Friday, November 27, 2015

ಅಘನಾಶಿನಿ ಕಣಿವೆಯಲ್ಲಿ -29

`ಯಾರು ನೀನು?' ಹುಚ್ಚನ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಪ್ರದೀಪ.
`ನಾನು ಯಾರು ಬೇಕಾದರೂ ಆಗಿರಲಿ. ಅದು ಮುಖ್ಯವಲ್ಲ. ನಿಮ್ಮ ಕೆಲಸ ಏನಿದೆಯೋ ಅದರ ಕಡೆಗೆ ಗಮನ ಹರಿಸಿಕೊಳ್ಳಿ.. ನಾನು ಹುಚ್ಚ ಎಂದಷ್ಟೇ ನಿಮ್ಮ ಗಮನದಲ್ಲಿರಲಿ. ಅದು ಸಾಕು ಬಿಡಿ..' ಎಂದ ಆ ಹುಚ್ಚ.
`ಇದು ಯಾಕೋ ಸರಿ ಕಾಣುತ್ತಿಲ್ಲ. ನೀನು ಯಾರು? ನಮ್ಮ ಕೆಲಸದ ಬಗ್ಗೆ ನೀನೇಕೆ ಹೇಳುತ್ತಿದ್ದೀಯಾ?' ಈ ಸಾರಿ ಉತ್ತರ ನೀಡುವ ಸರದಿ ವಿಕ್ರಮನದ್ದಾಗಿತ್ತು.
`ಆಗಲೇ ಹೇಳಿದೆನಲ್ಲ. ನಾನು ಹುಚ್ಚ. ನೀವೇ ನನ್ನನ್ನು ಉಂಚಳ್ಳಿ ಜಲಪಾತದ ಒಡಲಿನಿಂದ ಕಾಪಾಡಿಕೊಂಡು ಬಂದಿದ್ದೀರಲ್ಲ. ನೋಡಿ ನಾನು ಯಾರು ಬೇಕಾದರೂ ಆಗಿರಲಿ. ನಿಮಗೆ ತೊಂದರೆ ಕೊಡುವವನು ನಾನಲ್ಲ. ನಿಮಗೆ ಸಹಾಯ ಮಾಡುವುದು ನನ್ನ ಮುಖ್ಯ ಕೆಲಸ. ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ನೀವು ಹೇಳಿ. ಹೇಳದಿದ್ದರೂ ತೊಂದರೆಯೇನಿಲ್ಲ ಬಿಡಿ..' ಎಂದ ಹುಚ್ಚ.
ಎಲ್ಲರಿಗೂ ಒಮ್ಮೆ ಅಚ್ಚರಿ. ಈತ ನಿಜವಾಗಿಯೂ ಹುಚ್ಚನೇ? ಅಥವಾ ಹುಚ್ಚನ ವೇಷದಲ್ಲಿರುವ ಯಾವುದಾದರೂ ವ್ಯಕ್ತಿಯೋ? ನಮ್ಮ ಮೇಲೆ ನಿಗಾ ವಹಿಸುವ ಸಲುವಾಗಿ ಯಾರಾದರೂ ಬೆನ್ನು ಬಿದ್ದಿದ್ದಾರೋ ಹೇಗೆ ಎನ್ನುವ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿಯೇ ಇನ್ನೊಂದು ಘಟನೆ ನಡೆದು ಹೋಗಿತ್ತು. `ನೋಡಿ ನಿಮ್ಮೆದುರು ಇರುವ ಸವಾಲು ಸಣ್ಣದಲ್ಲ. ಹುಷಾರಾಗಿರಿ. ನೀವು ಈಗಾಗಲೇ ಸಿಂಹದ ಬಾಯಿಗೆ ಕೈ ಹಾಕಿದ್ದೀರಿ. ಈಗಾಗಲೇ ಒಬ್ಬನ ಸಾವಿಗೆ ಕಾರಣರಾಗಿದ್ದೀರಿ. ಶತ್ರು ಸುಮ್ಮನೇ ಇರುವುದಿಲ್ಲ. ನಿಮ್ಮೆದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ. ಪ್ರತಿಯೊಬ್ಬರೂ ಎಚ್ಚರದಿಂದ ಇರಿ. ಭಯ ಬೇಡ. ನಿಮ್ಮ ಚಲನವಲನಗಳನ್ನು ನಾನು ಸಾಧ್ಯವಾದಷ್ಟೂ ಗಮನಿಸುತ್ತಲೇ ಇರುತ್ತೇನೆ.' ಎಂದು ಹೇಳಿದ ಹುಚ್ಚ ಇದ್ದಕ್ಕಿದ್ದಂತೆ ಗಾಡಿಯಿಂದ ಕೆಳಗೆ ಜಿಗಿದೇ ಬಿಟ್ಟ.
ಹುಚ್ಚ ಗಾಡಿಯಿಂದ ಕೆಳಗೆ ಜಿಗಿಯಬಹುದು ಎನ್ನುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ವಿನಾಯಕ ಹಟಾತ್ತನೆ ಗಾಡಿ ಬ್ರೇಕ್ ಹಾಕಿದ. ಗಾಡಿಯಲ್ಲಿ ಕುಳಿತಿದ್ದವರೆಲ್ಲ ಒಮ್ಮೆ ಮುಗ್ಗರಿಸಿಬಿದ್ದರು. ಪ್ರದೀಪ ಕೂಡ ಹುಚ್ಚನ ಹಿಂದೆ ಅವನಷ್ಟೇ ವೇಗವಾಗಿ ಗಾಡಿಯಿಂದ ಜಿಗಿದಿದ್ದ. ಅವನ ಹಿಂದೆ ವಿಕ್ರಮ ಕೂಡ ಇಳಿದಿದ್ದ. ಹುಚ್ಚನ ಬಗ್ಗೆ ಬಹಳ ಅಚ್ಚರಿಯಾಗಿತ್ತು. ಆತನನ್ನು ಹಿಡಿಯುವುದು ವಿಕ್ರಮ ಹಾಗೂ ಪ್ರದೀಪನ ಉದ್ದೇಶವಾಗಿತ್ತು. ಆದರೆ ವಾಹನದಿಂದ ಜಿಗಿದಿದ್ದ ಹುಚ್ಚ ಪಕ್ಕದ ಕಾಡೊಳಕ್ಕೆ ನುಗ್ಗಿ ಮರೆಯಾಗಿ ಬಿಟ್ಟಿದ್ದ. ಪ್ರದೀಪ ಹಾಗೂ ವಿಕ್ರಮ ಕೂಡ ಹುಚ್ಚನಷ್ಟೇ ವೇಗವಾಗಿ ಕಾಡೊಳಗೆ ನುಗ್ಗಿದ್ದರೂ ಅರೆಘಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟಿದ್ದ. `ಛೇ.. ಸ್ವಲ್ಪದರಲ್ಲಿ ತಪ್ಪಿಸಿಕೊಂಡ..' ಎಂದು ಗೊಣಗಿದ ಪ್ರದೀಪ.
`ಇಂವ ಯಾರು ಮಾರಾಯಾ. ನಮ್ಮ ಕೆಲಸದ ಬಗ್ಗೆ ಅಷ್ಟು ನಿಖರವಾಗಿ ಹೇಳ್ತಾ ಇದ್ದ. ಇಂವ ಹುಚ್ಚ ಅಂತೂ ಅಲ್ಲ. ಕಾಡುಗಳ್ಳರ ಬಗ್ಗೆ ಸರ್ಕಾರ ಏನಾದರೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆಯಾ? ಅವನು ಇವನೇನಾ? ನಮ್ಮ ಕಾರ್ಯದ ಬಗ್ಗೆ ಎಷ್ಟು ಸಲೀಸಾಗಿ ಹೇಳ್ತಾ ಇದ್ದ. ಒಂದ್ ಸಾರಿ ಎಷ್ಟ್ ಆಶ್ಚರ್ಯ ಆಗಿತ್ತು ಮಾರಾಯಾ..' ಎಂದ ವಿಕ್ರಮ.
`ಹುಂ. ನಂಗೂ ಹಂಗೆ ಅನ್ನಿಸ್ತಾ ಇದ್ದು. ಖಂಡಿತ ಇಂವ ಹುಚ್ಚನಂತೂ ಅಲ್ಲ. ನೋಡು ಏನೇ ಆಗಲಿ, ಇಂವ ಯಾರೇ ಆಗಿರಲಿ, ಇನ್ನುಮುಂದೆ ನಾವು ಬಹಳ ಹುಷಾರಾಗಿ ಇರಬೇಕು. ಅಷ್ಟೇ ಅಲ್ಲ, ನಮ್ಮ ಕೆಲಸವನ್ನು ಇನ್ನಷ್ಟು ತ್ವರಿತವಾಗಿ ಮಾಡಿ ಮುಗಿಸಬೇಕು. ಇಲ್ಲ ಅಂದರೆ ಸಲ್ಲದ ಸಮಸ್ಯೆಯನ್ನು ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ..' ಎಂದ ಪ್ರದೀಪ.
`ಹೌದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ಯಾಕಾದರೂ ಶುರು ಹಚ್ಚಿಕೊಂಡೆನೋ ಎಂದೂ ಅನ್ನಿಸಲು ಆರಂಭಿಸಿದೆ ನೋಡು. ಒಂದು ಸಾರಿ ಕೆಲಸ ಮುಗಿದರೆ ಸಾಕು. ಅಷ್ಟಾಗಿಬಿಟ್ಟಿದೆ...' ವಿಕ್ರಮ ನಿಟ್ಟುಸಿರಿನಿಂದ ಹೇಳಿದ್ದ.
`ಮುಗಿಸೋಣ. ಬೇಗನೇ ಮುಗಿಸಿಬಿಡೋಣ. ಏನ್ ಬೇಕಾದರೂ ಆಗಲಿ..' ಎಂದ ವಿಕ್ರಮ.
ವಾಪಾಸು ಕಾರಿನ ಬಳಿ ಬಂದಕೂಡಲೇ ವಿನಾಯಕ `ಏನಾಯ್ತು? ಸಿಕ್ಕಿದ್ನಾ ಅವ?' ಎಂದು ಕೇಳಿದ. ಇಬ್ಬರೂ ಇಲ್ಲ ಎಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ `ಅಂವ ಯಾರು? ನಿಮ್ಮ ಕೆಲಸದ ಬಗ್ಗೆ ಏನೋ ಹೇಳಿದನಲ್ಲ. ನಿಜ ಹೇಳಿ. ನೀವು ಯಾವ ಉದ್ದೇಶದಿಂದ ಈ ಕಡೆಗೆ ಬಂದಿದ್ದೀರಿ? ನಿಮಗೆ ಶತ್ರುಗಳು ಇರಲು ಸಾಧ್ಯವಾ? ಆ ಹುಚ್ಚ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದನಲ್ಲ. ಅದರ ಅರ್ಥ ಏನು? ಏನೋ ಮುಚ್ಚಿಡುತ್ತಿದ್ದೀರಿ.. ಹೇಳೀ..' ಎಂದಳು.
`ಏನು ಇಲ್ಲ ಮಾರಾಯ್ತಿ. ಈ ಮರಗಳ್ಳರ ಬಗ್ಗೆ ಹೇಳಿದ್ದು ಆತ. ದಂಟಕಲ್ಲಿನಲ್ಲಿ ಮರ ಕಡಿಯುತ್ತಿದ್ದ ಒಬ್ಬಾತನ ಸಾವಿಗೆ ನಾವು ಕಾರಣರಾದೆವಲ್ಲ. ಅದಕ್ಕೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಗಳ್ಳರು ಸಜ್ಜಾಗಿದ್ದಾರಂತೆ. ಇದನ್ನೇ ಅವನು ಹೇಳಿದ್ದು..' ವಿಕ್ರಮ ಸಮಜಾಯಿಶಿ ನೀಡಿದ.
`ಅವ ಹುಚ್ಚ. ನಿಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲ. ಅವ ಯಾಕೆ ನಿಮ್ಮ ಬಳಿ ಬಂದು ಹೇಳಬೇಕು? ಅವನಿಗೆ ನಿಮ್ಮ ಬಳಿ ಹೇಳುವುದರಿಂದ ಆಗುವ ಲಾಭ ಏನು?..?' ರಮ್ಯ ಪಟ್ಟು ಬಿಡದೇ ಕೇಳಿದ್ದಳು.
ನಡುವೆ ಬಾಯಿ ಹಾಕಿದ ವಿನಾಯಕ `ನಿಂಗ್ ಗೊತ್ತಾಗ್ತಿಲ್ಲೆ ಸುಮ್ಮಂಗ್ ಕುತ್ಕ ನೋಡನ. ಅಂವ ಹುಚ್ಚ ಇದ್ದಿಕ್ಕು ಅಥವಾ ಹುಚ್ಚ ಅಲ್ಲದೇ ಇದ್ದಿಕ್ಕು. ಮರಗಳ್ಳರ ಪತ್ತೆಗೆ ಸರ್ಕಾರ ಯಾರನ್ನಾದರೂ ನೇಮಕ ಮಾಡಿಕ್ಕು. ಆ ಅಧಿಕಾರಿಯೇ ಈ ರೀತಿ ಮಾರು ವೇಷದಲ್ಲಿ ಓಡಾಟ ನಡೆಸುತ್ತಿರಬಹುದು. ಆತನಿಗೆ ನಮ್ಮೂರಿನಲ್ಲಿ ಮರಗಳ್ಳರ ಮೇಲೆ ಹಲ್ಲೆ ನಡೆದು, ಒಬ್ಬ ಕಳ್ಳ ನಾಟಾ ಸಾಗಣೆದಾರ ಸತ್ತಿರುವ ಬಗ್ಗೆ ಗೊತ್ತಾಗಿರಲಕ್ಕು. ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿರಲಕ್ಕು. ಅದಕ್ಕೆಂತಕ್ ಈ ಥರ ತಲೆಕೆಡಿಸ್ಕಳ್ತೆ?' ಎಂದು ದಬಾಯಿಸಿದ. ರಮ್ಯ ಏನೋ ಹೇಳಲು ಮುಂದಾದವಳು ಹಾಗೆಯೇ ಸುಮ್ಮನಾದಳು.
ಪ್ರತಿಯೊಬ್ಬರಲ್ಲೂ ಹಲವಾರು ಪ್ರಶ್ನೆಗಳಿದ್ದವು. ಯಾವುದನ್ನೂ ಕೇಳಿದರೂ ಸ್ಪಷ್ಟ ಉತ್ತರ ಸಿಗುತ್ತದೆ ಎನ್ನುವ ನಿಂಬಿಕೆ ಇಲ್ಲವಾದ್ದರಿಂದ ಪ್ರತಿಯೊಬ್ಬರ ಪ್ರಶ್ನೆಗಳೂ ಬಾಯಿಂದ ಹೊರಗೆ ಬರಲೇ ಇಲ್ಲ. ಪ್ರತಿಯೊಬ್ಬರೂ ಮೌನವಾಗಿಯೇ ಕಾರಿನಲ್ಲಿ ಕುಳಿತಿದ್ದರು. ವಿನಾಯಕ ಮುಂದಕ್ಕೆ ಕಾರನ್ನು ಚಾಲನೆ ಮಾಡಿದ.
ದಾರಿ ಮಧ್ಯದಲ್ಲಿ ಕೆಲ ದಿನಗಳ ಹಿಂದೆ ಮರಗಳ್ಳರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಜಟಾಪಟಿ ನಡೆದ ಸ್ಥಳ ಬಂದಿತು. ಅಲ್ಲೊಂದು ಕಡೆ ನಿರ್ಮಾಣ ಮಾಡಲಾಗಿದ್ದ ಚೆಕ್ ಪೋಸ್ಟ್ ಕಿತ್ತು ಹೋಗಿತ್ತು. ಅದನ್ನು ನೋಡಿಕೊಂಡು ಮುಂದಕ್ಕೆ ನಡೆದರು. ಒಂದಿಬ್ಬರು ಅರಣ್ಯ ಇಲಾಖೆಯ ಕಾವಲುಗಾರರು ಮಿಕಿ ಮಿಕಿ ನೋಡುತ್ತ ನಿಂತಿದ್ದರಷ್ಟೇ. ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಸೂರ್ಯ ಆಗಲೇ ಬಾನಂಚಿಗೆ ಜಾರಿದ್ದ.

(ಮುಂದುವರಿಯುತ್ತದೆ)

Monday, November 2, 2015

ಅಘನಾಶಿನಿ ಕಣಿವೆಯಲ್ಲಿ -28

              ವಿಕ್ರಮ ಸಧ್ಯದಲ್ಲಿಯೇ ಪ್ರಪೋಸ್ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಹೀಗೆ ಉಂಚಳ್ಳಿ ಜಲಪಾತದಲ್ಲಿ ಪ್ರಪೋಸ್ ಮಾಡುತ್ತಾನೆ ಎನ್ನುವುದನ್ನು ವಿಜೇತಾ ನಿರೀಕ್ಷಿಸಿರಲಿಲ್ಲ. ತಕ್ಷಣವೇ ಒಪ್ಪಿಕೊಂಡು ಬಿಡಲಾ ಎಂದು ಆಲೋಚಿಸಿದಳು ವಿಜೇತಾ. ಆದರೆ ವಿಕ್ರಮನನ್ನು ಸ್ವಲ್ಪ ಆಟ ಆಡಿಸೋಣ, ತಕ್ಷಣಕ್ಕೆ ಒಪ್ಪಿಕೊಳ್ಳಬಾರದು ಎಂದುಕೊಂಡಳು. `ನೀನು ನನ್ನ ಲವ್ ಮಾಡ್ತಾ ಇದ್ಯಾ? ಜೋಕ್ ಮಾಡ್ತಾ ಇದ್ದೀಯಾ ಅಥವಾ ತಮಾಷೆಯಾ?' ಎಂದು ಕೇಳಿದಳು ವಿಜೇತಾ.
            `ತಮಾಷೆಯಲ್ಲ. ಇದು ನಿಜ. ಬೇಗ ಹೇಳು ಪ್ಲೀಸ್. ಏನೇ ಇರಲಿ, ನಿನ್ನ ನಿರ್ಧಾರ ತಕ್ಷಣ ತಿಳಿಸು..' ವಿಕ್ರಮ ಗೋಗರೆಯುವ ರೀತಿಯಲ್ಲಿ ಹೇಳಿದ.
             `ನಿಜವಾಗಿಯೂ ನನಗೆ ಆಶ್ಚರ್ಯ ಆಗ್ತಾ ಇದ್ದು ನೋಡು. ಖಂಡಿತ ನೀನು ಈ ರೀತಿ ಆಲೋಚನೆ ಮಾಡ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲ..'
             `ಅಂದರೆ.. ನಿಂಗೆ ಇಷ್ಟ ಇಲ್ಲವಾ..?' ಎಂದು ಕೇಳಿದ ವಿಕ್ರಮ ಧ್ವನಿಯಲ್ಲಿ ನಿರಾಸೆಯ ಪದರವಿತ್ತು.
            `ಉಹೂಂ. ಇಷ್ಟವಿಲ್ಲ ಅಂತ ಹೇಳಲಾರೆ. ಹಾಗಂತ ಹೂ ಅನ್ನೋದಕ್ಕೂ ಆಗ್ತಾ ಇಲ್ಲ. ಸ್ವಲ್ಪ ಗೊಂದಲ. ನನಗೆ ಆಲೋಚನೆ ಮಾಡೋಕೆ ಸ್ವಲ್ಪ ಟೈಂ ಬೇಕು. ಇನ್ನೊಂದೆರಡು, ಮೂರು ದಿನಗಳಲ್ಲಿ ಹೇಳಲಾ?' ಕೇಳಿದಳು ವಿಜೇತಾ.
           `ಹೂಂ. ಆದರೆ ಬೇಗ ಹೇಳು ಪ್ಲೀಸ್. ಕಾಯುವಿಕೆ ಕಷ್ಟ..' ಎಂದವನು ಪೂರ್ತಿಯಾಗಿ ಶರಣಾದನೋ ಎಂಬಂತಿದ್ದ.
            ಅಷ್ಟರಲ್ಲಿ ಜಲಪಾತದ ಬುಡದ ಗುಂಡಿಯಲ್ಲಿ ಈಸು ಬಿದ್ದಿದ್ದ ವಿನಾಯಕ ಮೇಲಕ್ಕೆ ಬಂದು ವಿಕ್ರಮನ ಬಳಿ `ಏನಪ್ಪಾ.. ಏನ್ ವಿಷ್ಯ. ಹೇಳಿದ್ಯಾ? ಹಣ್ಣೋ.. ಕಾಯೋ..' ಎಂದ.
             ವಿಜೇತಾಳಿಗೆ ಒಮ್ಮೆಲೆ ಅಚ್ಚರಿ. ಅರೇ ಈ ವಿಷ್ಯ ಎಲ್ಲರಿಗೂ ಗೊತ್ತಿದೆಯಲ್ಲ. ನನಗೆ ಮಾತ್ರ ಗೊತ್ತಿರಲಿಲ್ಲ. ಅನುಮಾನ ಇತ್ತಾದರೂ ಎಲ್ಲರಿಗೂ ಗೊತ್ತಾಗಿರಬಹುದು ಎಂದುಕೊಂಡಿರಲಿಲ್ಲವಲ್ಲ ಎಂದುಕೊಂಡಳು. `ಯಾಕಪ್ಪಾ.. ಏನಾಯ್ತು.. ಸಪ್ಪಗಿದ್ದೀಯಾ..' ವಿನಾಯಕ ವಿಕ್ರಮನನ್ನು ಛೇಡಿಸಿದ.
            `ನಾನು ಹೇಳೋದನ್ನೆಲ್ಲ ಹೇಳಿದ್ದಿ ನೋಡಿ ವಿನು. ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದು. ಇಷ್ಟು ದಿನ ಕಾದು ಕುಳಿತಿದ್ದಿ. ಇನ್ನೊಂದೆರಡು ದಿನ ಕಾಯೋದು ಕಷ್ಟವಾ?..' ವಿಕ್ರಮ ಹೇಳಿದ. ನಾಚಿದ ವಿಜೇತಾ ದೂರದಲ್ಲಿ ನೀರಾಟವಾಡುತ್ತಿದ್ದ ರಮ್ಯಳ ಬಳಿ ಹೋಗಿ ಕುಳಿತುಕೊಂಡಳು.
            ಪ್ರದೀಪ, ವಿಷ್ಣು ಕೂಡ ಈಸು ಬಿದ್ದವರು ಮೇಲೆದ್ದು ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರು. ವಿಕ್ರಮ ಹಾಗೂ ವಿನಾಯಕ ಇಬ್ಬರೂ ಮಾತನಾಡುತ್ತಲೇ ಉಂಚಳ್ಳಿ ಜಲಪಾತದ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದರು.
ಜಲಪಾತದ ಇತಿಹಾಸವೂ ವಿಶಿಷ್ಟವಾಗಿದೆ. ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುವುದನ್ನು ನೋಡುವುದೇ ಚಂದ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ಚೈತನ್ಯದಿಂದ ಮನಸೆಳೆಯುತ್ತದೆ.
               ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಾರೆ. ವಿಕ್ರಮ ಹಾಗೂ ಗೆಳೆಯರು ಜಲಪಾತ ನೋಡಲು ಹೋಗಿದ್ದಾಗ ಮಾತ್ರ ಸಾಕಷ್ಟು ಜನರಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರು ಅಷ್ಟೇ.
              `ಹಸಿವಾಗ್ತಾ ಇದೆ. ಕಟ್ಟಿಸಿಕೊಂಡು ಬಂದಿರುವ ಫಲಾವ್ ನ ಎಲ್ಲಾ ತೆಗಿರಿ..' ಎಂದು ರಮ್ಯ ಕೂಗಿದವಳೇ ದೊಡ್ಡದೊಂದು ಬಂಡೆಯ ಮೇಲೆ ಏರಿ ತಿಂಡಿ ತಿನ್ನಲು ತಯಾರಾಗಿಬಿಟ್ಟಳು. ಉಳಿದವರಿಗೂ ಅದೇ ಸರಿ ಎನ್ನಿಸಿ ರಮ್ಯಳನ್ನು ಹಿಂಬಾಲಿಸಿದರು. ಮದ್ಯಾಹ್ನದ ವೇಳೆಗೆಲ್ಲಾ ಉಂಚಳ್ಳಿ ಜಲಪಾತವನ್ನು ವೀಕ್ಷಣೆ ಮಾಡಿ, ಆ ಭಾಗದಲ್ಲಿ ಸಂಚಾರ ಮಾಡಿದವರು ಮದ್ಯಾಹ್ನದ ನಂತರ ಜಲಪಾತದ ಬುಡದಿಂದ ಮೇಲಕ್ಕೆ ಬಂದರು. ಅಷ್ಟರಲ್ಲಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಚಿಕ್ಕದೊಂದು ಗಲಾಟೆಯೆ ನಡೆದಿತ್ತು.
              ಮಾನಸಿಕ ಅಸ್ವಸ್ತ ವ್ಯಕ್ತಿಯೊಬ್ಬ ಆ ಭಾಗದಲ್ಲಿ ಕೆಲ ದಿವಸಗಳಿಂದ ಓಡಾಡುತ್ತಿದ್ದ. ಉಂಚಳ್ಳಿ ಜಲಪಾತದ ಭಾಗದಲ್ಲಿ ಓಡಾಟ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಬಳಿ ಊಟ, ತಿಂಡಿಯನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಕಾಲ ಸುಮ್ಮನೆ ಇದ್ದ ಆ ವ್ಯಕ್ತಿ ನಂತರದ ದಿನಗಳಲ್ಲಿ ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೆಕ್ಕರಿಸಿ ನೋಡುವುದು, ತೊಂದರೆ ಕೊಡುವುದು ಈ ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸಿದ. ಇದರಿಂದ ಪ್ರವಾಸಿಗರು ಬೇಸತ್ತಿದ್ದರು. ಸ್ಥಳೀಯರಿಗೆ ಈ ಕುರಿತು ಹೇಳಲಾಗಿ ಒಂದೆರಡು ಸಾರಿ ಮಾನಸಿಕ ಅಸ್ವಸ್ತ ವ್ಯಕ್ತಿಯನ್ನು ಪಕ್ಕದೂರಿಗೆ ಗಡಿಪಾರು ಮಾಡಿ ಬಂದಿದ್ದರು. ಆದರೆ ಹೀಗೆ ಗಡಿಪಾರು ಮಾಡಿ ಬಂದ ಒಂದೆರಡು ದಿನಗಳ ಒಳಗಾಗಿ ಆ ವ್ಯಕ್ತಿ ಮತ್ತೆ ಅಲ್ಲಿ ಪ್ರತ್ಯಕ್ಷನಾಗುತ್ತಿದ್ದ.
          ಮೂರ್ನಾಲ್ಕು ಸಾರಿ ಈ ರೀತಿ ನಡೆದ ನಂತರ ಆ ವ್ಯಕ್ತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರ ಜೊತೆ ಅಸಹ್ಯವಾಗಿ ವರ್ತನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಪ್ರವಾಸಿಗರು ಆತನ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಗಲಾಟೆ ನಡೆದಿತ್ತು. ಮಾನಸಿಕ ಅಸ್ವಸ್ತ ವ್ಯಕ್ತಿ ಹೊಡೆತ ತಾಳಲಾಗದೇ ಕೂಗಾಡುತ್ತಿದ್ದ. ಜೊತೆ ಜೊತೆಯಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದನೆಯನ್ನೂ ಮಾಡುತ್ತಿದ್ದ. ಇದನ್ನು ನೋಡಿದ ಪ್ರದೀಪ ಗಲಾಟೆಯನ್ನು ಬಿಡಿಸಲು ಮುಂದಾದ. ಸಿಟ್ಟಿಗೆದ್ದವರನ್ನು ಸಮಾಧಾನ ಮಾಡಿದ. ಅಷ್ಟೇ ಅಲ್ಲದೇ ಹುಚ್ಚನನ್ನು ಹಿಡಿದುಕೊಂಡು ಬಂದ. ಬಂದವನೇ ಅವನನ್ನು ವಿಕ್ರಮನ ಕಾರಿನಲ್ಲಿ ಕೂರಿಸಿದ.
           ವಿಕ್ರಮನಿಗೆ ಇದು ಅಸಹ್ಯ ಎನ್ನಿಸಿತು. ಯಾರೋ ಹುಚ್ಚನನ್ನು ತಂದು ಗಾಡಿಯಲ್ಲಿ ಕೂರಿಸಿದನಲ್ಲ ಎನ್ನಿಸಿತು. ಸಿಟ್ಟಿನಿಂದ ಪ್ರದೀಪನ ಬಳಿ ಕೂಗಾಡಲು ಆರಂಭಿಸಿದ. `ಇದೆಂತ ಹುಚ್ಚಾಟ ನಿಂದು? ಅವನನ್ನು ಗಾಡಿಯಲ್ಲಿ ಹತ್ತಿಸಿದ್ದು. ಛೇ. ಮೊದ್ಲು ಇಳಿಸು..' ಎಂದ.
            `ಇಲ್ಲ ಮಾರಾಯಾ.. ಅವನನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಬಿಡೋಣ. ಅಥವಾ ಯಾವುದಾದರೂ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಬಿಡೋಣ. ಇಲ್ಲಿದ್ದರೆ ಅವನನ್ನು ಹೊಡೆದು ಕೊಂದೇ ಬಿಡುತ್ತಾರೆ. ಸರಿಯಲ್ಲ ಅದು. ಮಾನವೀಯತೆಯೂ ಅಲ್ಲ. ಮೊದಲು ಬೇರೆ ಎಲ್ಲಾದರೂ ಬಿಡೋಣ.. ನಡಿ. ಗಾಡಿ ಚಾಲೂ ಮಾಡು..' ಎಂದ.
              ಅಸಮಧಾನದಿಂದಲೇ ವಿಕ್ರಮ ಗಾಡಿಯನ್ನು ಚಾಲೂ ಮಾಡಿದ. ಗೊಣಗುತ್ತಲೇ ಉಳಿದವರೂ ಹತ್ತಿಕೊಂಡರು. ಉಂಚಳ್ಳಿ ಜಲಪಾತದಿಂದ ಅಂಕುಡೊಂಕಿನ ಹಾದಿಯಲ್ಲಿ ಮರಳಲು ಆರಂಭಿಸಿದರು. `ಏ.. ಏನ್ರೋ.. ನಿಮಗೆ ಮಾಡಲಿಕ್ಕೆ ಬೇರೆ ಕೆಲ್ಸಾ ಇಲ್ಲವಾ? ಹೋಗಿ ಹೋಗಿ ಈ ಕಾಡಿಗೆ ಬಂದು ಕಳ್ಳರನ್ನು ಹುಡುಕಲು ಹೊರಟಿದ್ದೀರಾ? ತಲೆ ಸರಿ ಉಂಟಾ? ಎಚ್ಚರ ತಪ್ಪಿದರೆ ಮರಗಳ್ಳರ ಗುಂಪು ನಿಮ್ಮನ್ನು ಕಡಿದು ಹಾಕಿ ಬಿಡಬಹುದು. ಹುಷಾರು..' ಎಂದು ಇದ್ದಕ್ಕಿದ್ದಂತೆ ಆ ಹುಚ್ಚ ಮಾತನಾಡಿದಾಗ ಒಮ್ಮೆಗೆ ಕಾರಲ್ಲಿದ್ದವರು ಬೆಚ್ಚಿ ಬಿದ್ದರು.

(ಮುಂದುವರಿಯುತ್ತದೆ..)