Friday, February 23, 2018

ಕೋಹ್ಲಿಗೇಕೆ ರೋಹಿತ್, ಪಾಂಡ್ಯ ಮೇಲೆ ಪ್ರೀತಿ?

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪದೇ ಪದೆ ವಿಫಲರಾಗುತ್ತಿದ್ದರೂ ಅವರಿಗೆ ಅವಕಾಶಗಳ ಮೇಲೆ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.
ಇತ್ತೀಚಿನ ದಿನಗಳಲ್ಲಿ ಭಾರತ ದ ಕ್ರಿಕೆಟ್ ತಂಡದ ಆಟವನ್ನು ಗಮನಿಸಿದರೆ ನಾಯಕ ವಿರಾಟ್ ಕೋಹ್ಲಿಗೆ ಕೆಲವು ಆಟಗಾರರ ಮೇಲೆ ಇರುವ ಪ್ರೀತಿ ಎದ್ದು ಕಾಣುತ್ತದೆ.
ಹಿಟ್ ಮ್ಯಾನ್ ಎಂದೇ ಹೆಸರು ಗಳಿಸಿರುವ ರೋಹಿತ್ ಶರ್ಮಾ ಆಗೊಮ್ಮೆ ಈಗೊಮ್ಮೆ ಶತಕವನ್ನು ಗಳಿಸುತ್ತಾರೆ. ಆದರೆ ಉಳಿದ ಸಂದರ್ಭಗಳಲ್ಲಿ ವಿಫಲರಾಗುತ್ತಿದ್ದಾರೆ. ೧೦ ಅಥವಾ ೧೫ ಇನ್ನಿಂಗ್ಸ್‌ಗೊಮ್ಮೆ ಮಾತ್ರ ಅವರು ಎರಡಂಕಿ ಅಥವಾ ಮೂರಂಕಿ ರನ್ ಗಳಿಸುತ್ತಿದ್ದಾರೆ. ಉಳಿದ ಸಂದರ್ಭಗಳಲ್ಲಿ ಅವರ ಬ್ಯಾಟಿನಿಂದ ಒಂದಂಕಿಗಿಂತ ಹೆಚ್ಚಿನ ರನ್ ಸೃಷ್ಟಿಯಾಗುವುದೇ ಇಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯಲ್ಲಿ ಒಂದು ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅವರ ಸಾಧನೆ ಕಡಿಮೆಯೇ. ಟೆಸ್ಟ್‌ನಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಆಟ ಹೊರಹೊಮ್ಮಿಲ್ಲ. ಇನ್ನು ಟಿ೨೦ಯಲ್ಲಂತೂ ಒಂದಂಕಿಗಿಂತ ಹೆಚ್ಚಿನ ರನ್ ಬಂದೇ ಇಲ್ಲ. ಹೀಗಿದ್ದರೂ ರೋಹಿತ್‌ಗೆ ಪದೇ ಪದೆ ಅವಕಾಶ ನೀಡಲಾಗುತ್ತಿದೆ.
ಇದೇ ರೀತಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕ್ಯಾಪ್ಟನ್ ಕೋಹ್ಲಿಯ ಕೃಪೆಗೆ ಪಾತ್ರರಾಗಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ತಂಡಕ್ಕೆ ಆಯ್ಕೆಯಾದ ಆರಂಭದ ದಿನಗಳಲ್ಲಿ ಬ್ಯಾಟ್ ಹಾಗೂ ಬೌಲ್ ಮೂಲಕ ಅಬ್ಬರ ತೋರಿದ್ದ ಹಾರ್ದಿಕ್ ಇತ್ತೀಚೆಗಿನ ಕೆಲವು ಪಂದ್ಯಗಳಲ್ಲಿ ಸದ್ದನ್ನೇ ಮಾಡಿಲ್ಲ. ಅವರ ಬ್ಯಾಟ್ ಮಾತನಾಡುತ್ತಿಲ್ಲ. ಅದೇ ರೀತಿ ಬೌಲಿಂಗ್ ಕೂಡ ಪರಿಣಾಮಕಾರಿಯಾಗಿಲ್ಲ. ಆದರೂ ತಂಡದಲ್ಲಿ ಉಳಿದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಂತೂ ಒಂದೇ ಒಂದು ಪಂದ್ಯದಲ್ಲಿ ಕೂಡ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದರೂ ಉಳಿದ ಪಂದ್ಯಗಳಲ್ಲಿ ಪ್ರದರ್ಶನ ಕಳಪೆಯೇ ಆಗಿತ್ತು. ಹೀಗಿದ್ದರೂ ತಂಡದಲ್ಲಿ ಪಾಂಡ್ಯ ಉಳಿದುಕೊಂಡಿರುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
ನಾಯಕ ವಿರಾಟ್ ಕೋಹ್ಲಿ ಹಾಗೂ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರ ಕೃಪೆಯಿಂದಲೇ ಈ ಇಬ್ಬರೂ ಆಟಗಾರರು ಪದೇ ಪದೆ ಅವಕಾಶ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಸುಳ್ಳಲ್ಲ. ಮುಂಬರುವ ಟಿ೨೦ ವಿಶ್ವಕಪ್ ಪಂದ್ಯಾವಳಿಗಾಗಿ ತಂಡವನ್ನು ರೂಪಿಸಲಾಗುತ್ತಿದೆ ಎನ್ನುವ ಕಾರಣವನ್ನು ನೀಡಿ, ಈ ಆಟಗಾರರಿಗೆ ಅವಕಾಶ ಕೊಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಟಿ೨೦ ವಿಶ್ವಕಪ್‌ಗೆ ಹೊಸ ಆಟಗಾರರಿಗೂ ಅವಕಾಶ ನೀಡುವ ಮೂಲಕ ತಂಡವನ್ನು ಇನ್ನಷ್ಟು ಸದೃಢಗೊಳಿಸುವ ಬದಲು ವಿಫಲರಾಗುತ್ತಿರುವವರಿಗೆ ಮತ್ತೆ ಮತ್ತೆ ಮಣೆ ಹಾಕುವುದು ಎಷ್ಟು ಸರಿ ಎಂಬ ವಾದಗಳೂ ಕ್ರಿಕೆಟ್ ಅಭಿಮಾನಿಗಳ ವಲಯದಿಂದ ಕೇಳಿ ಬಂದಿವೆ.
ಪದೇ ಪದೆ ವಿಫಲರಾಗುತ್ತಿರುವ ರೋಹಿತ್ ಶರ್ಮಾ ಬದಲಿಗೆ ಕನ್ನಡಿಗ ಕೆ. ಎಲ್. ರಾಹುಲ್ ಅಥವಾ ಪ್ರತಿಭಾನ್ವಿತ ಅಜಿಂಕ್ಯ ರಹಾನೆಗೆ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯಗಳು ವ್ಯಾಪಕವಾಗುತ್ತಿವೆ. ಪಾಂಡ್ಯ ಬದಲು ಅವರಷ್ಟೇ ಪ್ರತಿಭಾವಂತರಾದ ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಬಹುದಾಗಿತ್ತು.
ಪ್ರತಿಭಾವಂತರಾದ ರಿಷಬ್ ಪಂಥ್, ಇಶಾನ್ ಕಿಶನ್, ಮಾಯಾಂಕ್ ಅಗರ್ವಾಲ್, ಪಾರ್ಥಿವ್ ಪಟೇಲ್ ಮುಂತಾದ ಆಟಗಾರರಿಗೂ ಅವಕಾಶಗಳನ್ನು ನೀಡಬಹುದಾಗಿತ್ತು. ತನ್ಮೂಲಕ ಅವರ ಆಟವನ್ನೂ ಪರೀಕ್ಷಿಸಬಹುದಿತ್ತು ಎನ್ನುವ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಹೀಗೆ ವಿಫಲರಾಗುತ್ತಿರುವ ಆಟಗಾರರನ್ನು ಕೈಬಿಟ್ಟು ಬದಲಿಗೆ ಪ್ರತಿಭಾವಂತರಿಗೆ ಮಣೆ ಹಾಕಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

No comments:

Post a Comment