Sunday, December 2, 2012

ಉಕರೋಧನ

ಉಕರೋಧನ


ಉತ್ತರಕನ್ನಡದ ಕುರಿತು ಬರೆದ ಒಂದಷ್ಟು ಚೌಪದಿಗಳು
ಯೋಜನೆಗಳ ಭಾರದಲ್ಲಿ ನಲುಗುತ್ತಿರುವ ಉತ್ತರಕನ್ನಡದ ಕುರಿತು ನಾಲ್ಕು ಸಾಲುಗಳ ಸಾಂತ್ವನ... ಚೌಪದಿಗಳ ಬ್ರಹ್ಮ ದಿನಕರ ದೇಸಾಯಿ ನನ್ನ ಈ ಚುಟುಕುಗಳಿಗೆ ಸ್ಫೂರ್ತಿಯ ಸೆಲೆ. ಅವರಿಗೆ ಧನ್ಯವಾದ.

ಅಳಲು

ಏರುತಿದೆ ತದಡಿಯ ಬಿಸಿ
ಜೀವ ಜನತೆ ಕಸಿಬಿಸಿ|
ಉತ್ತರಕನ್ನಡ ಹೋಗುತಿದೆ ಸೂರೆ
ಉಳಿಸುವವರಿಲ್ಲವಲ್ಲೇ ನೀರೆ..||

ಶಿಶುವಿನ ಗೋಳು

ನನ್ನ ಉತ್ತರಕನ್ನಡ ಪ್ರೀತಿಯ ಶಿಶು
ಹಲವು ಯೋಜನೆಗಳಿಗದೇ ಬಲಿಪಶು|
ಎಲ್ಲ ಜನರಿಗೆ ಇದು ನೀಡಿದರೂ ಕೂಳು
ಕೇಳುವವರಿಲ್ಲವಾಯ್ತಲ್ಲೇ ಇದರ ಗೋಳು..||

ಕವನದ ವ್ಯಥೆ

ನನ್ನ ಉ.ಕ ಒಂದು ಸುಂದರ ಕವನ
ಬಹು ಯೋಜನೆಗಳೇ ಇದರ ಚರಣ|
ದುಃಖ ಕಥೆ ಹೇಳುತಿದೆ ಪ್ರತಿಯೊಂದೂ ಪ್ಯಾರಾ
ಮುಗಿದುಹೋಗುತ್ತಿದೆ ಇದರ ಸಂಪತ್ತು ಪೂರಾ..|||

ಸೀರೆಯಂತೆ ಬದುಕು

ನನ್ನ ಉ.ಕವೆ ಒಂದು ರೇಶಿಮೆಯ ಸೀರೆ
ನಾಜೂಕು, ಜೋಪಾನ. ಇರಬೇಕು ನೀರೆ.|
ಛಂದವಿದ್ದರೆ ಅದು ಉಳಿಸುವುದು ಮಾನ
ಹರಿದು ಹೋದರೆ ನಿನ್ನ ಬದುಕೇ ಊನ||

ಮುತ್ತು ಕಾಶ್ಮೀರ

ನನ್ನ ಉಕವೆ ಒಂದು ಕಡಲ ಮುತ್ತು
ಬೆಸ್ತನ ತೀಟೆಯ ಬೇಟೆಗೆ ಬಲಿಯಾಗಿ ಬಿತ್ತು.|
ಈ ನಾಡೇ ಒಂದು ಮಿನಿ ಕಾಶ್ಮೀರ
ಪ್ರತಿಯೊಂದು ಭಾಗ ಎಂದೆಂದೂ ಅಸ್ಥಿರ|||

ಕಣ್ಣು-ಬೇನೆ

ನನ್ನ ಉ.ಕವೆ ಒಂದು ತೀಕ್ಷ್ಣ ಕಣ್ಣು
ನೂರೆಂಟು ಯೋಜನೆಗಳೇ ಅದರ ಹುಣ್ಣು|
ಜೊತೆಗೆ ಕಾಡುತಿವೆ ಹಲವೆಂಟು ಬೇನೆ
ಏನು ಮಾಡುವುದು ಇದಕೆ ಇಲ್ಲವಲ್ಲ ಕೊನೆ||


ಕಾಲೇಜು ಓದುತ್ತಿದ್ದ ದಿನಗಳಲ್ಲಿ ಬರೆದಿದ್ದ ಈ ಚುಟುಕಗಳನ್ನು ಶಿರಸಿಯ ಪತ್ರಕರ್ತ, ಕದಂಬವಾಣಿ, ನಾಗರೀಕ, ಕರ್ಮವೀರ, ಉತ್ತರಕನ್ನಡ ಜಿಲ್ಲಾ ವಾರ್ತಾ ಸಂಚಯ ಈ ಮುಂತಾದ ಅನೇಕ ಪತ್ರಿಕೆಗಳು ಪ್ರಕಟಿಸಿದ್ದವು. ಅದಕ್ಕೆ ಕಾರಣೀಭೂತರಾದವರಿಗೆ ಧನ್ಯವಾದಗಳು-ವಿನಯ್ ದಂಟಕಲ್

No comments:

Post a Comment