Thursday, February 13, 2014

ನಮ್ಮೂರ ಬಸ್ಸು

(ಚಿತ್ರ ಕೃಪೆ : ಪ್ರವೀಣ ನಾರಾಯಣ ಭಟ್ಟ ದೇವತೆಮನೆ)
ನಮ್ಮುರ ಬಸ್ಸಿನಲಿ
ಏನುಂಟು ಏನಿಲ್ಲ
ಬರೆಯ ಹೋದರದು
ಒಂದು ಕಥನ ಕಾವ್ಯ ||

ಬಸ್ಸಿನೊಳು ಜನರಿಲ್ಲ
ಸೀಟೆಲ್ಲ ಖಾಲಿ
ಆಗಾಗ ಆಗುವುದು
ಪಂಚರ್ರು ಗಾಲಿ  ||

ಚಾಲಕನ ಸಾಹಸದಿ
ಬೀಳುವುದು ಗೇರು
ಎಷ್ಟು ತಳ್ಳಿದರೂ ಕೂಡ
ಹತ್ತುವುದಿಲ್ಲ ಏರು ||

ಮಳೆಗಾಲ ಬಂದರೆ
ಒಳಗೆಲ್ಲ ನೀರು
ಕೂಗಾಟ, ಚೀರಾಟ
ರಶ್ಶಿಲ್ಲ ಜೋರು ||

ನಮ್ಮೂರ ಬಸ್ಸಿನಲ್ಲಿ
ಡ್ರೈವರ್ರೇ ಹೀರೋ
ಗಾಡಿ ಓಡಿಸುವ ವೇಗ
ಮಾತ್ರ ಬರೀ ಝೀರೋ ||

ನಮ್ಮೂರ ರಸ್ತೆಯಲಿ
ಹೊಂಡಗಳು ಸೋಂಪು
ಹಾಗಾಗಿ ಬಸ್ಸು
ಆಗುವುದು ಜಂಪು ||

ಬಸ್ಸದು ಸಾಗಿರಲು
ನಡುಗುವುದು ಬಾಡಿ
ಆದರೂ ಜೋರಾಗಿ
ಓಡುವುದು ನೋಡಿ ||

ಬಸ್ಸಲ್ಲಿ ಒಡೆದಿದೆ
ಕಿಟಕಿಯ ಗ್ಲಾಸು
ಅದು ತಿಳಿಸುವುದು
ಸಾರಿಗೆಯ ಲಾಸು ||

ಈ ರೀತಿ ಉಂಟಯ್ಯಾ
ನಮ್ಮೂರ ಬಸ್ಸು
ಬಸ್ಸಿನ ತುಂಬೆಲ್ಲ
ಅಪಘಾತ ಕೇಸು ||

(ಈ ಕವಿತೆಯನ್ನು ಬರೆದಿದ್ದು 7.12.2006ರಂದು ದಂಟಕಲ್ಲಿನಿಂದ ಶಿರಸಿಗೆ ಹೋಗುವಾಗ..)
(ಶಿರಸಿ-ಅಡಕಳ್ಳಿ-ಗೋಳಿಕಟ್ಟಾ ಎಂಬ ದಿನಕ್ಕೆರಡು ಬಾರಿ ಬಂದು ಹೋಗುವ ಬಸ್ಸಿನ ಖಾಯಂ ಪಯಣಿಗ ಒಂದುಕಾಲದಲ್ಲಿ ನಾನಾಗಿದ್ದೆ. ಬಸ್ಸಿನಲ್ಲಿ ನಾನು-ಡ್ರೈವರ್-ಕಂಡಕ್ಟರ್ ಸೇರಿ 10 ತಲೆಗಳನ್ನು ಕಷ್ಟಪಟ್ಟು ಎಣಿಸಬೇಕಿತ್ತು. ಖಾಲಿ ಖಾಲಿ ಹೊಡೆಯುತ್ತಿದ್ದ ಈ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ನನಗೆ ಈ ಕವಿತೆ ಹೊಳೆದಿದ್ದು.. ಬಸ್ಸು ಸಾಗಿದಂತೆಲ್ಲ ಗೀಚುತ್ತ ಹೋಗಿದ್ದೆ.. ಅದೇ ಈ ಕವಿತೆ.. ನಮ್ಮುರ ರಸ್ತೆ, ಬಸ್ಸಿನ ಪರಿಸ್ಥಿತಿಯನ್ನು ಈ ಕವಿತೆ ತಿಳಿಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡುತ್ತದೆ.. ಒಟ್ಟಿನಲ್ಲಿ ಅಡ್ಕಳ್ಳಿ ಬಸ್ಸಿಗೆ ಝೈ ಎನ್ನಿ.)

6 comments: