Thursday, September 20, 2018

ಬಂಡೂಲ (ನಾನು ಓದಿದ ಪುಸ್ತಕಗಳು-೪)


ನಾನು ಇಷ್ಟಪಟ್ಟು ಕೈಗೆತ್ತಿಕೊಂಡ ಪುಸ್ತಕ ಬಂಡೂಲ. ಆದರೆ ಕಷ್ಟಪಟ್ಟು ಓದಿ ಮುಗಿಸಿದ ಪುಸ್ತಕ ಇದು ಎಂದರೆ ತಪ್ಪಾಗಲಿಕ್ಕಿಲ್ಲ.
ಬಿಲ್ಲಿ ವಿಲಿಯಮ್ಸ್ ಎಂಬ ಆನೆ ಮಾನವನ ಕುರಿತು ಇಂಗ್ಲೀಷಿನಲ್ಲಿ ವಿಕಿ ಕಾನ್ಸ್ ಟೆಂಟೇನ್ ಕ್ರೂಕ್ ಬರೆದಿರುವ ಪುಸ್ತಕವನ್ನು ರಾಜ್ಯಶ್ರೀ ಕುಳಮರ್ವ ಅವರು ಕನ್ನಡಕ್ಕೆ ತಂದಿದ್ದಾರೆ.
೧೯೧೫ರಿಂದ ೧೯೪೫ರ ವರೆಗಿನ ಕಾಲಘಟ್ಟದಲ್ಲಿನ ಸನ್ನಿವೇಶಗಳನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಮಾನವ ಹಾಗೂ ಆನೆಯ ಸಂಬಂಧವನ್ನು ಅವಿನಾಭಾವವಾಗಿ ತೆರೆದಿಡುವ ಕೆಲಸವನ್ನು ಪುಸ್ತಕ ಮಾಡುತ್ತದೆ. ೧೯೨೦ರ ದಶಕದಲ್ಲಿ ತೇಗದ ಮರದ ಉದ್ದಿಮೆಗಾಗಿ ನಮ್ಮ ದೇಶದ ಪಕ್ಕದಲ್ಲೇ ಇರುವ ಬರ್ಮಾಕ್ಕೆ ಆಗಮಿಸುವ ಬಿಲ್ಲಿ ವಿಲಿಯಮ್ಸ್ ಅಥವಾ ಎಲಿಫೆಂಟ್ ಬಿಲ್, ಆ ನಾಡಿನಲ್ಲಿ ಒಂದಾಗುವ ಅಂಶಗಳನ್ನು ಕ್ರುಕ್ ಬಹಳ ಸವಿಸ್ತಾರವಾಗಿ ತಿಳಿಸಿದ್ದಾರೆ.
೧೯೨೦ರ ದಶಕದ ಭಾರತ, ಆ ಸಂದರ್ಭದಲ್ಲಿನ ಬರ್ಮಾ, ಅಲ್ಲಿನ ಬೌದ್ಧ ಧರ್ಮ, ಆನೆಗಳು, ತೇಗದ ಮರಗಳಿಗಾಗಿ ಬ್ರಿಟಿಷ್ ಕಂಪನಿಗಳು ಮಾಡುವ ಕಾರ್ಯಗಳು ಇತ್ಯಾದಿಗಳ ಕುರಿತು ಹೆಚ್ಚಿನ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಾಗುತ್ತವೆ. ಅದೇ ರೀತಿ ೧೯೩೯ರಿಂದ ೧೯೪೫ರ ಅವಧಿಯಲ್ಲಿ ನಡೆದ ೨ನೇ ಮಹಾಯುದ್ಧದ ಸಂದರ್ಭದ ಘಟನೆಗಳೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿವರಿಸಲ್ಪಟ್ಟಿದೆ.
ವಿಶ್ವದ ಕ್ಲಿಷ್ಟ ಭಾಷೆಯಲ್ಲಿ ಒಂದು ಬರ್ಮೀಸ್. ಅದನ್ನು ಕಲಿಯುವ ಬಿಲ್ಲಿ, ತದ ನಂತರ ತನ್ನ ಕುತೂಹಲವನ್ನು ಆನೆಗಳ ಕಡೆಗೆ ತೋರಿಸುವುದು, ಬರ್ಮಾದ ನೂರಾರು ಆನೆಗಳ ಜತೆ ಒಡನಾಡುವುದು, ಅವುಗಳ ದೇಖರೇಖಿ ನೋಡಿಕೊಳ್ಳುವುದು, ಖಾಯಿಲೆಗಳಿಗೆ ಔಷಧಿ ಒದಗಿಸುವುದು, ಆಸ್ಪತ್ರೆ ತೆರೆಯುವುದು ಇವೆಲ್ಲ ಇಷ್ಟವಾಗುತ್ತವೆ. ಬಂಡೂಲ ಎಂಬ ಮಹಾ ದೈತ್ಯ ಆನೆ ಬಲ್ಲಿಯ ಒಡನಾಡಿಯಾಗುವುದು, ಆತನನ್ನು ಆನೆ ಹಾಗೂ ಆನೆಯನ್ನು ಆತ ಕಾಪಾಡುವುದೂ ಕೂಡ ಪುಸ್ತಕದ ಪ್ರಮುಖ ಅಂಶಗಳಲ್ಲಿ ಒಂದು.
ಪುಸ್ತಕ ಬರೆದ ವಿಕ್ಕಿಯವರು ಹೇಳಿಕೊಳ್ಳುವಂತೆ ಬಿಲ್ಲಿ ವಿಲಿಯಮ್ಸ್ ಆತ್ಮಕಥೆ ಬರೆಯುವ ಸಂದರ್ಭದಲ್ಲಿ ಮೂರ್ನಾಲ್ಕು ವರ್ಷ ಹೋಂ ವರ್ಕ್ ಮಾಡಿಕೊಂಡಿದ್ದರಂತೆ. ಬಿಲ್ಲಿ ವಿಲಿಯಮ್ಸ್ ಓಡಾಡಿದ ಸ್ಥಳಗಳಲ್ಲಿ ತಾವೂ ಓಡಾಟ ಮಾಡಿದ್ದರಂತೆ. ನೂರಾರು ಜನರನ್ನು ಸಂದರ್ಶನ ಮಾಡಿದ್ದರಂತೆ. ಈ ಕಾರಣದಿಂದ ಪುಸ್ತಕ ಬಹು ಸುದೀರ್ಘವಾಗಿದೆ.
ಇದನ್ನು ಕನ್ನಡಕ್ಕೆ ಅನುವಾಅದಿಸಿದ್ದು ನಮ್ಮದೇ ಕಾಸರಗೋಡಿನ ರಾಜ್ಯಶ್ರೀ ಕುಳಮರ್ವ. ರಾಜ್ಯಶ್ರೀ ಅವರೇ ಹೇಳುವಂತೆ ಇದು ತಮ್ಮ ಮೊಟ್ಟ ಮೊದಲ ಅನುವಾದದ ಪುಸ್ತಕವಂತೆ. ಬಿ. ಆರ್. ಶಂಕರ್ ಅನುವಾದ ಸಾಹಿತ್ಯ ಮಾಲೆ ಅಡಿಯಲ್ಲಿ ಛಂದ ಪುಸ್ತಕವು ಪ್ರಕಟಿಸಿದೆ. ಅನಾಮತ್ತು ೪೫೦ ಪುಟಗಳ ಪುಸ್ತಕ.
ರಾಜಜ್ಯಶ್ರೀಯವರದ್ದು ಮೊದಲ ಅನುವಾದಿತ ಪುಸ್ತಕವಾದ್ದರಿಂದ ಸ್ವಲ್ಪ ಮಾಫಿಯನ್ನು ನೀಡಬಹುದು. ಆದರೆ ಪುಸ್ತಕವನ್ನು ಬಹುವಾಗಿ ಎಳೆದಂತೆ ಅನ್ನಿಸುತ್ತದೆ. ಸಾಹಸಮಯ ಅಂಶವನ್ನು ತೀರಾ ಸಾಮಾನ್ಯವಾಗಿ ಹೇಳಲಾಗಿದೆಯೇನೋ ಅನ್ನಿಸುತ್ತದೆ. ಇನ್ನೂ ರೋಚಕವಾಗಿ ಕಟ್ಟಿಕೊಡಬಹುದಿತ್ತು. ಬಹುಶಃ ಇದು ಮೂಲ ಲೇಖಕಿ ವಿಕಿಯವರದ್ದೇ ತಪ್ಪಿರಬಹುದು. ಆದರೆ ರಾಜ್ಯಶ್ರೀಯವರು ಮೊದ ಮೊದಲ ಅಧ್ಯಾಯಗಳಲ್ಲಿ ಪಿನ್ ಟು ಪಿನ್ ಅನುವಾದಕ್ಕೆ ಯತ್ನಿಸಿದ್ದರಿಂದ ಓದುವಾಗ ಕೊಂಚ ಸಮಸ್ಯೆ ಆಗುತ್ತದೆ.
ರಾಜ್ಯಶ್ರಿಯವರು ೧೯೦೦ರ ಕಾಲದ ಪುಸ್ತಕ ಅನುವಾದ ಮಾಡಿದ್ದರಿಂದ, ಅದೇ ಕಾಲದ ಕನ್ನಡ ಬಳಕೆಗೆ ಯತ್ನಿಸಿರುವುದು ವಿಚಿತ್ರ ಎನ್ನಿಸುತ್ತದೆ. ಇನ್ನು ಕನ್ನಡಕ್ಕೆ ಅನುವಾದಿಸಿ ತಂದ ಸಂದರ್ಭದಲ್ಲಿ ಕನಿಷ್ಟ ೧೫೦ ಪುಟಗಳನ್ನು ಕಡಿಮೆ ಮಾಡಬಹುದಿತ್ತು. ಹಲವು ಅಂಶಗಳನ್ನು ಸುದೀರ್ಘ ಗೋಳಿಸಿದ್ದು, ಪುಸ್ತಕವನ್ನು ಸರಾಗಿ ಓದುವಲ್ಲಿ ಹಿನ್ನಡೆಯನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೇ ನಾನು ಈ ಪುಸ್ತಕವನ್ನು ಇಷ್ಟಪಟ್ಟು ತೆಗೆದುಕೊಂಡರೂ ಕಷ್ಟಪಟ್ಟು ಓದಿ ಮುಗಿಸಿದೆ. (ಸಾಮಾನ್ಯವಾಗಿ ೧ ವಾರ ಅಥವಾ ೧೦ ದಿನಗಳ ಅಂತರದಲ್ಲಿ ದೊಡ್ಡ ಪುಸ್ತಕಗಳನ್ನು ಓದುವ ನಾನು ಈ ಪುಸ್ತಕ ಓದಲು ತೆಗೆದುಕೊಂಡಿದ್ದು ಬರೋಬ್ಬರಿ ೩ ತಿಂಗಳು)
ಮೂರು ಪ್ರಮುಖ ಭಾಗಗಳಾಗಿ ವಿಂಗಡನೆಯಾಗಿರುವ ಈ ಪುಸ್ತಕದಲ್ಲಿ ಮೂರನೇ ಭಾಗದಲ್ಲಿ ವೇಗ ಪಡೆದುಕೊಳ್ಳುತ್ತದೆ. ಬಹುಶಃ ಮೂರನೇ ಭಾಗಕ್ಕೆ ಬರುವ ವೇಳೆಗೆ ರಾಜ್ಯಶ್ರೀಯವರು ಅನುವಾದದಲ್ಲಿ ಪಳಗಿರಬೇಕು. ಮೊದಲೆರಡು ಭಾಗಗಳಲ್ಲಿ ನಿಧಾನವಾಗುವ ಓದು ಮೂರನೇ ಭಾಗದಲ್ಲಿ ಸರಾಗವಾಗುತ್ತದೆ. ರಾಜ್ಯಶ್ರೀಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಲಿ. ಆದರರೆ ಅನುವಾದದ ಸಂದರ್ಭದಲ್ಲಿ ಕೊಂಚ ಗಮನ ಹರಿಸಲಿ ಎನ್ನುವುದು ನನ್ನ ಚಿಕ್ಕ ಸಲಹೆ.

ವಿಚಿತ್ರ:
ಈ ಪುಸ್ತಕದಲ್ಲಿ ಜಪಾನಿಯರ ಕ್ರೌರ್ಯ, ಯುದ್ಧ ಇತ್ಯಾದಿಗಳನ್ನು ಸಾಕಷ್ಟು ವಿವರಿಸಲಾಗಿದೆ. ಓರ್ವ ಬ್ರಿಟೀಷ್ ಲೇಖಕಿಯಾಗಿ ವಿಕಿ ಕ್ರೂಕ್ ಜಪಾನಿಯರನ್ನು ಕಟ್ಟಿಕೊಡುತ್ತಾರೆ. ನಾವು ನಮ್ಮ ಇತಿಹಾಸಗಳಲ್ಲಿ ನೋಡಿದಂತೆ, ಬರ್ಮಾ, ಮಿಜೋರಾಮ್, ಮಣಿಪುರ ಇತ್ಯಾದಿ ಕಡೆಗಳಲ್ಲಿ ನಮ್ಮ ಹೆಮ್ಮೆಯ ಸುಭಾಷರು ಭಾರತದ್ದೇ ಫೌಜಿಗಳ ದಂಡು ಕಟ್ಟಿಕೊಂಡು ಸ್ವಾತಂತ್ರ್ಯ ಯುದ್ಧ ಮಾಡಿದರು ಎನ್ನುವುದನ್ನು ಕೇಳುತ್ತೇವೆ. ಆದರೆ ಬಂಡೂಲ ಪುಸ್ತಕದಲ್ಲಿ ಸುಭಾಷರ ಕುರಿತು ಒಂದೇ ಒಂದು ಅಂಶವೂ ಇಲ್ಲದಿರುವುದು ವಿಚಿತ್ರ. ಬರ್ಮಾ ಹಾಗೂ ಭಾರತದ ಗಡಿಯಲ್ಲಿ ಯುದ್ಧಗಳ ನಡುವೆ ಸಿಕ್ಕಿಕೊಳ್ಳುವ ಬಿಲ್ಲಿ ವಿಲಿಯಮ್ಸ್ ಕೂಡ ಸುಭಾಷರ ಬಗ್ಗೆ ಮಾತನಾಡುವುದಿಲ್ಲ. ಇದು ಬಿಲ್ಲಿ ವಿಲಿಯಮ್ಸ್, ಕ್ರುಕ್ ಅವರ ಉದ್ದೇಶ ಪೂರ್ವಕ ಕೆಲಸವೋ ಅಥವಾ ಆ ಸಂದರ್ಭದ ಯುದ್ಧಗಳನ್ನು ಬ್ರಿಟೀಷರು ವರ್ಸಸ್ ಜಪಾನಿಯರು ಎಂದೇ ಬಿಂಬಿಸಿದ್ದೋ ಗೊತ್ತಿಲ್ಲ. ಈ ಪುಸ್ತಕದಲ್ಲಿ ಸುಭಾಷರ ಹೋರಾಟಗಳನ್ನು ಉಲ್ಲೇಖಿಸಿದ್ದರೆ, ಅಂದಿನ ಕಾಲದ ಇನ್ನೊಂದು ಮಜಲು ತೆರೆದುಕೊಳ್ಳುತ್ತಿತ್ತು.
ಇನ್ನು ಪುಸ್ತಕದ ಹೆಸರು ಬಂಡೂಲ ಎಂದಿದ್ದರೂ, ಬಂಡೂಲ ಎಂಬ ಆನೆಯ ಉಲ್ಲೇಖ ಬಹಳ ಕಡಿಮೆ ಇದೆ. ಬಂಡೂಲನ ಸಾಹಸಗಳನ್ನು ಇನ್ನಷ್ಟು ತೆರೆದಿಡಬಹುದಿತ್ತೇನೋ.

ಅಂದಹಾಗೆ ಈ ಪುಸ್ತಕಕ್ಕೆ ೩೨೦ ರೂಪಾಯಿ ದರ ಇದೆ.
ಸಾಹಸ ಪುಸ್ತಕಗಳು, ಪ್ರಾಣಿಗಳು ಅದರಲ್ಲಿಯೂ ಆನೆಗಳ ಕುರಿತು ಆಸಕ್ತಿ ಇರುವವರು ತಪ್ಪದೇ ಓದಬೇಕು.

No comments:

Post a Comment