Friday, June 6, 2014

ಮೂಕ ರೋದನ

`ಬೌ... ವವ್... ಬೌ ಬೌ ಬೌ.... ಬಕ್...'
`ಅಮ್ಮಾ... ಅದೇನದು ಸದ್ದು...? ಯಾರದು..? ಯಾರೋ ಕೂಗುತ್ತಿದ್ದಾರೆ' ಹುಟ್ಟಿ ಹದಿನೈದು ದಿನವೂ ಆಗಿರದಿದ್ದ ಮರಿ ತಾಯಿಯನ್ನು ಕೇಳಿತು.
`ಹಾಗೆ ಕೂಗುತ್ತಿರುವುದು ನಾಯಿ ಮಗು. ಮನುಷ್ಯರು ಅದನ್ನು ಸಾಕುತ್ತಾರೆ.. ಅದಕ್ಕೆಲ್ಲೋ ಮರದ ಮೇಲೆ ಇರುವ ನಾವು ಕಾಣಿಸಿರಬೇಕು..' ತಾಯಿ ಉತ್ತರ ನೀಡಿತು.
`ಅಮ್ಮ ಮನುಷ್ಯರೆಂದರೆ ಯಾರು..?'
`ಭೂಮಿಯ ಮೇಲೆ ಅತ್ಯಂತ ಬುದ್ದಿವಂತ ಪ್ರಾಣಿ ಎಂದು ಕರೆಸಿಕೊಳ್ಳುವುದೇ ಮನುಷ್ಯ ಮಗು. ತಾನೇ ಸ್ವತಂತ್ರ ಎಂದುಕೊಳ್ಳುವ ಮನುಷ್ಯ ಉಳಿದ ಪ್ರಾಣಿಗಳನ್ನು ತನ್ನ ಅಡಿಯಾಳಾಗಿ ಸಾಕಲು ನೋಡುತ್ತಾನೆ ಮಗು. '
`ಅವರು ನಮ್ಮನ್ನೂ ಸಾಕುತ್ತಾರಾ..?'
`ಗೊತ್ತಿಲ್ಲ ಮಗು.. ನಾವು ಯಾವತ್ತೂ ಅವರ ಕೈಗೆ ಸಿಕ್ಕಿಲ್ಲ. ಸಾಕುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಕೊಲ್ಲಲು ನೋಡುತ್ತಾರೆ ಮಗು..'
`ಯಾಕೆ ಕೊಲ್ಲುತ್ತಾರೆ..?'
`ನಾವು ಪುನುಗಿನ ಬೆಕ್ಕುಗಳು ಮಗು. ನಮ್ಮ ತುಪ್ಪಳದಲ್ಲಿನ ವಾಸನೆಗಳು ಮನುಷ್ಯನಿಗೆ ಪರಮಾಪ್ತವಂತೆ. ಆತನ ರೋಗಗಳಿಗೆ ನಮ್ಮ ಪುನುಗು ಔಷಧಿಯಾಗಿ ಬಳಕೆಯಾಗುತ್ತವಂತೆ.. ಇನ್ನೂ ಹಲವು ಸಾರಿ ಆತನ ತನ್ನ ಮೈಗೆ ಪೂಸಿಕೊಳ್ಳುವ ಸುಗಂಧ ದ್ರವ್ಯವನ್ನು ನಮ್ಮ ಪುನುಗಿನಿಂದಲೇ ತಯಾರು ಮಾಡುತ್ತಾರಂತೆ ಮಗು..'
`ಅಮ್ಮ ಮನುಷ್ಯರಿಗೆ ಪುನುಗನ್ನು ಬಿಟ್ಟರೆ ಮೈಗೆ ಪೂಸಿಕೊಳ್ಳಲು ಬೇರೆ ಸಿಗೋದೇ ಇಲ್ಲವೇ..?'
`ಸಿಗುತ್ತೆ ಮಗು.. ವಾಸನೆ ಬೀರುವ ಕೃಷ್ಣ ಮೃಗದ ಚರ್ಮ, ಗೋರೋಚನ ವಾಸನೆ ಬೀಡುವ ಆಕಳುಗಳ ಚರ್ಮ, ಬೆಕ್ಕಿನ ಮೂತ್ರಪಿಂಡ, ಕರುಳು, ಅಳಿಲಿನ ಬಣ್ಣಗಳು, ಹಾವಿನ ಚರ್ಮ, ಕಪ್ಪೆಯ ಕಾಲುಗಳು ಹೀಗೆ ಎಲ್ಲವೂ ಬೇಕು ಮಗು..'
`ಅಮ್ಮ.. ಅದೋ ಅಲ್ಲಿ ಕೆಳಗೆ ಕಾಣುತ್ತಿದೆಯಲ್ಲ.. ಅದೇನದು..?'
`ಅದು ಮನುಷ್ಯರ ಮನೆ ಮಗು.. ಅಲ್ಲಿ ಮನುಷ್ಯರು ವಾಸ ಮಾಡುತ್ತಾರೆ..'
`ಅಮ್ಮ... ಮನುಷ್ಯರು ನಮ್ಮನ್ನು ಕೊಲ್ಲುತ್ತಾರೆ ಅಂದೆ.. ಆದರೆ ನೀನ್ಯಾಕೆ ನಮ್ಮ ಮನೆಯನ್ನು ಮನುಷ್ಯರ ಮನೆಯ ಬಳಿಯಲ್ಲೇ ಮಾಡಿದ್ದೀಯಾ..?'
`ನೋಡು ಮಗು ಮನುಷ್ಯರೆಂದರೆ ಎಲ್ಲ ಪ್ರಾಣಿಗಳಿಗೂ ಭಯ. ನಾವು ಕಾಡಲ್ಲಿದ್ದರೆ ಉಳಿದ ಕಾಡು ಪ್ರಾಣಿಗಳು ನಮ್ಮನ್ನು ತಿನ್ನಬಹುದು, ಕೊಲ್ಲಬಹುದು ಎನ್ನುವ ಭಯ. ಮನುಷ್ಯನ ಮನೆಯ ಬಳಿ ನಾವು ಮನೆ ಮಾಡಿಕೊಂಡರೆ ಉಳಿದ ಪ್ರಾಣಿಗಳು ನಮ್ಮ ಬಳಿ ಬರುವುದಿಲ್ಲ. ನೋಡು ಅದೋ ಆ ಮಾವಿನ ಮರದ ಮೇಲೆ ಬೆಳ್ಳಕ್ಕಿ ಗೂಡು ಕಟ್ಟಿದೆ. ಅದೇ ಪಕ್ಕದಲ್ಲಿ ನೋಡು ಅಲ್ಲೊಂದು ಗಿಳಿ, ಮತ್ತಿ ಮರದ ಮೇಲೆ ಕೇಶಳಿಲು ಮರಿ ಮಾಡಿಕೊಂಡಿದೆ.. ಇವರೆಲ್ಲರೂ ಮನುಷ್ಯನ ಮನೆಯ ಬಳಿ ಮನೆ ಮಾಡಿಕೊಂಡು ಉಳಿದ ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುತ್ತಿವೆ..'
`ಹೌದಲ್ಲಮ್ಮಾ.. ನನಗೆ ಇವರೆಲ್ಲ ಕಾಣಿಸಿರಲೇ ಇಲ್ಲ..'
`ಅಯ್ಯೋ ಪೆದ್ದು.. ನಿನ್ನೆ ತಾನೆ ನಿನಗೆ ಕಣ್ಣು ಮೂಡಿದೆ. ಹೇಗೆ ಕಾಣಬೇಕು ಹೇಳು.. ನೀನು ಹುಟ್ಟಿ ಸರಿಯಾಗಿ ಹದಿನೈದು ದಿನಗಳಾದವು ಮಗು. ಹದಿನೈದು ದಿನದ ನಂತರ ಕಣ್ಣು ಮೂಡುತ್ತದೆ. ಇಷ್ಟಾದ ಮೇಲೆ ನೀನು ನಿಧಾನವಾಗಿ ಬೆಳೆಯಲು ಆರಂಭಿಸುತ್ತೀಯಾ.. ನಿನಗೆ ಈಗ ಕಾಣುತ್ತಿರುವುದೆಲ್ಲ ಹೊಸ ಜಗತ್ತು. ನೀನಿನ್ನೂ ತಿಳಿಯಬೇಕಾದದ್ದು ಬಹಳಷ್ಟಿದೆ ಮಗು..'
`ಅಮ್ಮಾ.. ಅದೇನೋ ಭಯಂಕರ ಸದ್ದು.. ಗುರ್ರೆನ್ನುತ್ತಿದೆ... ಪೋಂ ಪೋಂ ಅನ್ನುತ್ತಿದೆ.. ಏನದು..?'
`ಅದಾ.. ಮನುಷ್ಯರು ಬಳಸುವ ವಾಹನ ಅದು ಮಗು..'
`ಮನುಷ್ಯರು ಅದನ್ಯಾಕೆ ಬಳಕೆ ಮಾಡುತ್ತಾರೆ..?'
`ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು, ಕೆಲಸ ಮಾಡಲು ಬಳಕೆ ಮಾಡುತ್ತಾರೆ ಮಗು..'
`ನಾವೂ ಅದನ್ನು ಬಳಸಬಹುದಲ್ಲ...'
`ಅದು ಬಹಳ ದೊಡ್ಡದು..ಮಗು.. ಮನುಷ್ಯರು ಪರಮ ಆಲಸಿಗಳು. ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲು ಇಲ್ಲ ಸಲ್ಲದ ನೆಪ ಹೂಡುತ್ತಾರೆ. ಯಂತ್ರಗಳ ಸಹಾಯದಿಂದ ಮಾಡಿಕೊಳ್ಳುತ್ತಾರೆ. ಇಲ್ಲ ಸಲ್ಲದ ರೋಗ ಬಂದು ಸಾಯುತ್ತಾರೆ. ಆದರೆ ನಾವು ಹಾಗಲ್ಲ. ಈ ದಿನ ಆಹಾರ ಬೇಕು ಅಂದರೆ ಇವತ್ತು ಓಡಾಡುತ್ತೇವೆ. ತಿನ್ನುತ್ತೇವೆ ಹಾಯಾಗಿ ನಿದ್ದೆ ಮಾಡುತ್ತೇವೆ. ಮತ್ತೆ ನಾಳೆಯದ್ದು ನಾಳೆಗೆ. ನಮಗೆ ಚನ್ನಾಗಿ ನಿದ್ದೆ ಬರುತ್ತದೆ ಮಗು.. ಮನುಷ್ಯನಿಗೆ ಹಾಗಲ್ಲ..'
`ಹಾಗಾದರೆ ಮನುಷ್ಯ ನಿದ್ದೆಯನ್ನೇ ಮಾಡುವುದಿಲ್ಲವೇ..?'
`ಹಾಗೇನಿಲ್ಲ ಮಗು.. ಆದರೆ ಮನುಷ್ಯರಲ್ಲಿ ಹಲವರು ನಿದ್ದೆ ಬರದೇ ಮಾತ್ರೆಗಳನ್ನು ಸೇವಿಸುತ್ತಾರೆ ಎನ್ನುವುದನ್ನು ನಾನು ಕೇಳಿದ್ದೇನೆ. ಮಾವಿನ ಮರದಲ್ಲಿ ಗೊಳಿಯಕ್ಕ ಇದ್ದಾಳಲ್ಲ.. ಯಾವುದೋ ಕಾಳು ಎಂದು ಒಂದಿನ ಮನುಷ್ಯನ ಮನೆಯ ಬಳಿ ಇದ್ದ ಮಾತ್ರೆಯನ್ನು ತಿಂದಿದ್ದಳಂತೆ.. ಗೂಡಿಗೆ ಕಷ್ಟಪಟ್ಟು ಹಾರಿ ಬಂದು ನಿದ್ದೆ ಮಾಡಿದವಳು.. ಎರಡು ದಿನ ಎದ್ದಿರಲಿಲ್ಲ..'
`ಅಮ್ಮಾ.. ಮನುಷ್ಯರೆಂದರೆ ಎಷ್ಟು ಕ್ರೂರಿಗಳು ಅಲ್ಲವಾ..?'
`ಹೌದು ಮಗು... ಆದರೆ ನಮ್ಮ ಜೀವನ ನಡೆಯಬೇಕು ಅಂತಾದರೆ ಮನುಷ್ಯ ಹತ್ತಿರದಲ್ಲೇ ಇರಬೇಕು ನೋಡು..'
`ಅಮ್ಮಾ.. ನೀನು ಹೇಳುವುದನ್ನು ಕೇಳಿದರೆ ನನಗೆ ಭಯವಾಗುತ್ತದಲ್ಲಮ್ಮಾ.. ನನ್ನ ಬಿಟ್ಟು ಎಲ್ಲೂ ಹೋಗಬೇಡ..'
`ಇಲ್ಲ ಮಗು.. ಎಲ್ಲೂ ಹೋಗೋದಿಲ್ಲ..'

***
             ತಾಯಿ ಪುನುಗುಬೆಕ್ಕು ಹಾಗೂ ಅದರ ಮರಿ ಮಾತನಾಡಿ ಎರಡು ಮೂರು ದಿನ ಕಳೆದಿರಲಿಲ್ಲ. ಅದೊಂದು ದಿನ ಆಗ ತಾನೆ ಆಹಾರವನ್ನು ಹುಡುಕಿಕೊಂಡು ತಾಯಿಬೆಕ್ಕು ಮನೆಯತ್ತ ಬರುತ್ತಿತ್ತು. ಮನೆಗೆ ಬರುವ ದಾರಿಯೆಲ್ಲ ಯಾಕೋ ಬದಲಾದಂತೆ ಅನ್ನಿಸುತ್ತಿತ್ತು. ಸುತ್ತಮುತ್ತಲ ಮರಗಳನ್ನು ಕಡಿಯಲಾಗಿತ್ತು. `ಅಯ್ಯೋ ತನ್ನ ಮರಿ..' ಎಂದುಕೊಂಡು ಮನೆಯತ್ತ ಕುಪ್ಪಳಿಸುತ್ತ ಕುಪ್ಪಳಿಸುತ್ತ ಓಡಿ ಬಂದಿತು.
            ಯಾರೋ ಒಬ್ಬ ಮರವನ್ನು ಹತ್ತುತ್ತಿದ್ದ. ನೋಡ ನೋಡುತ್ತಿದ್ದಂತೆ ಹತ್ತಿದ. ಗೂಡಿನ ಮೇಲ್ಭಾಗದ ಕೊಂಬೆ, ರೆಂಬೆಗಳನ್ನೆಲ್ಲ ಕಡಿದ.. ಅಬ್ಬ ತನ್ನ ಮರಿ ಹಾಗೂ ಗೂಡು ಆತನ ಕಣ್ಣಿಗೆ ಕಾಣಿಸಲಿಲ್ಲವಲ್ಲ.. ದೇವರೆ.. ಎಂದು ನಿಟ್ಟುಸಿರು ಬಿಡುತ್ತಿರುವ ಹೊತ್ತಿನಲ್ಲಿಯೇ ಅಯ್ಯೋ.. ಆತನಿಗೆ ಗೂಡು ಕಂಡು ಬಿಟ್ಟಿತೇ.. ಬೇಡ ಬೇಡ.. ನನಗೊಂದೇ ಮರಿ.. ಅಯ್ಯೋ ಕೈಯಲ್ಲಿ ಹಿಡಿದೇ ಬಿಟ್ಟ.. ಮೆತ್ತಗೆ ಹಿಡಿ ಮಾರಾಯಾ.. ಪುಟ್ಟ ಮರಿ.. ದೇವರೆ.. ಹಿಡಿದವನೇ ಹೇಗೆ ಹಲ್ಲು ಕಡಿಯುತ್ತಿದ್ದಾನೆ ನೋಡು.. ಬಿಡು.. ಅಲ್ಲೇ ಬಿಡು.. ನಾನು ಕಚ್ಚಿಕೊಂಡು ದೂರಕ್ಕೆ ಹೋಗುತ್ತೇನೆ. ಇನ್ನೆಲ್ಲಾದರೂ ಮನೆ ಮಾಡಿಕೊಂಡು ಆರಾಮಾಗಿ ಇರುತ್ತೇನೆ. ನನ್ನ ಮರಿ ಇನ್ನೂ ಜಗತ್ತನ್ನು ಕಾಣುವುದು ಸಾಕಷ್ಟಿದೆ.
           ಬೇಡ.. ಬೇಡ.. ಬೇ....ಡಾ.. ಅಯ್ಯೋ ಕೆಳಕ್ಕೆ ಎಸೆದೇ ಬಿಟ್ಟ.. ಕೆಳಗಿರುವ ಇನ್ನೊಬ್ಬ ಮರಿಯನ್ನು ಹಿಡದ.. ದೇವರೆ ಮರಿಗೆ ಏನೂ ಆಗದಿರಲಿ.. ಮರದ ಮೇಲಿನಿಂದ ಹಾಗೆ ಎಸೆದರೆ ಕೈ ಕಾಲು ಮುರಿದು ಹೋದರೆ.. ಪುಟ್ಟ ಕೂಸು ಅದು.. ನಾನು ಹೇಳಿದ್ಯಾಕೆ ಈ ಮನುಷ್ಯರಿಗೆ ಅರ್ಥವಾಗುತ್ತಿಲ್ಲ..? ಬೇಡ....
           ಮರಿಯನ್ನೆಲ್ಲಿಗೋ ಒಯ್ಯುತ್ತಿದ್ದಾನಲ್ಲ.. ಅವನ ಹಾಳು ಕಣ್ಣಿಗೆ ನಾನೇ ಬೇಳಬೇಕೆ.? ನನ್ನ ಮರಿಯೇ ಕಾಣಬೇಕೆ.. ಮೊನ್ನೆಯಷ್ಟೇ ಮನುಷ್ಯನ ಬಗ್ಗೆ ಮಾತನಾಡಿಕೊಂಡಿದ್ದೆವಲ್ಲ.. ಇಷ್ಟು ಬೇಗ ಆತನಿಗೆ ನನ್ನ ಮೇಲೆ ದೃಷ್ಟಿ ಬಿದ್ದಿತಲ್ಲ.. ಛೇ..
           ಮರದಿಂದ ಮರಕ್ಕೆ ಕುಪ್ಪಳಿಸುತ್ತ, ಮರಿಯ ಹತ್ತಿರಕ್ಕೆ ಬರಲಾಗದೇ ತಾಯಿಬೆಕ್ಕು ಪರಿತಪಿಸುತ್ತಲೇ ಇತ್ತು. ಮನುಷ್ಯನಿಗೆ ಸಿಕ್ಕ ಮರಿ ಆಗಲೇ ಪ್ರಾಣವನ್ನು ಕಳೆದುಕೊಂಡಿತ್ತು. ಒಳ್ಳೆಯ ರೇಟು ಬಂದಿತು.. ಇನ್ನೂ ನಾಲ್ಕು ದಿನ ಬದುಕು ಚನ್ನಾಗಿ ಮಾಡಬಹುದು ಎನ್ನುವ ಆಲೋಚನೆಯಲ್ಲಿಯೇ ಮನುಷ್ಯ ಮರಿಯ ದೇಹವನ್ನು ಚೀಲದಲ್ಲಿ ತುಂಬಿಕೊಂಡಿದ್ದ. ಬೇಡ.. ಬಿಟ್ಟುಬಿಡಿ ಎಂದು ಕೂಗುತ್ತಿದ್ದ ಪುನುಗುಬೆಕ್ಕಿನ ಆರ್ತನಾಡ ಮನುಷ್ಯನಿಗೆ ಅರ್ಥವೇ ಆಗಲಿಲ್ಲ. ಕಿಚ ಪಿಚ ಕೂಗು ನಾಯಿಗಳ ಬೊಗಳುವಿಕೆಯಲ್ಲಿ ಕಳೆದಹೋಗಿತ್ತು. ಮಾವಿನ ಮರದಲ್ಲಿದ್ದ ಕೋಗಿಲೆ, ಮತ್ತಿ ಮರದಲ್ಲಿದ್ದ ಕೇಶಳಿಲು, ನೇರಲ ಮರದಲ್ಲಿದ್ದ ಗಿಳಿಗಳೆಲ್ಲ ಗಪ್ಪಾಗಿ ಕೂತಿದ್ದವು.. ಪುನುಗು ಬೆಕ್ಕಿಗೆ ಸಾಂತ್ವನ ಹೇಳಲೂ ಆಗದಂತೆ ಮೂಕವಾಗಿ ರೋಧಿಸುತ್ತಿದ್ದವು.

No comments:

Post a Comment