Tuesday, June 17, 2014

ಒಲವ ಲತೆಗೆ ನೀರನೆರೆದ..ಭಾಗ-4

                 ದಿಗಂತ ಸಿಂಧುವಿನ ಬೆನ್ನಿಗೆ ನಿಂತಿದ್ದರಿಂದ ಆಕೆಯ ಕುರಿತು ಹರಿದಾಡುತ್ತಿದ್ದ ಮಾತುಗಳೆಲ್ಲ ನಿಂತಿದ್ದವು. ಆಕೆಯ ಪರವಾಗಿ ಮಾತನಾಡಲೂ ಜನರಿದ್ದಾರೆ ಎಂದಾಗ ಸೊಕಾ ಸುಮ್ಮನೆ ಲೂಸ್ ಟಾಕ್ ಮಾಡಲು ಜನರು ಹೆದರುತ್ತಾರೆ. ಇಲ್ಲೂ ಹಾಗೆಯೇ ಆಯಿತು. ದೊಡ್ಡ ಸ್ಟಾರ್ ದಿಗಂತ ಆಕೆಯ ಬೆನ್ನಿಗೆ ನಿಂತಿದ್ದ. ಆಕೆ ಮಾನಸಿಕವಾಗಿ ದೃಢವಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಿದ್ದ.
                 ಸಿಂಧುವಿನ ಹೆಸರು ಹಾಳಾಗಿದ್ದ ಪರಿಣಾಮ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗದಂತಾಗಿತ್ತು. ಕೊನೆಗೆ ದಿಗಂತ ತನ್ನದೇ ಸಿನಿಮಾಕ್ಕೆ ಆಕೆಯನ್ನು ನಟಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದ. ಕಳೆದುಹೋಗಿದ್ದ ಸ್ಥಾನಮಾನಗಳೆಲ್ಲ ಮರಳಿ ಸಿಗಲು ಕಾರಣನಾಗಿದ್ದ ದಿಗಂತ. ಸಿಂಧುವಿಗೆ ದಿಗಂತನ ಮೇಲೆ ಅಭಿಮಾನವಿತ್ತಾದರೂ ಆತನಿಗೆ ಸರಿಯಾಗಿ ಮುಖ ತೋರಿಸಲು ಆಗದಂತಹ ಮನಸ್ಥಿತಿಯಿತ್ತು. ಒಮ್ಮೆ ಪ್ರೇಮ ನಿವೇದನೆಯನ್ನು ಮಾಡಿದ್ದ ದಿಗಂತ. ಆತನನ್ನು ಒದ್ದು ಬಂದಂತೆ ಬಂದಿದ್ದಳು. ಇದರಿಂದಾಗಿ ದಿಗಂತ ಎಷ್ಟು ಯಾತನೆಯನ್ನು ಅನುಭವಿಸಿದ್ದ ಎನ್ನುವುದು ಆಕೆಗೆ ತಿಳಿದಿತ್ತು. ನಾನು ಇಷ್ಟೆಲ್ಲ ತೊಂದರೆ ಕೊಟ್ಟು ಆತನನ್ನು ಅವಮಾನಿಸಿ, ಆತನ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುವಂತೆ ಮಾಡಿದ್ದರೂ ಕೂಡ ದಿಗಂತ ನನ್ನ ನೆರವಿಗೆ ಬಂದನಲ್ಲ ಎಂದುಕೊಂಡಿದ್ದಳು. ಇಂತಹ ಸಂದರ್ಭದಲ್ಲೇ ಸಿಂಧು ನಿದ್ದೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡಿದ್ದಳು. ಆದರೆ ದಿಗಂತ ಇಂತಹ ಪ್ರಯತ್ನವನ್ನು ತಡೆದು ಆಕೆಯನ್ನು ಬದುಕಿಸಿದ್ದ. ಬುದ್ಧಿಯನ್ನೂ ಹೇಳಿದ್ದ.
              ಹೀಗಿದ್ದಾಗಲೇ ದಿಗಂತ ಆಕೆಗೆ ಪೋನ್ ಮಾಡಿ ಕೇಳಿದ್ದು `ಟ್ರೆಕ್ಕಿಂಗಿಗೆ ಹೋಗಿ ಬರೋಣವಾ.. ಬರ್ತೀಯಾ?' ಅಂತ. ಆಕೆ ಇರುವ ವಾತಾವರಣ ಕೊಂಚವಾದರೂ ಬದಲಾಗಲಿ, ಆಕೆಯ ಮನಸ್ಥಿತಿ ಸರಿ ಹೋಗಲಿ ಎನ್ನುವ ಕಾರಣಕ್ಕಾಗಿ ದಿಗಂತ ಇಂತಹದ್ದೊಂದು ಉಪಾಯವನ್ನು ಮಾಡಿದ್ದ. ಆಕೆ ಒಪ್ಪಿಕೊಂಡಿದ್ದಳು. ಸಂತಸಗೊಳ್ಳುವ ಸರದಿ ದಿಗಂತನದ್ದಾಗಿತ್ತು. ದಿಗಂತನಿಗೆ ಮತ್ತೆ ನೆನಪಾಗಿದ್ದು ಉಂಚಳ್ಳಿ ಜಲಪಾತ. ಸಿಂಧುವಿನ ಬಳಿಗೆ ಅದನ್ನೇ ಹೇಳಿದ್ದ. ಆಕೆ ಒಪ್ಪಿಕೊಂಡು ಹೊರಟಿದ್ದಳು.
           
**
           ಐದಾರು ವರ್ಷಗಳ ಹಿಂದೆ ಟ್ರೆಕ್ಕಿಂಗಿಗೆ ಬಂದ ನಂತರ ಈಗ ಮತ್ತೊಮ್ಮೆ ಬಂದಿದ್ದ ಇವರ ಬದುಕಿನಲ್ಲಿ ಏನೆಲ್ಲ ಬದಲಾವಣೆಯಾಗಿದ್ದವು. ಸಿಂಧುವಿನ ಬಳಿ ದಿಗಂತ ತನ್ನ ಪ್ರೇಮ ನಿವೇದಿಸಿ, ತಿರಸ್ಕೃತನಾಗಿದ್ದ.  ನಂತರದ ದಿನಗಳಲ್ಲಿ ಸಿಂಧು ನಟಿಯಾಗಿ ಹೆಸರು ಮಾಡಿದ್ದಳು. ನಂತರ ಅದೇ ಸಿನಿಮಾ ಜಗತ್ತು ಆಕೆಯ ಹೆಸರು ಹಾಳಾಗುವಂತೆ ಮಾಡಿತ್ತು. ದಿಗಂತನೂ ಇತ್ತ ಜಿದ್ದಿಗೆ ಜಿದ್ದು ಎಂಬಂತೆ ನಟನಾಗಿ, ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿ ಹೆಸರು, ಪ್ರಶಸ್ತಿ, ಅಭಿಮಾನಿಗಳನ್ನು ಗಳಿಸಿಕೊಂಡಿದ್ದ. ಹೆಸರು ಹಾಳಾಗಿ ಅವಕಾಶವಿಲ್ಲದೇ ಮಾನಸಿಕವಾಗಿಯೂ ಝರ್ಝರಿತಗೊಂಡಿದ್ದ ಸಿಂಧುವಿನ ಬೆನ್ನಿಗೆ ನಿಂತು ಆಕೆಯನ್ನು ಸಂಕಷ್ಟದಿಂದಲೂ ಪಾರು ಮಾಡಿದ್ದ.
            ಅಂದಿಗೂ ಇಂದಿಗೂ ಉಂಚಳ್ಳಿ ಜಲಪಾತ ಇದ್ದಹಾಗೆಯೇ ಇತ್ತು. ನೀರು ಕೊಂಚ ಕಡಿಮೆಯಾಗಿತ್ತು ಎನ್ನುವುದನ್ನು ಬಿಟ್ಟರೆ ಉಂಚಳ್ಳಿ ಜಲಪಾತ ತನ್ನ ಸೌಂದರ್ಯಕ್ಕೆ ಕುಂದನ್ನು ತಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ಟ್ರೆಕ್ಕಿಂಗೆ ಹಲವಾರು ಜನರು ಜೊತೆಯಲ್ಲಿದ್ದರು. ಆದರೆ ಈಗ ಸಿಂಧು ಹಾಗೂ ದಿಗಂತ ಇಬ್ಬರೇ ಬಂದಿದ್ದರು. ಆಗ ಕಾಲೇಜು ಹುಡುಗರಾಗಿದ್ದ ಇವರು ಈಗ ನಾಲ್ಕು ಜನ ಗುರುತು ಹಿಡಿಯಬಲ್ಲಂತಹ ನಟ-ನಟಿಯರು. ಯಾಕೋ ಸಿಂಧುವಿಗೆ ದಿಗಂತ ಮತ್ತೊಮ್ಮೆ ತನ್ನ ಬಳಿ ಪ್ರೇಮ ನಿವೇದನೆ ಮಾಡಿಬಿಡುತ್ತಾನಾ ಎಂಬ ಆಲೋಚನೆ ಶುರುವಾಯಿತು. ಅದಕ್ಕೆ ತಾನು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬ ಆಲೋಚನೆಯೂ ಶುರುವಾಯಿತು. ಕೊನೆ ಕೊನೆಗೆ ಆತ ಪ್ರೇಮ ನಿವೇದನೆ ಮಾಡಲಾರ, ಆದರೆ ನನ್ನಲ್ಲಿ ಆತನ ಬಗ್ಗೆ ಪ್ರೇಮ ಮೂಡುತ್ತಿದೆಯೇನೋ ಅನ್ನಿಸಿತು. ಕೇಳಿಬಿಡಲಾ ಅಂದುಕೊಂಡಳು. ಆದರೆ ಒಮ್ಮೆ ನಾನೇ ಧಿಕ್ಕರಿಸಿದ್ದೆ. ಈಗ ನಾನಾಗಿಯೇ ಅವನ ಬಳಿ ಪ್ರೇಮ ನಿವೇದನೆ ಮಾಡಿದರೆ ತನ್ನ ಲಾಭಕ್ಕಾಗಿ, ಅಥವಾ ತನ್ನ ಹೆಸರು ಹಾಳಾಗಿದ್ದನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಹೀಗೆ ಮಾಡಿದಳು ಅಂದುಕೊಳ್ಳುತ್ತಾಳೇನೋ ಎಂದುಕೊಂಡಳು.
             ದಿಗಂತ ತನಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾನೆ. ಕಾರಣವಿದ್ದೋ ಇಲ್ಲದೆಯೋ ಆತನನ್ನು ಧಿಕ್ಕರಿಸಿದ್ದೆ. ಸಿನೆಮಾ ಜಗತ್ತಿನಲ್ಲಿ ಸಾಧಿಸುವ ಛಲವಿತ್ತು. ಆದರೆ ಆ ಜಗತ್ತೇ ನನ್ನನ್ನು ಈ ರೀತಿ ಒದ್ದು ಬಿಡುತ್ತದೆ ಎಂದುಕೊಂಡಿರಲಿಲ್ಲ. ಆಗ ನನ್ನನ್ನು ಕಾಪಾಡಿದ್ದು ಎಂದೋ ನಾನು ಒದ್ದಿದ್ದ ದಿಗಂತ. ಬದುಕು ಏನೆಲ್ಲ ತಿರುವನ್ನು ಕೊಟ್ಟುಬಿಡುತ್ತದಲ್ಲ. ಇಲ್ಲೇ ಸ್ವರ್ಗ, ಇಲ್ಲೇ ನರಕ ಅನ್ನುವುದು ಇದಕ್ಕೇ ಇರಬೇಕು ಎಂದುಕೊಂಡಳು ಸಿಂಧು.

**
            ಈಗಲಾದರೂ ಕೇಳಿಬಿಡಬೇಕು. ನನ್ನನ್ನು ಪ್ರೀತಿಸುತ್ತೀಯಾ.. ಅಂತ ಎಂದುಕೊಂಡ ದಿಗಂತ. ಆದರೆ ನಾನು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಪ್ರೀತಿಸು ಎಂದು ಹೇಳುವುದು ಎಷ್ಟು ಸರಿ? ಪ್ರೀತಿಸುವ ಸಲುವಾಗಿಯೇ ಇಷ್ಟೆಲ್ಲ ಮಾಡಿದನೇ ಎಂದುಕೊಂಡರೆ ಏನು ಮಾಡುವುದು? ಕೇಳಲಾ? ಬಿಡಲಾ? ಕೇಳಿ ಮಳ್ಳಾಗುವುದೇಕೆ? ಒಮ್ಮೆ ಕೇಳಿ ಅವಳಿಂದ ಧಿಕ್ಕರಿಸಿಕೊಂಡಿದ್ದರೂ ಇನ್ನೂ ಮನಸ್ಸೇಕೆ ಈ ರೀತಿ ಅಂದುಕೊಳ್ಳುತ್ತಿದೆ..? ದಿಗಂತನಿಗೆ ಆಲೋಚನೆ. ಉಂಚಳ್ಳಿ ಜಲಪಾತದ ಕಣಿವೆಯಿಳಿದಿದ್ದೇ ಗೊತ್ತಾಗಿರಲಿಲ್ಲ. ಆಲೋಚನೆಯ ನಡು ನಡುವಲ್ಲಿಯೇ ಮುಂದೆ ಮುಂದೆ ಸಾಗುತ್ತಿದ್ದರು.

**
            `ದಿಗಿ... ಮುಂದೆ..? ಸಿನೆಮಾ ಜಗತ್ತಿನಲ್ಲಿ ಬಹಳ ಸಾಧನೆ ಮಾಡಿದೆ..? ಮುಂದೇನು ಮಾಡಬೇಕು ಅಂದ್ಕೊಂಡಿದ್ದೀಯಾ..?' ಸಿಂಧು ಆತನನ್ನು ಮಾತಿಗೆಳೆದಿದ್ದಳು.
            `ಇನ್ನೂ ನಾಲ್ಕೈದು ಸಿನೆಮಾಕ್ಕೆ ಆಫರ್ ಇದೆ. ಆದರೆ ನಾನೇ ಒಪ್ಪಿಕೊಳ್ಳಲಾ, ಬೇಡವಾ ಎನ್ನೋ ಸಂದಿಗ್ಧತೆಯಲ್ಲಿದ್ದೇನೆ. ಮಲೆಯಾಳಮ್ಮಿನದ್ದು ಒಂದು. ತೆಲುಗಿನದ್ದೊಂದು. ಬಾಲಿವುಡ್ಡಿಗೆ ಹೋಗಲಾ ಅನ್ನಿಸುತ್ತಿದೆ.. ಆದರೆ ಯಾಕೋ ಸಿನಿಮಾ ಜಗತ್ತು ನನ್ನಲ್ಲಿ ಹೇಳಲಾಗದಂತಹ ಭಾವನೆಗಳನ್ನು ಮೂಡಿಸುತ್ತಿದೆ.. ಗೊಂದಲಗಳು ಕಾಡುತ್ತಿವೆ. ಮೊದಲಿನ ಏಕಾಗ್ರತೆ ಇಲ್ಲವೇ ಇಲ್ಲ ಎಂಬಂತಾಗಿದೆ,,'
            `ಹುಂ. ನಿಜ. ನನಗೂ ಅದೇ ರೀತಿ ಅನ್ನಿಸ್ತಿದೆ. ಏನೆಲ್ಲಾ ಸಾಧಿಸಿದೆನಲ್ಲ ಅಂತ ನಾನು ಹಾರಾಡಿದ್ದೂ ಜಾಸ್ತಿ ಆಯ್ತೇನೋ ಅನ್ನಿಸ್ತಿದೆ. ಅಂತ ಹೊತ್ತಿನಲ್ಲೇ ನನ್ನ ಮೇಲೆ ಏನೆಲ್ಲ ಆರೋಪಗಳು ಬಂದವು. ಹೆಸರು ಹಾಳಾಯಿತು. ಖಂಡಿತ ನೀನಿಲ್ಲದಿದ್ದರೆ ನಾನು ಏನಾಗುತ್ತಿದ್ದೆನೋ. ನನ್ನ ಪಾಲಿಗೆ ನೀನು ದೇವರಂತೆ ಬಂದೆ. ನಾನು ನಿನಗೆ ಎಷ್ಟೆಲ್ಲ ನೋವು ಕೊಟ್ಟೆ. ಆದರೂ ನೀನು ನನ್ನ ಜೊತೆ ನಿಂತೆಯಲ್ಲ. ನೀನ್ಯಾಕೆ ಇಷ್ಟೆಲ್ಲ ಒಳ್ಳೆಯವನು? ನಿನ್ನಂತಹವನನ್ನು ನಾನು ಕಳೆದುಕೊಂಡೆನಲ್ಲ ಅಂತ ಅನ್ನಿಸುತ್ತಿದೆ.  ಯಾಕೋ ನಾನು ಈ ಸಿನಿಮಾ ಜಗತ್ತನ್ನು ಬಿಟ್ಟು ಬಿಡೋಣ ಅಂದುಕೊಂಡಿದ್ದೇನೆ.. ಹಾಳೂ ಜಗತ್ತು ಅದು. ತಪ್ಪಿಲ್ಲದಿದ್ದರೂ ನನ್ನ ಹೆಸರನ್ನು ಕೆಡಿಸಿತು. ನೀನು ನನ್ನ ಪಾಲಿಗೆ ಆಪದ್ಭಾಂಧವ.. ನಿನ್ನನ್ನು ನಾನು ಹೇಗೆ ಮರೆಯಲಿ' ಎಂದು ಹೇಳಿದ ಸಿಂಧು ದಿಗಂತನ ಕೈ ಹಿಡಿದು ಹಿತವಾಗಿ ಒಂದು ಮುತ್ತು ಕೊಟ್ಟಳು. ದಿಗಂತ ಚಡಪಡಿಸಿದ.
           `ನನ್ನಲ್ಲೂ ಆ ಆಲೋಚನೆಯಿದೆ. ನಮಗೆ ಈ ಸಿನಿಮಾ ಜಗತ್ತು, ಅದರ ರಂಗು, ನಾಟಕೀಯತೆ, ಯಾರನ್ನೋ ಓಲೈಸುವುದು, ಬಣ್ಣ ಕಳಚಿದ ಮೇಲೆ ಕಾಡುವ ಏಕಾಂಗಿತನ, ಸದಾ ಕಾಡುವ ಭಯ.. ಥತ್.. ಯಾರಿಗೆ ಬೇಕಪ್ಪಾ ಈ ಬದುಕು ಎನ್ನಿಸುತ್ತಿದೆ. ನಿಜ.. ನೀನು ನನ್ನನ್ನು ಧಿಕ್ಕರಿಸಿದ್ದೆಯಲ್ಲ. ಆಗಲೇ ನಾನು ನಿನ್ನ ಕನಸಿನ ಸಿನಿಮಾ ಜಗತ್ತಿನಲ್ಲಿಯೇ ನಾನೂ ಸಾಧನೆ ಮಾಡಬೇಕು ಎಂದುಕೊಂಡೆ. ಸಾಧನೆಯನ್ನೂ ಮಾಡಿದೆ. ಆದರೆ ಸಾಧನೆ ಮಾಡಿದ ಮೇಲೆ ಏನೂ ಇಲ್ಲ ಅನ್ನಿಸ್ತಾ ಇದೆ. ಏಕಾಂಗಿತನ, ಅದೇನೋ ಖೀನ್ನತೆ ನನ್ನನ್ನು ಆವರಿಸುತ್ತಿದೆ. ಹಿಂದಿನ ಟ್ರೆಕ್ಕಿಂಗುಗಳು, ಕಾಡಿನಲ್ಲಿ ಓಡಾಟ.. ಈ ಸಂದರ್ಭಗಳಲ್ಲಿ ಇದ್ದ ಕ್ರಿಯಾಶೀಲತೆಯೆಲ್ಲ ಈಗ ಸತ್ತುಹೋಯಿತೇನೋ ಅನ್ನಿಸುತ್ತಿದೆ. ಅದಕ್ಕೇ ನಾನು ಒಂದು ನಿರ್ಧಾರಕ್ಕೆ ಬಂದಿದ್ದೀನಿ. ಇಲ್ಲೇ ಜಲಪಾತದ ಅಂಚಿನಲ್ಲೇ ಒಬ್ಬರು ಜಮೀನು ಕೊಡುತ್ತಿದ್ದಾರೆ. ಜಮೀನನ್ನು ಕೊಂಡು ಕೃಷಿಕನಾಗೋಣ ಅಂತ ನಾನು ಆಲೋಚನೆ ಮಾಡಿದ್ದೀನಿ.. ಏನಂತೀಯಾ..?'
            `ಖಂಡಿತ ಒಳ್ಳೆಯ ಆಲೋಚನೆ ನಿನ್ನದು. ನಾನೂ ಈ ನಿಟ್ಟಿನಲ್ಲಿ ಚಿಂತಿಸಿದ್ದೆ ನೋಡು.. ವೆಚ್ಚಕ್ಕೆ ಹೊನ್ನಿರಲು.. ಆಹಾ.. ಬೆಚ್ಚನೆ ಮನೆಯಿರಲು.. ಯಾಕೋ ಕಾಲೇಜು ದಿನಗಳಲ್ಲಿ ಓದಿದ್ದ ಕಗ್ಗ ನೆನಪಾಗುತ್ತಿದೆ ನೋಡು..' ಸಿಂಧು ಮೆಲ್ಲಗೆ ಉಸುರಿದ್ದಳು..
           `ಸಿಂಧು... ಒಂದು ಮಾತು ಕೇಳಲಾ..?'
           `ಏನು..?'
           `ಹೇಗೆ ಕೇಳಬೇಕು ಅಂತ ಗೊತ್ತಾಗುತ್ತಿಲ್ಲ...'
           `ಕೇಳು ಪರವಾಗಿಲ್ಲ... ಅಂತದ್ದೇನಪ್ಪಾ.. ನನ್ನ ಬಳಿ ಕೇಳುವಂತದ್ದು..' ಸಿಂಧು ಅಚ್ಚರಿಯಿಂದ ಕೇಳಿದ್ದಳು.
           `ನಮ್ಮನ್ನು ಹತ್ತಿರಕ್ಕೆ ತಂದಿದ್ದು ಈ ಟ್ರೆಕ್ಕಿಂಗು. ನಮ್ಮ ಬದುಕನ್ನು ಬದಲಾಯಿಸಿದ್ದೂ ಇದೆ. ತಿರುವು ನೀಡಿದ್ದೂ ಇದೆ. ಇದೇ ಟ್ರೆಕ್ಕಿಂಗು ಮತ್ಯಾಕೆ ನಮ್ಮ ಬದುಕಲ್ಲಿ ಇನ್ನೊಂದು ತಿರುವು ನೀಡಬಾರದು..?'
            `ಅಂದರೆ...'
            `ನೀನು ನನ್ನನ್ನೇನೋ ಧಿಕ್ಕರಿಸಿದೆ ನಿಜ. ಆದರೆ ನಿನ್ನೆಡೆಗಿನ ನನ್ನ ಭಾವನೆ ಎಂದಿಗೂ ಬದಲಾಗೋದಿಲ್ಲ. ಖಂಡಿತ ನನ್ನ ಮನಸ್ಸಿನಲ್ಲಿ ನಿನಗೊಂದು ಸ್ಥಾನವಿದೆ. ಅಂದಿಗೂ, ಇಂದಿಗೂ ಎಂದೆಂದಿಗೂ ನನ್ನ ಬದುಕು ನಿನಗಾಗಿ ಎಂದುಕೊಂಡಿದ್ದೇನೆ. ಆ ದಿನ ನಿನ್ನೆಡೆಗೆ ನನ್ನಲ್ಲಿ ಎಷ್ಟು ಪ್ರೀತಿಯಿತ್ತೋ.. ಈಗಲೂ ಅಷ್ಟೇ ಪ್ರೀತಿಯಿದೆ. ದುಪ್ಪಟ್ಟು ಹೆಚ್ಚಾಗಿದ್ದರೂ ಇರಬಹುದು. ಮತ್ತೊಮ್ಮೆ ಕೇಳುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೆ. ಪ್ರೀತಿಸುತ್ತಿದ್ದೇನೆ. ಪ್ರೀತಿಸುತ್ತಲೇ ಇರುತ್ತೇನೆ.. ನೀನೂ ನನ್ನನ್ನು...'
              `........'
              `ಬದುಕಿನಲ್ಲಿ ಒಟ್ಟಾಗಿ ಬಾಳೋಣ.. ಸಿನೆಮಾ ಲೋಕವನ್ನು ಬಿಟ್ಟು ಕೃಷಿಕರಾಗಿದ್ದುಬಿಡೋಣ. ಏನಂತೀಯಾ..?' ದಿಗಂತ ಕೇಳಿದ್ದ..
              `ಒಂದು ಮಾತು ಹೇಳಲೇ ದಿಗಿ.. ನೀನು ಆಗ ನನ್ನ ಬಳಿ ಪ್ರೇಮ ನಿವೇದನೆ ಮಾಡಿದೆ. ನಾನೇನೋ ಧಿಕ್ಕರಿಸಿದೆ. ಆಗ ನನ್ನ ಮನಸ್ಸಿನಲ್ಲಿ ಮಹತ್ವಾಕಾಂಕ್ಷೆ ಎನ್ನುವುದು ಕುಣಿದಾಡುತ್ತಿತ್ತು. ಸಿನಿಮಾ ಜಗತ್ತಿನ ರಂಗು ನನ್ನನ್ನು ಕಾಡುತ್ತಲೇ ಇತ್ತು. ನಿನ್ನೆಡೆಗೆ ಆಗ ಪ್ರೀತಿ ಇದ್ದರೂ ಕೂಡ ಸಿನಿಮಾ ರಂಗಿನ ಎದುರು ಅದು ಚಿಲ್ಲರೆಯಂತಾಗಿತ್ತು. ಆದರೆ ನಾನು ನಿನ್ನನ್ನು ಧಿಕ್ಕರಿಸಿದಾಗಲೂ ನೀನು ನನ್ನ ಬೆನ್ನಿಗೆ ನಿಂತೆಯಲ್ಲ.. ಈ ಸಂದರ್ಭದಲ್ಲಿ ನಾನು ನಿನ್ನ ಪ್ರೇಮವನ್ನು ಒಪ್ಪಿಕೊಂಡರೆ ಅದು ನನ್ನ ಸ್ವಾರ್ಥ ಅನ್ನಿಸುವುದಿಲ್ಲವಾ? ಯಾಕೋ ಬಹಳ ಚಿಕ್ಕವನಾಗಿಬಿಟ್ಟೆ ದಿಗಿ.. ಆದರೂ ಹೇಳುತ್ತೇನೆ.. ನಿನ್ನ ಸಾಂಗತ್ಯ, ಒಡನಾಟ ನನ್ನ ಬದುಕಿನಲ್ಲಿ ಮಧುರವಾದುದು. ಅದನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ.. ಜಗತ್ತು ಏನೇ ಹೇಳಲಿ... ಆಗ ಮಾಡಿದ ತಪ್ಪನ್ನ ಮತ್ತೆ ಮಾಡುವುದಿಲ್ಲ ದಿಗಿ..  ಬಾ ಹೊಸ ಬದುಕು ಬಾಳೋಣ.. ತೋಟಗಳಲ್ಲಿ... ಗದ್ದೆಗಳಲ್ಲಿ.. ಮುಖದ ಮೇಲೆ ಚಿತ್ರರಂಗದ ಬಣ್ಣ ಸಾಕು.. ಗದ್ದೆಯಲ್ಲಿನ ಅರಲು.. ಮಣ್ಣಿನ ವಾಸನೆ ಮತ್ತೆ ಮತ್ತೆ ಬೇಕು ಅನ್ನಿಸುತ್ತಿದೆ... ನಿನ್ನ ಪ್ರೀತಿ ಕೂಡ.. ..ನಿನ್ನ ಪ್ರೀತಿಗೆ ನನ್ನ ಸಮ್ಮತಿ ಇದೆ...  ಹುಂ....' ಎಂದು ಸಿಂಧು ಹೇಳಿದ ತಕ್ಷಣ ದಿಗಂತ ಆಕೆಯನ್ನು ಬಾಚಿ ತಬ್ಬಿಕೊಂಡಿದ್ದ. ಕಣ್ಣಿನಿಂದ ಆನಂದದ ಭಾಷ್ಪ ಭುವಿಗಿಳಿಯುತ್ತಿತ್ತು. ಉಂಚಳ್ಳಿಯ ಜಲಧಾರೆ ಸಾಕ್ಷಿಯಾಗಿ ನಿಂತಿತ್ತು.

**
(ಮುಗಿಯಿತು)

No comments:

Post a Comment