Friday, February 23, 2018

ಕೋಹ್ಲಿಗೇಕೆ ರೋಹಿತ್, ಪಾಂಡ್ಯ ಮೇಲೆ ಪ್ರೀತಿ?

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪದೇ ಪದೆ ವಿಫಲರಾಗುತ್ತಿದ್ದರೂ ಅವರಿಗೆ ಅವಕಾಶಗಳ ಮೇಲೆ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.
ಇತ್ತೀಚಿನ ದಿನಗಳಲ್ಲಿ ಭಾರತ ದ ಕ್ರಿಕೆಟ್ ತಂಡದ ಆಟವನ್ನು ಗಮನಿಸಿದರೆ ನಾಯಕ ವಿರಾಟ್ ಕೋಹ್ಲಿಗೆ ಕೆಲವು ಆಟಗಾರರ ಮೇಲೆ ಇರುವ ಪ್ರೀತಿ ಎದ್ದು ಕಾಣುತ್ತದೆ.
ಹಿಟ್ ಮ್ಯಾನ್ ಎಂದೇ ಹೆಸರು ಗಳಿಸಿರುವ ರೋಹಿತ್ ಶರ್ಮಾ ಆಗೊಮ್ಮೆ ಈಗೊಮ್ಮೆ ಶತಕವನ್ನು ಗಳಿಸುತ್ತಾರೆ. ಆದರೆ ಉಳಿದ ಸಂದರ್ಭಗಳಲ್ಲಿ ವಿಫಲರಾಗುತ್ತಿದ್ದಾರೆ. ೧೦ ಅಥವಾ ೧೫ ಇನ್ನಿಂಗ್ಸ್‌ಗೊಮ್ಮೆ ಮಾತ್ರ ಅವರು ಎರಡಂಕಿ ಅಥವಾ ಮೂರಂಕಿ ರನ್ ಗಳಿಸುತ್ತಿದ್ದಾರೆ. ಉಳಿದ ಸಂದರ್ಭಗಳಲ್ಲಿ ಅವರ ಬ್ಯಾಟಿನಿಂದ ಒಂದಂಕಿಗಿಂತ ಹೆಚ್ಚಿನ ರನ್ ಸೃಷ್ಟಿಯಾಗುವುದೇ ಇಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯಲ್ಲಿ ಒಂದು ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅವರ ಸಾಧನೆ ಕಡಿಮೆಯೇ. ಟೆಸ್ಟ್‌ನಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಆಟ ಹೊರಹೊಮ್ಮಿಲ್ಲ. ಇನ್ನು ಟಿ೨೦ಯಲ್ಲಂತೂ ಒಂದಂಕಿಗಿಂತ ಹೆಚ್ಚಿನ ರನ್ ಬಂದೇ ಇಲ್ಲ. ಹೀಗಿದ್ದರೂ ರೋಹಿತ್‌ಗೆ ಪದೇ ಪದೆ ಅವಕಾಶ ನೀಡಲಾಗುತ್ತಿದೆ.
ಇದೇ ರೀತಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕ್ಯಾಪ್ಟನ್ ಕೋಹ್ಲಿಯ ಕೃಪೆಗೆ ಪಾತ್ರರಾಗಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ತಂಡಕ್ಕೆ ಆಯ್ಕೆಯಾದ ಆರಂಭದ ದಿನಗಳಲ್ಲಿ ಬ್ಯಾಟ್ ಹಾಗೂ ಬೌಲ್ ಮೂಲಕ ಅಬ್ಬರ ತೋರಿದ್ದ ಹಾರ್ದಿಕ್ ಇತ್ತೀಚೆಗಿನ ಕೆಲವು ಪಂದ್ಯಗಳಲ್ಲಿ ಸದ್ದನ್ನೇ ಮಾಡಿಲ್ಲ. ಅವರ ಬ್ಯಾಟ್ ಮಾತನಾಡುತ್ತಿಲ್ಲ. ಅದೇ ರೀತಿ ಬೌಲಿಂಗ್ ಕೂಡ ಪರಿಣಾಮಕಾರಿಯಾಗಿಲ್ಲ. ಆದರೂ ತಂಡದಲ್ಲಿ ಉಳಿದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಂತೂ ಒಂದೇ ಒಂದು ಪಂದ್ಯದಲ್ಲಿ ಕೂಡ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದರೂ ಉಳಿದ ಪಂದ್ಯಗಳಲ್ಲಿ ಪ್ರದರ್ಶನ ಕಳಪೆಯೇ ಆಗಿತ್ತು. ಹೀಗಿದ್ದರೂ ತಂಡದಲ್ಲಿ ಪಾಂಡ್ಯ ಉಳಿದುಕೊಂಡಿರುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
ನಾಯಕ ವಿರಾಟ್ ಕೋಹ್ಲಿ ಹಾಗೂ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರ ಕೃಪೆಯಿಂದಲೇ ಈ ಇಬ್ಬರೂ ಆಟಗಾರರು ಪದೇ ಪದೆ ಅವಕಾಶ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಸುಳ್ಳಲ್ಲ. ಮುಂಬರುವ ಟಿ೨೦ ವಿಶ್ವಕಪ್ ಪಂದ್ಯಾವಳಿಗಾಗಿ ತಂಡವನ್ನು ರೂಪಿಸಲಾಗುತ್ತಿದೆ ಎನ್ನುವ ಕಾರಣವನ್ನು ನೀಡಿ, ಈ ಆಟಗಾರರಿಗೆ ಅವಕಾಶ ಕೊಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಟಿ೨೦ ವಿಶ್ವಕಪ್‌ಗೆ ಹೊಸ ಆಟಗಾರರಿಗೂ ಅವಕಾಶ ನೀಡುವ ಮೂಲಕ ತಂಡವನ್ನು ಇನ್ನಷ್ಟು ಸದೃಢಗೊಳಿಸುವ ಬದಲು ವಿಫಲರಾಗುತ್ತಿರುವವರಿಗೆ ಮತ್ತೆ ಮತ್ತೆ ಮಣೆ ಹಾಕುವುದು ಎಷ್ಟು ಸರಿ ಎಂಬ ವಾದಗಳೂ ಕ್ರಿಕೆಟ್ ಅಭಿಮಾನಿಗಳ ವಲಯದಿಂದ ಕೇಳಿ ಬಂದಿವೆ.
ಪದೇ ಪದೆ ವಿಫಲರಾಗುತ್ತಿರುವ ರೋಹಿತ್ ಶರ್ಮಾ ಬದಲಿಗೆ ಕನ್ನಡಿಗ ಕೆ. ಎಲ್. ರಾಹುಲ್ ಅಥವಾ ಪ್ರತಿಭಾನ್ವಿತ ಅಜಿಂಕ್ಯ ರಹಾನೆಗೆ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯಗಳು ವ್ಯಾಪಕವಾಗುತ್ತಿವೆ. ಪಾಂಡ್ಯ ಬದಲು ಅವರಷ್ಟೇ ಪ್ರತಿಭಾವಂತರಾದ ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಬಹುದಾಗಿತ್ತು.
ಪ್ರತಿಭಾವಂತರಾದ ರಿಷಬ್ ಪಂಥ್, ಇಶಾನ್ ಕಿಶನ್, ಮಾಯಾಂಕ್ ಅಗರ್ವಾಲ್, ಪಾರ್ಥಿವ್ ಪಟೇಲ್ ಮುಂತಾದ ಆಟಗಾರರಿಗೂ ಅವಕಾಶಗಳನ್ನು ನೀಡಬಹುದಾಗಿತ್ತು. ತನ್ಮೂಲಕ ಅವರ ಆಟವನ್ನೂ ಪರೀಕ್ಷಿಸಬಹುದಿತ್ತು ಎನ್ನುವ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಹೀಗೆ ವಿಫಲರಾಗುತ್ತಿರುವ ಆಟಗಾರರನ್ನು ಕೈಬಿಟ್ಟು ಬದಲಿಗೆ ಪ್ರತಿಭಾವಂತರಿಗೆ ಮಣೆ ಹಾಕಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Thursday, February 22, 2018

ನಾನು ಓದಿದ ಪುಸ್ತಕಗಳು -1

ಪರ್ವತದಲ್ಲಿ ಪವಾಡ

ಕೆಲವು ದಿನಗಳ ಹಿಂದಷ್ಟೇ ನಾನು ಇದೇ ಅಂಗಳದಲ್ಲಿ ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ ಪರ್ವತದಲ್ಲಿ ಪವಾಡ ಪುಸ್ತಕ ಓದಲು ಆರಂಭಿಸಿರುವುದಾಗಿ ಹೇಳಿದ್ದೆ... ಓದಿದೆ... ನಿಜಕ್ಕೂ ಈ ಪುಸ್ತಕದ ಬಗ್ಗೆ ಕೆಲವಾದರೂ ಮಾತುಗಳನ್ನ ಅರುಹಲೇಬೇಕು.
ಹಲವಾರು ಅನುವಾದಿತ ಪುಸ್ತಕಗಳನ್ನು ನಾನು ಓದಿದ್ದೇನೆ. ಹೆಸರಾಂತ ವ್ಯಕ್ತಿಗಳು ಅನುವಾದಿಸಿದ ಪುಸ್ತಕಗಳನ್ನು ಓದಲು ಯತ್ನಿಸಿ ಕಷ್ಟಪಟ್ಟಿದ್ದೂ ಇದೆ. ಕೆಲವು ಅನುವಾದಿತ ಪುಸ್ತಕಗಳಂತೂ ಅದೆಷ್ಟು ಗಡಚೆಂದರೆ, ಅವರ ಕನ್ನಡ ಅನುವಾದವನ್ನು ಮತ್ತೊಮ್ಮೆ ಕನ್ನಡಕ್ಕೆ ಅನುವಾದ ಮಾಡಿಕೊಂಡು ಓದಿದಾಗ ಅರ್ಥವಾಗಬಲ್ಲದು... ಸಂಯುಕ್ತ ಪುಲಿಗಲ್ ಅವರ ಪುಸ್ತಕ ಓದಲು ಶುರುವಿಟ್ಟುಕೊಳ್ಳುವ ಮೊದಲು ನನಗೆ ಇಂತಹದ್ದೊಂದು ಭಯ ಕಾಡಿದ್ದು ಸುಳ್ಳಲ್ಲ. ಹೀಗಾಗಿಯೇ ಪುಸ್ತಕ ಕೊಂಡು ತಂದು ಹಲವೇ ತಿಂಗಳಾಗಿದ್ದರೂ ಅವುಗಳ ಕಡೆಗೆ ಕಣ್ಣಾಡಿಸಿರಲಿಲ್ಲ. ಆದರೆ ಮೊದಲ ಅಧ್ಯಾಯದ ಒಂದೆರಡು ಪ್ಯಾರಾ ಓದುತ್ತಲೇ ಸಂಯುಕ್ತರ ಬರವಣಿಗೆ ಇಷ್ಟವಾಗಿಬಿಟ್ಟಿತು. ಅನುವಾದದ ಪುಸ್ತಕಗಳ ಕುರಿತು ನನ್ನ ಅಭಿಪ್ರಾಯ ಬದಲಾಗುವಂತಿತ್ತು.

ನ್ಯಾಂಡೋ ಪರಾಡೊ ಎಂಬ ಲ್ಯಾಟಿನ್ ಅಮೆರಿಕದ ಕ್ರೀಡಾಪಟು, ಉದ್ಯಮಿ ಬರೆದ ಪುಸ್ತಕವೇ ಪರ್ವತದಲ್ಲಿ ಪವಾಡ. ಮಿರಾಕಲ್ ಇನ್ ಆಂಡಿಸ್ ಎಂಬ ಆಂಗ್ಲ ನಾಮಧೇಯಕ್ಕೆ ವಿಶಿಷ್ಟ ಹೆಸರಿಟ್ಟಿದ್ದಾರೆ ಸಂಯುಕ್ತರು.
ಮೊದಲ ಅಧ್ಯಾಯದಲ್ಲಿ ಪರಾಡೋರ ಬಾಲ್ಯ, ಕ್ರೀಡೆ ಇತ್ಯಾದಿಗಳ ಬಗ್ಗೆ ವಿವರಗಳಿದ್ದರೆ ನಂತರದಲ್ಲಿ ಬದುಕಿನ ಕರಾಳತೆಗಳು ತೆರೆದುಕೊಳ್ಳುತ್ತವೆ.

ಸೊಂಟ ಮಟ್ಟ ತುಂಬಿದ ಹಿಮ ಪದರ... ಅದರ ನಡುವೆ ಆಗಾಗ ಉಂಟಗುವ ಹಿಮಪಾತ, ಕ್ರೂರ ಚಳಿ..ಗಾಳಿ ಈ ನಡುವೆ ಬದುಕಿಗಾಗಿ ಕಾಯುವಿಕೆ... ಒಹ್.. ಖರ್ಚಾದ ಆಹಾರ.. ಕೊನೆಗೆ ಅನಿವಾರ್ಯವಾಗಿ ಅಪಘಾತದಲ್ಲಿ ಸತ್ತವರ ಮಾಂಸವನ್ನೇ ಕತ್ತರಿಸಿ ಕತ್ತರಿಸಿ ತಿನ್ನುವುದು... ಬದುಕಿನ ಎಲ್ಲ ಮುಖಗಳ ಅನಾವರಣ ಇಲ್ಲಾಗುತ್ತದೆ.

ಕಣ್ಣೆದುರೇ ನವೆದು ನವೆದು ಸಾಯುವ ತಂಗಿ, ತಾಯಿ..ಗೆಳೆಯರು... ಅವರು ಸತ್ತರೆಂದು ಅಳುವಂತಿಲ್ಲ... ಅಳಬೇಡ.. ಅತ್ತರೆ ದೇಹದಲ್ಲಿ ಉಪ್ಪಿನಂಶ ಕಡಿಮೆ ಆಗುತ್ತದೆ. ನಾವು ಬದುಕಬೇಕೆಂದರೆ ದೇಹದಲ್ಲಿ ಉಪ್ಪಿನಂಶ ಇರಲೇಬೇಕು ಎನ್ನುವ ಗೆಳೆಯನ ತಾಕೀತು...
ಪಶ್ಚಿಮಕ್ಕೆ ಚಿಲಿ ಇದೆ ಎನ್ನುವ ಆಶಾವಾದ... ನುರಿತ ಪರ್ವತಾರೋಹಣ ಮಾಡುವವರೂ ಹತ್ತಲು ಹಿಂಜರಿಯುವ ಸೇಲರ್ ಪರ್ವತವನ್ನು ಏನೂ ಇಲ್ದೆ ಹತ್ತುವ ನ್ಯಾಂಡೋ... ಮಿತ್ರರನ್ನು ಬದುಕಿಸುವ ಪರಿ ಇವೆಲ್ಲ ಹಿಡಿದಿಡುತ್ತದೆ.

೨೫೮ ಪುಟಗಳ ೧೯೦ ರೂಪಾಯಿ ಬೆಲೆಯ ಛಂದ ಪುಸ್ತಕದಿಂದ ಹೊರ ಬಂದಿರುವ ಪರ್ವತದಲ್ಲಿ ಪವಾಡ ಪುಸ್ತಕ ತೇಜಸ್ವಿ ಅನುವಾದಿಸಿದ ಮಹಾಪಲಾಯನ, ಪ್ಯಾಪಿಲಾನ್ ನಂತಹ ಪುಸ್ತಕಗಳ ಸಾಲಿನಲ್ಲಿ ನಿಲ್ಲುತ್ತದೆ.

ಸಿಕ್ಕ ಜೀವನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಬದುಕಿನಲ್ಲಿ ಕೊರಗಬೇಡಿ. ನಿಮ್ಮ ಆಸ್ತಿತ್ವವನ್ನು ಜೀವಿಸಿ. ಪ್ರತಿ ಕ್ಷಣವೂ ಜೀವಂತಿಕೆಯಿಂದ ಬದುಕಿ ಎಂಬ ಅಂಶಗಳನ್ನು ಸಾರುವ ಪುಸ್ತಕ ಎಲ್ಲರನ್ನೂ ಸೆಳೆಯುತ್ತದೆ.

ಸಂಯುಕ್ತ ಪುಲಿಗಲ್ ಅವರ ಸರಳ ಬರವಣಿಗೆ ಇಷ್ಟವಾಗುತ್ತದೆ. ಎಲ್ಲೂ ಗಡಚೆನ್ನಿಸದೇ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸಂಯುಕ್ತರ ಅನುವಾದಕ್ಕೆ ಮನಸೋತಿಹೆ. ಅವರಿಂದ ಇನ್ನಷ್ಟು ಅನುವಾದಿತ ಕೃತಿಗಳು ಬರಲಿ. ಆಂಗ್ಲ ಅಥವಾ ಇನ್ಯಾವುದೇ ಭಾಷೆಯ ಕೃತಿಗಳು ಕನ್ನಡಿಗರಿಗೆ ಓದಲು ಸಿಗುಂತಾಗಲಿ ಎಂಬ ಆಸೆ.

ಜಿಕೆವಿಕೆ ಕೃಷಿ ಮೇಳದಲ್ಲಿ ಹಾಕಲಾಗಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆಯಲ್ಲಿ ೫೦ರೂಪಾಯಿಗೆ ನನಗೆ ಸಿಕ್ಕಿದ್ದ ಈ ಪುಸ್ತಕ ಬದುಕಿನ ಹಲವು ಪಾಠಗಳನ್ನ ಹೇಳಿದೆ. ಧನ್ಯವಾದ ಸಂಯುಕ್ತ ಅವರಿಗೆ.

ನೀವೂ ಓದಿ


ಕೆ. ಎಸ್ ನಾರಾಯಣಾಚಾರ್ಯರು ಬರೆದಿರುವ ಚಾಣಕ್ಯ ಪುಸ್ತಕ ಓದಿದೆ. ಪುಸ್ತಕ ಓದಿದ ಮೇಲೆ ನನ್ನಲ್ಲಿ ಉಂಟಾದ ಭಾವನೆಗಳನ್ನ ಹೇಳಲೇಬೇಕು...

* ಕಾದಂಬರಿಯಾಗಿ ಬಹಳ ಓದಿಸಿಕೊಂಡು ಹೋಗುವಂತಹ ಪುಸ್ತಕ... ಪ್ರತಿ ಅಧ್ಯಾಯವೂ ಬಹಳ ಕುತೂಹಲಕಾರಿ. ಒಮ್ಮೆ ಕೈಗೆತ್ತಿಕೊಂಡರೆ ಓದುತ್ತಲೇ ಇರಬೇಕು ಅನ್ನಿಸುತ್ತದೆ..

* ಕಾದಂಬರಿಯಲ್ಲಿ ಕಥಾನಾಯಕ ಚಾಣಕ್ಯ. ಅಲ್ಲಲ್ಲಿ ಅತಿಮಾನುಷನಾಗಿದ್ದು ನಮಗೆ ವಿಚಿತ್ರ ಎನ್ನಿಸುತ್ತದೆ. ಮಾಟ ಮಂತ್ರಗಳನ್ನು ನಂಬುವವರು ಒಪ್ಪಿಕೊಳ್ಳಬಹುದು. ಆದರೆ ಕೆಲವು ಅತಿಯಾಯಿತೆನ್ನಿಸಿತು.

* ಚಾಣಕ್ಯ + ಚಂದ್ರಗುಪ್ತ ಇಬ್ಬರಿಂದ ಮಗಧ ಸಾಮ್ರಾಜ್ಯ ಮೈದಳೆಯಿತು ಎನ್ನುವುದು ಸರಿ. ಆದರೆ ಕಾದಂಬರಿಯಲ್ಲಿ ಚಾಣಕ್ಯನೇ ಎಲ್ಲ ಎನ್ನಲಾಗಿದೆ. ಚಂದ್ರಗುಪ್ತ ಬೆದರು ಬೊಂಬೆಯಂತೆ, ಕೈಗೊಂಬೆಯಂತೆ ಚಿತ್ರಣಗೊಂಡಿದ್ದಾನೆ. ಇತಿಹಾಸ ಈ ರೀತಿ ಇದೆಯೇ ಎಂಬ ಅನುಮಾನ ಮೂಡುತ್ತದೆ. ಚಂದ್ರಗುಪ್ತನ ಕುರಿತು ಪಾಠಗಳಲ್ಲಿ ಓದಿದವರಿಗೆ ಇರಸು ಮುರುಸು ಆಗಿ.. ಮನಸು ಕಲಸು ಮೇಲೋಗರವಾಗುತ್ತದೆ.

* ಹಿಂದೂ, ಜೈನ, ಬೌದ್ಧ ಧರ್ಮಗಳ ಅಂದಿನ ಘರ್ಷಣೆಯ ಮುಖ ಕೊಂಚ ಅನಾವರಣಗೊಂಡಿದೆ. ಹೀಗೂ ನಮ್ಮ ದೇಶದ ಇತಿಹಾಸ ಇದ್ದರಬಹುದೇ ಎಂಬ ಚಿಂತನೆಗೆ ಒಡ್ಡುತ್ತದೆ..

* ಕೊನೆಯದಾಗಿ... ನಾರಾಯಣಾಚಾರ್ಯರ ಅಗಸ್ತ್ಯ ಕಾದಂಬರಿ ಇಷ್ಟವಾದಷ್ಟು... ಚಾಣಕ್ಯ ಇಷ್ಟವಾಗಲಿಲ್ಲ... ಈ ಕಾದಂಬರಿಯನ್ನು ಬ್ರಾಹ್ಮಣ ದ್ವೇಷಿಗಳು ಓದಿದರೆ ಸಿಡಿಮಿಡಿಗೊಂಡಾರು.

Tuesday, February 20, 2018

ನಾ ನೋಡಿದ ಚಿತ್ರಗಳು -2

ಅಪೊಕ್ಯಾಲಿಪ್ಟೋ

ನಾನು ಇವತ್ತಷ್ಟೇ ನೋಡಿದ ಚಿತ್ರ. ಇಂಗ್ಲೀಷ್ ಅಬ್ ಟೈಟಲ್ ಹೊಂದಿದ ಎರಡೂ ಮುಕ್ಕಾಲು ತಾಸಿನ ಚಿತ್ರ. ಸಬ್ ಟೈಟಲ್ ಇಲ್ಲದೆಯೂ ಚಿತ್ರ ನೋಡಬಹುದು. ಅರ್ಥವಾಗುತ್ತದೆ. ಇಷ್ಟವಾಗುತ್ತದೆ.

ಯಾವುದೇ ನಾಗರಿಕತೆಗಳಲ್ಲಿ ಕೂಡ ಒಳಜಗಳಗಳು, ಪರಸ್ಪರ ಯುದ್ಧಗಳು, ಮಹತ್ವಾಕಾಂಕ್ಷೆಗಳು, ವಿಚಿತ್ರ ಆಚರಣೆಗಳು ಇದ್ದೇ ಇರುತ್ತವೆ. ಈ ಚಿತ್ರ ಮೆಕ್ಸಿಕೋದಲ್ಲಿನ ಮಯನ್ ನಾಗರಿಕರ ಬದುಕು ಅನಾವರಣಗೊಳಿಸುತ್ತದೆ.

ಚಿತ್ರದ ನಾಯಕ ಆಗಷ್ಟೇ ಟೀನೇಜ್ ಮುಗಿಸಿ ಮುಂದಿನ ಬದುಕಿಗೆ ಕಾಲಿಟ್ಟವನು. ಅವನಿಗೊಬ್ಬ ಹೆಂಡತಿ. ಆಗಲೇ ಒಂದು ಮಗುವಿನ ತಾಯಿ. ಇನ್ನೊಂದು ಕೂಸು ಹೊಟ್ಟೆಯಲ್ಲಿ. ಆತನ ತಂದೆ ಆ ಬುಡಕಟ್ಟು ಪಂಗಡದ ನಾಯಕ. ಪ್ರಕೃತಿಯೇ ಇವರಿಗೆ ವರ. ಪಂಚಭೂತಗಳೇ ಶಕ್ತಿ. ಕಾಡೆಂದರೆ ಹಸ್ತ ರೇಖೆಯಷ್ಟೇ ಸಲೀಸು. ಬೇಟೆಯಲ್ಲಿ ಎತ್ತಿದ ಕೈ.

ತಮ್ಮ ಗುಂಪಿನಲ್ಲೇ ಕುಣಿಯುತ್ತ, ನಲಿಯುತ್ತ ಇದ್ದವರ ಮೇಲೆ ಆ ದಿನಗಳ ನಗರವಾಸಿಗಳು ದಾಳಿ ಮಾಡುತ್ತಾರೆ. ಆ ಪಂಗಡದ ಮುದುಕರನ್ನು, ಹೋರಾಡುವವರನ್ನು ಕತ್ತರಿಸುತ್ತಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ, ಹಿಡಿದು ಕಟ್ಟಿ ಹಾಕುತ್ತಾರೆ. ಕಥಾನಾಯಕ ತನ್ನ ಮಡದಿಯನ್ನೂ, ಮಗುವನ್ನೂ ಬಾವಿಯೊಂದಕ್ಕೆ ಇಳಿಸಿದ ಸಂದರ್ಭದಲ್ಲಿ ಶತ್ರುಗಳಿಗೆ ಸಿಕ್ಕಿಕೊಳ್ಳುತ್ತಾನೆ.

ನಗರದಲ್ಲಿ ಹೆಂಗಸರನ್ನು ಮಾರಲಾಗುತ್ತದೆ. ದೊಡ್ಡದೊಂದು ಬಲಿಪೀಠದ ಮೇಲೆ ಗಂಡಸರನ್ನು ಹತ್ಯೆ ಮಾಡಲು ಒಯ್ಯುತ್ತಾರೆ. ಈಗಾಗಲೇ ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ಅಲ್ಲಿ ಹತ್ಯೆ ಮಾಡಲಾಗಿದೆ. ಹೀಗೆ ಕೊಂದವರ ರಕ್ತವನ್ನು ಆ ನಗರದ ಜನತೆ ತಮಗೂ, ತಮ್ಮ ಮಕ್ಕಳ ಮೈಗೂ ಹಚ್ಚುತ್ತಿವೆ. ಹೀಗೆ ಹಚ್ಚಿಕೊಂಡರೆ ಪ್ಲೇಗ್ ನಂತಹ ಕಾಯಿಲೆ ಬರಲಾರದು ಎಂಬುದು ಅವರ ನಂಬಿಕೆ.

ನಾಯಕನನ್ನು ವಧಾ ಸ್ಥಾನದ ಮೇಲೆ ಬಲಿಗಾಗಿ ಕತ್ತಿ ಎತ್ತಬೇಕೆಂಬಷ್ಟರಲ್ಲಿ ಸೂರ್ಯಗ್ರಹಣ ನಡೆಯುತ್ತದೆ. ಇದೊಂದು ಶಕುನ ಎಂದುಕೊಂಡು ಅವನನ್ನು ಬಿಡುತ್ತಾರೆ. ನಾಯಕ ಬಚಾವಾಗುತ್ತಾನೆ. ಕೊನೆಗೆ ನಾಯಕನನ್ನು ದೊಡ್ಡದೊಂದು ಬಯಲಿಗೆ ಕಳಿಸಿ ಓಡುವಂತೆ ಹೇಳಲಾಗುತ್ತದೆ. ಓಡುವಾಗ ಹಿಂದೆ ಬಾಣ ಬಿಡಲಾಗುತ್ತದೆ. ಅದನ್ನು ತಪ್ಪಿಸಿಕೊಂಡು ಮುನ್ನಡೆದರೆ ಜಗಜಟ್ಟಿಗಳು ಸಿಗಿದು ಹಾಕಲು ಕಾಯುತ್ತಿರುತ್ತಾರೆ. ನಾಯಕ ಇದನ್ನೂ ನಿವಾಳಿಸಿ ಮುನ್ನಡೆಯುತ್ತಾನೆ. ಆಗ ನಗರದ ಯೋಧರು ಆತನ ಬೆನ್ನು ಬೀಳುತ್ತಾರೆ. ಒಬ್ಬಂಟಿ ನಾಯಕನ ಪರವಾಗಿ ಪಂಚಭೂತಗಳು ಮಾತ್ರ ನಿಲ್ಲುತ್ತವೆ.

ಇದರ ನಡುವೆ ಕುಂಭದ್ರೋಣ ಮಳೆ. ನಾಯಕನ ಮಡದಿ ಇರುವ ಬಾವಿಯಲ್ಲಿ ಸಿಕ್ಕಾಪಟ್ಟೆ ನೀರು ತುಂಬಲು ಆರಂಭವಾಗುತ್ತದೆ. ಗರ್ಭಿಣಿಗೆ ಪ್ರಸವ ವೇದನೆಯೂ... ಇನ್ನೊಂದು ಮಗು ನೀರಲ್ಲಿ ಮುಳುಗಲಾರಂಭಿಸುತ್ತದೆ.

ನಾಯಕ ಬದುಕುತ್ತಾನಾ? ಗರ್ಭಿಣಿ ಬಾವಿಯಿಂದ ಹೊರ ಬರ್ತಾಳಾ? ಆಕೆಗೆ ಹೆರಿಗೆ ಆಗ್ತದಾ? ಮಯನ್ ನಾಗರೀಕತೆ ಅಳಿವು ಹೇಗೆ?
ಇದೆಲ್ಲಕ್ಕೂ ವಿಶಿಷ್ಟವಾದ ಕ್ಲೈಮ್ಯಾಕ್ಸ್ ಉತ್ತರ ಹೇಳುತ್ತದೆ.

ಕನ್ನಡದ ಚಿತ್ರಗಳಲ್ಲಿ ಕ್ಲೈಮ್ಯಾಕ್ ನಲ್ಲಿ ಹೀಗೆಯೇ ಆಗುತ್ತದೆ ಎಂಬುದನ್ನು ನಾವು ಊಹಿಸಬಹುದು. ಆದರೆ ವಿದೇಶಿ ಚಿತ್ರಗಳು ಹೀಗಲ್ಲ.

ವಿಶಿಷ್ಟ ಚಿತ್ರ ಆಪೊಕ್ಯಾಲಿಪ್ಟೋ... ನೋಡಿ.
ಚಿತ್ರಕ್ಕೆ ನಾನು ಕೊಡುವ ಅಂಕ ೧೦ಕ್ಕೆ ೮+


ಹೈವೇ ಯಲ್ಲಿ ತೆರೆದಕೊಂಡ ಕನಸುಗಳು...

ರೋಡ್ ಮೂವಿಗಳೆಂದರೆ ನನಗೆ ಇಷ್ಟದ ಸಿನಿಮಾ ಪ್ರಕಾರಗಳಲ್ಲಿ ಒಂದು. ಇಂಗ್ಲೀಷಿನ ರೋಡ್ ಮೂವಿಗಳಾದ ಡ್ಯೂಯೆಲ್, ಹಿಂದಿಯ 'ರೋಡ್ ಮೂವಿ', ಕನ್ನಡದ ಸವಾರಿ ೧-೨ ಇವೆಲ್ಲ ಇಷ್ಟವಾಗಿದೆ. ಇಂತದ್ದೇ ಒಂದು ರೋಡ್ ಮೂವಿ ಹೈವೆ.

೨೦೧೪ರಲ್ಲಿ ತೆರೆಗೆ ಬಂದ ಈ ಚಿತ್ರದ ಜೀವಾಳ ಆಲಿಯಾ ಭಟ್ ಹಾಗೂ ಅಮೋಘ ಕಥೆ. ರಣದೀಪ್ ಹೂಡಾನ ಒರಟುತನ.

ಶ್ರೀಮಂತ ಪೊಲೀಸ್ ಅಧಿಕಾರಿಯ ಮಗಳಾಗಿ ಹುಟ್ಟಿದ ವೀರಾ (ಆಲಿಯಾ)ಗೆ ಜಗತ್ತು ಸುತ್ತುವ ತವಕ. ಹಿಮಾಲಯದ ಪಹಾಡಿಗಳ ನಡುವೆ ಮನೆ ಕಟ್ಟಿ ಬದುಕು ಕಟ್ಟಿಕೊಳ್ಳುವ ಕನಸು. ಆದರೆ ಶ್ರೀಮಂತಿಕೆಯ ಸುಪ್ಪತ್ತಿಗೆ ನಡುವೆ ಎಲ್ಲದ್ದಕ್ಕೂ ಕಟ್ಟುನಿಟ್ಟು.

ಮರು ದಿನ ಮದುವೆ. ಆಕೆಗೆ ಕರಾಳ ರಾತ್ರಿಯಲ್ಲಿ ನಗರದ ಹೊರಕ್ಕೆ ದೀರ್ಘ ಜಾಲಿ ರೈಡ್ ಹೋಗುವ ಆಸೆ. ಏನಾದ್ರೂ ಆದ್ರೆ ನಾನು ಜವಾಬ್ದಾರನಲ್ಲ.. ಎಂಬ ತಾಕೀತಿನೊಂದಿಗೆ ಕರೆದೊಯ್ಯುವ ಗೆಳೆಯ. ನಡುವೆ ಆಕೆಯನ್ನು ಅಪಹರಿಸುವ ರಣದೀಪ್ ಹೂಡಾ.

ಪೊಲೀಸ್ ಅಧಿಕಾರಿಯ ಮಗಳು ಎಂಬ ಸತ್ಯ ಗೊತ್ತಾದ ತಕ್ಷಣ ಹೂಡಾನ ಸಖ್ಯ ತೊರೆಯುವ ಅಪಹರಣಕಾರರ ಗುಂಪು. ಹೂಡಾ ಒಬ್ಬಂಟಿ. ಈ ನಡುವೆ ದೆಹಲಿ, ಪಂಜಾಬ್, ಹರ್ಯಾಣ, ರಾಜಸ್ತಾನ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರಗಳಲ್ಲಿ ಓಡಾಟ. ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿದ ವೀರಾನ ತಂದೆ. ಒರಟು ಹೂಡಾನ ಮೇಲೆ ವೀರಾಳಿಗೆ ಅರಳಿದ ಒಲವು.

ರಾಜಸ್ತಾನದ ಮರುಭೂಮಿ, ಪೈರು ಬೆಳೆದು ನಿಂತ ಹರ್ಯಾಣ, ಪಂಜಾಬಿನ ಗದ್ದೆಗಳು, ಗುಡ್ಡ ಬೆಟ್ಟಗಳ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರಗಳ ಸೌಂದರ್ಯದ ಅನಾವರಣ. ಇವೆಲ್ಲಕ್ಕೂ ಮೆರಗು ಎಂಬಂತೆ ಆಲಿಯಾ ಭಟ್ ಳ ಅಮೋಘ ಅಭಿನಯ.

ಅಳಬೇಡ...ಶ್... ಎನ್ನುವಾಗಿನ ಆಲಿಯಾ... ಚಿಕ್ಕಂದಿನಲ್ಲಿ ನನ್ನ ಮೇಲೆ ಪದೆ ಪದೆ ಅಂಕಲ್ ಒಬ್ಬರು ಚಾಕಲೇಟ್ ಆಸೆಗಾಗಿ ಅತ್ಯಾಚಾರ ಮಾಡುತ್ತಿದ್ದರು. ಅದನ್ನು ಅವರು ಮುದ್ದು ಮಾಡುತ್ತಿದ್ದರು. ವಿಷಯವನ್ನು ಅಮ್ಮನಿಗೆ ಹೇಳಿದಾಗ ಆಕೆ ಹೇಳಿದ್ದು, ಇದು ಮರ್ಯಾದೆ ಪ್ರಶ್ನೆ... ಅಳಬೇಡ... ಶ್... ಎಂದು ಎನ್ನುವಾಗಿನ ಆಲಿಯಾ...
ಹಿಮದಲ್ಲಿ ಆಡುವ ಆಲಿಯಾ... ಅಪಹರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮರುಭೂಮಿಯಲ್ಲಿ ಓಡಲು ಯತ್ನಿಸುವ ಆಲಿಯಾ... ಹಸಿದವಳಿಗೆ ಆಹಾರ ನೀಡಲು ಯತ್ನಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ... ನೀನೂ ಅಂಕಲ್ ನ ಹಾಗೇ ಮುದ್ದು ಮಾಡ್ತೀಯಾ ಎಂದು ಕೇಳುವ ಆಲಿಯಾ... ಮೇಕಪ್ ಇಲ್ಲದೆಯೇ ನಟಿಸಿದ ಆಲಿಯಾ... ಕೊನೆಯ ತನಕ ಕಾಡುತ್ತಾರೆ.

೨೦ ವರ್ಷಕ್ಕೂ ಕಡಿಮೆ ವಯೋಮಾನದ ಆಲಿಯಾಳ ಅಮೋಘ ನಟನೆಗೆ ಮಾರು ಹೋಗದವರೇ ಇಲ್ಲ ಬಿಡಿ. ಈ ಕಾರಣಕ್ಕಾಗಿ ಆಕೆಗೆ ಬಹುಮಾನಗಳೇ ಬಂದಿವೆ.

ಆಕೆಯ ಕನಸು ನನಸಾಗ್ತದಾ? ಇಬ್ಬರ ಪ್ರೇಮಕ್ಕೆ ಸುಖಾಂತ್ಯದ ಮುದ್ರೆ ಬೀಳ್ತದಾ? ಕಂಡಲ್ಲಿ ಗುಂಡೇಟು ಆದೇಶ ನೀಡಿದ ನಂತರ ಏನಾಗ್ತದೆ? ಕ್ಲೈಮ್ಯಾಕ್ಸ್ ಅನೂಹ್ಯವಾದುದು.

ಒಮ್ಮೆ ನೋಡಿ...
ಮಗದೊಮ್ಮೆ ನೋಡಬೇಕು ಎನ್ನಿಸುತ್ತದೆ...