Wednesday, June 11, 2014

ಒಲವ ಲತೆಗೆ ನೀರನೆರೆದ.. ಭಾಗ-3

                  ನಂತರದ ದಿನಗಳಲ್ಲಿ ಸಿಂಧು ಹಾಗೂ ದಿಗಂತ ಇಬ್ಬರ ಬಾಳಿನಲ್ಲಿಯೂ ಅನೇಕ ತಿರುವುಗಳು ಘಟಿಸಿದ್ದವು. ಬದುಕಿನಲ್ಲಿ ಇಬ್ಬರೂ ಅನೇಕ ಪಯಣಗಳನ್ನು ಕೈಗೊಳ್ಳಬೇಕಾಗಿಯೂ ಬಂದಿದ್ದವು. ಮೊದ ಮೊದಲು ಮಾಡೆಲ್ ಆಗಿ ಬೆಂಗಳೂರಿನಲ್ಲಿ ಪರಿಚಯವಾದ ಸಿಂಧು ಕೊನೆಗೊಮ್ಮೆ ಸಿನೆಮಾ ಜಗತ್ತಿಗೆ ಕಾಲಿಟ್ಟಿದ್ದಳು. ಹೆಸರಾಂತ ನಟ ಹಾಗೂ ನಿರ್ದೇಶಕರಿಬ್ಬರ ಪರಿಚಯವೂ ಆಗಿತ್ತು. ನಟನೊಂದಿಗೆ ನಟಿಸಲು ಒಪ್ಪಿದ್ದಳು. ಆಕೆ ನಟಿಸಿದ ಮೊದಲ ಚಿತ್ರವೇ ಶತದಿನವನ್ನು ಆಚರಿಸಿದ್ದರಿಂದ ಬಿಡುವಿಲ್ಲದಷ್ಟು ಅವಕಾಶಗಳು ಲಭ್ಯವಾಗಿದ್ದವು. ಕನಿಷ್ಟ ಮೂರು ವರ್ಷಗಳ ಕಾಲ ಬಿಡುವಿಲ್ಲದಂತೆ ಸಿನೆಮಾ ಜಗತ್ತನ್ನು ಆಳಿದಳು ಸಿಂಧು. ಚಿತ್ರ ಜಗತ್ತು ಆಕೆಗೆ ಅನೇಕ ಪ್ರಶಸ್ತಿಗಳನ್ನೂ, ಬಿರುದನ್ನೂ ನೀಡಿತ್ತು. ಹೆಸರು, ಅಭಿಮಾನಿಗಳನ್ನು ನೀಡಿತ್ತು.
**
                 ಸಿಂಧು ಒಂದೇ ಮಾತಿನಿಂದ ದಿಗಂತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ಉಪ್ಪರಿಗೆಯ ಮೇಲೆ ಹಾಯಾಗಿ ವಿಹಾರ ಮಾಡುತ್ತಿದ್ದವನು ಧಡಕ್ಕನೆ ಚರಂಡಿಗೆ ಬಿದ್ದಂತಹ ಆಘಾತವಾಗಿತ್ತು ದಿಗಂತನಿಗೆ. ತಾನು ನಂಬಿದ್ದ ಬದುಕು ತನ್ನನ್ನು ಅಸಹ್ಯವಾಗಿ ನೋಡುತ್ತಿದ್ದೆಯೇನೋ ಅನ್ನಿಸಿತ್ತು. ಮಾತಿನ ಮಹಲಿನಲ್ಲಿ ಆರಾಮಾಗಿದ್ದ ದಿಗಂತ ಇದ್ದಕ್ಕಿದ್ದಂತೆ ಮೌನದ ಕೋಟೆಯೊಳಗೆ ಸೇರಿಕೊಂಡ. ಡಿಗ್ರಿ ಮುಗಿಸುವ ವೇಳೆಗೆ ದಿಗಂತನಲ್ಲಿ ಮಾತು ಸತ್ತುಹೋಗಿದೆಯೇನೋ ಅನ್ನಿಸುವಂತಾಗಿತ್ತು. ದಿಗಂತನ ಜೊತೆಗೆ ಟ್ರೆಕ್ಕಿಂಗಿಗೆ ಹೋಗಿ ಚಾರಣ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದ ಮಿತ್ರರೆಲ್ಲ ದಿಗಂತನ ಸ್ಥಿತಿಗೆ ತೀವ್ರ ಬೇಸರವನ್ನು ವ್ಯಕ್ತ ಪಡಿಸಿದ್ದರು. ಒಂದೆರಡು ವರ್ಷಗಳ ಕಾಲ ದಿಗಂತ ಮೌನಿಯಾಗಿಯೇ ಇದ್ದ. ಎಷ್ಟು ಬೇಕೋ ಅಷ್ಟು ಮಾತುಗಳು. ಮನಸ್ಸಿನಲ್ಲಿ ಯಾವಾಗಲೂ ಅದೇನೋ ಯೋಚನೆಗಳನ್ನು ಕೈಗೊಳ್ಳುತ್ತಿದ್ದಂತೆ ಅನ್ನಿಸುತ್ತಿತ್ತು.
               ಡಿಗ್ರಿ ಮುಗಿಯುತ್ತಿದ್ದಂತೆ ದಿಗಂತ ಮಾಡಿದ ಮೊದಲನೇ ಕೆಲಸವೇ ವೆಬ್ ಸೈಟ್ ಮಾಡಿದ್ದು. ವೆಬ್ ಸೈಟ್ ಮೂಲಕ ಚಾರಣದ ಎಲ್ಲ ಸಾದ್ಯತೆಗಳನ್ನೂ, ಶಿಬಿರಗಳನ್ನೂ ಕೈಗೊಂಡ. ಚಾರಣ ಆತನಿಗೆ ಹೆಸರನ್ನು ತಂದುಕೊಟ್ಟಿತು. ಚಾರಣ ಜಗತ್ತು ಎಷ್ಟು ಕಠಿಣವೋ ಆತನ ಮನಸ್ಸೂ ಕಠಿಣತೆಯ ಕಡೆಗೆ ಸಾಗಿತ್ತು. ಸಾಕಷ್ಟು ದುಡ್ಡಾದ ತಕ್ಷಣವೇ ಆತ ಬೆಂಗಳೂರಿಗೆ ಕಾಲಿರಿಸಿದ್ದ. ತನ್ನೆಲ್ಲ ಕಾಂಟ್ಯಾಕ್ಟುಗಳು, ಹೆಸರು, ಮಿತ್ರರ ಸಹಾಯದಿಂದ ಸಿಂಧುವಿಗೆ ಸೆಡ್ಡು ಹೊಡೆಯುತ್ತೇನೆ ಎಂಬಂತೆ ಸಿನೆಮಾ ಜಗತ್ತಿಗೆ ಕಾಲಿಟ್ಟುಬಿಟ್ಟಿದ್ದ.
              ದಿಗಂತನ ಸಿನೆಮಾ ಲೋಕದ ಆರಂಭ ಸಿಂಧುವಿನಂತೆ ಇರಲಿಲ್ಲ. ಗಾಡ್ ಫಾದರ್ ಇಲ್ಲದೆಯೇ ಚಿತ್ರರಂಗದಲ್ಲಿ ಕಾಲೂರುವುದು ಕಷ್ಟವೇ ಆಗಿತ್ತು. ಆರಂಭದಲ್ಲಿ ಸೈಡ್ ರೋಲುಗಳಲ್ಲಿ ನಟಿಸಿದ. ಹೀರೋನ ಜೊತೆಗೆ ಹೊಡೆದಾಡುವ ಪಾತ್ರವೋ, ಹೀರೋಗೆ ಸಹಾಯ ಮಾಡುವ ಪಾತ್ರ, ಹೀರೋನ ತಮ್ಮ, ಕಾಲೇಜಿನ ಗೆಳೆಯ, ಹೀರೋಯಿನ್ ತಮ್ಮ, ವಿಲನ್ನು, ರೌಡಿ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಆತ ನಟಿಸಿದ. ಸಿಕ್ಕ ಪಾತ್ರಗಳಲ್ಲೇ ನಟನೆಯನ್ನು ಪ್ರಚುರಪಡಿಸಿದ. ಅವಕಾಶ ಸಿಕ್ಕಾಗಲೆಲ್ಲ ಸಂಭಾಷಣೆಯನ್ನು ಬರೆಯುವುದೋ, ನಿರ್ದೇಶಕನಿಗೆ ಸಹಾಯ ಮಾಡುವುದೋ ಇತ್ಯಾದಿ ಕೆಲಸಗಳನ್ನೂ ನಿರ್ವಹಿಸಿದ. ಸಿನೆಮಾಗಳಲ್ಲಿ ನಟಿಸಿದಂತೆಲ್ಲ ಹೊಸಬರು, ಹಲವರು, ಹಿರಿಯರು ಪರಿಚಿತರಾದರು. ಯಶಸ್ಸೆಂಬುದು ಆರಂಭದ ದಿನಗಳಲ್ಲಿ ದಿಗಂತನಿಗೆ ಸುಲಭವಾಗಿ ದಕ್ಕಲೇ ಇಲ್ಲ. ಧೃತಿಗೆಡದ ದಿಗಂತ ಒಂದೊಂದೇ ಮೆಟ್ಟಿಲುಗಳನ್ನು ಕಟ್ಟುತ್ತ ಹೊರಟ. ಒಂದು ವರ್ಷದಲ್ಲಿ ಮುಖ್ಯ ಪಾತ್ರವನ್ನು ಹೊರತು ಪಡಿಸಿ ಇತರ ಪಾತ್ರಗಳಲ್ಲೆಲ್ಲ ನಟಿಸಿ ಸೈ ಎನ್ನಿಸಿಕೊಂಡ. ಸಹಾಯಕ ಪಾತ್ರಗಳಲ್ಲಿ ಒಂದೆರಡು ಪ್ರಶಸ್ತಿಗಳೂ ದಿಗಂತನನ್ನು ಅರಸಿ ಬಂದವು. ಕನ್ನಡ ಚಿತ್ರ ಜಗತ್ತು ಆತನಿಗೆ ಸಂಪೂರ್ಣವಾಗಿ ಅರ್ಥವಾಗುವ ವೇಳೆಗೆ ತಮಿಳು ಚಿತ್ರರಂಗ ದಿಗಂತನನ್ನು ಕರೆದುಬಿಟ್ಟಿತ್ತು.
            ಅಚಾನಕ್ಕಾಗಿ ಬಂದ ತಮಿಳು ಚಿತ್ರರಂಗದ ಅವಕಾಶವನ್ನು ಟಪ್ಪನೆ ಬಾಚಿಕೊಂಡಿದ್ದ ದಿಗಂತ. ಯಾವುದೋ ಕನ್ನಡ ಸಿನೆಮಾದಲ್ಲಿ ಈತನ ಅಭಿನಯವನ್ನು ನೋಡಿ ಇಷ್ಟಪಟ್ಟಿದ್ದ ಹೆಸರಾಂತ ನಿರ್ದೇಶಕರೊಬ್ಬರು ದಿಗಂತನನ್ನು ಕರೆದಿದ್ದರು. ಇಬ್ಬರು ನಾಯಕ ನಟರಿರುವ ಕಲಾತ್ಮಕ ಚಿತ್ರದಲ್ಲಿ ಅಭಿನಯಿಸುತ್ತೀಯಾ ಎಂದೂ ಕೇಳಿಬಿಟ್ಟದ್ದರು. ಮೊದಲು ಭಯವಿತ್ತಾದರೂ ದಿಗಂತ ಒಪ್ಪಿಕೊಂಡುಬಿಟ್ಟಿದ್ದ.  ಚಿತ್ರದಲ್ಲಿ ನಟಿಸಿದ್ದು ಸಾಕಷ್ಟು ಹೆಸರನ್ನು ತಂದಿತ್ತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಓಡಲಿಲ್ಲ. ಆದರೆ ದಿಗಂತನ ಹೆಸರು ಎಲ್ಲೆಡೆ ಹರಡಿತ್ತು. ಒಂದೆರಡು ಪ್ರಶಸ್ತಿಗಳೂ ಸಿಕ್ಕಿದ್ದವು.
             ಹಲವು ತಿಂಗಳುಗಳ ನಂತರ ಸಿಂಧು ದಿಗಂತನ ಹೆಸರನ್ನು ಕೇಳಿದ್ದಳು. ಕನ್ನಡ ಚಿತ್ರಗಳಲ್ಲಿ ದಿಗಂತ ನಟಿಸುತ್ತಿದ್ದನಾದರೂ ಕಾಕತಾಳೀಯವೋ ಅಥವಾ ಇನ್ಯಾವ ಕಾರಣವೋ ದಿಗಂತನ ಭೇಟಿ ಅಥವಾ ಆತನ ಕುರಿತು ಮಾಹಿತಿ ಸಿಂಧುವಿಗೆ ಸಿಕ್ಕಿರಲಿಲ್ಲ. ದಿಗಂತ ಎಂಬ ಹೆಸರನ್ನು ಕೇಳಿದ್ದಳೇನೋ ಆದರೆ ಇವನೇ ಅವನು ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿದ ದಿಗಂತ ಯಾರಿರಬಹುದೆಂದು ಆಲೋಚಿಸಿ ಮಾಹಿತಿ ಪಡೆದಾಗ ದಿಗಂತ ತನಗೆ ಪರಿಚಿತನೇ ಎಂದಾಗ ಆಕೆಯ ಮನಸ್ಸಿನ ಭಾವನೆಗಳು ಹೇಳಿಕೊಳ್ಳಲಾಗದಂತಾಗಿದ್ದವು. ಮೊದಲ ಬಾರಿಗೆ ಆಘಾತವಾಗಿತ್ತಾದರೂ ಅದನ್ನು ತೋರಿಸಿಕೊಂಡಿರಲಿಲ್ಲ.
           ದಿಗಂತನಿಗೆ ತಮಿಳು ಚಿತ್ರರಂಗದಲ್ಲಿ ಹಲವು ಅವಕಾಶಗಳು ಸಿಕ್ಕಿದ್ದವು. ನಾಯಕ ನಟನಾಗಿ ತಮಿಳು ಚಿತ್ರಂಗದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ದಿಗಂತ. ಒಂದೆರಡು ಚಿತ್ರಗಳು ಚನ್ನಾಗಿ ಓಡಿದ ಪರಿಣಾಮ ದಿಗಂತನ ಬದುಕಿನ ದಿಕ್ಕು ಬದಲಾವಣೆ ಹಾದಿಯಲ್ಲಿ ಸಾಗಲಾರಂಭಿಸಿತ್ತು. ಪಕ್ಕದ ತೆಲುಗು ಚಿತ್ರರಂಗವೂ ಆತನನ್ನು ಕರೆದಿತ್ತು. ಅಳೆದು ತೂಗಿ ಅಲ್ಲಿಯೂ ನಟನೆ ಮಾಡಿದ್ದ. ಒಂದೆರಡು ಚಿತ್ರಗಳು ಅವರೇಜ್ ಆಗಿ ಗೆದ್ದಾಗ ಕನ್ನಡ ಚಿತ್ರಂರಂಗ ಈತ ತಮ್ಮವನು ಎಂದುಕೊಂಡು ಮತ್ತೆ ಕರೆದಿತ್ತು.
            ಕನ್ನಡ ಚಿತ್ರರಂಗದಿಂದ ನಾಯಕನಾಗಿ ನಟಿಸಲು ಆಹ್ವಾನ ಬಂದಾಗ ಸಾಕಷ್ಟು ಬಾರಿ ಆಲೋಚನೆ ಮಾಡಿದ್ದ ದಿಗಂತ. ಕಥೆ, ನಿರ್ದೇಶಕ, ನಾಯಕಿಯ ಬಗ್ಗೆ ಆಲೋಚಿಸಿದ್ದ. ಯಾರೋ ಹೊಸ ನಿರ್ದೇಶಕರಿದ್ದರು. ಕಥೆ ಮಾತ್ರ ಬಹಳ ಚನ್ನಾಗಿತ್ತು. ನಾಯಕಿಯೂ ಯಾರೋ ಹೊಸಬರಿದ್ದರು. ಒಪ್ಪಿಕೊಂಡು ನಟಿಸಿದ್ದ. ಚಿತ್ರ ಚನ್ನಾಗಿ ಓಡಿತ್ತು. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದ ದಿಗಂತ. ನಂತರ ಹಲವು ಚಿತ್ರಗಳಲ್ಲಿ ನಟಿಸಿದ ದಿಗಂತ ಮುಂದೊಮ್ಮೆ ನಿರ್ದೇಶಕನಾಗಿಯೂ ಹೆಸರು ಮಾಡಿದ. ಹೀಗಿದ್ದಾಗಲೇ ಸಿಂಧುವಿನ ಕುರಿತು ಕೇಳಿಬಂದ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತ್ತು. ದಿಗಂತ ಆಘಾತವನ್ನು ಹೊಂದಿದ್ದ.
***
           ಸಿಂಧುವಿಗೆ ನಿರ್ದೇಶಕನ ಜೊತೆಗೆ ಸಂಬಂಧವಿದೆ ಎಂದು ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ದಪ್ಪಕ್ಷರದಲ್ಲಿ ಮುದ್ರಿಸಿತ್ತು. ಅದೇ ವಿಷಯವನ್ನು ಎರಡು-ಮೂರು ವಾರಗಳ ಕಾಲ ಸರಣಿ ಸರಣಿಯಾಗಿ ಬರೆದಿತ್ತು. ಅಷ್ಟಕ್ಕೆ ಸಾಲದೆಂಬಂತೆ ಒಂದೆರಡು ವಾಹಿನಿಗಳೂ ಮೂರ್ನಾಲ್ಕು ದಿನಗಳ ಕಾಲ ಇದೇ ವಿಷಯವನ್ನು ಜಗ್ಯಾಡಿ ಜಗ್ಯಾಡಿ ಪ್ರಸಾರ ಮಾಡಿದ್ದವು. ಪ್ಯಾನಲ್ ಚರ್ಚೆಯೂ ನಡೆದಿತ್ತು. ಸಿಂಧು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸರಣಿ ಸರಣಿಯಾಗಿ ಪ್ರಸಾರ ಮಾಡುತ್ತಿದ್ದ ಮಾಧ್ಯಮ ಜಗತ್ತು ಒಮದು ಕಡೆಯಾಗಿದ್ದರೆ ಇನ್ನೊಂದು ಕಡೆಯಲ್ಲಿ ಈಕೆ ಮಾನಸಿಕವಾಗಿ ಕೆಳಕ್ಕಿಳಿಯುತ್ತ ಹೋಗಿದ್ದಳು. ಸಾಲದೆಂಬಂತೆ ಒಮದೆರಡು ಸಂಘಟನೆಗಳು ಪ್ರತಿಭಟನೆಯನ್ನೂ ಕೈಗೊಂಡಿದ್ದವು.
           ದಿಗಂತನಿಗೆ ವಿಷಯ ಗೊತ್ತಾದಾಗ ಕುದ್ದು ಹೋಗಿದ್ದ. ಎಷ್ಟೇ ಹೆಸರು ಗಳಿಸಿದ್ದರೂ ಸಿಂಧು ತೀರಾ ನೈತಿಕ ಅಧಃಪತನಕ್ಕೆ ಇಳಿಯಲಾರಳು ಎಂಬ ಆತ್ಮವಿಶ್ವಾಸ ದಿಗಂತನದ್ದಾಗಿತ್ತು. ನಿರ್ದೇಶಕನ ಜೊತೆಗೆ ಸಿಂಧುವಿಗೆ ಸಂಬಂಧವಿದೆ ಎನ್ನುವುದು ಖಂಡಿತ ಸತ್ಯ ಸುದ್ದಿಯಲ್ಲ. ಇದು ಸುಳ್ಳು ಸುದ್ದೇ ಇರಬೇಕು, ತೇಜೋವಧೆ ಮಾಡಲು ಮಾಡಿರಬೇಕು ಎಂದುಕೊಂಡ ದಿಗಂತ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಸಿಂಧುವಿಗೆ ಪೋನ್ ಮಾಡಲು ಯತ್ನಿಸಿದ.
           ತನ್ನ ವಿರುದ್ಧ ಬಿತ್ತರಗೊಳ್ಳುತ್ತಿರುವ ಸುದ್ದಿ ಸುಳ್ಳು ಎಂದು ಎಷ್ಟೋ ಸಾರಿ ಸಿಂಧು ಹೇಳಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈಕೆಯ ತೇಜೋವಧೆಯನ್ನೇ ಪರಮಗುರಿಯಾಗಿರಿಸಿಕೊಂಡಿದ್ದವರು ಅದನ್ನು ಸಾಧಿಸುವಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದರು. ಮಾನಸಿಕ ಆಘಾತದ ಪರಿಣಾಮ ಸಿಂಧು ಯಾರನ್ನೂ ನಂಬಬಾರದು ಎನ್ನುವಂತಹ ಸ್ಥಿತಿ ತಲುಪಿದ್ದಳು. ಹೀಗಿದ್ದಾಗಲೇ ದಿಗಂತ ಪೋನ್ ಮಾಡಿದ್ದ. ಪೋನೆತ್ತಿಕೊಂಡವಳಿಗೆ ಅಚ್ಚರಿಯಾಗಿತ್ತು. ದಿಗಂತ ಆಕೆಗೆ ಸಾಂತ್ವನ ಹೇಳಿದ್ದ. ಹಲವು ವರ್ಷಗಳ ನಂತರ ಆಕೆಗೆ ಏನೋ ನೆಮ್ಮದಿ, ಸಮಾಧಾನ ಸಿಕ್ಕಂತಾಗಿತ್ತು. ದಿಗಂತ ಆಕೆಯ ಬೆನ್ನಿಗೆ ನಿಲ್ಲಲು ಮುಂದಾಗಿದ್ದ. ಆಕೆಯ ಪರವಾಗಿ ಪದೇ ಪದೆ ಹೇಳಿಕೆಗಳನ್ನು ನೀಡಿದ ನಂತರವೇ ಆಕೆಯ ವಿರುದ್ಧ ಅಪಪ್ರಚಾರ ನಿಂತಿತ್ತು. ಆದರೆ ಸಿಂಧು ಮಾನಸಿಕವಾಗಿ ಜರ್ಝರಿತಳಾಗಿದ್ದಳು. ಅವಳನ್ನು ಮಾನಸಿಕವಾಗಿ ಮೊದಲಿನ ಸ್ಥಿತಿಗೆ ತರಬೇಕಾದ ಪ್ರಮುಖ ಗುರಿ ದಿಗಂತನ ಎದುರಿಗಿತ್ತು..

(ಮುಂದುವರಿಯುತ್ತದೆ...)

No comments:

Post a Comment