Wednesday, December 5, 2012

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..

No comments:

Post a Comment