Sunday, October 7, 2018

ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರಿಗೂ ಬೇಕು ನಿರ್ದಿಷ್ಠ ಮಾನದಂಡ

ಮಾಯಾಂಕ್ ಅಗರ್ವಾಲ್, ಕರುಣ್ ನಾಯಕರ್ ಹಾಗೂ ಮುರಳಿ ವಿಜಯ್ ಅವರುಗಳ ಪ್ರಕರಣವನ್ನು ಗಮನಿಸಿದರೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅಂಶ ಬೆಳಕಿಗೆ ಬರುತ್ತದೆ. ಆಯ್ಕೆ ಮಂಡಳಿಯು ಪ್ರತಿಭಾವಂತ ಆಟಗಾರರನ್ನು ಪದೇ ಪದೆ ಕಡೆಗಣಿಸುತ್ತಿರುವುದನ್ನು ಗಮನಿಸಿದರೆ  ಆಯ್ಕೆ ಸಮಿತಿಯಲ್ಲಿ ರಾಜಕೀಯ ತೀವ್ರವಾಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ದಟ್ಟವಾಗಿದೆ.
ಕಳೆದ ನಾಲ್ಕೈದು ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಭಾರತದ ಆಯ್ಕೆ ಸಮಿತಿ ನಡೆದುಕೊಂಡ ರೀತಿ ಹಾಗೂ ತೆಗೆದುಕೊಂಡ ನಿರ್ಧಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರತಿಭಾವಂತ ಆಟಗಾರರು ದೇಸೀಯ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೂ, ಅವರನ್ನು ಪದೇ ಪದೆ ಕಡೆಗಣನೆ ಮಾಡುವ ಮೂಲಕ ಸಾಕಷ್ಟು ಟೀಕೆಗೂ ಕಾರಣರಾಗಿದ್ದಾರೆ.
ಕರ್ನಾಟಕದ ಪ್ರತಿಭಾವಂತ ಆಟಗಾರ ಮಾಯಾಂಕ ಅಗರ್ವಾಲ್. ದೇಸೀಯ ಕ್ರಿಕೆಟ್ ಕೂಟಗಳಲ್ಲಿ ಮಾಯಾಂಕ್ ಕಳೆದೆರಡು ವರ್ಷಗಳ ಅವಧಿಯಲ್ಲಿ ರನ್ ಗುಡ್ಡೆಯನ್ನೇ ನಿರ್ಮಿಸಿದ್ದಾರೆ. ಆದರೆ ಈಗಿನ ವಿಂಡೀಸ್ ವಿರುದ್ಧದ ಪಂದ್ಯಾವಳಿ ವರೆಗೂ ಮಾಯಾಂಕ್‌ರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿರಲೇ ಇಲ್ಲ. ಹಿರಿಯ ಆಟಗಾರರು, ಅಭಿಮಾನಿಗಳು ಒತ್ತಾಯ ಮಾಡಿ, ಟೀಕೆ ಮಾಡಿದ ಮೇಲೆಯೇ ಮಾಯಾಂಕ್ ತಂಡಕ್ಕೆ ಆಯ್ಕೆಯಾಗುವಂತಾಯಿತು.
ಕರುಣ್ ನಾಯರ್, ಭಾರತ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕವನ್ನು ಸಿಡಿಸಿದ ಖ್ಯಾತಿ ಹೊಂದಿದ್ದಾರೆ. ಇಂಗ್ಲೆೆಂಡ್ ವಿರುದ್ಧದ ಟೆಸ್‌ಟ್‌ ಸರಣಿಗಾಗಿ ಕರುಣ್ ನಾಯರ್‌ರನ್ನು ಆಯ್ಕೆ ಮಾಡಲಾಗಿತ್ತು. ಐದಕ್ಕೆ ಐದು ಪಂದ್ಯಗಳಲ್ಲಿ ಕರುಣ್‌ಗೆ ಅವಕಾಶ ನೀಡದೇ ಅವಮಾನ ಮಾಡಲಾಯಿತು. ಐದೂ ಪಂದ್ಯಗಳಲ್ಲಿ ಬೇಂಚ್ ಕಾಯಿಸಿದ ಕರುಣ್ ನಾಯರ್ ನಿರಾಶರಾಗಬೇಕಾಯಿತು. ಅದೇ ಕಾರಣಕ್ಕಾಗಿ ಕರುಣ್ ನಾಯರ್, ಈ ಸರಣಿಯ ವೇಳೆ ಆಯ್ಕೆ ಮಂಡಳಿ ಹಾಗೂ ಮ್ಯಾನೇಜ್‌ಮೆಂಟ್ ತಮ್ಮನ್ನು ಸಂಪರ್ಕಿಸಿಲ್ಲ ಎಂದೂ ಹೇಳಿದರು. ಹೀಗೆ ಅವಕಾಶ ನೀಡದ ಆಯ್ಕೆ ಮಂಡಳಿ, ವಿಂಡೀಸ್ ಸರಣಿಗೆ ಕಾರಣವಿಲ್ಲದೇ ಕರುಣ್‌ರನ್ನು ಆಯ್ಕೆ ಮಾಡದೇ ಇದ್ದುದು ಸಾಕಷ್ಟು ಅನುಮಾನಗಳಿಗೂ, ಟೀಕೆಗಳಿಗೂ ಕಾರಣವಾಯಿತು.
ಇದೇ ವೇಳೆ ಭಾರತ ತಂಡದ ಮುರಳಿ ವಿಜಯ್ ಕೂಡ ತಮ್ಮ ಬಳಿ ಆಯ್ಕೆ ಮಂಡಳಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇಂಗ್ಲೆೆಂಡ್ ಸರಣಿಯ 4ನೇ ಪಂದ್ಯದ ಬಳಿಕ ಹಾಗೂ ವಿಂಡೀಸ್ ಸರಣಿಗೆ ತಂಡದ ಆಯ್ಕೆ ಸಂದರ್ಭದಲ್ಲಿ ಆಯ್ಕೆ ಸಮಿತಿ ತಮ್ಮ ಬಳಿ ಮಾತನ್ನಾಡಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾಾರೆ. ಇದನ್ನೆಲ್ಲ ಗಮನಿಸಿದಾಗ ಆಯ್ಕೆ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ರಾಜಕೀಯದ ದಾಳವಾಗಿ ಆಯ್ಕೆ ಸಮಿತಿ ಬಳಕೆಯಾಗುತ್ತಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದೆ.

ಆಯ್ಕೆ ಸಮಿತಿ ಹಾಗೂ ಅನುಭವ
ಆಯ್ಕೆ ಸಮಿತಿಯು 5 ಸದಸ್ಯರನ್ನು ಮತ್ತು ಸಂಚಾಲಕರನ್ನು ಹೊಂದಿರುತ್ತದೆ. ಆಯ್ಕೆ ಸಮಿತಿಯ 5 ಸದಸ್ಯರು ಮಾತ್ರ ತಂಡದ ಆಯ್ಕೆಗೆ ಮತ ಚಲಾಯಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಸಂಚಾಲಕನು ಕಾರ್ಯದರ್ಶಿಯಾಗಿದ್ದು, ಹಿರಿಯ ಆಯ್ಕೆ ತಂಡಕ್ಕೆ ಬಿಸಿಸಿಐ ಮತ್ತು ಜೂನಿಯರ್ ಆಯ್ಕೆ ತಂಡದ ಜೂನಿಯರ್ ಕಾರ್ಯದರ್ಶಿ ಹುದ್ದೆಗಳಿರುತ್ತವೆ.
ಆಯ್ಕೆ ಸಮಿತಿಯಲ್ಲಿರುವ 5 ಸದಸ್ಯರನ್ನು ಸಾಂಪ್ರದಾಯಿಕವಾಗಿ 5 ಕ್ರಿಕೆಟ್ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ. ಉತ್ತರ ವಲಯ, ಕೇಂದ್ರ ವಲಯ, ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯಗಳಿವೆ. 5 ಸದಸ್ಯರಲ್ಲಿ ಒಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಬಿಸಿಸಿಐ ಆಯ್ಕೆ ಮಾಡುತ್ತದೆ. ಲೋಧಾ ಸಮಿತಿಯ ಶಿಫಾರಸಿನ ಒತ್ತಡದಿಂದಾಗಿ, ಬಿಸಿಸಿಐ 2016 ರಲ್ಲಿ ವಲಯ ವ್ಯವಸ್ಥೆಯನ್ನು ರದ್ದುಗೊಳಿಸಿತು.
ತಂಡದ ನಾಯಕ ಮತ್ತು ತರಬೇತುದಾರ ತಂಡದ ಆಯ್ಕೆ ಸಮಿತಿ ಸಭೆಗಳಿಗೆ ಆಹ್ವಾನ ನೀಡಲಾಗುತ್ತದೆ, ಆದರೆ ತಂಡ ಆಯ್ಕೆಗಳಲ್ಲಿ ನಾಯಕ ಮತ್ತು ತರಬೇತುದಾರರಿಗೆ ಮತದಾನದ ಹಕ್ಕು ಇರುವುದಿಲ್ಲ.
ಪ್ರಸ್ತುತ ಭಾರತ ತಂಡದ ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಿದ್ದಾರೆ. ಮುಖ್ಯಸ್ಥರಾಗಿ ಮಾಜಿ ವಿಕೆಟ್ ಕೀಪರ್ ಎಂ. ಎಸ್. ಕೆ. ಪ್ರಸಾದ್  ಇದ್ದರೆ, ಉಳಿದ ಸದಸ್ಯರಾಗಿ ದೇವಾಂಗ್ ಗಾಂಧಿ ಹಾಗೂ ಶರಣದೀಪ್ ಸಿಂಗ್ ಇದ್ದಾರೆ.
ಈ ಆಟಗಾರರಲ್ಲಿ ಎಂ. ಎಸ್. ಕೆ. ಪ್ರಸಾದ್ ಆಡಿದ್ದು 6 ಟೆಸ್‌ಟ್‌ ಹಾಗೂ 17 ಏಕದಿನ ಪಂದ್ಯಗಳನ್ನು ಮಾತ್ರ. ದೇವಾಂಗ್ ಗಾಂಧಿ ಆಡಿದ್ದು 4 ಟೆಸ್‌ಟ್‌ ಹಾಗೂ 3 ಏಕದಿನ ಪಂದ್ಯಗಳು. ಶರಣದೀಪ್ ಸಿಂಗ್ ಆಡಿದ್ದು 3 ಟೆಸ್‌ಟ್‌ ಹಾಗೂ 5 ಏಕದಿನ ಪಂದ್ಯಗಳನ್ನು ಮಾತ್ರ. ವಿಚಿತ್ರವೆಂದರೆ ಇಷ್ಟು ಅಲ್ಪ ಕ್ರಿಕೆಟ್ ಆಡಿದವರು ಭಾರತ ತಂಡವನ್ನು ಆಯ್ಕೆ ಮಾಡುತ್ತಾರೆ. ಇನ್ನೂ ವಿಚಿತ್ರ ಎಂದರೆ, ಈ ಎಲ್ಲಾ ಆಟಗಾರರು ಸೇರಿ ಭಾರಿಸಿದ ರನ್‌ಗಳನ್ನು ಕರುಣ್ ನಾಯರ್ ತಮ್ಮ ಒಂದೇ ಇನ್ನಿಿಂಗ್‌ಸ್‌ (303 ನಾಟೌಟ್)ನಲ್ಲಿ ಭಾರಿಸಿದ್ದಾರೆ.

ಮಾನದಂಡಗಳು
ಈ ವೈರುದೈ ಗಮನಿಸಿದಾಗ ಭಾರತದ ಆಯ್ಕೆ ಸಮಿತಿ ಸದಸ್ಯರಾಗುವವರು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವಿಗಳಾಗಿರುವುದು ಅಗತ್ಯ ಎನ್ನುವುದು ಅಭಿಮಾನಗಳ ಅಭಿಮತವಾಗಿದೆ. ಕನಿಷ್ಟ 25 ಟೆಸ್‌ಟ್‌‌ಗಳು ಹಾಗೂ 25 ಏಕದಿನ ಪಂದ್ಯಗಳನ್ನಾದರೂ ಆಡಿರಬೇಕು ಎನ್ನುವ ಅಭಿಪ್ರಾಯ ದಟ್ಟವಾಗಿ ಕೇಳಿ ಬರುತ್ತಿದೆ. ಏಕದಿನ ಹಾಗೂ ಟೆಸ್‌ಟ್‌‌ಗಳಲ್ಲಿ ಕನಿಷ್ಟ 1000 ರನ್ ಭಾರಿಸಿರಬೇಕು ಅಥವಾ 50 ವಿಕೆಟ್ ಕಬಳಿಸಿರಬೇಕು. ಇಂತವರನ್ನು ಮಾತ್ರ ಆಯ್ಕೆ ಸಮಿತಿಗೆ ಸದಸ್ಯರನ್ನಾಗಿ ಮಾಡಬೇಕೆಂಬ ಆಗ್ರಹಗಳು ಕೇಳಿ ಬಂದಿವೆ. ಇಲ್ಲವಾದಲ್ಲಿ ಈಗ ನಡೆಯುತ್ತಿರುವಂತಹ ಅಧ್ವಾಾನಗಳು ಮತ್ತೂ ಮುಂದುವರಿಯುವುದು ಸಹಜ ಎಂಬಂತಾಗಿದೆ.

No comments:

Post a Comment