Thursday, October 11, 2018

ಮ್ಯಾಕ್ಸ್ ಮುಲ್ಲರನ ದತ್ತು ಪುತ್ರ ಭಗವಾನ್ ಮನಸ್ಸಿನ ಗೊಂದಲಗಳು


ಕೆಲವರಿರುತ್ತಾರೆ, ಅವರಿಗೆ ಇದ್ದದ್ದರಲ್ಲಿ ಕೊಂಕನ್ನು ಹುಡುಕುವುದು, ತಪ್ಪನ್ನು ಹುಟ್ಟು ಹಾಕುವುದು ಇತ್ಯಾದಿಗಳ ಮೇಲೆಯೇ ಆಸಕ್ತಿ. ಎಲ್ಲವನ್ನೂ ಸುಳ್ಳು ಎನ್ನುವ ಮೂಲಕ ತಮ್ಮ ಅಸ್ತಿತ್ವವನ್ನು ಪ್ರಚುರ ಪಡಿಸುವುದೇ ಬಹುಮುಖ್ಯ ಕಾರ್ಯವಾಗುತ್ತದೆ. ಅಂತಹ ಸಾಲಿನಲ್ಲಿ ಮುಖ್ಯವಾಗಿರುವವರೇ ಭಗವಾನ್.ಕಳೆದ ಕೆಲವು ವರ್ಷಗಳನ್ನು ನೋಡಿದರೆ ಪ್ರತಿ ದಸರಾ, ನವರಾತ್ರಿ ಬಂತೆಂದರೆ ಸಾಕು, ದೀಪಾವಳಿ ಬಂತೆಂದರೆ ಸಾಕು ಭಗವಾನ್ ತಮ್ಮ ನಾಲಗೆಯನ್ನು ಉದ್ದ ಮಾಡುತ್ತಾಾರೆ. ರಾಮ ಸುಳ್ಳು, ರಾಮಾಯಣ ನಡೆದಿಲ್ಲ, ಸೀತೆ ಸುಳ್ಳು, ಮಹಾಭಾರತ ನಡೆದಿಲ್ಲ, ಪುರಾಣಗಳೆಲ್ಲ ಪೊಳ್ಳು ಎನ್ನುವ ಅರ್ಥದಲ್ಲಿ ಮಾತನಾಡುತ್ತಾಾರೆ. ಯಜ್ಞ ಯಾಗಾದಿಗಳಲ್ಲಿ ಯಾವುದೇ ಶಕ್ತಿ ಇಲ್ಲ, ನೀವು ಕಟ್ಟಿಕೊಂಡ ದಾರಕ್ಕೆ ಶಕ್ತಿ ಇದ್ದರೆ ಪಾಕಿಸ್ಥಾನ ಹಾಗೂ ಚೀನಾದ ಗಡಿಗೆ ಹೋಗಿ ಯಜ್ಞ ಯಾಗಾದಿಗಳನ್ನು ಮಾಡಿ ಎಂದು ಹಲುಬುತ್ತಾರೆ. ಸಹಸ್ರ ಸಹಸ್ರ ವರ್ಷಗಳ ಭವ್ಯ ಇತಿಹಾಸವಿರುವ ಭಾರತದ ಕುರಿತು ಹೀಗಳೆಯುವ ಮಾತನಾಡುತ್ತಾಾರೆ. ಅಷ್ಟೇ ಏಕೆ ಯಾರಾದರೂ ತಮ್ಮನ್ನು ಉಪನ್ಯಾಾಸಕ್ಕೆ ಕರೆದರೆ, ಅಂತಹ ವೇದಿಕೆಗಳಲ್ಲಿ ಹಿಂದೂ ದೇವರುಗಳನ್ನು ಬಯ್ಯಲು ಶುರುವಿಟ್ಟುಕೊಳ್ಳುತ್ತಾಾರೆ. ನಮ್ಮ ಪುರಾಣಗಳ ಬಗ್ಗೆ, ಗಣಪ, ಕೃಷ್ಣ, ಶಿವ, ರಾಮ, ವಿಷ್ಣು ಹೀಗೆ ನಮ್ಮ ಅಸಂಖ್ಯಾತ ದೇವರುಗಳ ಬಗ್ಗೆ ತಮ್ಮದೇ ಆದ ಹೊಸ ವ್ಯಾಖ್ಯಾನಗಳನ್ನು ನೀಡಲು ಆರಂಭಿಸುತ್ತಾರೆ. ಯಜ್ಞ ಯಗಾದಿಗಳನ್ನು ದ್ವೇಷ ಮಾಡುತ್ತಾರೆ. ತಮ್ಮ ಮನಸ್ಸಿನಲ್ಲಿ ಏನೇನು ಅಂಶಗಳು ಮೂಡುತ್ತವೆಯೋ ಅದನ್ನೆಲ್ಲ ಸಂಶೋಧನೆ ಎಂದು ಹೇಳುವ ಮೂಲಕ ಇತಿಹಾಸವೆಂಬ ಹಸಿ ಗೋಡೆಯ ಮೇಲೆ ಹರಳನ್ನು ಅಂಟಿಸಲು ಯತ್ನಿಸುತ್ತಾರೆ.ಇಂತಹ ಭಗವಾನರ ಮಾತುಗಳಿಗೆ ತಲೆಯಲ್ಲಾಡಿಸಲು ಕೆಲವು ವಂದಿ ಮಾಗಧರೂ ಇದ್ದಾರೆ. ಭಗವಾನ್ ಹೇಳಿದ್ದೆಲ್ಲ ಸತ್ಯ ಎನ್ನುವ ಹಿರಿ-ಕಿರಿ ಹಾಗೂ ಕಿರಿಕಿರಿ ತಲೆಗಳೂ ಇವೆ. ಭಗವಾನ್ ಒಂದು ಬಾಣವನ್ನು ಬಿಡುವುದನ್ನೇ ಕಾಯುತ್ತಿರುವ ಇಂತಹ ಪ್ರಭೃತಿಗಳೆಲ್ಲ ಆ ಬಾಣದ ಹಿಂದೆ ತಮ್ಮದೂ ಒಂದಿರಲಿ ಎಂದು ಸಾಲು ಸಾಲು ಕಿರು, ಮರಿ ಬಾಣಗಳನ್ನು ಬಿಡಲು ಆರಂಭಿಸುತ್ತಾರೆ. ಇಂತಹ ಪ್ರಭೃತಿಗಳಿಗೆ ನಿಜವಾದುದ್ಯಾವುದೂ ಬೇಕಾಗಿಲ್ಲ. ಇತಿಹಾಸವನ್ನು ತಿರುಚುವುದು, ನಮ್ಮದೇ ಸಂಪ್ರದಾಯ, ಸಂಸ್ಕೃತಿಗಳನ್ನು ಹೀಗಳೆಯುವುದು ಅಷ್ಟೇ ಸಾಕಾಗಿರುತ್ತದೆ. ಜತೆಗೆ ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ, ತುಳಿತ, ದಮನ ಇತ್ಯಾಾದಿಗಳನ್ನು ಹುಟ್ಟು ಹಾಕುವ ಅನಿವಾರ್ಯತೆ, ಅಗತ್ಯತೆ, ಅದರ ನಡುವೆಯೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಜರೂರತ್ತಿರುತ್ತದೆ.ಸೂಕ್ಷ್ಮವಾಗಿ ಗಮನಿಸಿದಾಗ ಭಗವಾನ್ ಮಾತುಗಳಲ್ಲಿ ಅಡಗಿರುವ ಹಲವು ವೈರುಧ್ಯಗಳು, ಗೊಂದಲಗಳು, ವೈರುಧ್ಯಗಳು ತಟ್ಟನೆ ನಮ್ಮ ಕಣ್ಣೆದುರಿಗೆ ಬರುತ್ತವೆ. ಬಹುಶಃ ಇದನ್ನು ಭಗವಾನ್ ಬಳಿ ಕೇಳಿದರೆ ಹಾರಿಕೆ ಉತ್ತರ ನೀಡಬಹುದು ಅಥವಾ ಜಾರಿಕೊಂಡು ಇನ್ನೇನೋ ಹೇಳಿ ತಪ್ಪಿಸಿಕೊಳ್ಳಬಹುದೇನೋ. ಇನ್ನೂ ಗಟ್ಟಿಯಾಗಿ ಕೇಳಿದರೆ ತುಳಿತ, ಹೇರಿಕೆ ಇತ್ಯಾದಿ ಶಬ್ದಗಳನ್ನು ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬಹುದು.ಭಗವಾನ್ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೆಂದರೆ ರಾಮಾಯಣ ಸುಳ್ಳು ಎನ್ನುವ ವಿಷಯವನ್ನು. ರಾಮ ಸುಳ್ಳು, ಸೀತೆ ಭೂಮಿಯ ಅಂತರಂಗದಿಂದ ಬಂದಿಲ್ಲ ಎನ್ನುವ ವಿಷಯವನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ಇದೇ ಭಗವಾನ್ ರಾವಣನ ಕುರಿತು ಮಾತನಾಡುತ್ತಾರೆ. ರಾವಣ ರಾಕ್ಷಸನಲ್ಲ, ಆತನನ್ನು ಬೇಕೆಂದೇ ರಾಕ್ಷಸನಂತೆ ಚಿತ್ರಿಸಲಾಗಿದೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳ ನಡುವೆಯೇ ಹಲವು ಗೊಂದಲಗಳು ಕಾಡುತ್ತವೆ. ರಾಮ, ಸೀತೆ ಸುಳ್ಳು ಎನ್ನುವ ಭಗವಾನ್‌ಗೆ ರಾವಣ ಮಾತ್ರ ನಿಜವಾಗಿ ಕಾಣುವುದು ವಿಚಿತ್ರ. ರಾಮಾಯಣವೇ ನಡೆದಿಲ್ಲ ಎಂದು ಹೇಳುವ ಇವರು ರಾವಣ ಮಾತ್ರ ನಿಜ ಎನ್ನುವ ಮೂಲಕ ತಮ್ಮ ಮನಸ್ಸಿನಲ್ಲಿಯೇ ಗೊಂದಲ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ರಾಮಾಯಣ ಸುಳ್ಳು ಎನ್ನುವ ಇವರು ರಾವಣನನ್ನೂ ಸುಳ್ಳು ಎಂದು ಹೇಳಲು ಹೋಗುವುದಿಲ್ಲ. ಅದೇ ರೀತಿ ರಾವಣನನನ್ನು ಹೀರೋ ಎಂದು ಪ್ರಚುರಪಡಿಸಲು ಮುಂದಾಗುವ ಭಗವಾನ್ ರಾಮಾಯಣವನ್ನು ತಾವೇ ಸುಳ್ಳು ಎಂದು ಹೇಳಿದ್ದನ್ನು ಜಾಣರಂತೆ ಮರೆತುಬಿಡುತ್ತಾರೆ.ಬಾಯಿ ಬಿಟ್ಟರೆ ಬ್ರಾಹ್ಮಣರಿಂದ ದಲಿತರ ಮೇಲೆ ಅನ್ಯಾಯವಾಗಿದೆ ಎಂದು ಹೇಳುವವರು ಭಗವಾನ್. ವೈದಿಕರು ಹಿಂದುಳಿದವರನ್ನು ತುಳಿದರು ಎಂದು ಒರಲುತ್ತಾರೆ. ಅರಚುತ್ತಾರೆ. ಇದೇ ಭಗವಾನ್ ರಾವಣನನ್ನು ಪೂಜಿಸಬೇಕು ಎನ್ನುತ್ತಾರೆ. ಆದರೆ ರಾವಣ ಬ್ರಾಹ್ಮಣನಲ್ಲವೇ ಎಂದು ಕೇಳಿದರೆ ಅದಕ್ಕೆ ಉತ್ತರವನ್ನೇ ನೀಡುವುದಿಲ್ಲ. ಆರ್ಯರೆಂದರೆ ಬ್ರಾಹ್ಮಣರು, ದ್ರಾವಿಡರೆಲ್ಲ ದಲಿತರು ಎಂದು ಹೇಳುವ ಮೂಲಕ ಹೊಸದೊಂದು ವಾದ ಸರಣಿಯನ್ನು ಹುಟ್ಟು ಹಾಕುತ್ತಾರೆ. ರಾವಣನನ್ನು ದ್ರಾವಿಡರ ಸಾಲಿಗೆ ಸೇರಿಸಿಕೊಳ್ಳುವ ಇವರು, ಅಂತಹ ರಾವಣ ಬ್ರಾಹ್ಮಣನಲ್ಲವೇ ಎಂದರೆ ಮಾತನಾಡುವುದಿಲ್ಲ. ಭಗವಾನ್ ಮನಸ್ಸಿನ ಕುತರ್ಕದಂತೆಯೇ ಬ್ರಾಹ್ಮಣನಾದ ರಾವಣನನ್ನು ಇತರರು ತುಳಿದರಲ್ಲವೇ ಎಂದರೆ ಅದಕ್ಕೆ ಉತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.ದಸರೆ ಸಂದರ್ಭದಲ್ಲಿ ಮೈಸೂರು ಸಡಗರ, ಸಂಭ್ರಮದಲ್ಲಿ ಮಿಂದೇಳುತ್ತದೆ. ಹಬ್ಬವನ್ನಾಚರಿಸುತ್ತದೆ. ಇಡೀ ದೇಶವೇ ದಸರೆ ಹಬ್ಬದ ಸಡಗರವನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತದೆ. ನಮ್ಮೊೊಳಗಿನ ಅಂಧಃಕಾರವನ್ನು ಹೋಗಲಾಡಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು ಎಂದು ಬಯಸುತ್ತದೆ. ಆದರೆ ಆ ಸಂದರ್ಭಗಳಲ್ಲೇ ಭಗವಾನ್ ತಮ್ಮಲ್ಲಿನ ಅಂಧಃಕಾರವನ್ನು ಸಮಾಜದ ಮೇಲೆ ಕಾರುವ ಯತ್ನವನ್ನು ಮಾಡುತ್ತಾರೆ. ಮಹಿಷಾಸುರನ ಪರ ವಹಿಸಿ ಮಾತನಾಡುತ್ತಾರೆ. ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯ ಮೇಲಿಟ್ಟು ಮೆರವಣಿಗೆ ಮಾಡುವುದನ್ನು ವಿರೋಧಿಸುತ್ತಾರೆ. ಮಹಿಷನ ಮೂರ್ತಿಯನ್ನು ಇಡಬೇಕು, ಮಹಿಷಾಸುರ ದಸರಾವನ್ನು ಆಚರಿಸಬೇಕು ಎಂದೆಲ್ಲ ಬಡಬಡಿಸುತ್ತಾರೆ. ಆದರೆ ಹೀಗೆಲ್ಲ ಹುಯ್ಯಲಿಡುವ ಭಗವಾನ್, ಈ ಹಿಂದೆ ಹಲವು ವೇದಿಕೆಗಳಲ್ಲಿ ದೇವರು ಸುಳ್ಳು, ಪುರಾಣಗಳೆಲ್ಲ ಮಿಥ್ಯ ಎಂದು ಹೇಳಿದ್ದನ್ನು ಮರೆತುಬಿಡುತ್ತಾರೆ. ಇವರ ಪ್ರಕಾರ ದೇವರುಗಳು, ಪುರಾಣಗಳು ಮಾತ್ರ ಸುಳ್ಳು, ಆದರೆ ರಾಕ್ಷಸರು ಮಾತ್ರ ಸಥ್ಯವೇ?ಈ ಎಲ್ಲ ಅಂಶಗಳನ್ನೂ ಗಮನಿಸಿದಾಗ ಭಗವಾನ್ ಮನಸ್ಸು ಗೊಂದಲಗಳ ಗೂಡು ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೆ ಬ್ರಿಟಿಷರ ಕಾಲದಲ್ಲಿ ಮ್ಯಾಕ್ಸ್ ಮುಲ್ಲರ್ ಭಾರತದ ಸಂಸ್ಕೃತಿಯನ್ನು ನಾಶ ಮಾಡುವ ಪಣ ತೊಟ್ಟು ಅದಕ್ಕೆ ಪೂರಕ ಕಾರ್ಯಗಳನ್ನು ಕೈಗೊಂಡನಂತೆ. ದೀಗ ಭಗವಾನ್ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅವರನ್ನು ಮ್ಯಾಕ್ಸ್ ಮುಲ್ಲರ್ ವಾದಿ ಎಂದು ಕರೆಯಬಹುದು. ಅದಿಲ್ಲವಾದರೆ ಮ್ಯಾಕ್ಸ್ ಮುಲ್ಲರ್‌ನನ್ನು ಗುರು ಎಂದು ದತ್ತು ತೆಗೆದುಕೊಂಡ ಮಹಾನುಭಾವ ಎಂದು ಕರೆಯಬಹುದು.ಆರ್ಯ-ದ್ರಾವಿಡ ಸಿದ್ಧಾಾಂತ ಸಂಶೋಧನೆಗಳ ಮೂಲಕವೇ ಸುಳ್ಳು ಎಂದು ಸಾಬೀತಾಗಿದ್ದರೂ ಅದೇ ಅಂಶವನ್ನು ಹಿಡಿದುಕೊಂಡು ಜಗ್ಗಾಡುತ್ತ, ನಿಜ ಎಂದು ಬಿಂಬಿಸಲು ಮುಂದಾಗಿರುವ ಭಗವಾನ್ ಯಾವ ಪುರುಷಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ?ತಾವು ಪ್ರತಿಪಾದಿಸುವ ಅಂಶಗಳಿಗೆ ಕಟ್ಟು ಬೀಳಲಾಗದೇ ಅರ್ಧಮರ್ಧ ಮಾತ್ರ ವಿಷಯಗಳನ್ನು ಹೇಳಿ, ಅದನ್ನೂ ಸಮರ್ಥನೆ ಮಾಡಿಕೊಳ್ಳಲಾಗದೇ ನಗೆಪಾಟಲಿಗೀಡಾಗುತ್ತಿದ್ದಾರೆ. ಹಿಂದೂ ದೇವರನ್ನು, ಪುರಾಣಗಳನ್ನು ವಿರೋಧಿಸಬೇಕು. ದಾನವರ ಪೂಜೆಗೆ ಆದ್ಯತೆ ನೀಡಬೇಕು. ದೇವರನ್ನು ವಿರೋಧಿಸುವ, ದಾನವ ಪೂಜೆಗೆ ಮಹತ್ವ ನೀಡುವ ವಿದ್ಯಾರ್ಥಿ ವೃಂದವನ್ನು ಸೃಷ್ಟಿ ಮಾಡಬೇಕು ಇಂತಹ ಮನಸ್ಥಿತಿಯನ್ನು ಹೊಂದಿರುವ ಭಗವಾನ್ ತಮ್ಮ ಇಂತಹುದೇ ಮಾತುಗಳಿಂದ ಸಮಾಜದಲ್ಲಿ ಇನ್ನಷ್ಟು ನಿಕೃಷ್ಟವಾಗುತ್ತಿದ್ದಾರೆ. ತಾವೇ ಮಾತಿನ ಮೂಲಕ ಹೇಳಿದ್ದನ್ನು ತಾವೇ ಸಮರ್ಥನೆ ಮಾಡಿಕೊಳ್ಳಲು ಒದ್ದಾಡಿ, ತಾವೊಬ್ಬ ಅಪ್ರಬುದ್ಧ ಎಂಬುದನ್ನು ಸಾಬೀತು ಮಾಡಿಕೊಳ್ಳುತ್ತಿದ್ದಾರೆ.ಇಂತಹ ಗೊಂದಲದ ಮನಸ್ಥಿತಿಯ ಭಗವಾನ್ ಬಹಿರಂಗ ಚರ್ಚೆಗೂ ಬರುವ ಪ್ರಯತ್ನ ನಡೆಸುವುದಿಲ್ಲ. ಬಹಿರಂಗ ಚರ್ಚೆಗೆ ಬಂದರೂ ಅಲ್ಲಿ ಸಮರ್ಪಕ ಉತ್ತರವನ್ನು ನೀಡುವುದೇ ಇಲ್ಲ.ತಾವೇ ಗೊಂದಲದ ತಳಹದಿಯ ಮೇಲೆ ಕೂತಿರುವಾಗ, ತಾವು ಹೇಳುತ್ತಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಶಕ್ತಿಯೇ ಇಲ್ಲವಾಗಿರುವಾಗ, ತಮ್ಮದೇ ನೆಲೆಗಟ್ಟನ್ನು, ತಮ್ಮದೇ ಸಂಸ್ಕೃತಿಯ ಕುರಿತಂತೆ ಇತಿಹಾಸದ ಸಂಶೋಧನೆ ಹೆಸರಿನಲ್ಲಿ ಸುಳ್ಳಿನ ಸರಮಾಲೆ ಕಟ್ಟುವಂತಹ, ಉಪನ್ಯಾಸಕ ಭಗವಾನ್ ವಿದ್ಯಾರ್ಥಿಗಳಿಗೆ ಇನ್ನೇನನ್ನು ತಾನೇ ಕಲಿಸಬಲ್ಲರು? ಯಾವ ನೆಲೆಗಟ್ಟಿನ ಮೇಲೆ ಶಿಷ್ಯ ಸಮೂಹವನ್ನು ಬೆಳೆಸಲು ಮುಂದಾಗಿದ್ದಾರೆ? ಇಂತಹವರ ಮುಂದೆ ಭಗವಂತನೇ ಬಂದು, ತಾನು ಭಗವಂತ ಎಂದರೂ ಅವರ ಕುರಿತು ಅನುಮಾನವನ್ನು ವ್ಯಕ್ತಪಡಿಸದೇ ಬಿಟ್ಟಾಾರೆಯೇ? ಹೇ ಭಗವಾನ್, ಈ ಭಗವಾನ್‌ಗೆ ಯಾವಾಗ ಬುದ್ಧಿ ಬರುತ್ತದೆಯೋ?

No comments:

Post a Comment