Wednesday, September 19, 2018

ಅಧಃಪತನದತ್ತ ಶ್ರೀಲಂಕಾ ಕ್ರಿಕೆಟ್ ತಂಡ

ಹಿಂದೊಮ್ಮೆ ವೆಸ್ಟ್  ಇಂಡೀಸ್ ಎಂದರೆ ಸಾಕು, ದೈತ್ಯ ಆಟಗಾರರು, ಭಯಗೊಳಿಸುವ ವೇಗ, ಅಬ್ಬರದ ಆಟ ನೆನಪಾಗುತ್ತಿತ್ತು. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹಲವು ದಶಕಗಳ ಕಾಲ ಪಾರಮ್ಯ ಮೆರೆದ ವಿಂಡೀಸ್ ತದನಂತರ ಅಧಃಪತನದ ಹಾದಿಯನ್ನು ಹಿಡಿದಿದ್ದು ಎಲ್ಲರಿಗೂ ತಿಳಿದಿದ್ದೇ. ಇದೀಗ ಶ್ರೀಲಂಕಾ ಕ್ರಿಕೆಟ್ ತಂಡ ಕೂಡ ಅಧಃಪತನದ ಹಾದಿ ಹಿಡಿದಿದೆಯೇ ಎನ್ನುವ ಅನುಮಾನಗಳು ಮೂಡಲಾರಂಭಿಸಿದೆ.
ಕಳೆದ ಹಲವು ಸರಣಿಗಳನ್ನು ಗಮನಿಸಿದಾಗ ಶ್ರೀಲಂಕಾದ ಪ್ರದರ್ಶನ ಅಷ್ಟಕ್ಕಷ್ಟೇ ಎಂಬಂತಾಗಿದೆ. ಸಾಲು ಸಾಲು ಸೋಲುಗಳು, ಕಳಪೆ ಆಟದ ಪ್ರದರ್ಶನ ತಂಡದ ಮರ್ಯಾದೆಯನ್ನು ಹರಾಜು ಮಾಡುತ್ತಿದೆ. ಚಿಕ್ಕ-ಪುಟ್ಟ ತಂಡಗಳ ವಿರುದ್ಧವೂ ಶ್ರೀಲಂಕಾ ಸೋಲನ್ನು ಅನುಭವಿಸುತ್ತಿರುವುದು ತಂಡದ ಕ್ರಿಕೆಟ್ ವೈಭವ ಪಾತಾಳಕ್ಕೆ ಇಳಿಯುತ್ತಿರುವುದರ ದ್ಯೋತಕವೆಂಬಂತೆ ಭಾಸವಾಗುತ್ತಿದೆ.
ವಿಂಡೀಸ್ ದೈತ್ಯರಂತೆಯೇ ಒಂದಾನೊಂದು ಕಾಲದಲ್ಲಿ ವಿಶ್ವವನ್ನು ಆಳಿದ ತಂಡ ಶ್ರೀಲಂಕಾ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಲಂಕಾ ಸೋಲುಗಳ ಸುರಿಮಳೆಯಲ್ಲಿ ಹೈರಾಣಾಗಿದೆ. ಇದೀಗ ಗಾಯದ ಮೇಲೆ ಬರೆ ಎಂಬಂತೆ ಅ್ಫಘಾನಿಸ್ಥಾನದ ವಿರುದ್ಧ ಏಷ್ಯಾ ಕಪ್‌ನಲ್ಲಿ ಸೋಲನ್ನು ಅನುಭವಿಸುವ ಮೂಲಕ ಆಘಾತಕಾರಿಯಾಗಿ ಪಂದ್ಯಾವಳಿಯಿಂದ ಹೊರಹಾಕಲ್ಪಟ್ಟಿದೆ.
ಒಂದು ಬಲಿಷ್ಠ ತಂಡ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ತಂಡಗಳ ಎದುರು ಸೋಲುತ್ತಿರುವುದು ಇದೇ ಮೊದಲೇನಲ್ಲ. ವಿಶ್ವದ ಹಲವಾರು ತಂಡಗಳು ಬಲಿಷ್ಠ ತಂಡಗಳನ್ನು ಸೋಲಿಸುವುದರ ಮೂಲಕ ಅಚ್ಚರಿಯ ಲಿತಾಂಶಗಳನ್ನ ಹಲವಾರು ಬಾರಿ ನೀಡಿವೆ. ಆದರೆ,  ಶ್ರೀಲಂಕಾ ತಂಡ ಇದಕ್ಕೆ ಹೊರತಾಗಿದೆ.
1996ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ತಂಡ ಶ್ರೀಲಂಕಾ. ಅರ್ಜುನ್ ರಣತುಂಗಾ, ಅರವಿಂದ ಡಿ. ಸಿಲ್ವಾ, ಚಾಮಿಂಡಾ ವಾಸ್, ಮರ್ವಾನ್ ಅಟ್ಟಪಟ್ಟು,  ಮುತ್ತಯ್ಯ ಮುರಳೀಧರನ್, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ಮಹೇಲಾ ಜಯವರ್ಧನೆ  ಹೀಗೆ ಹಲವು ದಿಗ್ಗಜ ಆಟಗಾರರನ್ನು ವಿಶ್ವ ಕ್ರಿಕೆಟ್‌ಗೆ ನೀಡಿದ ದೇಶ ಶ್ರೀಲಂಕಾ. 1992ರಲ್ಲಿ ಟೆಸ್ಟ್ ಕ್ರಿಕೆಟ್ ಮಾನ್ಯತೆಯನ್ನು ಪಡೆದ ಶ್ರೀಲಂಕಾ ಪಾಲಿಗೆ 1996 ರಿಂದ 1999ರ ವರೆಗಿನ ಕಾಲವನ್ನು ಕ್ರಿಕೆಟ್‌ನ ಉನ್ನತಿಯ ಸಮಯ ಎಂದೇ ಕರೆಯಲಾಗುತ್ತದೆ. 2000ದಿಂದ 2012ರವರೆಗೂ ಕೂಡ ಶ್ರೀಲಂಕಾ ವಿಶ್ವ ಕ್ರಿಕೆಟಿನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನವನ್ನೇ ನೀಡುತ್ತ ಬಂದಿತ್ತು. ಆದರೆ ತದನಂತರ ನಡೆದಿದ್ದು ಮಾತ್ರ ಮಹಾ ಕುಸಿತ ಎಂದೇ ಹೇಳಲಾಗುತ್ತದೆ.
ಒಂದಾನೊಂದು ಕಾಲದಲ್ಲಿ ಶ್ರೀಲಂಕಾ ತಂಡದ ಆರಂಭಿಕ ಆಟಗಾರರಾಗಿದ್ದ ಸನತ್ ಜಯಸೂರ್ಯ, ಏಕದಿನ ಕ್ರಿಕೆಟ್ ಮಾದರಿಯನ್ನೇ ಬದಲಾಯಿಸಿದವರು. 30 ಯಾರ್ಡ್ ಸರ್ಕಲ್‌ನಲ್ಲಿ, ಪವರ್‌ಪ್ಲೇ ಅವಧಿಯಲ್ಲಿ ಭಾರಿ ಹೊಡೆತವನ್ನು ಭಾರಿಸುವ ಮೂಲಕ ಏಕದಿನ ಕ್ರಿಕೆಟ್‌ನ ಯೋಜನೆಗಳನ್ನು ಬದಲಾಯಿಸಿದವರು. ಕೌಶಲ್ಯಯುಕ್ತ ನಾಯಕತ್ವ ಹೊಂದಿದ್ದ ರಣತುಂಗಾ, ಮಧ್ಯಮ ಕ್ರಮಾಂಕದ ಆಪದ್ಭಾಂಧವ ಅರವಿಂದ ಡಿಸಿಲ್ವಾ, ವಿಶ್ವದ ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿದ ಮುರಳೀಧರನ್, ವೇಗದ ಮೂಲಕ ಎದುರಾಳಿಗಳ ನಡುಮುರಿಯುತ್ತಿದ್ದ ವಾಸ್, ಹೆಸರಾಂತ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ. ಇಂತಹ ಖ್ಯಾತನಾಮದ ದಿಗ್ಗಜರನ್ನು ಪಡೆದಿದ್ದ ತಂಡ ಇದೀಗ ಹೇಳ ಹೆಸರಿಲ್ಲದಂತೆ ಸೋಲುತ್ತಿದೆ. ನಿನ್ನೆ ಮೊನ್ನೆ ಕ್ರಿಕೆಟ್ ಆಡಲು ಆರಂಭಿಸಿದವರ ವಿರುದ್ಧ ಹೀನಾಯವಾಗಿ ಸೋತು ಮುಖಭಂಗ ಎದುರಿಸುತ್ತಿದೆ.
ಜಯವರ್ಧನೆ ಹಾಗೂ ಸಂಗಕ್ಕಾರ ಯಾವಾಗ ನಿವೃತ್ತಿ ಘೋಷಿಸಿದರೋ, ಅಂದಿನಿಂದ ತಂಡದ ವನತಿ ಆರಂಭವಾಯಿತು ಎಂದೇ ಹೇಳಬಹುದು. ಹಲವು ಸೋಲುಗಳು ತಂಡವನ್ನು ಕಂಗೆಡಿಸಿದವು.

ಕಳಪೆ ಸರಾಸರಿ
ಏಕದಿನ ಆಡುವ ದೇಶಗಳ ಜೊತೆಗೆ ಶ್ರೀಲಂಕಾದ ಗೆಲುವಿನ ಸರಾಸರಿ ಕೇವಲ ಶೇ 27ರಷ್ಟು. ಶ್ರೀಲಂಕಾ 2016 ರಿಂದ ಇಲ್ಲಿಯತನಕ 9 ದ್ವಿಿಪಕ್ಷೀಯ ಸರಣಿಗಳನ್ನು ಸೋತು ಕೇವಲ ಒಂದೇ ಒಂದು  ಸರಣಿಯನ್ನು ಗೆದ್ದಿದೆ. ಅದೂ ಕೂಡ  ಇತ್ತೀಚೆಗಷ್ಟೇ ಟೆಸ್ಟ್  ಆಡಲು ಆರಂಭಿಸಿರುವ ಐರ್ಲೆಂಡ್ ವಿರುದ್ಧ. ಶ್ರೀಲಂಕಾ 2016ರಿಂದ ಈಚೆಗೆ ಬರೋಬ್ಬರಿ ಮೂರು ಬಾರಿ 5-0 ಅಂತರದಲ್ಲಿ ವೈಟ್‌ವಾಶ್ ಆಗಿದೆ.  ತವರಿನಲ್ಲೇ ಜಿಂಬಾಬ್ವೆ ವಿರುದ್ದ 3-2 ಅಂತರದಲ್ಲಿ ಸರಣಿ ಸೋತು ಅವಮಾನಕ್ಕೀಡಾಗಿದ್ದೂ ಹಸಿರಾಗಿದೆ.


ಪ್ರಯೋಗ, ಭ್ರಷ್ಟಾಚಾರ
ಕಳೆದ 2 ವರ್ಷದಲ್ಲಿ 20 ಹೊಸ ಆಟಗಾರರಿಗೆ ತಂಡದಲ್ಲಿ  ಸ್ಥಾನ ಕಲ್ಪಿಸಲಾಗಿದೆ. ಇದು  ಶ್ರೀಲಂಕಾ ತಂಡದ ಅತಂತ್ರ ಪರಿಸ್ಥಿಿತಿಗೆ ಉದಾಹರಣೆ. ಜತೆಗೆ ಆಡಳಿತ ಮಂಡಳಿಯ ಭ್ರಷ್ಟಾಚಾರ  ತಾಂಡವವಾಡುತ್ತಿದ್ದು, ತಂಡದ ಹೀನಾಯ ಸ್ಥಿತಿಗೆ ಇನ್ನಷ್ಟು ಕಾರಣವಾಗಿದೆ. ಹೀಗಾಗಿಯೇ ಶ್ರೀಲಂಕಾ ಕ್ರಿಕೆಟ್ ಆಡಳಿತ ಮಂಡಳಿಯಲ್ಲೂ ಎಲ್ಲವೂ ಸರಿಯಿಲ್ಲ ಎಂದು ಇತ್ತೀಚೆಗಷ್ಟೇ ಮುರಳೀಧರನ್ ಕಿಡಿ ಕಾರಿದ್ದರು. ಅಷ್ಟೇ ಅಲ್ಲ ಆಡಳಿತ ಮಂಡಳಿ ಮುಂದಿಟ್ಟಿದ್ದ ಹುದ್ದೆಯನ್ನು ತ್ಯಜಿಸಿದ್ದರೂ ಕೂಡಾ.

ಶ್ರೀಲಂಕಾ ತಂಡ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಅಭಿಮಾನಿಗಳ ಪಾಲಿಗೆ ಲಂಕಾ ತಂಡ ಎಂಬುದು ಕೇವಲ ನೆನಪಾಗಿಯಷ್ಟೇ ಉಳಿಯಲಿದೆ. ಅಭಿಮಾನಿಗಳ ಪಾಲಿನಲ್ಲಿ ಅಚ್ಚಳಿಯದ ರೀತಿಯಲ್ಲಿ ಸ್ಥಾನ ಪಡೆದಿರುವ ಶ್ರೀಲಂಕಾ ಇನ್ನೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಎದ್ದುನಿಲ್ಲಲಿ ಎನ್ನುವುದು ಅಭಿಮಾನಿಗಳ ಆಶಯ.

No comments:

Post a Comment