Monday, June 30, 2014

ಕವಿತೆಯೆನ್ನಲೇನೇ ನಿನ್ನ

ಕವಿತೆಯೆನ್ನಲೇನೇ ನಿನ್ನ
ನನ್ನ ಪ್ರೀತಿ ಬರಹವೇ..||

ಪ್ರಾಸವೇನೂ ಬಳಸಲಿಲ್ಲ,
ಪದಗಳನು ನುಡಿಯಲಿಲ್ಲ,
ಬರಿಯ ಸಾಲು ತುಂಬಿಹುದಲ್ಲ
ಪ್ರೀತಿ ಬರಹ ನೀನೇ ಎಲ್ಲ ||1||

ಬರಿಯ ಬರಹ ನೀನು ಇಲ್ಲಿ
ಗುಣಗಳೇನೂ ಇಲ್ಲವಲ್ಲ,
ಓದುವ ಮುಂಚೆ ಒಮ್ಮೆ ನಿಲ್ಲಿ
ನನ್ನೆಡೆಯಲಿ ನಗುವ ಚೆಲ್ಲಿ ||2||

ಬರಹವಾದರೇನು ನೀನು
ನಿನ್ನ ನಾನು ಮರೆಯೆನು.
ನಿನ್ನ ಸಾಲು ಹಾಡಿ ನಾನು
ನಿನಗೆ ಜೀವ ತರುವೆನು ||3||

**
(ಈ ಕವಿತೆಯನ್ನು ಬರೆದಿರುವುದು 07-04-2006ರಂದು ದಂಟಕಲ್ಲಿನಲ್ಲಿ)

Sunday, June 29, 2014

ಬೆಂಗಾಲಿ ಸುಂದರಿ-15

           ಪಂದ್ಯಗಳಿಂದ ಪಂದ್ಯಗಳಿಗೆ ಸಾಗಿದಂತೆ ಎದುರಾಳಿ ಕಠಿಣವಾಗುತ್ತಿದ್ದ. ಭಾರತ ನಂಬರ್.1 ರಾಂಕಿಂಗ್ ರಾಷ್ಟ್ರವಾಗಿದ್ದರೂ ಎದುರಾಳಿಯಲ್ಲಿ ಯಾವುದಾದರೂ ತಂಡ ಚಮಕ್ ನೀಡಲು ಕಾಯುತ್ತಲೇ ಇತ್ತು. ಅದರಲ್ಲೂ ಬದ್ಧ ವೈರಿ ಪಾಕಿಸ್ತಾನವಂತೂ ಸಮಯ ಸಿಕ್ಕಾಗ ಹಣಿಯಬೇಕೆಂದು ಹವಣಿಸುತ್ತಲೇ ಇತ್ತು. ಮುಂದಿನ ಪಂದ್ಯ ಒಂಭತ್ತನೇ ರಾಂಕಿನ ಚೀನಾ ವಿರುದ್ಧ ನಡೆಯುತ್ತಿತ್ತು. ಚೀನಿಯರ ಆಟವೂ ಚನ್ನಾಗಿಯೇ ಇತ್ತು. ಭಾರತೀಯ ಆಟ ಕಬ್ಬಡ್ಡಿಯನ್ನು ಕಲಿತು ಭಾರತಕ್ಕೇ ಸವಾಲು ಹಾಕುವುದು ಸುಲಭವಲ್ಲ ನೋಡಿ. ಇದೊಂಥರಾ ಕ್ರಿಕೆಟಿನಲ್ಲಿ ಇಂಗ್ಲೆಂಡಿನ ವಿರುದ್ಧ ಸವಾಲು ಹಾಕಿದಂತೆ. ಎರಡೇ ಪಂದ್ಯಗಳ ಅಮೋಘ ಆಟದಿಂದಾಗಿ ವಿನಯಚಂದ್ರ ಈ ಪಂದ್ಯದ ವಿಶೇಷ ಆಕರ್ಷಣೆಯಾಗಿಬಿಟ್ಟಿದ್ದ. ಜೊತೆ ಜೊತೆಯಲ್ಲಿಯೇ ಎದುರಾಳಿ ತಂಡಗಳು ಈತನ ಮೇಲೆ ಕಣ್ಣಿಡಲು ಆರಂಭಿಸಿದ್ದವು.
             ಕಬ್ಬಡ್ಡಿಯ ಜೊತೆ ಜೊತೆಯಲ್ಲಿಯೇ ವಿನಯಚಂದ್ರ ಹಾಗೂ ಮಧುಮಿತಾಳ ಪ್ರೇಮ ಮುಂದಕ್ಕೆ ಸಾಗುತ್ತಲೇ ಇತ್ತು. ತಂಡದ ಬಹುತೇಕರಿಗೆ ಈ ವಿಷಯ ತಿಳಿದೂ ಹೋಗಿತ್ತು. ಎಲ್ಲರೂ ವಿನಯಚಂದ್ರ ಹಾಗೂ ಮಧುಮಿತಾಳನ್ನು ಒಟ್ಟಾಗಿ ಕಂಡಕೂಡಲೇ ನಗುತ್ತಲೋ, ವಿನಯಚಂದ್ರನನ್ನು ಕಾಲೆಳೆಯುತ್ತಲೋ ಅಥವಾ ಕಣ್ಣುಮಿಟುಕಿಸುತ್ತಲೋ ಹೋಗುತ್ತಿದ್ದರು. ಮೊದ ಮೊದಲು ವಿನಯಚಂದ್ರನಿಗೆ ಇದು ಮುಜುಗರ ತಂದರೂ ನಂತರ ಆತನೂ ಇದನ್ನು ಎಂಜಾಯ್ ಮಾಡತೊಡಗಿದ. ಮಧುಮಿತಾ ನಸುನಕ್ಕು ನಾಚುತ್ತಿದ್ದಳು.
             ಚೀನಾ ವಿರುದ್ಧದ ಪಂದ್ಯದ ನಂತರ ಕ್ರಮವಾಗಿ ಕೆನಡಾ, ಉಕ್ರೇನ್ ಹಾಗೂ ಪಾಕಿಸ್ತಾನಗಳು ಭಾರತದ ವಿರುದ್ಧ ಸ್ಪರ್ಧಿಸಲಿದ್ದವು. ಮೊದಲಿಗೆ ಚೀನಾ ವಿರುದ್ಧ ಪಂದ್ಯ ಆರಂಭಗೊಂಡಿತು. ಭಾರತ ತಂಡದ ಆಕರ್ಷಕ ಆಟ ಇಲ್ಲಿಯೂ ಮುಂದುವರಿಯಿತು. ವಿನಯಚಂದ್ರ ಈ ಸಾರಿಯೂ ಚನ್ನಾಗಿ ಆಡಿದ. ಜಾಧವ್ ಸರ್ ಈ ಪಂದ್ಯದಿಂದಲೇ ತಮ್ಮ ಪ್ರಯೋಗಗಳನ್ನು ಕೈಗೊಳ್ಳಲು ಆರಂಭಿಸಿದರು. ಐದು ಕ್ಯಾಚ್ ಹಿಡಿದು ಅದ್ಭುತ ಫಾರ್ಮಿನಲ್ಲಿದ್ದ ವಿನಯಚಂದ್ರನನ್ನು ಪಂದ್ಯದ ಅರ್ಧದಲ್ಲಿಯೇ ಮೈದಾನದಿಂದ ಹೊರಕ್ಕೆ ಕರೆಸಿಕೊಂಡು ಬದಲಿ ಆಟಗಾರನನ್ನು ಕಳಿಸಿದರು. ಎಲ್ಲರಿಗೂ ಈ ನಿರ್ಧಾರ ಅಚ್ಚರಿಯನ್ನು ಉಂಟುಮಾಡಿತು. ಮೊದಲಾರ್ಧದಲ್ಲಿ ಭಾರತ ತಂಡ 18-8 ರಿಂದ ಮುನ್ನಡೆಯಲ್ಲಿತ್ತು. ಜಾಧವ್ ಅವರು ತಪ್ಪು ನಿರ್ಧಾರ ಮಾಡಿದರಾ ಎಂದುಕೊಂಡರು ಆಟಗಾರರು. ಆದರೆ ಅವರ ನಿರ್ಧಾರದ ಕಾರಣ ಅವರಿಗಷ್ಟೇ ಗೊತ್ತು. ಆಡುವ ಮನಸ್ಸಿದ್ದರೂ ಕೋಚ್ ನಿರ್ಧಾರಕ್ಕೆ ಎದುರಾಡುವಂತಿಲ್ಲ ಎಂದು ವಿನಯಚಂದ್ರ ಹೊರಕ್ಕೆ ಬಂದ. ಮುಖ ಸಪ್ಪೆಯಾಗಿದ್ದು ಸ್ಪಷ್ಟವಾಗಿತ್ತು.
            `ಏನಪ್ಪಾ.. ಬೇಸರ ಮಾಡ್ಕೊಂಡ್ಯಾ..?' ಜಾಧವ್ ಅವರು ಕೇಳಿದ್ದರು.
            ವಿನಯಚಂದ್ರ ಮಾತಾಡಲಿಲ್ಲ. `ಮುಂದಿನ ಪಂದ್ಯಗಳು ಇನ್ನೂ ಕಠಿಣವಾಗಿರ್ತವೆ. ಈಗಲೇ ನಿನ್ನೊಳಗಿನ ಎನರ್ಜಿ ಮುಗಿದು ಹೋದ್ರೆ ಕಷ್ಟ. ಅದಕ್ಕೆ  ಈ ರೀತಿ ಮಾಡಿದ್ದು. ನಮ್ಮ ಆಟಗಾರ ಇನ್ನೊಬ್ಬರಿಗೆ ಅರ್ಥವಾಗುವ ಮೊದಲು ಬೇರೆ ರೀತಿಯ ತಂತ್ರವನ್ನು ಹೂಡಿಬಿಡಬೇಕು. ಇದರಿಂದ ನಮ್ಮ ತಂತ್ರಗಳು ಎದುರಾಳಿಗೆ ಗೊತ್ತಾಗುವುದಿಲ್ಲ. ಅಲ್ಲದೇ ನಿನ್ನ ಮೇಲೆ ಸಾಕಷ್ಟು ಕಣ್ಣಿದೆ. ನಿನ್ನ ಮೇಲೆ ಎದುರಾಳಿ ಟೀಂ ದಾಳಿ ಮಾಡಿ ನಿನಗೆಲ್ಲಾದರೂ ಗಾಯ-ಗೀಯ ಆಗಿಬಿಟ್ಟರೆ ಸಮಸ್ಯೆ ಜಾಸ್ತಿ . ಹೆಂಗಂದ್ರೂ ಈ ಪಂದ್ಯ ನಾವು ಗೆಲ್ಲುವುದು ನಿಶ್ಚಿತ. ನೀನು ಮುಂದಿನ ಪಂದ್ಯಗಳಿಗೆ ಬೇಕೆ ಬೇಕು. ಆಗ ಇನ್ನೂ ಚನ್ನಾಗಿ ಆಡಬೇಕು. ಅದಕ್ಕೇ ಈ ರೀತಿ ಮಾಡಿದ್ದು. ಬೇಜಾರು ಮಾಡ್ಕೋಬೇಡ..' ಎಂದು ಸಮಾಧಾನ ಹೇಳಿದರು ಜಾಧವ್. ವಿನಯಚಂದ್ರ ನಿರಾಳನಾದ.
            ಚೀನಾ ವಿರುದ್ಧ 40-15ರ ಅಂತರದಲ್ಲಿ ಭಾರತ ಗೆದ್ದು ಬೀಗಿತು. ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ದಕ್ಕಿತ್ತು. ನಂತರ ಕೆನಡಾ ವಿರುದ್ಧದ ಪಂದ್ಯ. ಕೆನಡಾ ತಂಡ ಏಳನೇ ರಾಂಕ್ ನಲ್ಲಿತ್ತು. ಆದರೆ ಕೆನಡಾ ತಂಡದಲ್ಲಿ ಒಂದು ವಿಶೇಷವಿತ್ತು. ಕೆನಡಾ ತಂಡದಲ್ಲಿದ್ದ ಬಹುತೇಕ ಆಟಗಾರರು ಭಾರತದ ಮೂಲದವರೇ ಆಗಿದ್ದರು. ಕೆನಡಾದಲ್ಲಿ ನೆಲೆಸಿದ್ದ ಪಂಜಾಬಿಗಳು ಕೆನಡಾ ಕಬ್ಬಡ್ಡಿ ಟೀಮಿನ ಆಟಗಾರರು. ಹೆಚ್ಚಿನವರು ಪಂಜಾಬಿ ಸರ್ದಾರರು. ದೈತ್ಯರು. ಈ ಪಂದ್ಯ ಕಠಿಣವಾಗಿರಬಹುದು ಎಂದುಕೊಂಡ ಜಾಧವ್. ಭಾರತದ ಮೂಲದವರೇ ಆದ ಪಂಜಾಬಿಗಳು, ದೈತ್ಯರು. ಇವರನ್ನು ಪಟ್ಟು ಹಾಕಿ ಹಿಡಿಯುವುದು ಸುಲಭದ ಕೆಲಸವಲ್ಲ. ಭಾರತೀಯ ಮೂಲದವರಾದ ಕಾರಣ ಭಾರತೀಯರ ತಂತ್ರಗಳೂ ಗೊತ್ತಿರುತ್ತವೆ ಎಂದುಕೊಂಡ. ಪಂದ್ಯವೂ ಶುರುವಾಯಿತು. ಮೊದಲ ಕೆಲ ನಿಮಿಷಗಳ ಕಾಲ ಜಾಧವ್ ಅವರು ವಿನಯಚಂದ್ರನನ್ನು ಕಣಕ್ಕಿಳಿಸಲೇ ಇಲ್ಲ. ಪಂದ್ಯ ಹೆಚ್ಚೂ ಕಡಿಮೆ ಸಮನಾಗಿಯೇ ಸಾಗುತ್ತಿತ್ತು. ವಿರಾಮದ ವೇಳೆಗೆ ಭಾರತ ತಂಡ ಕೆನಡಾಕ್ಕಿಂತ 16-12 ಅಂಕಗಳ ಮೂಲಕ ಮುನ್ನಡೆ ಸಾಧಿಸಿಕೊಂಡಿದ್ದರೂ ಅಂತರ ಕೇವಲ 4 ಅಂಕಗಳಾಗಿತ್ತು. ಯಾವುದೇ ಕ್ಷಣದಲ್ಲಿಯೂ ಭಾರತ ಹಿನ್ನಡೆಯನ್ನು ಅನುಭವಿಸುವ ಸಾದ್ಯತೆಗಳಿದ್ದವು.
            ನೂರಾರು ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಲೆಕ್ಖಹಾಕಿದ ಜಾಧವ್ ಅವರು ದ್ವಿತೀಯಾರ್ಧದಲ್ಲಿ ವಿನಯಚಂದ್ರನನ್ನು ಅಂಗಣಕ್ಕೆ ಬಿಟ್ಟರು. ವಿನಯಚಂದ್ರನೂ ಹುರುಪಿನಲ್ಲಿದ್ದ. ಮೂರೋ ನಾಲ್ಕೋ ಕ್ಯಾಚುಗಳನ್ನು ಹಿಡಿದ ನಂತರ ಅದೊಮ್ಮೆ ರೈಡಿಂಗಿಗೆ ಹೋದ ವಿನಯಚಂದ್ರನನ್ನು ಕೆನಡಾ ಆಟಗಾರರು ಹಿಡಿದು ಹಾಕಿದರು. ಔಟಾಗಿ ಕುಳಿತ ವಿನಯಚಂದ್ರ.  ಆಟ ನೋಡುತ್ತಿದ್ದ ಮಧುಮಿತಾ ನಿರಾಸೆಪಟ್ಟಂತೆ ಕಂಡುಬಂದಿತು. ಜಾಧವ್ ಅವರೂ ಬೇಸರ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ವಿನಯಚಂದ್ರ ತಲೆತಗ್ಗಿಸುವ ಪ್ರಯತ್ನ ಮಾಡಿದ. ಅಷ್ಟರಲ್ಲಿ ಭಾರತೀಯ ಆಟಗಾರರು ಕೆನಡಾದ ಮತ್ತಿಬ್ಬರು ಆಟಗಾರರನ್ನು ಔಟ್ ಮಾಡಿದ ಪರಿಣಾಮ ಪರಿಣಾಮ ವಿನಯಚಂದ್ರ ಮತ್ತೆ ಅಂಗಣದೊಳಗೆ ಕಾಲಿಟ್ಟ. ಎದುರಾಳಿಯನ್ನು ಹಿಡಿದು ಹೆಡೆಮುರಿ ಕಟ್ಟುವವರೆಗೂ ಆತನ ಮನಸ್ಸಿನೊಳಗಿದ್ದ ಕೆಚ್ಚು ಕಡಿಮೆಯಾಗಲಿಲ್ಲ. ರೈಡಿಂಗಿಗೆ ಬಂದವರನ್ನೆಲ್ಲ ಲಬಕ್ಕನೆ ಹಿಡಿಯುತ್ತಿದ್ದ ವಿನಯಚಂದ್ರನ ಶಕ್ತಿ ಇಮ್ಮಡಿಸಿತೋ ಎನ್ನುವ ಅನುಮಾನ ಮೂಡಿದ್ದಂತೂ ಸುಳ್ಳಲ್ಲ. ಪಂದ್ಯದ ಸೀಟಿ ಊದುವ ವೇಳೆಗೆ ಭಾರತ ತಂಡ 32-25ರಿಂದ ಜಯಭೇರಿ ಭಾರಿಸಿತ್ತು. ಐದು ಪಂದ್ಯಗಳನ್ನು ಗೆದ್ದ ಭಾರತೀಯರ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ವಿಶ್ವಕಪ್ಪಿನಲ್ಲಿ ಅತ್ಯಂತ ಹೆಚ್ಚು ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ವಿನಯಚಂದ್ರ ಮೂರನೇ ಸ್ಥಾನಕ್ಕೆ ಏರಿದ್ದ.

**

         ಸಂಜೆಯ ವೇಳೆಗೆಲ್ಲ ಭಾರತೀಯ ಆಟಗಾರರು ಹೊಟೆಲನ್ನು ತಲುಪಿಕೊಂಡಿದ್ದರೆ ವಿನಯಚಂದ್ರ ಮಧುಮಿತಾಳ ಜೊತೆಗೆ ಮಾತುಕತೆಗೆ ನಿಂತಿದ್ದ. ಅತ್ತ ಢಾಕಾದ ಹೊರವಲಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅಮಾಯಕರ ಮೇಲೆ ದೌರ್ಜನ್ಯಗಳು ಜಾಸ್ತಿಯಾಗತೊಡಗಿದ್ದವು. ಬಡಪಾಯಿ ಹಿಂದುಗಳು ಬಹುಸಂಖ್ಯಾತ ಮುಸಲ್ಮಾನರ ಆಕ್ರೋಶಕ್ಕೆ, ಉನ್ಮಾದಕ್ಕೆ, ದಾಂಧಲೆಗೆ ಸಿಲುಕಿ ನರಳ ತೊಡಗಿದ್ದರು. ಢಾಕಾ ಹೊರವಲಯದಲ್ಲಿದ್ದ ಹಲವು ಹಿಂದೂಗಳ ಮನೆಗಳು ಬೆಂಕಿಗೆ ಆಹುತಿಯಾಗಿದ್ದವು. ಹಿಂದೂ ಹೆಣ್ಣುಮಕ್ಕಳು ಅತ್ಯಾಚಾರ ಮಾಡಲ್ಪಟ್ಟರು. ಸಿಕ್ಕ ಸಿಕ್ಕವರನ್ನು ಕೊಲ್ಲಲಾಗುತ್ತಿತ್ತು. ಆದರೆ ಬಾಂಗ್ಲಾದೇಶ ಮಾತ್ರ ಈ ವಿಷಯವನ್ನು ಎಲ್ಲೂ ಹೊರಗೆ ಬಿಡಲಿಲ್ಲ. ಮುಚ್ಚಿಟ್ಟಿತು. ವಿಶ್ವಕಪ್ಪಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕಾಗಿ ಈ ವಿಷಯ ಹೊರ ಜಗತ್ತಿಗೆ ತಿಳಿಯದಂತೇ ಮಾಡಿಬಿಟ್ಟಿತು.
          ಮರುದಿನ ಲೀಗ್ ಪಂದ್ಯಗಳು ಮುಕ್ತಾಯವಾಗಲಿದ್ದವು. ಮೊದಲ ಹಂತದ ಗುಂಪಿನ ಪಂದ್ಯಗಳು ಮುಗಿದ ನಂತರ ಹಲವಾರು ತಂಡಗಳು ಗಂಟುಮೂಟೆ ಕಟ್ಟಲಿದ್ದವು. ಈಗಾಗಲೇ ದುರ್ಬಲ ತಂಡಗಳು ಮನೆಯತ್ತ ಮುಖಮಾಡಿಯೂ ಆಗಿದ್ದವು. ಆದರೆ ಅನೌಪಚಾರಿಕವಾಗಿದ್ದ ಕೆಲವು ಪಂದ್ಯಗಳನ್ನು ಆಡಿ, ಒಂದೆರಡರಲ್ಲಾದರೂ ಗೆದ್ದು ಮರ್ಯಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆ ತಂಡಗಳು ಇದ್ದವು.
          ಮರುದಿನ ನಸುಕಿನಲ್ಲೇ ಎದ್ದು ಪಂದ್ಗಗಳಿಗೆ ಅಣಿಯಾದರು ಭಾರತ ತಂಡದವರು. ಮೊದಲ ಪಂದ್ಯ ಉಕ್ರೇನ್ ವಿರುದ್ಧ ಹಾಗೂ ಲೀಗ್ ಕೊನೆಯ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆಯುತ್ತಿತ್ತು. ಎರಡೂ ಎದುರಾಳಿ ತಂಡಗಳು ಭಲಿಷ್ಟ ಎಂದೇ ಬಿಂಬಿತವಾದವುಗಳಾಗಿದ್ದವು. ಉಕ್ರೇನ್ ತನ್ನ ಅಬ್ಬರದ ಆಟಕ್ಕೆ, ಎದುರಾಳಿ ತಂಡದ ಆಟಗಾರರನ್ನು ಗಾಯಗೊಳಿಸುವುದಕ್ಕೆ ಕುಖ್ಯಾತಿಯನ್ನು ಗಳಿಸಿಕೊಂಡಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವಂತೂ ಭಾರತದ ವಿರುದ್ಧ ಕಿಡಿಕಾರುತ್ತಲೇ ಇತ್ತು. ಹಾಗಾಗಿ ಜಿದ್ದಾ ಜಿದ್ದಿ ನಿರೀಕ್ಷಿತವಾಗಿತ್ತು. ಉಕ್ರೇನ್ ವಿರುದ್ಧದ ಪಂದ್ಯಕ್ಕೆ ವಿನಯಚಂದ್ರ ಹೊರಗುಳಿದಿದ್ದ. ಜಾಧವ್ ಅವರ ನಿರ್ಧಾರದಿಂದ ಆತ ಹೀಗೆ ಮಾಡಬೇಕಾಗಿ ಬಂದಿತ್ತು.
           ಪಂದ್ಯ ಆರಂಭಗೊಂಡಿತು. ನೋಡ ನೋಡುತ್ತಿದ್ದಂತೆಯೇ ಉಕ್ರೇನ್ ಭಾರತಕ್ಕಿಂತ ಮೂರಂಕ ಜಾಸ್ತಿ ಪಡೆದು ಬೀಗಿತು. ಭಾರತೀಯ ಆಟಗಾರರು ಸೋಲಿನತ್ತ ಮುಖ ಮಾಡಿದ್ದರು. ಉಕ್ರೇನಿ ಆಟಗಾರರ ಅಬ್ಬರದ ನಡೆಯಿಂದಾಗಿ ಭಾರತದ ಎರಡು ಆಟಗಾರರು ಗಾಯಗೊಂಡಿದ್ದೂ ಆಯಿತು. ಮೊದಲಾರ್ಧದದ ವೇಳೆಗೆ ಭಾರತ ತಂಡ ಉಕ್ರೇನಿನ ವಿರುದ್ಧ 13-11ರ ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ಎರಡು ಅಂಕ ಹಿನ್ನಡೆಯಲ್ಲಿತ್ತು. ವಿನಯಚಂದ್ರನ ಚಡಪಡಿಕೆ ಎಲ್ಲೆ ಮೀರಿತು. ತಾನಾದರೂ ಆಡೋಣ ಎಂದರೆ ಇಂದಿನ ಪಂದ್ಯದಲ್ಲಿ ತನ್ನನ್ನು ಜಾಧವ್ ಅವರು ಆಯ್ಕೆ ಮಾಡಿಲ್ಲ. ತಂಡ ಸೋತರೆ ಮರ್ಯಾದೆ ಪ್ರಶ್ನೆ. ವಿಶ್ವ ಚಾಂಪಿಯನ್ನರು ತಮಗಿಂತ ಕಡಿಮೆ ರಾಂಕಿನ ತಂಡದ ವಿರುದ್ಧ ಸೋತರಲ್ಲ ಎನ್ನುವ ಅವಮಾನ ಬೇರೆ. ವಿನಯಚಂದ್ರ ಜಾಧವ್ ಅವರ ಆಜೂಬಾಜಿನಲ್ಲಿ ಸುಳಿದಾಡತೊಡಗಿದ. ಜಾಧವ್ ಅವರು ಯಾವುದೇ ತಲೆಬಿಸಿಯಲ್ಲಿ ಇರುವಂತೆ ಕಾಣಲಿಲ್ಲ. ಮುಂದಿನ ಅರ್ಧಭಾಗದಲ್ಲಿ ಯಾವುದಾದರೂ ಮಿರಾಕಲ್ ಘಟಿಸಬೇಕು. ಅಷ್ಟಾದರೆ ಮಾತ್ರ ತಾವು ಗೆಲ್ಲುತ್ತೇವೆ ಎಂದುಕೊಂಡ ವಿನಯಚಂದ್ರ.
           ದ್ವಿತೀಯಾರ್ಧದಲ್ಲಿ ಪಂದ್ಯ ಮತ್ತಷ್ಟು ರೋಚಕತೆಯನ್ನು ಪಡೆದುಕೊಂಡಿತು. ಎರಡಂಕ ಮುನ್ನಡೆ ಪಡೆದಿದ್ದ ಉಕ್ರೇನ್ ತಪ್ಪಿಗೆ ಅವಕಾಶ ನೀಡದಂತೆ ಟೈಂಪಾಸ್ ಮಾಡಲು ಯತ್ನಿಸುತ್ತಿತ್ತು. ವಿನಯಚಂದ್ರ ಆಗಲೇ ಭಗವಂತನ ಮೊರೆ ಹೋಗಿದ್ದ. ಭಾರತೀಯ ರೈಡರ್ ಗಳು ಎಷ್ಟೇ ಪ್ರಯತ್ನ ಪಟ್ಟರೂ ಉಕ್ರೇನಿ ಆಟಗಾರರ ಒಂದೇ ಒಂದು ಅಂಕವನ್ನೂ ಬಡಿದುಕೊಂಡು ಬರಲು ಸಾದ್ಯವಾಗಲಿಲ್ಲ. ಮುಗಿಯಲು ಎರಡು ನಿಮಿಷವಿದೆ ಎನ್ನುವಾಗ ಸೂರ್ಯನ್ ಒಬ್ಬ ಆಟಗಾರನನ್ನು ಔಟ್ ಮಾಡಿಕೊಂಡು ಬಂದ. ಒಂದಂಕ ಮಾತ್ರ ಮುನ್ನಡೆಯಲ್ಲಿತ್ತು ಉಕ್ರೇನ್. ಭಾರತ ತಂಡ ಅಲ್ಪ ನಿರಾಳವಾದ ಭಾವ. ಆದರೆ ಯಾಮಾರಿದರೆ ಪಂದ್ಯ ಸೋತಂತೆ. ಪಂದ್ಯ ಮುಗಿಯಲು ಕೇವಲ 30 ಸೆಕಂಡ್ ಗಳಿವೆ ಎನ್ನುವಾಗ ಇನ್ನೊಂದು ಅಂಕ ಭಾರತಕ್ಕೆ ಲಭ್ಯವಾಯಿತು. ಅಂಕಗಳು ಸಮನಾಗಿದ್ದವು. ಕೊನೆಯ ಕ್ಷಣದಲ್ಲಿ ಮತ್ತಷ್ಟು ರೋಚಕತೆ ಪಂದ್ಯಕ್ಕೆ ಪ್ರಾಪ್ತವಾಯಿತು. ಯಾರೊಬ್ಬರು ಯಾಮಾರಿದರೂ ಪಂದ್ಯವನ್ನು ಕಳೆದುಕೊಳ್ಳುವ ಬೀತಿಯಲ್ಲಿತ್ತು. ಹೀಗಿದ್ದಾಗಲೇ ಉಕ್ರೇನ್ ತಂಡ ಮಾಡಿಕೊಂಡ ಯಡವಟ್ಟು ಭಾರತಕ್ಕೆ ಲಾಭವನ್ನು ತಂದುಕೊಟ್ಟಿತು.
          ಸೂರ್ಯನ್ ರೈಡಿಂಗಿಗೆ ಹೋಗಿದ್ದ. ಅಬ್ಬರದ ರೈಡಿಂಗ್ ಆತನ ವಿಶೇಷತೆಯಾಗಿತ್ತು. ರೈಡಿಂಗಿಗೆ ಇಳಿದವನೇ ಉಕ್ರೇನ್ ತಂಡದ ಮೇಲೆ ಪದೇ ಪದೆ ದಾಳಿ ಮಾಡಿ ಅವರನ್ನೆಲ್ಲ ಒಂದು ಮೂಲೆಗೆ ತಳ್ಳಲು ಯಶಸ್ವಿಯಾದ. ಹೀಗಿದ್ದಾಗಲೇ ಉಕ್ರೇನಿ ಆಟಗಾರನೊಬ್ಬ ಕಬ್ಬಡ್ಡಿ ಅಂಗಣದ ಹೊರ ಲೈನ್ ಮುಟ್ಟಿಬಿಟ್ಟಿದ್ದ. ಅದನ್ನೇ ಕಾಯುತ್ತಿದ್ದ ಲೈನ್ ಅಂಪಾಯರ್ ಗಳು ಉಕ್ರೇನಿ ಆಟಗಾರನನ್ನು ಔಟ್ ಎಂದು ತೀರ್ಪು ನೀಡಿದರು. ಇದರಿಂದ ಉಕ್ರೇನ್ ಆಟಗಾರರು ಒಮ್ಮೆ ಗೊಂದಲಕ್ಕೊಳಗಾದರು. ಇದರ ಲಾಭ ಪಡೆದುಕೊಂಡ ಸೂರ್ಯನ್ ತಕ್ಷಣವೇ ಇಬ್ಬರನ್ನು ಬಡಿದುಕೊಂಡು ಬಂದ. ಇದರಿಂದಾಗಿ ಬಾರತಕ್ಕೆ 1+2 ಮೂರಂಕ ಲಭ್ಯವಾಯಿತು. ಉಕ್ರೇನಿಗಿಂತ ಮೂರಂಕ ಜಾಸ್ತಿಯಾಗಿ ಪಂದ್ಯದಲ್ಲಿ ಗೆಲುವನ್ನೂ ಪಡೆಯಿತು. ವಿನಯಚಂದ್ರ ಓಡಿಬಂದು ಸೂರ್ಯನ್ ನನ್ನು ಎತ್ತಿಕೊಂಡ. ಸಂತೋಷದ ಕಟ್ಟೆಯೊಡೆದಿತ್ತು. ರೋಚಕ ಗೆಲುವು ಇಷ್ಟೆಲ್ಲ ಖುಷಿ ನೀಡುತ್ತದೆಯಲ್ಲ ಎನ್ನಿಸಿತು. ಹಿನ್ನಡೆಯನ್ನೂ ಮೆಟ್ಟಿ ನಿಂತು ಸಾಧಿಸಿದ ಗೆಲುವು, ವಿನಯಚಂದ್ರನಂತಹ ಕ್ಯಾಚರ್ ನನ್ನು ಹೊರಗಿರಿಸಿದ್ದರೂ ಸಿಕ್ಕ ಗೆಲುವು ಸಾಧಾರಣವಾಗಿರಲಿಲ್ಲ. ಗೆಲುವು ದಕ್ಕಿದ್ದರೂ ಇಬ್ಬರು ಆಟಗಾರರು ಗಾಯಗೊಂಡಿದ್ದುದು ತಂಡಕ್ಕೆ ಕೊಂಚ ಹಿನ್ನಡೆಯನ್ನು ಉಂಟು ಮಾಡಿತು ಎಂದೇ ಹೇಳಬೇಕು.
          ವಿನಯಚಂದ್ರ ಗಾಯಗೊಳ್ಳುವುದನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕೆ ಜಾಧವ್ ಅವರು ಈ ರೀತಿ ಮಾಡಿದರೇ ಎನ್ನುವ ಆಲೋಚನೆ ಆತನ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ಕಳೆದ ಐದು ಪಂದ್ಯಗಳಲ್ಲಿ ಸಾಕಷ್ಟು ಹೆಸರನ್ನು ಗಳಿಸಿಕೊಂಡಿದ್ದ ವಿನಯಚಂದ್ರ ಪಂದ್ಯಾವಳಿಯಲ್ಲಿ ಇನ್ನೂ ಸಾಕಷ್ಟು ಆಟವನ್ನು ಆಡಬೇಕಾಗಿದೆ. ಮುಂದೆ ದೊಡ್ಡ ದೊಡ್ಡ ಟೀಮುಗಳ ವಿರುದ್ಧ ಕಾದಾಡಲು ಆತನ ಅಗತ್ಯವಿದೆ. ವಿಶ್ವಕಪ್ಪಿನ ಆರಂಭಿಕ ಹಂತದಲ್ಲಿಯೇ ಆತ ಗಾಯಗೊಂಡರೆ ಮುಂದೆ ತಂಡಕ್ಕೆ ದೊಡ್ಡ ಹೊಡೆತ ಬೀಳಬಹುದು ಎನ್ನುವ ಕಾರಣಕ್ಕಾಗಿ ಜಾಧವ್ ಅವರು ನಿರ್ಧಾರ ಕೈಗೊಂಡಿದ್ದರು. ವಿನಯಚಂದ್ರ ಅವರ ಆಲೋಚನೆಗೆ ಸಲಾಂ ಎಂದ.
          ಸಾಂಪ್ರದಾಯಿಕ ಎದುರಾಳಿ, ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಮುಂದಿನ ಪಂದ್ಯ ನಡೆಯಲಿತ್ತು. ಈ ಪಂದ್ಯದ ಬಗ್ಗೆ ಎಲ್ಲರ ನಿರೀಕ್ಷೆಗಳಿದ್ದವು. ರೋಚಕತೆಗೆ ಕೊರತೆಯಿರಲಿಲ್ಲ. ಕುತೂಹಲವೂ ಸಾಕಷ್ಟಿತ್ತು. ಏನಾಗುತ್ತೋ ಎನ್ನುವ ಭಾವನೆ ಎಲ್ಲರಲ್ಲಿಯೂ ಇತ್ತು. ಪಂದ್ಯದ ನಿರೀಕ್ಷೆಯಲ್ಲಿದ್ದರು. ಅಷ್ಟರಲ್ಲಿ ಜಾಧವ್ ಅವರು ಪಕ್ಕದಲ್ಲೇ ನಡೆಯುತ್ತಿದ್ದ ಬಾಂಗ್ಲಾದೇಶದ ಪಂದ್ಯಾವಳಿಯನ್ನು ಗಮನಿಸಲು ಸೂಚಿಸಿದರು. ಎಲ್ಲರೂ ಅತ್ತ ಸಾಗಿದರು. ಬಾಂಗ್ಲಾದೇಶ ತಂಡ ತನ್ನ ತವರು ಮನೆಯಲ್ಲಿ ಅಬ್ಬರದ ಆಟವಾಡುತ್ತಿತ್ತು. ಎದುರಿಗೆ ಸಿಕ್ಕ ತಂಡವನ್ನು ಅಡ್ಡಡ್ಡ ಸೋಲಿಸುತ್ತಿತ್ತು. ಭಾರತದ ಆಟಗಾರರು ಬಾಂಗ್ಲಾದೇಶದ ಅಬ್ಬರದ ಆಟವನ್ನು ನೋಡಿ ವಿಸ್ಮಿತರಾದರು. ಅವರ ತಂತ್ರಗಳನ್ನು ಗಮನಿಸಲಾರಂಭಿಸಿದ್ದರು.

(ಮುಂದುವರಿಯುತ್ತದೆ..)

Saturday, June 28, 2014

ಕಡಲ ಮುತ್ತು

ಕಡಲ ಒಡಲಾಳದಲ್ಲಿ
ಅಡಗಿ ಕುಳಿತಿದೆ ಮುತ್ತು |
ಸುತ್ತ ಸುಳಿದಾಡುತಿಹ
ಮೀನ ಭಯವದಕಿಲ್ಲ ||

ಜಲಬಿಂದು ನಡವಿನಲಿ
ಬದುಕಿ ಬಾಳಿದೆ ಮುತ್ತು |
ಯಾರ ಜೊತೆ ಸೇರುವುದೋ
ಅರಿವು ಅದಕಿಲ್ಲ ||

ಸ್ವಾತಿ ಮಳೆ ಹನಿಯಿಂದ
ಮೂಡಿ ಬಂದಿದೆ ಮುತ್ತು |
ಹಲವು ಜೊತೆ ಹೆಜ್ಜೆಗಳ
ಮುತ್ತು ಬಯಸಿದೆಯಲ್ಲ ||

ಮುತ್ತು ಬೆಲೆ ಮಾಣಿಕ್ಯ
ಅದರರಿವು ಅದಕಿಲ್ಲ |
ಜಲದೊಳಗೆ ಇರುತಿರಲು
ಬೆಲೆಯೆಂಬುದಿಲ್ಲ ||

**
(ಈ ಕವಿತೆಯನ್ನು ಬರೆದಿರುವುದು 6.12.2006ರಂದು ದಂಟಕಲ್ಲಿನಲ್ಲಿ)

Friday, June 27, 2014

ಹೊಸ ಹುರುಪು

ಸಂಭ್ರಮಿಸಿದೆ ನಾನು ಪ್ರೀತಿಯ ತೇರಲ್ಲಿ ಪುಳಕವೆಬ್ಬಿಸಿದೆ ನೀನು ಮನದಾಳದ ಹಂದರದಲಿ ಮತ್ತೊಮ್ಮೆ ಪಯಣಿಕಳಾಗುವಾಸೆ ನಿನ್ನೊಲವ ಪಥದಲ್ಲಿ ಕೈನೀಡಿ ಕರೆದೊಯ್ಯೊ ಒಂದೊಮ್ಮೆ ನನ್ನ ಬೆಳದಿಂಗಳ ಬೆಳಕಲ್ಲಿ ಮತ್ತದೆ ಆಸೆಯ ಬುತ್ತಿ ಹೊತ್ತು ತಂದಿರುವೆ ನೀ ಬರುವ ಹಾದಿಯ ಶಬರಿಯಾಗಿ
-ಭಾವುಕ

(ಯುವ ಕವಯಿತ್ರಿ ಭಾವನಾ ಭಟ್ಟ ಅವರು ಬರೆದ ಚಿಕ್ಕದೊಂದು ಕವಿತೆ..
ಬರವಣಿಗೆಯ ಆರಂಭಿಕ ಹೆಜ್ಜೆಗಳನ್ನು ಇಡುತ್ತಿರುವ ಆಕೆಯ ಈ ಕವಿತೆ ನಿಮ್ಮ ಮುಂದೆ.. ಅಭಿಪ್ರಾಯ ಬೇಕೇಬೇಕು.)

Saturday, June 21, 2014

ಸಂಜೆಗಾನ

(ಚಿತ್ರ ಕೃಪೆ : ದಿನೇಶ ಮಾನೀರ್)
*
ಇಳಿ ಬಿಸಿಲ ಸಂಜೆಯಲಿ,
ಪಡುವಣದ ಬಾನಿನಲಿ
ಹಾರಿ ನಲಿದಿತ್ತು ಹಕ್ಕಿ ಹಿಂಡು,
ಹೊಂಬಣ್ಣ ಚೆಲ್ಲುವ ಬಾನು ಕಂಡು ||

ಇರುಳ ಸಂಜೆಗೆ ರವಿಯು
ಇಂದಿನ ದಿನ ಮುಗಿಸಿ
ನಾಳೆ ಬರುವೆನು ಎಂದು
ಸಾಗುತಿದ್ದ, ಜೊತೆಗೆ ಮುಳುಗುತಿದ್ದ ||

ಹಕ್ಕಿ ಹಿಂಡದು ರವಿಯ
ಹೊಂಬಣ್ಣದ ಸಿರಿ ಕಂಡು
ಪ್ರಕೃತಿಯೇ ತೋಳಾಗಿ ಚಾಚುತ್ತಿತ್ತು
ಹೊಸ ಹುರುಪು ಶಕ್ತಿಯಲಿ ಚೀರುತ್ತಿತ್ತು ||

ಹಗಲಿಂದ ಇರುಳವರೆಗೆ
ಹೊಟ್ಟೆಗೆ ಬೇಟೆಯೇ ಆಯ್ತು
ಮನೆಯೊಳಗೆ ಕಾದಿರುವ
ಮರಿಗಷ್ಟು ಕೊಟ್ಟರೆ ಆಯ್ತು ||

ಬಾನಿನಾ ರವಿ ಜೊತೆಗೆ
ಹಾರಿರುವ ಹಕ್ಕಿ ಕೂಡ
ಗೂಡು ಸೇರಲು ಮುಂಚೆ
ಸಾಗುತ್ತಿತ್ತು, ಜೊತೆಗೆ ಹಾರುತ್ತಿತ್ತು ||

**
(ಈ ಕವಿತೆಯನ್ನು ಬರೆದಿರುವುದು 24.11.2006ರಂದು ದಂಟಕಲ್ಲಿನಲ್ಲಿ)
(ದಿನೇಶಣ್ಣನ ಪೋಟೋಕ್ಕೆ ಧನ್ಯವಾದಗಳು)

Friday, June 20, 2014

ಸ್ವಪ್ನ ಪ್ರೇಮದ ಕಥೆ (ಪ್ರೇಮಪತ್ರ-12)

(ಚಿತ್ರ ಕೃಪೆ : ವಿನಾಯಕ ಹೆಗಡೆ)
ನಂಜೀವಕ್ಕೆ ಜೀವ ಕೊಡೋ
ಗೆಳೆಯಾ...,
             ಅದೆಷ್ಟೆಲ್ಲಾ ದಿನವಾಗಿ ಬಿಡ್ತು ಅಲ್ವೇನೋ ನನ್ನ-ನಿನ್ನ ಪತ್ರದ ಮಾತು-ಕಥೆಗೆ.. ಪೂರ್ತಿ ಆರು ತಿಂಗಳಾಯ್ತು ಅಲ್ಲವಾ ನಿನ್ನಿಂದ ಪತ್ರ ಬಂದು.. ತಪ್ಪು ನಂದು, ಸಾರಿ ಕಣೋ, ನಾನು ಇಲ್ಲಂತೂ ಬಹಳ busy ಆಗಿಬಿಟ್ಟಿದ್ದೆ. ಅದು ಸಾಲದೆಂಬಂತೆ `ಅವಳ ಪ್ರಸಂಗ-ಸಂಗ ಬೇರೆ ನನ್ನ ಬೇರಾವುದೇ ಇಕ್ಕೆಲಗಳಿಗೆ ಚಿಂತಿ ಮಾಡ್ಲಿಕ್ಕೆ ಕೊಡಲೇ ಇಲ್ವೋ..
             ಇದೇನು ಹೀಗೆಲ್ಲಾ ಚಿತ್ರ ವಿಚಿತ್ರವಾಗಿ ಇವನು ಬರೀತಿದ್ದಾನೆ ಅಂದ್ಕೊಂಡ್ಯಾ? ಇದು ನೀ ಬರೆದಿದ್ಯಲ್ಲಾ ಆ last letterನ ನಂತರದ ಕಥೆ.
             ಭಾವದ ಅಣೆಕಟ್ಟು ತುಂಬಿದ ನಂತರ ಒಂದಲ್ಲಾ ಒಂದಿನ ಒಡೆದು ಭಾವದ ಹನಿಗಳೆಲ್ಲ ತಳಕಾಣುವಂತೆ ಬಸಿದು ಹೋಗ್ತಾವಲ್ಲಾ, ಆಗ ಮನಸ್ಸಿಗೆ ಅದೆಷ್ಟೋ ಹಿತ-ಸಮಾಧಾನ-ಸಂತಸ ಅಲ್ವಾ..? ಅದೇ ಕಾರಣಕ್ಕಾಗಿಯೇ ನಾನು ಈ ಆರು ತಿಂಗಳುಗಳ ನಡುವೆ ಅದೇನೆಲ್ಲಾ ಘಟಿಸಿಬಿಡ್ತು ಅಂತ ಹೇಳಿಬಿಡ್ತೀನಿ.. ಆಗೆ ನಂಗೆ ಏನೋ ಒಂಥರಾ ಹಿತ. ಜೊತೆಗೆ ನನ್ನೊಳಗಿದ್ದ ಭಾವನೆಗಳನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಂಡ್ನಲ್ಲಾ ಅಂತ ಸಮಾಧಾನ..
             ನಾನು ನಿಂಗೆ ಕೊನೆಯ letter ಬರೆದಿದ್ನಲ್ಲಾ ಆಗಲೇ ನಮಗೆ ಕಾಲೇಜು ಶುರುವಾಗಿದ್ದು, ಸರಿ ಹೊಸ ಹುರುಪು, ಉಲ್ಲಾಸ-ಉತ್ಸಾಹ ಕಾಲೇಜಿಗೆ ಭರ್ಜರಿಯಾಗಿಯೇ ಹೋಗಿಬಿಟ್ಟೆ..ಕಾಲೇಜು ವಾತಾವರಣ ನಂಗೆ ಹೊಸದೋ ಹೊಸದು. ಜೊತೆಗೆ ಪ್ರೊಫೆಸರ್ರು, ಹುಡುಗ್ರು, ಹಿಡ್ಗೀರು ಎಲ್ಲಾ ಹೊಸ ಮುಖ. ಹೊಸ ಪರಿಚಯ. ಯಾರದ್ದೂ ಪರಿಚಯವಿರಲೇ ಇಲ್ಲ. ಕ್ರಮೇಣ ದಿನಕಳೆದಂತೆ ಹೊಸ ಹೊಸಬರ ಪರಿಚಯವಾಯಿತು. ನಮ್ಮ ನಮ್ಮಲ್ಲೇ ಹೊಸದೊಂದು ಮಿತ್ರವೃಂದ ಹುಟ್ಟಿಕೊಂಡಿತು. ಕಾಲೇಜಿನ ಅದ್ಯಾವುದೋ ಒಂದೆರಡು ಮರಗಳ ಅಡಿಯಲ್ಲಿನ ತಂಪು ಪ್ರದೇಶವೇ ನಮ್ಮ ಮಿತ್ರವೃಂದಕ್ಕೆ ಹರಟೆಕಟ್ಟೆಯಾಯಿತು. ಕ್ರಮೇಣ ಕಾಲೇಜು ಅಂದರೆ ಅದೇನೋ ಖುಷಿ, ಸಂತೋಷ, ಹೊಸ ಹುರುಪು, ಆನಂದ.. ದೇವರು ಈ ಬದುಕನ್ನು ನಮಗಾಗಿಯೇ ಸೃಷ್ಟಿ ಮಾಡಿದ್ದಾನೋ ಎನ್ನುವಷ್ಟು ನವೋಲ್ಲಾಸ. ಆಗ ನಮಗೆಲ್ಲಾ collage life is golden life ಅಂತಾರಲ್ಲಾ, ಆ ಮಾತು ನಿವೇನೋ ಅನ್ನಿಸತೊಡಗಿತ್ತು.
             ಅಂತಹ ಹೊತ್ತಿನಲ್ಲಿಯೇ ನನಗೆ ಪರಿಚಯವಾದವಳು ಸ್ವಪ್ನ. ಒಳ್ಳೆಯ ಹಾಲು ಬೆಳದಿಂಗಳಿನಂತಹ ಹುಡುಗಿ. ಅವಳ ಪರಿಚಯ ಉಳಿದೆಲ್ಲ ಮಿತ್ರರ ಪರಿಚಯವಾದಂತೆ ಆಗಲಿಲ್ಲ. ಸ್ವಲ್ಪ ಬೇರೆಯ ತೆರನಾಗಿ ಪರಿಚಯವಾದಳು ಸ್ವಪ್ನ. ಅದೇನೆಂದ್ರೆ ನನ್ನ ಕಾಲೇಜಿನ ಪ್ರಾರಂಭದ ದಿನಗಳಲ್ಲಿ ನನ್ನ ಬಗ್ಗೆ ನಾನು ಹೇಳಿಕೊಳ್ಳುವುದು ಹೆಚ್ಚಿತ್ತಲ್ಲ.. ಹಾಗೆಯೇ ಇಲ್ಲೂ ಕೂಡ ನಾನು ಅದೆಂತಹುದೇ `ಚಾಲೆಂಜ್' ಅನ್ನೂ ಗೆಲ್ಲುತ್ತೇನೆ ಎಂದು ಎಲ್ಲರೆದುರೂ ಕೊಚ್ಚಿಕೊಂಡುಬಿಟ್ಟಿದ್ದೆ. ಅದನ್ನು ಕೇಳಿದ ಹೊಸ ದೋಸ್ತರು ಒಂದೆರಡು ಜನ ಕಾಲೇಜಿನ ಸೈಕಲ್ ಸ್ಟಾಂಡ್ ಬಳಿ ನಿಂತಿದ್ದ ಒಂದು ಕೈನಿಯ ಗಾಳಿ ತೆಗೆಯಲು ಹೇಳಿಬಿಟ್ಟರು. ಇದೆಂತಾ ಸಿಂಪಲ್ ಚಾಲೇಂಜು ಎಂದುಕೊಂಡು ಹಿಂದಿ ಸಿನೆಮಾ ಹೀರೋನ ಸ್ಟೈಲಿನಲ್ಲಿ ಹೋಗಿ ಆ ಕೈನಿಯ ಗಾಳಿ ತೆಗೆಯುತ್ತಿದ್ದಾಗ ಬಿರುಗಾಳಿಯಂತೆ ಬಂದ ಆ ಕೈನಿಯ ಹುಡುಗಿ ನನ್ನ ಜೊತೆ ಗಲಾಟೆ ಮಾಡಿ, ಜಗಳ ಕಾಯ್ದಳು. ಹಾಗೆಯೇ ಕಾಲೇಜಿನ ಪ್ರಿನ್ಸಿಪಾಲರ ಬಳಿ ಹೊರಟುನಿಂತಳು.
              ಆಕೆಯೇ ಈ ಸ್ವಪ್ನ.. ಆಕೆಯನ್ನು ಆವಾಗ ಪ್ರಿನ್ಸಿಯ ಬಳಿ ಹೋಗದಿರುವಂತೆ ಮಾಡಲು ಅದ್ಯಾವ ಪರಿಯಾಗಿ ದಮ್ಮಯ್ಯ ಗುಡ್ಡೆ ಹಾಕಿದ್ದೆನೋ.. ನೆನೆಪು ಮಾಡಿಕೊಂಡ್ರೆ ಈಗಲೂ ಎದೆ ನೋಯುವಷ್ಟು ನಗು ಬರ್ತದೆ. ಆನಂತರ ಾಕೆ ನಂಗೆ `ಪಂಚರ್' ಅಂತಲೇ ಹೆಸರು ಇಟ್ಟುಬಿಟ್ಟಳು. ಇದಾಗಿ ಕೆಲವು ದಿನಗಳ ನಂತರವೇ ನನ್ನ ಜೀವನ ಎಂಬ ಗಾಳಿ ತುಂಬಿದ ಗಾಲಿಗೆ ಆಕೆ ಎಂಬ ಸೂಜಿ ಚುಚ್ಚಿ ನಾನು ಬದುಕಿನಲ್ಲಿ ಪಂಚರ್ ಆದದ್ದು.!
              ಓಹ್..| ಗೆಳೆಯಾ ನಾನು ಅವಳ ಬಗ್ಗೆ ಹೇಳೋದನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟೆ ಅಲ್ಲವಾ?  ತಾಳು ಹೇಳ್ತೀನಿ. ಅವಳು ಬೆಳ್ಳಗಿದ್ಲು ನಿಜ.. ಆದರೆ ಅವಳೇನೂ ಕಾಲೇಜಿನ ಬ್ಯೂಟಿಕ್ವೀನ್ ಆಗಿರಲಿಲ್ಲ. ಆದರೆ ಒಂದೇ ನೋಟದಲ್ಲಿ ಸೆಳೆಯುವಂತಹ ಲಕ್ಷಣ. ತಂಪು ಕಣ್ಗಳು. ಹಾಳು style ಇಲ್ಲದಿರುವ ಬದುಕು ಇವಿಷ್ಟೇ ಅವಳ ಕಡೆಗೆ ಕುತೂಹಲ ಹುಟ್ಟಿ ಆಕರ್ಷಿಸಲು ಅನುವಾಗುವಂತಹ ಗುಣಗಳಾಗಿದ್ದವು. ಬಹುಶಃ ಇವುಗಳೇ ನನ್ನನ್ನು ಸೆಳೆದಿದ್ದಿರಬೇಕು.
              ಆದರೆ ಒಂದು ವಿಷಯ ಹೇಳ್ಲಾ.. ಆಕೆ ಭರ್ಜರಿ ಶ್ರೀಮಂತೆ. ನಾನು ಪಕ್ಕಾ ಭಿಕ್ಷುಕನಂತಹ ಬಡವ. ಆದ್ರೂ ನಮ್ಮ ನಡುವೆ ಪ್ರೇಮ ಹುಟ್ಟಿತು. ಕೊನೆಗೆ ಈ gap ಇಂದಲೇ ಒಡೆದು ಚೂರು ಚೂರಾಗಿಬಿಡ್ತು. ಹುಂ..!! ಗೆಳೆಯಾ.. ನೀನು ಅದೆಷ್ಟು ಬಾರಿ ನನ್ನ ಬಳಿ ಹೇಳಿದ್ಯೋ.. ಈ ಹುಡ್ಗೀರನ್ನು ನಂಬಬೇಡ ಅಂತ. ಜೊತೆಗೆಕಾಲೇಜು ಜೀವನದಲ್ಲಿ ಲವ್ ಮಾಡಬೇಡ ಅಂತ. ನೀನು ಹೇಳಿದ್ದು ನಂಗೆ ತಮಾಷೆಯಾಗಿ ಕಂಡಿತ್ತು. ಆದ್ರೆ ಅದೇ ನಿಜ ಅನ್ನೋದು ನನಗೀಗ ಅರಿವಾಗ್ತಿದೆ ಮಾರಾಯಾ..
              ಎಲ್ಲ ಲವ್ ಗಳೂ ಅಸಾಧ್ಯ ಎನ್ನುವಲ್ಲಿ ಹುಟ್ಟುತ್ತವೆ.. ಸಾಧ್ಯ ಎನ್ನುವಾಗ ಸತ್ತುಹೋಗುತ್ತವೆ. ಅಂತಹ ಪ್ರೇಮವನ್ನು ನಾವೇ ಸೊಕಾ ಸುಮ್ಮನೆ ಅಸಾಧ್ಯವನ್ನಾಗಿ ಮಾಡಿಕೊಳ್ಳುತ್ತೇವೆ. ನನ್ನ ಪ್ರೇಮಪರಿಣಯವೂ ಕೂಡ ಅಸಾಧ್ಯ ಎನ್ನುವಂತೆಯೇ ಆರಮಭವಾಯಿತು. ಆದರೆ ಅದನ್ನು ಸಾಧ್ಯ ಮಾಡಿಕೊಳ್ಳಲು ಎಷ್ಟೆಲ್ಲಾ ಅವಕಾಶವಿತ್ತು. ಆದರೆ ಕಂಡ ಕನಸುಗಳೆಲ್ಲ ನನಸಾಗುವಂತಿದ್ದರೆ ಬದುಕು ಹೀಗಿರ್ತಿರಲಿಲ್ಲ ಅಲ್ಲವಾ.. ನನ್ನ ಪ್ರೇಮದ ಆರಂಭ ಅವಳಿಂದಲೇ ಆದದ್ದು ಎನ್ನುವುದನ್ನು ನೀನು ನಂಬಲೇಬೇಕು ದೋಸ್ತಾ.. ನಾನೂ ಆಕೆಯನ್ನು ಮನಸ್ಸಿನಲ್ಲೇ ಪ್ರೀತಿಸುತ್ತಿದೆ. ಪೂಜಿಸುತ್ತಿದೆ. ಭಕ್ತಿಯಿಂದ ಆರಾಧಿಸುತ್ತಿದ್ದೆ. ಅವಳದ್ದೂ ಹಾಗೆಯೇ.. ಅದೊಂದು ದಿನ ನನ್ನ ಬಳಿ ಬಂದು ನೇರವಾಗಿ `ನಾನಿನ್ನ ಪ್ರೀತಿಸ್ತಾ ಇದ್ದೀನಿ ಕಣೋ..' ಎಂದುಬಿಟ್ಟಿದ್ದಳು. ದೂಸರಾ ಮಾತಿಲ್ಲದೇ ನಾನು ಒಪ್ಪಿಕೊಂಡು ಬಿಟ್ಟಿದ್ದೆ.
               ಅದ್ಯಾಕೋ ಗೊತ್ತಿಲ್ಲ.. ನಾನು ಬಡತನದ ಬೇಗೆಯಲ್ಲಿ ನರಳ್ತಾ ಇದ್ದರೂ ನನ್ನನ್ನವಳು ಇಷ್ಟಪಟ್ಟುಬಿಟ್ಟಿದ್ದಳು. ದಿನಾ ಬೆಳಗಾಯ್ತು ಅಂದ್ರೆ ಸಾಕು ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಲು, ಭೇಟಿಮಾಡಿ ಮಾತನಾಡಲು ಪರಿತಪಿಸುತ್ತಿದ್ದೆವು. ನಮ್ಮ ಅಂತರಾಳದಲ್ಲಿ ಅರಳಿದ ಪ್ರೀತಿ ನಮ್ಮಿಬ್ಬರನ್ನು ಬಿಟ್ಟರೆ ಮೂರನೆ ಮಂದಿಗೆ ಗೊತ್ತಾಗದಂತೇ ಕಾಪಾಡಿಕೊಂಡಿದ್ವಿ. ಅಪ್ಪಿತಪ್ಪಿಯೂ ನಾವಿಬ್ಬರು ಪ್ರೀತಿಸುತ್ತಿದ್ದೀವಿ ಎನ್ನೋ ವಿಷಯ ಖಾಸಾ ಗೆಳೆಯರ ಬಳಗಕ್ಕೂ ತಿಳಿಯಲಿಲ್ಲ.
              ಸ್ವಪ್ನ. ಅದೆಷ್ಟು ಸಾರಿ ಕನಸಲ್ಲಿ ಬಂದು ಕಾಡಿದ್ಲು.. ಮನಸಲ್ಲಿ ಮನೆಮಾಡಿದ್ಲು.. ನಾ ಬೇಜಾರು ಪಟ್ಕೊಂಡಿದ್ದಾಗಲೆಲ್ಲ ನನ್ನ ಬೇಸರ ಓಡಿಸ್ತಿದ್ಲು.. ಕೆಲವೊಂದು ಸಲ ನಿರಾಸೆಯಿಂದ ಕೈಚೆಲ್ಲಿ ಕುಳಿತಿದ್ದಾಗ ಬದುಕಿನ್ನೂ ಬೆಟ್ಟದ ತುದಿಯಷ್ಟಿದೆ. ಆ ಬೆಟ್ಟದ ಬುಡದಲ್ಲೇ ನೀನು ಸೋತು ಕುಳಿತರೆ ಹೆಂಗೆ ಮಾರಾಯಾ.. ನನ್ನವ ನೀನು ಬೆಟ್ಟದ ತುದಿಯನ್ನೇ ಮುಟ್ಟಿ ಗೆಲ್ಲಬೇಕು. ನಿನ್ನ ರಟ್ಟೆಯಲ್ಲಿ ಅಂತಹ ಬಲವಿದೆ ಮಾರಾಯಾ.. ಬದುಕಿನ ತುಂಬಾ ಛಲವಿದೆ. ಏಳು ಅಂತ ನನ್ನನ್ನು ಜೀವನದ ಸ್ಪರ್ಧೆಯ ಅಂಗಣಕ್ಕೆ ಚೈತನ್ಯಯುಕ್ತವಾಗಿ ತಂದು ನಿಲ್ಲಿಸಿ ಬಿಡ್ತಿದ್ಲು.. ಚೆಂದದ ನವಿಲುಗರಿ, ಅಘನಾಶಿನಿಯ ಆಳಕ್ಕೆ ಒಂದು ಮುಳುಕು ಹೊಡೆದು ಆಳದಲ್ಲೆಲ್ಲೋ ಅಡಗಿ ಕುಳಿತಿರುತ್ತಿದ್ದ ಕಲ್ಲನ್ನು ಹೆಕ್ಕಿ ತಂದುಕೊಡುವುದು, ಹೊಚ್ಚ ಹೊಸದಾಗಿ ಬರೆದ ಕವನ ಇಂತವುಗಳೇ ಅವಳಿಗೆ ಇಷ್ಟವಾಗುವ ನನ್ನ ಗಿಪ್ಟುಗಳಾಗಿದ್ದವು.
              ಆಕೆಗೆ ನನ್ನ ಬರವಣಿಗೆಯ ಮೇಲೆ ಪ್ರೀತಿಯಿತ್ತು. ಆರಾಧನೆಯಿತ್ತು. ಅಭಿಮಾನವಿತ್ತು. ಹಾಗೆಯೇ ಯಾವಾಗಲಾದರೂ ನನ್ನ ಸುಂದರ ಕವಿತೆಗಳು, ಬರಹಗಳು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಅಂತಾದ್ರೆ ನನಗಿಂತ ಹೆಚ್ಚು ಖುಷಿಪಟ್ಟುಬಿಡುತ್ತಿದ್ದಳು. ಗೆಳೆಯಾ, ನಮ್ಮ ಪ್ರೀತಿ ಹೀಗಿದ್ದರೂ ಅದರಲ್ಲಿ ಕಾಮವಿರಲಿಲ್ಲ. ನಮ್ಮಲ್ಲಿ ಮನಸಿಗೆ ಬೆಲೆ ಕೊಡುವ ಗುಣವಿತ್ತಾದ್ದರಿಂದ ದೈಹಿಕ ಆಸೆಗಳು ನಗಣ್ಯ ಎನ್ನಿಸಿದ್ದವು.
               ದಿನಗಳೆದಂತೆ ನಾನು ಆಕೆಯ ಒಡನಾಟಕ್ಕೆ, ನಗುವಿಗೆ, ಮಾತು ಕತೆಗೆ ಪರಿತಪಿಸುತ್ತಿದ್ದೆ. ಸದಾ ಅವಳ ಇರವನ್ನೇ ಬಯಸುತ್ತಿದ್ದೆ. ವಿಚಿತ್ರ ನೋಡು.. ನಮ್ಮ ಪ್ರೀತಿ ಎನ್ನುವುದು ನನ್ನ ಮನೆಯಲ್ಲೂ, ಆಕೆಯ ಮನೆಯಲ್ಲೂ ಗೊತ್ತಿತ್ತು. ನಮ್ಮ ಪ್ರೇಮಕ್ಕೆ ಒಪ್ಪಿಗೆಯಿತ್ತು. ಸ್ವಪ್ನಳ ತಂದೆ ತಾಯಿಗಳು ಚಿನ್ನದ ತೊಟ್ಟಿಲಿನವರಾದರೂ ಅವರಿಗೆ ನಾನೆಂದರೆ ಅದೆಂತಹ ಪ್ರೀತಿ, ಮಮತೆ, ಅಕ್ಕರೆ, ಖುಷಿ, ನಂಬಿಕೆ ಗೊತ್ತಾ. ತಮ್ಮ ಮನೆಯ ಸದಸ್ಯರಲ್ಲಿ ನಾನೂ ಒಬ್ಬನೇನೋ ಎನ್ನುವಂತೆ ಕಾಣುತ್ತಿದ್ದರು.
               ಆ ದಿನಗಳಲ್ಲಿ ಹುಂಬ ಧೈರ್ಯವೇ ನನ್ನ ಆಸ್ತಿ. ಅದನ್ನು ಬಿಟ್ಟರೆ ಬೇರೆ ನಾಸ್ತಿ ಎಂಬಂತಹ ಕಾಲ. ನಾನು ತನಿಖಾ ವರದಿ ಅದೂ ಇದೂ ಹಾಳು-ಮೂಳು ಅಂತ ಹೋಗುವ ಹುಚ್ಚನ್ನು ಬೆಳೆಸಿಕೊಂಡವನು. ನಾನು ಅದೆಲ್ಲಿಗೇ ತನಿಖಾ ವರದಿಗೆ ಅಂತ ಹೊರಟುಬಿಟ್ಟರೆ ನನ್ನ ಜೊತೆಗೆ ಸ್ವಪ್ನ ಬಂದೇ ಬಿಡುತ್ತಿದ್ದಳು. ಅದೆಷ್ಟೇ ರಿಸ್ಕಿಯಾಗಿದ್ದರೂ ಸ್ವಪ್ನ ಕೂಡ ನನ್ನ ಜೊತೆಗೆ ಹಾಜರ್. ಹೀಗಾಗಿಐಎ ನಾನು ನಮ್ಮ ಪ್ರದೇಶದ ಅದೆಷ್ಟೋ ನಿಘೂಡ ರಹಸ್ಯಗಳನ್ನು ಅವಳ ಸಾನ್ನಿಧ್ಯದೊಡನೆಯೇ ಹೊರ ಜಗತ್ತಿಗೆ ಕಾಣುವಂತೆ ಮಾಡಿದ್ದೆ. ಇಷ್ಟೇ ಅಲ್ಲ ಕಣೋ, ನಾನು ಅದೆಷ್ಟು ಒಳ್ಳೊಳ್ಳೆಯ ಸ್ಥಳಗಳಿಗೆ ಹೋಗಿಬಂದಿದ್ದೀನಿ ಅವಳ ಜೊತೆ ಗೊತ್ತಾ. ನಮ್ಮ ಕಾಲೇಜಿನ ನಮ್ಮ ಬಳಗ ಪಿಕ್ನಿಕ್ಕಿಗೆ ಅಂತ ಹೋದಾಗ್ಲೆಲ್ಲಾ ನಾವೂ ಹೋಗಿ ಬಂದಿದ್ವಿ. ಉಂಚಳ್ಳಿ ಜಲಪಾತ, ಸಾತೊಡ್ಡಿ ಜಲಪಾತ, ಗಿರ್ ಗಿರ್ ಪಾಥರ್, ಮರಿಯಾಣ, ಜೋಗಿಕಲ್ಲು... ಓಹ್ ಉತ್ತರ ಕನ್ನಡದ ಒಡಲಿನ ಅದೆಷ್ಟೋ ತಾಣಗಳನ್ನು ನೋಡಿದ್ದೀವೋ ಲೆಕ್ಖವಿಲ್ಲ.
               ಗೆಳೆಯಾ.. ಇದುವರೆಗೂ ನನ್ನ ಪ್ರೇಮದ ಖುಷಿಯ ಸಂಗತಿಗಳನ್ನು ನಿನ್ನ ಮುಂದಿಟ್ಟೆ. ಇನ್ನು ಮುಂದಿನದೆಲ್ಲಾ ದುರಂತಮಯವಾದುದು. ಭಗ್ನ ಪ್ರೇಮದ ಸ್ನಿಗ್ಧ ಭಾವಗಳು. ಇದನ್ನು ನೀನು ಇಂಟರ್ವಲ್ ನಂತರದ ಸಿನಿಮಾ ಎಂದುಕೊಂಡರೂ ತಪ್ಪಾಗುವುದಿಲ್ಲ.
              ಈ ನಮ್ಮ ಪ್ರೇಮಕ್ಕೆ ಎಲ್ಲರಿಂದಲೂ ಒಪ್ಪಿಗೆಯಿತ್ತು. ಆದರೂ ಅದ್ಯಾಕೆ ಮುರಿದುಬಿತ್ತು ಎನ್ನುವುದೇ ಭೀಖರ ಸತ್ಯ.  ಆರು ತಿಂಗಳಿನ ಅವಧಿಯಲ್ಲಿ ಕಾಮವೊಂದನ್ನು ಬಿಟ್ಟು ಉಳಿದೆಲ್ಲ ಪ್ರೀತಿಯ ಪರಿಭಾಷೆಯನ್ನೂ ಪಡೆದುಬಿಟ್ಟಿದ್ದೆವಲ್ಲಾ.. ನಿಧಾನವಾಗಿ ಮುಚ್ಚಿಟ್ಟಿದ್ದ ನಮ್ಮ ಪ್ರೇಮದ ಸಂಗತಿ  ಕಾಲೇಜಿನಲ್ಲಿ ಹರಿದಾಡತೊಡಗಿತ್ತು. ಹಲವರು ನನ್ನ ಬಳಿ ಹಾಗೂ ಸ್ವಪ್ನಳ ಬಳಿಯೂ ಪ್ರೇಮದ ಕುರಿತು ವಿಚಾರಿಸಿದರು. ನಾವು ವಿಷಯವನ್ನು ಸಾಗ ಹಾಕಲು ಯತ್ನಿಸಿದರೂ ಪ್ರೇಮವಾದ್ದರಿಂದ ತಣ್ಣಗಾಗಲಿಲ್ಲ. ಇಲ್ಲಿಯವರೆಗೆ ಎಲ್ಲವೂ ಚನ್ನಾಗಿತ್ತು ಕಣೋ ಗೆಳೆಯಾ.. ಬಹುಶಃ ಕಾಲೇಜಿನಲ್ಲಿ ನಮ್ಮ ಪ್ರೇಮದ ವಿಷಯ ಜಗಜ್ಜಾಹಿರಾಗಿದ್ದೇ ನಮ್ಮ ನಡುವೆ ಬಿರುಕು ಮೂಡಲು ಕಾರಣವಾಯಿತೇನೋ ಅನ್ನಿಸುತ್ತದೆ ನೋಡು.
             ಯಾಕೋ ಆಕೆಗೆ ನಾನು ಬೆಡವಾದೆ. ಕ್ರಮೇಣ ನನ್ನ ಸಾನ್ನಿಧ್ಯ, ಒಡನಾಟವನ್ನು ಬೇಕಂತಲೇ ಆಕೆ ತಪ್ಪಿಸಿಕೊಳ್ಳಲಾರಂಭಿಸಿದಳು. ಅವಕಾಶ ಸಿಕ್ಕಾಗಲೆಲ್ಲ ನನ್ನಿಂದ ದೂರವಾಗಲು ಯತ್ನಿಸಿಬಿಟ್ಟಳು. ಹುಡುಗಿಯರಿಗೆ ಪ್ರೀತಿಸಲೂ ಕಾರಣ ಬೇಕಿಲ್ಲ. ಅದೇ ರೀತಿ ತಿರಸ್ಕರಿಸಲೂ ಕೂಡ. ಅದೊಂದು ದಿನ ಆಕೆ ನನ್ನಿಂದ ದೂರವಾಗೇ ಬಿಟ್ಟಳು.
              ಕಾಡಣ ಹುಡುಕಿದೆ. ನಮ್ಮ ಪ್ರೀತಿಯ ಹಾಲಿಗೆ ಅದ್ಯಾರೋ ಹುಳಿ ಹಿಂಡಿಬಿಟ್ಟಿದ್ದರು. ಅಂದ ಹಾಗೇ ಈ ಪ್ರಸಂಗದಲ್ಲಿ ನನ್ನದು ಎಳ್ಳಷ್ಟೂ ತಪ್ಪಿಲ್ಲ. ಹಾಗಂತ ಅವಳದ್ದು ತಪ್ಪಿದೆಯಾ ಎಂದು ಕೇಳಿದರೆ ಇಲ್ಲ ಎಂತಲೇ ಹೇಳಬೇಕಾಗುತ್ತದೆ. ನಮ್ಮ ನಡುವಿನಲ್ಲಿರುವುದು ಅಲ್ಪವೋ ಸ್ವಲ್ಪವೋ ಅಥವಾ ಅದಕ್ಕಿಂತ ಹೆಚ್ಚೋ ಮಿಸ್ ಅಂಡರ್ಸ್ಟಾಂಡಿಂಗ್ ಅಷ್ಟೇ. ನೀನು ಬಯ್ಯುತ್ತಿರಬಹುದು. ಆದರೆ ಒಂದಲ್ಲಾ ಒಂದು ದಿನ ನಮ್ಮ ಪ್ರೇಮ ಮತ್ತೆ ಮೊದಲಿನಂತಾಗುತ್ತದೆ, ನಮ್ಮ ಬದುಕಿನಲ್ಲಿ ತಪ್ಪಿಹೋದ ಹಳಿ ಬತ್ತೆ ಸರಿದಾರಿಗೆ ಕುಡುತ್ತೆ ಎನ್ನುವ ಆಶಾವಾದದಲ್ಲಿ ಬದುಕುತ್ತಿದ್ದೇನೆ ದೋಸ್ತಾ. ನಿರೀಕ್ಷಗಳಲ್ಲಿಯೇ ಬದುಕಿನ ಸಾರವಿದೆ, ಸರ್ವಸ್ವವಿದೆ ಅಲ್ಲವೇ ಗೆಳೆಯಾ..
             ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲ ಗೆಳೆಯಾ.. ನೋಡಬೇಕು. ನಾನಾಗಿಯೇ ಆಕೆಯ ಬಳಿ ಪ್ರೀತಿಸುತ್ತೇನೆ ಅಂತ ಹೇಳಿರಲಿಲ್ಲ. ಪ್ರೀತಿಸುತ್ತೇನೆ ಅಂದವಳೂ ಅವಳೇ, ಈಗ ಐ ಹೇಟ್ ಯೂ ಅನ್ನುತ್ತಿರುವವಳೂ ಅವಳೇ.. ಬದುಕಿನಲ್ಲಿ ಅರ್ಥವಾಗದ ಸಂಗತಿಗಳು ಇನ್ನೂ ಹಲವಿದೆ ದೋಸ್ತಾ... ನಾನು ಈ ಪ್ರೇಮ ಪ್ರಸಂಗದಲ್ಲಿ ಒಂದು ಪಾತ್ರವಾಗಿಬಿಟ್ಟೆನೇನೋ.. ಆಕೆಯ ಪ್ರೇಮದ ಏಕಪಾತ್ರಾಭಿನಯದಲ್ಲಿ ನಾನು ಹೆಸರಾಗಿ ಉಳಿದುಬಿಟ್ಟೆನೇನೋ ಅನ್ನಿಸುತ್ತಿದೆ.. ಆದರೂ ಕಾಯುತ್ತಿದ್ದೇನೆ ದೋಸ್ತಾ.. ಮುಂದೇನಾಗ್ತದೋ.. ಗೊತ್ತಿಲ್ಲ..
          ಏನಾಯ್ತು ಅನ್ನೋದನ್ನು ಮುಂದೆ ಯಾವಾಗ್ಲಾದ್ರೂ ತಿಳಿಸ್ತೀನಿ ದೋಸ್ತಾ.. ನಿನ್ನ ಪತ್ರದ ನಿರೀಕ್ಷೆಯಲ್ಲಿದ್ದೇನೆ ಗೆಳೆಯಾ.. ಬರೀತಿಯಲ್ಲಾ..?

ಇಂತಿ ನಿನ್ನ ಗೆಳೆಯ
ಅಖಿಲ್


***
(ಪತ್ರ ಬರೆದಿದ್ದು 06-05-2007ರಂದು ದಂಟಕಲ್ಲಿನಲ್ಲಿ...)
              

Wednesday, June 18, 2014

ಜೋಗ


ಇಳಿಯುತಿದೆ ಬಾಂದಳದಿಂದ
ಹೊನ್ನಿನ ಝರಿ ನೀರು
ನಾಲ್ಕು ಸೀಳಿನ ಸೊಬಗಿನಿಂದ
ಊರು ಸ್ವರ್ಗಕೂ ಮೇರು ||

ರಾಜನೆಂದರೆ ಗಮ್ಯ ಗಂಭೀರ
ರಾಣಿಯ ಬಳುಕು ಸಿಂಧೂರ
ಮೆರೆಯುತಿದೆ ನಾಡು ಇಲ್ಲಿ
ಕುಣಿಯುತಿದೆ ಸೊಬಗು ಚೆಲ್ಲಿ ||

ರಾಜೆಟ್ ಎಂದರೆ ಕಿವಿ ಕಿವುಡು
ರೋರರ್ ನೋಡಲು ಕಣ್ಣು ಕುರುಡು
ಮೆರೆಯುತಿದೆ ಭವ್ಯ ಸೊಬಗು
ನಾಲ್ಕು ಧಾರೆ ನೀಡಿದೆ ಸೊಬಗು ||

ನೀರ ಧಾರೆಯು ಇಲ್ಲಿ ಚಲನೆಯಂತೆ
ನೂರು ಕಷ್ಟಗಳಿಗೆ ಕುಲುಮೆಯಂತೆ
ಜೋಗ ಜಲಪಾತವೇ ನಾಡ ಹೆಮ್ಮೆ
ನೋಡಿದ ಮನಕೊಂದು ಗರಿಮೆ ||

ಜೋಗವೆಂದರೆ ಜೋಗ. ಇದು ಒಂದೇ
ಇಲ್ಲ ಸಾಟಿಯು ಇದರ ಮುಂದೆ
ಇದುವೆ ಶಕ್ತಿಯ ಮೂಲಬಿಂದು
ನೀಡುತಿದೆ ಸ್ಪೂರ್ತಿ, ಜೀವಸಿಂಧು ||

**
(ಈ ಕವಿತೆಯನ್ನು ಬರೆದಿರುವುದು 5.10.2006ರಂದು ದಂಟಕಲ್ಲಿನಲ್ಲಿ)
(ಕವಿತೆಗೆ ಬಳಕೆ ಮಾಡಿರುವ ಜೋಗ ಜಲಪಾತದ ಚಿತ್ರವನ್ನು ನಾನು ತೆಗೆದಿದ್ದು 2009ರಲ್ಲಿ. ಅಚಾನಕ್ಕಾಗಿ ಈ ಚಿತ್ರದಲ್ಲಿ ಜೋಡಿಯೊಂದು ಸಿಲುಕಿಕೊಂಡಿತು. ಮೊದಲು ನನಗೆ ಅರಿವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಚನ್ನಾಗಿ ಮೂಡಿಬಂದಿತು. ಫ್ಲಿಕ್ಕರ್ ಹೈವ್ ಮೈಂಡ್ ನ ಜೋಗಜಲಪಾತದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದೆಂದು ಪರಿಗಣಿಸಲ್ಪಟ್ಟಿದೆ.)

Tuesday, June 17, 2014

ಒಲವ ಲತೆಗೆ ನೀರನೆರೆದ..ಭಾಗ-4

                 ದಿಗಂತ ಸಿಂಧುವಿನ ಬೆನ್ನಿಗೆ ನಿಂತಿದ್ದರಿಂದ ಆಕೆಯ ಕುರಿತು ಹರಿದಾಡುತ್ತಿದ್ದ ಮಾತುಗಳೆಲ್ಲ ನಿಂತಿದ್ದವು. ಆಕೆಯ ಪರವಾಗಿ ಮಾತನಾಡಲೂ ಜನರಿದ್ದಾರೆ ಎಂದಾಗ ಸೊಕಾ ಸುಮ್ಮನೆ ಲೂಸ್ ಟಾಕ್ ಮಾಡಲು ಜನರು ಹೆದರುತ್ತಾರೆ. ಇಲ್ಲೂ ಹಾಗೆಯೇ ಆಯಿತು. ದೊಡ್ಡ ಸ್ಟಾರ್ ದಿಗಂತ ಆಕೆಯ ಬೆನ್ನಿಗೆ ನಿಂತಿದ್ದ. ಆಕೆ ಮಾನಸಿಕವಾಗಿ ದೃಢವಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಿದ್ದ.
                 ಸಿಂಧುವಿನ ಹೆಸರು ಹಾಳಾಗಿದ್ದ ಪರಿಣಾಮ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗದಂತಾಗಿತ್ತು. ಕೊನೆಗೆ ದಿಗಂತ ತನ್ನದೇ ಸಿನಿಮಾಕ್ಕೆ ಆಕೆಯನ್ನು ನಟಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದ. ಕಳೆದುಹೋಗಿದ್ದ ಸ್ಥಾನಮಾನಗಳೆಲ್ಲ ಮರಳಿ ಸಿಗಲು ಕಾರಣನಾಗಿದ್ದ ದಿಗಂತ. ಸಿಂಧುವಿಗೆ ದಿಗಂತನ ಮೇಲೆ ಅಭಿಮಾನವಿತ್ತಾದರೂ ಆತನಿಗೆ ಸರಿಯಾಗಿ ಮುಖ ತೋರಿಸಲು ಆಗದಂತಹ ಮನಸ್ಥಿತಿಯಿತ್ತು. ಒಮ್ಮೆ ಪ್ರೇಮ ನಿವೇದನೆಯನ್ನು ಮಾಡಿದ್ದ ದಿಗಂತ. ಆತನನ್ನು ಒದ್ದು ಬಂದಂತೆ ಬಂದಿದ್ದಳು. ಇದರಿಂದಾಗಿ ದಿಗಂತ ಎಷ್ಟು ಯಾತನೆಯನ್ನು ಅನುಭವಿಸಿದ್ದ ಎನ್ನುವುದು ಆಕೆಗೆ ತಿಳಿದಿತ್ತು. ನಾನು ಇಷ್ಟೆಲ್ಲ ತೊಂದರೆ ಕೊಟ್ಟು ಆತನನ್ನು ಅವಮಾನಿಸಿ, ಆತನ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುವಂತೆ ಮಾಡಿದ್ದರೂ ಕೂಡ ದಿಗಂತ ನನ್ನ ನೆರವಿಗೆ ಬಂದನಲ್ಲ ಎಂದುಕೊಂಡಿದ್ದಳು. ಇಂತಹ ಸಂದರ್ಭದಲ್ಲೇ ಸಿಂಧು ನಿದ್ದೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡಿದ್ದಳು. ಆದರೆ ದಿಗಂತ ಇಂತಹ ಪ್ರಯತ್ನವನ್ನು ತಡೆದು ಆಕೆಯನ್ನು ಬದುಕಿಸಿದ್ದ. ಬುದ್ಧಿಯನ್ನೂ ಹೇಳಿದ್ದ.
              ಹೀಗಿದ್ದಾಗಲೇ ದಿಗಂತ ಆಕೆಗೆ ಪೋನ್ ಮಾಡಿ ಕೇಳಿದ್ದು `ಟ್ರೆಕ್ಕಿಂಗಿಗೆ ಹೋಗಿ ಬರೋಣವಾ.. ಬರ್ತೀಯಾ?' ಅಂತ. ಆಕೆ ಇರುವ ವಾತಾವರಣ ಕೊಂಚವಾದರೂ ಬದಲಾಗಲಿ, ಆಕೆಯ ಮನಸ್ಥಿತಿ ಸರಿ ಹೋಗಲಿ ಎನ್ನುವ ಕಾರಣಕ್ಕಾಗಿ ದಿಗಂತ ಇಂತಹದ್ದೊಂದು ಉಪಾಯವನ್ನು ಮಾಡಿದ್ದ. ಆಕೆ ಒಪ್ಪಿಕೊಂಡಿದ್ದಳು. ಸಂತಸಗೊಳ್ಳುವ ಸರದಿ ದಿಗಂತನದ್ದಾಗಿತ್ತು. ದಿಗಂತನಿಗೆ ಮತ್ತೆ ನೆನಪಾಗಿದ್ದು ಉಂಚಳ್ಳಿ ಜಲಪಾತ. ಸಿಂಧುವಿನ ಬಳಿಗೆ ಅದನ್ನೇ ಹೇಳಿದ್ದ. ಆಕೆ ಒಪ್ಪಿಕೊಂಡು ಹೊರಟಿದ್ದಳು.
           
**
           ಐದಾರು ವರ್ಷಗಳ ಹಿಂದೆ ಟ್ರೆಕ್ಕಿಂಗಿಗೆ ಬಂದ ನಂತರ ಈಗ ಮತ್ತೊಮ್ಮೆ ಬಂದಿದ್ದ ಇವರ ಬದುಕಿನಲ್ಲಿ ಏನೆಲ್ಲ ಬದಲಾವಣೆಯಾಗಿದ್ದವು. ಸಿಂಧುವಿನ ಬಳಿ ದಿಗಂತ ತನ್ನ ಪ್ರೇಮ ನಿವೇದಿಸಿ, ತಿರಸ್ಕೃತನಾಗಿದ್ದ.  ನಂತರದ ದಿನಗಳಲ್ಲಿ ಸಿಂಧು ನಟಿಯಾಗಿ ಹೆಸರು ಮಾಡಿದ್ದಳು. ನಂತರ ಅದೇ ಸಿನಿಮಾ ಜಗತ್ತು ಆಕೆಯ ಹೆಸರು ಹಾಳಾಗುವಂತೆ ಮಾಡಿತ್ತು. ದಿಗಂತನೂ ಇತ್ತ ಜಿದ್ದಿಗೆ ಜಿದ್ದು ಎಂಬಂತೆ ನಟನಾಗಿ, ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿ ಹೆಸರು, ಪ್ರಶಸ್ತಿ, ಅಭಿಮಾನಿಗಳನ್ನು ಗಳಿಸಿಕೊಂಡಿದ್ದ. ಹೆಸರು ಹಾಳಾಗಿ ಅವಕಾಶವಿಲ್ಲದೇ ಮಾನಸಿಕವಾಗಿಯೂ ಝರ್ಝರಿತಗೊಂಡಿದ್ದ ಸಿಂಧುವಿನ ಬೆನ್ನಿಗೆ ನಿಂತು ಆಕೆಯನ್ನು ಸಂಕಷ್ಟದಿಂದಲೂ ಪಾರು ಮಾಡಿದ್ದ.
            ಅಂದಿಗೂ ಇಂದಿಗೂ ಉಂಚಳ್ಳಿ ಜಲಪಾತ ಇದ್ದಹಾಗೆಯೇ ಇತ್ತು. ನೀರು ಕೊಂಚ ಕಡಿಮೆಯಾಗಿತ್ತು ಎನ್ನುವುದನ್ನು ಬಿಟ್ಟರೆ ಉಂಚಳ್ಳಿ ಜಲಪಾತ ತನ್ನ ಸೌಂದರ್ಯಕ್ಕೆ ಕುಂದನ್ನು ತಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ಟ್ರೆಕ್ಕಿಂಗೆ ಹಲವಾರು ಜನರು ಜೊತೆಯಲ್ಲಿದ್ದರು. ಆದರೆ ಈಗ ಸಿಂಧು ಹಾಗೂ ದಿಗಂತ ಇಬ್ಬರೇ ಬಂದಿದ್ದರು. ಆಗ ಕಾಲೇಜು ಹುಡುಗರಾಗಿದ್ದ ಇವರು ಈಗ ನಾಲ್ಕು ಜನ ಗುರುತು ಹಿಡಿಯಬಲ್ಲಂತಹ ನಟ-ನಟಿಯರು. ಯಾಕೋ ಸಿಂಧುವಿಗೆ ದಿಗಂತ ಮತ್ತೊಮ್ಮೆ ತನ್ನ ಬಳಿ ಪ್ರೇಮ ನಿವೇದನೆ ಮಾಡಿಬಿಡುತ್ತಾನಾ ಎಂಬ ಆಲೋಚನೆ ಶುರುವಾಯಿತು. ಅದಕ್ಕೆ ತಾನು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬ ಆಲೋಚನೆಯೂ ಶುರುವಾಯಿತು. ಕೊನೆ ಕೊನೆಗೆ ಆತ ಪ್ರೇಮ ನಿವೇದನೆ ಮಾಡಲಾರ, ಆದರೆ ನನ್ನಲ್ಲಿ ಆತನ ಬಗ್ಗೆ ಪ್ರೇಮ ಮೂಡುತ್ತಿದೆಯೇನೋ ಅನ್ನಿಸಿತು. ಕೇಳಿಬಿಡಲಾ ಅಂದುಕೊಂಡಳು. ಆದರೆ ಒಮ್ಮೆ ನಾನೇ ಧಿಕ್ಕರಿಸಿದ್ದೆ. ಈಗ ನಾನಾಗಿಯೇ ಅವನ ಬಳಿ ಪ್ರೇಮ ನಿವೇದನೆ ಮಾಡಿದರೆ ತನ್ನ ಲಾಭಕ್ಕಾಗಿ, ಅಥವಾ ತನ್ನ ಹೆಸರು ಹಾಳಾಗಿದ್ದನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಹೀಗೆ ಮಾಡಿದಳು ಅಂದುಕೊಳ್ಳುತ್ತಾಳೇನೋ ಎಂದುಕೊಂಡಳು.
             ದಿಗಂತ ತನಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾನೆ. ಕಾರಣವಿದ್ದೋ ಇಲ್ಲದೆಯೋ ಆತನನ್ನು ಧಿಕ್ಕರಿಸಿದ್ದೆ. ಸಿನೆಮಾ ಜಗತ್ತಿನಲ್ಲಿ ಸಾಧಿಸುವ ಛಲವಿತ್ತು. ಆದರೆ ಆ ಜಗತ್ತೇ ನನ್ನನ್ನು ಈ ರೀತಿ ಒದ್ದು ಬಿಡುತ್ತದೆ ಎಂದುಕೊಂಡಿರಲಿಲ್ಲ. ಆಗ ನನ್ನನ್ನು ಕಾಪಾಡಿದ್ದು ಎಂದೋ ನಾನು ಒದ್ದಿದ್ದ ದಿಗಂತ. ಬದುಕು ಏನೆಲ್ಲ ತಿರುವನ್ನು ಕೊಟ್ಟುಬಿಡುತ್ತದಲ್ಲ. ಇಲ್ಲೇ ಸ್ವರ್ಗ, ಇಲ್ಲೇ ನರಕ ಅನ್ನುವುದು ಇದಕ್ಕೇ ಇರಬೇಕು ಎಂದುಕೊಂಡಳು ಸಿಂಧು.

**
            ಈಗಲಾದರೂ ಕೇಳಿಬಿಡಬೇಕು. ನನ್ನನ್ನು ಪ್ರೀತಿಸುತ್ತೀಯಾ.. ಅಂತ ಎಂದುಕೊಂಡ ದಿಗಂತ. ಆದರೆ ನಾನು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಪ್ರೀತಿಸು ಎಂದು ಹೇಳುವುದು ಎಷ್ಟು ಸರಿ? ಪ್ರೀತಿಸುವ ಸಲುವಾಗಿಯೇ ಇಷ್ಟೆಲ್ಲ ಮಾಡಿದನೇ ಎಂದುಕೊಂಡರೆ ಏನು ಮಾಡುವುದು? ಕೇಳಲಾ? ಬಿಡಲಾ? ಕೇಳಿ ಮಳ್ಳಾಗುವುದೇಕೆ? ಒಮ್ಮೆ ಕೇಳಿ ಅವಳಿಂದ ಧಿಕ್ಕರಿಸಿಕೊಂಡಿದ್ದರೂ ಇನ್ನೂ ಮನಸ್ಸೇಕೆ ಈ ರೀತಿ ಅಂದುಕೊಳ್ಳುತ್ತಿದೆ..? ದಿಗಂತನಿಗೆ ಆಲೋಚನೆ. ಉಂಚಳ್ಳಿ ಜಲಪಾತದ ಕಣಿವೆಯಿಳಿದಿದ್ದೇ ಗೊತ್ತಾಗಿರಲಿಲ್ಲ. ಆಲೋಚನೆಯ ನಡು ನಡುವಲ್ಲಿಯೇ ಮುಂದೆ ಮುಂದೆ ಸಾಗುತ್ತಿದ್ದರು.

**
            `ದಿಗಿ... ಮುಂದೆ..? ಸಿನೆಮಾ ಜಗತ್ತಿನಲ್ಲಿ ಬಹಳ ಸಾಧನೆ ಮಾಡಿದೆ..? ಮುಂದೇನು ಮಾಡಬೇಕು ಅಂದ್ಕೊಂಡಿದ್ದೀಯಾ..?' ಸಿಂಧು ಆತನನ್ನು ಮಾತಿಗೆಳೆದಿದ್ದಳು.
            `ಇನ್ನೂ ನಾಲ್ಕೈದು ಸಿನೆಮಾಕ್ಕೆ ಆಫರ್ ಇದೆ. ಆದರೆ ನಾನೇ ಒಪ್ಪಿಕೊಳ್ಳಲಾ, ಬೇಡವಾ ಎನ್ನೋ ಸಂದಿಗ್ಧತೆಯಲ್ಲಿದ್ದೇನೆ. ಮಲೆಯಾಳಮ್ಮಿನದ್ದು ಒಂದು. ತೆಲುಗಿನದ್ದೊಂದು. ಬಾಲಿವುಡ್ಡಿಗೆ ಹೋಗಲಾ ಅನ್ನಿಸುತ್ತಿದೆ.. ಆದರೆ ಯಾಕೋ ಸಿನಿಮಾ ಜಗತ್ತು ನನ್ನಲ್ಲಿ ಹೇಳಲಾಗದಂತಹ ಭಾವನೆಗಳನ್ನು ಮೂಡಿಸುತ್ತಿದೆ.. ಗೊಂದಲಗಳು ಕಾಡುತ್ತಿವೆ. ಮೊದಲಿನ ಏಕಾಗ್ರತೆ ಇಲ್ಲವೇ ಇಲ್ಲ ಎಂಬಂತಾಗಿದೆ,,'
            `ಹುಂ. ನಿಜ. ನನಗೂ ಅದೇ ರೀತಿ ಅನ್ನಿಸ್ತಿದೆ. ಏನೆಲ್ಲಾ ಸಾಧಿಸಿದೆನಲ್ಲ ಅಂತ ನಾನು ಹಾರಾಡಿದ್ದೂ ಜಾಸ್ತಿ ಆಯ್ತೇನೋ ಅನ್ನಿಸ್ತಿದೆ. ಅಂತ ಹೊತ್ತಿನಲ್ಲೇ ನನ್ನ ಮೇಲೆ ಏನೆಲ್ಲ ಆರೋಪಗಳು ಬಂದವು. ಹೆಸರು ಹಾಳಾಯಿತು. ಖಂಡಿತ ನೀನಿಲ್ಲದಿದ್ದರೆ ನಾನು ಏನಾಗುತ್ತಿದ್ದೆನೋ. ನನ್ನ ಪಾಲಿಗೆ ನೀನು ದೇವರಂತೆ ಬಂದೆ. ನಾನು ನಿನಗೆ ಎಷ್ಟೆಲ್ಲ ನೋವು ಕೊಟ್ಟೆ. ಆದರೂ ನೀನು ನನ್ನ ಜೊತೆ ನಿಂತೆಯಲ್ಲ. ನೀನ್ಯಾಕೆ ಇಷ್ಟೆಲ್ಲ ಒಳ್ಳೆಯವನು? ನಿನ್ನಂತಹವನನ್ನು ನಾನು ಕಳೆದುಕೊಂಡೆನಲ್ಲ ಅಂತ ಅನ್ನಿಸುತ್ತಿದೆ.  ಯಾಕೋ ನಾನು ಈ ಸಿನಿಮಾ ಜಗತ್ತನ್ನು ಬಿಟ್ಟು ಬಿಡೋಣ ಅಂದುಕೊಂಡಿದ್ದೇನೆ.. ಹಾಳೂ ಜಗತ್ತು ಅದು. ತಪ್ಪಿಲ್ಲದಿದ್ದರೂ ನನ್ನ ಹೆಸರನ್ನು ಕೆಡಿಸಿತು. ನೀನು ನನ್ನ ಪಾಲಿಗೆ ಆಪದ್ಭಾಂಧವ.. ನಿನ್ನನ್ನು ನಾನು ಹೇಗೆ ಮರೆಯಲಿ' ಎಂದು ಹೇಳಿದ ಸಿಂಧು ದಿಗಂತನ ಕೈ ಹಿಡಿದು ಹಿತವಾಗಿ ಒಂದು ಮುತ್ತು ಕೊಟ್ಟಳು. ದಿಗಂತ ಚಡಪಡಿಸಿದ.
           `ನನ್ನಲ್ಲೂ ಆ ಆಲೋಚನೆಯಿದೆ. ನಮಗೆ ಈ ಸಿನಿಮಾ ಜಗತ್ತು, ಅದರ ರಂಗು, ನಾಟಕೀಯತೆ, ಯಾರನ್ನೋ ಓಲೈಸುವುದು, ಬಣ್ಣ ಕಳಚಿದ ಮೇಲೆ ಕಾಡುವ ಏಕಾಂಗಿತನ, ಸದಾ ಕಾಡುವ ಭಯ.. ಥತ್.. ಯಾರಿಗೆ ಬೇಕಪ್ಪಾ ಈ ಬದುಕು ಎನ್ನಿಸುತ್ತಿದೆ. ನಿಜ.. ನೀನು ನನ್ನನ್ನು ಧಿಕ್ಕರಿಸಿದ್ದೆಯಲ್ಲ. ಆಗಲೇ ನಾನು ನಿನ್ನ ಕನಸಿನ ಸಿನಿಮಾ ಜಗತ್ತಿನಲ್ಲಿಯೇ ನಾನೂ ಸಾಧನೆ ಮಾಡಬೇಕು ಎಂದುಕೊಂಡೆ. ಸಾಧನೆಯನ್ನೂ ಮಾಡಿದೆ. ಆದರೆ ಸಾಧನೆ ಮಾಡಿದ ಮೇಲೆ ಏನೂ ಇಲ್ಲ ಅನ್ನಿಸ್ತಾ ಇದೆ. ಏಕಾಂಗಿತನ, ಅದೇನೋ ಖೀನ್ನತೆ ನನ್ನನ್ನು ಆವರಿಸುತ್ತಿದೆ. ಹಿಂದಿನ ಟ್ರೆಕ್ಕಿಂಗುಗಳು, ಕಾಡಿನಲ್ಲಿ ಓಡಾಟ.. ಈ ಸಂದರ್ಭಗಳಲ್ಲಿ ಇದ್ದ ಕ್ರಿಯಾಶೀಲತೆಯೆಲ್ಲ ಈಗ ಸತ್ತುಹೋಯಿತೇನೋ ಅನ್ನಿಸುತ್ತಿದೆ. ಅದಕ್ಕೇ ನಾನು ಒಂದು ನಿರ್ಧಾರಕ್ಕೆ ಬಂದಿದ್ದೀನಿ. ಇಲ್ಲೇ ಜಲಪಾತದ ಅಂಚಿನಲ್ಲೇ ಒಬ್ಬರು ಜಮೀನು ಕೊಡುತ್ತಿದ್ದಾರೆ. ಜಮೀನನ್ನು ಕೊಂಡು ಕೃಷಿಕನಾಗೋಣ ಅಂತ ನಾನು ಆಲೋಚನೆ ಮಾಡಿದ್ದೀನಿ.. ಏನಂತೀಯಾ..?'
            `ಖಂಡಿತ ಒಳ್ಳೆಯ ಆಲೋಚನೆ ನಿನ್ನದು. ನಾನೂ ಈ ನಿಟ್ಟಿನಲ್ಲಿ ಚಿಂತಿಸಿದ್ದೆ ನೋಡು.. ವೆಚ್ಚಕ್ಕೆ ಹೊನ್ನಿರಲು.. ಆಹಾ.. ಬೆಚ್ಚನೆ ಮನೆಯಿರಲು.. ಯಾಕೋ ಕಾಲೇಜು ದಿನಗಳಲ್ಲಿ ಓದಿದ್ದ ಕಗ್ಗ ನೆನಪಾಗುತ್ತಿದೆ ನೋಡು..' ಸಿಂಧು ಮೆಲ್ಲಗೆ ಉಸುರಿದ್ದಳು..
           `ಸಿಂಧು... ಒಂದು ಮಾತು ಕೇಳಲಾ..?'
           `ಏನು..?'
           `ಹೇಗೆ ಕೇಳಬೇಕು ಅಂತ ಗೊತ್ತಾಗುತ್ತಿಲ್ಲ...'
           `ಕೇಳು ಪರವಾಗಿಲ್ಲ... ಅಂತದ್ದೇನಪ್ಪಾ.. ನನ್ನ ಬಳಿ ಕೇಳುವಂತದ್ದು..' ಸಿಂಧು ಅಚ್ಚರಿಯಿಂದ ಕೇಳಿದ್ದಳು.
           `ನಮ್ಮನ್ನು ಹತ್ತಿರಕ್ಕೆ ತಂದಿದ್ದು ಈ ಟ್ರೆಕ್ಕಿಂಗು. ನಮ್ಮ ಬದುಕನ್ನು ಬದಲಾಯಿಸಿದ್ದೂ ಇದೆ. ತಿರುವು ನೀಡಿದ್ದೂ ಇದೆ. ಇದೇ ಟ್ರೆಕ್ಕಿಂಗು ಮತ್ಯಾಕೆ ನಮ್ಮ ಬದುಕಲ್ಲಿ ಇನ್ನೊಂದು ತಿರುವು ನೀಡಬಾರದು..?'
            `ಅಂದರೆ...'
            `ನೀನು ನನ್ನನ್ನೇನೋ ಧಿಕ್ಕರಿಸಿದೆ ನಿಜ. ಆದರೆ ನಿನ್ನೆಡೆಗಿನ ನನ್ನ ಭಾವನೆ ಎಂದಿಗೂ ಬದಲಾಗೋದಿಲ್ಲ. ಖಂಡಿತ ನನ್ನ ಮನಸ್ಸಿನಲ್ಲಿ ನಿನಗೊಂದು ಸ್ಥಾನವಿದೆ. ಅಂದಿಗೂ, ಇಂದಿಗೂ ಎಂದೆಂದಿಗೂ ನನ್ನ ಬದುಕು ನಿನಗಾಗಿ ಎಂದುಕೊಂಡಿದ್ದೇನೆ. ಆ ದಿನ ನಿನ್ನೆಡೆಗೆ ನನ್ನಲ್ಲಿ ಎಷ್ಟು ಪ್ರೀತಿಯಿತ್ತೋ.. ಈಗಲೂ ಅಷ್ಟೇ ಪ್ರೀತಿಯಿದೆ. ದುಪ್ಪಟ್ಟು ಹೆಚ್ಚಾಗಿದ್ದರೂ ಇರಬಹುದು. ಮತ್ತೊಮ್ಮೆ ಕೇಳುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೆ. ಪ್ರೀತಿಸುತ್ತಿದ್ದೇನೆ. ಪ್ರೀತಿಸುತ್ತಲೇ ಇರುತ್ತೇನೆ.. ನೀನೂ ನನ್ನನ್ನು...'
              `........'
              `ಬದುಕಿನಲ್ಲಿ ಒಟ್ಟಾಗಿ ಬಾಳೋಣ.. ಸಿನೆಮಾ ಲೋಕವನ್ನು ಬಿಟ್ಟು ಕೃಷಿಕರಾಗಿದ್ದುಬಿಡೋಣ. ಏನಂತೀಯಾ..?' ದಿಗಂತ ಕೇಳಿದ್ದ..
              `ಒಂದು ಮಾತು ಹೇಳಲೇ ದಿಗಿ.. ನೀನು ಆಗ ನನ್ನ ಬಳಿ ಪ್ರೇಮ ನಿವೇದನೆ ಮಾಡಿದೆ. ನಾನೇನೋ ಧಿಕ್ಕರಿಸಿದೆ. ಆಗ ನನ್ನ ಮನಸ್ಸಿನಲ್ಲಿ ಮಹತ್ವಾಕಾಂಕ್ಷೆ ಎನ್ನುವುದು ಕುಣಿದಾಡುತ್ತಿತ್ತು. ಸಿನಿಮಾ ಜಗತ್ತಿನ ರಂಗು ನನ್ನನ್ನು ಕಾಡುತ್ತಲೇ ಇತ್ತು. ನಿನ್ನೆಡೆಗೆ ಆಗ ಪ್ರೀತಿ ಇದ್ದರೂ ಕೂಡ ಸಿನಿಮಾ ರಂಗಿನ ಎದುರು ಅದು ಚಿಲ್ಲರೆಯಂತಾಗಿತ್ತು. ಆದರೆ ನಾನು ನಿನ್ನನ್ನು ಧಿಕ್ಕರಿಸಿದಾಗಲೂ ನೀನು ನನ್ನ ಬೆನ್ನಿಗೆ ನಿಂತೆಯಲ್ಲ.. ಈ ಸಂದರ್ಭದಲ್ಲಿ ನಾನು ನಿನ್ನ ಪ್ರೇಮವನ್ನು ಒಪ್ಪಿಕೊಂಡರೆ ಅದು ನನ್ನ ಸ್ವಾರ್ಥ ಅನ್ನಿಸುವುದಿಲ್ಲವಾ? ಯಾಕೋ ಬಹಳ ಚಿಕ್ಕವನಾಗಿಬಿಟ್ಟೆ ದಿಗಿ.. ಆದರೂ ಹೇಳುತ್ತೇನೆ.. ನಿನ್ನ ಸಾಂಗತ್ಯ, ಒಡನಾಟ ನನ್ನ ಬದುಕಿನಲ್ಲಿ ಮಧುರವಾದುದು. ಅದನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ.. ಜಗತ್ತು ಏನೇ ಹೇಳಲಿ... ಆಗ ಮಾಡಿದ ತಪ್ಪನ್ನ ಮತ್ತೆ ಮಾಡುವುದಿಲ್ಲ ದಿಗಿ..  ಬಾ ಹೊಸ ಬದುಕು ಬಾಳೋಣ.. ತೋಟಗಳಲ್ಲಿ... ಗದ್ದೆಗಳಲ್ಲಿ.. ಮುಖದ ಮೇಲೆ ಚಿತ್ರರಂಗದ ಬಣ್ಣ ಸಾಕು.. ಗದ್ದೆಯಲ್ಲಿನ ಅರಲು.. ಮಣ್ಣಿನ ವಾಸನೆ ಮತ್ತೆ ಮತ್ತೆ ಬೇಕು ಅನ್ನಿಸುತ್ತಿದೆ... ನಿನ್ನ ಪ್ರೀತಿ ಕೂಡ.. ..ನಿನ್ನ ಪ್ರೀತಿಗೆ ನನ್ನ ಸಮ್ಮತಿ ಇದೆ...  ಹುಂ....' ಎಂದು ಸಿಂಧು ಹೇಳಿದ ತಕ್ಷಣ ದಿಗಂತ ಆಕೆಯನ್ನು ಬಾಚಿ ತಬ್ಬಿಕೊಂಡಿದ್ದ. ಕಣ್ಣಿನಿಂದ ಆನಂದದ ಭಾಷ್ಪ ಭುವಿಗಿಳಿಯುತ್ತಿತ್ತು. ಉಂಚಳ್ಳಿಯ ಜಲಧಾರೆ ಸಾಕ್ಷಿಯಾಗಿ ನಿಂತಿತ್ತು.

**
(ಮುಗಿಯಿತು)

Monday, June 16, 2014

ಪ್ಯಾರಾ ಮಂಜಿಲ್-1 (ಕಥೆ)

              ಬಿಸಿನೆಸ್ ಹಾಗೂ ಮನೆ ಎರಡೂ ಉಪಯೋಗಕ್ಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪ್ರಶಾಂತ ಅಶ್ವಿನಿ ಸರ್ಕಲ್ಲಿನ ಆ ಹಳೆಯ ಮನೆಯನ್ನು ಹುಡುಕಿದ್ದ. ಅದೃಷ್ಟಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಕ್ಕಿತ್ತು. ನಗರದ ನಡುಮಧ್ಯದಲ್ಲಿ ಸಾವಿರ ರು. ಚಿಲ್ಲರೆಗೆ ಆ ಮನೆ ಸಿಕ್ಕಿದ್ದು ಅದೃಷ್ಟವಲ್ಲದೇ ಮತ್ತೇನಿಲ್ಲ ಎಂದುಕೊಂಡು ತನ್ನ ಉದ್ಯಮದ ಸರಂಜಾಮುಗಳನ್ನು ಆ ಮನೆಯತ್ತ ಸಾಗಿಸಿದ್ದ. ಮನೆಯ ಮುಂಭಾಗದಲ್ಲಿ ಆಫೀಸು, ಹಿಂಭಾಗ ಹಾಗೂ ಮೇಲ್ಮಹಡಿಯಲ್ಲಿ ಉಳಿದುಕೊಳ್ಳುವ ಕೋಣೆಯನ್ನಾಗಿ ಪರಿವರ್ತನೆ ಮಾಡಿದ್ದ.
              ಅದು ನನ್ನ ಕಾಲೇಜು ದಿನಗಳಾದ್ದರಿಂದ, ಮನೆಯಿಂದ ಕಾಲೇಜಿಗೆ ಬಹುದೂರವಾದ ಕಾರಣ ಪ್ರಶಾಂತ ತನ್ನ ಆ ಮನೆಯಲ್ಲಿ ಉಳಿದುಕೊಂಡು ಹೋಗು ಎಂದೂ ಹೇಳಿದ್ದ. ನನಗೂ ಅದೇ ಬೇಕಿತ್ತಾದ್ದರಿಂದ ಅಲ್ಲಿಂದ ಕಾಲೇಜಿಗೆ ಹೋಗಲು ನಿರ್ಧರಿಸಿದ್ದೆ.
              ಹಳೆಯ ಮನೆ. ಆರು ಅಡಿ ದಪ್ಪದ ಮಣ್ಣುಗೋಡೆಗಳು. ಉದ್ದನೆಯ ಮನೆಗೆ ಆರು ರೂಮುಗಳಿದ್ದವು. ಪ್ರಾರಂಭದ ದಿನಗಳಲ್ಲಿ ಈ ಮನೆಯಲ್ಲಿ ನಾನು, ಪ್ರಶಾಂತ ಹಾಗೂ ರಾಘವ ಉಳಿದುಕೊಂಡಿದ್ದೆವು. ಮೊದಲ ದಿನ ರಾಘವ ಈ ಮನೆಯನ್ನು ನೋಡಿದವನೇ `ಈ ಮನೆ ಒಂಥರಾ ವಿಚಿತ್ರವಾಗಿದೆ.. ಏನೋ ಅವ್ಯಕ್ತ ಭಯ ಕಾಡ್ತದಲ್ಲ ಮಾರಾಯಾ..' ಎಂದಿದ್ದ. ಅಷ್ಟೇ ಅಲ್ಲದೇ ಈ ಮನೆಯಲ್ಲೊಂದು ಕೋಣೆಯಿತ್ತು. ಕತ್ತಲೆಯ ಕರಿಗೂಡಿನಂತಿದ್ದ ಈ ಕೋಣೆಯನ್ನು ನೋಡಿದ ರಾಘವ ಅದಕ್ಕೆ `ನಾಗವಲ್ಲಿ ಕೋಣೆ' ಎಂದು ಹೆಸರಿಟ್ಟಿದ್ದ. ರಾಘವನಿಗೆ ಅದ್ಯಾಕೆ ಹಾಗೆ ಅನ್ನಿಸಿತೋ ಏನೋ. ನಾಗವಲ್ಲಿ ಯಾವ ಕಾರಣಕ್ಕೆ ನೆನಪಾದಳೋ. ಕತ್ತಲೆಯ ಕೂಪದಂತಿದ್ದ ಆ ರೂಮಿನಲ್ಲಿ ನಾವ್ಯಾರೂ ಉಳಿದಕೊಳ್ಳಲು ಯತ್ನಿಸಲಿಲ್ಲ. ಬದಲಾಗಿ ನಾವೆಲ್ಲ ಮಹಡಿಯಲ್ಲಿ ಠಿಕಾಣಿ ಹೂಡಿದೆವು.
              `ವಿಚಿತ್ರ ಕನಸು ಮಾರಾಯಾ.. ಯಾಕೋ ಸರಿಯಾಗಿ ನಿದ್ದೆಯೇ ಬರೋದಿಲ್ಲ.. ಸ್ವಪ್ನದಲ್ಲಿ ಏನೇನೋ ವಿಚಿತ್ರ ಘಟನೆಗಳು ಜರುಗುತ್ತವೆ..' ಎಂದು ಪ್ರಶಾಂತ ಒಮ್ಮೆ ಅಂದಾಗ ಮೊದಲ ಬಾರಿಗೆ ನನಗೆ ಈ ಮನೆ ಯಾಕೋ ನಾವು ಅಂದುಕೊಂಡಂತಿಲ್ಲ. ಏನೋ ಬೇರೆ ರೀತಿಯದ್ದಾಗಿದೆ ಅನ್ನಿಸಿತು.
               ಸುಮ್ಮನೆ ಸ್ವಪ್ನ ಬೀಳುತ್ತದೆ ಎನ್ನುವ ಕಾರಣಕ್ಕೆ ಮನೆ ಸರಿಯಿಲ್ಲ.. ಹಾಗೆ ಹೀಗೆ ಎನ್ನಲು ನನಗೆ ಸಾಧ್ಯವಾಗಲಿಲ್ಲ. ಎಲ್ಲ ಕಡೆಯೂ ಸ್ವಪ್ನ ಬೀಳುತ್ತದೆ. ಇಲ್ಲಿಯೂ ಬೀಳುತ್ತದೆ. ಅದರಲ್ಲೇನು ವಿಶೇಷ ಎಂದುಕೊಂಡಿದ್ದೆ. ಹೀಗಿದ್ದಾಗ ಗೆಳೆಯ ನಾಗರಾಜ ನಮ್ಮ ಒಡನಾಡಿಯಾಗಿ ಈ ರೂಮಿನಲ್ಲಿ ಉಳಿಯಲು ಬಂದಿದ್ದ. ಮತ್ತು ಅದೇ ದಿನಗಳಲ್ಲಿ ರಾಘವ ಬೇರೆಯ ರೂಮಿಗೆ ತೆರಳಿದ್ದ. ನಿಜಕ್ಕೂ ವಿಚಿತ್ರ ಮನೋಭಾವದವನು ನಾಗರಾಜ. ಮಧ್ಯರಾತ್ರಿಯ ಸ್ವಪ್ನಗಳಿಗೆ ಗೌರವ ಕೊಡುತ್ತಾನಾದರೂ ಶುದ್ಧ ಬೋಗಸ್ ಎನ್ನುವ ಮನಸ್ಥಿತಿಯವನು. ಮಧ್ಯರಾತ್ರಿಯಲ್ಲೆದ್ದು ಬರವಣಿಗೆಯಲ್ಲಿ ತೊಡಗಿಕೊಳ್ಳುವ ನಾಗರಾಜ ಅಪರಾತ್ರಿಯಲ್ಲಿ ಓಡಾಡುವ ದೆವ್ವಗಳಿಗೂ ತಲೆಬೇನೆಯಾಗುವಂತವನು. ಅಂತಹ ನಾಗರಾಜನಿಗೂ ಈ ಮನೆಯಲ್ಲಿ ಸ್ವಪ್ನದ ಅನುಭವಾಗತೊಡಗಿ, ಅದನ್ನು ಎಲ್ಲರ ಬಳಿಯೂ ಹೇಳಿಕೊಂಡಾಗ ನಾನು ಈ ಮನೆಯ ಬಗ್ಗೆ ಗಂಭೀರ ಆಲೋಚನೆಗೆ ತೊಡಗಿದೆ.
               ಅದೊಂದು ದಿನ ಪ್ರಶಾಂತ, ನಾಗರಾಜ ಈ ಇಬ್ಬರೂ ರಾತ್ರಿ ಮನೆಯಲ್ಲಿ ಉಳಿಯಲಿಲ್ಲ. ನಾನೊಬ್ಬನೇ ಇದ್ದೆ. ರಾತ್ರಿ ಊಟ ಮಾಡಿ ಮಲಗಿದವನಿಗೆ ಗಾಢ ನಿದ್ದೆ. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎಚ್ಚರಾಯಿತು. ದೊಡ್ಡ ಸದ್ದು. ಮನೆಯ ಹಿಂದೆ ಯಾರೋ ಒಬ್ಬರು ಇನ್ನೊಬ್ಬರಿಗೆ ಬಡಿಯುತ್ತಿದ್ದಾರೆ. ಹೊಡೆಸಿಕೊಳ್ಳುತ್ತಿದ್ದ ವ್ಯಕ್ತಿ ಜೋರಾಗಿ ಕೂಗುತ್ತಿದ್ದಾನೆ. ನಾನು ಮೊದಲಿಗೆ ಬೆಚ್ಚಿದೆ. ಆದರೆ ಸ್ವಲ್ಪ ಹೊತ್ತಿನ ನಂತರ ಭಯವನ್ನು ಬಿಟ್ಟು ಶಬ್ದ ಬಂದ ಕಡೆಗೆ ಆಲಿಸತೊಡಗಿದೆ. ಗಮನವಿಟ್ಟು ಹೇಳಿದಾಗ ಹೊಡೆಯುತ್ತಿದ್ದ ಶಬ್ದ ಅಸ್ಪಷ್ಟವಾಗಿತ್ತಾದರೂ ಅಳುವ ಶಬ್ದ ಜೋರಾಗಿ ಕೇಳುತ್ತಿತ್ತು. `ದಮ್ಮಯ್ಯ.. ನಮ್ಮನ್ನು ಬಿಟ್ಟುಬಿಡಿ... ಮಾಫ್ ಕರೋ..' ಎಂಬ ಮಾತು ಕೇಳಿಸಿತು. ಈ ಮಾತು ಕೇಳಿ ಮನಸ್ಸು ತರ್ಕಿಸಿತು. ನಮ್ಮನ್ನು ಬಿಟ್ಟುಬಿಡಿ ಎಂಬ ಶಬ್ದ ಬರುತ್ತಿದೆ ಎಂದಾದರೆ ಖಂಡಿತ ಹೊಡೆತ ತಿನ್ನುತ್ತಿರುವುದು ಒಬ್ಬರಲ್ಲ. ಒಬ್ಬರಿಗಿಂತ ಹೆಚ್ಚು. ಅಂದರೆ ಇಬ್ಬರೋ ಮೂವರೋ..
                ಇದು ಕನಸಾ..? ನನಸಾ.. ಎನ್ನುವ ಗೊಂದಲ. ನನ್ನ ಕೈಯನ್ನು ಚಿವುಟಿಕೊಂಡು ನೋಡಿದೆ. ಮತ್ತೆ ಮತ್ತೆ ಆ ಧ್ವನಿಗಳು ಕೇಳಿಸಿದವು. ಧ್ವನಿ ಕೇಳಿಸಿದ ಕಾರಣಕ್ಕೆ ಅದರ ಮೂಲವನ್ನು ಹುಡುಕಿ, ತಮ್ಮನ್ನು ಬಿಟ್ಟುಬಿಡಿ ಎಂದು ಅರಚುತ್ತಿರುವವರ ಸಹಾಯಕ್ಕೆ ಹೋಗಲು ನನಗೆ ಧೈರ್ಯ ಸಾಕಾಗಲಿಲ್ಲ. ಈ ಕುರಿತು ಮರುದಿನ ವಿಚಾರಿಸಿದರಾಯಿತು. ಆದರೆ ಈಗ ಏನೇನು ನಡೆಯುತ್ತದೆ ನೋಡೋಣ ಎಂದು ಹಾಗೆಯೇ ಉಳಿದಿದ್ದೆ. ಮತ್ತೆ ಮತ್ತೆ ಆಲಿಸುತ್ತಿದ್ದಾಗ ಇಬ್ಬರು ಅರಚುತ್ತಿರುವ ಧ್ವನಿ ಕೇಳಿಸಿತು. ಒಂದು ಗಂಡಸಿನ ಧ್ವನಿ. ಇನ್ನೊಂದು ಹೆಂಗಸಿನದು. ಆದರೆ ಅವರಿಬ್ಬರಲ್ಲಿ ಗಂಡಸಿನ ಧ್ವನಿ ಅಚ್ಚಕನ್ನಡದಲ್ಲಿದ್ದರೆ ಹೆಂಗಸಿನ ಧ್ವನಿ ಮಾತ್ರ ಬೇರೆ ತರವಾಗಿ ಕೇಳಿಸಿತು. ಹಿಂದಿ ಮಿಶ್ರಿತ ಧ್ವನಿಯಂತೆ ಅನ್ನಿಸಿತು. ನನಗೆ ಭಯದ ಬದಲು ಕುತೂಹಲವಾಗತೊಡಗಿತು. ಆ ದಿನ ಅದೇ ಕುತೂಹಲದಲ್ಲಿ ರಾತ್ರಿಯಿಡಿ ನಿದ್ದೆ ಹತ್ತಲಿಲ್ಲ. ಮರುದಿನ ಬೆಳಗಿನ ವೇಳೆಗೆ ಜಾಗರಣೆಯ ಪರಿಣಾಮ ಕಣ್ಣು ಕೆಂಪಡರಿತ್ತು.
              ಬೆಳಗಾಗೆದ್ದವನೇ ರಾತ್ರಿ ಕಂಡ ಹಾಗೂ ಕೇಳಿದ ಸಂಗತಿಯ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು. ಮನೆಯ ಆಸುಪಾಸಿನಲ್ಲಿ ಏನಾದರೂ ಆಗಿದೆಯಾ ನೋಡಬೇಕು ಎಂದು ಹೊರಟೆ. ನಾವು ಉಳಿದಕೊಂಡಿದ್ದ ಆ ಮನೆಯಲ್ಲಿ ರಾತ್ರಿ ಅನುಭವಕ್ಕೆ ಬರುವ ವಿಚಿತ್ರ ಘಟನೆಯ ಬಗ್ಗೆ ಅಕ್ಕಪಕ್ಕದವರಲ್ಲಿ ಕೇಳಿದೆ. ಆದರೆ ಅವರು ಏನೊಂದನ್ನೂ ಬಾಯಿ ಬಿಡಲಿಲ್ಲ. ನನಗೆ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿತು. ರಾತ್ರಿ ಮನೆಯ ಹಿಂದುಗಡೆಯಿಂದ ಶಬ್ದ ಬಂದಿತ್ತು. ಮನೆಯ ಹಿಂದೆ ಇರುವ ಇನ್ನೊಂದು ಮನೆಯಲ್ಲಿ ಹೋಗಿ ಈ ಕುರಿತು ಕೇಳಿದೆ. ಅದಕ್ಕೆ ಉತ್ತರ ನೀಡಿದ ಅವರು ತಮ್ಮ ಮನೆಯಲ್ಲಿ ಏನೂ ನಡೆದಿಲ್ಲ. ಬಹುಶಃ ನಿಮ್ಮ ಮನೆಯಲ್ಲೇ ಏನೋ ನಡೆದಿರಬೇಕು ನೋಡಿ. ನಾವೆಲ್ಲ ಚನ್ನಾಗಿಯೇ ಇದ್ದೇವೆ ಎಂದು ಮನೆಯೊಳಗೆಲ್ಲ ಕರೆದೊಯ್ದು ತೋರಿಸಿದರು. ಖಂಡಿತವಾಗಿಯೂ ಅವರ ಮನೆಯಲ್ಲಿ ಏನೂ ಆಗಿರಲಿಲ್ಲ. ವಾಪಾಸಾದೆ.
**
            ಮನೆ ದಿನದಿಂದ ದಿನಕ್ಕೆ ನಿಗೂಢವಾಗತೊಡಗಿತು. ವಿಚಿತ್ರ ಅನುಭವಗಳು. ಹೇಳಿಕೊಳ್ಳಲು ಅಸಾಧ್ಯವಾದದು ಎಂಬಂತೆ ಜರುಗತೊಡಗಿತು. ಮನೆಯ ಬಗ್ಗೆ ಮಾಹಿತಿ ಕಲೆ ಹಾಕೋಣ ಎಂದುಕೊಂಡರೆ ಮನೆಯ ಕುರಿತು ಯಾರೂ ಮಾಹಿತಿ ನೀಡಲಿಲ್ಲ. ನಮ್ಮೂರ ಬಳಿಯಲ್ಲಿಯೇ ಒಬ್ಬರು ಹಿರಿಯರು ಮಾತಿಗೆ ಸಿಕ್ಕಿದ್ದರು. ಅವರ ಬಳಿ ಹೀಗೇ ಮಾತನಾಡುತ್ತಿದ್ದಾಗ ನಾನು ಮನೆಯ ವಿಷಯವನ್ನು ಹೇಳಿದೆ. ತಕ್ಷಣವೇ ಈ ಮನೆಯ ಬಗ್ಗೆ ಮಾಹಿತಿ ನೀಡಬಹುದಾದ ವ್ಯಕ್ತಿಯೊಬ್ಬರ ಬಗ್ಗೆ ನನಗೆ ಹೇಳಿದರು. ಹಿರಿಯರು ಹೇಳಿದ ವ್ಯಕ್ತಿ ಯಾರಿರಬಹುದು ಎಂದುಕೊಂಡರೆ ಮನೆಯ ಮಾಲೀಕರು ಎಂದು ತಿಳಿದುಬಂದಿತು. ನಾನು ಸೀದಾ ಅವರನ್ನು ಹುಡುಕಿ ಹೊರಟೆ.
            ಅಬ್ದುಲ್ ಸಲೀಂ. ಮನೆಯ ಯಜಮಾನರು. ನಗರದ ಅದ್ಯಾವುದೋ ಮೂಲೆಯಲ್ಲಿ ಅವರ ಮನೆಯಿತ್ತು. ಸುತ್ತಿ ಬಳಸಿ ಹುಡುಕಿದ ನಂತರ ಅವರ ಮನೆ ಸಿಕ್ಕಿತು. ನಾನು ಅವರ ಬಳಿ ಅದೂ ಇದೂ ಮಾತನಾಡಿ ನಂತರ ನಿಧಾನವಾಗಿ ಮನೆಯ ವಿಷಯದ ಬಗ್ಗೆ ತಿಳಿಸಿದೆ. ರಾತ್ರಿ ನನಗಾಗುತ್ತಿದ್ದ ವಿಚಿತ್ರ ಅನುಭವದ ಬಗ್ಗೆ ಹೇಳಿದೆ. ಅಬ್ದುಲ್ ಸಲೀಂ ಏನನ್ನೂ ಹೇಳಲಿಲ್ಲ. `ಮಾಲೂಮ್ ನಹಿ..' ಎಂದು ನನ್ನನ್ನು ಸಾಗ ಹಾಕಲು ಪ್ರಯತ್ನಿಸಿದರು. ನಾನು ಪಟ್ಟು ಬಿಡಲು ಸಿದ್ಧನಿರಲಿಲ್ಲ. ಮತ್ತೆ ಮತ್ತೆ ಕೇಳಿದೆ. ಪದೇ ಪದೆ ಕಾಡಿದೆ. ಕೊನೆಗೊಮ್ಮೆ ನನ್ನ ಹಪಹಪಿಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ `ಮನೆಯ ಒಡೆಯ ನಾನು. ಆದರೆ ನನಗೆ ಮನೆಯ ಹಿನ್ನೆಲೆಯ ಬಗ್ಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದರೆ ಮನೆಯಲ್ಲಿ ಇಂತಹ ವಿಚಿತ್ರಗಳು ಜರುಗುತ್ತವೆ ಎನ್ನುವುದು ನನಗೆ ಗೊತ್ತಿತ್ತು. ಈ ಹಿಂದೆ ಮನೆಯ ಬಾಡಿಗೆಗಿದ್ದ ಹಲವರು ಹೇಳಿದ್ದರು. ಒಂದಿಬ್ಬರು ಇದರಿಂದ ಹೆದರಿ ಆಸ್ಪತ್ರೆಯನ್ನೂ ಸೇರಿದ್ದರು.  ಆದರೆ ಮನೆಯ ಕುರಿತು ಪಟ್ಟಾಗಿ ಕೇಳಲು ಬಂದಿದ್ದು ನೀವು ಮಾತ್ರ..' ಎಂದರು. ನಾನು ಹೂಂ ಅಂದೆ.
            `ಈ ಮನೆಯ ಕುರಿತು ನನಗೆ ಮಾಹಿತಿ ಕಡಿಮೆ. ನನ್ನ ಹಿರಿಯರಿಂದ ಈ ಮನೆ ನನಗೆ ಬಂದಿದೆ. ಬಾಡಿಗೆ ಕೊಡುತ್ತಿದ್ದೇನಷ್ಟೆ. ನಮ್ಮ ಮನೆಯಲ್ಲಿ ಒಬ್ಬರು ಹಿರಿಯ ಮಹಿಳೆಯಿದ್ದಾರೆ. ಫಾತಿಮಾ ಜಿ ಅಂತ. ಹತ್ತಿರ ಹತ್ತಿರ ನೂರು ವರ್ಷ ವಯಸ್ಸಾಗಿದೆ. ಅವರು ನಿಮಗೆ ಖಂಡಿತ ಮಾಹಿತಿ ನೀಡಬಲ್ಲರು.. ' ಎಂದು ತಿಳಿಸಿದ ಅಬ್ದುಲ್  ಫಾತಿಮಾ ಅವರಿದ್ದ ಜಾಗಕ್ಕೆ ನನ್ನನ್ನು ಕರೆದೊಯ್ದರು. ಮತ್ತೆ ಯಥಾಪ್ರಕಾರ ಗಲ್ಲಿ ಗಲ್ಲಿಗಳನ್ನು ದಾಟಿ, ಸುತ್ತಿ ಬಳಸಿ ಎಲ್ಲೋ ಒಂದು ಕಡೆ ಹಳೆಯ ಮನೆಗೆ ಕರೆದೊಯ್ದರು. ಅಲ್ಲೊಬ್ಬ ವಯಸ್ಸಾದ ಮಹಿಳೆಯ ಬಳಿಯಲ್ಲಿ ಅಬ್ದುಲ್ ಸಲೀಂ ಅವರು ಉರ್ದುವಿನಲ್ಲಿ ಮಾತನಾಡಿದರು. ಆರಂಭದಲ್ಲಿ ಆ ಮಹಿಳೆ ಒಪ್ಪಿದಂತೆ ಕಾಣಲಿಲ್ಲ. ಅಬ್ದುಲ್ ಅವರು ಏನೋ ವಾದ ಮಾಡಿದಂತೆ ಕಾಣಿಸಿತ್ತು. ನನಗೆ ಅರ್ಥವಾಗಲಿಲ್ಲ. ಸರಿ ಸುಮಾರು ಹೊತ್ತಿನ ನಂತರ ಫಾತಿಮಾ ನನ್ನ ಬಳಿ ಮಾತಿಗೆ ನಿಂತರು.
             ಫಾತಿಮಾ ಅವರಿಗೆ ಖಂಡಿತವಾಗಿಯೂ ನೂರು ವರ್ಷಗಳಾಗಿದ್ದವು. ಸ್ವಾತಂತ್ರ್ಯ ಪೂರ್ವದಲ್ಲಿ ಎಂದೋ ಹುಟ್ಟಿದ್ದರಿರಬೇಕು. ನಾನು ಉಭಯ ಕುಶಲೋಪರಿಗೆಂಬಂತೆ ಅವರ ವಯಸ್ಸನ್ನು ಕೇಳಿದೆ. ನೂರು ಆಗಿರಬಹುದು ಎಂದರು. ಅವರಿಗೂ ಸರಿಯಾಗಿ ನೆನಪಿರಲಿಲ್ಲ. ಅವರು ಮಾತನಾಡುತ್ತಿದ್ದ ಭಾಷೆಯೂ ಸ್ಪಷ್ಟವಾಗಿರಲಿಲ್ಲ. ಹಲ್ಲಿಲ್ಲದ ಬಾಯಿಯಲ್ಲಿ ಉರ್ದು, ಅರ್ಯಾಬಿಕ್ ಮಿಶ್ರಿತ ಕನ್ನಡದಲ್ಲಿ ಅವರು ಮಾತನಾಡುತ್ತಿದ್ದರೆ ನಾನು ಅವನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿದ್ದೆ. ಅವರು ಮಾತನಾಡಿದ್ದು ಹೀಗೆಯೇ ಇರಬೇಕು ಎನ್ನುವ ಊಹೆಯನ್ನೂ ಮಾಡಿಕೊಳ್ಳುತ್ತಿದ್ದೆ. ಹಾಗೇ ಸುಮ್ಮನೆ ಮಾತನಾಡಿದ ನಂತರ ನಾನು ಅಸಲಿ ವಿಷಯಕ್ಕೆ ಬಂದೆ.  ಅಬ್ದುಲ್ ಸಲೀಂ ಅವರಂತೆ ಆರಂಭದಲ್ಲಿ ಫಾತಿಮಾ ಅವರೂ ಕೂಡ ನನ್ನ ಕೋರಿಕೆಗೆ ಮಣಿಯಲಿಲ್ಲ. ನಾನು ಮನೆಯ ವಿಷಯವಾಗಿ ಕೇಳುತ್ತಲೇ ಇದ್ದೆ. ಅವರು ಮಾಹಿತಿಯನ್ನು ಬಿಟ್ಟುಕೊಡುತ್ತಲೇ ಇರಲಿಲ್ಲ. ಕೊನೆಗೆ ಅಬ್ದುಲ್ ಸಲೀಂ ಅವರ ಬಳಿ ಮಾಡಿದಂತೆ ಹರಪೆ ಬಿದ್ದೆ. ಕೊನೆಗೊಮ್ಮೆ ಅವರೂ ಕೂಡ ಮನೆಯ ಕುರಿತು ಹೇಳಲು ಒಪ್ಪಿಕೊಂಡರು. ಫಾತಿಮಜ್ಜಿ ಮನೆಯ ಕುರಿತು ವಿಸ್ತಾರವಾಗಿ ಹೇಳುತ್ತ ಸಾಗಿದಂತೆಲ್ಲ ನನ್ನ ಕಿವಿ ನೆಟ್ಟಗಾಯಿತು. ಮೈಮೇಲಿನ ಕೂದಲುಗಳೂ ನೇರವಾಗಿ ನಿಂತಿದ್ದವು. ತಲೆಯೆಲ್ಲ ಬಿಸಿಯಾದಂತೆ ಅನ್ನಿಸತೊಡಗಿತ್ತು. ಏನೋ ಕಳವಳ, ಯಾತನೆ, ತಳಮಳ. ಹೇಳಿಕೊಳ್ಳಲು ಅಸಾಧ್ಯ ಎನ್ನುವಂತಾಗಿದ್ದವು. ನಾನು ಉಳಿದುಕೊಂಡಿದ್ದ ಬಾಡಿಗೆ ಮನೆಯೊಳಗಣ ಇನ್ನೊಂದು ಬಾಗಿಲಿನ ಅನಾವರಣವಾಗುತ್ತಿದೆಯೇನೋ ಅನ್ನಿಸತೊಡಗಿತ್ತು.

***
(ಮುಂದುವರಿಯುತ್ತದೆ..)

ನಾವು ಹವ್ಯಕರು

(ಹವ್ಯಕರ ಜೀವನಾಧಾರ ಅಡಿಕೆ)
ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು. ಮನಸು ತೇರು ||

ಸಾಗರ, ಸಿರಸಿ ನೂರಾರ್ ಸೀಮೆ
ಉ.ಕ, ದ.ಕ ನಾನಾ ಜಮೆ
ಭಾಷೆ ಬೇರೆ, ವೇಷ ಬೇರೆ
ನಾವು ಹವ್ಯಕರು ನಾವು ಹವ್ಯಕರು ||

ತೋಟದ ಜೊತೆಗೆ ಪೌರೋಹಿತ್ಗೆ
ಪೇಟೆಲಂತೂ ಸಾಪ್ಟ್ ವೇರು
ಕೈತುಂಬ ಕೆಲಸ, ಬಾಯ್ತುಂಬಾ ಮಾತು
ನಾವು ಹವ್ಯಕರು ನಾವು ಹವ್ಯಕರು ||

ಸೊಟೈಟಿ ಸಾಲ, ತಲೆಯ ಮೇಲೆ ಶೂಲ
ಬಾಯಲ್ಲಿ ಕವಳ, ರಸಗವಳ
ಮಜ್ಜಿಗೆ ತಂಬುಳಿ, ಅಪ್ಪೆಹುಳಿ ಮೆಲ್ಲುವ
ನಾವು ಹವ್ಯಕರು ನಾವು ಹವ್ಯಕರು ||

ಯಮ್ಮೇಟಿ ಗಾಡಿ, ಅಡಿಕೆ ತೋಟ
ಮಳೆಗಾಲದಲ್ಲಿ ಕೊಳೆಯ ಕಾಟ
ಮನೆ ತುಂಬ ದನಕರು ಕಾಲ್ನಡೆ
ನಾವು ಹವ್ಯಕರು ನಾವು ಹವ್ಯಕರು ||

ಹಾಳೆಟೊಪ್ಪಿ, ಕೆಂಬಣ್ಣದ ಪಂಜಿ
ಕಟ್ ಬಾಕಿ ಸಾಲಕ್ಕೆ ಬಲು ಅಂಜಿ
ವಾರಕ್ಕೊಮ್ಮೆ ಪ್ಯಾಟೆ ಪಯಣ
ನಾವು ಹವ್ಯಕರು ನಾವು ಹವ್ಯಕರು ||


ಸತ್ಕಾರದಲ್ ಊಟ, ಮದುವೆ ಮುಂಜಿ
ಸೊಸೈಟಿಗಳಂತೂ ಬಲು ಹಿಂಜಿ
ಸಾಲಿದ್ರೂ ಸೋಲಿಲ್ಲ, ಮುಖದಲ್ಲಿ ಅಳುವಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಗುಡ್ಡದ ಬುಡದಲ್ಲಿ ಮನೆ, ಎದುರಲ್ಲಿ ತೋಟ
ಎಕರೆ, ಗುಂಟೆಯ ಜಮೀನು, ಮಂಗನ ಕಾಟ
ದುಡಿದಷ್ಟೂ ಕಡಿಮೆ, ಬೆವರಿಗೆ ಬೆಲೆಯಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಮನೆಯಲ್ಲಿಲ್ಲ ಮಕ್ಕಳು, ಊರು ಖಾಲಿ ಖಾಲಿ
ಹೆಸರಿಗೆ ಸಾಪ್ಟ್ ವೇರು, ಕೆಲಸ ಖಾಲಿಪಿಲಿ
ದೊಡ್ಡೂರಲ್ಲಿದ್ರೂ ನಮ್ಮೂರ ಮರೆತಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಹವ್ಯಕರೆಂದರೆ ಸುಮ್ಮನೆ ಅಲ್ಲ
ನಾವು ಯಾರಿಗೂ ಕಮ್ಮಿಯಿಲ್ಲ
ಸೋತುಕೊಂಡಿದ್ರೂ ತೋರಿಸ್ಕಳೋದಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

***
(ಈ ಕವಿತೆಯನ್ನು ಹವ್ಯಕರ ಬಗ್ಗೆ ಸೊಖಾ ಸುಮ್ಮನೆ ಬರೆದಿದ್ದು.. ಮುಂದಿನ ದಿನಗಳಲ್ಲಿ ಈ ಕವಿತೆಯನ್ನು ಪಾರ್ಟ್ 2, ಪಾರ್ಟ್ 3 ರೂಪದಲ್ಲಿ ಹಿಗ್ಗಿಸುವ ಆಲೋಚನೆಯಿದೆ. ಅಲ್ಲೀವರೆಗೆ ಸುಧಾರಾಣಿ ಮಾಡಿಕೊಳ್ಳತಕ್ಕದ್ದು..)
(ಈ ಕವಿತೆ ಬರೆದಿದ್ದು ಶಿರಸಿಯಲ್ಲಿ ಜೂನ್ 16, 2014ರಂದು)

Saturday, June 14, 2014

ಸೊನ್ನೆಯ ಮೂಲಕ ಚಿತ್ರಪಾಠ

(ಜಿ.ಎಂ.ಬೊಮ್ನಳ್ಳಿ)
ಸೊನ್ನೆ ಸುತ್ತುವುದರ ಮೂಲಕ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಲು ಮುಂದಾಗಿದ್ದಾರೆ ನಾಡಿನ ಹೆಸರಾಂತ ವ್ಯಂಗ್ಯಚಿತ್ರ ಕಲಾವಿದ ಜಿ. ಎಂ. ಬೊಮ್ನಳ್ಳಿಯವರು.
ನಾಡಿನಾದ್ಯಂತ ತಮ್ಮ ವ್ಯಂಗ್ಯಚಿತ್ರದ ಪಂಚಿನ ಮೂಲಕ ಮನೆಮಾತಾಗಿರುವವರು ಜಿ. ಎಂ. ಬೊಮ್ನಳ್ಳಿಯವರು. ಇವರ ವ್ಯಂಗ್ಯ ಚೊತ್ರ ಪ್ರಕಟಗೊಳ್ಳದ ಪತ್ರಿಕೆಗಳೇ ಇಲ್ಲ ಎನ್ನಬಹುದು. ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ವಿಶೇಷ ಸಂಚಿಕೆಗಳಲ್ಲೆಲ್ಲ ಜಿ. ಎಂ. ಬೊಮ್ನಳ್ಳಿಯವರ ವ್ಯಂಗ್ಯಚಿತ್ರ ಇರಲೇಬೇಕು. ಕನ್ನಡ ದಿನಪತ್ರಿಕೆಗಳಲ್ಲದೇ ಮರಾಠಿ, ಹಿಂದಿ, ಇಂಗ್ಲೀಷ್ ಭಾಷೆಯ ಪತ್ರಿಕೆಗಳಲ್ಲಿಯೂ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿವೆ.
ಕೃಷಿ ಹಾಗೂ ಪರಿಸರದ ಕುರಿತು ವ್ಯಂಗ್ಯ ಚಿತ್ರಗಳನ್ನು ಬಿಡಿಸುವ ನಾಡಿನ ಏಕೈಕ ವ್ಯಂಗ್ಯಚಿತ್ರ ಕಲಾವಿದ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡವರು ಜಿ. ಎಂ. ಬೊಮ್ನಳ್ಳಿಯವರು. ತಮ್ಮ ಕುಂಚದ ಪಂಚಿನ ಮೂಲಕ ರಾಜಕಾರಣಿಗಳ, ಹಾದಿ ತಪ್ಪುತ್ತಿರುವ ಸಮಾಜದ ಕಿವಿ ಹಿಂಡಿದವರು ಇವರು. ಒಮ್ಮೆ ಕುಂಚವನ್ನು ಹಿಡಿದರೆಂದರೆ ಸಾಲು ಸಾಲು ಚಿತ್ರಗಳು, ವ್ಯಂಗ್ಯ ಚಿತ್ರಗಳು ಸರಸರನೆ ರೂಪವನ್ನು ಪಡೆದುಕೊಳ್ಳುತ್ತವೆ. ಬಿಡುವಿನ ಸಮಯದಲ್ಲಿ ವಿವಿಧ ಶಾಲೆಗಳಲ್ಲಿಯೂ ಚಿತ್ರಕಲೆಯನ್ನು ಕಲಿಸುವ ಜಿ. ಎಂ. ಬೊಮ್ನಳ್ಳಿಯವರು ಇದೀಗ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಲು `ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ' ಎನ್ನುವ ವಿನೂತನ ಪುಸ್ತಕವೊಂದನ್ನು ಹೊರತರುತ್ತಿದ್ದಾರೆ.
ರಾಜ್ಯ ಸರ್ಕಾರ ಮಕ್ಕಳಲ್ಲಿನ ಸೃಜನಶೀಲತೆಯನ್ನು ಬೆಳಕಿಗೆ ತರಲು ಇನ್ನಿಲ್ಲದ ಪ್ರಯತ್ನವನ್ನು ಪಡುತ್ತಿದೆ. ಕಲಿ ನಲಿ, ನಲಿ ಕಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳ ಮನಸ್ಸಿನೊಳಗೆ ಸುಪ್ತವಾಗಿದ್ದ ಪ್ರತಿಭೆ ಅನಾವರಣಕ್ಕೆ ವೇದಿಕೆಯನ್ನೂ ಕಲ್ಪಿಸಿದೆ. ಚಿತ್ರಕಲೆ ಮಕ್ಕಳ ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವ ಪ್ರಮುಖ ಮಾರ್ಗ. ವಿಜ್ಞಾನಗಳಂತಹ ಪ್ರಮುಖ ವಿಷಯಗಳಲ್ಲಿ ಚಿತ್ರ ಬಿಡಿಸುವುದಕ್ಕಾಗಿಯೇ ಅಂಕಗಳನ್ನು ನಿಗದಿಪಡಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಸುಲಭವಾಗಿ ಕಲಿಯಲು ಅನುಕೂಲವಾಗುವಂತೆ ಜಿ. ಎಂ. ಬೊಮ್ನಳ್ಳಿಯವರು ಸೊನ್ನೆಯನ್ನು ಸುತ್ತಿ ನಂತರ ಅದರ ಮೂಲಕ ವಿವಿಧ ಚಿತ್ರಗಳನ್ನು ಬಿಡಿಸಲು ಸುಲಭವಾಗುವಂತೆ ಪುಸ್ತಕವೊಂದನ್ನು ಹೊರತರುತ್ತಿದ್ದಾರೆ.
ಸೊನ್ನೆಯ ಮೂಲಕ ಗಣಪ, ಹಕ್ಕಿ, ಚಿತ್ರ, ಪ್ರಾಣಿಗಳು, ಆನೆ, ಮನುಷ್ಯನ ಮುಖ, ಹೂವು, ಹಣ್ಣು ಹೀಗೆ ನೂರಾರು ಬಗೆಯ ಚಿತ್ರಗಳನ್ನು ರಚಿಸಲು ಸಾಧ್ಯವಿದೆ ಎಂದು ಪುಸ್ತಕದ ಮೂಲಕ ಜಿ. ಎಂ. ಬೊಮ್ನಳ್ಳಿ ತೋರಿಸಿಕೊಡಲು ಹೊರಟಿದ್ದಾರೆ. ಸೊನ್ನೆಯನ್ನು ಬಳಸಿ ನೂರೈವತ್ತಕ್ಕೂ ಹೆಚ್ಚಿನ ಬಗೆಯ ಚಿತ್ರಗಳನ್ನು ಜಿ. ಎಂ. ಬೊಮ್ನಳ್ಳಿ ಬಿಡಿಸಿ ತೋರಿಸಿದ್ದಾರೆ. ಒಂದು ಸೊನ್ನೆ ಎಷ್ಟೆಲ್ಲ ಚಿತ್ರಗಳಿಗೆ ಕಾರಣವಾಗಬಲ್ಲದು ಎನ್ನುವುದನ್ನು ಜಿ. ಎಂ. ಬೊಮ್ನಳ್ಳಿ ಪುಸ್ತಕದಲ್ಲಿ ತೋರಿಸಿದ್ದಾರೆ.
ಜಿ. ಎಂ. ಬೊಮ್ನಳ್ಳಿ ಅವರು ವೃತ್ತಿಯಿಂದ ಕೃಷಿಕರು. ವ್ಯಂಗ್ಯಚಿತ್ರ ರಚನೆ ಅವರ ಹವ್ಯಾಸ. ವ್ಯಂಗ್ಯಚಿತ್ರದ ಜೊತೆಗೆ ಇತರ ಬಗೆಯ ಚಿತ್ರಗಳನ್ನೂ ರಚಿಸುಲ್ಲಿಯೂ ಬೊಮ್ನಳ್ಳಿಯವರು ಸಿದ್ಧಹಸ್ತರು. ಕಳೆದ ಎರಡು ದಶಕಗಳಿಂದ ಇವರು ಬಿಡಿಸಿದ ಚಿತ್ರಗಳು ರಾಜ್ಯ ಹೊರರಾಜ್ಯಗಳ ಪತ್ರಿಕೆಗಳ ಪುಟಗಳನ್ನಲಂಕರಿಸಿವೆ. ಅದೆಷ್ಟೋ ಜನರು ಇವರ ವ್ಯಂಗ್ಯಚಿತ್ರಗಳನ್ನು ಮಿಸ್ ಮಾಡಿಕೊಂಡವರಿದ್ದಾರೆ. ದಿನಬೆಳಗಾದರೆ ಬೊಮ್ನಳ್ಳಿಯವರ ಕಾರ್ಟೂನುಗಳಿಗಾಗಿ ಕಾದು ಕುಳಿತವರಿದ್ದಾರೆ. ಇಂತಹ ಕಲಾವಿದರು ಇದೀಗ ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ ಪುಸ್ತಕದ ಮೂಲಕ ಮಕ್ಕಳ ಪ್ರತಿಭೆ ಬೆಳವಣಿಗೆಗೆ ಕಾರಣರಾಗುತ್ತಿದ್ದಾರೆ.
ಇವರ ಈ ಪುಸ್ತಕ ಇದೀಗ ಬಿಡುಗಡೆಯ ಹಂತದಲ್ಲಿದೆ. 50 ಪುಟಗಳ ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ ಪುಸ್ತಕಕ್ಕೆ 40 ರು. ಬೆಲೆಯಿದೆ. ಆದರೆ ಮಕ್ಕಳ ಬದುಕು ರೂಪುಗೊಳ್ಳಲು ನೆರವಾಗಲಿ ಎನ್ನುವ ದೃಷ್ಟಿಯಿಂದ ಲಾಭ-ನಷ್ಟದ ಗೋಜಿಗೆ ಹೋಗದೇ 30 ರು.ಗೆ ಕೊಡುತ್ತೇನೆ ಎಂದು ಬೊಮ್ನಳ್ಳಿಯವರು ಹೇಳುತ್ತಾರೆ. ಸೊನ್ನೆಯ ಮೂಲಕ ಚಿತ್ರವನ್ನು ಬಿಡಿಸುತ್ತ ಸಾಗಿದಂತೆ ಮಕ್ಕಳ ಅಕ್ಷರ ಸುಂದರಾವಗುತ್ತದೆ. ಜೊತೆ ಜೊತೆಯಲ್ಲಿಯೇ ಏಕಾಗ್ರತೆಯೂ ಮೂಡುತ್ತದೆ. ಚಿತ್ರಗಳಿಗೆ ಬಣ್ಣಗಳನ್ನು ತುಂಬಿದರಂತೂ ಮಕ್ಕಳ ಮನಸ್ಸಿನೊಳಗಿನ ಭಾವನೆಗಳಿ ಜೀವತಳೆದಂತಾಗುತ್ತವೆ. ಶಿಕ್ಷಣ ಇಲಾಖೆ ಇಂತಹ ಕಲಾವಿದರ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ.
ಮಕ್ಕಳ ಪ್ರತಿಭೆ ಅನಾವರಣ ಹಾಗೂ ಅವರ ಬೌದ್ಧಿಕ ಮಟ್ಟ ವಿಕಾಸವಾಗಲು ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಏನೆಲ್ಲ ಕಸರತ್ತನ್ನು ಮಾಡಿ ಹೊಸ ಹೊಸ ಶಿಕ್ಷಣ ವಿಧಾನಗಳನ್ನು ಪರಿಚಯಿಸುತ್ತಿದೆ. ಜಿ. ಎಂ. ಬೊಮ್ನಳ್ಳಿಯವರ ಈ ಪ್ರಯತ್ನ ಸರಳವೂ, ಉತ್ತಮವಾದುದೂ ಆಗಿದೆ. ಸುಲಭವಾಗಿ ಕಲಿಯಬಹುದಾದದ್ದು. ಶಿಕ್ಷಣ ಇಲಾಖೆ ಇಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಪಠ್ಯದಲ್ಲಿ ಸೇರ್ಪಡೆಗೊಳಿಸಿದರೆ ಮಕ್ಕಳ ಬದುಕಿಗೆ ಇನ್ನಷ್ಟು ಸಹಕಾರಿಯಾಗಲಿದೆ.
ಜಿ. ಎಂ. ಬೊಮ್ನಳ್ಳಿ ಅವರನ್ನು ಸಂಪರ್ಕಿಸಬಹುದಾದರೆ : 9480789702
**
ಸೊನ್ನೆ ಹಲವು ಸಾಧ್ಯತೆಗಳ ಪ್ರತೀಕ. ಸೊನ್ನೆಯ ಮೂಲಕ ಚಿತ್ರ ಬಿಡಿಸುವುದನ್ನು ಕಲಿಯುವುದು ಸುಲಭ. ಸೊನ್ನೆಯಿಂದ ಯಾವುದೇ ಆಕಾರವನ್ನೂ ರಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸೊನ್ನೆ ಬಿಡಿಸಿರಿ ಚಿತ್ರ ಕಲಿಯಿರಿ ಮಕ್ಕಳಿಗೆ ಬಹಳಷ್ಟು ಸಹಕಾರಿಯಾಗಲಿದೆ. ಮಕ್ಕಳ ವಿಕಾಸಕ್ಕೆ ನನ್ನದೊಂದು ಚಿಕ್ಕ ಪ್ರಯತ್ನ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿಯ ಸಹಕಾರ, ಸಹಾಯವನ್ನು ಮಾಡುತ್ತದೆ ಎನ್ನುವುದೂ ಬಹಳ ಮುಖ್ಯ.
ಜಿ. ಎಂ. ಬೊಮ್ನಳ್ಳಿ
****

(ಈ ವರದಿ ಜೂ.14ರ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ)

ಹಲಸೆಂಬ ಕಲ್ಪವೃಕ್ಷ

ಹಸಿದು ಹಲಸು ಉಂಡು ಮಾವು ತಿನ್ನಬೇಕು ಎನ್ನುವ ನಾಣ್ಣುಡಿ ಚಾಲ್ತಿಯಲ್ಲಿದೆ. ಅರ್ಥಾತ್ ಹಸಿವಾಗಿದ್ದಾಗ ಹಲಸಿನ ಹಣ್ಣನ್ನು ತಿನ್ನಬೇಕು, ಊಟವಾದ ನಂತರ ಮಾವಿನ ಹಣ್ಣನ್ನು ತಿನ್ನಬೇಕು ಎನ್ನುವ ಹಿರಿಯರ ನಾಣ್ಣುಡಿ ಅರ್ಥಪೂರ್ಣವಾಗಿದೆ.
ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಕಲ್ಪವೃಕ್ಷದ ಸಾಲಿನಲ್ಲಿ ನಿಲ್ಲುವ ಇನ್ನೊಂದು ವೃಕ್ಷವೆಂದರೆ ಅದು ಹಲಸು. ಬೇರಿನಿಂದ ಹಿಡಿದು ಎಲೆಯ ತುದಿಯವರೆಗೂ ಹಲಸು ಮನುಷ್ಯನಿಗೆ ಬಳಕೆಗೆ ಬೇಕೇ ಬೇಕು. ಹಲಸಿನ ಚಿಕ್ಕ ಮಿಡಿಯಿಂದ ಹಣ್ಣಿನವರೆಗೂ ವಿವಿಧ ಖಾದ್ಯಗಳಿಗಾಗಿ ಬಳಕೆ ಮಾಡಲಾಗುತ್ತದೆ. ಖಾದ್ಯಕ್ಕೆ ಬಳಕೆಯಾಗಿ, ಆದಾಯದ ಮೂಲಕ್ಕೂ ಕಾರಣವಾಗಬಲ್ಲ ಹಲಸು ಇಂದಿನ ಕಾಲದಲ್ಲಿ ಕಲ್ಪವೃಕ್ಷ ಎಂದು ಕರೆಯಬಹುದಾಗಿದೆ.
ಹಲವು ಬಹು ಉಪಯೋಗಿ. ಆದರೆ ಹಲಸಿನ ಉಪಯೋಗದ ಕುರಿತು ಹೆಚ್ಚಿನವರಿಗೆ ಸರಿಯಾದ ಮಾಹಿತಿಯೇ ಇಲ್ಲ. ಗ್ರಾಮೀಣ ಭಾಗದವರಿಗಂತೂ ಹಲಸಿನ ಮೌಲ್ಯವರ್ಧನೆ ಹಾಗೂ ಆದಾಯದ ಮೂಲವಾಗಿ ಹಲಸನ್ನು ಬಳಕೆ ಮಾಡುವುದರ ಕುರಿತು ತಿಳುವಳಿಕೆ ಕಡಿಮೆಯಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ನಗರ ಪ್ರದೇಶದಲ್ಲಿ ಹಲಸಿನ ಹಣ್ಣಿನ ಬಳಕೆ ಮಾಡುವುದಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅದನ್ನು ಹಾಳು ಮಾಡುವುದೇ ಅಧಿಕ ಎನ್ನಬಹುದು. ನಗರ ಪ್ರದೇಶಗಳಲ್ಲಿ ಹಲಸಿನ ಹಣ್ಣು ಹಾಳಾಗದಂತೆ ಬಳಕೆ ಮಾಡಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಒಂದು ಹಾಳಾದರೆ ಇನ್ನೊಂದು ಎನ್ನುವ ಭಾವನೆಯಿಂದ ಹಲಸು ಹಾಳಾಗುವುದೇ ಹೆಚ್ಚು. ಮಲೆನಾಡಿನಲ್ಲಿ ಹಲಸಿನ ಬಳಕೆಯನ್ನು ಹಲವು ವಿಧಗಳಲ್ಲಿ ಮಾಡುತ್ತಾರೆ. ಹಲಸನ್ನು ಬಹು ಉಪಯೋಗಿಯಾಗಿ ಬಳಕೆ ಮಾಡುವುದರಲ್ಲಿ ಕೇರಳಿಗರು ನಿಸ್ಸೀಮರು. ಹೊಸ ಹೊಸ ರುಚಿಯ ತಿನಿಸುಗಳು, ಖಾದ್ಯಗಳನ್ನು ತಯಾರು ಮಾಡುವ ಕೇರಳಿಗರ ಎದುರು ನಮ್ಮ ಮಲೆನಾಡಿಗರ ಜ್ಞಾನ ಕಡಿಮೆಯೇ ಎನ್ನಬಹುದು.
ಹಲಸು ಬಹುಉಪಯೋಗಿ. ಹಲಸಿನ ತೊಗಟೆಗಳು ಯಜ್ಞ ಯಾಗಾದಿಗಳಲ್ಲಿ ಬಳಕೆಯಾದರೆ ಹಲಸಿನ ಎಲೆಗಳನ್ನು ಸಮಿತ್ತುಗಳಾಗಿ ಬಳಕೆ ಮಾಡಲಾಗುತ್ತದೆ. ಮರವನ್ನು ಮನೆಗಳಲ್ಲಿ ಹೊಸ್ತಿಲಿಗೆ ಬಳಕೆ ಮಾಡುವುದರ ಜೊತೆಗೆ ಪೀಠೋಪಕರಣಗಳಿಗೆ ಉಪಯೋಗಿಸಲಾಗುತ್ತದೆ. ಹಲಸು ಮರಗಳ ಜಾತಿಯಲ್ಲೇ ಶ್ರೇಷ್ಟವಾದುದು ಎನ್ನುವ ಕಾರಣದಿಂದಾಗಿ ಪೀಠೋಪಕರಣಗಳಲ್ಲಿ ಹಲಸಿನಿಂದ ಮಾಡಿರುವುದಕ್ಕೆ ಬೆಲೆಯೂ ಹೆಚ್ಚು ಬೇಡಿಕೆಯೂ ಜಾಸ್ತಿ ಎನ್ನಬಹುದು. ಹಲಸಿನ ಹಣ್ಣು ರುಚಿಕರ. ಹಲಸಿನ ಮಿಡಿಯನ್ನು ತರಕಾರಿಯ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಹಲಸಿನ ಕಾಯಿಯನ್ನು ಚಿಪ್ಸ್, ಚಾಟ್ಸ್ ಸೇರಿದಂತೆ ಹಲವಾರು ಖಾದ್ಯಗಳ ಬಳೆಕೆಗೆ ಉಪಯೋಗಿಸಲಾಗುತ್ತದೆ. ಹಣ್ಣುಗಳ ಉಪಯೋಗ ಬಹುತೇಕರಿಗೆ ತಿಳಿದೇ ಇದೆ. ಹಲಸಿನ ಬೀಜಗಳನ್ನು ಉಪ್ಪು ಹಾಕಿ ಹುರಿದು ಹುರಿಗಡಲೆಯಂತೆ ತಿನ್ನುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಬಳಕೆಗೆ ಬಂದಿದೆ.
ಯಲ್ಲಾಪುರದ ಕೆಲವು ಭಾಗಗಳಲ್ಲಿ ವರ್ಷವೊಂದರಲ್ಲಿ ಎಂಟು ತಿಂಗಳುಗಳ ಕಾಲ ಹಲಸಿನ ಬಳಕೆ ಮಾಡುತ್ತಾರೆ. ಮಿಳ್ಳೆಯಿಂದ ಹಿಡಿದು ಹಣ್ಣಾಗಿ ಉದುರಿ ಹೋಗುವವರೆಗೂ ಪ್ರತಿದಿನ ಹಲಸಿನಿಂದ ಮಾಡಿದ ವಿವಿಧ ತಿಂಡಿಗಳನ್ನು ಈ ಭಾಗದಲ್ಲಿ ಬಳಕೆ ಮಾಡುತ್ತಾರೆ. ಶಿರಸಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲಸಿನ ಮೌಲ್ಯ ವರ್ಧನೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಕೆಲವರು ಹಲಸಿನ ಹಣ್ಣಿನ ತ್ಯಾಜ್ಯಗಳಿಂದ ಪಶು ಆಹಾರ ತಯಾರಿಕೆಯ ಪ್ರಯತ್ನಗಳನ್ನು ನಡೆಸಿದ್ದಾರೆ. ಹಲಸಿನ ಉಪ್ಪಿನಕಾಯಿ, ಹಲಸಿನ ಜ್ಯಾಂ, ಟೆಟ್ರಾ ಪ್ಯಾಕುಗಳಲ್ಲಿ ಹಲಸಿನ ಕಡುಬುಗಳನ್ನು ತುಂಬಿ ವಿದೇಶಗಳಿಗೆ ಕಳಿಸುವುದು, ವಿವಿಧ ರುಚಿಯ ಹಲಸಿನ ಕಾಯಿಯ ಚಿಪ್ಸ್, ಹಲಸಿನ ಉಪ್ಪಿಟ್ಟುಹೀಗೆ ಹಲಸನ್ನು ಎಲ್ಲ ರೀತಿಯಿಂದ ಬಳಕೆ ಮಾಡಲು ಮುಂದಾಗುತ್ತಿದ್ದಾರೆ.
ಹಾಳಾಗುವ ಹಲಸನ್ನು ಮೌಲ್ಯವರ್ಧನೆ ಮಾಡಿ ಆದಾಯದ ಮೂಲವನ್ನಾಗಿ ಮಾಡಲು ವಿಪುಲ ಅವಕಾಶವಿದೆ. ತ್ಯಾಜ್ಯವಾಗುವ ಹಲಸು ಕಾಸನ್ನು ತಂದುಕೊಡಬಲ್ಲದು. ಉಪ ಉತ್ಪನ್ನಗಳನ್ನು ತಯಾರಿಸಿ ಈ ಮೂಲಕ ಹಣಗಳಿಸಬಹುದಾಗಿದೆ. ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಗೆ ಕಳಿಸಿದರೆ ಹಾಳಾಗುವ ಹಲಸು ಆದಾಯದ ಮೂಲವಾಗಬಲ್ಲದು. ಹಲಸಿನ ಕಾಯಿ ಅಥವಾ ಹಣ್ಣನ್ನು ಹಾಳು ಮಾಡುವ ಬದಲು ಅದರ ಉಪ ಉತ್ಪನ್ನಗಳನ್ನು ತಯಾರಿಸಿದರೆ ಹಣವನ್ನು ತಂದುಕೊಡಲು ಸಾಧ್ಯವಿದೆ. ನಗರದಲ್ಲಿ ಹಲಸಿನ ಮೇಳದ ಮೂಲಕ ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳು ಅನಾವರಣಗೊಳ್ಳುತ್ತಿವೆ. ಗ್ರಾಮೀಣ ಭಾಗದ ಜನರು ಹಲಸಿನ ಮೂಲಕ ಆದಾಯ ಗಳಿಸಿಕೊಳ್ಳುವಂತಾದರೆ ಹಲಸು ಕಲ್ಪವೃಕ್ಷವಾಗುವ ದಿನಗಳು ದೂರವಿಲ್ಲ.

**
(ಈ ಬರಹ 14-06-2014ರ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ)

Thursday, June 12, 2014

ನಿನ್ನ ದೆಸೆಯಿಂದ

ನೀನೆ ನನ್ನ ಬಾಳು-ಬದುಕು
ಭಾವ ಲಹರಿ ಪ್ರತಿಬಿಂಬ
ನೀನೆ ನನ್ನ ಕನಸು-ಮನಸು
ಎದೆಯ ತುಂಬ ಸವಿಬಿಂಬ ||

ನೀನೆ ನನ್ನ ಮನದ ದುಗುಡ
ಪ್ರೀತಿ ಮನಸು ಜೇನ್ಗಡಲು
ನೀನೆ ನನ್ನ ಬಾಳ ದಡ
ತುಂಬಿ ತುಳುಕೋ ಮನದೊಡಲು ||

ನೀನೆ ನನ್ನ ಜೀವದುಸಿರು
ಬದುಕು ನೀಡ್ವ ಪ್ರಾಣ ಪಕ್ಷಿ
ನೀನೆ ನನ್ನ ಬಾಳ ಹೆಸರು
ಬಯಸಿತಲ್ಲೇ ನನ್ನ ಅಕ್ಷಿ ||

ನೀನೆ ನನ್ನ ಸವಿಯ ಪ್ರೀತಿ
ಬಾಳಿಗೊಂದು ಅರ್ಥವು
ನಿನ್ನಿಂದಲೆ ರೀತಿ ನೀತಿ
ಇರದಿರದುವೆ ವ್ಯರ್ಥವು ||

ನೀನೆ ನನ್ನ ಇಡಿಯ ವಿಶ್ವ
ಸರ್ವ ಸಕಲ ಚೇತನ
ನೀನಿಲ್ಲದೆ ನನ್ನ ಬದುಕು
ಸಾವು ಸನಿಹ ಕ್ಷಣ ಕ್ಷಣ ||

**
(ಈ ಕವಿತೆಯನ್ನು ಬರೆದಿರುವುದು 16-07-2006ರಂದು ದಂಟಕಲ್ಲಿನಲ್ಲಿ..)

Wednesday, June 11, 2014

ಒಲವ ಲತೆಗೆ ನೀರನೆರೆದ.. ಭಾಗ-3

                  ನಂತರದ ದಿನಗಳಲ್ಲಿ ಸಿಂಧು ಹಾಗೂ ದಿಗಂತ ಇಬ್ಬರ ಬಾಳಿನಲ್ಲಿಯೂ ಅನೇಕ ತಿರುವುಗಳು ಘಟಿಸಿದ್ದವು. ಬದುಕಿನಲ್ಲಿ ಇಬ್ಬರೂ ಅನೇಕ ಪಯಣಗಳನ್ನು ಕೈಗೊಳ್ಳಬೇಕಾಗಿಯೂ ಬಂದಿದ್ದವು. ಮೊದ ಮೊದಲು ಮಾಡೆಲ್ ಆಗಿ ಬೆಂಗಳೂರಿನಲ್ಲಿ ಪರಿಚಯವಾದ ಸಿಂಧು ಕೊನೆಗೊಮ್ಮೆ ಸಿನೆಮಾ ಜಗತ್ತಿಗೆ ಕಾಲಿಟ್ಟಿದ್ದಳು. ಹೆಸರಾಂತ ನಟ ಹಾಗೂ ನಿರ್ದೇಶಕರಿಬ್ಬರ ಪರಿಚಯವೂ ಆಗಿತ್ತು. ನಟನೊಂದಿಗೆ ನಟಿಸಲು ಒಪ್ಪಿದ್ದಳು. ಆಕೆ ನಟಿಸಿದ ಮೊದಲ ಚಿತ್ರವೇ ಶತದಿನವನ್ನು ಆಚರಿಸಿದ್ದರಿಂದ ಬಿಡುವಿಲ್ಲದಷ್ಟು ಅವಕಾಶಗಳು ಲಭ್ಯವಾಗಿದ್ದವು. ಕನಿಷ್ಟ ಮೂರು ವರ್ಷಗಳ ಕಾಲ ಬಿಡುವಿಲ್ಲದಂತೆ ಸಿನೆಮಾ ಜಗತ್ತನ್ನು ಆಳಿದಳು ಸಿಂಧು. ಚಿತ್ರ ಜಗತ್ತು ಆಕೆಗೆ ಅನೇಕ ಪ್ರಶಸ್ತಿಗಳನ್ನೂ, ಬಿರುದನ್ನೂ ನೀಡಿತ್ತು. ಹೆಸರು, ಅಭಿಮಾನಿಗಳನ್ನು ನೀಡಿತ್ತು.
**
                 ಸಿಂಧು ಒಂದೇ ಮಾತಿನಿಂದ ದಿಗಂತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ಉಪ್ಪರಿಗೆಯ ಮೇಲೆ ಹಾಯಾಗಿ ವಿಹಾರ ಮಾಡುತ್ತಿದ್ದವನು ಧಡಕ್ಕನೆ ಚರಂಡಿಗೆ ಬಿದ್ದಂತಹ ಆಘಾತವಾಗಿತ್ತು ದಿಗಂತನಿಗೆ. ತಾನು ನಂಬಿದ್ದ ಬದುಕು ತನ್ನನ್ನು ಅಸಹ್ಯವಾಗಿ ನೋಡುತ್ತಿದ್ದೆಯೇನೋ ಅನ್ನಿಸಿತ್ತು. ಮಾತಿನ ಮಹಲಿನಲ್ಲಿ ಆರಾಮಾಗಿದ್ದ ದಿಗಂತ ಇದ್ದಕ್ಕಿದ್ದಂತೆ ಮೌನದ ಕೋಟೆಯೊಳಗೆ ಸೇರಿಕೊಂಡ. ಡಿಗ್ರಿ ಮುಗಿಸುವ ವೇಳೆಗೆ ದಿಗಂತನಲ್ಲಿ ಮಾತು ಸತ್ತುಹೋಗಿದೆಯೇನೋ ಅನ್ನಿಸುವಂತಾಗಿತ್ತು. ದಿಗಂತನ ಜೊತೆಗೆ ಟ್ರೆಕ್ಕಿಂಗಿಗೆ ಹೋಗಿ ಚಾರಣ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದ ಮಿತ್ರರೆಲ್ಲ ದಿಗಂತನ ಸ್ಥಿತಿಗೆ ತೀವ್ರ ಬೇಸರವನ್ನು ವ್ಯಕ್ತ ಪಡಿಸಿದ್ದರು. ಒಂದೆರಡು ವರ್ಷಗಳ ಕಾಲ ದಿಗಂತ ಮೌನಿಯಾಗಿಯೇ ಇದ್ದ. ಎಷ್ಟು ಬೇಕೋ ಅಷ್ಟು ಮಾತುಗಳು. ಮನಸ್ಸಿನಲ್ಲಿ ಯಾವಾಗಲೂ ಅದೇನೋ ಯೋಚನೆಗಳನ್ನು ಕೈಗೊಳ್ಳುತ್ತಿದ್ದಂತೆ ಅನ್ನಿಸುತ್ತಿತ್ತು.
               ಡಿಗ್ರಿ ಮುಗಿಯುತ್ತಿದ್ದಂತೆ ದಿಗಂತ ಮಾಡಿದ ಮೊದಲನೇ ಕೆಲಸವೇ ವೆಬ್ ಸೈಟ್ ಮಾಡಿದ್ದು. ವೆಬ್ ಸೈಟ್ ಮೂಲಕ ಚಾರಣದ ಎಲ್ಲ ಸಾದ್ಯತೆಗಳನ್ನೂ, ಶಿಬಿರಗಳನ್ನೂ ಕೈಗೊಂಡ. ಚಾರಣ ಆತನಿಗೆ ಹೆಸರನ್ನು ತಂದುಕೊಟ್ಟಿತು. ಚಾರಣ ಜಗತ್ತು ಎಷ್ಟು ಕಠಿಣವೋ ಆತನ ಮನಸ್ಸೂ ಕಠಿಣತೆಯ ಕಡೆಗೆ ಸಾಗಿತ್ತು. ಸಾಕಷ್ಟು ದುಡ್ಡಾದ ತಕ್ಷಣವೇ ಆತ ಬೆಂಗಳೂರಿಗೆ ಕಾಲಿರಿಸಿದ್ದ. ತನ್ನೆಲ್ಲ ಕಾಂಟ್ಯಾಕ್ಟುಗಳು, ಹೆಸರು, ಮಿತ್ರರ ಸಹಾಯದಿಂದ ಸಿಂಧುವಿಗೆ ಸೆಡ್ಡು ಹೊಡೆಯುತ್ತೇನೆ ಎಂಬಂತೆ ಸಿನೆಮಾ ಜಗತ್ತಿಗೆ ಕಾಲಿಟ್ಟುಬಿಟ್ಟಿದ್ದ.
              ದಿಗಂತನ ಸಿನೆಮಾ ಲೋಕದ ಆರಂಭ ಸಿಂಧುವಿನಂತೆ ಇರಲಿಲ್ಲ. ಗಾಡ್ ಫಾದರ್ ಇಲ್ಲದೆಯೇ ಚಿತ್ರರಂಗದಲ್ಲಿ ಕಾಲೂರುವುದು ಕಷ್ಟವೇ ಆಗಿತ್ತು. ಆರಂಭದಲ್ಲಿ ಸೈಡ್ ರೋಲುಗಳಲ್ಲಿ ನಟಿಸಿದ. ಹೀರೋನ ಜೊತೆಗೆ ಹೊಡೆದಾಡುವ ಪಾತ್ರವೋ, ಹೀರೋಗೆ ಸಹಾಯ ಮಾಡುವ ಪಾತ್ರ, ಹೀರೋನ ತಮ್ಮ, ಕಾಲೇಜಿನ ಗೆಳೆಯ, ಹೀರೋಯಿನ್ ತಮ್ಮ, ವಿಲನ್ನು, ರೌಡಿ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಆತ ನಟಿಸಿದ. ಸಿಕ್ಕ ಪಾತ್ರಗಳಲ್ಲೇ ನಟನೆಯನ್ನು ಪ್ರಚುರಪಡಿಸಿದ. ಅವಕಾಶ ಸಿಕ್ಕಾಗಲೆಲ್ಲ ಸಂಭಾಷಣೆಯನ್ನು ಬರೆಯುವುದೋ, ನಿರ್ದೇಶಕನಿಗೆ ಸಹಾಯ ಮಾಡುವುದೋ ಇತ್ಯಾದಿ ಕೆಲಸಗಳನ್ನೂ ನಿರ್ವಹಿಸಿದ. ಸಿನೆಮಾಗಳಲ್ಲಿ ನಟಿಸಿದಂತೆಲ್ಲ ಹೊಸಬರು, ಹಲವರು, ಹಿರಿಯರು ಪರಿಚಿತರಾದರು. ಯಶಸ್ಸೆಂಬುದು ಆರಂಭದ ದಿನಗಳಲ್ಲಿ ದಿಗಂತನಿಗೆ ಸುಲಭವಾಗಿ ದಕ್ಕಲೇ ಇಲ್ಲ. ಧೃತಿಗೆಡದ ದಿಗಂತ ಒಂದೊಂದೇ ಮೆಟ್ಟಿಲುಗಳನ್ನು ಕಟ್ಟುತ್ತ ಹೊರಟ. ಒಂದು ವರ್ಷದಲ್ಲಿ ಮುಖ್ಯ ಪಾತ್ರವನ್ನು ಹೊರತು ಪಡಿಸಿ ಇತರ ಪಾತ್ರಗಳಲ್ಲೆಲ್ಲ ನಟಿಸಿ ಸೈ ಎನ್ನಿಸಿಕೊಂಡ. ಸಹಾಯಕ ಪಾತ್ರಗಳಲ್ಲಿ ಒಂದೆರಡು ಪ್ರಶಸ್ತಿಗಳೂ ದಿಗಂತನನ್ನು ಅರಸಿ ಬಂದವು. ಕನ್ನಡ ಚಿತ್ರ ಜಗತ್ತು ಆತನಿಗೆ ಸಂಪೂರ್ಣವಾಗಿ ಅರ್ಥವಾಗುವ ವೇಳೆಗೆ ತಮಿಳು ಚಿತ್ರರಂಗ ದಿಗಂತನನ್ನು ಕರೆದುಬಿಟ್ಟಿತ್ತು.
            ಅಚಾನಕ್ಕಾಗಿ ಬಂದ ತಮಿಳು ಚಿತ್ರರಂಗದ ಅವಕಾಶವನ್ನು ಟಪ್ಪನೆ ಬಾಚಿಕೊಂಡಿದ್ದ ದಿಗಂತ. ಯಾವುದೋ ಕನ್ನಡ ಸಿನೆಮಾದಲ್ಲಿ ಈತನ ಅಭಿನಯವನ್ನು ನೋಡಿ ಇಷ್ಟಪಟ್ಟಿದ್ದ ಹೆಸರಾಂತ ನಿರ್ದೇಶಕರೊಬ್ಬರು ದಿಗಂತನನ್ನು ಕರೆದಿದ್ದರು. ಇಬ್ಬರು ನಾಯಕ ನಟರಿರುವ ಕಲಾತ್ಮಕ ಚಿತ್ರದಲ್ಲಿ ಅಭಿನಯಿಸುತ್ತೀಯಾ ಎಂದೂ ಕೇಳಿಬಿಟ್ಟದ್ದರು. ಮೊದಲು ಭಯವಿತ್ತಾದರೂ ದಿಗಂತ ಒಪ್ಪಿಕೊಂಡುಬಿಟ್ಟಿದ್ದ.  ಚಿತ್ರದಲ್ಲಿ ನಟಿಸಿದ್ದು ಸಾಕಷ್ಟು ಹೆಸರನ್ನು ತಂದಿತ್ತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಓಡಲಿಲ್ಲ. ಆದರೆ ದಿಗಂತನ ಹೆಸರು ಎಲ್ಲೆಡೆ ಹರಡಿತ್ತು. ಒಂದೆರಡು ಪ್ರಶಸ್ತಿಗಳೂ ಸಿಕ್ಕಿದ್ದವು.
             ಹಲವು ತಿಂಗಳುಗಳ ನಂತರ ಸಿಂಧು ದಿಗಂತನ ಹೆಸರನ್ನು ಕೇಳಿದ್ದಳು. ಕನ್ನಡ ಚಿತ್ರಗಳಲ್ಲಿ ದಿಗಂತ ನಟಿಸುತ್ತಿದ್ದನಾದರೂ ಕಾಕತಾಳೀಯವೋ ಅಥವಾ ಇನ್ಯಾವ ಕಾರಣವೋ ದಿಗಂತನ ಭೇಟಿ ಅಥವಾ ಆತನ ಕುರಿತು ಮಾಹಿತಿ ಸಿಂಧುವಿಗೆ ಸಿಕ್ಕಿರಲಿಲ್ಲ. ದಿಗಂತ ಎಂಬ ಹೆಸರನ್ನು ಕೇಳಿದ್ದಳೇನೋ ಆದರೆ ಇವನೇ ಅವನು ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿದ ದಿಗಂತ ಯಾರಿರಬಹುದೆಂದು ಆಲೋಚಿಸಿ ಮಾಹಿತಿ ಪಡೆದಾಗ ದಿಗಂತ ತನಗೆ ಪರಿಚಿತನೇ ಎಂದಾಗ ಆಕೆಯ ಮನಸ್ಸಿನ ಭಾವನೆಗಳು ಹೇಳಿಕೊಳ್ಳಲಾಗದಂತಾಗಿದ್ದವು. ಮೊದಲ ಬಾರಿಗೆ ಆಘಾತವಾಗಿತ್ತಾದರೂ ಅದನ್ನು ತೋರಿಸಿಕೊಂಡಿರಲಿಲ್ಲ.
           ದಿಗಂತನಿಗೆ ತಮಿಳು ಚಿತ್ರರಂಗದಲ್ಲಿ ಹಲವು ಅವಕಾಶಗಳು ಸಿಕ್ಕಿದ್ದವು. ನಾಯಕ ನಟನಾಗಿ ತಮಿಳು ಚಿತ್ರಂಗದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ದಿಗಂತ. ಒಂದೆರಡು ಚಿತ್ರಗಳು ಚನ್ನಾಗಿ ಓಡಿದ ಪರಿಣಾಮ ದಿಗಂತನ ಬದುಕಿನ ದಿಕ್ಕು ಬದಲಾವಣೆ ಹಾದಿಯಲ್ಲಿ ಸಾಗಲಾರಂಭಿಸಿತ್ತು. ಪಕ್ಕದ ತೆಲುಗು ಚಿತ್ರರಂಗವೂ ಆತನನ್ನು ಕರೆದಿತ್ತು. ಅಳೆದು ತೂಗಿ ಅಲ್ಲಿಯೂ ನಟನೆ ಮಾಡಿದ್ದ. ಒಂದೆರಡು ಚಿತ್ರಗಳು ಅವರೇಜ್ ಆಗಿ ಗೆದ್ದಾಗ ಕನ್ನಡ ಚಿತ್ರಂರಂಗ ಈತ ತಮ್ಮವನು ಎಂದುಕೊಂಡು ಮತ್ತೆ ಕರೆದಿತ್ತು.
            ಕನ್ನಡ ಚಿತ್ರರಂಗದಿಂದ ನಾಯಕನಾಗಿ ನಟಿಸಲು ಆಹ್ವಾನ ಬಂದಾಗ ಸಾಕಷ್ಟು ಬಾರಿ ಆಲೋಚನೆ ಮಾಡಿದ್ದ ದಿಗಂತ. ಕಥೆ, ನಿರ್ದೇಶಕ, ನಾಯಕಿಯ ಬಗ್ಗೆ ಆಲೋಚಿಸಿದ್ದ. ಯಾರೋ ಹೊಸ ನಿರ್ದೇಶಕರಿದ್ದರು. ಕಥೆ ಮಾತ್ರ ಬಹಳ ಚನ್ನಾಗಿತ್ತು. ನಾಯಕಿಯೂ ಯಾರೋ ಹೊಸಬರಿದ್ದರು. ಒಪ್ಪಿಕೊಂಡು ನಟಿಸಿದ್ದ. ಚಿತ್ರ ಚನ್ನಾಗಿ ಓಡಿತ್ತು. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದ ದಿಗಂತ. ನಂತರ ಹಲವು ಚಿತ್ರಗಳಲ್ಲಿ ನಟಿಸಿದ ದಿಗಂತ ಮುಂದೊಮ್ಮೆ ನಿರ್ದೇಶಕನಾಗಿಯೂ ಹೆಸರು ಮಾಡಿದ. ಹೀಗಿದ್ದಾಗಲೇ ಸಿಂಧುವಿನ ಕುರಿತು ಕೇಳಿಬಂದ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತ್ತು. ದಿಗಂತ ಆಘಾತವನ್ನು ಹೊಂದಿದ್ದ.
***
           ಸಿಂಧುವಿಗೆ ನಿರ್ದೇಶಕನ ಜೊತೆಗೆ ಸಂಬಂಧವಿದೆ ಎಂದು ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ದಪ್ಪಕ್ಷರದಲ್ಲಿ ಮುದ್ರಿಸಿತ್ತು. ಅದೇ ವಿಷಯವನ್ನು ಎರಡು-ಮೂರು ವಾರಗಳ ಕಾಲ ಸರಣಿ ಸರಣಿಯಾಗಿ ಬರೆದಿತ್ತು. ಅಷ್ಟಕ್ಕೆ ಸಾಲದೆಂಬಂತೆ ಒಂದೆರಡು ವಾಹಿನಿಗಳೂ ಮೂರ್ನಾಲ್ಕು ದಿನಗಳ ಕಾಲ ಇದೇ ವಿಷಯವನ್ನು ಜಗ್ಯಾಡಿ ಜಗ್ಯಾಡಿ ಪ್ರಸಾರ ಮಾಡಿದ್ದವು. ಪ್ಯಾನಲ್ ಚರ್ಚೆಯೂ ನಡೆದಿತ್ತು. ಸಿಂಧು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸರಣಿ ಸರಣಿಯಾಗಿ ಪ್ರಸಾರ ಮಾಡುತ್ತಿದ್ದ ಮಾಧ್ಯಮ ಜಗತ್ತು ಒಮದು ಕಡೆಯಾಗಿದ್ದರೆ ಇನ್ನೊಂದು ಕಡೆಯಲ್ಲಿ ಈಕೆ ಮಾನಸಿಕವಾಗಿ ಕೆಳಕ್ಕಿಳಿಯುತ್ತ ಹೋಗಿದ್ದಳು. ಸಾಲದೆಂಬಂತೆ ಒಮದೆರಡು ಸಂಘಟನೆಗಳು ಪ್ರತಿಭಟನೆಯನ್ನೂ ಕೈಗೊಂಡಿದ್ದವು.
           ದಿಗಂತನಿಗೆ ವಿಷಯ ಗೊತ್ತಾದಾಗ ಕುದ್ದು ಹೋಗಿದ್ದ. ಎಷ್ಟೇ ಹೆಸರು ಗಳಿಸಿದ್ದರೂ ಸಿಂಧು ತೀರಾ ನೈತಿಕ ಅಧಃಪತನಕ್ಕೆ ಇಳಿಯಲಾರಳು ಎಂಬ ಆತ್ಮವಿಶ್ವಾಸ ದಿಗಂತನದ್ದಾಗಿತ್ತು. ನಿರ್ದೇಶಕನ ಜೊತೆಗೆ ಸಿಂಧುವಿಗೆ ಸಂಬಂಧವಿದೆ ಎನ್ನುವುದು ಖಂಡಿತ ಸತ್ಯ ಸುದ್ದಿಯಲ್ಲ. ಇದು ಸುಳ್ಳು ಸುದ್ದೇ ಇರಬೇಕು, ತೇಜೋವಧೆ ಮಾಡಲು ಮಾಡಿರಬೇಕು ಎಂದುಕೊಂಡ ದಿಗಂತ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಸಿಂಧುವಿಗೆ ಪೋನ್ ಮಾಡಲು ಯತ್ನಿಸಿದ.
           ತನ್ನ ವಿರುದ್ಧ ಬಿತ್ತರಗೊಳ್ಳುತ್ತಿರುವ ಸುದ್ದಿ ಸುಳ್ಳು ಎಂದು ಎಷ್ಟೋ ಸಾರಿ ಸಿಂಧು ಹೇಳಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈಕೆಯ ತೇಜೋವಧೆಯನ್ನೇ ಪರಮಗುರಿಯಾಗಿರಿಸಿಕೊಂಡಿದ್ದವರು ಅದನ್ನು ಸಾಧಿಸುವಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದರು. ಮಾನಸಿಕ ಆಘಾತದ ಪರಿಣಾಮ ಸಿಂಧು ಯಾರನ್ನೂ ನಂಬಬಾರದು ಎನ್ನುವಂತಹ ಸ್ಥಿತಿ ತಲುಪಿದ್ದಳು. ಹೀಗಿದ್ದಾಗಲೇ ದಿಗಂತ ಪೋನ್ ಮಾಡಿದ್ದ. ಪೋನೆತ್ತಿಕೊಂಡವಳಿಗೆ ಅಚ್ಚರಿಯಾಗಿತ್ತು. ದಿಗಂತ ಆಕೆಗೆ ಸಾಂತ್ವನ ಹೇಳಿದ್ದ. ಹಲವು ವರ್ಷಗಳ ನಂತರ ಆಕೆಗೆ ಏನೋ ನೆಮ್ಮದಿ, ಸಮಾಧಾನ ಸಿಕ್ಕಂತಾಗಿತ್ತು. ದಿಗಂತ ಆಕೆಯ ಬೆನ್ನಿಗೆ ನಿಲ್ಲಲು ಮುಂದಾಗಿದ್ದ. ಆಕೆಯ ಪರವಾಗಿ ಪದೇ ಪದೆ ಹೇಳಿಕೆಗಳನ್ನು ನೀಡಿದ ನಂತರವೇ ಆಕೆಯ ವಿರುದ್ಧ ಅಪಪ್ರಚಾರ ನಿಂತಿತ್ತು. ಆದರೆ ಸಿಂಧು ಮಾನಸಿಕವಾಗಿ ಜರ್ಝರಿತಳಾಗಿದ್ದಳು. ಅವಳನ್ನು ಮಾನಸಿಕವಾಗಿ ಮೊದಲಿನ ಸ್ಥಿತಿಗೆ ತರಬೇಕಾದ ಪ್ರಮುಖ ಗುರಿ ದಿಗಂತನ ಎದುರಿಗಿತ್ತು..

(ಮುಂದುವರಿಯುತ್ತದೆ...)

Monday, June 9, 2014

ಮುಖಿ...

ಜೀವನ್ಮುಖಿ...
ಸಪ್ತ ಶರಧಿಯನ್ನೂ, ಶರ
ಬಂಧನವನ್ನೂ ದಾಟುವಾ...

ಪ್ರೇಮಮುಖಿ...
ಹೊಸದೊಂದು ಕಾವ್ಯಕಟ್ಟಿ
ಹೊಸ ಲೋಕ ಕಟ್ಟುವಾ...

ಸಖಿ...
ಭಾವ ಸಾಗರದೊಳಗೆ
ಬಾಳುವಾ, ಗೆದ್ದು ಮರಳುವಾ...

ಅಗ್ನಿಶಿಖಿ...
ಒಡಲೊಳಗಿನ ಬಿಸಿ ಆರಿ
ಒಮ್ಮೆ ತಂಪಾಗುವಾ...

ಮುಖಿ...
ಬಾಳುವಾ, ಬಾಳೊಳು
ಸುಖ, ದುಃಖ ಅರಿಯುವಾ...

ಸಾರ್ಥಕ್ಯವೆಂಬ ಅರ್ಥ 
ಹುಡುಕುವಾ...

***
(ಈ ಕವಿತೆಯನ್ನು ಬರೆದಿರುವುದು ಶಿರಸಿಯಲ್ಲಿ 06.03.2007ರಂದು)
(ಈ ಕವಿತೆ ಎಂ.ಇ.ಎಸ್. ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 2007-08ರ ವಾರ್ಷಿಕ ಸಂಚಿಕೆ ಮಯೂರದಲ್ಲಿ ಪ್ರಕಟವಾಗಿದೆ..)

Sunday, June 8, 2014

ಬೆಂಗಾಲಿ ಸುಂದರಿ -14


                 ಬೆಂಗಾಲಿ ಸೀರೆಯ ಸುಂದರಿಯಾಗಿ ಆಗಮಿಸಿದ್ದ ಮಧುಮಿತಾ ವಿನಯಚಂದ್ರನ ಮಾತನ್ನು ಕದ್ದೇ ಬಿಟ್ಟಿದ್ದಳು. ಆಕೆಯ ಸೌಂದರ್ಯವನ್ನು ವೀಕ್ಷಿಸುವಲ್ಲಿಯೇ ವಿನಯಚಂದ್ರ ಮೌನಿಯಾಗಿಬಿಟ್ಟಿದ್ದ. ಅಪರೂಪಕ್ಕೆಂಬಂತೆ ಆತನ ಮನಸ್ಸು ಮತ್ತೊಮ್ಮೆ ಬಾವುಕತೆಯ ಪರೀಧಿಯೊಳಗೆ ನುಗ್ಗಿಬಿಟ್ಟಿತ್ತು. ಸಮಯಸಿಕ್ಕರೆ ಆತ ಕವಿತೆಯನ್ನು ಬರೆದು ಮುಗಿಸುತ್ತಿದ್ದನೇನೋ. ಆಗಲೆ ಪದಗಳನ್ನು ಮನಸ್ಸು ಪೊಣಿಸಲು ಶುರುಮಾಡಿತ್ತು.
ಕಾಡುವೆಯಲ್ಲೇ ಬಂಗಾಳದ ಬೆಡಗಿ..
ನನ್ನ ಪ್ರೀತಿಯ ಹುಡುಗಿ..
ಮಾತು ಬೇಡವೇ ಕಥೆಯು ಬೇಡವೆ
ಎದೆ ನಿಂತಿದೆ ಗುಡುಗಿ...
ಎಂದೇನೋ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ಆಕೆ ಹಾಯ್ ಎಂದಿದ್ದಳು. ಈತ ಮುಗುಳ್ನಕ್ಕಿದ್ದ. ಮನಸ್ಸು ಹೂವಾಗಿತ್ತು.
               ಮುಂದಿನ ಹಲವು ಕ್ಷಣಗಳನ್ನು ವಿನಯಚಂದ್ರ ಹಾಗೂ ಮಧುಮಿತಾ ರೋಮಾಂಚನದಿಂದ ಕಳೆದರು. ಆಕೆ ಹೇಳುತ್ತಾಳೆಂದು ಆತ.. ಆತನೇ ಹೇಳುತ್ತಾನೆಂದು ಆಕೆ.. ಇಬ್ಬರೂ ಏನೊಂದನ್ನೂ ಹೇಳಲಿಲ್ಲ. ಆರಂಭದ ಕೆಲವು ಕ್ಷಣಗಳು ಮೌನ ಮೆರೆದು ನಿಂತಿತು. ಪರಸ್ಪರರು ಮಾತನ್ನು ಆರಂಭಿಸುತ್ತಿದ್ದರಾದರೂ ಮುಂದುವರಿಯದೇ ಹಳಿತಪ್ಪಿ ಇನ್ಯಾವುದೋ ವಿಷಯದ ಕಡೆಗೆ ಹರಿಯುತ್ತಿದ್ದವು. ಕೊನೆಗೊಮ್ಮೆ ವಿನಯಚಂದ್ರ ಧೈರ್ಯಮಾಡಿ ತನ್ನ ಮನದ ವಿಷಯವನ್ನು ಆಕೆಯ ಬಳಿ ಹೇಳಿಯೇಬಿಟ್ಟ. `ನಾ ನಿನ್ನ ಪ್ರೀತಿಸುತ್ತಿದ್ದೇನೆ..' ಎಂದವನು ಆಕೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೋ ಎಂದುಕೊಂಡು ಕಾದ.
                ಸಿಟ್ಟಾದರೆ ಏನು ಮಾಡುವುದು ಎಂದು ಮಧುಮಿತಾಳ ಕಣ್ಣೊಟವನ್ನು ತಪ್ಪಿಸಿದ. ಯಾವುದೇ ರೀತಿಯ ಪ್ರತಿಕ್ರಿಯೆಗೆ ಸಿದ್ಧವಾಗಿರಬೇಕಲ್ಲ ಎಂದುಕೊಂಡ. ಆಕೆ ಮಾತಾಡಲಿಲ್ಲ. ವಿನಯಚಂದ್ರನ ಡುಗುಡ ಹೆಚ್ಚಾಯಿತು. ಆದರೆ ಆಕೆ ಮುಗುಳ್ನಕ್ಕಳು. ವಿನಯಚಂದ್ರ ಅರ್ಥವಾಗದವನಂತೆ ನೋಡಿದ. ಕೆಲವು ಕ್ಷಣಗಳನ್ನು ಆಕೆ ಸುಮ್ಮನೇ ಕಾದಳು. ಅದೇನೋ ಆಲೋಚನೆ ಮಾಡುವಂತೆ ನಟಿಸಿದಳು. ವಿನಯಚಂದ್ರ ಕಾದ ಕಬ್ಬಿಣದ ಬಾಣಲೆಯ ಮೇಲೆ ಕುಳಿತಂತೆ ಚಡಪಡಿಸತೊಡಗಿದ್ದ. ಆಕೆ  ಮತ್ತೊಮ್ಮೆ ನಕ್ಕು ಸ್ಪಷ್ಟವಾಗಿ ಹುಂ ಅಂದಳು. ಏನು ಎಂಬಂತೆ ನೋಡಿದ ವಿನಯಚಂದ್ರ. ಏ ಹೋಗೋ.. ಅಷ್ಟೂ ಗೊತ್ತಾಗಲ್ವಾ ನಿಂಗೆ.. ಎನ್ನುವಂತೆ ಮುಖ ಮಾಡಿದ ಮಧುಮಿತಾ ವಿನಯಚಂದ್ರನನ್ನು ಒಮ್ಮೆ ಹಿತವಾಗಿ ದೂಡಿದಳು. ವಿನಯಚಂದ್ರನಿಗೆ ಮನಸ್ಸೊಮ್ಮೆ ಹೂವಾಯಿತು. ಆಕಾಶವೇ ಕೈಗೆ ಸಿಕ್ಕಂತೆ ಅನುಭವವಾಯಿತು. ತನ್ನ ಪ್ರೇಮ ನಿವೇದನೆಯನ್ನು ಒಂದೇ ಘಳಿಗೆಯಲ್ಲಿ ಅವಳು ಒಪ್ಪುಕೊಳ್ಳುತ್ತಾಳೆ ಎಂದುಕೊಂಡಿರಲಿಲ್ಲ ಆತ. ಆಕೆ ಒಪ್ಪಿದ್ದು ಆತನಿಗೆ ಅಚ್ಚರಿಯ ಜೊತೆಗೆ ಸಂತೋಷವನ್ನು ನೀಡಿತ್ತು. ಮತ್ತೆ ವಿನಯಚಂದ್ರ ಮೌನಿಯಾಗಿದ್ದ. ಏನು ಹೇಳಬೇಕೋ ಗೊತ್ತಾಗದೇ ಸುಮ್ಮನೇ ಉಳಿದಿದ್ದ. ಸುಮ್ಮನೆ ಆಕೆಯ ಕೈ ಹಿಡಿದು ಕೈಮೇಲೆ ಹೂ ಮುತ್ತೊಂದನ್ನು ನೀಡಿಬಿಟ್ಟಿದ್ದ. ಮುಖವನ್ನು ಹತ್ತಿರಕ್ಕೆ ಎಳೆದು ಹಣೆಗೊಂದು ಮುತ್ತನ್ನು ಕೊಟ್ಟು ಸದಾಕಾಲ ನಿನ್ನ ಜೊತೆಗೆ ಇರುತ್ತೇನೆ ಎಂದು ಪಿಸುಗುಟ್ಟಿದ. ಹನಿಗೂಡಿದ ಕಣ್ಣಿನೊಂದಿಗೆ ನಸುನಾಚಿದಳು ಮಧುಮಿತಾ.
               ಹಲವು ಗಂಟೆಗಳ ಬಳಿಕ ರೂಮಿಗೆ ಮರಳಿದ್ದ ವಿನಯಚಂದ್ರನನ್ನು ಸೂರ್ಯನ್ ಎದುರುಗೊಂಡವನೇ ಏನಾಯ್ತೆಂದು ಕೇಳಿದ. ಅದಕ್ಕೆ ವಿನಯಚಂದ್ರ ನಡೆದಿದ್ದೆಲ್ಲವನ್ನೂ ಹೇಳಿದ. ಸುದ್ದಿ ಕೇಳಿವ ಸೂರ್ಯನ್ ವಿನಯಚಂದ್ರನಷ್ಟೇ ಸಂತಸ ಪಟ್ಟಿದ್ದ. ವಿನಯಚಂದ್ರನಿಗೆ ಕಂಗ್ರಾಟ್ಸ್ ಹೇಳಿದ್ದ. ಆ ದಿನ ವಿನಯಚಂದ್ರನಿಗೆ ಕನಸಿನಲ್ಲಿ ನಡೆದಂತೆ ಆಗಿತ್ತು. ಸಂತಸದ ಅಣೆಕಟ್ಟೆ ಒಡೆದು ಹೋಗಿ ಎಲ್ಲೆಡೆ ಚಿಮ್ಮಿದೆಯೇನೋ ಎಂಬಂತಾಗಿತ್ತು.

****

              ಮರುದಿನ ಮತ್ತೊಂದು ಕಬ್ಬಡ್ಡಿ ಪಂದ್ಯವಿತ್ತು. ಎರಡು ಪಂದ್ಯಗಳು ನೇರವಾಗಿ ಜರುಗುವುದಿತ್ತು. ಮೊದಲ ಪಂದ್ಯ ದಕ್ಷಿಣ ಕೋರಿಯಾದ ವಿರುದ್ಧವಿದ್ದರೆ ಎರಡನೇ ಪಂದ್ಯ ಥೈಲ್ಯಾಂಡ್ ವಿರುದ್ಧ ನಡೆಯಲಿದ್ದವು. ಈ ಎರಡೂ ತಂಡಗಳು ಅಷ್ಟೇನೂ ಪ್ರಬಲ ತಂಡಗಳಾಗಿರದ ಕಾರಣ ಭಾರತದ ಕಬ್ಬಡ್ಡಿ ತಂಡದವರು ಚಿಂತಿಸಬೇಕಾದ ಪರಿಸ್ಥಿತಿಯಿರಲಿಲ್ಲ. ಆದರೆ ಕೋಚ್ ಜಾಧವ್ ಮಾತ್ರ ಯಾವುದೇ ಕಾರಣಕ್ಕೂ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಬಾರದು. ಎದುರು ಆಡುತ್ತಿರುವ ತಂಡ ನಮಗಿಂತ ಭಲಿಷ್ಟವಾಗಿದೆ. ಆದರೂ ಅದನ್ನು ಸೋಲಿಸಿಯೇ ಸೋಲಿಸುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿರಬೇಕು ಎಂದು ಹೇಳಿಬಿಟ್ಟಿದ್ದರು. ನ್ಯೂಝಿಲ್ಯಾಂಡ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ನಡೆದಿದ್ದ ತಪ್ಪುಗಳು ಮರುಕಳಿಸಬಾರದು ಎಂದೂ ತಾಕೀತು ಮಾಡಿದ್ದರು.
             ಮಧುಮಿತಾ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದ ಕಾರಣ ವಿನಯಚಂದ್ರ ಸ್ವರ್ಗದಲ್ಲಿ ವಿಹಾರ ಮಾಡುತ್ತಿದ್ದೇನೇನೋ ಎಂದುಕೊಂಡಿದ್ದ. ಹುರುಪಾಗಿದ್ದ. ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಉತ್ತಮ ಸಾಧನೆಯನ್ನು ಮಾಡುತ್ತೇನೆ ಎನ್ನುವ ವಿಶ್ವಾಸ ಆತನದ್ದಾಗಿತ್ತು. ದಕ್ಷಿಣ ಕೋರಿಯ ತಂಡದ ವಿರುದ್ಧ ಪಂದ್ಯ ಆರಂಭವಾಗಿಯೇ ಬಿಟ್ಟಿತು. ಕೋಚ್ ಜಾಧವ್ ಅವರು ಈ ಸಾರಿ ವಿನಯಚಂದ್ರನನ್ನು ಮೊದಲಿನ ಪಂದ್ಯದಂತೆಯೇ ಆರಂಭದಲ್ಲಿ ಆಡಲು ಬಿಡಲಿಲ್ಲ. ವಿನಯಚಂದ್ರ ಉತ್ತಮ ಕ್ಯಾಚರ್ ಆಗಿರುವ ಕಾರಣ ತಂಡಕ್ಕೆ ಸಂದಿಗ್ಧ ಸಮಸ್ಯೆ ಎದುರಾದರೆ ಉಪಯೋಗಿಸಬೇಕೆಂದು ನಿರ್ಧರಿಸಿದ್ದರು. ಪಂದ್ಯ ಆರಂಭವಾಗಿಯೇ ಬಿಟ್ಟತು.
           ಚೀನಾದ ಒಡಲಿನಲ್ಲಿಯೇ ಇರುವ ದಕ್ಷಿಣ ಕೋರಿಯಾದ ಆಟಗಾರರು ಕುಳ್ಳರು. ಚಿಕ್ಕ ಕಣ್ಣು. ಆದರೆ ದಷ್ಟಪುಷ್ಟವಾಗಿದ್ದರು. ಇವರನ್ನು ಅಂಗಣದಲ್ಲಿ ಕ್ಯಾಚ್ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುಳ್ಳಗಿದ್ದ ಕಾರಣ ಹೇಗೆ ಹಿಡಿದರೂ ಪುಸಕ್ಕನೆ ತಪ್ಪಿಸಿಕೊಂಡು ಹೋಗಬಲ್ಲ ಛಾತಿಯನ್ನು ಹೊಂದಿದ್ದರು. ನಂಬರ್ 1 ಟೀಂ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿತ್ತು. ತಂಡದ ರೈಡರ್ ಗಳು ಅತ್ಯುತ್ತಮವಾದ ರೀತಿಯಲ್ಲಿ ಬಲಿಯನ್ನು ಪಡೆದು ಮರಳುತ್ತಿದ್ದರು. ಆದರೆ ಕ್ಯಾಚಿಂಗ್ ಸಮಯದಲ್ಲಿಯೇ ಒಂದೆರಡು ಕ್ಯಾಚ್ ಗಳು ವಿಫಲವಾಗಿದ್ದವು.  ಜಾಧವ್ ಅವರು ಥಟ್ಟನೆ ಜಾಗೃತರಾಗಿ ತಂಡ ಟೈಮೌಟ್ ಪಡೆಯುವಂತೆ ನೋಡಿಕೊಂಡರು. ಅಷ್ಟರಲ್ಲಿ ತಂಡ 10-4ರಿಂದ ಭಾರತ ತಂಡ ಮುನ್ನಡೆ ಸಾಧಿಸಿತ್ತು. ಟೈಂಔಟ್ ಮುಗಿಯುವ ವೇಳಗೆ ವಿನಯಚಂದ್ರನನ್ನು ಅಂಗಣಕ್ಕಿಳಿಸಿದರು ಜಾಧವ್. ಅಂಗಣ ಪ್ರವೇಶಿಸುವ ಮುನ್ನ `ವಿನಯಚಂದ್ರ ಬಿ. ಕೇರ್ ಪುಲ್. ಗಡಬಡಿ ಮಾಡಬೇಡಿ. ಸಿಕ್ಕ ಅವಕಾಶ ಮಿಸ್ ಆಗುವುದೂ ಬೇಡ. ಇವತ್ತಿನ ದಿನ ನಿಮ್ಮದಾಗಬೇಕು ವಿನಯ್ ಆಲ್ ದಿ ಬೆಸ್ಟ್..' ಎಂದಿದ್ದರು. ವಿನಯಚಂದ್ರ ಮೈದಾನದ ಸುತ್ತ ಮಧುಮಿತಾಳಿಗಾಗಿ ನೋಡಿದ. ಯಾವುದೋ ಒಂದು ಭಾಗದಲ್ಲಿ ಕುಳಿತು ಚಪ್ಪಾಳೆ ತಟ್ಟುತ್ತಾ ಆಲ್ ದಿ ಬೆಸ್ಟ್ ಎಂದಿದ್ದಳು. ವಿನಯಚಂದ್ರನ ಹುರುಪು ಇಮ್ಮಡಿಸಿತ್ತು.
            ವಿನಯಚಂದ್ರ ಅಂಗಣಕ್ಕಿಳಿದ ನಂತರ ಮೊದಲಿಗೆ ವಿಶೇಷವೇನೂ ನಡೆದಿರಲಿಲ್ಲ. ತಂಡದ ರೈಡರ್ ಗಳು ಯಥಾಪ್ರಕಾರ ಅಂಕಗಳನ್ನು ಗಳಿಸಿಕೊಂಡು ಮರಳುತ್ತಲೇ ಇದ್ದರು. ವಿನಯಚಂದ್ರ ಉತ್ತಮ ಕ್ಯಾಚರ್ ಎಂಬುದು ತಂಡದ ಆಟಗಾರರಿಗೆ ಗೊತ್ತಾಗಿದ್ದ ಕಾರಣ ಆತನಿಗೆ ಅಂಗಣದಲ್ಲಿ ವಿಶೇಷ ಸ್ಥಾನ ಸಿಕ್ಕಿತ್ತು. ಅಪ್ಪಿತಪ್ಪಿ ಯಾವುದೇ ಸಂದರ್ಭದಲ್ಲಿಯೂ ಪ್ರಮಾದವಾಗಿ ವಿನಯಚಂದ್ರ ಔಟಾಗಿ ಆತನ ಅಂಕ ಕಳೆದುಹೋಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರನ ಮೇಲೆ ದಾಳಿ ಮಾಡುವುದನ್ನು ತಪ್ಪಿಸುತ್ತಿದ್ದರು.
           ಒಬ್ಬ ದಕ್ಷಿಣ ಕೋರಿಯನ್ ಆಟಗಾರ ರೈಡ್ ಮಾಡುತ್ತ ಬಂದ. ಭಾರತದ ಪಾಯಿಂಟು ಜಾಸ್ತಿಯಿದ್ದ ಕಾರಣ ಆಗಲೇ ತಂಡ ಟೈಂಪಾಸ್ ಶುರುಮಾಡಿಕೊಂಡಿತ್ತು. ಆ ಆಟಗಾರ ಹೇಗಾದರೂ ಮಾಡಿ ಭಾರತೀಯ ಆಟಗಾರರನ್ನು ಔಟ್ ಮಾಡಬೇಕು ಎಂದುಕೊಂಡು ಪದೇ ಪದೆ ದಾಳಿಗೆ ಯತ್ನಿಸುತ್ತಿದ್ದ. ಭಾರತ ತಂಡ ಈತನ ರೈಡಿಂಗಿನಲ್ಲಿಯೇ ನಾಲ್ಕು ಅಂಕಗಳನ್ನು ಕಳೆದುಕೊಂಡಿತ್ತು. ದೃಢಕಾಯನಾಗಿ, ಕುಳ್ಳಗಿದ್ದ ಈತನನ್ನು ಹಿಡಿಯಲು ಭಾರತೀಯ ಆಟಗಾರರು ಯತ್ನಿಸಿ ಸೋತಿದ್ದರು. ಈತನನ್ನು ಹಿಡಿದರೆ ರಪ್ಪನೆ ಜಿಗಿದೋ ಅಥವಾ ಪುಸಕ್ಕನೆ ಜಾರಿಯೋ ತಪ್ಪಿಸಿಕೊಂಡು ಔಟ್ ಮಾಡುತ್ತಿದ್ದ. ಈ ಸಾರಿ ಹಿಡಿಯಬೇಕೆಂಬ ಜಿದ್ದು ಎಲ್ಲರಲ್ಲಿಯೂ ಮೂಡಿತ್ತು. ವಿನಯಚಂದ್ರ ಮಧ್ಯದಲ್ಲಿದ್ದ. ಎದುರಾಳಿ ತಂಡಕ್ಕೆ ವಿನಯಚಂದ್ರ ಸಾಮಾನ್ಯ ಆಟಗಾರನಿರಬೇಕು, ಅಂತಹ ಕ್ಯಾಚರ್ ಅಲ್ಲ ಎಂದು ಬಿಂಬಿಸುವ ಯತ್ನವನ್ನು ಭಾರತೀಯ ಆಟಗಾರರು ಮಾಡಿ ಯಾಮಾರಿಸುವಲ್ಲಿ ಸಫಲರಾಗಿದ್ದರು.
            ಆಟದಲ್ಲಿ ಮಾನಸಿಕವಾಗಿ ಗೆಲ್ಲುವುದು ಮೊದಲ ತಂತ್ರವಾಗಿರುತ್ತದೆ. ಎದುರಾಳಿಯ ಮನದಲ್ಲಿ ಬೇರೆಯದೇ ಆದ ಅಂಶವನ್ನು ಹುಟ್ಟುಹಾಕಿ ಅಚ್ಚರಿಯನ್ನು ನೀಡಿ ಗಲಿಬಿಲಿಗೊಳಿಸಿ ಎದುರಾಳಿಯ ಸೋಲಿಗೆ ಕಾರಣವಾಗುವುದು ಪ್ರಮುಖ ಅಂಶವಾಗುತ್ತದೆ. ಇಂತದ್ದನ್ನು ಮೂಡಿಸುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದರು. ಮಧ್ಯದಲ್ಲಿದ್ದ ವಿನಯಚಂದ್ರ ರೈಡಿಂಗಿಗೆ ಬಂದಿದ್ದ ದಕ್ಷಿಣ ಕೋರಿಯನ್ ಆಟಗಾರನ ಕಾಲನ್ನು ರಪ್ಪನೆ ಹಿಡಿದಿದ್ದ. ಎಷ್ಟು ವೇಗವಾಗಿ ಕ್ಯಾಚ್ ಮಾಡಿದ್ದನೆಂದರೆ ಕ್ಷಣಾರ್ಧದಲ್ಲಿ ಎದುರಾಳಿ ಆಟಗಾರ ಗಲಿಬಿಲಿಯಾಗಿದ್ದ. ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆಗಾಗಲೇ ವಿನಯಚಂದ್ರ ಆತನ ಕಾಲನ್ನು ತಿರುಪಿ ನೆಲಕ್ಕೆ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಅಷ್ಟರಲ್ಲಿ ಭಾರತೀಯ ಆಟಗಾರರು ಮುಗಿಬಿದ್ದಿದ್ದರು. ಒಂದಂಕ ಸುಲಭವಾಗಿ ಸಿಕ್ಕಿತ್ತಷ್ಟೇ ಅಲ್ಲ, ವಿನಯಚಂದ್ರ ಅದ್ಭುತ ಕ್ಯಾಚರ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು. ಇದು ಆತನ ಎರಡನೇ ಕ್ಯಾಚ್ ಕೂಡ ಆಗಿತ್ತು.
            ಪಂದ್ಯದುದ್ದಕ್ಕೂ ವಿನಯಚಂದ್ರ ಸಂಪೂರ್ಣವಾಗಿ ಮಿಂಚಿದ. ಇನ್ನೂ ಎಂಟು ಕ್ಯಾಚುಗಳನ್ನು ಹಿಡಿದ ವಿನಯಚಂದ್ರ ರೈಡಿಂಗಿನಲ್ಲಿಯೂ ಮೂರು ಅಂಕಗಳನ್ನು ಗಳಿಸಿಕೊಂಡು ಬಂದಿದ್ದ. ಪಂದ್ಯದಲ್ಲಿ ಭಾರತ ತಂಡ 30-8 ಅಂಕಗಳಿಂದ ದಕ್ಷಿಣ ಕೋರಿಯಾವನ್ನು ಸೆದೆಬಡಿದಿತ್ತು. ಪಂದ್ಯ ಸಂಪೂರ್ಣವಾಗಿ ವಿನಯಚಂದ್ರನಿಂದಲೇ ಭಾರತ ಗೆದ್ದಿದೆ ಎನ್ನುವಂತಾಗಿತ್ತು. ಎಲ್ಲ ವಿಭಾಗದಲ್ಲಿಯೂ ಮಿಂಚಿನ ಆಟವನ್ನಾಡಿದ ವಿನಯಚಂದ್ರ ಪಂದ್ಯದ ಅತ್ಯುತ್ತಮ ಕ್ಯಾಚರ್ ಹಾಗೂ ಅತ್ಯುತ್ತಮ ಆಟಗಾರ ಈ ಎರಡೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ. ಮುಂದಿನ ಪಂದ್ಯ ಥೈಲ್ಯಾಂಡಿನ ವಿರುದ್ಧವಿತ್ತು. ಅಲ್ಲಿಯೂ ಭಾರತ ದಿಗ್ವಿಜಯ ಹೊಂದಿತು. 36-5 ಅಂಕಗಳೊಂದಿಗೆ ಥೈಲ್ಯಾಂಡನ್ನು ಸೋಲಿಸಿದ ತಂಡದಲ್ಲಿ ವಿನಯಚಂದ್ರ ಮತ್ತೊಮ್ಮೆ ಅದ್ಭುತ ಕ್ಯಾಚರ್ ಆಗಿ ಹೊರಹೊಮ್ಮಿದ್ದ. ವಿನಯಚಂದ್ರನಿಗೆ ತನ್ನ ಆಟ ಬಹಳ ಖುಷಿ ನೀಡಿತ್ತು. ವಿನಯಚಂದ್ರ ನೀಡಿದ ಪ್ರದರ್ಶನ ಭಾರತದ ಆಟಗಾರರಿಗೆ ಅಚ್ಚರಿ, ಸಂತೋಷವನ್ನು ಒಟ್ಟೊಟ್ಟಿಗೆ ನೀಡಿತ್ತು. ಜಾಧವ್ ಅವರಂತೂ ವಿನಯಚಂದ್ರನನ್ನು ಮೆಚ್ಚುಗೆಯಿಂದ ನೋಡಿದ್ದರು. ವಿನಯಚಂದ್ರ ಮಾತ್ರ ಮಧುಮಿತಾ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿರುವುದೇ ತನ್ನ ಈ ಆಟಕ್ಕೆ ಕಾರಣ ಎಂದುಕೊಂಡಿದ್ದ. ಸೂರ್ಯನ್ ಕೂಡ ಹೀಗೆ ಛೇಡಿಸಿದಾಗ `ಇರಬಹುದೇನೋ..' ಎಂದು ಸುಮ್ಮನಾಗಿದ್ದ..
           ನಿಧಾನವಾಗಿ ವಿಶ್ವಕಪ್ ರಂಗೇರುತ್ತಿತ್ತು. ಎ. ಗುಂಪಿನಿಂದ ಭಾರತ ಮೂರು ಪಂದ್ಯಗಳನ್ನಾಡಿ ಮೂರರಲ್ಲೂ ಗೆದ್ದು ಅಜೇಯವಾಗಿ ಉಳಿದಿತ್ತು. ಅಷ್ಟೇ ಅಲ್ಲದೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಪಾಕಿಸ್ತಾನ ನಂತರದ ಸ್ಥಾನದಲ್ಲಿತ್ತು. ಬಿ. ಗುಂಪಿನಲ್ಲಿ ಬಾಂಗ್ಲಾದೇಶ ಸಹ ಮೂರು ಪಂದ್ಯಗಳನ್ನಾಡಿ ಮೂರರಲ್ಲಿಯೂ ಗೆದ್ದು ಅಗ್ರಸ್ಥಾನಿಯಾಗಿ ಮುನ್ನಡೆದಿತ್ತು. ಮುಂದಿನ ಪಂದ್ಯಗಳು ಕಠಿಣವಾಗಲಿದ್ದವು. ವಿನಯಚಂದ್ರ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನದಿಂದ ಕಬ್ಬಡ್ಡಿ ವಿಶ್ವಕಪ್ ನ ಹೊಸ ಪ್ರತಿಭೆ ಹಾಗೂ ವಿಶೇಷ ಆಟಗಾರ ಎನ್ನುವ ಬಿರುದನ್ನೂ ಗಳಿಸಿಕೊಂಡಿದ್ದ. ಕಬ್ಬಡ್ಡಿ ಆಟಗಾರರು ಈತನ ಆಟವನ್ನು ಗಮನಿಸಲು ಆರಂಭಿಸಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಐದನೇ ಆಟಗಾರನಾಗಿದ್ದ. ಮೊದಲೆರಡು ಸ್ಥಾನಗಳಲ್ಲಿ ಬಾಂಗ್ಲಾದೇಶದ ಆಟಗಾರರಿದ್ದರೆ ಮೂರನೇ ಸ್ಥಾನದಲ್ಲಿ ಭಾರತೀಯ ಆಟಗಾರ, ನಾಲ್ಕನೆಯ ಸ್ಥಾನದಲ್ಲಿ ಪಾಕಿಸ್ತಾನದ ಒಬ್ಬ ಆಟಗಾರ ಹಾಗೂ ಐದನೆಯ ಸ್ಥಾನದಲ್ಲಿ ವಿನಯಚಂದ್ರ ಇದ್ದ. ಜಾಧವ್ ಸರ್ ಅವರು ವಿನಯಚಂದ್ರನ ಆಟದ ಮೇಲೆ ಹೆಚ್ಚಿನ ಒತ್ತನ್ನು ನೀಡಿದ್ದರು. ತಾಲೀಮು ಜೋರಾಗಿತ್ತು. ಬಿಡುವಿಗೆ ಆಸ್ಪದವಿಲ್ಲದಂತೆ ತರಬೇತಿಯನ್ನು ಕೈಗೊಳ್ಳಲಾಗುತ್ತಿತ್ತು. ವಿಶ್ವಕಪ್ ಕಬ್ಬಡ್ಡಿ ರಂಗೇರುತ್ತಿತ್ತು.

(ಮುಂದುವರಿಯುತ್ತದೆ.)

Saturday, June 7, 2014

ಜ್ವಾಲಾಮುಖಿ

ನನ್ನೆದೆಯಾಂತರಾಳದಲ್ಲಿದೆ
ಒಂದು ಜ್ವಾಲಾಮುಖಿ
ಅದು ಅಂತರ್ಮುಖಿ ಜೊತೆಗೆ ಅಗ್ನಿಶಿಖಿ.
ಎಂದೋ ಸಿಡಿಯಲು ಕಾತರಿಸಿ
ಕಾಪಿಡಿದು, ಲಾವಾಗಳೊಂದಿಗೆ ಕಾದಿದೆ.
ಎದುರಿಸುವುದು ಹೇಗೋ, ಏನೋ
ಎದುರಿನಲ್ಲಿ ಸಿಕ್ಕುವವರಾರೋ ಗೊತ್ತಿಲ್ಲ.
ಜ್ವಾಲಾಮುಖಿ ಹುಡುಕುತ್ತಿದೆ
ಒಂದು ಮಾರ್ಗ, ಪಥ, ಹಾದಿ.
ಹಲವು ಕಾಲದ ನೋವು, ಆಕ್ರೋಶ, ಅವಮಾನ
ಅನ್ಯಾಯ, ದುಃಖಗಳ ಹೊರ ಹಾಕಲು
ಮತ್ತೆ ಸಿಡಿದು ಸುಪ್ತವಾಗಲು.

ಬಲೂನು ಗಾಳಿ ತುಂಬಿಕೊಂಡಿದೆ
ಸೂಜಿ ಚುಚ್ಚುವುದೊಂದೇ ಬಾಕಿ.!

**

(ಈ ಕವಿತೆಯನ್ನು ಬರೆದಿದ್ದು 06-04-2006ರಂದು ದಂಟಕಲ್ಲಿನಲ್ಲಿ..)

Friday, June 6, 2014

ಮೂಕ ರೋದನ

`ಬೌ... ವವ್... ಬೌ ಬೌ ಬೌ.... ಬಕ್...'
`ಅಮ್ಮಾ... ಅದೇನದು ಸದ್ದು...? ಯಾರದು..? ಯಾರೋ ಕೂಗುತ್ತಿದ್ದಾರೆ' ಹುಟ್ಟಿ ಹದಿನೈದು ದಿನವೂ ಆಗಿರದಿದ್ದ ಮರಿ ತಾಯಿಯನ್ನು ಕೇಳಿತು.
`ಹಾಗೆ ಕೂಗುತ್ತಿರುವುದು ನಾಯಿ ಮಗು. ಮನುಷ್ಯರು ಅದನ್ನು ಸಾಕುತ್ತಾರೆ.. ಅದಕ್ಕೆಲ್ಲೋ ಮರದ ಮೇಲೆ ಇರುವ ನಾವು ಕಾಣಿಸಿರಬೇಕು..' ತಾಯಿ ಉತ್ತರ ನೀಡಿತು.
`ಅಮ್ಮ ಮನುಷ್ಯರೆಂದರೆ ಯಾರು..?'
`ಭೂಮಿಯ ಮೇಲೆ ಅತ್ಯಂತ ಬುದ್ದಿವಂತ ಪ್ರಾಣಿ ಎಂದು ಕರೆಸಿಕೊಳ್ಳುವುದೇ ಮನುಷ್ಯ ಮಗು. ತಾನೇ ಸ್ವತಂತ್ರ ಎಂದುಕೊಳ್ಳುವ ಮನುಷ್ಯ ಉಳಿದ ಪ್ರಾಣಿಗಳನ್ನು ತನ್ನ ಅಡಿಯಾಳಾಗಿ ಸಾಕಲು ನೋಡುತ್ತಾನೆ ಮಗು. '
`ಅವರು ನಮ್ಮನ್ನೂ ಸಾಕುತ್ತಾರಾ..?'
`ಗೊತ್ತಿಲ್ಲ ಮಗು.. ನಾವು ಯಾವತ್ತೂ ಅವರ ಕೈಗೆ ಸಿಕ್ಕಿಲ್ಲ. ಸಾಕುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಕೊಲ್ಲಲು ನೋಡುತ್ತಾರೆ ಮಗು..'
`ಯಾಕೆ ಕೊಲ್ಲುತ್ತಾರೆ..?'
`ನಾವು ಪುನುಗಿನ ಬೆಕ್ಕುಗಳು ಮಗು. ನಮ್ಮ ತುಪ್ಪಳದಲ್ಲಿನ ವಾಸನೆಗಳು ಮನುಷ್ಯನಿಗೆ ಪರಮಾಪ್ತವಂತೆ. ಆತನ ರೋಗಗಳಿಗೆ ನಮ್ಮ ಪುನುಗು ಔಷಧಿಯಾಗಿ ಬಳಕೆಯಾಗುತ್ತವಂತೆ.. ಇನ್ನೂ ಹಲವು ಸಾರಿ ಆತನ ತನ್ನ ಮೈಗೆ ಪೂಸಿಕೊಳ್ಳುವ ಸುಗಂಧ ದ್ರವ್ಯವನ್ನು ನಮ್ಮ ಪುನುಗಿನಿಂದಲೇ ತಯಾರು ಮಾಡುತ್ತಾರಂತೆ ಮಗು..'
`ಅಮ್ಮ ಮನುಷ್ಯರಿಗೆ ಪುನುಗನ್ನು ಬಿಟ್ಟರೆ ಮೈಗೆ ಪೂಸಿಕೊಳ್ಳಲು ಬೇರೆ ಸಿಗೋದೇ ಇಲ್ಲವೇ..?'
`ಸಿಗುತ್ತೆ ಮಗು.. ವಾಸನೆ ಬೀರುವ ಕೃಷ್ಣ ಮೃಗದ ಚರ್ಮ, ಗೋರೋಚನ ವಾಸನೆ ಬೀಡುವ ಆಕಳುಗಳ ಚರ್ಮ, ಬೆಕ್ಕಿನ ಮೂತ್ರಪಿಂಡ, ಕರುಳು, ಅಳಿಲಿನ ಬಣ್ಣಗಳು, ಹಾವಿನ ಚರ್ಮ, ಕಪ್ಪೆಯ ಕಾಲುಗಳು ಹೀಗೆ ಎಲ್ಲವೂ ಬೇಕು ಮಗು..'
`ಅಮ್ಮ.. ಅದೋ ಅಲ್ಲಿ ಕೆಳಗೆ ಕಾಣುತ್ತಿದೆಯಲ್ಲ.. ಅದೇನದು..?'
`ಅದು ಮನುಷ್ಯರ ಮನೆ ಮಗು.. ಅಲ್ಲಿ ಮನುಷ್ಯರು ವಾಸ ಮಾಡುತ್ತಾರೆ..'
`ಅಮ್ಮ... ಮನುಷ್ಯರು ನಮ್ಮನ್ನು ಕೊಲ್ಲುತ್ತಾರೆ ಅಂದೆ.. ಆದರೆ ನೀನ್ಯಾಕೆ ನಮ್ಮ ಮನೆಯನ್ನು ಮನುಷ್ಯರ ಮನೆಯ ಬಳಿಯಲ್ಲೇ ಮಾಡಿದ್ದೀಯಾ..?'
`ನೋಡು ಮಗು ಮನುಷ್ಯರೆಂದರೆ ಎಲ್ಲ ಪ್ರಾಣಿಗಳಿಗೂ ಭಯ. ನಾವು ಕಾಡಲ್ಲಿದ್ದರೆ ಉಳಿದ ಕಾಡು ಪ್ರಾಣಿಗಳು ನಮ್ಮನ್ನು ತಿನ್ನಬಹುದು, ಕೊಲ್ಲಬಹುದು ಎನ್ನುವ ಭಯ. ಮನುಷ್ಯನ ಮನೆಯ ಬಳಿ ನಾವು ಮನೆ ಮಾಡಿಕೊಂಡರೆ ಉಳಿದ ಪ್ರಾಣಿಗಳು ನಮ್ಮ ಬಳಿ ಬರುವುದಿಲ್ಲ. ನೋಡು ಅದೋ ಆ ಮಾವಿನ ಮರದ ಮೇಲೆ ಬೆಳ್ಳಕ್ಕಿ ಗೂಡು ಕಟ್ಟಿದೆ. ಅದೇ ಪಕ್ಕದಲ್ಲಿ ನೋಡು ಅಲ್ಲೊಂದು ಗಿಳಿ, ಮತ್ತಿ ಮರದ ಮೇಲೆ ಕೇಶಳಿಲು ಮರಿ ಮಾಡಿಕೊಂಡಿದೆ.. ಇವರೆಲ್ಲರೂ ಮನುಷ್ಯನ ಮನೆಯ ಬಳಿ ಮನೆ ಮಾಡಿಕೊಂಡು ಉಳಿದ ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುತ್ತಿವೆ..'
`ಹೌದಲ್ಲಮ್ಮಾ.. ನನಗೆ ಇವರೆಲ್ಲ ಕಾಣಿಸಿರಲೇ ಇಲ್ಲ..'
`ಅಯ್ಯೋ ಪೆದ್ದು.. ನಿನ್ನೆ ತಾನೆ ನಿನಗೆ ಕಣ್ಣು ಮೂಡಿದೆ. ಹೇಗೆ ಕಾಣಬೇಕು ಹೇಳು.. ನೀನು ಹುಟ್ಟಿ ಸರಿಯಾಗಿ ಹದಿನೈದು ದಿನಗಳಾದವು ಮಗು. ಹದಿನೈದು ದಿನದ ನಂತರ ಕಣ್ಣು ಮೂಡುತ್ತದೆ. ಇಷ್ಟಾದ ಮೇಲೆ ನೀನು ನಿಧಾನವಾಗಿ ಬೆಳೆಯಲು ಆರಂಭಿಸುತ್ತೀಯಾ.. ನಿನಗೆ ಈಗ ಕಾಣುತ್ತಿರುವುದೆಲ್ಲ ಹೊಸ ಜಗತ್ತು. ನೀನಿನ್ನೂ ತಿಳಿಯಬೇಕಾದದ್ದು ಬಹಳಷ್ಟಿದೆ ಮಗು..'
`ಅಮ್ಮಾ.. ಅದೇನೋ ಭಯಂಕರ ಸದ್ದು.. ಗುರ್ರೆನ್ನುತ್ತಿದೆ... ಪೋಂ ಪೋಂ ಅನ್ನುತ್ತಿದೆ.. ಏನದು..?'
`ಅದಾ.. ಮನುಷ್ಯರು ಬಳಸುವ ವಾಹನ ಅದು ಮಗು..'
`ಮನುಷ್ಯರು ಅದನ್ಯಾಕೆ ಬಳಕೆ ಮಾಡುತ್ತಾರೆ..?'
`ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು, ಕೆಲಸ ಮಾಡಲು ಬಳಕೆ ಮಾಡುತ್ತಾರೆ ಮಗು..'
`ನಾವೂ ಅದನ್ನು ಬಳಸಬಹುದಲ್ಲ...'
`ಅದು ಬಹಳ ದೊಡ್ಡದು..ಮಗು.. ಮನುಷ್ಯರು ಪರಮ ಆಲಸಿಗಳು. ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲು ಇಲ್ಲ ಸಲ್ಲದ ನೆಪ ಹೂಡುತ್ತಾರೆ. ಯಂತ್ರಗಳ ಸಹಾಯದಿಂದ ಮಾಡಿಕೊಳ್ಳುತ್ತಾರೆ. ಇಲ್ಲ ಸಲ್ಲದ ರೋಗ ಬಂದು ಸಾಯುತ್ತಾರೆ. ಆದರೆ ನಾವು ಹಾಗಲ್ಲ. ಈ ದಿನ ಆಹಾರ ಬೇಕು ಅಂದರೆ ಇವತ್ತು ಓಡಾಡುತ್ತೇವೆ. ತಿನ್ನುತ್ತೇವೆ ಹಾಯಾಗಿ ನಿದ್ದೆ ಮಾಡುತ್ತೇವೆ. ಮತ್ತೆ ನಾಳೆಯದ್ದು ನಾಳೆಗೆ. ನಮಗೆ ಚನ್ನಾಗಿ ನಿದ್ದೆ ಬರುತ್ತದೆ ಮಗು.. ಮನುಷ್ಯನಿಗೆ ಹಾಗಲ್ಲ..'
`ಹಾಗಾದರೆ ಮನುಷ್ಯ ನಿದ್ದೆಯನ್ನೇ ಮಾಡುವುದಿಲ್ಲವೇ..?'
`ಹಾಗೇನಿಲ್ಲ ಮಗು.. ಆದರೆ ಮನುಷ್ಯರಲ್ಲಿ ಹಲವರು ನಿದ್ದೆ ಬರದೇ ಮಾತ್ರೆಗಳನ್ನು ಸೇವಿಸುತ್ತಾರೆ ಎನ್ನುವುದನ್ನು ನಾನು ಕೇಳಿದ್ದೇನೆ. ಮಾವಿನ ಮರದಲ್ಲಿ ಗೊಳಿಯಕ್ಕ ಇದ್ದಾಳಲ್ಲ.. ಯಾವುದೋ ಕಾಳು ಎಂದು ಒಂದಿನ ಮನುಷ್ಯನ ಮನೆಯ ಬಳಿ ಇದ್ದ ಮಾತ್ರೆಯನ್ನು ತಿಂದಿದ್ದಳಂತೆ.. ಗೂಡಿಗೆ ಕಷ್ಟಪಟ್ಟು ಹಾರಿ ಬಂದು ನಿದ್ದೆ ಮಾಡಿದವಳು.. ಎರಡು ದಿನ ಎದ್ದಿರಲಿಲ್ಲ..'
`ಅಮ್ಮಾ.. ಮನುಷ್ಯರೆಂದರೆ ಎಷ್ಟು ಕ್ರೂರಿಗಳು ಅಲ್ಲವಾ..?'
`ಹೌದು ಮಗು... ಆದರೆ ನಮ್ಮ ಜೀವನ ನಡೆಯಬೇಕು ಅಂತಾದರೆ ಮನುಷ್ಯ ಹತ್ತಿರದಲ್ಲೇ ಇರಬೇಕು ನೋಡು..'
`ಅಮ್ಮಾ.. ನೀನು ಹೇಳುವುದನ್ನು ಕೇಳಿದರೆ ನನಗೆ ಭಯವಾಗುತ್ತದಲ್ಲಮ್ಮಾ.. ನನ್ನ ಬಿಟ್ಟು ಎಲ್ಲೂ ಹೋಗಬೇಡ..'
`ಇಲ್ಲ ಮಗು.. ಎಲ್ಲೂ ಹೋಗೋದಿಲ್ಲ..'

***
             ತಾಯಿ ಪುನುಗುಬೆಕ್ಕು ಹಾಗೂ ಅದರ ಮರಿ ಮಾತನಾಡಿ ಎರಡು ಮೂರು ದಿನ ಕಳೆದಿರಲಿಲ್ಲ. ಅದೊಂದು ದಿನ ಆಗ ತಾನೆ ಆಹಾರವನ್ನು ಹುಡುಕಿಕೊಂಡು ತಾಯಿಬೆಕ್ಕು ಮನೆಯತ್ತ ಬರುತ್ತಿತ್ತು. ಮನೆಗೆ ಬರುವ ದಾರಿಯೆಲ್ಲ ಯಾಕೋ ಬದಲಾದಂತೆ ಅನ್ನಿಸುತ್ತಿತ್ತು. ಸುತ್ತಮುತ್ತಲ ಮರಗಳನ್ನು ಕಡಿಯಲಾಗಿತ್ತು. `ಅಯ್ಯೋ ತನ್ನ ಮರಿ..' ಎಂದುಕೊಂಡು ಮನೆಯತ್ತ ಕುಪ್ಪಳಿಸುತ್ತ ಕುಪ್ಪಳಿಸುತ್ತ ಓಡಿ ಬಂದಿತು.
            ಯಾರೋ ಒಬ್ಬ ಮರವನ್ನು ಹತ್ತುತ್ತಿದ್ದ. ನೋಡ ನೋಡುತ್ತಿದ್ದಂತೆ ಹತ್ತಿದ. ಗೂಡಿನ ಮೇಲ್ಭಾಗದ ಕೊಂಬೆ, ರೆಂಬೆಗಳನ್ನೆಲ್ಲ ಕಡಿದ.. ಅಬ್ಬ ತನ್ನ ಮರಿ ಹಾಗೂ ಗೂಡು ಆತನ ಕಣ್ಣಿಗೆ ಕಾಣಿಸಲಿಲ್ಲವಲ್ಲ.. ದೇವರೆ.. ಎಂದು ನಿಟ್ಟುಸಿರು ಬಿಡುತ್ತಿರುವ ಹೊತ್ತಿನಲ್ಲಿಯೇ ಅಯ್ಯೋ.. ಆತನಿಗೆ ಗೂಡು ಕಂಡು ಬಿಟ್ಟಿತೇ.. ಬೇಡ ಬೇಡ.. ನನಗೊಂದೇ ಮರಿ.. ಅಯ್ಯೋ ಕೈಯಲ್ಲಿ ಹಿಡಿದೇ ಬಿಟ್ಟ.. ಮೆತ್ತಗೆ ಹಿಡಿ ಮಾರಾಯಾ.. ಪುಟ್ಟ ಮರಿ.. ದೇವರೆ.. ಹಿಡಿದವನೇ ಹೇಗೆ ಹಲ್ಲು ಕಡಿಯುತ್ತಿದ್ದಾನೆ ನೋಡು.. ಬಿಡು.. ಅಲ್ಲೇ ಬಿಡು.. ನಾನು ಕಚ್ಚಿಕೊಂಡು ದೂರಕ್ಕೆ ಹೋಗುತ್ತೇನೆ. ಇನ್ನೆಲ್ಲಾದರೂ ಮನೆ ಮಾಡಿಕೊಂಡು ಆರಾಮಾಗಿ ಇರುತ್ತೇನೆ. ನನ್ನ ಮರಿ ಇನ್ನೂ ಜಗತ್ತನ್ನು ಕಾಣುವುದು ಸಾಕಷ್ಟಿದೆ.
           ಬೇಡ.. ಬೇಡ.. ಬೇ....ಡಾ.. ಅಯ್ಯೋ ಕೆಳಕ್ಕೆ ಎಸೆದೇ ಬಿಟ್ಟ.. ಕೆಳಗಿರುವ ಇನ್ನೊಬ್ಬ ಮರಿಯನ್ನು ಹಿಡದ.. ದೇವರೆ ಮರಿಗೆ ಏನೂ ಆಗದಿರಲಿ.. ಮರದ ಮೇಲಿನಿಂದ ಹಾಗೆ ಎಸೆದರೆ ಕೈ ಕಾಲು ಮುರಿದು ಹೋದರೆ.. ಪುಟ್ಟ ಕೂಸು ಅದು.. ನಾನು ಹೇಳಿದ್ಯಾಕೆ ಈ ಮನುಷ್ಯರಿಗೆ ಅರ್ಥವಾಗುತ್ತಿಲ್ಲ..? ಬೇಡ....
           ಮರಿಯನ್ನೆಲ್ಲಿಗೋ ಒಯ್ಯುತ್ತಿದ್ದಾನಲ್ಲ.. ಅವನ ಹಾಳು ಕಣ್ಣಿಗೆ ನಾನೇ ಬೇಳಬೇಕೆ.? ನನ್ನ ಮರಿಯೇ ಕಾಣಬೇಕೆ.. ಮೊನ್ನೆಯಷ್ಟೇ ಮನುಷ್ಯನ ಬಗ್ಗೆ ಮಾತನಾಡಿಕೊಂಡಿದ್ದೆವಲ್ಲ.. ಇಷ್ಟು ಬೇಗ ಆತನಿಗೆ ನನ್ನ ಮೇಲೆ ದೃಷ್ಟಿ ಬಿದ್ದಿತಲ್ಲ.. ಛೇ..
           ಮರದಿಂದ ಮರಕ್ಕೆ ಕುಪ್ಪಳಿಸುತ್ತ, ಮರಿಯ ಹತ್ತಿರಕ್ಕೆ ಬರಲಾಗದೇ ತಾಯಿಬೆಕ್ಕು ಪರಿತಪಿಸುತ್ತಲೇ ಇತ್ತು. ಮನುಷ್ಯನಿಗೆ ಸಿಕ್ಕ ಮರಿ ಆಗಲೇ ಪ್ರಾಣವನ್ನು ಕಳೆದುಕೊಂಡಿತ್ತು. ಒಳ್ಳೆಯ ರೇಟು ಬಂದಿತು.. ಇನ್ನೂ ನಾಲ್ಕು ದಿನ ಬದುಕು ಚನ್ನಾಗಿ ಮಾಡಬಹುದು ಎನ್ನುವ ಆಲೋಚನೆಯಲ್ಲಿಯೇ ಮನುಷ್ಯ ಮರಿಯ ದೇಹವನ್ನು ಚೀಲದಲ್ಲಿ ತುಂಬಿಕೊಂಡಿದ್ದ. ಬೇಡ.. ಬಿಟ್ಟುಬಿಡಿ ಎಂದು ಕೂಗುತ್ತಿದ್ದ ಪುನುಗುಬೆಕ್ಕಿನ ಆರ್ತನಾಡ ಮನುಷ್ಯನಿಗೆ ಅರ್ಥವೇ ಆಗಲಿಲ್ಲ. ಕಿಚ ಪಿಚ ಕೂಗು ನಾಯಿಗಳ ಬೊಗಳುವಿಕೆಯಲ್ಲಿ ಕಳೆದಹೋಗಿತ್ತು. ಮಾವಿನ ಮರದಲ್ಲಿದ್ದ ಕೋಗಿಲೆ, ಮತ್ತಿ ಮರದಲ್ಲಿದ್ದ ಕೇಶಳಿಲು, ನೇರಲ ಮರದಲ್ಲಿದ್ದ ಗಿಳಿಗಳೆಲ್ಲ ಗಪ್ಪಾಗಿ ಕೂತಿದ್ದವು.. ಪುನುಗು ಬೆಕ್ಕಿಗೆ ಸಾಂತ್ವನ ಹೇಳಲೂ ಆಗದಂತೆ ಮೂಕವಾಗಿ ರೋಧಿಸುತ್ತಿದ್ದವು.

Thursday, June 5, 2014

ಒಲವ ಲತೆಗೆ ನೀರನೆರೆದ... -ಭಾಗ-2

(ಬುರುಡೆ ಜಲಪಾತ)
              ನೀರು ಮಂಜಿನಂತೆ ತಣ್ಣಗೆ ಕೊರೆಯುತ್ತಿತ್ತು. ನೀರಿಗಿಳಿದವರೆಲ್ಲ ಒಮ್ಮೆ `ಆಹಾಹ...ಓಹೋಹೋ..' ಎಂದು ಕೇಕೆ ಹೊಡೆದರು. ಅರ್ಧಗಂಟೆಯ ಕಾಲ ಅಘನಾಶಿನಿಯಲ್ಲಿ ಈಜಾಡಿ ಹಿತಾನುಭವವನ್ನು ಅನುಭವಿಸಿದರು. ತಂಡದ ನಾಯಕತ್ವದ ಹೊಣೆಗಾರಿಕೆ ಹೊತ್ತುಕೊಂಡಿದ್ದ ದಿಗಂತ ಕರಾರುವಾಕ್ಕಾಗಿ ಅರ್ಧಗಂಟೆಗೆ ತಂಡವನ್ನು ನೀರಿನಿಂದ ಎಬ್ಬಿಸಿದ್ದ. ನಂತರ ಪಯಣ ಮುಂದೆ ಸಾಗಿತ್ತು. ನದಿಯ ಅಕ್ಕಪಕ್ಕದ ಸೌಂದರ್ಯದ ಖನಿಯನ್ನು ಆಸ್ವಾದಿಸುತ್ತ, ನಿಸರ್ಗ ಸೌಂದರ್ಯವನ್ನು ಮನಸ್ಸಿನಲ್ಲಿ  ಅನುಭವಿಸುತ್ತ ಚಾರಣಿಗರ ತಂಡ ಮುಂದಡಿಯಿಟ್ಟಿತು.
              ನೆಲದ ಮೇಲೆ ನಡೆಯುವುದು ಸುಲಭ. ಆದರೆ ನದಿ ದಡದ ಮೇಲೆ ಅದರಲ್ಲಿಯೂ ನದಿ ಕಣಿವೆಯಲ್ಲಿ ನಡೆಯುವುದು ಬಹಳ ಸವಾಲಿನ ಕೆಲಸ. ಮತ್ತೊಮ್ಮೆ ಚಾರಣಿಗರ ತಂಡಕ್ಕೆ ಅದು ಅನುಭವಕ್ಕೆ ಬಂದಿತು. ಉಂಚಳ್ಳಿಯಲ್ಲಿ ಜಲಪಾತವನ್ನಿಳಿಯುವ ಅಘನಾಶಿನಿಯ ಪಾತ್ರ ಘಟ್ಟದ ಕೆಳಗೆ ತೀವ್ರ ಅಗಲವಾಗುತ್ತದೆ. ಇಲ್ಲಿ ನಡೆಯುವುದು ವಿಶಿಷ್ಟವೂ, ವಿಭಿನ್ನವೂ ಆಗಿರುತ್ತದೆ.  ನಾಲ್ಕೈದು ಕಿ.ಮಿ ದೂರ ಸಾಗಿದ ನಂತರ ಸಿದ್ದಾಪುರದ ಬೀಳಗಿ ಭಾಗದಿಂದ ಹರಿದು ಬರುವ ಅಘನಾಶಿನಿಯ ಒಡಲೊಳಗೆ ಐಕ್ಯವಾಗುವ ಉಪನದಿ ಸಿಗುತ್ತದೆ. ಅಲ್ಲಿಯತನಕ ಬಿಡುವಿಲ್ಲದೇ ನಡೆದರು. ಇಷ್ಟರಲ್ಲಾಗಲೇ ಒಂದೆರಡು ತಾಸುಗಳು ಸರಿದುಹೋಗಿದ್ದವು. ವಿಶ್ರಾಂತಿಗಾಗಿ ದಿಗಂತ ಸೂಚಿಸಿದ ತಕ್ಷಣ ತಂಡ ಥಟ್ಟನೆ ನೆಲಕ್ಕೆ ಕುಳಿತಿತ್ತು. ಸಂಪ್ರಾಣಿಸಿಕೊಂಡು ಹೊರಟ ತಂಡ ಉಪನದಿ ಧುಮ್ಮಿಕ್ಕುವ ಬುರುಡೆ ಜಲಪಾತ ಅಥವಾ ಇಳಿಮನೆ ಜಲಪಾತದ ಕಾಲಬುಡವನ್ನು ತಲುಪುವ ವೇಳೆಗೆ ಸೂರ್ಯ ನೆತ್ತಿಯನ್ನು ಸುಡಲಾರಂಭಿಸಿದ್ದ. ಚಾರಣಿಗರ ತಂಡದ ಹೊಟ್ಟೆಯೂ ತಾಳ ಹಾಕುತ್ತಿತ್ತು.
             ಬುರುಡೆ ಜಲಪಾತದ ಒಡಲಿನಲ್ಲಿ ಎಲ್ಲರೂ ಕುಳಿತು ತಂದಿದ್ದ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಳ್ಳುವ ವೇಳೆಗೆ ಮನಸ್ಸು ಒಂದಷ್ಟು ತಿಳಿಯಾಯಿತು. ಸಿಂಧು ತಾನು ತಂದಿದ್ದ ತಿಂಡಿಯನ್ನು ದಿಗಂತನಿಗೆ ಕೊಟ್ಟಿದ್ದಳು. ದಿಗಂತ ಖುಷಿಯಿಂದ ತಿಂದಿದ್ದ. ತಿಂಡಿ ತಿಂದ ಬಳಿಕ ಅರೆಘಳಿಗೆ ಸಮಯದ ನಂತರ ದಿಗಂತ ಮಾತಿಗೆ ನಿಂತ
`ಬುರುಡೆ ಜಲತಾ ಅಥವಾ ಇಳಿಮನೆ ಜಲಪಾತದ ಕಾಲ ಬುಡದಲ್ಲಿ ನಾವಿದ್ದೇವೆ. ಈ ಜಲಪಾತದ ಮೇಲ್ಭಾಗದಿಂದ ಬಂದರೆ ಮೂರು ಹಂತಗಳನ್ನು ಕಾಣಬಹುದು. ಆದರೆ ನಾಲ್ಕನೆಯ ಹಂತವನ್ನು ಕಾಣಬೇಕೆಂದರೆ ಈಗ ನಾವು ನಿಂತಿದ್ದೇವಲ್ಲ ಇಲ್ಲಿಂದ ಮಾತ್ರ ಸಾಧ್ಯ. ನೀವು ಪೋಟೋ ತೆಗೆದುಕೊಳ್ಳಬಹುದು.  ಮುಂದೆ ನಾವು ಇಲ್ಲಿಂದ ಗುಡ್ಡವನ್ನು ಹತ್ತಿ ಮೇಲಕ್ಕೆ ಹೋಗಬೇಕು. ಇಲ್ಲಿವರೆಗೆ ನಿಮಗೆ ಆದ ಅನುಭವಗಳೇ ಬೇರೆ. ಇನ್ನುಮುಂದಿನ ಅನುಭವವೇ ಬೇರೆ. ಸುಲಭಕ್ಕೆ ಈ ಗುಡ್ಡ ಹತ್ತುವುದು ಸಾಧ್ಯವಿಲ್ಲ. ಹತ್ತಿದವರು ಕೆಲವೇ ಕೆಲವು ಮಂದಿ. ಕಳೆದ ವರ್ಷ ನಾನು ಇಲ್ಲಿಗೆ ಬಂದಾಗ ಹತ್ತಿದ್ದೆ. ಬಹಳ ಅಪಾಯದ ಜಾಗ. ಕಡಿದಾಗಿದೆ. ನಾವು ಎಷ್ಟು ಹುಷಾರಾಗಿದ್ರೂ ಸಾಲದು. ನಮ್ಮಲ್ಲಿನ ಸಲಕರಣೆಗಳು ಇದ್ದಷ್ಟೂ ಕಡಿಮೆಯೇ. ಸುಮಾರು ಇನ್ನೂರೈವತ್ತು ಅಡಿ ಹತ್ತಿದ ನಂತರ ನಾವು ಮೂರನೆ ಹಂತದ ಪ್ರದೇಶದಲ್ಲಿ ಇರುತ್ತೇವೆ. ಇಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಮೇಲಕ್ಕೆ ಹತ್ತಬೇಕು. ನಿಮ್ಮ ನಿಮ್ಮೊಳಗಿನ ನಿಜವಾದ ಧೈರ್ಯವನ್ನು ಪರೀಕ್ಷೆ ಮಾಡುವ ಸಮಯ ಇದು..' ಎಂದವನೇ ಮೇಲಕ್ಕೆ ಹತ್ತುವ ಜಾಗ ತೋರಿಸಿದ.
              ಚಾರಣಿಗರ ತಂಡ ಹಾಗೇ ಮೇಲಕ್ಕೆ ಕತ್ತೆತ್ತಿ ನೋಡಿತು. ಹತ್ತುವ ಜಾಗದ ತುದಿ ಕಾಣಿಸಲಿಲ್ಲ. ಮರಗಳು ಆವರಿಸಿದ್ದವು. ಅಕ್ಕಪಕ್ಕ ಅಪಾಯಕಾರಿಯಾಗಿ ಚಾಚಿಕೊಂಡ ಬಂಡೆಗಳು. ಇದನ್ನು ಹೇಗಪ್ಪಾ ಹತ್ತುವುದು ಎಂದುಕೊಂಡರು ಎಲ್ಲರೂ. ಸುಲಭಕ್ಕೆ ಹತ್ತುವುದು ಅಸಾಧ್ಯ ಎಂಬುದು ಎಲ್ಲರಿಗೂ ಮೊದಲ ನೋಟಕ್ಕೆ ಅನ್ನಿಸಿತು. ದಿಗಂತನೇ ಮೊದಲು ಹತ್ತಿ ಅರ್ಧ ಸಾಗಿ ಎಲ್ಲೆಲ್ಲೋ ಒಂದು ರೆಂಬೆಗೆ ಹಗ್ಗ ಕಟ್ಟಿ ಬಂದ. ಉಳಿದವರು ನೋಡುತ್ತ ನಿಂತಿದ್ದರು. ಮತ್ತೆ ಕೆಳಗಿಳಿದು ಬಂದವನೇ ಈಗ ಹತ್ತಿ ಎಂದು ಹೇಳಿದ ತಕ್ಷಣ ಉಳಿದವರು ಹತ್ತಲು ಆರಂಭಿಸಿದರು. ಚಾರಣವೆಂದರೆ ಬರಿ ಜಲಪಾತ ನೋಡುವುದು, ಬರುವುದು, ಗುಡ್ಡ ಹತ್ತಿಳಿದ ಶಾಸ್ತ್ರ ಮಾಡುವುದು ಎಂದು ಒಂದಿಬ್ಬರು ಅಂದುಕೊಂಡಿದ್ದರು. ಅಂತವರಿಗೆ ಚಾರಣವೆಂದರೆ ಸುಲಭದ್ದಲ್ಲ ಎನ್ನಿಸತೊಡಗಿತು. ಬೆನ್ನ ಮೇಲೆ ಮಣ ಭಾರದ ಚೀಲ, ಒಂದು ಕೈಯಲ್ಲಿ ಹಗ್ಗವನ್ನು ಹಿಡಿದು ಹತ್ತ ಬೇಕು. ಸುಡುವ ಸೂರ್ಯ, ಕಿತ್ತುಕೊಂಡು ಬರುವ ಬೆವರು, ಸ್ವಲ್ಪ ಯಾಮಾರಿದರೂ ಅಘನಾಶಿನಿ ತನ್ನ ತೆಕ್ಕೆಯೊಳಗೆಳೆದುಕೊಳ್ಳಲು ಸಿದ್ಧವಾಗಿದ್ದಾಳೇನೋ ಎನ್ನಿಸುವಂತಹ ವಾತಾವರಣವಿತ್ತು. ಮರಗಳ ಎಲೆಗಳು, ಮರದ ಮೇಲೆ ಗೂಡು ಕಟ್ಟಿದ್ದ ಸವಳಿಗಳು, ಮುಳ್ಳು, ಬಳ್ಳಿಗಳು, ನಾಗರ ಬೆತ್ತದ ಮುಳ್ಳುಗಳು ಪದೇ ಪದೆ ಕಾಡಿದವು. ದಿಗಂತ ಅದ್ಯಾವ ಮಾಯೆಯಲ್ಲಿ ಮೇಲಕ್ಕೆ ಯಾವ ಆಧಾರವಿಲ್ಲದೇ ಹತ್ತಿ ಹಗ್ಗವನ್ನು ಕಟ್ಟಿ ಬಂದನೋ ಎಂದುಕೊಂಡರು.
            ಆರು ಜನ ಮೇಲಕ್ಕೆ ಹತ್ತಿದ ನಂತರ ಏಳನೆಯವಳಾಗಿ ಸಿಂಧು ಹಾಗೂ ಕೊನೆಯಲ್ಲಿ ದಿಗಂತ ಹತ್ತಲಾರಂಭಿಸಿದ್ದ. ಸಿಂಧುವೂ ಕೂಡ ಚಾರಣಕ್ಕೆ ಹೊಸಬಳೇ. ಕೇಳಿ ಗೊತ್ತಿತ್ತಷ್ಟೇ. ನಿಜವಾದ ಅನುಭವವಾಗತೊಡಗಿತ್ತು. ಮೇಲೆ ಒಂದು ಹೆಜ್ಜೆ ಹತ್ತಿದರೆ ಅರ್ಧ ಹೆಜ್ಜೆ ಕೆಳಕ್ಕಿಳಿದಂತಹ ಅನುಭವವಾಗುತ್ತಿತ್ತು. ಬುರುಡೆ ಜಲಪಾತದ ನಾಲ್ಕನೆ ಹಂತದ ಅರ್ಧಭಾಗವನ್ನೇರಲು ಗಂಟೆಗಟ್ಟಲೆ ಸಮಯವೇ ಬೇಕಾಯಿತು. ದಿಗಂತ ಮತ್ತೆ ಯಥಾಪ್ರಕಾರ ಮೊದಲಿನಂತೆ ಮಾಡಿದ. ತಾನು ಮೇಲಕ್ಕೆ ಹೋಗಿ ಹಗ್ಗವನ್ನು ಕಟ್ಟಿ ಬಂದ. ನಾಲ್ಕನೆ ಹಂತದ ಕೊನೆಯಲ್ಲಿ ಹಗ್ಗವನ್ನು ಕಟ್ಟಿ ಬಂದಿದ್ದ. ಎಲ್ಲರೂ ಹತ್ತಿ ಬಂದಿದ್ದರು. ಕೊನೆಯಲ್ಲಿ ಒಂದು ನೇರ ಮರವನ್ನು ಏರಿದರೆ ಮೂರನೆ ಹಂತವನ್ನು ಕಾಣಬಹುದಿತ್ತು. ಹುಡುಗರು ಸುಲಭವಾಗಿ ಮರವನ್ನು ಏರಬಲ್ಲವರಾಗಿದ್ದರು. ಆದರೆ ಹುಡುಗಿಯರು ಬಹಳ ಕಷ್ಟ ಪಡಬೇಕಾಗಿ ಬಂದಿತು. ಮೇಲಕ್ಕೆ ಹತ್ತಿದ ಹುಡುಗರು ಹಗ್ಗವನ್ನು ಹಿಡಿದುಕೊಳ್ಳುವುದು, ಅದರ ಸಹಾಯದಿಂದ ಹುಡುಗಿಯರು ಮೇಲಕ್ಕೆ ಹತ್ತುವುದು ಎಂಬ ಯೋಜನೆ ರೂಪಿಸಲಾಯಿತು. ದಿಗಂತ ಕೆಳಗೆ ಉಳಿದು ಹುಡುಗಿಯರು ಮೇಲೇರಲು ಸಹಾಯವಾಗುವಂತೆ ಸಲಹೆ, ಸೂಚನೆಗಳನ್ನು ಕೊಡುತ್ತಿದ್ದ. ಸಿಂಧು ಮತ್ತೆ ಯಥಾ ಪ್ರಕಾರ ಕೊನೆಯವಳಾಗಿ ಮರವೇರಲು ಅನುವಾದಳು. ಕಳಗಿನಿಂದ ಮೇಲಕ್ಕೇರಿದದ್ದ ಸುಸ್ತು, ಬೆವರು, ಮೈಕೈ ನೋವಿನ ಪರಿಣಾಮ ಆಕೆ ಏನು ಮಾಡಿದರೂ ಮರವನ್ನು ಹತ್ತಲು ಸಾಧ್ಯವಾಗಲಿಲ್ಲ. ನಾಲ್ಕು ಹೆಜ್ಜೆ ಏರುವುದು ಜರ್ರನೆ ಜಾರುವುದು ಮಾಡಲು ಆರಂಭಿಸಿದಳು. ಕೊನೆಗೊಮ್ಮೆ ದಿಗಂತನೇ ಅದ್ಹೇಗೋ ಕಷ್ಟಪಟ್ಟು ಆಕೆಯನ್ನು ಮೇಲಕ್ಕೆ ಕರೆತಂದಾಗ ಸಿಂಧುವಿನ ಕಣ್ಣಲ್ಲಿ ಕೃತಜ್ಞತೆಯ ಭಾವ ತುಂಬಿ ತುಳುಕುತ್ತಿತ್ತು.
          ಮೂರನೆ ಹಂತದಲ್ಲಿ ಜಲಪಾತದ ಬುಡದಲ್ಲಿ ಸ್ನಾನವನ್ನು ಮಾಡಿದವರು ಒಮ್ಮೆ ಹತ್ತಿ ಬಂದ ಸುಸ್ತನ್ನು ಕಳೆದು ಹೋಗುವಷ್ಟು ಖುಷಿ ಪಟ್ಟರು. ಹೊಟ್ಟೆ ಮತ್ತೆ ತಾಳ ಹಾಕಲು ಆರಂಭಿಸಿತ್ತು. ಅಳಿದುಳಿದ ತಿಂಡಿಯನ್ನೂ ತಿಂದು ಮುಗಿಸಿದರು. ಈ ಹಂತವನ್ನು ಏರಿ 9 ಕಿ.ಮಿ ನಡೆದು ಬಸ್ಸನ್ನು ಏರಬೇಕಿತ್ತು. ಆಗಲೇ ಗಂಟೆ ನಾಲ್ಕನ್ನು ದಾಟಿದ್ದ ಕಾರಣ ದಿಗಂತ ಅವಸರಿಸಿದ. ಐದುಗಂಟೆಗೆಲ್ಲ ಜಲಪಾತದ ಒಡಲಿನಿಂದ ಮೇಲೇರಿ ಬಂದರು. ಕತ್ತಲಾವರಿಸುವ ವೇಳೆಗೆ 9 ಕಿ.ಮಿ ನಡೆದು ಹೋದರು. ಇಳಿಮನೆ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಸ್ಸಿಗೆ ಕಾಯುತ್ತ ನಿಂತಿದ್ದಾಗಲೇ ದಿಗಂತ ಸಿಂಧುವಿನ ಬಳಿ `ನನ್ನನ್ನು ಪ್ರೀತಿಸ್ತೀಯಾ..?' ಎಂದು ಕೇಳಿದ್ದ. ಜಲಪಾತದ ಕಣಿವೆಯಿಂದ ಬಂದು ಸುಸ್ತಾಗಿ ಕುಳಿತಿದ್ದವಳು ಬೆಚ್ಚಿ ಬಿದ್ದಿದ್ದಳು. ಆದರೆ ಏನೂ ಮಾತನಾಡಿರಲಿಲ್ಲ. ದಿಗಂತ ಉತ್ತರ ನಿರೀಕ್ಷಿಸುತ್ತಿದ್ದಾಗಲೇ ಬಸ್ಸು ಬಂದಿತ್ತು. ಸಿಂಧು ಮೌನವಾಗಿ ಬಸ್ಸನ್ನು ಏರಿ ಹೋಗಿದ್ದಳು. ಬಸ್ಸಿಳಿದು ಹೋಗುವಾಗಲೂ ಒಂದೇ ಒಂದು `ಹಾಯ್.. ಎಂದೋ ಸಿಗುತ್ತೇನೆ ಎಂದೋ..' ಒಂದೂ ಮಾತನ್ನು ಆಡಿಹೋಗಿರಲಿಲ್ಲ. ದಿಗಂತನಿಗೆ ತಪ್ಪು ಮಾಡಿದೆ ಎನ್ನುವ ಭಾವ ಕಾಡಲಾರಂಭಿಸಿದ್ದೇ ಆಗ. ಆದರೆ ಚಾರಣಕ್ಕೆ ಬಂದಿದ್ದ ಉಳಿದವರಿಗೆ ಈ ಸಂಗತಿ ಗೊತ್ತಾಗಿರಲಿಲ್ಲ.
            ಮರುದಿನ  ದಿಗಂತನನ್ನು ಕಾಲೇಜಿನಲ್ಲಿ ಹುಡುಕಿಕೊಂಡು ಬಂದು ಖಡಾಖಂಡಿತವಾಗಿ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ತಾನಿನ್ನೂ ಓದುತ್ತಿದ್ದೇನೆ. ಭವಿಷ್ಯದಲ್ಲಿ ಸಾಕಷ್ಟು ಕನಸನ್ನು ಇಟ್ಟುಕೊಂಡಿದ್ದೇನೆ. ಮಾಡೆಲ್ ಆಗಿ ಸಿನೆಮಾ ಜಗತ್ತಲ್ಲಿ ಮಿಂಚುವ ಆಸೆ ತನ್ನದು. ನಿನ್ನನ್ನು ಪ್ರೀತಿಸುವುದಿಲ್ಲ. ನನ್ನ ಕನಸು ಈಡೇರಿಸಿಕೊಳ್ಳಲೇ ಬೇಕು ಎಂದವಳನ್ನೇ ದಿಟ್ಟಿಸಿನೋಡಿದ್ದ ದಿಗಂತ. ಹುಡುಗಿಯರು ಎಷ್ಟು ನೇರವಾಗಿ, ಹೃದಯ ಚೂರಾಗುವಂತೆ ಉತ್ತರ ನೀಡಬಲ್ಲರು... ಎಂದುಕೊಂಡಿದ್ದ. ಮಾತಿಲ್ಲದೆ ಆತನೂ ಸುಮ್ಮನಾಗಿದ್ದ. ನಂತರದ ದಿನಗಳು ಹಾಗೆಯೇ ಸಾಗಿದ್ದವು. ದಿಗಂತ ಮಾತ್ರ ಮೌನದ ಕೋಟೆಯೊಳಗೆ ದಿನದಿಂದ ದಿನಕ್ಕೆ ಸಾಗಿದ್ದ. ಮೊದ ಮೊದಲು ಕ್ರಿಯಾಶೀಲವಾಗಿ, ಚಟಪಟನೆ ಮಾತನಾಡುತ್ತ ಎಲ್ಲರೊಂದಿಗೆ ಮಾತನಾಡುತ್ತ ಖುಷಿ ಖುಷಿಯಾಗಿ ಇದ್ದ ದಿಗಂತ ಕೊನೆ ಕೊನೆಗ ಯಾರೊಂದಿಗೂ ಬೆರೆಯಲಾರ, ಎಲ್ಲರಿಂದ ದೂರ ಉಳಿದು ಬಿಟ್ಟಿದ್ದ. ಸದಾ ಕಾಲ ಏನನ್ನೋ ಆಲೋಚನೆ ಮಾಡುತ್ತಿದ್ದಂತೆ ಅನ್ನಿಸಿತ್ತು. ಟ್ರೆಕ್ಕಿಂಗಿನ ಕಾರಣದಿಂದಾಗಿ ಕಾಲೇಜಿನಾದ್ಯಂತ ದಿಗಂತ ಹೀರೋ ಆಗಿದ್ದರೂ ದಿಗಂತ ಮಾತ್ರ ಅದರಿಂದ ವಿಮುಖನಾಗಿದ್ದಂತೆ ಕಂಡುಬಂದಿತ್ತು. ನಂತರದ ದಿನಗಳಲ್ಲಿ ಸಿಂಧು ಕಾಲೇಜನ್ನು ಮುಗಿಸಿ ಮಾಡೆಲ್ ಲೋಕಕ್ಕೆ ಕಾಲಿಟ್ಟು, ಆ ಮೂಲಕ ಚಿತ್ರರಂಗದಲ್ಲಿ ನಟಿಯಾಗಿ, ಹಲವಾರು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದ್ದಳು. ಅವಳಿಗೆ ಗೊತ್ತಿಲ್ಲದಂತೆ ದಿಗಂತ ಮರೆತು ಹೋಗಿದ್ದ. ಆದರೆ ಆತ ಮತ್ತೆ ಅವಳಿಗೆ ನೆನಪಾಗಿ ಕಾಡಿದ್ದು ಮಾತ್ರ ವಿಚಿತ್ರ ಘಟನೆಯಿಂದ.

(ಮುಂದುವರಿಯುತ್ತದೆ..)

ವಿಶ್ವ ಪರಿಸರ ದಿನ ಹಾಗೂ ಎರಡು ಘಟನೆಗಳು

(ಮೊದಲಿನವರು ಗುರುನಾಥ ಗೌಡರು, ಎರಡನೆಯವರು ಶೀನಾ ಸಿದ್ದಿ.)
ಮೊದಲಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳನ್ನು ಹೇಳಿಕೊಂಡು ಮುಂದಕ್ಕೆ ಸಾಗುತ್ತೇನೆ.

ಘಟನೆ ಒಂದು:
           ಮುಂಜಾನೆ ಕರಾಳವಾಗಿತ್ತು. ಏಳು ಗಂಟೆಯಿರಬೇಕು. ಮನೆಯ ಪಕ್ಕದ ಕಾಡಿನಲ್ಲಿ ನಾಯಿ ಕೂಗಿದ ಶಬ್ದ. ಹಾಗೂ ಅದೇ ವೇಳೆಗೆ ಕೆಂಪು ಅಳಿಲು (ನಮ್ಮಲ್ಲಿ ಅದನ್ನು ಕೇಶಳಿಲು ಎನ್ನುತ್ತಾರೆ) ಅದೂ ಕೂಗಿದ ಶಬ್ದ. ವಿಕಾರವಾಗಿತ್ತು. ಏನೋ ಆಗಿರಬೇಕೆಂದು ಓಡೋಡಿ ಹೋದೆ.
            ಮುಂಜಾನೆಯೇ ನಮ್ಮೂರಲ್ಲಿ ಕೇಶಳಿಲುಗಳು ತೆಂಗಿನ ಮರಕ್ಕೆ ದಾಳಿ ಇಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನಿಸಿದೆ. ತೆಂಗಿನ ಹಿಂಡಿಗೆಗೆ ತೂತು ಕೊರೆದು ಅದರಲ್ಲಿನ ನೀರು ಹೀರಿ, ಒಳಗಿನ ತಿರುಳನ್ನು ತಿಂದು ಮುಗಿಸಿ ತೆಂಗಿನ ಬೆಳೆಗಾರರಿಗೆ ಸಮಸ್ಯೆಯಾಗಿರುವ ಕೇಶಳಿಲನ್ನು ದಿನಂಪ್ರತಿ ತೆಂಗಿನಮರಗಳನ್ನು ಬಡಿದು ಓಡಿಸುವುದು ಸಾಮಾನ್ಯವಾಗಿದೆ. ಇವತ್ತು ಬೆಳಿಗ್ಗೆ ಕೇಶಳಿಲಿನ ಜೋಡಿ ಯಾವುದೋ ತೆಂಗಿನ ಮರವನ್ನು ಗುರಿಯಾಗಿ ಇರಿಸಿಕೊಂಡು ಓಡಿ ಬಂದಿದ್ದವಿರಬೇಕು. ಮರದಿಂದ ಮರಕ್ಕೆ ಹಾರುತ್ತ ಬರುತ್ತಿದ್ದವು. ನಮ್ಮುರಲ್ಲಿ ಹೊಸ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಒಂದು ಜಾಗದಲ್ಲಿ ಮರಗಳ ನಡುವೆ ದೊಡ್ಡ ಗ್ಯಾಪ್ ಇದೆ. ಈ ಜಾಗದಲ್ಲಿ ಅಳಿಲುಗಳು ಮರದಿಂದ ಮರಕ್ಕೆ ಹಾರಲು ಬಹಳ ಕಷ್ಟ ಪಡಬೇಕು.
             ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಅಳಿಲು ಹಾರಿತಿರಬೇಕು. ಆದರೆ ಇನ್ನೊಂದು ಬದಿಯ ಮರ ಅದರ ಹಿಡಿತಕ್ಕೆ ಸರಿಯಾಗಿ ಸಿಕ್ಕಲಿಲ್ಲ. ಮರದಿಂದ ಉರುಳಿತು. ಉರುಳಿದ ಹೊಡೆತಕ್ಕೆ ಒಮ್ಮೆ ಏಳಲೇ ಆಗಲಿಲ್ಲ. ಹಾಗೇ ಕುಂಟುತ್ತ, ಏಳುತ್ತ ಬೀಳುತ್ತ ಹೋಗುತ್ತಿತ್ತು. ಇದನ್ನು ನೋಡಿದ್ದು ನಮ್ಮ ಪಕ್ಕದ ಮನೆಯ ನಾಯಿ ಓಡೋಡಿ ಬಂದದ್ದೇ ಕೇಶಳಿಲಿನ ಕುತ್ತಿಗೆಗೆ ಬಾಯಿ ಹಾಕಿಯೇ ಬಿಟ್ಟಿತು. ನಾನು ಓಡಿ ಹೋಗಿ ಬಿಡಿಸಲು ನೋಡಿದೆ. ನಾಯಿ ಗುರ್ರೆಂದಿತು. ಕಲ್ಲೆತ್ತಿಕೊಂಡೆ. ನಾಯಿಯ ಜೊತೆಗೆ ಅಳಿಲು ಕಿರ್ರೆನ್ನುತ್ತಿತ್ತು. ನಾಗಿ ನನ್ನನ್ನು ಹೆದರಿಸಲು ಗುರ್ರೆಂದರೆ ಅಳಿಲು ಪ್ರಾಣ ಹೋಗುವ ಅಂತಿಮ ಕ್ಷಣದಲ್ಲಿ ಕಿರ್ ಎನ್ನುತ್ತಲಿತ್ತು. ನಾನು ಕಲ್ಲೆತ್ತಿಕೊಂಡದ್ದನ್ನು ಕಂಡ ನಾಯಿ ಅಳಿಲನ್ನು ಬಿಟ್ಟು ಹೋಗುತ್ತದೆ ಎಂದುಕೊಂಡೆ. ತಥ್.. ಕಚ್ಚಿಕೊಂಡೇ ಹೋಯಿತು. ಕಣ್ಣೆದುರೇ ಒಂದು ಕೆಂಪಳಿತು ನಾಯಿಯ ಬಾಯಿಗೆ ಆಹಾರವಾಯಿತು. ತೋ.. ಎಂತಾ ಕೆಲಸ ಆಗಿಬಿಟ್ಟಿತಲ್ಲ. ಅಳಿಲನ್ನು ಉಳಿಸಲಾಗಲಿಲ್ಲವಲ್ಲ ಎಂದು ಮನಸ್ಸು ಹಳಹಳಿಸುತ್ತಿದ್ದರೆ, ಆ ಅಳಿಲಿನ ಸಂಗಾತಿ ಮರದ ಮೇಲಿಂದ ರೋಧಿಸುತ್ತಿತ್ತು. ಮನಸ್ಸು ಭಾರವಾಗಿಯೇ ಮರಳಿದೆ. ಪರಿಸರ ದಿನದ ಆರಂಭದಲ್ಲಿಯೇ ಇಂತಹ ಘಟನೆ ನೋಡಬೇಕಾಗಿ ಬಂತಲ್ಲ ಛೇ.. ಎಂದುಕೊಂಡೆ.

ಘಟನೆ ಎರಡು:
            ಕಳವೆಯಲ್ಲಿ ಕಾನ್ಮನೆ ಪರಿಸರ ಜ್ಞಾನ ಕೇಂದ್ರದ ಉದ್ಘಾಟನೆ ಇವತ್ತು. ಅಳಿಲಿನ ಘಟನೆ ನೆನಪಿನಲ್ಲಿಯೇ ಕಳವೆಗೆ ಹೋದೆ. ಶಿವಣ್ಣ (ಶಿವಾನಂದ ಕಳವೆ) ಮಕ್ಕಳಿಗೆ ಮರಗಳು ಭೂಮಿಗೆ ಬಂದ ಕತೆ ಹೇಳುತ್ತಿದ್ದರು. ಕೆಲ ಹೊತ್ತಿನಲ್ಲಿಯೇ ಕಾನ್ಮನೆ ಉದ್ಘಾಟನೆಗಾಗಿ ಹಿರಿಯರೆಲ್ಲ ಬಂದರು ಉದ್ಘಾಟನೆಯೂ ಆಯಿತು.
            ಕಾರ್ಯಕ್ರಮದ ವಿಶೇಷ ಘಟ್ಟವಾಗಿ ಇಬ್ಬರು ಕಾಡಿನ ಒಡನಾಡಿಗಳಿಗೆ ಸನ್ಮಾನ ಇಟ್ಟುಕೊಳ್ಳಲಾಗಿತ್ತು. ಒಬ್ಬರು ಬೇಡ್ತಿ ಕೊಳ್ಳಗಳಲ್ಲಿ ಅಡ್ಡಾಡುತ್ತ ಕಾಡಿನ ಅಧ್ಯಯನ ಮಾಡಿದ ಶೀನಾ ಶಿದ್ದಿ ಪುರ್ಲೆಮನೆ. ಕಳೆದ 60 ದಶಕಗಳಿಂದ ಕಾಡಿನಲ್ಲಿಯೇ ಸುತ್ತಾಡುತ್ತ ಅನುಭವ ಗಳಿಸಿಕೊಂಡವರು. ಇನ್ನೋರ್ವರು ಗುರುನಾಥ ಗೌಡ ಬಸೂರು. 1980ರ ದಶಕದಲ್ಲಿ ಕಣ್ಣನ್ನು ಕಳೆದುಕೊಂಡರೂ ಸಂಗೀತ ಕಲಿತು, ಕಾಡನ್ನು ಬೆಳೆಸಿ, ಅಕ್ಕಿ ಗಿರಣಿಯನ್ನು ತಯಾರಿಸಿ, ಕೆರೆಗೆ ಕಾಯಕಲ್ಪ ಕೊಟ್ಟು ಕಣ್ಣಿದ್ದವರೂ ನಾಚುವಂತೆ ಮಾಡಿದ ಸಾಹಸಿ. ಇಬ್ಬರನ್ನೂ ನೋಡಿ ಮನಸ್ಸು ಪುಳಕಿತವಾಯಿತು.
           ಶೀನಾ ಸಿದ್ದಿಯವರ ಸನ್ಮಾನದ ಸಂದರ್ಭದಲ್ಲಿ ಅವರಿಗೆ ಸ್ವಂತ ಮನೆಯಿಲ್ಲ, ಅತಿಕ್ರಮಣ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ರೇಷನ್ ಕಾರ್ಡು ಸಿಕ್ಕಿದೆ ಎಂದು ಹೇಳುತ್ತಿದ್ದರು ಶಿವಣ್ಣ. ಶೀನಾ ಸಿದ್ದಿ ಭಾವುಕರಾಗಿದ್ದರು. ಅವರ ಕಣ್ಣಲ್ಲಿ ನೀರು ಕಂಡು ಸಭೆಯಲ್ಲಿದ್ದ ಬಹುತೇಕರು ಗದ್ಗದಿತರಾದರು. ಗುರುನಾಥ ಗೌಡರ ಸಾಧನೆಯನ್ನು ಹೇಳಿದಂತೆಲ್ಲ ಸಭೆಯಲ್ಲಿದ್ದ ಹೈಸ್ಕೂಲು ಮಕ್ಕಳ ಕಣ್ಣಲ್ಲೂ ನೀರು. ಇಬ್ಬರ ಸನ್ಮಾನ ಮುಗಿಯುತ್ತಿದ್ದಂತೆ ಕರತಾಡನ ಜೋರಾಗಿತ್ತು.
             ನಂತರ ಮಾತನಾಡಿದರು ಗುರುನಾಥ ಗೌಡರು. ತಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿದರು. ಕೆರೆ ಕಟ್ಟಿದ್ದು, ಆ ಸಂದರ್ಭದಲ್ಲಿ ಹಲವರು ಹಣ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಸೇರಿದಂತೆ ಹಲವು ಸಂಗತಿಗಳನ್ನು ಬಿಚ್ಚಿಟ್ಟರು. ಯಾಕೋ ಅವರನ್ನು ಮುಟ್ಟಿ ಮಾತನಾಡಿಸಬೇಕು ಅನ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ಕಾಡಿನ ಒಡನಾಡಿ, ಕಣ್ಣಿಲ್ಲದಿದ್ದರೂ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಸನ್ಮಾನ ಮಾಡಿದ ಶಿವಾನಂದ ಕಳವೆಯವರ ಬಗ್ಗೆ ಹೆಮ್ಮೆಯೂ ಆಯಿತು.
             ಪರಿಸರ ದಿನದ ಆರಂಭ ಬೇಸರದಿಂದ ಆಗಿದ್ದರೂ ಅಂತ್ಯದಲ್ಲಿ ಒಂದೊಳ್ಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ಥಕತೆ ಲಭಿಸಿತ್ತು. ಪರಿಸರದ ಜೊತೆಗೆ ಸದಾ ಒಡನಾಡುತ್ತ, ಪರಿಸರದ ಜೊತೆಗೆ ಪರಿಸರವಾಗುತ್ತ ಬಂದ ಈ ಇಬ್ಬರು ಸಾಧಕರು ಬಹಳ ಗ್ರೇಟ್ ಎನ್ನಿಸಿತು. ಅಳಿಲನ್ನು ನಾಯಿಯ ಬಾಯಿಯಿಂದ ಬಿಡಿಸಲು ಸಾಧ್ಯವಾಗಲಿಲ್ಲ ಎನ್ನುವ  ಭಾವ ಮತ್ತೆ ಮತ್ತೆ ಕಾಡಿ ಮನಸ್ಸು ಮೂಕವಾಯಿತು. ಪರಿಸರ ದಿನ ಎರಡು ಭಿನ್ನ ಅನುಭವಗಳನ್ನು ನೀಡಿತು. ಮನಸ್ಸು ಭಾವನೆಗಳ ಜೊತೆಯಲ್ಲಿ ಹೊಯ್ದಾಡಿತು.

Wednesday, June 4, 2014

ಏಳು ಹನಿಗವಿತೆಗಳು

ಪ್ರೀತಿ

ಬತ್ತಲಾರದ ಚಿಲುಮೆ
ಧಾವಂತದೊಲುಮೆ |
ಮರೆಯದ ಮಧುರಾನುಭೂತಿ
ಪರಸ್ಪರರ ಅರಿವೆ ||

ಭಗ್ನ

ಕೆಲವರು ಎಷ್ಟು
ಪ್ರಯತ್ನಿಸಿದರೂ
ಬಯಸಿದುದು
ಸಿಗಲಾರದು |
ರಾಧೆ, ಭಾಮೆಗಿಂತ
ಹೆಚ್ಚಾಗಿ
ಕೃಷ್ಣನನ್ನು
ಪ್ರೀತಿಸಿದ್ದಳು ||

ಆವರಣ

ನನ್ನೆದೆಯೊಳಗೆ ಒಂದೇ ತಾಳ, ಬಡಿತ |
ಅದೇ ಆವೇಗ, ಅದೇ ನಿನಾದ ||
ಯಾಕಂದ್ರೆ ಅಲ್ಲಿದ್ದುದು
ನೀ ಕುಣಿದು ಬಿಟ್ಟುಹೋದ
ನಿನ್ನ ಕಾಲುಗೆಜ್ಜೆ ||

ಸೂರ್ಯನ ಪ್ರೀತಿ

ಆ ಒಬ್ಬಂಟಿ ಸೂರ್ಯನಿಗೆ
ಪ್ರೀತಿ ಎಂದರೇನು ಗೊತ್ತು?
ಸುಕೋಮಲೆ ಭೂಮಿಯ
ಸುಡತೊಡಗಿದ, ಆಕೆ ಎದ್ದು
ದೂರ ಓಡಿಬಂದಳು |
ಈಗ ಪರಿತಾಪಿ ಸೂರ್ಯ
ಅವಳನ್ನೇ ಸುತ್ತುತ್ತಾ
ಪ್ರೇಮ ಯಾಚಿಸುತ್ತಿದ್ದಾನೆ ||

ಸೋಲು-ಗೆಲುವು

ಒಬ್ಬ ವ್ಯಕ್ತಿ ಗೆದ್ದರೆ
ಅವನ ಕಡೆಗೆ ಎಲ್ಲರೂ |
ಸುತ್ತ ಮುತ್ತ ಹಾರ-ಜೈಕಾರ
ಕೂಗುತ್ತಾರೆ ಜನರು |
ಆದರೆ ಸೋತವನೆಡೆಗೆ ಮಾತ್ರ
ತಿರುಗಿ ನೋಡುವುದಿಲ್ಲ ಯಾರೂ ||

ಪದ

ಕವಿತೆಯ ಬಲಭುಜ
ಸುಮಧುರ ಹಾಡು |
ಹಾಡಿದರೆ ಕವಿತೆ
ಆಗುವುದು ಜನಪದ,
ಇಲ್ಲವಾದಲ್ಲಿ ಅದು ಬರಿ
ಪುಸ್ತಕದೊಳಗಿನ ಪದ ||

ಅರ್ಜುನ

ತನ್ನ ಕಾರ್ಯಸಾಧನೆಗಾಗಿ
ಸ್ತ್ರೀವೇಷವನ್ನೂ ಕೂಡ
ಹಾಕಿದರೂ, ಎಲ್ಲರಿಗೆ ಮೋಸ
ಮಾಡಿದರೂ, ಭಬ್ರುವಾಹನನನ್ನು
ಜಾರಿಣಿಯ ಮಗನೆಂದು ಜರಿದಾತ ||