Monday, February 3, 2014

ನಿಖಿತಾ ಹಾಗೂ ನಾನು


                    ಯಾವ ಮುಹೂರ್ತದಲ್ಲಿ ಈ ನಿಖಿತ ಮನೆಯ ಸದಸ್ಯಳಾದಳೋ ಗೊತ್ತಾಗಲೇ ಇಲ್ಲ. ಒಟ್ಟಿನಲ್ಲಿ ಆಕೆ ನಮ್ಮ ಮನೆಯಲ್ಲಿ ನಮ್ಮವಳಾಗಿದ್ದಳು.
                    ಒಂದು ದಿನ ಮನೆಗೆ ಇಳಿಸಂಜೆಯ ಹೊತ್ತು ಬೈಕೇರಿ ಮನೆಯ ಕಡೆಗೆ ಬರುತ್ತಿದ್ದೆ. ಬೈಕಿನ ಹಿಂದೆ ಆಯಿ ಇದ್ದಳು. ಅಡಕಳ್ಳಿ ಶಾಲೆಗೆ ಬರುವ ಹೊತ್ತಿನಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದಳು ನಿಖಿತಾ. `ಆಯಿಯ ಬಳಿ ನಮ್ಮನಿಗೆ ಕರಕೊಂಡು ಹೋಪನನೆ ಕೇಳಿದ್ದೆ..' `ತಮಾ.. ಮನೆಯಲ್ಲಿ ರಾಗಿಣಿ, ಶ್ರೀದೇವಿ, ದರ್ಶನ.. ಎಲ್ಲಾ ಇದ್ದ ಈಗ ನಿಖಿತಾನೂ ಬೇಕನಾ..?' ಎಂದು ಕೇಳಿದಳು ಆಯಿ.
`ಇರ್ಲೆ.. ಥೋ ರಾಗಿಣಿ ದನಿಕರ ಆತು.. ಶ್ರೀದೇವಿ ದನ ಆತು.. ಇನ್ನು ದರ್ಶನ ಅಂತೂ ಹಂಡಾಪಟ್ಟೆ ಬಣ್ಣದ ಹೋರಿಗರ ಆತು.. ನಿಖಿತಾ ಇರ್ಲಿ.. ಕರೆದುಕೊಂಡು ಹೋಪನ ತಗಾ.. ನಮಗೆ ಹೊರೆಯಾಗ್ತಿಲ್ಲೆ..' ಎಂದವನೇ ಆಯಿಯ ತೊಡೆಯ ಮೇಲೆ ಕುಳ್ಳಿರಿಸಿ ಮನೆಯತ್ತ ಬೈಕು ಚಲಾಯಿಸಿದ್ದೆ.
                    ಹೇಳ್ತಿ ತಡಿರಿ.. ನಿಖಿತಾ.. ಅವಳಲ್ಲಿ ಇವಳಲ್ಲ.. ಆಕೆ ನಮ್ಮ ಮನೆಯಲ್ಲಿದ್ದ ಹೆಣ್ಣು ನಾಯಿ ಮಾರಾಯ್ರೆ.. ಆಯಿಯ ವಿರೋಧವನ್ನು ಕಟ್ಟಿಕೊಂಡೂ ಆಕೆಯನ್ನು ಮನೆಗೆ ತಂದ ದಿನ ಟಿವಿಯಲ್ಲಿ ದರ್ಶನ್ ಗಲಾಟೆ ಬರುತ್ತಿತ್ತು. ತಂದಿದ್ದು ಹೆಣ್ಣು ನಾಯಿಮರಿ. ಏನಾದರೂ ವಿಶೇಷ ನಾಮಕರಣ ಮಾಡಬೇಕಲ್ಲ ಎಂದುಕೊಂಡವನಿಗೆ ನೆನಪಾದದ್ದು ನಿಖಿತಾ. ಶುಭ ಮುಹೂರ್ತದಲ್ಲಿ ರಾಹುಕಾಲದ ಸಂದರ್ಭದಲ್ಲಿ ನಿಖಿತಾ ಎಂದು ನಾಮಕರಣ ಮಾಡಿದೆ.
`ಇಶ್ಶೀ.. ರಾಗಿಣಿಯಾತು, ಶ್ರೀದೇವಿಯಾತು, ದರ್ಶನನೂ ಆದ.. ನಿಖಿತ ಬೇರೆ ಬಾಕಿಯಿತ್ತನಾ..?' ಎಂದು ಆಯಿ ರಾಗವೆಳೆದಿದ್ದಳು. `ಸುಮ್ನಿರೆ ಮಜಾ ಇರ್ತು..' ಹೇಳಿ ಆಕೆಯನ್ನು ಸುಮ್ಮನಿರಿಸಿದ್ದೆ.
                   ನಾನು ಹೊಸ ನಾಯಿಮರಿ ತಂದ ವಿಚಾರ ಹಾಗೂ ಅದಕ್ಕೆ ನಿಖಿತಾ ಎಂದು ನಾಮಕರಣ ಮಾಡಿದ ವಿಚಾರ ನಮ್ಮೂರಿಗರಿಗೆ ಜಗಜ್ಜಾಹೀರಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ ನೋಡಿ. ಬಂದವರೇ.. `ಅಯ್ಯೋ ತಮಾ.. ನಿಖಿತಾ ಹೇಳಿ ಹೆಸರಿಟ್ಟಿದ್ದಿದ್ ನೋಡಿ ಲ್ಯಾಬ್ರಡಾರೋ, ಪಮೋರಿಯನ್ನೋ ಹೌಂಡೋ ಅಂದ್ ಕಂಡನಲಾ.. ನೋಡಿದ್ರೆ ಜಾತಿ ನಾಯಿ..' ಎಂದು ಹೇಳುತ್ತಿದ್ದುದು ಗೋಡೆಯ ಮೇಲಿನ ಹಲ್ಲಿಯ ಲೊಚಗುಡುವ ಮಾತಿನಂತೆ ನನಗನ್ನಿಸಿತ್ತು.
                   ತರುವಾಗ ಬಡಕಲು ಬಡಕಲಾಗಿದ್ದ ನಿಖಿತಾ ಆರಂಭದ ಹಲವು ದಿನಗಳ ಕಾಲ ತನ್ನ ಜೀರೋ ಫಿಗರ್ ಮೆಂಟೇನ್ ಮಾಡಿದ್ದಳು. ನಾನು `ಎಂತಕ್ಕೋ ನಿಖಿತಾ ದೊಡ್ಡಾಗ್ತೇ ಇಲ್ಲೆ ಕಾಣ್ತು..' ಎಂದು ಹೇಳಿ ಒಂದು ಕೋಳಿಮೊಟ್ಟೆ ತಂದು ಹಾಕಿದ್ದೆ. ಒಂದೇ ಗುಕ್ಕಿಗೆ ತಿಂದ ನಿಖಿತಾ ನಂತರದ ನಾಲ್ಕೈದು ದಿನದಲ್ಲಿ ಸೋನಾಕ್ಷಿ ಸಿನ್ಹಾಳಂತೆ ದಷ್ಟಪುಷ್ಟವಾಗಿದ್ದಳು. ಎಲ್ಲರಿಗೂ ಕಾಣುವಂತಾಗಿದ್ದಳು.
                   ನಿಖಿತಾಳಲ್ಲಿ ಹಲವು ಒಳ್ಳೆಯ ಗುಣಗಳಿದ್ದವು. ಕೆಲವು ದುರ್ಗುಣಗಳೂ ಇದ್ದವು. ದುರ್ಗುಣಗಳಲ್ಲಿ ಮುಖ್ಯವಾದದ್ದೆಂದರೆ ಕಂಡ ಕಂಡಿದ್ದನ್ನು ಕಚ್ಚುವ ಚಟ. ಬುಟ್ಟು, ಕಾಲುಮಣೆ, ಕಂಬ, ಕುತ್ತಿಗೆಗೆ ಕಟ್ಟಿದ ಸರಪಳಿ, ಯಾಮಾರಿ ಅದರ ಬಳಿ ಬಿಟ್ಟು ಹೋದ ಚಪ್ಪಲ್ಲು.. ಏನೂ ಸಿಕ್ಕಿಲ್ಲ ಎಂದರೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ರಾಗಿಣಿ ದನಿಕರದ ಕಿವಿ.. ಹೀಗೆ ನಿಖಿತಾಳ ಕಚ್ಚುವ ಚಟಕ್ಕೆ ಬಲಿಯಾಗಿದ್ದು ಹಲವು. ನಿಖಿತಾಳಿಗೊಂದು ಸುಂದರ ಗೂಡನ್ನೂ ತಯಾರು ಮಾಡಿಕೊಟ್ಟಿದ್ದೆ. ಆದರೆ ಆಕೆಯ ಹಲ್ಲಿನ ಕಾವಿಗೆ ಅದೂ ಮುರಿದುಹೋಗಿತ್ತು. ಆಕೆಯ ಕಡಿತದ ಕಾಟ ತಾಳಲಾರದೇ ಒಂದೆರಡು ಸಾರಿ ದಬ್ಬನೆ ನಿಖಿತಾಳ ಬಾಯಿಗೆ ಬಡಿದಿದ್ದೂ ಇದೆ. ಆಗೆಲ್ಲಾ `ಕುಂಯಕ್..' ಎಂದು ಕೂಗಿ ತಪ್ಪು ಮಾಡಲಾರೆ ಎಂದಿದ್ದರೂ ಮತ್ತೆ ಯಥಾ ಪ್ರಕಾರ ನಿಖಿತಾಳ ಬಾಲ ಡೊಂಕೆಂಬುದನ್ನು ಸಾಬೀತುಪಡಿಸುತ್ತಿತ್ತು.
                  ರಾತ್ರಿಯ ವೇಳೆ  `ಊ...' ಎಂದು ಅರಚುವುದು ನಿಖಿತಾಳ ಇನ್ನೊಂದು ದುರ್ಗುಣ. ಅದೆಂತ ಕನಸು ಬೀಳುತ್ತವೋ ಏನೋ.. ಅಷ್ಟಷ್ಟು ಹೊತ್ತಿಗೆ `ಊ...' ಎಂದು ಅರಚಿಕೊಳ್ಳುತ್ತಿದ್ದಳು ನಿಖಿತಾ.. ರಾತ್ರಿಯ ಸುಖನಿದ್ರೆಯಲ್ಲಿರುತ್ತಿದ್ದ ನಾನು ದಡಕ್ಕನೆ ಎದ್ದು ಹೊರ ಬಂದು ಲೈಟ್ ಹಾಕುವಷ್ಟರಲ್ಲಿ ಗಪ್ ಚುಪ್. ಗದರಿ ಮತ್ತೆ ಹಾಸಿಗೆಯನ್ನು ಸೇರುವಷ್ಟರಲ್ಲಿ ಮತ್ತೆ `ಊ...' ಹಲವು ರಾತ್ರಿಗಳು ನಿಖಿತಾಳ ಅರಚುವಿಕೆಗೆ ಹೀಗೆ ಬಲಿಯಾಗಿದ್ದಿವೆ. ಬಹುಶಃ ಈ ಊಳಾಟವೇ ಆಕೆಯ ಅಂತ್ಯಕ್ಕೆ ಕಾರಣವಾಗಿರಬೇಕು. ಅದನ್ನು ಕ್ಲೈಮ್ಯಾಕ್ಸಿನಲ್ಲಿ ಹೇಳ್ತಿ ಅಲ್ಲಿತನಕ ತಡಕಳಿ..
                  ಆಕೆಯ ಇನ್ನೊಂದು ಪ್ರಮುಖ ದುರ್ಗುಣ ಎಂದರೆ ಕಂಡಕಂಡಲ್ಲಿ ಅಗೆಯುವುದು. ಅಂಗಳವಿರಲಿ, ಹೊಡ್ಸಲಿನ ಬುಡವಿರಲಿ ಅಥವಾ ಅಡಿಕೆ ಬೇಯಿಸುವ ಒಲೆಯಿರಲಿ ಅದನ್ನು ತನ್ನು ಉಗುರಿನಿಂದ ಅಗೆದು ಹಾಕುವ ಮಹಾಗುಣವನ್ನು ನಿಖಿತಾ ಹೊಂದಿದ್ದಳು.
                  ನಾನು ಮನೆಯಿಂದ ಎಲ್ಲಿಗೇ ಹೊರಡಲಿ ನಿಳಿತಾ ಕೂಡ ಬಣ್ಣ ಬೆಗಡೆಯಿಂದ ತಯಾರಾಗುತ್ತಿದ್ದುದು ವಿಶೇಷ. ನಾನು ಪ್ಯಾಂಟ್ ಹಾಕಿದ ತಕ್ಷಣ ನಿಖಿತಾಳ ಸಂಭ್ರಮ ಸಡಗರ ನೋಡಬೇಕು.. ಆಹಾ..ಅಂಗಳದ ತುಂಬೆಲ್ಲ ಅವಳೇ ಅವಳು.. ಕುಣಿಯುವುದೇನು ನಲಿಯುವುದೇನು ಆಹಾ.. ನಾನು ಬೈಕ್ ಹತ್ತುವವರೆಗೂ ನನ್ನ ಮುಂದೆ ಹಿಂದೆ ಹೆಚ್ಚೂ ಕಡಿಮೆ ಡ್ಯಾನ್ಸ್ ಮಾಡಿದಂತೆ ನಡೆಯುವುದು ಅವಳ ರೂಟೀನು ಕೆಲಸ. ಕೆಲವೊಮ್ಮೆ ನನ್ನ ಬೈಕಿನ ಹಿಂದೆ ಕಿಲೋಮೀಟರುಗಟ್ಟಲೆ ಹಿಂಬಾಲಿಸಿ ಬಂದಿದ್ದೂ ಇದೆ.. ನಾನು `ಹಚ್ಯಾ..' ಎಂದು ಹದರಿದಾಗಲೆಲ್ಲ.. ಅಕ್ಕಪಕ್ಕದಲ್ಲಿ ಏನೋ ಬ್ಯೂಸಿ ಕೆಲಸ ಇದೆ ಎಂಬಂತೆ ಪೋಸು ಕೊಡುತ್ತ `ಬಕ್ ಬಕ್ ಬೌ...' ಎಂದು ಕೂಗುತ್ತಾ ಗಮನವನ್ನು ಎತ್ತಲೋ ಹರಿಸಿದ ಸಂದರ್ಭಗಳೂ ಇವೆ.
                  ಮನೆಯಲ್ಲಿ ಪುರಸೊತ್ತಿದ್ದಾಗ ನಾನು ಮನೆಯ ದನಗಳನ್ನು ಬಿಟ್ಟುಕೊಂಡು ಕಾಯಲು ಹೋಗುತ್ತೇನೆ. `ಇಂವ ಎಂತದಾ ದನಕಾಯ್ತಾ..' ಎಂದು ನೀವು ನನ್ನ ಬಗ್ಗೆ ಆಡಿಕೊಂಡರೂ ತಪ್ಪಿಲ್ಲ. ದನಕಾಯುವುದು ನನಗೆ ಖಂಡಿತವಾಗಿಯೂ ಖುಷಿ ಕೊಡುವ ಸಂಗತಿ. ಬಹುಶಃ ನಾನು ದನಕಾಯುವಾಗ ಕಂಡಷ್ಟು ಕನಸನ್ನು ಬೆಳಗಿನ ಜಾವದಲ್ಲೂ ಕಂಡಿಲ್ಲ ಬಿಡಿ. ಹೀಗೆ ನಾನು ದನ ಕಾಯಲು ಹೊರಟೆನೆಂದಾಗ ನನಗಿಂತ ಮೊದಲು ಸಾಗುವವಳೇ ನಿಖಿತಾ. ನೋಡಿದರೆ ನನಗೆ ಬಾಡಿಗಾರ್ಡೇನೋ ಎಂದುಕೊಳ್ಳಬೇಕು. ದುರಂತವೆಂದರೆ ಯಾರಾದರೂ ನಿಖಿತಾಳ ಎದುರು ಬಂದು ದಾರಿಯಲ್ಲಿದ್ದ ಕಲ್ಲನ್ನೆತ್ತಿ ಒಗೆದಂತಹ ಸನ್ನೆ ಮಾಡಿದರೆ ಸಾಕು `ಕಂಯ್.. ಕಂಯ್.. ಕಂಯ್..' ಎಂದು ಕೂಗುತ್ತಾ ನನ್ನ ಹಿಂದೆ ಅಡಗುವಷ್ಟು ಧೈರ್ಯವಂತೆ.
                  ದನವನ್ನು ಬಿಟ್ಟಾಗ ನಿಖಿತಾ ಸುಮ್ಮನಿರೋದಿಲ್ಲ. ಆಕೆಗೆ ಆಟವಾಡುವ ಚಟ. ಅದಕ್ಕಾಗಿ  ರಾಗಿಣಿಯನ್ನೋ, ಶ್ರೀದೇವಿಯನ್ನೋ, ಇಲ್ಲ ಆಗ ತಾನೇ ಮೀಸೆ ಬಂದಿದ್ದ ದರ್ಶನನನ್ನೋ ಕರೆಯುತ್ತಾಳೆ. ರಾಗಿಣಿ ಸುಮ್ಮನೆ ನಿಖಿತಾಳ ಬಳಿ ಸಿಟ್ಟಿನಿಂದ ಹೊತ್ತಂತೆ ಮಾಡಿದರೆ ಶ್ರೀದೇವಿ ನಿಖಿತಾಳನ್ನು ಹಲವು ಸಾರಿ ಬೆನ್ನಟ್ಟಿ ದೂರಕ್ಕೆ ಓಡಿಸಿದ್ದಳು. ಹುಡುಗುಬುದ್ಧಿಯ ದರ್ಶನ ನಿಖಿತಾಳ ಜೊತೆ ಜೂಟಾಟ ಆಡಿ ಬಾಯಲ್ಲಿ ನೊಜಲು ಸುರಿಸಿ ಎಲ್ಲಾದರೂ ನೆರಳಿನಲ್ಲಿ ನಿಂತು ಸುಧಾರಿಸಿಕೊಳ್ಳುತ್ತಿದ್ದ ನೆನಪಿನ್ನೂ ಹಸಿ ಹಸಿಯಾಗಿದೆ.
                  ನಿಖಿತಾಳ ಕ್ರಿಯಾಶೀಲತೆಯನ್ನು ಆಕೆಯ ಡೊಂಕು ಬಾಲದಲ್ಲೇ ಅಳೆಯಬೇಕು ನೋಡಿ. ಆಟದ ಮೂಡಿನಲ್ಲಿದ್ದಾಗ ನಿಖಿತಾಳ  ಬಿಎಸ್ಸಾರ್ ಫ್ಯಾನಿಗಿಂತ ಜೋರಾಗಿ ಬೀಸುತ್ತಿರುತ್ತದೆ. ಕಾಲಂತೂ ರಪ್ಪ ರಪ್ಪನೆ ನೆಲಕ್ಕೆ ಬಡಿಯುವ ವೈಖರಿ ಇಂದಿನ ಕನ್ನಡ ಸಿನಿಮಾಗಳ ಐಟಮ್ ಡ್ಯಾನ್ಸರಿಗಿಂತ ಚನ್ನಾಗಿರುತ್ತದೆ ಎಂದರೆ ಖಂಡಿತ ಅತಿಶಯೋಕ್ತಿಯಲ್ಲ ಬಿಡಿ. ಆದರೆ ತನಗೆ ಭಯವಾದರೆ ಸಾಕು ನಿಖಿತಾಳ ಬಾಲವನ್ನು ಮಾತ್ರ ಹುಡುಕಬೇಕು. ಅಫ್ಕೋರ್ಸ್.. ಇಂತಹ ಸಂದರ್ಭದಲ್ಲಿಯೇ ಆಕೆಯ ಬಾಲ ನೆಟ್ಟಗಾಗುವುದೂ ಇದೆ.. ಯಾರಾದರೂ ನಾಯಿ ಬಾಲ ಡೊಂಕು ಮಾರಾಯ್ರೆ ಎಂದರೆ ಅವರಿಗೆ ನಿಖಿತಾಳನ್ನು ತೋರಿಸುವಾ ಎಂದುಕೊಂಡಿದ್ದಿದ್ದೂ ಇದೆ.
                 ಇಂತಹ ನಿಖಿತಾ ಒಂದು ಮುಂಜಾನೆ ಸರಪಳಿಯಿಂದ ಬೋಳು ಉಳುಚಿಕೊಂಡು ಗುಡ್ಡದತ್ತ ಓಡಿತ್ತು. ನಾನಂತೂ ಆಕೆಯ ಹೆಸರು ಹೇಳಿ `ಕ್ರೂಯ್.. ಕ್ರೂಯ್..' ಎಂದು ಸಾಕಾಗಿತ್ತು. ಅರ್ಧಗಂಟೆಯಾದರೂ ಪತ್ತೆಯೇ ಇರಲಿಲ್ಲ. ಎಲ್ಲೋ ಹಡಬೆ ತಿರುಗಲು ಹೋಗಿದೆ ಎಂದುಕೊಂಡ ಹತ್ತೇ ನಿಮಿಷದಲ್ಲಿ ನಿಖಿತಾ ವಾಪಾಸ್ ಆಗಿತ್ತು. ಬಾಯಲ್ಲಿ ಚಿಕ್ಕ ಮೊಲದ ಮರಿಯನ್ನು ಕಚ್ಚಿ ತಂದಿತ್ತು. ಪುಟ್ಟ ಮರಿ. ನಿಖಿತಾಳ ದಾಳಿಗೆ ಸಿಕ್ಕಿ ಆಗಲೇ ಸತ್ತು ಹೋಗಿತ್ತು. `ಧರಿದ್ರ ನಾಯಿಗೊಡ್ಡೆ..' ಎಂದು ಬೈದು ಬಡಿಗೆ ತೆಗೆದುಕೊಳ್ಳುವಷ್ಟರಲ್ಲಿ ನಿಖಿತಾ ಮತ್ತೆ ಪರಾರಿಯಾಗಿತ್ತು. ಆಕೆಗೆ ಆ ಮೊಲದ ಮರಿ ಆ ದಿನ ಭೋರಿ ಭೋಜನವಾಗಿತ್ತು. ರಾತ್ರಿ ನಾನು ಇಲ್ಲದ ಹೊತ್ತನ್ನು ನೋಡಿ ಮನೆಗೆ ವಾಪಾಸಾಗಿತ್ತು. ಮರುದಿನ ಎನ್ನುವ ವೇಳೆಗೆ ನನ್ನ ಸಿಟ್ಟೂ ತಣಿದಿತ್ತು.
                 ನಿಖಿತಾಳ ಪುರಾಣ ಇಷ್ಟೆಲ್ಲ ಕೇಳಿದ ಮೇಲೆ ವರ್ಷಗಟ್ಟಲೆ ಇದು ನಮ್ಮ ಮನೆಯ ನಿವಾಸಿಯಾಗಿತ್ತು ಎಂದುಕೊಳ್ಳುತ್ತಿದ್ದೀರೇನೋ.. ಹಾಗೇನೂ ಆಗಿಲ್ಲ ಬಿಡಿ. 10 ತಿಂಗಳೋ ಅಥವಾ ಹನ್ನೊಂದೋ ಇರಬೇಕು. ಅಷ್ಟರಲ್ಲಿ ಅದು ಮಾಡಿದ ಪ್ರತಾಪ ಬಹಳಷ್ಟು ಎಂದರೆ ತಪ್ಪಲ್ಲ ಬಿಡಿ. ಮೊದ ಮೊದಲು ನಿಖಿತಾಳನ್ನು ಕಂಡರೆ ಮಾರು ದೂರ ಹಾರಿ ಬೈದುಬಿಡುತ್ತಿದ್ದ ಆಯಿಗೂ ಅಚ್ಚುಮೆಚ್ಚಿನದಾಗಿತ್ತು. ಬೆಳಗ್ಗಿನ ದೋಸೆಗೋ, ಮದ್ಯಾಹ್ನದ ಉಪ್ಪಿಲ್ಲದ ಮಜ್ಜಿಗೆಯನ್ನಕ್ಕೋ  ನಿಖಿತಾ ಕಾಯ್ದು ನಿಲ್ಲುತ್ತಿದ್ದ ಪರಿಯನ್ನು ಗಮನಿಸಿದ ಆಯಿ ಅನೇಕ ಸಾರಿ ನಿಖಿತಾಳಿಗೆ ವಿವಿಧ ರುಚಿಯ ತಿಂಡಿಗಳನ್ನು ಹಾಕಿ ಸಾಕಿ ಸಲಹುವ ಪ್ರಯತ್ನವನ್ನೂ ನಡೆಸಿದ್ದಳು. ತನಗೆ ಊಟ ತಂದಾಗಲೆಲ್ಲ ಕಾಲು ಸುತ್ತುತ್ತ ಬರುವ ನಿಖಿತ ಊಟ ಹಾಕಿದ ನಂತರ ಅದರ ಊಟದ ಬಟ್ಟಲ ಬಳಿ ನನ್ನನ್ನೂ ಸೇರಿದಂತೆ ಯಾರೇ ಹೋದರೂ `ಗುರ್ರೆ'ನ್ನುತ್ತಿದ್ದ  ಪರಿ ಮಾತ್ರ ಭಯಂಕರವಾಗಿ ಕಂಡಿತ್ತು.
                ಮನೆಯ ಸುತ್ತ ಕಾಡಿರುವ ಕಾರಣ ನಾಯಿಗಳನ್ನು ಕಚ್ಚಿ ಒಯ್ಯುವ ಗುರಕೆಗಳ ಕಾಟ ನಮ್ಮಲ್ಲಿ ಬಹಳ ಜಾಸ್ತಿ. ಈ ಕಾರಣಕ್ಕಾಗಿಯೇ ನಾನು ನಿಖಿತಾಳಿಗೊಂದು ಪಂಜರವನ್ನೂ ಮಾಡಿದ್ದೆ. ಪಂಜರ ಚನ್ನಾಗಿತ್ತಾದರೂ ನಿಖಿತಾಳಿಗೆ ಮಾತ್ರ ಅದರೊಳಗೆ ಹೋಗಲು ಮನಸ್ಸಾಗುತ್ತಿರಲಿಲ್ಲ. `ನಿಖಿತಾ.. ಗೂಡೊಳಗೆ ಹೋಗು..' ಎಂದು ಜೋರುಮಾಡಿದಾಗಲೆಲ್ಲ ಜೋಲು ಮುಖದೊಂದಿಗೆ ಮೊಂಡು ಹಟ ಮಾಡುತ್ತಿತ್ತು. ಆದರೂ ಅದನ್ನು ನಾನು ಗೂಡೊಳಗೆ ದಬ್ಬುತ್ತಿದ್ದೆ. ಅಲ್ಲಿಗೆ ಹೋದ ನಂತರ ಭಯಂಕರ ಸಿಟ್ಟು ಮಾಡುತ್ತಿತ್ತು ನಿಖಿತಾ. ಕೂಗಾಟವಂತೂ ಜೋರಾಗುತ್ತಿತ್ತು. ಪಂಜರದ ಸರಳುಗಳನ್ನು ಹಲ್ಲಿನಿಂದ ಕಚ್ಚುವುದು, ಕಾಲಿನಿಂದ ಗೆಬರುವ ಕೆಲಸವನ್ನು ಅದು ಮಾಡುತ್ತಿತ್ತು. ಇಂತಹ ಅದರ ಅಬ್ಬರದ ಕಾರ್ಯಕ್ಕಾಗಿಯೇ ಆ ಪಂಜರದ ಒಂದು ಭಾಗ ಕಿತ್ತು ಬಂದಿತ್ತು. ನನ್ನ ಅರಿವಿಗೆ ಹಲವು ದಿನಗಳ ಕಾಲ ಅದು ಬಂದೇ ಇರಲಿಲ್ಲ.
               ನಿಖಿತಾಳನ್ನು ಕಂಡರೆ ನನಗೆ ಖಂಡಿತವಾಗಿಯೂ ಪೂರ್ಣಚಂದ್ರ ತೇಜಸ್ವಿಯವ `ಕಿವಿ'ಯ ನೆನಪಾಗುತ್ತದೆ. ಅವರೊಡನೆ ಆತ್ಮೀಯವಾಗಿ ಒಡನಾಡಿದ ನಾಯಿ ಅದು. ನನ್ನ ಜೊತೆಗೂ ನಿಖಿತ ಹಾಗೆಯೇ ಇತ್ತು. ನಾನು ಅಘನಾಶಿನಿ ನದಿಯಲ್ಲಿ ಈಜಲು ಹೊಳೆಗೆ ಜಿಗಿದರೆ ಅದೂ ಜಿಗಿಯುತ್ತಿದ್ದುದು ವಿಶೇಷ. ಒಂದೆರಡು ಸಾರಿ ಜಿಗಿಯುವ ಭರದಲ್ಲಿ ನೀರೊಳಗೆ ಕಂತಿ ನೀರು ಕುಡಿದ ಮೇಲೆ ಮತ್ತೆ ಅಂತಹ ಸಾಹಸ ಮಾಡಲಿಲ್ಲ. ನಿಖಿತಾಳ ವೈರಿಗಳ ಕುರಿತು ಸ್ವಲ್ಪವಾದರೂ ಹೇಳದಿದ್ದರೆ ಏನೋ ಮಿಸ್ ಹೊಡೆಯುತ್ತದೆ.
               ತನ್ನ ಮೈಮೇಲೆ ಸದಾ ಬೀಡು ಬಿಟ್ಟುಕೊಂಡಿರುವ ಕಡಿತದ ಹುಳು ನಿಖಿತಾಳ ವೈರಿ ನಂಬರ್ 1. ಈ ಕಡಿತದ ಹುಳುವಿನ ಬಾಧೆಯನ್ನು ತಾಳಲಾರದೇ ಅನೇಕ ಸಾರಿ ತನ್ನ ಮೈಯನ್ನು ತಾನು ಕಚ್ಚಿಕೊಂಡಿದ್ದೂ ಇದೆ. ಅದರ ಮೈ ಕಡಿತದ ಕಾರಣ ನಮ್ಮ ಮನೆಯ ಸದಸ್ಯರು ಆಕೆಯ ಮೈ ತುರಿಸಬೇಕಿತ್ತು. ಹಾಗೆ ಮಾಡದಿದ್ದರೆ ನಮ್ಮ ಮೈಮೇಲೆ ಜಿಗಿಯುವ ಕಾರ್ಯವನ್ನೂ ಅದು ಮಾಡುತ್ತಿತ್ತು. ಹಾಕಿದ ಆಹಾರವನ್ನು ಕದ್ದು ತಿನ್ನಲು ಬರುವ ಕಾಗೆಗಳ ಜೋಡಿ ನಿಖಿತಾಳ ವೈರಿ ನಂಬರ್ 2. ಎಷ್ಟೇ ನಾಜೂಕಿನಿಂದ ಯಾರಿಗೂ ಹತ್ತಿರ ಬರಲು ಅವಕಾಶವಿಲ್ಲದಂತೆ ತನಗೆ ಹಾಕುವ ತಿಂಡಿ ಅಥವಾ ಊಟವನ್ನು ತಿನ್ನುತ್ತಿದ್ದರೂ ಬುದ್ಧಿವಂತ ಕಾಗೆಗಳು ಅದನ್ನು ಎಗರಿಸಲು ಯತ್ನಿಸುತ್ತಿದ್ದವು. ಇದರಿಂದ ಸಿಟ್ಟಾಗುತ್ತಿದ್ದ ನಿಖಿತಾ ಅನೇಕ ಸಾರಿ ಅವುಗಳನ್ನು ಬೆನ್ನಟ್ಟಿತ್ತು. ಅವರನ್ನು ಹಿಡಿಯುವ ಭರದಲ್ಲಿ ಎರಡೋ ಮೂರೋ ಸಾರಿ ನಮ್ಮ ಮನೆಯ ಹಂಚಿನ ಮಾಡನ್ನೂ ಏರಿಬಿಟ್ಟಿದ್ದ ನಿಖಿತಾ ಅಪ್ಪನ ಬಡಿಗೆಯ ಏಟಿಗೆ ಹೆದರಿ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ.
              ನಿಖಿತಾ ನಮ್ಮ ಮನೆಯಲ್ಲಿದ್ದ ಸಮಯದಲ್ಲಿಯೇ ಸಾಂಬ ಹಾಗೂ ರಂಗ ಎಂಬ ಎರಡು ಮುದ್ದಾದ ಬೆಕ್ಕಿನ ಮರಿಗಳು ನಮ್ಮಲ್ಲಿದ್ದವು. ಈ ಮರಿಗಳಿಗೆ ಯಾವುದೇ ಸ್ಥಳವಾದರೂ ಸರಿ. ಎಗ್ಗಿಲ್ಲ. ನಾವು ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ಬೆಕ್ಕಿನ ಮರಿಗಳು ಮನೆಯೊಳಗೆ ಲೈಯನ್ ಕಿಂಗ್ ಮರಿಯಂತೆ ರಾಜಾರೋಷವಾಗಿ ಓಡಾಡುತ್ತಿದ್ದವು. ಸಾಂಬ ಹಾಗೂ ರಂಗ ಬೆಕ್ಕಿನ ಮರಿಗಳು ಮನೆಯೊಳಗೆ ಓಡ್ಯಾಡುತ್ತಿದ್ದುದು ನಿಖಿತಾಳಿಗೆ ಹೊಟ್ಟೆಕಿಚ್ಚು ತರುತ್ತಿತ್ತೋ ಏನೋ. ಅನೇಕ ಸಾರಿ ಇವುಗಳನ್ನು ಬೆನ್ನಟ್ಟಿದ್ದೂ ಇದೆ. ಸಾಂಬ ಹಾಗೂ ರಂಗನ ಹಿಂದೆಯೇ ತಾನೂ ಮನೆಯೊಳಗೆ ಬರಲು ಪ್ತಯತ್ನಿಸಿ ಹೊಡೆತ ತಿಂದಿದ್ದೂ ಇದೆ. ಈ ಕಾರಣದಿಂದಲೇ ನಿಖಿತಾಳ ಶತ್ರು ನಂಬರ್ 3 ಪಟ್ಟವನ್ನು ಈ ಬೆಕ್ಕಿನ ಮರಿಗಳು ಹೊತ್ತುಕೊಳ್ಳಬೇಕಾಯಿತು.
               ಅಡಿಕೆ ಮರದಲ್ಲಿ ಕೆಂಪಾದ ಅಡಿಕೆಯನ್ನು ಸೀಬಿ ಸೀಬಿ ಒಗೆಯುತ್ತಿದ್ದ ಕಪ್ಪು ಮುಸುಡಿಯ ಉದ್ದ ಬಾಲದ ಮಂಗಗಳು ನಿಖಿತಾಳ ನಾಲ್ಕನೆಯ ಹಾಗೂ ಫೈನಲ್ ಶತ್ರು. ನಿಖಿತಾಳನ್ನು ಕಂಡರೆ ಹಲ್ಲುಕಿಸಿದು ಏಡಿಸುತ್ತಿದ್ದ ಇವುಗಳು ನಿಖಿತಾಳ ಬಾಯಿಗೆ ಬೆದರಿ ಮರ ಹತ್ತಿ ಕೂರುತ್ತಿದ್ದುದೂ ಇದೆ. ಮನೆಯ ಅಂಗಳದಲ್ಲಿರುವ ಕಂಚಿಮರದ ಕಂಚಿಕಾಯಿಗಳನ್ನು ಎಗರಿಸುವ ಪ್ರಯತ್ನ ಮಂಗನ ಬಳಗದ್ದಾದರೆ ಅವನ್ನು ತಡೆಯಬೇಕು ಎನ್ನುವುದು ನಿಖಿತಾಳ ಕಾರ್ಯ. ಅನೇಕ ಸಾರಿ ನಿಖಿತಾಳ ಕಣ್ಣು ತಪ್ಪಿಸಿ ಈ ಮಂಗನ ಗ್ವಾಲೆ ಕಂಚಿ ಮರ ಏರಿದ್ದೂ ಇದೆ. ಅದನ್ನು ಕಂಡು ಓಡಿ ಬರುವ ನಿಖಿತಾಳ ಮೈಮೇಲೆ ಹಲವು ಸಾರಿ ಕಂಚಿ ಕಾಯಿಗಳಿಂದ ಮಂಗಗಳು ಹೊಡೆದಿದ್ದೂ `ಕಂಯ್ ಕಂಯ್..' ಗುಡುತ್ತಲೇ ಅಬ್ಬರದಿಮದ ಮಂಗನ ಗ್ವಾಲೆ ಬೆದರಿಸಿದ್ದು ನಿಖಿತಾಳ ಘನ ಕಾರ್ಯಗಳಲ್ಲಿ ಒಂದೆನ್ನಿಸಿದೆ.
             ಇಂತಹ ಗುಣದ ನಿಖಿತಾಳ ಅಂತ್ಯ ಅತ್ಯಂತ ದುರಂತದಿಂದ ಕೂಡಿತ್ತು. ಕಳೆದ ಶಿರಸಿ ಜಾತ್ರೆಯ ಸಂದರ್ಭದಲ್ಲಿ ನಾನು ಜಾತ್ರೆಗೆ ಬಂದಿದ್ದೆ. ರಾತ್ರಿ 2 ಗಂಟೆಯಾಗಿರಬೇಕು. ನಾನು ವಾಪಾಸು ಬಂದು ದಣೀ ಹಾಸಿಗೆಯ ಮೇಲೆ ಅಡ್ಡಾಗಿದ್ದೆ. ಪಂಜರವನ್ನು ತೂತು ಮಾಡಿದ್ದ ನಿಖಿತಾ ಅದ್ಯಾವುದೋ ಮಾಯೆಯಲ್ಲಿ ಗೂಡಿನಿಂದ ಹೊರಬಿದ್ದು ಅಂಗಳದಲ್ಲೆಲ್ಲೋ ಮಲಗಿತ್ತಿರಬೇಕು. ಕೊಬ್ಬಿದ ನಿಖಿತಾಳ ಮೇಲೆ ಅದ್ಯಾವುದೋ ಗುರುಕೆ(ನಾಯಿ, ಮೊಲ, ಚಿಕ್ಕ ಚಿಕ್ಕ ಸಸ್ಯಾಹಾರಿ ಪ್ರಾಣಿಗಳನ್ನು ಹಿಡಿಯುವ ಚಿರತೆ ಜಾತಿಗೆ ಸೇರಿದ ಪ್ರಾಣಿ: ಮರಿಚಿರತೆ ಎನ್ನಬಹುದು)ಗೆ ಅನೇಕ ದಿನಗಳಿಂದ ಕಣ್ಣಿತ್ತೆಂದು ಕಾಣಿಸುತ್ತದೆ. ಇನ್ನೇನು ನನಗೆ ನಿದ್ದೆ ಬರಬೇಕು ಅಷ್ಟರಲ್ಲಿ `ಕಂಯ್.. ಕೊಂಯಯ್ಯೋ..' ಎಂಬ ಶಬ್ದ.. ಒಮ್ಮೆ ಗುರ್ರೆಂದಂತಾಯ್ತು.. ನಿಶಬ್ದ. ನಾನು ದಡಬಡಿಸಿ ಎದ್ದು ಲಯಟ್ ಹಾಕಿ ಅಂಗಳಕ್ಕೆ ಹೋಗುವಷ್ಟರಲ್ಲಿ ನಿಖಿತಾ ಇಲ್ಲವೇ ಇಲ್ಲ. ಅಂಗಳದಲ್ಲಿ ಹುಡುಕಾಡುವಷ್ಟರಲ್ಲಿ ಸದ್ದು ಕೇಳಿದ ಅಪ್ಪಯ್ಯನೂ ಎದ್ದು ಬಂದಿದ್ದ. ಅದೇ ವೇಳೆ ತೋಟದ ಮೂಲೆಯಲ್ಲೇಲ್ಲೋ ಗುರಕೆ ಕೈಗಿದಂತಾಯ್ತು. `ತಡಿಯಾ ತಮಾ..' ಎಂದವನೇ ಅಪ್ಪ ಬ್ಯಾಟರಿಯನ್ನು ಹಿಡಿದು ತೋಟದತ್ತ ನಡೆದ. ಸ್ವಲ್ಪ ಹೊತ್ತಿಗೆ ಮರಳಿ ಬಂದ. `ಏನಾಯ್ತು..' ಎಂದೆ. `ಕಂಡಿದ್ದಿಲ್ಲೆ..' ಎಂದವನೇ `ಗುರಕೆ ಹೊತ್ಕಂಡು ಹೋತಾ..' ಎಂದ. ನಾನು ನಿಟ್ಟುಸಿರು ಬಿಟ್ಟೆ.
            ಬೆಳಗಾದ ಕೂಡಲೇ ಅಂಗಳದಲ್ಲಿ ಹುಡುಕಿದೆ. ಗೂಡಿನ ಒಂದು ಭಾಗ ಬಾಯಿ ಬಿಟ್ಟುಕೊಂಡಿತ್ತು. ನಿಖಿತಾ ಮಲಗಿದ್ದ ಜಾಗದಲ್ಲಿ ರಕ್ತದ ಕಲೆಗಳು, ಗುರಕೆ ಬಾಯಿ ಹಾಕಿದ್ದೇ ತಡ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕುರುಹುಗಳೂ ಕಂಡವು. ಕಾಲಿನ ಉಗುರಿನಿಂದ ನೆಲವನ್ನು ಬಲವಾಗಿ ಊರಿದ್ದ ನಿಖಿತಾಳನ್ನು ಗುರಕೆ ಹಾಗೆಯೇ ಎಳೆದುಕೊಂಡು ಹೋಗಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಮಾರುದ್ದದ ಗೀರು ಅಂಗಳದಲ್ಲಿ ಬಿದ್ದಿತ್ತು. ರಾತ್ರಿ ಗುರಕೆ ಕೂಗಿದ ಸ್ಥಳದತ್ತ ಹೋಗಿ ನೋಡಿದೆ. ಅಲ್ಲೆಲ್ಲೋ ನಿಖಿತಾಳನ್ನು ಹೊತ್ತೊಯ್ದ ಗುರಕೆ ವಿಜಯೋತ್ಸವದ ಧ್ವನಿಯನ್ನು ಹೊರಡಿಸಿರಬೇಕು. ತೋಟದ ಮಂಡಗಾದಿಗೆ ಸಂಕದ ಮೇಲೆ ರಕ್ತ ಕಂಡಂತಾಯ್ತು. `ಹಾಳಾದ ಗುರಕೆ..'  ಎಂದು ಬೈದೆ. `ಧರಿದ್ರ ಕುನ್ನಿಗೊಡ್ಡು.. ಅಷ್ಟು ಚಂದ ಗೂಡು ಮಾಡಿಟ್ಟಿದ್ರೂ ಅದನ್ನು ಮುರದು ಹೊರಗೆ ಬಂದಿತ್ತು. ಸಾಯವು ಹೇಳೆ ಹಿಂಗ್ ಮಾಡ್ಕಂಡಿತ್ತು ಕಾಣ್ತು..' ಎಂದು ಅಪ್ಪ ಗೊಣಗಿದ. ನಿಖಿತ ನೆನಪಾಗಿದ್ದಳು.

No comments:

Post a Comment