Sunday, August 31, 2014

ನಮ್ಮೂರ ಹಸಿರಹೊಲ


ಹಸಿರು ಗಿರಿ ಕಾನನದ ನಡು ನಡುವೆ
ಅಗೋ ಅಲ್ಲಿ, ನೋಡಲ್ಲಿ, ಕಾಣುತ್ತಿದೆ
ನಮ್ಮುರ ಹಸಿರು ಹೊಲ |

ಅಕ್ಕಪಕ್ಕದಿ ಗುಡ್ಡ, ದೈತ್ಯಮರ
ಹಸಿರು ತೆನೆ, ಮರತೆಂಗು
ಅಲ್ಲಿ ಮೆರೆದಿತ್ತು ಹೊಲ |

ಕೆಂಪು ಕಂಪಿನ ನೆಲ
ಅಘನಾಶಿನಿಯ ಜೊತೆ ಜುಳು ಜುಳು ತಾಳ
ನಡುವೆ ನಗುತ್ತಿತ್ತು ನಮ್ಮೂರ ಹೊಲ |

ಅಡಿಕೆ ತೋಟದ ನಡುವೆ
ಜವುಗು ಬರಡಿನ ಜೊತೆಗೆ
ಬದುಕಿ ನಿಂತಿತ್ತು ನಮ್ಮೂರ ಹೊಲ |

ಭತ್ತ ಧಾನ್ಯದ ಉಳುಮೆ
ಕಬ್ಬು-ಸೇಂಗಾದ ಮೊಳಕೆ
ಬೆಳೆ ಬೆಳೆದಿತ್ತು ನಮ್ಮೂರ ಹೊಲ |

ಹಸಿದವಗೆ ಜೀವ,
ಜೀವ ಸಂಕುಲಕ್ಕೆ ಆಹಾರ ಜಾಲ
ಇದೇ ಈ ನಮ್ಮುರ ಹೊಲ |

**

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 9-11-2007ರಂದು)

Thursday, August 28, 2014

ಮತ್ತಿನ್ನೊಂದಿಷ್ಟು ಹನಿ ಚುಟುಕಗಳು

ಹೆಸರು

ಕನ್ನಡದ ಮೇರು ನಟ
ಡಾ. ರಾಜ್ಕುಮಾರ್.
ಅವರ ಮಗ ರಾಘವೇಂದ್ರ ರಾಜ್ಕುಮಾರ್
ಅವರ ಮಗ 
ವಿನಯ ರಾಜ್ಕುಮಾರ್..
ಅವನಿಗೆ ಮಗುವಾದರೆ
............. ರಾಜ್ಕುಮಾರ್
ಅಂತ ಹೆಸರಿಡಬಹುದೇನೋ..!!

ತಲೆಮಾರು

ಹಿಂದಿಯಲ್ಲಿ
ಮುಖೇಶ್ ಕುಮಾರ್
ಅದ್ಭುತ ಹಾಡುಗಾರರು.
ಅವರ ಮಗ ನಿತಿನ್ ಮುಖೇಶ್..
ನಿತಿನ್ ಮುಖೇಶ್ ಮಗ
ನೀಲ್ ನಿತಿನ್ ಮುಖೇಶ್..
ನೀಲ್ ನಿತಿನ್ ಗೆ ಮಗುವಾದರೆ
..... ನೀಲ್ ನಿತಿನ್ ಮುಖೇಶ್..
ಅಂತಿರಬಹುದಾ?

ಸಾಧ್ಯತೆ

ಒಂದು ವೇಳೆ
ದೇವೆಗೌಡರ ಜೆಡಿಎಸ್ ಕೂಡ ಇಬ್ಭಾಗವಾದರೆ
ಒಂದು ಭಾಗಕ್ಕೆ ಕುಮಾರಸ್ವಾಮಿ ಹಾಗೂ ಇನ್ನೊಂದು ಭಾಗಕ್ಕೆ ರೇವಣ್ಣ 
ಮುಖ್ಯಸ್ಥರಾದರೆ.. ಇಬ್ಭಾಗವಾಗುವ ಪಕ್ಷದ ಹೆಸರುಗಳು
ಹೀಗಿರಬಹುದೇ?
ಜೆಡಿಎಸ್ (ಕೆ)
ಜೆಡಿಎಸ್ (ಆರ್)..

ಸೋಲು

ಕೈ ಪಕ್ಷ
ಕಮಲದ ಪಕ್ಷಗಳ
ಗಾಳಿಯಲ್ಲಿ
ಹೋರಾಡಲು
ವಿಫಲವಾಗಿ
ಕೈಚೆಲ್ಲಿದೆ
ಮುದ್ದೆ ಪಕ್ಷ..!!

ಗಣೇಶ ಚತುರ್ಥಿ

ವರ್ಷಕ್ಕೊಮ್ಮೆ ಬರುವನು
ಗೌರಿ ಮಗ ಗಣೇಶ
ತರುವನು ಹರುಷ |
ಸಡಗರ ಸಂತೋಷ,
ರಸ ನಿಮಿಷ|
ಈಶನ ಮಗ ಗಣೇಶ
ತರುವನು ಹೊಸ ಆಶಾ ||

Wednesday, August 27, 2014

ಬೆಂಗಾಲಿ ಸುಂದರಿ-23

(ನಂದನ ಪಾರ್ಕ್)
          ಬಾಂಗ್ಲಾ ನಾಡಿನಲ್ಲಿ ಯಾವ ಕ್ಷಣ ಹೇಗಿರ್ತದೋ ಯಾರೂ ಊಹೆ ಮಾಡುವುದು ಅಸಾಧ್ಯ. ಇವತ್ತು ಶಾಂತವಾಗಿದ್ದ ಜಾಗ ನಾಳೆ ಹಿಂಸಾಚಾರ ಪೀಡಿತವಾಗಲೂಬಹುದು. ಇಂದು ಹೊತ್ತು ಉರಿಯುವ ಪ್ರದೇಶ ನಾಳೆ ಶಾಂತವಾಗಲೂ ಬಹುದು. ಅಷ್ಟು ವಿಚಿತ್ರವಾದ ನಾಡು ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಾಲಿಗಳು ಎಷ್ಟು ಸ್ನೇಹಿತರೋ ಅಷ್ಟೇ ಸಿಟ್ಟಿನವರೂ ಕೂಡ. ಹೊಸದಾಗಿ ನೋಡುವವರಿಗೆ ಬಾಂಗ್ಲಾ ಸುಲಭಕ್ಕೆ ಅರ್ಥವಾಗುವುದಿಲ್ಲ. ವಿನಯಚಂದ್ರನ ಪಾಡೂ ಅದೇ ರೀತಿಯಾಗಿತ್ತು. ಹಲವು ಜನರು ಬಾಂಗ್ಲಾದ ಕುರಿತು ಹಲವು ಬಗೆಯಲ್ಲಿ ಹೇಳಿದ್ದರೂ ಈ ನಾಡು ಮಾತ್ರ ಅರ್ಥವಾಗಿರಲಿಲ್ಲ. ಪ್ರತಿ ದಿನ ಹೊಸ ಬಗೆಯಲ್ಲಿ ತಿಳಿಯುತ್ತ ಹೋಗುತ್ತಿತ್ತು ಬಾಂಗ್ಲಾ.
           ಸಲೀಂ ಚಾಚಾ ಕೂಡ ಬಾಂಗ್ಲಾ ನಾಡಿನ ಹಲವು ವೈಶಿಷ್ಟ್ಯಗಳ ಬಗ್ಗೆ ವಿವರಿಸುತ್ತ ಹೋಗುತ್ತಿದ್ದ. ಮಾತಿನ ನಡುವೆಯೆಲ್ಲೋ ಸಲೀಂ ಚಾಚಾ ಅಡಿಕೆಯ ಕುರಿತು ಹೇಳಿದ. ತಕ್ಷಣ ವಿನಯಚಂದ್ರನ ಕಿವಿ ನೆಟ್ಟಗಾಯಿತು. ಮಾತಿಗೆ ನಿಂತ ವಿನಯಚಂದ್ರ `ಅಡಿಕೆ ನಮ್ಮ ಜೀವನಾಧಾರ. ನಮ್ಮ ಮಲೆನಾಡಿನಲ್ಲಿ ಮನೆ ಮನೆಗಳಲ್ಲಿ ಅಡಿಕೆ ಬೆಳೆದು ಜೀವನ ನಡೆಸುತ್ತಾರೆ. ಆದರೆ ಬಾಂಗ್ಲಾದೇಶದ ಅಡಿಕೆಗಳು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತವೆ. ಭಾರತಕ್ಕೆ ಕಳ್ಳ ದಾರಿಯಲ್ಲಿ ಬಾಂಗ್ಲಾ ಅಡಿಕೆ ಬರುವ ಕಾರಣ ನಮ್ಮ ಅಡಿಕೆಗೆ ಬೆಲೆ ಪಾತಾಳಕ್ಕೆ ಕುಸಿಯುತ್ತಿವೆ. ಈಗೀಗ ಈ ಕಳ್ಳ ಸಾಗಾಣಿಕೆ ತಡೆಯಲು ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಬಾಂಗ್ಲಾ ನಾಡಿನಲ್ಲಿ ಈ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಾರೆ ಎಂದರೆ ಅಚ್ಚರಿಯಾಗುತ್ತಿದೆ..' ಎಂದ.
           `ಹುಂ.. ನಾನೂ ಈ ಬಗ್ಗೆ ಕೇಳಿದ್ದೆ. ಅನೇಕ ಬಾಂಗ್ಲಾ ಅಡಿಕೆ ಬೆಳೆಗಾರರು ನನಗೆ ಪರಿಚಯವಿದ್ದಾರೆ. ಅವರು ಆಗಾಗ ಮಾತನಾಡುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಅವರು ಭಾರತಕ್ಕೆ ನನ್ನ ಮಾಲು ಹೇಗಾದರೂ ಹೋಗಿಬಿಟ್ಟರೆ ಸಾಕು. ನಾನು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿರುತ್ತಾರೆ. ಭಾರತದ ಮಾರುಕಟ್ಟೆಯೇ ಇವರಿಗೂ ಜೀವನಾಧಾರ. ಎರಡೂ ರಾಷ್ಟ್ರಗಳು ಅಡಿಕೆ ಕುರಿತು ಒಪ್ಪಂದ ಮಾಡಿಕೊಂಡಿದ್ದರೆ ಇಲ್ಲಿನ ಅನೇಕ ಬೆಳೆಗಾರರು ಜೀವನ ಕಟ್ಟಿಕೊಳ್ಳುತ್ತಿದ್ದರು..' ಎಂದ ಸಲೀಂ ಚಾಚಾ.
            `ಇಲ್ಲ ಚಾಚಾ.. ನಮ್ಮಲ್ಲಿ ಅಡಿಕೆ ಹೇರಳವಾಗಿ ಬೆಳೆಯುತ್ತಾರೆ. ನಮ್ಮ ಅಡಿಕೆ ಫಸಲು ಬಹಳವಿರುವ ಕಾರಣ ಬೇರೆ ದೇಶಗಳ ಅಡಿಕೆ ಬೇಕಾಗುವುದೇ ಇಲ್ಲ. ನಮ್ಮ ಅಡಿಕೆ ಮಾರುಕಟ್ಟೆ ಹಾಳು ಮಾಡುವ ಸಲುವಾಗಿ ಕಡಿಮೆ ಬೆಲೆಯಲ್ಲಿ ಇಲ್ಲಿನ ಅಡಿಕೆ ಕೊಳ್ಳಲಾಗುತ್ತಿದೆ. ಹೀಗೆ ಮಾಡುವುದರಿಂದ ಬಾಂಗ್ಲಾ ಬೆಳೆಗಾರರಿಗೂ ಒಳ್ಳೆ ಬೆಲೆ ಸಿಗುವುದಿಲ್ಲ. ನಮ್ಮ ಅಡಿಕೆ ಬೆಳೆಗಾರರೂ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗುತ್ತದೆ. ಅದೇ ಕಾರಣಕ್ಕೆ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅಡಿಕೆ ಬೆಳೆಗಾರ ಅಲ್ಪ ಸ್ವಲ್ಪ ಹಣವನ್ನು ಕಾಣುವಂತಾಗಿದೆ..' ಎಂದ ವಿನಯಚಂದ್ರ. ಸಲೀಂ ಚಾಚಾ.. ಹುಂ ಎಂದು ದೀರ್ಘ ನಿಟ್ಟುಸಿರು ಬಿಟ್ಟ.
           ಅಲ್ಲೆಲ್ಲೋ ಸೈಕಲ್ ಚಾಲಿಸುತ್ತಿದ್ದವನು ಕೊಂಚ ಬಿಡುವು ಕೊಟ್ಟ ಚಾಚಾ. ನಿಲ್ಲಿಸಿದವನೇ ವಿನಯಚಂದ್ರನ ಬಳಿ ಬಲಗಡೆಯಲ್ಲಿ ಕೈಮಾಡಿ ತೋರಿಸುತ್ತ ಪನಿಸೈಲ್ ಆಚೆಗೆ ಭವಾನಿಪುರ ಅಂತೊಂದು ಪ್ರದೇಶವಿದೆ. ಅಲ್ಲಿ ಭವಾನಿ ದೇವಾಲಯವಿದೆ. ಬಹಳ ಚನ್ನಾಗಿದೆ. ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಬರುತ್ತಾರೆ ಎಂದ.  ಭಾರತದಲ್ಲಿ ಹಿಂದೂ ಊರುಗಳ ಹೆಸರುಗಳನ್ನೆಲ್ಲ ಅಹ್ಮದಾಬಾದ್, ಹೈದರಾಬಾದ್, ಫರೂಕಾಬಾದ್, ಹೀಗೆ ಮುಸ್ಲಿಂ ಹೆಸರುಗಳಾಗಿ ಬದಲಾಗಿದೆ. ಆದರೆ ಬಾಂಗ್ಲಾದಂತಹ ಮುಸಲ್ಮಾನರು ಬಹುಸಂಖ್ಯಾತರಾಗಿರುವ ದೇಶದಲ್ಲೂ ಹಿಂದೂ ಹೆಸರಾದ ಭವಾನಿಪುರವನ್ನು ಬದಲಾಯಿಸದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿ ತಂದಿತು. ನಿಜಕ್ಕೂ ಬಾಂಗ್ಲಾ ನಾಡು ಅಚ್ಚರಿಯ ಮೂಟೆಯಂತೆ ಅನ್ನಿಸಿತು.
            ಆದರೂ ವಿನಯಚಂದ್ರನ ಮನಸ್ಸಿನಲ್ಲಿ ಬಾಂಗ್ಲಾದಲ್ಲಿನ ಹಿಂಸಾಚಾರದ ಬಗ್ಗೆಯೇ ಆಲೋಚನೆಗಳು. ಇಷ್ಟೆಲ್ಲ ವಿಶಿಷ್ಟವಾಗಿರುವ ನಾಡಿನಲ್ಲೇಕೆ ಈ ಪರಿಯ ಹಿಂಸಾಚಾರ? ಯಾಕೋ ಅರ್ಥವಾಗಲಿಲ್ಲ. ತಲೆ ಕೊಡವಿದ. ಸಲೀಂ ಚಾಚಾ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ. ಸೈಕಲ್ ಏರಿದ ಕೆಲ ಸಮಯದಲ್ಲಿಯೇ ನಂದನ ಪಾರ್ಕ್ ಸಿಕ್ಕಿತು. ಸಲಿಂ ಚಾಚಾ ನಂದನ ಪಾರ್ಕಿನ ವಿಶೇಷತೆಗಳನ್ನು ತಿಳಿಸಿದ. ಇದೊಂದು ಫ್ಯಾಂಟಸಿ ಪಾರ್ಕ್ ಎಂದೂ ಹೇಳಿದ. ಇಲ್ಲಿಂದ ಮುಂದೆ ಅಪ್ಪಟ ಗ್ರಾಮೀಣ ಬಾಂಗ್ಲಾ ನಾಡು ತೆರೆದುಕೊಳ್ಳಲಿತ್ತು. ಬ್ರಹ್ಮಪುತ್ರಾ ನದಿಯ ವಿಶಾಲವಾದ ಹರವಿನ ಪ್ರದೇಶದಲ್ಲಿ ಸಾಗಬೇಕಿತ್ತು. ನಂದನ ಪಾರ್ಕಿನಿಂದ ನೇರ ರಸ್ತೆಯಲ್ಲಿ ಸಾಗಿದರೆ ಸಿಗುವ ಊರೇ ಚಂದ್ರ. ಊರಿಗೆ ಚಂದ್ರ ಎನ್ನುವ ಹೆಸರು ಇಡಲಾಗಿದೆ. ಎಷ್ಟು ಚೆಂದವಲ್ಲವಾ ಎಂದುಕೊಂಡ ವಿನಯಚಂದ್ರ. ತನ್ನ ಹೆಸರಲ್ಲೂ ಚಂದ್ರವಿದೆಯಲ್ಲ. ಊರ ಹೆಸರೂ ಚಂದ್ರ ಎಂದೂ ಅನ್ನಿಸಿತು ಆತನಿಗೆ. ಚಂದ್ರ ಎನ್ನುವ ಹೆಸರಿನ ಊರು ಹೇಗಿರಬಹುದು ಎನ್ನುವ ಕುತೂಹಲವೂ ಮೂಡಿತು. ಚಂದ್ರ ಊರಿಗೆ ಜಯದೇವಪುರ ಹಾಗೂ ತಂಗೈಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯೂ ಹಾದುಹೋಗಿದೆ. ಮುಂದೇ ಇದೇ ಮಾರ್ಗದಲ್ಲಿ ಸಾಗಬೇಕಾಗುತ್ತದೆ ಎಂದು ಮಾಹಿತಿ ನೀಡಿದ ಸಲೀಂ ಚಾಚಾ.
           ಮತ್ತೊಂದು ಹತ್ತು ಕಿ.ಮಿ ಪಯಣದ ನಂತರ ಸಿಕ್ಕಿತು ಚಂದ್ರ. ಅರ್ಧ ಗ್ರಾಮೀಣ ಅರ್ಧ ನಗರ ಪ್ರದೇಶ. ದೊಡ್ಡದೊಂದು ಸುಂದರ ಮಸೀದಿ ಇಲ್ಲಿದೆ. ಹಾಲುಬಿಳುಪಿನ ಮಸೀದಿಯ ಗುಮ್ಮಟದಲ್ಲಿ ಚಿನ್ನದ ಬಣ್ಣದ ಹಾಳೆಯ ಲೇಪನ ಮಾಡಿದ್ದು ಎಂತಹ ಪ್ರವಾಸಿಗರನ್ನೂ ಕೂಡ ಇದು ಸೆಳೆಯುತ್ತದೆ. ಚಂದ್ರ ನಗರಿಯ ಮುಖ್ಯ ವೃತ್ತದ ಬಳಿ ಸಾಗುತ್ತಿದ್ದಂತೆಯೇ ಈ ಊರಿನಲ್ಲಿ ಏನೋ ಸರಿಯಿಲ್ಲ ಎನ್ನಿಸಿತು. ಇದನ್ನು ಮೊದಲು ಗಮನಿಸಿದ್ದು ಸಲೀಂ ಚಾಚಾ. ಅಲ್ಲಲ್ಲಿ ಬ್ಯಾರಿಕೇಡ್ ಗಳಿದ್ದವು. ಕೆಲವು ಕಡೆಗಳಲ್ಲಿ ಪೊಲೀಸರೂ ನಿಂತಿದ್ದರು. ಈ ಊರಿನಲ್ಲಿ ಹಿಂಸಾಚಾರ ಶುರುವಾಗಿದೆಯಾ ಎಂದುಕೊಂಡರು ಸೈಕಲ್ ಮೇಲಣ ಪಯಣಿಗರು. ಹಾಗಾಗದಿದ್ದರೆ ಸಾಕು ಎನ್ನುವ ಬಾವವೂ ಮೂಡಿತು. ಅವ್ಯಕ್ತ ಭೀತಿಯ ನಡುವೆಯೇ ಸೈಕಲ್ ತುಳಿಯತೊಡಗಿದ ಸಲೀಂ ಚಾಚಾ.
(ಚಂದ್ರಾ ನಗರಿಯ ಸುಂದರ ಮಸೀದಿ)
           ಚಂದ್ರ ನಗರಿಯ ಫಾಸಲೆಯನ್ನು ಇನ್ನೇನು ದಾಟಬೇಕು ಎನ್ನುವಷ್ಟರಲ್ಲಿ ಒಬ್ಬ ಪೊಲೀಸಿನವನು ಇವರನ್ನು ಅಡ್ಡಗಟ್ಟಿದ. ಸೈಕಲ್ ನಿಲ್ಲಿಸಿದವನೇ ಲಾಠಿಯನ್ನೆತ್ತಿಕೊಂಡು ಗದರಿಸುತ್ತಲೇ ಬಂದ. ಸಲೀಂ ಚಾಚಾ ಸುಮ್ಮನೆ ನಿಂತಿದ್ದ. ಪೊಲೀಸಿನವನು ಬಯ್ಯುತ್ತಲೇ ಯಾರು ನೀವೆಲ್ಲ ಈ ಮುಂತಾಗಿಯೇ ವಿಚಾರಣೆ ಆರಂಭಿಸಿದ. ಸಲೀಂ ಚಾಚಾ ತನ್ನ ಮಗ ಹಾಗೂ ಸೊಸೆ ಸೈಕಲ್ ಮೇಲೆ ಸಾಗುತ್ತಿದ್ದಾರೆ. ಮಿರ್ಜಾಪುರಕ್ಕೆ ಸೈಕಲ್ ಮೇಲೆ ಬರುತ್ತೇವೆಂದೆ ಹರಕೆ ಹೊತ್ತುಕೊಂಡಿದ್ದೇವೆ ಎಂದ. ಆದರೂ ಪೊಲೀಸ ಸುಮ್ಮನಾಗಲಿಲ್ಲ. ಕೊನೆಗೆ ವಿನಯಚಂದ್ರನ ಬಳಿ ಬಂದು ಹೆಸರೇನು ಎಂದೆಲ್ಲ ಕೇಳಿದ. ಅದಕ್ಕೆ  ವಿನಯಚಂದ್ರ ಗಟ್ಟಿಯಾಗಿಯೇ `ಅಹಮದ್' ಎಂದ. ಪೊಲೀಸನ ಕಣ್ಣು ಮಧುಮಿತಾಳ ಮೇಲೆ ಬಿದ್ದಿತ್ತು. ಆಕೆಯನ್ನೇ ಪದೆ ಪದೆ ನೋಡಲಾರಂಭಿಸಿದ್ದ. ವಿನಯಚಂದ್ರನಿಗೆ ಕಸಿವಿಸಿಯಾಗಿತ್ತು. ಯಾಕೋ ಆಕೆಯ ಬಗ್ಗೆ ಅನುಮಾನ ಬಂದಂತೆ ಪೊಲೀಸ ವರ್ತನೆ ಮಾಡತೊಡಗಿದ. ಕೊನೆಗೆ ಮಧುಮಿತಾಳ ಬಗ್ಗೆ ವಿಚಾರಣೆ ಮಾಡಿದ. ಪೊಲೀಸ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟರೂ ಪೊಲೀಸಿನವ ಸೊಕಾ ಸುಮ್ಮನೆ ಗಲಾಟೆಯನ್ನು ಆರಂಭಿಸಿದ್ದ. ಸಲೀಂ ಚಾಚಾನಿಗೆ ಯಾಕೋ ಪರಿಸ್ಥಿತಿ ಹದ ತಪ್ಪುತ್ತಿದೆ ಎನ್ನಿಸಿತು. ವಿನಯಚಂದ್ರನೂ ನಿಧಾನವಾಗಿ ತಾಳ್ಮೆ ಕಳೆದುಕೊಳ್ಳುತ್ತಿದ್ದ.
             ಕೊನೆಗೊಮ್ಮೆ ಪೊಲೀಸ ವಿನಯಚಂದ್ರನ ಜೊತೆಗೂ ಗಲಾಟೆ ಆರಂಭಿಸಿದ. ವಿನಯಚಂದ್ರ ಹಲವು ಸಾರಿ ಪೊಲೀಸನನ್ನು ಸಮಾಧಾನ ಮಾಡಲು ನೋಡಿದ. ಕೊನೆಗೆ ಇದ್ದಕ್ಕಿದ್ದಂತೆ ಅದೇನನ್ನಿಸಿತೋ ಏನೋ ರಪ್ಪನೆ ಕಪಾಳಕ್ಕೆ ಬಾರಿಸಿಯೇ ಬಿಟ್ಟ. ವಿನಯಚಂದ್ರನ ಹೊಡೆತ ಯಾವ ರೀತಿಯಿತ್ತೆಂದರೆ ಒಂದು ಸಾರಿ ಪೊಲೀಸ ಹಿಂದಕ್ಕೆ ಸರಿದನಲ್ಲದೇ ಕೆನ್ನೆಯನ್ನು ಹಿಡಿದುಕೊಂಡು ಸುಧಾರಿಸಿಕೊಳ್ಳುತ್ತ ಕುಳಿತ. ಸಿಟ್ಟಿಗೆದ್ದ ವಿನಯಚಂದ್ರ ಹಿಂದಿಯಲ್ಲಿ ಬಯ್ಯಲು ಆರಂಭಿಸಿದ್ದ. ಪೊಲೀಸನಿಗೂ ಸಿಟ್ಟು ಬಂದಿತ್ತೇನೋ. ವಿನಯಚಂದ್ರನನ್ನು ಗುರಾಯಿಸತೊಡಗಿದ್ದ. ಸಲೀಂ ಚಾಚಾ ಮಾತ್ರ ಬಹು ದೊಡ್ಡ ತಪ್ಪು ಸಂಭವಿಸಿಬಿಟ್ಟಿತು ಎನ್ನುವಂತೆ ಭಯಭೀತನಾಗಿದ್ದ. ವಿನಯಚಂದ್ರ ಹೊಡೆಯಲಿಕ್ಕೆ ಹೊಡೆದಿದ್ದ. ಹೊಡೆದ ನಂತರವೇ ತಾನೆಂತ ಕೆಲಸ ಮಾಡಿದೆ ಎನ್ನುವ ಅರಿವಾಗತೊಡಗಿತ್ತು. ಪೊಲೀಸ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಷ್ಟರಲ್ಲೇ ಸಲೀಂ ಚಾಚಾ ಬೇಗ ಬೇಗನೆ ಸೈಕಲ್ ಹತ್ತಿ ಹೊರಟೇಬಿಟ್ಟಿದ್ದ. ಪೊಲೀಸ ಇದ್ದ ಜಾಗದಿಂದ ಕೆಲವು ಕಿ.ಮಿ ದಾಟಿ ಬಂದನಂತರವೇ ಎಲ್ಲರೂ ಸಮಾಧಾನಗೊಂಡಿದ್ದು.
            ಸಲೀಂ ಚಾಚಾ ಮೊದಲಿಗೆ ವಿನಯಚಂದ್ರನನ್ನು ತರಾಟೆಗೆ ತೆಗೆದುಕೊಂಡ. ಇಷ್ಟು ಸಿಟ್ಟಾಗುವುದು ಬೇಡವೇ ಬೇಡ. ಇಂತಹ ತಪ್ಪು ಮಾಡಿದರೆ ನೀವು ಬಾಂಗ್ಲಾ ನಾಡನ್ನು ದಾಟಿ ಭಾರತಕ್ಕೆ ಹೋಗುವುದೇ ಇಲ್ಲ. ಬಾಂಗ್ಲಾದ ಯಾವುದಾದರೂ ಒಂದು ಗದ್ದೆ ಬಯಲಿನಲ್ಲಿ ಖತಂ ಆಗುತ್ತೀರಿ. ಬಾಂಗ್ಲಾದ ಭತ್ತದ ಗದ್ದೆಗೆ ನಿಮ್ಮ ರಕ್ತ ನೀರಿನಂತೆ ಆಗುತ್ತದೆ. ಹೀಗೆ ಮಾಡಬೇಡ ಬೇಟಾ ಎಂದೂ ಹೇಳಿದ. ವಿನಯಚಂದ್ರ ಕೂಡ ತನ್ನರಿವಿಲ್ಲದಂತೇ ಈ ರೀತಿ ಆಗಿದ್ದೆಂದೂ ಹೇಳಿದ. ಮೂವರೂ ಒಬ್ಬರಿಗೊಬ್ಬರು ತಿಳಿ ಹೇಳಿಕೊಂಡು ಮುನ್ನಡೆದರು.
            ಕೆಲ ಕಿಲೋಮೀಟರುಗಳ ಪಯಣದ ನಂತರ ಕಾಲಿಯಾಕೈರ್ ಎಂಬ ಪಟ್ಟಣ ಸಿಕ್ಕಿತು. ಕಾಲಿಯಾಕೈರ್ ಪಟ್ಟಣವನ್ನು ತಲುಪುವ ವೇಳೆಗೆ ಪೊಲೀಸರು ಇನ್ನು ತಮ್ಮನ್ನು ಹುಡುಕಿ ಬರಲಾರರು ಎನ್ನುವ ಧೈರ್ಯ ಬಂದಿತು. ಮುಂದಕ್ಕೆ ಪಯಣಿಸಿದರು. ಆ ಊರಿನ ಫಾಸಲೆಯಲ್ಲಿ ಹರಿಯುತ್ತಿದ್ದ ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ತಂಗಾಳಿ ಮುಂಜಾವಿಗೆ ಹೊಸ ಬೆಡಗನ್ನು ನೀಡಿತು. ಹಗಲಿನಲ್ಲಿ ಪ್ರಯಾಣ ಮಾಡುವುದು ಬೇಡ ಎನ್ನುವ ನಿರ್ಧಾರ ಮಾಡಿದ್ದರೂ ಮಿರ್ಜಾಪುರವನ್ನು ತಲುಪಲೇಬೇಕು ಎನ್ನುವ ಕಾರಣಕ್ಕಾಗಿ ಬೆಳಗಾದರೂ ಸೈಕಲ್ ಹೊಡೆಯೋಣ ಎಂದುಕೊಂಡರು. ಮಿರ್ಜಾಪುರದಲ್ಲಿ ಭಾರತದ ಗಡಿಯೊಳಕ್ಕೆ ಕಳಿಸುವ ಏಜೆಂಟ್ ಭೇಟಿಯಾಗಿ ಅಗತ್ಯದ ನಿರ್ದೇಶನಗಳನ್ನು ನೀಡಲಿದ್ದ. ಆ ಕಾರಣಕ್ಕಾಗಿ ಏನೇ ತೊಂದರೆಯಾದರೂ ಸೈಕಲ್ ರಿಕ್ಷಾ ತುಳಿದು ಮಿರ್ಜಾಪುರವನ್ನು ಎಷ್ಟು ತ್ವರಿತವಾಗಿ ಸಾಧ್ಯವೋ ಅಷ್ಟು ಬೇಗ ತಲುಪುವ ನಿರ್ಧಾರ ಮಾಡಿದರು. ಬಾಂಗ್ಲಾ ನಾಡಿನ ಬಾನಿನಲ್ಲಿ ಸೂರ್ಯ ಉದಯಿಸಲು ಆರಂಭಿಸಿದ್ದ. ಮೂಡಣ ದಿಕ್ಕು ಕೆಂಪಾಗಿತ್ತು. ನಾಚಿದ ನಾರಿಯ ಕೆನ್ನೆಯಂತೆ ಸುಂದರವಾಗಿತ್ತು. ಬಾನಿನಲ್ಲಿ ಕೈ ಕೈ ಹಿಡಿದುಕೊಂಡು ಹೊರಟಂತೆ ಹಕ್ಕಿಗಳ ಹಿಂಡು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೊರಟಿದ್ದವು. ಅಲ್ಲೆಲ್ಲೊ ಚಿಕ್ಕ ಕೆರೆಯ ಬಳಿ ಸೈಕಲ್ ನಿಲ್ಲಿಸಿ ಪ್ರಾತರ್ವಿಧಿಗಳನ್ನು ಮುಗಿಸಿ ವಿನಯಚಂದ್ರ ಸೈಕಲ್ ತುಳಿಯಲು ಏರಿದ.

(ಮುಂದುವರಿಯುತ್ತದೆ..)

Monday, August 25, 2014

ಹೊಸ ಹನಿಗಳು

ಹೇಳಿಕೆ


ಅಚ್ಛೆ ದಿನ ಆನೆವಾಲೇ ಹೈ

ಎಂದು ಮೋದಿ ಹೇಳುತ್ತಿದ್ದರೂ
ಪೆಟ್ರೂಲ್ ಬೆಲೆ ಹೆಚ್ಚಾಗಿದೆ ನೋಡಿ
ಎಂದರು ಯು. ಟಿ. ಖಾದರು |
ಕಳೆದ ಹತ್ತು ವರ್ಷಗಳಿಂದ
ಅವರು ಸುಮ್ಮನಿದ್ದರು ||


ಹೊಣೆಗಾರಿಕೆ



ರಾಷ್ಟ್ರದಲ್ಲಿ ಹೀನಾಯ

ಸೋಲನ್ನು ಅನುಭವಿಸಿದ್ದರೂ
ಉಪ ಚುನಾವಣೆಯಲ್ಲಿ
ಗೆದ್ದ ತಕ್ಷಣ
ಸೋಲಿನ ಹೊಣೆ ಹೊತ್ತು
ಮೋದಿ ರಾಜಿ ನಾಮೆ ಕೊಡಬೇಕು
ಎಂದರಂತೆ ಕಾಂಗ್ರೆಸ್ಸಿಗರು |


ನಾಯಕತ್ವ



ರಾಷ್ಟ್ರದಲ್ಲಿ ಕಾಂಗ್ರೆಸ್

ಸೋತಾಗ ಕಾಂಗ್ರೆಸ್ಸಿಗರು
ಸೋಲಿಗೆ ಎಲ್ಲರೂ ಹೊಣೆ ಎಂದರು |
ಉಪ ಚುನಾವಣೆಯಲ್ಲಿ 
ಕಾಂಗ್ರೆಸ್ ಗೆದ್ದಾಗ ಮಾತ್ರ
ರಾಹುಲ್ ಗಾಂಧಿ ಯುವ ನಾಯಕತ್ವ
ಕಾರಣ ಎಂದರು. ||

ಪತಿವೃತೆ


ಪತಿಯನ್ನೇ
ವೃತವೆಂದು ತಿಳಿದು
ಸದಾಕಾಲ ಆತನನ್ನೇ
ಸೇವಿಸುವವಳು
ಪತಿವೃತೆ ||


ರಮ್ಯ

ಆಕೆ ಬಹು ರೂಪವತಿ
ರಮ್ಯ|
ನೋಡಲೂ ಕೂಡ ಅಷ್ಟೇ
ರಮ್ಯ |
ಜೊತೆಗೆ ಬಯಸಿದಾಗಲೆಲ್ಲ
ಮತ್ತು ನೀಡುವಳು
ಅದೇ RUMಯಾ ||

Sunday, August 24, 2014

50000

 
      ಖಂಡಿತ ಇದು ಹಂಚಿಕೊಳ್ಳಲೇಬೇಕಾದಂತಹ ಖುಷಿಯ ಸಂಗತಿ. ಹೌದು ಅಘನಾಶಿನಿ ಬ್ಲಾಗ್ ವೀಕ್ಷಕರ ಸಂಖ್ಯೆ 50000 ತಲುಪಿದೆ. ಯಾರ್ಯಾರು ನನ್ನ ಬ್ಲಾಗ್ ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದೀರೋ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಲೇ ಬೇಕಾದದ್ದು ನನ್ನ ಕರ್ತವ್ಯ.
           ನಾನು ಈ ಬ್ಲಾಗನ್ನು ಬರೆಯಲು ಆರಂಭಿಸಿದ್ದು 29-08-2009ರಂದು. ಅದಕ್ಕೂ ಮುನ್ನ ಬರೆಯುತ್ತಿದ್ದೆನಾದರೂ ಬ್ಲಾಗ್ ಲೋಕ ನನಗೆ ಅಪರಿಚಿತವಾಗಿತ್ತು. ಬ್ಲಾಗ್ ಲೋಕವೇನು ಕಂಪ್ಯೂಟರ್ ಎಂಬುದೇ ನನಗೆ ಅಪರಿಚತವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆಗ ತಾನೆ ಕಂಪ್ಯೂಟರ್ ಕಲಿತಿದ್ದ ಹೊಸತು, ದೋಸ್ತರ ಸಲಹೆಯ ಮೇರೆಗೆ ಆರ್ಕುಟ್ ಅಕೌಂಟ್ ಓಪನ್ ಮಾಡಿದ್ದೆ. ನಾನು ಬರೆಯುವುದರ ಬಗ್ಗೆ ತಿಳಿದಿದ್ದ ದೋಸ್ತರು ಬ್ಲಾಗ್ ಮಾಡು ಎಂದು ಸಲಹೆ ಕೊಟ್ಟರು. ಒಂದು ಬ್ಲಾಗ್ ಮಾಡಿ ಸುಮ್ಮನೆ ಇಟ್ಟಿದ್ದೆ. ನೆನಪಾದಾಗ ಒಂದೆರಡು ಕವಿತೆಯೋ ಖಯಾಲಿಯ ಬರಹಗಳನ್ನೋ ಬರೆಯುತ್ತಿದ್ದೆ. 2011ರ ವರೆಗೂ ನಾನು ಬರೆದಿದ್ದು 10-15 ಬರಹಗಳಷ್ಟೆ. ಆದರೆ 2012ರಿಂದ ನಾನು ಆಕ್ಟಿವ್ ಆಗಿ ಬ್ಲಾಗ್ ಲೋಕದಲ್ಲಿ ಬರವಣಿಗೆಯನ್ನು ಆರಂಭಿಸಿದೆ. ಅಲ್ಲಿಂದೀಚೆಗೆ ಅಜಮಾಸು 315 ಬರಹಗಳು ನನ್ನ ಬ್ಲಾಗಿನ ಗೋಡೆಯಲ್ಲಿ ಮೂಡಿವೆ.
           ಅಘನಾಶಿನಿ ಎಂಬುದು ನನ್ನ ಬ್ಲಾಗಿಗೆ ಇಟ್ಟ ಹೆಸರು. ಇದಕ್ಕೆ ಹಲವು ಕಾರಣಗಳಿದೆ. ನಾನು ಹುಟ್ಟಿ ಬೆಳೆದ ದಂಟಕಲ್ ಎಂಬ ಊರಿನ ಅಂಚಿನಲ್ಲಿ ಹರಿಯುವ ನದಿ ಅಘನಾಶಿನಿ. ನನ್ನ ಬರವಣಿಗೆಯ ಓಂಕಾರ ಆರಂಭವಾದದ್ದು ಇದೇ ಅಘನಾಶಿನಿಯ ದಡದ ಮೇಲೆ. ನನ್ನ ನೋವು, ಖುಷಿಯ ಸನ್ನಿವೇಶಗಳಿಗೆಲ್ಲ ಅಘನಾಶಿನಿಯೇ ಮೆಟ್ಟಿಲಾದದ್ದು. ಗೆದ್ದಾಗಲೂ ಸೋತಾಗಲೂ ಅಘನಾಶಿನಿ ನದಿಯ ದಡದ ಬಂಡೆಗಳ ಮೇಲೆ ನಿಂತಿದ್ದಿದೆ ನಾನು. ಇಂತಹ ಕಾರಣಕ್ಕಾಗಿಯೇ ನಾನು ನನ್ನ ಬ್ಲಾಗಿಗೆ ಅಘನಾಶಿನಿ ಎಂದೂ ಟ್ಯಾಗ್ ಲೈನ್ ನನ್ನು ನದಿ ಕಣಿವೆ ಹುಡುಗನ ಭಾವ ಭಿತ್ತಿ ಎಂದೂ ಬರೆದಿದ್ದು.
           ಅಘನಾಶಿನಿ ಎಂಬ ಹೆಸರಿನ ಮೂರು ಬ್ಲಾಗುಗಳಿವೆ. ಗಂಗಾಧರ ಹೆಗಡೆ ಅವರ ಅಘನಾಶಿನಿ, ಸಮನ್ವಯಾ ಅವರ ಅಘನಾಶಿನಿ ಹಾಗೂ ನನ್ನ ಅಘನಾಶಿನಿ ಬ್ಲಾಗುಗಳು. ಈ ಮೂರರ ಪೈಕಿ ಗಂಗಾಧರ ಹೆಗಡೆ ಅವರು ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಲ್ಲಿಯೇ ಅವರೂ ಬ್ಲಾಗನ್ನು ಬರೆಯಲು ಶುರು ಮಾಡಿದರು. ಸಮನ್ವಯಾ ಅವರು ಒಂದೆರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದರು. ಆದರೆ ನನ್ನ ಬ್ಲಾಗು ಉಳಿದ ಇಬ್ಬರು ಬರೆದ ಬ್ಲಾಗಿಗಿಂತ ಹೆಚ್ಚು ಜನರನ್ನು ತಲುಪಿದೆ ಎನ್ನುವ ಹೆಮ್ಮೆ ನನ್ನದು. ಹಾಗಂತ ಅವರದ್ದು ಚನ್ನಾಗಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ಅವರಿಬ್ಬರೂ ಆಕ್ಟಿವ್ ಆಗಲೇ ಇಲ್ಲ. ನಾನು ಆಕ್ಟಿವ್ ಆಗಿ ಬರೆಯುತ್ತಲೇ ಇದ್ದೇನೆ ಅಷ್ಟೆ.
          ಇಂದಿಗೂ ನನಗೆ ನೆನಪಿದೆ. ನಾನು ಮೊಟ್ಟಮೊದಲು ಬರೆದಿದ್ದೊಂದು ಕವಿತೆ. ನಾನು ಓದಿದ್ದು ಕಾನಲೆಯ ಹೂಸ್ಕೂಲಿನಲ್ಲಿ. ನಾನು 8 ನೇ ಕ್ಲಾಸ್ ಇದ್ದಾಗ ಅಣ್ಣ ಗಿರೀಶನದ್ದೊಂದು ಚಿಕ್ಕ ಬರಹ ತರಂಗದಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಖುಷಿಯಿಂದ ನಾನು ಒಂದು ಹನಿಗವಿತೆ ಬರೆದು ಕಳಿಸಿದ್ದೆ. ಅದೂ ಚಿಣ್ಣರ ಅಂಗಳವೋ, ಬಾಲವನವೋ ಏನೋ ಒಂದಕ್ಕೆ. ಮಕ್ಕಳ ಕವಿತೆ. ತರಂಗದವರು ಅದನ್ನು ಪ್ರಕಟವನ್ನೂ ಮಾಡಿಬಿಟ್ಟರು. ಅದಕ್ಕೆ ನನಗೆ 30 ರು. ಸಂಭಾವನೆಯೂ ಬಂದಿತು. ಆ ನಂತರ ಗುರಣ್ಣನಿಗೆ ಒಂದಷ್ಟು ದಿನ ಬರೆಯುವ ಹುಚ್ಚು ಹತ್ತಿತ್ತು. ಆತ ಡಿಗ್ರಿ ಓದುತ್ತಿದ್ದ. ಸಾಕಷ್ಟು ಹುಡುಗಿಯರನ್ನೂ ಪ್ರೀತಿಸುತ್ತಿದ್ದ. ಆ ಕಾರಣಕ್ಕಾಗಿ ಹಲವು ಕವಿತೆಗಳನ್ನೂ ಒಗಾಯಿಸುತ್ತಿದ್ದ. ಹೀಗಿದ್ದಾಗಲೇ ಕಾನ್ಲೆಯ ಗುಡ್ಡದ ನೆತ್ತಿಯಲ್ಲಿ ಕುಳಿತು ಒಂದು ನಮ್ಮ ಶಾಲೆಯ ಚಂದಿರ ಅಂತ ಒಂದು ಕವಿತೆ ಬರೆದಿದ್ದೆ. ಇಂದು ರೀತಿ ಅಲ್ಲಿ ನೋಡು ಚಂದ್ರ ಬಿಂಬ, ಇಲ್ಲಿ ನೋಡು ಲೈಟ್ ಕಂಬ ರೀತಿಯ ಕವಿತೆ. ಬರೆದವನೇ ಗುರಣ್ಣನಿಗೆ ತೋರಿಸಿದ್ದೆ. ಹಿಗ್ಗಾಮುಗ್ಗಾ ಬೈದಿದ್ದ. ನಾನು ಬೇಜಾರು ಮಾಡ್ಕೊಂಡಿದ್ದೆ.
           ಅದಾದ ನಂತರ `ಇದು ನನ್ನದು.' ಎನ್ನುವ ಕವಿತೆ ಬರೆದಿದ್ದು ಫಸ್ಟ್ ಪಿಯುಸಿಯಲ್ಲಿ ನಮ್ಮೂರಿನ ಹುಳ್ಕಿನ ಜಡ್ಡಿ ಗದ್ದೆಯ ಗೇರು ಮರದ ಮೇಲೆ ಕುಳಿತು. ಆ ಮೇಲೆ ನಾನು ಫಸ್ಟ್ ಪಿಯುಸಿಯಲ್ಲಿ ಸೂರನಕೇರಿಯ ಗಣೇಶಜ್ಜನ ಮನೆಯಲ್ಲಿ ಉಳಿದುಕೊಂಡು ನಾಣಿಕಟ್ಟಾ ಕಾಲೇಜಿಗೆ ಹೋಗುತ್ತಿದ್ದೆ. ನಾನು ಹಾಗೂ ಗಿರೀಶಣ್ಣ ಇಬ್ಬರೂ ಪತ್ರದ ಮೂಲಕ ಪತ್ರಿಕೆಯೊಂದನ್ನು ಮಾಡಿದ್ದೆವು. ಆತ ಸಹೃದಯಿ ಎನ್ನುವ ತಲೆಬರಹದ ಅಡಿಯಲ್ಲಿ 2.50 ರು. ಅಂತರ್ದೇಸಿ ಪತ್ರದಲ್ಲಿ ಥೇಟು ಒಂದು ಪತ್ರಿಕೆ ಯಾವ ರೀತಿ ವಿವಿಧ ಸುದ್ದಿ, ಲೇಖನ, ಕಥೆ, ಕವನಗಳನ್ನು ಹೊಂದಿರುತ್ತದೆಯೋ ಅದೇ ರೀತಿ ಬರೆದು ಕಳಿಸುತ್ತಿದ್ದ. ನಾನು ಚಿಂತಾಮಣಿ ಎನ್ನುವ ಹೆಸರಿನಲ್ಲಿ ಬರೆದು ಕಳಿಸುತ್ತಿದ್ದೆ. ಸರಿಸುಮಾರು 2 ವರ್ಷ ಈ ರೀತಿ ನಾವು ಬರೆದುಕೊಳ್ಳುತ್ತಿದ್ದೆವು. ಆ ದಿನಗಳಲ್ಲಿಯೇ ಇರಬೇಕು ನನ್ನ ಬರವಣಿಗೆ ಇನ್ನಷ್ಟು ಜೋರಾದದ್ದು. `ಅಘನಾಶಿನಿ ಕಣಿವೆಯಲ್ಲಿ..' ಅಂತ ಒಂದು ಕಾದಂಬರಿಯನ್ನು ಆ ದಿನಗಳಲ್ಲಿಯೇ ನಾನು ಬರೆಯಲು ಆರಂಭಿಸಿದ್ದು. ಆದರೆ ಆ ಕಾದಂಬರಿ ಇನ್ನೂ ಪೂರ್ಣಗೊಂಡಿಲ್ಲ..!
            ಪ್ರೈಮರಿ ಶಾಲೆಯ ದಿನಗಳಿಂದ ಓದುವುದು ನನ್ನ ಗೀಳು. ಅದರಲ್ಲೂ ತೇಜಸ್ವಿಯೆಂದರೆ ನನ್ನ ಪಂಚಪ್ರಾಣ. ತೇಜಸ್ವಿ ನನಗೆ ಮೊಟ್ಟಮೊದಲು ಓದಲು ಸಿಕ್ಕಿದ್ದು 4ನೇ ಕ್ಲಾಸಿನಲ್ಲಿ. ವಾರಕ್ಕೊಂದು ಪುಸ್ತಕ ತೆಗೆದುಕೊಂಡು ಓದುವ ಗೃಂಥಾಲಯ ಚಟುವಟಿಕೆಯ ಅಂಗವಾಗಿ ತೇಜಸ್ವಿಯವರ ಪರಿಸರದ ಕಥೆ ಸಿಕ್ಕಿತ್ತು. ಅದಾದ ಮೇಲೆ ಹಕ್ಕಿಗಳ ಬಗ್ಗೆ ಬರೆದ ಪುಸ್ತಕ ಹೀಗೆ ಹತ್ತು ಹಲವು. ಹೈಸ್ಕೂಲಿನಲ್ಲಿಯೂ ಅಷ್ಟೇ. ಸಿಕ್ಕ ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಕಾನ್ಲೆ ಪ್ರೈಮರಿ ಶಾಲೆ ಮಾಸ್ತರ್ ಚಿದಂಬರ ಅವರ ಬಳಿ ಹರಪೆ ಬಿದ್ದು ಶಿವರಾಮ ಕಾರಂತರ ಬಾಲ ವಿಜ್ಞಾನ ಸರಣಿಗಳನ್ನು ಓದಿದ್ದೆ. ನಂತರ ಪಿಯುಸಿಯಲ್ಲಿ ವಿ. ಎಸ್. ಹೆಗಡೆಯವರು ಕನ್ನಡ ಲೆಕ್ಚರ್. ಆ ದಿನಗಳಲ್ಲಿ ಹಲವಾರು ಪುಸ್ತಕಗಳನ್ನು ಒತ್ತಾಯವಾಗಿ ಓದಿಸುತ್ತಿದ್ದರು. ಕರ್ವಾಲೋವನ್ನು ಆ ದಿನಗಳಲ್ಲಿ 50ಕ್ಕೂ ಅಧಿಕ ಸಾರಿ ಓದಿದ್ದೆ. ಯಯಾತಿ, ಹಿಟ್ಟಿನಹುಂಜ, ತುಘ್ಲಕ್ ಹೀಗೆ ಹಲವಾರು ಪುಸ್ತಕಗಳು ನನ್ನ ಒಡನಾಡಿಯಾಗಿದ್ದವು. ಡಿಗ್ರಿಗೆ ಬಂದ ಮೇಲಂತೂ ಎರಡು ದಿನಕ್ಕೊಂದು ಕಾದಂಬರಿಯೋ, ಕವನ ಸಂಕಲನವೋ ನನಗೆ ಬೇಕಿತ್ತು. ಮಿತ್ರ ರಾಘವ, ಪೂರ್ಣಿಮಾ, ಚೈತ್ರಿಕಾ ಆದಿ ಬೇದೂರು, ನಾಗರಾಜ ಹೆಗಡೆ, ಕೃಷ್ಣಮೂರ್ತಿ ದೀಕ್ಷಿತ ಇವರ ಗೃಂಥಾಲಯ ಕಾರ್ಡುಗಳನ್ನು ಪಡೆದು ನಾನು ಪುಸ್ತಕಗಳನ್ನು ಓದುತ್ತಿದ್ದೆ. ಇವೇ ನನ್ನ ಬರವಣಿಗೆಯನ್ನು ರೂಪಿಸಿದಂತವುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
           ಪಿಯುಸಿ ಮುಗಿದಿತ್ತು. ಮನೆಯಲ್ಲಿ ಮುಂದಕ್ಕೆ ಓದೋದು ಬೇಡವೇ ಬೇಡ ಎಂದು ಪಟ್ಟಾಗಿ ಕೂತಿದ್ದರು ಅಪ್ಪ. ಅಮ್ಮನಿಗೆ ಮಗ ಓದಲಿ ಎನ್ನುವ ಆಸೆಯಿತ್ತು. ಡಿಗ್ರಿ ಮಾಡೋದೇ ಸೈ. ಯಾವ ಡಿಗ್ರಿ ಮಾಡೋದು? ಮಾಮೂಲಿ ಹಿಸ್ಟರಿ, ಎಕನಾಮಿಕ್ಸು, ಪೊಲಿಟಿಕಲ್ ಸೈನ್ಸು ಮಾಡಿದರೆ ಏನೂ ಆಗೋದಿಲ್ಲ ಎಂದರು ಲಾಯರ್ ಗಣಪಣ್ಣ. ಸೋ ಇನ್ನೇನಪ್ಪಾ ಅಂತಿದ್ದಾಗ ಈಗ ವಿಜಯವಾಣಿಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಮ್ಮ ಭಾರತಿ ಹೆಗಡೆ `ತಮಾ ನೀನು ಬರಿತ್ಯಲಾ.. ಯಾಕೆ ಜರ್ನಲಿಸಂ ಮಾಡ್ಲಾಗ?' ಎಂದದ್ದೇ ತಡ ಎಲ್ಲೆಲ್ಲಿ ಜರ್ನಲಿಸಂ ಕೋರ್ಸಿಗಳಿವೆ ಎನ್ನುವುದನ್ನು ಹುಡುಕಲಾರಂಭಿಸಿದ್ದೆ. ಶಿರಸಿ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರ್ನಲಿಸಂ ಇತ್ತು. ಆಪ್ಷನಲ್ ಇಂಗ್ಲೀಷು ಪೊಲಿಟಿಕಲ್ ಸೈನ್ಸು ಜರ್ನಲಿಸಂಗ್ಗೆ ಜೈ ಎಂದು ಸೇರಿಕೊಂಡೆ. ಡಿಗ್ರಿ ಮೊದಲ ವರ್ಷದಲ್ಲಿ ನನ್ನ ಸೀನಿಯರ್ ಆಗಿದ್ದ ಸಂಜಯ ಭಟ್ಟ ಬೆಣ್ಣೆ, ಗಣೇಶ ಮುರೇಗಾರ್, ಅಶ್ವತ್ಥ ಹೆಗಡೆ, ಸುಭಾಷ ಧೂಪದಹೊಂಡ, ಚೈತ್ರಾ ಹೆಗಡೆ, ರೂಪಾ ಇವರೆಲ್ಲ `ತಮಾ ನೀನು ಡಿಗ್ರಿಯಲ್ಲಿ ಎಷ್ಟು ಬರೆಯುತ್ತಿಯೋ, ಅದೆಷ್ಟು ಬೈಲೈನ್ ಬರುತ್ತದೆಯೋ ಅದು ನಿನಗೆ ಮುಂದಿನ ನಿನ್ನ ವೃತ್ತಿ ಬದುಕಿಗೆ ಪೂರಕವಾಗುತ್ತದೆ.. ಮೂರು ವರ್ಷದಲ್ಲಿ ಇಂತಿಷ್ಟು ಬೈಲೈನ್ ಬರಬೇಕು ಎನ್ನುವ ಗುರಿ ಇಟ್ಟುಕೊ...' ಎಂದರು. ನಾನು ಮೂರು ವರ್ಷದಲ್ಲಿ `50' ಬೈಲೈನ್ ಬರಬೇಕೆಂಬ ಗುರಿ ಇಟ್ಟುಕೊಂಡೆ. ಬರೆದೆ ಬರೆದೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆ, ವಾರ ಪತ್ರಿಕೆ, ಮಂತ್ಲಿ, ಹದಿನೈದು ದಿನದ ಪತ್ರಿಗೆಳಿಗೆಲ್ಲ ಬರೆದೆ. ಹಲವು ಪತ್ರಿಕಗೆಳು ಪ್ರಕಟಿಸಿದವು. ಸಂಭಾವನೆಯನ್ನೂ ಕೊಟ್ಟವು. ಪರಿಣಾಮವಾಗಿ ಮೂರು ವರ್ಷದಲ್ಲಿ 100ಕ್ಕೂ ಅಧಿಕ ಬೈಲೈನ್ ಬಂದವು. ಖಂಡಿತವಾಗಿಯೂ ಈ ಬೈಲೈನ್ ಗಳು ನನ್ನ ವೃತ್ತಿ ಬದುಕಿಗೆ ಸಹಕಾರಿಯಾದವು.
           ಡಿಗ್ರಿ ಟೈಮಿನಲ್ಲಿ ಕಂಪ್ಯೂಟರ್ ಕಲಿತಿದ್ದೆನಾದರೂ ತೀರಾ ಬ್ಲಾಗ್ ಬರೆಯುವ ಹಂತ ಮುಟ್ಟಿರಲಿಲ್ಲ. ಡಿಗ್ರಿ ಮುಗಿಸಿ ಎಲ್ಲ ಪತ್ರಿಕಾ ಕಚೇರಿಗಳಿಗೂ ರೆಸೂಮ್ ಕಳಿಸಿ, ಹೊಟ್ಟೆ ಪಾಡಿಗೆ ಸಿದ್ದಾಪುರ ಕೆಡಿಸಿಸಿ ಬ್ಯಾಂಕಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವ ಸಂದರ್ಭದಲ್ಲೇ ಆರ್ಕುಟ್ಟು, ಫೇಸ್ಬುಕ್ಕು, ಬ್ಲಾಗು ಶುರು ಮಾಡಿಕೊಂಡಿದ್ದು. ನಂತರ ಸಿದ್ದಾಪುರ ಎ.ಪಿಎಂ.ಸಿ.ಯಲ್ಲಿ ಡೈಲಿ ವೇಜಸ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅಘನಾಶಿನಿ ಹುಟ್ಟಿಕೊಂಡಿದ್ದು. ಅಲ್ಲಿಂದ ಮುಂದೆ ನಿಮಗೆ ಗೊತ್ತೇ ಇದೆ. ಮುಂದೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಕರೆದು ಕೆಲಸ ಕೊಟ್ಟಿತು. ಅದಾದ ಮೇಲೆ ನಾನು ಉದಯವಾಣಿಗೆ ಹೋದೆ.
            2011 ನನ್ನ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟ ವರ್ಷ. ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ಸ್ಪೋರ್ಟ್ಸ್ ರಿಪೋರ್ಟರ್ ಆಗಿ ಲೈಫು ಲೈಟಾಗಿ ಓಡುತ್ತಿದೆ ಎನ್ನುವಾಗಲೇ ಬದುಕು ತಿರುವು ಕೊಟ್ಟಿತ್ತು. ಪರಿಣಾಮವಾಗಿ ಮನೆಗೆ ವಾಪಾಸು ಬಂದೆ. ಒಂದಾರು ತಿಂಗಳು ಸುಮ್ಮನೆ ಉಳಿದೆ. ಆಮೇಲೆ ಕನ್ನಡಪ್ರಭದಲ್ಲಿ ನನ್ನ ಕೆಲಸ ಶುರುವಾಯಿತು. ಈ ನನ್ನ ಹಾದಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದವರು ಹಲವರು. ಖಂಡಿತವಾಗಿಯೂ ಅವರ ಬಗ್ಗೆ ನಾನು ಹೇಳಲೇಬೇಕು.
            ಪ್ರೈಮರಿಯ ತಾರಾ ಮೇಡಮ್ಮು, ಸೊಕಾ ಸುಮ್ಮನೆ ಕಾರಣವಿಲ್ಲದೇ ಹಂಗಿಸುತ್ತಿದ್ದ ಸಿ. ಎಂ. ಹೆಗಡೆರು, ಹೈಸ್ಕೂಲಿನಲ್ಲಿ ಇಂಗ್ಲೀಷು ಹೇಳಿಕೊಟ್ಟ ಬಿಆರೆಲ್ಲು, ಹಿಸ್ಟರಿಯನ್ನು ರೋಚಕವಾಗಿ ಕಲಿಸಿದ ಲಕ್ಷಪ್ಪ ಮಾಸ್ತರ್ರು, ಹೊಡೆತದ ಮೂಲಕ ಅಲ್ಪ ಸ್ವಲ್ಪ ವಿದ್ಯೆಯನ್ನು ತಲೆಗೆ ಹತ್ತುವಂತೆ ಮಾಡಿದ ಪಿಬಿಎನ್ನು, ಮುಷ್ಟಿಕಟ್ಟಿಕೊಂಡು ಬೆನ್ನಿಗೆ ಗುದ್ನ ನೀಡುತ್ತಿದ್ದ  ಕಟ್ಬಿಟಿನಕೆರೆ ಎಸ್ಸೆಚ್ಚು, ಕನ್ನಡವನ್ನು ಚನ್ನಾಗಿ ಕಲಿಸಿದರೂ `ನ' ದಿಂದ ಕೊನೆಗೊಳ್ಳುವ ಶಬ್ದವನ್ನು ನನನನ ಎಂದು ಉಚ್ಛರಿಸುತ್ತಿದ್ದ ಗ್ರೇಸ್ ಪ್ರೇಂ ಕುಮಾರಿ, ಪಿಯುಸಿಯ ರಾ. ಜಿ. ಭಟ್ಟರು, ದೇವೇಂದ್ರ ಮೂರ್ತಿಗಳು, ಪಿಯುಸಿ ಕೊನೆಯ ವರ್ಷದಲ್ಲಿ ನಾನು ಹಾಗೂ ಅವರ ನಡುವೆ ಜಗಳವಾಗಿದ್ದರೂ ನನ್ನ ಏಳಿಗೆಗೆ ಕಾರಣವಾದ ವಿ. ಎಸ್. ಹೆಗಡೆಯವರು, ಉಮಾಕಾಂತ ಶಾಸ್ತ್ರಿಗಳು ಕಲಿಸಿದ್ದು ಕಡಿಮಯೇನಲ್ಲ. ಡಿಗ್ರಿಯಲ್ಲಂತೂ ಹುಡುಗರಿಗೆ ಮಾತ್ರ ಸಿಕ್ಕಾಫಟ್ಟೆ ಬಯ್ಯುತ್ತಿದ್ದ ವಿಜಯನಳಿನಿ ರಮೇಶ್ ಮೇಡಮ್ಮು, ತಮಾಷೆಯಾಗಿ ಕಲಿಸುತ್ತಿದ್ದ ರಾಜು ಹೆಗಡೆಯವರು, ಪ್ರತಿದಿನ ಒಬ್ಬೊಬ್ಬರನ್ನಾಗಿ ಎದ್ದು ನಿಲ್ಲಿಸಿ ಇವತ್ತಿನ ಪೇಪರ್ ಓದಿಕೊಂಡು ಬಂದಿದ್ದೀರಾ? ಏನು ಬಂದಿದೆ ಹೇಳಿ ಎಂದು ಕೇಳಿ, ಕ್ಲಾಸಿನಲ್ಲಿ ಶಿಕ್ಷೆ ನೀಡುತ್ತಿದ್ದ ಸಚ್ಚಿದಾನಂದ ಹೆಗಡೆಯವರು, ಗೀತಾ ವಸಂತ ಮೇಡಮ್ಮು, ರಾಘವೇಂದ್ರ ಜಾಜಿಗುಡ್ಡೆ, ನಂತರದ ದಿನಗಳಲ್ಲಿ ವೃತ್ತಿಯಲ್ಲಿ ತೊಡಗಿಕೊಮಡಾಗ ತಿದ್ದಿದ ಹರಿಪ್ರಕಾಶ ಕೋಣೆಮನೆ, ಮುಂಜಾನೆ ಸತ್ಯ, ರವಿ ದೇವಳಿ, ಶಿವಪ್ರಕಾಶ್, ಉದಯವಾಣಿಯಲ್ಲಿದ್ದಾಗ ಅಕ್ಷರಗಳನ್ನು ತಿದ್ದಿದ ರಾಘವೇಂದ್ರ ಗಣಪತಿ, ರವಿ ಹೆಗಡೆ, ಈಗ ಕನ್ನಡಪ್ರಭದಲ್ಲಿ ನನ್ನನ್ನು ತಿದ್ದುತ್ತಿರುವ ವಿಶ್ವೇಶ್ವರ ಭಟ್ಟರು, ವಿಶ್ವಾಮಿತ್ರ ಹೆಗಡೆಯವರು ಎಲ್ಲರಿಂದಲೂ ನಾನು ಕಲಿತದ್ದು ಹಲವು. ಬಹುಶಃ ಅವರು ನನ್ನನ್ನು ತಿದ್ದದೇ ಇದ್ದಿದ್ದರೆ ನಾನು ಖಂಡಿತ ಹೀಗಿರುತ್ತಿರಲಿಲ್ಲ. ನಾನು ಹಾದಿ ತಪ್ಪಿದಾಗಲೆಲ್ಲ ಹೀಗಲ್ಲ.. ಹೀಗೆ ಎಂದು ಹೇಳಿದವರೇ ಎಲ್ಲರೂ. ಅವರೆಲ್ಲರಿಗೂ ನಾನು ಶರಣು.
           ಇದೀಗ ಬ್ಲಾಗಿನ ಬಗ್ಗೆ ಒಂಚೂರು ಹೇಳಲೇ ಬೇಕು. ಖಂಡಿತವಾಗಿಯೂ 50 ಸಾವಿರ ಜನರು ನನ್ನ ಬ್ಲಾಗ್ ವೀಕ್ಷಣೆ ಮಾಡುತ್ತಾರೆ ಎನ್ನುವುದು ಬ್ಲಾಗ್ ಆರಂಭಿಸಿದಾಗ ನನಗೆ ಅನ್ನಿಸಿರಲಿಲ್ಲ. ಸುಮ್ಮನೆ ನಾನು ಬರೆಯುತ್ತೇನೆ. ಆದರೆ ಅದನ್ನು ಎಷ್ಟು ಜನರು ನೋಡುತ್ತಾರೆ ಎಂದುಕೊಂಡಿದ್ದೆ. 2011ರಿಂದೀಚೆಗೆ 3 ವರ್ಷದಲ್ಲಿ ಅಜಮಾಸು 38ರಿಂದ 40 ಸಾವಿರ ಜನರು ಬ್ಲಾಗನ್ನು ನೋಡಿದ್ದಾರೆ. ಭಾರತವೊಂದೇ ಅಲ್ಲ ಅಮೆರಿಕಾ, ಜರ್ಮನಿ, ರಷ್ಯಾ, ಬಹರೈನ್, ಯುಎಇ, ಸಿಂಗಾಪುರ, ಬೊಲಿವಿಯಾ, ಉಕ್ರೇನ್, ಪೊಲಾಂಡ್, ಆಸ್ಟ್ರೇಲಿಯಾ ಹೀಗೆ ಹತ್ತು ಹಲವು ದೇಶಗಳವರು ಬ್ಲಾಗ್ ವೀಕ್ಷಣೆ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯ ಅಭಿಪ್ರಾಯಗಳನ್ನೂ ತಿಳಿಸಿದ್ದಾರೆ. ಒಂದಿಷ್ಟು ಬರಹಗಳು ಭಾರಿ ಚರ್ಚೆಯನ್ನೂ ಕಂಡಿವೆ. ಅವುಗಳ ನಡುವೆ ಕಂಡೂ ಕಾಣದಂತಾಗಿ ಹೋಗಿದ್ದು ಇನ್ನೂ ಹಲವಾರು ಲೇಖನಗಳು, ಬರಹಗಳು.
          ಮೊಟ್ಟ ಮೊದಲು ಬರೆದ ಅಘನಾಶಿನಿ ಕಣೀವೆಯಲ್ಲಿ ಕಾದಂಬರಿಯನ್ನೇ ಇನ್ನೂ ಮುಗಿಸಿಲ್ಲ. ಅಂತದ್ದರಲ್ಲಿ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನು ಡೈರೆಕ್ಟಾಗಿ ಬ್ಲಾಗಲ್ಲಿ ಬರೆಯಲು ಆರಂಭಿಸಿದ್ದೇನೆ. ಅದೀಗ ಅರ್ಧಕ್ಕೂ ಅಧಿಕ ಮುಗಿದಿದೆ. ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ. ಖುಷಿಯ ಸಂಗತಿಯೆಂದರೆ ಎರಡು ಪ್ರಕಾಶನದವರು ನನ್ನ ಬರವಣಿಗೆಯ ಪುಸ್ತಕಗಳನ್ನು ಪ್ರಕಟಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆದರೆ ನನಗೆ ಭಯವಾಗುತ್ತಿದೆ. ಪುಸ್ತಕಗಳನ್ನು ಪ್ರಕಟಿಸುವಷ್ಟು ದೊಡ್ಡವನಾಗಿದ್ದೀನಾ ನಾನು? ಇನ್ನೂ ಕೆಲವು ವರ್ಷದ ನಂತರ ಪುಸ್ತಕ ಪ್ರಟಿಸೋಣ ಎಂದುಕೊಂಡು ಪ್ರಕಾಶನದವರಿಗೆ ಉತ್ತರ ನೀಡಿಲ್ಲ. ಅವರು ಕೇಳುತ್ತಲೇ ಇದ್ದಾರೆ. ನಾನು ಒಪ್ಪಿಗೆ ನೀಡಲಾ, ಬೇಡವಾ ಎನ್ನುವ ಗೊಂದಲದಲ್ಲಿಯೇ ಇದ್ದೇನೆ.
          ನನ್ನ ಬರವಣಿಗೆಯಲ್ಲಿ ಮನೆಯಲ್ಲಿ ಬೆಂಬಲವಾಗಿ ನಿಂತವರು ಹಲವರು. ಮೊಟ್ಟಮೊದಲಿಗೆ ನೆನೆಯಬೇಕಾದದ್ದು ಅಮ್ಮನನ್ನು. ಅಮ್ಮನ ಒತ್ತಾಸೆಯೇ ನನಗೆ ಬರೆಯಲು ಪ್ರೇರೇಪಣೆ. ಮಾವ ಪ. ಗ. ಭಟ್ಟರ ಆಶೀರ್ವಾದವೂ ಇದೆ. ಅಪ್ಪ-ತಂಗಿಯರ ಪ್ರೀತಿ ಕೂಡ ಮರೆಯುವಂತಿಲ್ಲ. ಜೊತೆಯಲ್ಲಿ ಹಲವು ಸಾರಿ ನೇರಾ ನೇರ, ಮತ್ತೆ ಕೆಲವು ಸಾರಿ ವ್ಯಂಗ್ಯವಾಗಿ ಸಲಹೆಯನ್ನು ನೀಡಿ, ಪ್ರತಿಕ್ರಿಯೆ ಕೊಡುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳದೇ ಹೇಗಿರಲಿ?
            ನನಗಂತೂ 50 ಸಾವಿರ ಜನರು ವೀಕ್ಷಣೆ ಮಾಡಿರುವುದು ಬಹಳ ಖುಷಿಯನ್ನು ತಂದಿದೆ. 5 ವರ್ಷದಲ್ಲಿ ಈ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಮುಂದೆ ಕೂಡ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಾನು ಕೆಟ್ಟದಾಗಿ ಬರೆದಿದ್ದರೆ ಮುಲಾಜಿಲ್ಲದೆ ತಿಳಿಸಿ. ಒಳ್ಳೆಯದಿದ್ದರೆ ಅಭಿಪ್ರಾಯ ತಿಳಿಸಿ. 1 ಲಕ್ಷ ಜನರು ವೀಕ್ಷಣೆ ಮಾಡಿದಾಗ ಮತ್ತೆ ನಾನು ಆ ಖುಷಿ ಹಂಚಿಕೊಳ್ಳಲು ಸಿಗುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ನಾನು ಬಯಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

Saturday, August 23, 2014

ಅನಂತಮೂರ್ತಿಯವರಿಗೊಂದು ನಮನ


ಅನಂತ ಮೂರ್ತಿಯವರು ಇನ್ನಿಲ್ಲ.
ಕನ್ನಡ ಸಾಹಿತ್ಯ ಲೋಕಕ್ಕೆ ಶಾಕ್ ಸುದ್ದಿ ಹೌದು.
ಬದುಕಿದ್ದಾಗ ಹಲವಾರು ರೀತಿಯ ಸುದ್ದಿಗಳಿಗೆ ಗ್ರಾಸವಾಗಿ, ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು ಸದಾ ಸುದ್ದಿಯಲ್ಲಿ ಇರುತ್ತಿದ್ದವರು. ಇತ್ತೀಚಿನ ದಿನಗಳಲ್ಲಿ ಯಾವುದೇ ಕಾದಂಬರಿ, ಕಥೆ, ಸೇರಿದಂತೆ ಪುಸ್ತಕಗಳನ್ನು ಬರೆಯದಿದ್ದರೂ ಹಲವು ರೀತಿಯ ಹೇಳಿಕೆಗಳನ್ನು ಕೊಟ್ಟು ಸದಾ ಚರ್ಚೆಯಲ್ಲಿ ಇರುತ್ತಿದ್ದವರು. ಕಲಬುರ್ಗಿ ಪ್ರಕರಣವಂತೂ ಅನಂತಮೂರ್ತಿಯವರ ಮೇಲೆ ಸಾಕಷ್ಟು ಟೀಕೆಗಳನ್ನೂ ಬರುವಂತೆ ಮಾಡಿತು. ಮೋದಿ ಪ್ರದಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಓಲೈಕೆ ಮಾಡಲು ಯತ್ನಿಸಿದರಾದರೂ ಜನಸಾಮಾನ್ಯರು ಅನಂತ ಮೂರ್ತಿಯವರ ವಿರುದ್ಧ ತಿರುಗಿಬಿದ್ದರು. ಮೋದಿಯವರು ಪ್ರಧಾನಿಯಾದ ನಂತರವಂತೂ ಅನಂತ ಮೂರ್ತಿಯವರ ಬಳಿ ಯಾವಾಗ ದೇಶ ಬಿಟ್ಟು ಹೋಗುತ್ತೀರಿ ಎಂದು ಕೇಳಿದವರು ಹಲವರು. ಅದಕ್ಕೆ ಪ್ರತ್ಯುತ್ತರವಾಗಿ ಅನಂತಮೂರ್ತಿ ಅದೇನೋ ಸಬೂಬು ಹೇಳಿ ನುಣುಚಿಕೊಂಡರು. ಆದರೆ ಇತ್ತೀಚಿನ ಎರಡು ತಿಂಗಳಲ್ಲಿ ಅನಂತಮೂರ್ತಿಯವರು ಯಾವುದೇ ವಿವಾದದ ಹೇಳಿಕೆ ಕೊಡದೇ ಇದ್ದಾಗಲೇ ಏನೋ ಸರಿಯಿಲ್ಲ ಎನ್ನುವ ಭಾವನೆಯನ್ನು ಎಲ್ಲರಲ್ಲೂ ಹುಟ್ಟು ಹಾಕಿತ್ತು. ಬಹುಶಃ ಮೂರ್ತಿ ಮೇಲೆ ಮೂತ್ರ ವಿಷಯದ ಮೇಲೆ ವಿವಾದವಾಗಿದ್ದೆ ಕೊನೆಯಿರಬೇಕು. ಆ ನಂತರ ಅವರಿಂದ ವಿವಾದಗಳಾಗಲಿಲ್ಲ. ನಂತರದ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಖಂಡಿತವಾಗಿಯೂ ಅವರನ್ನು ಕಾಡಿರಬೇಕು. ಅವರು ಸುಮ್ಮನಿದ್ದರು.
ನಾನು ಅನಂತ ಮೂರ್ತಿ ಅವರು ಬರೆದಿದ್ದನ್ನು ಓದಿದ್ದು ಬಹಳ ಕಡಿಮೆ. ಅನಂತಮೂರ್ತಿಯವರ ಸಂಸ್ಕಾರ ಹಾಗೂ ಭಾರತೀಪುರ ಈ ಎರಡು ಕಾದಂಬರಿಗಳನ್ನು ನಾನು ಓದಿದ್ದೇನೆ. ಇವನ್ನು ಓದಿದ್ದೂ ನನ್ನ ಕಾಲೇಜು ದಿನಗಳಲ್ಲಿ. ಖಂಡಿತವಾಗಿಯೂ ಆ ದಿನಗಳಲ್ಲಿ ಈ ಪುಸ್ತಕಗಳನ್ನು ನಾನು ಓದಲು ಕಷ್ಟಪಟ್ಟಿದ್ದು ನಿಜ. ನನ್ನ ಅಂದಿನ ಯೋಚನಾ ಲಹರಿ, ಅಧವಾ ನನ್ನ ಮಟ್ಟಕ್ಕೆ ಅದು ಒಗ್ಗಲಿಲ್ಲ. ಗಡುಚೆನ್ನಿಸಿತು.ಬಹುಶಃ ಆ ನಂತರವೇ ಅನಂತಮೂರ್ತಿಯವರ ಪುಸ್ತಕಗಳನ್ನು ಕಂಡರೆ ಅದರತ್ತ ನಾಣು ಅಷ್ಟಾಗಿ ಗಮನ ಹರಿಸಲಿಲ್ಲ. ಆದರೆ ಈಗ ಮತ್ತೊಮ್ಮೆ ಅವರ ಪುಸ್ತಕಗಳನ್ನು ಓದಬೇಕೆಂಬ ಮನಸ್ಸಾಗುತ್ತಿದೆ.
ಅನಂತಮೂರ್ತಿಯವರ ವಿರುದ್ಧ ನನಗೆ ತಿಳಿದಂತೆ ಮೊಟ್ಟ ಮೊದಲು ಬರೆದಿದ್ದು ಪ್ರತಾಪ ಸಿಂಹ ಅವರಿರಬೇಕು. ಪ್ರತಾಪ್ ಸಿಂಹ ಅವರು ಬೆತ್ತಲೆ ಜಗತ್ತಿನ ಅಂಕಣದಲ್ಲಿ ಬರೆದಿದ್ದ ಲೇಖನವೊಂದನ್ನು ಅನಂತಮೂರ್ತಿ ಅವರು ವಿರೋಧಿಸಿದಾಗ ಸಾಕಷ್ಟು ವಾದಗಳು ಜರುಗಿತ್ತು. ಪ್ರತಾಪಸಿಂಹ ಅನಂತಮೂರ್ತಿಯವರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಆ ನಂತರವೇ ಅನಂತಮೂರ್ತಿಯವರು ಹಲವು ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನೋ ಅಥವಾ ಅಂತಹ ಘಟನೆಗಳನ್ನೋ ಉಂಟುಮಾಡುತ್ತಿದ್ದರು. ಈ ಅಂಶಗಳನ್ನು ಖಂಡಿತ ಅವರ ತೆಗಳಿಕೆಗೆ ಹೇಳುತ್ತಿಲ್ಲ. ಸಾಹಿತ್ಯ ಜಗತ್ತಿನಲ್ಲಿ, ಬದುಕಿನಲ್ಲಿ ಅವರು ದೊಡ್ಡ ಹೆಮ್ಮರ. ನಾನು ಚಿಕ್ಕದೊಂದು ಎಲೆ ಅಷ್ಟೆ. ಆದರೆ ಅವರು ನಿಧನರಾಗಿರುವ ಈ ಸಂದರ್ಭದಲ್ಲಿ ಅವರ ಬಗ್ಗೆ ಹೊಗಳುತ್ತಿರುವ ಸಂದರ್ಭದಲ್ಲಿಯೇ ಅವರ ಈ ವಿಷಯಗಳೂ ನನಗೆ ನೆನಪಾಗುತ್ತಿವೆ.
ಈ ಸಂದರ್ಭದಲ್ಲಿಯೇ ಇನ್ನೊಂದು ವಿಷಯವನ್ನೂ ನಾನು ಹೇಳಲೇಬೇಕು. ನಿನ್ನೆ ಸಂಜೆ ಅನಂತಮೂರ್ತಿಯವರು ನಿಧನರಾದಾಗ ಅನೇಕರು ಪಟಾಕಿ ಹೊಡೆದು ಸಂಭ್ರಮಿಸಿದರು. ಮಂಗಳೂರು, ಚಿಕ್ಕಮಗಳೂರುಗಳಲ್ಲಿ ಪಟಾಕಿ ಹೊಡೆದರು. ಶಿರಸಿಯಲ್ಲೂ ಪಟಾಕಿ ಹೊಡೆದರು. ಇದು ನಿಜಕ್ಕೂ ಖಂಡನೀಯ ವಿಷಯವೇ ಹೌದು. ಅವರು ಎಂತದ್ದೇ ಹೇಳಿಕೆ ಕೊಟ್ಟಿರಲಿ ಆದರೆ ಸಾಹಿತ್ಯದ ವಿಷಯಕ್ಕೆ ಬಂದಾಗ ಮೇರು ಪರ್ವತವಾಗಿಯೇ ನಿಲ್ಲುತ್ತಾರೆ. ಪಟಾಕಿ ಹೊಡೆದು ಸಂಭ್ರಮಿಸಿದವರಲ್ಲಿ ಯಾರೊಬ್ಬರೂ ಸಾಹಿತ್ಯದಲ್ಲಿ ಸಾಧನೆ ಮಾಡಿದವರೆಂದು ಅನ್ನಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಇನ್ನೊಂದು ವಿಷಯ ಅಂದರೆ ವ್ಯಕ್ತಿಯೊಬ್ಬರು ಸತ್ತಾಗ ಸಂಭ್ರಮಿಸುವುದಿದೆಯಲ್ಲ.. ಛೇ. ಖಂಡಿತವಾಗಿಯೂ ವ್ಯಕ್ತಿ ಸತ್ತಾಗ ಪಟಾಕಿ ಹೊಡೆಯುವುದು ಎಷ್ಟು ದುರಂತವೋ ಅದೇ ರೀತಿ ಪಟಾಕಿ ಹೊಡೆದು ಸಂಭ್ರಮ ಪಡುತ್ತಾರೆ ಎಂದರೆ ಬಹುಶಃ ಆ ವ್ಯಕ್ತಿಯ ಜೀವನದ ದುರಂತವೂ ಇರಬೇಕು. ಸತ್ತ ಮೇಲೆ ಸಿಟ್ಟು, ದ್ವೇಷ, ವಿರೋಧವೆಲ್ಲ ಮಣ್ಣಾಗುತ್ತವೆ ಎನ್ನುತ್ತಾರೆ. ಆದರೆ ಅನಂತಮೂರ್ತಿಯವರು ಸತ್ತ ಮೇಲೂ ಪಟಾಕಿ ಹೊಡೆದು ಸಂಭ್ರಮಿಸಿದರು ಎಂದರೆ ಪಟಾಕಿ ಹೊಡೆದವರಲ್ಲಿ ಅದ್ಯಾವಪರಿ ಆಕ್ರೋಶವಿರಬಹುದು? ಅಬ್ಬಾ ಅನ್ನಿಸುತ್ತಿದೆ.
ಅನಂತಮೂರ್ತಿಯವರು ನಿಧನರಾದ ತಕ್ಷಣ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಿತು. ಸರ್ಕಾರಿ ಕಚೇರಿಗಳಿಗೂ ರಜೆಯನ್ನು ನೀಡಿತು. ಬಹುಶಃ ರಾಜ್ಯ ಸರ್ಕಾರ ರಜೆ ನೀಡಿ ತಪ್ಪು ಮಾಡಿತೇನೋ ಎನ್ನಿಸುತ್ತಿದೆ. ಏಕೆಂದರೆ ರಜೆ ಸಿಕ್ಕಿತೆಂದರೆ ಎಂಜಾಯ್ ಮಾಡಲಿಕ್ಕೆ ಕೊಟ್ಟಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೂಡಿಬಿಟ್ಟಿದೆ. ಯಾವ ಕಾರಣಕ್ಕೆ ರಜೆ ಕೊಟ್ಟಿದ್ದಾರೆ ಎಂಬುದನ್ನು ಯಾರೂ ಆಲೋಚಿಸುವುದಿಲ್ಲ. ರಜಾ ಸಿಕ್ಕಿತಲ್ಲ ಎಂದು ಸಂಭ್ರಮಿಸುತ್ತಾರೆ. ಅನಂತಮೂರ್ತಿಯವರಿರಲಿ ಅಥವಾ ಇನ್ಯಾವುದೇ ಗಣ್ಯರು, ಸಾಹಿತಿಗಳು, ಮಾಜಿ ಮು.ಮಂ, ರಾಜಕಾರಣಿಗಳು ನಿಧನರಾದಾಗಲೂ ರಜಾ ಕೊಡಲಾಗುತ್ತದೆ. ರಜಾ ಕೊಟ್ಟಿದ್ದು ನಿಧನರಾಗಿದ್ದಾರೆ, ಶೋಕ ವ್ಯಕ್ತಪಡಿಸಲು. ಆದರೆ ಜನರು ಮಾತ್ರ ರಜಾದಲ್ಲಿ ಮಜಾ ಉಡಾಯಿಸುತ್ತಾರೆ. ಕೊಡುವ ರಜೆ ಮಜಾ ಮಾಡಲು ಬಳಕೆಯಾಗುತ್ತದೆ ಎಂದಾದರೆ ಗಣ್ಯರು ಸತ್ತಾಗ ಯಾಕೆ ರಜಾ ಘೋಷಣೆ ಮಾಡಬೇಕು? ಖಂಡಿತವಾಗಿಯೂ ಮಜಾ ಮಾಡಲು ಬಳಕೆಯಾಗುವ ಇಂತಹ ಘೋಷಿತ ರಜಾಗಳೂ ನಿಧನರಾದವರಿಗೆ ಅವಮಾನವನ್ನು ಉಂಟುಮಾಡುವುದಿಲ್ಲವೇ? ಸತ್ತಾಗ ಪಟಾಕಿ ಹೊಡೆದು ಸಂಬ್ರಮಿಸಿದ್ದಕ್ಕೂ, ರಜಾಕ್ಕೂ ವ್ಯತ್ಯಾಸವೆಲ್ಲಿ ಬರುತ್ತದೆ? ಬಹುಶಃ ಶನಿವಾರ ಕೊಟ್ಟ ರಜಾ ಕೂಡ ಎಷ್ಟೋ ಜನರಿಗೆ ವಿಕೆಂಡ್ ಪಾರ್ಟಿಗೋ, ಅದ್ಯಾವುದೋ ಟ್ರಿಪ್ಪಿಗೋ ಬಳಕೆಯಾಗಿರಬಹುದು. ಇದು ಅನಂತಮೂರ್ತಿಯವರಿಗೆ ಮಾಡಿದ ಅವಮಾನವಾಗಲಿಲ್ಲವೇ? ರಜಾ ಘೋಷಣೆ ಅವಮಾನ ಮಾಡುವುದಾದರೆ ಖಂಡಿತವಾಗಿಯೂ ಇಂತಹ ರಜಾ ಘೋಷಣೆ ನಿಲ್ಲಿಸಬೇಕು. ಅದರ ಬದಲಾಗಿ ನಿಧನರಾದ ವ್ಯಕ್ತಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ಕಚೇರಿಗಳಲ್ಲಿ 1 ತಾಸೋ, 2 ತಾಸೋ ಹೆಚ್ಚುವರಿ ಕೆಲಸವನ್ನು ಮಾಡಬೇಕು. ಆ ಮೂಲಕವಾದರೂ ಸಾವನ್ನಪ್ಪಿದ ಮಹಾನ್ ಸಾಧಕರಿಗೆ ಗೌರವ ನೀಡುವಂತಹ ಪ್ರಕ್ರಿಯೆ ಬೆಳೆಯಬೇಕು. ಹಾಗಾದಾಗ ಮಾತ್ರ ನಿಧನರಾದವರ ಆತ್ಮಕ್ಕೆ ಶಾಂತಿ ದೊರಕಬಹುದು ಎನ್ನುವುದು ನನ್ನ ಭಾವನೆ

ಅನಂತಮೂರ್ತಿಯವರ ಆತ್ಮಕ್ಕೆ ಶಾಂತಿ ದೊರಕಲಿ.

Friday, August 22, 2014

ಬೆಂಗಾಲಿ ಸುಂದರಿ-22

(ಸೈಕಲ್ ರಿಕ್ಷಾ)
              ಸೈಕಲ್ ತುಳಿಯುತ್ತಲೇ ಇದ್ದ. ನೇರ ರಸ್ತೆ ಹಿಂದಕ್ಕೆ ಸರಿಯುತ್ತಲೇ ಇತ್ತು. ಬೆಸರವಾಗದಿರಲಿ ಎನ್ನುವ ಕಾರಣಕ್ಕೆ ಸಲೀಂ ಚಾಚಾ ಇಳಿದನಿಯಲ್ಲಿ ವಿನಯಚಂದ್ರನ ಜೊತೆಗೆ ಮಾತನಾಡುತ್ತಲೇ ಇದ್ದರು. ಇದ್ದಕ್ಕಿದ್ದಂತೆ ಅದೆಲ್ಲಿದ್ದರೋ ಎಂಬಂತೆ ಆರೇಳು ಜನ ಇವರಿದ್ದ ಸೈಕಲ್ ರಿಕ್ಷಾದ ಕಡೆಗೆ ನುಗ್ಗಿಬಂದರು. ನುಗ್ಗಿದ ರೀತಿಯಲ್ಲಿಯೇ ಆ ಗುಂಪು ದರೋಡೆಕೋರರೆಂದು ಮೇಲ್ನೋಟಕ್ಕೆ ತಿಳಿಯಬಹುದಾಗಿತ್ತು. ನುಗ್ಗಿದವರೇ ಸೈಕಲ್ ರಿಕ್ಷಾವನ್ನು ಅಡ್ಡಗಟ್ಟಿದರು. ಕ್ಷಣಕಾಲ ತಬ್ಬಿಬ್ಬಾದ ವಿನಯಚಂದ್ರ. ಅಷ್ಟೇ ಸಾಕಿತ್ತು. ಇಬ್ಬರು ಹಿಡಿದು ಸೈಕಲ್ ನಿಲ್ಲಿಸಿ ವಿನಯಚಂದ್ರನನ್ನು ಕೈಯಲ್ಲಿದ್ದ ಹಗ್ಗದಿಂದ ಕಟ್ಟಿಹಾಕಿದರು. ಸಾಕಷ್ಟು ದೃಢಕಾಯನಾಗಿದ್ದರೂ ಹಲವರ ಎದುರು ವಿನಯಚಂದ್ರನ ಆಟ ನಡೆಯಲಿಲ್ಲ. ಸಲೀಂ ಚಾಚಾ ಹಾಗೂ ಮಧುಮಿತಾಳನ್ನೂ ಹಿಡಿದರು.
            ಹಾಯಾಗಿ ಮಲಗಿ ನಿದ್ರಿಸುತ್ತಿದ್ದ ಮಧುಮಿತಾ ಒಮ್ಮೆ ಬೆಚ್ಚಿ ಬಿದ್ದು ಎದ್ದಳು. ಆದರೆ ಆಕೆ ಅಷ್ಟರಲ್ಲಿ ಬಂಧಿಯಾಗಿದ್ದರು. ಸಲೀಂ ಚಾಚಾ ಅದೇನೋ ಬಯ್ಯುತ್ತಿದ್ದ. ಬೆಂಗಾಲಿ ಹಾಗೂ ಉರ್ದುವಾದ್ದರಿಂದ ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ದರೋಡೆಕೋರರ ಗುಂಪು ಸೈಕಲ್ ರಿಕ್ಷಾವನ್ನು ಪರಿಶೀಲಿಸಿತು. ಅದರಲ್ಲಿದ್ದ ಬ್ಯಾಗನ್ನು ಹುಡುಕಿ ಅಲ್ಲಿದ್ದ ಹಣವನ್ನೂ, ಬೆಲೆ ಬಾಳುವ ವಸ್ತುಗಳನ್ನೂ ದೋಚಿಕೊಂಡಿತು. ವಿನಯಚಂದ್ರನಿಗೆ ಎರಡೇಟು ಹೊಡೆದು, ಹಗ್ಗದಿಂದ ಕಟ್ಟಿಹಾಕಿ ಮುಂದಕ್ಕೆ ಹೋದರು. ಸಲೀಂ ಚಾಚಾ ಕಷ್ಟಪಟ್ಟು ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಮಧುಮಿತಾ ಹಾಗೂ ವಿನಯಚಂದ್ರನನ್ನೂ ಬಿಡಿಸಿದರು. ಸಲೀಂ ಚಾಚಾ ತಮ್ಮ ಜೀವ ಉಳಿದಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ. ಹೊಡೆಸಿಕೊಂಡಿದ್ದ ಹೊಡೆತದಿಂದ ವಿನಯಚಂದ್ರ ಸುಧಾರಿಸಿಕೊಳ್ಳುತ್ತಿದ್ದ.
                   ಮಧುಮಿತಾ `ಹಾಳಾದವರು.. ನಮ್ಮ ಎಲ್ಲ ಹಣವನ್ನೂ ಅಗತ್ಯ ವಸ್ತುಗಳನ್ನೂ ದೋಚಿಕೊಂಡು ಹೋದರು..' ಎಂದು ಹಿಡಿಶಾಪ ಹಾಕಿದಳು.
                   ಸಲೀಂ ಚಾಚಾ `ಪುಣ್ಯ.. ಅವರು ನಿನಗೇನೂ ಮಾಡಲಿಲ್ಲವಲ್ಲ..' ಎಂದರು. ನಿಧಾನವಾಗಿ ವಿನಯಚಂದ್ರ ಸುಧಾರಿಸಿಕೊಳ್ಳತೊಡಗಿದ.
             ದರೋಡೆಕೋರರು ಏನೇನನ್ನು ಕದ್ದೊಯ್ದಿದ್ದಾರೆ ಎಂದು ಪರೀಕ್ಷೆ ಮಾಡತೊಡಗಿದರು. ಬ್ಯಾಗಿನಲ್ಲಿದ್ದ ಸಂಪೂರ್ಣ ಹಣವನ್ನು ಅವರು ಹೊತ್ತೊಯ್ದಿದ್ದರು. ಅಷ್ಟೇ ಅಲ್ಲದೇ ವಿನಯಚಂದ್ರದ ಅತ್ಯಮೂಲ್ಯ ಕಾಗದಪತ್ರಗಳನ್ನೂ ಒಯ್ದುಬಿಟ್ಟಿದ್ದರು. ಮೊಬೈಲ್ ಕೂಡ ಕಿತ್ತುಕೊಂಡು ಹೋಗಿದ್ದರು. ಮಧುಮಿತಾ ಆಭರಣ ಧರಿಸುವ ಹುಚ್ಚಿನವಳಲ್ಲವಾದ್ದರಿಂದ ಆಭರಣ ಒಯ್ದಿರಲಿಲ್ಲ. ವಿನಯಚಂದ್ರ ಹಾಗೂ ಮಧುಮಿತಾ ಭಾರತಕ್ಕೆ ಹೋಗಬೇಕೆಂದಿದ್ದರೆ ಬಾಂಗ್ಲಾದಲ್ಲಿ ಇನ್ನೂ ನೂರಾರು ಕಿ.ಮಿ ಸಾಗಬೇಕಿತ್ತು. ಕೈಯಲ್ಲಿದ್ದ ಹಣವೆಲ್ಲ ದರೋಡೆಕೋರರ ಪಾಲಾಗಿತ್ತು. ಹಣವಿಲ್ಲದೇ ಮುಂದೆ ಸಾಗುವುದು ಬಹಳ ದುಸ್ತರವಾಗಿತ್ತು. ಸುಧಾರಿಸಿಕೊಂಡ ವಿನಯಚಂದ್ರ ಸಲೀಂ ಚಾಚಾನ ಬಳಿ ಮುಂದೇನು ಮಾಡುವುದು ಎಂದು ಕೇಳಿದ. ಸಲೀಂ ಚಾಚಾ ಏನೇ ಮಾಡಿದರೂ ಪ್ರಯಾಣ ನಿಲ್ಲುವುದು ಬೇಡ. ಮುಂದಕ್ಕೆ ಹೋಗೋಣ ಎಂದರು. ವಿನಯಚಂದ್ರ ತನ್ನ ಗುರುತಿನ ಚೀಟಿಯ ಬಗ್ಗೆ ಅನುಮಾನ ಉಂಟಾಯಿತು. ಬ್ಯಾಗನ್ನು ಹುಡುಕಿದ. ದರೋಡೆಕೋರರು ವಿನಯಚಂದ್ರನ ಗುರುತಿನ ಚೀಟಿಯನ್ನೂ ಕಿತ್ತುಕೊಂಡು ಹೋಗಿದ್ದರು. ಭಾರತಕ್ಕೆ ಪೋನು ಮಾಡೋಣ ಎಂದುಕೊಂಡರೆ ಮೊಬೈಲ್ ಪೋನ್ ಕೂಡ ಹೊತ್ತುಕೊಂಡು ಹೋಗಿದ್ದರು.
            ಸಲೀಂ ಚಾಚಾ ತಾನೇ ಸೈಕಲ್ ಚಲಾಯಿಸಲು ಆರಂಭಿಸಿದ. ಕೆಲವು ಗಂಟೆಗಳ ನಂತರ ಅಶೂಲಿಯಾ ಪಟ್ಟಣ ಸಿಕ್ಕಿತು. ಆಗ ಬೆಳಗಿನ ಜಾವ ಮೂಡುತ್ತಿತ್ತು. ಸಲೀಂ ಚಾಚಾ ಮೊದಲು ಅಶೂಲಿಯಾದಲ್ಲಿ ಉಳಿಯೋಣ ಎಂದು ಹೇಳಿದ್ದನಾದರೂ ಪ್ರಯಾಣ ಮುಂದುವರಿಸೋಣ ಎನ್ನುವ ನಿರ್ಧಾರ ಕೈಗೊಂಡಿದ್ದ. ಅಶೂಲಿಯಾದಿಂದ ಒಂದು ತಾಸಿನ ಅವಧಿಗೆ ಜಿರಾಬೋ ಪಟ್ಟಣ ಕೂಡ ಹಿಂದಕ್ಕೆ ಸರಿಯಿತು. ಕೊನೆಗೊಮ್ಮೆ ಜಿರಾಬೋದ ನಂತರ ಸಿಗುವ ಘೋಸ್ಬಾಗ್ ನಲ್ಲಿ ಉಳಿಯುವ ನಿರ್ಧಾಕ್ಕೆ ಸಲೀಂ ಚಾಚಾ ಬಂದಿದ್ದ. ಅಶೂಲಿಯಾ ಹಾಗೂ ಜಿರಾಬೋಗಳ ನಡುವೆ ಮಧ್ಯ ಮಧ್ಯ ಗದ್ದೆ ಬಯಲುಗಳಿದ್ದರೂ ಜಿರಾಬೋ ಘೋಸ್ಬಾಗ್ ಒಂದಕ್ಕೊಂದು ಕೂಡಿಕೊಂಡಿದ್ದವು. ಮಧ್ಯಮ ವರ್ಗದವರೇ ಹೆಚ್ಚಾಗಿದ್ದ ಪಟ್ಟಣ ಗೋಸ್ಬಾಗ್. ಗೋಸ್ಬಾಗ್ ತೆರಳುವ ವೇಳೆಗೆ ಪೂರ್ವದಲ್ಲಿ ಸೂರ್ಯ ಉದಯಿಸಿದ್ದ. ಮಧುಮಿತಾಳಿಗೆ ಹೊಟ್ಟೆ ಚುರುಗುಡುತ್ತಿತ್ತಾದರೂ ಹಸಿವಾಗಿದೆ ಎನ್ನಲು ಮುಜುಗರ. ಕೈಯಲ್ಲಿ ದುಡ್ಡಿಲ್ಲ. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತೊಯ್ದಿದ್ದರು. ಸಲೀಂ ಚಾಚಾನೇ ಮಧುಮಿತಾ ಹಾಗೂ ವಿನಯಚಂದ್ರನ ಬಳಿ ಹೊಟೆಲಿಗೆ ತೆರಳಿ ತಿಂಡಿ ತಿನ್ನೋಣ ಎಂದ. ಆದರೆ ವಿನಯಚಂದ್ರ ಹಾಗೂ ಮಧುಮಿತಾ ತಮಗೆ ಹಸಿವಿಲ್ಲ ಎಂದು ಹೇಳಿದರು. ಆದರೆ ಸಲೀಂ ಚಾಚಾನಿಗೆ ಅಸಲಿ ವಿಷಯ ತಿಳಿದಿತ್ತು. ತಕ್ಷಣವೇ ಕಣ್ಣು ಮಿಟುಕಿಸುತ್ತಾ `ಯಾಕೆ ದುಡ್ಡಿಲ್ಲ ಅಂತ ತಿಂಡಿ ಕೂಡ ತಿನ್ನೋದಿಲ್ಲವಾ? ಬನ್ನಿ ದುಡ್ಡಿದೆ..' ಎಂದು ಹೇಳಿದರು.
          `ಚಾಚಾ.. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತುಕೊಂಡು ಹೋಗಿದ್ದಾರೆ. ದುಡ್ಡಿದೆ ಅನ್ನುತ್ತೀಯಲ್ಲಾ... ಹಹ್ಹಾ..' ಎಂದ ವಿನಯಚಂದ್ರ.
          `ಅಯ್ಯೋ ಹುಚ್ಚಪ್ಪಾ... ತಾಳು..' ಎಂದವನೇ ಸಲೀಂ ಚಾಚಾ ಸೀದಾ ಸೈಕಲ್ ರಿಕ್ಷಾದ ಪ್ರಯಾಣಿಕರು ಕೂರುವ ಸೀಟನ್ನು ಹರಿಯಲಾರಂಭಿಸಿದ. ಸೀಟಿನ ಅಡಿಯಲ್ಲಿತ್ತು ದುಡ್ಡು. ಸಾವಿರ ಸಾವಿರ ಗಟ್ಟಲೆ ಹಣ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರ ಕಣ್ಣಲ್ಲೂ ಅಚ್ಚರಿ. ಇದೇನು ಎಂಬಂತೆ ನೋಡಿದರು. ಸಲೀಂ ಚಾಚಾ `ಯಾವುದಕ್ಕೂ ಇರಲಿ ಎಂಬಂತೆ ಇಟ್ಟಿದ್ದೆ. ಯಾವಾಗಲೋ ಇಟ್ಟಿದ್ದೆ. ಅಂತೂ ಹೀಗೆ ಉಪಯೋಗಕ್ಕೆ ಬಂತು. ನೋಡು 10 ಸಾವಿರಕ್ಕೂ ಅಧಿಕ ಇದೆ.  ನಮ್ಮ ಹಿರಿಯರು ಇಂತದ್ದಕ್ಕೆ ಆಪದ್ಧನ ಎಂದು ಹೇಳುವುದಲ್ಲವಾ?' ಎಂದರು. ಸಲೀಮ ಚಾಚಾನ ಮುಂದಾಲೋಚನೆ ಖುಷಿ ತಂದಿತು.
           ಹತ್ತಿರದಲ್ಲೇ ಇದ್ದ ಹೊಟೆಲೊಂದಕ್ಕೆ ಹೋಗಿ ತಿಂಡಿ ತಿಂದರು. ಅಲ್ಲೊಂದು ಕಡೆ ರೂಮು ಮಾಡಿ ಕೊಂಚ ವಿಶ್ರಾಂತಿ ಪಡೆದುಕೊಂಡರು. ಮದ್ಯಾಹ್ನದ ಊಟ ಮುಗಿಸಿ ಸಂಜೆಯ ಉಟವನ್ನು ಕಟ್ಟಿಸಿಕೊಂಡು ಇಳಿ ಸಂಜೆಯಲ್ಲಿ ಪ್ರಯಾಣವನ್ನು ಮತ್ತೆ ಆರಂಭಿಸಿದರು. ಗೋಸ್ಭಾಗ್ ನಿಂದ ನರೋಸಿನ್ಹೋಪುರ ಮತ್ತೊಂದು ತಾಸಿನಲ್ಲಿ ಸಿಕ್ಕಿತು. ಬೆಂಗಾಲಿಯರು ಎಲ್ಲವನ್ನೂ ಓ ಎಂದು ಕರೆಯುತ್ತಾರೆ. ಭಾರತದ ಅಸ್ಸಾಂ ಬೆಂಗಾಲಿಗರ ಬಾಯಲ್ಲಿ ಅಸ್ಸೋಂ ಆಗುತ್ತದೆ. ನರಸಿಂಹಪುರ ನರೋಸಿಂಹೋಪುರವಾಗುತ್ತದೆ. ಬೆಂಗಾಲಿ ಭಾಷೆಯ ವಿಶಿಷ್ಟವೇ ಇದು. ನರೋಸಿಂಹೋಪುರ ಬೆಂಗಾಲಿಯ ಅತ್ಯಂತ ಪುರಾತನ ಪಟ್ಟಣಗಳಲ್ಲೊಂದು. ಢಾಕಾ-ಅಶೂಲಿಯಾ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ನರೋಸಿಂಹೋಪುರವಿದ್ದರೆ ಇನ್ನೊಂದು ಭಾಗದಲ್ಲಿ ಗದ್ದೆ ಬಯಲುಗಳು ವಿಸ್ತಾರವಾಗಿ ಹರಡಿಕೊಂಡಿದ್ದವು. ಸಲೀಂ ಚಾಚಾ ಹುರುಪಿನಿಂದ ಸೈಕಲ್ ಚಲಾಯಿಸುತ್ತಿದ್ದರು. ಮಧುಮಿತಾ ಹಾಗೂ ವಿನಯಚಂದ್ರ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
            ಮತ್ತೆ ಕೆಲವು ಕಿಲೋಮೀಟರುಗಳ ಅಂತರದಲ್ಲಿ ಜಾಮ್ಗೋರಾ ಪಟ್ಟಣ ಸಿಕ್ಕಿತು. ಜಾಮ್ಗೋರಾ ನಗರಿ ಬೈಪೈಲ್ ಎಂಬ ಪಟ್ಟಣದ ಉಪನಗರಿ. ಸಾಕಷ್ಟು ವಿಸ್ತಾರವಾಗಿಯೂ ಇತ್ತು. ನಗರದಲ್ಲಿ ಜನಸಂಚಾರ ಜೋರಾಗಿತ್ತು. ರಾತ್ರಿಯಾದರೂ ಜನಸಾಮಾನ್ಯರು ಓಡಾಡುತ್ತಿದ್ದರು. ವಿನಯಚಂದ್ರ, ಸಲೀಂ ಚಾಚಾ ಹಾಗೂ ಮಧುಮಿತಾಳ ಮನಸ್ಸಿನಲ್ಲಿ ಆತಂಖ ದೂರವಾಗಿತ್ತು. ಬೈಪೈಲ್ ನಗರಿಯ ಗಲ್ಲಿಗಲ್ಲಿಗಳು ಸೆಳೆಯುವಂತಿದ್ದವು. ಮಧುಮಿತಾ ತಾನು ಹಿಂದೊಮ್ಮೆ ಈ ನಗರಿಯಲ್ಲಿ ಅಡ್ಡಾಡಿರುವುದಾಗಿ ತಿಳಿಸಿದಳು. ನಗರಿ ಅಭಿವೃದ್ಧಿಯಲ್ಲಿ ಮುಂದುವರಿದಂತೆ ಕಾಣಿಸಿತು. ಒಂದೆರಡು ಸೆಣಬಿನ ಕಾರ್ಖಾನೆಗಳೂ ಕಾಣಿಸಿದವು. ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸಿದವು. ಬಾಂಗ್ಲಾದ ಮುಂದುವರಿದ ಪ್ರದೇಶದಲ್ಲಿ ಇದೂ ಒಂದು ಎನ್ನಬಹುದು.
            ಮುಂದಕ್ಕೆ ಸಾಗಿದಂತೆ ನಬೀನಗರ-ಚಂದ್ರ ರಸ್ತೆ ಸಿಕ್ಕಿತು. ರಸ್ತೆಯಲ್ಲಿ ಬಲಕ್ಕೆ ಹೊರಳಿ ಮುಂದಕ್ಕೆ ಸಾಗಿತು ಸೈಕಲ್ ರಿಕ್ಷಾ. ಉದ್ದನೆಯ ಹೆದ್ದಾರಿಯಲ್ಲಿ ಸಾಳು ಸಾಲು ವಾಹನಗಳು ಸಾಗುತ್ತಿದ್ದವು. ರೊಯ್ಯಂನೆ ಓಡುವ ವಾಹನಗಳ ಹಾರನ್ ಶಬ್ದ ಕಿವಿಗೆ ರಾಚುತ್ತಿತ್ತು. ಬೈಪೈಲ್ ನಗರದಲ್ಲಿ ಸಾಕಷ್ಟು ಜನದಟ್ಟಣೆಯೂ ಇತ್ತು. ರಸ್ತೆ ರಸ್ತೆಗಳಲ್ಲಿ ಕೆಂಪುದೀಪವಿತ್ತು. ಈ ನಡುವೆ ವಿನಯಚಂದ್ರ ತಾನೇ ಸೈಕಲ್ ತುಳಿಯಲು ಮುಂದಾದ. ಸೈಕಲ್ ಏರಿದ. ಹಿಂದಿನ ಸೀಟಿಗೆ ಹೋಗಿ ಕುಳಿತ ಸಲೀಂ ಚಾಚಾ `ಬೇಟಿ.. ಈ ಹುಡುಗನಿದ್ದಾನಲ್ಲ ಬಹಳ ಒಳ್ಳೆಯವನು. ನಿನಗೆ ಒಳ್ಳೆಯ ಗಂಡನಾಗುತ್ತಾನೆ. ನೀನು ಇವನನ್ನು ಪ್ರೀತಿಸಿ ಒಳ್ಳೆಯ ಕೆಲಸವನ್ನು ಮಾಡಿದೆ. ಈತನಲ್ಲಿ ಒಳ್ಳೆಯ ಗುಣಗಳೇ ಇವೆ. ಕೆಟ್ಟವನಲ್ಲ. ಈತನ ಜೊತೆ ಚನ್ನಾಗಿ ಬಾಳು.. ನಿನ್ನ ಬದುಕು ಬಂಗಾರವಾಗುತ್ತದೆ..' ಎಂದರು.
           ನಾಚಿಕೊಂಡ ಮಧುಮಿತಾ ಸುಮ್ಮನೆ ತಲೆಯಾಡಿಸಿದಳು. ವಿನಯಚಂದ್ರನ ಜೊತೆಗೆ ಬಾಳಿದಂತೆ, ಖುಷಿಯಿಂದ ಬದುಕಿದಂತೆ ಕನಸು ಕಾಣಲಾರಂಭಿಸಿದಳು. ಮುಂದೆ ಬರುವ ಕಷ್ಟದ ದಿನಗಳ ಅರಿವು ಆಕೆಗೆ ಇರಲಿಲ್ಲವಾದ್ದರಿಂದ ಆ ಕ್ಷಣ ಸ್ವರ್ಗದಂತೆ ಭಾಸವಾಯಿತು.
            ಬೈಪೈಲ್ ನಗರ ದಾಟುತ್ತಿದ್ದಂತೆಯೇ ಮತ್ತೆ ಗದ್ದೆ ಬಯಲುಗಳು ಕಾಣಲಾರಂಭಿಸಿದವು. ಅಲ್ಲೊಂದು ಕಡೆ ಸೈಕಲ್ ರಿಕ್ಷಾ ನಿಲ್ಲಿಸಿ ಊಟಕ್ಕೆ ಮುಂದಾದರು. ರಸ್ತೆಯ ಪಕ್ಕದ ಗದ್ದೆ ಬಯಲಿನಲ್ಲಿ ಕುಳಿತು ಕಟ್ಟಿಸಿಕೊಂಡಿದ್ದ ಊಟವನ್ನು ಬಿಚ್ಚಿದರು. ಗದ್ದೆಯಿಂದ ಬೀಸಿ ಬರುತ್ತಿದ್ದ ಚಳಿಗಾಳಿ ಹಲ್ಲನ್ನು ಕಟಕಟಿಸುವಂತೆ ಮಾಡುತ್ತಿತ್ತು. ಊಟ ಮುಗಿಸಿ ನೀರು ಕುಡಿದು ಮತ್ತೆ ಸೈಕಲ್ ಬಳಿ ಹೋಗುವ ವೇಳೆಗೆ ಮಧುಮಿತಾಳಂತೂ ಚಳಿಯಿಂದ ಕಟಕಟಿಸಲು ಆರಂಭಿಸಿದ್ದಳು. ವಿನಯಚಂದ್ರ ಆಕೆಯನ್ನು ತಬ್ಬಿ ಹಿಡಿದು ಸೈಕಲ್ ಏರಿದ. ಸಲೀಂ ಚಾಚಾ ಸೈಕಲು ತುಳಿಯಲು ತೊಡಗಿದರು. ತನ್ನ ಕಾಲಮೇಲೆ ಮಧುಮಿತಾಳ ತಲೆಯನ್ನು ಇರಿಸಿಕೊಂಡು ನೇವರಿಸತೊಡಗಿದ. ಮಧುಮಿತಾಳಿಗೆ ಹಿತವಾಗಿತ್ತು. ಖುಷಿಯಿಂದ ನಸುನಕ್ಕಿದ್ದಳು. `ಯಾವ ಜನ್ಮದ ಪುಣ್ಯವೋ ಏನೋ.. ನೀ ನಂಗೆ ಸಿಕ್ಕಿದ್ದೀಯಾ ಗೆಳೆಯಾ.. ಬದುಕಿನಲ್ಲಿ ಏನೇನಾಗ್ತದೋ.. ನಾ ನಿನ್ ಜೊತೆಗಿರ್ತೀನಿ...' ಪಿಸುಗುಟ್ಟಿದಳು ಮಧುಮಿತಾ.
         `ಹೀಗೆ ಇದ್ದು ಬಿಡೋಣ ಅನ್ನಿಸ್ತದೆ ಕಣೆ. ಈಗ ಕಷ್ಟವಿದೆ ನಿಜ. ಮುಂದಿನ ಬದುಕು ಸುಂದರವಾಗಿರಬಹುದು. ಆಶಾವಾದದಲ್ಲೇ ಬದುಕು ಸಾಧಿಸಬೇಕು. ಈ ಬಾಂಗ್ಲಾ ನಾಡನ್ನು ಒಮ್ಮೆ ದಾಟಿ ಬಿಡೋಣ ಮುಂದೆ ಒಳ್ಳೆಯ ದಿನಗಳು ನಮಗೆ ಸಿಗಬಹುದು. ನನ್ನ ಪ್ರೀತಿಯ ಕರ್ನಾಟಕ, ಅಲ್ಲಿ ಪಶ್ಚಿಮ ಘಟ್ಟದಲ್ಲಿ, ಮಲೆನಾಡಿನ ಗುಡ್ಡದ ತಪ್ಪಲಿನಲ್ಲಿ ಇರುವ ದೊಡ್ಡ ಮನೆಯಲ್ಲಿ ನಾನು-ನೀನು ರಾಜ ರಾಣಿಯರಂತೆ ಬದುಕೋಣ. ಜೊರಗುಡುವ ಮಳೆ, ಕೊರೆಯುವ ಚಳಿ, ಬೇಸಿಗೆಯ ಹಿತವಾತಾವರಣ ಅಲ್ಲಿದೆ. ಮನೆಯೆದುರು ಇರುವ ಅಡಕೆ ತೋಟಗಳು, ಹಿಂಭಾಗದಲ್ಲಿರುವ ದಟ್ಟ ಕಾಡು ಖಂಡಿತ ನಿನಗೆ ಇಷ್ಟವಾಗುತ್ತದೆ. ಇನ್ನು ನನ್ನ ಅಪ್ಪ-ಅಮ್ಮನ ಬಗ್ಗೆ ಹೇಳಲೇಬೇಕು. ನಾನು ಇಷ್ಟಪಟ್ಟಿದ್ದು ಅವರಿಗೂ ಖಂಡಿತ ಇಷ್ಟವಾಗುತ್ತದೆ. ನನ್ನ ಆಯ್ಕೆಗೆ ಅವರು ಎದುರಾಡಿಲ್ಲ. ಎದುರಾಡುವುದೀ ಇಲ್ಲ. ನಾನು ಈಗಾಲೇ ನಿನ್ನ ಬಗ್ಗೆ ಹೇಳಿದ್ದೇನೆ. ಖಂಡಿತ ಅವರು ನಮಗಾಗಿ ಕಾಯುತ್ತಿರುತ್ತಾರೆ. ಇನ್ನು ತಂಗಿಯಂತೂ ಪ್ರೀತಿಯಿಂದ ಆದರಿಸುತ್ತಾಳೆ..' ಎಂದ.
          `ಹುಂ..' ಎಂದಳು ಮಧುಮಿತಾ. `ನಮ್ಮ ಮನೆಯ ಬಗ್ಗೆ ಬಹಳ ಕುತೂಹಲವಾಗ್ತಿದೆ ವಿನೂ.. ಆದರೆ ಅಲ್ಲಿಗೆ ಹೋಗಲಿಕ್ಕೆ ಇನ್ನೂ ಬಹಳ ಸವಾಲನ್ನು ಎದುರಿಸಬೇಕಿದೆ.. ಅಲ್ಲವಾ..' ಎಂದಳು ಮಧುಮಿತಾ.
        ಸಲೀಂ ಚಾಚಾ ನಡುವೆ ಬಾಯಿ ಹಾಕಿ `ಏನೂ ಆಗೋದಿಲ್ಲ.. ನಿಮ್ಮನ್ನು ಭಾರತದ ಗಡಿಯೊಳಗೆ ಹಾಕುವುದೇ ನನ್ನ ಜವಾಬ್ದಾರಿ.. ಹೆದರಬೇಡಿ. ನಾನಿರುವ ತನಕ ನಿಮಗೇನೂ ಆಗುವುದಿಲ್ಲ..' ಎಂದ. ಚಾಚಾನ ಪ್ರೀತಿಗೆ ಜೋಡಿ ಹಕ್ಕಿಗಳು ಕಣ್ಣೀರಾಗುವುದೋಂದೇ ಬಾಕಿ.  ಮನಸ್ಸಿನಲ್ಲಿಯೇ ಆತನಿಗೊಂದು ಧನ್ಯವಾದ ಹೇಳಿದರು. ಸೈಕಲ್ ಮುಂದಕ್ಕೆ ಸಾಗುತ್ತಲೇ ಇತ್ತು. `ಇದೋ ನೋಡಿ ಹೀಗೆ ಸಾಗಿದರೆ ಚಕ್ರೋಬೋರ್ತಿ (ಚಕ್ರವರ್ತಿ) ಅನ್ನುವ ಊರು ಸಿಗುತ್ತದೆ. ಮುಂದಕ್ಕೆ ಸಿಗುತ್ತದಲ್ಲ ಅದೇ ಪನೀಸೈಲ್. ಎಂತೆಂತ ಪ್ರದೇಶಗಳಿವೆ.. ನೋಡಿ..' ಎಂದು ಕತ್ತಲೆಯಲ್ಲಿಯೇ ಚಾಚಾ ಬೋರ್ಡನ್ನು ತೋರಿಸಿ ವಿವರಿಸುತ್ತಿದ್ದರೆ ಹಿಮದೆ ಕುಳಿತ ಜೋಡಿ ಹಕ್ಕಿಗಳು ಸುಮ್ಮನೆ ಕಣ್ತುಂಬಿಕೊಳ್ಳುತ್ತಿದ್ದವು. ಯಾವುದೋ ಕನಸಿನ ನಗರಿಯಲ್ಲಿ ರಥದ ಮೇಲೆ ಸಾಗಿದಂತೆ ಅವರಿಗೆ ಅನ್ನಿಸುತ್ತಿತ್ತು.

(ಮುಂದುವರಿಯುತ್ತದೆ..)

ಕಹಿ ಕಹಿ ಹನಿಗಳು

ಇಬ್ಬಗೆ

ಇಸ್ರೇಲಿ ಯೋಧರು
ಭಯೋತ್ಪಾದಕರನ್ನು ಕೊಂದರೆ
ಭಾರತದ ಬುದ್ಧಿ ಜೀವಿಗಳು
ಕೂಗ್ಯಾಡಿದರು. ಹುಯ್ಯಲಿಟ್ಟರು.
ಅತ್ತು ಕರೆದರು..|
ಮಾನವ ಹಕ್ಕುಗಳ ಉಲ್ಲಂಘನೆಯೆಂದರು. |
ಉಗ್ರರು
ಪತ್ರಕರ್ತರ ತಲೆ ಕಡಿದರು |
ಭಾರತದ ಬುದ್ಧಿ ಜೀವಿಗಳು
ನಿದ್ದೆಹೋದರು,
ಸುಮ್ಮನುಳಿದರು ||

ಎರಡು ಮುಖ

ಮದನಿಗೆ ಹಿಂದೂಗಳ ಮೆಲೆ ಸಿಟ್ಟು
ಭಾರತೀಯರನ್ನು ಕೊಲ್ಲಲು
ಸದಾ ಹವಣಿಸುವ ಪಟ್ಟು|
ಆದರೆ ಆರೋಗ್ಯ ಉಳಿಸಿಕೊಳ್ಳಲು
ಬೇಕಾಗಿದ್ದು ಮಾತ್ರ
ಆಯುರ್ವೇದ ಎಂಬುದು
ಬಚ್ಚಿಟ್ಟ ಗುಟ್ಟು ||

ವಾಟಾಳ ಪ್ರತಾಪ

ಕನ್ನಡದ ಕುರಿತು
ಯಾವಾಗಲೂ ಎದ್ದರು
ವಾಟಾಳರು |
ಉಳಿದ ಸಮಯದಲ್ಲಿ ಮಾತ್ರ
ಯಾವಾಗಲೂ ಕಾಣರು |

ಬುದ್ದಿಜೀವಿಯೆಂದರೆ

ಬುದ್ಧಿ ಜೀವಿಗಳೆಂದರೆ
ಬುದ್ದಿ ಹೆಚ್ಚಾಗಿ
ಲದ್ದಿಗಳಂತಾಗಿರುವ
ಜೀವಿಗಳು |

Thursday, August 21, 2014

ಬೆತ್ತಲೆ ಮರ ಬಿತ್ತಲೆ

ಮರವೊಂದರ ಗಾತ್ರ ಎಷ್ಟು ದೊಡ್ಡದಿರಬಹುದು? 10 ಅಡಿ, 15 ಅಡಿ? ಶಿರಸಿ ತಾಲೂಕಿನ ಕೆಂಗ್ರೆಹೊಳೆಯ ಕಾನಿನಲ್ಲಿ ಒಂದು ಮರವಿತ್ತು. ಆ ಮರದ ಸುತ್ತಳತೆಯನ್ನು ಅರಿಯಬೇಕಾದರೆ 15-20 ಮಂದಿ ಅಕ್ಕಪಕ್ಕ ಕೈ ಅಗಲಿಸಿ ನಿಂತು ಮರವನ್ನು ತಬ್ಬಿ ಹಿಡಿಯಬೇಕಿತ್ತು. ಅಂತಹ ಹೆಮ್ಮರ ಇದೀಗ ಮುರಿದು ಬಿದ್ದಿದೆ.
ಸ್ಥಳೀಯರ ಬಾಯಲ್ಲಿ ಮಲೆಯಾಳಿಮರ ಎಂದು ಕರೆಯಲ್ಪಡುತ್ತಿದ್ದ ಹೆಮ್ಮರದ ನೈಜ ಹೆಸರು ಬೊಂಡಾಲೆ ಎಂದು. ಈ ಮರದ ವೈಜ್ಞಾನಿಕ ನಾಮಧೇಯ ಟೈಟ್ರಾಮೆಲಸ್ ನ್ಯೂಡಿಫ್ಲೋರಾ. ಈ ಮರದ ಬುಡದಲ್ಲಿ ಅರಣ್ಯ ಇಲಾಖೆ ಹಾಕಿರುವ ಫಲಕದ ಮೇಲೆ ಮರದ ಸುತ್ತಳತೆ 7 ಮೀಟರ್ (22 ಅಡಿ 9 ಇಂಚು) ಹಾಗೂ ಎತ್ತರ 52 ಮೀಟರ್ (169 ಅಡಿ) ಎಂದು ನಮೂದು ಮಾಡಲಾಗಿದೆ. ಅಗಾಧ ಗಾತ್ರವನ್ನು ಹೊಂದಿದ್ದ ಈ ಮರ ನೂರಾರು ಜೇನು ಕುಟುಂಬಗಳಿಗೆ ಗೂಡು ಕಟ್ಟಲು ಆಶ್ರಯ ನೀಡಿತ್ತು. ಈ ಕಾರಣದಿಂದಾಗಿ ಈ ಮರವನ್ನು ಜೇನುಮರ ಎಂದೂ ಕರೆಯಲಾಗುತ್ತಿತ್ತು.
ಶಿರಸಿ ನಗರದಿಂದ 8 ಕಿ.ಮಿ ದೂರದ ಕೆಂಗ್ರೆಹೊಳೆಯ ಅರವಿಂದ ನರ್ಸರಿ ಬಳಿಯ ಕಾಡಿನಲ್ಲಿದ್ದ ಈ ಮರದ ಆಯಸ್ಸು 350 ರಿಂದ 400 ವರ್ಷಗಳಿಗಿಂತಲೂ ಅಧಿಕ. ಅಂದರೆ ಭಾರತಕ್ಕೆ ಬ್ರಿಟೀಷರು ಆಗಮಿಸಿದ್ದ ಸಂದರ್ಭ. ಬ್ರಿಟೀಷರು ಭಾರತಕ್ಕೆ ಬಂದಿದ್ದು, ವ್ಯಾಪಾರವನ್ನು ಮಾಡಿದ್ದು, ಭಾರತವನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದು, ಭಾರತೀಯರ ಸ್ವಾತಂತ್ರ್ಯಹೋರಾಟ, ಸ್ವತಂತ್ರವಾಗಿದ್ದು ಇವೆಲ್ಲವನ್ನೂ ಈ ಮರ ಕಂಡಿತ್ತು. ನಾಲ್ಕು ಶತಮಾನಗಳ ಕಾಲ ಮರಗಳ್ಳರ ಕೊಡಲಿಯೇಟಿಗೆ ಬಲಿಯಾಗದೇ ಅಗಾಧವಾಗಿ ನಿಂತಿತ್ತು. ದೈತ್ಯವಾಗಿ ಕಂಡಿತ್ತು. ಹುಲೇಕಲ್, ಸಾಲಕಣಿ, ಕೆಂಗ್ರೆಹೊಳೆ, ಓಣಿಕೇರಿ, ವಾನಳ್ಳಿ ಈ ಭಾಗದ ಸಾರ್ವಜನಿಕರಂತೂ ಈ ದೈತ್ಯಮರವನ್ನು ತಮ್ಮ ಭಾಗದ ಹೆಮ್ಮೆ ಎಂದೇ ಆರಾಧಿಸುತ್ತ ಬಂದಿದ್ದರು.
ಈ ಮರದ ಅಗಲವಾದ ಬೇರುಗಳ ಗಾತ್ರವನ್ನು ಗಮನಿಸಿದರೆ ನೋಡುಗರು ವಿಸ್ಮಯ ಪಡುವಂತಿತ್ತು. ಮರದ ಸುತ್ತಲೂ ಚಾಚಿರುವ ಬೇರುಗಳಲ್ಲಿ ಒಂದು ಬೇರಿನಿಂದ ಇನ್ನೊಂದು ಬೇರಿನ ನಡುವೆ ಆರಡಿಯ ಆಜಾನುಬಾಹು ನಿಂತಿದ್ದರೂ ಬೇರಿನ ಇನ್ನೊಂದು ಪಕ್ಕದಲ್ಲಿ ನಿಂತಿದ್ದವರಿಗೆ ಕಾಣುತ್ತಿರಲಿಲ್ಲ. ಅಷ್ಟೇ ಏಕೆ ಈ ಬೇರುಗಳ ನಡುವೆ ಆರೆಂಟು ಅಡಿಯ ಕೋಣೆಗಳನ್ನೂ ಮಾಡಿ ಬದುಕಬಹುದಿತ್ತು. ಈ ಕೆಲವೇ ಕೆಲವು ಅಂಶಗಳೇ ಮರದ ಬೃಹತ್ ಗಾತ್ರವನ್ನು ಕಣ್ಣಮುಂದೆ ಕಟ್ಟಿಕೊಡುತ್ತವೆ.
ಪರಿಸರ ಹೋರಾಟಗಾರ, ಬರಹಗಾರ ಶಿವಾನಂದ ಕಳವೆಯವರ ಪರಿಸರ ಕಾಳಜಿಯಿಂದಾಗಿ ಈ ಮರದ ರಕ್ಷಣೆ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿತ್ತು. ಈ ಮರವನ್ನು ಅರಣ್ಯಗಳ್ಳರು ಕಡಿಯದಂತೆ ವಿಶೇಷ ಮುತುವರ್ಜಿಯನ್ನೂ ವಹಿಸಲಾಗಿತ್ತು. ಮರದ ಮೇಲೆ ನೂರಾರು ಜೇನು ಕುಟುಂಬಗಳು ಸದಾಕಾಲ ಗೂಡು ಕಟ್ಟಿಕೊಂಡು ಇರುತ್ತಿದ್ದವು. ಈ ಕಾರಣದಿಂದಲೇ ಮರ ವಿಶೇಷತೆಯನ್ನು ಪಡೆದುಕೊಂಡಿತ್ತು. ಸ್ಥಳೀಯರು ಈ ಮರದಿಂದ ಜೇನುತುಪ್ಪವನ್ನು ಸಂಗ್ರಹ ಮಾಡುತ್ತಿದ್ದರು. ಜೇನುತುಪ್ಪ ಸಂಗ್ರಹಿಸುವಾಗ ಮರಕ್ಕೆ ಪೂಜೆ ಮಾಡಿ ನಂತರ ಜೇನುತುಪ್ಪ ಸಂಗ್ರಹಿಸುತ್ತಿದ್ದುದು ಮರ-ಜೇನು ಹಾಗೂ ಮನುಷ್ಯರ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.
ತನ್ನ ಬೃಹತ್ ಗಾತ್ರದಿಂದಲೇ ಪರಿಸರ ಪ್ರಿಯರನ್ನೂ ಪ್ರವಾಸಿಗರನ್ನೂ ಈ ಮರ ತನ್ನತ್ತ ಸೆಳೆದುಕೊಂಡಿತ್ತು. ಪ್ರತಿ ವಾರ ಈ ಮರವನ್ನು ನೋಡಲೆಂದೇ ನೂರಾರು ಜನ ಕೆಂಗ್ರೆ ಹೊಳೆಯ ಈ ಕಾಡಿಗೆ ಪಿಕ್ ನಿಕ್ ಬರುತ್ತಿದ್ದರು. ಈ ಮರವನ್ನು ನೋಡಿ ವಿಸ್ಮಯರಾಗುತ್ತಿದ್ದರು. ಮರದ ಬುಡದಲ್ಲಿ ಕುಳಿತು ಪೋಟೋ ಕ್ಲಿಕ್ಕಿಸುತ್ತಿದ್ದರು. ಮರದ ದೈತ್ಯತೆ, ದೊಡ್ಡ ದೊಡ್ಡ ಬೇರುಗಳನ್ನು ನೋಡಿ ಖುಷಿಪಡುತ್ತಿದ್ದರು. ಮರದ ಬುಡದಲ್ಲಿ ಆಡುತ್ತಿದ್ದರು.
ಪಶ್ಚಿಮ ಘಟ್ಟದಲ್ಲಿ ಇಂತಹ ಮರಗಳು ಸಾಕಷ್ಟಿವೆ. ಪ್ರತಿ ಐದು ಕಿ.ಮಿ ಗೆ ಒಂದು ದೈತ್ಯ ಮರವಿದ್ದು ಇಂತಹ ದೈತ್ಯ ಮರಕ್ಕೆ ಜೇನುಗಳು ಗೂಡು ಕಟ್ಟಲು ಆಗಮಿಸುತ್ತವೆ. ಆದ್ದರಿಂದ ಇಂತಹ ಮರಗಳನ್ನು ಜೇನುಮರ ಎಂದು ಕರೆಯುತ್ತಾರೆ. ಮೃದು ಜಾತಿಯ ಈ ಮರ ಬೇಸಿಗೆಯಲ್ಲಿ ತನ್ನ ಸಂಪೂರ್ಣ ಎಲೆಗಳನ್ನು ಉದುರಿಸುತ್ತವೆ. ಆದ್ದರಿಂದಲೇ ಈ ಮರವನ್ನು ಬೆತ್ತಲೆ ಮರ ಎಂದೂ ಕರೆಯಲಾಗುತ್ತದೆ. ಹುಲೇಕಲ್, ಸಾಲಕಣಿ, ವಾನಳ್ಳಿ ಭಾಗದ ಈ ದೈತ್ಯ ಮರ ಮಳೆಗಾಲದಲ್ಲಿ ಮುರಿದು ಬಿದ್ದಿದೆ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ.
ಇಂತಹ ದೈತ್ಯ ಮರ ಈ ಮಳೆಗಾಲದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮುರಿದುಬಿದ್ದಿದೆ. ಮರದ ರೆಂಬೆ ಕೊಂಬೆಗಳೆಲ್ಲ ಭೂಮಿಪಾಲಾಗಿದೆ. ಜೇನು ಗೂಡು, ಹಕ್ಕಿಗಳು, ಕೀಟ, ಪತಂಗಗಳಿಂದ ತುಂಬಿ ತುಳುಕುತ್ತಿದ್ದ ಮರದ ರೆಂಬೆ, ಕೊಂಬೆಗಳೆಲ್ಲ ಭೂಮಿಗೊರಗಿವೆ. ಮೃದು ಜಾತಿಯ ಮರ ಮುರಿದು ಬಿದ್ದಿರುವುದು ಸ್ಥಳೀಯರ ಮನಸ್ಸಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ತಮ್ಮ ಪ್ರದೇಶದ ಹೆಮ್ಮೆಯಾಗಿದ್ದ ಜೇನುಮರದ ಅವಸಾನದಿಂದ ಸ್ಥಳೀಯರು, ಪರಿಸರ ಪ್ರೇಮಿಗಳು ಕಣ್ಣೀರುಗರೆಯುತ್ತಿದ್ದಾರೆ. ಮರವೊಂದು ಕಟ್ಟಿಕೊಟ್ಟಿದ್ದ ಕಲರವ ಸ್ಥಬ್ಧವಾಗಿದೆ. ಮರವೂ ಕೂಡ ಪ್ರವಾಸಿಗರನ್ನು ಸೆಳೆಯಬಲ್ಲದನ್ನು ತೋರಿಸಿಕೊಟ್ಟಿದ್ದ ಮರ ಇನ್ನಿಲ್ಲವಾಗಿದೆ. ಶತಮಾನಗಳ ಕಥೆ ಹೇಳುತ್ತಿದ್ದ ಮಹಾಮರ ಕಣ್ಮುಚ್ಚಿದೆ. ತನ್ಮೂಲಕ ಮರ ನೆನಪಾಗಿ ಉಳಿದಿದೆ.

***
(ಇದು ಆ.21,2014ರ ಬೈ2ಕಾಫಿಯ ಟೂರು ಕೇರಿಯಲ್ಲಿ ಪ್ರಕಟಗೊಂಡಿದೆ)

Monday, August 18, 2014

ಮೈಸೂರು ಹುಸೇನಿಯ ಕೈಚಳಕ ಸಾಂಜಿ ಕಲೆಯಲ್ಲಿ ಅರಳಿದ ಶ್ರೀಕೃಷ್ಣ

        ಸಾಂಝಿ ಎಂಬ ಚಿತ್ರಕಲೆ ನಮ್ಮ ದೇಶದ ಪುರಾತನ ಕಲಾ ಪ್ರಕಾರಗಳಲ್ಲೊಂದು. ಹಲವಾರು ಶತಮಾನಗಳ ಹಿಂದಿನಿಂದಲೂ ಈ ಕಲೆ ಸಂಪ್ರದಾಯದ ರೂಪದಲ್ಲಿ ಬಳಕೆಯಾಗುತ್ತಿದೆ. ಕಾಗದ ಕತ್ತರಿಯಲ್ಲಿ ಸಾಂಝಿ ಕಲೆಯನ್ನು ಮೂಡಿಸಿದವರೂ ಹಲವು ಮಂದಿ. ಅಂತವರಲ್ಲೊಬ್ಬರು ಮೈಸೂರಿನ ಎಸ್. ಎಫ್. ಹುಸೇನಿಯವರು.
ನಮ್ಮ ಪುರಾತನ ಅಪರೂಪದ ಜನಪದ ಕಲಾಪ್ರಕಾರಗಳಲ್ಲಿ ಸಾಂಝಿ(ಕಾಗದಕತ್ತರಿ) ಕಲೆಯೂ ಒಂದು. ಸಾಂಝಿಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಇವರು ಶ್ರೀಕೃಷ್ಣ ವಿಭಿನ್ನ, ವಿಶೇಷ ಚಿತ್ರಗಳನ್ನು ಬಹುಕಲಾತ್ಮಕವಾಗಿ ಕಾಗದದಲ್ಲಿ ಕತ್ತರಿ ಹಾಗು ಕಟರ್ ಸಹಾಯದಿಂದ ಸೂಕ್ಷ ್ಮವಾಗಿ ರಚಿಸಿದ್ದಾರೆ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಾಂಝಿ ಕಲೆ ಇದೀಗ ದೇಶ ವಿದೇಶಗಳಿಗೆ ವ್ಯಾಪಿಸಿದೆ. ಮೈಸೂರು ಹುಸೇನಿ ತಮ್ಮ ಕೈಚಳಕದಿಂದ ಸಾಂಝಿ ಕಲೆಯಲ್ಲಿ ಶ್ರೀಕೃಷ್ಣನನ್ನು ಮೂಡಿಸಿದ್ದಾರೆ.
ಆಧುನಿಕ ಜನರ ಜೀವನಶೈಲಿಬದಲಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಈ ವಿಶೇಷಕಲೆ ಇತ್ತೀಚೆಗೆ ಬಳಕೆಯಾಗದೆ ನಿಧಾನಗತಿಯಲ್ಲಿ ಜನಮಾನಸದಿಂದ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಕಲಾವಿದರು ಸಾಂಝಿಕಲೆಯನ್ನು ಉಳಿಸುವ, ಜನಪ್ರಿಯಗೊಳಿಸುವ ಕೆಲಸವನ್ನು ದೇಶದಹಲವೆಡೆ ನೆಡೆಸುತ್ತಿದ್ದಾರೆ. ಅಂತಹವರಲ್ಲಿ ಎಸ್.ಎಫ್.ಹುಸೇನಿ ಮೈಸೂರು ಸಹ ಒಬ್ಬರು.
ಮೈಸೂರು ಹುಸೇನಿ ಎಂದೇ ಪರಿಚಿತರಾಗಿರುವ ಎಸ್.ಎಫ್. ಹುಸೇನಿ ಈ ಕಲೆಯ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸುತ್ತಾ 22 ಜಿಲ್ಲೆಗಳಲ್ಲಿ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ, ಮತ್ತು ಆಸಕ್ತರಿಗೆ ಸಾಂಝಿ ಕಲೆ ಕಾಯರ್ಾಗಾರ ತರಬೇತಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ತಾವೇ ತಯಾರಿಸಿದ ವಿಶೇಷ ಸರಣಿ ಚಿತ್ರಗಳಾದ ಸಾಂಝಿಗಣಪ, ಸಾಂಝಿರಂಗೋಲಿ, ಸಾಂಝಿಮಾಸ್ಕ್, ಸಾಂಝಿಶಿವ, ಸಂಪ್ರಾದಾಯಕ, ಆಧುನಿಕ, ಜನಪದರೀತಿಯಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿ ಆಸಕ್ತರಿಗೆ ಈ ಕಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಏಕರೇಖಾಚಿತ್ರಗಳು, ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು, ಕಾಗದ ಭಿತ್ತಿಶಿಲ್ಪಗಳು, ಮತ್ತು ಸಾಂಝಿಜನಪದ ಕಾಗದ ಕತ್ತರಿಕಲೆ ಕಲಾಕೃತಿಗಳು ಹುಸೇನಿ ಅವರ ಕಲಾಪ್ರತಿಭೆಗೆ ಕೈಗನ್ನಡಿಯಾಗಿವೆ. ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ.
ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆಟರ್್ ಡಿಪ್ಲೊಮ ಮತ್ತು ಆಟರ್್ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕನರ್ಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಇವರು ಪಡೆದಿದ್ದಾರೆ.
ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 11 ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು 80ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕನರ್ಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.
ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ ಅವುಗಳಲ್ಲಿ ಮುಖ್ಯವಾಗಿ 1999 ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, 2001-ರಲ್ಲಿ ಮೈಸೂರಿನ ಕನ್ನಡಸಂಸ್ಕೃತಿ ಇಲಾಖೆಯಿಂದ ಯುವಸಂಭ್ರಮ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪಧರ್ೆಯಲ್ಲಿ 2001ರಿಂದ ಸತತ ನಾಲ್ಕು ಹಾಗು 2007ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್ಹಬ್ಬದಲ್ಲಿ 2009 ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, 1999ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್ಸ್ರವರ ರಾಕೊಫೇಸ್ಟ್ ಪ್ರಶಸ್ತಿ, ಕನರ್ಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್ಶಿಪ್ 1999 ಮತ್ತು 2000. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, 2001-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾ ಅಧ್ಯಯನ ಕೇಂದ್ರದಿಂದ ಪೋಸ್ಟರ್ ರಚನಗೆ ಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ 9845153277ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಬ್ಲಾಗ್: ಟಥಿಠಡಿಜಣಜಟಿ.ಛಟಠರಠಿಠಣ.ಟಿ  ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದಾಗಿದೆ. ನಮ್ಮ ನಡುವೆ ಇದ್ದು ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ ಹುಸೇನಿಯಂತವರು ಹಲವರಿಗೆ ಮಾದರಿಯಾಗಿತ್ತಾರೆ.
**
ಸಾಂಝಿ ಕಲೆಯ ಕುರಿತು ಮಾಹಿತಿ :
ಸಾಂಝಿ ಎನ್ನುವುದರ ಮೂಲ ಅರ್ಥ ಅಲಂಕಾರ, ಸಿಂಗಾರ. ಉತ್ತರಪ್ರದೇಶದಲ್ಲಿ ರಂಗೋಲಿಯನ್ನು ಸಾಂಝಿ ಎನ್ನುತ್ತಾರೆ.  ಮಥುರಾ ಸಾಂಝಿಕಲೆಯ ತವರು. ಶ್ರೀ ಕೃಷ್ಣನ ಜನ್ಮಸ್ಥಳವೆಂದು ಭಾರತೀಯರು ಪೂಜಿಸುವ ಸ್ಥಳದಲ್ಲಿ ಸಾಂಝಿಕಲೆಯನ್ನು ಕೃಷ್ಣಪರಮಾತ್ಮನ ಲೀಲೆ, ಪವಾಡ, ಗೀತೋಪದೇಶ, ಹೆಚ್ಚಾಗಿ ರಾಧಾಕೃಷ್ಣರ ರಾಸಲೀಲೆ ಮುಂತಾದವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ರೂಪಿಸಿ ಅವುಗಳನ್ನು ವಿನ್ಯಾಸ ರಚನೆಗೆ, ರಂಗೋಲಿ ವಿನ್ಯಾಸಗಳಿಗಾಗಿ ಒತ್ತುಕಲೆಯಾಗಿ ಸಾಂಝಿಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಕಾಲ ಕ್ರಮೇಣ ಆನೇಕ ಕಲಾ ಪ್ರವೀಣರು ವಿವಿಧ ದೇವಾನುದೇವತೆಗಳು, ಹೂಬಳ್ಳಿ, ಪ್ರಕೃತಿಯಂತಹ ಚಿತ್ರಗಳನ್ನು ರಚಿಸಿ ದೇವಸ್ಥಾನ, ರಥ, ರಥಬೀದಿ, ಪಲ್ಲಕ್ಕಿಅಲಂಕಾರ, ದೇವರಉತ್ಸವಕ್ಕೆ ಬಳಸುತ್ತಿದ್ದರಿಂದ ಇದನ್ನು ದೇವಸ್ಥಾನ ಕಲಾಸಾಂಝಿ ಎಂದು ಕರೆಯಲಾಗುತಿತ್ತು. ಕಾಗದದಲ್ಲಿ ಒಳ್ಳೆಯ ಚಿತ್ರಗಳನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅವುಗಳ ಮೇಲೆ ರಂಗೋಲಿ ಪುಡಿ, ಹೂಗಳನ್ನು ತುಂಬಿ ಕಾಗದತೆಗೆದಾಗ ಬಗೆಬಗೆಯ ಅಲಂಕಾರಿಕ ಚಿತ್ರಗಳು ಮೂಡುತ್ತಿದ್ದದ್ದು ಗೊತ್ತಾಯಿತು. ನಂತರ ತಮಗೆ ಬೇಕಾದ ಹಾಗೆ ಕಾಗದದ ಅಚ್ಚುಗಳನ್ನು ತಯಾರಿಸಿ ಅದನ್ನು ಒಂದು ಪರಿಪೂರ್ಣವಾದ ಕಲೆಯಾಗಿಸುವಷ್ಟು ಪರಿಣಿತಿಯನ್ನು ನಮ್ಮ ಹಿಂದಿನವರು ಪಡೆದಿದ್ದರು. ಹೀಗಾಗಿ ಇಂದೊದು ಪ್ರತ್ಯೇಕ ಕಲೆಯಾಗಿ ಬೆಳೆಯಿತು.

Sunday, August 17, 2014

ಹಿರಿಯರಿಗೆ ಜೈ ಎನ್ನಿ

          ಹಿರಿಯರು ನಮ್ಮ ಎದುರು ಓಡಾಡುವಂತ ವಿಶ್ವಕೋಶಗಳು. ಅವರ ಅನುಭವಗಳು ನಮಗೆ ದಾರಿದೀಪಗಳು. ಹಿರಿಯರಿಂದ ನಾವು ಕಲಿತಷ್ಟು ಮತ್ಯಾರಿಂದಲೂ ಕಲಿಯಲು ಸಾಧ್ಯವಿಲ್ಲ. ನಮ್ಮ ಬದುಕಿನ ದೀವಿಗೆ ಅವರು ಎಂದರೂ ತಪ್ಪಾಗಲಿಕ್ಕಿಲ್ಲ. ಅತ್ಯಂತ ವಯಸ್ಸಾದವರು ಅಪರೂಪದ ಕೆಲವು ಅಂಶಗಳನ್ನು ನನಗೆ ತಿಳಿಸಿದ್ದರು. ಅದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ. ತೀರಾ ಇತ್ತೀಚಿನವರೆಗೂ ನಾನು ರಾತ್ರಿಯ ಊಟಕ್ಕೆ ಮೊಸರು ಹಾಕಿಕೊಳ್ಳುವವನು ಅದಕ್ಕೆ ಹಾಲನ್ನು ಹಾಕಿಕೊಳ್ಳುತ್ತಿರಲಿಲ್ಲ. ಒಂದು ದಿನ ಗಣಪಜ್ಜಿ ಮನೆಗೆ ಹೋಗಿದ್ದೆ. (ಗಣಪಜ್ಜಿಯ ಹಾಡುಗಳಲ್ಲಿ ಬಂದಿರುವ ಗಣಪಜ್ಜಿ ಕೋಡ್ಸರ) ಆಕೆಯ ಬಳಿಯಲ್ಲಿ ಮಾತನಾಡುತ್ತ ರಾತ್ರಿಯಾಯಿತು. ಅಜ್ಜಿಯ ಮನೆಯಲ್ಲಿ ಊಟಕ್ಕೆ ಒತ್ತಾಯಿಸಿದರು. ನಾನು ಹಾಗೂ ದೋಸ್ತ ಸಂಜಯ ಇದ್ದೆವಲ್ಲ. ಬೇಡ ಬೇಡ ಎನ್ನುತ್ತಲೇ ಊಟಕ್ಕೆ ಕುಳಿತೆವು. ಊಟದ ಕೊನೆಯಲ್ಲಿ ನನಗೆ ಮನೆಯವರು ಮೊಸರು ಬಡಿಸಿದರು. ಹಾಲು ಬೇಕಾ ಕೇಳಿದರು. ನಾನು ಬೇಡ ಎಂದೆ. ತಕ್ಷಣ ಅಜ್ಜಿ `ತಮಾ ಹಾಲು ಹಾಕ್ಯಳ..' ಎಂದು ಒತ್ತಾಯಿಸಿದರು. ನಾನು `ಬೇಡ.. ನನಗೆ ರೂಢಿಯಿಲ್ಲ..' ಎಂದೆ.. ಕೊನೆಗೆ ಅಜ್ಜಿ ಹೇಳಿದ್ದೆಂದರೆ `ತಮಾ.. ರಾತ್ರಿ ಊಟಕ್ಕೆ ಮೊಸರಿಗೆ ಯಾವಾಗಲೂ ಹಾಲು ಹಾಕಿಕೊಳ್ಳವು. ಇದರಿಂದಾಗಿ ಆಹಾರ ಬೇಗ್ನೆ ಜೀರ್ಣ ಆಗ್ತು. ಆಮೇಲೆ ಹುಳಿತೇಗು ಬರ್ತಿಲ್ಲೆ. ತಿನ್ನುವ ಆಹಾರ ದೇಹಕ್ಕೆ ಒಗ್ತು..' ಎಂದಳು. ನನ್ನ ಮನೆಯಲ್ಲಿಯೂ ರಾತ್ರಿ ಊಟಕ್ಕೆ ಮಜ್ಜಿಗೆಗೆ ಹಾಲು ಹಾಕಿಕೊಳ್ಳು ಎನ್ನುತ್ತಿದ್ದರು. ಆದರೆ ನಾನು ಕಾರಣ ಕೇಳಿದರೆ ಗೊತ್ತಿಲ್ಲವೆಂದೋ, ಹಾರಿಕೆಯದ್ದೋ ಉತ್ತರ ನೀಡಿದ್ದರು. ಆದರೆ ಈ ಅಜ್ಜಿ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗಾಗಿಸಿತು. ಅಂದಿನಿಂದ ರಾತ್ರಿ ಮೊಸರನ್ನಕ್ಕೆ ಹಾಲು ಬೆರೆಸಿ ಊಟ ಮಾಡುತ್ತಿದ್ದನೆ. ನಮ್ಮ ಹಿರಿಯರು ಯಾವುದಾದರೂ ಸಂಪ್ರದಾಯ ಹೇಳಿದರೆ ಖಂಡಿತ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇರುತ್ತದೆ ಎನ್ನುವುದು ಅರ್ಥವಾಯಿತು.
***
           ಇಂತಹ ಹಲವಾರು ಅನುಭವಗಳು ಆಗಿವೆ. ಇತ್ತೀಚೆಗೆ ಒಬ್ಬರನ್ನು ಭೇಟಿಯಾಗಿದ್ದೆ. ಅವರ ಬಳಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಸಿಡಿಟಿ ಕುರಿತು ಚರ್ಚೆ ಆರಂಭವಾಯಿತು. ಕೊನೆಗೆ ಅವರು ಹೇಳಿದ್ದು `ತಮಾ.. ನಮ್ಮಲ್ಲಿ ಹಿರಿಯರು ಊಟದ ಸಂದರ್ಭದಲ್ಲಿ ಸಾರು ಅಥವಾ ಸಾಂಬರ್ ಹಾಕ್ಯತ್ವಲಾ.. ಅದಕ್ಕೆಂತಕ್ಕೆ ತುಪ್ಪ ಎಣ್ಣೆ ಹಾಕ್ತ ಹೇಳು..' ಎಂದು ಕೇಳಿದರು. ನಾನು ಸುಮ್ಮನುಳಿದೆ. ಕೊನೆಗೆ ಅವರೇ ಮುಂದುವರಿದು `ಸಾಂಬಾರು ಅಥವಾ ಸಾರಿಗೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡರೆ ಎಸಿಡಿಟಿ ಆಗುವುದಿಲ್ಲ. ಅದೇ ಕಾರಣಕ್ಕೆ ಹಲಸಿನ ಹಣ್ಣಿನ ಕಡುಬು, ಉದ್ದಿನ ಇಡ್ಲಿಗಳಿಗೆಲ್ಲ ಎಣ್ಣೆ, ತುಪ್ಪ ಹಾಕುತ್ತಾರೆ.. ನೀ ಹಾಕ್ಯತ್ಯನಾ..?' ಎಂದು ಕೇಳಿದರು. ಇಲ್ಲವಲ್ಲ ಎಂದು ಉತ್ತರಿಸಿದೆ. ನಾಳಿಂದ ಹಾಂಗೆ ಮಾಡು.. ನಿಂಗೆ ಎಸಿಡಿಟಿ ಆಗ್ತಿಲ್ಲೆ.. ಎಸಿಡಿಟಿ ಸಮಸ್ಯೆಗಳಿದ್ದರೂ ಬಾಧಿಸ್ತಿಲ್ಲೆ.. ಎಂದರು. ನಾನು ಅಬ್ಬಾ ಹಿರಿಯರೆ ಎಂದುಕೊಂಡೆ. ಅವರ ಜ್ಞಾನಕ್ಕೆ ತಲೆದೋಗಿದೆ. ಈಗ ಸಾಂಬಾರು ಊಟದ ಸಂದರ್ಭದಲ್ಲಿ ಸಾಂಬಾರಿಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿಸಿಕೊಳ್ಳುತ್ತಿದ್ದೇನೆ.
***
         ಸಿಕ್ಕಾಪಟ್ಟೆ ತಲೆನೋವು. ಶೀತವಾಗಿರಲಿಲ್ಲ. ಆದರೆ ತಲೆ ಸಿಡಿತ ಮಾತ್ರ ಬಿಡುತ್ತಲೇ ಇರಲಿಲ್ಲ. ಬಿದ್ದು ಹೊಳ್ಳಾಡುವಷ್ಟು ತಲೆನೋವು. ಅಮ್ಮ ನೋಡಿದವಳೇ ಅದೇನೋ ಕಷಾಯ ಕೊಟ್ಟಳು, ಕೈಯಲ್ಲಿ ಆರ್ಕ್ಯೂಪ್ರೆಶರ್ ಮಾಡಿದಳು. ಅಷ್ಟೇ ಅಲ್ಲದೇ ತನಗೆ ಗೊತ್ತಿದ್ದ ಹಲವು ಔಷಧಿಗಳನ್ನು ಮಾಡಿದರೂ ತಲೆನೋವು ಕಡಿಮೆಯೇ ಆಗುತ್ತಿರಲಿಲ್ಲ. ತಲೆಯೇ ಸಿಡಿದುಹೋಗುತ್ತದೆಯೇನೋ ಎನ್ನುವಂತಾಗಿತ್ತು ನನಗೆ. ಗಂಟೆಗಳ ಕಾಲ ನಾನು ನೋವಿನಿಂದ ನರಳಾಡಿದೆ. ಕೊನೆಗೆ ಅದೆಲ್ಲಿ ಓದಿದ್ದಳೋ ಅಮ್ಮ, ದೊಡ್ಡದೊಂದು ನಿಂಬೆ ಕಾಯಿಯನ್ನು ಕೊಯ್ದು ಕಟ್ ಮಾಡಿ ಅದರ ರಸವನ್ನು ತೆಗೆದು ಕೊಬ್ಬರಿ ಎಣ್ಣೆಯ ಜೊತೆಗೆ ಸೇರಿಸಿ ತಲೆಗೆ ಹಾಕಿದಳು. ಅರೇ ಎರಡೇ ನಿಮಿಷದಲ್ಲಿ ತಲೆನೋವು ಮಾಯ..! ಏನಾಶ್ಚರ್ಯ. ಇದೆಂತಹ ಔಷಧಿ ಎಂದುಕೊಂಡು ಕೇಳಿದೆ. ತಲೆನೋವು ಅತಿಯಾಗಿ ಬಂದರೆ ಹೀಗೆ ಮಾಡಬೇಕು ಎಂದು ಹಿರಿಯರಿಂದ ಕೇಳಿದ್ದೆ. ಆದರೆ ನಾನು ಮಾಡಿರಲಿಲ್ಲ. ಈಗ ನಿನ್ನ ಮೇಲೆ ಪ್ರಯೋಗಿಸಿದೆ. ನೋಡು ತಕ್ಷಣಕ್ಕೆ ಕಡಿಮೆಯಾಯಿತು. ಎಂದಳು ಅಮ್ಮ. ಮತ್ತೊಮ್ಮೆ ಹಿರಿಯರಿಗೆ ಜಯವೆಂದೆ.
***
        ದೊಡ್ಡ ಹಬ್ಬ ದೀಪಾವಳಿಯಲ್ಲಿ ನಮ್ಮ ಕಡೆಯಲ್ಲಿ ಕೊನೆಯ ದಿನ ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯ ಆಚರಣೆ ಮಾಡುತ್ತಾರೆ. ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯದ ಜೊತೆಗೆ ಉದ್ದನೆಯ ದಿಪ್ಪಳಿಗೆ ಕೋಲನ್ನು ಕಡಿದು ಅದಕ್ಕೆ ದೊಂದಿ ಮಾಡಿ ಬೆಂಕಿ ಕತ್ತಿಸಿ ನಮ್ಮ ನಮ್ಮ ಜಮೀನಿನ ಬಳಿ ಅದನ್ನು ಹುಗಿದು ದೊಡ್ಡದಾಗಿ ಜಾಗಟೆ ಬಡಿದು ಕೂಗಾಡಲಾಗುತ್ತದೆ. ತೀರಾ ಇತ್ತೀಚಿನ ದಿನಗಳ ವರೆಗೂ ನಾನು ಹಬ್ಬ ಕಳಿಸುವುದರ ಮಹತ್ವ ಅಥವಾ ಯಾಕೆ ಹೀಗೆ ಮಾಡುತ್ತಾರೆ ಎನ್ನುವುದನ್ನು ಅರಿತಿರಲಿಲ್ಲ. ಒಬ್ಬರು ಹೇಳಿದ್ದೆಂದರೆ ಹೀಗೆ ಮಾಡುವುದರಿಂದ ಬೆಂಕಿಯನ್ನು ಕಂಡು ನಮ್ಮ ಗದ್ದೆ, ತೋಟಗಳಿಗೆ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಹೆದರಿಸುತ್ತದೆ. ಬೆಳೆ ರಕ್ಷಣೆಯಾಗುತ್ತದೆ ಅಂತ. ಆಹಾ ಹಿರಿಯರೇ ನಿಮ್ಮ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಬಿಡಿ.

(ಮುಂದುವರಿಯುತ್ತದೆ)

Friday, August 15, 2014

ಮತ್ತಷ್ಟು ಹನಿಗಳು

ಭಿನ್ನತೆ

ನೀವು ಹದಿನಾಲ್ಕು ಗಂಟೆ ಕೆಲಸ ಮಾಡಿದರೆ
ನಾನು ಹದಿನೈದು ಗಂಟೆ ಕೆಲಸ ಮಾಡುತ್ತೇನೆ
ಎಂದರು ನರೇಂದ್ರ ಮೋದಿ |
ಅಯ್ಯೋ ಸುಮ್ಕಿರಿ ಸಾರ್.. ಆವಯ್ಯ ಏನೋ ಹೇಳ್ತಾನೆ..
ಹಾಗಂತ ನಾನು ಆರೋಗ್ಯ ಹಾಳ್ಮಾಡ್ಕಳಕಾಗಾಕಿಲ್ಲ ಆಆಆಆಆಆ...
ಎಂದು ಆಕಳಿಕೆ ತೆಗೆದರು ಸಿದ್ಧರಾಮಯ್ಯ..||

ವ್ಯತ್ಯಾಸ

ಮೋದಿ ಮಾಡಿದರೆ ಭಾಷಣ
ಮತ್ತೆ ಮತ್ತೆ ಅನ್ನಿಸುತ್ತದೆ ಕೇಳೋಣ
ಸಿದ್ದು ಮಾಡಿದರೆ ಭಾಷಣ
ಸಾಕ್ ಸುಮ್ನೆ ಹೋಗಣ್ಣ..!!

ವಾಟಾಳ್

ಕನ್ನಡ  ಕನ್ನಡ ಎಂದ ಕೂಡಲೇ
ನೆನಪಾಗುವ ಕಟ್ಟಾಳು
ಹೋರಾಟದ ವಾಟಾಳು |

ಎಂತ ವಿಪರ್ಯಾಸ?

ನಾವು ಇತ್ತ ಆಂಗ್ಲರ ವಿರುದ್ಧ
ಭಾರತ ಗೆದ್ದ ಸಂತಸ ಆಚರಿಸುತ್ತಿದ್ದರೆ
ಅತ್ತ ಇಂಗ್ಲೆಂಡಿನಲ್ಲಿ ಭಾರತ
ಆಂಗ್ಲರ ಎದುರು ಮಂಡಿಯೂರುತ್ತಿದೆ |

ವಾಲು-ಡೋಲು

ಭಾರತದಲ್ಲಿ
ಡಬ್ಬಲ್ ಸೆಂಚೂರಿ ಹೊಡೆದ
ಚೆತೇಶ್ವರ ಪೂಜಾರನಿಗೆಂದರು
ಮತ್ತೊಬ್ಬ ದಿ. ವಾಲು|
ಇಂಗ್ಲೆಂಡಿಗೆ ಹೋದ ನಂತರ
ಆತ ಆಗಿದ್ದಾನೆ
ತೂತಾದ ಡೋಲು ||

Thursday, August 14, 2014

ಗೋಲಾರಿ ವಯ್ಯಾರಿ

ಗುಡ್ಡದ ತುದಿಯಿಂದ ಹಾಲ್ನೊರೆಯುಕ್ಕಿದಂತೆ ಕಣಿವೆಯಾಳಕ್ಕೆ ಧುಮ್ಮುಕ್ಕುವ ಸೊಬಗು, ಅಕ್ಕ ಪಕ್ಕದ ಕಾನನದ ನಡುವಿನಿಂದ ಕಿವಿಯನ್ನು ಇಂಪಾಗಿ ತಟ್ಟುವ ಹಕ್ಕಿಗಳ ದನಿ, ಜೊತೆ ಜೊತೆಯಲ್ಲಿಯೇ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರ ಹರ್ಷದ ಕೇಕೆ. ಈ ಎಲ್ಲವುಗಳೂ ಮಿಳಿತವಾಗಿರುವುದು ಕಾರವಾರ ತಾಲೂಕಿನ ತೊಡೂರು ಗ್ರಾಮದ ಅರಣ್ಯ ಮಧ್ಯವಿರುವ ಗೋಲಾರಿ ಜಲಪಾತದಲ್ಲಿ.
ಒಂದೆಡೆ ತಲೆಯೆತ್ತಿ ನೋಡಿದರೂ ಕಾಣಿಸದ ಹಸಿರಿನಿಂದಾವೃತವಾದ ಕಡಿದಾದ ಗುಡ್ಡ. ಇನ್ನೊಂದೆಡೆ ಅರಣ್ಯ. ನಡುವೆ ಧೋ ಎಂದು ಅಬ್ಬರಿಸುತ್ತ ಸೊಬಗನ್ನು ಕಟ್ಟಿಕೊಡುವ ಗೋಲಾರಿ ಜಲಪಾತವನ್ನು ನೋಡುತ್ತಿದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಜಲಪಾತದ ಸುಂದರ ಚಿತ್ರಣವನ್ನು ಕಣ್ಣಲ್ಲಿ ಹಿಡಿದು ತುಂಬಿಕೊಳ್ಳಲು ಯತ್ನಿಸಿದಷ್ಟೂ ಎಲ್ಲಿ ಕಳೆದುಕೊಂಡು ಬಿಡುತ್ತೇವೆಯೋ ಎನ್ನುವ ದುಗುಡ ನೋಡುಗನನ್ನು ಆವರಿಸುತ್ತದೆ.
ಗೋಲಾರಿ ಜಲಪಾತ ವೀಕ್ಷಣೆಗೆ ಯಾವುದೇ ಸಮಯದ ತೊಂದರೆಯಿಲ್ಲ. ಬೇಸಿಗೆಯಿರಲಿ, ಮಳೆಗಾಲವಿರಲಿ ಅಥವಾ ಕೊರೆಯುವ ಚಳಿಗಾಲವಿರಲಿ ವರ್ಷದ ಎಲ್ಲ ಕಾಲದಲ್ಲಿಯೂ ದರ್ಶನ ಸಾಧ್ಯ. ಕಡು ಬೇಸಿಗೆಯಲ್ಲೂ ಜಲಪಾತದಲ್ಲಿ ಸಾಕಷ್ಟು ನೀರಿರುವ ಕಾರಣ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಬೆಟ್ಟದ ತುದಿಯಿಂದ ಸುಮಾರು 65 ಅಡಿ ಎತ್ತರದಿಂದ ಧುಮ್ಮಿಕ್ಕುವ ಗೋಲಾರಿ ಜಲಪಾತದ ಸದಾ ಕಾಲ ಜನಜಾತ್ರೆ ಸೇರಿರುತ್ತದೆ. ಚಾರಣ ಮಾಡುವರಿಗೆ, ವಾರದ ತುಂಬ ಬಿಡುವಿಲ್ಲದೇ ದುಡಿದು ವಾರಾಂತ್ಯದಲ್ಲಿ ಬದಲಾವಣೆ ಬಯಸುವವರಿಗೆ ಈ ಜಲಪಾತ ಹೇಳಿಮಾಡಿಸಿದ ತಾಣ.
ಜಲಪಾತಗಳ ಜಿಲ್ಲೆ ಎಂದು ಖ್ಯಾತಿಯನ್ನು ಗಳಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಜಲಪಾತಗಳಿವೆ. ಅವುಗಳಲ್ಲಿ ಹಲವು ಜಲಪಾತಗಳಿನ್ನೂ ಬೆಳಕಿಗೆ ಬಂದಿಲ್ಲ. ಗೋಲಾರಿ ಜಲಪಾತವನ್ನು ನೋಡಬೇಕೆಂದರೂ ಕೂಡ ಸ್ವಲ್ಪ ಮೈಕೈ ನೋಯಿಸಿಕೊಳ್ಳಲೇ ಬೇಕು. ತೊಡೂರ ಬಳಿಯ ಕಾನನದ ಮಧ್ಯದಿಂದ ಕಲ್ಲು ಬಂಡೆಗಳನ್ನು ಹತ್ತಿ, ಹಳ್ಳಗಳನ್ನು ಜಿಗಿಯುತ್ತಾ, ಗಿಡ ಗಂಟಿಗಳ ಮುಳ್ಳುಗಳ ನಡುವೆ ನುಸುಳುತ್ತ ಸಾಗಿದರೆ ದರ್ಶನ ಕೊಡುತ್ತಾಳೆ ಗೋಲಾರಿ. ಕೊಂಚ ಚಾರಣ ಮಾಡಿ ಆಗುವ ಆಯಾಸ ಜಲಪಾತ ವೀಕ್ಷಣೆಯಿಂದ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಮೈಮನಗಳಲ್ಲಿ ರೋಮಾಂಚನವನ್ನು ಹುಟ್ಟು ಹಾಕುವ ಗೋಲಾರಿ ಜಲಪಾತದ ಒಡಲಿನಲ್ಲಿ ಪ್ರವಾಸಿಗರು ಸ್ನಾನದ ಸುಖವನ್ನು ಅನುಭವಿಸುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದ ವೇಳೆಯಲ್ಲಿ ಅರಣ್ಯಪ್ರದೇಶದಲ್ಲಿ ಸುರಿಯುವ ಮಳೆ ಹಳ್ಳದ ಮೂಲಕ ಸಾಗಿ, ಭೀಮನಬುಗುರಿ ಹಾಗೂ ಸಾವನಾಳ ಎನ್ನುವ ಪ್ರದೇಶದಿಂದ ಹರಿದು ಬಂದು ಗೋಲಾರಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತಾಳೆ. ಹಳ್ಳ ಸಮುದ್ರ ಸೇರುವ ತವಕ ಜಲಪಾತದ ರೂಪದಲ್ಲಿ ಎದ್ದು ಕಾಣುತ್ತದೆ.
ಗೋಲಾರಿ ಜಲಪಾತ ಉತ್ತಮ ಪಿಕ್ನಿಕ್ ಸ್ಪಾಟ್. ಚಾರಣ ಪ್ರಿಯರಿಗಂತೂ ಹೇಳಿಮಾಡಿಸಿದಂತಹ ತಾಣ. ಈ ಕಾರಣದಿಂದಲೇ ಉತ್ತರ ಕನ್ನಡ ಜಿಲ್ಲೆಯಿಂದಲ್ಲದೇ ನೆರೆಯ ಗೋವಾ ರಾಜ್ಯ, ಉಡುಪಿ ಜಿಲ್ಲೆಯಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಮೈಮನಸ್ಸುಗಳಿಗೆ ಜಲಪಾತದ ನೀರನ್ನು ಒಡ್ಡಿಕೊಳ್ಳುವ ಮೂಲಕ ಖುಷಿಯನ್ನು ತುಂಬಿಕೊಂಡು ಕ್ರಿಯಾಶೀಲರಾಗಿ ಮರಳುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕೆಲವು ಕಟ್ಟುನಿಟ್ಟಿನ ಕೆಲಸಗಳೂ ಇವೆ. ಜಲಪಾತದ ಫಾಸಲೆಯಲ್ಲಿ ಪ್ಲಾಸ್ಟಿಕ್ ಎಸೆಯುವಂತಿಲ್ಲ. ಗಾಜಿನ ಬಾಟಲಿಗಳನ್ನು ಎಸೆಯುವುದೂ ನಿಶಿದ್ಧ. ಪ್ರಕೃತಿಯ ನಡುವೆ ಇರುವ ಜಲಪಾತದ ಸೌಂದರ್ಯವನ್ನು ತ್ಯಾಜ್ಯವನ್ನೆಸೆಯುವ ಮೂಲಕ ಹಾಳು ಮಾಡಬಾರದೆಂದು ಸ್ಥಳೀಯರು ಆಗ್ರಹಿಸುತ್ತಾರೆ. ಜಲಪಾತಕ್ಕೆ ತೆರಳುವವರು ಕುಡಿಯುವ ನೀರು, ಆಹಾರಗಳನ್ನು ಒಯ್ಯುವುದು ಕಡ್ಡಾಯ. ಮತ್ಯಾಕೆ ತಡ? ಒಮ್ಮೆ ಬಂದು ಜಲಪಾತದ ಸೌಂದರ್ಯವನ್ನು ಸವಿದು ಹೋಗಿ.
ಜಲಪಾತಕ್ಕೆ ಹೋಗುವ ಬಗೆ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ 17 ಕಿಮೀ ಅಂತರದಲ್ಲಿರುವ ತೋಡೂರು ಗ್ರಾಮಕ್ಕೆ ಸಾಗಬೇಕು. ಅಲ್ಲಿಂದ ಸುಮಾರು 4 ಕಿಮೀನಷ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ಇಲ್ಲಿಯವರೆಗೆ ವಾಹನಗಳು ತೆರಳುತ್ತವೆ. ಅವನ್ನು ಇಲ್ಲಿಯೇ ನಿಲ್ಲಿಸಿ ಸುಮಾರು 2-3 ಕಿಮೀ ಅರಣ್ಯ ಪ್ರದೇಶದಲ್ಲಿ ಕಲ್ಲು ಬಂಡೆಗಳನ್ನು ಹತ್ತಿಳಿಯುತ್ತಾ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನು ದಾಟುತ್ತಾ ಚಾರಣದ ಮೂಲಕ ಸಾಗಿದರೆ ಅಲ್ಲೇ ಸಿಗುತ್ತದೆ ಗೋಲಾರಿ ಫಾಲ್ಸ್ ದರ್ಶನ ಸಾಧ್ಯ. ಬೆಂಗಳೂರಿನಿಂದ ಆಗಮಿಸುವವರು ಶಿವಮೊಗ್ಗ-ಶಿರಸಿ ಮೂಲಕ ಅಥವಾ ಹುಬ್ಬಳ್ಳಿ-ಅಂಕೋಲಾ ಮೂಲಕ ತೊಡೂರಿಗೆ ಆಗಮಿಸಿ ಅಲ್ಲಿಂದ ಬರಬಹುದಾಗಿದೆ.

**
(ಈ ಲೇಖನ ಆ.14, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರುಕೇರಿಯಲ್ಲಿ ಪ್ರಕಟಗೊಂಡಿದೆ)
(ಈ ಲೇಖನಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ನೀಡಿದ ಅಚ್ಯುತಕುಮಾರ ಯಲ್ಲಾಪುರ ಅವರಿಗೂ ಧನ್ಯವಾದಗಳು)

Wednesday, August 13, 2014

ಬೆಂಗಾಲಿ ಸುಂದರಿ-21

(ಢಾಕಾ-ಅಶೂಲಿಯಾ ಹೆದ್ದಾರಿ ನಡುವೆ ಸಿಗುವ ನದಿಯಲ್ಲಿ ದೋಣಿಯ ಮೂಲಕ ಸಾಗುತ್ತಿರುವುದು)
         ಸಲೀಂ ಚಾಚಾನ ಮನೆಯಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಉಳಿದಕೊಂಡಿದ್ದು ನಾಲ್ಕೋ ಐದೋ ದಿನಗಳು ಅಷ್ಟೇ. ಸಲೀಂ ಚಾಚಾನ ಮನೆಯವರೆಲ್ಲ ಯಾವುದೋ ಜನ್ಮದ ನೆಂಟರೋ ಎನ್ನುವಷ್ಟು ಆಪ್ತರಾಗಿಬಿಟ್ಟಿದ್ದರು. ಅದ್ಯಾವ ಋಣಾನುಬಂಧವೋ ಏನೋ ಹಿಂದುಗಳೆಂದು ಗೊತ್ತಾದರೆ ಯಾವ ಕ್ಷಣದಲ್ಲಿ ದಾಳಿ ಮಾಡುತ್ತಾರೋ ಎನ್ನುವ ಭಯದ ನಡುವೆಯೂ ತಮ್ಮ ದೇಶದಲ್ಲಿ ಬದುಕಲು ಆಶ್ರಯ ಕೊಟ್ಟಿದ್ದರು. ತಮ್ಮದೇ ಮಕ್ಕಳೇನೋ ಎನ್ನುವಂತೆ ಸಲಹಿದ್ದರು. ಸುರಕ್ಷಿತ ಜಾಗಕ್ಕೆ ತಮ್ಮನ್ನು ಕಳಿಸಲೋಸುಗ ತಮ್ಮ ಪ್ರಾಣವನ್ನೇ ಒತ್ತಯಿಟ್ಟು ಕೆಲಸ ನಿರ್ವಹಿಸಿದ್ದರು. ಬಹುಶಃ ಸಲೀಂ ಚಾಚಾನ ಮನೆಯಲ್ಲಿ ಇಬ್ಬರು ಹಿಂದೂಗಳು ಆಶ್ರಯ ಪಡೆದಿದ್ದಾರೆ ಎಂದು ಹಿಂಸಾವಾದಿಗಳಿಗೆ ಗೊತ್ತಾಗಿದ್ದರೆ ಸಲೀಂ ಚಾಚಾನ ಕುಟುಂಬವೂ ಅಪಾಯಕ್ಕೆ ಈಡಾಗುತ್ತಿತ್ತು. ಆದರೆ ಅಂತಹ ಅಪಾಯವನ್ನು ಲೆಕ್ಕಿಸದೇ ತಮ್ಮ ಜೊತೆಗೆ ನಿಂತಿದ್ದ ಚಾಚಾನ ಕುಟುಂಬದ ಬಗ್ಗೆ ಇಬ್ಬರಲ್ಲೂ ಅಭಿಮಾನ ಮೂಡಿತು. ಅವರಿದ್ದ ಜಾಗದಿಂದ ಆಚೆಯ ಜಗತ್ತು ಉರಿದು ಬೀಳುತ್ತಿದ್ದರೂ ಕೂಡ ತಮ್ಮ ಕೂದಲೂ ಕೊಂಕದಂತೆ ಕಾಪಾಡಿದ್ದರು. ಪ್ರೀತಿಯನ್ನು ನೀಡಿದ್ದರು. ಮಧುಮಿತಾಳಂತೂ ತಂದೆ ತಾಯಿಗಳನ್ನು ಅರೆಕ್ಷಣದಲ್ಲಿ ಕಳೆದುಕೊಂಡು ಚಾಚಾನ ಮನೆಗೆ ಬಂದಿದ್ದಳು. ತಂದೆ-ತಾಯಿ-ಬಂಧು-ಬಳಗ ಕಳೆದುಹೋದ ಕಹಿ ನೆನಪು ಮಧುಮಿತಾಳನ್ನು ಕಾಡದಂತೆ ನೋಡಿಕೊಂಡಿದ್ದರು ಚಾಚಾನ ಕುಟುಂಬ. ಚಾಚಾನ ಕುಟುಂಬದ ಇಂತಹ ಕಾರ್ಯಕ್ಕೆ ಎಷ್ಟು ಋಣ ಸಂದಾಯ ಮಾಡಿದರೂ ಸಾಲದು ಎಂದುಕೊಂಡ ವಿನಯಚಂದ್ರ.
            ಅದೊಂದು ಸಂಜೆ ಸಲೀಂ ಚಾಚಾ ಭಾರತದ ಕಡೆಗೆ ತೆರಳುವ ಸಮಯ ಸನಿಹವಾಯ್ತು ಎಂದು ಘೋಷಿಸಿದರು. ಕೊನೆಯ ತಯಾರಿಗಳೆಲ್ಲ ಪೂರ್ಣಗೊಂಡಿದ್ದವು. ಚಾಚಾನ ಮನೆಯ ಸದಸ್ಯರುಗಳೆಲ್ಲ ತಮ್ಮ ಮನೆಯ ಜನರೇ ತಮ್ಮಿಂದ ದೂರವಾಗುತ್ತಿದ್ದಾರೋ ಎನ್ನುವಂತೆ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮಧುಮಿತಾ ಹಾಗೂ ವಿನಯಚಂದ್ರನನ್ನು ಕಳಿಸಿಕೊಡಲು ತಯಾರಾಗಿದ್ದರು. ಮಧುಮಿತಾಳ ಕಣ್ಣಿನಲ್ಲೂ ನೀರಿತ್ತು. ವಿನಯಚಂದ್ರ ಸುಮ್ಮನೆ ನೋಡುತ್ತಿದ್ದ. ಹೊರಗೆ ಸಂಪೂರ್ಣ ಕತ್ತಲಾಗಿತ್ತು. ಮಧುಮಿತಾ ಸಲೀಂ ಚಾಚಾನ ಮನೆಯ ಹಿರಿಯರಿಗೆಲ್ಲ ನಮಸ್ಕರಿಸಿ ಹೊರಡಲು ಅನುವಾದಳು. ವಿನಯಚಂದ್ರ ಎಲ್ಲರಿಗೂ ಕಣ್ಣಲ್ಲಿಯೇ ಕೃತಜ್ಞತೆಗಳನ್ನು ಹೇಳಿದ್ದ.
             ಹಿಂಸಾ ಪೀಡಿತ ಬಾಂಗ್ಲಾ ನಾಡಿನಲ್ಲಿ ಹಗಲು ಪ್ರಯಾಣಕ್ಕಿಂತ ರಾತ್ರಿ ಪ್ರಯಾಣ ಸುರಕ್ಷಿತ ಎಂದು ಆಲೋಚಿಸಿದ್ದ ಸಲೀಂ ಚಾಚಾ ಅದೇ ಕಾರಣಕ್ಕಾಗಿಯೇ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ್ದ. ರಾತ್ರಿಯಾಗುತ್ತಲೇ ಹೊರಟು ಬೆಳಕು ಮೂಡುವ ವರೆಗೂ ಪ್ರಯಾಣ ಮಾಡಬೇಕಿತ್ತು. ಬೆಳಿಗ್ಗೆ ಸುರಕ್ಷಿತ ಜಾಗವನ್ನು ಹಿಡಿದು ಉಳಿದುಕೊಳ್ಳಬೇಕಿತ್ತು. ಯಾರಿಗೂ ತಾವು ಹಿಂದುಗಳೆಂದು ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರ ಹಾಗೂ ಮಧುಮಿತಾ ತಮ್ಮ ಚಹರೆಯನ್ನು ಬದಲಿಸಿಕೊಂಡಿದ್ದರು. ವಿನಯಚಂದ್ರ ತನ್ನನ್ನು ಅಹಮದ್ ಎಂದೂ ಮಧುಮಿತಾ ತನ್ನನ್ನು ರಜಿಯಾ ಎಂದೂ ಕರೆದುಕೊಂಡಿದ್ದರು. ಭಾರತದ ಗಡಿಯೊಳಗೆ ಹೋಗುವ ವರೆಗೂ ಈ ಹೆಸರಿನಲ್ಲಿಯೇ ತಮ್ಮನ್ನು ಎಲ್ಲರಿಗೂ ಪರಿಚಯ ಮಾಡಿಕೊಳ್ಳಬೇಕೆಂದು ಚಾಚಾ ಕಟ್ಟು ನಿಟ್ಟಾಗಿ ತಿಳಿಸಿದ್ದ. ಅಲ್ಲದೇ ಭಾರತದ ಗಡಿಯ ವರೆಗೆ ತಾನೂ ಬಂದು ಹೋಗುತ್ತೇನೆಂದು ಹೇಳಿದ್ದ.
                ವಿನಯಚಂದ್ರ ಸಲೀಂ ಚಾಚಾನ ಬಳಿ `ಚಾಚಾ.. ನಾವು ತೊಂದರೆಯಿಲ್ಲದೇ ತಲುಪುತ್ತೇವೆ. ನೀವು ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ..' ಎಂದು ಹೇಳಿದರೂ ಕೇಳದೇ `ನಿಮ್ಮನ್ನು ಭಾರತದ ಗಡಿಯವರೆಗೆ ಸುರಕ್ಷಿತವಾಗಿ ತಲುಪಿಸುವ ಹೊಣೆ ನನ್ನದು. ನೀನು ಎಷ್ಟೇ ಬೇಡ ಎಂದರೂ ನಾನು ಬಂದೇ ಬರುತ್ತೇನೆ..ಸುಮ್ಮನೆ ಹೊರಡಿ' ಎಂದು ಪಟ್ಟಾಗಿ ಹೇಳಿದ್ದರು. ವಿನಯಚಂದ್ರ ಸುಮ್ಮನುಳಿದಿದ್ದ.
             ಕೆಲವರೇ ಹಾಗೆ ಹಚ್ಚಿಕೊಂಡರೆ ಮುಗಿಯಿತು. ಏನು ಮಾಡಿದರೂ ಬಿಡುವುದಿಲ್ಲ. ಹಾದಿ ತಪ್ಪುವ ಸಂದರ್ಭದಲ್ಲೆಲ್ಲ ಜೊತೆ ನಿಂತು ದಡ ಮುಟ್ಟಿಸುವ ಕೆಲಸವನ್ನು ಮಾಡುತ್ತಾರೆ. ಅಂತವರಲ್ಲೊಬ್ಬ ಸಲೀಂ ಚಾಚಾ. ಸರಿಯಾಗಿ ಕತ್ತಲಾದ ನಂತರ ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ. ಹೊರ ಬಂದವನೇ ಆಚೆ ಈಚೆ ನೋಡಿ ಯಾರಿಗೂ ಅನುಮಾನ ಬಾರದಂತೆ ಕೆಲಸ ನಿರ್ವಹಿಸಿದ. ತನ್ನದೇ ಸೈಕಲ್ ರಿಕ್ಷಾದ ಮೂಲಕ ಹೊರಡಿಸಿದ ಸಲೀಂ ಚಾಚಾ. ತಮ್ಮ ತಮ್ಮ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡಿದ್ದ ವಿನಯಚಂದ್ರ, ಮಧುಮಿತಾ ಸಲೀಂ ಚಾಚಾನ ಸೈಕಲ್ಲನ್ನೇರಿದರು. ಕತ್ತಲೆಯಲ್ಲಿಯೇ ಬೇಗ ಬೇಗನೆ ಸೈಕಲ್ ತುಳಿಯಲು ಆರಂಭಿಸಿದ. ಸಲೀಂ ಚಾಚಾನಲ್ಲಿ ಎಲ್ಲಿ ಅಡಗಿತ್ತೋ ದೈತ್ಯಶಕ್ತಿ. ದಿನದಿಂದ ದಿನಕ್ಕೆ ಯುವ ಹುಮ್ಮಸ್ಸು ಆತನಲ್ಲಿ ಮನೆ ಮಾಡುತ್ತಿದೆಯೇನೋ ಎನ್ನಿಸಿತ್ತು. ಇಳಿದನಿಯಲ್ಲಿ ಮಾತನಾಡುತ್ತ, ಬಹುಹೊತ್ತು ಮಾತಿಲ್ಲದೇ ಪಯಣ ಮುಂದಕ್ಕೆ ಸಾಗಿತು.
                 ಅಪಾಯದ ಪರಿಸ್ಥಿತಿಯಿರುವ ಕಾರಣ ಸಾಧ್ಯವಾದಷ್ಟೂ ಒಳ ರಸ್ತೆಯನ್ನು ಬಳಕೆ ಮಾಡಬೇಕಾಗಿತ್ತು. ಜೊತೆ ಜೊತೆಯಲ್ಲಿ ಸಾಕಷ್ಟು ಸುತ್ತುಬಳಸಿನ ಮಾರ್ಗದಲ್ಲಿಯೂ ಪ್ರಯಾಣ ಮಾಡಬೇಕಾಗಿ ಬಂದಿತು. ಯಾಕೋ ಮೊದಲ ಬಾರಿಗೆ ಸಲೀಂ ಚಾಚಾನಿಗೆ ಢಾಕಾದ ಬೀದಿಗಳು ಬಹು ವಿಸ್ತಾರವಾಗಿದೆಯೇನೋ ಎನ್ನಿಸಿತು. ಎಷ್ಟು ಸೈಕಲ್ ತುಳಿದರೂ ಢಾಕಾ ಮುಗಿಯುತ್ತಲೇ ಇಲ್ಲವಲ್ಲ ಎಂದೂ ಅನ್ನಿಸತೊಡಗಿತ್ತು. ಬೀದಿ ಬೀದಿಗಳಲ್ಲೆಲ್ಲ ಪೊಲೀಸ್ ಬ್ಯಾರಿಕೇಡ್ ಗಳು, ನಾಕಾಬಂದಿಗಳಿದ್ದವು. ಅಲ್ಲಲ್ಲಿ ಪೊಲೀಸರು ನಿಂತು ಪಹರೆ ಕಾಯುತ್ತಿದ್ದರು. ಅವರ ಕೈಯಲ್ಲಂತೂ ಕೊಲ್ಲುವ ಬಂದೂಕುಗಳು ಲೋಡಾಗಿ ಕಾಯುತ್ತಿದ್ದವು. ಹಿಂಸಾಚಾರಿ ಕಂಡರೆ ಸಾಕು ಬೇಟೆಯಾಡುವ ದಾಹವನ್ನು ಆ ಬಂದೂಕುಗಳು ಹೊಂದಿದ್ದಂತೆ ಕಾಣಿಸಿತು.
            ದಾರಿಯಲ್ಲಿ ಹಲವಾರು ಕಡೆಗಳಲ್ಲಿ ಪೊಲೀಸರು ಕಾಣಿಸಿದ್ದರೂ ಯಾರೊಬ್ಬರೂ ಇವರನ್ನು ತಡೆಯಲಿಲ್ಲ. ಢಾಕಾದಿಂದ ಇನ್ನೇನು ಹೊರಗೆ ಹೋಗಬೇಕು ಎನ್ನುವಂತಹ ಸಮಯದಲ್ಲಿ ಒಂದು ಕಡೆಯಲ್ಲಿ ಪೊಲೀಸ್ ತನಿಖಾ ಠಾಣೆಯಲ್ಲಿ ಸಲೀಂ ಚಾಚಾ ತುಳಿಯುತ್ತಿದ್ದ ಸೈಕಲ್ ರಿಕ್ಷಾವನ್ನು ತಡೆದು ನಿಲ್ಲಿಸಿಯೇ ಬಿಟ್ಟರು. ವಿನಯಚಂದ್ರ ಕೊಂಚ ಗಾಬರಿಗೊಂಡಿದ್ದ. ಮಧುಮಿತಾ ಕೂಡ ಗಾಬರಿಯಲ್ಲಿಯೇ ಇದ್ದಳು. ಆದರೆ ಸಲೀಂ ಚಾಚಾ ತಣ್ಣಗೆ ಕುಳಿತಿದ್ದ. ಹತ್ತಿರ ಬಂದ ಪೊಲೀಸನೊಬ್ಬ ಸೈಕಲ್ ರಿಕ್ಷಾವನ್ನು ಹಿಡಿದು `ಯಾರು ನೀವು..? ಎಲ್ಲಿಗೆ ಹೊರಟಿದ್ದೀರಿ..?' ಎಂದು ಗಡುಸಾಗಿ ಪ್ರಶ್ನಿಸಿದ. ಅದಕ್ಕೆ ಪ್ರತಿಯಾಗಿ ಸಲೀಂ ಚಾಚಾ ತಣ್ಣಗೆ ಉತ್ತರಿಸಿದ. ಆದರೆ ಪೊಲೀಸನಿಗೆ ಏನೋ ತೃಪ್ತಿಯಾದಂತೆ ಕಾಣಲಿಲ್ಲ. ಸೀದಾ ಸೈಕಲ್ಲಿನ ಹಿಂದಿನ ಸೀಟಿನತ್ತ ಬಂದು ಅದರಲ್ಲಿ ಕುಳಿತಿದ್ದ ವಿನಯಚಂದ್ರನ ಬಳಿ `ನಿನ್ನ ಹೆಸರೇನು..?' ಎಂದು ಗಡುಸಾಗಿಯೇ ಕೇಳಿದ್ದ.
           ಪೊಲೀಸಿನವನ ಗಡುಸು ಉತ್ತರಕ್ಕೆ ಒಮ್ಮೆ ಬೆದರಿದ ವಿನಯಚಂದ್ರನಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ಸಲೀಂ ಚಾಚಾ ಅದೇನೋ ತನ್ನ ಹೆಸರನ್ನು ಬದಲಾಯಿಸಿದ್ದ. ಆದರೆ ಆ ಹೆಸರು ನೆನಪಾಗಲೇ ಇಲ್ಲ. ಒಮ್ಮೆ ತಲೆ ಕೊಡವಿಕೊಂಡು ಆಲೋಚನೆ ಮಾಡಿದರೂ ಹೆಸರು ಮಾತ್ರ ನೆನಪಾಗಲಿಲ್ಲ. ಇದರಿಂದ ಮತ್ತಷ್ಟು ಭಯಗೊಂಡ ವಿನಯಚಂದ್ರ `ಬ್ಬೆ ಬ್ಬೆ ಬ್ಬೆ..' ಎಂದು ತೊದಲಿದ. ಒಮ್ಮೆ ಮಧುಮಿತಾಳನ್ನೂ ಇನ್ನೊಮ್ಮೆ ಸಲೀಂ ಚಾಚಾ ನನ್ನೂ ನೋಡಲಾರಂಭಿಸಿದ. ಇನ್ನು ಸುಮ್ಮನುಳಿದರೆ ಕುತ್ತಿಗೆಗೆ ಬರುತ್ತದೆ ಎಂದು ತಿಳಿದ ಸಲೀಂ ಚಾಚಾನೇ `ಅಹಮದ್..' ಎಂಬುದು ಆತನ ಹೆಸರು. ಅವನಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ.' ಎಂದು ಬಿಟ್ಟ. ಪೊಲೀಸಿನವನಿಗೆ ಅದೇನೆನ್ನಿಸಿತೋ `ಠೀಕ್ ಹೈ..' ಎಂದು ವಾಪಸಾದ. ವಿನಯಚಂದ್ರನಿಗೆ ಹೋದ ಜೀವ ಮರಳಿದಂತಾಯಿತು.
              ಪೊಲೀಸಿನವನು ಅತ್ತ ಹೋಗುತ್ತಿದ್ದಂತೆಯೇ  ಸಲೀಂ ಚಾಚಾ `ಯಾಕ್ ಬೇಟಾ..? ಏನಾಯ್ತು? ಬಹಳ ಹೆದರಿ ಬಿಟ್ಟೆಯಾ?' ಎಂದು ಕೇಳಿದರು. ವಿನಯಚಂದ್ರ ಮಾತಾಡಲಿಲ್ಲ. ಸಲೀಂ ಚಾಚಾನೇ ಮುಂದುವರಿದು `ಅಬ್ಬ.. ಮಾತನಾಡದೇ ಇದ್ದರೆ ತೊಂದರೆಯಿಲ್ಲ. ಆದರೆ ಭಯದಲ್ಲಿ ಏನಾದರೂ ಬಾಯಿ ಬಿಟ್ಟಿದ್ದರೆ ಬಹಳ ತೊಂದರೆಯಾಗುತ್ತಿತ್ತು ನೋಡು. ಅಲ್ಲಾಹುವಿನ ದಯೆ.. ಹಾಗಾಗಲಿಲ್ಲ..' ಎಂದವನೇ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ.
         ಕೆಲ ಹೊತ್ತಿನಲ್ಲಿಯೇ ಢಾಕಾದ ಕೊನೆಯ ಪ್ರದೇಶವಾದ `ಉತ್ತರಾ' ಎಂಬಲ್ಲಿಗೆ ಸೈಕಲ್ ಸವಾರಿ ಬಂದು ತಲುಪಿತು. ಪಕ್ಕದ ಟೋಂಗಿ ಎಂಬ ಪ್ರದೇಶವನ್ನು ಹಾದು ಬೆಳಗಾಗುವ ವೇಳೆಗೆ ಅಶೂಲಿಯಾ ಎನ್ನುವ ಪ್ರದೇಶವನ್ನು ತಲುಪಬೇಕೆಂಬುದು ಸಲೀಂ ಚಾಚಾನ ನಿರ್ಧಾರವಾಗಿತ್ತು. ರಾತ್ರಿಯಾದಂತೆಲ್ಲ ಢಾಕಾದ ನಗರಿಯ ಬೆಳಕು ಕಡಿಮೆಯಾಗತೊಡಗಿತು. ರಸ್ತೆಯಲ್ಲಿ ವಾಹನ ಸಂಚಾರವೇ ಇರಲಿಲ್ಲ. ಆಗೀಗ ಅಲ್ಲೊಂದು ಇಲ್ಲೊಂದು ವಾಹನಗಳು ರೊಯ್ಯನೆ ಹಾದು ಹೋಗುತ್ತಿದ್ದುದನ್ನು ಬಿಟ್ಟರೆ ಬಹುತೇಕ ದಾರಿ ನಿರ್ಜನವಾಗಿತ್ತು. ಸೈಕಲ್ ಮೇಲೆ ಮಧುಮಿತಾ ಆಗಲೇ ನಿದ್ದಗೆ ಜಾರಿಬಿಟ್ಟಿದ್ದಳು. ವಿನಯಚಂದ್ರ ಹಾಗೂ ಸಲೀಂ ಚಾಚಾ ಪಿಸು ದನಿಯಲ್ಲಿ ಮಾತನಾಡುತ್ತಾ ಮುಂದಕ್ಕೆ ಸಾಗುತ್ತಿದ್ದರು. ಮತ್ತೊಂದು ಅರ್ಧಗಂಟೆಯ ನಂತರ ಒಳದಾರಿಯನ್ನು ಬಿಟ್ಟು ಢಾಕಾ-ಅಶೂಲಿಯಾ ಹೆದ್ದಾರಿಯಲ್ಲಿ ಸಾಗುವ ಅನಿವಾರ್ಯತೆ ಉಂಟಾಯಿತು. ಸಲೀಂ ಚಾಚಾ ಅತ್ತ ತನ್ನ ಸೈಕಲ್ಲನ್ನು ತಿರುಗಿಸಿದ. ಹೆದ್ದಾರಿ ಕೂಡ ನಿರ್ಜನವಾಗಿತ್ತು. ಹೆದ್ದಾರಿಯ ಆರಂಭದಲ್ಲಿಯೇ ನದಿಯೊಂದು ಹರಿದಿತ್ತು. ಅದನ್ನು ದಾಟುವ ವೇಳೆಗಂತೂ ಚಳಿ ಗಾಳಿ ಬೀಸಿ ಬೀಸಿ ಬರಲಾರಂಭಿಸಿತು. ನದಿಯ ಮೇಲಿಂದ ಹಾದು ಬಂದ ತಂಗಾಳಿ ಮೈಯನ್ನು ಕೊರೆಯುತ್ತಿದೆಯೇನೋ ಅನ್ನಿಸಿತು. ನಿದ್ರೆ ಮಾಡುತ್ತಿದ್ದ ಮಧುಮಿತಾಳ ಮೇಲೆ ವಿನಯಚಂದ್ರ ಚಾದರವೊಂದನ್ನು ಹಾಕಿದ. ನಿದ್ದೆಗಣ್ಣಿನಲ್ಲಿಯೇ ಮಧುಮಿತಾ ಖುಷಿಪಟ್ಟಂತಾಯಿತು.
              ಢಾಕಾ-ಅಶೂಲಿಯಾ ರಸ್ತೆಯ ನಡುವಿನ ಗದ್ದೆ ಬಯಲುಗಳು ಕತ್ತಲೆಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದವು. ಆಕಾಶದ ಮಬ್ಬು ಬೆಳಕಿನಲ್ಲಿ ಗದ್ದೆಯ ಬಯಲುಗಳು, ಬಯಲಿನಾಚೆಯಲ್ಲಿ ಹರಿಯುತ್ತಿದ್ದ ನದಿಯೂ ವಿಚಿತ್ರವಾಗಿ ಕಾಣುತ್ತಿತ್ತು. ನೆಟ್ಟನೆ ರಸ್ತೆಯಲ್ಲಿ ಮೌನವಾಗಿ ಪ್ರಯಾಣ ಮಾಡುವುದು ಯಾಕೋ ಅಸಹನೀಯ ಎನ್ನಿಸುತ್ತಿತ್ತು. ಸಲೀಂ ಚಾಚಾನ ಜೊತೆಗೆ ಮಾತಾಡೋಣವೇ ಎಂದುಕೊಂಡರೂ ಮತ್ತಿನ್ನೇನಾದರೂ ಅಪಾಯ ಎದುರಾದರೆ ಎಂದುಕೊಂಡು ಸುಮ್ಮನಾದ ವಿನಯಚಂದ್ರ.
                  `ಚಾಚಾ.. ನಾನು ಸೈಕಲ್ ತುಳಿಯುತ್ತೇನೆ.. ಇಲ್ಲ ಅನ್ಬೇಡ ಪ್ಲೀಸ್..' ಕೊನೆಗೊಮ್ಮೆ ಅಸಹನೀಯ ಮೌನವನ್ನು ಬೇಧಿಸಿ ವಿನಯಚಂದ್ರ ಮಾತಾಡಿದ್ದ. ಚಾಚಾನಿಗೂ ಸೈಕಲ್ ತುಳಿದು ಸುಸ್ತಾಗಿತ್ತೇನೋ ಸೈಕಲ್ ತುಳಿಯಲು ಕೊಟ್ಟ. ವಿನಯಚಂದ್ರ ಹುಮ್ಮಸ್ಸಿನಿಂದ ಸೈಕಲ್ ತುಳಿಯುತ್ತಿದ್ದರೆ ಸಲೀಮ ಚಾಚಾ ಪಕ್ಕದ ಗದ್ದೆ ಬಯಲನ್ನು ತೋರಿಸುತ್ತಾ `ಬೇಟಾ ಈ ಗದ್ದೆ ಬಯಲುಗಳಿವೆಯಲ್ಲ ಇವುಗಳ ಹಿಂದೆ ಅದೆಷ್ಟೋ ಕ್ರೂರ ಕಥೆಗಳಿವೆ. ಕೇಳುತ್ತ ಹೋದರೆ ಕಣ್ಣೀರು ಬರುತ್ತದೆ.. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಬ್ರಿಟೀಷರ ಆಕ್ರಮಣ, ಪದೇ ಪದೆ ನಡೆಯುತ್ತಿದ್ದ ಯುದ್ಧಗಳು, ಪಾಕಿಸ್ತಾನ ಬಾಂಗ್ಲಾ ಮೇಲೆ ಬೆನ್ನತ್ತಿ ಬಂದು ಇಲ್ಲಿನ ನೇತಾರರನ್ನು ಕೊಂದಿದ್ದು ಇದೇ ವಿಶಾಲ ಗದ್ದೆ ಬಯಲಿನಲ್ಲಿ ಎಂದ ಚಾಚಾ ಕೆಲಕಾಲ ಸುಮ್ಮನಾದ.
            ಚಾಚಾನಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ದಿನಗಳು ನೆನಪಾಗಿರಬೇಕು ಎಂದುಕೊಂಡ ವಿನಯಚಂದ್ರ. ಚಾಚಾ ಮುಂದುವರಿಸಿದ `ಪಾಕಿಸ್ತಾನ ತನ್ನದೇ ಭಾಗದ ನಾಡಾಗಿದ್ದರೂ ಮಿಲಿಟರಿ ಕಳಿಸಿ ದಾಳಿ ಮಾಡಿತಲ್ಲ. ಆಗ ನಾವು ನಲುಗಿದ್ದೇನು ಕಡಿಮೆಯೇ? ನಮ್ಮ ಈ ನಾಡಿನ ಹೆಣ್ಣುಮಕ್ಕಳನ್ನು ಎಳೆದೆಳೆದು ಅತ್ಯಾಚಾರ ಮಾಡುತ್ತಿದ್ದರೆ ನಾವು ಕುದ್ದು ಹೋಗಿದ್ದೆವು. ಆದರೆ ನಮ್ಮಲ್ಲಿ ಆಯುಧವಿರಲಿಲ್ಲ. ಮಾರಕ ಆಯುಧಗಳನ್ನು ಹೊಂದಿದ್ದ ಪಾಕಿಸ್ತಾನಿ ಯೋಧರು ರಣಕೇಕೆ ಹಾಕಿ ನಮ್ಮವರನ್ನು ಕೊಲ್ಲುತ್ತಿದ್ದರೆ ನಾವು ನಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿದ್ದೆವು. ರಕ್ಷಣೆಗೆ ಯಾರನ್ನು ಯಾಚಿಸುವುದು? ಎಲ್ಲಿ ಓಡುವುದು? ನಮ್ಮವರಲ್ಲಿ ಲಕ್ಷಾಂತರ ಜನರು ಭಾರತಕ್ಕೆ ಓಡಿ ಹೋದರು. ನಿಮ್ಮ ಭಾರತಕ್ಕೆ ನಿರಾಶ್ರಿತರ ಸಮಸ್ಯೆ ತಟ್ಟಿದಾಗಲೇ ನಿಮ್ಮ ಐರನ್ ಲೇಡಿ ಇಂದಿರಾಗಾಂಧಿ ಗುಟುರು ಹಾಕಿದ್ದು. ಅಬ್ಬಾ ಎಂತಾ ಹೆಂಗಸು ಆಕೆ. ಅದೆಷ್ಟು ಗಟ್ಟಿಗಿತ್ತಿ. ಗುಟುರು ಹಾಕಿದ್ದಷ್ಟೇ ಅಲ್ಲ. ಯುದ್ಧ ಸಾರಿ ಮಿಲಿಟರಿಯನ್ನು ಕಳಿಸಿ ಪಾಕಿಸ್ತಾನದ ಸೈನ್ಯವನ್ನು ಬಗ್ಗು ಬಡಿಯಿತಲ್ಲ. ಆ ಸಂದರ್ಭದಲ್ಲಿ ಬಾಂಗ್ಲೋದಯವಾಗಿದ್ದು. ಈಗಲೂ ನಮ್ಮಲ್ಲಿ ಶೇಖ್ ಮುಜೀಬುರ್ ರೆಹಮಾನ್ ರನ್ನು ನೆನೆಯುವಷ್ಟೇ ಇಂದಿರಾ ಗಾಂಧಿಯನ್ನೂ ನೆನೆಯುವವರೂ ಇದ್ದಾರೆ. ಆಕೆಯ ಮಿಲಿಟರಿ ಸೈನ್ಯದ ಎದುರು ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಶರಣಾದರಲ್ಲ ಆಗ ನಾವೆಲ್ಲ ಚಪ್ಪಾಳೆ ಹೊಡೆದು ಸಂತೋಷ ಪಟ್ಟಿದ್ದೆವು. ಇಂತಹ ಹಲವಾರು ಘಟನೆಗಳು ಈ ಗದ್ದೆ ಬಯಲಿನಲ್ಲಿ ಜರುಗಿದೆ. ಇಂತಹ ಗದ್ದೆ ಬಯಲು ಬೇಸಿಗೆ ಹಾಗೂ ಚಳಿಗಾಲದಲ್ಲಿ ಭತ್ತದ ಕಣಜಗಳಾಗುತ್ತವೆ. ಆದರೆ ಮಳೆಗಾಲದಲ್ಲಿ ಮಾತ್ರ ಬ್ರಹ್ಮಪುತ್ರ ನದಿ ನೂರಾರು ಕಿ.ಮಿ ಅಗಲವಾಗಿ ಹರಿದು ಈ ಗದ್ದೆ ಬಯಲನ್ನು ಮುಳುಗಿಸಿ ಬಿಡುತ್ತದೆ. ಮಳೆಗಾಲವೆಂದರೆ ಇಲ್ಲಿ ನರಕ..'
           `ಈಗ ನೀನು ಆಚೀಚೆ ನೋಡಿದರೆ ಕತ್ತಲೇ ಕಾಣುತ್ತದೆ. ಆದರೆ ಈ ಸಮಯದಲ್ಲಿ ಅಲ್ಲೆಲ್ಲ ಭತ್ತದ ಬೆಳೆ ತುಂಬಿ ನಿಂತಿದೆ. ಈ ಭತ್ತದ ಗದ್ದೆಯ ನಡುವೆ ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆ ರಕ್ಷಣೆಗೆ ನಿಂತಿರುತ್ತಾರೆ. ಹಗಲಿನಲ್ಲಿ ಈ ದೃಶ್ಯ ನಿನಗೆ ಬಹಳ ರೋಮಾಂಚನವನ್ನು ನೀಡುತ್ತದೆ. ಬಾಂಗ್ಲಾ ರೈತರ ಜೀವನಾಧಾರವೇ ಈ ಗದ್ದೆ ಬಯಲುಗಳು. ಇಲ್ಲೂ ಕೂಡ ಜಮೀನ್ದಾರಿ ಪದ್ಧತಿ ಇದೆ. ಒಬ್ಬ ಜಮೀನ್ದಾರ ಸಾವಿರಾರು ಎಕರೆ ಇಟ್ಟುಕೊಂಡು ನೂರಾರು ರೈತರನ್ನು ಶೋಷಿಸುತ್ತಿರುತ್ತಾನೆ. ಇಲ್ಲಿ ಬೆಳೆ ರಕ್ಷಣೆಗೆ ನಿಂತಿರುವ ರೈತರು ತಮ್ಮ ಜಮೀನನ್ನೇ ರಕ್ಷಣೆ ಮಾಡುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರು ರಕ್ಷಿಸುವ ಜಮೀನು ಅವರ ಜಮೀನುದಾರರದ್ದೂ ಆಗಿರುತ್ತದೆ. ತಲೆ ತಲಾಂತರದ ಜೀತದ ಪದ್ಧತಿ ಈಗಲೂ ಜೀವಂತವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಜಮೀನ್ದಾರ ಮಾತ್ರ ಇದ್ದಾನೆ. ಉಳಿದಂತೆ ಹೆಚ್ಚಿನ ಜಮೀನ್ದಾರರು ಕೊಲೆಯಾಗಿ ಹೋಗಿದ್ದಾರೆ. ಇಲ್ಲವೇ ಸರ್ಕಾರ ಕುತಂತ್ರ ಮಾಡಿ ಅವರ ಜಮೀನನ್ನು ತುಂಡು ತುಂಡು ಮಾಡಿಬಿಟ್ಟಿದೆ..'
            ಸಲೀಂ ಚಾಚಾ ವಿಸ್ತಾರವಾಗಿ ಹೇಳುತ್ತಲೇ ಇದ್ದರು. ವಿನಯಚಂದ್ರ ಕಿವಿಯಾಗಿದ್ದ. ಬಾಂಗ್ಲಾ ನಾಡಿನ ಚರಿತ್ರೆ, ಮಣ್ಣಿನ ಗುಣ, ಯುದ್ಧ ಇತ್ಯಾದಿಗಳೆಲ್ಲ ಬಿಚ್ಚಿಕೊಳ್ಳುತ್ತಿದ್ದವು. ಸಲೀಂ ಚಾಚಾ ಸೈಕಲ್ ರಿಕ್ಷಾ ಹೊಡೆಯುವವರೋ ಅಥವಾ ಇತಿಹಾಸಕಾರರೋ ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಅಷ್ಟರಲ್ಲಿ ಇನ್ನೊಂದು ಚಿಕ್ಕ ನದಿ ಅವರೆದುರು ಬಂದಿತು. ಅದಕ್ಕೊಂದು ಚಿಕ್ಕ ಸೇತುವೆ ಕೂಡ ಇತ್ತು. `ದೇಕೋ ಬೇಟಾ.. ಢಾಕಾದಿಂದ ಅಶೂಲಿಯಾಗೆ 25 ಕಿ.ಮಿ ಆಗುತ್ತದೆ. ಈ ದೂರದ ನಡುವೆ ನಾವು ಮೂರು ಸಾರಿ ನದಿ ದಾಟಬೇಕಾಗುತ್ತದೆ. ಆ ನದಿಗಳಲ್ಲಿ ಇದೂ ಒಂದು. ಈ ಕಿರು ನದಿಯಿದೆಯಲ್ಲ ಒಂದಾನೊಂದು ಕಾಲದಲ್ಲಿ ದೈತ್ಯವಾಗಿ ಹರಿಯುತ್ತಿತ್ತಂತೆ. ಆದರೆ ಕಾಲಕ್ರಮೇಣ ನದಿ ಪಥ ಬದಲಿಸಿದೆ. ಈ ಕವಲು ಚಿಕ್ಕದಾಗಿದೆ. ನಮಗೆ ಸಿಗುವ ಇನ್ನೊಂದು ಕವಲು ಬಹು ದೊಡ್ಡದು. ಆ ನದಿಯನ್ನು ದಾಟಿದ ನಂತರ ಅಶೂಲಿಯಾ. ಆದರೆ ಆ ಸೇತುವೆ ದಾಟುವುದು ನಮ್ಮ ಮುಂದಿರುವ ಪ್ರಮುಖ ಸವಾಲು. ಏಕೆಂದರೆ ಆ ಸೇತುವೆಯ ಸುತ್ತಮುತ್ತ ಕಳ್ಳಕಾಕರ ಹಾವಳಿಯಿದೆ. ದಾರಿಯಲ್ಲಿ ಹಾದು ಬರುವ ಪ್ರಯಾಣಿಕರನ್ನು ತಡೆದು ಅವರ ತಲೆಗೆ ಬಂದೂಕನ್ನು ಗುರಿಯಿಟ್ಟು ಕೈಯಲ್ಲಿರುವ ಹಣ, ಒಡವೆಗಳನ್ನೆಲ್ಲ ಕಿತ್ತುಕೊಳ್ಳುವುದು ಅವರ ಪ್ರಮುಖ ಕೆಲಸ. ನಾವು ಅವರನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋದರೆ ಬಹುದೊಡ್ಡ ಸಮಸ್ಯೆ ಕಡಿಮೆಯಾದಂತೆ. ಸರ್ಕಾರ ಇವರನ್ನು ಮಟ್ಟ ಹಾಕಲು ಪ್ರಯತ್ನಿಸಿ ಸೋತಿದೆ. ನಾವು ಈಗ ಎಚ್ಚರಿಕೆಯಿಂದ ಹೋಗಬೇಕು.. ಹುಷಾರು..' ಎಂದು ಚಾಚಾ ಹೇಳಿದರು. ವಿನಯಚಂದ್ರ ಸುಮ್ಮನೆ ಸೈಕಲ್ ತುಳಿಯುತ್ತಿದ್ದ.
             ತಂಗಾಳಿಯ ನಡುವೆ ಸೈಕಲ್, ಸೈಕಲ್ಲಿನಲ್ಲಿ ವಿನಯಚಂದ್ರ, ಮಧುಮಿತಾ, ಸಲೀಂ ಚಾಚಾ ಸಾಗುತ್ತಿದ್ದರು. ಸುತ್ತಲೂ ಕತ್ತಲಾವರಿಸಿತ್ತು. ಸಲೀಂ ಚಾಚಾ ಕೂಡ ಮಾತಾಡಿ ಮಾತಾಡಿ ಬೇಸರಗೊಂಡನೇನೋ. ಸುಮ್ಮನಾಗಿದ್ದ. ವಿನಯಚಂದ್ರ ತಂಗಾಳಿ ನಡುವೆಯೂ ಬೆವರುತ್ತ ಸೈಕಲ್ ತುಳಿಯುತ್ತಿದ್ದರೆ ಮಧುಮಿತಾ ಮಹಾರಾಣಿಯಂತೆ ಮಲಗಿ ನಿದ್ರಿಸುತ್ತಿದ್ದಳು. ವಿನಯ ಚಂದ್ರನಿಗೆ ಈ ಮೌನ, ಕಾರ್ಗತ್ತಲು, ಮುಂದೇನೋ ಕೆಟ್ಟ ಸಮಯವಿದೆ ಎನ್ನುವುದನ್ನು ಸಾರಿ ಹೇಳುತ್ತಿದ್ದಂತೆ ಅನ್ನಿಸಿತು. ಯಾವುದೋ ಅಪಾಯದ ಮುನ್ಸೂಚನೆಯಾಗಿ ಇಂತಹ ಶೂನ್ಯ ಮೌನ ಕಾಡುತ್ತಿದ್ದಂತೆ ಅನ್ನಿಸಿತು. ಸೈಕಲ್ ತುಳಿಯುತ್ತಿದ್ದರೂ ಅದೇನೋ ಚಟಪಡಿಕೆ ವಿನಯಚಂದ್ರನ ಮನಸ್ಸಿನಲ್ಲಿ ಆವರಿಸಿತು.

(ಮುಂದುವರಿಯುತ್ತದೆ..)            

Tuesday, August 12, 2014

ಸತ್ಯವಾದ ಹನಿಗಳು

ಕಾರಣ

ಸನಾತನಿಗಳ ಬಗ್ಗೆ

ವಿರುದ್ಧ ಚೀರಾಡುವವರಿಗೆ
ಇರುವ ಒಂದೇ ಕಾರಣ
ವಿನಾಕಾರಣ |

ಪಂಚ್


ಬಚ್ಚಲಮನೆಯ ಎದುರು ಬರೆದಿದ್ದ ಬರಹ :

ನಿಮ್ಮೊಳಗಿನ ಸಂಗೀತಗಾರನಿಗೆ ಇಲ್ಲಿ ವೇದಿಕೆ ಇದೆ..

ಇಬ್ಬಗೆ


ಮೂಢನಂಬಿಕೆ
ನಿಷೇಧಿಸಬೇಕೆಂದರು
ಮುಖ್ಯಮಂತ್ರಿ
ಸಿದ್ದರಾಮಯ್ಯರು..|
ಕಾವೇರಿ ಒಡಲು ತುಂಬಿತು
ಬಾಗಿನ ಕೊಟ್ಟರು ||

ಒಗ್ಗೂಡು

ಬಿಹಾರದಲ್ಲಿ
ಒಂದಾದರು
ನಿತೀಶ್ ಹಾಗೂ ಲಾಲೂ
ಇನ್ನುಮುಂದೇನಿದ್ದರೂ
ಬಾಣದ ಜೊತೆಗೆ ಕಂದೀಲು ||