Sunday, September 30, 2018

ಪ್ರೀತಿಯ ಕರೆ

ನಿನ್ನ ಪ್ರೀತಿಯ ಕರೆಯು
ನನ್ನಿಲ್ಲೇ ನಿಲ್ಲಿಸಿತು
ಇಳಿಸಂಜೆ ಹೊಸ್ತಿಲಲಿ
ಹೋಗದಂತೆ |

ಮಧುರ ಗಾನದ ಉಲಿಯು
ಸುಮ್ಮನೇ ಕಾಡಿತು
ಕೈಹಿಡಿದು ನಿಲ್ಲಿಸಿತು
ಹೊರಳದಂತೆ |

ನಿನ್ನೊಲವ ಕಿರು ನಗೆಯು
ನನ್ನೆದೆಯ ಕುಣಿಯಿಸಿತು
ಎದೆ ಬಡಿತ ಮಿಡಿಯಿಸಿತು
ಮಿಂಚಿನಂತೆ |

Saturday, September 29, 2018

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ (ನಮ್ಮೂರ ಚಿತ್ರಗಳು-೨)

(Ekadashi Gudda)
ನಮ್ಮೂರು ದಂಟಕಲ್ ಹಾಗೂ ನಮ್ಮೂರ ಪಕ್ಕದಲ್ಲೇ ಇರುವ, ನಮ್ಮೂರಿನಂತದ್ದೇ ಊರು ಮುತ್ಮುರ್ಡು. ನಮ್ಮೂರಿನಲ್ಲಿ ಆರೇ ಆರು ಮನೆಗಳಿದ್ದರೆ, ಮುತ್ಮುರ್ಡಿನಲ್ಲಿ ಹತ್ತಕ್ಕೂ ಅಧಿಕ ಮನೆಗಳಿವೆ. ಈ ಕಾರಣದಿಂದ ನಮ್ಮೂರಿಗಿಂತ ಸ್ವಲ್ಪ ಹೆಚ್ಚಿನ ಪ್ರಾತಿನಿಧ್ಯ ಮುತ್ಮುರ್ಡಿಗೆ ಸಿಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ. ನಮ್ಮೂರಿಗೂ, ಮುತ್ಮುರ್ಡಿಗೂ ನಡುವೆ ಒಂದು ಶಾಲೆಯಿದೆ. ೧ನೇ ಕ್ಲಾಸಿನಿಂದ ಹಿಡಿದು ಐದನೇ ಕ್ಲಾಸಿನ ವರೆಗೆ ಓದಲು ಅವಕಾಶ ವಿರುವ ಕಿರಿಯ ಪ್ರಾಥಮಿಕ ಶಾಲೆ ಇದು.ಹತ್ತು ಹಲವು ಕಾರಣಗಳಿಂದ ಇದು ವಿಶಿಷ್ಟವಾದುದು.
ಮಹಾತ್ಮಾ ಗಾಂಧೀಜಿ ಜನ್ಮದಿನದ ೧೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶದಲ್ಲಿ ಹಾಗೂ ರಾಜ್ಯಾದ್ಯಂತ ಹಲವಾರು ಶಾಲೆಗಳನ್ನು ನಿರ್ಮಿಸಲಾಯಿತಂತೆ. ಹೀಗೆ ನಿರ್ಮಾಣಗೊಂಡ ಶಾಲೆಗಳಲ್ಲೊಂದು, ನಮ್ಮೂರಿನದ್ದು. ಹೀಗಾಗೇ ಗಾಂಧಿ ಶತಾಬ್ದಿ ಶಾಲೆ ಎಂದೂ ನಮ್ಮೂರಿನ ಶಾಲೆಯನ್ನು ಹಿರಿಯರು ಕರೆಯುತ್ತಿದ್ದುದು ನನಗಿನ್ನೂ ನೆನಪಿದೆ. ಎರಡೂ ಊರುಗಳ ನಡುವೆ ಶಾಲೆ ಇದ್ದರೂ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ ಎಂಬ ಉದ್ದನೆಯ ಹೆಸರಿದ್ದರೂ, ಆಡು ಮಾತಿನಲ್ಲಿ ಅದು ಮುತ್ಮುರ್ಡು ಶಾಲೆ ಎಂದೇ ಕರೆಸಿಕೊಳ್ಳುತ್ತಿತ್ತು.
ಇಂತಹ ಶಾಲೆಗೆ ಮೊದಲು ಕಲಿಸಲು ಬಂದವರು ಮಾದೇವ ಮಾಸ್ತರರು ಎನ್ನುವುದು ನನ್ನ ಅಜ್ಜನ ಬಾಯಿಂದ ಆಗಾಗ ಕೇಳಿ ಬರುತ್ತಿದ್ದ ಮಾತು. ಶಾಲೆಯನ್ನು ತೆರೆದವರೂ ಅವರೇ ಎಂದೂ ಎಲ್ಲೋ ಕೇಳಿದ್ದೆ ಬಿಡಿ. ಮಾದೇವ ಮಾಸ್ತರರು ಪೋಸ್ಟ್ ಮಾಸ್ತರರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರಂತೆ. ಊರಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೂ ಕಾರಣರಾದವರಂತೇ ಎಂಬೆಲ್ಲ ಮಾತುಗಳನ್ನೂ ಕೇಳಿದ್ದೇನೆ.
ಮುತ್ಮೂರ್ಡಿನ ಸುಬ್ಬಜ್ಜ (ಸುಬ್ರಾಯ ಹೆಗಡೆ) ಈ ಶಾಲೆಯ ಆರಂಭಕ್ಕೆ ಕಾರಣರಾದವರು ಎನ್ನುವ ಮಾತುಗಳೂ ಇದೆ. ಗೋಕರ್ಣದ ಕೋಟಿ ತೀರ್ಥ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದ ಸುಬ್ಬಜ್ಜ ಈ ಶಾಲೆಯನ್ನು ನಿರ್ಮಾಣ ಮಾಡಿ, ಅಲ್ಲಿಗೆ ಶಿಕ್ಷಕರು ಬರುವಂತೆ ಮಾಡಿದರು ಎನ್ನುವ ಮಾತುಗಳು ಅವರಿವರ ಬಾಯಲ್ಲಿ ಕೇಳಿ ಬಂದಿದೆ. ಒಟ್ಟಿನಲ್ಲಿ ಶಾಲೆ ನಿರ್ಮಾಣ ಮಾಡಿದ್ಯಾರು ಎನ್ನುವುದು ಗೊಂದಲಕ್ಕೆ ಕಾರಣವಾದರೂ ಶಾಲೆಯಿಂದ ನೂರಾರು ಜನರಿಗೆ ವಿದ್ಯಾದಾನವಾಗಿದೆ ಎನ್ನುವುದು ಸುಳ್ಳಲ್ಲ.
ನನ್ನ ಅಪ್ಪನ ಬಳಿ ಕೇಳಿದ್ದ ಸಂದರ್ಭದಲ್ಲಿ, ತಾನು ಈ ಶಾಲೆಯಲ್ಲಿ ಓದಿಲ್ಲ ಎಂದೂ, ಕೋಡ್ಸರದ ಬಳಿಯ ಬಿಡಕಿ ಶಾಳೆಯಲ್ಲಿ ಓದಿದ್ದೆಂದೂ ಹೇಳಿದ್ದ. ನನ್ನ ಅಪ್ಪನ ವಾರಗೆಯವರ್ಯಾರೂ ಕೂಡ ಈ ಶಾಲೆಯಲ್ಲಿ ಓದಿಲ್ಲ. ಅಂದರೆ ನನ್ನ ಅಪ್ಪನ ನಂತರದ ೧೦-೧೨ ವರ್ಷಗಳ ತರುವಾಯ ಈ ಶಾಲೆ ಆರಂಭಗೊಂಡಿದೆ. ಸುತ್ತಮುತ್ತ ಯಾವುದೇ ಶಾಲೆ ಇಲ್ಲದ ಸಂದರ್ಭದಲ್ಲಿ ಆರಂಭಗೊಂಡ ಶಾಲೆ ಪ್ರಮುಖವಾಗಿ ದಂಟಕಲ್ ಹಾಗೂ ಮುತ್ಮೂರ್ಡು ಗ್ರಾಮಗಳ ಮಕ್ಕಳ ವಿದ್ಯಾದಾನಕ್ಕೆ ಕಾರಣವಾಗಿದೆ.
ಅಜ್ಜ, ಹಾಗೂ ಅಪ್ಪನ ನೆನಪಿನ ಅಂಗಣದಿಂದ ತಿಳಿದು ಬಂದ ವಿಷಯವೇನೆಂದರೆ, ಆ ದಿನಗಳಲ್ಲಿ ಅಡಕಳ್ಳಿಯಲ್ಲಿ (೧೯೬೨ರಲ್ಲಿ ಆರಂಭ) ಶಾಲೆ ಆರಂಭಗೊಂಡಿದ್ದರೂ, ಮುತ್ಮುರ್ಡು ಹಾಗೂ ದಂಟಕಲ್ ಗ್ರಾಮಗಳ ಮಕ್ಕಳು ದಟ್ಟ, ಗವ್ವೆನ್ನುವ ಕಾಡು, ಗುಡ್ಡ, ತುಂಬಿ ಹರಿಯುವ ಹಳ್ಳಗಳನ್ನು ದಾಟಿ ಅಡಕಳ್ಳಿಗೆ ಹೋಗುವುದು ತ್ರಸದಾಯಕವಾಗಿತ್ತು. ದೊಡ್ಡದೊಂದು ತಾಯಿ ಬೇರಿಗೆ ಮರಿ ಟಿಸಿಲುಗಳಿರುವಂತೆ ಮುತ್ಮುರ್ಡಿನಂತಹ ಶಾಲೆಗಳು ತರುವಾಯ ಆರಂಭವಾದವು. ಮೊದ ಮೊದಲಿಗೆ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ತರಗತಿಗಳು ನಡೆಯುತ್ತಿದ್ದವು. ಅಂಗನವಾಡಿ, ಬಿನ್ನೆತ್ತಿ, ಒಂದು, ಎರಡು, ಮೂರು, ನಾಲ್ಕು ಕ್ಲಾಸುಗಳ ವರೆಗೆ ಓದಿದ ತರುವಾಯ ಅಡ್ಕಳ್ಳಿ ಶಾಲೆಯತ್ತ ಮುಖ ಮಾಡಬೇಕಿತ್ತು. ಹೀಗಾಗಿ ಹಲವರಿಗೆ ಈ ಶಾಲೆ ಅನುಕೂಲವಾಯಿತು.
ಮುತ್ಮುರ್ಡ್ ಶಾಲೆಯ ಮಾಸ್ತರ್ರು ರೋಲು ದೊಣ್ಣೆಯಲ್ಲಿ ಹೊಡೆಯುತ್ತಿದ್ದರಂತೆ. ಹುಡುಗರು ಕೈನ್ನು ಟೇಬಲ್ ಮೇಲೆ ಇರಿಸುವಂತೆ ಹೇಳಿ, ರೋಲು ದೊಣ್ಣೆಯ ಮೂಲಕ ಕುಟ್ಟಾಣಿಯಲ್ಲಿ ಕವಳ ಕುಟ್ಟುವಂತೆ ಕುಟ್ಟುತ್ತಿದ್ದಂತೆ, ಒಂದರಿಂದ ೨೦ರವರೆಗೆ ಮಗ್ಗಿ ಹೇಳುವುದರ ಜತೆಗೆ ಉಲ್ಟಾ ಪಲ್ಟಾ ಹೇಳುವಂತೆ ಕಾಟ ಕೊಡುತ್ತಿದ್ದರಂತೆ, ಹೇಳದಿದ್ದರೆ ಕಾಲಿನ ಮೊಣಕಾಲಿನ ಕೆಳಗೆ ಮೂಳೆಯ ಮೇಲೆ ಟಣಾರನೆ ಭಾರಿಸುತ್ತಿದ್ದರಂತೆ, ಅಷ್ಟಲ್ಲದೇ ಒಂದ್ ಮುಕ್ಕಾಲ್ ಮುಕ್ಕಾಲು ಎಂದು ಮಗ್ಗಿಯನ್ನು ಮುಕ್ಕಾಲರ ರೀತಿಯಲ್ಲಿ, ಅರ್ಧದ ರೀತಿಯಲ್ಲೆಲ್ಲ ಹೇಳಿಸುತ್ತಿದ್ದರಂತೆ ಎಂಬ ಅಂತೆ ಕಂತೆಗಳೆಲ್ಲ ನಾವು ಸಣ್ಣವರಿದ್ದಾಗ ಕಿವಿಗೆ ಬಿದ್ದು, ಮುತ್ಮುರ್ಡ್ ಶಾಲೆಯ ಮಾಸ್ತರರ ಬಗ್ಗೆ ಭಯ ಹುಟ್ಟಿಸಿದ್ದವು.
ಇದೆಲ್ಲ ತಮಾಷೆಯಿರಬೇಕು ಬಿಡು, ಸುಮ್ಮನೇ ನಮ್ಮನ್ನು ಹೆದರಿಸಲು ಮಾಡುತ್ತಿರುವ ನಾಟಕ ಎಂದು ನಮ್ಮದೇ ವಾರಗೆಯ ಹುಡುಗನೊಬ್ಬ ಹೇಳಿದ್ದ. ನಾವು ಅದನ್ನು ನಂಬಿಕೊಂಡಿದ್ದೆವು. ಆದರೆ ನಮ್ಮೂರಿನ ಹಿರಿಯಜ್ಜನೊಬ್ಬ ಕಾಲು, ಮುಕ್ಕಾಲರ, ಅರ್ಧದ ಮಗ್ಗಿಗಳನ್ನು ಸರಾಗವಾಗಿ ಹೇಳಿದ್ದು ಕೇಳಿದ್ದಾಗಲೆಲ್ಲ ಮುತ್ಮುರ್ಡು ಶಾಲೆಯ ಕುರಿತಾದದ್ದೆಲ್ಲ ಸುಳ್ಳಲ್ಲ, ಅಂತೆ, ಕಂತೆಯಲ್ಲ ಎನ್ನಿಸಿದ್ದವು.
ನನ್ನ ಅರಿವಿಗೆ ಬರುವ ಸಂದರ್ಭದಲ್ಲಿ ಈ ಶಾಲೆ ಎನ್ನುವುದು ಹಾಳು ಬಿದ್ದಿತ್ತು. ನಮ್ಮೂರ ಬೆನ್ನಿಗೆ ಉದ್ದಕ್ಕೆ ನಿಂತಿರುವ ಏಕಾದಶಿ ಗುಡ್ಡದ ಬುಡದಲ್ಲಿ ಒಂದೇ ಒಂದು ಕೊಠಡಿ, ಮುರಿದು ಹೋಗಿದ್ದ ಒಂದು ಭಾಗಿಲು, ಅಲ್ಲಲ್ಲಿ ಕಿತ್ತು ಹೋದ ಹಾಗೂ ಯಾರೋ ಕದ್ದುಕೊಂಡು ಹೋದ ಹಂಚುಗಳನ್ನೊಳಗೊಂಡ ಒಂದು ಮಾಡು. ಅರ್ಧ ಬಿದ್ದಿದ್ದ ಗೋಡೆ, ಬೀಗವೇ ಇರದಿದ್ದ ಬಾಗಿಲು. ಒರಲೆಯ ಮನೆ. ಆಗೀಗ ಬಿಕ್ಕೆ ಹಣ್ಣಿಗೋ, ಕವಳಿ ಹಣ್ಣಿಗೋ, ಪರಗೆ ಹಣ್ಣಿಗೋ ಅಥವಾ ಚೌತಿಯ ಸಂದರ್ಭದಲ್ಲಿ ಗೌರಿ ಹೂ ಮುಂತಾದ ಫಲವಳಿಗೆ ಸಾಮಾನು ಸಂಗ್ರಹಿಸಲು ಏಕಾದಶಿ ಗುಡ್ಡ ಹತ್ತಿದ ಸಂದರ್ಭದಲ್ಲಿ ಮುತ್ಮುರ್ಡು ಶಾಲೆಯ ಹಳೆಯ, ಶಿಥಿಲ ಕಟ್ಟಡ ನಮ್ಮ ಕಣ್ಣಿಗೆ ಬೀಳುತ್ತಿತ್ತಲ್ಲದೇ, ನಮ್ಮೊಳಗೆ ನಮಗೇ ಗೊತ್ತಿಲ್ಲದಂತೆ ಭಯವನ್ನು ಹುಟ್ಟು ಹಾಕುತ್ತಿತ್ತು.
ಹಿಂದೆಲ್ಲ ನಮ್ಮೂರಿನಲ್ಲಿ ಒಂದೊಂದು ಮನೆಗಳಲ್ಲಿ ಹತ್ತಾರು ಜನ ಮಕ್ಕಳಿದ್ದು, ಅವರೆಲ್ಲ ಮುತ್ಮುರ್ಡು ಶಾಲೆಗೆ ಓದಲು ಹೋಗುತ್ತಿದ್ದರಂತೆ. ಕ್ರಮೇಣ ಕೇಂದ್ರ ಸರ್ಕಾರದ ಕುಟುಂಬ ಯೋಜನೆಯಂತಹ ಜನಸಂಖ್ಯಾ ನಿಯಂತ್ರಣದ ಯೋಜನೆಗಳು ಮನೆ ಮನೆಗಳನ್ನು ಹೊಕ್ಕ ಮೇಲೆ ನಮ್ಮೂರಲ್ಲಿ ಹಾಗೂ ಮುತ್ಮುರ್ಡುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಕ್ರಮೇಣ ಮುತ್ಮುರ್ಡು ಶಾಲೆಗೂ ವಿದ್ಯಾರ್ಥಿಗಳ ಬರ ಎದುರಾಯಿತು. ಹೀಗಿದ್ದಾಗಲೇ ಸರ್ಕಾರ ಮಕ್ಕಳು ಕಡಿಮೆ ಇರುವ ಶಾಲೆಗಳನನು ಮುಚ್ಚುವ ನಿರ್ಧಾರ ಮಾಡಿತು. ಮುತ್ಮುರ್ಡು ಶಾಲೆಗೂ ಬಾಗಿಲು ಹಾಕುವ ಪ್ರಸಂಗ ಎದುರಾಯಿತು. ನಾವು ಶಾಲೆಗೆ ಹೋಗುವ ವೇಳೆಗೆ ಮುತ್ಮುರ್ಡು ಶಾಲೆಗೆ ಬೀಗ ಬಿದ್ದು ಒಂದು ದಶಕಗಳೇ ಕಳೆದಿತ್ತೇನೋ. ಹೀಗಾಗಿ ನಾನು ಬಿನ್ನೆತ್ತಿಯಿಂದ ಅಡ್ಕಳ್ಳಿ ಶಾಲೆಯನ್ನೇ ಆಶ್ರಯಿಸಬೇಕಾಯಿತು.
ಇಂತಹ ಶಾಲೆ ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಮತ್ತೊಮ್ಮೆ ತೆರೆಯುವ ಮುನ್ಸೂಚನೆ ಸಿಕ್ಕಿತು. ಮುತ್ಮುರ್ಡಿನ ಎಂ. ಎಸ್. ಹೆಗಡೆ ಅವರ ಪ್ರಯತ್ನದ ಫಲವಾಗಿ ಶಾಲೆ ಬಾಗಿಲು ತೆರೆಯಿತು. ಮೊದಲ ವರ್ಷ ಎಂ. ಎಸ್. ಹೆಗಡೆಯವರ ಮಗ ಓಂಕಾರ ಶಾಲೆಯ ಏಕೈಕ ಅಧಿಕರತ ವಿದ್ಯಾರ್ಥಿ. ತದನಂತರದಲ್ಲಿ ನನ್ನ ತಂಗಿ, ನನ್ನದೇ ಓರಗೆಯ ಪಕ್ಕದ ಮನೆಯ ಹುಡುಗಿ, ತಂಗಿಯ ಓರಗೆಯ ಇನ್ನೋರ್ವ ಹುಡುಗ ಹೀಗೆ ಹಲವರು ಶಾಲೆಗೆ ಏರಿದರು. ಶಾಲೆಗೆ ದಾಖಲಾದ ಮಕ್ಕಳ ಸಂಕ್ಯೆ ೧೦ನ್ನೂ ದಾಟಿತು. ಓರ್ವ ಶಿಕ್ಷಕಿ ಕೂಡ ಕಾನಸೂರಿನಿಂದ ಬಂದು ಹೋಗಲು ಆರಂಭಿಸಿದರು. ಈ ದಿನಗಳಲ್ಲಿ ನಾನೂ ಕೆಲವು ಕಾಲ ಮುತ್ಮುರ್ಡು ಶಾಲೆಗೆ ಹೋಗಲು ಆರಂಭಿಸಿದ್ದೆ. ಕೊನೆಗೆ ನನ್ನ ಅಡ್ಕಳ್ಳಿ ಶಾಲೆಯ ಹೆಡ್ಮಾಸ್ತರ್ ಆಗಿದ್ದ ರಮೇಶ್ ಗಡ್ಕರ್ ಅವರು ನನ್ನ ಅಪ್ಪನನ್ನು ಶಾಲೆಗೆ ಕರೆಸಿ, ವಿನಯನ್ನು ಮುತ್ಮುರ್ಡು ಶಾಲೆಗೆ ಸೇರಿಸುವುದಾದರೆ ಟಿಸಿ ಕೊಡುತ್ತೇನೆ ನೋಡಿ ಎಂದಿದ್ದೂ, ಅಪ್ಪ ಅದಕ್ಕೆ ಸುತಾರಾಂ ಒಪ್ಪದೇ, ನನ್ನನ್ನು ಮತ್ತೊಮ್ಮೆ ಅಡ್ಕಳ್ಳಿ ಶಾಲೆಗೆ ಹೋಗುವಂತೆ ಮಾಡಿದ್ದೂ ಆಯಿತು.
ಅದಾಗಿ ಹತ್ತಾರು ವರ್ಷಗಳ ಕಾಲ ಮುತ್ಮುರ್ಡು ಶಾಲೆ ಬಾಗಿಲು ತೆರೆದಿತ್ತು. ಸೀಮಾ ಮೇಡಂರಿಂದ ಆರಂಭಗೊಂಡು, ಪಿ. ಜಿ. ಹಾವಗೋಡಿ, ರಮೇಶ ನಾಯ್ಕ ಮುಂತಾದ ಮಾಸ್ತರರು ಶಿಕ್ಷಕರಾಗಿ ಬಂದಿದ್ದರು. ತದನಂತರದಲ್ಲಿ ನನ್ನ ಚಿಕ್ಕಪ್ಪನೇ ಶಾಲೆಗೆ ಮಾಸ್ತರರಾಗಿಯೂ ಬಂದಿದ್ದರು.
ಹೀಗಿದ್ದ ಸಂದರ್ಭದಲ್ಲೇ ಶಾಲೆಗೆ ಹೊಸ ಕಟ್ಟಡವೂ ಮಂಜೂರಾಯಿತು. ಸಿಮೆಂಟಿನ ಕಟ್ಟಡ, ಹಳೆಯ ಕಟ್ಟಡದ ಮುಂಭಾಗದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿತು. ಒಂದೇ ಕೊಠಡಿಯನ್ನು ಹೊಂದಿದ್ದ ಈ ಕಟ್ಟಡ ಸಾಕಷ್ಟು ಸುಭದ್ರವೂ, ವಿಶಾಲವೂ ಆಗಿತ್ತು. ಇಷ್ಟರ ಜತೆಗೆ ಶಾಲೆಗೊಂದು ಬೋರ್ವೆಲ್, ದೊಡ್ಡ ಮೈದಾನ ಎಲ್ಲವೂ ನಿರ್ಮಾಣವಾಯಿತು. ಅಷ್ಟಾದರೂ ಶಾಲೆಯ ವಿದ್ಯಾರ್ಥಿಗಳ ಸಂಕ್ಯೆ ೧೫ದನ್ನು ದಾಟಲಿಲ್ಲ. ಈ ನಡುವೆ ಶಾಲೆಯಲ್ಲಿ ಐದನೇ ತರಗತಿಯೂ ಆರಂಭವಾಯಿತು.
ಈ ನಡುವೆ ಶಾಲೆಯಲ್ಲಿ ಬೆಳ್ಳಿ ಹಬ್ಬ ಆಚರಸುವ ನಿರ್ಧಾರಕ್ಕೆ ಊರಿನ ಸಸಹೃದಯಿಗಳು ಬಂದರು. ಶಾಲೆ ಆರಂಭಗೊಂಡು ೫೦ ವರ್ಷದ ಮೇಲೆ ಅನೇಕ ವಸಂತಗಳು ಕಳೆದಿದ್ದರೂ, ಶಾಲೆಯಲ್ಲಿ ಸಂಭ್ರಮ ಸಡಗರ ಹೆಚ್ಚಿತು. ಬೆಳ್ಳಿ ಹಬ್ಬದ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಣೆಗೆ ಮುಂದಾಗಲಾಯಿತು. ವಿದ್ಯಾರ್ಥಿಗಳ ಜತೆಗೆ ಪಾಲಕರು ಹಾಗೂ ಪೋಷಕರಿಗೂ ವಿವಿಧ ಸ್ಪರ್ಧೆಗಳನ್ನು ಇರಿಸಲಾಗಿತ್ತು. ನಂತರ ಸ್ಥಳೀಯ ಶಾಸಕರೂ ಕಾರ್ಯಕ್ರಮಕ್ಕೆ ಆಗಮಿಸಿದರು. ಅಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನೂ ಹಲವು ಕಾರ್ಯಕ್ರಮ ನೀಡಿದೆ. ಹಾಸ್ಯ ಕಾರ್ಯಕ್ರಮ ಹಲವರನ್ನು ಸೆಳೆಯಿತು ಕೂಡ. ಇದೇ ವೇಳೆ ನಮ್ಮೂರಿನ ಸಾಧಕ ರಾಮಚಂದ್ರ ಹೆಗಡೆ ಹಾಗೂ ಮುತ್ಮೂರ್ಡಿನ ಸಾಧಕ ನಾಗೇಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರೋ ನಾಲ್ಕೋ ನಡೆದಿದ್ದ ನೆನಪು.
ವಿದ್ಯಾರ್ಥಿಗಳ ಸಂಕ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕು ಎಂದು ನಮ್ಮದೇ ರಾಜ್ಯ ಸರ್ಕಾರ ಆದೇಶ ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ಮುತ್ಮುರ್ಡು ಶಾಲೆಗೆ ಆತಂಕ ಎದುರಾಯಿತು. ಈ ಶಾಲೆಯನ್ನು ಹತ್ತಿರದ ಶಾಲೆಗಳ ಜತೆಗೆ ವಿಲೀನ ಮಾಡಬೇಕು ಎನ್ನುವುದು ಆಡಳಿತ ವರ್ಗದ ಆದೇಶವಾಯಿತು. ಮುತ್ಮುರ್ಡು ಶಾಲೆಯನ್ನು ಪಕ್ಕದ ಅಡ್ಕಳ್ಳಿ ಶಾಲೆಯ ಜತೆಗೆ ವಿಲೀನ ಮಾಡುವ ಸಂದರ್ಭದಲ್ಲಿ ಮತ್ಮುರ್ಡು ಶಾಲೆಗೆ ಒಂದು ಕೊಠಡಿ, ಒಂದು ಮಾಸ್ತರು, ನಾಲ್ಕು ಮಕ್ಕಳು, ಒಂದು ಅಡುಗೆಯವರಿದ್ದರು. ಇದರಲ್ಲಿ ಶಾಲಾ ಕೊಠಡಿ ಹೊರತುಪಡಿಸಿ ಉಳಿದದ್ದೆಲ್ಲ ಒಂದೇ ಮನೆಯದ್ದಾಗಿತ್ತು ಎನ್ನುವುದು ವಿಶಿಷ್ಟ ಸಂಗತಿ. ಅಷ್ಟೇ ಏಕೆ ಆ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದವರೂ ಕೂಡ ಅದೇ ಶಿಕ್ಷಕ, ವಿದ್ಯಾರ್ಥಿ ಕುಟುಂಬದವರೂ ಎಂಬುದು ವಿಚಿತ್ರ, ವಿಸ್ಮಯ ಸಂಗತಿಯಾಗಿತ್ತು.
ಅಂದಹಾಗೆ ಈಗ ಮುತ್ಮುರ್ಡು ಶಾಲೆ ಬಾಗಿಲು ಹಾಕಿದೆ. ದೈತ್ಯ ಎಕಾದಶಿ ಗುಡ್ಡದ ಬುಡದಲ್ಲಿ ಬಿಳಿಯ ಬಣ್ಣದ ಶಾಲೆ ಮಳೆ-ಗಾಳಿಯ ಅಬ್ಬರಕ್ಕೆ ಸಾಕ್ಷಿಯಾಗಿ ನಿಂತಿದೆ. ನನ್ನ ತಂಗಿಯ ಓರಗೆಯವರು ನೆಟ್ಟಿದ್ದ ತೆಂಗಿನ ಗಿಡಗಳು ನಿಧಾನವಾಗಿ ದೊಡ್ಡದಾಗುತ್ತಿವೆ. ಹೂವಿನ ಗಿಡಗಳು ಆಗಾಗ ಹೂವರಳಿಸಿಕೊಂಡು ನಗುತ್ತ ನಮ್ಮನ್ನು ಕರೆಯುತ್ತಿವೆ. ಹಳೆಯ ಕಟ್ಟಡ ಅವಸಾನ ತಲುಪಿ ತನ್ನ ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದರೆ, ಹೊಸ ಕಟ್ಟಡದ ಬಣ್ಣ ಮಾಸಿದೆ. ಊರಿನಲ್ಲಿ ವಿದ್ಯಾರ್ಥಿಗಳ ಸಂಕ್ಯೆ ಹೆಚ್ಚಾದರೆ ಮತ್ತೊಮ್ಮೆ ಶಾಲೆ ಬಾಗಿಲು ತೆರೆಯಬಹುದು.
ಹಲವು ನೆನಪುಗಳ ಗುಚ್ಛವನ್ನೇ ಒಳಗೊಂಡಿರುವ ಮುತ್ಮುರ್ಡು ಶಾಲೆ ನಮ್ಮ ನೆನಪುಗಳನ್ನು ಮತ್ತೊಮ್ಮೆ ಉದ್ದೀಪನ ಗೊಳಿಸುವ ಕಾರ್ಯ ಕೈಗೊಳ್ಳುತ್ತದೆ. ಬಾಲ್ಯದ ಕ್ರಿಯಾಶೂಲತೆಗೆ, ಜೀವಂತಿಕೆಗೆ, ಇಂದಿನ ಸೃಜನಶೀಲತೆಗೆ ಇಂತಹ ಶಾಲೆಗಳ ಪಾತ್ರ ಬಹಳ ಮಹತ್ವದ್ದು.

Tuesday, September 25, 2018

ಪ್ರೀತಿಯ ಎರಡು ಕಿರುಗತೆಗಳು

ಪ್ಯಾಂಟು-ಪ್ರೀತಿ

`ಪ್ರೀತಿ ಅಂದರೆ ಜೀನ್ಸ್ ಪ್ಯಾಂಟಿನ ಥರಾ ಕಣೋ..' ಅವಳಂದಳು
`ಯಾಕೆ..ಹಾಗೆ..?' ನಾನು ಕೇಳಿದೆ..
`ಜೀನ್ಸ್ ಪ್ಯಾಂಟ್ ನೋಡು ಎಷ್ಟು ರಫ್ & ಟಫ್. ಅಂತ.. ಎಷ್ಟೇ ಸಾರಿ ಹಾಕಿದ್ರೂ ಹಾಳಾಗೋಲ್ಲ. ಕೊಳಕಾದ್ರೂ ತೊಂದ್ರೆ ಇಲ್ಲ.. ಮತ್ತೆ ಮತ್ತೆ ಹಾಕ್ಕೋಬಹುದು.. ಒಂಥರಾ ಖುಷಿ ಕೊಡುತ್ತೆ... ಪ್ರೀತಿ ಕೂಡ ಹಾಗೇ ಅಲ್ವಾ..' ಅವಳೆಂದಳು..
`ಆದ್ರೆ ಜೀನ್ಸು ಹರಿಯಬಾರದ ಜಾಗದಲ್ಲೇ ಹರಿಯುತ್ತಲ್ಲೇ...ಅದಕ್ಕೆ ಹೊಲಿಗೆ ಕೂಡ ಬಹಳ ಕಷ್ಟ ಮಾರಾಯ್ತಿ..' ಎಂದೆ..
`ತೂ.. ಹೋಗೋ' ಎಂದಳು..
`ಪ್ರೀತಿ ಅಂದರೆ ಫಾರ್ಮಲ್ಸ್ ಪ್ಯಾಂಟ್ ಥರಾ ಕಣೆ...' ಅಂದೆ.
`ಓಹೋ...' ಅಂದವಳು `ಹೇಗೆ..?' ಅಂದಳು..
`ಆ ಪ್ಯಾಂಟುಗಳು ಎಷ್ಟು ಡೀಸೆಂಟ್ ಅಲ್ವಾ..? ನೋಡಿದ ತಕ್ಷಣ ಏನೋ ಗೌರವ ಮೂಡುತ್ತದೆ. ಮತ್ತೆ ಮತ್ತೆ ಫಾರ್ಮಲ್ಸ್ ಹಾಕಬೇಕು ಎನ್ನಿಸುತ್ತದೆ...' ಎಂದೆ.
`ಆದರೆ..' ಎಂದ ಅವಳು `ನನ್ನಂತಹ ಮಾಸ್ ನವರಿಗೆ ಫಾರ್ಮಲ್ಸ್ ಇಷ್ಟ ಆಗೋದಿಲ್ಲ ಕಣೋ..' ಎಂದಳವಳು..
ನಾನು ಆಲೋಚಿಸಿದೆ.. ಕೊನೆಗೆ ಹೇಳಿದೆ.
`ಬಿಡು.. ಪ್ರೀತಿ ಜೀನ್ಸ್ ಬೇಕಾದರೂ ಆಗಿರಲಿ.. ಫಾರ್ಮಲ್ಸ್ ಬೇಕಾದರೂ ಆಗಿರಲಿ. ಆಯ್ಕೆ ನಮ್ಮದೇ ಅಲ್ಲವಾ..? ಎರಡನ್ನೂ ಪ್ರಯತ್ನಿಸಿದರಾಯಿತು..' ಎಂದೆ.. ಕಣ್ಣುಮಿಟುಕಿಸಿದೆ..
ಒಮ್ಮೆ ಕೈಯನ್ನು ಚಿವುಟಿದಳು..
ಹಾಯ್ ಎಂದೆ.. ನಕ್ಕಳು..

-----------------

ಚಂದಮಾಮ

ನಾನು ನಿಂಗೋಸ್ಕರ ಬಾನಿನ ಚಂದಮಾಮನನ್ನೇ ಕೈಯಲ್ಲಿ ಹಿಡಿದು ತಂದುಕೊಡುತ್ತೇನೆ...' ಅದೊಂದು ಸಿನಿಮಾದಲ್ಲಿ ಹೀರೋ ಹೇಳುತ್ತಿದ್ದಂತೆ ಅವಳು ಕೇಳಿದಳು `ನೀನೂ ನಂಗೋಸ್ಕರ ಚಂದಮಾಮನನ್ನು ತರುತ್ತೀಯಾ..?'
ನಾನೆಂದೆ `ಊಹೂಂ..' ಅವಳ ಕಣ್ಣಲ್ಲಿ ಹನಿಗೂಡಿತ್ತು... ಅದು ಭೂಮಿಗಿಳಿಯುವ ಮೊದಲೇ ಹೇಳಿದ್ದೆ..
`ಚಂದಮಾಮನನ್ನು ತರುವುದು ಅಸಾಧ್ಯ ಎನ್ನೋದು ನಿಂಗೂ ಗೊತ್ತು ನಂಗೂ ಗೊತ್ತು... ಅದರ ಬದಲು ಒಂದು ಕೆಲಸ ಮಾಡೋಣ.. ನಾನು-ನೀನು ಇಬ್ಬರೂ ಸೇರಿ ಚಂದಮಾಮನ ನಾಡಿಗೊಂದು ಯಾನ ಮಾಡೋಣ... ಅಲ್ಲಿ ನಾನು ನೀನು ಇಬ್ಬರೇ ಇದ್ದುಬಿಡೋಣ...' ಎಂದೆ.
ಕಣ್ಣೀರು ಇಂಗಿ ಆನಂದಭಾಷ್ಪ ಸುರಿದಿತ್ತು. ಬೆಚ್ಚಗೆ ಅವಳು ತಬ್ಬಿಕೊಂಡಿದ್ದಳು..

ಭಾವಗಳು


ಹಳೆಯ ಡೈರಿಗೆ ಒರಲೆ ಹಿಡಿದಿದೆ
ನೆನಪು ಮಾಸಿದೆ ಮನದಲಿ|...
ಬದುಕು ಹಳಸಿದೆ ನಗುವ ಮರೆತಿದೆ
ನಲಿವು ಅಡಗಿದೆ ಎದೆಯಲಿ||

ನೂರು ಕಾಲದ ಕನಸು ಕರಗಿದೆ
ತುಕ್ಕು ಹಿಡಿದಿದೆ ಭಾವಕೆ|
ನಿಶೆಯ ಕೂಗಿಗೆ ಉಸಿರು ನಡುಗಿದೆ
ಭಯವು ಹೆಚ್ಚಿದೆ ತನುವಲಿ||

ಹಳೆಯ ಜಾಗದಿ ಹೊಸತು ಮುಡಿದೆ
ಕವಿತೆ ಹುಟ್ಟಿದೆ ಚಿತ್ತದಿ|
ಮನದಿ ಹೀಗೆಯೆ ಮಧುರ ಭಾವವು
ಚಣದಿ ಮೂಡಿದೆ ಅರಿಯದೆ||

Thursday, September 20, 2018

ಬಂಡೂಲ (ನಾನು ಓದಿದ ಪುಸ್ತಕಗಳು-೪)


ನಾನು ಇಷ್ಟಪಟ್ಟು ಕೈಗೆತ್ತಿಕೊಂಡ ಪುಸ್ತಕ ಬಂಡೂಲ. ಆದರೆ ಕಷ್ಟಪಟ್ಟು ಓದಿ ಮುಗಿಸಿದ ಪುಸ್ತಕ ಇದು ಎಂದರೆ ತಪ್ಪಾಗಲಿಕ್ಕಿಲ್ಲ.
ಬಿಲ್ಲಿ ವಿಲಿಯಮ್ಸ್ ಎಂಬ ಆನೆ ಮಾನವನ ಕುರಿತು ಇಂಗ್ಲೀಷಿನಲ್ಲಿ ವಿಕಿ ಕಾನ್ಸ್ ಟೆಂಟೇನ್ ಕ್ರೂಕ್ ಬರೆದಿರುವ ಪುಸ್ತಕವನ್ನು ರಾಜ್ಯಶ್ರೀ ಕುಳಮರ್ವ ಅವರು ಕನ್ನಡಕ್ಕೆ ತಂದಿದ್ದಾರೆ.
೧೯೧೫ರಿಂದ ೧೯೪೫ರ ವರೆಗಿನ ಕಾಲಘಟ್ಟದಲ್ಲಿನ ಸನ್ನಿವೇಶಗಳನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಮಾನವ ಹಾಗೂ ಆನೆಯ ಸಂಬಂಧವನ್ನು ಅವಿನಾಭಾವವಾಗಿ ತೆರೆದಿಡುವ ಕೆಲಸವನ್ನು ಪುಸ್ತಕ ಮಾಡುತ್ತದೆ. ೧೯೨೦ರ ದಶಕದಲ್ಲಿ ತೇಗದ ಮರದ ಉದ್ದಿಮೆಗಾಗಿ ನಮ್ಮ ದೇಶದ ಪಕ್ಕದಲ್ಲೇ ಇರುವ ಬರ್ಮಾಕ್ಕೆ ಆಗಮಿಸುವ ಬಿಲ್ಲಿ ವಿಲಿಯಮ್ಸ್ ಅಥವಾ ಎಲಿಫೆಂಟ್ ಬಿಲ್, ಆ ನಾಡಿನಲ್ಲಿ ಒಂದಾಗುವ ಅಂಶಗಳನ್ನು ಕ್ರುಕ್ ಬಹಳ ಸವಿಸ್ತಾರವಾಗಿ ತಿಳಿಸಿದ್ದಾರೆ.
೧೯೨೦ರ ದಶಕದ ಭಾರತ, ಆ ಸಂದರ್ಭದಲ್ಲಿನ ಬರ್ಮಾ, ಅಲ್ಲಿನ ಬೌದ್ಧ ಧರ್ಮ, ಆನೆಗಳು, ತೇಗದ ಮರಗಳಿಗಾಗಿ ಬ್ರಿಟಿಷ್ ಕಂಪನಿಗಳು ಮಾಡುವ ಕಾರ್ಯಗಳು ಇತ್ಯಾದಿಗಳ ಕುರಿತು ಹೆಚ್ಚಿನ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಾಗುತ್ತವೆ. ಅದೇ ರೀತಿ ೧೯೩೯ರಿಂದ ೧೯೪೫ರ ಅವಧಿಯಲ್ಲಿ ನಡೆದ ೨ನೇ ಮಹಾಯುದ್ಧದ ಸಂದರ್ಭದ ಘಟನೆಗಳೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿವರಿಸಲ್ಪಟ್ಟಿದೆ.
ವಿಶ್ವದ ಕ್ಲಿಷ್ಟ ಭಾಷೆಯಲ್ಲಿ ಒಂದು ಬರ್ಮೀಸ್. ಅದನ್ನು ಕಲಿಯುವ ಬಿಲ್ಲಿ, ತದ ನಂತರ ತನ್ನ ಕುತೂಹಲವನ್ನು ಆನೆಗಳ ಕಡೆಗೆ ತೋರಿಸುವುದು, ಬರ್ಮಾದ ನೂರಾರು ಆನೆಗಳ ಜತೆ ಒಡನಾಡುವುದು, ಅವುಗಳ ದೇಖರೇಖಿ ನೋಡಿಕೊಳ್ಳುವುದು, ಖಾಯಿಲೆಗಳಿಗೆ ಔಷಧಿ ಒದಗಿಸುವುದು, ಆಸ್ಪತ್ರೆ ತೆರೆಯುವುದು ಇವೆಲ್ಲ ಇಷ್ಟವಾಗುತ್ತವೆ. ಬಂಡೂಲ ಎಂಬ ಮಹಾ ದೈತ್ಯ ಆನೆ ಬಲ್ಲಿಯ ಒಡನಾಡಿಯಾಗುವುದು, ಆತನನ್ನು ಆನೆ ಹಾಗೂ ಆನೆಯನ್ನು ಆತ ಕಾಪಾಡುವುದೂ ಕೂಡ ಪುಸ್ತಕದ ಪ್ರಮುಖ ಅಂಶಗಳಲ್ಲಿ ಒಂದು.
ಪುಸ್ತಕ ಬರೆದ ವಿಕ್ಕಿಯವರು ಹೇಳಿಕೊಳ್ಳುವಂತೆ ಬಿಲ್ಲಿ ವಿಲಿಯಮ್ಸ್ ಆತ್ಮಕಥೆ ಬರೆಯುವ ಸಂದರ್ಭದಲ್ಲಿ ಮೂರ್ನಾಲ್ಕು ವರ್ಷ ಹೋಂ ವರ್ಕ್ ಮಾಡಿಕೊಂಡಿದ್ದರಂತೆ. ಬಿಲ್ಲಿ ವಿಲಿಯಮ್ಸ್ ಓಡಾಡಿದ ಸ್ಥಳಗಳಲ್ಲಿ ತಾವೂ ಓಡಾಟ ಮಾಡಿದ್ದರಂತೆ. ನೂರಾರು ಜನರನ್ನು ಸಂದರ್ಶನ ಮಾಡಿದ್ದರಂತೆ. ಈ ಕಾರಣದಿಂದ ಪುಸ್ತಕ ಬಹು ಸುದೀರ್ಘವಾಗಿದೆ.
ಇದನ್ನು ಕನ್ನಡಕ್ಕೆ ಅನುವಾಅದಿಸಿದ್ದು ನಮ್ಮದೇ ಕಾಸರಗೋಡಿನ ರಾಜ್ಯಶ್ರೀ ಕುಳಮರ್ವ. ರಾಜ್ಯಶ್ರೀ ಅವರೇ ಹೇಳುವಂತೆ ಇದು ತಮ್ಮ ಮೊಟ್ಟ ಮೊದಲ ಅನುವಾದದ ಪುಸ್ತಕವಂತೆ. ಬಿ. ಆರ್. ಶಂಕರ್ ಅನುವಾದ ಸಾಹಿತ್ಯ ಮಾಲೆ ಅಡಿಯಲ್ಲಿ ಛಂದ ಪುಸ್ತಕವು ಪ್ರಕಟಿಸಿದೆ. ಅನಾಮತ್ತು ೪೫೦ ಪುಟಗಳ ಪುಸ್ತಕ.
ರಾಜಜ್ಯಶ್ರೀಯವರದ್ದು ಮೊದಲ ಅನುವಾದಿತ ಪುಸ್ತಕವಾದ್ದರಿಂದ ಸ್ವಲ್ಪ ಮಾಫಿಯನ್ನು ನೀಡಬಹುದು. ಆದರೆ ಪುಸ್ತಕವನ್ನು ಬಹುವಾಗಿ ಎಳೆದಂತೆ ಅನ್ನಿಸುತ್ತದೆ. ಸಾಹಸಮಯ ಅಂಶವನ್ನು ತೀರಾ ಸಾಮಾನ್ಯವಾಗಿ ಹೇಳಲಾಗಿದೆಯೇನೋ ಅನ್ನಿಸುತ್ತದೆ. ಇನ್ನೂ ರೋಚಕವಾಗಿ ಕಟ್ಟಿಕೊಡಬಹುದಿತ್ತು. ಬಹುಶಃ ಇದು ಮೂಲ ಲೇಖಕಿ ವಿಕಿಯವರದ್ದೇ ತಪ್ಪಿರಬಹುದು. ಆದರೆ ರಾಜ್ಯಶ್ರೀಯವರು ಮೊದ ಮೊದಲ ಅಧ್ಯಾಯಗಳಲ್ಲಿ ಪಿನ್ ಟು ಪಿನ್ ಅನುವಾದಕ್ಕೆ ಯತ್ನಿಸಿದ್ದರಿಂದ ಓದುವಾಗ ಕೊಂಚ ಸಮಸ್ಯೆ ಆಗುತ್ತದೆ.
ರಾಜ್ಯಶ್ರಿಯವರು ೧೯೦೦ರ ಕಾಲದ ಪುಸ್ತಕ ಅನುವಾದ ಮಾಡಿದ್ದರಿಂದ, ಅದೇ ಕಾಲದ ಕನ್ನಡ ಬಳಕೆಗೆ ಯತ್ನಿಸಿರುವುದು ವಿಚಿತ್ರ ಎನ್ನಿಸುತ್ತದೆ. ಇನ್ನು ಕನ್ನಡಕ್ಕೆ ಅನುವಾದಿಸಿ ತಂದ ಸಂದರ್ಭದಲ್ಲಿ ಕನಿಷ್ಟ ೧೫೦ ಪುಟಗಳನ್ನು ಕಡಿಮೆ ಮಾಡಬಹುದಿತ್ತು. ಹಲವು ಅಂಶಗಳನ್ನು ಸುದೀರ್ಘ ಗೋಳಿಸಿದ್ದು, ಪುಸ್ತಕವನ್ನು ಸರಾಗಿ ಓದುವಲ್ಲಿ ಹಿನ್ನಡೆಯನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೇ ನಾನು ಈ ಪುಸ್ತಕವನ್ನು ಇಷ್ಟಪಟ್ಟು ತೆಗೆದುಕೊಂಡರೂ ಕಷ್ಟಪಟ್ಟು ಓದಿ ಮುಗಿಸಿದೆ. (ಸಾಮಾನ್ಯವಾಗಿ ೧ ವಾರ ಅಥವಾ ೧೦ ದಿನಗಳ ಅಂತರದಲ್ಲಿ ದೊಡ್ಡ ಪುಸ್ತಕಗಳನ್ನು ಓದುವ ನಾನು ಈ ಪುಸ್ತಕ ಓದಲು ತೆಗೆದುಕೊಂಡಿದ್ದು ಬರೋಬ್ಬರಿ ೩ ತಿಂಗಳು)
ಮೂರು ಪ್ರಮುಖ ಭಾಗಗಳಾಗಿ ವಿಂಗಡನೆಯಾಗಿರುವ ಈ ಪುಸ್ತಕದಲ್ಲಿ ಮೂರನೇ ಭಾಗದಲ್ಲಿ ವೇಗ ಪಡೆದುಕೊಳ್ಳುತ್ತದೆ. ಬಹುಶಃ ಮೂರನೇ ಭಾಗಕ್ಕೆ ಬರುವ ವೇಳೆಗೆ ರಾಜ್ಯಶ್ರೀಯವರು ಅನುವಾದದಲ್ಲಿ ಪಳಗಿರಬೇಕು. ಮೊದಲೆರಡು ಭಾಗಗಳಲ್ಲಿ ನಿಧಾನವಾಗುವ ಓದು ಮೂರನೇ ಭಾಗದಲ್ಲಿ ಸರಾಗವಾಗುತ್ತದೆ. ರಾಜ್ಯಶ್ರೀಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಲಿ. ಆದರರೆ ಅನುವಾದದ ಸಂದರ್ಭದಲ್ಲಿ ಕೊಂಚ ಗಮನ ಹರಿಸಲಿ ಎನ್ನುವುದು ನನ್ನ ಚಿಕ್ಕ ಸಲಹೆ.

ವಿಚಿತ್ರ:
ಈ ಪುಸ್ತಕದಲ್ಲಿ ಜಪಾನಿಯರ ಕ್ರೌರ್ಯ, ಯುದ್ಧ ಇತ್ಯಾದಿಗಳನ್ನು ಸಾಕಷ್ಟು ವಿವರಿಸಲಾಗಿದೆ. ಓರ್ವ ಬ್ರಿಟೀಷ್ ಲೇಖಕಿಯಾಗಿ ವಿಕಿ ಕ್ರೂಕ್ ಜಪಾನಿಯರನ್ನು ಕಟ್ಟಿಕೊಡುತ್ತಾರೆ. ನಾವು ನಮ್ಮ ಇತಿಹಾಸಗಳಲ್ಲಿ ನೋಡಿದಂತೆ, ಬರ್ಮಾ, ಮಿಜೋರಾಮ್, ಮಣಿಪುರ ಇತ್ಯಾದಿ ಕಡೆಗಳಲ್ಲಿ ನಮ್ಮ ಹೆಮ್ಮೆಯ ಸುಭಾಷರು ಭಾರತದ್ದೇ ಫೌಜಿಗಳ ದಂಡು ಕಟ್ಟಿಕೊಂಡು ಸ್ವಾತಂತ್ರ್ಯ ಯುದ್ಧ ಮಾಡಿದರು ಎನ್ನುವುದನ್ನು ಕೇಳುತ್ತೇವೆ. ಆದರೆ ಬಂಡೂಲ ಪುಸ್ತಕದಲ್ಲಿ ಸುಭಾಷರ ಕುರಿತು ಒಂದೇ ಒಂದು ಅಂಶವೂ ಇಲ್ಲದಿರುವುದು ವಿಚಿತ್ರ. ಬರ್ಮಾ ಹಾಗೂ ಭಾರತದ ಗಡಿಯಲ್ಲಿ ಯುದ್ಧಗಳ ನಡುವೆ ಸಿಕ್ಕಿಕೊಳ್ಳುವ ಬಿಲ್ಲಿ ವಿಲಿಯಮ್ಸ್ ಕೂಡ ಸುಭಾಷರ ಬಗ್ಗೆ ಮಾತನಾಡುವುದಿಲ್ಲ. ಇದು ಬಿಲ್ಲಿ ವಿಲಿಯಮ್ಸ್, ಕ್ರುಕ್ ಅವರ ಉದ್ದೇಶ ಪೂರ್ವಕ ಕೆಲಸವೋ ಅಥವಾ ಆ ಸಂದರ್ಭದ ಯುದ್ಧಗಳನ್ನು ಬ್ರಿಟೀಷರು ವರ್ಸಸ್ ಜಪಾನಿಯರು ಎಂದೇ ಬಿಂಬಿಸಿದ್ದೋ ಗೊತ್ತಿಲ್ಲ. ಈ ಪುಸ್ತಕದಲ್ಲಿ ಸುಭಾಷರ ಹೋರಾಟಗಳನ್ನು ಉಲ್ಲೇಖಿಸಿದ್ದರೆ, ಅಂದಿನ ಕಾಲದ ಇನ್ನೊಂದು ಮಜಲು ತೆರೆದುಕೊಳ್ಳುತ್ತಿತ್ತು.
ಇನ್ನು ಪುಸ್ತಕದ ಹೆಸರು ಬಂಡೂಲ ಎಂದಿದ್ದರೂ, ಬಂಡೂಲ ಎಂಬ ಆನೆಯ ಉಲ್ಲೇಖ ಬಹಳ ಕಡಿಮೆ ಇದೆ. ಬಂಡೂಲನ ಸಾಹಸಗಳನ್ನು ಇನ್ನಷ್ಟು ತೆರೆದಿಡಬಹುದಿತ್ತೇನೋ.

ಅಂದಹಾಗೆ ಈ ಪುಸ್ತಕಕ್ಕೆ ೩೨೦ ರೂಪಾಯಿ ದರ ಇದೆ.
ಸಾಹಸ ಪುಸ್ತಕಗಳು, ಪ್ರಾಣಿಗಳು ಅದರಲ್ಲಿಯೂ ಆನೆಗಳ ಕುರಿತು ಆಸಕ್ತಿ ಇರುವವರು ತಪ್ಪದೇ ಓದಬೇಕು.

Wednesday, September 19, 2018

ಅಧಃಪತನದತ್ತ ಶ್ರೀಲಂಕಾ ಕ್ರಿಕೆಟ್ ತಂಡ

ಹಿಂದೊಮ್ಮೆ ವೆಸ್ಟ್  ಇಂಡೀಸ್ ಎಂದರೆ ಸಾಕು, ದೈತ್ಯ ಆಟಗಾರರು, ಭಯಗೊಳಿಸುವ ವೇಗ, ಅಬ್ಬರದ ಆಟ ನೆನಪಾಗುತ್ತಿತ್ತು. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹಲವು ದಶಕಗಳ ಕಾಲ ಪಾರಮ್ಯ ಮೆರೆದ ವಿಂಡೀಸ್ ತದನಂತರ ಅಧಃಪತನದ ಹಾದಿಯನ್ನು ಹಿಡಿದಿದ್ದು ಎಲ್ಲರಿಗೂ ತಿಳಿದಿದ್ದೇ. ಇದೀಗ ಶ್ರೀಲಂಕಾ ಕ್ರಿಕೆಟ್ ತಂಡ ಕೂಡ ಅಧಃಪತನದ ಹಾದಿ ಹಿಡಿದಿದೆಯೇ ಎನ್ನುವ ಅನುಮಾನಗಳು ಮೂಡಲಾರಂಭಿಸಿದೆ.
ಕಳೆದ ಹಲವು ಸರಣಿಗಳನ್ನು ಗಮನಿಸಿದಾಗ ಶ್ರೀಲಂಕಾದ ಪ್ರದರ್ಶನ ಅಷ್ಟಕ್ಕಷ್ಟೇ ಎಂಬಂತಾಗಿದೆ. ಸಾಲು ಸಾಲು ಸೋಲುಗಳು, ಕಳಪೆ ಆಟದ ಪ್ರದರ್ಶನ ತಂಡದ ಮರ್ಯಾದೆಯನ್ನು ಹರಾಜು ಮಾಡುತ್ತಿದೆ. ಚಿಕ್ಕ-ಪುಟ್ಟ ತಂಡಗಳ ವಿರುದ್ಧವೂ ಶ್ರೀಲಂಕಾ ಸೋಲನ್ನು ಅನುಭವಿಸುತ್ತಿರುವುದು ತಂಡದ ಕ್ರಿಕೆಟ್ ವೈಭವ ಪಾತಾಳಕ್ಕೆ ಇಳಿಯುತ್ತಿರುವುದರ ದ್ಯೋತಕವೆಂಬಂತೆ ಭಾಸವಾಗುತ್ತಿದೆ.
ವಿಂಡೀಸ್ ದೈತ್ಯರಂತೆಯೇ ಒಂದಾನೊಂದು ಕಾಲದಲ್ಲಿ ವಿಶ್ವವನ್ನು ಆಳಿದ ತಂಡ ಶ್ರೀಲಂಕಾ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಲಂಕಾ ಸೋಲುಗಳ ಸುರಿಮಳೆಯಲ್ಲಿ ಹೈರಾಣಾಗಿದೆ. ಇದೀಗ ಗಾಯದ ಮೇಲೆ ಬರೆ ಎಂಬಂತೆ ಅ್ಫಘಾನಿಸ್ಥಾನದ ವಿರುದ್ಧ ಏಷ್ಯಾ ಕಪ್‌ನಲ್ಲಿ ಸೋಲನ್ನು ಅನುಭವಿಸುವ ಮೂಲಕ ಆಘಾತಕಾರಿಯಾಗಿ ಪಂದ್ಯಾವಳಿಯಿಂದ ಹೊರಹಾಕಲ್ಪಟ್ಟಿದೆ.
ಒಂದು ಬಲಿಷ್ಠ ತಂಡ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ತಂಡಗಳ ಎದುರು ಸೋಲುತ್ತಿರುವುದು ಇದೇ ಮೊದಲೇನಲ್ಲ. ವಿಶ್ವದ ಹಲವಾರು ತಂಡಗಳು ಬಲಿಷ್ಠ ತಂಡಗಳನ್ನು ಸೋಲಿಸುವುದರ ಮೂಲಕ ಅಚ್ಚರಿಯ ಲಿತಾಂಶಗಳನ್ನ ಹಲವಾರು ಬಾರಿ ನೀಡಿವೆ. ಆದರೆ,  ಶ್ರೀಲಂಕಾ ತಂಡ ಇದಕ್ಕೆ ಹೊರತಾಗಿದೆ.
1996ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ತಂಡ ಶ್ರೀಲಂಕಾ. ಅರ್ಜುನ್ ರಣತುಂಗಾ, ಅರವಿಂದ ಡಿ. ಸಿಲ್ವಾ, ಚಾಮಿಂಡಾ ವಾಸ್, ಮರ್ವಾನ್ ಅಟ್ಟಪಟ್ಟು,  ಮುತ್ತಯ್ಯ ಮುರಳೀಧರನ್, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ಮಹೇಲಾ ಜಯವರ್ಧನೆ  ಹೀಗೆ ಹಲವು ದಿಗ್ಗಜ ಆಟಗಾರರನ್ನು ವಿಶ್ವ ಕ್ರಿಕೆಟ್‌ಗೆ ನೀಡಿದ ದೇಶ ಶ್ರೀಲಂಕಾ. 1992ರಲ್ಲಿ ಟೆಸ್ಟ್ ಕ್ರಿಕೆಟ್ ಮಾನ್ಯತೆಯನ್ನು ಪಡೆದ ಶ್ರೀಲಂಕಾ ಪಾಲಿಗೆ 1996 ರಿಂದ 1999ರ ವರೆಗಿನ ಕಾಲವನ್ನು ಕ್ರಿಕೆಟ್‌ನ ಉನ್ನತಿಯ ಸಮಯ ಎಂದೇ ಕರೆಯಲಾಗುತ್ತದೆ. 2000ದಿಂದ 2012ರವರೆಗೂ ಕೂಡ ಶ್ರೀಲಂಕಾ ವಿಶ್ವ ಕ್ರಿಕೆಟಿನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನವನ್ನೇ ನೀಡುತ್ತ ಬಂದಿತ್ತು. ಆದರೆ ತದನಂತರ ನಡೆದಿದ್ದು ಮಾತ್ರ ಮಹಾ ಕುಸಿತ ಎಂದೇ ಹೇಳಲಾಗುತ್ತದೆ.
ಒಂದಾನೊಂದು ಕಾಲದಲ್ಲಿ ಶ್ರೀಲಂಕಾ ತಂಡದ ಆರಂಭಿಕ ಆಟಗಾರರಾಗಿದ್ದ ಸನತ್ ಜಯಸೂರ್ಯ, ಏಕದಿನ ಕ್ರಿಕೆಟ್ ಮಾದರಿಯನ್ನೇ ಬದಲಾಯಿಸಿದವರು. 30 ಯಾರ್ಡ್ ಸರ್ಕಲ್‌ನಲ್ಲಿ, ಪವರ್‌ಪ್ಲೇ ಅವಧಿಯಲ್ಲಿ ಭಾರಿ ಹೊಡೆತವನ್ನು ಭಾರಿಸುವ ಮೂಲಕ ಏಕದಿನ ಕ್ರಿಕೆಟ್‌ನ ಯೋಜನೆಗಳನ್ನು ಬದಲಾಯಿಸಿದವರು. ಕೌಶಲ್ಯಯುಕ್ತ ನಾಯಕತ್ವ ಹೊಂದಿದ್ದ ರಣತುಂಗಾ, ಮಧ್ಯಮ ಕ್ರಮಾಂಕದ ಆಪದ್ಭಾಂಧವ ಅರವಿಂದ ಡಿಸಿಲ್ವಾ, ವಿಶ್ವದ ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿದ ಮುರಳೀಧರನ್, ವೇಗದ ಮೂಲಕ ಎದುರಾಳಿಗಳ ನಡುಮುರಿಯುತ್ತಿದ್ದ ವಾಸ್, ಹೆಸರಾಂತ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ. ಇಂತಹ ಖ್ಯಾತನಾಮದ ದಿಗ್ಗಜರನ್ನು ಪಡೆದಿದ್ದ ತಂಡ ಇದೀಗ ಹೇಳ ಹೆಸರಿಲ್ಲದಂತೆ ಸೋಲುತ್ತಿದೆ. ನಿನ್ನೆ ಮೊನ್ನೆ ಕ್ರಿಕೆಟ್ ಆಡಲು ಆರಂಭಿಸಿದವರ ವಿರುದ್ಧ ಹೀನಾಯವಾಗಿ ಸೋತು ಮುಖಭಂಗ ಎದುರಿಸುತ್ತಿದೆ.
ಜಯವರ್ಧನೆ ಹಾಗೂ ಸಂಗಕ್ಕಾರ ಯಾವಾಗ ನಿವೃತ್ತಿ ಘೋಷಿಸಿದರೋ, ಅಂದಿನಿಂದ ತಂಡದ ವನತಿ ಆರಂಭವಾಯಿತು ಎಂದೇ ಹೇಳಬಹುದು. ಹಲವು ಸೋಲುಗಳು ತಂಡವನ್ನು ಕಂಗೆಡಿಸಿದವು.

ಕಳಪೆ ಸರಾಸರಿ
ಏಕದಿನ ಆಡುವ ದೇಶಗಳ ಜೊತೆಗೆ ಶ್ರೀಲಂಕಾದ ಗೆಲುವಿನ ಸರಾಸರಿ ಕೇವಲ ಶೇ 27ರಷ್ಟು. ಶ್ರೀಲಂಕಾ 2016 ರಿಂದ ಇಲ್ಲಿಯತನಕ 9 ದ್ವಿಿಪಕ್ಷೀಯ ಸರಣಿಗಳನ್ನು ಸೋತು ಕೇವಲ ಒಂದೇ ಒಂದು  ಸರಣಿಯನ್ನು ಗೆದ್ದಿದೆ. ಅದೂ ಕೂಡ  ಇತ್ತೀಚೆಗಷ್ಟೇ ಟೆಸ್ಟ್  ಆಡಲು ಆರಂಭಿಸಿರುವ ಐರ್ಲೆಂಡ್ ವಿರುದ್ಧ. ಶ್ರೀಲಂಕಾ 2016ರಿಂದ ಈಚೆಗೆ ಬರೋಬ್ಬರಿ ಮೂರು ಬಾರಿ 5-0 ಅಂತರದಲ್ಲಿ ವೈಟ್‌ವಾಶ್ ಆಗಿದೆ.  ತವರಿನಲ್ಲೇ ಜಿಂಬಾಬ್ವೆ ವಿರುದ್ದ 3-2 ಅಂತರದಲ್ಲಿ ಸರಣಿ ಸೋತು ಅವಮಾನಕ್ಕೀಡಾಗಿದ್ದೂ ಹಸಿರಾಗಿದೆ.


ಪ್ರಯೋಗ, ಭ್ರಷ್ಟಾಚಾರ
ಕಳೆದ 2 ವರ್ಷದಲ್ಲಿ 20 ಹೊಸ ಆಟಗಾರರಿಗೆ ತಂಡದಲ್ಲಿ  ಸ್ಥಾನ ಕಲ್ಪಿಸಲಾಗಿದೆ. ಇದು  ಶ್ರೀಲಂಕಾ ತಂಡದ ಅತಂತ್ರ ಪರಿಸ್ಥಿಿತಿಗೆ ಉದಾಹರಣೆ. ಜತೆಗೆ ಆಡಳಿತ ಮಂಡಳಿಯ ಭ್ರಷ್ಟಾಚಾರ  ತಾಂಡವವಾಡುತ್ತಿದ್ದು, ತಂಡದ ಹೀನಾಯ ಸ್ಥಿತಿಗೆ ಇನ್ನಷ್ಟು ಕಾರಣವಾಗಿದೆ. ಹೀಗಾಗಿಯೇ ಶ್ರೀಲಂಕಾ ಕ್ರಿಕೆಟ್ ಆಡಳಿತ ಮಂಡಳಿಯಲ್ಲೂ ಎಲ್ಲವೂ ಸರಿಯಿಲ್ಲ ಎಂದು ಇತ್ತೀಚೆಗಷ್ಟೇ ಮುರಳೀಧರನ್ ಕಿಡಿ ಕಾರಿದ್ದರು. ಅಷ್ಟೇ ಅಲ್ಲ ಆಡಳಿತ ಮಂಡಳಿ ಮುಂದಿಟ್ಟಿದ್ದ ಹುದ್ದೆಯನ್ನು ತ್ಯಜಿಸಿದ್ದರೂ ಕೂಡಾ.

ಶ್ರೀಲಂಕಾ ತಂಡ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಅಭಿಮಾನಿಗಳ ಪಾಲಿಗೆ ಲಂಕಾ ತಂಡ ಎಂಬುದು ಕೇವಲ ನೆನಪಾಗಿಯಷ್ಟೇ ಉಳಿಯಲಿದೆ. ಅಭಿಮಾನಿಗಳ ಪಾಲಿನಲ್ಲಿ ಅಚ್ಚಳಿಯದ ರೀತಿಯಲ್ಲಿ ಸ್ಥಾನ ಪಡೆದಿರುವ ಶ್ರೀಲಂಕಾ ಇನ್ನೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಎದ್ದುನಿಲ್ಲಲಿ ಎನ್ನುವುದು ಅಭಿಮಾನಿಗಳ ಆಶಯ.

Tuesday, September 18, 2018

ಮನುಷ್ಯರನ್ನೆ ನಾಯಿಗಳಂತೆ ಕಾಣುವ ಮುಖ್ಯಮಂತ್ರಿಗಳಲ್ಲಿ ಸೂಕ್ಷ್ಮ ಸಂವೇದನೆಗೆ ಜಾಗವಿದೆಯೇ?

ಅವು ಎಷ್ಟು ಅನ್ಯೋನ್ಯ ಎಂದರೆ, ಗಂಡು ಹಾಗೂ ಹೆಣ್ಣು ಹಕ್ಕಿ ಎರಡೂ ಕೂಡಿ ಸರಿಯಾದ ಪೊಟರೆ ಒಂದನ್ನು ಹುಡುಕಿ ಗೂಡು ಕಟ್ಟುತ್ತವೆ. ಆ ಗೂಡಿನಲ್ಲಿ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವಿಗೆ ಕೂತರೆ, ಗಂಡು ಹಕ್ಕಿ ಆ ಪೊಟರೆಯ ಸುತ್ತ ರಕ್ಷಣಾ ಕವಚದ ರೂಪದಲ್ಲಿ ಮಣ್ಣಿನ ಪ್ಲಾಸ್ಟರ್ ಮಾಡಲು ಮುಂದಾಗುತ್ತದೆ. ತನ್ನ ಕೊಕ್ಕಿನ ಮೂಲಕ ಹಸಿ ಮಣ್ಣನ್ನು ಕಿತ್ತು ತಂದು ಅದನ್ನು ಪೊರೆಯ ಸುತ್ತ ನಿಧಾನವಾಗಿ ಮೆತ್ತುತ್ತದೆ. ಪೊಟರೆಯೊಳಗೆ ಹೆಣ್ಣು ಹಕ್ಕಿ ಇರುವಂತೆಯೇ ಮಣ್ಣಿನ ಪ್ಲಾಸ್ಟರ್ ಮಾಡುವ ಗಂಡು ಹಕ್ಕಿ, ಕೊನೆಗೆ ಆಹಾರ ತರಲು ಮುಂದಾಗುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ನೂರಾರು ಕಿಲೋಮೀಟರ್ ಹಾರಾಟ ಮಾಡಿ, ಅಲೆದಾಟ ನಡೆಸಿ ಆಹಾರ ಅರಸಿ ಬರುವ ಗಂಡು ಹಂಕ್ಕಿ, ಆ ಪ್ಲಾಸ್ಟರ್ ಮಧ್ಯದಲ್ಲಿರುವ ಚಿಕ್ಕದೊಂದು ಕಿಂಡಿಯ ಮೂಲಕ ಹೆಣ್ಣು ಹಕ್ಕಿಗೆ ಆಹಾರವನ್ನು ತಂದುಕೊಡುತ್ತದೆ.
ಹೀಗೆ ಒಂದೆರಡು ದಿನವಲ್ಲ, ತಿಂಗಳುಗಳ ಕಾಲ ಮಾಡುತ್ತದೆ. ಯಾವಾಗ ಮೊಟ್ಟೆ ಒಡೆದು ಮರಿಗಳು ಬೆಳೆದು ರೆಕ್ಕೆ ಬಲಿಯುತ್ತದೆಯೋ ಆಗ ಗಂಡು ಹಕ್ಕಿಯೇ ಪ್ಲಾಸ್ಟರ್ ಒಡೆದು ಗೃಹಬಂಧನದಿಂದ ಬಿಡಿಸುತ್ತದೆ. ಒಂದು ವೇಳೆ ಆಹಾರ ತರಲಿಕ್ಕೆ ಹೋದ ಗಂಡು ಹಕ್ಕಿ ಬೇಟೆಗಾರರಿಗೋ, ಇತರ ಪ್ರಾಣಿ ಪಕ್ಷಿಗಳ ದಾಳಿಗೋ ಬಲಿಯಾದರೆ, ಪೊಟರೆಯೊಳಕ್ಕೆ ಬಂಧಿಯಾದ ಹಕ್ಕಿ ಅಲ್ಲೇ ಉಪವಾಸ ಬಿದ್ದು ಸಾಯುತ್ತದೆ. ಇಂತಹದ್ದೊಂದು ವಿಶಿಷ್ಟ ಜೀವನ ಕ್ರಮವನ್ನು ಲಕ್ಷಾಂತರ ವರ್ಷಗಳಿಂದ ಬೆಳೆಸಿಕೊಂಡು ಬಂದು, ಮನುಷ್ಯರಿಗೂ ಆದರ್ಶಪ್ರಾಯವಾಗಿರುವ ಹಕ್ಕಿಯೇ ಹಾರ್ನಬಿಲ್.
ಮಂಗಟ್ಟೆ ಎಂದು ಕನ್ನಡದಲ್ಲಿ ಕರೆಸಿಕೊಳ್ಳುವ ಹಾರ್ನಬಿಲ್ ಗಳು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳು. ಭಾರತದಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮೀಝೋರಾಂ, ಮಣಿಪುರಗಳನ್ನು ಬಿಟ್ಟರೆ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವಂತಹ ಅಪರೂಪದ ಪಕ್ಷಿ. ಕರ್ನಾಟಕದ ದಾಂಡೇಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಇರುವ ವಿಶಿಷ್ಟ ಪಕ್ಷಿ.
ಗ್ರೇಟ್ ಮಲಬಾರ್ ಗ್ರೇ ಹಾರ್ನಬಿಲ್ ಎಂದು ಆಂಗ್ಲ ಭಾಷೆಯಲ್ಲಿ ಕರೆಸಿಕೊಳ್ಳುವ ಮಂಗಟ್ಟೆಗಳು ಅವುಗಳ ಆಕರ್ಷಕ ಬಣ್ಣಗಳು, ಹಾಗೂ ಆಕಾರದಿಂದ ಎಲ್ಲರನ್ನೂ ಸೆಳೆಯುತ್ತವೆ. ಈ ಹಾರ್ನಬಿಲ್ ಗಳು ಅವುಗಳ ವಿಶಿಷ್ಟ ರಚನೆಯ ಕೊಕ್ಕುಗಳಿಂದಲೇ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಆದರೆ ಹಾರ್ನಬಿಲ್ ಗಳ ಆಕಾರ, ಅದರ ಆಕರ್ಷಕ ಪುಕ್ಕಗಳು, ಕೊಕ್ಕುಗಳ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬೇಟೆಗಾರರಿಗೆ ಬಲಿಯಾಗುತ್ತಿವೆ.
ಒಮ್ಮೆಲೆ ಮೂರು-ನಾಲ್ಕು ಮೊಟ್ಟೆಗಳನ್ನು ಇಡುವ ಹಾರ್ನಬಿಲ್ ಗಳು ಬದುಕಿಗಾಗಿ ದಿನಂಪ್ರತಿ ಹೋರಾಟವನ್ನು ನಡೆಸುತ್ತಿವೆ. ಆಹಾರದ ಅಭಾವ, ಪ್ರಾಕೃತಿಕ ಸಮಸ್ಯೆ, ಹಾವು, ಹದ್ದುಗಳಂತಹ ಕಾಡುವ ಶತ್ರುಗಳು, ಯಾವ ಕ್ಷಣದಲ್ಲಿ ಯಾವ ಬೇಟೆಗಾರನ ಬಂದೂಕಿನ ಏಟಿಗೆ ಬಲಿಪಶು ಆಗಬೇಕೋ ಎಂಬ ಆತಂಕದ ನಡುವೆಯೇ ಗುಟುಕು ಜೀವ ಹಿಡಿದುಕೊಂಡಿವೆ.
ಗುಂಪು ಗುಂಪಾಗಿ ವಾಸ ಮಾಡುವ ಹಾರ್ನಬಿಲ್ ಏಕಪತ್ನಿ ವೃತಸ್ಥ. ಗುಬ್ಬಿಗಳಂತೇ ಇವು, ಒಂದು ಸಂಗಾತಿ ಮರಣಿಸಿದರೆ ಇನ್ನೊಂದನ್ನು ಹುಡುಕಿ ಹೋಗುವುದಿಲ್ಲ. ಬದಲಾಗಿ ಜತೆಗಾರ ಹಕ್ಕಿಯ ನೆನಪಿನಲ್ಲೇ ಪ್ರಾಣ ಬಿಡುತ್ತವೆ. ಗಂಡು ಹಕ್ಕಿ ಸತ್ತರೆ ಹೆಣ್ಣು ಹಕ್ಕಿ ಹಾಗೂ ಹೆಣ್ಣು ಹಕ್ಕಿ ಸತ್ತರೆ ಗಂಡು ಹಕ್ಕಿ, ಒಬ್ಬಂಟಿಯಾಗಿ ಉಳಿದು, ಕೊನೆಗೆ ಸಾಯುತ್ತವೆ. ಹಾರ್ನಬಿಲ್ ಸಣ್ಣಪುಟ್ಟ ಕಾಡುಗಳಲ್ಲಿ ವಾಸ ಮಾಡುವುದೇ ಇಲ್ಲ. ಈ ಹಾರ್ನಬಿಲ್ ವಾಸ ಮಾಡುವ ಕಾಡುಗಳು ಅತ್ಯಂತ ಸಮೃದ್ಧವಾದುದು ಎಂದೇ ಹೆಸರಾಗಿದೆ. ಮಾನವನ ಹಸ್ತಕ್ಷೇಪವನ್ನು ಎಳ್ಳಷ್ಟೂ ಸಹಿಸದ ಇವು, ದಟ್ಟ ಕಾನನದ ನಡುವೆ ಎಲ್ಲೋ ಜೀವನ ನಿರ್ವಹಣೆ ಮಾಡುತ್ತವೆ.
ರಾಮಪತ್ರೆ, ಕಾಸರಕನ ಹಣ್ಣು, ಕಾಡು ಹಣ್ಣುಗಳನ್ನು ತಿಂದು ಜೀವಿಸುವ ಹಾರ್ನಬಿಲ್ ತನ್ನ ಆಹಾರ ಹುಡುಕಿಕೊಂಡು ದಿನವೊಂದಕ್ಕೆ ಏನಿಲ್ಲವೆಂದರೂ ಕನಿಷ್ಠ ೧೬೦ಕ್ಕೂ ಹೆಚ್ಚು ಕಿಲೋಮೀಟರ್ ಗಳಷ್ಟು ದೂರ ಹಾರಾಟ ಮಾಡುತ್ತವೆ. ಇವುಗಳ ಆಹಾರ ಸಣ್ಣ ಕಾಡುಗಳಲ್ಲಿ ದೊರಕುವುದಿಲ್ಲ. ದಟ್ಟ, ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಿಲ್ಲದಂತಹ ಕಾಡುಗಳಲ್ಲೇ ಬೆಳೆಯುವುದರಿಂದ, ತಾನು ಗೂಡು ಕಟ್ಟಿದ ಕಾಡಿನಿಂದ ಬಹುದೂರದ ಇನ್ನೊಂದು ದಟ್ಟಾರಣ್ಯಕ್ಕೆ ಹಾರಾಟ ಮಾಡಿ, ಬೇಟೆ ಹಾಗೂ ಆಹಾರವನ್ನು ಅರಸಿ, ಅದೇ ದಿನ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳುತ್ತವೆ. ತಜ್ಞರ ಅಧ್ಯಯನದ ಪ್ರಕಾರ ದಾಂಡೇಲಿಯಲ್ಲಿ ಗೂಡು ಕಟ್ಟಿದ ಹಾರ್ನಬಿಲ್, ಆಹಾರವನ್ನು ಹುಡುಕಿ ಶರಾವತಿ ನದಿಯ ಗೇರುಸೊಪ್ಪೆಯ ಮೌನ ಕಣಿವೆ ಪ್ರದೇಶದವರೆಗೂ ಪ್ರತಿದಿನ ಹಾರಾಟ ನಡೆಸುತ್ತದಂತೆ.
ಇವುಗಳ ಪುಕ್ಕಗಳು ಅದೃಷ್ಟದ ಸಂಕೇತ ಎನ್ನುವ ಮೂಢ ನಂಬಿಕೆ ಇತ್ತು. ಅಲ್ಲದೇ ಇವುಗಳ ಕೊಕ್ಕುಗಳು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಮಾತುಗಳೂ ಇದ್ದವು. ಈ ಕಾರಣದಿಂದಲೇ ಬೇಟೆಗಾರರು ಇವನ್ನು ಬೇಟೆಯಾಡುತ್ತಾರೆ. ಅಲ್ಲದೇ ಇವನ್ನು ಹಿಡಿದು ಕಳ್ಳ ಸಾಗಾಣಿಕೆ ಮಾಡುವವರ ಸಂಖ್ಯೆಗೂ ಹೆಚ್ಚಿದೆ. (ನಾಗಾಲ್ಯಾಂಡ್ ನಲ್ಲಿ ಹಾರ್ನಬಿಲ್ ಹಬ್ಬವೇ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಗಾಲ್ಯಾಂಡಿನ ಗ್ರಾಮಗಳ ಜನರು, ಹಾರ್ನಬಿಲ್ ಪುಕ್ಕಗಳಿಂದ ತಯಾರಿಸಿದ ವಿಚಿತ್ರ ಹಾಗೂ ವಿಶಿಷ್ಟ ಬಗೆಯ ಧಿರಿಸನ್ನು ಧರಿಸುತ್ತಾರೆ. ಇದು ಅದೃಷ್ಟದ ಸಂಕೇತ ಹಾಗೂ ಸಮಾಜದಲ್ಲಿನ ಹೆಸರುಗಳಿಗೂ ಕಾರಣವಾಗುತ್ತದೆ ಎನ್ನುವ ನಂಬಿಕೆ ಇದೆ.) ಅಲ್ಲದೇ ಹಾರ್ನಬಿಲ್ ಗಳಿಗೆ ಪೂರಕವಾದ ಆಹಾರಗಳೂ ಸಿಗುತ್ತಿಲ್ಲ. ಈ ಕಾರಣಗಳಿಂದ ಹಾರ್ನಬಿಲ್ ಅಳಿವಿನ ಅಂಚಿನಲ್ಲಿದೆ.
ಹಿಂದೆ ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾರ್ನಬಿಲ್ ಗಳ ಮಹತ್ವವನ್ನು ಅರಿತು, ದಾಂಡೇಲಿಯನ್ನು ಹಾರ್ನಬಿಲ್ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ಹಾರ್ನಬಿಲ್ ಗಳ ಪ್ರಮುಖ ಆಹಾರವಾದ ರಾಮಪತ್ರೆ ಈ ಮುಂತಾದ ಮರಗಳನ್ನು ಬೆಳೆಸಲು ಅನುವಾಗುವಂತೆ ಸಾಕಷ್ಟು ಅನುದಾನವನ್ನೂ ಘೋಷಣೆ ಮಾಡಿದ್ದರು. ಆ ನಂತರದಲ್ಲಿ ದಾಂಡಡೇಲಿಯ ಪ್ರದೇಶದಲ್ಲಿ ಹಾರ್ನಬಿಲ್ ಸಂರಕ್ಷಿತ ಅರಣ್ಯ ಪ್ರದೇಶ ಎನ್ನುವ ಬೋರ್ಡುಗಳೂ ಕಾಣಿಸಿಕೊಂಡವು. ಆದರೆ ದಿನಗಳೆಂದಂತೆ ಹಾರ್ನಬಿಲ್ ಸಂರಕ್ಷಣೆ ಎನ್ನುವುದು ಕಡತಕ್ಕೆ ಮಾತ್ರ ಸೀಮಿತವಾಯಿತು. ಯಡಿಯೂರಪ್ಪ ಘೋಷಣೆ ಮಾಡಿದ ಅನುದಾನ ಅವರ ಅಧಿಕಾರಾವಧಿಯ ನಂತರದ ದಿನಗಳಲ್ಲಿ ಎಲ್ಲಿಗೆ ಹೋಯಿತೋ ಗೊತ್ತಿಲ್ಲ. ಹಾರ್ನಬಿಲ್ ಗಳಿಗೆ ಅಗತ್ಯವಾದ ರಾಮಪತ್ರೆಯ ಗಿಡಗಳನ್ನು ಬೆಳೆಸುವುದು ಕಡತಗಳಿಗೆ ಮಾತ್ರ ಸೀಮಿತವಾಯಿತು.
ಯಡಿಯೂರಪ್ಪರ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯರಿಗಂತೂ ಹಾರ್ನಬಿಲ್ ಗಳಂತಹ ಪಕ್ಷಿಗಳ, ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಕುರಿತು ಚಿಂತಿಸಲು ಸಮಯವೇ ಇರಲಿಲ್ಲ ಬಿಡಿ. ಅವರು ಅವುಗಳನ್ನೆಲ್ಲ ಕಡೆಗಣನೆ ಮಾಡಿ, ಧರ್ಮ, ಮತ, ಜಾತಿ, ಸಮಾಜ, ಅಹಿಂದ ಹೀಗೆ ಹಲವು ಮಾರ್ಗಗಳನ್ನು ಹಿಡಿದು ಹೊರಟರು. ಇನ್ನು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿಗಳಿಗಂತೂ ಇಂತದ್ದೊಂದು ಪಕ್ಷಿ ಸಂಕುಲ ಇದೆ ಎನ್ನುವುದನ್ನು ಮತ್ತೆ ಮತ್ತೆ ತಿಳಿಸಿಹೇಳಬೇಕೇನೋ. ಬಿಡಿ.
ಯಡಿಯೂರಪ್ಪರು ಹಾರ್ನಬಿಲ್ ಗೆ ಮೀಸಲು ಜಾಗವನ್ನೇನೋ ಘೋಷಣೆ ಮಾಡಿದರು, ಆದರೆ ಕುಮಾರಸ್ವಾಮಿ ಹಕ್ಕಿಗಳಿಗೆ ಸಂಬಂಧಿಸಿದಂತೆ, ತಮ್ಮ ಪಕ್ಷಕ್ಕೆ ಮತ ಹಾಕದ ಪ್ರದೇಶದಲ್ಲಿದೆ. ಆದ್ದರಿಂದ ಅವುಗಳ ಕುರಿತು ತಾನೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳೀದರೂ ಆಶ್ಚರ್ಯವಿಲ್ಲ.
ಮುಖ್ಯಮಂತ್ರಿಗಳಾದವರಿಗೆ ಸೂಕ್ಷ್ಮ ಸಂವೇದನೆ ಇರಬೇಕು. ರಾಜ್ಯದ ಜನರ ಕಡೆಗೆ ಇರುವಷ್ಟು ಉತ್ತಮ ಭಾವನೆಗಳನ್ನು ಪ್ರಾಣಿ, ಪಕ್ಷಿಗಳ ಕಡೆಗೂ ತೋರ್ಪಡಿಸಬೇಕು. ಯಾವುದೇ ವಿಷಯದ ಕುರಿತು ತ್ವರಿತವಾಗಿ ಸ್ಪಂದನೆ ಮಾಡುವ ಗುಣ ಬೆಳೆಸಿಕೊಂಡಿರಬೇಕು. ಆದರೆ ಇಂದಿನ ಮುಖ್ಯಮಂತ್ರಿಗಳು ಹಾಗೂ ಅವರ ಬಳಗ ಮನುಷ್ಯರನ್ನೇ ಪ್ರಾಣಿಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ನೆರೆ ಸಂತ್ರಸ್ಥರಿಗೆ ಆಹಾರವನ್ನೇ ನಾಯಿಗಳಿಗೆ ಎಸೆದಂತೆ ಎಸೆಯುವ ಮಂತ್ರಿಗಳನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಹಾರ್ನಬಿಲ್ ಗಳಂತಹ ನಿಷ್ಪಾಪಿ ಪಕ್ಷಿಗಳು, ಅಳಿವಿನ ಅಂಚಿನಲ್ಲಿರುವ ಜೀವಿ ಜಗತ್ತು ಕಾಣಲು ಸಾಧ್ಯವೇ? ಮೈತ್ರಿಯ ಮೆಟ್ಟಿಲಲ್ಲಿ ಒಂದ ಕಾಲು ಇಟ್ಟು ಗಟ್ಟಿ ನಿಲ್ಲಲ್ಲು ಹೆಣಗಾಡುತ್ತಿರುವ ಮುಖ್ಯಮಂತ್ರಿಗಳು ಹಾಗೂ ಅವರ ಪಕ್ಷದ ಜತೆಗಾರರಿಂದ ಅರಣ್ಯ ಸಂರಕ್ಷಣೆ, ಪಕ್ಷಿಗಳ ಉದ್ಧಾರ ಎನ್ನುವುದು ಕನಸೇ ಸರಿ.

Monday, September 10, 2018

ಭಾರತದ ವಿರುದ್ಧ ಕೊನೆಯ ಟೆಸ್ಟ್ ಆಡಿದ ಐವರು ಕ್ರಿಕೆಟ್ ಲೆಜೆಂಡ್ಸ್

ಕ್ರಿಕೆಟ್ ಜಗತ್ತಿನ ಅದೆಷ್ಟೋ ಲೆಜೆಂಡ್‌ಗಳು ಭಾರತದ ವಿರುದ್ಧವೇ ಮೊದಲ ಟೆಸ್ಟ್  ಆಡಿದ್ದಾರೆ. ಇನ್ನೂ ಅದೆಷ್ಟೋ ಲೆಜೆಂಡ್‌ಗಳು ಭಾರತದ ವಿರುದ್ಧವೇ ತಮ್ಮ ಬದುಕಿನ ಕೊಟ್ಟ ಕೊನೆಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮೊದಲ ಟೆಸ್ಟ್ ಹಾಗೂ ಕೊನೆಯ ಟೆಸ್ಟ್ ಈ ಎರಡಕ್ಕೂ ಭಾರತವೇ ಎದುರಾಳಿ ಆದ ನಿದರ್ಶನ ಹಲವಿದೆ. ಕ್ರಿಕೆಟ್ ಲೋಕದ ಖ್ಯಾತನಾಮ ಆಟಗಾರರು ಭಾರತದ  ವಿರುದ್ಧ ಕೊನೆಯ ಪಂದ್ಯವಾಡುವ ಮೂಲಕ ಭಾರತದ  ಹೆಸರನ್ನು ಅವರ ಜತೆ ಶಾಶ್ವತವಾಗಿ ಇರಿಸಿಕೊಂಡಿದ್ದಾರೆ. 2000ದಿಂದೀಚೆಗೆ ಭಾರತದ  ವಿರುದ್ಧವೇ ಕ್ರಿಕೆಟ್‌ಗೆ ವಿದಾಯ ಹೇಳೀದ ಐವರು ಕ್ರಿಕೆಟ್ ಕಲಿಗಳ ಕುರಿತು ಕಿರುವಿವರ ಇಲ್ಲಿದೆ.

ಸ್ಟೀವ್ ವಾ (2003-04)
ಆಸ್ಟ್ರೇಲಿಯಾ ಕಂಡ ಯಶಸ್ವಿ ನಾಯಕ ಸ್ಟೀವ್ ವಾ. ಕ್ರಿಕೆಟ್ ಲೋಕದ ಹೆಸರಾಂತ ಆಟಗಾರ. ಈ ಸ್ಟೀವ್ ವಾ ಭಾರತದ  ವಿರುದ್ಧ ತಮ್ಮ ಕೊಟ್ಟ ಕೊನೆಯ ಟೆಸ್ಟ್ ಆಡಿದರು. 2003-04ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿಯೇ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸ್ಟೀವ್ ವಾ ಪಾಲಿಗೆ ಕೊನೆಯ ಪಂದ್ಯಾವಳಿಯಾಯಿತು. ಈ ಕಾರಣದಿಂದಲೇ ಈ ಸರಣಿಯನ್ನು ಸ್ಟೀವ್ ವಾ ವಿದಾಯ ಟೂರ್ನಿ ಎಂದೂ ಕರೆಯಲಾಗುತ್ತದೆ. ಈ ಸರಣಿಯನ್ನು ಭಾರತ 1-1ರಿಂದ ಗೆದ್ದು ಸಮಬಲ ಸಾಧಿಸಿ ಸದಾ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಿದೆ. ಸತತ 16 ಟೆಸ್ಟ್ಗಳಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಸ್ಟೀವ್ ವಾ ಕೊನೆಯ ಪಂದ್ಯ ಭಾರತದ  ವಿರುದ್ಧ ನಡೆದಿದ್ದು ಎನ್ನುವುದೇ ವಿಶೇಷ.


ಆ್ಯಡಂ ಗಿಲ್‌ಕ್ರಿಸ್ಟ್
ಆಸ್ಟ್ರೇಲಿಯಾ ಹಾಗೂ ವಿಶ್ವ ಕಂಡ ಸಾರ್ವಕಾಲಿಕ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು ಆ್ಯಡಂ ಗಿಲ್‌ಕ್ರಿಸ್ಟ್. 1999, 2003 ಹಾಗೂ 2007ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದವರು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದವರು. 2007-08ರಲ್ಲಿ ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಾಗ ಗಿಲ್‌ಕ್ರಿಸ್ಟ್  ಕೊನೆಯ ಪಂದ್ಯವನ್ನು ಆಡಿದರು. 2008ರ ಜನವರಿ 26 ಗಿಲ್‌ಕ್ರಿಸ್ಟ್  ಆಡಿದ ಕೊನೆಯ ಪಂದ್ಯ. ಈ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸರಣಿಯ ನಂತರ ಗಿಲ್‌ಕ್ರಿಸ್ಟ್  ಐಪಿಎಲ್‌ಗಳಲ್ಲಿ ಆಡಿದರಾದರೂ ಪ್ರಭಾವಿ ಎನ್ನಿಸಲಿಲ್ಲ. ಭಾರತದ  ವಿರುದ್ಧ ವಿದಾಯ ಹೇಳಿದ ಎರಡನೇ ಲೆಜೆಂಡ್ ಎನ್ನಿಸಿಕೊಂಡಿದ್ದಾರೆ.

ಮುತ್ತಯ್ಯ ಮುರಳೀಧರನ್ (2010)
ವಿಶ್ವದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧ ರನ್. ಅತ್ಯಂತ ಹೆಚ್ಚು ಏಕದಿನ ಹಾಗೂ ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಆಟಗಾರ. ಭಾರತವು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ  2010ರಲ್ಲಿ ಗಾಲೆಯಲ್ಲಿ ನಡೆದ ಪಂದ್ಯ ಮುರಳೀಧರನ್ ವೃತ್ತಿ ಬದುಕಿನ ಕೊಟ್ಟ ಕೊನೆಯ ಪಂದ್ಯ ಎನ್ನಿಸಿಕೊಂಡಿತು. ಮುರಳೀಧರನ್ ಕೊನೆಯ ಪಂದ್ಯದ ಕೊನೆಯ ಬಾಲ್‌ನಲ್ಲಿ ಭಾರತದ ಪ್ರಗ್ಯಾನ್ ಓಝಾ ವಿಕೆಟ್ ಪಡೆಯುವ ಮೂಲಕ ಚಿರಸ್ಥಾಯಿ ಎನ್ನಿಸಿಕೊಂಡರು. ಇದು ಅವರ 800ನೇ ವಿಕೆಟ್ ಆಗಿತ್ತು. ಈ ಸರಣಿ ಸಮಬಲಗೊಂಡರೂ 1334 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ಮುರಳೀಧರನ್ ವಿದಾಯ ಹೇಳಿದ್ದರಿಂದ ಅಭಿಮಾನಿಗಳ ಪಾಲಿಗೆ ಸದಾ ನೆನಪಿನಲ್ಲಿ ಉಳಿಯಿತು.

ಜಾಕ್ ಕಾಲಿಸ್ (2013)
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆಟಗಾರ ಜಾಕ್ ಕಾಲಿಸ್. ಟೆಸ್ಟ್ ನಲ್ಲಿ  ಅತ್ಯಂತ ಹೆಚ್ಚು ರನ್ ಗಳಿಸಿದವರ ಯಾದಿಯಲ್ಲಿ ಸ್ಥಾನ ಪಡೆದವರು. 13000 ರನ್, 292 ವಿಕೆಟ್ ಹಾಗೂ 200 ಕ್ಯಾಚ್ ಪಡೆದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬ. ಕಾಲಿಸ್ ಕೊನೆಯ ಟೆಸ್ಟ್ ಆಡಿದ್ದು 2013ರಲ್ಲಿ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ ಗೆಲುವಿಗೂ ಕಾರಣರಾದ ಆಟಗಾರ. ತೆಂಡೂಲ್ಕರ್, ಲಾರಾ, ಚಂದ್ರಪಾಲ್, ಸ್ಟೀವ್ ವಾ, ಮುರಳೀಧರನ್, ವಾಲ್ಶ್ ಮುಂತಾದ ದಿಗ್ಗಜರ ಸಾಲಿನಲ್ಲಿ ನಿಲ್ಲುವಂತಹ ಆಟಗಾರ. ಕಾಲೀಸ್ ಕೊನೆಯ ಪಂದ್ಯ ಆಡಿದ್ದುಯ ಭಾರತದ ವಿರುದ್ಧ ಎನ್ನುವ ಸಂಗತಿ ಭಾರತಕ್ಕೆ ಹೆಮ್ಮೆಯ ವಿಷಯವೇ ಸರಿ.

ಕುಮಾರ ಸಂಗಕ್ಕಾರ (2015)
ಶ್ರೀಲಂಕಾ ಕಂಡ ಅತ್ಯುತ್ತಮ ಆಟಗಾರ, ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ. ಅತ್ಯಂತ ಹೆಚ್ಚು ದ್ವಿಶತಕಗಳನ್ನು ಭಾರಿಸಿದ ಆಟಗಾರ ಎನ್ನುವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆಸಿಕೊಂಡಿರುವ ಸಂಗಕ್ಕಾರ 2015ರಲ್ಲಿ ಭಾರತದ  ವಿರುದ್ಧ ಕೊಟ್ಟ ಕೊನೆಯ ಪಂದ್ಯವನ್ನು ಆಡಿದರು. ಮೂರನೇ ಕ್ರಮಾಂಕದಲ್ಲಿ ಆಟವಾಡುತ್ತಿದ್ದ ಸಂಗಕ್ಕಾರ 38 ಶತಕಗಳನ್ನು ಭಾರಿಸಿದ್ದರು. 3 ಪಂದ್ಯಗಳ ಸರಣಿಯನ್ನು ಶ್ರೀಲಂಕಾ 2-1 ಅಂತರದಲ್ಲಿ ಸೋಲನ್ನು ಕಂಡರೂ ಸಂಗಕ್ಕಾರ ಆಟ ಅದ್ಭುತವಾಗಿತ್ತು. ಭಾರತದ  ವಿರುದ್ಧ ಅಂತಿಮ ಪಂದ್ಯವನ್ನಾಡುವ ಸಂದರ್ಭದಲ್ಲಿ  ಸಂಗಕ್ಕಾರ ಕಣ್ಣಾಲಿಗಳು ತುಂಬಿಬಂದಿದ್ದವು. ಭಾರತದ  ಆಟಗಾರರು ಈ ಎಲ್ಲ ಲೆಜೆಂಡ್‌ಗಳಿಗೂ ಗಾರ್ಡ್ ಆಫ್  ಆನರ್ ನೀಡುವ ಮೂಲಕ ಸ್ವರಣೀಯ ವಿದಾಯವನ್ನು ಹೇಳಿದ್ದು ಕೂಡ ಉಲ್ಲೇಖನೀಯ.

Saturday, September 8, 2018

ಮಾಯಾಂಕ್ ಅಗರ್ವಾಲ್‌ರನ್ನು ಪದೇ ಪದೆ ಕಡೆಗಣಿಸಿದ ಬಿಸಿಸಿಐ

ಕಳೆದ ಒಂದೂವರೆ ವರ್ಷದ ಅವಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎಂದರೆ ಅದು ಮಾಯಾಂಕ್ ಅಗರ್ವಾಲ್ ಮಾತ್ರ. ಶತಕಗಳ ಮೇಲೆ ಶತಕ ಭಾರಿಸಿ, ರನ್ ಸುರಿಮಳೆಯನ್ನೇ ಸುರಿಸುತ್ತಿರುವ ಮಾಯಾಂಕ್ ಅಗರ್ವಾಲ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದೇ ಬಿಸಿಸಿಐ ಮಾತ್ರ ಪದೇ ಪದೆ ಕಡೆಗಣನೆ ಮಾಡುತ್ತಿದೆ.
ಕರ್ನಾಟಕ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ದೇಸೀಯ ಕ್ರೀಡೆಗಳಲ್ಲಿ ರನ್ ಸುರಿಮಳೆಯನ್ನೇ ಸುರಿಸಿದ್ದಾರೆ. ರಣಜೀ ಟ್ರೋಫೀ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿ ಹೀಗೆ ವಿವಿಧ  ದೇಸೀಯ ಕ್ರೀಡೆಗಳಲ್ಲಿ ಶತಕಗಳ ಮೇಲೆ ಶತಕ ಭಾರಿಸಿದ್ದಾರೆ. ಇಷ್ಟೇ ಅಲ್ಲದೇ ಭಾರತ ಎ ತಂಡದ ಪರ ಇಂಗ್ಲೆೆಂಡ್ ಎ ವಿರುದ್ಧ ಆಂಗ್ಲರ ನೆಲದಲ್ಲೇ ಎರಡು ಶತಕ ಭಾರಿಸಿ ಸಾಧನೆ ಮಾಡಿದ್ದಾಾರೆ.
ಮಾಯಾಂಕ್ ಅಗರ್ವಾಲ್ ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಜತೆ ಜತೆಯಲ್ಲಿ ಆಸ್ಟ್ರೇಲಿಯಾ ಎ ಹಾಗೂ ವೆಸ್ಟ್  ಇಂಡಿಸ್‌ಎ ನಡುವಿನ ಭಾರತ ಎ ತಂಡದ ಸರಣಿಯಲ್ಲಿಯೂ ಕೂಡ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಕಳೆದ ಒಂದು ವರ್ಷದ ಅವಯಲ್ಲಿ ಲೀಸ್ಟ್  ಎ ತಂಡದ ಪರ ಕೇವಲ 8 ಪಂದ್ಯಗಳಲ್ಲಿ 723 ರನ್ ಗಳಿಸಿದ ಸಾಧನೆ ಮಾಯಾಂಕ್‌ರ ಹೆಸರಲ್ಲಿದೆ. ಇಷ್ಟೇ ಅಲ್ಲ 2017-18ರ ದೇಸೀಯ ಕ್ರೀಡೆಗಳಲ್ಲಿ ಮಾಯಾಂಕ್ ಗಳಿಸಿದ್ದು ಬರೋಬ್ಬರಿ 2141ರನ್. ದೇಸೀಯ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 2000 ರನ್ ದಾಖಲಿಸಿದ ಮೊದಲ ಆಟಗಾರ ಎನ್ನುವ ಖ್ಯಾಾತಿಯೂ ಮಾಯಾಂಕ್ ಬೆನ್ನಿಗಿದೆ. ಇನ್ನೂ ವಿಶೇಷವೆಂದರೆ ಮಾಯಾಂಕ್ ಅಗರ್ವಾಲ್ ವಿಶ್ವದ ಮಟ್ಟದಲ್ಲಿ ದೇಸೀಯ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಸಾಧಕರ ಯಾದಿಯಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಕೂಡ ಮಾಯಾಂಕ್‌ರನ್ನು ಭಾರತ ತಂಡಕ್ಕೆೆ ಆಯ್ಕೆ ಮಾಡದೇ ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಭಾರತದ ನೆಲದಲ್ಲಿ ಮಾತ್ರವಲ್ಲ ವಿದೇಶದ ನೆಲದಲ್ಲಿಯೂ ಅರ್ಗವಾಲ್ ಸಾಕಷ್ಟು ರನ್ ಸುರಿಮಳೆಗೈದಿದ್ದಾರೆ. ಭಾರತ ಟೆಸ್‌ಟ್‌ ತಂಡದಲ್ಲಿನ ಹಲವು ಆಟಗಾರರು ಇಂಗ್ಲೆೆಂಡ್ ನೆಲದಲ್ಲಿ ರನ್ ಗಳಿಸಲು ಪರದಾಡಿದ್ದು ಕಣ್ಣೆದುರಿಗೇ ಇದೆ. ಹೀಗಿರುವ ಸಂದರ್ಭರ್ದಲ್ಲೇ ಮಾಯಾಂಕ್, ಇಂಗ್ಲೆೆಂಡ್ ನೆಲದಲ್ಲಿ ಆಂಗ್ಲ ಯುವ ತಂಡದ ಸ್ವಿಿಂಗ್ ಬಾಲಿಂಗ್‌ನ್ನು ಲೀಲಾಜಾಲವಾಗಿ ಎದುರಿಸ ಶತಕಗಳನ್ನು ಭಾರಿಸಿದ್ದರು. ಇವರನ್ನು ತಂಡಕ್ಕೆೆ ಆಯ್ಕೆ ಮಾಡಿದ್ದರೆ, ಪ್ರಭಾವಿ ಆಗಬಲ್ಲರು ಎನ್ನುವ ಭರವಸೆಯನ್ನು ಹುಟ್ಟು ಹಾಕಿದ್ದರು.
ಶತಕಗಳ ಮೇಲೆ ಶತಕ, ರನ್‌ಗಳ ಸುರಿಮಳೆ ಭಾರಿಸುತ್ತಿರುವ ಮಾಯಾಂಕ್ ಅಗರ್ವಾಲ್ ಭಾರತದ ಟೆಸ್ಟ್ , ಏಕದಿನ ತಂಡಗಳಿಗೆ ಆಯ್ಕೆಯಾಬೇಕಾದರೆ ಇನ್ನೇನು ಮಾಡಬೇಕು ಎನ್ನುವ ಪ್ರಶ್ನೆಗಳು ಹಿರಿಯ ಆಟಗಾರರಿಂದ, ಕ್ರಿಕೆಟ್ ಪ್ರೇಮಿಗಳಿಂದ ಕೇಳಿ ಬಂದಿದೆ. ಪದೇ ಪದೆ ವಿಫಲರಾಗುತ್ತಿರುವ ಆಟಗಾರರಿಗೆ ಪದೇ ಪದೆ ಮಣೆ ಹಾಕಲಾಗುತ್ತಿದೆ. ಆದರೆ ಗಮನಾರ್ಹ ಪ್ರದರ್ಶನ ನೀಡಿ ಮತ್ತೆ ಮತ್ತೆ ಆಯ್ಕೆ ಮಂಡಳಿಯ ಕದ ತಟ್ಟುತ್ತಿದ್ದರೂ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣನೆ ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹರ್ಭಜನ್  ಸಿಂಗ್‌ರಂತಹ ಹಿರಿಯ ಆಟಗಾರರೇ ಮಾಯಾಂಕ್‌ಗೆ ಅವಕಾಶ ನೀಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಬಿಸಿಸಿಐ ಮಾತ್ರ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣಿಸುವ ಮೂಲಕ ಪ್ರತಿಭಾವಂತ ಆಟಗಾರನಿಗೆ ಅನ್ಯಾಯ ಮಾಡುತ್ತಿದೆ.

---
ಬೇಕೆಂದೇ ಕಡೆಗಣನೆ
ಮಾಯಾಂಕ್ ಅಗರ್ವಾಲ್ ಇಷ್ಟೆಲ್ಲ ರನ್ ಗಳಿಸಿದ್ದರೂ ಕೂಡ ಅವರನ್ನು ಕಡೆಗಣನೆ ಮಾಡಿ ಪೃಥ್ವಿ ಶಾ ಹಾಗೂ ಹನುಮ ವಿಹಾರಿಗೆ ಇಂಗ್ಲೆೆಂಡ್ ತಂಡದ ವಿರುದ್ಧ ಟೆಸ್ಟ್  ಸರಣಿಗೆ ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲದೇ ಏಷ್ಯಾ ಕಪ್‌ಗೂ ಅವಕಾಶ ನೀಡಲಿಲ್ಲ. ಇದನ್ನೆಲ್ಲ ಗಮನಿಸಿದಾಗ ಮಾಯಾಂಕ್ ಅಗರ್ವಾಲ್‌ರನ್ನು ಬೇಕೆಂದೇ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪ್ರತಿಭಾವಂತ ಆಟಗಾರನಿಗೆ ಮಣೆ ಹಾಕುವ ಬದಲು ಉಳಿದವರನ್ನು ಆಯ್ಕೆ ಮಾಡುತ್ತಿರುವುದು ಬಿಸಿಸಿಐನಲ್ಲಿನ ರಾಜಕೀಯವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ.

Thursday, September 6, 2018

ಅಂ-ಕಣ -11

ಅರ್ಥ

ತುಟಿಗೊತ್ತಿದ ಮುತ್ತಿಗಿಂತ
ಹಣೆಗೊತ್ತಿದ ಮುತ್ತೇ
ಜಾಸ್ತಿ ಕಾಡಿದರೆ..,
ನಿಮ್ಮ ಪ್ರೀತಿ ಇನ್ನೂ
ಜೀವಂತವಿದೆ ಎಂದೇ ಅರ್ಥ!


ಕೊಂಡಿ 

ಕೆಲವು ದಿನ ಆಯ್ತು,
ಬೆಡ್ ರೂಂ ಲೈಟ್ ಹಾಕಿದ್ರೆ
ಬಾತ್ ರೂಮಲ್ಲಿ ಲೈಟ್
ಆನ್ ಆಗ್ತಿದೆ!
ವಯರ್ ಪಿಟಿಂಗ್ ಪ್ರಾಬ್ಲಮ್ಮೇ?
ಶಾರ್ಟಾಗಿರಬಹುದೇ...?
ಅಥವಾ...


ಭಾಗ್ಯ 

ಕೆಲವರಿಗೆ ಫ್ರೆಂಡ್
ಲೀಸ್ಟಿಗಿಂತ
ಬ್ಲಾಕ್ ಮಾಡಿದ ಲೀಸ್ಟೇ
ಜಾಸ್ತಿ ಇರುತ್ತೆ!


ದೃಷ್ಟಿ ಕೋನ

ನನ್ನನ್ನು ಒಂದೇ
ಕಣ್ಣಿನಿಂದ,
ದೃಷ್ಟಿ ಕೋನದಿಂದ
ನೋಡಬೇಡ
ನನ್ನ
ಇನ್ನೊಂದು ಬದುಕು
ನಿನ್ನೊಡನೆ
ನನ್ನನ್ನೂ ಸುಟ್ಟೀತು!


ಕಾರಣ 

ನನಗೆ ಕಣ್ಣೀರು
ಬಂದಾಗಲೇ
ಅಂದುಕೊಂಡೆ
ನೀನು
ಅಳುತ್ತಿದ್ದೀಯೆಂದು|

Wednesday, September 5, 2018

ಬಡತನದಲ್ಲಿ ಅರಳಿದ ಪ್ರತಿಭೆಗಳು ನೋವಿನಲ್ಲೂ ಚಿನ್ನ ಗೆದ್ದರು

ನೋವಿನಲ್ಲೂ ಚಿನ್ನ ಗೆದ್ದಳು ಸ್ವಪ್ನಾ-ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಮಂಜಿತ್‌ಗೆ ಬಂಗಾರ


ಬಡತನವಿರಲಿ, ಅನಾರೋಗ್ಯವೇ ಇರಲಿ ದೇಶಕ್ಕೆ ಪದಕ ಗೆಲ್ಲಬೇಕೆಂಬ ತವಕ ಇದ್ದರೆ ಎಂತಹ ಸಮಸ್ಯೆಯನ್ನೂ ಮರೆತು ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಏಷ್ಯನ್ ಗೇಮ್ಸ್  ಮತ್ತೊಮ್ಮೆ ಸಾಬೀತು ಪಡಿಸಿದೆ. ಬಡತನ, ಅನಾರೋಗ್ಯದ ನಡುವೆ ಸ್ವಪ್ನಾ ಬರ್ಮನ್ ಚಿನ್ನ ಗೆದ್ದರೆ, ಉದ್ಯೋಗವಿಲ್ಲದೇ ಗದ್ದೆಯಲ್ಲಿ ದುಡಿಯುತ್ತಿದ್ದ ಮಂಜಿತ್ ಸಿಂಗ್ ಕೂಡ ಬಂಗಾರ ಗೆದ್ದು ಸಾಧನೆ ಮಾಡಿದ್ದಾಾರೆ.

ನೋವು ನುಂಗಿ ಗೆದ್ದ ಸ್ವಪ್ನಾ:
ತೀವ್ರ ಪ್ರಮಾಣದ ಜ್ವರ, ಅಸಾಧ್ಯ ಹಲ್ಲು ನೋವು. ಇದರ ನಡುವಲ್ಲೇ ದೇಶಕ್ಕಾಗಿ ಪದಕ ಗೆಲ್ಲುವ ತವಕ. ಮೂರು ದಿನಗಳ ಕಾಲ ಏಳು ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿದ ಸ್ವಪ್ನಾ ಬರ್ಮನ್ ಚಿನ್ನ ಗೆದ್ದು, ವಿಶೇಷ ಸಾಧನೆ ಮಾಡಿದ್ದಾಳೆ.
ಹೆಪ್ಟಾಥ್ಲಾನ್. ಇಂಥದ್ದೊೊಂದು ಹೆಸರಿನ ಆಟವಿದೆ ಎನ್ನುವುದು ಹಲವು ಭಾರತೀಯರಿಗೆ ಗೊತ್ತಿಲ್ಲ. ಆದರೆ ಹೆಪ್ಟಾಥ್ಲಾನ್ ಎಂಬ ಕ್ರೀಡೆ ಇದೆ ಎಂಬುದನ್ನು ತಿಳಿಸಿಕೊಟ್ಟವಳು ಸ್ವಪ್ನಾ ಬರ್ಮನ್. ಏಳು ವಿಭಿನ್ನ ಕ್ರೀಡೆಗಳನ್ನು ಒಳಗೊಂಡ ಹೆಪ್ಟಾಥ್ಲಾನ್‌ನಂತೆಯೇ ಸ್ವಪ್ನಾಳ ಬದುಕು ಕೂಡ ವಿಭಿನ್ನವಾಗಿತ್ತು.
100ಮೀ. ಹರ್ಡಲ್‌ಸ್‌, ಎತ್ತರ ಜಿಗಿತ, ಗುಂಡುಎಸೆತ, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ, 800ಮೀ. ಓಟ ಹೀಗೆ ಒಟ್ಟು ಏಳು ವಿವಿಧ ಕ್ರೀಡೆಗಳನ್ನು ಒಟ್ಟಾಾಗಿಸಿ ಹೆಪ್ಟಾಥ್ಲಾನ್ ಎನ್ನಲಾಗುತ್ತದೆ. ಈ ಕ್ರೀಡೆಗೆ ಏಳು ರೀತಿಯ ಕೌಶಲ್ಯದ ಅಗತ್ಯವಿದೆ.
ಕ್ರೀಡಾಕೂಟಕ್ಕೆೆ ತೆರಳುವ ಮೊದಲೇ, ಆರು ಬೆರಳಿನ ಸ್ವಪ್ನಾ ಬರ್ಮನ್‌ಗೆ ಸರಿ ಹೊಂದುವಂತಹ ಶೂ ಸಿಗದೇ ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆಯ ನಡುವೆಯೂ ಕ್ರೀಡಾಕೂಟದಲ್ಲಿ ಪಾಲ್ಗೊೊಂಡವಳಿಗೆ ಕಾಡಿದ್ದು ತೀವ್ರ ಪ್ರಮಾಣದ ಜ್ವರ ಹಾಗೂ ಹಲ್ಲುನೋವು. ಈ ನೋವಿನ ನಡುವೆಯೂ ಆಟವನ್ನಾಡಿದ ಸ್ವಪ್ನಾ ಚಿನ್ನ ಗೆದ್ದು ಮೆರೆದಿದ್ದಾಳೆ.
ಚಿಕಿತ್ಸೆ ಪಡೆಯುತ್ತಲೇ ಎಲ್ಲಾ ವಿಭಾಗದಲ್ಲೂ ಆಕೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದಳು. ಹೈ ಜಂಪ್‌ನಲ್ಲಂತೂ ಆಕೆ ಅಸಾಧ್ಯ ನೋವಿನ ನಡುವೆ ಆಡಿದ್ದಳು. ಜಾವೆಲಿನ್ ಹಾಗೂ ಶಾಟ್‌ಪುಟ್‌ನಲ್ಲಿ ಆಕೆ ನೀಡಿದ ಅಧ್ಭುತ ಪ್ರದರ್ಶನವೇ ಆಕೆಯನ್ನು ಬಂಗಾರದ ಪದಕವನ್ನು ಇನ್ನಷ್ಟು ಹತ್ತಿರ ಮಾಡಿಸಿತ್ತು.
ಬಡ ಕುಟುಂಬ, ಕಾಯಿಲೆ ಪೀಡಿತ ತಂದೆ:
ಬಡತನದಲ್ಲಿ ಬೆಳೆದು ಬಂದ ಸ್ವಪ್ನಾಳ ಬಾಲ್ಯ ಬಹಳ ಕಷ್ಟಕರವಾಗಿತ್ತು. ಸ್ವಪ್ನಾಳ ತಂದೆ ತಳ್ಳುಗಾಡಿ ನಡೆಸುತ್ತಿದ್ದರು. ತಳ್ಳು ಗಾಡಿಯ ಮೂಲಕ ಬಂದ ದುಡ್ಡಿನಲ್ಲಿ ಬದುಕು ಸಾಗಿಸಬೇಕಿತ್ತು. ಅಂತದ್ದರಲ್ಲಿ 2013ರಲ್ಲಿ ಸ್ವಪ್ನಾ ತಂದೆ ಪಾಶ್ವವಾಯುಗೆ ತುತ್ತಾದರು. ಅಲ್ಲಿಂದ ಅವರು ಹಾಸಿಗೆಯಲ್ಲೇ ಜೀವನ ದೂಡುತ್ತಿದ್ದಾರೆ. ಸ್ವಪ್ನಾ ತಾಯಿ ಹತ್ತಿರದ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಕ್ರೀಡೆಯ ಆರಂಭಿಕ ದಿನಗಳಲ್ಲಿ ಸ್ಪಪ್ನಾ  ಹೈ ಜಂಪ್‌ನಲ್ಲಿ ಆಸಕ್ತಿ ತೋರಿಸಿದ್ದಳು. ಕುಳ್ಳಗಿದ್ದ ಕಾರಣ ಆಕೆಯನ್ನು ಹೈ ಜಂಪ್ ಆಟದಿಂದ ರಿಜೇಕ್ಟ್  ಮಾಡಲಾಗಿತ್ತು. ನಂತರ ಎರಡು ಬಾರಿ ಟ್ರಯಲ್ ನಡೆಸಿ ಆಯ್ಕೆ ಮಾಡಲಾಗಿತ್ತು.ಸ್ವಪ್ನಾಳ ಎರಡೂ ಕಾಲಿಗೆ ಆರು ಬೆರಳುಗಳಿದೆ. ಈ ಕಾರಣದಿಂದ ಧರಿಸಲು ಸರಿಯಾದ ಶೂಗಳೇ ಇರಲಿಲ್ಲ. ಹೀಗಿದ್ದಾಗಲೂ ಉತ್ತಮ ಪ್ರದರ್ಶನ ನೀಡಿದ್ದಾಳೆ.
ಕಷ್ಟದ ನಡುವೆಯೂ ಉತ್ತಮ ತರಬೇತಿ ಪಡೆದು, ನೋವಿನ ನಡುವೆಯೂ ಒಳ್ಳೆಯ ಪ್ರದರ್ಶನ ನೀಡಿದ ಸ್ವಪ್ನಾಳ ಸಾಧನೆಗೆ ಹ್ಯಾಟ್ಸಾಫ್  ಹೇಳೋಣ.

ದನಕಾಯುವ ಮಂಜಿತ್ ಬಂಗಾರ ಗೆದ್ದ:

ಕತ್ತಲಲ್ಲಿ ಇದ್ದೋನು, ಬೆಳಕಲ್ಲಿ ಎದ್ದೋನು
ಮಣ್ಣಲ್ಲಿ ಇದ್ದೋನು, ಬಂಗಾರ ಗೆದ್ದನು...
ಇಂತದ್ದೊೊಂದು ಹಾಡು ಚಿನ್ನಾರಿ ಮುತ್ತಾದಲ್ಲಿದೆ. ಮಂಜಿತ್ ಸಿಂಗ್ ಕಥೆ ಚಿನ್ನಾರಿ ಮುತ್ತಕ್ಕಿಿಂತ ಬೇರೆ ರೀತಿಯೇನೂ ಅಲ್ಲ.
ಹರ್ಯಾಣ ಮೂಲದ ವೇಗದ ಓಟಗಾರ ಮಂಜಿತ್ ಸಿಂಗ್ ಚಿನ್ನ ಗೆಲ್ಲುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಬಿಡಿ. 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ ವ್ಯಕ್ತಿ ಮಂಜಿತ್.
ಮಂಜಿತ್‌ಗೆ ಮಾಡಲು ಉದ್ಯೋಗವೇ ಇಲ್ಲ. ಓಎನ್‌ಜಿಸಿಯಲ್ಲಿ 2 ವರ್ಷದ ಗುತ್ತಿಗೆ ಮೇರೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾನೆ. ಉಳಿದ ಸಮಯದಲ್ಲಿ ಗದ್ದೆಯಲ್ಲಿ ದುಡಿಯುತ್ತಾನೆ. ತದನಂತರದಲ್ಲಿ ದನ ಕಾಯುತ್ತಾನೆ.
ಮಂಜಿತ್ ಸಿಂಗ್ ತಂದೆ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಶಾಟ್‌ಪುಟ್ ಪ್ಲೇಯರ್. ಆದರೆ ಮನೆಯಲ್ಲಿ ಅನುಕೂಲಸ್ಥರಲ್ಲ. ಹೀಗಾಗಿ ಮಂಜಿತ್‌ಗೆ ಆರಂಭಿಕ ದಿನಗಳಲ್ಲಿ ಉತ್ತಮ ತರಬೇತಿಯೂ ಸಿಕ್ಕಿರಲಿಲ್ಲ. ಮಂಜಿತ್ ಆಟವನ್ನು ಗಮನಿಸಿದವರಿಗೆ ಆತ ಆರಂಭದಲ್ಲಿ ಹಿಂದೆ ಬಿದ್ದು, ತದನಂತರ ಏಕಾಏಕಿ ಒಬ್ಬೊಬ್ಬರನ್ನಾಗಿ ಹಿಂದಿಕ್ಕುವುದು ಕಂಡುಬರುತ್ತದೆ. ಆತನ ಬದುಕೂ ಅಷ್ಟೇ. ಆರಂಭದಲ್ಲಿ ಎಲ್ಲರಿಗಿಂತ ಹಿಂದೆ ಬಿದ್ದವನು ನಂತರ ಒಂದೊಂದಾಗಿ ಸಾಧನೆ ಮಾಡಿದ್ದಾನೆ ಎನ್ನುವುದು ಮಂಜಿತ್ ಕುಟುಂಬಸ್ಥರ ಅಭಿಪ್ರಾಯ.

ಬಡತನ, ಕಷ್ಟ, ನೋವು ಇವು ದೇಶದ ಮುಂದೆ ಗೌಣವಾಗುತ್ತವೆ. ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹರಡುವ ಸಂದರ್ಭ ಬಂದರೆ ಇವೆಲ್ಲವನ್ನೂ ಕಡೆಗಣನೆ ಮಾಡಿ ಸಾಧನೆ ಮಾಡುತ್ತಾನೆ ಎನ್ನುವುದಕ್ಕೆ ಈ ಇಬ್ಬರು ಆಟಗಾರರೇ ಸಾಕ್ಷಿ. ಇಂತಹ ಅಸಂಖ್ಯಾತ ಕಷ್ಟಸಹಿಷ್ಣು ಆಟಗಾರರಿಗೊಂದು ಸಲಾಂ.