Friday, February 7, 2014

ಬೆಂಗಾಲಿ ಸುಂದರಿ-6


               ಮರುದಿನ ಮುಂಜಾನೆ 4 ಗಂಟೆಗೆ ವಿಮಾನದ ಮೂಲಕ ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಹೋಗುವುದೆಂಬ ನಿರ್ಣಯವಾಗಿತ್ತು. ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ಕ್ರೀಡಾ ಗ್ರಾಮದಲ್ಲಿ ಕಬ್ಬಡ್ಡಿ ವಿಶ್ವಕಪ್ ನಡೆಯಲಿತ್ತು. ಕಬ್ಬಡ್ಡಿ ವಿಶ್ವಕಪ್ಪಿಗಾಗಿ `ಎ' ಮತ್ತು `ಬಿ' ಎಂಬ ಎರಡು ಗುಂಪನ್ನು ಮಾಡಲಾಗಿತ್ತು. ವಿಶ್ವಚಾಂಪಿಯನ್ ಪಟ್ಟ ಹಾಗೂ ನಂಬರ್ 1 ಎಂಬ ರಾಂಕಿನಲ್ಲಿರುವ ಭಾರತ `ಎ' ಗುಂಪಿನ ಮೊದಲ ಸ್ಥಾನದಲ್ಲಿತ್ತು. ಮೂರನೇ ರಾಂಕಿನ ಪಾಕಿಸ್ತಾನ, ಐದನೇ ರಾಂಕಿನ ಉಕ್ರೇನ್, ಏಳನೆ ರಾಂಕಿನ ಕೆನಡಾ, ಒಂಭತ್ತನೇ ರಾಂಕಿನ ಚೀನಾಗಳು ಇದೇ ಗ್ರೂಪಿನಲ್ಲಿದ್ದವು. ಜೊತೆಯಲ್ಲಿ ಥೈಲ್ಯಾಂಡ್, ಸೌಥ್ ಕೋರಿಯಾ ಹಾಗೂ ನ್ಯೂಝಿಲ್ಯಾಂಡ್ ತಂಡಗಳೂ `ಎ'ಗ್ರೂಪಿನಲ್ಲಿದ್ದವು.
                 `ಬಿ' ಗುಂಪಿನಲ್ಲಿ ಬಾಂಗ್ಲಾದೇಶದ ಜೊತೆಗೆ ಇರಾನ್, ಚೈನೀಸ್ ತೈಪೇ, ಮಲೇಶಿಯಾ, ನೇಪಾಳ ತಂಡಗಳು ಪ್ರಮುಖವಾಗಿದ್ದವು. ಅವುಗಳ ಜೊತೆಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಶ್ರೀಲಂಕಾಗಳಿದ್ದವು. ಭಾರತದ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಉಕ್ರೇನ್ ತಂಡಗಳು ಭಲಿಷ್ಟವಾಗಿದ್ದವು. ಈ ತಂಡಗಳ ಎದುರು ಜಿದ್ದಿನ ಆಟವನ್ನು ನಿರೀಕ್ಷೆ ಮಾಡಲಾಗುತ್ತಿತ್ತು. ತಂಡದ ತರಬೇತುದಾರರೂ ಈ ಕುರಿತು ಹೆಚ್ಚಿನ ಸಲಹೆಗಳನ್ನು ನೀಡಿದ್ದರು. ಆಟ ರೋಚಕವಾಗಲಿದೆ ಎನ್ನುವುದರ ಸುಳಿವನ್ನು ಈ ಗುಂಪುಗಳೇ ನೀಡುತ್ತಿದ್ದವು.
                  ವಿನಯಚಂದ್ರ ಮರುದಿನ ಮುಂಜಾನೆ ಹೊರಡಬೇಕಾಗುತ್ತದೆ ಎಂದು ತನ್ನ ಲಗೇಜುಗಳನ್ನೆಲ್ಲ ತುಂಬಿಟ್ಟುಕೊಂಡಿದ್ದ. ರೂಮಿನ ಜೊತೆಗಾರ ಸೂರ್ಯನೂ ಕೂಡ ತನ್ನ ಬಟ್ಟೆ ಬರೆಗಳನ್ನೆಲ್ಲ ತುಂಬಿಕೊಂಡಿದ್ದ. ಸೂರ್ಯನ್ ಬಾಂಗ್ಲಾದೇಶದ ಕುರಿತು ಮಾಹಿತಿ ನೀಡುವ ಸಿಡಿಯಲ್ಲಿ ಬೆಂಗಾಲಿ ಹುಡುಗಿಯರನ್ನು ನೋಡಿದ ನಂತರ ಮರುಳನಂತೆ ಆಡುತ್ತಿದ್ದ. ಮಾತೆತ್ತಿದರೆ  `ಮಗಾ.. ಯಾರಾದರೂ ಬೆಂಗಾಲಿ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡು ಹಾರಿಸಿಕೊಂಡು ಬರಬೇಕು ಕಣೋ.. ಬಹಳ ಮನಸ್ಸಿಗೆ ಇಷ್ಟವಾಗಿದ್ದಾರೆ. ಹೃದಯ ಕದ್ದುಬಿಟ್ಟಿದ್ದಾರೆ ಮಾರಾಯಾ' ಎಂದು ಬಡಬಡಿಸುತ್ತಿದ್ದ.
                 `ಅಯ್ಯೋ ಮಳ್ಳೆ.. ಹಾಗೆಲ್ಲಾದರೂ ಮಾಡಿಬಿಟ್ಟೀಯಾ.. ಹುಷಾರು ಮಾರಾಯಾ.. ನಮಗೆ ವಾಪಾಸು ಬರಲಿಕ್ಕೆ ಸಾಧ್ಯವಾಗದಂತೆ ಮಾಡಿಬಿಟ್ಟಾರು.. ಅಂತಹ ಭಾನಗಡಿ ಮಾಡಬೇಡವೋ.. ' ಎಂದು ವಿನಯಚಂದ್ರ ಮಾರುತ್ತರ ನೀಡಿದ್ದ.
                  `ಹೇ ಹೇ.. ಬಾಂಗ್ಲಾದೇಶಿಯರಿಗೆ ಗೊತ್ತಾಗದಂತೆ ಎತ್ತಾಕ್ಕೊಂಡು ಬರ್ತೇನೆ ನೋಡ್ತಾಯಿರು..'
                  `ಹೋಗೋ.. ಹೋಗೋ.. ಬೊಗಳೆ ಕೊಚ್ಚಬೇಡ.. ಬರೀ ಇದೆ ಆಯ್ತು.. ಬಾಂಗ್ಲಾದಲ್ಲಿ ಹುಡುಗಿಯರನ್ನು ಹೊರತು ಪಡಿಸಿದಂತೆ ಬೇಕಾದಷ್ಟು ವಿಷಯಗಳಿವೆ ಮಾರಾಯಾ.. ಅದರ ಬಗ್ಗೆ ಮಾತನಾಡು...'
                  `ಊಹೂ.. ನನಗೆ ಹುಡುಗಿಯರ ವಿಷಯ ಬಿಟ್ಟು ಬೇರೇನೂ ತಲೆಗೆ ಹೋಗುವುದೇ ಇಲ್ಲ.. ಜಗತ್ತಿನ ಪರಮ ಆಕರ್ಷಣೀಯ ಅಂಶ, ವ್ಯಕ್ತಿಗಳು ಅಂದರೆ ನನಗೆ ಹುಡುಗಿಯರು...ಮತ್ತಿನ್ಯಾವ ವಿಷಯವೂ ನನಗೆ ಬೇಡ.. ಊಹೂ' ಎಂದು ದೃಢವಾಗಿ ಹೇಳಿದ್ದ.
                   ಇಂವ ಉದ್ಧಾರ ಆಗುವ ಆಸಾಮಿಯಲ್ಲ ಎಂದುಕೊಂಡ ವಿನಯಚಂದ್ರ ತಲೆಕೊಡವಿ ಎದ್ದು ಹೊರಡಬೇಕೆನ್ನುವಷ್ಟರಲ್ಲಿ ಸೂರ್ಯನ್ `ಹೇಯ್ ದೋಸ್ತ್.. ಬೆಂಗಾಲಿ ಹುಡುಗಿಯರಿಗೆ ಜಗತ್ತಿನ ಸುಂದರಿಯರಲ್ಲಿ ಪ್ರಮುಖ ಸ್ಥಾನವಿದೆ ಗೊತ್ತಾ.. ನಮ್ ಬಾಲಿವುಡ್ಡಲ್ಲೇ ನೋಡು ಅದೆಷ್ಟೆಲ್ಲಾ ಜನ ಬೆಂಗಾಲಿ ಸುಂದರಿಯರಿದ್ದಾರೆ.. ಬಿಪಾಶಾ ಬಸು, ಕೊಂಕಣಾ ಸೇನ್ ಶರ್ಮಾ, ಸುಚಿತ್ರ ಸೇನ್, ಮೂನ್ ಮೂನ್ ಸೇನ್, ಇನ್ನೂ ಹಲವರು.. ನಿಮ್ ಕನ್ನಡದಲ್ಲೂ ಇದ್ದಾಳಲ್ಲೋ ಏಂದ್ರಿತಾ ರೇ...' ಅಂದ.
                  `ಅದು ಏಂದ್ರಿತಾ ರೇ ಅಲ್ಲ.. ಐಂದ್ರಿತಾ ರೈ..' ಎಂದು ಸರಿಪಡಿಸಲು ಮುಂದಾದ ವಿನಯಚಂದ್ರ. `ಅವಳ ಬಗ್ಗೆಯೂ ಗೊತ್ತಾ ನಿಂಗೆ..?' ವಿಸ್ಮಯದಿಂದ ಕೇಳಿದ್ದ.
                  `ಅವಳೂ ನನಗೆ ಇಷ್ಟವಾದವಳೇ ನೋಡು.. ಇರ್ಲಿ.. ನೋಡು ನಾ ಹೇಳಿ ಮುಗಿಸಿಲ್ಲ ಆಗಲೇ ಬೆಂಗಾಲಿ ಹುಡುಗಿಯರ ಬಗ್ಗೆ ನೀನೂ ಮಾತನಾಡಲು ಆರಂಭ ಮಾಡಿಬಿಟ್ಟೆ.. ಹೆ ಹೆ.. ಬಾಂಗ್ಲಾದೇಶದಲ್ಲಿ ನೀನೂ ಏನೋ ಒಂದು ಆಗ್ತೀಯಾ ಬಿಡು..' ಎಂದು ಸೂರ್ಯನ್ ಛೇಡಿಸಿದಾಗ ವಿನಯಚಂದ್ರನಿಗೆ ಆತನ ಬುರಡಿಗೆ ಒಂದು ಬಿಗಿಯುವ ಅನ್ನಿಸಿತ್ತಾದರೂ ಸರಿಯಲ್ಲ ಎಂದುಕೊಂಡು ಸುಮ್ಮನಾದ.

**

                    ನಸುಕಿನಲ್ಲೆದ್ದು ಸ್ನಾನ ಮುಗಿಸುವ ವೇಳೆಗೆ ಎಲ್ಲರೂ ತಯಾರಾದಿರಾ ಎಂದು ಟೀಂ ಮ್ಯಾನೇಜರ್ ಕೋಣೆಯ ಕದವನ್ನು ದೂಡಿಕೊಂಡೇ ಬಂದರು. ಸೂರ್ಯನ್ ಇನ್ನೂ ತಯಾರಾಗುತ್ತಿದ್ದ.. `ಹೇಯ್ ಲೇಝಿ ಫೆಲ್ಲೋ.. ಬೇಗ.. ಕ್ವಿಕ್.. ಲೇಟಾಗ್ತಾ ಇದೆ..' ಎಂದು ಮ್ಯಾನೇಜರ್ ಅವಸರಿಸಿದರು.
                   ತಯಾರಾಗಿ ಬೆಳಗಿನ ಜಾವದಲ್ಲಿ ಟ್ರಾಫಿಕ್ಕೇ ಇಲ್ಲದ ದೆಹಲಿಯ ರಸ್ತೆಗಳಲ್ಲಿ ಮಂಜಿನ ಮುಸುಕನ್ನು ಕಣ್ಣಲ್ಲಿ ಸೆಳೆಯುತ್ತಾ ಕಬ್ಬಡ್ಡಿ ತಂಡ ಏರ್ಪೋರ್ಟ್ ತಲುಪಿತು. ವಿಮಾನವನ್ನೇರುವ ಮುನ್ನ ನಡೆಯುವ ಎಲ್ಲಾ ಚೆಕ್ಕಿಂಗ್ ಪ್ರಕ್ರಿಯೆಗಳೆಲ್ಲ ಮುಗಿಯುವ ವೇಳೆಗೆ ಕೊಂಚ ವಿಳಂಬವಾದರೂ ಸಾವರಿಸಿಕೊಂಡು ಮುನ್ನಡೆದರು.
                  ವಿಮಾನದ ಒಳಕ್ಕೆ ಹೋದೊಡನೆ ಸೂರ್ಯನ್ ಅಲ್ಲಿದ್ದ  ಗಗನಸಖಿಯರ ಬಳಿ ಮಾತಿಗೆ ನಿಂತಿದ್ದ. ಮನಸು ಸೆಳೆಯಲು ಯತ್ನಿಸುತ್ತಿದ್ದ. ವಿನಯಚಂದ್ರನಿಗೆ ವಿಮಾನದಲ್ಲಿ ಕುಳಿತ ತಕ್ಷಣವೇ ನಿದ್ದೆ. ಕಣ್ಣುಬಿಡುವ ವೇಳೆಗೆ ಬಾಂಗ್ಲಾದೇಶದ ನೆತ್ತಿಯ ಮೇಲೆ ವಿಮಾನ ಹಾರಾಡುತ್ತಾ ಢಾಕಾದ ಹಜರತ್ ಶಾ ಜಲಾಲ್ ಅಂತರಾಷ್ಟ್ರೀಯ ವಿಮಾನದಲ್ಲಿ ಕಾಲೂರಲು ಹವಣಿಸುತ್ತಿತ್ತು. ಬಾಂಗ್ಲಾದೇಶದ ನೆಲಕ್ಕೆ ಕಾಲಿಡುವ ವೇಳೆಗೆ ಅಲ್ಲಿ ಬೆಳಗಿನ ಏಳು ಗಂಟೆ. ಅಂದರೆ ದೆಹಲಿಯಿಂದ ಮೂರುವರೆ ಗಂಟೆಗಳ ಪಯಣ. ಭಾರತಕ್ಕಿಂತ ಅರ್ಧಗಂಟೆ ಮುಂದಿದೆ ಬಾಂಗ್ಲಾದೇಶ. ಬೆಂಗಾಲಿಗಳಿಗೆ ಚುಮು ಚುಮು ಮುಂಜಾನೆ. ಬಾನಂಚಿನಲ್ಲಿ ನೇಸರನೂ ಕಣ್ಣುಬಿಡಲು ತಯಾರಾಗುತ್ತಿದ್ದ. ಆಗತಾನೆ ಎದ್ದು ಕಣ್ಣುಜ್ಜಿದ ಪರಿಣಾಮ ಕಣ್ಣು ಕೆಂಗಾಗಿದೆಯೇನೋ ಎಂದುಕೊಳ್ಳುವಂತೆ ಕಾಣುವ ನೇಸರ ಮನಸೆಳೆಯುತ್ತಿದ್ದ.
                ಎದ್ದವನಿಗೆ ಕೈಗೆ ಧರಿಸಿದ್ದ ವಾಚನ್ನು ನೋಡಿ ಒಮ್ಮೆ ದಿಘಿಲಾಯಿತು. ಏನೋ ಯಡವಟ್ಟಾಗಿದೆ.. ಭಾರತದಲ್ಲಿ, ಅದೂ ತನ್ನೂರಿನಲ್ಲಿದ್ದರೆ ಇನ್ನೂ ಐದೂವರೆಯೂ, ಆರು ಗಂಟೆಯೋ ಆಗಿರುವಂತಹ ಸಮಯ. ಆದರೆ ಇಲ್ಲಿ ಬೆಳ್ಳನೆ ಬೆಳಗಾಗಿದೆ. ಕೊನೆಗೆ ತಾನು ಬಾಂಗ್ಲಾದೇಶದಲ್ಲಿ ಇದ್ದೇನೆ ಎನ್ನುವುದು ಅರಿವಾಗಿ ಕೈಗಡಿಯಾರದ ಸಮಯವನ್ನು ಒಂದು ತಾಸು ಮುಂದೋಡಿಸಿದ. ಆಗ ಸಮಯಕ್ಕೆ ತಾಳೆಯಾದಂತೆನ್ನಿಸಿತು. ನಿರಾಳನಾದ.
                 ಭಾರತ ತಂಡದ ಆಟಗಾರರನ್ನು ಎದುರುಗೊಳ್ಳಲು ಸಜ್ಜಾಗಿದ್ದ ಬಾಂಗ್ಲಾದೇಶದ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಅವರಿಗೊಂದು ಬಸ್ಸನ್ನೂ ತಯಾರು ಮಾಡಲಾಗಿತ್ತು, ಸಾಮಾನ್ಯವಾಗಿ ಕ್ರಿಕೇಟಿಗರಿಗೆ ಅದ್ಧೂರಿ, ಐಶಾರಾಮಿ ಬಸ್ಸುಗಳನ್ನು ನೀಡಲಾಗುತ್ತದೆ. ಆದರೆ ಕಬ್ಬಡ್ಡಿ ಆಟಗಾರರಿಗೆ ಸಂಚಾರಕ್ಕೆ ನೀಡಲಾದ ಬಸ್ಸು ಅದ್ಧೂರಿಯಾಗಿರದಿದ್ದರೂ ಚನ್ನಾಗಿತ್ತು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧ, ದಂಗೆ, ಗಲಾಟೆಯ ನೆಪದಿಂದ ಎಲ್ಲಿ ಆಟಗಾರರು ಭದ್ರತೆಯ ನೆಪವೊಡ್ಡಿ ಆಗಮಿಸಲು ಹಿಂದೇಟು ಹಾಕುತ್ತಾರೋ ಎನ್ನುವ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ಮಾಡಿತ್ತು. ಬೆಂಗಾಲಿ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಪರವಾಗಿಲ್ಲ, ಕಬ್ಬಡ್ಡಿ ಆಟಗಾರರಿಗೂ ಸುಮಾರು ಬೆಲೆಯಿದೆ ಎಂದುಕೊಂಡ ವಿನಯಚಂದ್ರ. ತಕ್ಕಮಟ್ಟಿಗೆ ಸಿದ್ಧತೆಗಳು ನಡೆದಿದ್ದವು.
                    ಬಾಂಗ್ಲಾದೇಶದ ಹೊರವಲಯಕ್ಕೆ ಅವರನ್ನು ಹೊತ್ತ ಬಸ್ಸು ಕರೆದೊಯ್ಯಿತು. ಢಾಕಾದ ಜಿಯಾವುರ್ ಹೊಟೆಲ್ ಎಂಬ ಐಶಾರಾಮಿ ಹೊಟೆಲಿನಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿತ್ತು. ಈ ಹೊಟೆಲಿನಿಂದ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯಲಿದ್ದ ನ್ಯಾಷನಲ್ ಸ್ಟೇಡಿಯಂ ಅಜಮಾಸು ಆರೆಂಟು ಕಿ.ಮಿ ದೂರದಲ್ಲಿತ್ತು. ಭಾರತದ ಕಬ್ಬಡ್ಡಿ ತಂಡ ಉಳಿದುಕೊಂಡಿದ್ದ  ಹೊಟೆಲಿನಲ್ಲಿಯೇ ಎರಡು-ಮೂರು ವಿದೇಶಿ ತಂಡಗಳಿಗೂ ವಾಸ್ತವ್ಯದ ಏರ್ಪಾಡು ಮಾಡಲಾಗಿತ್ತು. ಭಾರತದ ತಂಡ ಬಾಂಗ್ಲಾದೇಶವನ್ನು ತಲುಪಿದ ಐದು ದಿನಗಳ ನಂತರ ಕಬ್ಬಡ್ಡಿ ವಿಶ್ವಕಪ್ ಪಂದ್ಯಾವಳಿಗಳು ಜರುಗಲಿದ್ದವು. ಮೊದಲ ಪಂದ್ಯದಲ್ಲಿ ಸ್ಥಳೀಯ ಬಾಂಗ್ಲಾದೇಶ ತಂಡವು ದಕ್ಷಿಣ ಆಪ್ರಿಕಾ ತಂಡದೊಂದಿಗೆ ಆಡಲಿತ್ತು. ಅದೇ ದಿನ ಎರಡನೇ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿತ್ತು.
                    ಪ್ರತಿದಿನ ಎರಡು-ಮೂರು ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಒಂದೊಂದು ಗುಂಪಿನಲ್ಲಿದ್ದ ಎಂಟೆಂಟು ತಂಡಗಳಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದ ಅಥವಾ ಅತ್ಯಂತ ಹೆಚ್ಚು ಪಾಯಿಂಟ್ ಗಳಿಸಿದ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ತಲುಪುತ್ತಿದ್ದವು. ಕ್ವಾರ್ಟರ್ ಫೈನಲ್ಲಿನಲ್ಲಿ 8 ತಂಟಗಳ ನಡುವೆ ಹಣಾಹಣಿ ನಡೆದು ಅದರಲ್ಲಿ 4 ತಂಡಗಳು ಸೆಮಿಫೈನಲ್ಲಿಗೆ ತೇರ್ಗಡೆಯಾಗುತ್ತಿದ್ದವು. ನಂತರ ಫೈನಲ್ ನಡೆಯಲಿತ್ತು. ದಿನಗಳೆದಂತೆಲ್ಲ ಕಬ್ಬಡ್ಡಿ ಆಟದ ರೋಚಕತೆ ವಿನಯಚಂದ್ರನ ಅರಿವಿಗೆ ಬರಲು ಆರಂಭವಾಗಿತ್ತು.
                   ವಿನಯಚಂದ್ರ ಹಾಗೂ ತಂಡ ಹೊಟೆಲಿಗೆ ಬಂದಿಳಿದ ನಂತರ ಇಲ್ಲಿ ಜಾಧವರ ಬಳಿ ಹೇಳಿ ಸೂರ್ಯನ್ ನನ್ನು ತನ್ನ ರೂಮ್ ಮೇಟ್ ಮಾಡಿಕೊಂಡ. ಬಂದವನೆ ಹೊಟೆಲಿನಲ್ಲಿ ತಿಂಡಿ ತಿಂದು ಫ್ರಶ್ ಆದ. ಅರೆರಾತ್ರಿಯಲ್ಲಿ ಎದ್ದು ಹೊರಟಿದ್ದರಿಂದ ನಿದ್ದೆ ಬಾಕಿಯಿದ್ದ ಕಾರಣ ಚಿಕ್ಕದೊಂದು ನಿದ್ದೆ ಮಾಡಬೇಕೆಂದು ಹಾಸಿಗೆಯಲ್ಲಿ ಅಡ್ಡಾದವನಿಗೆ ಸಮಯ ಜಾರಿದ್ದೇ ತಿಳಿಯಲಿಲ್ಲ. ಎಚ್ಚರಾಗುವ ವೇಳೆಗೆ ಸೂರ್ಯನ್ ಇರಲಿಲ್ಲ. ಎಲ್ಲಿ ಹೋದನೋ ಪುಣ್ಯಾತ್ಮ ಎಂದು ಹಲುಬಿಕೊಂಡು ಕೋಣೆಯನ್ನು ಹುಡುಕಿದ. ಸೂರ್ಯನ್ ಸುಳಿವಿರಲಿಲ್ಲ.
                 ಸೀದಾ ಹೊರ ಬಂದು ಹೊಟೆಲಿನ ಹೊರಭಾಗದಲ್ಲಿ ಅಡ್ಡಾಡಿದಂತೆ ಮಾಡಿದನಾದರೂ ಯಾಕೋ ಮನಸ್ಸು ಮಂಕಾಗಿತ್ತು. ಮತ್ತೆ ರೂಮೊಳಗೆ ಹೋದವನೇ ಅಲ್ಲಿದ್ದ ಟಿ.ವಿ.ಯನ್ನು ಹಚ್ಚಿದ. ಟಿ.ವಿಯಲ್ಲಿ ಯಾವುದೋ ಚಾನಲ್ಲಿನಲ್ಲಿ ಹೆಸರಾಂತ ಅಥ್ಲಿಟ್ ಸೈಕಲಿಂಗ್ ಪಟು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಜೀವನದ ಕುರಿತು ಚಿತ್ರಣ ಬಿತ್ತರವಾಗುತ್ತಿತ್ತು. ನೋಡುತ್ತ ನೋಡುತ್ತ ತನ್ನ ನೆನಪಿನಾಳಕ್ಕೆ ಜಾರಿದ.
                 ಎಲ್ಲರೂ ನಡೆದ ದಾರಿಯಲ್ಲಿ ತಾನು ನಡೆಯಬಾರದು. ಬೇರೆಯದೇ ಆದ ಒಂದು ದಾರಿಯಲ್ಲಿ ಸಾಗಿ ಕೆಲವರನ್ನಾದರೂ ತನ್ನ ದಾರಿಯಲ್ಲಿ ಕರೆದುಕೊಂಡು ಬರಬೇಕು ಎನ್ನುವುದು ವಿನಯಚಂದ್ರನ ಭಾವನೆ. ಓರಗೆಯ ಹುಡುಗರು ಕ್ರಿಕೆಟ್ ಬ್ಯಾಟನ್ನು ಎತ್ತಿಕೊಂಡು ಮೈದಾನಗಳಲ್ಲಿ ಓಡತೊಡಗಿದ್ದರೆ ಈತ ಮಾತ್ರ ಕಬ್ಬಡ್ಡಿ ಕಬ್ಬಡ್ಡಿ ಎನ್ನತೊಡಗಿದ್ದುದು ಹಲವರಿಗೆ ವಿಚಿತ್ರವಾಗಿತ್ತು. ಕಬ್ಬಡ್ಡಿ ಆಡುವ ವಿನಯಚಂದ್ರ ಸಮಾ ಇಲ್ಲ ಎಂದು ಮಾತನಾಡುತ್ತಿದ್ದರೂ ಆ ಬಗ್ಗೆ ವಿನಯಚಂದ್ರ ತಲೆಕೆಡಿಸಿಕೊಂಡಿರಲಿಲ್ಲ.
                  ಮನೆಯಲ್ಲಿ ತಾನು ಬೆಳೆದ ಪರಿಸರ ಸಸ್ಯಾಹಾರದ್ದಾದದ್ದರಿಂದ ಚಿದಂಬರ ಅವರು ಮೊಟ್ಟಮೊದಲು ಎಗ್ ರೈಸ್ ತಿನ್ನಲು ಹೇಳಿದಾಗ ಮುಖ ಕಿವಿಚಿದ್ದ ವಿನಯಚಂದ್ರ. ಆದರೆ ಆತನ ಆಟಕ್ಕೆ ಮೊಟ್ಟೆಯನ್ನ ಪೂರಕವಾಗಿತ್ತಾದ್ದರಿಂದ ಅದನ್ನು ರೂಢಿಸಿಕೊಂಡಿದ್ದ. ಈಗೀಗ ಮೊಟ್ಟೆಯನ್ನ ಆತನ ಪರಮ ಇಷ್ಟದ ತಿಂಡಿಯಾಗಿತ್ತು. ಕಬ್ಬಡ್ಡಿಯ ಕಾರಣದಿಂದಲೇ ತಾನು ಭಾರತದ ಹಲವಾರು ರಾಜ್ಯಗಳಿಗೆ ತಿರುಗಿದ್ದೂ ವಿನಯಚಂದ್ರನ ನೆನಪಿಗೆ ಬಂದಿತು. ಪಶ್ಚಿಮ ಬಂಗಾಳಕ್ಕೆ ಬಂದಿದ್ದ ಆತ ಅಲ್ಲಿನ ಗಡಿಯಲ್ಲೊಮ್ಮೆ ನಿಂತು ಬಾಂಗ್ಲಾದೇಶವನ್ನು ನೋಡಿದ್ದ. ಭೂಮಿ ಒಂದೇ ಥರಾ ಇದೆ.. ನೋಡಲಿಕ್ಕೆ ಎಂತದ್ದೂ ವ್ಯತ್ಯಾಸ ಇಲ್ಲವಲ್ಲಾ ಎಂದುಕೊಂಡಿದ್ದ. ಅದ್ಯಾರೋ ಒಬ್ಬಾತ ಎದುರಿಗಿದ್ದ ಗಡಿಯನ್ನು ತೋರಿಸಿ ಅದೋ ನೋಡಿ ಆ ಬೆಟ್ಟ ಕಾಣ್ತದಲ್ಲಾ ಅಲ್ಲಿಂದ ಬಾಂಗ್ಲಾದೇಶ ಆರಂಭವಾಗುತ್ತದೆ..ಎಂದು ಹೇಳಿದ್ದ. ಮುಂದೊಂದಿನ ಬಾಂಗ್ಲಾಕ್ಕೆ ಹೋಗಬೇಕು ಎಂದು ಆಗಲೇ ಅಂದುಕೊಂಡಿದ್ದ. ಅದು ರೂಪದಲ್ಲಾಗುತ್ತದೆ ಎಂಬ ಭಾವನೆ ಖಂಡಿತ ಇರಲಿಲ್ಲ ಬಿಡಿ.
                  `ಯಾವುದೇ ದೇಶಕ್ಕೆ ಬೇಕಾದರೂ ಹೋಗು ನೀನು. ಅಲ್ಲಿನ ಮಣ್ಣುಗಳೆಲ್ಲ ಒಂದೆ... ನೀ ಹೋದ ದೇಶದಲ್ಲಿ ನಮ್ಮ ದೇಶದ ಪ್ರಕೃತಿ, ವಾತಾವರಣವನ್ನು ನೀನು ಕಲ್ಪಿಸಿಕೊಳ್ಳುತ್ತ ಹೋಗ್ತೀಯಾ ವಿನು.. ನೀನು ಹೋದಕಡೆಯಲ್ಲಿಯೂ ನಿಮ್ಮೂರಿನಂತಹ ಊರಿದೆಯಾ ಎಂದು ಹುಡುಕಲು ಆರಂಭ ಮಾಡುತ್ತೀಯಾ' ಎಂದು ತಮ್ಮದೇ ಊರಿನಿಂದ ವಿದೇಶಕ್ಕೆ ಹೋಗಿ ನೆಲೆಸಿರುವ ಒಬ್ಬ ವ್ಯಕ್ತಿ ಹೇಳಿದ್ದ. ಅದೆಲ್ಲವೂ ವಿನಯಚಂದ್ರನಿಗೆ ನೆನಪಾಯಿತು.
                  ಬಾಂಗ್ಲಾದೇಶದ ಸರಹದ್ದಿಗೆ ಬಂದ ನಂತರ ಕೋಚ್ ಜಾಧವ್ ಅವರು ಎಲ್ಲಾ ಆಟಗಾರರಿಗೆ ಬಾಗ್ಲಾದೇಶದ ಸಿಮ್ ಕಾರ್ಡನ್ನು ನೀಡಿದ್ದರು. ತಕ್ಷಣ ತನ್ನ ಮನೆಗೆ ಪೋನಾಯಿಸಿ ಮಾತನಾಡಿದ. ಬಾಂಗ್ಲಾದೇಶಕ್ಕೆ ತಾನು ಸುರಕ್ಷಿತವಾಗಿ ಬಂದಿರುವುದನ್ನು ಹೇಳಿದಾಗ ಮನೆಯ ಸದಸ್ಯರೆಲ್ಲ ಸಂತಸಪಟ್ಟರು. ಚಿದಂಬರ ಅವರಿಗೂ ದೂರವಾಣಿ ಕರೆ ಮಾಡಿದ. ಅವರು ಉಭಯಕುಶಲೋಪರಿಯ ಜೊತೆಗೆ ಸಲಹೆಗಳನ್ನೂ ನೀಡಿದರು. ಸಂಜಯನಿಗೆ ಅಪರೂಪಕ್ಕೆಂಬಂತೆ ಕರೆ ಮಾಡಿದ.
ಸಂಜಯ `ಬಾಂಗ್ಲಾದಲ್ಲಿ ಕನ್ನಡಿಗನ ವಿಜಯ ಯಾತ್ರೆ..' ಎನ್ನುವ ತಲೆಬರಹದ ಸುದ್ದಿ ತಯಾರಿಸಲು ನಾನು ತುದಿಗಾಲಲ್ಲಿದ್ದೇನೆ. ಯಶಸ್ಸು ನಿನ್ನಿಂದ ಬರಲಿ ಎಂದು ಹಾರೈಸಿದ.
                  ಮಾತನಾಡುತ್ತ ಬಾಂಗ್ಲಾದೇಶದ ಸುಂದರಿಯರ ಬಗ್ಗೆ, ಅಲ್ಲಿನ ಹಿಂದೂ ಹುಡುಗಿಯರ ಬಗ್ಗೆ, ಅತ್ಯಲ್ಪ ಸಂಖ್ಯೆಯಲ್ಲಿದ್ರೂ ಚನ್ನಾಗಿರುವ ಬೆಂಗಾಲಿ ಬ್ರಾಹ್ಮಣರ ಬಗ್ಗೆ ಸಂಜಯ ವಿವರಗಳನ್ನು ನೀಡಿದ. ವಿನಯಚಂದ್ರ ಅದಕ್ಕೆ ಪ್ರತಿಯಾಗಿ ಉತ್ತರಿಸುತ್ತ ಅಂತವರು ಸಿಕ್ಕತೆ ಖಂಡಿತ ಮಾತನಾಡಿಸುತ್ತೇನೆ ಎಂದೂ ಹೇಳಿದ.
                  `ಬರಿ ಮಾತನಾಡಿಸಬೇಡ ಮಾರಾಯಾ.. ಅವರ ಬಗ್ಗೆ ಹೆಚ್ಚು ತಿಳಿದುಕೊ.. ನೀನು ಭಾರತಕ್ಕೆ ಮರಳಿದ ನಂತರ ನಮ್ಮ ಪತ್ರಿಕೆಗೆ ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಒಂದು ಸುಂದರ ಲೇಖನವನ್ನೂ ಬರೆದುಕೊಡು..' ಎಂದು ತಾಕೀತು ಮಾಡಿದ.
                   `ಖಂಡಿತ..' ಎಂದವನಿಗೆ ತಾನು ಬರಹಗಳನ್ನು ಬರೆಯದೇ ಎಷ್ಟು ಕಾಲವಾಯ್ತಲ್ಲ ಎಂದುಕೊಂಡ...ಟಿ.ವಿಯಲ್ಲಿ ಆರ್ಮಸ್ಟ್ರಾಂಗ್ ಬಗ್ಗೆ ಬರುತ್ತಿದ್ದ ವೀಡಿಯೋ ಮುಗಿದಿತ್ತು. 20ಕ್ಕೂ ಹೆಚ್ಚು ಬಾರಿ ಟೂರ್ ಡಿ ಪ್ರಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವನು ಲ್ಯಾನ್ಸ್ ಆರ್ಮಸ್ಟ್ರಾಂಗ್. ವೃಷಣದ ಕ್ಯಾನ್ಸರ್ ಗೆ ತುತ್ತಾಗಿದ್ದರೂ ಮತ್ತೆ ಎದ್ದು ಬಂದು ವಿಜಯ ದುಂಧುಬಿ ಭಾರಿಸಿದವನು ಆತ. ಕೊನೆಯಲ್ಲಿ ಮಾತ್ರ ಉದ್ದೀಪನ ಮದ್ದು ಸೇವನೆ ಮಾಡಿದ್ದು ನಿಜವೆಂದು ಸಾಬೀತಾದಾಗ ತನ್ನೆಲ್ಲ ಪದಕಗಳನ್ನೂ ವಾಪಾಸು ನೀಡಿದವನು ಆತ. ಆತನ ಜೀವನ ಕಥೆಯನ್ನು ನೋಡಿ ಕ್ಷಣಕಾಲ ಕಸಿವಿಸಿಗೊಂಡ ವಿನಯಚಂದ್ರ. ಆ ಕಾರ್ಯಕ್ರಮದ ನಂತರ ಟಿ.ವಿಯಲ್ಲಿ ಇನ್ನೇನೋ ಬೆಂಗಾಲಿ ನರ್ತನ ಶುರುವಾಗಿತ್ತು.. ಹೊಟೆಲ್ ರೂಮ್ ತಡಕಾಡಿದವನಿಗೆ ಒಂದಿಷ್ಟು ಖಾಲಿಹಾಳೆಗಳು ಸಿಕ್ಕವು. ಪೆನ್ ಕೈಗೆತ್ತಿಕೊಂಡವನೇ ಅಕ್ಷರಗಳನ್ನು ಪೋಣಿಸಲು ಶುರುಮಾಡಿಕೊಂಡ..
ಹಾಗೆ ಸುಮ್ಮನೇ ಹಾಳೆಯ ಮೇಲೆ..
`ನಿನ್ನ ಪ್ರೀತಿಗೆ ಒಳ್ಳೆಯವನಲ್ಲ..
ನಿಜ ಗೆಳತಿ
ಒಳ್ಳೆಯವ ನಲ್ಲ..'
ಎಂದು ಬರೆದ.. ಯಾಕೋ ಮನಸ್ಸು ಖುಷಿಗೊಂಡಂತಾಯಿತು. ತನ್ನನ್ನೇ ತಾನು ಭೇಷ್ ಎಂದುಕೊಳ್ಳುವಷ್ಟರಲ್ಲಿ `ಸಾರಿ ಯಾರ್.. ಈ ಹುಡುಗೀರು.. ಎಲ್ಲೋದ್ರೂ ನನ್ನನ್ನು ಕಾಡ್ತಾರೆ.. ಏನ್ ಮಾಡೋದು.. ಹೊರಗಡೆ ಗಾರ್ಡನ್ನಿನಲ್ಲಿ ಅಡ್ಡಾಡಲು ಹೋಗಿದ್ದೆ..' ಎಂದುಕೊಳ್ಳುತ್ತ ಒಳಬಂದ ಸೂರ್ಯನ್..
                 ವಿನಯಚಂದ್ರನಿಗೆ ಒಮ್ಮೆ ರಸಭಂಗವಾದಂತಾಯಿತಾದರೂ ಸುಮ್ಮನಾದ. ಸೂರ್ಯನ್ ಈತನ ಕೈಲ್ಲಿನ ಹಾಳೆ ಕಿತ್ತುಕೊಂಡ. `ವಾಟ್ ಈಸ್ ದಿಸ್..' ಎಂದ..
`ಹೆ.. ಹೆ.. ಕನ್ನಡದಲ್ಲಿ ಏನೋ ಒಂದು ಸುಮ್ಮನೆ ಗೀಚಿದ್ದೇನೆ..' ಎಂದ..
`ಏನಪ್ಪಾ ಅದು.. ನಂಗೆ ಗೊತ್ತಾಗಬಾರದು ಎಂತ ಹಿಂಗೆ ಮಾಡಿದ್ದೀಯಾ..?..'
                  `ಹಂಗೇನಿಲ್ಲ ಮಾರಾಯಾ.. ತಾಳು ಅದನ್ನು ಹಿಂದಿಗೆ ಅನುವಾದಿಸಿ ಹೇಳುತ್ತೇನೆ..' ಎಂದು ವಿನಯಚಂದ್ರ ಹಿಂದಿಯಲ್ಲಿ ಉಸುರಿದ. ಸೂರ್ಯನ್ ಹಿಂದಿಯ ಅವತರಣಿಕೆಯ ಆ ಸಾಲುಗಳನ್ನು ಕೇಳಿ ಖುಷಿಯಾಗಿ `ನೀನು ಬರೀತಿಯಾ.. ಮೊದಲೇ ಹೇಳಿದ್ದರೆ ಸುಮಾರಷ್ಟು ಪ್ರೇಮಪತ್ರಗಳನ್ನು ಬರೆಸಿಕೊಳ್ಳಬಹುದಿತ್ತಲ್ಲ ಮಾರಾಯಾ.. ಎಂತಾ ಛಾನ್ಸು ತಪ್ಪಿಹೋಯಿತು.. ಇರ್ಲಿ ಬಿಡು.. ಹಿಂಗೆ ಬರೀತಾ ಇರು.. ಬರೆದಿದ್ದನ್ನು ನನಗೆ ಕೊಡು.. ನಾನು ಹೇಳಿದಾಗಲೆಲ್ಲ ನೀನು ಬರೆದುಕೊಡು. ನಂಗೆ ಹೇಳು.. ನಾನು ಅದರಿಂದ ಒಂದಷ್ಟು ಹುಡುಗಿಯರನ್ನು ಸಂಪಾದಿಸಿಕೊಳ್ಳುತ್ತೇನೆ..' ಎಂದು ಕಣ್ಣು ಮಿಟುಕಿಸಿದ.
                ವಿನಯಚಂದ್ರ ಪೆಚ್ಚುನಗೆ ಬೀರೀದ. ಅಷ್ಟರಲ್ಲಿ ರೂಮಿನ ಬಾಗಿಲು ಸದ್ದಾಯಿತು. ವಿನಯಚಂದ್ರ `ಯಾರು..' ಎಂದ. ಹುಡುಗಿಯೊಬ್ಬಳ ಧ್ವನಿ ಕೇಳಿಸಿತು. ಹೋಗಿ ಬಾಗಿಲು ತೆರೆದ.. ಬಾಗಿಲ ಎದುರಲ್ಲಿ ಒಬ್ಬಾಕೆ ನಿಂತಿದ್ದಳು. ಪಕ್ಕಾ ಬೆಂಗಾಲಿ ಕಾಟನ್ ಸೀರೆಯನ್ನುಟ್ಟ ಯುವತಿ. ಈಗತಾನೆ ಸ್ವರ್ಗದಿಂದಿಳಿದು ಬಂದಳೋ ಎನ್ನುವಷ್ಟು ಚನ್ನಾಗಿದ್ದಳು. ಬಿಳಿಬಣ್ಣದ ಸೀರೆ, ಚಿನ್ನದ ಬಣ್ಣದ  ಅಂಚಿನಲ್ಲಿ ಮತ್ತಷ್ಟು ಚನ್ನಾಗಿ ಕಾಣುತ್ತಿದ್ದಳು. ಬೆಂಗಾಲಿಯರು ಯಾವು ಯಾವುದೋ ವಿಚಿತ್ರ ಸೀರೆಗಳನ್ನು ಧರಿಸುತ್ತಾರೆ ಎಂದುಕೊಳ್ಳುತ್ತಿದ್ದ ವಿನಯಚಂದ್ರನಿಗೆ ಬೆಂಗಾಲಿ ಸೀರೆಗೆ ಈ ಹುಡುಗಿಯಿಂದ ಮತ್ತಷ್ಟು ಮೆರಗು ಬಂದಂತಾಗಿದೆ ಎಂದುಕೊಂಡ.
                ಬೆಂಗಾಲಿಗಳು ಚನ್ನಾಗಿರುತ್ತಾರೆ. ಆದರೆ ಬಿಳಿ ಬಣ್ಣದ ಸೀರೆ ಉಡುತ್ತಾರೆ. ತಥ್.. ಬಿಳಿ ಬಣ್ಣದ ಮೇಲೆ ಅದೇನೇನೋ ಬಗೆ ಬಗೆಯ ಚಿತ್ತಾರಗಳು. ನಮ್ ಕಡೆ ಬಿಳಿ ಸೀರೆ ಉಟ್ಟರೆ ಬೇರೆಯದೇ ಅರ್ಥವಿದೆ. ಆದರೆ ಈ ಹುಡುಗಿ ಬಿಳಿ ಸೀರೆ ಉಟ್ಟರೂ ಚನ್ನಾಗಿ ಕಾಣುತ್ತಾಳಲ್ಲಾ ಎಂದುಕೊಂಡ ವಿನಯಚಂದ್ರ.
                ಅರ್ಧಕ್ಕೆ ನಿಂತ ಕವಿತೆ ಇನ್ನೇನು ಹೊರಬರಬೇಕು ಎಂದು ತವಕಿಸುವಂತಿತ್ತು. ಬಾಗಿಲ ಎದುರು ನಿಂತವಳನ್ನು ಹಾಗೆಯೇ ದಿಟ್ಟಿಸುತ್ತಿದ್ದ. ಎದುರಿದ್ದಾಕೆ ಕಸಿವಿಸಿಗೊಂಡಿರಬೇಕು. ಆದರೆ ವಿನಯಚಂದ್ರನ ಮನಸ್ಸಿಗೆ ಅದು ಗೊತ್ತಾಗಲಿಲ್ಲ. ವಿನಯಚಂದ್ರನ ಮನಸ್ಸಿನಲ್ಲಿ ತರಂಗಗಳೆದ್ದಿದ್ದವು. ಅವನಿಗೆ ಅದು ಅರ್ಥವಾಗುತ್ತಿರಲಿಲ್ಲ. `ವಿನು.. ಯಾರೋ ಅದು..' ಎಂದು ಸೂರ್ಯನ್ ಹಿಂದಿನಿಂದ ಕೂಗದಿದ್ದರೆ ವಿನಯಚಂದ್ರ ಇನ್ನೆಷ್ಟು ಹೊತ್ತು ಹಾಗೆ ಅವಳನ್ನು ನೋಡುತ್ತ ನಿಲ್ಲುತ್ತಿದ್ದನೋ..

(ಮುಂದುವರಿಯುತ್ತದೆ..)

No comments:

Post a Comment