Saturday, August 23, 2014

ಅನಂತಮೂರ್ತಿಯವರಿಗೊಂದು ನಮನ


ಅನಂತ ಮೂರ್ತಿಯವರು ಇನ್ನಿಲ್ಲ.
ಕನ್ನಡ ಸಾಹಿತ್ಯ ಲೋಕಕ್ಕೆ ಶಾಕ್ ಸುದ್ದಿ ಹೌದು.
ಬದುಕಿದ್ದಾಗ ಹಲವಾರು ರೀತಿಯ ಸುದ್ದಿಗಳಿಗೆ ಗ್ರಾಸವಾಗಿ, ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು ಸದಾ ಸುದ್ದಿಯಲ್ಲಿ ಇರುತ್ತಿದ್ದವರು. ಇತ್ತೀಚಿನ ದಿನಗಳಲ್ಲಿ ಯಾವುದೇ ಕಾದಂಬರಿ, ಕಥೆ, ಸೇರಿದಂತೆ ಪುಸ್ತಕಗಳನ್ನು ಬರೆಯದಿದ್ದರೂ ಹಲವು ರೀತಿಯ ಹೇಳಿಕೆಗಳನ್ನು ಕೊಟ್ಟು ಸದಾ ಚರ್ಚೆಯಲ್ಲಿ ಇರುತ್ತಿದ್ದವರು. ಕಲಬುರ್ಗಿ ಪ್ರಕರಣವಂತೂ ಅನಂತಮೂರ್ತಿಯವರ ಮೇಲೆ ಸಾಕಷ್ಟು ಟೀಕೆಗಳನ್ನೂ ಬರುವಂತೆ ಮಾಡಿತು. ಮೋದಿ ಪ್ರದಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಓಲೈಕೆ ಮಾಡಲು ಯತ್ನಿಸಿದರಾದರೂ ಜನಸಾಮಾನ್ಯರು ಅನಂತ ಮೂರ್ತಿಯವರ ವಿರುದ್ಧ ತಿರುಗಿಬಿದ್ದರು. ಮೋದಿಯವರು ಪ್ರಧಾನಿಯಾದ ನಂತರವಂತೂ ಅನಂತ ಮೂರ್ತಿಯವರ ಬಳಿ ಯಾವಾಗ ದೇಶ ಬಿಟ್ಟು ಹೋಗುತ್ತೀರಿ ಎಂದು ಕೇಳಿದವರು ಹಲವರು. ಅದಕ್ಕೆ ಪ್ರತ್ಯುತ್ತರವಾಗಿ ಅನಂತಮೂರ್ತಿ ಅದೇನೋ ಸಬೂಬು ಹೇಳಿ ನುಣುಚಿಕೊಂಡರು. ಆದರೆ ಇತ್ತೀಚಿನ ಎರಡು ತಿಂಗಳಲ್ಲಿ ಅನಂತಮೂರ್ತಿಯವರು ಯಾವುದೇ ವಿವಾದದ ಹೇಳಿಕೆ ಕೊಡದೇ ಇದ್ದಾಗಲೇ ಏನೋ ಸರಿಯಿಲ್ಲ ಎನ್ನುವ ಭಾವನೆಯನ್ನು ಎಲ್ಲರಲ್ಲೂ ಹುಟ್ಟು ಹಾಕಿತ್ತು. ಬಹುಶಃ ಮೂರ್ತಿ ಮೇಲೆ ಮೂತ್ರ ವಿಷಯದ ಮೇಲೆ ವಿವಾದವಾಗಿದ್ದೆ ಕೊನೆಯಿರಬೇಕು. ಆ ನಂತರ ಅವರಿಂದ ವಿವಾದಗಳಾಗಲಿಲ್ಲ. ನಂತರದ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಖಂಡಿತವಾಗಿಯೂ ಅವರನ್ನು ಕಾಡಿರಬೇಕು. ಅವರು ಸುಮ್ಮನಿದ್ದರು.
ನಾನು ಅನಂತ ಮೂರ್ತಿ ಅವರು ಬರೆದಿದ್ದನ್ನು ಓದಿದ್ದು ಬಹಳ ಕಡಿಮೆ. ಅನಂತಮೂರ್ತಿಯವರ ಸಂಸ್ಕಾರ ಹಾಗೂ ಭಾರತೀಪುರ ಈ ಎರಡು ಕಾದಂಬರಿಗಳನ್ನು ನಾನು ಓದಿದ್ದೇನೆ. ಇವನ್ನು ಓದಿದ್ದೂ ನನ್ನ ಕಾಲೇಜು ದಿನಗಳಲ್ಲಿ. ಖಂಡಿತವಾಗಿಯೂ ಆ ದಿನಗಳಲ್ಲಿ ಈ ಪುಸ್ತಕಗಳನ್ನು ನಾನು ಓದಲು ಕಷ್ಟಪಟ್ಟಿದ್ದು ನಿಜ. ನನ್ನ ಅಂದಿನ ಯೋಚನಾ ಲಹರಿ, ಅಧವಾ ನನ್ನ ಮಟ್ಟಕ್ಕೆ ಅದು ಒಗ್ಗಲಿಲ್ಲ. ಗಡುಚೆನ್ನಿಸಿತು.ಬಹುಶಃ ಆ ನಂತರವೇ ಅನಂತಮೂರ್ತಿಯವರ ಪುಸ್ತಕಗಳನ್ನು ಕಂಡರೆ ಅದರತ್ತ ನಾಣು ಅಷ್ಟಾಗಿ ಗಮನ ಹರಿಸಲಿಲ್ಲ. ಆದರೆ ಈಗ ಮತ್ತೊಮ್ಮೆ ಅವರ ಪುಸ್ತಕಗಳನ್ನು ಓದಬೇಕೆಂಬ ಮನಸ್ಸಾಗುತ್ತಿದೆ.
ಅನಂತಮೂರ್ತಿಯವರ ವಿರುದ್ಧ ನನಗೆ ತಿಳಿದಂತೆ ಮೊಟ್ಟ ಮೊದಲು ಬರೆದಿದ್ದು ಪ್ರತಾಪ ಸಿಂಹ ಅವರಿರಬೇಕು. ಪ್ರತಾಪ್ ಸಿಂಹ ಅವರು ಬೆತ್ತಲೆ ಜಗತ್ತಿನ ಅಂಕಣದಲ್ಲಿ ಬರೆದಿದ್ದ ಲೇಖನವೊಂದನ್ನು ಅನಂತಮೂರ್ತಿ ಅವರು ವಿರೋಧಿಸಿದಾಗ ಸಾಕಷ್ಟು ವಾದಗಳು ಜರುಗಿತ್ತು. ಪ್ರತಾಪಸಿಂಹ ಅನಂತಮೂರ್ತಿಯವರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಆ ನಂತರವೇ ಅನಂತಮೂರ್ತಿಯವರು ಹಲವು ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನೋ ಅಥವಾ ಅಂತಹ ಘಟನೆಗಳನ್ನೋ ಉಂಟುಮಾಡುತ್ತಿದ್ದರು. ಈ ಅಂಶಗಳನ್ನು ಖಂಡಿತ ಅವರ ತೆಗಳಿಕೆಗೆ ಹೇಳುತ್ತಿಲ್ಲ. ಸಾಹಿತ್ಯ ಜಗತ್ತಿನಲ್ಲಿ, ಬದುಕಿನಲ್ಲಿ ಅವರು ದೊಡ್ಡ ಹೆಮ್ಮರ. ನಾನು ಚಿಕ್ಕದೊಂದು ಎಲೆ ಅಷ್ಟೆ. ಆದರೆ ಅವರು ನಿಧನರಾಗಿರುವ ಈ ಸಂದರ್ಭದಲ್ಲಿ ಅವರ ಬಗ್ಗೆ ಹೊಗಳುತ್ತಿರುವ ಸಂದರ್ಭದಲ್ಲಿಯೇ ಅವರ ಈ ವಿಷಯಗಳೂ ನನಗೆ ನೆನಪಾಗುತ್ತಿವೆ.
ಈ ಸಂದರ್ಭದಲ್ಲಿಯೇ ಇನ್ನೊಂದು ವಿಷಯವನ್ನೂ ನಾನು ಹೇಳಲೇಬೇಕು. ನಿನ್ನೆ ಸಂಜೆ ಅನಂತಮೂರ್ತಿಯವರು ನಿಧನರಾದಾಗ ಅನೇಕರು ಪಟಾಕಿ ಹೊಡೆದು ಸಂಭ್ರಮಿಸಿದರು. ಮಂಗಳೂರು, ಚಿಕ್ಕಮಗಳೂರುಗಳಲ್ಲಿ ಪಟಾಕಿ ಹೊಡೆದರು. ಶಿರಸಿಯಲ್ಲೂ ಪಟಾಕಿ ಹೊಡೆದರು. ಇದು ನಿಜಕ್ಕೂ ಖಂಡನೀಯ ವಿಷಯವೇ ಹೌದು. ಅವರು ಎಂತದ್ದೇ ಹೇಳಿಕೆ ಕೊಟ್ಟಿರಲಿ ಆದರೆ ಸಾಹಿತ್ಯದ ವಿಷಯಕ್ಕೆ ಬಂದಾಗ ಮೇರು ಪರ್ವತವಾಗಿಯೇ ನಿಲ್ಲುತ್ತಾರೆ. ಪಟಾಕಿ ಹೊಡೆದು ಸಂಭ್ರಮಿಸಿದವರಲ್ಲಿ ಯಾರೊಬ್ಬರೂ ಸಾಹಿತ್ಯದಲ್ಲಿ ಸಾಧನೆ ಮಾಡಿದವರೆಂದು ಅನ್ನಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಇನ್ನೊಂದು ವಿಷಯ ಅಂದರೆ ವ್ಯಕ್ತಿಯೊಬ್ಬರು ಸತ್ತಾಗ ಸಂಭ್ರಮಿಸುವುದಿದೆಯಲ್ಲ.. ಛೇ. ಖಂಡಿತವಾಗಿಯೂ ವ್ಯಕ್ತಿ ಸತ್ತಾಗ ಪಟಾಕಿ ಹೊಡೆಯುವುದು ಎಷ್ಟು ದುರಂತವೋ ಅದೇ ರೀತಿ ಪಟಾಕಿ ಹೊಡೆದು ಸಂಭ್ರಮ ಪಡುತ್ತಾರೆ ಎಂದರೆ ಬಹುಶಃ ಆ ವ್ಯಕ್ತಿಯ ಜೀವನದ ದುರಂತವೂ ಇರಬೇಕು. ಸತ್ತ ಮೇಲೆ ಸಿಟ್ಟು, ದ್ವೇಷ, ವಿರೋಧವೆಲ್ಲ ಮಣ್ಣಾಗುತ್ತವೆ ಎನ್ನುತ್ತಾರೆ. ಆದರೆ ಅನಂತಮೂರ್ತಿಯವರು ಸತ್ತ ಮೇಲೂ ಪಟಾಕಿ ಹೊಡೆದು ಸಂಭ್ರಮಿಸಿದರು ಎಂದರೆ ಪಟಾಕಿ ಹೊಡೆದವರಲ್ಲಿ ಅದ್ಯಾವಪರಿ ಆಕ್ರೋಶವಿರಬಹುದು? ಅಬ್ಬಾ ಅನ್ನಿಸುತ್ತಿದೆ.
ಅನಂತಮೂರ್ತಿಯವರು ನಿಧನರಾದ ತಕ್ಷಣ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಿತು. ಸರ್ಕಾರಿ ಕಚೇರಿಗಳಿಗೂ ರಜೆಯನ್ನು ನೀಡಿತು. ಬಹುಶಃ ರಾಜ್ಯ ಸರ್ಕಾರ ರಜೆ ನೀಡಿ ತಪ್ಪು ಮಾಡಿತೇನೋ ಎನ್ನಿಸುತ್ತಿದೆ. ಏಕೆಂದರೆ ರಜೆ ಸಿಕ್ಕಿತೆಂದರೆ ಎಂಜಾಯ್ ಮಾಡಲಿಕ್ಕೆ ಕೊಟ್ಟಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೂಡಿಬಿಟ್ಟಿದೆ. ಯಾವ ಕಾರಣಕ್ಕೆ ರಜೆ ಕೊಟ್ಟಿದ್ದಾರೆ ಎಂಬುದನ್ನು ಯಾರೂ ಆಲೋಚಿಸುವುದಿಲ್ಲ. ರಜಾ ಸಿಕ್ಕಿತಲ್ಲ ಎಂದು ಸಂಭ್ರಮಿಸುತ್ತಾರೆ. ಅನಂತಮೂರ್ತಿಯವರಿರಲಿ ಅಥವಾ ಇನ್ಯಾವುದೇ ಗಣ್ಯರು, ಸಾಹಿತಿಗಳು, ಮಾಜಿ ಮು.ಮಂ, ರಾಜಕಾರಣಿಗಳು ನಿಧನರಾದಾಗಲೂ ರಜಾ ಕೊಡಲಾಗುತ್ತದೆ. ರಜಾ ಕೊಟ್ಟಿದ್ದು ನಿಧನರಾಗಿದ್ದಾರೆ, ಶೋಕ ವ್ಯಕ್ತಪಡಿಸಲು. ಆದರೆ ಜನರು ಮಾತ್ರ ರಜಾದಲ್ಲಿ ಮಜಾ ಉಡಾಯಿಸುತ್ತಾರೆ. ಕೊಡುವ ರಜೆ ಮಜಾ ಮಾಡಲು ಬಳಕೆಯಾಗುತ್ತದೆ ಎಂದಾದರೆ ಗಣ್ಯರು ಸತ್ತಾಗ ಯಾಕೆ ರಜಾ ಘೋಷಣೆ ಮಾಡಬೇಕು? ಖಂಡಿತವಾಗಿಯೂ ಮಜಾ ಮಾಡಲು ಬಳಕೆಯಾಗುವ ಇಂತಹ ಘೋಷಿತ ರಜಾಗಳೂ ನಿಧನರಾದವರಿಗೆ ಅವಮಾನವನ್ನು ಉಂಟುಮಾಡುವುದಿಲ್ಲವೇ? ಸತ್ತಾಗ ಪಟಾಕಿ ಹೊಡೆದು ಸಂಬ್ರಮಿಸಿದ್ದಕ್ಕೂ, ರಜಾಕ್ಕೂ ವ್ಯತ್ಯಾಸವೆಲ್ಲಿ ಬರುತ್ತದೆ? ಬಹುಶಃ ಶನಿವಾರ ಕೊಟ್ಟ ರಜಾ ಕೂಡ ಎಷ್ಟೋ ಜನರಿಗೆ ವಿಕೆಂಡ್ ಪಾರ್ಟಿಗೋ, ಅದ್ಯಾವುದೋ ಟ್ರಿಪ್ಪಿಗೋ ಬಳಕೆಯಾಗಿರಬಹುದು. ಇದು ಅನಂತಮೂರ್ತಿಯವರಿಗೆ ಮಾಡಿದ ಅವಮಾನವಾಗಲಿಲ್ಲವೇ? ರಜಾ ಘೋಷಣೆ ಅವಮಾನ ಮಾಡುವುದಾದರೆ ಖಂಡಿತವಾಗಿಯೂ ಇಂತಹ ರಜಾ ಘೋಷಣೆ ನಿಲ್ಲಿಸಬೇಕು. ಅದರ ಬದಲಾಗಿ ನಿಧನರಾದ ವ್ಯಕ್ತಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ಕಚೇರಿಗಳಲ್ಲಿ 1 ತಾಸೋ, 2 ತಾಸೋ ಹೆಚ್ಚುವರಿ ಕೆಲಸವನ್ನು ಮಾಡಬೇಕು. ಆ ಮೂಲಕವಾದರೂ ಸಾವನ್ನಪ್ಪಿದ ಮಹಾನ್ ಸಾಧಕರಿಗೆ ಗೌರವ ನೀಡುವಂತಹ ಪ್ರಕ್ರಿಯೆ ಬೆಳೆಯಬೇಕು. ಹಾಗಾದಾಗ ಮಾತ್ರ ನಿಧನರಾದವರ ಆತ್ಮಕ್ಕೆ ಶಾಂತಿ ದೊರಕಬಹುದು ಎನ್ನುವುದು ನನ್ನ ಭಾವನೆ

ಅನಂತಮೂರ್ತಿಯವರ ಆತ್ಮಕ್ಕೆ ಶಾಂತಿ ದೊರಕಲಿ.

No comments:

Post a Comment