Sunday, December 2, 2018

ಮಕ್ಕಳೆಂಬ ಆಸ್ತಿ ಜೋಪಾನ ಮಾಡುವುದು ಹೇಗೆ?


ಮಕ್ಕಳು ಮನೆಯ ಆಸ್ತಿ. ದೇಶದ ಸಂಪತ್ತು. ಮಕ್ಕಳಿರಲವ್ವ ಮನೆತುಂಬ ಎಂಬುದು ಹಿರಿಯರ ಆಡುನುಡಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ನಮ್ಮ ನಾಡನ್ನಾಳಿದ ನಾಯಕರುಗಳ ಉದ್ಘೋಷ. ಈಗೀಗ ಮನೆಗಳಲ್ಲಿ ಒಂದೆರಡೇ ಮಕ್ಕಳು. ಮುದ್ದು, ಬೇಕು ಬೇಕೆನ್ನಿಸಿದ್ದನ್ನು ಕೊಡಿಸುವುದು ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಹಾಳಾಗುತ್ತಿದ್ದಾರೆ.
ಮೊಬೈಲ್ ಮೇನಿಯಾ ಜಗತ್ತು ಮಕ್ಕಳ ಪಾಲಿಗೆ ಮಾರಕವಾಗುತ್ತಿದೆ. ಮಕ್ಕಳ ಕ್ರಿಯಾಶೀಲತೆಯನ್ನು, ಚೈತನ್ಯವನ್ನು ಕೊಂದು ಹಾಕುವ ಕೆಲಸ ಮಾಡುತ್ತಿದೆ. ಮೊಬೈಲ್ ಹಿಡಿದು ಕೂರುತ್ತಿರುವ ಮಕ್ಕಳು ಮನೆಗುಬ್ಬಿಯಾಗುತ್ತಿದ್ದಾರೆ. ಬುದ್ಧಿವಂತರ ವಸ್ತು, ಬುದ್ಧಿವಂತಿಕೆಯ ಸಾಧನವಾದ ಮೊಬೈಲ್ ಮಕ್ಕಳನ್ನು ಬುದ್ದುಗಳನ್ನಾಗಿ ಮಾಡುತ್ತಿದೆ. ಮೊಬೈಲ್ ನಲ್ಲಿಯೇ ಸಿಗುವ ಹಲವಾರು ಆಪ್ ಗಳು, ವೆಬ್ ಸೈಟ್ ಗಳಿಂದಾಗಿ ಮಕ್ಕಳು ಬಹುಬೇಗ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಬ್ಲೂ ವೇಲ್ ನಂತಹ ಮಾರಕ ಮೊಬೈಲ್ ಗೇಮ್ ಗಳಿಗೆ ಬಲಿಯಾಗಿ ಜೀವ-ಜೀವನ ಎರಡನ್ನೂ ಕಳೆದುಕೊಂಡವರ ನಿದರ್ಶನ ಸಾಕಷ್ಟಿದೆ. ಮೊಬೈಲ್ ಗೇಮ್ ಗಳು ಮಕ್ಕಳ ಬುದ್ಧಿಶಕ್ತಿಯನ್ನು ತಿಂದು ಹಾಕುತ್ತಿದೆ. ಮೊಬೈಲ್ ಇಲ್ಲದೇ ಮಕ್ಕಳ ಜಗತ್ತೇ ಇಲ್ಲ ಎನ್ನುವ ಹಂತ ತಲುಪಿದ್ದೇವೆ. ಹಲವು ತಂದೆ-ತಾಯಿಯರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆ. ಮಕ್ಕಳ ಕಡೆಗೆ ಗಮನ ಹರಿಸದೇ ಮಕ್ಕಳ ಬದುಕು ಹಾಳಾಗಲು ಕಾರಣರಾಗುತ್ತಿದ್ದಾರೆ. ಮೊಬೈಲ್ ಹೊರತಾದ ಜಗತ್ತು ಇತ್ತು, ಇದೆ ಹಾಗೂ ಮುಂದೆಯೂ ಕೂಡ ಇದ್ದೇ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ತಂದೆ-ತಾಯಿಗಳೇ ಬದಲಾಗಿ. ಮೊಬೈಲ್ ಬದಿಗಿಟ್ಟು ಮಕ್ಕಳಿಗೆ ಹೊಸ ಲೋಕ ತೋರಿಸಿ.

ಮಕ್ಕಳನ್ನು ಕಾಡು ಸುತ್ತಿಸಿ:
ಕಾಡೆಂಬುದು ಬೆರಗಿನ, ಬೆಡಗಿನ ಲೋಕ. ಕಾಡೆಂಬುದು ಕುತೂಹಲದ ಜಗತ್ತು. ಇಂತಹ ಕಾಡನ್ನು ಸುತ್ತಿಸುವ ಅಗತ್ಯ ತ್ವರಿತವಾಗಿ ಆಗಬೇಕಿದೆ. ಮಕ್ಕಳನ್ನು ಕಾಡಿನಲ್ಲಿ ಸುತ್ತಿಸಿ, ಕಾಡಿನಲ್ಲಿನ ಚಿಕ್ಕ ಕೀಟದಿಂದ ಹಿಡಿದು, ದೊಡ್ಡ ಮರಗಳ ವರೆಗೆ, ಮೃಗ, ಖಗ, ಖೇಚರ ಸಂಪತ್ತನ್ನು ಅನಾವರಣಗೊಳಿಸುವ ಅಗತ್ಯವಿದೆ. ಕಾಡಿನ ಕಡೆಗೆ ಇರುವ ಭಯ ಹೋಗಲಾಡಿಸಿ ಕುತೂಹಲವನ್ನು ಹುಟ್ಟು ಹಾಕುವ ತ್ವರಿತ ಕಾರ್ಯ ಆಗಬೇಕಾಗಿದೆ. ಕಾಡು ರಕ್ಷಿಸುವ ಕುರಿತು ಮಕ್ಕಳಿಗೆ ಪಾಟ ಮಾಡಬೇಕಾಗಿದೆ. ಮಕ್ಕಳನ್ನು ಯಾವುದೋ ಸ್ವಿಮ್ಮಿಂಗ್ ಫೂಲ್ ಗಳಲ್ಲಿ ಈಜಲು ಬಿಡದೇ, ನದಿ, ಹಳ್ಳ, ತೊರೆ, ಕೆರೆಗಳಲ್ಲಿ ಈಜಲು ಬಿಡಬೇಕು. ಸರಿಯಾಗಿ ಈಜು ಕಲಿಯುವ ವರೆಗೂ ಮಾರ್ಗದರ್ಶನ ಮಾಡಬೇಕು. ಯಾವುದೇ ಪ್ರವಾಹಕ್ಕೂ ಹೆದರದೇ ಈಜಿ ದಡ ಸೇರುವ ದೃಢತೆಯನ್ನು ಮಕ್ಕಳ ಮನಸ್ಸಿನಲ್ಲಿ ಹುಟ್ಟು ಹಾಕಬೇಕಿದೆ.
ಯಾವುದೋ ಸುಂದರ ಜಲಪಾತವನ್ನೋ, ಬೆಟ್ಟವನ್ನೋ ಹತ್ತಿಸಿ, ಪ್ರಕೃತಿಯ ಕಡೆಗೆ ಒಲವು ಮೂಡಿಸುವ ಕಾರ್ಯವನ್ನು ತಂದದೆ-ತಾಯಿಗಳಲ್ಲದೇ ಬೇರೆಯವರು ಮಾಡುವುದು ಅಸಾಧ್ಯ. ಯಾವುದೋ ಹಣ್ಣಿನ ಮರವನ್ನು ಹತ್ತಿಸಿ, ಮಕ್ಕಳಿಂದಲೆ ಅದರ ಹಣ್ಣುಗಳನ್ನು ಕೊಯ್ಯಿಸಿದರೆ ಆಗ ಮಕ್ಕಳಿಗೆ ಸಿಗುವ ಆನಂದವಿದೆಯಲ್ಲ ಅದನ್ನು ಬಣ್ಣಿಸುವುದು ಅಸಾಧ್ಯ.

ಮೊಬೈಲ್ ತ್ಯಜಿಸಿ, ಆಟ ಆಡಿಸಿ
ಮಕ್ಕಳ ಕೈಯಿಂದ ಮೊಬೈಲ್ ಕೆಳಗಿರಿಸಿ ಬೇರೆ ಬೇರೆ ಆಟವನ್ನು ಆಡಿಸುವ ಅಗತ್ಯವಿದೆ. ಇದರಿಂದಾಗಿ ದೈಹಿಕವಾಗಿ ವ್ಯಾಯಾಮ ಸಸಿಗುತ್ತದೆ. ಮನಸ್ಸಿಗೆ ಚೈತನ್ಯವೂ ಸಿಗಬಹುದಾಗಿದೆ. ಕ್ರಿಕೆಟ್ ಇರಲಿ ಅಥವಾ ಇನ್ಯಾವುದೇ ದೈಹಿಕ ಕ್ರೀಡೆಗಳಿರಲಿ, ಮಕ್ಕಳು ಆಡಲಿ, ಇತರ ಮಕ್ಕಳ ಜತೆ ಸೇರಿ ಬೆರೆಯಲಿ. ತಂಡೆ ಮಾಡಲಿ. ಮಕ್ಕಳನ್ನು ಗದರ ಬೇಡಿ. ಬಯ್ಯಲು ಮುಂದಾಗಬೇಡಿ. ಮಕ್ಕಳ ಬಗ್ಗೆ ಸುಮ್ಮನೇ ಸಿಟ್ಟಾಗಬೇಡಿ. ಅವರನ್ನು ಆಟದ ಅಂಗಳದಲ್ಲಿ ಅವರ ಪಾಡಿಗೆ ಬಿಡಿ.

ಕಥೆ ಹೇಳಿ, ಸಂಸ್ಕೃತಿ ಕಲಿಸಿ
ಹಿಂದೆ ಅಜ್ಜ-ಅಜ್ಜಿಯರು ಕತೆ ಹೇಳುತ್ತಿದ್ದರೆ ಮಕ್ಕಳು ಕುತೂಹಲದಿಂದ, ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದರು. ಕ್ರಮೇಣ ತಂದೆ ತಾಯಿಯರು ಮಕ್ಕಳನ್ನು ಅಜ್ಜ ಅಜ್ಜಿಯರಿಂದ ದೂರ ಮಾಡಿದರು. ಮಕ್ಕಳಿಗೆ ಕಥಾ ಲೋಕದ ಕೊಂಡಿಯೂ ಕಳಚಿತು. ಮಕ್ಕಳಿಗೆ ತ್ತೊಮ್ಮೆ ಕಥೆ ಹೇಳುವ ಅಗತ್ಯವಿದೆ. ಅಜ್ಜ-ಅಜ್ಜಿಯರ ಜತೆ ಮಕ್ಕಳನ್ನು ಬಿಟ್ಟು, ಅವರು ಹೇಳುವ ಪಂಚತಂತ್ರದ, ಕಾಕಣ್ಣ-ಗುಬ್ಬಣ್ಣನ, ಪುಣ್ಯಕೋಟಿಯ ಕಥೆಗಳನ್ನು ಕೇಳುವಂತೆ ಮಾಡುವ ಅಗತ್ಯವಿದೆ. ಹೀಗೆ ಮಾಡಿದಾಗ ಮಾತ್ರ ಮಕ್ಕಳು ಸಂಸ್ಕೃತಯ ಕಡೆಗೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಪುಣ್ಯಕೋಟಿಯಂತಹ ಕಥೆಗಳನ್ನು ಮನಮುಟ್ಟುವಂತೆ ಮಕ್ಕಳಿಗೆ ಹೇಳಿದರೆ ಅದನ್ನು ಕೇಳುವ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರ. ಅಲ್ಲದೇ ಒಳ್ಳೆಯ ರೂಪದಲ್ಲಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ತದೇಕಚಿತ್ತದಿಂದ ಕತೆ ಕೇಳುವ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಏಕಾಗ್ರತೆಯನ್ನುಸಾಧಿಸುತ್ತಾರೆ.

ಪಾಲಕರೇ, ಎಚ್ಚೆತ್ತುಕೊಳ್ಳಿ. ನಿಮ್ಮ ಹಲವು ಧಾವಂತ, ಹಳವಂಡದ ನಡುವೆಯೂ ಮಕ್ಕಳಿಗಾಗಿ ಸಮಯ ಮೀಸಲಿಡಿ. ಅವರಿ ಪ್ರಕೃತಿಯನ್ನು ಪರಿಚಯಿಸಿ, ಕಥೆ ಹೇಳಿ, ಹೊರ ಜಗತ್ತಿನಲ್ಲಿ ಬೆರೆಯುವಂತೆ ಮಾಡಿ. ಸಮಾಜದ ಪರಿಚಯವನ್ನು ಮಾಡಿಕೊಡಿ. ಮೊಬೈಲ್ ಲೋಕದ ಹೊರತಾಗಿ ಬೇರೆಯ ವಿಸ್ಮಯ ಜಗತ್ತಿದೆ ಎನ್ನುವುದನ್ನು ತಿಳಿ ಹೇಳಿ. ಇದೆಲ್ಲವನ್ನು ಅರಿತುಕೊಳ್ಳುವ ಮಕ್ಕಳು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಲ್ಲ. ಮೊಬೈಲ್ ಜಗತ್ತಿನಲ್ಲಿ ಬದುಕು ಹಾಳುಮಾಡಿಕೊಳ್ಳುವ ಮಕ್ಕಳಿಗೆ ತಂದೆ-ತಾಯಿಯರು ದಾರಿ ದೀಪವಾಗಲಿ.

Sunday, November 4, 2018

ಅವರು ರಸ್ತೆಗಳಿಗೆ ಹೆಸರಾಗಲಿಲ್ಲ, ಮನ ಮನಗಳಲ್ಲಿ ನೆಲೆ ನಿಂತರು

ನಾನು ಚಿಕ್ಕವನಾಗಿದ್ದಾಗ, ನಮ್ಮ ಅವಿಭಕ್ತ ಕುಟುಂಬದ ಮನೆಯ ಮಹಡಿಯ ಮೇಲೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕೆಲವು ನಾಯಕರ ಭಾವಚಿತ್ರಗಳು ಕಂಬಗಳಿಗೆ ತೂಗು ಹಾಕಲ್ಪಟ್ಟಿದ್ದವು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಭೋಸ್ ಹೀಗೆ ಹಲವು ನಾಯಕರುಗಳ ಚಿತ್ರಗಳು ಅಲ್ಲಿದ್ದವು. ಅಂತಹ ನಾಯಕರ ಸಾಲಿನಲ್ಲಿದ್ದ ಇನ್ನೊಂದು ಚಿತ್ರ ಸರ್ದಾರ ವಲ್ಲಭ ಭಾಯ್ ಪಟೇಲರದ್ದು.
ಆಜಾದ್, ಭಗತ್, ನೇತಾಜಿ ಮುಂತಾದ ಸ್ವಾತಂತ್ರ್ಯದ ಕಿಡಿಗಳ ಚಿತ್ರಗಳನ್ನು ನೋಡಿದಾಗಲೆಲ್ಲ ನಮಗೆ ಅವರ ಕತೆಗಳು ನೆನಪಾಗುತ್ತಿದ್ದವು. ಬಹುತೇಕ ಯುವ ಭಾವಚಿತ್ರಗಳು ಮನಸ್ಸನ್ನು ಸೂಜಿಗಲ್ಲಿನಂತೆಯೇ ಸೆಳೆಯುತ್ತಿದ್ದವು. ಆದರೆ ಈ ಸಾಲಿನಲ್ಲಿ ವಯಸ್ಸಾಗಿದ್ದ ಸರ್ದಾರ ವಲ್ಲಭ್ ಭಾಯ್ ಪಟೇಲರ ಚಿತ್ರವಿದ್ದುದು ನನ್ನ ಮನಸ್ಸಿನಲ್ಲಿ ಅಚ್ಚರಿಯನ್ನು ಮೂಡಿಸಿ, ನನ್ನ ಅಜ್ಜನ ಬಳಿ ಕೇಳಿಯೂ ಇದ್ದೆ. ಆಗ ಪಟೇಲರ ಕುರಿತು ಸುದೀರ್ಘ ವಿವರಣೆ ನೀಡಿದ್ದ ಅಜ್ಜ ಭಾರತದ ಏಕೀಕರಣದ ರೂವಾರಿಯ ಕುರಿತು ಹೆಮ್ಮೆ ಮೂಡುವಂತೆ ಮಾಡಿದ್ದರು. ಅಂದಿನಿಂದ ಪಟೇಲರ ಕುರಿತು ಕುತೂಹಲ ಇಮ್ಮಡಿಸುತ್ತಲೇ ಇದೆ. ಅಂದ ಹಾಗೇ ನಮ್ಮ ಮನೆಯ ಮಹಡಿಯ ಯಾವುದೇ ಮೂಲೆಯಲ್ಲಿಯೂ ಕೂಡ ಜವಾಹರ ಲಾಲ್ ನೆಹರೂ ಅವರ ಚಿತ್ರಗಳಿರಲಿಲ್ಲ.
ನನ್ನ ಅಜ್ಜ ಕಾಂಗ್ರೆಸ್ ನಲ್ಲಿ ನಂಬಿಕೆ ಇಟ್ಟವರಾಗಿದ್ದರು. ಬಹುಶಃ ಚಿಕ್ಕಂದಿನಿಂದಲೂ ಕಾಂಗ್ರೆಸ್ ನ ಕಾರ್ಯಕರ್ತನಾಗಿಯೋ ಅಥವಾ ಇನ್ಯಾವುದೋ ರೀತಿಯಿಂದಲೋ ಕೆಲಸ ಮಾಡಿರಬೇಕು. ಆದರೆ ಅಂತಹ ಅಜ್ಜ ಕಾಂಗ್ರೆಸ್ ಅಧಿನಾಯಕರಾದ, ಭಾರತದ ಪ್ರಧಾನ ಮಂತ್ರಿಗಳಾದ, ಮಕ್ಕಳ ಪಾಲಿಗೆ ಪ್ರೀತಿಯ ಚಾಚಾ ಆಗಿ ಹೊರಹೊಮ್ಮಿದ ಪಂಡಿತ ಜವಾಹರ ಲಾಲ್ ನೆಹರೂ ಅವರ ಪೋಟೋವನ್ನು ಹಾಕಿರಲಿಲ್ಲ. ಉಳಿದೆಲ್ಲ ನಾಯಕರ ಚಿತ್ರಗಳನ್ನು ಹಾಕಿದ ಕಾಂಗ್ರೆಸ್ಸಿಗ ಅಜ್ಜ ನೆಹರೂ ಪೋಟೋವನ್ನು ಹಾಕದೇ ಬಿಟ್ಟಿದ್ಯಾಕೆ ಎನ್ನುವ ಅಂಶ ಆಗ ಕಾಡದಿದ್ದರೂ, ಇತ್ತೀಚೆಗೆ ಆಲೋಚನೆಗೆ ಹಚ್ಚಿತ್ತು. ಕ್ರಾಂತಿಕಾರಿಗಳೆನ್ನಿಸಿಕೊಂಡು, ಮಂದಗಾಮಿಗಳ ಮಾರ್ಗಕ್ಕಿಂತ ಹೊರತಾಗಿ ದೇಶವನ್ನು ಮುನ್ನಡೆಸಲು ಯತ್ನಿಸಿ, ತಮ್ಮದೇ ತೀವ್ರಗಾಮಿ ಆಲೋಚನೆ ಹಾಗೂ ಮಾರ್ಗಗಳ ಮೂಲಕ ಆಂಗ್ಲರ ದಾಸ್ಯ ಕಿತ್ತೊಗೆಯಲು ಮುಂದಾದ ಭಾರತದ ಕುದಿಬಿಂದುಗಳ ಪೋಟೋಗಳು ಸ್ಫೂರ್ತಿಯ ಸೆಲೆಯಾಗಿ ನಮ್ಮ ಮನೆಯ ಮಹಡಿಯ ಮೇಲೆ ನೆಲೆ ನಿಂತಿದ್ದವು. ಅವುಗಳ ಜತೆಯಲ್ಲಿ ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸಲು ಶ್ರಮಪಟ್ಟು, ಸಾಮ-ಧಾನ-ಬೇಧ ಹಾಗೂ ದಂಡ ಮಾರ್ಗದಿಂದ ಏಕ ಭಾರತವನ್ನು ಸೃಷ್ಟಿ ಮಾಡಿದ ಸರ್ದಾರರ ಪೋಟೋ ಕೂಡ ಗಂಭೀರವಾಗಿ ನೆಲೆನಿಂತಿತ್ತು. ಮುಖ ಸುಕ್ಕುಗಟ್ಟಿದ್ದರೂ ಅವರ ಕಣ್ಣುಗಳಲ್ಲಿನ ಕಾಂತಿ, ತೇಜಸ್ಸು, ದೃಢತೆ ಎಂತವರನ್ನೂ ಕೂಡ ಸೆಳೆಯುವಂತಿತ್ತು. ನನ್ನಂತಹ ಹತ್ತಾರು ಮಕ್ಕಳು ನಮ್ಮ ಮನೆಯ ಮಹಡಿಯನ್ನೇರಿದಾಗಲೆಲ್ಲ ಕುತೂಹಲದಿಂದ ಈ ಎಲ್ಲ ಪೋಟೋಗಳ ಕುರಿತು ಕೇಳಿದಾಗಲೆಲ್ಲ ಅಜ್ಜ ಅಷ್ಟೇ ಸಹನೆಯಿಂದ ವಿವರಿಸುತ್ತಿದ್ದುದು ಕಣ್ಣ ಮುಂದಿದೆ.
ನೆಹರೂ ಹೊರತು ಪಡಿಸಿ ಉಳಿದ ನಾಯಕರಿಗೆ ನನ್ನ ಅಜ್ಜನಂತಹ ಅದೆಷ್ಟೋ ದೇಶವಾಸಿಗಳು ವಿಶೇಷ ಸ್ಥಾನವನ್ನೇ ಕೊಟ್ಟುಬಿಟ್ಟಿದ್ದರು. ನೆಹರೂ ದೇಶವಾಸಿಗಳ ಮನಸ್ಸಿನಲ್ಲಿ ನೆಲೆ ನಿಲ್ಲುವುದು ಹಾಗಿರಲಿ, ಕೋಣೆಯ ಮೂಲೆಯೊಂದರಲ್ಲಿ ಪೋಟೋ ರೂಪದಲ್ಲಿ ನಿಲ್ಲುವುದಕ್ಕೂ ನಾಲಾಯಕ್ ಎನ್ನಿಸುವಂತಹ ಹಂತ ತಲುಪಿದ್ದರು. ನೆಹರೂ ಅಪ್ಪಟ ದೇಶಭಕ್ತ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ಯಾವ ಭಾವನೆಯನ್ನು ಹೊಂದಿದ್ದರು ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆಯಷ್ಟೇ.

--------

ಭಾರತದ ಸ್ವಾತಂತ್ರ್ಯದ ನಂತರ ಹಲವು ಭಾರತೀಯ ಮನಸ್ಸುಗಳು ಸರ್ದಾರ ವಲ್ಲಭ ಭಾಯ್ ಪಟೇಲರೇ ಮುಂದಿನ ಪ್ರಧಾನಿಯಾಗಲಿ ಎಂಬ ಭಾವನೆಯನ್ನು ಹೊಂದಿತ್ತು. ಆದರೆ ಮಹಾತ್ಮಾಗಾಂಧಿಯವರ ಹಠದಿಂದಾಗಿ ಅವರ ಪ್ರೀತಿಪಾತ್ರ ನೆಹರೂ ಪ್ರಧಾನಿಯಾದ ವಿವರಗಳೆಲ್ಲ ಪದೇ ಪದೆ ಇತಿಹಾಸದ ಪುಟಗಳಲ್ಲಿ ಇಣುಕುತ್ತವೆ. ಅದರ ಜತೆ ಜತೆಯಲ್ಲಿಯೇ ಸರ್ದಾರ್ ಪಟೇಲರು ಗೃಹ ಸಚಿವರಾದರು, ದೇಶದ ತುಂಬೆಲ್ಲ ಚಿಕ್ಕ ಚಿಕ್ಕ ರೂಪದಲ್ಲಿ ಹರಿದು ಹಂಚಿಕೊಂಡು, ತಮ್ಮದೇ ಸ್ವತಂತ್ರ ಅಸ್ತಿತ್ವ ಎಂದು ಹೇಳಲು ಹವಣಿಸುತ್ತಿದ್ದ ರಾಜ್ಯಗಳನ್ನು, ಸಂಸ್ಥಾನಗಳನ್ನೆಲ್ಲ ಒಗ್ಗೂಡಿಸಿದರು ಎಂಬುದನ್ನೆಲ್ಲ ಓದಿ ತಿಳಿದುಕೊಂಡಿದ್ದೇವೆ.
ಸ್ವಾತಂತ್ರ ಪೂರ್ವದಲ್ಲಿ ಆಜಾದ್ ಇರಲಿ, ಭಗತ್ ಸಿಂಗ್ ಇರಲಿ ಅಥವಾ ನೇತಾಜಿ ಅವರೇ ಇರಲಿ, ಈ ಧೀಮಂತ ನಾಯಕರುಗಳು ಮಾಡಿದ ಮಹಾನ್ ಕಾರ್ಯದ ಹಾಗೆಯೇ ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೈಗೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ. ಬ್ರಿಟೀಷರ ಎದೆ ನಡುಗಿಸಲು ಕ್ರಾಂತಿ ಮಾರ್ಗ ಹಿಡಿದ ಆಜಾದ್, ಭಗತ್, ನೇತಾಜಿಯವರ ಮಾರ್ಗದಷ್ಟೇ, ದೇಶದಲ್ಲೇ ಇರುವ ಕಿರು ಸಂಸ್ಥಾನಗಳನ್ನು ಮನವೊಲಿಸಿ ಬೃಹದ್ ಭಾರತ ಸೃಷ್ಟಿ ಮಾಡಿದ ಸರ್ದಾರರ ಕಾರ್ಯವೂ ಮಹತ್ವದ್ದೆನ್ನಿಸುತ್ತದೆ.
ಸರ್ದಾರ್ ವಲ್ಲಭ್ ಭಾಯ್ ಪಟೇಲ್. ಭಾರತ ಕಂಡ ಮಹಾನ್ ನಾಯಕರಲ್ಲೊಬ್ಬರು. ಭಾರತದ ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡವರು. ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ, ನಿಜವಾದ ಅರ್ಥದಲ್ಲಿ ಒಬ್ಬ ಪ್ರಧಾನಿ ಮಾಡುವ ಕಾರ್ಯಗಳಿಗಿಂತ ಮಹತ್ತರ ಕಾರ್ಯವನ್ನು ನಿರ್ವಹಿಸಿದವರು. ಅರಾಜಕತೆ ಸೃಷ್ಟಿಯಾಗಿ, ಒಂದು ಭಾರತದೊಳಕ್ಕೆ ನೂರಾರು ಕಿರು ದೇಶಗಳು ಹುಟ್ಟುವ ಸಾಧ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ಚಿವುಟಿ ಹಾಕಿ ಏಕತೆಯನ್ನು ಸೃಷ್ಟಿ ಮಾಡಿದವರು.
ವಲ್ಲಭ್ ಭಾಯ್ ಪಟೇಲ್ ಮಾಡಿದ್ದು ಒಂದೆರಡಲ್ಲ ಬಿಡಿ. ಮೈಸೂರು ಸಂಸ್ಥಾನವನ್ನು ಮನವೊಲಿಸಿ ಭಾರತ ಒಕ್ಕೂಟ ಸೇರುವಂತೆ ಮಾಡಿದರು. ಜುನಾಗಡದ ನವಾಬನನ್ನು ಓಡಿಸಿ, ಆ ಪ್ರದೇಶವನ್ನು ಭಾರತದ ಪಾಲಾಗುವಂತೆ ಮಾಡಿದರು, ಹೈದರಾಬಾದ್ ನಿಜಾಮ ಉದ್ಧಟತನ ತೋರಿದಾಗ ಆತನ ಕಿವಿ ಹಿಂಡಿ, ಯುದ್ಧ ಸಾರಿ ಹೆಡೆಮುರಿ ಕಟ್ಟಿ ಸೋತು ಶರಣಾಗುವಂತೆ ಮಾಡಿದ್ದು ಸರ್ದಾರ್ ವಲ್ಲಭ ಭಾಯ್ ಪಟೇಲ್.
ನನ್ನ ಭಾರತ ಏಕ ಭಾರತವಾಗಿರಬೇಕು. ಶ್ರೇಷ್ಟ ಭಾರತವಾಗಿರಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದ ವಲ್ಲಭ್ ಭಾಯ್ ಪಟೇಲರನ್ನು ಜನರೇ ಪ್ರೀತಿಯಿಂದ ಸರ್ದಾರ ಎಂದು ಕರೆದರು. ಉಕ್ಕಿನ ಮನುಷ್ಯ ಎಂಬ ಬಿರುದನ್ನು ನೀಡಿದರು. ಆದರೆ ಇಂತಹ ಧೀಮಂತ, ನಿಸ್ವಾರ್ಥ ನಾಯಕನನ್ನೂ ತೆರೆಯ ಮರೆಗೆ ಸರಿಸುವ ಯತ್ನ ಕೈಗೊಂಡಿದ್ದು ನೆಹರೂ ಪಟಾಲಂ. ದಿನದಿಂದ ದಿನಕ್ಕೆ ದೇಶದಲ್ಲೆಲ್ಲ ದೊಡ್ಡ ಪ್ರಭೆಯಾಗುತ್ತ ಸಾಗುತ್ತಿದ್ದ ಸರ್ದಾರ ವಲ್ಲಭ ಭಾಯ್ ಪಟೇಲರನ್ನು ತೆರೆ ಮರೆಗೆ ಸರಿಸುವ ಯತ್ನವನ್ನು ಕಾಂಗ್ರೆಸ್ಸು ಕೈಗೊಂಡಿದ್ದಂತೂ ಸುಳ್ಳಲ್ಲ ಬಿಡಿ. ಎಲ್ಲಿಯೂ ಅವರ ಹೆಸಸರಿರಬಾರದು ಎಂದುಕೊಂಡ ಕಾಂಗ್ರೆಸ್ ಪಟೇಲರನ್ನು ಕಡೆಗಣಿಸಿಬಿಟ್ಟಿತು.
ಸರ್ದಾರ್ ಪಟೇಲರು ಯಾವುದೇ ಬೀದಿಗೆ ಹೆಸರಾಗಲಿಲ್ಲ. ವಿಮಾನ ನಿಲ್ದಾಣಗಳಿಗೆ, ಕಾಲೇಜುಗಳಿಗೆ, ವಿಶ್ವವಿದ್ಯಾಲಯಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳಿಗೆ ತಮ್ಮ ಹೆಸರನ್ನಿಡಿ ಎಂದು ಹೇಳಲಿಲ್ಲ. ಕಂಡ ಕಂಡಲ್ಲಿ ಪ್ರತಿಮೆಗಳಾಗಲಿಲ್ಲ. ವೃತ್ತಗಳಿಗೆ ಹೆಸರಾಗಲಿಲ್ಲ. ಜನರ ಮನಸ್ಸಿನ ಮೇಲೆ ತಮ್ಮ ಹೆಸರನ್ನುಒತ್ತಡದ ರೂಪದಲ್ಲಿ ನೆಲೆ ನಿಲ್ಲುವಂತೆ ಮಾಡಲಿಲ್ಲ. ಮಕ್ಕಳನ್ನು ಕರೆದು ಚಾಚಾ ಎಂದು ಹೇಳಿಸಲಿಲ್ಲ. ತಮ್ಮದೇ ಜನ್ಮದಿನ, ಪುಣ್ಯತಿಥಿಗಳಂದು ದೇಶಕ್ಕೆ ರಜಾ ನೀಡಿ, ಉತ್ಸವದ ರೂಪದಲ್ಲಿ ಆಚರಣೆ ಮಾಡಿ ಎನ್ನಲಿಲ್ಲ. ದೇಶದ ಸಾರ್ವಭೌಮತ್ವ, ಐಕ್ಯತೆ ವಿಷಯ ಬಂದಾಗ ರಾಜಿ ಮಾಡಿಕೊಳ್ಳಲಿಲ್ಲ. ದೃಢ ನಿರ್ಧಾರ ತಳೆಯಲು ಹಿಂದೆ ಮುಮದೆ ಯೋಚಿಸಲಿಲ್ಲ. ತನ್ನಿಂದ ತಾನೇ ಪಟೇಲರು ಜನರ ಮನದಲ್ಲಿ ಸದಾ ನೆಲೆ ನಿಂತರು. ಭಾರತದ ಜನರು ಪಟೇಲರನ್ನು ಗುಜರಾತಿ ಎಂದುಕೊಳ್ಳಲಿಲ್ಲ. ಉತ್ತರ ಭಾರತೀಯ ಎಂದೂ ಕರೆಯಲಿಲ್ಲ. ಬದಲಾಗಿ ಅವರು ತಮ್ಮದೇ ಮನೆಯವರು ಎಂದುಕೊಂಡರು. ಮನಸ್ಸಿನಲ್ಲಿ ಉಕ್ಕಿನ ಮನುಷ್ಯನಿಗೆ ಸ್ಥಾನ ಕೊಟ್ಟರು.
ಭಾರತದ್ದೇ ಕೆಲವು ನಾಯಕರು ತಮ್ಮದೇ ಹೆಸರನ್ನು ಹೆಚ್ಚು ಹೆಚ್ಚು ಮೆರೆಸಿಕೊಳ್ಳುವ ಯತ್ನ ನಡೆಸಿದ್ದಾರೆ. ಹೊಟೆಲುಗಳಿಗೆ, ಕ್ಯಾಂಟೀನುಗಳಿಗೆ, ವಿದ್ಯಾರ್ಥಿಗಳ ಸಹಾಯ ಧನಕ್ಕೆ, ಎದೆ ಸೀಳಿದರೆ ಕ್ರೀಡೆಯ ಕುರಿತು ಲವ ಲೇಶವೂ ಗೊತ್ತಿಲ್ಲದಿದ್ದರೂ, ಕ್ರೀಡಾಲೋಕದ ಬಹುಮಾನಗಳಿಗೆ ಅಷ್ಟೇ ಏಕೆ ವಿದ್ಯುತ್ ಸಂಪರ್ಕ ಯೋಜನೆಗಳಿಗೆ, ಶೌಚಾಲಯ ಯೋಜನೆಗಳಿಗೂ ತಮ್ಮ ಹೆಸರುಗಳನ್ನು ಇರಿಸಿಕೊಂಡ ನಾಯಕರಿದ್ದಾರೆ. ಕೆಲಸ ನಾಸ್ತಿ, ಹೆಸರು ಜಾಸ್ತಿ ಎಂದು ಮೆರೆದಾಡಿದವರ ನಡುವೆ ಸರ್ದಾರ ಪಟೇಲರು ವಿಭಿನ್ನವಾಗಿ ನಿಲ್ಲುತ್ತಾರೆ. ಜನನಾಯಕರಾಗೆ ಮೆರೆದಾಡುತ್ತಾರೆ.
ಕೊನೆಗೂ ಸರ್ದಾರ್ ವಲ್ಲಭ ಭಾಯ್ ಪಟೇಲರದ್ದೊಂದು ಭವ್ಯ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಪಟೇಲರು ಜನಿಸಿದ ನಾಡಿನಲ್ಲೇ, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎನ್ನುವ ಖ್ಯಾತಿಯೊಂದಿಗೆ ಜಗತ್ತಿನ ಎದುರು ಅನಾವರಣಗೊಂಡಿದೆ. ಇಂತಹ ಪ್ರತಿಮೆ ನಿರ್ಮಾಣದ ಸಂದರ್ಭದಲ್ಲಿಯೂ ಕಾಂಗ್ರೆಸ್ಸು ಮತ್ತೊಮ್ಮೆ ಪಟೇಲರಿಗೆ ಅವಮಾನ ಮಾಡುವ ಯತ್ನವನ್ನೇ ನಡೆಸಿತು. ಅವರ ಪ್ರತಿಮೆ ನಿರ್ಮಾಣ ಅನಗತ್ಯ ಎಂದು ಹುಯ್ಯಲಿಟ್ಟಿತು. ಪಟೇಲರ ಪ್ರತಿಮೆ ಪೋಟೋ ಜತೆ ಯಾವುದೋ ದೇಶದ ಆಹಾರಕ್ಕಾಗಿ ಪರಿತಪಿಸುತ್ತಿರುವ ಮಕ್ಕಳ ಪೋಟೋವನ್ನು ಅಂಟಿಸಿ, ತಮ್ಮೊಳಗಿನ ವಿಕೃತಿಯನ್ನು ಮೆರೆಯುವ ಯತ್ನ ಕೈಗೊಂಡಿತು. ಆದರೆ ಜನಸಾಮಾನ್ಯರು ತಲೆ ಕೆಡಿಸಿಕೊಳ್ಳಲಿಲ್ಲ ಬಿಡಿ.
ಏಕತೆಯ ಪ್ರತಿಮೆ ಜತೆ ಜತೆಯಲ್ಲಿ ಮತ್ತೊಮ್ಮೆ ಸರ್ದಾರ ವಲ್ಲಭ ಭಾಯ್ ಪಟೇಲರನ್ನು ಭಾರತೀಯರು ನೆನಪು ಮಾಡಿಕೊಂಡು, ಮನದಲ್ಲಿ ಮೌನವಾಗಿ ಪೂಜಿಸುವ ಮೂಲಕ ಮಹಾ ನಾಯಕನಿಗೆ ಗೌರವ ಸಮರ್ಪಣೆ ಮಾಡಿದ್ದು ವಿಶೇಷ.

Thursday, November 1, 2018

ಗಡಿನಾಡ ಕನ್ನಡ ಶಾಲೆ ; ಇನ್ನೂ ಮುಕ್ತವಾಗಲಿಲ್ಲ ಸಮಸ್ಯೆ

(ಗುರುಗಳು, ಹಿರಿಯ ಸಾಹಿತಿಗಳೂ, ರಾಯಲ ಸೀಮೆಯ ನೆತ್ತರ ಇತಿಹಾಸವನ್ನು ಕನ್ನಡ ನಾಡಿನ ಓದುಗ ಅಭಿಮಾನಿಗಳ ಎದುರು ತೆರೆದಿಟ್ಟ ಕುಂ. ವೀರಭದ್ರಪ್ಪ ಅವರನ್ನು ಮತ್ತೆ ಮಾತಾಡಿಸುವ ಅವಕಾಶ ಸಿಕ್ಕಿತ್ತು. ಹಿಂದೆ ಶಿರಸಿಯಲ್ಲಿ ಇದ್ದಾಗ ಅವರ ಜತೆ ಒಂದೆರಡು ದಿನ ಉಳಿದಿದ್ದೆ. ಮತ್ತೊಮ್ಮೆ ಆ ದಿನ ನೆನಪಿಸಿ ಅವರನ್ನು ಮಾತನಾಡಿಸಿದೆ. ಖುಷಿಯಿಂದಲೇ ಮಾತನಾಡಿದರು. ಆಂಧ್ರ ಪ್ರದೇಶದ ಕನ್ನಡ ಶಾಲೆಗಳ ಕುರಿತು ಮಾಹಿತಿ ನೀಡಿದರು. ಅವರ ಮಾತುಗಳು ಇಲ್ಲಿದೆ. ಅಂದ ಹಾಗೆ ಇದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

ಗಡಿನಾಡ ಕನ್ನಡ ಶಾಲೆಗಳ ಪರಿಸ್ಥಿತಿ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಹಲವಾರು ಕಾರಣಗಳಿಂದಾಗಿ ಗಡಿನಾಡ ಕನ್ನಡ ಶಾಲೆಗಳು ಒದ್ದಾಾಡುತ್ತಿವೆ. ಅಧ್ಯಾಪಕರು, ಬೋಧಕ ಸಿಬ್ಬಂದಿ, ಕಟ್ಟಡ, ಶಿಕ್ಷಣ ಸಾಮಗ್ರಿಗಳ ಕೊರತೆ ಹೀಗೆ ಹಲವಾರು ಇಲ್ಲಗಳ ನಡುವೆಯೇ ಗಡಿನಾಡಿನಲ್ಲಿ ಕನ್ನಡ ಪ್ರೇಮ ಜೀವಂತವಾಗಿದೆ. ಕನ್ನಡ ಪ್ರೇಮಿಗಳ ಒತ್ತಾಸೆ ಫಲವಾಗಿ ಈ ಶಾಲೆಗಳು ಉಸಿರು ಹಿಡಿದುಕೊಂಡಿವೆ. ಇಂತಹ ಶಾಲೆಗಳ ಉಳಿವಿಗಾಗಿ ಕರ್ನಾಟಕ ಸರ್ಕಾರದ ಸಹಾಯ ಹಸ್ತ ಅತ್ಯಗತ್ಯವಾಗಿದೆ.
ಕುಂ. ವೀರಭದ್ರಪ್ಪ ಕನ್ನಡದ ಸಾಹಿತ್ಯ ಲೋಕದ ಹೆಸರಾಂತ ಬರಹಗಾರರು. ಹಲವು ಪುಸ್ತಕಗಳ ಮೂಲಕ ಕನ್ನಡಿಗರ ಮನಸ್ಸನ್ನು ವೀರಭದ್ರಪ್ಪ ಗೆದ್ದಿದ್ದಾರೆ. ಕಾದಂಬರಿಗಳ ಮೂಲಕ ನೆಲೆ ನಿಂತಿದ್ದಾರೆ. ರಾಯಲಸೀಮೆಯ ಕೆಂಪು ನೆಲದ ಇತಿಹಾಸವನ್ನು, ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಠೊಣ್ಣಿ ಹಾಗೂ ಡೋಮನ ಮೂಲಕ ಹುಲುಲಿ ಹಳ್ಳದ, ಆಂಧ್ರದ ಕರ್ನೂಲಿನ ಬದುಕನ್ನು ತೆರೆದಿಟ್ಟಿದ್ದಾರೆ. ಕುಂ ವೀರಭದ್ರಪ್ಪ ಕರ್ಮಭೂಮಿ ಆಂದ್ರಪ್ರದೇಶ. ರಾಯಲಸೀಮೆಯಲ್ಲಿನ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಾಗಿ ಕನ್ನಡದ ಉಸಿರನ್ನು ಜೀವಂತವಾಗಿ ಇರಿಸಿದವರು.
ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಅಧ್ಯಾಪಕರಾಗಿ ನೇಮಕವಾದವರು ವೀರಭದ್ರಪ್ಪನವರು. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ವಂದವಾಗಿಲಿಯಲ್ಲಿ 11 ವರ್ಷ, ಗೂಳ್ಯಂನಲ್ಲಿ 14 ವರ್ಷ ಹಾಗೂ ಅನಂತಪುರ ಜಿಲ್ಲೆಯ ಹಿರೇಹಾಳು ಗ್ರಾಮದಲ್ಲಿ 11 ವರ್ಷ ಸೇರಿ 36 ವರ್ಷಗಳ ಕಾಲ ತೆಲುಗರ ನಾಡಿನಲ್ಲಿ ಕನ್ನಡ ಬೋಧನೆಯ ಕೆಲಸವನ್ನು ಮಾಡಿದವರು ಕುಂ. ವೀರಭದ್ರಪ್ಪನವರು. ತೆಲುಗರ ನಾಡಿನಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ, ಪ್ರತಿಭಟನೆಗಳನ್ನು ಕೈಗೊಂಡವರು. ಮನೆ ಮನೆಗಳಿಗೆ ತೆರಳಿ, ಕನ್ನಡಿಗರ ಬಳಿ ಸಹಾಯ ಯಾಚಿಸಿ ಗೂಳ್ಯಂನಲ್ಲಿ ಪ್ರೌೌಢಶಾಲೆ ನಿರ್ಮಾಣ ಮಾಡಿದವರು.
ವೀರಭದ್ರಪ್ಪನವರೇ ಹೇಳುವಂತೆ ಆಂಧ್ರಪ್ರದೇಶದ ಕನ್ನಡ ಶಾಲೆಗ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅವರು ಅಧ್ಯಾಪಕರಾಗಿ ಕರ್ನೂಲಿನ ವಂದವಾಗಿಲಿಯಲ್ಲಿ ವೃತ್ತಿ ಆರಂಭಿಸಿದಾಗ ಇದ್ದ ವಿದ್ಯಾರ್ಥಿಗಳು 11. ತದನಂತರದಲ್ಲಿ ಅವರು 300ಕ್ಕೂ ಅಧಿಕ ಕನ್ನಡ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ, ಅವರ ಬದುಕನ್ನು ರೂಪಿಸಿಕೊಟ್ಟಿದ್ದಾರೆ. ಗೂಳ್ಯಂನಲ್ಲಿ ಕುಂ.ವಿ ಅವರು ತಮ್ಮದೇ ಸಮಾನಮನಸ್ಕ ಮೂವರು ಶಿಕ್ಷಕರ ಜತೆಗೂಡಿ ಕನ್ನಡ ಪ್ರೇಮಿಗಳು, ಕನ್ನಡ ಭಾಷಿಕರ ಜತೆಗೂಡಿ ಪ್ರೌಢಶಾಲೆ ಕಟ್ಟಿದ್ದಾರೆ. ಈ ಪ್ರೌಢಶಾಲೆ ಆರಂಭದ 7-8 ವರ್ಷ ಸ್ವಲ್ಪ ಶ್ರಮವನ್ನು ಬೇಡಿದರೂ, ಇದೀಗ ಬಹಳ ಚನ್ನಾಗಿ ನಡೆಯುತ್ತಿದೆ.
ಆಂದ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಭಾಷಾವಾರು ಪ್ರಾಾಂತ್ಯಗಳ ವಿಂಗಡಣೆಗೂ ಮೊದಲು ಬಳ್ಳಾರಿ ಜಿಲ್ಲೆಯದೇ ಭಾಗವಾಗಿದ್ದ ಅಪ್ಪಟ ಕನ್ನಡಿಗ ಪ್ರದೇಶಗಳೆಲ್ಲ ಇದೀಗ ಆಂಧ್ರದಲ್ಲಿ ಸೇರಿ ಹೋಗಿದೆ. ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿ 300-400ರಷ್ಟಿದ್ದ ಕನ್ನಡ ಶಾಲೆಗಳು ಇದೀಗ 80-90ಕ್ಕೆ ಇಳಿದಿದೆ. ಆಂಧ್ರದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಬಹಳ ಇಳಿಕೆಯಾಗಿದೆ. ಇಳಿಯುತ್ತಲೇ ಇದೆ. ನಾನು ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಶಿಕ್ಷಕನಾಗಿ ನೇಮಕವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಆ ರಾಜ್ಯ ಸರ್ಕಾರ ಕನ್ನಡ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಸಾವಿರಾರು ಶಿಕ್ಷಕರ ನೇಮಕ ಆಗಬೇಕಿದೆ ಎಂದು ವೀರಭದ್ರಪ್ಪನವರು ಆಂದ್ರದ ಶಾಲೆಗಳ ಹಾಗೂ ಅಲ್ಲಿನ ಸರ್ಕಾರಗಳ ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ.
ಭಾಷಾವಾರು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಭಾಷಾವಾರು ಸಮಿತಿಯನ್ನೇನೋ ರಚನೆ ಮಾಡಲಾಗಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಯಾವ ಪ್ರದೇಶದಲ್ಲಿ ಯಾವ ಭಾಷೆಯ ಜನರು ಶೇ.60ಕ್ಕಿಿಂತ ಅಧಿಕವಾಗಿದ್ದಾರೋ, ಅಂತಹ ಸ್ಥಳಗಳಲ್ಲಿ ಆಯಾಯಾ ಭಾಷೆಗಳಲ್ಲಿಯೇ ಸುತ್ತೋಲೆ ಹೊರಡಿಸಬೇಕೆಂಬ ನಿಯಮವಿದೆ. ಆದರೆ ಆಂಧ್ರದ ಕನ್ನಡ ಬಹುಸಂಖ್ಯಾತ ಪ್ರದೇಶದಲ್ಲಿ ಇದು ಸಮರ್ಪಕವಾಗಿ ಅನುಷ್ಠಾಾನಗೊಳ್ಳುತ್ತಿಲ್ಲ. ಆಂಧ್ರದ ಕನ್ನಡ ಶಾಲೆಗಳಲ್ಲಿ ಬೋಧನೆ ಮಾಡಲು ಉತ್ಸಾಹಿಗಳಿದ್ದಾರೆ. ಆದರೆ ಕೆಲಸ ಮಾಡಲು ಬೇಕಾದ ಪೀಠೋಕರಣಗಳು, ಪಾಠೋಪಕರಣಗಳನ್ನು ಸರ್ಕಾರ ನೀಡುತ್ತಿಲ್ಲ. ಇತ್ತೀಚೆಗೆ ಆಂಧ್ರ ಸರ್ಕಾರ ಪುಸ್ತಕಗಳನ್ನೇನೋ ನೀಡುತ್ತಿದೆ. ಆದರೆ ಶಾಲೆಗೆ ಕಟ್ಟಡಗಳೇ ಸಮರ್ಪಕವಾಗಿಲ್ಲ ಎಂದು ವೀರಭದ್ರಪ್ಪ ಅಲ್ಲಿನ ಶಾಲೆಗಳ ದುಸ್ಥಿತಿಯನ್ನು ತೆರೆದಿಟ್ಟರು.
ಎರಡು ದೊಡ್ಡ ಕೋಣಗಳ ಕಾದಾಟದ ನಡುವೆ ಸಣ್ಣ ಗಿಡ ಬಲಿ ಆಯ್ತು ಎಂಬ ಅವಸ್ಥೆ ಗಡಿನಾಡ ಕನ್ನಡಿಗರದ್ದಾಗಿದೆ. ಎರಡು ರಾಜ್ಯಗಳ ಗುದ್ದಾಟದ ನಡುವೆ ಮುಗ್ಧ ಮಕ್ಕಳು ಒದ್ದಾಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ಹೊರ ರಾಜ್ಯಗಳ ಭಾಷಿಕರಿಗೆ ಕನ್ನಡ ನಾಡಿನಲ್ಲಿ ಎಲ್ಲ ಸೌಲಭ್ಯ ನೀಡಲಾಗುತ್ತದೆ. ಆದರೆ ಗಡಿನಾಡ ಶಾಲೆಗಳಲ್ಲಿ ಓದುತ್ತಿರುವವರಿಗೆ ಆ ರಾಜ್ಯದವರು ಹಾಗಿರಲಿ, ಕರ್ನಾಟಕದವರು ಸಹಾಯ ಮಾಡುತ್ತಿಲ್ಲ. ಆ ಶಾಲೆಗಳ ಮಕ್ಕಳು ಉಚಿತ ಪುಸ್ತಕ, ಬ್ಯಾಗ ಪಡೆದು ಸಂಭ್ರಮ ಪಟ್ಟುಕೊಂಡರೆ, ಕನ್ನಡ ಶಾಲೆಯ ಮಕ್ಕಳ ಯಾವುದೇ ಸೌಲಭ್ಯ ಇಲ್ಲದಂತೆ ಬೇಸರ ಪಟ್ಟುಕೊಳ್ಳಬೇಕಾಗುತ್ತದೆ. ಕರ್ನಾಟಕ ಸರ್ಕಾರ 1-2 ಕೋಟಿ ಖರ್ಚು ಮಾಡಿದರೆ ಈ ಮಕ್ಕಳ ಮುಖದಲ್ಲಿ ಸಂಭ್ರಮ ಮೂಡಿಸಬಹುದು ಎಂದು ಹೇಳುವ ವೀರಭದ್ರಪ್ಪನವರು, ಆಂಧ್ರದಲ್ಲಿ ಓದಿದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕದ ಶಾಲೆಗಳಿಗೆ ಬಂದರೆ ಅಧಿಕಾರಿಗಳು ನೀಡುವ ಕಿರುಕುಳ, ಹೆಚ್ಚಿನ ಡೊನೇಶನ್ ಹಾವಳಿಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ಪರಸ್ಪರ ಅರ್ಥೈಸಿಕೊಳ್ಳುವಿಕೆಯಿಂದ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಕರ್ನಾಟಕದಲ್ಲಿನ ತೆಲುಗು ಭಾಷಿಕರಿಗೆ ಆಂಧ್ರದ ಸರ್ಕಾರ ಹಾಗೂ ಆಂಧ್ರದಲ್ಲಿನ ಕನ್ನಡ ಭಾಷಿಕರಿಗೆ ಕರ್ನಾಟಕ ಸರ್ಕಾರ ಸಮರ್ಪಕ ಸವಲತ್ತು ಒದಗಿಸಿದರೆ ಹಲವು ಸಮಸ್ಯೆ ಪರಿಹಾರವಾಗಬಲ್ಲದು. ಮಾನವೀಯ ನೆಲೆಯಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡಿದಾಗ ಹಲವು ಸಮಸ್ಯೆಗಳು ತನ್ನಿಿಂದ ತಾನೆ ಕಡಿಮೆಯಾಗುತ್ತದೆ. ಆಂಧ್ರದ ಕನ್ನಡ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಧ್ಯಯನ ಮಾಡುತ್ತೇವೆ ಎಂದು ಹೋರಾಟದ ಹಾದಿ ಹಿಡಿದ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಈ ಹಿಂದೆ ಆಂಧ್ರದ ಕನ್ನಡ ವಿದ್ಯಾಾರ್ಥಿಗಳ ಪರಿಸ್ಥಿತಿ ಅರಿಯಲು ನನ್ನನ್ನು ಏಕವ್ಯಕ್ತಿ ಸಮಿತಿಯ ಮುಖ್ಯಸ್ಥನಾಗಿ ಮಾಡಿ ಸಮೀಕ್ಷೆಗೆ ಕಳುಹಿಸಿದ್ದರು. ನಾನು ವರದಿಕೊಟ್ಟ ನಂತರ ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಉದ್ಯೋಗದಲ್ಲಿ ಶೆ.5ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆೆ ಬಂದಿತ್ತು. ಇಂತಹ ಅಂಶಗಳು ಹೆಚ್ಚಬೇಕು. ಆಂಧ್ರದಲ್ಲಿಯೇ ಇದ್ದು, ಕನ್ನಡ ಮಾಧ್ಯಮದಲ್ಲಿಯೇ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸೇರಿದಂತೆ ಹಲವು ಸವಲತ್ತುಗಳು ಹಾಗೂ ಮೀಸಲಾತಿಗಳನ್ನು ನೀಡಿದಾಗ, ಆ ರಾಜ್ಯಗಳಲ್ಲಿನ ಕನ್ನಡಿಗರ ಬದುಕು ಹಸನಾಗುತ್ತದೆ ಎನ್ನುವುದು ಕುಂ. ವೀರಭದ್ರಪ್ಪನವರು ನೀಡುವ ಸಲಹೆ. ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಾಗ ಗಡಿನಾಡಿನಲ್ಲಿ ಕನ್ನಡದ ಕಹಳೆ ಸ್ಫೂಟವಾಗಿ ಕೇಳಲು ಸಾಧ್ಯ.

Wednesday, October 31, 2018

ದೇಶದ ಹೆಮ್ಮೆಯ ಬಾಕ್ಸರ್ ದುರಂತ ಜೀವನಗಾಥೆ - ಅರ್ಜುನ ಪ್ರಶಸ್ತಿ ಪಡೆದವನೀಗ ಕುಲ್ಫೀ ವ್ಯಾಪಾರಿ

ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಆಟಗಾರನೋರ್ವನ ದುರಂತ ಬದುಕು ಅನಾವರಣಗೊಂಡಿದೆ. ಬಾಕ್ಸಿಿಂಗ್‌ನಲ್ಲಿ ದೇಶಕ್ಕೆ ಪದಕವನ್ನು ಗೆದ್ದುಕೊಟ್ಟ ಬಾಕ್ಸರ್ ಇದೀಗ ಬೀದಿ ಬರಿಯಲ್ಲಿ ವ್ಯಾಪಾರ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾನೆ.
ಭಾರತದಲ್ಲಿ ಕ್ರಿಕೆಟ್ ಆಟಗಾರರ ಯಶಸ್ಸಿನ ಬಗ್ಗೆ ಕೇಳಿದ್ದೇವೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಆಟಗಾರ ಕೂಡ ಯಾವ್ಯಾವುದೋ ವ್ಯಾಪಾರದಲ್ಲಿ ಕೈ ಹಾಕಿ, ದುಡ್ಡು ಮಾಡಿಕೊಳ್ಳುತ್ತಾಾನೆ. ಆದರೆ ಉಳಿದ ಕ್ರೀಡೆಗಳಲ್ಲಿ ಮಿಂಚಿದ ಕ್ರೀಡಾಪಟುಗಳ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ ಎಂಬಂತಾಗಿದೆ.
ಓಟದ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರನೋರ್ವ ತದನಂತರದಲ್ಲಿ ಡಕಾಯಿತರ ತಂದ ನಾಯಕನಾಗಿ, ದುರಂತ ಅಂತ್ಯಕಂಡ ನಿದರ್ಶನ ಕಣ್ಣೆದುರಿದೆ. ಓಟ, ಅಥ್ಲೆಟಿಕ್ಸ್ , ಹಾಕಿ ಹೀಗೆ ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದವರು ತದನಂತರದ ತಮ್ಮ ಬದುಕಿನಲ್ಲಿ ತೀವ್ರ ತೊಂದರೆ ಎದುರಿಸಿದ ಸನ್ನಿವೇಶಗಳೂ ಹೆಚ್ಚಿದೆ. ಅಂತಹ ಸಾಲಿಗೆ ಹೊಸ ಸೇರ್ಪಡೆ ಬಾಕ್ಸರ್ ದಿನೇಶ್ ಕುಮಾರ್.
ಏಷ್ಯನ್ ಗೇಮ್ಸ್ ನಲ್ಲಿ ಬಾಕ್ಸಿಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದ, ಅರ್ಜುನ ಪ್ರಶಸ್ತಿ ವಿಜೇತ ಹರಿಯಾಣದ ದಿನೇಶ್ ಕುಮಾರ್ ಇದೀಗ ಬೀದಿ ಬದಿಯಲ್ಲಿ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುವ ಹಂತ ತಲುಪಿದ್ದಾರೆ.
ಬಾಕ್ಸಿಿಂಗ್‌ನಲ್ಲಿ ದಿನೇಶ್ ಕುಮಾರ್ ಗೆದ್ದ ಪದಕಗಳು ಒಂದೆರಡಲ್ಲ ಬಿಡಿ. ಬಾಕ್ಸಿಿಂಗ್‌ನಲ್ಲಿ ಅವರು ಬರೋಬ್ಬರಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದಿದ್ದಾರೆ. ದಿನೇಶ್ ಕುಮಾರ್ ಅವರ ಸಾಧನೆಯನ್ನು ಗಮನಿಸಿದ ಸರ್ಕಾರ 2010ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ ಇಂತಹ ಸಾಧಕ ದಿನೇಶ್ ಕುಮಾರ್ ಇದೀಗ ತನ್ನ ಬದುಕನ್ನು ಕಟ್ಟಿಕೊಳ್ಳಲು ಒದ್ದಾಟ ನಡೆಸುತ್ತಿದ್ದು, ಅದಕ್ಕಾಗಿ ಕುಲ್ಫಿ ಮಾರಾಟದ ಮಾರ್ಗ ಹಿಡಿದಿದ್ದಾರೆ.
ಹರಿಯಾಣದ ಭಿವಾನಿ ಪ್ರದೇಶದವರಾದ ದಿನೇಶ್ ಕುಮಾರ್  ದೇಶದ ಬಾಕ್ಸಿಿಂಗ್ ಲೋಕದ ಹೊಸ ದ್ರುವತಾರೆ ಎಂದು ಬಿಂಬಿತರಾಗಿದ್ದರು. ಆದರೆ 2014ರಲ್ಲಿ ಸಂಭವಿಸಿದ್ದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗೆ ಕುಟುಂಬಸ್ಥರು ಅಪಾರ ಸಾಲ ಮಾಡಿದ್ದರು. ಅಪಘಾತದಿಂದಾಗಿ ದಿನೇಶ್ ಅವರ ಅದುವರೆಗಿನ ಬಾಕ್ಸಿಿಂಗ್ ವೃತ್ತಿಜೀವನಕ್ಕೆ ಅನಿರೀಕ್ಷಿತ ತೆರೆ ಬಿದ್ದಿತ್ತು.
ಇದೀಗ ದಿನೇಶ್ ಬಾಕ್ಸಿಿಂಗ್ ತರಬೇತಿಗಾಗಿಯೂ, ಅಪಘಾತದಿಂದ ಪಡೆದ ಚಿಕಿತ್ಸೆಗಾಗಿಯೂ ಮಾಡಿದ್ದ ಸಾ ಲವನ್ನು ತೀರಿಸಬೇಕಾಗಿ ಬಂದಿದೆ. ಸಾಲದ ವಿಷಯವನ್ನು ತಿಳಿದ ದಿನೇಶ್ ಕುಮಾರ್ ತಾವೂ ತಂದೆಗೆ ನೆರವಾಗಲು ರಸ್ತೆ ಬದಿಯಲ್ಲಿ ಕುಲ್ಫಿ ಮಾರಾಟಕ್ಕೆ ಇಳಿದಿದ್ದಾರೆ. ದಿನೇಶ್ ಅವರನ್ನು ಕಂಡ, ದಿನೇಶ್ ಅವರ ಬಾಕ್ಸಿಿಂಗ್ ಸಾಧನೆಯ ಮಾಹಿತಿ ಇರುವ ಪಾದಚಾರಿಗಳು, ಕಾರು, ಬೈಕ್ ಸವಾರರು ಅವರಲ್ಲಿ ಕುಲ್ಫಿ ಕರೀದಿಸಿ ಜತೆಯಲ್ಲೊಂದು ಸೆಲ್ಫೀ ತೆಗೆದುಕೊಂಡು ಹೋಗುತ್ತಿದ್ದಾರೆ.
ತಾವು ಕುಲ್ಫಿ ಮಾರಾಟಕ್ಕಿಳಿದ ಆರಂಭದ ದಿನಗಳಲ್ಲಿ ಸರ್ಕಾರ ತಮ್ಮ ಸಹಾಯಕ್ಕೆ ಬರುತ್ತದೆ ಎನ್ನುವ ಆಸೆಯನ್ನು ದಿನೇಶ್ ಕುಮಾರ್ ಹೊಂದಿದ್ದರು. ಆದರೆ ಯಾವುದೇ ಸರ್ಕಾರ ದಿನೇಶ್ ಕುಮಾರ್ ಅವರ ಸಹಾಯಕ್ಕೆ ಮುಂದಾಗಲಿಲ್ಲ. ಇದರಿಂದ ತೀವ್ರ ನಿರಾಸೆ ಹೊಂದಿದ ದಿನೇಶ್ ಕುಮಾರ್ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
ಕುಲ್ಫಿ ಮಾರಾಟ ಮಾಡುತ್ತಿದ್ದರೂ, ಅಪಘಾತದಿಂದಾಗಿ ಬಾಕ್ಸಿಿಂಗ್ ರಿಂಗ್‌ಗೆ ತಮಗೆ ಕಾಲಿರಿಸಲು ಅಸಾಧ್ಯವಾಗಿದ್ದರೂ ದಿನೇಶ್ ಕುಮಾರ್ ಎದೆಗುಂದಿಲ್ಲ. ಬದಲಾಗಿ ತಮ್ಮೊಳಗಿನ ಬಾಕ್ಸಿಿಂಗ್ ಜ್ಞಾನವನ್ನು ಕಿರಿಯರಿಗೆ ಧಾರೆ ಎರೆಯುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಬಾಕ್ಸಿಿಂಗ್ ತರಬೇತಿ ನೀಡುವ ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮೊಳಗಿನ ಜ್ಞಾನವನ್ನು ಇತರರಿಗೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕ್ರಿಕೆಟ್ ಹಾಗೂ ಇತರ ಕೆಲವೇ ಕ್ರೀಡೆಗಳ ಕ್ರೀಡಾಪಟುಗಳಿಗೆ ಭಾರತದಲ್ಲಿ ಬೆಲೆ ಇದೆ ಎನ್ನುವುದು ಹಲವರ ಮಾತು. ಉಳಿದ ಕ್ರೀಡೆಗಳು ಸಾಲು ಸಾಲು ಪದಕಗಳನ್ನು ಗೆದ್ದು ಸಾಧನೆಯ ಶಿಖರವನ್ನು ಏರಿದರೂ ಅವರ ಕುರಿತು ಯಾರೂ ಗಮನ ಹರಿಸುವುದಿಲ್ಲ. ಪದಕಗಳನ್ನು ಗೆದ್ದು ತಂದರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಒದ್ದಾಾಡುತ್ತಿರುವ ದಿನೇಶ್ ಕುಮಾರ್ ಅವರಂತವರ ಬೆನ್ನಿಗೆ ಸರ್ಕಾರ, ಹಾಗೂ ಕ್ರೀಡಾ ಅಭಿಮಾನಿಗಳು ನಿಲ್ಲುವ ಜರೂರತ್ತಿದೆ. ಹೀಗಾದಾಗ ಮಾತ್ರ ಕ್ರೀಡಾಪಟುಗಳ ಬದುಕು ಹಸನಾಗಬಹುದಾಗಿದೆ.
---
ಯಾವ ರಾಜಕಾರಣಿಗಳ ಮೇಲೆ ವಿಶ್ವಾಸವೂ ಇಲ್ಲ. ಕುಟುಂಬವನ್ನು ಸಲಹಲಿಕ್ಕಾಗಿ ಕುಲ್ಫಿ ವ್ಯಾಪಾರ ನಡೆಸಿದ್ದೇನೆ. ನಾನು ಬಾಕ್ಸಿಿಂಗ್ ಜಗತ್ತಿನಲ್ಲಿ ದ್ರುವತಾರೆಯಾಗಬೇಕೆನ್ನುವ ಕನಸನ್ನು ನನ್ನ ತಂದೆ ಕಂಡಿದ್ದರು. ನನಗೆ ಅಪಘಾತವಾಗಿದ್ದು ವೃತ್ತಿ ಜೀವನ ಅಂತ್ಯವಾಗಿದೆ. ಆದರೆ ನನ್ನಲ್ಲಿನ ಬಾಕ್ಸಿಿಂಗ್ ಹಾಗೆಯೇ ಇದೆ. ನಾನೀಗಲೂ ಕಿರಿಯರಿಗೆ ಬಾಕ್ಸಿಿಂಗ್ ತರಬೇತಿ ನೀಡುತ್ತಿದ್ದೇನೆ. ಇನ್ನಾದರೂ ಸರ್ಕಾರದವರು ನನಗೆ ರಾಜ್ಯಮಟ್ಟದ ತರಬೇತುದಾರ ಹುದ್ದೆ ನೀಡಿದರೆ ನಿರ್ವಹಿಸಬಲ್ಲೆ .
ದಿನೇಶ್ ಕುಮಾರ್
ಬಾಕ್ಸರ್

( ಈ ಲೇಖನ ಹೊಸದಿಗಂತದ ಕ್ರೀಡಾ ಪುಟದಲ್ಲಿ ಪ್ರಕಟವಾಗಿದೆ )

Tuesday, October 30, 2018

ಕ್ರಿಕೆಟ್‌ನಲ್ಲಿ ಮುಗಿಯಿತು ತೊಂಭತ್ತರ ಜಮಾನಾ

ಶ್ರೀಲಂಕಾ ಕ್ರಿಕೆಟ್ ದಿಗ್ಗಜ ರಂಗಣ ಹೆರಾತ್ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಹೆರಾತ್ ವಿದಾಯದಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಬಹು ದೊಡ್ಡ ಬದಲಾವಣೆಯೊಂದು ಘಟಿಸುತ್ತಿದೆ. ಹೆರಾತ್ ವಿದಾಯದ ಮೂಲಕ ಕ್ರಿಕೆಟ್ ಲೋಕದಲ್ಲಿ 90ರ ದಶಕದ ಜಮಾನಾದ ಕೊನೆಯ ಕೊಂಡಿ ಕಳಚಿಕೊಳ್ಳುತ್ತಿದೆ.
ಮೊದಲ 15 ಓವರ್‌ಗಳಲ್ಲಿ ಪವರ್ ಪ್ಲೇ, 30 ಯಾರ್ಡ್ ಸರ್ಕಲ್ ನಿಯಮಗಳು, 250-260ರನ್ ಎಂದರೆ ಅಬ್ಬಬ್ಬಾ ಎನ್ನುವ ಸಮಯ, ಆಗ ತಾನೆ ಬಿಳಿ ಬಣ್ಣದ ಧಿರಿಸಿನಿಂದ ಬಣ್ಣ ಬಣ್ಣದ ಜೆರ್ಸಿಗೆ ಕಾಲಿಟ್ಟ ಸಮಯ ಈ ಮುಂತಾದ ಹಲವು ಸಂಗತಿಗಳು 90ರ ದಶಕದ ಕ್ರಿಕೆಟ್ ವೈಭವವನ್ನು ಕಟ್ಟಿಕೊಡುತ್ತವೆ.
90ರ ದಶಕದಲ್ಲಿಯೇ ಪಾಕಿಸ್ಥಾನ ಮೊಟ್ಟ ಮೊದಲ ವಿಶ್ವಕಪ್ ಎತ್ತಿ ಹಿಡಿದಿದ್ದು. ಈ ದಶಕದಲ್ಲಿಯೇ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವವನ್ನೇ ಆಳಿದ್ದು. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿ ಪರಿವರ್ತನೆಯಾಗಿದ್ದು. 90ರ ದಶಕದಲ್ಲಿಯೇ ಆಸ್ಟ್ರೇಲಿಯಾ ಎಂಬುದು ಕ್ರಿಕೆಟ್‌ನ ಏಕಮೇವಾದ್ವಿತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು. ಸಾಲು  ಸಾಲು  ಲೆಜೆಂಡ್‌ಗಳು ಜನಿಸಿದ್ದು.
ತೆಂಡೂಲ್ಕರ್ ಅಲ್ಲದೇ, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ಮಾರ್ಕ್ ವಾ, ಸ್ಟೀವ್ ವಾ, ಜಾಕ್ ಕಾಲಿಸ್, ಹ್ಯಾನ್ಸಿ ಕ್ರೋನಿಯೆ, ಜಾಂಟಿ ರೋಡ್‌ಸ್‌‌, ಕಾರ್ಲ್ ಹೂಪರ್, ಅರ್ಜುನ ರಣತುಂಗಾ, ಅರವಿಂದ ಡಿಸಿಲ್ವಾ, ಗ್ಯಾರಿ ಕರ್ಸ್ಟನ್, ಮೈಕೆಲ್ ಬೆವನ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಾಲ್‌ಶ್‌‌, ಆಂಬ್ರೋಸ್, ಮುತ್ತಯ್ಯ ಮುರಳೀಧರನ್, ಮೆಕ್‌ಗ್ರಾಥ್, ಶೇನ್ ವಾರ್ನೆ, ಅನಿಲ್ ಕುಂಬ್ಳೆ ಹೀಗೆ ಸಾಲು ಸಾಲು ದಿಗ್ಗಜರು 90ರ ದಶಕದಲ್ಲಿಯೇ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಿಂಚಿದವರು. ಅಜರಾಮರವಾಗಿ ಉಳಿದವರು. 10-15 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದವರು.
ಕ್ರಿಕೆಟ್‌ನಲ್ಲಿ ಹಳೆಯ ನೀರು ಹರಿದು ಹೊಸ ನೀರು ಸದಾ ಬರುತ್ತಲೇ ಇರುತ್ತದೆ. 1990ರಿಂದ 1999ರ ವರೆಗಿನ ಕಾಲವೆಂದರೆ ಅತ್ತ ಕ್ಲಾಸಿಕ್ ಅಲ್ಲ, ಇತ್ತ ಮಾಡರ್ನ್ ಅಲ್ಲ. ಕ್ರಿಕೆಟ್ ಎನ್ನುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಸಮಯ. ನಿಧಾನವಾಗಿ ಹೊಸ ರೀತಿಯ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದ ಹೊತ್ತು. ಪ್ರಸಿದ್ಧಿ, ಹಣ, ಜಾಹೀರಾತು ಹೀಗೆ ವಿವಿಧ ರಂಗಗಳಲ್ಲಿ ಕ್ರಿಕೆಟ್ ಕಲಿಗಳು ನಲಿಯುತ್ತಿದ್ದ ಹೊತ್ತು. ಆಟದ ಮಾದರಿಗಳೂ ಬದಲಾಗುತ್ತಿದ್ದ ಸಮಯ. ಹೊಸ ಹೊಸ ನಿಯಮಗಳನ್ನು ಪ್ರಯೋಗಗಳ ರೀತಿಯಲ್ಲಿ ಅಳವಡಿಕೆ ಮಾಡುತ್ತಿದ್ದ ಸಮಯ ಕೂಡ ಹೌದು. ಇಂತಹ 90ರ ದಶಕದ ಕೊಂಡಿಯಾಗಿ ಉಳಿದಿದ್ದರು ಶ್ರೀಲಂಕಾದ ಸ್ಪಿನ್ನರ್ ರಂಗಣ ಹೆರಾತ್.
2010ರಿಂದೀಚೆಗೆ 90ರ ದಶಕದಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಅನೇಕರು ನಿವೃತ್ತರಾಗಿದ್ದಾರೆ. ಈ ಸಂದರ್ಭದಲ್ಲೆಲ್ಲ 90ರ ದಶಕದ ವೈಭವಗಳು ನಿಧಾನವಾಗಿ ತೆರೆಯ ಮರೆಗೆ ಸರಿಯುವ ಲಕ್ಷಣಗಳು ಕಣ್ಣಿಗೆ ಕಾಣಿಸಲು ಆರಂಭಿಸಿದೆ. ದ್ರಾವಿಡ್, ಸಂಗಕ್ಕಾರ, ಜಯವರ್ಧನೆ, ಅಫ್ರೀದಿ, ತೆಂಡೂಲ್ಕರ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಮೆಕ್‌ಗ್ರಾಥ್ ಹೀಗೆ ಹಲವರು ವಿದಾಯ ಹೇಳಿದಾಗಲೂ 90ರ ದಶಕದ ನೆನಪು ಮರುಕಳಿಸಿವೆ. ಇದೀಗ 90ರ ದಶಕದ ಕೊನೆಯ ಕೊಂಡಿಯಾಗಿದ್ದ ಹೆರಾತ್ ವಿದಾಯದ ಮೂಲಕ ಅಂದಿನ ಜಮಾನಾದ ಆಟಗಳು ನೆನಪಾಗಿ ಮಾತ್ರ ಉಳಿಯಲಿವೆ.
ಇಂದಿನ ಕ್ರಿಕೆಟ್ ಅಂದಿನ ಕ್ರಿಕೆಟ್ ಆಗಿ ಉಳಿದಿಲ್ಲ. ಟೆಸ್‌ಟ್‌‌, ಏಕದಿನ ಮಾದರಿಯ ಜತೆಗೆ ಟಿ20 ಎಂಬ ಚುಟುಕಿನ, ಅಬ್ಬರದ ಕ್ರಿಕೆಟ್ ಮಾದರಿ ಎಲ್ಲರ ಮನಸ್ಸಿನಲ್ಲಿ ಉಳಿದುಹೋಗಿದೆ. ನಿಯಮಗಳು ಬದಲಾಗಿದೆ. 300+ ರನ್ ಗಳಿಸಿದರೂ ಅದು ಯಾವುದೇ ತಂಡಗಳಿಗೆ ಸವಾಲಾಗುತ್ತಿಲ್ಲ. ಏಕದಿನ ಮಾದರಿಯಲ್ಲಿ 200+ ರನ್ ಸರಾಗವಾಗಿ ಭಾರಿಸುವ ಬ್ಯಾಟ್‌ಸ್‌‌ಮನ್‌ಗಳ ಉದಯವಾಗಿದೆ. ಬೌಲರ್‌ಗಳು ಹೈರಾಣಾಗುವ ಸಮಯವಂತೂ ತೀರಾ ಹೆಚ್ಚಾಗಿದೆ. ಇಂತಹ ಸಮಯದಲ್ಲಿ 90ರ ದಶಕದ ಆಟಗಳು ಹೆಚ್ಚಿನ ಜನರಿಗೆ ನೆನಪಾಗುವುದಿಲ್ಲ.
ಕ್ರಿಕೆಟ್ ಜಗತ್ತಿನಲ್ಲಿ 90ರ ದಶಕದ ಆಟಗಾರರ ವೈಭವವನ್ನು ಇನ್ನು ಮುಂದೆ ಕಾಣಲು ಸಾಧ್ಯವೇ ಇಲ್ಲ. ಬದಲಾವಣೆ ನಿರಂತರ ಎಂಬ ಸಂದರ್ಭದಲ್ಲಿ ಆ ಸಮಯದ ಆಟಗಾರರು ಸದಾ ನೆನಪಾಗುತ್ತಿರುತ್ತಾರೆ. ಕ್ಲಾಸಿಕ್ ಆಟಗಳು, ರೋಚಕ ಪಂದ್ಯಗಳು ಸದಾ ನೆನಪಾಗುತ್ತಲೇ ಇರುತ್ತವೆ. 90ರ ದಶಕದ ಆಟಗಾರನಿಗೆ ವಿದಾಯ ಹೇಳುತ್ತ, ಹೊಸ ಪರ್ವದ ಕಡೆಗೆ ಹೆಜ್ಜೆ ಹಾಕಬೇಕಿದೆ.





Thursday, October 25, 2018

ಗೆಳತಿ ನೀನಿಲ್ಲದೇ.!

ನಿನ್ನೊಡನೆ
ಮಾತಾಡಲಾಗದೇ
ಪದಗಳು ಬಿಕ್ಕುತ್ತಿವೆ
ಗೆಳತಿ...
ಮನದ ಕದ ಕಿರ್ರೆನ್ನುತ್ತಿದೆ..!!

ನನ್ನಷ್ಟಕ್ಕೆ ನಾನೇ
ಬೆಂದು ಹಣ್ಣಾಗುತ್ತಿದ್ದೇನೆ
ಗೆಳತಿ,
ನಿನ್ನ ಜೊತೆಯಿಲ್ಲದೇ..||

ಕಣ್ಣೆವೆಗಳಲ್ಲಿ
ನೀರು ತೊಟ್ಟಿಕ್ಕಲು
ಸಮಯ ಕಾದಿದೆ
ಗೆಳತಿ
ನೀನಿಲ್ಲದೇ..!!

(Incomplete...!!!)

Monday, October 22, 2018

ಅಡ್ಡ ಹೆಸರಿನ ಅಡ್ಡಾದಲ್ಲಿ…!

ಕಾಲೇಜು ದಿನಗಳಲ್ಲಿ ಅಡ್ಡ ಹೆಸರು ಎನ್ನುವುದು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಇಂತಹ ಅಡ್ಡ ಹೆಸರುಗಳಲ್ಲಿ ಹಲವು ಫನ್ನಿಯಾಗಿದ್ದರೆ, ಇನ್ನೂ ಕೆಲವುಗಳು ಸಿಲ್ಲಿಯಾಗಿರುತ್ತವೆ.
ಪ್ರತಿಯೊಬ್ಬರಿಗೂ ಅವರದೇ ಆದ ನಾಮಧೇಯಗಳಿದ್ದರೂ, ಅವರವರ ಹವ್ಯಾಸ, ಅಭಿನಯ, ಚಟ ಹೀಗೆ ಹಲವು ಕಾರಣಗಳಿಂದಾಗಿ ಹೆಸರಿನ ಮುಂದೆ ಅಡ್ಡ ಹೆಸರುಗಳು ಸೇರಿಕೊಂಡು ಬಿಡುತ್ತವೆ. ಕೆಲವೊಮ್ಮೆ ನಿಜವಾದ ಹೆಸರೇ ಮರೆತು ಹೋಗುವಷ್ಟರ ಮಟ್ಟಿಗೆ ಅಡ್ಡ ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಲವು ಸಾರಿ ಈ ಅಡ್ಡ ಹೆಸರುಗಳಿಗೆ ಎಲ್ಲರೂ ಹೊಂದಿಕೊಂಡು ಬಿಡುತ್ತಾರೆ. ಕೆಲವೊಮ್ಮೆ ಮಾತ್ರ ವಿರೋಧಗಳು ಕೇಳಿ ಬರುತ್ತವೆ ಅಷ್ಟೇ.
ಸುಮ್ಮನೆ ಕಾಲೇಜು ದಿನಗಳ ಗೆಳೆಯರ ಬಳಗವನ್ನು ಗಮನಿಸಿ, ಅವರ ಬಳಗದಲ್ಲಿ ಹೆಚ್ಚಿನ ಮಂದಿ ತಮ್ಮ ನಿಜವಾದ ಹೆಸರುಗಳಿಂದ ಕರೆದುಕೊಳ್ಳುವುದೇ ಇಲ್ಲ. ಕೆಂಪ, ಬಿಡ್ಡ, ಮಚ್ಚಾ, ಮಗಾ, ಕುಂಟ, ಕುಳ್ಳ ಹೀಗೆ ಅವರವರ ಗಾತ್ರಗಳಿಗನುಗುಣವಾಗಿ ಅಡ್ಡ ಹೆಸರುಗಳು ಸ್ಥಾನ ಪಡೆದುಕೊಳ್ಳುತ್ತವೆ. ಇನ್ನು ಗುಂಪಿನಲ್ಲೊಬ್ಬ ಮಂಜ ಎನ್ನುವ ಹೆಸರಿನವನ್ನು ಇದ್ದರಂತೂ ಕೋಳಿ ಎಂಬ ಅಡ್ಡ ಹೆಸರು ಆತನಿಗೆ ಖಾಯಂ ಎಂಬಂತಾಗಿದೆ.
ಗೆಳೆಯರ ಬಳಗದಲ್ಲೊಬ್ಬ ಹುಲಿ ಇರುತ್ತಾನೆ, ದಾಸ ಇರುತ್ತಾ. ಇನ್ನು ಆ ಬಳಗದಲ್ಲಿ ಬ್ರಾಹ್ಮಣರ ಹುಡುಗರು ಇದ್ದರಂತೂ ಅವರಿಗೆ ಭಟ್ಟ, ಹೆಗಡೆ ಅಥವಾ ಪುಳಚಾರ್ ಎಂಬ ಅಡ್ಡ ಹೆಸರು ಖಾಯಂ.
ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಅಡ್ಡ ಹೆಸರುಗಳು ಬದಲಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಅಡ್ಡ ಹೆಸರುಗಳೂ ರಗಡ್ ಆಗಿರುತ್ತವೆ. ಮೆಣಸಿನಕಾಯಿ, ಬೆಳ್ಳಕ್ಕಿ, ಇಂತಹ ಹೆಸರುಗಳು ಉತ್ತರ ಕರ್ನಾಟಕದಲ್ಲಿಕಾಣಸಿಗುತ್ತವೆ. ಅದೇ ದಕ್ಷಿಣ ಕರ್ನಾಟಕ ಭಾಗಗಳಿಗೆ ಬಂದರೆ ಅಲ್ಲಿ ಕರೆಯುವ ಅಡ್ಡ ಹೆಸರುಗಳು ಭಿನ್ನ. ಬಿಡ್ಡ, ಕೆಂಪ, ಕರಿಯ, ದೊಡ್ಡಣ್ಣ, ಚಿಕ್ಕಣ್ಣ ಇತ್ಯಾದಿಗಳು ಇಲ್ಲಿ ಜಾಸ್ತಿ. ಬೆಂಗಳೂರು ಕಡೆಗಳಲ್ಲಿ ಬಳಕೆಯಾಗುವ ಅಡ್ಡ ಹೆಸರುಗಳಲ್ಲಿ ತಮಿಳು, ತೆಲುಗಿ ಪ್ರಭಾವ ಜಾಸ್ತಿ ಇರುತ್ತವೆ. ಅದೇ ಕಾರಣಕ್ಕೆ ಬೆಂಗಳೂರು ಭಾಗದಲ್ಲಿ ಮಚ್ಚಾ, ಮಗಾ, ಸಿವಾ ಇಂತದ್ದೆಲ್ಲ ಜಾಸ್ತಿ. ಮಂಗಳೂರು, ಉಡುಪಿ, ಉತ್ತರ ಕನ್ನಡಗಳಲ್ಲಿ ಕರೆಯುವ ಅಡ್ಡ ಹೆಸರುಗಳು ಇನ್ನಷ್ಟು ಬೇರೆ ಬೇರೆಯಾಗಿರುತ್ತವೆ.
ಸಿನಿಮಾ ನಟರುಗಳ ಹೆಸರನ್ನು ಅಡ್ಡ ಹೆಸರಾಗಿ ಕರೆಯುವ ವಾಡಿಕೆ ಹಲವು ಸಂದರ್ಭಗಳಲ್ಲಿದೆ. ಯಾವುದೋ ಹುಡುಗನಿಗೆ ಯಾರೋ ಹೀರೋ ಇಷ್ಟವಾದರೆ, ಆ ನಟನ ಚಿತ್ರಗಳ ಹೆಸರನ್ನು ಹೇಳಿ ಕರೆಯುವುದು, ಇನ್ಯಾರಿಗಾದರೂ ಚಿನ್ರನಟನ ಹೋಲಿಕೆ ಇದ್ದರೆ ಅದೇ ಹೆಸರಿನಿಂದ ಕರೆಯುವುದು ಹೀಗೆ. ಇನ್ನು ಆತ/ಆಕೆ ಏನಾದರೂ ತಪ್ಪನ್ನು ಮಾಡಿದರೆ ಅದನ್ನೇ ಅಡ್ಡ ಹೆಸರಿನಿಂದ ಕರೆದಿರುವುದೂ ಇದೆ.
ನಾವು ಹೈಸ್ಕೂಲಿಗೆ ಹೋಗುವಾಗ ಒಬ್ಬ ವಿದ್ಯಾರ್ಥಿ ಇದ್ದ. ಆತನಿಗೆ ಹಕ್ಕಿಗಳನ್ನು ಬೇಟೆಯಾಡುವುದು ಅಂದರೆ ಬಹಳ ಖುಷಿಯ ಸಂಗತಿಯಾಗಿತ್ತು. ಆತನ ಸಾಮರ್ಥ್ಯ ಎಷ್ಟಿತ್ತೆಂದರೆ ಆತ ಕವಣೆ ಕಲ್ಲನ್ನು ಬೀಸಿಯೋ ಅಥವಾ ಚ್ಯಾಟರ್ ಬಿಲ್ಲಿನಿಂದ ಹೊಡೆದೋ ಪಿಕಳಾರ ಹಕ್ಕಿಗಳನ್ನು ಕೊಂದು ಅದನ್ನು ತಿನ್ನುತ್ತಿದ್ದ. ಇದರಿಂದಾಗಿ ಆತನಿಗೆ ಪಿಕಳಾರ ಎಂಬ ಅಡ್ಡ ಹೆಸರೇ ಬಂದಿತ್ತು. ಹಲವು ಸಂದರ್ಭಗಳಲ್ಲಿ ಮದ್ಯಪಾನ ಮಾಡುವವರು, ಮದ್ಯದ ಕಂಪನಿಗಳ ಹೆಸರನ್ನು ಕಿರಿದಾಗಿಸಿ ಅಡ್ಡ ಹೆಸರಿನಿಂದ ಕರೆದಿದ್ದೂ ಇದೆ. ಎಂಸಿ, ಕೆಎಫ್ ಇತ್ಯಾದಿ ಅಡ್ಡ ಹೆಸರುಗಳು ಹಲವರಿಗಿರುತ್ತವೆ. ಹಲವು ಸಂದರ್ಭಗಳಲ್ಲಿ ಯಾರದ್ದಾದರೂ ಒನ್ ವೇ ಲವ್ ಇದ್ದರೆ, ಆ ಹುಡುಗಿಯ ಹೆಸರನ್ನು ಸೇರಿಸಿ ಕೀಟಲೆ ಮಾಡುವುದೂ ಇದೆ.
ಪ್ರತಿ ಗ್ರೂಪನ್ನೂ ಗಮನಿಸಿ. ಅಲ್ಲೊಬ್ಬ ದಾಸ ಇರುತ್ತಾನೆ. ಪುಂಡ ಇರುತ್ತಾನೆ. ಪೋಲೀಸ ಇರುತ್ತಾನೆ. ಮಿಲಿಟ್ರಿ ಇರುತ್ತಾನೆ. ಇಂತಹ ಹೆಸರುಗಳನ್ನು ಆಯಾಯಾ ವಿದ್ಯಾರ್ಥಿಗಳು ತಮ್ಮ ಪಾಲಿಗೆ ಸಿಕ್ಕ ಬಿರುದು, ಬಾವಲಿಗಳೆಂಬಂತೆ ಸಂತಸದಿಂದಲೇ ಸ್ವೀಕಾರ ಮಾಡುತ್ತಾರೆ. ಕಾಲೇಜು ದಿನಗಳಲ್ಲಿ ಆರಂಭವಾದ ಗೆಳೆತನ ಬದುಕಿನುದ್ದಕ್ಕೂ ಮುಂದುವರೆದ ಸಂದರ್ಭದಲ್ಲಿ ಆ ಮಿತ್ರ ಮಂಡಳಿಗಳು ಪರಸ್ಪರರನ್ನು ಅಡ್ಡ ಹೆಸರಿನಿಂದಲೇ ಕರೆದುಕೊಂಡ, ಕರೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.
ಇನ್ನು ಹುಡುಗಿಯರಿಗೂ ಕೂಡ ಅಷ್ಟೇ ವಿಶಿಷ್ಟ ಅಡ್ಡ ಹೆಸರುಗಳಿರುತ್ತವೆ. ಯಾರಾದರೂ ಉದ್ದವಾದ ಹುಡುಗಿ ಇದ್ದರೆ ಅವರನ್ನು ಕೊಕ್ಕರೆ ಎಂತಲೋ, ಒಂಟೆ ಎಂದೋ ಕರೆಯುತ್ತಾರೆ. ದಪ್ಪ ಇದ್ದವಳ ಹೆಸರು ಏನೇ ಇದ್ದರೂ ಆಕೆ ಡುಮ್ಮಿ ಎಂದೋ, ಟೆಡ್ಡಿಯಾಗಿಯೋ, ಕರಡಿಮರಿಯಾಗಿಯೋ ಕರೆಸಿಕೊಳ್ಳುತ್ತಾಳೆ.
ಹಲವು ಸಂದರ್ಭಗಳಲ್ಲಿ ಅಡ್ಡ ಹೆಸರಿನ ಬಳಕೆ ಅತಿರೇಕಕ್ಕೆ ಹೋದದ್ದೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವೆ ಹೊಡೆದಾಟಗಳು ನಡೆದಿದ್ದೂ ಇದೆ. ಇಂತಹ ಅಡ್ಡ ಹೆಸರುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದದ್ದೂ ಇದೆ. ಆದರೆ ಇವೆಲ್ಲ ಸುಮ್ಮನೆ ಅತಿರೇಕ ಎನ್ನಿಸಿಕೊಳ್ಳುತ್ತವೆ.
ಕಾಲೇಜು ಬದುಕು ಎಂದ ಮೇಲೆ ಓದು, ಆಟ, ಓಟ, ಸಂತಸ, ಸಂಭ್ರಮಗಳು ಎಷ್ಟು ಸಹಜವೋ ಅದೇ ರೀತಿ ಅಡ್ಡ ಹೆಸರುಗಳೂ ಕೂಡ. ಇವು ಆ ದಿನಗಳ ಬದುಕಿನಲ್ಲಿ ಪ್ರಮುಖ ಭಾಗವಾಗಿ ಬದಲಾಗುತ್ತವೆ. ಇವನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡರೆ ಸುಮ್ಮನೇ ಬೇಸರಕ್ಕೆ ಕಾರಣವಾಗುವುದಷ್ಟೇ. ಬದಲಾಗಿ ಅಡ್ಡ ಹೆಸರುಗಳನ್ನು ಸುಮ್ಮನೇ ಎಂಜಾಯ್ ಮಾಡೋಣ ಬನ್ನಿ. ಕರೆಯುವವರು ಕರೆಯಲಿ, ಹೇಳುವವರು ಹೇಳಿಲಿ, ಖುಷಿಯಾಗಿರೋಣ. ಅಡ್ಡ ಹೆಸರುಗಳನ್ನು ಪ್ರೀತಿಯಿಂದ ಆದರಿಸಿ, ನಾವೂ ಕರೆದು, ಕರೆಸಿಕೊಂಡು ಖುಷಿ ಪಡೋಣ. ಅಡ್ಡ ಹೆಸರುಗಳು ಯಾಕಾಗಿ ಹುಟ್ಟಿಕೊಳ್ಳುತ್ತವೆ ಎನ್ನುವುದು ಕಷ್ಟ. ಅದೇ ರೀತಿ ಅಡ್ಡ ಹೆಸರನ್ನು ಇಡುವುದನ್ನು ತಡೆಯುವುದೂ ಕೂಡ ಕಷ್ಟ. ಯಾರೋ ಅಡ್ಡ ಹೆಸರನ್ನಿಟ್ಟರು ಎಂದು ಬೇಸರಿಸದೇ, ಅದಕ್ಕಾಗಿ ಸಿಟ್ಟು ಮಾಡಿಕೊಳ್ಳದೇ ಆ ಸಂದರ್ಭಗಳನ್ನು ಎಂಜಾಯ್ ಮಾಡೋಣ. ಸೂಕ್ತ ಸಂದರ್ಭ, ಸಮಯಗಳು ಸಿಕ್ಕರೆ ನಾವೂ ಕೂಡ ಯಾರಿಗಾದರೂ ಅಡ್ಡ ಹೆಸರು ಇಡಬಲ್ಲೆವು ಎಂಬುದನ್ನು ತೋರಿಸೋಣ. ತೀರಾ ಬದುಕಿಗೆ ಘಾಸಿಯಾಗದಂತೆ ಅಡ್ಡ ಹೆಸರನ್ನಿಟ್ಟು ಸಂಭ್ರಮಿಸೋಣ. ಅಲ್ಲವೇ.



Saturday, October 20, 2018

ಇದ್ದರೆ ಇರಬೇಕು ಇಂತಹ ಗುರು

ಕ್ರಿಕೆಟ್ ಲೋಕದ ಈ ಜಂಟಲ್‌ಮ್ಯಾನ್ ರನ್ ಗುಡ್ಡೆ ಹಾಕಿಲ್ಲ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಲಿಲ್ಲ. ಯಾವುದೋ ಪ್ರಶಸ್ತಿಗಳ ಬೆನ್ನು ಹತ್ತಲಿಲ್ಲ. ರಾಜ್ಯಸಭಾ  ಸದಸ್ಯತ್ವ ಕೊಡಿ ಎನ್ನಲಿಲ್ಲ. ತಾವಾಯಿತು, ತಮ್ಮ ಶ್ರಮವಾಯಿತು ಎಂದುಕೊಂಡೇ ಉಳಿದರು. ತೆರೆಮರೆಯಲ್ಲೇ ಉಳಿದು, ಮುಂದಿನ ಜಮನಾದ ಸ್ಟಾರ್‌ಗಳನ್ನು ಕೆತ್ತುವ ಕೆಲಸ ಮಾಡಿದರು. ಹಾಗೆ ಮಾಡುತ್ತಲೇ ಎಲ್ಲರ ಕಣ್ಮಣಿ ಆದರು. ಬ್ಯಾಾಟಿಂಗ್ ಎಂಬ ಆಯುಧವನ್ನು ಕಳಚಿಟ್ಟರೆ ಏನಂತೆ, ನನ್ನೊಳಗಿನ ಪ್ರತಿಭಾ  ಪೋಷಣೆಯ ಶಕ್ತಿ ಸಾಕಷ್ಟಿದ್ದು, ನನ್ನಂತಹ ಇನ್ನೂ ಅನೇಕರನ್ನು ತಯಾರು ಮಾಡಬಲ್ಲೇ. . . ಎಂದು ಕೊಂಡು ಹೆಜ್ಜೆ ಹಾಕಿದ ವ್ಯಕ್ತಿ ಇವರು. ಇವರೇ ರಾಹುಲ್ ಶರತ್‌ಚಂದ್ರ ದ್ರಾಾವಿಡ್. ಭಾರತ ಎ ಕ್ರಿಕೆಟ್ ತಂಡ ಹಾಗೂ ಅಂಡರ್ 19 ತಂಡದ ಮುಖ್ಯ ಕೋಚ್.
ಪದಾರ್ಪಣೆ ಪಂದ್ಯದಲ್ಲಿ ಶತಕ ಭಾರಿಸಿದ ಪೃಥ್ವಿ ಶಾ ಮೊದಲು ಪೋನ್ ಮಾಡಿದ್ದು ದ್ರಾವಿಡ್‌ಗೆ, ನನ್ನ ಆಟ ಉತ್ತಮವಾಗಲು, ಫಾರ್ಮಿಗೆ ಮರಳಲು ಕಾರಣವಾದದ್ದು ಗುರು ರಾಹುಲ್ ದ್ರಾವಿಡ್ ಎಂದು ಹೇಳಿದ್ದು ಮಯಾಂಕ್ ಅಗರ್ವಾಲ್, ಟೆಸ್ಟ್ಗೆ ಆಯ್ಕೆಯಾಗಿ ಅರ್ಧ  ಶತಕ ಭಾರಿಸಿದ ಹನುಮ ವಿಹಾರಿ ಧನ್ಯವಾದ ಸಲ್ಲಿಸಿದ್ದು ಗುರು ದ್ರಾವಿಡ್‌ಗೆ, ಅಷ್ಟೇ ಏಕೆ, ಭಾರತ ಟೆಸ್ಟ್  ತಂಡದ ಮಧ್ಯಮ ಕ್ರಮಾಂಕದ ಖಾಯಂ ಆಟಗಾರ ತಮ್ಮ ಫಾರ್ಮ್ ಕಳೆದುಕೊಂಡಾಗೆಲ್ಲ ಸಲಹೆ ಪಡೆಯುವುದು ದ್ರಾವಿಡ್ ಬಳಿಯೇ.
ದ್ರಾವಿಡ್ ಎಂಬ ಕ್ರಿಕೆಟ್ ಲೋಕದ ಮಹಾ ಗುರುವಿನ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ಈ ಮೇಲಿನ ಅಭಿಪ್ರಾಯಗಳೇ ದ್ರಾವಿಡ್ ಕಲಿಸುವಿಕೆಯನ್ನು ತಿಳಿಸಿ ಹೇಳುತ್ತವೆ.
ರಾಹುಲ್ ದ್ರಾವಿಡ್. ಕೆಲವೇ ವರ್ಷಗಳ ಹಿಂದೆ ಭಾರತದ ಪಾಲಿಗೆ ದಿ ವಾಲ್ ಆಗಿದ್ದವರು. ಕಲಾತ್ಮಕತೆಗೆ, ನಂಬಿಕೆಗೆ, ನಿರಂತರ ಪ್ರದರ್ಶನಕ್ಕೆ ಇನ್ನೊೊಂದು ಹೆಸರಾಗಿದ್ದವರು. ಟೆಸ್ಟ್  ಕ್ರಿಕೆಟ್‌ನಲ್ಲಿ  ಭಾರತದ ತಂಡದ ರಕ್ಷಕನಾಗಿ, ಆಪದ್ಭಾಾಂಧ ವನಾಗಿದ್ದವರು. ಎಲ್ಲ ನಂಬಿಕಸ್ಥ ಬ್ಯಾಟ್‌ಸ್‌‌ಮನ್‌ಗಳು ವಿಲವಾದ ಸಂದರ್ಭದಲ್ಲೂ ದ್ರಾವಿಡ್, ನಾನಿದ್ದೇನೆ ಎಂದು ತಂಡಕ್ಕಾಗಿ ಏಕಾಂಗಿಯಾಗಿ ಹೋರಾಡಿದವರು. ಹಲವು ಟೆಸ್‌ಟ್‌ ಹಾಗೂ ಏಕದಿನ ಪಂದ್ಯಗಳನ್ನು ಭಾರತದ ಪಾಲಿಗೆ ಉಳಿಸಿಕೊಟ್ಟವರು. ಇಂತಹ ದ್ರಾವಿಡ್ ನಿವೃತ್ತಿಯಾದಾಗ ಭಾರತದ  ಪಾಲಿಗೆ ಮುಂದೇನು ಎನ್ನುವ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ.
ಕ್ರಿಕೆಟ್ ಅಂಗಣದಿಂದ ನಿವೃತ್ತಿಯಾದರೇನಂತೆ ನನ್ನಂತಹ ಹಲವು ದ್ರಾವಿಡ್‌ರನ್ನು ಸೃಷ್ಟಿ ಮಾಡಿಕೊಡುತ್ತೇನೆ ಎಂದು ನಿಲುವು ತಾಳಿದ್ದು ಇದೇ ದಿ ವಾಲ್. ಆಟಗಾರನಾಗಿ ವಿದಾಯ ಹೇಳಿದ್ದರೂ ತರಬೇತುದಾರನಾಗಿ ಭಾರತದ  ಪಾಲಿಗೆ ಮತ್ತದೇ ಆಪದ್ಬಾಾಂಧವನ ಪಾತ್ರ ವಹಿಸುತ್ತಿರುವವನು ದ್ರಾವಿಡ್.
ಸುಮ್ಮನೇ ಗಮನಿಸಿ, ಅದೆಷ್ಟೋ ಯುವಕರು ಭಾರತ  ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ತುದಿಗಾಲಲ್ಲಿದ್ದಾರೆ. ಮತ್ತೆ ಹಲವರು ತಮ್ಮ ಬ್ಯಾಟಿಂಗ್ ಪ್ರತಿಭೆಯ ಮೂಲಕ ರಾಷ್ಟ್ರೀಯ ತಂಡದ ಕದವನ್ನು ತಟ್ಟುತ್ತಿದ್ದಾರೆ. ಮೊದಲಿನಂತೆ ಯಾವುದೇ ಆಟಗಾರ ವಿಫಲನಾದರೆ ಯಾರನ್ನು ಹುಡುಕುವುದು ಎನ್ನುವ ಪ್ರಶ್ನೆ ಇದೀಗ ಆಯ್ಕೆ ಮಂಡಳಿಯನ್ನು ಕಾಡುವುದಿಲ್ಲ. ದ್ರಾವಿಡ್ ಹಲವು ಆಟಗಾರರನ್ನು ಬದಲಿಯಾಗಿ ರೂಪಿಸಿ ಇಟ್ಟಿದ್ದಾರೆ. ಇದೇ ದ್ರಾವಿಡ್ ತಾಕತ್ತು.
ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರಿಷಬ್ ಪಂಥ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅನುಕೂಲ್ ರಾಯ್, ಹನುಮ ವಿಹಾರಿ, ಶುಬ್‌ಮನ್ ಗಿಲ್, ಮನ್‌ಜ್ಯೋತ್ ಕಲ್ರಾ, ಹಿಮಾಂಶು ರಾಣಾ... ದ್ರಾವಿಡ್ ಗರಡಿಯಲ್ಲಿ ಪಳಗಿ, ಬೆಳಗಿದವರ ಲೀಸ್‌ಟ್‌ ಹೀಗೆಯೇ ಮುಂದುವರಿಯುತ್ತದೆ. ಮುಂದುವರಿಯುತ್ತಲೇ ಇದೆ ಬಿಡಿ.
ದ್ರಾವಿಡ್ ಭಾರತದ ಎ ತಂಡದ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದಾಗ, ಅವರು ಹಿರಿಯರ ತಂಡದ ಕೋಚ್ ಆಗಬೇಕಿತ್ತು ಎಂದು ಬಯಸಿದವರು ಅನೇಕರು. ಆ ಸಂದರ್ಭದಲ್ಲಿ  ಅಂತಹ ಆಫರ್‌ನ್ನು ನಯವಾಗಿ ತಿರಸ್ಕರಿಸಿದ ದ್ರಾವಿಡ್, ಕ್ರಿಕೆಟ್ ಲೋಕದ ಯುವ ಮನಸ್ಸುಗಳನ್ನು ಮಾಗಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಷ್ಟೇ ಅಲ್ಲ, ಗೆಲುವು ಸಾಸುವ ಜತೆ ಹೇಗೆ ಸಂಭ್ರಮಿಸಬೇಕು ಎಂಬುದನ್ನೂ ಹೇಳಿಕೊಟ್ಟರು. ಅಪ್ಘಾನಿಸ್ಥಾನದಂತಹ ತಂಡಗಳು ಅಚ್ಚರಿಯ ಹಾಗೂ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ ನೀಡಿದಾಗೆಲ್ಲ ಅಂತವರ ಬೆನ್ನಿಗೆ ನಿಂತು ಶ್ಲಾಘಿಸುವ ಕಾರ್ಯವನ್ನೂ ಕೈಗೊಂಡು ಆದರ್ಶ ಮೆರೆದರು.
ದ್ರಾವಿಡ್ ಕ್ರಿಕೆಟ್ ಕೋಚ್ ಆಗಿ ಅಷ್ಟೇ ಕಾರ್ಯ ನಿರ್ವಹಿಸಲಿಲ್ಲ. ಬದಲಾಗಿ ಅಥ್ಲೆಟಿಕ್‌ಸ್‌‌ನ ಪ್ರತಿಭೆಗಳ ಬೆನ್ನಿಗೆ ನಿಲ್ಲುವ ಕಾರ್ಯವನ್ನೂ ಮಾಡಿದರು. ಏಷ್ಯನ್ ಗೇಮ್‌ಸ್‌‌ನಲ್ಲಿ ಪದಕ ಗೆದ್ದ ಸ್ವಪ್ನ ಬರ್ಮನ್‌ಳಂತಹ ಹಲವು ಪ್ರತಿಭೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ನಿರೂಪಿಸಿದರು.
ದ್ರಾವಿಡ್ ಶಿಷ್ಯರು ಇದೀಗ ಭಾರತದ ಕ್ರಿಕೆಟ್ ತಂಡದ ಆಧಾರ ಸ್ಥಂಭವಾಗುವಂತಹ ಹಂತ ತಲುಪಿದೆ. ದ್ರಾವಿಡ್ ಹುಡುಗರು ಇದೀಗ ಸದ್ದು ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ, ಮುಂದಿನ ದಿನಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಭಾರತ ತಂಡಕ್ಕೆ ಆಯ್ಕೆ ಆದ ಸಂದರ್ಭದಲ್ಲಿ ತನ್ನ ಈ ಸಾಧನೆಗೆ ದ್ರಾವಿಡ್ ತರಬೇತಿ ಹಾಗೂ ಸಲಹೆಯೇ ಕಾರಣ ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಇದ್ದರೆ ಇರಬೇಕು ಇಂತಹ ಗುರು ಎಂಬಂತಾಗಿದೆ.

Thursday, October 11, 2018

ಮ್ಯಾಕ್ಸ್ ಮುಲ್ಲರನ ದತ್ತು ಪುತ್ರ ಭಗವಾನ್ ಮನಸ್ಸಿನ ಗೊಂದಲಗಳು


ಕೆಲವರಿರುತ್ತಾರೆ, ಅವರಿಗೆ ಇದ್ದದ್ದರಲ್ಲಿ ಕೊಂಕನ್ನು ಹುಡುಕುವುದು, ತಪ್ಪನ್ನು ಹುಟ್ಟು ಹಾಕುವುದು ಇತ್ಯಾದಿಗಳ ಮೇಲೆಯೇ ಆಸಕ್ತಿ. ಎಲ್ಲವನ್ನೂ ಸುಳ್ಳು ಎನ್ನುವ ಮೂಲಕ ತಮ್ಮ ಅಸ್ತಿತ್ವವನ್ನು ಪ್ರಚುರ ಪಡಿಸುವುದೇ ಬಹುಮುಖ್ಯ ಕಾರ್ಯವಾಗುತ್ತದೆ. ಅಂತಹ ಸಾಲಿನಲ್ಲಿ ಮುಖ್ಯವಾಗಿರುವವರೇ ಭಗವಾನ್.ಕಳೆದ ಕೆಲವು ವರ್ಷಗಳನ್ನು ನೋಡಿದರೆ ಪ್ರತಿ ದಸರಾ, ನವರಾತ್ರಿ ಬಂತೆಂದರೆ ಸಾಕು, ದೀಪಾವಳಿ ಬಂತೆಂದರೆ ಸಾಕು ಭಗವಾನ್ ತಮ್ಮ ನಾಲಗೆಯನ್ನು ಉದ್ದ ಮಾಡುತ್ತಾಾರೆ. ರಾಮ ಸುಳ್ಳು, ರಾಮಾಯಣ ನಡೆದಿಲ್ಲ, ಸೀತೆ ಸುಳ್ಳು, ಮಹಾಭಾರತ ನಡೆದಿಲ್ಲ, ಪುರಾಣಗಳೆಲ್ಲ ಪೊಳ್ಳು ಎನ್ನುವ ಅರ್ಥದಲ್ಲಿ ಮಾತನಾಡುತ್ತಾಾರೆ. ಯಜ್ಞ ಯಾಗಾದಿಗಳಲ್ಲಿ ಯಾವುದೇ ಶಕ್ತಿ ಇಲ್ಲ, ನೀವು ಕಟ್ಟಿಕೊಂಡ ದಾರಕ್ಕೆ ಶಕ್ತಿ ಇದ್ದರೆ ಪಾಕಿಸ್ಥಾನ ಹಾಗೂ ಚೀನಾದ ಗಡಿಗೆ ಹೋಗಿ ಯಜ್ಞ ಯಾಗಾದಿಗಳನ್ನು ಮಾಡಿ ಎಂದು ಹಲುಬುತ್ತಾರೆ. ಸಹಸ್ರ ಸಹಸ್ರ ವರ್ಷಗಳ ಭವ್ಯ ಇತಿಹಾಸವಿರುವ ಭಾರತದ ಕುರಿತು ಹೀಗಳೆಯುವ ಮಾತನಾಡುತ್ತಾಾರೆ. ಅಷ್ಟೇ ಏಕೆ ಯಾರಾದರೂ ತಮ್ಮನ್ನು ಉಪನ್ಯಾಾಸಕ್ಕೆ ಕರೆದರೆ, ಅಂತಹ ವೇದಿಕೆಗಳಲ್ಲಿ ಹಿಂದೂ ದೇವರುಗಳನ್ನು ಬಯ್ಯಲು ಶುರುವಿಟ್ಟುಕೊಳ್ಳುತ್ತಾಾರೆ. ನಮ್ಮ ಪುರಾಣಗಳ ಬಗ್ಗೆ, ಗಣಪ, ಕೃಷ್ಣ, ಶಿವ, ರಾಮ, ವಿಷ್ಣು ಹೀಗೆ ನಮ್ಮ ಅಸಂಖ್ಯಾತ ದೇವರುಗಳ ಬಗ್ಗೆ ತಮ್ಮದೇ ಆದ ಹೊಸ ವ್ಯಾಖ್ಯಾನಗಳನ್ನು ನೀಡಲು ಆರಂಭಿಸುತ್ತಾರೆ. ಯಜ್ಞ ಯಗಾದಿಗಳನ್ನು ದ್ವೇಷ ಮಾಡುತ್ತಾರೆ. ತಮ್ಮ ಮನಸ್ಸಿನಲ್ಲಿ ಏನೇನು ಅಂಶಗಳು ಮೂಡುತ್ತವೆಯೋ ಅದನ್ನೆಲ್ಲ ಸಂಶೋಧನೆ ಎಂದು ಹೇಳುವ ಮೂಲಕ ಇತಿಹಾಸವೆಂಬ ಹಸಿ ಗೋಡೆಯ ಮೇಲೆ ಹರಳನ್ನು ಅಂಟಿಸಲು ಯತ್ನಿಸುತ್ತಾರೆ.ಇಂತಹ ಭಗವಾನರ ಮಾತುಗಳಿಗೆ ತಲೆಯಲ್ಲಾಡಿಸಲು ಕೆಲವು ವಂದಿ ಮಾಗಧರೂ ಇದ್ದಾರೆ. ಭಗವಾನ್ ಹೇಳಿದ್ದೆಲ್ಲ ಸತ್ಯ ಎನ್ನುವ ಹಿರಿ-ಕಿರಿ ಹಾಗೂ ಕಿರಿಕಿರಿ ತಲೆಗಳೂ ಇವೆ. ಭಗವಾನ್ ಒಂದು ಬಾಣವನ್ನು ಬಿಡುವುದನ್ನೇ ಕಾಯುತ್ತಿರುವ ಇಂತಹ ಪ್ರಭೃತಿಗಳೆಲ್ಲ ಆ ಬಾಣದ ಹಿಂದೆ ತಮ್ಮದೂ ಒಂದಿರಲಿ ಎಂದು ಸಾಲು ಸಾಲು ಕಿರು, ಮರಿ ಬಾಣಗಳನ್ನು ಬಿಡಲು ಆರಂಭಿಸುತ್ತಾರೆ. ಇಂತಹ ಪ್ರಭೃತಿಗಳಿಗೆ ನಿಜವಾದುದ್ಯಾವುದೂ ಬೇಕಾಗಿಲ್ಲ. ಇತಿಹಾಸವನ್ನು ತಿರುಚುವುದು, ನಮ್ಮದೇ ಸಂಪ್ರದಾಯ, ಸಂಸ್ಕೃತಿಗಳನ್ನು ಹೀಗಳೆಯುವುದು ಅಷ್ಟೇ ಸಾಕಾಗಿರುತ್ತದೆ. ಜತೆಗೆ ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ, ತುಳಿತ, ದಮನ ಇತ್ಯಾಾದಿಗಳನ್ನು ಹುಟ್ಟು ಹಾಕುವ ಅನಿವಾರ್ಯತೆ, ಅಗತ್ಯತೆ, ಅದರ ನಡುವೆಯೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಜರೂರತ್ತಿರುತ್ತದೆ.ಸೂಕ್ಷ್ಮವಾಗಿ ಗಮನಿಸಿದಾಗ ಭಗವಾನ್ ಮಾತುಗಳಲ್ಲಿ ಅಡಗಿರುವ ಹಲವು ವೈರುಧ್ಯಗಳು, ಗೊಂದಲಗಳು, ವೈರುಧ್ಯಗಳು ತಟ್ಟನೆ ನಮ್ಮ ಕಣ್ಣೆದುರಿಗೆ ಬರುತ್ತವೆ. ಬಹುಶಃ ಇದನ್ನು ಭಗವಾನ್ ಬಳಿ ಕೇಳಿದರೆ ಹಾರಿಕೆ ಉತ್ತರ ನೀಡಬಹುದು ಅಥವಾ ಜಾರಿಕೊಂಡು ಇನ್ನೇನೋ ಹೇಳಿ ತಪ್ಪಿಸಿಕೊಳ್ಳಬಹುದೇನೋ. ಇನ್ನೂ ಗಟ್ಟಿಯಾಗಿ ಕೇಳಿದರೆ ತುಳಿತ, ಹೇರಿಕೆ ಇತ್ಯಾದಿ ಶಬ್ದಗಳನ್ನು ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬಹುದು.ಭಗವಾನ್ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೆಂದರೆ ರಾಮಾಯಣ ಸುಳ್ಳು ಎನ್ನುವ ವಿಷಯವನ್ನು. ರಾಮ ಸುಳ್ಳು, ಸೀತೆ ಭೂಮಿಯ ಅಂತರಂಗದಿಂದ ಬಂದಿಲ್ಲ ಎನ್ನುವ ವಿಷಯವನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ಇದೇ ಭಗವಾನ್ ರಾವಣನ ಕುರಿತು ಮಾತನಾಡುತ್ತಾರೆ. ರಾವಣ ರಾಕ್ಷಸನಲ್ಲ, ಆತನನ್ನು ಬೇಕೆಂದೇ ರಾಕ್ಷಸನಂತೆ ಚಿತ್ರಿಸಲಾಗಿದೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳ ನಡುವೆಯೇ ಹಲವು ಗೊಂದಲಗಳು ಕಾಡುತ್ತವೆ. ರಾಮ, ಸೀತೆ ಸುಳ್ಳು ಎನ್ನುವ ಭಗವಾನ್‌ಗೆ ರಾವಣ ಮಾತ್ರ ನಿಜವಾಗಿ ಕಾಣುವುದು ವಿಚಿತ್ರ. ರಾಮಾಯಣವೇ ನಡೆದಿಲ್ಲ ಎಂದು ಹೇಳುವ ಇವರು ರಾವಣ ಮಾತ್ರ ನಿಜ ಎನ್ನುವ ಮೂಲಕ ತಮ್ಮ ಮನಸ್ಸಿನಲ್ಲಿಯೇ ಗೊಂದಲ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ರಾಮಾಯಣ ಸುಳ್ಳು ಎನ್ನುವ ಇವರು ರಾವಣನನ್ನೂ ಸುಳ್ಳು ಎಂದು ಹೇಳಲು ಹೋಗುವುದಿಲ್ಲ. ಅದೇ ರೀತಿ ರಾವಣನನನ್ನು ಹೀರೋ ಎಂದು ಪ್ರಚುರಪಡಿಸಲು ಮುಂದಾಗುವ ಭಗವಾನ್ ರಾಮಾಯಣವನ್ನು ತಾವೇ ಸುಳ್ಳು ಎಂದು ಹೇಳಿದ್ದನ್ನು ಜಾಣರಂತೆ ಮರೆತುಬಿಡುತ್ತಾರೆ.ಬಾಯಿ ಬಿಟ್ಟರೆ ಬ್ರಾಹ್ಮಣರಿಂದ ದಲಿತರ ಮೇಲೆ ಅನ್ಯಾಯವಾಗಿದೆ ಎಂದು ಹೇಳುವವರು ಭಗವಾನ್. ವೈದಿಕರು ಹಿಂದುಳಿದವರನ್ನು ತುಳಿದರು ಎಂದು ಒರಲುತ್ತಾರೆ. ಅರಚುತ್ತಾರೆ. ಇದೇ ಭಗವಾನ್ ರಾವಣನನ್ನು ಪೂಜಿಸಬೇಕು ಎನ್ನುತ್ತಾರೆ. ಆದರೆ ರಾವಣ ಬ್ರಾಹ್ಮಣನಲ್ಲವೇ ಎಂದು ಕೇಳಿದರೆ ಅದಕ್ಕೆ ಉತ್ತರವನ್ನೇ ನೀಡುವುದಿಲ್ಲ. ಆರ್ಯರೆಂದರೆ ಬ್ರಾಹ್ಮಣರು, ದ್ರಾವಿಡರೆಲ್ಲ ದಲಿತರು ಎಂದು ಹೇಳುವ ಮೂಲಕ ಹೊಸದೊಂದು ವಾದ ಸರಣಿಯನ್ನು ಹುಟ್ಟು ಹಾಕುತ್ತಾರೆ. ರಾವಣನನ್ನು ದ್ರಾವಿಡರ ಸಾಲಿಗೆ ಸೇರಿಸಿಕೊಳ್ಳುವ ಇವರು, ಅಂತಹ ರಾವಣ ಬ್ರಾಹ್ಮಣನಲ್ಲವೇ ಎಂದರೆ ಮಾತನಾಡುವುದಿಲ್ಲ. ಭಗವಾನ್ ಮನಸ್ಸಿನ ಕುತರ್ಕದಂತೆಯೇ ಬ್ರಾಹ್ಮಣನಾದ ರಾವಣನನ್ನು ಇತರರು ತುಳಿದರಲ್ಲವೇ ಎಂದರೆ ಅದಕ್ಕೆ ಉತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.ದಸರೆ ಸಂದರ್ಭದಲ್ಲಿ ಮೈಸೂರು ಸಡಗರ, ಸಂಭ್ರಮದಲ್ಲಿ ಮಿಂದೇಳುತ್ತದೆ. ಹಬ್ಬವನ್ನಾಚರಿಸುತ್ತದೆ. ಇಡೀ ದೇಶವೇ ದಸರೆ ಹಬ್ಬದ ಸಡಗರವನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತದೆ. ನಮ್ಮೊೊಳಗಿನ ಅಂಧಃಕಾರವನ್ನು ಹೋಗಲಾಡಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು ಎಂದು ಬಯಸುತ್ತದೆ. ಆದರೆ ಆ ಸಂದರ್ಭಗಳಲ್ಲೇ ಭಗವಾನ್ ತಮ್ಮಲ್ಲಿನ ಅಂಧಃಕಾರವನ್ನು ಸಮಾಜದ ಮೇಲೆ ಕಾರುವ ಯತ್ನವನ್ನು ಮಾಡುತ್ತಾರೆ. ಮಹಿಷಾಸುರನ ಪರ ವಹಿಸಿ ಮಾತನಾಡುತ್ತಾರೆ. ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯ ಮೇಲಿಟ್ಟು ಮೆರವಣಿಗೆ ಮಾಡುವುದನ್ನು ವಿರೋಧಿಸುತ್ತಾರೆ. ಮಹಿಷನ ಮೂರ್ತಿಯನ್ನು ಇಡಬೇಕು, ಮಹಿಷಾಸುರ ದಸರಾವನ್ನು ಆಚರಿಸಬೇಕು ಎಂದೆಲ್ಲ ಬಡಬಡಿಸುತ್ತಾರೆ. ಆದರೆ ಹೀಗೆಲ್ಲ ಹುಯ್ಯಲಿಡುವ ಭಗವಾನ್, ಈ ಹಿಂದೆ ಹಲವು ವೇದಿಕೆಗಳಲ್ಲಿ ದೇವರು ಸುಳ್ಳು, ಪುರಾಣಗಳೆಲ್ಲ ಮಿಥ್ಯ ಎಂದು ಹೇಳಿದ್ದನ್ನು ಮರೆತುಬಿಡುತ್ತಾರೆ. ಇವರ ಪ್ರಕಾರ ದೇವರುಗಳು, ಪುರಾಣಗಳು ಮಾತ್ರ ಸುಳ್ಳು, ಆದರೆ ರಾಕ್ಷಸರು ಮಾತ್ರ ಸಥ್ಯವೇ?ಈ ಎಲ್ಲ ಅಂಶಗಳನ್ನೂ ಗಮನಿಸಿದಾಗ ಭಗವಾನ್ ಮನಸ್ಸು ಗೊಂದಲಗಳ ಗೂಡು ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೆ ಬ್ರಿಟಿಷರ ಕಾಲದಲ್ಲಿ ಮ್ಯಾಕ್ಸ್ ಮುಲ್ಲರ್ ಭಾರತದ ಸಂಸ್ಕೃತಿಯನ್ನು ನಾಶ ಮಾಡುವ ಪಣ ತೊಟ್ಟು ಅದಕ್ಕೆ ಪೂರಕ ಕಾರ್ಯಗಳನ್ನು ಕೈಗೊಂಡನಂತೆ. ದೀಗ ಭಗವಾನ್ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅವರನ್ನು ಮ್ಯಾಕ್ಸ್ ಮುಲ್ಲರ್ ವಾದಿ ಎಂದು ಕರೆಯಬಹುದು. ಅದಿಲ್ಲವಾದರೆ ಮ್ಯಾಕ್ಸ್ ಮುಲ್ಲರ್‌ನನ್ನು ಗುರು ಎಂದು ದತ್ತು ತೆಗೆದುಕೊಂಡ ಮಹಾನುಭಾವ ಎಂದು ಕರೆಯಬಹುದು.ಆರ್ಯ-ದ್ರಾವಿಡ ಸಿದ್ಧಾಾಂತ ಸಂಶೋಧನೆಗಳ ಮೂಲಕವೇ ಸುಳ್ಳು ಎಂದು ಸಾಬೀತಾಗಿದ್ದರೂ ಅದೇ ಅಂಶವನ್ನು ಹಿಡಿದುಕೊಂಡು ಜಗ್ಗಾಡುತ್ತ, ನಿಜ ಎಂದು ಬಿಂಬಿಸಲು ಮುಂದಾಗಿರುವ ಭಗವಾನ್ ಯಾವ ಪುರುಷಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ?ತಾವು ಪ್ರತಿಪಾದಿಸುವ ಅಂಶಗಳಿಗೆ ಕಟ್ಟು ಬೀಳಲಾಗದೇ ಅರ್ಧಮರ್ಧ ಮಾತ್ರ ವಿಷಯಗಳನ್ನು ಹೇಳಿ, ಅದನ್ನೂ ಸಮರ್ಥನೆ ಮಾಡಿಕೊಳ್ಳಲಾಗದೇ ನಗೆಪಾಟಲಿಗೀಡಾಗುತ್ತಿದ್ದಾರೆ. ಹಿಂದೂ ದೇವರನ್ನು, ಪುರಾಣಗಳನ್ನು ವಿರೋಧಿಸಬೇಕು. ದಾನವರ ಪೂಜೆಗೆ ಆದ್ಯತೆ ನೀಡಬೇಕು. ದೇವರನ್ನು ವಿರೋಧಿಸುವ, ದಾನವ ಪೂಜೆಗೆ ಮಹತ್ವ ನೀಡುವ ವಿದ್ಯಾರ್ಥಿ ವೃಂದವನ್ನು ಸೃಷ್ಟಿ ಮಾಡಬೇಕು ಇಂತಹ ಮನಸ್ಥಿತಿಯನ್ನು ಹೊಂದಿರುವ ಭಗವಾನ್ ತಮ್ಮ ಇಂತಹುದೇ ಮಾತುಗಳಿಂದ ಸಮಾಜದಲ್ಲಿ ಇನ್ನಷ್ಟು ನಿಕೃಷ್ಟವಾಗುತ್ತಿದ್ದಾರೆ. ತಾವೇ ಮಾತಿನ ಮೂಲಕ ಹೇಳಿದ್ದನ್ನು ತಾವೇ ಸಮರ್ಥನೆ ಮಾಡಿಕೊಳ್ಳಲು ಒದ್ದಾಡಿ, ತಾವೊಬ್ಬ ಅಪ್ರಬುದ್ಧ ಎಂಬುದನ್ನು ಸಾಬೀತು ಮಾಡಿಕೊಳ್ಳುತ್ತಿದ್ದಾರೆ.ಇಂತಹ ಗೊಂದಲದ ಮನಸ್ಥಿತಿಯ ಭಗವಾನ್ ಬಹಿರಂಗ ಚರ್ಚೆಗೂ ಬರುವ ಪ್ರಯತ್ನ ನಡೆಸುವುದಿಲ್ಲ. ಬಹಿರಂಗ ಚರ್ಚೆಗೆ ಬಂದರೂ ಅಲ್ಲಿ ಸಮರ್ಪಕ ಉತ್ತರವನ್ನು ನೀಡುವುದೇ ಇಲ್ಲ.ತಾವೇ ಗೊಂದಲದ ತಳಹದಿಯ ಮೇಲೆ ಕೂತಿರುವಾಗ, ತಾವು ಹೇಳುತ್ತಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಶಕ್ತಿಯೇ ಇಲ್ಲವಾಗಿರುವಾಗ, ತಮ್ಮದೇ ನೆಲೆಗಟ್ಟನ್ನು, ತಮ್ಮದೇ ಸಂಸ್ಕೃತಿಯ ಕುರಿತಂತೆ ಇತಿಹಾಸದ ಸಂಶೋಧನೆ ಹೆಸರಿನಲ್ಲಿ ಸುಳ್ಳಿನ ಸರಮಾಲೆ ಕಟ್ಟುವಂತಹ, ಉಪನ್ಯಾಸಕ ಭಗವಾನ್ ವಿದ್ಯಾರ್ಥಿಗಳಿಗೆ ಇನ್ನೇನನ್ನು ತಾನೇ ಕಲಿಸಬಲ್ಲರು? ಯಾವ ನೆಲೆಗಟ್ಟಿನ ಮೇಲೆ ಶಿಷ್ಯ ಸಮೂಹವನ್ನು ಬೆಳೆಸಲು ಮುಂದಾಗಿದ್ದಾರೆ? ಇಂತಹವರ ಮುಂದೆ ಭಗವಂತನೇ ಬಂದು, ತಾನು ಭಗವಂತ ಎಂದರೂ ಅವರ ಕುರಿತು ಅನುಮಾನವನ್ನು ವ್ಯಕ್ತಪಡಿಸದೇ ಬಿಟ್ಟಾಾರೆಯೇ? ಹೇ ಭಗವಾನ್, ಈ ಭಗವಾನ್‌ಗೆ ಯಾವಾಗ ಬುದ್ಧಿ ಬರುತ್ತದೆಯೋ?

Wednesday, October 10, 2018

ಬಾಕ್ಸಿಂಗ್ ರಿಂಗ್ ಗೆ ಇಳಿದ ಚಾಯ್‌ವಾಲಾ

ಭಾರತ ಪ್ರತಿಭಾವಂತ ಕ್ರೀಡಾಪಟುಗಳ ದೇಶ. ಭಾರತದಲ್ಲಿ ಎಲ್ಲಿ ಯಾವ ಪ್ರತಿಭೆಯನ್ನು ಹೊಂದಿರುವ ಕ್ರೀಡಾಪಟುಗಳಿದ್ದಾರೆ ಎನ್ನುವುದು ಕಷ್ಟ. ಕೂಲಿ ಕಾರ್ಮಿಕನ ಮಗಳು, ಪಿಡಬ್ಲುಡಿ ಕೆಲಸಗಾರನ ಮಗ, ದನ ಕಾಯುವವ, ಮಾರುಕಟ್ಟೆಯಲ್ಲಿ ಮೂಟೆ ಎಸೆಯುವವ ಹೀಗೆ ಹಲವರು ತಮ್ಮ ಛಲ, ಶ್ರಮದಿಂದಾಗಿ ವಿವಿಧ  ಕ್ರೀಡೆಗಳಲ್ಲಿ ಪಾಲ್ಗೊೊಂಡು ದೇಶಕ್ಕೆ ಪದಕಗಳನ್ನೇ ಗೆದ್ದುಕೊಡುತ್ತಿದ್ದಾರೆ. ಅಂತಹ ಸಾಲಿಗೆ ಇನ್ನೋರ್ವ ಸೇರ್ಪಡೆಯಾಗಿದ್ದಾನೆ. ಅವನೇ ರಾಜೇಶಕುಮಾರ್ ಕಸಾನಾ.
ರಾಜೇಶ ಕುಮಾರ್ ಕಸಾನಾ ಪ್ರಸ್ತುತ ಬಾಕ್ಸಿಂಗ್ ರಿಂಗ್‌ನಲ್ಲಿ ಸದ್ದು ಮಾಡುತ್ತಿರುವ ಕ್ರೀಡಾಪಟು. ದೇಶದ ನಂಬರ್ 1ವೃತ್ತಿಪರ ಬಾಕ್ಸರ್ ಎಂದು ಕರೆಸಿಕೊಂಡಿರುವಾತ. ಇಂತಹ ಕ್ರೀಡಾಪಟು ಚಹಾ ಮಾರಾಟ ಮಾಡಿ, ಬಾಕ್ಸಿಂಗ್ ರಿಂಗ್‌ನಲ್ಲಿ ಪ್ರತಿಭೆ  ಪ್ರದರ್ಶನ ಮಾಡುತ್ತಿದ್ದ ಎನ್ನುವುದು ಅಚ್ಚರಿಯಾದರೂ ಸತ್ಯ.
ಹರಿಯಾಣದ ಬಿವಾನಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಚಹಾ ಮಾರುವ ರಾಜೇಶ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಮಿಂಚು ಹಡಿಸಿದ್ದಾರೆ. ಓಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರನ್ನು ಮಾದರಿಯಾಗಿ ಇರಿಸಿಕೊಂಡು ಅವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ತಮ್ಮ ಊರಿನಲ್ಲಿ ಎಲ್ಲರ ಪಾಲಿಗೆ ಅಕ್ಕರೆಯಿಂದ ಲುಕಾ ಎಂದು ಕರೆಸಿಕೊಳ್ಳುವ ರಾಜೇಶ್ ಸಹೋದರನ ಜೊತೆಗೆ ಟೀ ಅಂಗಡಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಮುಂಜಾನೆ ಐದು ಎಂಟೆಗೆ ಎದ್ದು ಚಹಾ ಮಾರಾಟ ಆರಂಭಿಸುವ ರಾಜೇಶ್ ಮದ್ಯಾಹ್ನ 1ರ ವರೆಗೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಾರೆ. ಮದ್ಯಾಹ್ನ ಊಟ-ವಿಶ್ರಾಾಂತಿಯ ಬಳಿಕ ಸಂಜೆ 6ರ ಹೊತ್ತಿಗೆ ಬಾಕ್ಸಿಂಗ್ ಅಭ್ಯಾಸ ಕ್ಕೆ  ತೆರಳುತ್ತಾರೆ.
10 ರೂಪಾಯಿಗೆ ಚಹಾ ಮಾರಾಟ ಮಾಡುವ ಕಸಾನಾ, ಈ ಮೂಲಕವೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಬಾಕ್ಸರ್ ಆಗಬೇಕು ಎನ್ನುವುದು ಅಪ್ಪನ ಕನಸು. ಈ ಕನಸ್ನು ನನಸಾಗಿಸಲು ಹೊರಟಿದ್ದಾಾರೆ ಕಸಾನಾ. ಎಷ್ಟೇ ಕಷ್ಟ ಬಂದರೂ ಅಪ್ಪನ ಕನಸು ನನಸು ಮಾಡುವ ಛಲ ರಾಜೇಶ್ ಕಸಾನಾದು.
 2015ರಲ್ಲಿ ಮೊದಲ ಬಾರಿಗೆ ವೃತ್ತಿಪರ ಬಾಕ್ಸಿಂಗ್ ರಿಂಗಿಗೆ ಇಳಿದ ರಾಜೇಶ್, ಮನ್‌ಪ್ರೀತ್ ಸಿಂಗ್‌ರನ್ನು ಮಣಿಸಿದ್ದರು. ಆ ಬಳಿಕ 10 ಸ್ಪರ್ಧೆಗಳಲ್ಲಿ 9 ಬಾರಿ ಗೆಲುವು ದಾಖಲಿಸಿದ್ದಾರೆ. ಇನ್ನೊೊಂದು ಪಂದ್ಯ ಡ್ರಾ ಆಗಿದೆ.
ಲೈಟ್‌ವೇಟ್ ವೃತ್ತಿಪರ ಬಾಕ್ಸಿಂಗ್ನಲ್ಲಿ ದೇಶದಲ್ಲೇ ನಂ.1 ಪಟ್ಟ ಎನಿಸಿಕೊಂಡಿದ್ದು, ವಿಶ್ವ ವೃತ್ತಿಪರ ಬಾಕ್ಸಿಂಗ್ ಲೈಟ್‌ವೇಟ್ ಶ್ರೇಯಾಂಕದಲ್ಲಿ 221ನೇ ಸ್ಥಾನದಲ್ಲಿದ್ದಾರೆ. 24ರ ಹರೆಯದ ರಾಜೇಶ್‌ರ ಅಪ್ಪ ಚಾಲಕರಾಗಿದ್ದರು. ಆದರೆ ಕ್ಯಾನ್ಸರ್‌ಗೆ ಬಲಿಯಾದರು. ಸೋದರಿಗೂ ಕ್ಯಾನ್ಸರ್ ತಗುಲಿದ್ದರಿಂದ 2011ರಲ್ಲಿ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು. 2013ರಲ್ಲಿ ಸೋದರಿ ಕೂಡಾ ಇಹಲೋಕ ತ್ಯಜಿಸಿದರು.
ಶಾಲಾ ಕಲಿಕೆ ಸಂದರ್ಭದಲ್ಲಿ  ಅಪ್ಪನನ್ನು ಕಳೆದುಕೊಂಡೆ. ಅವರ ಮರಣಾನಂತರ ನಾನು ಶಾಲೆ ಬಿಟ್ಟು ಡ್ರೈವರ್ ಆಗಿ ದುಡಿದೆ. ಆದರೆ ನಾನು ಅಂದುಕೊಂಡಂತೆ ನಡೆಯದ ಕಾರಣ ಇದೀಗ ಟೀ ಶಾಪ್ ನಡೆಸುತ್ತಿದ್ದೇನೆ ಎನ್ನುವುದು ರಾಜೇಶ್ ಮನದಾಳದ ಮಾತು.
ಇಂತಹ ರಾಜೇಶ್ ಬೆನ್ನಿಗೆ ರಾಯಲ್ ಸ್ಪೋರ್ಟ್‌ಸ್‌ ಪ್ರೊಮೊಕ್ಷ್ಸ್ ನಿಂತಿದೆ.
2016ರಲ್ಲಿ ದಿಲ್ಲಿಯ ಜ್ಯಾಗರಾಜ್ ಸ್ಟೇಡಿಯಂನಲ್ಲಿ ವಿಜೆಂದರ್ ಎಂಟನೇ ಬಾರಿಗೆ ವೃತ್ತಿಪರ ಸ್ಪರ್ಧೆ  ಗೆದ್ದಾಗ ಅವರ ಹೋರಾಟವನ್ನು ನಾನು ನಿಕಟವಾಗಿ ವೀಕ್ಷಿಸಿದ್ದೆ. ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೂ ಸಿಕ್ಕಿತು. ಆದರೆ ಅವರ ಜತೆ ಮಾರ್ಗದರ್ಶನ ಪಡೆಯುವ ಅವಕಾಶ ಸಿಕ್ಕಿಲ್ಲ ಎಂದು ರಾಜೇಶ್ ಹೇಳಿದ್ದಾಾರೆ.
ಭಾರತದಲ್ಲಿ ಇಂತಹ ಪ್ರತಿಭೆಗಳು ಸಾಕಷ್ಟಿವೆ. ಆದರೆ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವವರ ಸಂಕ್ಯೆ ಹೆಚ್ಚಳವಾಗಬೇಕಿದೆ. ಸ್ವಲ್ಪ ಸಹಾಯ ಮಾಡಿ, ಬೆನ್ನಿಿಗೆ ನಿಂತರೆ ವಿಶ್ವವೇ ಬೆರಗಾಗುವಂತಹ ಲಿತಾಂಶ ನೀಡಲು ಭಾರತದ ರ್ಸ್ಪಗಳು ಸಿದ್ಧರಿದ್ದಾಾರೆ. ಪ್ರತಿಭೆಗಳ ಖನಿಯಾಗಿರುವ ಆಟಗಾರರ ಬೆನ್ನುತಟ್ಟುವ ಕೆಲಸ ಎಲ್ಲೆಡೆ ಆಗಬೇಕಾಗಿದೆ.

Monday, October 8, 2018

ಅನುರಕ್ತ (ಕಥೆ ಭಾಗ-೧)

`ಸಂಜಯ ನಿಂಗೆ ನಾನು ನಮ್ಮ ಕಾಲೇಜು ಬದುಕು ಮುಗಿದ ನಂತರ ಹೈದರಾಬಾದ್ ನಲ್ ಇದ್ದಿದ್ದು ಗೊತ್ತಿದ್ದು ಅಲ್ದಾ?' ಎಂದು ನಾನು ಕೇಳಿದ್ದೆ. `ಹೌದೋ ಮಾರಾಯಾ.. ಅದ್ಯಾವ್ದೋ ಎಂಎನ್ಸಿಲಿ ಕೆಲಸ ಸಿಕ್ಕಿದ್ದು ಹೇಳಿ ಒಂದೋ ಎರಡೋ ವರ್ಷ ಇದ್ದಿದ್ದೆ ಅಲ್ದನಾ..' ಸಂಜಯ ಹೇಳಿದ್ದ.
`ಹೌದು.. ಎರಡು ವರ್ಷ ಇದ್ದೆ. ಅದಾಗಿ ಹತ್ತು ವರ್ಷವೇ ಕಳೆದು ಹೋಯ್ತು ನೋಡು..' ಅಂದೆ. ಸಂಜಯ ತಲೆ ಅಲ್ಲಾಡಿಸಿದ್ದ.
ನಮ್ಮ ಕಾಲೇಜು ಬದುಕು ಮುಗಿಸಿ ಅನಾಮತ್ತು 13-14 ವರ್ಷಗಳು ಕಳೆದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಸಂಜಯನಿಗೆ ನಾನು ಪೋನಾಯಿಸಿದ್ದೆ. ಆಗೀಗ ಪೋನ್ ಮುಖಾಂತರ ನಮ್ಮ ನಿರಂತರ ಸಂಭಾಷಣೆ ಇತ್ತಾದರೂ, ಈಗಿತ್ತಲಾಗಿ ಅದು ಕಡಿಮೆಯೇ ಆಗಿ ಹೋಗಿತ್ತು. ಅಪರೂಪದಲ್ಲಿ ಅಪರೂಪ ಎನ್ನುವಂತೆ ನಾನು ಪೋನ್ ಮಾಡಿದ್ದ ಸಂದರ್ಭದಲ್ಲಿ ಖಾಸಾ ಮಿತ್ರ ಸಂಜಯ ಖುಷಿ ಪಟ್ಟುಕೊಂಡೇ ಪೋನ್ ಎತ್ತಿದ್ದ.
ಆತನ ಬಳಿ ನಾನು `ಕೂಡಲೇ ಹೊರಟು ಬೆಂಗಳೂರಿಗೆ ಬಾ.. ಅಸ್ಸಾಂಗೆ ಹೋಗೋದಿದೆ. ಕನಿಷ್ಟ 15 ದಿನದ ಪಯಣ. ನಿನಗೆ ಸೀಟ್ ಬುಕ್ ಮಾಡಿದ್ದೇನೆ ಎಂದಿದ್ದೆ. ಇದ್ದಕ್ಕಿದ್ದಂತೆ ಅಸ್ಸಾಂಗೆ ಹೋಗೋಣ ಬಾ ಎಂದು ನಾನು ಹೇಳಿದ್ದನ್ನು ಕೇಳಿ ಹೌಹಾರಿದ ಮಿತ್ರ ಮೊದಲಿಗೆ ಆಗೋದಿಲ್ಲ ಎಂದನಾದರೂ ಕೊನೆಗೆ ನನ್ನ ಬೇಡಿಕೆಗೆ, ಒತ್ತಾಯಕ್ಕೆ ಒಪ್ಪಿಕೊಂಡು ಬಂದಿದ್ದ.
ಯಶವಂತಪುರದಿಂದ ಅಸ್ಸಾಂನ ದಿಬ್ರುಘಡ ನಿಲ್ದಾಣ ತಲುಪುವ ಕಾಮಾಖ್ಯಾ ಎಕ್ಸ್ ಪ್ರೆಸ್ ರೈಲು ಮೂರನೇ ಸಾರಿ ಕೂಗುವ ವೇಳೆಗಾಗಲೇ ನಾನು ಸಂಜಯ ನಮ್ಮ ಸೀಟಿನಲ್ಲಿ ಕುಳಿತು ಹರಟೆಯನ್ನು ಕೊಚ್ಚಲು ಆರಂಭಿಸಿದ್ದೆವು. ಅಜಮಾಸು ಮೂರೂವರೆ ಸಹಸ್ರ ಕಿಲೋಮೀಟರುಗಳ ದೂರದ ಪ್ರಯಾಣ ಆರಂಭವಾಗುವ ವೇಳೆಗಾಗಲೇ ನಾನು ಅಸ್ಸಾಂನಲ್ಲಿ ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಹೋಗಬೇಕು ಎಂದು ಆಲೋಚಿಸ ಹತ್ತಿದ್ದೆ. ಕರ್ನಾಟಕವನ್ನು ದಾಟಿ, ಆಂಧ್ರದಲ್ಲಿ ಹಾದು, ಒಡಿಶಾವನ್ನು ತಲುಪಿ ಅಲ್ಲಿಂದಾಚೆಗೆ ಪಶ್ಚಿಮ ಬಂಗಾಳದಲ್ಲೆಲ್ಲ ಸುತ್ತಾಡಿದ ರೈಲು ಸೀದಾ ಸಿಲಿಗುರಿಯ ಮೂಲಕ ಅಸ್ಸಾಂ ಕಡೆಗೆ ಚುಕು ಬುಕು ಎನ್ನುತ್ತಿತ್ತು. ಸುದೀರ್ಘ ಪಯಣ ಅದು. ಮೂರು ದಿನಗಳ ಕಾಲ ಸಹನೆಯಿಂದ ಸಹಿಸಿಕೊಳ್ಳಬೇಕೆಂಬಂತಹ ಪಯಣ.
`ಅಲ್ದೋ ಮಾರಾಯಾ... ಯಾವ್ದೋ ಫ್ಲೈಟ್ ಬುಕ್ ಮಾಡ್ಕಂಡು ಹೋಗಿದ್ರೆ ಮೂರ್ನಾಲ್ಕು ತಾಸಲ್ಲಿ ಅಸ್ಸಾಂಗೆ ಹೋಗ್ಲಕ್ಕಾಗಿತ್ತಲಾ...' ಎಂದು ಸಂಜಯ ಹೇಳಿದ್ದ.
`ನಿಂಗೊತ್ತಿದ್ದಲಾ.. ಬೇರೆ ಬೇರೆ ಪ್ರದೇಶಗಳನ್ನ ನೋಡೋದು ಅಂದ್ರೆ ನಂಗಿಷ್ಟ ಅಂತ.. ರೈಲಲ್ಲು ಹೋದ್ರೆ ಸಮಯ ಹೆಚ್ಚಾದ್ರೂ ಅಡ್ಡಿಲ್ಲೆ, ಬೇರೆ ಬೇರೆ ರಾಜ್ಯ, ಅಲ್ಲಿನ ಜನರನ್ನು ನೋಡ್ಲಕ್ಕು ಅಂತ ಈ ಥರ ಮಾಡಿದ್ದಿ ನೋಡು.. ಈ ಭಾರತೀಯ ರೈಲು ಅನ್ನೋದು ಸಾವಿರ ಸಂಸ್ಕೃತಿಗಳ ಸಂಗಮ. ಇದರಲ್ಲಿ ಸಿಗೋ ಮಜಾ ವಿಮಾನದಲ್ಲಿ ಸಿಕ್ತಿಲ್ಲೆ..' ಎಂದಿದ್ದಕ್ಕೆ ಸಂಜಯ ತಲೆಯಾಡಿಸಿ ಕಿರುನಗೆ ಸೂಸಿದ್ದ.
`ನೀ ಏನೋ ಇದ್ದಕ್ಕಿದ್ದಂತೆ ಪೋನ್ ಮಾಡ್ಕಂಡ ಬಾ ಅಂದೆ.. ಆನು ಹೇಳಿದ್ನಿಲ್ಲೆ ಕೇಳಿದ್ನಿಲ್ಲೆ ಬಂದ್ ಬಿಟ್ಟಿ... ಅಸ್ಸಾಂಗೆ ಹೋಪದು ಹೇಳಿ ಅಷ್ಟೇ ನೀ ಹೇಳಿದ್ದು... ಆನಂತೂ ಎಲ್ಲಿಗ್ ಹೋಪದು, ಎಂತಕ್ಕೆ ಏನೂ ಕೇಳದ್ದೇ ಹೊಂಟಿದ್ದಿ ನೋಡು... ಕೊನೆಕೊಯ್ಲು ಮುಗದ್ದು, ಅಡಕೆ ಸೊಲಿಯಲೆ ಜನ ಬಂಜ.. ದನ ಬೇರೆ ಕರಾ ಹಾಕಿದ್ದು. ಆದರೂ ನಾನು ನೀ ಹೇಳಿದ್ದೆ ಹೇಳಿ ಸಿಕ್ಕಿದ್ ಬಸ್ ಹತ್ಕಂಡು ಬಂಜಿ ನೋಡು.. ಏನ್ ನಿನ್ ಕಥೆ.. ಎಂತಕ್ ಅಸ್ಸಾಂಗೆ ಹೊಮಟಾಜು ಎಂತತದೂ ಅಂತ್-ಪಾರ್ ಹರಿತಾ ಇಲ್ಲೆ ನಂಗೆ.. ಈಗಾದ್ರೂ ಹೇಳು ಮಾರಾಯಾ.. ನಾವ್ ಎಂತಕ್ ಅಲ್ಲಿಗೆ ಹೊಂಟಾಜು? ನೀ ಬೇರೆ ಒಬ್ನೆ ಹೊಂಟಿದ್ದೆ. ನಿನ್ ಹೆಂಡ್ತಿನ ಮನೆಲ್ ಬಿಟ್ಟಿಕ್ ಬಂಜ್ಯಾ?' ಎಂದು ಸಂಜಯ ಒಂದೇ ಉಸುರಿಗೆ ಮಾತನಾಡುತ್ತಿದ್ದ. ಅವನ ಪ್ರಶ್ನೆಗಳ ಸುರಿಮಳೆಗೆ ಎದುರಾಗಿ ನಾನು, ಯಾವುದಕ್ಕೆ ಮೊದಲು ಉತ್ತರ ಹೇಳಲಿ ಎಂದು ಆಲೋಚಿಸುತ್ತಿದ್ದ ವೇಳೆಗಾಗೇ ನಮ್ಮನ್ನು ಹೊತ್ತಿದ್ದ ಕಾಮಾಕ್ಯ ಎಕ್ಸ್ ಪ್ರೆಸ್ ರೈಲು ದಿಬ್ರುಘಡತ್ತ ಮುಖ ಮಾಡಲು ಧಡ ಧಡ ಎನ್ನುತ್ತಿತ್ತು. ಸಂಜಯ ತನ್ನ ಕಾರ್ಯ ಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಬಂದಿದ್ದ. ನನ್ನ ಮನಸ್ಸು ಹಸಿಯಾಗಿತ್ತು.
`ನೋಡು ಸಂಜು... ನಾವ್ ಅಸ್ಸಾಂಗೆ ಹೋಗವು ಅಂತಾದ್ರೆ ಮೂರು ದಿನ ಪ್ರಯಾಣ ಮಾಡವು.. ಅಷ್ಟರಲ್ಲಿ ನಿಂಗೆ ಹೇಳದ್ದೇ ಇರ್ತ್ನನಾ...' ಎಂದೆ..
`ಹು.. ಮೂರು ದಿನದ ವರೆಗೆ ಹೇಳುವಂತಹ ಕಥೆಯನೋ ನಿಂದು...ಅಷ್ಟೆಲ್ಲ ಉದ್ದ ಹೇಳಡ ಮಾರಾಯಾ. ಕಥೆ ಸಣ್ಣ ಇರ್ಲಿ ಮಾರಾಯಾ.. ಉದ್ದ ಆದ್ರೆ ಬ್ಯಾಸರ ಬಂದೋಗ್ಲಕ್ಕು ನೋಡು..' ಸಂಜಯ ಹೌಹಾರಿದಂತೆ ಕೇಳಿದ್ದ. ಕಣ್ಣು ಮಿಟುಕಿಸಿ ಹೇಳಿದ್ದ. ಅವನ ಮಾತಿನಲ್ಲಿ ತಮಾಷೆ ಎದ್ದು ಕಾಣಿಸಿತ್ತು. ನಾನು ಹಿತವಾಗಿ ನಕ್ಕಿದ್ದೆ.
`ಹಂಗೆಂತದ್ದೂ ಇಲ್ಲೆ ಮಾರಾಯಾ.. ಸರಿಯಾಗ್ ಹೇಳಿದ್ರೆ ಅರ್ಧಗಂಟೆಲ್ ಯನ್ ಕಥೆ ಮುಗಿದು ಹೋಗ್ತು.. ಇನ್ನು ಕಥೆ ಎಳಿಯವು ಹೇಳಾದ್ರೆ ಮೂರು ದಿನದವರೆಗೂ ಮಾಡ್ತಿ ನೋಡು..' ಎಂದೆ ನಾನೂ ಅಷ್ಟೇ ತಮಾಷೆಯಿಂದ.
ತಲೆ ಅಲ್ಲಾಡಿಸಿ ಹೌದೆಂದು ಒಪ್ಪಿಕೊಂಡಿದ್ದ ಸಂಜಯ `ಮೂರ್ ದಿನ ಎಲ್ಲ ಬ್ಯಾಡ ಮಾರಾಯಾ.. ಚಿಕ್ಕದಾಗಿ ಹೇಳು... ಎಂತಕ್ ಹೋಗ್ತಾ ಇದ್ದಾಜು ಹೇಳಿ... ' ಅಂದಿದ್ದ. ಧಾರಾವಾಹಿಯಂತೆ ನಾನು ಕಥೆ ಎಳೆಯುವಲ್ಲಿ ಶೂರ ಎನ್ನುವುದು ಅವನಿಗೆ ಗೊತ್ತಿತ್ತಾದ್ದರಿಂದ ಮೊದಲೇ ಆತ ಅದಕ್ಕೆ ತಡೆ ಒಡ್ಡಿಬಿಟ್ಟಿದ್ದ.
ನಾನು ಹುಂ ಅಂದವನೇ ಹೋಗುವ ಕಾರಣ ಶುರು ಹಚ್ಚಿಕೊಂಡಿದ್ದೆ. ನಮ್ಮ ಪಯಣ ಶುರುವಾಗಿತ್ತು.
ಬದುಕಲ್ಲಿ ನೂರಾರು ತಿರುವುಗಳು ಸದಾ ಇರುತ್ತವೆ. ಇಂತಹ ತಿರುವು ನನ್ನ ಬದುಕಲ್ಲೂ ಇತ್ತು. ಅದಕ್ಕೆ ತಕ್ಕಂತೆ ಹಲವಾರು ಘಟನೆಗೂ ಜರುಗಿದ್ದವು. ಇದೀಗ ನಾನು ಅಂತಹದೇ ಒಂದು ತಿರುವಿನಿಂದ ಸುದೀರ್ಘ ಪಯಣ ಶುರುಹಚ್ಚಿಕೊಂಡಿದ್ದೆ.
ಎಲ್ಲಿಯ ಅಸ್ಸಾಮು? ಎಲ್ಲಿಯ ನಮ್ಮೂರು.. ಒಂದಕ್ಕೊಂದು ಉತ್ತರ ದಕ್ಷಿಣದಂತೆ..

***

`ಸಂಜಯ.. ನಾನೂ ನೀನೂ ಡಿಗ್ರಿ ಮುಗ್ಸಿದ್ದರ ತನಕ ನಿಂಗೆ ನನ್ನ ಅಂತರಂಗ ಸಂಪೂರ್ಣ ಗೊತ್ತಿದ್ದು. ಆ ದಿನಗಳ ನಮ್ಮ ಬದುಕು, ಬವಣೆ, ಒದ್ದಾಟ ಇತ್ಯಾದಿಗಳಿಗೆಲ್ಲ ನೀನು ಪ್ರತ್ಯಕ್ಷದರ್ಶಿ. ನಮ್ಮ ಡಿಗ್ರಿ ಬದುಕು ಮುಗಿದ ತಕ್ಷಣ ನೀ ಏನೋ ಕೃಷಿ ಮಾಡ್ತಿ ಅಂತ ಊರಲ್ಲೇ ಉಳಕಂಡೆ. ಜೊತೆಗೆ ಲಾ ಓದವು ಅಂತ ಹೇಳಿ ಶಿರಸಿ ಕಾಲೇಜಲ್ಲಿ ಸೇರಿದ್ದೂ ತಿಳದಿತ್ತು. ನಂಗೆ ಮುಂದೆಂತ ಮಾಡವು ಅಂತ ಗೊತ್ತಾಗಿತ್ತಿಲ್ಲೆ. ಅದೇ ಟೈಮಲ್ಲಿ ನಂಗೆ ಎಂಬಿಎ ಸೀಟು ಸಿಕ್ಕಿತ್ತು. ಬೆಂಗಳೂರಿನ ಕಾಲೇಜೊಂದರಲ್ಲಿ ಓದಲು ಅವಕಾಶ ಸಿಕ್ಕಿತ್ತು. ಹಂಗಾಗಿ ನಾನು ಬೆಂಗಳೂರಿಗೆ ಬರೋದು ಅನಿವಾರ್ಯವೂ ಆಗಿತ್ತು..ಡಿಗ್ರಿ ಮುಗಿದ ತಕ್ಷಣವೇ ನಾನು ಬೆಂಗಳೂರಿಗೆ ಬಸ್ಸು ಹತ್ತಿದ್ದೆ..'
`ವಿನಿ... ಇದೆಲ್ಲ ಗೊತ್ತಿದ್ದದ್ದೇಯಾ ಮಾರಾಯಾ... ಆದರೆ ಆಮೇಲಿನ ಸಂಗತಿಗಳು ನಂಗೆ ಅಷ್ಟಾಗಿ ಗೊತ್ತಿಲ್ಲೆ ನೋಡು... ನೀನೂ ಹೇಳ್ಕಂಜಿಲ್ಲೆ.. ನಾನೂ ಕೇಳಿದ್ನಿಲ್ಲೆ..' ಎಂದ ಸಂಜಯ.
`ಹುಂ..'ಎಂದ ನಾನು ನಿಧಾನವಾಗಿ ನನ್ನ ಕಥೆಯನ್ನು ಹೇಳಲು ಶುರುಹಚ್ಚಿಕೊಂಡಿದ್ದೆ.
`ಎಂಬಿಎಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಓದಲು ಬಂದೆ. ಓದಿಗಾಗಿ ಬಂದವನು ಬೆಂಗಳೂರಿನ ಥಳುಕಿಗೆ, ಬಳುಕಿಗೆ ಹೊಂದಿಕೊಳ್ಳಲಾಗದೇ ತತ್ತರಿಸಿದೆ. ವೇಗ, ಧಾವಂತ, ಓಟಕ್ಕೆ ಸರಿಸಮನಾಗಿ ಓಡಲು, ಮುನ್ನುಗ್ಗಲು ಸಾಧ್ಯವಾಗದೇ ಎಡವುವ ಹಂತವೂ ಬಂದು ತಲುಪಿತು. ಎಕ್ಸಾಮುಗಳಲ್ಲಂತೂ ಪಾಸಾಗುವ ವರೆಗೆ ಸಾಕೋಬೇಕೋ ಆಗಿಹೋಗುವ ಹಂತವೂ ತಲುಪಿತು ಬಿಡು. ಇಂಗ್ಲೀಷು ನನ್ನ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿತ್ತು. ಆದರೆ ಕಾಲೇಜುಗಳಲ್ಲಿ ಮಾಡುತ್ತಿದ್ದ ಕನ್ನಡ ಮಾತಾಡುವ ಸ್ಪರ್ಧೆಗಳಲ್ಲಿ ನಾನೇ ಮುಂದಿರುತ್ತಿದ್ದೆ. ಎಂತ ಚಂದ ಕನ್ನಡ ಮಾತಾಡ್ತಾನೆ ಮಾರಾಯಾ ಇವ್ನು ಅನ್ನುವಷ್ಟರ ವರೆಗೆ...'
`ಆಮೇಲೆ..'
`ಇದೇನೋ ಸಾಗುತ್ತಿತ್ತು. ಆದರೆ ಓದಿನಲ್ಲಿ ಹಿಂದೆ ಬಿದ್ದಿದ್ದೆ. ಆ ದಿನಗಳಲ್ಲೇ ನನಗೆ ಪರಿಚಯ ಆದವಳು ವಿದ್ಯುಲ್ಲತಾ. ಅಸ್ಸಾಮಿನವಳು.. ಇದೋ.. ಇದೀಗ ಅವಳನ್ನೇ ಹುಡುಕಿ ಹೊರಟಿದ್ದೇನೆ.. ನಿನ್ನನ್ನೂ ಕರ್ಕೊಂಡು...' ಎಂದೆ.
`ಒಹೋ... ' ಎಂದ ಸಂಜಯ ಒಮ್ಮೆ ಅಚ್ಚರಿ ಪಟ್ಟುಕೊಂಡ. `ನಿನ್ನ ಹೆಂಡತಿಗೆ ಗೊತ್ತಾ...' ಕೀಟಲೆಯ ಧ್ವನಿಯಲ್ಲಿ ಕೇಳಿದ ಸಂಜಯ. ಇದಕ್ಕೆ ನಾನು ಉತ್ತರಿಸಲಿಲ್ಲ.
`ವಿದ್ಯುಲ್ಲತಾ ಎಂಬ ಹೆರಿನಲ್ಲೇ ಕ್ರಿಯಾಶೀಲತೆ ಇತ್ತು. ಚೈತನ್ಯವಿತ್ತು. ಆಕೆ ತೀರಾ ಸುಂದರಿಯಾಗಿರಲಿಲ್ಲ. ಹಾಗಂತ ಆಕೆ ತೀರಾ ಕಳಪೆಯೇನೂ ಆಗಿರಲಿಲ್ಲ. ಅಸ್ಸಾಮಿ ಹುಡುಗಿಯರಲ್ಲಿನ ವಿಶೇಷ ಆಕರ್ಷಣೆ ಅವಳಲ್ಲಿತ್ತು. ಬೆಳ್ಳಗಿನ ಅವಳ ಮುಖ.. ಹಣೆಯಲ್ಲಿ ಬೊಟ್ಟು ಇಲ್ಲದಿದ್ದರೂ, ಖಾಲಿ ಖಾಲಿಯಾಗಿದ್ದರೂ ಒಮ್ಮೆಗೆ ಸೆಳೆಯಬಲ್ಲ ಆಕೆಯ ಹಣೆ, ವಿಶಿಷ್ಟವಾದ ಕಪ್ಪು ಕಣ್ಣುಗಳು, ತುರುಬನ್ನು ಎತ್ತಿ ಕಟ್ಟುತ್ತಿದ್ದ ಆಕೆಯ ರೂಪ ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಒಂದೇ ರೀತಿಯ ಆಸಕ್ತಿಯನ್ನು ಹೊಂದಿರುವವರು ಹತ್ತಿರಕ್ಕೆ ಬರುತ್ತಾರೆ ಎನ್ನುವುದು ಪುರಾಣ ಕಾಲದಿಂದಲೂ ನಿಜವಾದದ್ದೇ. ವಿದ್ಯುಲ್ಲತಾಳಿಗೂ ಅಷ್ಟೇ. ನನ್ನಂತೆಯೇ ಇಂಗ್ಲೀಷು ಕಬ್ಬಿಣದ ಕಡಲೆಯಾಗಿತ್ತು. ಅಸ್ಸಾಮಿ ಭಾಷೆಯಲ್ಲಿ, ಹಿಂದಿಯಲ್ಲಿ ಆಕೆಯದ್ದು ಎತ್ತಿದ ಕೈ. ಆದರೆ ಇಂಗ್ಲೀಷು ಅಂದ ಕೂಡಲೇ ಆಕೆ ಹಿಂದೇಟು ಹಾಕುತ್ತಿದ್ದಳು. ಇಂತದ್ದೇ ಗುಣವನ್ನು ಹೊಂದಿದ್ದ ನನಗೂ , ಆಕೆಗೂ ಪರಿಚಯ ಆಗಲು ಬೇರೆಯ ಕಾರಣಗಳಿರಲಿಲ್ಲ ಬಿಡು. ನನ್ನಂತೆಯೇ ಆಕೆ, ಆಕೆಯಂತೆಯೇ ನಾನು. ಯಾವಾಗಲೋ ಸ್ನೇಹ ಬೆಳೆದಿತ್ತು..'
`ಆಮೇಲೆ..' ಎಂದು ಹೇಳುವ ವೇಳೆಗಾಗಲೇ ರೈಲು ಕರ್ನಾಟಕ ಗಡಿಯನ್ನು ದಾಟಿ ಆಂಧ್ರವನ್ನು ಹಾದು ಮುನ್ನುಗ್ಗುತ್ತಿತ್ತು. ಒಂದಿಬ್ಬರು ಚಾಯ್ ವಾಲಾಗಳು ಚಾಯ್ ಚಾಯ್ ಎನ್ನುತ್ತಲೂ, ಕಾಫಿ ಟಿ ಎನ್ನುತ್ತಲೂ ಸಾಗಿದ್ದರು. ನಾನು ಒಬ್ಬನನ್ನು ಕರೆದು ಇಬ್ಬರಿಗೂ ಚಾಯ್ ತಗೊಂಡು ಕುಳಿತೆ. ಒಂದು ಸಿಪ್ ಸೊರ್... ಎನ್ನುತ್ತಾ ಕುಡಿಯುತ್ತಿರುವಂತೆಯೇ ಸಂಜಯ `ಮುಂದೇನಾಯ್ತು ಹೇಳು ಮಾರಾಯಾ...'ಎಂದ. ಮುಂದುವರಿದ ಆತನೇ `ಪ್ರೀತಿ ಹುಟ್ಟಿತು.. ಅವಳನ್ನು ಹುಡುಕಿ ಹೊರಟಿದ್ದೀಯಾ.. ಇಷ್ಟೇ ಅಲ್ವಾ ನಿನ್ನ ಕಥೆ...' ಎಂದ.
ತಲೆ ಕೊಡವಿದ ನಾನು `ನನ್ನ ಕಥೆಯಲ್ಲಿ ಈ ಅಂಶಗಳೂ ಇದೆ. ಆದರೆ. ಇಷ್ಟೇ ಅಲ್ಲ ನನ್ನ ಕಥೆ. ಇನ್ನೂ ಇದೆ. ಸುಮ್ನೇ ಕೇಳು ಮಾರಾಯಾ..' ಎಂದೆ. ಸಂಜಯ ಸುಮ್ಮನೆ ಚಹಾ ಕುಡಿಯುತ್ತ ನನ್ನ ಮಾತಿಗೆ ಕಿವಿಯಾದ.
`ವಿದ್ಯುಲ್ಲತಾಳ ಸಾನ್ನಿಧ್ಯದಿಂದಲೇ ನನ್ನಲ್ಲಿ ಚೈತನ್ಯ ಸಂಚಾರವಾಗಿತ್ತು. ಹೊಸ ಹುರುಪು ನನ್ನಲ್ಲಿ ಮೂಡಿತ್ತು. ಇಂಗ್ಲೀಷಿನ ಕಡೆಗಿದ್ದ ಕೀಳರಿಮೆ ನನ್ನಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದದ್ದವು. ಆಕೆ ಅದೆಷ್ಟು ಕಲಿತಳೋ ಬಿಟ್ಟಳೋ ಗೊತ್ತಾಗಲಿಲ್ಲ. ನಾನಂತೂ ಆಕೆಯ ಜತೆಯಲ್ಲಿಯೇ ನನ್ನೊಳಗಿನ ಕೀಳರಿಮೆಯನ್ನು, ಹಿಂದೇಟು ಹಾಕುವಿಕೆಯನ್ನು ಮರೆತು ಹೊಸ ಚೈತನ್ಯವನ್ನು ಪಡೆದುಕೊಂಡಿದ್ದೆ.'
`ನನ್ನ ಬಗ್ಗೆ ಆಕೆ ಅದೆಷ್ಟು ತಿಳಿದುಕೊಂಡಳೋ ಗೊತ್ತಿಲ್ಲ. ಆದರೆ ಆಕೆಯ ಬಗ್ಗೆ ನಾನು ಬಹಳ ತಿಳಿದುಕೊಂಡೆ. ಅವಳು, ಅವಳ ಸಂಸ್ಕೃತಿ, ಆಹಾರ, ಆಚಾರ, ವಿಚಾರ.. ಅಹೋಮರು.. ಬೃಹ್ಮಪುತ್ರಾ ನದಿಯ ಅಘಾದತೆ, ತುಂಬಿ ಹರಿಯುವಾಗಿನ ಬ್ರಹ್ಮಪುತ್ರಾ ನದಿಯ ರುದ್ರ ನರ್ತನ.. ಬಿಹೂ ನೃತ್ಯ.. ಅಸ್ಸಾಮಿ ವಾದ್ಯಗಳು, ಅಸ್ಸಾಮಿನ ವಿಶಿಷ್ಟ ಖಾದ್ಯಗಳ ರುಚಿ ಹತ್ತಿಸಿದ್ದೂ ಇವಳೇ. ಅಸ್ಸಾಮಿನ ಖಾರ್ ಎಂಬ ಸಾಂಪ್ರದಾಯಿಕ ಖಾದ್ಯ, ಜೋಲ್ಪಾನ್, ಪಿಥಾ, ಲಾರು ಮುಂತಾದ ಸ್ನ್ಯಾಕ್ಸ್ ಗಳು, ನರಸಿಂಗ್ ಮೊಸರು ಜೋಲ್, ಮೊಸರ್ ತೆಂಗಾ, ಪುರಾ ಮುಂತಾದ ಹತ್ತಾರು ಆಹಾರಗಳ ರುಚಿ ತೋರಿಸಿದ್ದಲ್ಲದೇ ಕೆಲವನ್ನು ಮಾಡುವ ರೀತಿಯನ್ನು ನನಗೆ ಕಲಿಸಿದ್ದಳು...'
`ಬ್ರಹ್ಮಪುತ್ರಾ ನದಿಯ ಎಡಕ್ಕೆ ಬಹು ದೂರದ ಗುಡ್ಡದ ಗಡಿಯಲ್ಲಿ, ಭೂತಾನಿಗೆ ಹತ್ತಿರದಲ್ಲೆಲ್ಲೋ ಅವಳ ಮನೆ ಇದೆಯಂತೆ. ಎಂದೋ ಒಮ್ಮೆ ಅವಳು ಹೇಳಿದ್ದ ನೆನಪು. ತುಂಬು ಕುಟುಂಬದ ಮನೆ. ಹೊರ ಜಗತ್ತಿನ ಹೆಚ್ಚಿನ ಸೌಲಭ್ಯಗಳು, ಸೌಕರ್ಯಗಳನ್ನು ಕಾಣದ ಮನೆ. ಹಳೆಯ ಸಂಸ್ಕೃತಿಗಳನ್ನು ಉಳಿಸಿಕೊಂಡಂತಹ ಮನೆ ಅವಳದ್ದು. ಅಪ್ಪ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಅಮ್ಮ, ಹಿರಿಯಜ್ಜಿ ಹೀಗೆ ಮನೆ ತುಂಬ ಜನವೋ ಜನರು. ಸುಲಭವಾಗಿ ಹೇಳಬೇಕಂದರೆ, ತೆಲುಗು ಸಿನಿಮಾಗಳಲ್ಲಿ ಬರುವ ಅವಿಭಕ್ತ ಕುಟುಂಬಗಳಂತೇ ಅನ್ನಬಹುದು. ಆದರೆ ಇಡೀಯ ಕುಟುಂಬದಲ್ಲಿ ಎಂಬಿಎ ಓದುತ್ತಿರುವವಳು ಅಂದರೆ ವಿದ್ಯುಲ್ಲತಾ ಒಬ್ಬಳೆ ಆಗಿದ್ದಳಂತೆ. ಅವಳ ಕುಟುಂಬದಲ್ಲಿ ಪಿಯುಸಿ, ಡಿಗ್ರಿ ತನಕ ಓದಿದವರು ಹಲವರಿದ್ದರೂ, ಯಾರೊಬ್ಬರೂ ಇನ್ನೂ ಜಾಸ್ತಿ ಓದಿರಲಿಲ್ಲ ಎನ್ನುವುದು ಆಕೆಯಿಂದಲೇ ತಿಳಿದು ಬಂದ ಸಂಗತಿಯಾಗಿತ್ತು.'
'ಆಕೆಯ ಅಪ್ಪ ಮನೆಯ ಯಜಮಾನನಾಗಿದದ್ದ ಕಾರಣವೋ ಏನೋ, ಆಕೆ ಕುಟುಂಬದಲ್ಲಿ ಮುದ್ದಿನಿಂದಲೇ ಬೆಳೆದವಳು. ಅಸ್ಸಾಮಿನಲ್ಲಿ, ಹಿಂದಿಯಲ್ಲಿ.. ಆಕೆಯನ್ನು ಮೀರಿಸುವವರೇ ಇರಲಿಲ್ಲ. ಆದರೆ ಆಕೆಗೆ ಇಂಗ್ಲೀಷು ಮಾತ್ರ ಕಷ್ಟ ಕಷ್ಟ ಎಂಬಂತಾಗಿತ್ತು. ಅದ್ಹೇಗೇಗೋ ಇಂಗ್ಲೀಷಿನಲ್ಲಿ ಬರೆದು, ಪಾಸಾಗಿ ಬೆಂಗಳೂರಿಗೆ ಬರುವಂತಾಗಿದ್ದಳು. ಆಕೆಯ ಮನೆಯಲ್ಲಂತೂ ವಿದ್ಯುಲ್ಲತಾ ಬೆಂಗಳೂರಿಗೆ ಬರುವುದು ಸುತಾರಾಂ ಇಷ್ಟವಿರಲಿಲ್ಲವಂತೆ. ಆದರೂ ಅದ್ಹೇಗೋ ಒತ್ತಾಯ ಮಾಡಿ, ಹರಪೆ ಬಿದ್ದು, ಒಂದೆರಡು ದಿನಗಳ ಕಾಲ ಉಪವಾಸವನ್ನೇ ಕೈಗೊಂಡು ಬಂದಿದ್ದಳಂತೆ. ಬೆಂಗಳೂರಿಗೆ ಬಂದವಳು ಥೇಟು ನನ್ನಂತೆಯೇ.. ಇಲ್ಲಿನ ಧಾವಂತದಲ್ಲಿ ಕಳೆದೇ ಹೋಗುತ್ತೇನೆ, ಹೋಗುತ್ತಿದ್ದೇನೆ ಎನ್ನುವ ಸಂದರ್ಭದಲ್ಲಿ ಆಕೆಗೆ ನಾನು ಜತೆಯಾಗಿದ್ದೆ..'
'ನನಗೆ ಗೊತ್ತೆ ಇಲ್ಲದಂತೆಯೇ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ಆಕೆಯ ಮನಸ್ಸಿನಲ್ಲಿಯೂ ಹುಟ್ಟಿತ್ತೇನೋ ಗೊತ್ತಿಲ್ಲ. ಶುಭ ಸಂದರ್ಭದಲ್ಲಿ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಳು. ನನಗೆ ಸ್ವರ್ಗ ಮೂರೇ ಗೇಣಿಗೆ ಕೈಗೆ ಸಿಗುತ್ತದೆ ಎನ್ನುವಷ್ಟು ಸಂಭ್ರಮ..'
'ಆ ದಿನಗಳಲ್ಲಿ ನಾವು ಬೆಂಗಳೂರಿನಲ್ಲಿ ಅಡ್ಡಾಡಿದ ಜಾಗಗಳಿಲ್ಲ ಬಿಡು. ಕಾಲೇಜಿಗೆ ಹೋಗುತ್ತಿದ್ದೆವಾದರೂ ಅದರ ಜತೆ ಜತೆಯಲ್ಲಿಯೇ ನಮ್ಮ ಸುತ್ತಾಟ ಸಾಕಷ್ಟು ನಡೆದಿತ್ತು. ಬೆಂಗಳೂರಿನ ಜ್ಞಾನಭಾರತಿಯ ಅಂಗಣಗಳು, ವಾರಕ್ಕೊಮ್ಮೆ ದೂರದ ಬೆಟ್ಟ ಗುಡ್ಡಗಳಿಗೆ ನಡೆಸುವ ಟ್ರೆಕ್ಕಿಂಗುಗಳು, ಸ್ವಲ್ಪವ ಸಮಯ ಸಿಕ್ಕರೂ, ಕಾಡು, ನದಿ, ನೀರು, ಬೆಟ್ಟ ಎಂದುಕೊಂಡು ಹೊರಟುಬಿಡುತ್ತಿದ್ದೆವು.'
`ನನಗೀಗಲೂ ನೆನಪಿದೆ. ಒಂದು ದಿನ ಆಕೆಯನ್ನು ಮೊಟ್ಟ ಮೊದಲ ಬಾರಿಗೆ ನನ್ನ ರೂಮಿಗೆ ಕರೆತಂದಿದ್ದೆ. ಏನೇ ಪ್ರೀತಿ ಇದ್ದರೂ ಆಕೆ ಅಳುಕಿನಿಂದಲೇ ನನ್ನ ರೂಮಿಗೆ ಬಂದಿದ್ದಳು...'ಎಂದವನೇ ಸುಮ್ಮನಾದೆ. ನನ್ನ ತಲೆಯಲ್ಲಿ ಆ ದಿನಗಳ ನೆನಪು ಹಾಗೆಯೇ ಓಡಲಾರಂಭಿಸಿತ್ತು. ಸಂಜಯ ಗಂಭೀರವಾಗಿ ಕೇಳುತ್ತಿದದ್ದವನು ನನ್ನ ಕಡೆಗೆ ನೋಡಲಾರಂಭಿಸಿದ್ದ.
ಸುದೀರ್ಘ ಮೌನದ ನಂತರ ನಾನೇ ಮಾತು ಮುಂದುವರಿಸಿದೆ. `ಆ ದಿನ ಏನೆಲ್ಲ ಆಗೋಯ್ತು. ಆಕೆಗೆ ಇಷ್ಟವಿರಲಿಲ್ಲ. ನಾನೇ ಬಲವಂತ ಮಾಡಿಬಿಟ್ಟೆ. ಪ್ರೀತಿ ಮಧುರವಾಗಿರಲಿ, ಶುಭ್ರವಾಗಿರಲಿ ಎಂದೆಲ್ಲ ಹೇಳಿದ್ದಳು ಆಕೆ. ಆದರೆ ನಾನೇ ಒತ್ತಾಯ ಮಾಡಿಬಿಟ್ಟೆ. ನನ್ನ ಒತ್ತಾಯಕ್ಕೆ ಆಕೆ ಸಹಕರಿಸಿದ್ದಳು. ನನ್ನದೇ ರೂಮಿನಲ್ಲಿ ನಾನು ಆಕೆಯನ್ನು ಆವರಿಸಿಕೊಂಡಿದ್ದೆ. ಅಲ್ಲೇ ನಮ್ಮ ಮಿಲನವಾಗಿತ್ತು. ಆದರೆ ಅಮೇಲೆ ನಡೆದಿದ್ದೆಲ್ಲ ದುರಂತ ಎಂಬಂತಾಗಿಬಿಟ್ಟತು. ಅಷ್ಟೆಲ್ಲ ಆದ ಮೇಲೆ ನನ್ನ ಬಳಿ ಆಕೆ ಕೇಳಿದ್ದೊಂದೇ ಮಾತು.. ನಿನ್ನನ್ನು ನಂಬಿದ್ದೆ. ಆದರೆ ಈ ರೀತಿ ಮಾಡುತ್ತೀಯಾ ಅಂತ ಗೊತ್ತಿರಲಿಲ್ಲ. ಈಗಲೂ ನಿನ್ನನ್ನು ನಂಬಿದ್ದೇನೆ. ಮುಂದೆಯೂ ಕೂಡ ನಿನ್ನನ್ನು ನಂಬಿರುತ್ತೇನೆ.. ನನ್ನ ನಂಬಿಕೆಯನ್ನು ಕೊಂದು ಬಿಡಬೇಡ.. ಎಂದಿದ್ದಳು. ನಾನು ಮೌನವಾಗಿದ್ದೆ. ಆದರೆ ಆ ದಿನದ ನಂತರ ನನ್ನ ಬದುಕಿನಲ್ಲೂ, ಆಕೆಯ ಬದುಕಿನಲ್ಲೂ ಸಿಕ್ಕ ತಿರುವುಗಳು ಮಾತ್ರ ಉಫ್.. ಹೇಗೆ ಹೇಳಲಿ..?'

(ಮುಂದುವರಿಯುತ್ತದೆ...)