Sunday, February 16, 2014

ಆತ್ಮಹತ್ಯೆಯ ನಂತರ (ಕಥೆ)

`ಹೇಯ್... ಒಂದ್ ನಿಮಿಷ...'
ಎಂಬ ಮಾತು ಗಾಳಿಯಲ್ಲಿ ಇದ್ದಕ್ಕಿದ್ದಂತೆ ತೇಲಿಬಂತು. ನನ್ನನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬಂದಿರಬೇಕು. ನಾನು ಸುತ್ತಮುತ್ತ ತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಎಲ್ಲೋ ಏನೋ ಭ್ರಮೆ.. ಎಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದೆ.
            ತುರ್ತು ಕಾರ್ಯದ ನಿಮಿತ್ತ ಶಿರಸಿಗೆ ಹೋಗಿದ್ದ ನನಗೆ ಅಂದು ದಿನದ ಸಮಯಕ್ಕಿಂತ ಹೆಚ್ಚು ತಡವಾಗಿತ್ತು. ಮನೆಯಲ್ಲಿ ಆಯಿ ನನಗೆ ಊಟ ಬಡಿಸಿ ಮಲುಗಬೇಕು ಎಂದು ಕಾಯುತ್ತಿರುತ್ತಾಳೆ ಎಂದು ಸ್ವಲ್ಪ ವೇಗವಾಗಿಯೇ ಬೈಕು ಚಾಲನೆ ಮಾಡುತ್ತ ಬರುತ್ತಿದ್ದೆ.. ನೀಲೆಕಣಿಯನ್ನು ದಾಟಿ ಅಬ್ರಿ ಕ್ರಾಸಿನಲ್ಲಿ ಒಂದು ಬಿದಿರುಮಟ್ಟಿಯಿದೆ. ಅಲ್ಲಿ ಗಾಡಿಯನ್ನು ನಿಲ್ಲಿಸಿ ಯಾವಾಗಲೂ ಜಲಬಾಧೆಯನ್ನು ತೀರಿಸಿಕೊಳ್ಳುವುದು ನನ್ನ ವಾಡಿಕೆ. ನಿಂತಿದ್ದಾಗ ಕೇಳಿಬಂದಿತ್ತು ಧ್ವನಿ.
`ಹಾಯ್ ದೋಸ್ತಾ.. ಹೇಗಿದ್ದೀಯಾ..?' ಮತ್ತೊಮ್ಮೆ ಕೇಳಿತ್ತು ಧ್ವನಿ. ಯಾವುದೋ ಗಂಡಸಿನ ಧ್ವನಿ.
            ಇದೆಂತದಪಾ ಇದು.. ಎಂದುಕೊಂಡು ಒಮ್ಮೆ ಸಣ್ಣದಾಗಿ ಬೆದರಿದೆ. ಭೂತ, ಪಿಶಾಚಿ ಇತ್ಯಾದಿಗಳ ಬಗೆಗೆಲ್ಲ ನನಗೆ ಅಷ್ಟಾಗಿ ನಂಬಿಕೆಯಿರಲಿಲ್ಲ. ಹಾಗಾಗಿ ಆ ರಸ್ತೆಯ ಬದಿಯಲ್ಲಿರುವ ಬಿದಿರುಮೆಳೆಯ ಪಕ್ಕದಲ್ಲಿ ಯಾರೋ ನಿಂತು ನನ್ನನ್ನೋ ಅಥವಾ ಇನ್ಯಾರನ್ನೋ ಕರೆಯುತ್ತಿರಬಹುದೆಂದು ಭಾವಿಸಿದೆ. ನಾನು ಮಾತಾಡಲಿಲ್ಲ. ಮತ್ತೊಮ್ಮೆ ಕೇಳಿದ ಧ್ವನಿ `ನೀನೆ ಕಣೋ..' ಎಂದಿತು. ಸುತ್ತಮುತ್ತ ನೋಡಿದರೂ ಆ ಧ್ವನಿಗೆ ಮೂಲವಾದುದು ನನಗೆ ಕಾಣಿಸಲಿಲ್ಲ. ಇದೆಂತದ್ದೋ ಚೇಷ್ಟೆಯಿರಬೇಕು ಎಂದುಕೊಂಡೆ. ಅಮಾಸೆ, ಹುಣ್ಣಿಮೆ ಸಮಯದಲ್ಲಿ ಭೂತ-ಗೀತ ಸಿಕ್ಕಾಪಟ್ಟೆ ಓಡಾಡ್ತು.. ನಂಗೂ ಒಂದೆರಡು ಸಾರಿ ಕಂಡಿತ್ತು. ಹಾಗೆ ಧ್ವನಿ ಕೇಳಿಸಿದಾಗಲೆಲ್ಲ ನೀನು ಮಾತನಾಡಲಿಕ್ಕೆ ಹೋಗಬೇಡ ಮಾರಾಯಾ ಎಂದು ಅಜ್ಜ ನನ್ನ ಬಳಿ ಚಿಕ್ಕಂದಿನಲ್ಲಿ ಹೇಳುತ್ತಿದ್ದುದು ನೆನಪಿಗೆ ಬಂದು ಒಮ್ಮೆ ಸಣ್ಣದಾಗಿ ಬೆವೆತೆ. ಯಾರಾದರೂ ನನ್ನ ಮೇಲೆ ಹಲ್ಲೆ ಮಾಡಲು ಅಡಗಿ ನಿಂತಿರಬಹುದೆ? ಕಳ್ಳರೇ..? ದರೋಡೆಕೋರರೆ..? ಮನಸ್ಸು ಯಾಕೋ ಕೆಟ್ಟದ್ದನ್ನೇ ಆಲೋಚಿಸಲು ಆರಂಭಿಸಿತ್ತು.
                  `ಹೇ ವಿನೂ...' ಅಂದಿತು ಆ ಧ್ವನಿ. ಈ ಸಾರಿ ನಿಜಕ್ಕೂ ನಾನು ಬೆಚ್ಚಿದೆ. ಬಾಯಲ್ಲಿ ಗಾಯತ್ರಿ ಮಂತ್ರ ಇನ್ನೇನು ಹೇಳಬೇಕು ಎಂದುಕೊಳ್ಳತೊಡಗಿದೆ. `ವಿನೂ.. ವಿನೂ.. ಹೆದರಬೇಡ.. ನಾನು ನಿನ್ನ ದೋಸ್ತ ಮಾರಾಯಾ..' ಎಂದಿತು ಧ್ವನಿ.
                  `ಯಾರದು..? ಇಲ್ಲೇನ್ ಮಾಡ್ತಾ ಇದ್ದೀರಿ? ಧೈರ್ಯ ಇದ್ದರೆ ನನ್ನೆದುರು ಬಂದು ಮಾತಾಡೂ..' ಎಂದು ಗಡುಸಾಗಿ ಕೂಗಿದೆ. ಒಂದು ಸಾರಿ ಧ್ವನಿ ಸುಮ್ಮನಾಯಿತೇನೋ ಅನ್ನಿಸಿತು. ಆ ಧ್ವನಿ ಕೇಳಿದ ಅಬ್ಬರದಲ್ಲಿ ನನಗರಿವಿಲ್ಲದಂತೆ ಜಲಬಾಧೆಯೂ ನಿಂತಿತ್ತು. ಅರೇ ನನ್ನೊಳಗೆ ಆವಿಯಾಯಿತೇ ಎಂದುಕೊಂಡೆ. ಆದರೆ ಮೈತುಂಬ ಬೆವರು. ಇನ್ನೇನು ನನ್ನ ಗಾಡಿಯನ್ನು ಹತ್ತಿ ಮೊದಲು ಅಲ್ಲಿಂದ ಕಾಲ್ಕೀಳಬೇಕು ಎನ್ನಿಸುವಷ್ಟರಲ್ಲಿ ಮತ್ತೆ ಧ್ವನಿ ಕೇಳಿತು. ಯಾರೋ ನನ್ನ ಬಗ್ಗೆ ಗೊತ್ತಿರುವವರು ಹೀಗೆ ತಮಾಶೆ ಮಾಡುತ್ತಿರಬಹುದೆಂದುಕೊಂಡರೂ ಮನಸ್ಸು ಅಪದ್ಧ ನುಡಿಯುತ್ತಿತ್ತು.
                 `ಹೆದರ್ಕಳಡ ದೋಸ್ತಾ.. ನಾನು ಗಣಿ.. ನೆನಪಾಗಿಲ್ವಾ.. ನಿನ್ನ ಕ್ಲಾಸ್ ಮೇಟ್..' ಎಂದು ಹೇಳಿತು ಧ್ವನಿ. ನನಗೆ ಈಗ ಮಾತ್ರ ಭಯ ಕಡಿಮೆಯಾಗಿ ಕುತೂಹಲ ಹುಟ್ಟಿತು. ಅರೆ ಹೌದಲ್ಲ ಪಕ್ಕಾ ಗಣಿಯದ್ದೇ ಧ್ವನಿ ಎನ್ನಿಸಿತು. ನಾನು ಗಟ್ಟಿಯಾಗಿ `ಗಣಿಯಾದರೆ ನನಗ್ಯಾಕೆ ಕಾಣ್ತಾ ಇಲ್ಲ..? ಗಣಿ ಸತ್ತು ಆಗಲೇ ಆರೇಳು ವರ್ಷವಾಗಿದೆ... ಇದೆಂತಾ ಭ್ರಮೆ..' ಎಂದೆ..
                `ಹೌದು ದೋಸ್ತಾ.. ನಾನು ಸತ್ತು ಆರೇಳು ವರ್ಷ ಆಗಿದ್ದು ನಿಜ. ಯಾಕೋ ಸುಮ್ಮನೆ ನನ್ನ ಮಿತ್ರರ ದಂಡನ್ನು ನೋಡಿ ಮಾತನಾಡಿಸುವಾ ಎನ್ನಿಸಿತು. ಅದಕ್ಕೆ ಬಂದೆ..'ಎಂದ ಧ್ವನಿ ಕೇಳಿಸಿತು. ನಾನು ಧ್ವನಿ ಕೇಳಿದತ್ತ ನೋಡುತ್ತಿದ್ದೆ. ಹತ್ತಿರದ ಬಿದಿರುಮಟ್ಟಿಯ ಎದುರು ಇದ್ದಕ್ಕಿದ್ದಂತೆ ಫ್ಲಾಷ್ ಲೈಟ್ ಆದಂತಾಯಿತು. ಕಣ್ಣುಜ್ಜಿಕೊಂಡು ನೋಡುವಷ್ಟರಲ್ಲಿ ವ್ಯಕ್ತಿಯ ಆಕೃತಿಯನ್ನು ಆ ಫ್ಲಾಷ್ ಲಯಟ್ ಪಡೆದುಕೊಂಡಿತು. ಇದು ಖಂಡಿತ ಯಾವುದೋ ಬ್ಲಾಕ್ ಮ್ಯಾಜಿಕ್ಕಲ್ಲ.. ಹೌದಿನಿಯ ಕರಾಮತ್ತೂ ಅಲ್ಲ ಎಂದುಕೊಂಡೆ.
                `ಎಲ್ಲಾ ಸರಿ.. ನೀನು ನಂಗೆ ಯಾಕೆ ಕಾಣಿಸಿಕೊಂಡಿದ್ದು.. ನಾನು ನಿನಗೇನೂ ಅಷ್ಟು ಆಪ್ತ ದೋಸ್ತ ಆಗಿರಲಿಲ್ಲವಲ್ಲ.. ಕಾಲೇಜಿನಲ್ಲಿ ನಿನಗೆ ನೂರಾರು ಗೆಳಯರಿದ್ದರು. ಹತ್ತಾರು ಜನರು ನನಗಿಂತ ಆಪ್ತರಾಗಿದ್ದರು. ಅವರೆಲ್ಲರಿಗೂ ಕಾಣಿಸಿಕೊಂಡಿದ್ದೀಯಾ.. ಅಥವಾ ನನಗೊಬ್ಬನಿಗೆ ಕಾಣಿಸಿಕೊಳ್ತಾ ಇರೋದಾ..? ನಿನ್ನ ಕಣ್ಣಿಗೆ ನಾನೇ ಯಾಕೆ ಬೀಳಬೇಕು..?' ಆ ಆಕೃತಿಯೊಂದಿಗೆ ವಾದಮಾಡುವ ಅನ್ನಿಸಿ ಕೇಳಿದೆ.
                `ಅರ್ಥವಾಗದ ನೂರಾರು ಜನ ಮಿತ್ರರಿಗಿಂತ ಅರ್ಥವಾಗುವ ಒಬ್ಬ ವ್ಯಕ್ತಿ ಸಾಕು. ಅಂವ ಶತ್ರು ಆದರೂ ಪರವಾಗಿಲ್ಲ. ಭಾವನೆಗಳು ಅರ್ಥವಾಗಬೇಕು. ನಿನಗೆ ನನ್ನ ಭಾವನೆಗಳು ಖಂಡಿತ ಅರ್ಥವಾಗುತ್ತವೆ ಎನ್ನುವ ಕಾರಣಕ್ಕಾಗಿ ನಾನು ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಿತ್ರರಲ್ಲಿ ಅನೇಕರ ಕಣ್ಣಿಗೆ ಕಾಣಿಸಿಕೊಳ್ಳಲು ಪ್ರಯತ್ನ ಪಟ್ಟೆ. ಆದರೆ ಅವರು ನನ್ನ ಕುರಿತು ತಲೆಕೆಡಿಸಿಕೊಳ್ಳಲಿಲ್ಲ ನೋಡು ಹಾಗಾಗಿ ನಿನಗೆ ಕಾಣಿಸಿಕೊಳ್ಳುತ್ತಿದ್ದೇನೆ..' ಎಂದಿತು ಆಕೃತಿ.
               ಇದುವರೆಗೂ ಯಾರದ್ದೋ ಹುಚ್ಚಾಟ ಎಂದುಕೊಳ್ಳುತ್ತಿದ್ದ ನಾನು ನಿಧಾನವಾಗಿ ಆ ಆಕೃತಿಯ ಮಾತನ್ನು ನಂಬುತ್ತ ಹೋದೆ. ಒಂದುಕಾಲದಲ್ಲಿ ಆಪ್ತಮಿತ್ರನಾಗಿ ನಂತರ ಶತ್ರುವಾಗಿ ಬದಲಾಗಿ ಜಗಳ-ಗಲಾಟೆಯನ್ನು ನಾವು ಮಾಡಿಕೊಂಡಿದ್ದೆವು. ನನ್ನ ಬಳಿ ಮಾತನಾಡುತ್ತಿರುವುದು ಆತನೇ ಇರಬೇಕು ಎನ್ನುವ ಭಾವನೆ ಮೂಡಲಾರಂಭಿಸಿತು. `ಅಲ್ಲಾ ನಾನೂ ನಿನ್ನನ್ನು ನಂಬದಿದ್ದರೆ ಏನು ಮಾಡುತ್ತೀಯಾ..?' ಎಂದೆ..
               `ಯಾರೂ ನನ್ನ ಬಳಿ ಇಷ್ಟೂ ಮಾತನಾಡುವ ಮನಸ್ಸು ಮಾಡಿರಲಿಲ್ಲ ದೋಸ್ತಾ.. ನೀನು ಇಷ್ಟಾದರೂ ಮಾಡಿದೆಯಲ್ಲ.. ಅಷ್ಟೇ ಸಾಕು ಎಂದುಕೊಳ್ಳುತ್ತೇನೆ..' ಎಂದಿತು ಅದು.
               ` ಅಲ್ಲಾ.. ದೋಸ್ತಾ ಸರಿ ನಾನು ನಿನ್ನನ್ನು ನಂಬ್ತಿ.. ನನ್ನ ಬಳಿ ಹೇಳಿಕೊಳ್ಳುವಂತದ್ದು ನಿಂಗೆ ಏನಿದೆ ಅಂತದ್ದು..? ಒಂದು ಕೆಲಸ ಮಾಡ್ತೀನಿ.. ನೀನು ಹೇಳಿಕೊಳ್ಳಬೇಕೆಂದಿದ್ದನ್ನು ನಾನೇ ಕೇಳ್ತಾ ಹೋಗ್ತೀನಿ.. ಆಗಬಹುದೇ..?' ನಾನು ಗಣಿಯ ಆಕೃತಿಯನ್ನು ಮಾತಿಗೆಳೆಯುತ್ತಿದ್ದೆ.
                `ಅಂಗಿತೊಳೆಯವು ಹೇಳಿ ಮನಸ್ಸು ಮಾಡುತ್ತಿದ್ದ ತಕ್ಷಣ ಅಗಸ ಮನೆ ಬಾಗಿಲಲ್ಲಿ ಪ್ರತ್ಯಕ್ಷ ಆಗಿದ್ದ ಅನ್ನೋ ಹಂಗಾತು ನೋಡು ನಿನ್ನ ಮಾತು. ಸರಿ.. ನಾ ಹೇಳಿಕೊಳ್ಳುತ್ತ ಹೋಗುವ ಮುನ್ನ ನೀನೇ ಏನೇನ್ ಕೇಳಬೇಕೋ ಅದನ್ನು ಕೇಳು.. ನಾನು ಉತ್ತರ ಕೊಡ್ತೆ.. ಮತ್ತೆ ದೆವ್ವದ ಸಂದರ್ಶನ ಅಂತ ಎಲ್ಲಾದ್ರೂ ಬರೆದುಬಿಟ್ಟೀಯಾ..' ಗಣಿಯ ಆಕೃತಿ ನನ್ನ ಜೊತೆ ಮಾತನಾಡುತ್ತಲೇ ಚಿಕ್ಕದಾಗಿ ಎಚ್ಚರಿಕೆಯನ್ನೂ ನೀಡಿತ್ತು.
               ` ಹೆ ಹೆ ಸರಿ ಸರಿ..ಹಂಗೇನೂ ಮಾಡೋದಿಲ್ಲ ಮಾರಾಯಾ...' ನನಗರಿವಿಲ್ಲದಂತೆ ಭೂತದ ಜೊತೆಗೆ ಆಪ್ತತೆ ಮುಡಲಾರಂಭವಾಗಿತ್ತು.. `ಮತ್ತೆ ಹೇಗಿದಿಯಾ ಗಣಿ..' ಉಭಯಕುಶಲೋಪರಿಯ ಮೂಲಕ ಮಾತಿಗೆ ಶುರುವಿಟ್ಟುಕೊಂಡೆ.
               `ಭೂತದ ಬಳಿ ಹೇಗಿದ್ದೀಯಾ ಎಂದು ಕೇಳ್ತೀಯಲ್ಲ ಮಾರಾಯಾ.. ನಾವು ಯಾವಾಗಲೂ ಅತೃಪ್ತರು. ನಮಗೆ ತೃಪ್ತಿ ಅನ್ನೋದೆ ಇಲ್ಲ ತಿಳ್ಕೋ. ನಾವು ತೃಪ್ತರಾದ್ವಿ ಅಂತಾದ್ರೆ ನಮಗೆ ಭೂತದ ಬದುಕಿನಿಂದ ಮುಕ್ತಿ ಸಿಕ್ಕಂತೆ..' ಎಂದಿತು ಗಣಿಯ ಆತ್ಮ.
              `ನನ್ನಲ್ಲಿ ನಿನ್ನ ಬಗ್ಗೆ ಇನ್ನೂ ಹಲವು ಗೊಂದಲಗಳಿವೆ. ಕೇಳಬೇಕಾದ ಹಲವು ಪ್ರಶ್ನೆಗಳು ಅರ್ಧಲ್ಲಿಯೇ ನಿಂತು ಹೋಗಿದೆ. ಹೇಗೆ ಕೇಳಬೇಕು ಎಂದೇ ಗೊತ್ತಾಗುತ್ತಿಲ್ಲ.. ನೀನು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ನಮಗೆಲ್ಲಾ ಅದು ಇನ್ನೂ ನಿಘೂಡವಾಗಿದೆ. ನೀನು ಆತ್ಮಹತ್ಯೆ ಮಾಡಿಕೊಂಡ ಮರುದಿನ ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತನಾಡುತ್ತಿದ್ದರು. ಕೆಲವರು ಇದು ಆತ್ಮಹತ್ಯೆಯಲ್ಲಿ ಕೊಲೆ ಅಂದರು. ಮತ್ತೆ ಹಲವರು ಆತ್ಮಹತ್ಯೆಯೇ ಹೌದು ಎಂದರು. ಅದೇನೇ ಆಗಿರಲಿ. ನಿನ್ನ ಸಾವಿಗೆ ಅಸಲಿ ಕಾರಣ ಏನು..?' ಪ್ರಶ್ನೆಗಳ ಸುರಿಮಳೆ ಮಾಡಿದೆ.
               `ನೋಡು ಸಾವಿಗೆ ಒಂದು ರೀತಿ, ನೆಪ, ಮಾರ್ಗಗಳಿರುತ್ತವೆ. ನಾನು ಸತ್ತ ರಕ್ಷಣ ಯಾರ್ಯಾರು ಹೇಗ್ಹೇಗೆ ಮಾತನಾಡಿಕೊಂಡರು ಎಂಬುದು ನನಗೂ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಂಡೆನೋ ಅಥವಾ ಕೊಲೆಯಾದೆನೋ ಎಂಬುದು ಮುಖ್ಯವಲ್ಲ. ನಾನು ಸತ್ತಿದ್ದೇನಲ್ಲ.. ಅದು ಸತ್ಯ. ನಾನು ಸತ್ತಿರುವ ಕೊಠಡಿಯ ಬಾಗಿಲು ಚಿಲಕ ಹಾಕಿರಲಿಲ್ಲ. ಯಾವಾಗಲೂ ನನ್ನ ಜೊತೆಗೆ ಇರುತ್ತಿದ್ದ ರೂಮಿನ ಸಹಪಾಠಿ ಆ ದಿನ ರೂಮಿನಲ್ಲಿರಲಿಲ್ಲ ಇತ್ಯಾದಿ ಇತ್ಯಾದಿಗಳೆಲ್ಲ ನನ್ನ ಸಾವಿನ ಕುರಿತು ನಿಮ್ಮಲ್ಲಿ ದ್ವಂದ್ವವನ್ನು ಹುಟ್ಟುಹಾಕಿವೆ ಅನ್ನುವುದು ನನಗೂ ಗೊತ್ತಿದೆ. ನಾನು ಸತ್ತಿದ್ದು ಹೇಗೆ ಎನ್ನುವುದು ನಿನಗೆ ಅಷ್ಟು ಮುಖ್ಯ ಎನ್ನುವುದಾದರೆ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೆ ಎಂದೇ ಹೇಳಬೇಕಾಗುತ್ತದೆ ನೋಡು..' ಎಂದ ಆತ್ಮರೂಪಿ ಗಣಿ.
               `ಅದು ಸರಿ.. ಯಾಕೆ ಅಂತ ಗೊತ್ತಾಗಲಿಲ್ಲವಲ್ಲ.. ಹಲವರು ನೀನು ಸಾಯುವಾಗ ತೀವ್ರವಾದ ಖಾಯಿಲೆಯಿಂದ ಬಳಲುತ್ತಿದ್ದೆ, ವೈಟ್ ಜಾಂಡೀಸಾಗಿತ್ತು, ಲವ್ ಫೇಲ್ಯೂರ್ ಆಗಿತ್ತು, ನೀನು ಪ್ರೀತಿಸುತ್ತಿದ್ದ ಹುಡುಗಿಯ ಅಣ್ಣಂದಿರು ನಿನ್ನ ಮೇಲೆ ಹಲ್ಲೆ ಮಾಡಲು ಸಮಯ ಸಾಧಿಸುತ್ತಿದ್ದರು ಅವರ ಭಯದಿಂದ ಆತ್ಮಹತ್ಯೆ ಮಾಡಿಕೊಂಡೆ ಎಂದೆಲ್ಲ ಮಾತನಾಡಿಕೊಂಡಿದ್ದರು..ನಿನ್ನ ಸಾವಿಗೆ ಅಸಲಿ ಕಾರಣ ಎಂತದ್ದು ಮಾರಾಯಾ..?' ಗಣಿಯ ಕಾಲೆಳೆದೆ.
                `ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ. ಆದರೆ ಕಾರಣಗಳನ್ನು ಹೇಳಲಾರೆ.. ಕಟು ಸತ್ಯಗಳು ಭಾವನೆಗಳನ್ನು ಘಾಸಿಗೊಳಿಸುತ್ತವೆ. ಮಾರಾಯಾ ನನ್ನ ಸಾವಿನ ವಿಷಯ ಬಿಟ್ಹಾಕು.. ನಮ್ಮ ಕಾಲೇಜಿನ ಸವಿ ದಿನಗಳನ್ನು ನೆನಪು ಮಾಡಿಕೊಳ್ಳೋಣ.. ಖುಷಿಯಾಗಿ ಮಾತನಾಡುವ ಅಂತ ಬಂದರೆ ಇವ ಬರಿ ನನ್ನ ಸಾವಿನ ಕುರಿತೇ ಮಾತನಾಡುತ್ತಾನೆ..' ಗಣಿಯ ಆತ್ಮ ಹುಸಿಮುನಿಸು ತೋರಿತು.
                `ಆಯ್ತು ಬಿಡು ಮಾರಾಯಾ.. ಕೇಳೋಲ್ಲ.. ನಿನ್ನ ಪ್ರೀತಿಸ್ತಾ ಇದ್ಲಲ್ಲ ಅವಳೇನು ಮಾಡ್ತಾ ಇದ್ದಾಳೋ..? ಗೊತ್ತುಂಟಾ ಅವಳ ಬಗ್ಗೆ..?'
                `ಹುಂ.. ನಿಮಗೆ ಹೇಗೆ ಮಿತ್ರರು ಇರುತ್ತಾರೋ ನಮಗೂ ಹಾಗೇ ಈ ಪೈಶಾಚಿಕ ಲೋಕದಲ್ಲೂ ಮಿತ್ರರು ಇರ್ತಾರೆ.. ಅವರ ಬಳಿ ಮಾಹಿತಿ ಪಡೆದಿದ್ದೇನೆ. ಅವಳಿಗೆ ಮದುವೆ ಆಗಿದೆಯಂತೆ. ಒಂದು ಗಂಡು ಮಗು ಇದೆ ಎಂಬ ಸುದ್ದಿ ತಿಳಿದೆ. ಆ ಮಗುವಿನ ಹೆಸರು ಗಣಿ ಅಂತಲೇ ಇಟ್ಟಿದ್ದಾಳಂತೆ.. ಯಾಕೋ ತುಂಬಾ ಬೇಜಾರಾಗ್ತಿದೆ ದೋಸ್ತಾ..? ಅದ್ ಸರಿ ನೀನು ನನ್ನ ತಂಗಿಯನ್ನು ಪ್ರೀತಿಸ್ತಾ ಇದ್ಯಲ್ಲಾ.. ಅವಳ ಕತೆ ಏನಾಯ್ತು.. ನಿಂಗೆ ಅವಳು ಸಿಕ್ಕಳಾ..?' ನನ್ನನ್ನೇ ಪ್ರಶ್ನಿಸಿದ್ದ ಗಣಿ.
                `ನಿನಗೆ ಅಣ್ಣ ಅಣ್ಣ ಎಂದು ಕಾಡುತ್ತಿದ್ದಳಲ್ಲ.. ಅವಳ ಬಗ್ಗೆ ನೀನು ಕೇಳ್ತಿದ್ದೀಯಲ್ಲವಾ.. ಯಾಕೆ ನಿಂಗೆ ಅವಳ ಮನೆಯ ಬಳಿ ಯಾವುದೇ ಮಿತ್ರರು ಸಿಕ್ಕಿಲ್ಲವೇನೋ...' ಗಣಿಯ ಆತ್ಮದ ಕಾಲೆಳೆಯಲು ಯತ್ನಿಸಿದೆ..
                `ಹೆ ಹೋಗೋ ಮಾರಾಯಾ.. ಹಂಗೇನೂ ಇಲ್ಲ.. ನೀನು ಹೇಳ್ತೀಯೋ ಇಲ್ವೋ...'
                `ಇಲ್ಲ ಗಣಿ.. ಅವಳು ನನಗೆ ಸಿಗಲಿಲ್ಲ.. ನನಗೆ ಕಾರಣವನ್ನೂ ಹೇಳದೇ ಬಿಟ್ಟುಹೋದಳು..' ಎಂದೆ
                `ಕಾಲೇಜು ದಿನಗಳಲ್ಲೇ ನಿನಗೆ ಹೇಳಬೇಕು ಎಂದುಕೊಂಡಿದ್ದೆ ದೋಸ್ತಾ.. ಅವಳು ನಿನಗೆ ಸರಿಯಾದವಳಲ್ಲ ಅಂತ.. ಆದರೆ ನಾನು ಹೇಳಿದರೆ ನೀನು ಕೇಳುವಂತಿರಲಿಲ್ಲ ಬಿಡು. ಆಕೆಯೂ ತುಂಬಾ ಸತಾಯಿಸಿರಬೇಕು ಎಲ್ಲವಾ.. ಆ ನಂತರ ನನ್ನ ನಿನ್ನ ನಡುವೆ ಗೊತ್ತಾಗದಂತೆ ಅವಳ ದೆಸೆಯಿಂದಲೇ ಗೋಡೆ ಬೆಳೆಯಿತು. ನಾನು-ನೀನು ಮಾತುಬಿಟ್ಟಿದ್ದಷ್ಟೇ ಅಲ್ಲ ಎದುರಾ ಬದರಾ ಆದರೆ ಗುದ್ದಾಡಿಕೊಲ್ಳುವಷ್ಟು ದ್ವೇಷ ಕಾರಲು ಆರಂಭ ಮಾಡಿದ್ವಿ.. ಈಗ ನೆನಪು ಮಾಡಿಕೊಂಡರೆ ತುಂಬಾ ಬೇಜಾರಾಗುತ್ತದೆ ಮಾರಾಯಾ..' ಎಂದ ಗಣಿ.
                `ದೆವ್ವ ಮತ್ತು ಬೇಜಾರು.. ಎಂತಾ ಶಬ್ದಗಳು ಮಾರಾಯಾ.. ದೆವ್ವಕ್ಕೂ ಬೇಜಾರಾಗುತ್ತದೆ ಎಂದು ಇದೇ ಮೊದಲು ನಾನು ಕೇಳಿದ್ದು.. ಇರಲಿ ಬಿಡು.. ಆ ದಿನಗಳು ನಿಜಕ್ಕೂ ಖುಷಿ ನೀಡಿದ್ದವು.. ಈಗಲೂ ಅನೇಕ ಸಾರಿ ನೆನಪು ಮಾಡಿಕೊಂಡು ನನ್ನೊಳಗೆ ಖುಷಿ ಹಾಗೂ ದುಃಖವನ್ನು ಅನುಭವಿಸುತ್ತೇನೆ... ಅದನ್ನು ಈಗ ಯಾರ ಬಳಿಯಾದರೂ ಹೇಳಿದರೆ ಇಂವ ಆ ಕಾಲದಿಂದ ಮುಂದೆ ಬರಲೇ ಇಲ್ಲ ಎಂದುಕೊಳ್ಳುತ್ತಾರೆ ಎಂದು ಸುಮ್ಮನಾಗಿದ್ದೇನೆ..' ಎಂದೆ
                 `ಹೌದು.. ಹೌದು.. ಕಾಲೇಜಿನ ತರಗತಿಗಳು, ಆ ಲೆಕ್ಚರ್ರುಗಳು, ಸೀರಿಯಸ್ಸಾಗಿ ಪಾಠ ಕೇಳುವ ನಾನು, ಚೆಸ್ಸು, ಅದು, ಇದು ಎಂಬ ಕಾರಣ ಕೊಟ್ಟು ಕ್ಲಾಸಿಗೆ ಕಳ್ಳಬೀಳುವ ನೀನು.. ನನ್ನ ಜೊತೆ ಹುಡುಗಿಯರು ಮಾತನಾಡಿ ಹಾಯ್ ಬಾಯ್ ಅಂದರೆ ಹೊಟ್ಟೆ ಉರಿದುಕೊಳ್ಳುವ ನೀನು, ಬಕ್ಕಳ ತೇರಲ್ಲಿ ಫಾರಿನ್ನ್ ಮಂದಿಯ ಜೊತೆ ಸಖತ್ತಾಗಿ ಇಂಗ್ಲೀಷ್ ಮಾತನಾಡಿದ ನೀನು, ನಿನ್ನನ್ನೋಡಿ ಎಂತಾ ಸಾಲಿಡ್ ಇಂಗ್ಲೀಷ್ ಮಾತಾಡ್ತೆ ಮಾರಾಯಾ ಎಂದಿದ್ದ ನಾನು, ಆಕಾಶವಾಣಿ ಕಾರವಾರದ ಕ್ವಿಜ್ ಕಾಂಪಿಟೇಶನ್ನು, ಕೈಗಾದ ಕ್ರಿಕೆಟ್ ಸ್ಟೇಡಿಯಮ್ಮಿನಲ್ಲಿ ಅಡ್ಡಾಡಿದ್ದು, ಕ್ರಿಸ್ ಮಸ್ ದಿನ ಸಾಂತಾಕ್ಲಾಸ್ ಹಾಕಿಕೊಂಡಿದ್ದ ಕೆಂಪು ಟೋಪಿಯನ್ನು ಎಳೆದಿದ್ದ ನೀನು.. ಅಂವ ಅಟ್ಟಿಸಿಕೊಂಡು ಬಂದಾಗ ಕೈಗಾದ ಬೀದಿಯಲ್ಲಿ ಓಡಿದ್ದ ನಾನು... ಮತ್ತೆ ಮತ್ತೆ ಕಾಡುವ ನಮ್ಮ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು... ಓಹ್ ಒಂದೆ ಎರಡೆ... ಎಲ್ಲ ನನಗೂ ಆಗಾಗ ನೆನಪಾಗುತ್ತಿರುತ್ತವೆ ಮಾರಾಯಾ..' ಎಂದ ಆತ.
                  `ಹೌದು ಹೌದು.. ಕದ್ರಾ ಡ್ಯಾಮಿನ ಎದುರು ನಾನು-ನೀನು ನಿಂತು ಪೋಟೋ ತೆಗೆಸಿಕೊಂಡಿದ್ದನ್ನು ಮರೆತು ಬಿಟ್ಟಂತಿದೆ ನೋಡು.. ನಾವು ಹಾಗೆ ನಿಂತಿದ್ದಾಗಲೇ ಡ್ಯಾಮಿನ ಒಂದು ಗೇಟಿನ್ನು ಅರ್ಧ ತೆಗೆದು ನೀರನ್ನು ಬಿಟ್ಟಿದ್ದರು. ನಾವಿಬ್ಬರೂ ಭಯದಿಂದ ಓಡಿ ನಿನ್ನ ಸಂಬಂಧಿಕರ ಮನೆಯತ್ತ ತೆರಳಿದ್ದೆವಲ್ಲ.. ಕೈಗಾದಿಂದ ವಾಪಾಸು ಬರುವಾಗ ಟಿಕೆಟ್ ಮಾಡಿಸದೇ ಬಸ್ಸನ್ನೇರಿ ಕೊನೆಗೆ ಚಕ್ಕಿಂಗ್ ಆಫೀಸರ್ ಕೈಲಿ ಸಿಕ್ಕಿಬಿದ್ದು ದಂಡ ತೆತ್ತಿದ್ದೆವಲ್ಲ.. ಕಾರವಾರ, ಕುಮಟಾ, ಧಾರವಾಡ, ಹುಬ್ಬಳ್ಳಿ, ಶಿರಸಿ ಊಹೂಂ.. ನಮ್ಮ ಉರಾಉರಿಗೆ ಅವು ಎಂದೂ ಸಾಕಾಗಿರಲೇ ಇಲ್ಲ ಅಲ್ಲವಾ.. ' ನೆನಪಿನಾಳಕ್ಕೆ ನಾನು ಇಳಿದಿದ್ದೆ..
                 `ನಿಜ ನಿಜ.. ಕಾಲೇಜಿನ ನೋಟೀಸು ಬೋರ್ಡಿನ ತುಂಬ ನೀನು-ನಾನು ಹಾಗೂ ನಮ್ಮ ಮಿತ್ರವೃಂದಗಳೇ ಇದ್ದವು. ಅದನ್ನು ಮರೆಯಲಿಕ್ಕಾಗಲ್ಲ ಬಿಡು..' ಎಂದ ಗಣಿ.
                 `ನಾನು ಅವಳನ್ನು ಪ್ರೀತಿಸುತ್ತಿದ್ದ ಹೊತ್ತಿನಲ್ಲಿಯೇ ನೀನು ನನ್ನ ಬಳಿ ಬಂದು ಅವಳ ಗೆಳತಿ ಹೇಗೆ..? ಒಳ್ಳೆಯ ಗುಣವಾ..? ಯಾವ ಊರು ಇತ್ಯಾದಿ ಮಾಹಿತಿಗಳೆಲ್ಲವನ್ನೂ ಪಡೆದಿದ್ದೆ.. ಕೆಲ ದಿನಗಳ ಕಾಲ ನೀನು ಹಾಗೂ ನನ್ನ ಹುಡುಗಿಯ ಗೆಳತಿ ಇಬ್ಬರೂ ಆಪ್ತರಾಗಿ ಓಡಾಡಿದ್ದಿರಿ.. ಆಮೇಲೆ ಇದ್ದಕ್ಕಿದ್ದಂತೆ ದೂರಾದಿರಿ.. ನಾನು ದೂರದಿಂದಲೇ ಗಮನಿಸಿದ್ದೆ.. ಏನಾಗಿತ್ತೋ..?' ನಾನು ಕೇಳಿದೆ.
                 `ಹುಂ. ಅದರ ಬಗ್ಗೆ ಏನ್ ಹೇಳೋದು.. ಪ್ರೇಮ ಹಾಗೂ ವೈಫಲ್ಯ ಒಂದೇ ನಾಣ್ಯ.. ಎರಡೆರಡು ಮುಖಗಳು ಮಾರಾಯ..ದೇವರು ಈ ನಾಣ್ಯವನ್ನು ಆಗಾಗ ಮೇಲಕ್ಕೆ ಹಾರಿಸುತ್ತಿರುತ್ತಾನೆ. ಕೆಲವು ಸಾರಿ ಪ್ರೇಮ ಮೇಲಾಗಿ ಬಿಡುತ್ತದೆ.. ಮತ್ತೆ ಕೆಲವು ಸಾರಿ ವೈಫಲ್ಯ.. ನನ್ನ ಪಾಲಿಗೆ ವೈಫಲ್ಯ ಮೇಲಾಗಿ ಬಿದ್ದಿತ್ತು.. ನಾನು ಅವಳು ದೂರಾಗಿದ್ದೆವು.. ನಿನ್ನ ಕತೆ ಏನು..?' ಎಂದ ಗಣಿ.
                `ನನ್ನ ಕಥೆ ಏನು ಕೇಳ್ತಿ ಮಾರಾಯಾ.. ಕಾಲೇಜು ದಿನಗಳಲ್ಲಿ ಅವಳು ನನ್ನ ಪ್ರೀತಿಯ ಜೊತೆಗೆ ಕಣ್ಣಾ ಮುಚ್ಚಾಲೆ ಆಡಿದಳು.. ನಂತರ ಕಾಲೇಜು ಕಳೆದ ತಕ್ಷಣ ದೊಡ್ಡದೊಂದು ಕೆಲಸ ಸಿಕ್ಕಿತು ನೋಡು ಪ್ರಾಕ್ಟಿಕಲ್ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಳು.. ಮುಂದೊಂದು ದಿನ ನನಗೆ ಹೇಳಲಿಲ್ಲ ಕೇಳಲಿಲ್ಲ.. ಬೇರೊಬ್ಬನ ಜೊತೆ ಮದುವೆಯಾದಳು ಹೋದಳು.. ನಿನ್ನ ಪ್ರೇಮದ ಕಥೆ ಏನಾಗಿತ್ತೋ ನನ್ನದೂ ಅದೇ ಆಗಿತ್ತು...' ಎಂದು ನಿಟ್ಟುಸಿರುಬಿಟ್ಟೆ..
                 `ಏಹೇ.. ನನ್ನದಕ್ಕೂ ನಿನ್ನದಕ್ಕೂ ಬಹಳ ವ್ಯತ್ಯಾಸ ಇದೆ ಮಾರಾಯಾ.. ನನ್ನದು ಹುಟ್ಟುವ ಮೊದಲೆ ಸತ್ತ ಪ್ರೇಮ.. ಆದರೆ ನಿನ್ನದು ಹೆಮ್ಮರವಾಗಿದ್ದ ಪ್ರೇಮ. ಆದರೆ ನಿನ್ನ ಪ್ರೀತಿಯ ಹೆಮ್ಮರದ ನಡುವೆ ಬಸುರಿಗಿಡ ಹುಟ್ಟಿದ್ದು ನಿನಗೆ ಗೊತ್ತಾಗಲೇ ಇಲ್ಲ ಅನ್ನಿಸುತ್ತದೆ  ಅಲ್ಲವಾ..? ಹೋಗ್ಲಿ ಬಿಡು.. ಆದದ್ದೆಲ್ಲಾ ಒಳ್ಳೆಯದಕ್ಕೆ.. ಮುಂದೇನೋ ಒಳ್ಳೆಯದಾಗುತ್ತದೆ...' ಎಂದ ಗಣಿ..
                 `ಹೌದು.. ಹೌದು.. ಅದೇ ಬದುಕಲ್ಲವಾ.. ಹೋಗ್ಲಿ ಒಂದು ಪ್ರಶ್ನೆ ದೋಸ್ತಾ.. ಇದಕ್ಕೆ ಹಾರಿಕೆ ಉತ್ತರ ಬೇಡ..' ಎಂದೆ.. ಸರಿ ಎಂದ ಗಣಿ.. `ನೀನೇನೋ ಆತ್ಮಹತ್ಯೆ ಮಾಡಿಕೊಂಡೆ.. ಆದರೆ ಅದನ್ನು ಎಪ್ರಿಲ್ 1ಕ್ಕೆ ಯಾಕೆ ಮಾಡಿಕೊಂಡೆ..? ಇಷ್ಟಕ್ಕೂ ಆತ್ಮಹತ್ಯೆ ಮಾಡಿಕೊಂಡು ಏನು ಸಾಧನೆ ಮಾಡಿದೆ..? ನಿನ್ನಲ್ಲಿ ಕೆಜಿಗಟ್ಟಲೆ ಪ್ರತಿಭೆಗಳಿದ್ದವು, ಒಳ್ಳೆಯ ಡ್ಯಾನ್ಸರ್, ಆಕ್ಟರ್, ಮಿಮಿಕ್ರಿ ಪಟು ನೀನಾಗಿದ್ದೆ.. ರಾಂಕ್ ಪಡೆಯುವಂತಹ ವಿದ್ಯಾರ್ಥಿಯೂ ನೀನು ಎಂಬುದು ನಮಗೆ ತಿಳಿದ ಸಂಗತಿ.. ಅನೇಕ ಸಾರಿ ನಾನು, ರಾಘು, ಕಿಟ್ಟಿ, ಮರಗಿಣಿ, ವಿನಿ, ನಾಗೂ, ಸುಬ್ಬು ಎಲ್ಲರೂ ನಿನ್ನ ಬಳಿ ಸಲಹೆ ಪಡೆದಿದ್ದೆವು.. ಸೋತು ಕುಸಿದಿದ್ದಾಗ ಗಾಳಿಯನ್ನು ಗುದ್ದಿ ಗೆಲ್ಲುವ ಆಶಾವಾದ ಹುಟ್ಟ ಹಾಕಿದ್ದ ನೀನು ಸಾವಿಗೆ ಶರಣಾಗಿದ್ದು ನಮಗೆ ಬಹಳ ಸಿಟ್ಟು ತಂದಿತ್ತು.. ನೀನು ಸತ್ತು ಸಾಧಿಸಿದ್ದೇನು..?' ಎಂದೆ..
                  ಗಣಿ ಮಾತಾಡಲಿಲ್ಲ.. ಒಂದೆರಗಳಿಗೆ ನಿಶ್ಶಬ್ಧ. ಗಣಿ ಇದ್ದಾನೋ ಹೊರಟು ಹೋದನೋ ಎನ್ನುವ ಅನುಮಾನ ಕಾಡಲು ಶುರುವಾದವು.. `ಗಣಿ.. ಇದ್ದೀಯಾ..? ಮಾಯವಾದೆಯಾ..?' ಎಂದು ಕೇಳಿದೆ.
                  ತುಸು ಹೊತ್ತಿನ ನಂತರ ಗಣಿ ಮಾತನಾಡಲು ಆರಂಭಿಸಿದ ' ನಿಜ ದೋಸ್ತಾ.. ನೀನು ಹೇಳಿದ ಮಾತುಗಳನ್ನೇ ನಾನು ಆಲೋಚನೆ ಮಾಡುತ್ತಿದ್ದೆ. ನಾನು ಆತ್ಮಹತ್ಯೆ ಮಾಡಿಕೊಂಡೆ ನಿಜ. ಆದರೆ ಆತ್ಮಹತ್ಯೆ ಮಾಡಿಕೊಂಡು ಏನು ಸಾಧನೆ ಮಾಡಿದೆ ಅಂತ ಕೇಳಿದರೆ ಏನಿಲ್ಲ ಎನ್ನಬಹುದು. ಇತ್ತ ಸ್ವರ್ಗವೂ ಇಲ್ಲ ನರಕವೂ ಇಲ್ಲ. ಬದುಕಿ ನಿಮ್ಮ ಜೊತೆಗೆ ಖುಷಿಯಾಗಿದ್ದೇನಾ ಅದೂ ಇಲ್ಲ. ಹೀಗೆ ಅಂತರಪಿಶಾಚಿಯಾಗಿ ಅಲೆಯುತ್ತಿದ್ದೇನೆ. ನಾನು ಸಾಯಬಾರದಿತ್ತು ಅಂತ ಅನ್ನಿಸುತ್ತಿದೆ.ಬದುಕಿನಲ್ಲಿ ಅದೆಷ್ಟೇ ತೊಂದರೆಗಳು, ತಾಪತ್ರಯಗಳು, ದುಃಖಗಳು ಸಮಸ್ಯೆಗಳು, ಹಳವಂಡಗಳಿದ್ದರೂ ಬದುಕಿ ತೋರಿಸಬೇಕಿತ್ತು ಅಂದುಕೊಳ್ಳುತ್ತಿದ್ದೇನೆ. ನೀವೆಲ್ಲ ಬದುಕುತ್ತಿದ್ದೀರಿ. ನಿಜಕ್ಕೂ ನಿಮ್ಮನ್ನು ನೋಡಿ ನನಗೆ ಹೊಟ್ಟೆಕಿಚ್ಚಾಗುತ್ತಿದೆ. ಬದುಕಿನಲ್ಲಿ ಎಷ್ಟು ಸಾರಿ ಬಿದ್ದಿರಿ ನೀವು ಆದರೆ ನನ್ನ ಹಾಗೆ ಪರಿಸ್ಥಿತಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿಲ್ಲ. ಬದುಕಿನ ಜೊತೆಗೆ ಗುದ್ಯಾಟ ನಡೆಸುತ್ತಿದ್ದೀರಲ್ಲ.. ನೀವು ಗ್ರೇಟ್.. ನಾನು ಹೇಡಿ ಅಂದುಕೊಂಡರೆ ಸರಿಯಾಗುತ್ತೇನೋ..' ಎಂದ. ಒಂದರೆಘಳಿಗೆ ನಿಂತು  `ಆತ್ಮಹತ್ಯೆಗೂ ಮುನ್ನ ನೋಡೇ ಬಿಡುವ ಎಂದು ಮಾಡಿಕೊಂಡೆ. ಆದರೆ ಯಾವಾಗ ಜೀವ ಹಾರಿ ಹೋಯ್ತೋ.. ತಕ್ಷಣವೇ ಅಯ್ಯೋ ನಾನೆಂತ ತಪ್ಪು ಮಾಡಿಬಿಟ್ಟೆ ಎಂದುಕೊಂಡೆ. ವಾಪಾಸು ಬರಲು ಯತ್ನಿಸಿದೆ. ಊಹೂಂ ಆಗಲಿಲ್ಲ.. ನೀವೆಲ್ಲ ನಾನು ಆತ್ಮಹತ್ಯೆ ಮಾಡಿಕೊಂಡ ನಂತರ ನನ್ನ ಪಾರ್ಥಿವ ಶರೀರ ನೋಡಲು ಬಂದಿರಿ. ನನ್ನ ನಿನ್ನ ನಡುವೆ ಅದೆಷ್ಟೇ ಸಿಟ್ಟು, ಸೆಡವು, ದ್ವೇಷ ಇದ್ದರೂ ನೀನು ಬಂದು ಕಣ್ಣೀರು ಹಾಕಿದೆಯಲ್ಲ.. ನಾನು ಆ ಕ್ಷಣದಲ್ಲೇ ಅಯ್ಯೋ ಎಂತಾ ತಪ್ಪು ಕೆಲಸ ಮಾಡಿಬಿಟ್ಟೆ. ಎದುರಾ ಬದುರಾ ಹೊಡೆದಾಡಿಕೊಂಡರೂ ಆಂತರ್ಯದಲ್ಲಿ ಎಂತಾ ಒಳ್ಳೆಯ ಗುಣವಿತ್ತಲ್ಲ ಎಂದುಕೊಂಡೆ. ಒಳಗೊಳಗೆ ನಾನೂ ಅತ್ತೆ. ತ್ರಿಶಂಕುವಾಗಿದ್ದುಕೊಂಡೆ ನನ್ನ ದೇಹವನ್ನು ನನ್ನ ಮನೆಯವರು ಬೆಂಕಿಯಲ್ಲಿ ಸುಡುತ್ತಿದ್ದುದನ್ನು ನೋಡಿದೆ. ಕಸಿವಿಸಿಯಾಯಿತು. ಆದರೆ ವಾಪಾಸು ಬರಲು ಆಗಲೇ ಇಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡೆ ಎನ್ನುವ ಕಾರಣಕ್ಕೆ ನನ್ನ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿದರಲ್ಲ.. ಆಗಲೂ ಅಷ್ಟೆ ಏನೋ ತಳಮಳ ಕಸಿವಿಸಿಯಾಯಿತು. ನನ್ನೆದೆಯನ್ನು ಬಗೆಯುತ್ತಿದ್ದರೆ, ಕೈಕಾಲಿನ ಒಳಗೆಲ್ಲ ವೈದ್ಯರು ದೃಷ್ಟಿ ಹಾಯಿಸುತ್ತಿದ್ದರೆ ಮತ್ತೆ ಮತ್ತೆ ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದುಕೊಂಡೆ. ಆದರೆ .. ಆದರೆ... ನಾನು ಆತ್ಮಹತ್ಯೆ ಮಾಡಿಕೊಂಡ ಮೇಲೆ ಇನ್ನೆಷ್ಟು ಸಾರಿ ಹೇಳಿದರೂ ಏನು ಪ್ರಯೋಜನ.. ವಾಪಾಸು ಬರಲಿಕ್ಕೆ ಆಗುವುದಿಲ್ಲವಲ್ಲ..ಹುಂ..' ಗಣಿ ನಿಟ್ಟುಸಿರು ಬಿಟ್ಟಂತಾಯಿತು. ನನಗೆ ಏನು ಹೇಳಬೇಕೋ ತೋಚಲಿಲ್ಲ. ಸುಮ್ಮನಿದ್ದೆ.
              ಆತನೇ ಮುಂದುವರಿದ `ದೋಸ್ತಾ ಖರೆ ಹೇಳ್ತಿ.. ಯಾರೂ ಆತ್ಮಹತ್ಯೆ ಮಾಡ್ಕಳಡಿ.. ಬದುಕು ಇನ್ನೂ ಇದ್ದು.. ಎಲ್ಲಿವರೆಗೆ ನಾವಾಗೆ ಬದುಕ್ತೀವೋ ಅಲ್ಲೀವರೆಗೂ ಬದುಕಿ.. ಅವಕಾಶಗಳು ಸಾಕಷ್ಟಿವೆ..  ನನ್ನಾಂಗೆ ಆಗಬೇಡಿ.. ಬದುಕಿಗೆ ಹೆದರಿ ಓಡಲೇಬೇಡಿ.. ಏನೇನು ಸಾಧ್ಯವೋ ಅಷ್ಟನ್ನೂ ಅನುಭವಿಸಿ. ಬಹುಶಃ ಅನುಭವಗಳು ಕೊಡುವ ಖುಷಿಯನ್ನು ಮತ್ಯಾವುದೂ ಕೊಡೋದಿಲ್ಲ ಅನ್ನಿಸ್ತಿದೆ.. ಅನುಭವಗಳನ್ನೇ ಸವಿಯಬೇಕು..' ಗಣಿ ಬೋಧನೆ ಮಾಡುತ್ತಿದ್ದಾನಾ ಅನ್ನಿಸಿತಾದರೂ ಆತ ಹೇಳುವ ಸಂಗತಿಗಳೂ ಹೌದಾದದ್ದು ಎನ್ನಿಸಿತು.
                `ನಾನು ಎಪ್ರಿಲ್ ಒಂದರಂದು ಆತ್ಮಹತ್ಯೆ ಮಾಡಿಕೊಂಡಿಲ್ಲ ದೋಸ್ತಾ.. ಮಾರ್ಚ್ 31ಕ್ಕೇ ಮಾಡಿಕೊಂಡದ್ದು. ಅದು ನಿಮಗೆಲ್ಲ ಗೊತ್ತಾಗಿದ್ದು ಎಪ್ರಿಲ್ 1ರಂದು. ಆತ್ಮಹತ್ಯೆಗೆ ಇಂತದ್ದೇ ದಿನಾಂಕ ಅಂತ ಯಾರಾದ್ರೂ ನಿಗದಿ ಮಾಡಿರ್ತಾರೇನೋ ಹುಚ್ಚಾ..' ಎಂದು ನಕ್ಕ ಗಣಿ. ನನಗೆ ಪಿಚ್ಚೆನ್ನಿಸಿತು.
                 `ನೀ ಹೇಳಿದ್ದು ನಿಜ ವಿನೂ.. ನನ್ನಲ್ಲಿ ಪ್ರತಿಭೆಗಳಿದ್ದವು. ನೀನು ಗುರುತಿಸಿದ್ದೆ. ಅನೇಕ ಸಾರಿ ಹೇಳಿಯೂ ಹೇಳಿದ್ದೆ. ಯುನಿವರ್ಸಿಟಿ ಯುವಜನ ಮೇಳಕ್ಕೆ ಹೋದಾಗಲೇ ಅಲ್ಲವೇ ಸಿನಿಮಾವೊಂದರ ನಿರ್ದೇಶಕರು ನನ್ನ ಬಳಿ ನಟನೆ ಮಾಡ್ತೀಯಾ? ನಿನಗೆ ಅವಕಾಶ ಕೊಟ್ಟರೆ ಬರ್ತೀಯಾ ಅಂತ ಕೇಳಿದ್ದರು. ನಿನಗೂ ಗೊತ್ತು ಅದು. ಆದರೆ ಬದುಕು ನಾವಂದುಕೊಂಡಂತೆ ಆಗಲೇ ಇಲ್ಲ ನೋಡು.. ಎತ್ತೆತ್ತಲೋ ಹೊರಳಿತು..' ಎಂದ..
                 `ಹೌದು ಕಣೋ ಗಣೀ.. ಎಲ್ಲವೂ ಹಂಗೇ ಆಗೋದು. ನಾವು ಅಂದುಕೊಳ್ಳೋದೆ ಒಂದು ಆದರೆ ಆಗೋದೇ ಇನ್ನೊಂದು.. ಅದ್ ಸರಿ ನೀ ಯಾಕೆ ಇನ್ನೂ ಅಂತರ ಪಿಶಾಚಿಯಾಗಿ, ಈ ರೂಪದಲ್ಲಿ ಓಡಾಡ್ತಾ ಇದ್ದಿದ್ದು..? ನೀನು ಸತ್ತು ಆಗಲೇ ಐದು ವರ್ಷಗಳಾಗ್ತಾ ಬಂದವಲ್ಲ ಮಾರಾಯಾ.. ಇನ್ನೆಷ್ಟು ದಿನಗಳ ಕಾಲ ಈ ರೂಪ..?' ಎಂದು ಕೇಳಿದೆ.
                `ಗೊತ್ತಿಲ್ಲ.. ಒಳ್ಳೆ ಬದುಕನ್ನು ಕೊಟ್ಟಿದ್ದೆ..ಅದನ್ನು ಹಾಳುಮಾಡಿಕೊಂಡೆ ಎನ್ನುವ ಕಾರಣಕ್ಕೆ ದೇವರು ಈ ರೂಪದಲ್ಲಿ ಶಿಕ್ಷೆ ಅನುಭವಿಸು ಅಂತ ಪಿಶಾಚಿಯಾಗಿ ಅಲೆದಾಡಲು ನನ್ನನ್ನು ಬಿಟ್ಟಿರಬೇಕು. ಯಾಕೋ ಗೊತ್ತಿಲ್ಲ. ನಾನು ಹೀಗೇ ಇದ್ದೇನೆ. ಖಂಡಿತ ನನಗೆ ಇನ್ನೆಷ್ಟು ಕಾಲ ಇದೇ ಅವತಾರದಲ್ಲಿ ಇರಬೇಕು ಎನ್ನುವುದೂ ಗೊತ್ತಿಲ್ಲ. ದೇವರು ಕೊಟ್ಟಿದ್ದು ಶಿಕ್ಷೆಯೇ ಹೌದಾದರೆ ಅನುಭವಿಸಲೇ ಬೇಕು.. ಅಲ್ಲವಾ..? ಹೋಗ್ಲಿ ಬಿಡು.. ನಾನು ಹೋಗೋ ಹೊತ್ತಾಯ್ತು..' ಎಂದು ಗಣಿ ಹೊರಡಲು ಅನುವಾದ..
                 ನಾನು ಲಗು ಬಗೆಯಿಂದ ತಾಳು ಮಾರಾಯಾ.. `ನಿನ್ನ ಬಳಿ ಕೇಳೋದು ಸಾಕಷ್ಟಿದೆ..' ಎಂದೆ.
                 `ಪತ್ರಕರ್ತನ ಬುದ್ಧಿ ಶುರುಮಾಡಿಕೊಂಡು ಬಿಟ್ಟೆಯಾ..? ಹಲವು ಸಂಗತಿ ಹಂಚಿಕೊಂಡೆವಲ್ಲ ಮಾರಾಯಾ.. ಇನ್ನೆಂತ ಉಂಟು ಕೇಳೋದಿಕ್ಕೆ..?' ಎಂದು ಪ್ರಶ್ನಿಸಿದ ಗಣಿ.
                  `ಕೊನೆ ಪ್ರಶ್ನೆ ಅಂತ ಬೇಕಾದ್ರೂ ಅಂದುಕೋ.. ಇದಕ್ಕೆ ನೀನು ಸ್ಪಷ್ಟ ಉತ್ತರ ಕೊಡಲೇ ಬೇಕು.. ಕೊಡ್ತೀಯಲ್ಲಾ..' ಎಂದು ಪಟ್ಟಾಗಿ ಕೇಳಿದೆ..
                   `ಅದೆಂತಾ ಪ್ರಶ್ನೆ ಮಾರಾಯಾ.. ಕೇಳು.. ಕೇಳು.. ಹೇಳುವಂತದ್ದಾದರೆ ಹೇಳೋಣ..' ಗಣಿ ಮತ್ತೆ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಿದ್ದ..
                   `ಏನೂ ಅಲ್ಲ ಮಾರಾಯಾ.. ಒಂದು ಕಾಲದಲ್ಲಿ ನಾನೂ ನೀನೂ ಭಯಂಕರ ದೋಸ್ತರು.. ಆದರೆ ಕೊನೆ ಕೊನೆಗೆ ನಾನು ನೀನು ಸಿಕ್ಕಾಪಟ್ಟೆ ಧ್ವೇಶ ಕಾರುವ ಶತ್ರುಗಳಾಗಿದ್ವಿ.. ನೀನು ಸತ್ತ ತಕ್ಷಣದಲ್ಲೇ ನನಗೆ ಈ ಬಗ್ಗೆ ಕೇಳಬೇಕು ಎಂದುಕೊಂಡಿದ್ದೆ.  ನಿನಗೆ ನನ್ನ ಮೇಲೆ ದ್ವೇಶ ಹುಟ್ಟಲು ಕಾರಣವಾದರೂ ಏನಿತ್ತು? ಯಾರು ನಮ್ಮ ನಡುವಿನ ಸ್ನೇಹಕ್ಕೆ ಹುಳಿ ಹಿಂಡಿದ್ದು..? ಇದ್ದಕ್ಕಿದ್ದಂತೆ ಏನಾಯಿತು ನಿನಗೆ..? ಸುಬ್ಬುವಾ..? ರಾಘುವಾ.. ಕಿಟ್ಟುವಾ.. ನಾಗೂವಾ..ಮರಗಿಣಿಯಾ.. ಅಥವಾ.. ಇನ್ಯಾರಾದರೂ..? ಅವಳೇನಾದರೂ ಹೇಳಿದ್ದಳಾ..? ಖಂಡಿತ ಇವರಾರೂ ಅಲ್ಲ ಎಂದುಕೊಂಡಿದ್ದೇನೆ. ನೀನು ಆತ್ಮಹತ್ಯೆ ಮಾಡಿಕೊಂಡೆ ಅಂದ ತಕ್ಷಣ ನನ್ನ ಮನಸ್ಸು ಕೇಳಿತ್ತು. ಯಾಕೆ ನಮ್ಮ ನಡುವೆ ದ್ವೇಶ ಹುಟ್ಟಿತು..? ಯಾರು ಕಾರಣರು ನಮ್ಮ ನಡುವಿನ ದ್ವೇಶಕ್ಕೆ ಅಂತ.. ಈಗಲಾದರೂ ಹೇಳು ದೋಸ್ತಾ..' ಗಣಿಯ ಬಳಿ ಅಂಗಲಾಚಿದೆ.
                 `ಬೇಡ ವಿನು.. ಕೆಲವು ಪ್ರಶ್ನೆಗಳಿಗೆ ಉತ್ತರವಿದ್ದರೂ ಅದನ್ನು ಹೇಳು ಸಾಧ್ಯವಾಗೋದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಇರಲಿ. ಅವಕ್ಕೆ ಉತ್ತರ ಕೇಳುವ ಪ್ರಯತ್ನ ಮಾಡಲೇಬಾರದು. ಸಿಗುವ ಉತ್ತರಗಳು ಮನಸ್ಸನ್ನು ಒಡೆಯುತ್ತವೆ ಹೃದಯಗಳಿಗೆ ಗಾಯ ಮಾಡುತ್ತವೆ.. ನಿಜಕ್ಕೂ ನೀನು ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿದೆ. ಆದರೆ ನಾನು ಹೇಳಲಾರೆ.. ನಾನು ಆತ್ಮಹತ್ಯೆ ಮಾಡಿಕೊಂಡು ತ್ರಿಶಂಕು ಸ್ವರ್ಗದಲ್ಲಿ ನರಳುತ್ತಿದ್ದೇನೆ. ನೀವು ಬದುಕುತ್ತಿರುವವರು. ಚನ್ನಾಗಿ ಬದುಕಿ. ನಾನು ಹೇಳುವ ಉತ್ತರ ಬದುಕಿನಲ್ಲಿ ಖುಷಿಯಾಗಿರುವ ನಿಮ್ಮ ಮನಸ್ಸನ್ನು ಒಡೆಯಬಾರದಲ್ವಾ.. ನನ್ನ ಬದುಕು ಹಾಳಾಗಿದೆ ನಿಜ.. ಬದುಕಿರುವ ನಿಮ್ಮ ಬದುಕು ಚನ್ನಾಗಿರಲಿ ದೋಸ್ತಾ..' ಎಂದು ಹೇಳಿದ ಗಣಿ ನಾನು ಮತ್ತೆ ಮಾತನಾಡುವುದರೊಳಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದ. ಮತ್ತೊಮ್ಮೆ ಆತನನ್ನು ಪ್ರಶ್ನಿಸುವುದರೊಳಗಾಗಿ `ಬಾಯ್..' ಎಂದವನೇ ನನ್ನ ಮಾತು ಕೇಳುವುದರೊಳಗೆ ಮಾಯವಾಗಿದ್ದ.

**
(ಮುಗಿಯಿತು)
**
(ಈ ಖಂಡಿತ ಯಾರಿಗೂ ಸಂಬಂಧಿಸಿದ್ದಲ್ಲ.. ನಮ್ಮ ನಡುವೆ ನಡೆದ ಕೆಲವು ಘಟನೆಗಳು ಈ ಕತೆಗೆ ಸ್ಪೂರ್ತಿ.. ಯಾರಾದರೂ ಈ ಕಥೆಯನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ..)

2 comments: