೇಜನ್ನೂ ಸೇರಿದ. ಅಲ್ಲಿಂದಲೇ ಇರಬೇಕು ಆತನ ಬದುಕು ಮೂರಾಬಟ್ಟೆಯಾಗಲು ಶುರುವಾದದ್ದು. ಒಳ್ಳೆಯ ಹುಡುಗನಾಗಿದ್ದ  ಆತನಿಗೆ ನಂತರ ಸಿಕ್ಕವರೆಲ್ಲ ಪುಂಡ ಪೋಕರಿ ಹುಡುಗರೇ ಆದ ಕಾರಣ  ಆತ ಮತ್ತಷ್ಟು ಬೇಗ ನೈತಿಕವಾಗಿ ಅದಃಪತನಕ್ಕೆ ಇಳಿದ ಎಂದರೆ ತಪ್ಪಾಗಲಿಕ್ಕಿಲ್ಲ. ಅವನ ಪಿಯು ಬದುಕಿನಲ್ಲಿ ಅವನಿಗೆ ಅವನಂತೆಯೇ ಕೆಲವು ಮುಂಗೋಪಿ ಹುಡುಗರು, ಸ್ಥಳೀಯ ಮಟ್ಟದಲ್ಲಿ ಚಿಕ್ಕಪುಟ್ಟ ರೌಡಿಸಂ ಮಾಡುತ್ತಿದ್ದ ಹುಡುಗರ ಪರಿಚಯವಾದವು. ಅಂತವರ ಜೊತೆ ಅಂತವರಂತೆಯೇ ಬೆಳೆದ ದೀಪಕ.
                 ಬಹುಶಃ ಆ ದಿನಗಳಲ್ಲಿಯೇ ಇರಬೇಕು ಆತ ತನ್ನ ದೋಸ್ತರ ಮಾತು ಕಟ್ಟಿಕೊಂಡು ಹೈಸ್ಕೂಲು ಲವ್ವರ್ ಗೆ ಒಂದು ಪ್ರೇಮಪತ್ರ ಬರೆದೇಬಿಟ್ಟ. ಆ ಲವ್ ಲೆಟರ್  ಸೀದಾ ಆ ಹುಡುಗಿಯ ಅಪ್ಪನಿಗೆ ಸಿಕ್ಕಿತು. ಆತ ಪೊಲೀಸ್ ಕಂಪ್ಲೇಟ್ ಕೊಟ್ಟ. ಪೊಲೀಸರು ಆತನನ್ನು ಹಿಡಿದು ನಾಲ್ಕೇಟು ಬಿಗಿದು ನಾಲ್ಕೈದು ದಿನ ಜೈಲಿನಲ್ಲೂ ಇಟ್ಟರು. ಅಲ್ಲಿಂದ ವಾಪಾಸು ಬಂದವನಿಗೆ ಬೇರೆಯದೇ ತೆರನಾದ ಅನುಭವವಾಯಿತು. ಸೆರೆಮನೆಯಲ್ಲಿದ್ದಾಗಲೇ ದೋಸ್ತನಾಗಿದ್ದನೋ ಏನೋ.. ಒಬ್ಬ ಹೆಸರುಮಾತಿನ ರೌಡಿಯ ಪರಿಚಯವೂ ಆಯಿತು. ಆತನ ಸಹವಾಸದಿಂದ ಕುಡಿಯುವುದನ್ನೂ ಕಲಿತ. ಎಸ್ಸೆಲ್ಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ ಹುಡುಗ ಪಿಯು ಪಾಸಾಗಲು ನಾಲ್ಕೈದು ವರ್ಷಗಳು ಬೇಕಾದವು. ಆಗ ಸ್ವಲ್ಪ ಗಟ್ಟಿ ವ್ಯಕ್ತಿತ್ವದ ಹುಡುಗನಾಗಿದ್ದ ದೀಪಕ ಕೊನೆ ಕೊನೆಗಂತೂ ಬಾಯಿ ಬಿಟ್ಟರೆ ರೈಲು ಹತ್ತಿಸುವ, ದೊಡ್ಡ ದೊಡ್ಡ ಮಾತಾಡುವ , ಬಡಾಯಿ ಕೊಚ್ಚಿಕೊಳ್ಳುವ, ಊರಲ್ಲೆಲ್ಲ ಏನೇ ದೊಡ್ಡ ಘಟನೆಗಳು ಜರುಗಿದರೂ ಅದನ್ನೆಲ್ಲಾ ತಾನೆ ಮಾಡಿದ್ದೆನ್ನುವ ಮಾತುಗಳು ಆತನ ಬಾಯಿಂದ ಬರತೊಡಗಿದವು. ಜೊತೆ ಜೊತೆಯಲ್ಲಿಯೇ ಸಿನೆಮಾಗಳ ಪ್ರಭಾವವೋ ಎಂಬಂತೆ ಮಾತಿಗೊಮ್ಮೆ `ಏಯ್ ನಿನ್ನಕ್ಕನ್.. ನಿನಯ್ಯನ್.. ಮಚ್ಚು ತೆಗೆದ ಅಂದ್ರೆ..' ಎಂಬಂತಹ ಶಬ್ದಗಳೇ ಬರತೊಡಗಿದವು. ಹೈಸ್ಕೂಲಿನ ಸಂದರ್ಭದಲ್ಲಿಯೇ ಯಾವುದೋ ಚಾಲೇಂಜಿಗೆ ಪ್ರತಿಯಾಗಿ ಸಿಗರೇಟಿನ ದಮ್ಮು ಎಳೆದಿದ್ದ ದೀಪಕ  ಇದೀಗ ಕೇವಲ ಕುಡಿತಕ್ಕಷ್ಟೇ ಸೀಮಿತವಾಗದೇ ಗಾಂಜಾ ಸೇವನೆಯಲ್ಲೂ ತೊಡಗಿಕೊಂಡಿದ್ದಾನೆಂಬ ಸುದ್ದಿ ನನಗೆ ಸಿಕ್ಕಿದೆ. ಜೊತೆ ಜೊತೆಯಲ್ಲಿ ಆತ ಅದರ ಕಳ್ಳ ಸಾಗಾಣಿಕೆ ಮಾಡುತ್ತಾನೆ ಎನ್ನುವ ಮಾತುಗಳೂ ಕೇಳಿಬಂದಿದ್ದು ನನಗೆ ಬಹಳ ಬೇಸರವನ್ನು ಮೂಡಿಸಿತ್ತು.
                ಇಂತಹ ದೋಸ್ತ ಮೊನ್ನೆ ತೀರಾ ಅಚಾನಕ್ಕಾಗಿ ನನಗೆ ಸಿಕ್ಕಿದ್ದ. ಒಮ್ಮೆ ನೋಡಿದಾಗ ಒಂದು ಸಾರಿ ಗುರುತು ಸಿಕ್ಕಿರಲಿಲ್ಲ.. ಕೊನೆಗೆ ನಾನು ಹೌದೋ ಅಲ್ಲವೋ ಎನ್ನುತ್ತಲೇ ಮಾತನಾಡಿಸಿ ನಾನು ಹೀಗ್ಹೀಗೆ ಪತ್ರಿಕೆಯೊಂದರಲ್ಲಿ ಕೆಲವ ಮಾಡುತ್ತಿದ್ದೇನೆ ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಆತ `ನೀವು ಪತ್ರಕರ್ತರೆಂದರೆ ಸಭ್ಯ  ಇರುವ ಬಡ್ಡಿಮಕ್ಕಳಲ್ಲ. ನೀವು ಅವರಿವರೇ ಬರೆದಿದ್ದನ್ನೆಲ್ಲ ಕದ್ದು ಬರೆದು ಮುಂದೆ ಬರ್ತೀರಿ..' ಎಂದೆಲ್ಲಾ ಹಲುಬಿದ್ದ.  ಆತನ ಬಾಯಿಯಿಂದ ಪರಮಾತ್ಮ ವಾಸನೆಯ ರೂಪದಲ್ಲಿ ಹೊರಬಿದ್ದಿದ್ದನ್ನು ಕಂಡು ನಾನು ಹೆಚ್ಚು ಮಾತು ಬೆಳೆಸದೇ ಹೋಗಿದ್ದೆ. ಈತ ಹೇಗಾದರೂ ಹಾಳಾಗಿ ಸಾಯಿಲಿ ಎಂದು ಶಪಿಸಿ ಅಲ್ಲಿಂದ ಬಂದಿದ್ದೆನಾದರೂ ಆತನ ತಾಯಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿ ಒಂಥರಾ ಆಗಿತ್ತು.
                ಹೇಗಿದ್ದ ವ್ಯಕ್ತಿ ಹೇಗಾಗಿಬಿಟ್ಟನಲ್ಲ. ಮನದ ತುಂಬ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿಬಿಟ್ಟನಲ್ಲ. ಮುಂದೆಂದಾದರೂ ಆತ ಮೊದಲಿನ ಹಾಗೇ ಗನಾ ವ್ಯಕ್ತಿಯಾಗಬಲ್ಲನಾ..? ಈಗಿನ ರೌಡಿಯಿಸಂ, ಧೂಮ, ಪಾನಗಳ ಪರದೆಯನ್ನು ಕಳಚಿ ಹೊರಬರುತ್ತಾನಾ? ಅವನು ಈ ರೀತಿಯಾಗುವಂತೆ ಮಾಡಿದ ವ್ಯಕ್ತಿಗಳು  ಆತ ಮೊದಲಿನಂತಾಗುತ್ತಾನೆ ಎಂದರೆ ಸುಮ್ಮನೆ ಬಿಡುತ್ತಾರೆಯೇ? ಅದಕ್ಕಿಂತ ಮಿಗಿಲಾಗಿ ಆತನ ತಾಯಿಯ ಜೀವ ನಗುವಂತಾಗುತ್ತದೆಯೇ? ಮುಂದೆ ಹಲವು ಪ್ರಶ್ನೆಗಳು ಮೂಡಿದವು. ಎಲ್ಲವೂ ನಿಗೂಢ ಅನ್ನಿಸಿ ತಲೆಕೊಡವಿ ಅಲ್ಲಿಂದ ಬಂದಿದ್ದೆ.

**

(ಇದನ್ನು ಖಂಡಿತ ಬರೆದಿದ್ದು ಮೂರ್ನಾಲ್ಕು ವರ್ಷಗಳ ಹಿಂದೆ..)
(ಶಿರಸಿಯ ಉಳುಮೆ ಮಾಸಪತ್ರಿಕೆಯಲ್ಲಿ ಇದು ಪ್ರಕಟಗೊಂಡಿದೆ)
(ಈಗ ದೀಪಕ್ ಯಾವ ರೀತಿ ಇದ್ದಾನೆ ಎಂಬುದನ್ನು ಶೀಘ್ರವಾಗಿಯೇ ಬರೆಯಲಾಗುತ್ತದೆ..)

Sunday, February 16, 2014

ಮಂಕಾಳಕ್ಕನ ಕವಿತೆ

ಮಂಕಾಳಕ್ಕ ಎಂಬ ಒಂದು
ಅಜ್ಜಿ ಇತ್ತು ಯಂಗಳಲ್ಲಿ..
ಉದ್ದುದ್ದ ಬೈಗುಳ, ಸ್ವಾಟೆ ತಿವಿದು
ಬೈತಿತ್ತು ಬಾಯಲ್ಲಿ..||

ಮೋಟು ಜಡೆ ತುದಿಗೊಂದ್ ದಾರ
ನೆಟ್ಟಗೆ ನಿಲ್ತಿತ್ತು..
ಕಣ್ಣಿಗೊಂದು ಕನ್ನಡಕ ಇತ್ತು
ಹಳ್ಳು ಒಡೆದಿತ್ತು ||

ಸೊಸೆಯಕ್ಳ ಕಂಡ್ರೆ
ಸಿಕ್ಕಾಪಟ್ಟೆ ಸಿಟ್ಟು
ಬಾಯಲ್ಲಿ ಎಂದೂ ಯಾವತ್ತಿಗೂ
ನಿಲ್ತಿತ್ತಿಲ್ಲೆ ಗುಟ್ಟು ||

ಹಗಲೊತ್ತಲ್ಲೆ ನಿದ್ದೆಗಣ್ಣು
ಬಾಯಿ ತುಂಬಾ ಆಕಳಿಕೆ
ರಾತ್ರಿ ಮಾತ್ರ ಕೇಳೋದು ಕಷ್ಟ
ದೊಡ್ಡ ಶಬ್ದ ಗೊರಕೆ ||

ಮಂಕಾಳಕ್ಕನ ಉಬ್ಬ ಹಲ್ಲು
ಭಾರಿ ಕಾಡ್ತಿತ್ತು
ಬಾಯಲ್ ಬಪ್ಪ ದುರ್ವಾಸನೆ
ತಲೆ ಸುತ್ ತಿತ್ತು ||

ಅಜ್ಜಿಗ್ ಪಾಪ ಬ್ಯೂಸಿ ವರ್ಕರ್
ಸಿಕ್ಕಾಪಟ್ಟೆ ಕೆಲಸ
ಎಷ್ಟು ಸಾರಿ ಗುಡಿಸಿದ್ರೂನೂ
ಅಲ್ಲೇ ಇರ್ತಿತ್ತು ಕಸ ||

ಯಲ್ಗಾರಿಂದ ಮದ್ವೆಯಾಗಿ
ಯಂಗ್ಳೂರ್ ಸೇರಿತ್ತು
ಮದ್ವೆಯಾದ ಇಗ್ಗಜ್ಜಂಗೆ
ಗ್ರಾಚಾರ ಕೆಟ್ಟಿತ್ತು ||

ಮೂರ್ ಹೊತ್ತು ಮಾತು ಜೋರು
ಬೈಗುಳದ ಸುರಿಮಳೆ
ಆಗಾಗ ಕೊಂಕು ಮಾತು
ಯಾವಾಗ್ಲೂ ರಗಳೆ ||

ಮದ್ವೆ ನಂತ್ರ ಇಗ್ಗಜ್ಜಂಗೆ
ಮಂಕಾಳಕ್ಕ ಕಾಡು
ಯಾವಾಗ್ಲೂ ಸುಮ್ಮಂಗಿರ್ತಿದ್ದ
ಅವಂದು ನಾಯಿಪಾಡು ||

ಮಕ್ಕ  ಇದ್ದಿದ್ ಐದು ಜನ
ಪಂಚ ಪಾಂಡವರಂತೆ
ಒಬ್ಬರ ಕಂಡ್ರೆ ಒಬ್ಬರಿಗಾಗ್ತಿಲ್ಲೆ
ಭಾರಿ ವಿರೋಧವಂತೆ ||

ಮಂಕಾಳಕ್ಕ ಕುಂತಿಯಲ್ಲ
ಗಾಂಧಾರಿಯಂತೂ ಅಲ್ಲ
ಒಳ್ಳೇದೂ ಇಲ್ಲ ಕೆಟ್ಟದ್ದೂ ಇಲ್ಲ
ಯಾವುದಕ್ಕೂ ಸಲ್ಲ ||

ಮಂಕಾಳಕ್ಕಂಗ್ ಚಿನ್ನದ ಆಸೆ
ಯಾವಾಗ್ಲೂ ಬೇಕು ಸರ
ಚಿನ್ನದ ಬಗ್ಗೆ ಉಳಿದವ್ರೆಲ್ಲ
ಮಾತಾಡಿದ್ರೇ ಅಪಚಾರ ||

ಮಂಕಾಳಕ್ಕ ಮಹಾಸತಿ
ಗಂಡನ ಆಡಿಸ್ತಿತ್ತು
ಕುಂತ್ರೂ ತಪ್ಪು ನಿಂತ್ರೂ ತಪ್ಪು
ಕಾಟಾ ಕೊಡ್ತಾ ಇತ್ತು ||

ಅವಳ ಕೂಗಿಗೆ ಎದಿರೇ ಇಲ್ಲ
ಊರೆಲ್ಲ ಗಡಗಡ
ಎದುರು ಸಿಕ್ಕರೆ ಮಾತಾಡ್ತಿರ್ಲಿಲ್ಲ
ಮಂಕಾಳಕ್ಕನ ಸಂಗಡ ||

ಮಂಕಾಳಕ್ಕ  ಎತ್ತರದ್ದಲ್ಲ
ರಾಶಿ ಕುಳ್ಳಿತ್ತು
ಬಾಯಲ್ ಕವಳ ತುಂಬಕಂಡಿದ್ರೂ
ಮಾತು ಜೋರಿತ್ತು ||

ಬೆಂಕಿ ಕಾಸೋದು, ಭಜನೆ ಮಾಡದು
ಮಂಕಾಳಕ್ಕಂಗ್ ಪರಮಪ್ರಿಯ
ದಿನಾ ಸ್ನಾನ, ಬಟ್ಟೆ ತೊಳೆಯೋದು
ಯಾವತ್ತಿಗೂ ಅಪ್ರಿಯ ||

ಮಂಕಾಳಕ್ಕನ ಕಾಲಿಗೆ ಕಸ
ಔಷಧಿಗೆ ಬಗ್ತಿತ್ತಿಲ್ಲೆ..
ಪ್ಯಾಟಿಗೆ ಹೋಪವ್ ಮುಲಾಮ್ ತಂದ್ರೂ
ಅವಳಿಗೆ ಸಾಕಾಗ್ತಿತ್ತಿಲ್ಲೆ.. ||

ಸೀರೆ ಹುಚ್ಚಿನ ಮಂಕಾಳಕ್ಕ
ಕಾಟನ್ ಪತಲಾ ಉಡತಿತ್ತು
ಆರ್ ತಿಂಗ್ಳೀಗೊಂದ್ ಸೀರೆ ಮಾತ್ರ
ಖಾಯಮ್ಮಾಗಿ ಬೇಕಿತ್ತು ||

ಮಂಕಾಳಕ್ಕ ಈಗಿಲ್ಲೆ ಬಿಡಿ
ಸತ್ತು ನಾಕು ವರ್ಷ ಆತು
ಊರಲ್ಲಿ ಮೊದಲಿನಷ್ಟ್ ಮಜವೂ ಇಲ್ಲೆ
ಮನೆ ಮನ ಬೋರಾತು ||

ಮಂಕಾಳಕ್ಕ ಈಗಿನವ್ಕೆ
ಹೆಚ್ಗೆ ಗೊತ್ತಿಲ್ಲೆ
ಹಳೆಜನ ಮನುಷ್ಯರ್ಯಾರೂ
ಅವಳ ಮರೀತ್ವಿಲ್ಲೆ..||

**
(ಮಂಕಾಳಕ್ಕ ಎನ್ನುವ ವ್ಯಕ್ತ-ವ್ಯಕ್ತಿತ್ವ ನಮ್ಮಲ್ಲಿ ಇತ್ತು. ಈಗ್ಗೊಂದು ದಶಕದ ಹಿಂದೆ ಮಂಕಾಳಕ್ಕ ದೈವಾಧೀನರಾದರು. ನಾ ಕಂಡಂತೆ ಅವರು ಹೇಗಿದ್ದರು ಎನ್ನುವುದಕ್ಕೊಂದು ಟಪ್ಪಾಂಗುಚ್ಚಿ ಕವಿತೆ..)
(ಶಿರಸಿಯಲ್ಲಿ ಈ ಕವಿತೆಬರೆದಿದ್ದು 16-02-2014ರಂದು)

ಆತ್ಮಹತ್ಯೆಯ ನಂತರ (ಕಥೆ)

`ಹೇಯ್... ಒಂದ್ ನಿಮಿಷ...'
ಎಂಬ ಮಾತು ಗಾಳಿಯಲ್ಲಿ ಇದ್ದಕ್ಕಿದ್ದಂತೆ ತೇಲಿಬಂತು. ನನ್ನನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬಂದಿರಬೇಕು. ನಾನು ಸುತ್ತಮುತ್ತ ತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಎಲ್ಲೋ ಏನೋ ಭ್ರಮೆ.. ಎಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದೆ.
            ತುರ್ತು ಕಾರ್ಯದ ನಿಮಿತ್ತ ಶಿರಸಿಗೆ ಹೋಗಿದ್ದ ನನಗೆ ಅಂದು ದಿನದ ಸಮಯಕ್ಕಿಂತ ಹೆಚ್ಚು ತಡವಾಗಿತ್ತು. ಮನೆಯಲ್ಲಿ ಆಯಿ ನನಗೆ ಊಟ ಬಡಿಸಿ ಮಲುಗಬೇಕು ಎಂದು ಕಾಯುತ್ತಿರುತ್ತಾಳೆ ಎಂದು ಸ್ವಲ್ಪ ವೇಗವಾಗಿಯೇ ಬೈಕು ಚಾಲನೆ ಮಾಡುತ್ತ ಬರುತ್ತಿದ್ದೆ.. ನೀಲೆಕಣಿಯನ್ನು ದಾಟಿ ಅಬ್ರಿ ಕ್ರಾಸಿನಲ್ಲಿ ಒಂದು ಬಿದಿರುಮಟ್ಟಿಯಿದೆ. ಅಲ್ಲಿ ಗಾಡಿಯನ್ನು ನಿಲ್ಲಿಸಿ ಯಾವಾಗಲೂ ಜಲಬಾಧೆಯನ್ನು ತೀರಿಸಿಕೊಳ್ಳುವುದು ನನ್ನ ವಾಡಿಕೆ. ನಿಂತಿದ್ದಾಗ ಕೇಳಿಬಂದಿತ್ತು ಧ್ವನಿ.
`ಹಾಯ್ ದೋಸ್ತಾ.. ಹೇಗಿದ್ದೀಯಾ..?' ಮತ್ತೊಮ್ಮೆ ಕೇಳಿತ್ತು ಧ್ವನಿ. ಯಾವುದೋ ಗಂಡಸಿನ ಧ್ವನಿ.
            ಇದೆಂತದಪಾ ಇದು.. ಎಂದುಕೊಂಡು ಒಮ್ಮೆ ಸಣ್ಣದಾಗಿ ಬೆದರಿದೆ. ಭೂತ, ಪಿಶಾಚಿ ಇತ್ಯಾದಿಗಳ ಬಗೆಗೆಲ್ಲ ನನಗೆ ಅಷ್ಟಾಗಿ ನಂಬಿಕೆಯಿರಲಿಲ್ಲ. ಹಾಗಾಗಿ ಆ ರಸ್ತೆಯ ಬದಿಯಲ್ಲಿರುವ ಬಿದಿರುಮೆಳೆಯ ಪಕ್ಕದಲ್ಲಿ ಯಾರೋ ನಿಂತು ನನ್ನನ್ನೋ ಅಥವಾ ಇನ್ಯಾರನ್ನೋ ಕರೆಯುತ್ತಿರಬಹುದೆಂದು ಭಾವಿಸಿದೆ. ನಾನು ಮಾತಾಡಲಿಲ್ಲ. ಮತ್ತೊಮ್ಮೆ ಕೇಳಿದ ಧ್ವನಿ `ನೀನೆ ಕಣೋ..' ಎಂದಿತು. ಸುತ್ತಮುತ್ತ ನೋಡಿದರೂ ಆ ಧ್ವನಿಗೆ ಮೂಲವಾದುದು ನನಗೆ ಕಾಣಿಸಲಿಲ್ಲ. ಇದೆಂತದ್ದೋ ಚೇಷ್ಟೆಯಿರಬೇಕು ಎಂದುಕೊಂಡೆ. ಅಮಾಸೆ, ಹುಣ್ಣಿಮೆ ಸಮಯದಲ್ಲಿ ಭೂತ-ಗೀತ ಸಿಕ್ಕಾಪಟ್ಟೆ ಓಡಾಡ್ತು.. ನಂಗೂ ಒಂದೆರಡು ಸಾರಿ ಕಂಡಿತ್ತು. ಹಾಗೆ ಧ್ವನಿ ಕೇಳಿಸಿದಾಗಲೆಲ್ಲ ನೀನು ಮಾತನಾಡಲಿಕ್ಕೆ ಹೋಗಬೇಡ ಮಾರಾಯಾ ಎಂದು ಅಜ್ಜ ನನ್ನ ಬಳಿ ಚಿಕ್ಕಂದಿನಲ್ಲಿ ಹೇಳುತ್ತಿದ್ದುದು ನೆನಪಿಗೆ ಬಂದು ಒಮ್ಮೆ ಸಣ್ಣದಾಗಿ ಬೆವೆತೆ. ಯಾರಾದರೂ ನನ್ನ ಮೇಲೆ ಹಲ್ಲೆ ಮಾಡಲು ಅಡಗಿ ನಿಂತಿರಬಹುದೆ? ಕಳ್ಳರೇ..? ದರೋಡೆಕೋರರೆ..? ಮನಸ್ಸು ಯಾಕೋ ಕೆಟ್ಟದ್ದನ್ನೇ ಆಲೋಚಿಸಲು ಆರಂಭಿಸಿತ್ತು.
                  `ಹೇ ವಿನೂ...' ಅಂದಿತು ಆ ಧ್ವನಿ. ಈ ಸಾರಿ ನಿಜಕ್ಕೂ ನಾನು ಬೆಚ್ಚಿದೆ. ಬಾಯಲ್ಲಿ ಗಾಯತ್ರಿ ಮಂತ್ರ ಇನ್ನೇನು ಹೇಳಬೇಕು ಎಂದುಕೊಳ್ಳತೊಡಗಿದೆ. `ವಿನೂ.. ವಿನೂ.. ಹೆದರಬೇಡ.. ನಾನು ನಿನ್ನ ದೋಸ್ತ ಮಾರಾಯಾ..' ಎಂದಿತು ಧ್ವನಿ.
                  `ಯಾರದು..? ಇಲ್ಲೇನ್ ಮಾಡ್ತಾ ಇದ್ದೀರಿ? ಧೈರ್ಯ ಇದ್ದರೆ ನನ್ನೆದುರು ಬಂದು ಮಾತಾಡೂ..' ಎಂದು ಗಡುಸಾಗಿ ಕೂಗಿದೆ. ಒಂದು ಸಾರಿ ಧ್ವನಿ ಸುಮ್ಮನಾಯಿತೇನೋ ಅನ್ನಿಸಿತು. ಆ ಧ್ವನಿ ಕೇಳಿದ ಅಬ್ಬರದಲ್ಲಿ ನನಗರಿವಿಲ್ಲದಂತೆ ಜಲಬಾಧೆಯೂ ನಿಂತಿತ್ತು. ಅರೇ ನನ್ನೊಳಗೆ ಆವಿಯಾಯಿತೇ ಎಂದುಕೊಂಡೆ. ಆದರೆ ಮೈತುಂಬ ಬೆವರು. ಇನ್ನೇನು ನನ್ನ ಗಾಡಿಯನ್ನು ಹತ್ತಿ ಮೊದಲು ಅಲ್ಲಿಂದ ಕಾಲ್ಕೀಳಬೇಕು ಎನ್ನಿಸುವಷ್ಟರಲ್ಲಿ ಮತ್ತೆ ಧ್ವನಿ ಕೇಳಿತು. ಯಾರೋ ನನ್ನ ಬಗ್ಗೆ ಗೊತ್ತಿರುವವರು ಹೀಗೆ ತಮಾಶೆ ಮಾಡುತ್ತಿರಬಹುದೆಂದುಕೊಂಡರೂ ಮನಸ್ಸು ಅಪದ್ಧ ನುಡಿಯುತ್ತಿತ್ತು.
                 `ಹೆದರ್ಕಳಡ ದೋಸ್ತಾ.. ನಾನು ಗಣಿ.. ನೆನಪಾಗಿಲ್ವಾ.. ನಿನ್ನ ಕ್ಲಾಸ್ ಮೇಟ್..' ಎಂದು ಹೇಳಿತು ಧ್ವನಿ. ನನಗೆ ಈಗ ಮಾತ್ರ ಭಯ ಕಡಿಮೆಯಾಗಿ ಕುತೂಹಲ ಹುಟ್ಟಿತು. ಅರೆ ಹೌದಲ್ಲ ಪಕ್ಕಾ ಗಣಿಯದ್ದೇ ಧ್ವನಿ ಎನ್ನಿಸಿತು. ನಾನು ಗಟ್ಟಿಯಾಗಿ `ಗಣಿಯಾದರೆ ನನಗ್ಯಾಕೆ ಕಾಣ್ತಾ ಇಲ್ಲ..? ಗಣಿ ಸತ್ತು ಆಗಲೇ ಆರೇಳು ವರ್ಷವಾಗಿದೆ... ಇದೆಂತಾ ಭ್ರಮೆ..' ಎಂದೆ..
                `ಹೌದು ದೋಸ್ತಾ.. ನಾನು ಸತ್ತು ಆರೇಳು ವರ್ಷ ಆಗಿದ್ದು ನಿಜ. ಯಾಕೋ ಸುಮ್ಮನೆ ನನ್ನ ಮಿತ್ರರ ದಂಡನ್ನು ನೋಡಿ ಮಾತನಾಡಿಸುವಾ ಎನ್ನಿಸಿತು. ಅದಕ್ಕೆ ಬಂದೆ..'ಎಂದ ಧ್ವನಿ ಕೇಳಿಸಿತು. ನಾನು ಧ್ವನಿ ಕೇಳಿದತ್ತ ನೋಡುತ್ತಿದ್ದೆ. ಹತ್ತಿರದ ಬಿದಿರುಮಟ್ಟಿಯ ಎದುರು ಇದ್ದಕ್ಕಿದ್ದಂತೆ ಫ್ಲಾಷ್ ಲೈಟ್ ಆದಂತಾಯಿತು. ಕಣ್ಣುಜ್ಜಿಕೊಂಡು ನೋಡುವಷ್ಟರಲ್ಲಿ ವ್ಯಕ್ತಿಯ ಆಕೃತಿಯನ್ನು ಆ ಫ್ಲಾಷ್ ಲಯಟ್ ಪಡೆದುಕೊಂಡಿತು. ಇದು ಖಂಡಿತ ಯಾವುದೋ ಬ್ಲಾಕ್ ಮ್ಯಾಜಿಕ್ಕಲ್ಲ.. ಹೌದಿನಿಯ ಕರಾಮತ್ತೂ ಅಲ್ಲ ಎಂದುಕೊಂಡೆ.
                `ಎಲ್ಲಾ ಸರಿ.. ನೀನು ನಂಗೆ ಯಾಕೆ ಕಾಣಿಸಿಕೊಂಡಿದ್ದು.. ನಾನು ನಿನಗೇನೂ ಅಷ್ಟು ಆಪ್ತ ದೋಸ್ತ ಆಗಿರಲಿಲ್ಲವಲ್ಲ.. ಕಾಲೇಜಿನಲ್ಲಿ ನಿನಗೆ ನೂರಾರು ಗೆಳಯರಿದ್ದರು. ಹತ್ತಾರು ಜನರು ನನಗಿಂತ ಆಪ್ತರಾಗಿದ್ದರು. ಅವರೆಲ್ಲರಿಗೂ ಕಾಣಿಸಿಕೊಂಡಿದ್ದೀಯಾ.. ಅಥವಾ ನನಗೊಬ್ಬನಿಗೆ ಕಾಣಿಸಿಕೊಳ್ತಾ ಇರೋದಾ..? ನಿನ್ನ ಕಣ್ಣಿಗೆ ನಾನೇ ಯಾಕೆ ಬೀಳಬೇಕು..?' ಆ ಆಕೃತಿಯೊಂದಿಗೆ ವಾದಮಾಡುವ ಅನ್ನಿಸಿ ಕೇಳಿದೆ.
                `ಅರ್ಥವಾಗದ ನೂರಾರು ಜನ ಮಿತ್ರರಿಗಿಂತ ಅರ್ಥವಾಗುವ ಒಬ್ಬ ವ್ಯಕ್ತಿ ಸಾಕು. ಅಂವ ಶತ್ರು ಆದರೂ ಪರವಾಗಿಲ್ಲ. ಭಾವನೆಗಳು ಅರ್ಥವಾಗಬೇಕು. ನಿನಗೆ ನನ್ನ ಭಾವನೆಗಳು ಖಂಡಿತ ಅರ್ಥವಾಗುತ್ತವೆ ಎನ್ನುವ ಕಾರಣಕ್ಕಾಗಿ ನಾನು ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಿತ್ರರಲ್ಲಿ ಅನೇಕರ ಕಣ್ಣಿಗೆ ಕಾಣಿಸಿಕೊಳ್ಳಲು ಪ್ರಯತ್ನ ಪಟ್ಟೆ. ಆದರೆ ಅವರು ನನ್ನ ಕುರಿತು ತಲೆಕೆಡಿಸಿಕೊಳ್ಳಲಿಲ್ಲ ನೋಡು ಹಾಗಾಗಿ ನಿನಗೆ ಕಾಣಿಸಿಕೊಳ್ಳುತ್ತಿದ್ದೇನೆ..' ಎಂದಿತು ಆಕೃತಿ.
               ಇದುವರೆಗೂ ಯಾರದ್ದೋ ಹುಚ್ಚಾಟ ಎಂದುಕೊಳ್ಳುತ್ತಿದ್ದ ನಾನು ನಿಧಾನವಾಗಿ ಆ ಆಕೃತಿಯ ಮಾತನ್ನು ನಂಬುತ್ತ ಹೋದೆ. ಒಂದುಕಾಲದಲ್ಲಿ ಆಪ್ತಮಿತ್ರನಾಗಿ ನಂತರ ಶತ್ರುವಾಗಿ ಬದಲಾಗಿ ಜಗಳ-ಗಲಾಟೆಯನ್ನು ನಾವು ಮಾಡಿಕೊಂಡಿದ್ದೆವು. ನನ್ನ ಬಳಿ ಮಾತನಾಡುತ್ತಿರುವುದು ಆತನೇ ಇರಬೇಕು ಎನ್ನುವ ಭಾವನೆ ಮೂಡಲಾರಂಭಿಸಿತು. `ಅಲ್ಲಾ ನಾನೂ ನಿನ್ನನ್ನು ನಂಬದಿದ್ದರೆ ಏನು ಮಾಡುತ್ತೀಯಾ..?' ಎಂದೆ..
               `ಯಾರೂ ನನ್ನ ಬಳಿ ಇಷ್ಟೂ ಮಾತನಾಡುವ ಮನಸ್ಸು ಮಾಡಿರಲಿಲ್ಲ ದೋಸ್ತಾ.. ನೀನು ಇಷ್ಟಾದರೂ ಮಾಡಿದೆಯಲ್ಲ.. ಅಷ್ಟೇ ಸಾಕು ಎಂದುಕೊಳ್ಳುತ್ತೇನೆ..' ಎಂದಿತು ಅದು.
               ` ಅಲ್ಲಾ.. ದೋಸ್ತಾ ಸರಿ ನಾನು ನಿನ್ನನ್ನು ನಂಬ್ತಿ.. ನನ್ನ ಬಳಿ ಹೇಳಿಕೊಳ್ಳುವಂತದ್ದು ನಿಂಗೆ ಏನಿದೆ ಅಂತದ್ದು..? ಒಂದು ಕೆಲಸ ಮಾಡ್ತೀನಿ.. ನೀನು ಹೇಳಿಕೊಳ್ಳಬೇಕೆಂದಿದ್ದನ್ನು ನಾನೇ ಕೇಳ್ತಾ ಹೋಗ್ತೀನಿ.. ಆಗಬಹುದೇ..?' ನಾನು ಗಣಿಯ ಆಕೃತಿಯನ್ನು ಮಾತಿಗೆಳೆಯುತ್ತಿದ್ದೆ.
                `ಅಂಗಿತೊಳೆಯವು ಹೇಳಿ ಮನಸ್ಸು ಮಾಡುತ್ತಿದ್ದ ತಕ್ಷಣ ಅಗಸ ಮನೆ ಬಾಗಿಲಲ್ಲಿ ಪ್ರತ್ಯಕ್ಷ ಆಗಿದ್ದ ಅನ್ನೋ ಹಂಗಾತು ನೋಡು ನಿನ್ನ ಮಾತು. ಸರಿ.. ನಾ ಹೇಳಿಕೊಳ್ಳುತ್ತ ಹೋಗುವ ಮುನ್ನ ನೀನೇ ಏನೇನ್ ಕೇಳಬೇಕೋ ಅದನ್ನು ಕೇಳು.. ನಾನು ಉತ್ತರ ಕೊಡ್ತೆ.. ಮತ್ತೆ ದೆವ್ವದ ಸಂದರ್ಶನ ಅಂತ ಎಲ್ಲಾದ್ರೂ ಬರೆದುಬಿಟ್ಟೀಯಾ..' ಗಣಿಯ ಆಕೃತಿ ನನ್ನ ಜೊತೆ ಮಾತನಾಡುತ್ತಲೇ ಚಿಕ್ಕದಾಗಿ ಎಚ್ಚರಿಕೆಯನ್ನೂ ನೀಡಿತ್ತು.
               ` ಹೆ ಹೆ ಸರಿ ಸರಿ..ಹಂಗೇನೂ ಮಾಡೋದಿಲ್ಲ ಮಾರಾಯಾ...' ನನಗರಿವಿಲ್ಲದಂತೆ ಭೂತದ ಜೊತೆಗೆ ಆಪ್ತತೆ ಮುಡಲಾರಂಭವಾಗಿತ್ತು.. `ಮತ್ತೆ ಹೇಗಿದಿಯಾ ಗಣಿ..' ಉಭಯಕುಶಲೋಪರಿಯ ಮೂಲಕ ಮಾತಿಗೆ ಶುರುವಿಟ್ಟುಕೊಂಡೆ.
               `ಭೂತದ ಬಳಿ ಹೇಗಿದ್ದೀಯಾ ಎಂದು ಕೇಳ್ತೀಯಲ್ಲ ಮಾರಾಯಾ.. ನಾವು ಯಾವಾಗಲೂ ಅತೃಪ್ತರು. ನಮಗೆ ತೃಪ್ತಿ ಅನ್ನೋದೆ ಇಲ್ಲ ತಿಳ್ಕೋ. ನಾವು ತೃಪ್ತರಾದ್ವಿ ಅಂತಾದ್ರೆ ನಮಗೆ ಭೂತದ ಬದುಕಿನಿಂದ ಮುಕ್ತಿ ಸಿಕ್ಕಂತೆ..' ಎಂದಿತು ಗಣಿಯ ಆತ್ಮ.
              `ನನ್ನಲ್ಲಿ ನಿನ್ನ ಬಗ್ಗೆ ಇನ್ನೂ ಹಲವು ಗೊಂದಲಗಳಿವೆ. ಕೇಳಬೇಕಾದ ಹಲವು ಪ್ರಶ್ನೆಗಳು ಅರ್ಧಲ್ಲಿಯೇ ನಿಂತು ಹೋಗಿದೆ. ಹೇಗೆ ಕೇಳಬೇಕು ಎಂದೇ ಗೊತ್ತಾಗುತ್ತಿಲ್ಲ.. ನೀನು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ನಮಗೆಲ್ಲಾ ಅದು ಇನ್ನೂ ನಿಘೂಡವಾಗಿದೆ. ನೀನು ಆತ್ಮಹತ್ಯೆ ಮಾಡಿಕೊಂಡ ಮರುದಿನ ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತನಾಡುತ್ತಿದ್ದರು. ಕೆಲವರು ಇದು ಆತ್ಮಹತ್ಯೆಯಲ್ಲಿ ಕೊಲೆ ಅಂದರು. ಮತ್ತೆ ಹಲವರು ಆತ್ಮಹತ್ಯೆಯೇ ಹೌದು ಎಂದರು. ಅದೇನೇ ಆಗಿರಲಿ. ನಿನ್ನ ಸಾವಿಗೆ ಅಸಲಿ ಕಾರಣ ಏನು..?' ಪ್ರಶ್ನೆಗಳ ಸುರಿಮಳೆ ಮಾಡಿದೆ.
               `ನೋಡು ಸಾವಿಗೆ ಒಂದು ರೀತಿ, ನೆಪ, ಮಾರ್ಗಗಳಿರುತ್ತವೆ. ನಾನು ಸತ್ತ ರಕ್ಷಣ ಯಾರ್ಯಾರು ಹೇಗ್ಹೇಗೆ ಮಾತನಾಡಿಕೊಂಡರು ಎಂಬುದು ನನಗೂ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಂಡೆನೋ ಅಥವಾ ಕೊಲೆಯಾದೆನೋ ಎಂಬುದು ಮುಖ್ಯವಲ್ಲ. ನಾನು ಸತ್ತಿದ್ದೇನಲ್ಲ.. ಅದು ಸತ್ಯ. ನಾನು ಸತ್ತಿರುವ ಕೊಠಡಿಯ ಬಾಗಿಲು ಚಿಲಕ ಹಾಕಿರಲಿಲ್ಲ. ಯಾವಾಗಲೂ ನನ್ನ ಜೊತೆಗೆ ಇರುತ್ತಿದ್ದ ರೂಮಿನ ಸಹಪಾಠಿ ಆ ದಿನ ರೂಮಿನಲ್ಲಿರಲಿಲ್ಲ ಇತ್ಯಾದಿ ಇತ್ಯಾದಿಗಳೆಲ್ಲ ನನ್ನ ಸಾವಿನ ಕುರಿತು ನಿಮ್ಮಲ್ಲಿ ದ್ವಂದ್ವವನ್ನು ಹುಟ್ಟುಹಾಕಿವೆ ಅನ್ನುವುದು ನನಗೂ ಗೊತ್ತಿದೆ. ನಾನು ಸತ್ತಿದ್ದು ಹೇಗೆ ಎನ್ನುವುದು ನಿನಗೆ ಅಷ್ಟು ಮುಖ್ಯ ಎನ್ನುವುದಾದರೆ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೆ ಎಂದೇ ಹೇಳಬೇಕಾಗುತ್ತದೆ ನೋಡು..' ಎಂದ ಆತ್ಮರೂಪಿ ಗಣಿ.
               `ಅದು ಸರಿ.. ಯಾಕೆ ಅಂತ ಗೊತ್ತಾಗಲಿಲ್ಲವಲ್ಲ.. ಹಲವರು ನೀನು ಸಾಯುವಾಗ ತೀವ್ರವಾದ ಖಾಯಿಲೆಯಿಂದ ಬಳಲುತ್ತಿದ್ದೆ, ವೈಟ್ ಜಾಂಡೀಸಾಗಿತ್ತು, ಲವ್ ಫೇಲ್ಯೂರ್ ಆಗಿತ್ತು, ನೀನು ಪ್ರೀತಿಸುತ್ತಿದ್ದ ಹುಡುಗಿಯ ಅಣ್ಣಂದಿರು ನಿನ್ನ ಮೇಲೆ ಹಲ್ಲೆ ಮಾಡಲು ಸಮಯ ಸಾಧಿಸುತ್ತಿದ್ದರು ಅವರ ಭಯದಿಂದ ಆತ್ಮಹತ್ಯೆ ಮಾಡಿಕೊಂಡೆ ಎಂದೆಲ್ಲ ಮಾತನಾಡಿಕೊಂಡಿದ್ದರು..ನಿನ್ನ ಸಾವಿಗೆ ಅಸಲಿ ಕಾರಣ ಎಂತದ್ದು ಮಾರಾಯಾ..?' ಗಣಿಯ ಕಾಲೆಳೆದೆ.
                `ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ. ಆದರೆ ಕಾರಣಗಳನ್ನು ಹೇಳಲಾರೆ.. ಕಟು ಸತ್ಯಗಳು ಭಾವನೆಗಳನ್ನು ಘಾಸಿಗೊಳಿಸುತ್ತವೆ. ಮಾರಾಯಾ ನನ್ನ ಸಾವಿನ ವಿಷಯ ಬಿಟ್ಹಾಕು.. ನಮ್ಮ ಕಾಲೇಜಿನ ಸವಿ ದಿನಗಳನ್ನು ನೆನಪು ಮಾಡಿಕೊಳ್ಳೋಣ.. ಖುಷಿಯಾಗಿ ಮಾತನಾಡುವ ಅಂತ ಬಂದರೆ ಇವ ಬರಿ ನನ್ನ ಸಾವಿನ ಕುರಿತೇ ಮಾತನಾಡುತ್ತಾನೆ..' ಗಣಿಯ ಆತ್ಮ ಹುಸಿಮುನಿಸು ತೋರಿತು.
                `ಆಯ್ತು ಬಿಡು ಮಾರಾಯಾ.. ಕೇಳೋಲ್ಲ.. ನಿನ್ನ ಪ್ರೀತಿಸ್ತಾ ಇದ್ಲಲ್ಲ ಅವಳೇನು ಮಾಡ್ತಾ ಇದ್ದಾಳೋ..? ಗೊತ್ತುಂಟಾ ಅವಳ ಬಗ್ಗೆ..?'
                `ಹುಂ.. ನಿಮಗೆ ಹೇಗೆ ಮಿತ್ರರು ಇರುತ್ತಾರೋ ನಮಗೂ ಹಾಗೇ ಈ ಪೈಶಾಚಿಕ ಲೋಕದಲ್ಲೂ ಮಿತ್ರರು ಇರ್ತಾರೆ.. ಅವರ ಬಳಿ ಮಾಹಿತಿ ಪಡೆದಿದ್ದೇನೆ. ಅವಳಿಗೆ ಮದುವೆ ಆಗಿದೆಯಂತೆ. ಒಂದು ಗಂಡು ಮಗು ಇದೆ ಎಂಬ ಸುದ್ದಿ ತಿಳಿದೆ. ಆ ಮಗುವಿನ ಹೆಸರು ಗಣಿ ಅಂತಲೇ ಇಟ್ಟಿದ್ದಾಳಂತೆ.. ಯಾಕೋ ತುಂಬಾ ಬೇಜಾರಾಗ್ತಿದೆ ದೋಸ್ತಾ..? ಅದ್ ಸರಿ ನೀನು ನನ್ನ ತಂಗಿಯನ್ನು ಪ್ರೀತಿಸ್ತಾ ಇದ್ಯಲ್ಲಾ.. ಅವಳ ಕತೆ ಏನಾಯ್ತು.. ನಿಂಗೆ ಅವಳು ಸಿಕ್ಕಳಾ..?' ನನ್ನನ್ನೇ ಪ್ರಶ್ನಿಸಿದ್ದ ಗಣಿ.
                `ನಿನಗೆ ಅಣ್ಣ ಅಣ್ಣ ಎಂದು ಕಾಡುತ್ತಿದ್ದಳಲ್ಲ.. ಅವಳ ಬಗ್ಗೆ ನೀನು ಕೇಳ್ತಿದ್ದೀಯಲ್ಲವಾ.. ಯಾಕೆ ನಿಂಗೆ ಅವಳ ಮನೆಯ ಬಳಿ ಯಾವುದೇ ಮಿತ್ರರು ಸಿಕ್ಕಿಲ್ಲವೇನೋ...' ಗಣಿಯ ಆತ್ಮದ ಕಾಲೆಳೆಯಲು ಯತ್ನಿಸಿದೆ..
                `ಹೆ ಹೋಗೋ ಮಾರಾಯಾ.. ಹಂಗೇನೂ ಇಲ್ಲ.. ನೀನು ಹೇಳ್ತೀಯೋ ಇಲ್ವೋ...'
                `ಇಲ್ಲ ಗಣಿ.. ಅವಳು ನನಗೆ ಸಿಗಲಿಲ್ಲ.. ನನಗೆ ಕಾರಣವನ್ನೂ ಹೇಳದೇ ಬಿಟ್ಟುಹೋದಳು..' ಎಂದೆ
                `ಕಾಲೇಜು ದಿನಗಳಲ್ಲೇ ನಿನಗೆ ಹೇಳಬೇಕು ಎಂದುಕೊಂಡಿದ್ದೆ ದೋಸ್ತಾ.. ಅವಳು ನಿನಗೆ ಸರಿಯಾದವಳಲ್ಲ ಅಂತ.. ಆದರೆ ನಾನು ಹೇಳಿದರೆ ನೀನು ಕೇಳುವಂತಿರಲಿಲ್ಲ ಬಿಡು. ಆಕೆಯೂ ತುಂಬಾ ಸತಾಯಿಸಿರಬೇಕು ಎಲ್ಲವಾ.. ಆ ನಂತರ ನನ್ನ ನಿನ್ನ ನಡುವೆ ಗೊತ್ತಾಗದಂತೆ ಅವಳ ದೆಸೆಯಿಂದಲೇ ಗೋಡೆ ಬೆಳೆಯಿತು. ನಾನು-ನೀನು ಮಾತುಬಿಟ್ಟಿದ್ದಷ್ಟೇ ಅಲ್ಲ ಎದುರಾ ಬದರಾ ಆದರೆ ಗುದ್ದಾಡಿಕೊಲ್ಳುವಷ್ಟು ದ್ವೇಷ ಕಾರಲು ಆರಂಭ ಮಾಡಿದ್ವಿ.. ಈಗ ನೆನಪು ಮಾಡಿಕೊಂಡರೆ ತುಂಬಾ ಬೇಜಾರಾಗುತ್ತದೆ ಮಾರಾಯಾ..' ಎಂದ ಗಣಿ.
                `ದೆವ್ವ ಮತ್ತು ಬೇಜಾರು.. ಎಂತಾ ಶಬ್ದಗಳು ಮಾರಾಯಾ.. ದೆವ್ವಕ್ಕೂ ಬೇಜಾರಾಗುತ್ತದೆ ಎಂದು ಇದೇ ಮೊದಲು ನಾನು ಕೇಳಿದ್ದು.. ಇರಲಿ ಬಿಡು.. ಆ ದಿನಗಳು ನಿಜಕ್ಕೂ ಖುಷಿ ನೀಡಿದ್ದವು.. ಈಗಲೂ ಅನೇಕ ಸಾರಿ ನೆನಪು ಮಾಡಿಕೊಂಡು ನನ್ನೊಳಗೆ ಖುಷಿ ಹಾಗೂ ದುಃಖವನ್ನು ಅನುಭವಿಸುತ್ತೇನೆ... ಅದನ್ನು ಈಗ ಯಾರ ಬಳಿಯಾದರೂ ಹೇಳಿದರೆ ಇಂವ ಆ ಕಾಲದಿಂದ ಮುಂದೆ ಬರಲೇ ಇಲ್ಲ ಎಂದುಕೊಳ್ಳುತ್ತಾರೆ ಎಂದು ಸುಮ್ಮನಾಗಿದ್ದೇನೆ..' ಎಂದೆ
                 `ಹೌದು.. ಹೌದು.. ಕಾಲೇಜಿನ ತರಗತಿಗಳು, ಆ ಲೆಕ್ಚರ್ರುಗಳು, ಸೀರಿಯಸ್ಸಾಗಿ ಪಾಠ ಕೇಳುವ ನಾನು, ಚೆಸ್ಸು, ಅದು, ಇದು ಎಂಬ ಕಾರಣ ಕೊಟ್ಟು ಕ್ಲಾಸಿಗೆ ಕಳ್ಳಬೀಳುವ ನೀನು.. ನನ್ನ ಜೊತೆ ಹುಡುಗಿಯರು ಮಾತನಾಡಿ ಹಾಯ್ ಬಾಯ್ ಅಂದರೆ ಹೊಟ್ಟೆ ಉರಿದುಕೊಳ್ಳುವ ನೀನು, ಬಕ್ಕಳ ತೇರಲ್ಲಿ ಫಾರಿನ್ನ್ ಮಂದಿಯ ಜೊತೆ ಸಖತ್ತಾಗಿ ಇಂಗ್ಲೀಷ್ ಮಾತನಾಡಿದ ನೀನು, ನಿನ್ನನ್ನೋಡಿ ಎಂತಾ ಸಾಲಿಡ್ ಇಂಗ್ಲೀಷ್ ಮಾತಾಡ್ತೆ ಮಾರಾಯಾ ಎಂದಿದ್ದ ನಾನು, ಆಕಾಶವಾಣಿ ಕಾರವಾರದ ಕ್ವಿಜ್ ಕಾಂಪಿಟೇಶನ್ನು, ಕೈಗಾದ ಕ್ರಿಕೆಟ್ ಸ್ಟೇಡಿಯಮ್ಮಿನಲ್ಲಿ ಅಡ್ಡಾಡಿದ್ದು, ಕ್ರಿಸ್ ಮಸ್ ದಿನ ಸಾಂತಾಕ್ಲಾಸ್ ಹಾಕಿಕೊಂಡಿದ್ದ ಕೆಂಪು ಟೋಪಿಯನ್ನು ಎಳೆದಿದ್ದ ನೀನು.. ಅಂವ ಅಟ್ಟಿಸಿಕೊಂಡು ಬಂದಾಗ ಕೈಗಾದ ಬೀದಿಯಲ್ಲಿ ಓಡಿದ್ದ ನಾನು... ಮತ್ತೆ ಮತ್ತೆ ಕಾಡುವ ನಮ್ಮ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು... ಓಹ್ ಒಂದೆ ಎರಡೆ... ಎಲ್ಲ ನನಗೂ ಆಗಾಗ ನೆನಪಾಗುತ್ತಿರುತ್ತವೆ ಮಾರಾಯಾ..' ಎಂದ ಆತ.
                  `ಹೌದು ಹೌದು.. ಕದ್ರಾ ಡ್ಯಾಮಿನ ಎದುರು ನಾನು-ನೀನು ನಿಂತು ಪೋಟೋ ತೆಗೆಸಿಕೊಂಡಿದ್ದನ್ನು ಮರೆತು ಬಿಟ್ಟಂತಿದೆ ನೋಡು.. ನಾವು ಹಾಗೆ ನಿಂತಿದ್ದಾಗಲೇ ಡ್ಯಾಮಿನ ಒಂದು ಗೇಟಿನ್ನು ಅರ್ಧ ತೆಗೆದು ನೀರನ್ನು ಬಿಟ್ಟಿದ್ದರು. ನಾವಿಬ್ಬರೂ ಭಯದಿಂದ ಓಡಿ ನಿನ್ನ ಸಂಬಂಧಿಕರ ಮನೆಯತ್ತ ತೆರಳಿದ್ದೆವಲ್ಲ.. ಕೈಗಾದಿಂದ ವಾಪಾಸು ಬರುವಾಗ ಟಿಕೆಟ್ ಮಾಡಿಸದೇ ಬಸ್ಸನ್ನೇರಿ ಕೊನೆಗೆ ಚಕ್ಕಿಂಗ್ ಆಫೀಸರ್ ಕೈಲಿ ಸಿಕ್ಕಿಬಿದ್ದು ದಂಡ ತೆತ್ತಿದ್ದೆವಲ್ಲ.. ಕಾರವಾರ, ಕುಮಟಾ, ಧಾರವಾಡ, ಹುಬ್ಬಳ್ಳಿ, ಶಿರಸಿ ಊಹೂಂ.. ನಮ್ಮ ಉರಾಉರಿಗೆ ಅವು ಎಂದೂ ಸಾಕಾಗಿರಲೇ ಇಲ್ಲ ಅಲ್ಲವಾ.. ' ನೆನಪಿನಾಳಕ್ಕೆ ನಾನು ಇಳಿದಿದ್ದೆ..
                 `ನಿಜ ನಿಜ.. ಕಾಲೇಜಿನ ನೋಟೀಸು ಬೋರ್ಡಿನ ತುಂಬ ನೀನು-ನಾನು ಹಾಗೂ ನಮ್ಮ ಮಿತ್ರವೃಂದಗಳೇ ಇದ್ದವು. ಅದನ್ನು ಮರೆಯಲಿಕ್ಕಾಗಲ್ಲ ಬಿಡು..' ಎಂದ ಗಣಿ.
                 `ನಾನು ಅವಳನ್ನು ಪ್ರೀತಿಸುತ್ತಿದ್ದ ಹೊತ್ತಿನಲ್ಲಿಯೇ ನೀನು ನನ್ನ ಬಳಿ ಬಂದು ಅವಳ ಗೆಳತಿ ಹೇಗೆ..? ಒಳ್ಳೆಯ ಗುಣವಾ..? ಯಾವ ಊರು ಇತ್ಯಾದಿ ಮಾಹಿತಿಗಳೆಲ್ಲವನ್ನೂ ಪಡೆದಿದ್ದೆ.. ಕೆಲ ದಿನಗಳ ಕಾಲ ನೀನು ಹಾಗೂ ನನ್ನ ಹುಡುಗಿಯ ಗೆಳತಿ ಇಬ್ಬರೂ ಆಪ್ತರಾಗಿ ಓಡಾಡಿದ್ದಿರಿ.. ಆಮೇಲೆ ಇದ್ದಕ್ಕಿದ್ದಂತೆ ದೂರಾದಿರಿ.. ನಾನು ದೂರದಿಂದಲೇ ಗಮನಿಸಿದ್ದೆ.. ಏನಾಗಿತ್ತೋ..?' ನಾನು ಕೇಳಿದೆ.
                 `ಹುಂ. ಅದರ ಬಗ್ಗೆ ಏನ್ ಹೇಳೋದು.. ಪ್ರೇಮ ಹಾಗೂ ವೈಫಲ್ಯ ಒಂದೇ ನಾಣ್ಯ.. ಎರಡೆರಡು ಮುಖಗಳು ಮಾರಾಯ..ದೇವರು ಈ ನಾಣ್ಯವನ್ನು ಆಗಾಗ ಮೇಲಕ್ಕೆ ಹಾರಿಸುತ್ತಿರುತ್ತಾನೆ. ಕೆಲವು ಸಾರಿ ಪ್ರೇಮ ಮೇಲಾಗಿ ಬಿಡುತ್ತದೆ.. ಮತ್ತೆ ಕೆಲವು ಸಾರಿ ವೈಫಲ್ಯ.. ನನ್ನ ಪಾಲಿಗೆ ವೈಫಲ್ಯ ಮೇಲಾಗಿ ಬಿದ್ದಿತ್ತು.. ನಾನು ಅವಳು ದೂರಾಗಿದ್ದೆವು.. ನಿನ್ನ ಕತೆ ಏನು..?' ಎಂದ ಗಣಿ.
                `ನನ್ನ ಕಥೆ ಏನು ಕೇಳ್ತಿ ಮಾರಾಯಾ.. ಕಾಲೇಜು ದಿನಗಳಲ್ಲಿ ಅವಳು ನನ್ನ ಪ್ರೀತಿಯ ಜೊತೆಗೆ ಕಣ್ಣಾ ಮುಚ್ಚಾಲೆ ಆಡಿದಳು.. ನಂತರ ಕಾಲೇಜು ಕಳೆದ ತಕ್ಷಣ ದೊಡ್ಡದೊಂದು ಕೆಲಸ ಸಿಕ್ಕಿತು ನೋಡು ಪ್ರಾಕ್ಟಿಕಲ್ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಳು.. ಮುಂದೊಂದು ದಿನ ನನಗೆ ಹೇಳಲಿಲ್ಲ ಕೇಳಲಿಲ್ಲ.. ಬೇರೊಬ್ಬನ ಜೊತೆ ಮದುವೆಯಾದಳು ಹೋದಳು.. ನಿನ್ನ ಪ್ರೇಮದ ಕಥೆ ಏನಾಗಿತ್ತೋ ನನ್ನದೂ ಅದೇ ಆಗಿತ್ತು...' ಎಂದು ನಿಟ್ಟುಸಿರುಬಿಟ್ಟೆ..
                 `ಏಹೇ.. ನನ್ನದಕ್ಕೂ ನಿನ್ನದಕ್ಕೂ ಬಹಳ ವ್ಯತ್ಯಾಸ ಇದೆ ಮಾರಾಯಾ.. ನನ್ನದು ಹುಟ್ಟುವ ಮೊದಲೆ ಸತ್ತ ಪ್ರೇಮ.. ಆದರೆ ನಿನ್ನದು ಹೆಮ್ಮರವಾಗಿದ್ದ ಪ್ರೇಮ. ಆದರೆ ನಿನ್ನ ಪ್ರೀತಿಯ ಹೆಮ್ಮರದ ನಡುವೆ ಬಸುರಿಗಿಡ ಹುಟ್ಟಿದ್ದು ನಿನಗೆ ಗೊತ್ತಾಗಲೇ ಇಲ್ಲ ಅನ್ನಿಸುತ್ತದೆ  ಅಲ್ಲವಾ..? ಹೋಗ್ಲಿ ಬಿಡು.. ಆದದ್ದೆಲ್ಲಾ ಒಳ್ಳೆಯದಕ್ಕೆ.. ಮುಂದೇನೋ ಒಳ್ಳೆಯದಾಗುತ್ತದೆ...' ಎಂದ ಗಣಿ..
                 `ಹೌದು.. ಹೌದು.. ಅದೇ ಬದುಕಲ್ಲವಾ.. ಹೋಗ್ಲಿ ಒಂದು ಪ್ರಶ್ನೆ ದೋಸ್ತಾ.. ಇದಕ್ಕೆ ಹಾರಿಕೆ ಉತ್ತರ ಬೇಡ..' ಎಂದೆ.. ಸರಿ ಎಂದ ಗಣಿ.. `ನೀನೇನೋ ಆತ್ಮಹತ್ಯೆ ಮಾಡಿಕೊಂಡೆ.. ಆದರೆ ಅದನ್ನು ಎಪ್ರಿಲ್ 1ಕ್ಕೆ ಯಾಕೆ ಮಾಡಿಕೊಂಡೆ..? ಇಷ್ಟಕ್ಕೂ ಆತ್ಮಹತ್ಯೆ ಮಾಡಿಕೊಂಡು ಏನು ಸಾಧನೆ ಮಾಡಿದೆ..? ನಿನ್ನಲ್ಲಿ ಕೆಜಿಗಟ್ಟಲೆ ಪ್ರತಿಭೆಗಳಿದ್ದವು, ಒಳ್ಳೆಯ ಡ್ಯಾನ್ಸರ್, ಆಕ್ಟರ್, ಮಿಮಿಕ್ರಿ ಪಟು ನೀನಾಗಿದ್ದೆ.. ರಾಂಕ್ ಪಡೆಯುವಂತಹ ವಿದ್ಯಾರ್ಥಿಯೂ ನೀನು ಎಂಬುದು ನಮಗೆ ತಿಳಿದ ಸಂಗತಿ.. ಅನೇಕ ಸಾರಿ ನಾನು, ರಾಘು, ಕಿಟ್ಟಿ, ಮರಗಿಣಿ, ವಿನಿ, ನಾಗೂ, ಸುಬ್ಬು ಎಲ್ಲರೂ ನಿನ್ನ ಬಳಿ ಸಲಹೆ ಪಡೆದಿದ್ದೆವು.. ಸೋತು ಕುಸಿದಿದ್ದಾಗ ಗಾಳಿಯನ್ನು ಗುದ್ದಿ ಗೆಲ್ಲುವ ಆಶಾವಾದ ಹುಟ್ಟ ಹಾಕಿದ್ದ ನೀನು ಸಾವಿಗೆ ಶರಣಾಗಿದ್ದು ನಮಗೆ ಬಹಳ ಸಿಟ್ಟು ತಂದಿತ್ತು.. ನೀನು ಸತ್ತು ಸಾಧಿಸಿದ್ದೇನು..?' ಎಂದೆ..
                  ಗಣಿ ಮಾತಾಡಲಿಲ್ಲ.. ಒಂದೆರಗಳಿಗೆ ನಿಶ್ಶಬ್ಧ. ಗಣಿ ಇದ್ದಾನೋ ಹೊರಟು ಹೋದನೋ ಎನ್ನುವ ಅನುಮಾನ ಕಾಡಲು ಶುರುವಾದವು.. `ಗಣಿ.. ಇದ್ದೀಯಾ..? ಮಾಯವಾದೆಯಾ..?' ಎಂದು ಕೇಳಿದೆ.
                  ತುಸು ಹೊತ್ತಿನ ನಂತರ ಗಣಿ ಮಾತನಾಡಲು ಆರಂಭಿಸಿದ ' ನಿಜ ದೋಸ್ತಾ.. ನೀನು ಹೇಳಿದ ಮಾತುಗಳನ್ನೇ ನಾನು ಆಲೋಚನೆ ಮಾಡುತ್ತಿದ್ದೆ. ನಾನು ಆತ್ಮಹತ್ಯೆ ಮಾಡಿಕೊಂಡೆ ನಿಜ. ಆದರೆ ಆತ್ಮಹತ್ಯೆ ಮಾಡಿಕೊಂಡು ಏನು ಸಾಧನೆ ಮಾಡಿದೆ ಅಂತ ಕೇಳಿದರೆ ಏನಿಲ್ಲ ಎನ್ನಬಹುದು. ಇತ್ತ ಸ್ವರ್ಗವೂ ಇಲ್ಲ ನರಕವೂ ಇಲ್ಲ. ಬದುಕಿ ನಿಮ್ಮ ಜೊತೆಗೆ ಖುಷಿಯಾಗಿದ್ದೇನಾ ಅದೂ ಇಲ್ಲ. ಹೀಗೆ ಅಂತರಪಿಶಾಚಿಯಾಗಿ ಅಲೆಯುತ್ತಿದ್ದೇನೆ. ನಾನು ಸಾಯಬಾರದಿತ್ತು ಅಂತ ಅನ್ನಿಸುತ್ತಿದೆ.ಬದುಕಿನಲ್ಲಿ ಅದೆಷ್ಟೇ ತೊಂದರೆಗಳು, ತಾಪತ್ರಯಗಳು, ದುಃಖಗಳು ಸಮಸ್ಯೆಗಳು, ಹಳವಂಡಗಳಿದ್ದರೂ ಬದುಕಿ ತೋರಿಸಬೇಕಿತ್ತು ಅಂದುಕೊಳ್ಳುತ್ತಿದ್ದೇನೆ. ನೀವೆಲ್ಲ ಬದುಕುತ್ತಿದ್ದೀರಿ. ನಿಜಕ್ಕೂ ನಿಮ್ಮನ್ನು ನೋಡಿ ನನಗೆ ಹೊಟ್ಟೆಕಿಚ್ಚಾಗುತ್ತಿದೆ. ಬದುಕಿನಲ್ಲಿ ಎಷ್ಟು ಸಾರಿ ಬಿದ್ದಿರಿ ನೀವು ಆದರೆ ನನ್ನ ಹಾಗೆ ಪರಿಸ್ಥಿತಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿಲ್ಲ. ಬದುಕಿನ ಜೊತೆಗೆ ಗುದ್ಯಾಟ ನಡೆಸುತ್ತಿದ್ದೀರಲ್ಲ.. ನೀವು ಗ್ರೇಟ್.. ನಾನು ಹೇಡಿ ಅಂದುಕೊಂಡರೆ ಸರಿಯಾಗುತ್ತೇನೋ..' ಎಂದ. ಒಂದರೆಘಳಿಗೆ ನಿಂತು  `ಆತ್ಮಹತ್ಯೆಗೂ ಮುನ್ನ ನೋಡೇ ಬಿಡುವ ಎಂದು ಮಾಡಿಕೊಂಡೆ. ಆದರೆ ಯಾವಾಗ ಜೀವ ಹಾರಿ ಹೋಯ್ತೋ.. ತಕ್ಷಣವೇ ಅಯ್ಯೋ ನಾನೆಂತ ತಪ್ಪು ಮಾಡಿಬಿಟ್ಟೆ ಎಂದುಕೊಂಡೆ. ವಾಪಾಸು ಬರಲು ಯತ್ನಿಸಿದೆ. ಊಹೂಂ ಆಗಲಿಲ್ಲ.. ನೀವೆಲ್ಲ ನಾನು ಆತ್ಮಹತ್ಯೆ ಮಾಡಿಕೊಂಡ ನಂತರ ನನ್ನ ಪಾರ್ಥಿವ ಶರೀರ ನೋಡಲು ಬಂದಿರಿ. ನನ್ನ ನಿನ್ನ ನಡುವೆ ಅದೆಷ್ಟೇ ಸಿಟ್ಟು, ಸೆಡವು, ದ್ವೇಷ ಇದ್ದರೂ ನೀನು ಬಂದು ಕಣ್ಣೀರು ಹಾಕಿದೆಯಲ್ಲ.. ನಾನು ಆ ಕ್ಷಣದಲ್ಲೇ ಅಯ್ಯೋ ಎಂತಾ ತಪ್ಪು ಕೆಲಸ ಮಾಡಿಬಿಟ್ಟೆ. ಎದುರಾ ಬದುರಾ ಹೊಡೆದಾಡಿಕೊಂಡರೂ ಆಂತರ್ಯದಲ್ಲಿ ಎಂತಾ ಒಳ್ಳೆಯ ಗುಣವಿತ್ತಲ್ಲ ಎಂದುಕೊಂಡೆ. ಒಳಗೊಳಗೆ ನಾನೂ ಅತ್ತೆ. ತ್ರಿಶಂಕುವಾಗಿದ್ದುಕೊಂಡೆ ನನ್ನ ದೇಹವನ್ನು ನನ್ನ ಮನೆಯವರು ಬೆಂಕಿಯಲ್ಲಿ ಸುಡುತ್ತಿದ್ದುದನ್ನು ನೋಡಿದೆ. ಕಸಿವಿಸಿಯಾಯಿತು. ಆದರೆ ವಾಪಾಸು ಬರಲು ಆಗಲೇ ಇಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡೆ ಎನ್ನುವ ಕಾರಣಕ್ಕೆ ನನ್ನ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿದರಲ್ಲ.. ಆಗಲೂ ಅಷ್ಟೆ ಏನೋ ತಳಮಳ ಕಸಿವಿಸಿಯಾಯಿತು. ನನ್ನೆದೆಯನ್ನು ಬಗೆಯುತ್ತಿದ್ದರೆ, ಕೈಕಾಲಿನ ಒಳಗೆಲ್ಲ ವೈದ್ಯರು ದೃಷ್ಟಿ ಹಾಯಿಸುತ್ತಿದ್ದರೆ ಮತ್ತೆ ಮತ್ತೆ ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದುಕೊಂಡೆ. ಆದರೆ .. ಆದರೆ... ನಾನು ಆತ್ಮಹತ್ಯೆ ಮಾಡಿಕೊಂಡ ಮೇಲೆ ಇನ್ನೆಷ್ಟು ಸಾರಿ ಹೇಳಿದರೂ ಏನು ಪ್ರಯೋಜನ.. ವಾಪಾಸು ಬರಲಿಕ್ಕೆ ಆಗುವುದಿಲ್ಲವಲ್ಲ..ಹುಂ..' ಗಣಿ ನಿಟ್ಟುಸಿರು ಬಿಟ್ಟಂತಾಯಿತು. ನನಗೆ ಏನು ಹೇಳಬೇಕೋ ತೋಚಲಿಲ್ಲ. ಸುಮ್ಮನಿದ್ದೆ.
              ಆತನೇ ಮುಂದುವರಿದ `ದೋಸ್ತಾ ಖರೆ ಹೇಳ್ತಿ.. ಯಾರೂ ಆತ್ಮಹತ್ಯೆ ಮಾಡ್ಕಳಡಿ.. ಬದುಕು ಇನ್ನೂ ಇದ್ದು.. ಎಲ್ಲಿವರೆಗೆ ನಾವಾಗೆ ಬದುಕ್ತೀವೋ ಅಲ್ಲೀವರೆಗೂ ಬದುಕಿ.. ಅವಕಾಶಗಳು ಸಾಕಷ್ಟಿವೆ..  ನನ್ನಾಂಗೆ ಆಗಬೇಡಿ.. ಬದುಕಿಗೆ ಹೆದರಿ ಓಡಲೇಬೇಡಿ.. ಏನೇನು ಸಾಧ್ಯವೋ ಅಷ್ಟನ್ನೂ ಅನುಭವಿಸಿ. ಬಹುಶಃ ಅನುಭವಗಳು ಕೊಡುವ ಖುಷಿಯನ್ನು ಮತ್ಯಾವುದೂ ಕೊಡೋದಿಲ್ಲ ಅನ್ನಿಸ್ತಿದೆ.. ಅನುಭವಗಳನ್ನೇ ಸವಿಯಬೇಕು..' ಗಣಿ ಬೋಧನೆ ಮಾಡುತ್ತಿದ್ದಾನಾ ಅನ್ನಿಸಿತಾದರೂ ಆತ ಹೇಳುವ ಸಂಗತಿಗಳೂ ಹೌದಾದದ್ದು ಎನ್ನಿಸಿತು.
                `ನಾನು ಎಪ್ರಿಲ್ ಒಂದರಂದು ಆತ್ಮಹತ್ಯೆ ಮಾಡಿಕೊಂಡಿಲ್ಲ ದೋಸ್ತಾ.. ಮಾರ್ಚ್ 31ಕ್ಕೇ ಮಾಡಿಕೊಂಡದ್ದು. ಅದು ನಿಮಗೆಲ್ಲ ಗೊತ್ತಾಗಿದ್ದು ಎಪ್ರಿಲ್ 1ರಂದು. ಆತ್ಮಹತ್ಯೆಗೆ ಇಂತದ್ದೇ ದಿನಾಂಕ ಅಂತ ಯಾರಾದ್ರೂ ನಿಗದಿ ಮಾಡಿರ್ತಾರೇನೋ ಹುಚ್ಚಾ..' ಎಂದು ನಕ್ಕ ಗಣಿ. ನನಗೆ ಪಿಚ್ಚೆನ್ನಿಸಿತು.
                 `ನೀ ಹೇಳಿದ್ದು ನಿಜ ವಿನೂ.. ನನ್ನಲ್ಲಿ ಪ್ರತಿಭೆಗಳಿದ್ದವು. ನೀನು ಗುರುತಿಸಿದ್ದೆ. ಅನೇಕ ಸಾರಿ ಹೇಳಿಯೂ ಹೇಳಿದ್ದೆ. ಯುನಿವರ್ಸಿಟಿ ಯುವಜನ ಮೇಳಕ್ಕೆ ಹೋದಾಗಲೇ ಅಲ್ಲವೇ ಸಿನಿಮಾವೊಂದರ ನಿರ್ದೇಶಕರು ನನ್ನ ಬಳಿ ನಟನೆ ಮಾಡ್ತೀಯಾ? ನಿನಗೆ ಅವಕಾಶ ಕೊಟ್ಟರೆ ಬರ್ತೀಯಾ ಅಂತ ಕೇಳಿದ್ದರು. ನಿನಗೂ ಗೊತ್ತು ಅದು. ಆದರೆ ಬದುಕು ನಾವಂದುಕೊಂಡಂತೆ ಆಗಲೇ ಇಲ್ಲ ನೋಡು.. ಎತ್ತೆತ್ತಲೋ ಹೊರಳಿತು..' ಎಂದ..
                 `ಹೌದು ಕಣೋ ಗಣೀ.. ಎಲ್ಲವೂ ಹಂಗೇ ಆಗೋದು. ನಾವು ಅಂದುಕೊಳ್ಳೋದೆ ಒಂದು ಆದರೆ ಆಗೋದೇ ಇನ್ನೊಂದು.. ಅದ್ ಸರಿ ನೀ ಯಾಕೆ ಇನ್ನೂ ಅಂತರ ಪಿಶಾಚಿಯಾಗಿ, ಈ ರೂಪದಲ್ಲಿ ಓಡಾಡ್ತಾ ಇದ್ದಿದ್ದು..? ನೀನು ಸತ್ತು ಆಗಲೇ ಐದು ವರ್ಷಗಳಾಗ್ತಾ ಬಂದವಲ್ಲ ಮಾರಾಯಾ.. ಇನ್ನೆಷ್ಟು ದಿನಗಳ ಕಾಲ ಈ ರೂಪ..?' ಎಂದು ಕೇಳಿದೆ.
                `ಗೊತ್ತಿಲ್ಲ.. ಒಳ್ಳೆ ಬದುಕನ್ನು ಕೊಟ್ಟಿದ್ದೆ..ಅದನ್ನು ಹಾಳುಮಾಡಿಕೊಂಡೆ ಎನ್ನುವ ಕಾರಣಕ್ಕೆ ದೇವರು ಈ ರೂಪದಲ್ಲಿ ಶಿಕ್ಷೆ ಅನುಭವಿಸು ಅಂತ ಪಿಶಾಚಿಯಾಗಿ ಅಲೆದಾಡಲು ನನ್ನನ್ನು ಬಿಟ್ಟಿರಬೇಕು. ಯಾಕೋ ಗೊತ್ತಿಲ್ಲ. ನಾನು ಹೀಗೇ ಇದ್ದೇನೆ. ಖಂಡಿತ ನನಗೆ ಇನ್ನೆಷ್ಟು ಕಾಲ ಇದೇ ಅವತಾರದಲ್ಲಿ ಇರಬೇಕು ಎನ್ನುವುದೂ ಗೊತ್ತಿಲ್ಲ. ದೇವರು ಕೊಟ್ಟಿದ್ದು ಶಿಕ್ಷೆಯೇ ಹೌದಾದರೆ ಅನುಭವಿಸಲೇ ಬೇಕು.. ಅಲ್ಲವಾ..? ಹೋಗ್ಲಿ ಬಿಡು.. ನಾನು ಹೋಗೋ ಹೊತ್ತಾಯ್ತು..' ಎಂದು ಗಣಿ ಹೊರಡಲು ಅನುವಾದ..
                 ನಾನು ಲಗು ಬಗೆಯಿಂದ ತಾಳು ಮಾರಾಯಾ.. `ನಿನ್ನ ಬಳಿ ಕೇಳೋದು ಸಾಕಷ್ಟಿದೆ..' ಎಂದೆ.
                 `ಪತ್ರಕರ್ತನ ಬುದ್ಧಿ ಶುರುಮಾಡಿಕೊಂಡು ಬಿಟ್ಟೆಯಾ..? ಹಲವು ಸಂಗತಿ ಹಂಚಿಕೊಂಡೆವಲ್ಲ ಮಾರಾಯಾ.. ಇನ್ನೆಂತ ಉಂಟು ಕೇಳೋದಿಕ್ಕೆ..?' ಎಂದು ಪ್ರಶ್ನಿಸಿದ ಗಣಿ.
                  `ಕೊನೆ ಪ್ರಶ್ನೆ ಅಂತ ಬೇಕಾದ್ರೂ ಅಂದುಕೋ.. ಇದಕ್ಕೆ ನೀನು ಸ್ಪಷ್ಟ ಉತ್ತರ ಕೊಡಲೇ ಬೇಕು.. ಕೊಡ್ತೀಯಲ್ಲಾ..' ಎಂದು ಪಟ್ಟಾಗಿ ಕೇಳಿದೆ..
                   `ಅದೆಂತಾ ಪ್ರಶ್ನೆ ಮಾರಾಯಾ.. ಕೇಳು.. ಕೇಳು.. ಹೇಳುವಂತದ್ದಾದರೆ ಹೇಳೋಣ..' ಗಣಿ ಮತ್ತೆ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಿದ್ದ..
                   `ಏನೂ ಅಲ್ಲ ಮಾರಾಯಾ.. ಒಂದು ಕಾಲದಲ್ಲಿ ನಾನೂ ನೀನೂ ಭಯಂಕರ ದೋಸ್ತರು.. ಆದರೆ ಕೊನೆ ಕೊನೆಗೆ ನಾನು ನೀನು ಸಿಕ್ಕಾಪಟ್ಟೆ ಧ್ವೇಶ ಕಾರುವ ಶತ್ರುಗಳಾಗಿದ್ವಿ.. ನೀನು ಸತ್ತ ತಕ್ಷಣದಲ್ಲೇ ನನಗೆ ಈ ಬಗ್ಗೆ ಕೇಳಬೇಕು ಎಂದುಕೊಂಡಿದ್ದೆ.  ನಿನಗೆ ನನ್ನ ಮೇಲೆ ದ್ವೇಶ ಹುಟ್ಟಲು ಕಾರಣವಾದರೂ ಏನಿತ್ತು? ಯಾರು ನಮ್ಮ ನಡುವಿನ ಸ್ನೇಹಕ್ಕೆ ಹುಳಿ ಹಿಂಡಿದ್ದು..? ಇದ್ದಕ್ಕಿದ್ದಂತೆ ಏನಾಯಿತು ನಿನಗೆ..? ಸುಬ್ಬುವಾ..? ರಾಘುವಾ.. ಕಿಟ್ಟುವಾ.. ನಾಗೂವಾ..ಮರಗಿಣಿಯಾ.. ಅಥವಾ.. ಇನ್ಯಾರಾದರೂ..? ಅವಳೇನಾದರೂ ಹೇಳಿದ್ದಳಾ..? ಖಂಡಿತ ಇವರಾರೂ ಅಲ್ಲ ಎಂದುಕೊಂಡಿದ್ದೇನೆ. ನೀನು ಆತ್ಮಹತ್ಯೆ ಮಾಡಿಕೊಂಡೆ ಅಂದ ತಕ್ಷಣ ನನ್ನ ಮನಸ್ಸು ಕೇಳಿತ್ತು. ಯಾಕೆ ನಮ್ಮ ನಡುವೆ ದ್ವೇಶ ಹುಟ್ಟಿತು..? ಯಾರು ಕಾರಣರು ನಮ್ಮ ನಡುವಿನ ದ್ವೇಶಕ್ಕೆ ಅಂತ.. ಈಗಲಾದರೂ ಹೇಳು ದೋಸ್ತಾ..' ಗಣಿಯ ಬಳಿ ಅಂಗಲಾಚಿದೆ.
                 `ಬೇಡ ವಿನು.. ಕೆಲವು ಪ್ರಶ್ನೆಗಳಿಗೆ ಉತ್ತರವಿದ್ದರೂ ಅದನ್ನು ಹೇಳು ಸಾಧ್ಯವಾಗೋದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಇರಲಿ. ಅವಕ್ಕೆ ಉತ್ತರ ಕೇಳುವ ಪ್ರಯತ್ನ ಮಾಡಲೇಬಾರದು. ಸಿಗುವ ಉತ್ತರಗಳು ಮನಸ್ಸನ್ನು ಒಡೆಯುತ್ತವೆ ಹೃದಯಗಳಿಗೆ ಗಾಯ ಮಾಡುತ್ತವೆ.. ನಿಜಕ್ಕೂ ನೀನು ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿದೆ. ಆದರೆ ನಾನು ಹೇಳಲಾರೆ.. ನಾನು ಆತ್ಮಹತ್ಯೆ ಮಾಡಿಕೊಂಡು ತ್ರಿಶಂಕು ಸ್ವರ್ಗದಲ್ಲಿ ನರಳುತ್ತಿದ್ದೇನೆ. ನೀವು ಬದುಕುತ್ತಿರುವವರು. ಚನ್ನಾಗಿ ಬದುಕಿ. ನಾನು ಹೇಳುವ ಉತ್ತರ ಬದುಕಿನಲ್ಲಿ ಖುಷಿಯಾಗಿರುವ ನಿಮ್ಮ ಮನಸ್ಸನ್ನು ಒಡೆಯಬಾರದಲ್ವಾ.. ನನ್ನ ಬದುಕು ಹಾಳಾಗಿದೆ ನಿಜ.. ಬದುಕಿರುವ ನಿಮ್ಮ ಬದುಕು ಚನ್ನಾಗಿರಲಿ ದೋಸ್ತಾ..' ಎಂದು ಹೇಳಿದ ಗಣಿ ನಾನು ಮತ್ತೆ ಮಾತನಾಡುವುದರೊಳಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದ. ಮತ್ತೊಮ್ಮೆ ಆತನನ್ನು ಪ್ರಶ್ನಿಸುವುದರೊಳಗಾಗಿ `ಬಾಯ್..' ಎಂದವನೇ ನನ್ನ ಮಾತು ಕೇಳುವುದರೊಳಗೆ ಮಾಯವಾಗಿದ್ದ.

**
(ಮುಗಿಯಿತು)
**
(ಈ ಖಂಡಿತ ಯಾರಿಗೂ ಸಂಬಂಧಿಸಿದ್ದಲ್ಲ.. ನಮ್ಮ ನಡುವೆ ನಡೆದ ಕೆಲವು ಘಟನೆಗಳು ಈ ಕತೆಗೆ ಸ್ಪೂರ್ತಿ.. ಯಾರಾದರೂ ಈ ಕಥೆಯನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ..)

Saturday, February 15, 2014

ನೀತಿ

ಅರಳಬೇಕು ಮನದಲ್ಲಿ ಪ್ರೀತಿ
ಹೃದಯದಲಿ ಒಲವು |
ತುಂಬಬೇಕು ಕಣ್ಣಿನಲಿ ಕರುಣೆ
ಮನದಲಿ ಸಹನೆ ||

ಚಿಗುರಬೇಕು ಜೀವದಲಿ ಉಸಿರು
ಬರಡಿನಲಿ ಹಸಿರು |
ತೊಡೆಯಬೇಕು ಎದೆಯಲ್ಲಿ ಕ್ರೌರ್ಯ
ತುಂಬಿರಲಿ ಧೈರ್ಯ ||

ಬೆಳಗಬೇಕು ಮನೆಯಲ್ಲಿ ದೀಪ
ನೂರೊಂದು ರೂಪ |
ಹುಡುಕಬೇಕು ಹೊಸತೊಂದು ಶಕ್ತಿ
ಜೀವನದ ಮುಕ್ತಿ ||

ಬರೆಯಬೇಕು ಹಲವೆಂಟು ಸಾಲು
ಕವನದ ಸೊಲ್ಲು |
ಹೆಚ್ಚಬೇಕು ರಾಷ್ಟ್ರದೆಡೆ ಪ್ರೀತಿ
ಒಗ್ಗಟ್ಟೇ ಶಕ್ತಿ ||


**
(ಈ ಕವಿತೆಯನ್ನು ಬರೆದಿದ್ದು 14-11-2005ರಂದು ದಂಟಕಲ್ಲಿನಲ್ಲಿ)

Friday, February 14, 2014

ಮಳೆಗಾಲದ ಮಡಿಲಿನಿಂದ (ಪ್ರೇಮಪತ್ರ-11)

ಪ್ರೀತಿಯ ಪ್ರೀತಿ
             ನಿಂಗೊತ್ತಲ್ಲ.. ಮಳೆ, ಮಳೆಯ ಬೀಳುವಿಕೆ, ಅದರ ರೌದ್ರತೆ, ಜಿಟಿ ಜಿಟಿ, ಸ್ನಿಗ್ಧತೆ. ಆ ವರ್ಷಧಾರೆಯಲ್ಲಿ ಒದ್ದೆಯಾಗಿ, ಆಡಿ, ಕುಣಿದು, ನಲಿದಿದ್ದನ್ನು ಮರೆತಿಲ್ಲ ತಾನೆ. ಮರೆತರೆ ಮತ್ತೊಮ್ಮೆ ನೆನಪು ಮಾಡಿಕೋ..
             ಈ ವರ್ಷವಂತೂ ಭರಪೂರ ಮಳೆಯಾಗಿದೆ. ಆರಂಭದಲ್ಲಿ ಮಳೆಗಾಲ ಇಲ್ಲ ಎಂದುಕೊಂಡವರು ಹಲವರಿದ್ದರು. ಆದರೆ ಶುರುವಾದ ಮಳೆ ನಿಲ್ಲಲೇ ಇಲ್ಲ. ಮುರು ತಿಂಗಳು ಭರ್ಜರಿ ಸುರಿಯಿತು. ಈ ವರ್ಷದ ಮಳೆಗಾಲ ನನಗೆ ಖಂಡಿತವಾಗಿಯೂ ಬಾಲ್ಯದಲ್ಲಿ ಬೀಳುತ್ತಿದ್ದ ಅಬ್ಬರದ ಮಳೆಗಾಲವನ್ನು ನೆನಪು ಮಾಡಿಕೊಟ್ಟಿತು. ನಿನಗೆ ನೆನಪಿರಬಹುದು. ಕಳೆದ ೊಂದೆರಡು ಮಳೆಗಾಲ. ಪ್ರಾರಂಭದಲ್ಲಿ ಗುಡುಗು, ಮಿಂಚು, ಸಿಡಿಲುಗಳ ಜೊತೆಗೆ ಚಿತ್ತಾಕರ್ಷಕ ಕೋಲ್ಮಿಂಚಿನ ಸಮ್ಮುಖದಲ್ಲಿ ಮಳೆರಾಯ ಬರುತ್ತಿದ್ದ. ಮದುವೆಯ ದಿಬ್ಬಣ ಗರ್ನಾಲು, ಕಜನಿ, ಆಟಂಬಾಂಬುಗಳ ಜೊತೆಯಲ್ಲಿ ಬರುವಂತೆ. ಆಗ ನಾವೆಲ್ಲರೂ ಅತ್ಯುತ್ಸಾಹ ಆನಂದದಿಂದ
`ಮಳೆ ಬಂತೋ ಮಳೆರಾಯ..
ಕೊಡೆ ಸೂಡಸೋ ಸುಬ್ರಾಯ..'
ಎಂದು ಕೂಗುತ್ತಾ ಮಳೆರಾಯನ ಆಗಮನವನ್ನು ಎದುರುಗೊಳ್ಳುತ್ತಿದ್ದುದನ್ನು ನೀನು ಮರೆತಿಲ್ಲ ಎಂದುಕೊಳ್ಳುತ್ತೇನೆ. ಆದರೆ ವಿಚಿತ್ರ ನೋಡು ಈ ಸಾರಿಯ ಮಳೆಗಾಲ ಹಾಗೆ ಬರಲೇ ಇಲ್ಲ. ಸದ್ದಿಲ್ಲದೇ, ಯಾವುದೇ ಆವಾಜು ಮಾಡದೇ ಬಂದ. ಆದರೆ ಬಂದ ಮಳೆರಾಯ ಸಾಕಷ್ಟು ಹಾವಳಿಯನ್ನು ಮಾಡಿದ್ದು ಮಾತ್ರ ಖರೆ ಹೌದು. ವೀಕ್ಲಿ ರಜಾ ಕೊಡು ಮಾರಾಯಾ.. ಎಂದರೂ ಮಳೆರಾಯ ಕೇಳಿರಲೇ ಇಲ್ಲ.
                 ಪ್ರತಿವರ್ಷ ಏನು ಅಂದ್ರೆ, ಮಳೆಗಾಲ ಪ್ರಾರಂಭವಾಗಿ ಒಂದು ವಾರದ ಒಳಗೆ ನಮ್ಮೂರ ಬಳಿ ಹರಿಯುವ ಅಘನಾಶಿನಿ ನದಿ ರೌದ್ರಾಕಾರ ತಾಳಿ ಮೈದುಂಬಿ, ಉಕ್ಕೇರಿ ಅಕ್ಕಪಕ್ಕದ ತೋಟ, ಗದ್ದೆಗಳನ್ನೆಲ್ಲಾ ಆಕ್ರಮಿಸಿ ಬಿಡುತ್ತಿತ್ತು. ಅದಕ್ಕಿಂತಲೂ ಮುಖ್ಯವಾಗಿ ಬೇಸಿಗೆ ಬಂದಾಗ ನಮ್ಮೂರಲ್ಲಿ ಅಡಿಕೆ ಮುಂಡಿ, ಹಗರು ದಬ್ಬೆ (ಅಡಿಕೆ ದಬ್ಬೆ)ಗಳಿಂದ ಸಂಕ ಮಾಡಿ ಹಾಕುತ್ತಾರೆ. ಅದನ್ನು ನದಿ ತೇಲಿಸಿಕೊಂಡು ಹೋಗುತ್ತಿತ್ತು. ಇದು ಪ್ರತಿ ವರ್ಷದ ವಾಡಿಕೆ. ಆದರೆ ಈ ವರ್ಷದ ಮಳೆ ಒಂದೆರಡು ದಿನಗಳಲ್ಲಿಯೇ ಕಾಲುಸಂಕವನ್ನು ಕೊಚ್ಚಿಕೊಮಡು ಹೋಯಿತು. ಅಬ್ಬಾ ಮಳೆಯೇ ಎಂದುಕೊಂಡಿದ್ದೆ.

                          ಅದು ಹೋಗಲಿ ಬಿಡು.. ಈ ಮಳೆರಾಯ ಅಡಿಕೆ ಬೆಳೆಗಾರನ ಮೇಲೆ ಮುನಿದುಕೊಳ್ಳುವುದು ಜಾಸ್ತಿ ನೋಡು. ಕಳೆದ ಒಂದೆರಡು ವರ್ಷ ಅನಿಯಮಿತವಾಗಿ ಮಳೆ ಸುರಿದ ಪರಿಣಾಮ ಅಡಿಕೆಗೆ ಕೊಳೆ ಬಂದಿತ್ತು. ಆದರೆ ಈ ವರ್ಷ ಎಡಬಿಡದೇ ಮಳೆ ಸುರಿದ ಕಾರಣ ಕೊಳೆ ರೋಗದ ಜೊತೆಗೆ ಸುಳಿ ಕೊಳೆಯುವ ರೋಗವೂ ಕಾಡಿ ಮರಗಳೆಲ್ಲ ತಲೆಗಳಚಿಕೊಂಡು ಉದುರಲಾರಂಭಿಸಿವೆ. ಅಡಿಕೆ ಬೆಳೆಯ ಮೂಲ ಹಿಂಗಾರ ಕೊಳೆತುಹೋದ ಕಾರಣ ಮುಂದಿನ ಫಸಲು ಹೇಗೋ ಏನೋ ಎನ್ನುವ ಚಿಂತೆಯಲ್ಲಿ ಅಡಿಕೆ ಬೆಳೆಗಾರನಿದ್ದಾನೆ. ಇದು ಹಾಗಿರಲಿ, ಮಳೆಯ ಅಬ್ಬರ ಎಲ್ಲ ಕಡೆಯೂ ಇತ್ತೆಂದು ಹೇಳಲಿಕ್ಕೆ ಆಗುವುದಿಲ್ಲ ನೋಡು. ನಮ್ಮಲ್ಲಿ ಈ ರೀತಿಯ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಬಯಲುಸೀಮೆಯಲ್ಲೂ ಅಬ್ಬರಿಸಿದ ಎಂದರೆ ತಪ್ಪಾಗುತ್ತದೆ. ಬಯಲನಾಡಿನಲ್ಲಿ ಆತನ ಪತ್ತೆಯೇ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ನೀರಿಗೆ ತತ್ವಾರ ಎನ್ನುವಂತಹ ಪಾಡು ಎದುರಾಗಿದೆ. ಈ ಮಳೆಗಾಲದಲ್ಲಿಯೂ ಆತ ಓಡುವ ಮೋಡಗಳ ಬಳಿ
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ...
 ಎಂದು ಆರ್ತನಾಗಿ ಬೇಡುತ್ತಿದ್ದಾನೆ. ಆತನಿಗೆ ಒಂಚೂರಾದ್ರೂ ಕರುಣೆ ಬೇಕಿತ್ತಲ್ವಾ?
                            ಹೀಗಿದ್ರೂ ಮಳೆರಾಯನನ್ನು ಕಂಡ್ರೆ ನನ್ನ, ನಿನ್ನಂತವರಿಗೆ ಬಲು ಇಷ್ಟ. ಯಾಕಂದ್ರೆ ಮಳೆ ಬೀಳುವಾಗ, ತನ್ನ ಆರ್ಭಟ ತೋರಿಸುತ್ತಿರುವಾಗ ಮನೆಯಲ್ಲಿ ಹಾಕುವ ಹೊಡ್ಸಲಿನಲ್ಲಿ, ಸಂಗ್ರಹಿಸಿದ ಗೇರು ಬೀಜ, ಮಾಡಿಟ್ಟ ಹಲಸಿನ ಹಪ್ಪಳವನ್ನು ಸುಟ್ಟು ಅದನ್ನು ತಿನ್ನುತ್ತಾ ಯಾವುದಾದ್ರೂ ಪುಸ್ತಕ ಲೋಕದಲ್ಲಿ ವಿಹಾರ ಮಾಡುವುದೋ ಅಥವಾ ನಮಗಿಷ್ಟವಾದ ಹಾಡುಗಳನ್ನು ಮೊಬೈಲಿನಲ್ಲಿ ತುರುಕಿಕೊಂಡು ಕಿವಿಗೆ ಇಯರ್ ಪೋನ್ ಹಚ್ಚಿಕೊಂಡು ಕೇಳುವುದೋ ಎಷ್ಟೆಲ್ಲ ಖುಷಿ ಕೊಡುತ್ತವೆ ಅಲ್ಲವಾ..? ಅದರಲ್ಲೂ ಸಂಜೆ ನಾಲ್ಕೈದು ಗಂಟೆಯಾಗಿರಬೇಕು, ಹೊರಹೋಗಲು ಆಗದಂತೆ ಜಿಟಿ ಜಿಟಿ ಮಳೆ ಸುರಿಯುತ್ತಿರಬೇಕು, ಸುತ್ತಮುತ್ತಲೂ ಮಳೆ ಜಿರಲೆಗಳು ವಾಟರ್ ವಾಟರ್ ಎಂದು ಅರಚುತ್ತಿರಬೇಕು.. ಆಹಾ.. ಓಹೋ.. ಏನು ಆನಂದವೋ..
ಒಂದು ಚಣದ ಸಂಜೆ ಮಳೆ
ಬೀಳಲಿಂದು ತೋಯಲಿಳೆ
ಏನು ಆನಂದವೋ ಏನು ಆನಂದವೋ..||

ಆ ಸಂದರ್ಭಗಳಲ್ಲಿಯೇ ಎಂತಹ ವ್ಯಕ್ತಿಯಾದರೂ ಆಗ ಕವಿಯಾಗುತ್ತಾನೆ. ಕವನ ಕಟ್ಟುತ್ತಾನೆ. ತಾನು ಕೇಳಿದ ಭ್ರಮಾಭರಿತ ಸುಂದರ ಹಾಡನ್ನು ಗುನುಗುತ್ತಾನೆ. ನಮ್ಮನ್ನು ಹೀಗೆ ಮಾಡಿಸಬಲ್ಲ ಸುಂದರ ಶಕ್ತಿ ಮಳೆಗಿದೆ. ಹನಿಗಿದೆ.
                               ನಿಂಗೆ ನೆನಪಿರಬಹುದು. ನಾನು, ನೀನು ಶಾಲೆಗೆ ಹೋಗುವಾಗ ಭರ್ಜರಿ ಮಳೆ ಬಂತೆಂದರೆ ಶಾಲೆಗೆ ರಜಾ ಕೊಡುತ್ತಿದ್ದರು. ಅದನ್ನೆಲ್ಲಾ ಮರೆಯಲಾದೀತೆ.? ನಾನಂತೂ ನನ್ನೂರಿನಿಂದ 2-3 ಕಿ.ಮಿ ದೂರವಿರುವ ಕೋಡಶಿಂಗೆ ಶಾಲೆಗೆ ಹೋಗುವಾಗ ದಾರಿಯಲ್ಲೆಲ್ಲಾ ಕಾಣುವ ಒರತೆಗಳನ್ನು ನೋಡಿ ಅದಕ್ಕೆ ಬಾಯಿ ಹಾಕಿ ನೀರನ್ನು ತುಂಬಿಕೊಂಡು ಪುರ್ರೆಂದು ತೂರುತ್ತಾ ಹೋಗುತ್ತಿದ್ದೆ. ಅದು ನಿನಗೆ ಮರೆತಿಲ್ಲವಲ್ಲ. ಇದರ ಜೊತೆಗೆ ಮಳೆಗಾಲದ ಸ್ಪೆಷಲ್ ಎನ್ನಿಸಿರುವ `ಬಿಕ್ಕೆ'ಯ ಹಣ್ಣನ್ನು ಹೇಗೆ ತಿನ್ನುತ್ತಿದ್ದೆವಲ್ಲ. ಇಂತಹ ಮಳೆಗಾಲ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳು..
                                   ಈ ಪತ್ರವನ್ನು ಬರೆಯುತ್ತಿರುವ ಸಂದರ್ಭದಲ್ಲೇ ನಮ್ಮೂರಿನ ಗುಡ್ಡದ ಮೂಲೆಯಲ್ಲೆಲ್ಲೋ ಕುಳಿತು ತನ್ನ ಮಂಜುಳ ದಣಿಯಿಂದ `ಯಾಂಹೋ...' ಎಂದು ದನಿಗರೆಯುತ್ತಿರುವ ನವಿಲಿನ ಕೂಗು ಕಿವಿಯನ್ನು ತಣಿಸುತ್ತಿದೆ. ಮಳೆಗಾಲವನ್ನು ಕೂಗಿ ಕರೆಯುವ ಮಯೂರಗಳು ಮಾಡುವ ನರ್ತನ ನೋಡಲಂತೂ ಕಣ್ಣೇ ಸಾಲದು ಎನ್ನಿಸಿಬಿಟ್ಟಿದೆ.
ಬೇಸಿಗೆಯೆಂಬ ಬರಡನು ಓಡಿಸಿ
ಭೂಮಿಗೆ ತಂಪಿನ ಧಾರೆಯ ಸುರಿಸಿ
ರೈತರ ಮನವನು ತಣಿಯಿಸಿ ಹರ್ಷಿಸಿ
ಇಳಿವುದು ಭೂಮಿಗೆ ನೀರ ಮಳೆ ||
                              ನಿಜ.. ಬರಡು ಬೇಸಿಗೆಯ ಗರ್ಭದೊಳಗೆ ಹೂತು ಹೋಗಿರುವ ಹಸಿರು ಕಾಂತಿಯ ತೃಣವ ಹುಡುಕಿ ಅದಕ್ಕೆ ತಂಪಿನ ಜೀವಧಾರೆಯ ಸುರಿಸಿ ಅದರಿಂದ ಜೀವಜನನಕ್ಕೆ ಕಾರಣವಾಗುವ ಮಳೆಯೇ ನೀನು ರಿಯಲೀ ಗ್ರೇಟ್..|
                                ಇಂತಹ ಮಳೆಯ ಮಧ್ಯದಲ್ಲೇ ನಡೆಯುವ, ಬರುವ ಆರಿದ್ರಾ ಮಳೆಯ ಹಬ್ಬ, ನಾಗರ ಪಂಚಮಿ, ಚೌತಿ ಹಬ್ಬ, ಕೊಡೆ ಅಮಾವಾಸ್ಯೆ, ನೂಲ ಹುಣ್ಣೀಮೆ, ಕೃಷ್ಣಾಷ್ಟಮಿ ಜೊತೆಗೆ ಮಳೆಗಾಲದ ಅಂಚಿನಲ್ಲಿ ಬರುವ ನವರಾತ್ರಿ ಮುಂತಾದ ಹಬ್ಬಗಳು ಮಳೆಯ ಕಾರಣದಿಂದಲೇ ರಂಗೇರುತ್ತವೆ.
                                ಇಂತಹ ಮಳೆಯೇ ನಮ್ಮ ಜೀವದಾತವಾದ ಭತ್ತ, ರಾಗಿ, ಜೋಳ, ಗೋಧಿ ಮುಂತಾದವುಗಳಿಗೆ, ಅವುಗಳ ಬೆಳೆಗಳಿಗೆ, ಬೆಳವಣಿಗೆಗಳಿಗೆ, ಬದುಕಿಗೆ ಕಾರಣವಾಗುತ್ತವೆ. ಇಷ್ಟೆಲ್ಲ ಮಾಡುವ ಮಳೆ ಹವ್ಯಕರ ಹಣದ ಥೈಲಿಯಾದ ಅಡಿಕೆಗೂ ಕೊಳೆ ರೋಗವನ್ನು ತಂದುಬಿಡುತ್ತದೆ. ಜೊತೆಗೆ ಜಿಗಣೆಗಳು, ಉಂಬಳಗಳು ವರ್ಷವೊಂದರ ದೀರ್ಘ ನಿದ್ರೆಗೆ ಶರಣು ಹೊಡೆದು, ಹನಿಮಳೆಯಿಂದ ಜೀವತಳೆದು ಪ್ರಾಣಿಗಳ ರಕ್ತವನ್ನು ಹೀರಲು ಕಾತರಿಸಿ ಕಾಯುತ್ತವೆ. ಈ ಮಳೆಯ ಮಧ್ಯದಲ್ಲಿಯೇ ಅಮ್ಮನಿಗೆ ಸೌತೆಕಾಯಿ ಸಸಿಯನ್ನು, ಅಂಗೀಕಸೆ ಬೀಜವನ್ನೂ `ಪೋಲಿ ಜಾನಿ'ಯ ಬಳಿ ಎರವಲು ಪಡೆದು ನೆಟ್ಟಾಗಿರುತ್ತದೆ. ಅಪ್ಪನೂ `ಲೇ ಇವ್ಳೇ.. ಇವತ್ತು ಕಳಲೆ ಹುಳಿ ಮಾಡೆ..' ಎಂದು ಹೇಳಿ ಕಳಲೆಯನ್ನು ತಂದಾಗಿರುತ್ತದೆ. ತಂಗಿಗೂ ಅಷ್ಟೆ ಅದ್ಯಾರದ್ದೋ ಮನೆಯಲ್ಲಿ ಕಂಡ ಹೊಸ ಜಾತಿಯ ಜರ್ಬರಾ ಹೂವಿನ ಗಿಡವನ್ನೋ, ಸೋಣೆಯ ಹೂವಿನ ಸಸಿಯನ್ನೋ, ಡೇರೆ ಹಿಳ್ಳನ್ನೋ ನೆಡುವ ನೆಪದಲ್ಲಿ ಮಣ್ಣು ಕಲೆಯಲು ಆರಂಭಿಸಿಯಾಗಿರುತ್ತದೆ. ಮಳೆ ಎಲ್ಲರ ಮನಸ್ಸನ್ನು ಹಸನು ಮಾಡುತ್ತದೆ ಎನ್ನುವುದು ಇದಕ್ಕೇ ಅಲ್ಲವಾ ಹೇಳೋದು..?
                                ಇಷ್ಟು ಸಾಕಲ್ಲವೇ ಗೆಳತಿ ಮಳೆಗಾಲದ ಸವಿಯನ್ನು ಸವಿಯಲಿಕ್ಕೆ. ನೀನು ಓದುವ ಹೊತ್ತಿಗೆ ಖಂಡಿತ ಮಳೆ ತನ್ನ ಇನ್ನೊಂದು ಆಯಾಮಕ್ಕೆ ಹೋಗಿರುತ್ತದೆ. ಸವಿ ನೆನಪಿನಿಂದ ಬರೆದ ಪತ್ರವನ್ನು ಸವಿ ನೆನಪಿನಿಂದಲೇ ಓದಿದಂತೆ ಮಳೆಗಾಲದ ಮಡಿಲಿನಿಂದ ಬರೆಯುವ ಪತ್ರವನ್ನು ಅಷ್ಟೇ ಸಂತಸದಿಂದ ಓದು. ಆ ಮಳೆಗಾಲದ ಭಾವನೆಗಳು ನಿನ್ನ ಬೆನ್ನೇರಿ ಬಂದರೆ ಪ್ರೀತಿಯ ಓಲೆ ಬರೆದಿದ್ದಕ್ಕೂ ಸಾರ್ಥಕ. ಆದರೂ ಹೇಳಬೇಕು ಕಣೆ ಗೆಳತಿ ಇಂತಹ ಮಳೆ ಸುರಿಯುವ ಮಲೆನಾಡನ್ನೂ, ನನ್ನನ್ನೂ ಬಿಟ್ಟು ನೀನು ಮಳೆಯ ಲವಲೇಶವೂ ಇಲ್ಲದ ಜೋರ್ಡಾನ್ ಎಂಬ ದೇಶಕ್ಕೆ ಹೋಗಬಾರದಿತ್ತು ನೀನು.. ಯಾಕೋ ಮಳೆ, ಹನಿ, ನಾನು, ನೀನು, ಕೈಹಿಡಿದು ನಡೆದ ಜಾರುವ ರಸ್ತೆ, ಉಕ್ಕೇರಿ ಹರಿಯುವ ನದಿಯ ದಡದಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತದ್ದು, ರಸ್ತೆಯಲ್ಲಿ ಹರಿಯುವ ನೀರನ್ನು ಪಚಾ ಪಚಾ ಹಾರಿಸಿದ್ದು, ಊಹೂಂ ಇವೆಲ್ಲವನ್ನೂ ನೀನು ಮಿಸ್ ಮಾಡ್ಕೋತಿದ್ದೀಯಾ ಅಂತ ನನಗೆ ಖಂಡಿತ ಗೊತ್ತಿದೆ. ಭಾವನೆಗಳು ಬಿಸಿಲಿಗೆ ಒಣಗಿ ಹೋಗಿರುವ ಆ ದೇಶದಿಂದ ಯಾವಾಗ ಮರಳುತ್ತೀಯೋ ಎಂದು ನಾನು ಕಾಯುತ್ತಿದ್ದೇನೆ.
                                  ಎಂತಾ ವಿಚಿತ್ರ ನೋಡು.. ಯಾವಾಗಲೋ ಬರೆದ ಈ ಪತ್ರಕ್ಕೆ ಈಗ ಈಮೇಲ್  ಸೌಭಾಗ್ಯವೂ ಸಿಕ್ಕಿದೆ. ಅಕ್ಷರಗಳು ಎಷ್ಟು ಅದೃಷ್ಟ ಮಾಡಿರುತ್ತವೆ ಮಾರಾಯ್ತಿ. ಹೆಚ್ಚಿನ ಸಮಯ ಅಕ್ಷರಕ್ಕೆ ಒಳ್ಳೆಯದೇ ಭಾಗ್ಯ ದೊರಕುತ್ತದೆ. ನಾನೇ ಬರೆದ ಅಕ್ಷರಗಳು ನಿನ್ನ ಉಸಿರು ಸೋಕುವಷ್ಟು ಹತ್ತಿರಕ್ಕೆ ಬಂದು ನಿಲ್ಲುತ್ತವೆ. ನನಗೆ ಅಕ್ಷರದ ಮೇಲೆಯೇ ಹೊಟ್ಟೆಕಿಚ್ಚಾಗುತ್ತಿದೆ ಗೆಳತಿ.
                                   ಉಫ್.. ಸಾಕು.. ಸಿಕ್ಕಾಪಟ್ಟೆ ಹೆಚ್ಚಾಯಿತಲ್ಲ ಬರೆದ ಪತ್ರ.. ಕೊನೆ ಮಾಡುತ್ತೇನೆ.. ನಿನೀರುವ ನಾಡಿನಲ್ಲಿ ಮಳೆಯೇ ಬರುವುದಿಲ್ಲ. ಗ್ರಾಚಾರ ಕೆಟ್ಟು ಎಲ್ಲಾದರೂ ಬರುವ ಮಳೆ ಖಂಡಿತ ಇಷ್ಟು ಖುಷಿಯನ್ನು ಕೊಡುವುದಿಲ್ಲ ಎಂದು ನನಗೆ ಗೊತ್ತಿದೆ. ಈ ಪತ್ರದ ಮೂಲಕವಾದರೂ ಮಳೆಯನ್ನು ಎಂಜಾಯ್ ಮಾಡು.. ನಿನ್ನ ಉತ್ತರಕ್ಕಾಗಿ ನವಿಲಿನಂತೆ ಕಾಯುತ್ತಿರುತ್ತೇನೆ.

ಇಂತಿ ನಿನ್ನೊಲವಿನ
ವಿನು


**
(ಖಂಡಿತ ಈ ಪತ್ರ ಬರೆದಿದ್ದು ಈಗಲ್ಲ. ಮಳೆಗಾಲ ಕಳೆದ ತಿಂಗಳೊಪ್ಪತ್ತಿನಲ್ಲಿ ಬರೆದಿದ್ದು. ಬರೆದು ಹಾಕಲು ಸಮಯ ಸಿಕ್ಕಿರಲಿಲ್ಲ. ಈ ವ್ಯಾಲಂಟೈನ್ಸ್ ಡೇ ಗೆ ಏನಾದರೂ ಬರೆಯೋಣ ಅಂದುಕೊಂಡವನಿಗೆ ಹಳೆಯ ಬರಹಗಳ ಗುಚ್ಛ ಸಿಕ್ಕಿತು. ಅದರಲ್ಲೊಂದು ಈ ಪ್ರೇಮಪತ್ರ. ಅದು ನಿಮ್ಮ ಮುಂದಿದೆ. ಬೇಸಿಗೆಯಲ್ಲಿ ಮಳೆಗಾಲವನ್ನು ಒಂಚೂರು ಮೆಲುಕು ಹಾಕೋಣ)
(ಈ ಪ್ರೇಮಪತ್ರ ಪ್ರಕಟಿಸಿ ಕದಂಬವಾಣಿಯ ಅಂದಿನ ಸಂಪಾದಕ ದಿ.ಸುಬ್ಬಣ್ಣಂಗೆ ಧನ್ಯವಾದಗಳನ್ನು ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಅಂದಹಾಗೆ ಇದನ್ನು ಬರೆದಿದ್ದು ಆಗಸ್ಟ್ 2006ರಲ್ಲಿ)

Thursday, February 13, 2014

ನಮ್ಮೂರ ಬಸ್ಸು

(ಚಿತ್ರ ಕೃಪೆ : ಪ್ರವೀಣ ನಾರಾಯಣ ಭಟ್ಟ ದೇವತೆಮನೆ)
ನಮ್ಮುರ ಬಸ್ಸಿನಲಿ
ಏನುಂಟು ಏನಿಲ್ಲ
ಬರೆಯ ಹೋದರದು
ಒಂದು ಕಥನ ಕಾವ್ಯ ||

ಬಸ್ಸಿನೊಳು ಜನರಿಲ್ಲ
ಸೀಟೆಲ್ಲ ಖಾಲಿ
ಆಗಾಗ ಆಗುವುದು
ಪಂಚರ್ರು ಗಾಲಿ  ||

ಚಾಲಕನ ಸಾಹಸದಿ
ಬೀಳುವುದು ಗೇರು
ಎಷ್ಟು ತಳ್ಳಿದರೂ ಕೂಡ
ಹತ್ತುವುದಿಲ್ಲ ಏರು ||

ಮಳೆಗಾಲ ಬಂದರೆ
ಒಳಗೆಲ್ಲ ನೀರು
ಕೂಗಾಟ, ಚೀರಾಟ
ರಶ್ಶಿಲ್ಲ ಜೋರು ||

ನಮ್ಮೂರ ಬಸ್ಸಿನಲ್ಲಿ
ಡ್ರೈವರ್ರೇ ಹೀರೋ
ಗಾಡಿ ಓಡಿಸುವ ವೇಗ
ಮಾತ್ರ ಬರೀ ಝೀರೋ ||

ನಮ್ಮೂರ ರಸ್ತೆಯಲಿ
ಹೊಂಡಗಳು ಸೋಂಪು
ಹಾಗಾಗಿ ಬಸ್ಸು
ಆಗುವುದು ಜಂಪು ||

ಬಸ್ಸದು ಸಾಗಿರಲು
ನಡುಗುವುದು ಬಾಡಿ
ಆದರೂ ಜೋರಾಗಿ
ಓಡುವುದು ನೋಡಿ ||

ಬಸ್ಸಲ್ಲಿ ಒಡೆದಿದೆ
ಕಿಟಕಿಯ ಗ್ಲಾಸು
ಅದು ತಿಳಿಸುವುದು
ಸಾರಿಗೆಯ ಲಾಸು ||

ಈ ರೀತಿ ಉಂಟಯ್ಯಾ
ನಮ್ಮೂರ ಬಸ್ಸು
ಬಸ್ಸಿನ ತುಂಬೆಲ್ಲ
ಅಪಘಾತ ಕೇಸು ||

(ಈ ಕವಿತೆಯನ್ನು ಬರೆದಿದ್ದು 7.12.2006ರಂದು ದಂಟಕಲ್ಲಿನಿಂದ ಶಿರಸಿಗೆ ಹೋಗುವಾಗ..)
(ಶಿರಸಿ-ಅಡಕಳ್ಳಿ-ಗೋಳಿಕಟ್ಟಾ ಎಂಬ ದಿನಕ್ಕೆರಡು ಬಾರಿ ಬಂದು ಹೋಗುವ ಬಸ್ಸಿನ ಖಾಯಂ ಪಯಣಿಗ ಒಂದುಕಾಲದಲ್ಲಿ ನಾನಾಗಿದ್ದೆ. ಬಸ್ಸಿನಲ್ಲಿ ನಾನು-ಡ್ರೈವರ್-ಕಂಡಕ್ಟರ್ ಸೇರಿ 10 ತಲೆಗಳನ್ನು ಕಷ್ಟಪಟ್ಟು ಎಣಿಸಬೇಕಿತ್ತು. ಖಾಲಿ ಖಾಲಿ ಹೊಡೆಯುತ್ತಿದ್ದ ಈ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ನನಗೆ ಈ ಕವಿತೆ ಹೊಳೆದಿದ್ದು.. ಬಸ್ಸು ಸಾಗಿದಂತೆಲ್ಲ ಗೀಚುತ್ತ ಹೋಗಿದ್ದೆ.. ಅದೇ ಈ ಕವಿತೆ.. ನಮ್ಮುರ ರಸ್ತೆ, ಬಸ್ಸಿನ ಪರಿಸ್ಥಿತಿಯನ್ನು ಈ ಕವಿತೆ ತಿಳಿಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡುತ್ತದೆ.. ಒಟ್ಟಿನಲ್ಲಿ ಅಡ್ಕಳ್ಳಿ ಬಸ್ಸಿಗೆ ಝೈ ಎನ್ನಿ.)

Wednesday, February 12, 2014

ಮೂಡು ಹಣತೆ


ಮೂಡು ದಿಕ್ಕಲಿ ಹಣತೆ ಬೆಳಗಿದೆ
ತಿಮಿರ ದೂರಕೆ ಓಡಿದೆ |
ಎದೆಯ ಬೃಂದಾವನದ ನಡುವಲಿ
ಹೊಸತು ಹೊನಲದು ಮೂಡಿದೆ ||

ಬೆಳಕ ಬಳುಕಿನ ರಶ್ಮಿಯಿಂದಲಿ
ಭುವಿಯು ನಗುತಲಿ ನಿಂತಿದೆ |
ಹಸಿರು, ಉಸಿರಿಗೆ ಮೆರಗು ನೀಡುತ
ಹೊಸತು ಲೋಕವ ಕಟ್ಟಿದೆ ||

ಮೂಡು ಹಣತೆಯು ಜಡವ ಕಳೆದಿದೆ
ಭ್ರಮೆಯು ದೂರಕೆ ಓಡಿದೆ |
ಬಯಕೆಯಾ ಹೊಸ ಬಿಸುಪಿನಂಚಲಿ
ಪ್ರೀತಿ ಸಸಿಯು ಮೊಳೆತಿದೆ ||

ಗಗನದ ಆ ಪಟಲದಂಚಲಿ
ಗೌರವರ್ಣವು ಮೆರೆದಿದೆ |
ಬಣ್ಣ ಬೆಳಗಿದೆ, ತಿಮಿರ ಕಳೆದಿದೆ
ಬೆಳಕು ಎಲ್ಲೆಡೆ ಸುರಿದಿದೆ ||

**
(ಈ ಕವಿತೆಯನ್ನು ಬರೆದಿದ್ದು ಶಿರಸಿಯಲ್ಲಿ 1.01.2008ರಂದು)
(ಸೂರ್ಯೋದಯದ ಕುರಿತು ಒಂದು ರಿದಮಿಕ್ ಕವಿತೆ.. ಈ ಕವಿತೆಗೆ ಸುಪರ್ಣ ಹೆಗಡೆ ಹಾಗೂ ಪೂರ್ಣಿಮಾ ಅವರು ರಾಗವನ್ನು ಹಾಕಿ ಹಾಡಿದ್ದಾರೆ)

Tuesday, February 11, 2014

ಬೆಂಗಾಲಿ ಸುಂದರಿ-7

(ಕಾಂತಾಜಿ ದೇವಾಲಯ, ಬಾಂಗ್ಲಾದೇಶ)
                   ಎದುರಲ್ಲಿ ನಿಂತಿದ್ದಾಕೆಯನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿದ್ದ ವಿನಯಚಂದ್ರ ಸೂರ್ಯನ್ ಧ್ವನಿ ಕೇಳಿ ವಾಸ್ತವಕ್ಕೆ ಬಂದ. ತಕ್ಷಣ `ಏನು..?' ಎಂಬಂತೆ ನೋಡಿದ. ಅದಕ್ಕೆ ಆಕೆ ಹಿಂದಿಯಲ್ಲಿ ಬಾಂಗ್ಲಾದೇಶದ ಪ್ರವಾಸಿ ತಾಣಗಳನ್ನು ಭಾರತ ಕಬ್ಬಡ್ಡಿ ತಂಡಕ್ಕೆ ತೋರಿಸುವ ಹೊಣೆಗಾರಿಕೆಯನ್ನು ತನಗೆ ನೀಡಿದ್ದಾರೆಂದೂ ಎಲ್ಲ ಆಟಗಾರರ ಬಳಿ ವಿಷಯ ತಿಳಿಸಿಯಾಗಿದೆಯೆಂದೂ ಈ ರೂಮೊಂದೆ ಬಾಕಿಯಿತ್ತೆಂದೂ ತಿಳಿಸಿದಳು. ಬೇಗನೆ ಹೊರಡಲು ತಯಾರಾಗಬೇಕೆಂದು ಹೇಳಿದಳು.
                  ತಾನು ಬಂದ ವಿಷಯವನ್ನು ಆಕೆ ಅರಳುಹುರಿದಂತೆ ಪಟಪಟನೆ ಮಾತನಾಡುತ್ತಿದ್ದರೆ ವಿನಯಚಂದ್ರ ಮರುಳನಂತೆ ನೋಡುತ್ತಿದ್ದ. ಅವನಿಗೆ ಹೂಂ ಅನ್ನಲೂ ಮರೆತುಹೋಗಿತ್ತು. ಸೂರ್ಯನ್ ಬಂದು ಏನಿವರ ಹಕ್ಕೀಕತ್ತು ಎಂದು ನೋಡದೇ ಇದ್ದಿದ್ರೆ ವಿನಯಚಂದ್ರ ಎಲ್ಲಿ ಕಳೆದುಹೋಗುತ್ತಿದ್ದನೋ.  ಸೂರ್ಯನ್ ಬಂದವನೆ ವಿನಯಚಂದ್ರನನ್ನು ತಟ್ಟಿ ಎಬ್ಬಿಸಿ `ಏನೂ.. ನೀನು ಕಳೆದುಹೋದ್ಯಾ..?' ಎಂಬಂತೆ ನೋಡಿದ. ವಿನಯಚಂದ್ರ ನೋಡುತ್ತಿದ್ದ ಪರಿಯನ್ನು ವಿಚಿತ್ರವಾಗಿ ಗಮನಿಸುತ್ತಿದ್ದ ಆ ಬೆಂಗಾಲಿ ಹುಡುಗಿಯೂ ಒಮ್ಮೆ ಹಿತವಾಗಿ ನಕ್ಕಿದ್ದಳು. ವಿನಯಚಂದ್ರನಿಗೆ ಅವಳ ಹೆಸರನ್ನು ಕೇಳಿಬಿಡಬೇಕೆನ್ನುವ ತವಕವಿತ್ತು. ಆದರೆ ಕೇಳಲು ಶಬ್ದಗಳು ಹೊರಬರಲೇ ಇಲ್ಲ.
                 ಸೂರ್ಯನ್ ಹುಡುಗಿಯ ಮುಖ ಕಂಡಿದ್ದೇ ತಡ ಪಟಪಟನೆ ತಾನು ಮಾತನಾಡಲು ಆರಂಭಿಸಿದ್ದ. ಆತ ಅವಳ ಬಳಿ ಅದೇನು ಮಾತನಾಡಿದನೋ.. ವಿನಯಚಂದ್ರ ಮಾತ್ರ ಅವಳನ್ನು ನೋಡುವುದರಲ್ಲಿಯೇ ತಲ್ಲೀನನಾಗಿದ್ದ. ಜೀವನದಲ್ಲಿ ಮೊಟ್ಟ ಮೊದಲಬಾರಿಗೆ ವಿನಯಚಂದ್ರನ ಹೃದಯ ಕಳುವಾಗಿತ್ತು. ಮನಸು ತನ್ನನ್ನೇ ತಾನು ಮರೆತು ಹೋಗಿತ್ತು. ಮಾತು ಮೌನವಾಗಿತ್ತು. ಸೂರ್ಯನ್ ನ ಬಳಿಯಾದರೂ ಆಕೆಯ ಹೆಸರನ್ನು ಕೇಳುವಂತೆ ಹೇಳಬೇಕು ಎಂದು ಸನ್ನೆ ಮಾಡಿದ. ಸೂರ್ಯನ್ ಬೇಕಂತಲೆ ಅದನ್ನು ಕಡೆಗಣಿಸಿದ. ವಿನಯಚಂದ್ರನಿಗೆ ಉರಿದುಹೋಯಿತು. ಸೂರ್ಯನ್ ಬಳಿ ಏನೇನೋ ಮಾತನಾಡಿದ ಆಕೆ ವಾಪಸಾದ ತಕ್ಷಣ ವಿನಯಚಂದ್ರ ಸೂರ್ಯನ್ ಮೇಲೆ ಮುಗಿಬಿದ್ದ.
`ಆಕೆಯ ಹೆಸರು ಕೇಳಬೇಕಿತ್ತು ಕಣೋ..' ಎಂದ
`ನಾನು ಕೇಳಿದೆ..' ಎಂದ ಸೂರ್ಯನ್
`ಏನು..?'
`ಹೆಸರುಕಾಳು..'
`ತಮಾಷೆ ಸಾಕು..'
`ಹೋಗೋ.. ಹೋಗೋ..'
`ಹೇಳೋ ಮಾರಾಯಾ...'
`ಏನು ಅವಳ ಮೇಲೆ ಅಷ್ಟೆಲ್ಲ ಆಸಕ್ತಿ..'
`ಏನಿಲ್ಲ.. ಹಾಗೆ ಸುಮ್ಮನೆ... '
`ಇದೆಲ್ಲಾ ಬೇಡ.. ನಮಗೂ ಗೊತ್ತಾಗುತ್ತೆ...'
`ಏನ್ ಗೊತ್ತಾಗುತ್ತೆ..? ಏನ್ ಗೊತ್ತಾಯ್ತು ನಿಂಗೆ..?'
`ಚನ್ನಾಗಿದ್ದಾಳೆ... ಮಾತಾಡಿಸಬೇಕು ಎನ್ನಿಸಿತಲ್ವಾ?.. ಅಂತೂ ನೀನು ಮರುಳಾದೆ ಅನ್ನು..'
`ಹೆ.. ಹಂಗೇನಿಲ್ಲ ಮಾರಾಯಾ... ಯಾಕೋ ಸುಮ್ಮನೆ ಕೇಳೋಣ ಅನ್ನಿಸಿತು..' ವಿನಯಚಂದ್ರ ಮಾತು ಹಾರಿಸಲು ಯತ್ನಿಸಿದ.
`ನಾನು ಅವಳ ಹೆಸರನ್ನು ಕೇಳಿದೆ.. ಬಹಳ ಚನ್ನಾಗಿದೆ ಅವಳ ಹೆಸರು.. ಅವಳಂತೆ..'
`ಏನು ಹೆಸರು..?'
`ಹೇಳೋದಿಲ್ಲ... ಯಾಕೆ ಹೇಳಬೇಕು ನಿಂಗೆ..? ಹೋಗಲೋ...' ಎಂದು ಛೇಡಿಸಿದ.. ಆ ನಂತರ ಎಷ್ಟು ಗೋಗರೆದರೂ ಸೂರ್ಯನ್ ಹೇಳಲಿಲ್ಲ. ಅವನಿಗೂ ವಿನಯಚಂದ್ರನನ್ನು ಆಟವಾಡಿಸಬೇಕು ಎನ್ನಿಸಿರಬೇಕು. ವಿನಯಚಂದ್ರನಿಗೆ ಬೇಜಾರಾದಂತೆನಿಸಿತು. ಇನ್ನು ಸೂರ್ಯನ್ ಬಳಿ ಕೇಳಿ ಉಪಯೋಗವಿಲ್ಲ ಎಂದುಕೊಂಡ. ಮಾತು ಬದಲಿಸಿದ.
                  ಸಂಜೆಯ ವೇಳೆಗೆ ಸೂರ್ಯನ್ ಗೆ ವಿಷಯ ಮರೆತಂತಾಗಿತ್ತಾದರೂ ವಿನಯಚಂದ್ರನ ಮನದಲ್ಲಿ ಬೆಂಗಾಲಿ ಸುಂದರಿ ಕಾಡುತ್ತಲೇ ಇದ್ದಳು. ಏನ್ ಮಾಡ್ತಾ ಇರಬಹುದು ಆಕೆ? ಎಲ್ಲಿ ಇರಬಹುದು? ಮತ್ತೊಮ್ಮೆ ನೋಡಬೇಕಲ್ಲಾ ಎನ್ನಿಸಿತು. ನೋಡಿದಷ್ಟೂ ನೋಡಬೇಕೆನ್ನಿಸುವಂತಿದ್ದಳು ಆಕೆ. ಹೊಟೆಲಿನಲ್ಲಿ ಎಲ್ಲಾದರೂ ಕಾಣಬಹುದೆ ಎಂದು ಅಡ್ಡಾಡಲು ಹೊರಟ. ಇನ್ನೇನು ರೂಮಿನಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಸೂರ್ಯನ್ ಮತ್ತೊಮ್ಮೆ `ಏನೋ.. ಅವಳನ್ನು ನೋಡಲು ಹೊರಟೆಯಾ..? ನಿನಗಿಲ್ಲಿ ಅವಳು ಕಾಣಿಸೋದಿಲ್ಲ..' ಎಂದು ಛೇಡಿಸಿದ. ಮುಂದುವರಿದು `ನಾನು ಬರಲಾ ನಿನ್ಜೊತೆ...' ಎಂದ. ವಿನಯಚಂದ್ರ ಮಾತನಾಡದೆ ಮುನ್ನಡೆದ. ಹುಸಿಮುನಿಸನ್ನೂ ನೋರಿದ.
               ಹೊಟೆಲ್ ಭವ್ಯವಾಗಿತ್ತು. ದೊಡ್ಡದಾಗಿಯೂ ಇತ್ತು. ಹೊಳಪಿನ ಟೈಲ್ಸಿನ ಮೇಲೆ ನಡೆಯುವವನ ಪ್ರತಿಬಿಂಬ ಬೀಳುತ್ತದೆ ಎನ್ನುವಂತಿತ್ತು. ಬಾಂಗ್ಲಾದೇಶ ಬಡ ರಾಷ್ಟ್ರ ಎಂದು ಎಲ್ಲೋ ಓದಿದಂತಿತ್ತು. ಆದರೆ ಈ ಹೊಟೆಲಿನಲ್ಲಿ ಶ್ರೀಮಂತಿಕೆ ಎದ್ದು ಕಾಣಿಸುತ್ತಿದೆ. ಬಡತನದ ಲವಲೇಶವೂ ಇಣುಕುತ್ತಿಲ್ಲವಲ್ಲ ಎಂದುಕೊಂಡ ವಿನಯಚಂದ್ರ. ಹಾಗೆ ಹೊಟೆಲಿನ ಕಂಪೌಂಡಿನ ಬಳಿ ಬಂದ. ಅಲ್ಲೊಂದು ಸ್ವಿಮ್ಮಿಂಗ್ ಫೂಲ್ ಇತ್ತು. ಭಾರತ ತಂಡದ ಒಂದಿಬ್ಬರು ಆಟಗಾರರು ಅಲ್ಲಿ ಈಜಾಟವನ್ನು ನಡೆಸಿದ್ದರು. ಯಾಕೋ ವಿನಯಚಂದ್ರನಿಗೂ ಮನಸ್ಸು ತಡೆಯಲಿಲ್ಲ. ಸೀದಾ ಬಂದವನೆ ನೀರಿಗಿಳಿದ.
                 ತನ್ನೂರಿನ ಫಾಸಲೆಯಲ್ಲಿ ಹರಿದುಹೋಗುವ ನದಿಯಲ್ಲಿ ಈಜು ಕಲಿತಿದ್ದುದು ನೆನಪಾಯಿತು. ಬಾಲ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈಜು ಕಲಿತ ಸಾಹಸವೂ ಅರಿವಿಗೆ ಬಂದಿತು. ಕಾಲು ತಪ್ಪುವಷ್ಟು ಆಳದ ಗುಂಡಿಗೆ ಹೋಗಿ, ಇದ್ದಕ್ಕಿದ್ದಂತೆ ಕಾಲು ಜಾರಿ ನೀರೊಳಗೆ ಕಂತಿ ಒಮ್ಮೆ ನೀರು ಕುಡಿದು ಖು.. ಖು.. ಖು ಅಂತ ಕೆಮ್ಮಿ ಯಡರಾ ಬಡರಾ ಕಾಲು ಬಡಿದು ನೀರಿನಿಂದ ಹೇಗ್ಹೇಗೋ ಎದ್ದು ಬಂದಿದ್ದರ ನೆನಪಾಯಿತು. ಆ ನಂತರ ಅನೇಕ ದಿನಗಳ ಕಾಲ ಈಜೂ ಬೇಡ ನದಿಯೂ ಬೇಡ ಎಂದು ನಮಸ್ಕಾರ ಹಾಕಿದ್ದೂ ನೆನಪಿಗೆ ಬಂದು ಹಿತವಾಗಿ ನಕ್ಕ. ಅಷ್ಟರ ನಂತರ ತನ್ನ ಓರಗೆಗಿಂತ ಹಿರಿಯ ಹುಡುಗರ ಒತ್ತಾಯಕ್ಕೆ ಕಟ್ಟು ಬಿದ್ದು ನದಿಯಲ್ಲಿ ಕಷ್ಟಪಟ್ಟಾದರೂ ಈಜು ಕಲಿತಿದ್ದ. ಆದರೆ ಒಂದು ಆತನಿಗೆ ಸ್ವಲ್ಪ ಸಮಸ್ಯೆ ಉಂಟುಮಾಡುತ್ತಿತ್ತು. ಹರಿಯುವ ನೀರಿನಲ್ಲಿ ಸೆಳವಿಗೆ ಅಡ್ಡವಾಗಿ, ಉದ್ದವಾಗಿ ಈಜುತ್ತಿದ್ದ ಆತ ನಿಂತ ಸ್ಮಿಮ್ಮಿಂಗ್ ಫೂಲ್ ನ ನೀರಿನಲ್ಲಿ ಈಜಲು ಆರಂಭದಲ್ಲಿ ಸ್ವಲ್ಪ ಕಷ್ಟವನ್ನೇ ಪಟ್ಟ ಎನ್ನಿ. ಬಾಲ್ಯದ ಹುಡುಗಾಟಗಳು, ಈಜಿನ ಜೊತೆಗೆ ಕೆಣಕಾಟಗಳು ಆತನಲ್ಲಿ ಒಮ್ಮೆ ನಗುವಿಗೆ ಕಾರಣವಾದವು. ಅದು ಅವನ ಜೊತೆಯಲ್ಲಿ ಈಜುತ್ತಿದ್ದ ಪಂಜಾಬಿನ ಆಟಗಾರನೊಬ್ಬನಿಗೆ ಕಂಡು `ಏನ್ ಉಸ್ತಾದ್.. ಒಬ್ಬೊಬ್ನೆ ನಗ್ತೀದಿಯಾ..? ನಿನ್ ಲವ್ವರ್ ನೆನಪಾದಳಾ..?' ಎಂದ.
                `ಲವ್ವೂ ಇಲ್ಲ ಎಂತ ಮಣ್ಣೂ ಇಲ್ಲ.. ನಾನು ಇದುವರೆಗೂ ಯಾರನ್ನೂ ಲವ್ ಮಾಡಿಲ್ಲ..' ಎಂದ..
`ಥೂ ನಿನ್ನ.. ವೇಸ್ಟು ಕಣೋ ನೀನು.. ಯಾಕೆ ಬದುಕ್ತಿದ್ದೀಯಾ..? ಲವ್ ಮಾಡಿಲ್ಲ ಅಂದ್ರೆ ನಿಂದೂ ಒಂದು ಬದುಕಾ.. ಚಲ್...ಚಲ್.. ನಾನ್ ನೋಡು ಕನಿಷ್ಟ ಹತ್ತು ಲವ್ ಮಾಡಿದ್ದೇನೆ.. ಗಂಡಸಾದ ಮೇಲೆ ಲವ್ ಮಾಡದೇ ಇರೋಕಾಗತ್ತಾ.. ಥೂ ನಿನ್ನ.. ಎಳಸು ನೀನು' ಎಂದ. ಪಂಜಾಬಿಯ ದೃಷ್ಟಿಯಲ್ಲಿ ವಿನಯಚಂದ್ರ ಏನಕ್ಕೂ ಬಾರದವನು. ಆದರೆ ವಿನಯಚಂದ್ರ ಯಾರನ್ನೂ ಪ್ರೀತಿಸದೇ ಇರಲು ಹಲವಾರು ಕಾರಣಗಳಿದ್ದವು. ಆತ ಹರೆಯಕ್ಕೆ ಕಾಲಿಟ್ಟಾಗಲೇ ತಾನು ಪ್ರೀತಿಸುವ ಹುಡುಗಿ ಹೀಗಿರಬೇಕು ಎನ್ನುವ ಹಲವಾರು ಅಂಶಗಳನ್ನು ಮನದಲ್ಲಿಯೇ ಹಾಕಿಕೊಂಡಿದ್ದ. ತನ್ನ ಪ್ರೀತಿಯ ಹುಡುಗಿಯ ಲಕ್ಷಣಗಳಿಗೊಂದು ಚೌಕಟ್ಟನ್ನು ರೂಪಿಸಿದ್ದ. ಹುಡುಗಿ ಚನ್ನಾಗಿರದಿದ್ದರೂ, ಸುರಸುಂದರಿಯಾಗಿ ಇರದೇ ಇದ್ದರೂ ತಪ್ಪಿಲ್ಲ. ಆದರೆ ಲಕ್ಷಣವಂತೆಯಾಗಿರಬೇಕು. ಉದ್ದನೆಯ ಜಡೆ ಆಕೆಗೆ ಇರಬೇಕು. ಕಾಡು ಸುತ್ತಬೇಕು. ಹಾಡು ಹೇಳಬೇಕು. ಹೀಗೆ ಏನೇನೋ ಅಂಶಗಳು.. ಒಂದಿಬ್ಬರು ಹುಡುಗಿಯರು ವಿನಯಚಂದ್ರನ ಬಳಿ ಪ್ರೇಮನಿವೇದನೆ ಮಾಡಿಕೊಂಡಿದ್ದೂ ಇದೆ. ಆದರೆ ತಾನು ಬಯಸಿದ ಅಂಶಗಳು ಅವರಲ್ಲಿ ಇರದ ಕಾರಣ ಅವರಿಗೆ ಒಪ್ಪಿಗೆಯನ್ನು ಸೂಚಿಸಿರಲಿಲ್ಲ ಆತ.
                    ಇದೀಗ ಅಪರೂಪಕ್ಕೆ ಒಬ್ಬಳು ಹುಡುಗಿ ವಿನಯಚಂದ್ರನ ಮನಸ್ಸಿಗೆ ಹಿಡಿಸಿದ್ದಳು. ನೋಡಲು ಚನ್ನಾಗಿದ್ದಳು. ಜೊತೆಗೆ ಯಾಕೋ ಆಕೆಯನ್ನು ನೋಡಿದಾಕ್ಷಣ ಆಪ್ತಭಾವ ಕಾಡಲಾರಂಭಿಸಿತ್ತು. ಮೇಲ್ನೋಟಕ್ಕೆ ಆಕೆಯದು ಉದ್ದವಾದ ಜಡೆಯಂತೆ ಕಂಡು ಆತ ಒಳಗೊಳಗೆ ಖುಷಿ ಪಟ್ಟಿದ್ದ. ಆಕೆಯ ಅಗಲ ಹಣೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಳನ್ನು ನೆನಪಿಗೆ ತಂದುಕೊಟ್ಟಿದ್ದರೂ ಆಕೆಯನ್ನು ನೋಡುತ್ತಿದ್ದರೆ ಏನೋ ಒಂದು ಹಿತವಾದ ಭಾವನೆ ಅವನಲ್ಲುಂಟಾಗುತ್ತಿತ್ತು. ಸೂರ್ಯನ್ ಹೇಳದಿದ್ದರೂ ಪರವಾಗಿಲ್ಲ. ಸಿಕ್ಕರೆ ನಾನು ಮಾತನಾಡಿಸಬೇಕು. ಹೋಗಿ ಅವಳ ಬಳಿ ಹೆಸರು ಹೇಳಿ, ಏನು ಮಾಡ್ತಿರೋದು ಎಂದೆಲ್ಲಾ ವಿಚಾರಿಸಬೇಕು ಎಂದುಕೊಂಡ. ಆಕೆ ಮುಸ್ಲೀಂ ಹುಡುಗಿಯಾದರೆ ಏನ್ ಮಾಡೋದು ಎಂಬ ಭಾವನೆಯೂ ಕಾಡದಿರಲಿಲ್ಲ. ಹಾಗಾಗದಿರಲಿ ಎಂದು ಒಮ್ಮೆ ಬೇಡಿಕೊಂಡ. ಹಿಂದೂ ಹುಡುಗಿಯೇ ಇರಬೇಕು. ಇಲ್ಲವಾದರೆ ಅಷ್ಟು ಚಂದಾಗಿ ಸೀರೆ ಉಡ್ತಿದ್ದಳಾ.. ಹಣೆಗೆ ಬಿಂದಿ ಇತ್ತು. ಖಂಡಿತ ಹಿಂದೂ ಹುಡುಗಿಯೇ ಇರಬೇಕು ಎಂದುಕೊಂಡ ವಿನಯಚಂದ್ರ. ಯಾಕೋ ಸಮಾಧಾನವಾದಂತಾಯಿತು.
                      ಕತ್ತಲಾಗುವ ವೇಳೆಗೆ ಮತ್ತೆ ಹೊಟೆಲ್ ಒಳಗೆ ಮುಖಮಾಡಿದ. ಬದುಕು ಚಿಕ್ಕದಾಗಿ ಹಳಿತಪ್ಪಿದಂತಿತ್ತು. ಸೂರ್ಯನ್ ಮಾತ್ರ ಕೆಣಕುವಿಕೆ ಹಾಗೂ ನಗುವಿನಲ್ಲಿ ತಲ್ಲೀನನಾಗಿದ್ದ. ಆಕೆಯ ಪ್ರತಿರೂಪದೊಂದಿಗೆ ಆದಿನವನ್ನು ಕಳೆಯಲು ಯತ್ನಿಸಿದ ವಿನಯಚಂದ್ರ. ಹುಡುಗಿಯರು ಹೇಗಿದ್ದರೂ ಚಂದ. ಮೇಕಪ್ಪು ಮಾಡದಿದ್ದರೆ ಇಷ್ಟವಾಗುತ್ತಾರೆ. ಹುಡುಗರು ಮೇಕಪ್ ಮಾಡಿದ ಹುಡುಗಿಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಮೇಕಪ್ ಇಲ್ಲದೇ ಸಹಜ ಸುಂದರಿಯಾಗಿದ್ದರೆ ಬಹಳ ಖುಷಿ ಪಡುತ್ತಾರೆ. ಇವಳೂ ಅಷ್ಟೇ ಮೇಕಪ್ ಮಾಡಿದಂತೆ ಕಾಣಲಿಲ್ಲ. ಸಹಜ ಸುಂದರಿ ಎಂದುಕೊಂಡ ವಿನಯಚಂದ್ರ. ಮನಸ್ಸಿನಲ್ಲಿ ಮತ್ತೆ ಅವಳ ರೂಪವನ್ನು ಕಣ್ತುಂಬಿಕೊಳ್ಳಲು ಯತ್ನಿಸಿದ.

**

                 ಮರುದಿನ ಬೆಳಿಗ್ಗೆ ಟೀಂ ಪ್ರಾಕ್ಟೀಸಿಗೆ ತಯಾರಾಗಬೇಕಿತ್ತು. ಹೊಟೆಲಿನಿಂದ ಹತ್ತಿರದ ತರಬೇತಿ ಗ್ರೌಂಡಿಗೆ ಕರೆದೊಯ್ಯಲಾಯಿತು. ಮೂರು ಗಂಟೆಗಳಿಗೂ ಅಧಿಕ ಕಾಲ ಬೆವರಿಳಿಸಿದ ಮೇಲೆ ತಂಡದ ಆಟಗಾರರು ಹಾಗೂ ಇತರರಿಗೆ ಆ ದಿನ ಬಾಂಗ್ಲಾದೇಶದ ಪ್ರವಾಸಿ ಸ್ಥಳಗಳ ಬಗ್ಗೆ ಕರೆದೊಯ್ಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಯಿತು. ವಿನಯಚಂದ್ರನ ಆದಿಯಾಗಿ ಎಲ್ಲರೂ ಸಂತಸಪಟ್ಟರು. ಪ್ರವಾಸಿ ಸ್ಥಳಕ್ಕೆ ತೆರಳುವಲ್ಲಿ ಆ ಬೆಂಗಾಲಿ ಸುಂದರಿ ಜೊತೆಯಾಗುತ್ತಾಳೆ ಎನ್ನುವುದು ಆತನ ನೆನಪಿಗೆ ಬಂದು ಮತ್ತಷ್ಟು ಉಲ್ಲಸಿತನಾದ. ಜಾಧವ್ ಅವರು ಬಂದು ಎಲ್ಲರನ್ನೂ ಬಾಂಗ್ಲಾದೇಶದ ಪ್ರಸಿದ್ಧ ಸ್ಥಳ, ಹಿಂದೂ ದೇವಾಲಯವಾದ ಕಾಂತಾಜಿ ಟೆಂಪಲ್ ಗೆ ಕರೆದೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿ ಹೋದರು. ಟೀಮ್ ಆಟಗಾರರೆಲ್ಲ ಅದಕ್ಕಾಗಿ ತಯಾರಾದರು.
                   ಬಾಂಗ್ಲಾದೇಶದ ದಿನಾಜ್ ಪುರದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯ ಇದು. ಹಿಂದೂಗಳೇ ಅಧಿಕವಿರುವ ಬಾಂಗ್ಲಾದೇಶದ ಸ್ಥಳ ಇದು ಎಂದರೂ ತಪ್ಪಾಗಲಿಕ್ಕಿಲ್ಲ. ಭಾರತ ತಂಡದ ಆಟಗಾರರೆಲ್ಲ ಹಿಂದೂಗಳು ಎನ್ನುವ ಕಾರಣಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿರಬೇಕು ಎಂದು ತರ್ಕಿಸಿದ ವಿನಯಚಂದ್ರ.
               ಮದ್ಯಾಹ್ನದ ವೇಳೆ ಎಲ್ಲರೂ ತಯಾರಾಗಿದ್ದರು. ಹೈಟೆಕ್ ಬಸ್ಸೊಂದು ಆಟಗಾರರನ್ನು ಕರೆದೊಯ್ಯಲು ಹೊಟೆಲ್ ಗೆ ಆಗಮಿಸಿತ್ತು. ವಿನಯಚಂದ್ರ ಲಗುಬಗೆಯಿಂದ ಬಸ್ಸನ್ನೇರಿದ. ಅಲ್ಲಿ ನಿಂತು ಬೆಂಗಾಲಿ ಸುಂದರಿಗಾಗಿ ಹುಡುಕಾಡಿದ. ಆದರೆ ಆಕೆ ಕಾಣಲಿಲ್ಲ. ಒಮ್ಮೆ ನಿರಾಸೆಯಾದಂತಾಯಿತು.
                 ಇನ್ನೇನು ಬಸ್ಸು ಹೊರಡಬೇಕು ಎನ್ನುವಷ್ಟರಲ್ಲಿ ಆಕೆ ಬಂದು ಬಸ್ಸನ್ನೇರಿದಳು. ವಿನಯಚಂದ್ರನ ಮುಖ ಹುಣ್ಣಿಮೆ ಚಂದ್ರನಂತೆ ಬೆಳಗಿತು.  ಅವಳನ್ನೇ ನೋಡಲು ಆರಂಭಿಸಿದ. ಆಕೆ ಮೊದಲಿಗೆ ಬಾಂಗ್ಲಾಶೈಲಿಯಲ್ಲಿ `ನಮೋಷ್ಕಾರ್..' ಎಂದವಳೇ `ನಾನು ಮಧುಮಿತಾ ಬಂಡೋಪಧ್ಯಾಯ.. ನಿಮ್ಮ ತಂಡದ ಮೇಲ್ವಿಚಾರಣೆಗಾಗಿ ನನ್ನನ್ನು ನೇಮಕ ಮಾಡಲಾಗಿದೆ. ನಿಮಗೆ ಬಾಂಗ್ಲಾದೇಶದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು..' ಎಂದಳು.
ವಿನಯಚಂದ್ರನ ಮನಸ್ಸಿನಲ್ಲಿ ಮತ್ತೆ ತರಂಗಗಳು ಎದ್ದಿದ್ದವು. ಕವಿತೆಯೊಂದು ಸದ್ದಿಲ್ಲದಂತೆ ಹೊರಬರಲು ಸಜ್ಜಾದಂತಿತ್ತು.
ನಿನ್ನ ಸನಿಹವೆನ್ನ ಮನದ
ದುಗುಡ ದೂರ ಮಾಡಿದೆ... 
ಎನ್ನಲು ತವಕಿಸುತ್ತಿತ್ತು ಮನಸ್ಸು. ವಿನಯಚಂದ್ರನಿಗೆ ಖುಷಿಯೋ ಖುಷಿ. ಮೊದಲನೆಯದಾಗಿ ಆಕೆಯ ಹೆಸರು ಗೊತ್ತಾಯಿತಲ್ಲ ಎಂಬಿದಾದರೆ ಆಕೆ ಹಿಂದುವೂ ಹೌದು. ಬಂಡೋಪಾಧ್ಯಾಯ ಎಂದರೆ ಬೆಂಗಾಲಿ ಬ್ರಾಹ್ಮಣರಿರಬೇಕು ಎಂದುಕೊಂಡು ಮತ್ತಷ್ಟು ಸಂತಸಪಟ್ಟ.
                  ಆಕೆ ಮುಂದುವರಿಸಿದಳು `ನಾವು ಈಗ ಹೋಗುತ್ತಿರುವ ಸ್ಥಳ ಕಾಂತಾಜಿ ಟೆಂಪಲ್ ಅಂತ. ಢಾಕಾದಿಂದ ಸರಿಸುಮಾರು 7 ಗಂಟೆ 30 ನಿಮಿಷದ ಬಸ್ಸಿನ ಪಯಣ. 371 ಕಿ.ಮಿ ದೂರದಲ್ಲಿದೆ. ನಾವು ಈ ಮದ್ಯಾಹ್ನ ಹೊರಟವರು ಸಂಜೆಯಷ್ಟೊತ್ತಿಗೆ ಕಾಂತಾಜಿ ದೇವಸ್ಥಾನದಲ್ಲಿ ಇರುತ್ತೇವೆ. ಅಲ್ಲಿ ಸಂಜೆ ಉಳಿದು, ದೇವಸ್ಥಾನವನ್ನು ನಾಳೆ ನೋಡಿ ನಾಳೆ ಸಂಜೆಯೊಳಗಾಗಿ ಢಾಕಾಕ್ಕೆ ವಾಪಾಸಾಗುತ್ತೇವೆ.. ಬಾಂಗ್ಲಾದೇಶದಲ್ಲಿರುವ ಕೆಲವೇ ಕೆಲವು ವಿಶೇಷ, ವಿಶಿಷ್ಟ ಹಾಗೂ ಪ್ರಾಚೀನ ಹಿಂದೂ ದೇವಾಲಯಗಳಲ್ಲಿ ಇದೂ ಒಂದು. ಅಪರೂಪವಾದದ್ದು. ಕಾಂತಾಜಿ ದೇವಾಲಯ ನಿರ್ಮಾಣ ಆರಂಭವಾಗಿದ್ದು 1704ರಲ್ಲಿ. ಮಹಾರಾಜ ಪ್ರಾಣನಾಥ ಎಂಬಾತ ಈ ದೇವಾಲಯ ನಿರ್ಮಾಣವನ್ನು ಆರಂಭ ಮಾಡಿದ. 1722ರಲ್ಲಿ ಮಹಾರಾಜ ಪ್ರಾಣನಾಥನ ಮಹ ರಾಜಾ ರಾಮನಾಥ ಈ ದೇವಾಲಯ ಕಟ್ಟಡವನ್ನು ಪೂರ್ತಿಗೊಳಿಸಿದ. ಟೆರ್ರಾಕೋಟಾದ ವಾಸ್ತುಶಿಲ್ಪಕ್ಕೆ ಇದೊಂದು ಪ್ರಮುಖ ಉದಾಹರಣೆ ಎನ್ನಬಹುದು. 1897ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಬೀಕರ ಭೂಕಂಪದಲ್ಲಿ ಈ ದೇವಾಲಯ ಬಹುತೇಕ ಹಾಳಾಗಿತ್ತು. ಆದರೆ ಆ ನಂತರ ಇದನ್ನು ಮತ್ತೊಮ್ಮೆ ಮರು ನಿರ್ಮಾಣ ಮಾಡಲಾಗಿದೆ..' ಎಂದು ಮಧುಮಿತಾ ಹೇಳುತ್ತಿದ್ದರೆ ವಿನಯಚಂದ್ರ ಆಕೆಯ ಕಣ್ಣನ್ನು ತದೇಕಚಿತ್ತದಿಂದ ನೋಡುತ್ತಿದ್ದ.
                `ಬ್ರಿಟೀಷರ ಆಗಮನ, ಬ್ರೀಟಷರು ಭಾರತವನ್ನು ಆಕ್ರಮಿಸಿದ್ದು, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಪಡೆದರೂ ಬಾಂಗ್ಲಾದೇಶದ ಭಾಗ ಹಿಸೆಯಾಗಿದ್ದು, 1971ರಲ್ಲಿ ಪ್ರತ್ಯೇಕ ರಾಷ್ಟ್ರೋದಯ, ಹಿಂದೂಗಳ ಮೇಲೆ ಮಾರಣಹೋಮ ಇತ್ಯಾದಿಗಳನ್ನೆಲ್ಲ ಕಂಡರೂ ದೃಢವಾಗಿ ನಿಂತಿದೆ ಈ ದೇವಸ್ಥಾನ.. ಎಲ್ಲರೂ ಖುಷಿಯಿಂದ ನೋಡಿಕೊಂಡು ಬರೋಣ..' ಎಂದು ಮಧುಮಿತಾ ಹೇಳುತ್ತಿದ್ದರೆ ವಿನಯಚಂದ್ರ ಅವಳ ಮಾತಿನ ಮಧುರತೆಯಲ್ಲಿ ಕಳೆದೇ ಹೋದಂತಿದ್ದ.

(ಮುಂದುವರಿಯುತ್ತದೆ..)