Thursday, February 22, 2018

ನಾನು ಓದಿದ ಪುಸ್ತಕಗಳು -1

ಪರ್ವತದಲ್ಲಿ ಪವಾಡ

ಕೆಲವು ದಿನಗಳ ಹಿಂದಷ್ಟೇ ನಾನು ಇದೇ ಅಂಗಳದಲ್ಲಿ ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ ಪರ್ವತದಲ್ಲಿ ಪವಾಡ ಪುಸ್ತಕ ಓದಲು ಆರಂಭಿಸಿರುವುದಾಗಿ ಹೇಳಿದ್ದೆ... ಓದಿದೆ... ನಿಜಕ್ಕೂ ಈ ಪುಸ್ತಕದ ಬಗ್ಗೆ ಕೆಲವಾದರೂ ಮಾತುಗಳನ್ನ ಅರುಹಲೇಬೇಕು.
ಹಲವಾರು ಅನುವಾದಿತ ಪುಸ್ತಕಗಳನ್ನು ನಾನು ಓದಿದ್ದೇನೆ. ಹೆಸರಾಂತ ವ್ಯಕ್ತಿಗಳು ಅನುವಾದಿಸಿದ ಪುಸ್ತಕಗಳನ್ನು ಓದಲು ಯತ್ನಿಸಿ ಕಷ್ಟಪಟ್ಟಿದ್ದೂ ಇದೆ. ಕೆಲವು ಅನುವಾದಿತ ಪುಸ್ತಕಗಳಂತೂ ಅದೆಷ್ಟು ಗಡಚೆಂದರೆ, ಅವರ ಕನ್ನಡ ಅನುವಾದವನ್ನು ಮತ್ತೊಮ್ಮೆ ಕನ್ನಡಕ್ಕೆ ಅನುವಾದ ಮಾಡಿಕೊಂಡು ಓದಿದಾಗ ಅರ್ಥವಾಗಬಲ್ಲದು... ಸಂಯುಕ್ತ ಪುಲಿಗಲ್ ಅವರ ಪುಸ್ತಕ ಓದಲು ಶುರುವಿಟ್ಟುಕೊಳ್ಳುವ ಮೊದಲು ನನಗೆ ಇಂತಹದ್ದೊಂದು ಭಯ ಕಾಡಿದ್ದು ಸುಳ್ಳಲ್ಲ. ಹೀಗಾಗಿಯೇ ಪುಸ್ತಕ ಕೊಂಡು ತಂದು ಹಲವೇ ತಿಂಗಳಾಗಿದ್ದರೂ ಅವುಗಳ ಕಡೆಗೆ ಕಣ್ಣಾಡಿಸಿರಲಿಲ್ಲ. ಆದರೆ ಮೊದಲ ಅಧ್ಯಾಯದ ಒಂದೆರಡು ಪ್ಯಾರಾ ಓದುತ್ತಲೇ ಸಂಯುಕ್ತರ ಬರವಣಿಗೆ ಇಷ್ಟವಾಗಿಬಿಟ್ಟಿತು. ಅನುವಾದದ ಪುಸ್ತಕಗಳ ಕುರಿತು ನನ್ನ ಅಭಿಪ್ರಾಯ ಬದಲಾಗುವಂತಿತ್ತು.

ನ್ಯಾಂಡೋ ಪರಾಡೊ ಎಂಬ ಲ್ಯಾಟಿನ್ ಅಮೆರಿಕದ ಕ್ರೀಡಾಪಟು, ಉದ್ಯಮಿ ಬರೆದ ಪುಸ್ತಕವೇ ಪರ್ವತದಲ್ಲಿ ಪವಾಡ. ಮಿರಾಕಲ್ ಇನ್ ಆಂಡಿಸ್ ಎಂಬ ಆಂಗ್ಲ ನಾಮಧೇಯಕ್ಕೆ ವಿಶಿಷ್ಟ ಹೆಸರಿಟ್ಟಿದ್ದಾರೆ ಸಂಯುಕ್ತರು.
ಮೊದಲ ಅಧ್ಯಾಯದಲ್ಲಿ ಪರಾಡೋರ ಬಾಲ್ಯ, ಕ್ರೀಡೆ ಇತ್ಯಾದಿಗಳ ಬಗ್ಗೆ ವಿವರಗಳಿದ್ದರೆ ನಂತರದಲ್ಲಿ ಬದುಕಿನ ಕರಾಳತೆಗಳು ತೆರೆದುಕೊಳ್ಳುತ್ತವೆ.

ಸೊಂಟ ಮಟ್ಟ ತುಂಬಿದ ಹಿಮ ಪದರ... ಅದರ ನಡುವೆ ಆಗಾಗ ಉಂಟಗುವ ಹಿಮಪಾತ, ಕ್ರೂರ ಚಳಿ..ಗಾಳಿ ಈ ನಡುವೆ ಬದುಕಿಗಾಗಿ ಕಾಯುವಿಕೆ... ಒಹ್.. ಖರ್ಚಾದ ಆಹಾರ.. ಕೊನೆಗೆ ಅನಿವಾರ್ಯವಾಗಿ ಅಪಘಾತದಲ್ಲಿ ಸತ್ತವರ ಮಾಂಸವನ್ನೇ ಕತ್ತರಿಸಿ ಕತ್ತರಿಸಿ ತಿನ್ನುವುದು... ಬದುಕಿನ ಎಲ್ಲ ಮುಖಗಳ ಅನಾವರಣ ಇಲ್ಲಾಗುತ್ತದೆ.

ಕಣ್ಣೆದುರೇ ನವೆದು ನವೆದು ಸಾಯುವ ತಂಗಿ, ತಾಯಿ..ಗೆಳೆಯರು... ಅವರು ಸತ್ತರೆಂದು ಅಳುವಂತಿಲ್ಲ... ಅಳಬೇಡ.. ಅತ್ತರೆ ದೇಹದಲ್ಲಿ ಉಪ್ಪಿನಂಶ ಕಡಿಮೆ ಆಗುತ್ತದೆ. ನಾವು ಬದುಕಬೇಕೆಂದರೆ ದೇಹದಲ್ಲಿ ಉಪ್ಪಿನಂಶ ಇರಲೇಬೇಕು ಎನ್ನುವ ಗೆಳೆಯನ ತಾಕೀತು...
ಪಶ್ಚಿಮಕ್ಕೆ ಚಿಲಿ ಇದೆ ಎನ್ನುವ ಆಶಾವಾದ... ನುರಿತ ಪರ್ವತಾರೋಹಣ ಮಾಡುವವರೂ ಹತ್ತಲು ಹಿಂಜರಿಯುವ ಸೇಲರ್ ಪರ್ವತವನ್ನು ಏನೂ ಇಲ್ದೆ ಹತ್ತುವ ನ್ಯಾಂಡೋ... ಮಿತ್ರರನ್ನು ಬದುಕಿಸುವ ಪರಿ ಇವೆಲ್ಲ ಹಿಡಿದಿಡುತ್ತದೆ.

೨೫೮ ಪುಟಗಳ ೧೯೦ ರೂಪಾಯಿ ಬೆಲೆಯ ಛಂದ ಪುಸ್ತಕದಿಂದ ಹೊರ ಬಂದಿರುವ ಪರ್ವತದಲ್ಲಿ ಪವಾಡ ಪುಸ್ತಕ ತೇಜಸ್ವಿ ಅನುವಾದಿಸಿದ ಮಹಾಪಲಾಯನ, ಪ್ಯಾಪಿಲಾನ್ ನಂತಹ ಪುಸ್ತಕಗಳ ಸಾಲಿನಲ್ಲಿ ನಿಲ್ಲುತ್ತದೆ.

ಸಿಕ್ಕ ಜೀವನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಬದುಕಿನಲ್ಲಿ ಕೊರಗಬೇಡಿ. ನಿಮ್ಮ ಆಸ್ತಿತ್ವವನ್ನು ಜೀವಿಸಿ. ಪ್ರತಿ ಕ್ಷಣವೂ ಜೀವಂತಿಕೆಯಿಂದ ಬದುಕಿ ಎಂಬ ಅಂಶಗಳನ್ನು ಸಾರುವ ಪುಸ್ತಕ ಎಲ್ಲರನ್ನೂ ಸೆಳೆಯುತ್ತದೆ.

ಸಂಯುಕ್ತ ಪುಲಿಗಲ್ ಅವರ ಸರಳ ಬರವಣಿಗೆ ಇಷ್ಟವಾಗುತ್ತದೆ. ಎಲ್ಲೂ ಗಡಚೆನ್ನಿಸದೇ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸಂಯುಕ್ತರ ಅನುವಾದಕ್ಕೆ ಮನಸೋತಿಹೆ. ಅವರಿಂದ ಇನ್ನಷ್ಟು ಅನುವಾದಿತ ಕೃತಿಗಳು ಬರಲಿ. ಆಂಗ್ಲ ಅಥವಾ ಇನ್ಯಾವುದೇ ಭಾಷೆಯ ಕೃತಿಗಳು ಕನ್ನಡಿಗರಿಗೆ ಓದಲು ಸಿಗುಂತಾಗಲಿ ಎಂಬ ಆಸೆ.

ಜಿಕೆವಿಕೆ ಕೃಷಿ ಮೇಳದಲ್ಲಿ ಹಾಕಲಾಗಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆಯಲ್ಲಿ ೫೦ರೂಪಾಯಿಗೆ ನನಗೆ ಸಿಕ್ಕಿದ್ದ ಈ ಪುಸ್ತಕ ಬದುಕಿನ ಹಲವು ಪಾಠಗಳನ್ನ ಹೇಳಿದೆ. ಧನ್ಯವಾದ ಸಂಯುಕ್ತ ಅವರಿಗೆ.

ನೀವೂ ಓದಿ


ಕೆ. ಎಸ್ ನಾರಾಯಣಾಚಾರ್ಯರು ಬರೆದಿರುವ ಚಾಣಕ್ಯ ಪುಸ್ತಕ ಓದಿದೆ. ಪುಸ್ತಕ ಓದಿದ ಮೇಲೆ ನನ್ನಲ್ಲಿ ಉಂಟಾದ ಭಾವನೆಗಳನ್ನ ಹೇಳಲೇಬೇಕು...

* ಕಾದಂಬರಿಯಾಗಿ ಬಹಳ ಓದಿಸಿಕೊಂಡು ಹೋಗುವಂತಹ ಪುಸ್ತಕ... ಪ್ರತಿ ಅಧ್ಯಾಯವೂ ಬಹಳ ಕುತೂಹಲಕಾರಿ. ಒಮ್ಮೆ ಕೈಗೆತ್ತಿಕೊಂಡರೆ ಓದುತ್ತಲೇ ಇರಬೇಕು ಅನ್ನಿಸುತ್ತದೆ..

* ಕಾದಂಬರಿಯಲ್ಲಿ ಕಥಾನಾಯಕ ಚಾಣಕ್ಯ. ಅಲ್ಲಲ್ಲಿ ಅತಿಮಾನುಷನಾಗಿದ್ದು ನಮಗೆ ವಿಚಿತ್ರ ಎನ್ನಿಸುತ್ತದೆ. ಮಾಟ ಮಂತ್ರಗಳನ್ನು ನಂಬುವವರು ಒಪ್ಪಿಕೊಳ್ಳಬಹುದು. ಆದರೆ ಕೆಲವು ಅತಿಯಾಯಿತೆನ್ನಿಸಿತು.

* ಚಾಣಕ್ಯ + ಚಂದ್ರಗುಪ್ತ ಇಬ್ಬರಿಂದ ಮಗಧ ಸಾಮ್ರಾಜ್ಯ ಮೈದಳೆಯಿತು ಎನ್ನುವುದು ಸರಿ. ಆದರೆ ಕಾದಂಬರಿಯಲ್ಲಿ ಚಾಣಕ್ಯನೇ ಎಲ್ಲ ಎನ್ನಲಾಗಿದೆ. ಚಂದ್ರಗುಪ್ತ ಬೆದರು ಬೊಂಬೆಯಂತೆ, ಕೈಗೊಂಬೆಯಂತೆ ಚಿತ್ರಣಗೊಂಡಿದ್ದಾನೆ. ಇತಿಹಾಸ ಈ ರೀತಿ ಇದೆಯೇ ಎಂಬ ಅನುಮಾನ ಮೂಡುತ್ತದೆ. ಚಂದ್ರಗುಪ್ತನ ಕುರಿತು ಪಾಠಗಳಲ್ಲಿ ಓದಿದವರಿಗೆ ಇರಸು ಮುರುಸು ಆಗಿ.. ಮನಸು ಕಲಸು ಮೇಲೋಗರವಾಗುತ್ತದೆ.

* ಹಿಂದೂ, ಜೈನ, ಬೌದ್ಧ ಧರ್ಮಗಳ ಅಂದಿನ ಘರ್ಷಣೆಯ ಮುಖ ಕೊಂಚ ಅನಾವರಣಗೊಂಡಿದೆ. ಹೀಗೂ ನಮ್ಮ ದೇಶದ ಇತಿಹಾಸ ಇದ್ದರಬಹುದೇ ಎಂಬ ಚಿಂತನೆಗೆ ಒಡ್ಡುತ್ತದೆ..

* ಕೊನೆಯದಾಗಿ... ನಾರಾಯಣಾಚಾರ್ಯರ ಅಗಸ್ತ್ಯ ಕಾದಂಬರಿ ಇಷ್ಟವಾದಷ್ಟು... ಚಾಣಕ್ಯ ಇಷ್ಟವಾಗಲಿಲ್ಲ... ಈ ಕಾದಂಬರಿಯನ್ನು ಬ್ರಾಹ್ಮಣ ದ್ವೇಷಿಗಳು ಓದಿದರೆ ಸಿಡಿಮಿಡಿಗೊಂಡಾರು.

No comments:

Post a Comment