Wednesday, December 5, 2012

ಕತ್ತೆ ಹೇಳಿದ ಭವಿಷ್ಯ

ಕತ್ತೆ ಹೇಳಿದ ಭವಿಷ್ಯ

    ಬಹುತೇಕ ಎಲ್ಲರ ಬದುಕಿನಲ್ಲೂ ಇಂತಹ ಫನ್ನಿ ಅನ್ನಿಸೋ ಸಂದರ್ಭಗಳು ಬಂದೇ ಬಂದಿರ್ತವೆ. ಮಸ್ತ್ ತಮಾಶೆಯ, ಮುಜುಗರ ಉಂಟುಮಾಡಿದ, ವಿಲಕ್ಷಣವಾದ, ವಿಚಿತ್ರ ಅನ್ನಿಸುವ ಇಂತಹ ಘಟನೆಗಳು ಬಾಳ ಗೋಡೆಯಲ್ಲಿ ಹಾಗೇ ಸುಮ್ಮನೆ ಬಂದು ಸಂತಸ ನೀಡಿ ಹೋಗಿರುತ್ತದೆ. ಇಂತವುಗಳಿದ್ದರೇ ಬಾಳು ಸಮರಸ ಎನ್ನಬಹುದು.
    ನನ್ನ ಬಾಳಿನಲ್ಲಿ ನಡೆದ ಒಂದು ವಿಲಕ್ಷಣ ಘಟನೆಯನ್ನು ಹೇಳಬೇಕು. ಇದು ವಿಲಕ್ಷಣವೋ, ತಮಾಶೇಯೋ.. ಏನೋ ಒಂದು. ನಾನು 3 ನೇ ಕ್ಲಾಸೋ ಅಥವಾ ನಾಲ್ಕೋ ಏನೋ ಇರಬೇಕು. ಆಗ ನಡೆದಿದ್ದು. ಅದನ್ನು ನಿಮ್ಮೆದುರು ಹೇಳಲೇ ಬೇಕು... ಬಿಕಾಸ್ ಇಟ್ ಈಸ್ ಸೋ ಫನ್ನಿ ಯು ನೋ..(ಇಲ್ಲಿ ನೀವು.. ಮ್ಯಾಚ್ ಮುಗಿದ ನಂತರ ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಮಾತನಾಡುವ ಧೋನಿ ಸ್ಟೈಲ್ ನೆನಪು ಮಾಡ್ಕೊಳ್ಳಿ..)
    ಸುಮಾರು 15-18 ವರ್ಷಗಳ ಹಿಂದಿನ ಕಥೆ. ಶಿರಸಿಯಲ್ಲಿ ಆ ವರ್ಷ ಜಾತ್ರೆಯ ಸಡಗರ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಬಂತೆಂದರೆ ಆಗ ನಮಗೆಲ್ಲ ಹೊಸದೊಂದು ಲೋಕ ಅನಾವರಣವಾಗುತ್ತಿತ್ತು. ಪ್ರತಿ ಸಾರಿಯೂ ಜಾತ್ರೆ ಅಂದರೆ ನನಗೆ ನಿಂತಲ್ಲಿ ನಿಲ್ಲೋಕಾಗೋಲ್ಲ.. ಕುಂತಲ್ಲಿ ಕೂರೋಕಾಗೋಲ್ಲ.. ತುಂಡುಗುಪ್ಪಳದವನಾದ ನನಗೆ ಜಾತ್ರೆಗೆ ಹೋಗಿ, ಪೀಪಿಳಿ ತಂದು ಪುಂಯ್ ಅಂತ ಊದಿ, ಒತ್ತಿದರೆ ಪೆಕ್ ಪೆಕ್ ಅನ್ನೀ ಕುನ್ನಿ ಗೊಂಬೆಯನ್ನು ತಂದು ಎರಡೇ ದಿನಕ್ಕೆ ಅದನ್ನು ಹಾಳುತೆಗೆಯದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ಅಷ್ಟರ ಜೊತೆಗೆ ಜಾತ್ರೆ ತಿರುಗಬೇಕು, ಸರ್ಕಸ್ ನೋಡಬೇಕು, ತೊಟ್ಟಿಲು(ಜಾಯಿಂಟ್ ವೀಲ್) ಹತ್ತಬೇಕು, ಟೊರ ಟೊರದ ಮೇಲೆ ತಲೆ ತಿರುಗುವಂತೆ ಕುಣಿಯಬೇಕು ಎಂಬೆಲ್ಲ ನೂರೆಂಟು ಕನಸುಗಳ ಗುಚ್ಛ.
    ಜಾತ್ರೆಗೆ 15 ದಿನ ಇದೆ ಎನ್ನುವಾಗಲೇ ಮನೆಯಲ್ಲಿ ಹರಪೆ ಪ್ರಾರಂಭವಾಗುತ್ತಿತ್ತು. ಶಾಲೆಯಲ್ಲಿ ಜಾತ್ರೆಗೆಂತಲೇ ಒಂದೆರಡು ದಿನ ಕಳ್ಳ ಬೀಳುವುದು ಖಾಯಂ ಆಗಿತ್ತು. ಬಿಡಿ ನಮ್ಮ ತಾರಾ ಮೇಡಮ್ಮು (ಪ್ರೀತಿಯಿಂದ ತಾರಕ್ಕೋರು) ಅಂತಹ ನಮ್ಮ ತಪ್ಪನ್ನು ಮಾಫಿ ಮಾಡ್ತಿದ್ದರು. ಜಾತ್ರೆ ಬಂತೆಂದರೆ ಅಪ್ಪನಿಗೆ ನನ್ನ ಹಾಗೂ ತಂಗಿಯ ರಗಳೆಯನ್ನು ತಡೆಯಲು ಆಗುತ್ತಲೇ ಇರಲಿಲ್ಲ. ಓದಿನ ಸಂದರ್ಭಗಳಲ್ಲಿ ಅಮ್ಮ ನಮ್ಮನ್ನು ಹಿಡಿದು ಬಡಿದು, ಬಯ್ಯುತ್ತಿದ್ದರೂ ಇಂತಹ ವಿಷಯಗಳಲ್ಲೆಲ್ಲ ಪಕ್ಷಾಂತರ ಮಾಡುವ ಅಮ್ಮ ನಮ್ಮನ್ನು ಸಪೋರ್ಟ್ ಮಾಡಿ `ಒಂಚೂರು ಅವ್ರನ್ನ ಜಾತ್ರಿಗೆ ಕರ್ಕಂಡು ಹೋಗಿಬಂದ್ರೆ ಬತ್ತಿಲ್ಯನು..? ' ಎಂದು ಕೇಳುತ್ತಿದ್ದಳು. ಆಗ ಅಪ್ಪನಿಗೆ ಅನಿವಾರ್ಯವಾಗಿಬಿಡುತ್ತಿತ್ತು.
    ಸರಿ ಆ ವರ್ಷ ಅಪ್ಪ ಜಾತ್ರೆಗೆ ಕರೆದುಕೊಂಡು ಹೋದ. ಅದೇನು ಕಾರಣವೋ ತಂಗಿ ನನ್ನ ಜೊತೆಗೆ ಬಂದಿರಲಿಲ್ಲ. ಗತ್ತಾಗಿ ಜಾತ್ರೆ ತಿರುಗಿದೆ. ಸಂಜೆ ಟೈಮಿನ ರಶ್ಶಲ್ಲಿ ಮಾರಿಕಾಂಬಾ ಗದ್ದುಗೆಗೆ ಬಂದು ದೇವರಿಗಡ್ಡ ಬಿದ್ದಿದ್ದು ಆಗಿತ್ತು. ಹಣ್ಣು ಕಾಯಿ ಮಾಡಿಸುವಾಗ ಅಲ್ಲಿನ ಗಬ್ಬು ವಾಸನೆ ತಾಳಲಾರದೇ ಹೊಟ್ಟೆ ತೊಳೆಸಿ ಬಂದಂತಾಗಿ ಅಪ್ಪನ ಬಳಿ `ಇದೆಂತಕ್ ಹಿಂಗೆ ಗಬ್ಬು ವಾಸನೆ..? ' ಅಂತ ಕೇಳಿದ್ದಕ್ಕೆ `ಅದೆ ಅಲ್ಲಿ ಕಾಯಿ ವಡಿತ್ವಲಾ.. ಅದು ಅಷ್ಟು ವಾಸನೆ ಬರ್ತಾ ಇದ್ದು' ಎಂದು ಅಪ್ಪ ಹೇಳಿದ್ದಿನ್ನೂ ನೆನಪಿದೆ.
    ಸರಿ ಮುಂದೆ ಜಾತ್ರೆ ಪೇಟೆ ಎಂದು ಕರೆಸಿಕೊಳ್ಳುವ ಬೀಡಕಿ ಬಯಲು ಸುತ್ತಾಡಿ, ಬಳೆ ಪೇಟೆಯಲ್ಲಿ ತಿರುಗಿ, ನಟರಾಜ ರೋಡಿನಲ್ಲಿ ಉದ್ದಾನುದ್ದಕ್ಕೆ ಎರಡೆರಡು ಬಾರಿ ಓಡಾಡಿ, ತೊಟ್ಟಿಲು ಹತ್ತಿ, ಸರ್ಕಸ್ ನಡೆಯುವ ಕೋಟೆಕೆರೆಯ ಗದ್ದೆ ಬಯಲಿಗೆ ಹೋಗಿ ಬಂದದ್ದಾಯ್ತು. ಅಷ್ಟರ ವೇಳಗೆ ಅಪ್ಪನ ಜೇಬೂ ಸುಮಾರು ಬರಿದಾಗಿರಬೇಕು, ಸಿಡಿಮಿಡಿ ಪ್ರಾರಂಭವಾಗಿತ್ತಲ್ಲದೆ `ನೀ ಹಿಂಗೆ ರಗಳೆ ಮಾಡ್ತಾ ಇದ್ರೆ ಜಾತ್ರೆ ಪೇಟೆಲಿ ಬಿಟ್ಟಿಕ್ಕೆ ಹೋಗ್ತಿ ಹಾ..' ಎಂಬ ತಾಕೀತುಗಳೂ ಶುರುವಾಗಿದ್ದವು. ಎಲ್ಲ ಆಯಿತು. ಕೊನೆಯದಾಗಿ `ಭವಿಷ್ಯ ಹೇಳುವ ಕತ್ತೆಯನ್ನು ನೋಡುವ ಅಂತ ಅಪ್ಪನಿಗೆ ಹರಪೆ ಬಿದ್ದೆ. ಅಪ್ಪನಿಗೆ ಸಿಟ್ಟು ಬಂದರೂ, ಬಯ್ಯುತ್ತಲೆ ಕರೆದೊಯ್ದ.
    ಒಳಗಡೆ ದೊಡ್ಡ ವರ್ತುಲಾಕಾರದಲ್ಲಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಅವುಗಳ ಮಾಲಿಕನೋ ಅಥವಾ ಗಾರ್ಡಿಯನ್ನೋ.. ಯಾರೋ ಒಬ್ಬಾತ ಕನ್ನಡ ಹಾಗೂ ಹಿಮದಿ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ, ಪ್ರಶ್ನೆಗಳನ್ನು ಕೇಳುತ್ತಿದ್ದ. ಆತನ ಮಾತನ್ನು ಕೇಳುತ್ತಿದ್ದ ಅವುಗಳು ಪ್ರಶ್ನೆಗೆ ಉತ್ತರ ಎಂಬಂತೆ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿದ್ದವು. `ಅತ್ಯಂತ ಉದ್ದದ ವ್ಯಕ್ತಿ ಯಾರು ತೋರಿಸು..?' ಯಾರ ತಲೆಯಲ್ಲಿ ಅತ್ಯಂತ ಕಡಿಮೆ ಕೂದಲಿವೆ..? ಯಾರಿಗೆ ಅತ್ಯಂತ ಹೆಚ್ಚು ವಯಸ್ಸಾಗಿದೆ..? ಯಾರು ಅತ್ಯಂತ ಕುಳ್ಳರು..? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕತ್ತೆ ಅಂತಹ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಅಂತಹ ಭವಿಷ್ಯ ಸುಮಾರು ಸತ್ಯವೂ ಆಗಿರುತ್ತಿದ್ದು ನನ್ನ ವಿಸ್ಮಯಕ್ಕೆ ಕಾರಣವಾಗಿತ್ತು.
    ಕೊನೆಗೊಮ್ಮೆ ಆ ಹಿಂದಿವಾಲಿ `ಈ ಗುಂಪಿನಲ್ಲಿರುವ ಅತ್ಯಂತ ಬುದ್ಧಿವಂತ ಹಾಗೂ ಚೂಟಿ ಹುಡುಗ ಯಾರು..?' ಎಂದು ಕೇಳಿದಳು. ಕತ್ತೆಗೆ ಬಹುಶಃ ತಲೆಕೆಟ್ಟಿತ್ತೇನೋ.. ಸೀದಾ ನನ್ನ ಎದುರು ಬಂದು ನಿಂತೇಬಿಟ್ಟಿತು. ನಾನೊಮ್ಮೆ ಕಕ್ಕಾಬಿಕ್ಕಿ. ಅಕ್ಕ-ಪಕ್ಕ, ಹಿಂದೆ ಮುಂದೆ ಎಲ್ಲ ನೋಡಿದೆ. ಕತ್ತೆ ನಿಂತಿದ್ದು ನನ್ನ ಬಳಿಯೇ. ನನಗೆ ಖುಷಿಯಾಗಬೇಕಿತ್ತು. ಊಹುಂ.. ಆಗಲಿಲ್ಲ. ಅವರ ಎದುರು ಮರ್ಯಾದೆಯೇ ಹೋದಂತಾಯಿತು. ಈ ಕತ್ತೆಯ ಬದಲು ಆ ನಾಯಿ ಆದ್ರೂ ನನ್ನೆದುರು ಬಂದು ನಿಲ್ಲಬಾರದಿತ್ತಾ.. ಅಂದುಕೊಂಡಿದ್ದಿದೆ.. ಕತ್ತೆ ಭವಿಷ್ಯ ನಿಜವೇ ಎಂದೆಲ್ಲಾ ಆಲೋಚನೆಗಿಟ್ಟುಕೊಂಡೆ ನಾನು. ಕತ್ತೆ ಭವಿಷ್ಯ ನುಡಿಯುವಷ್ಟು ಬುದ್ಧಿವಂತನೆ ನಾನು.. ಎಂಬ ಕ್ವಶ್ಚನ್ ಮಾರ್ಕ್ ಎದೆಯೊಳಗೆ..
    ಆ ಸಂದರ್ಭದಲ್ಲಿ ನಾನು ಹಾಗೆ ಚಿಂತಿಸಿದ್ದಕ್ಕೂ ಕಾರಣ ಇದೆ ನೋಡಿ... ಶಾಲೆಯಲ್ಲಿ ನಾನೆಂದರೆ ಬಹಳ ತಂಟೆಕೋರ, ಕಿಲಾಡಿ ಹುಡುಗ ಎಂಬ ಕುಖ್ಯಾತಿ ಇತ್ತು. `ಇಂವ ಓದಿದ್ರೆ ಜೋರಿದ್ದಿದ್ದ..' ಎಂಬ ಮಾತುಗಳು ನಮ್ಮ ಮಾಸ್ತರರಾದ ಸಿ. ಎಂ. ಹೆಗಡೆ ಅವರಿಂದ ನಾಲ್ಕಾರು ಬಾರಿ ಕೇಳಿದ್ದವು. ವಿಚಿತ್ರವೆಂದರೆ ನಾನು ಚನ್ನಾಗಿ ಓದುತ್ತಿದ್ದೆ. ಚನ್ನಾಗಿ ಬರೆಯುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್ುಗಳು ಬಿದ್ದು ಪಾಸಾಗಿದ್ದೇನೆ. ಆದರೆ ಶಾಲೆಯ ಟೆಸ್ಟುಗಳಲ್ಲಿ ಮಾತ್ರ ಪಾಸಿಗಿಂತ ಒಂದಂಕಿ ಮೇಲೆ ಇರುತ್ತಿದ್ದೆ.. ಅಂದರೆ ಸಕರ್ಾರದ ಲೆಕ್ಕದಲ್ಲಿ ಬಡತನ ರೇಖೆ ಅಂತಾರಲ್ಲ.. ಅಂತಹ ಮಾರ್ಜಿನ್ ಲೈನು. (ಇದಕ್ಕೆ ಕಾರಣ ಕೊನೆಗೆ ಗೊತ್ತಾಗಿದ್ದೆಂದರೆ ಮಾಸ್ತರ್ರು ಮಾಡುತ್ತಿದ್ದ ಹಕ್ಕಿಕತ್ತು ಅಂತ ಕೊನೆಗೆ ಗಿತ್ತಾಯಿತು.. ಅದನ್ನು ಇನ್ನೊಮ್ಮೆ ಹೇಳುವಾ.. ಆ ಸಂಗತಿ ಮಜವಾಗಿದೆ.,.)
    ಸರಿ ಕತ್ತೆ ಭವಿಷ್ಯ ಹೇಳಿತಲ್ಲ. ಇನ್ಯಾರಿದ್ದಾರ್ರೀ ನನ್ನ ಸಾಟಿ.. ಅದೆಂತದ್ದೂ ಹಮ್ಮು-ಬಿಮ್ಮು.. ತಲೆಯ ಮೇಲೆ. ಅಂದಿನಿಂದ ಪುಸ್ತಕ ಹಿಡಿಯುವುದು ಅರ್ಧಕ್ಕರ್ಧ ಬಂದಾಗಿತ್ತು. ಅಪ್ಪ-ಅಮ್ಮ ಬಯ್ದಾಗಲೆಲ್ಲ ಕತ್ತೆ ಭವಿಷ್ಯ ಹೇಳಿದ್ದನ್ನೇ ನೆನಪು ಮಾಡುತ್ತಿದ್ದೆ. ನನ್ನ ಬೆಲೆ ನಿಮಗೆ ಗೊತ್ತಾಗಲಿಲ್ಲ.. ಕತ್ತೆಗೆ ಗೊತ್ತಾಯಿತು ಎಂದು ಹೇಳುತ್ತಿದ್ದೆ. ಅಪ್ಪ-ಅಮ್ಮ ಅದೆಷ್ಟು ನಕ್ಕಿದ್ದರೋ. ಅವರ ನಗುವಿನ ಕಾರಣ ನನಗೆ ಆಗ ತಿಳಿದೇ ಇರಲಿಲ್ಲ.
    ಮುಂದಿನ ಪರಿಣಾಮ ಕೇಳಿ ಇನ್ನೂ ಮಜಬೂತಾಗಿದೆ. ಸರಿ ಆ ವರ್ಷ ಕತ್ತೆಯ ಭವಿಷ್ಯದ ನಶೆ ಯಾವ ರೀತಿ ಕೆಲಸ ಮಾಡ್ತಪ್ಪಾ ಅಂದ್ರೆ ಪಾಸಾಗಿದ್ದೇ ಪುಣ್ಯ ಎಂಬಂತಾಗಿತ್ತು. ಓದಿಗೆ ತಿಲಾಂಜಲಿ ಕೊಟ್ಟಿದ್ದೆ. ಕತ್ತೆ ಭವಿಷ್ಯ ನನ್ನನ್ನು ಮಳ್ಳು ಮಾಡಿತ್ತು. ಬಿಡಿ.. ಈ ಸಂಗತಿ ನನಗೆ ಈಗಲೂ ನೆನಪಾಗ್ತಾ ಇರ್ತದೆ. ಕತ್ತೆಯ ಭವಿಷ್ಯ ನನ್ನ ಪಾಲಿಗೆ ಗ್ರೇಡೋ..? ಡಿ.ಗ್ರೇಡೋ... ಊಹೂಂ.. ಒಂದೂ ತಿಳಿದಿಲ್ಲ. ಕತ್ತೆ ಭವಿಷ್ಯ ಹೇಳಿತ್ತು. ಹಿಂಗಾಗಿತ್ತು. ಅನ್ನೋ ಸುಂದರ ಸಂದರ್ಭ ನೆನಪಿದೆ. ಇದಕ್ಕಾಗಿ ಹೆಮ್ಮೆ ಪಡಲೋ, ಕತ್ತೆ ಭವಿಷ್ಯ ಹೇಳ್ ಬಿಡ್ತು.. ತಥ್ ನನ್ಮಗಂದು... ಅಂತ ವ್ಯಥೆ ಪಡಬೇಕೋ... ಊಹೂಂ ಏನೋಂದು ಗೊತ್ತಾಗಲಿಲ್ಲ.
    ಇಂತಹ ಮಜಬೂತು ಸಂಗತಿಗಳು ನಿಮ್ಮಲ್ಲೂ ಅನೇಕ ಇರುತ್ತವೆ. ಅವೆಲ್ಲ ಏಕಾಕಿತನದಲ್ಲಿ ನೆನಪಾದಾಗ ಕೊಡುವ ಅನುಭೂತಿ ಇದೆಯಲ್ಲ.. ಆಹ್.. ಅದೆಷ್ಟು ಮಜಬೂತು ಅಂತೀರಿ... ಹೋಗ್ಲಿ ಬಿಟ್ಹಾಕಿ.. ಇದು ಹ್ಯಾಂಗಿದೆ ಅನ್ನೋದನ್ನು ಹೇಳಿ ..

2 comments:

  1. ನಿಮ್ಮ ಮಜಬೂತಾದ ನೆನಪಿನ ಬುತ್ತಿಯಿಂದ ಉತ್ತಮವಾದದ್ದನ್ನೇ ಎತ್ತಿ, ಹಂಚಿಕೊಂಡು, ಹಾಸ್ಯ ರಾಸಾನುಭವವನ್ನೂ ಸವಿಸಿದ್ದೀರಿ.
    ಚೆನ್ನಾಗಿದೆ.
    ಮುಂದುವರಿಸಿ...

    ReplyDelete
  2. ಥ್ಯಾಂಕ್ಯೂ...ಸರ...

    ReplyDelete