Tuesday, April 30, 2013

ನಾ ಹೀಗೆ ಕಣೆ ಹುಡುಗಿ

ನಾ ಹೀಗೆ ಕಣೆ ಹುಡುಗಿ


ನಾ ಹೀಗೆ ಕಣೆ ಹುಡುಗಿ
ಸುಮ್ಮನೆ, ಬಿಮ್ಮನೆ..!
ಬದುಕಲಿಕೆ, ನಲಿಯಲಿಕೆ..!!

ಅರಿತು ನಡೆಯಲಿಕ್ಕಾಗೇ
ನೋವಲ್ಲೂ ನಕ್ಕೆ..!
ನಗು ನಗುವ ನಡುವೆಯೇ
ಮನದೊಳಗೆ ಅತ್ತೆ..!!

ನಾ ಹೀಗೆ ಕಣೆ ಹುಡುಗಿ
ಪ್ರೀತಿ ಹುಡುಕಲಿಕೆ
ಗೆದ್ದು ಪಡೆಯೋಕೆ..!
ಸಿಕ್ಕರೆ ನಲಿವೆನಾದರೂ
ಸಿಗದಿರೆ ಅಳಲಾರೆ..!!

ಗೊತ್ತಿಲ್ದೇ ಹೇಳ್ಕೋತೀನಿ ನಾ
ಹೇಳ್ಕೊಂಡು ನಗ್ತೀನಿ.
ನಗ್ತೀನಿ ನಗಿಸ್ತೀನಿ..!
ಒಬ್ಬೊಬ್ನೆ ಅಳ್ತೀನಿ,
ಅಳೋರ್ನೂ ನಗಿಸ್ತೀನಿ..!!

ನಾ ಒಗಟಿನಂತಲ್ಲ ಹುಡುಗಿ
ಚಿಪ್ಪು ಬಾದಾಮಿ.
ಕನಸು ಕಾಣುವ ಪ್ರೇಮಿ.!
ನಾ ನಿರಾಸೆ ಆಗಲಾರೆ ಕಣೆ
ಅರಿಯದುತ್ತರಕ್ಕೆ..!
ಪ್ರತಿ ಸೋಲಿನಲ್ಲೂ ಗೆಲುವ
ಕಾಣ್ತೇನೆ, ಗೆಲ್ತೇನೆ..!!

ನಾ ಹೇಗ್ಹೇಗೋ ಇಲ್ಲ ಕಣೆ ಗೆಳತಿ,
ಒಗಟೂ ಅಲ್ಲ, ಮುಗುಟೂ ಅಲ್ಲ.
ಎಲ್ಲ ಪರೀಕ್ಷೆಗಾಗಿ,
ಅರಿವಿಗಾಗಿ ಮಾತ್ರ..!!

ನಾ ಹೀಗೆ ಕಣೆ ಗೆಳತಿ,
ನಿನಗಾಗಿ, ನಿನ್ನ ಪ್ರೀತಿಗಾಗಿ,
ಮನದೊಳು ಮನೆ ಮಾಡಲು
ಹೊಸ ಹಸಿರಾಗಲು, ಮನಸಾಗಲು ..!!
ಕವಿಯಾಗಲು, ಕವನಕಟ್ಟಲು
ಅರ್ಥವಾಗಲು..!!

ನಾ ಉಬ್ಬಿ ಒಡೆವ ಬಲೂನಿನಂತಲ್ಲ ಕಣೆ
ಲಂಗರು ಕಿತ್ತ ಹಡಗಿನಂತಿದ್ದೇನೆ..!
ಪದೇ ಪದೆ ನಾ
ನಿನ್ನ ಬಯಸಿದ್ದೇನೆ..!!

ಹೇಳೇ ಹುಡುಗಿ,
ನಾ ಹೀಗೆ ಇರಲೇನೇ.
ಒಗಟಿನಂತೆ ಅರ್ಥವಾಗದೇ,
ಅಥವಾ ಬತ್ತಿನಂತೆ..?

ನಗುವಾಗಲೇ ಅಥವಾ
ಅಳುವಾಗಲೇ ಹೇಳು ನೀ..

ಗೆಳತಿ,
ಒಗಟಾಗಿದ್ದರೆ ಮಾತ್ರ
ಅರ್ಥವೇ ಆಗದಂತಿದ್ದರೆ ಮಾತ್ರ
ಕುತೂಹಲ ಅಲ್ಲಿರುತ್ತದೆ ಕಣೆ.
ಇಲ್ಲದಿದ್ದರೆ ಅದು ತೆರೆದ
ಪುಸ್ತಕ ಖೋರಾ ಖಾಗಜé..!
ಅದಕ್ಕೇ ನಾ ಹೀಗೆ ಕಣೆ
ಅರ್ಥವಾಗದ ಒಗಟಿನ ಹಾಗೆ...

(ಪ್ರಸ್ತುತ ಕಾಲೇಜು ದಿನಗಳಲ್ಲಿ `ನೀ ಯಾಕೆ ಹೀಗೆ ಗೆಳೆಯಾ..? ಅರ್ಥವಾಗದ ಒಗಟಿನ ಹಾಗೆ..' 
ಎಂದು ನನ್ನ ಬಳಿ ಅಸ್ಪಷ್ಟವಾಗಿ ಕೇಳಿದ ಗೆಳತಿಯೊಬ್ಬಳಿಗೆ ಬರೆದಿದ್ದ ಕವನ ಇದು...)
ಬರೆದಿದ್ದು : 24-07-2008
ಸ್ಥಳ ದಂಟಕಲ್ಲಿನಲ್ಲಿ

Monday, April 29, 2013

ವಿಸ್ಮಯಗಳ ಗೂಡು : ಈ ಮಲೆನಾಡು ಭಾಗ -2

ವಿಸ್ಮಯಗಳ ಗೂಡು : ಈ ಮಲೆನಾಡು

ಭಾಗ -2

ಮಲೆನಾಡ ಒಡಲಿನೊಳು
ಏನುಂಟು ಏನಿಲ್ಲ..?
ಕಣ್ಣ ನೋಟದ ತುಂಬ
ಹಸಿರು ಮಡಿಲು.
.
    ನಿಜ.., ಮಲೆನಾಡೆಂದರೆ ಹಾಗೆ.. ಸುಳಿದು ಬರುವ ಹೂ ಕಂಪು. ತಳಿರು, ತರುಲತೆಗಳ ಸೋಂಪು. ಕೋಗಿಲೆ, ಹಕ್ಕಿ ಪಕ್ಷಿಗಳ ಇಂಪು. ಹಸಿರು ಒನಪು.. ಒಬ್ಬಂಟಿಯಾದಾಗಲೆಲ್ಲ ಕಾಡುವ ನೆನಪು..
    ಮಲೆನಾಡೆಂದೂಡಲೆಲ್ಲ ನೆನಪಾಗುವಂತದ್ದು ಹಸಿರು ಅಡಿಕೆಯ ತೋಟ.., ಅಲ್ಲಲ್ಲಿ ಕಣ್ತಣಿಪ ಭತ್ತದ ಗದ್ದೆಗಳ ಸೊಬಗು, ಮಾವಿನ, ಅಪ್ಪೆಯ ಮರಗಳ ನರ್ತನ, ಒಂದಕ್ಕಿಂತ ಒಂದು ಎತ್ತರಕ್ಕೆ ಸ್ಪರ್ಧೆ ಮಾಡುವಂತಹ ಪರ್ವತ ಶೀಖರಗಳು.. ಅಲ್ಲಲ್ಲಿ ಕಾಫಿಯೂ ಇದೆ.. ಮತ್ತೆ ಹಲವೆಡೆ ಅರ್ಧಮರ್ಧ ಕಾನು..
    ಇಲ್ಲಿಯ ವಿಶಿಷ್ಟತೆಗಳನ್ನು ಹೆಸರಿಸಿ ಪಟ್ಟಿಮಾಡುವುದು ಬಹಳ ಕಷ್ಟದ ಕೆಲಸವೇ ಸರಿ. ಅದೊಂದು ಬೃಹತ್, ಹೆಮ್ಮೆಯ ಕೆಲಸ. ಕನ್ಣಿಗೆ ಕಾಣದ ಜೀವಿ ಸಂಕುಲದಿಂದ ಕಣ್ಣಿನಲ್ಲಿ ಹಿಡಿಯದಂತಹ ಜೀವಿ ಜಗತ್ತಿನ ಆಶ್ರಯ ತಾಣವೂ ಈ ಮಲೆನಾಡು ಎಂದರೆ ತಪ್ಪಾಗಲಿಕ್ಕಿಲ್ಲ. ಕನ್ಣಿಗೆ ಕಾಣದಂತಹ ಜೀವ ಪ್ರಬೇಧವಾದ `ದಾಟುಬಳ್ಳಿ' ಹಾವು ಈ ಮಲೆನಾಡಿನ ವಿಶ್ಷತೆಗಳಲ್ಲೊಂದು. ಹಾರ್ನಬಿಲ್, ಉದ್ದ ಬಾಲದ ಮಂಗ, ಲಂಗೂರ್ ಗಳು, ಕಣ್ಣಲ್ಲಿಯೇ ಕಾಡುವ, ಕಾಟಕೊಡುವ ಕಾಡುಪಾಪ.. ಅಷ್ಟೇ ಏಕೆ ದಿನ ಬೆಳಗಾದರೆ ಮನೆಯಂಗಳಕ್ಕೆ ಬಂದು ಹಾಯ್ ಹೇಳಿ ಹೋಗುವ ಕಾಡೆಮ್ಮೆಗಳ ಹಿಂಡು, ಮಳೆಗಾಲದ ಮಧುರ ಭಾವದಿಂದ ಕುಣಿದು ಎಲ್ಲರ ಕರೆಯುವ ನವಿಲು.. ಇವಿಷ್ಟನ್ನು ಹೇಳಿದರೆ ಮಲೆನಾಡಿನ ದೇಷ್ಯವೈಭವದ ಸವಿಗೆ ಸ್ವಲ್ಪ ಕಾಣಿಕೆ ಕೊಟ್ಟಂತಾಗುತ್ತದೆಯಲ್ಲವೇ..?
    ಕಂಡ ಕಂಡಕಡೆಯಲ್ಲೆಲ್ಲ ಧುಮ್ಮಿಕ್ಕಿ ಹರಿದು ಕೆಳಗೆ ಹೋಗುವ ಜಲಪಾತ, ನಲಿದು-ಕುಣಿದು-ಬಳಸಿ-ಬಳುಕಿ-ಬೆಳೆಸಿ ಹರಿಯುವ ನದಿಗಳು, ವರ್ಷದ ಆರು ತಿಂಗಳುಗಳ ಕಾಲ ಜಿಟಿ ಜಿಟಿಯೆನ್ನುವ ಮಳೆ, ಕಾಲಿಟ್ಟಲ್ಲಿ ಸದ್ದಿಲ್ಲದೇ ಅಂಟಿಕೊಂಡು ರಕ್ತಹೀರಿ ಡೊಣೆಯನಂತಾಗುವ ಉಂಬಳ, ಜಿಗಳೆಗಳು, ಮಳೆಗಾಲ ಬಂದ ತಕ್ಷಣ ಟ್ವಂಯ್ ಟ್ವಂಯ್ ಎಂದು ವದರಿ ಎಲ್ಲರನ್ನೂ ಸಜ್ಜುಗೊಳಿಸುವ ಮಳೆಜಿರಲೆಗಳು ಅಥವಾ ಸಿಕಾಡಗಳು.. ಇವುಗಳೆ ಮಲೆನಾಡಿನ ಯಜಮಾನರುಗಳು.. ಅಥವಾ ಮಲೆನಾಡನ್ನು ಸಾಕ್ಷೀಕರಿಸುವ ಪ್ರಾಣಿ, ಪಕ್ಷಿ ಕೀಟ ಪ್ರಬೇಧಗಳು..
    ಕೆಂಪು, ಅರಶಿಣ ಬಣ್ಣದಲ್ಲಿರುವ ಕಾದಾಳಿ ಮಣ್ಣು, ಮಳೆಗಾಲದಲ್ಲಿ ಬರಿ ಅರಲು, ಬೇಸಿಗೆಯಲ್ಲಿ ಹುಡಿ ಹುಡಿ ಧೂಳನ್ನು ರಾಚುವ ಈ ಮಣ್ಣು ಇನ್ಯಾವ ಕಡೆಯಲ್ಲೂ ಕಾಣಸಿಗುವುದಿಲ್ಲ.. ಕಚಕ್ಕನೆ ಕಾಲನ್ನು ಬಗೆಯುವ ಬಿಳಿಗಲ್ಲುಗಳು ಮಲೆನಾಡಿನ ಮತ್ತಷ್ಟು ವಿಶೇಷತೆಗಳು.
    ಹಸಿರು ಚಾದರವನ್ನು ಹೊದ್ದು ಶತಮಾನದಿಂದ ಕಾಲುಚಾಚಿ ಮಲಗಿರುವ ದೈತ್ಯ ಗುಡ್ಡಗಳು, ಬಾನಿಗೆ ಸವಾಲು ಹಾಕಿ ಚುಂಬನಕ್ಕಾಘಿ ನಿಂತಿರುವ ದೈತ್ಯ ಮರಗಳು, ಮುಳ್ಳು ಮುಳುಗಳ ಬೆತ್ತ, ಹಕ್ಕಿಗಳ ಪಾಲಿನ ಸ್ವರ್ಗವಾಗಿ, ಮಣ್ಣನ್ನು ಕೊಚ್ಚಿಕೊಂಡು ಹೋಗದಂತೆ ತಡೆದು ನಿಂತು ರೈತ ಸ್ನೇಹಿಯಾಗಿರುವ ವಾಟೆಮಟ್ಟಿ, ಅಂಡಿನಲ್ಲಿ ವಿಷದ ಬಾಣವನ್ನೇ ಹೊತ್ತುಕೊಂಡು ಸೊಂಯ್ಯನೆ ಹಾರಾಡುವ ಭಂಡಾರಮಡಿಕೆ ಹುಳುಗಳೆಂಬ ಪ್ರಕೃತಿ ಸೈನಿಕರು, ಕಡಜೀರಿಗೆ ಹುಳುಗಳು, ಸವಿ ಸವಿಯ ತುಪ್ಪವನ್ನು ಕರುಣಿಸುವ ಮಿಸರಿ, ತುಡುವಿ, ಕೋಲ್ಜೇನುಗಳು., ಇವೆಲ್ಲ ಮಲೆನಾಡಿನ ಮೆರಗಿನ ಚೌಕಟ್ಟುಗಳೆನ್ನುವುದು ಸುಳ್ಳಲ್ಲ..
     ಪಟ್ಟೆಪಟ್ಟೆಯ ಕೊಳಕು ಮಂಡಲ, ಹಸಿರೆಲೆಯ ನಡುವೆ ಹಾಯಾಗಿ ಜೀವನ ನಡೆಸುವ ಹಸುರುಳ್ಳೆ ಹಾವು, ಕಣ್ಣಿಲ್ಲದಿದ್ದರೂ ಎರಡೂ ತಲೆಗಳನ್ನು ಒಳಗೊಂಡು ಅತ್ತ ಇತ್ತ ಎಂಬಂತೆ ಸುಳಿದಾಡುವ ಮಣ್ಣಮುಕ್ಕ ಹಾವು, ಮನುಷ್ಯನನ್ನೂ ಮೀರಿಸುವ ಕಾಳಿಂಗ, ಕೇರೆ ಹಾವು, ಸರ್ಪ, ಕುದುರುಬೆಳ್ಳ, ಹಾರಗಿಣಿ ಮುಂತಾದ ಹಾವುಗಳ ಸಮೂಹ, ವೂವೂಝಿಲಾ ವಾದ್ಯವನ್ನೂ ಮೀರಿಸುವ ವಂಡರು (ಡೊಂಗರು) ಕಪ್ಪೆಗಳು.., ಚಕ್ಕನೆ ನೀರನಿಂದ ಜಿಗಿದು ಕೈಗೆ ಮುತ್ತಿಕ್ಕಿ ಕೈಯಲ್ಲಿನ ತಿಂಡಿಯನ್ನು ಕಳ್ಳತನ ಮಾಡುವ ಬಳ್ಳಿ ಮಿಂಚಿನ ಮೀನುಗಳು, ಹೊಳೆಯ ದಡದಲ್ಲಿ ತಲೆಯೆತ್ತಿ ನಿಂತು ಸವಿ ಹಣ್ಣನ್ನು ನೀಡುವ ಹೂಡಲು.. ಇನ್ನೆಷ್ಟು ನಮೂನೆಗಳನ್ನು ಹೇಳಿದರೂ ಮಲೆನಾಡಿನ ದೃಶ್ಯ ವೈಭವವನ್ನು ಕಿಂಚಿತ್ತೂ ತಿಳಿಸಿದಂತೆ ಆಗುವುದಿಲ್ಲ...
    ಮಲೆನಾಡಿನ ಒಡಲೊಳಗೆ ಹೆಜ್ಜೆ ಹಾಕಿದಂತೆಲ್ಲ ನಿಘೂಡಗಳು ಆವರಿಸುತ್ತವೆ.. ಕುತೂಹಲಕ್ಕೆ ಕೈಹಾಕಿದಂತೆಲ್ಲ ಹೊಸ ಹೊಸ ಬೆಡಗುಗಳು ಬೆರಗುಗಳು ತೆರೆದುಕೊಳ್ಳುತ್ತವೆ.. ಇವುಗಳೆಲ್ಲ ಮಲೆನಾಡಿನ ಚಿಕ್ಕದೊಂದು ತುಣುಕಷ್ಟೇ.. ಮಲೆನಾಡಿನ ಅಸಲೀತನದ ಪರಿಚಯ ನಮಗಾಗಬೇಕಾದರೆ ಅಲ್ಲಿಗೇ ಹೋಗಬೇಕು. 1801ರಲ್ಲಿ ಬ್ರಿಟಿಷರ ಜಾನ್ ಬುಕಾನನ್ ಎಂಬಾತ ಮಲೆನಾಡಿನ ಒಡಲೊಳಗೆ ಹೆಜ್ಜೆ ಹಾಕಿ ಇಲ್ಲಿನ ಬೆರಗನ್ನೆಲ್ಲ ದಾಖಲಿಸಿದ್ದಾನಂತೆ.. ಅವನಂತೆ ಇನ್ನೊಮ್ಮೆ ನಾವು ಹೆಜ್ಜೆ ಹಾಕಿದಾಗಲೇ ಅಲ್ಪಸ್ವಲ್ಪವಾದರೂ ಮಲೆನಾಡು ಅರ್ಥವಾಗಬಲ್ಲದೇನೋ.. ಮಲೆನಾಡೆಂಬ ಸಾಗರದೊಳಗೆ ಒಮ್ಮೆಯಾದರೂ ಬುಕಾನನ್ ನಂತೆ ದೋಣಿಯಾನ ಮಾಡೋಣ.. ಮಲೆನಾಡಿನ ಸೊಬಗನ್ನು ಆಸ್ವಾದಿಸೋಣ ಅಲ್ಲವೇ..

Wednesday, April 24, 2013

ಮೋಹ...

 ಮೋಹ...



ಸಮುದ್ರದ ಅಲೆಗಳಿಗೆ
ನನ್ನ ಮೇಲೆ..
ಏಕಿಷ್ಟು ಹುಚ್ಚು ಪ್ರೀತಿ..?
ಪದೇ ಪದೆ ಬಂದು
ನನ್ನನ್ನು ಚುಂಬಿಸುತ್ತಾಳೆ..?

ತಪ್ಪಿಸಿಕೊಂಡು ಹೋದಷ್ಟೂ 
ಬೆನ್ನಟ್ಟಿ ಬಂದು
ಕಾಲು ತೋಯಿಸುತ್ತಾಳೆ.. 
ತಂಪಾಗುತ್ತಾಳೆ..

ಕಾಲಡಿಯಲ್ಲೆಲ್ಲ ಸುಳಿದು 
ಕಚಗುಳಿಯಿಕ್ಕಿ
ಒಮ್ಮೆಲೆ ಕಕ್ಕಾಬಿಕ್ಕಿ...

ನಾನು ಏನನ್ನೇಕೊಟ್ಟರೂ
ಬಿಡದೆ ಬರಸೆಳೆದು 
ಕಣ್ಣಿಗೆ ಕಾಣದಂತೆ
ತೆಕ್ಕೆಯೊಳಗೆಳೆದುಕೊಂಡು 
ಓಡಿ ಹೋಗುತ್ತಾಳೆ..

ಅಲೆಯಲೆಯಾಗಿ
ಮನದಲ್ಲಿ ನಿಲ್ಲುತ್ತಾಳೆ..
ಅಪ್ಪಿ ತಪ್ಪಿ ನಾವು ಒದ್ದೆಯಾದರೂ
ತಾಳಲಾರೆನೆಂಬ ಕಿರಿ ಕಿರಿ..
ಉಪ್ಪು ಉಪ್ಪು ನವೆ..

ಬಿಸಿ ಬೇಗೆಯ ಬೆಂಕಿ..
ಉರಿ ಉರಿ..

ಮೋಹದ ಕಡಲ ಪ್ರೀತಿಯ ಪರಿಗೆ 
ಸೋತರೂ ಸೋಲರಾರೆ..
ನಿಂತರೂ ನಿಲ್ಲಲಾರೆ

Tuesday, April 23, 2013

ನಿನ್ನದೇ ನೆನಪು ನೆರಳಿನಲ್ಲಿ : ಪ್ರೇಮಪತ್ರ-4

ಪ್ರೇಮಪತ್ರ-4

ನಿನ್ನದೇ ನೆನಪು ನೆರಳಿನಲ್ಲಿ

   
ಪ್ರೀತಿಯ ಗೆಳತಿ,
    ಛೇ.., ನೀನು ಹೀಗೆ ಮಾಡ್ತೀಯಾ ಅಂತ ನಾನು ಅಂದುಕೊಂಡಿರಲಿಲ್ಲ. ನೀನು ಬರ್ತೀಯಾ.. ಬಂದು ನನ್ನ ಬಳಿಯಲ್ಲಿ ನಾಲ್ಕೆಂಟು ಮಾತುಗಳನ್ನಾಡಿ, ಹಾಗೆ ಸುಮ್ಮನೇ ನಕ್ಕು ನಲಿದು ವಾತಾವರಣವನ್ನು ಸೆಳೆದುಹೋಗುತ್ತೀಯಾ ಅಂದುಕೊಂಡಿದ್ದೆ.. ಆದರೆ ನನ್ನ ನಿರೀಕ್ಷೆ ಹುಸಿಯಾಗಿ ಹೋಯ್ತು. ನಾನು ನಿನಗಾಗಿ ಕಾದು ಕಾದು ಸುಸ್ತಾಗಿ ಬಸವಳಿದು ಹೋದೆ.
    ಅಂದು ನಿನಗೆ ನೆಪಿತ್ತಲ್ಲ. ಫೆಬ್ರವರಿ 14. ನನ್ನ ನಿನ್ನಂತಹ ಪ್ರೇಮಿಗಳಿಗೆಂದೇ ರಿಸರ್ವ್ ಆಗಿರೋ ದಿನ. ವ್ಯಾಲಂಟಾಯಿನ್ಸ್ ಡೇ. ನಿನಗೆ ಮರೆತಿಲ್ಲ. ಮರೆಯೋದೂ ಇಲ್ಲ ಅಂದ್ಕೊಂಡಿದ್ದೀನಿ. ಆವತ್ತು ನೀನು ನನ್ನ ಬಳಿ ಬಂದು ಮಾತನಾಡಿ ಹೋಗ್ತೀಯಾ ಅಂದ್ಕೊಂಡಿದ್ನಲ್ಲೆ ಗೆಳತಿ., ಯಾಕೆ ನೀನು ಬರ್ಲೇ ಇಲ್ಲ..? ನೀನು ಬರದೇ ಇರಲು ಅಂತಹುದೇನಾದರೂ ಕಾರಣವಿದೆಯಾ..? ಇಲ್ಲವಾದಲ್ಲಿ ನನ್ನನ್ನು ಸುಮ್ಮ ಸುಮ್ಮನೇ ಕಾಡಿಸಬೇಕೆಂಬ ಕಾರಣದಿಂದಲೇ ಬಂದಿಲ್ಲವಾ..?
    ನೀನಾಗಿಯೇ ಮೈಮೇಲೆ ಬಿದ್ದು, ಕಾಟಕೊಟ್ಟು ಅದೆಷ್ಟೋ ಪರಿ ಬಳಸಿ ಬಯಸಿ ನನ್ನಿಂದ ಪ್ರೇಮವನ್ನು ಪಡೆದ ನಿನಗೆ ಪ್ರೇಮಿಗಳ ದಿನದಂದು ನನ್ನ ಮರೆತುಹೋಯಿತಾ..?
    ನನ್ನೊಲವೆ., ನಿನಗಾಗಿ ಅಂತ್ಲೇ ಒಂದು ಬಿಳಿಯ ಹಾಗೂ ಮತ್ತೊಂದು ನಸುಗೆಂಪಿನ ಗುಲಾಬಿಯನ್ನು ತಂದು, ಕೊಡಬೇಕೆಂದು ಕೈಯಲ್ಲಿ ಹಿಡಿದು ನಿಂತಿದ್ದೆ. ಆದರೆ ನೀನು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅದರ ದಂಟಿನಲ್ಲಿದ್ದ ಮುಳ್ಳೊಂದು ಹಾಗೆ ಸುಮ್ಮನೆ ಚುಚ್ಚಿ ರಕ್ತವನ್ನು ಒತ್ತರಿಸಿದ ಗಾಯ ನಿಧಾನವಾಗಿ ಮಾಯುತ್ತಿದೆ. ಕೈಯಲ್ಲಿ ಹಿಡಿದ ಹೂವಿನ ಎಸಳುಗಳೆಲ್ಲ ಉದುರಿ ಕೇವಲ ದಂಟೊಂದೆ ಉಳಿದುಕೊಂಡಿದೆ. ಯಾಕ್ಹೀಗೆ ಗೆಳತಿ..? ನಾನು ನಿನಗೆ ಬೇಡವಾದ್ನಾ..?
    ಫೆಬ್ರವರಿ 14ರಂದು ನಿನ್ನ ನೋಟ ಮಾತ್ರದಿಂದಲೇ ಹೊಸದೊಂದು ಲೋಕ ಕಟ್ಟಿಕೊಳ್ಳೋಣ ಎಂದು ಬಯಸಿದ್ದೆ. ನಿನ್ನ ನಗುವಲ್ಲಿ ನಾನು ಮಗುವಾಗ ಬಯಕೆಯನ್ನು ಹೊಂದಿದ್ದೆ..ನಿನ್ನ ಉಸಿರಾಗಬೇಕೆಂದುಕೊಂಡಿದ್ದೆ. ಕಣ್ಣಲ್ಲಿ ಕಣ್ಣಿಟ್ಟು ಮನದ ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಳ್ಳಬಯಸಿದ್ದೆ.. ಆದರೆ ಅದೆಲ್ಲ ಭಾವನೆಗಳ ಗಾಳಿ ಗೋಪರುವನ್ನು ಉಫ್ ಎಂದು ಊದಿದೆ. ಕಾಯುತ್ತಲೇ ಇರುವ ನನ್ನ ಭಾವನೆಗೆ ಪೂರಕವಾಗಿ ನಡೆದುಕೊಳ್ಳಲೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ನಮ್ಮ ರೆಗ್ಯೂಲರ್ ಜಾಗದಲ್ಲಿ ನಾನು ಕಾದಿದ್ದೇ ಬಂತು. ಹಾಂ.. ನೀನು ನಮ್ಮ ಟ್ರಿಪ್ಪಿನ ಸಂದರ್ಭದಲ್ಲಿ ಕೊಡಿಸಿದ್ದೆಯಲ್ಲ ತಿಳಿನೀಲಿ ಬಣ್ಣದ ಟೀಷರ್ಟ್.. ಎದೆಯ ಮೇಲೆ ಚೆ ಗುವೆರಾ ನ ಉತ್ಸಾಹ ಉಕ್ಕಿಸುವ ಪೋಟೋ. ಅದನ್ನು ಧರಿಸಿಯೇ ಬಂದಿದ್ದೆ.. ಆದಿನ ಅದೇನಾಗಿತ್ತೋ ಏನೋ ನಾವು ಸೇರುತ್ತಿದ್ದ ಆ ಜಾಗದ್ದಿ ನಮ್ಮಂತಹ ಎಂಟ್ಹತ್ತು ಜೋಡಿಗಳು. ನಾನೊಬ್ಬನೆ .. ಒಂಟಿ ಒಂಟಿ.. ಅದೆಷ್ಟು ನಕ್ಕರೋ..
    ನಿನಗಾಗಿ ಕಾದು ಕಾದು ಈಗ ಬರುತ್ತೀಯಾ ಆಗ ಬರುತ್ತೀಯಾ ಎಂದು ಗಡಿಯಾರದ ಮೇಲೆ ಕಣ್ಣೊಟ ಬೀರಿದ್ದೇ ಬಂತು.. ಆದರೆ ನೀನು ಬರಲೇ ಇಲ್ಲ. ನಿನ್ನ ನೋಡುವ ತವಕದ ನನ್ನ ಮನಸ್ಸಿಗೆ ಉರಿಕೆಂಡವನ್ನು ಸೋಕಿಬಿಟ್ಟೆ ನೀನು. ಯಾಕೆ ಹೀಗೆ..? ಎಷ್ಟು ಬೇಜಾರಾಗಿದೆ ಗೊತ್ತಾ..? ಅಳೋಣ ಎಂದರೆ ನಾನು ಗಂಡಸು. ನಕ್ಕುಬಿಡುತ್ತದೆ ಸಮಾಜ. ಆದರೆ ಸೀದಾ ಸಾದಾ ಇರಲೋ ಎಂದರೆ ಮೀರಿ ಮೆರೆವ ಎದೆ ಭಾರ.. ನಿಟ್ಟುಸಿರು. ನೀನು ಹಾಗೆ ಮಾಡಿದ್ದರ ಕಾರಣ ಏಕೋ.. ಏನೋ.. ನಾನರಿಯೆ.. ಯಾಕೋ ಭಯವಾಗುತ್ತಿದೆ ಗೆಳತಿ..
    ಇರಲಿ ಬಿಡು.., ಮತ್ತೆ ನಿನ್ನದೇ ನೆನಪು ನೆರಳಿನಲ್ಲಿ ಕನವರಿಕೆಯಲ್ಲಿ ಬದುಕಿದ್ದೇನೆ. ಗೋಡೆಗಂಟಿಸಿದ ನವಿಲುಗರಿ  ನಿನ್ನ ನೆನಪನ್ನು ಮತ್ತಷ್ಟು ತರುತ್ತಿದೆ. ನಮ್ಮ ಮನೆಗೆ ಬಂದಾಗ ಗುಡ್ಡದ ಮೇಲೆ ನಿನಗೆ ಸಿಕ್ಕ ನವಿಲುಗರಿಯನ್ನು ಜತನದಿಂದ ಎತ್ತಿಕೊಂಡು ನನಗೆ ಕೊಟ್ಟಿದ್ದೆ.. ನಾನು ಅದನ್ನು ಅಷ್ಟೇ ಜತನದಿಂದ ನನ್ನ ಮಲಗುವ ಕೋಣೆಯ ಪಕ್ಕದ ಗೋಡೆಗೆ ಅಂಟಿಸಿದ್ದೆ... ಅಮೃತವರ್ಷಿಣಿಯ ಥರ.. ನಿನ್ನ ನೆನಪಾದಾಗ ನವಿಲುಗರಿಯ ಟೆಲಿಪತಿ ಸಂದೇಶ ರವಾನೆ ಮಾಡುತ್ತಿದ್ದೆ..
    ಬಿಡು.. ನೀನು ಬರಲಿಲ್ಲ.. ಆದರೂ ನಾನು ಕಾಯುತ್ತಿದ್ದೇನೆ.. ನಿನ್ನ ನೆನಪಿನಲ್ಲಿ.. ಭಯದ ನೆರಳಿನಲ್ಲಿ.. ನೀ ಬಂದರೆ ನನ್ನ ಹಳೆಯ ದುಕ್ಕ ಬೇಗುದಿಯನ್ನೆಲ್ಲ ಮರೆತುಬಿಡುತ್ತೆನೆ.. ಬರುವೆಯಲ್ಲ..?
ಇಂತಿ ನಿನ್ನವ
ಜೀವನ

Sunday, April 14, 2013

ಎಲ್ಲ ಮರೆತಿರುವಾಗ ( ಕಥೆ ಭಾಗ -9)

ಎಲ್ಲ ಮರೆತಿರುವಾಗ


ಭಾಗ -9


ಹೀಗೆ ದಿನಗಳು ಸಾಗಿದವು...
ನನ್ನ ಹಾಗೂ ಅವಳ ನಡುವೆ ಇದ್ದುದು ಸ್ನೇಹವೋ ಪ್ರೇಮವೋ ಯಾವುದೂ ಅರ್ಥವಾಗಲಿಲ್ಲ. ಗೊಂದಲಕ್ಕೆ ಬಿದ್ದಿದ್ದೆ..
ಬಹುಶಃ ಅದೇ ಗೊಂದಲ ಅವಳಲ್ಲಿತ್ತೋ ಇಲ್ಲವೋ ನಾ ಕಾಣೆ...
ಈ ಗೊಂದಲದ ಗೂಡಿನಲ್ಲಿಯೇ ಅನೇಕ ದಿನಗಳನ್ನೂ ದೂಡಿದೆವು...

--

ಪ್ರೇಮದ ಗುಂಗು ಅಪಾರ.. ಅದನ್ನು ಅದುಮಲು ಯತ್ನಿಸಿದಂತೆಲ್ಲ ಹೆಚ್ಚುತ್ತದೆ...
ಒಂದಿನ ಶುಭ ಮುಂಜಾನೆ ಕಾಲೇಜಿಗೆ ಬಂದವನೇ ಇವತ್ತು ನನ್ನ ಪ್ರೇಮದ ಪರಿಯನ್ನು ಅವಳಿಗೆ ತಿಳಿಸಲೇ ಬೇಕೆಂದು ನಿರ್ಧರಿಸಿದೆ...
ಆದರೆ ಆಕೆ ಆ ದಿನ ಬರಲೇ ಇಲ್ಲ...
ಮರು ದಿನ ಮತ್ತೆ ಯಥಾ ಪ್ರಕಾರ ಅದೇ ನಿರ್ಧಾರ..
ಆ ದಿನ ನಮ್ಮ ಕಾಲೇಜಿ ಎದುರಿನ ಚಿಕ್ಕ ುದ್ಯಾನಕ್ಕೆ ಕರೆದೊಯ್ದು ನನ್ನ ಮನದಾಳದ ಭಾವನೆಗಳನ್ನು ಹೇಳಿಯೇ ಬಿಟ್ಟೆ...

ಬೈಗುಳಗಳೋ.. ಮತ್ತೇನೋ ನಿರೀಕ್ಷೆಯಲ್ಲಿದ್ದೆ... ಹೂಂ ಅನ್ನಲಿಲ್ಲ.. ಊಹೂಂ ಅಂತಲೂ ಹೇಳಲಿಲ್ಲ..
ಮರುದಿನ ಸಿಗ್ತೇನೆ ಅಂದವಳು ನಾಲ್ಕು ದಿನ ನಾಪತ್ತೆ...
ಅಲ್ಲಿಗೆ ನನ್ನ ಪ್ರೇಮಕ್ಕೆ ದಿ ಎಂಡ್ ಗ್ಯಾರಂಟಿ ಅಂದುಕೊಂಡೆ...


ಐದನೇ ದಿನ ಬಂದಳು...
ಸಂಗೀತದಂತೆ...
ಬಂದವಳು ನನ್ನ ಕಣ್ಣನ್ನು ಸಾಕಷ್ಟು ಸಾರಿ ತಪ್ಪಿಸಲು ಯತ್ನಿಸಿದಳು..
ಕೊನೆಗೊಮ್ಮೆ ಸಿಕ್ಕಳು...
ಏನು..? ಎಂದೆ..
ಯೆಸ್ ಅಂದಳು...

ನನಗಂತೂ ಒಮ್ಮೆ ಆಕಾಶ ಕೈಗೆ ಸಿಕ್ಕಂತಹ ಅನುಭವ...
ಎದೆಯೊಳಗೆ ನೂರು ಗಿಟಾರು ಮೀಟಿದಂತಹ ಸಂಭ್ರಮ...

ಅದಾಗಿ ನಾಲ್ಕುದಿನ ನಾನು ಅಕ್ಷರಶಹ ನೆಲದಿಂದ ನಾಲ್ಕು ಇಂಚು ಮೇಲಿದ್ದೆ.. ಅಂದರೂ ತಪ್ಪಿಲ್ಲ..
ಮೊದಲ ಪ್ರೇಮದ ಮಧುರ ಭಾವನೆ ಅಂದರೆ ಇದೇ ಏನೋ... ಅದು ಹೀಗೆಯೇ ಇರ್ತದೇನೋ...
ಅಂತೂ ಇಂತೂ ಮೊಟ್ಟ ಮೊದಲ ಬಾರಿಗೆ ನಾನು ಇಷ್ಟಪಟ್ಟದ್ದು ನನ್ನ ಕೈಗೆ ಸಿಕ್ಕ ಸಂತಸ...

ಮುಂದಿನ ದಿನಗಳು ಅತ್ಯಂತ ಸಂಬ್ರಮದಿಂದ ಕಳೆದವು ಎನ್ನುವುದನ್ನು ಮತ್ತೆ ನಾನು ಹೇಳಬೇಕಿಲ್ಲವಲ್ಲ...
ಒಮ್ಮೆ ಅದೃಷ್ಟ ಕೈ ಹಿಡಿದರೆ ಎಲ್ಲಕಡೆಯಿಂದ ಒದ್ದುಕೊಂಡು ಬರ್ತದಂತಲ್ಲ ಅದೇ ರೀತಿ..
ಆ ದಿನಗಳಲ್ಲಿ ನನ್ನ ಹಾಡನ್ನು ಕೇಳಿದ ಅದ್ಯಾರೋ..
ಪ್ರಖ್ಯಾತ ಟಿ.ವಿ. ವಾಹಿನಿಯ ಸಂಗೀತ ಕಾರ್ಯಕ್ರಮಕ್ಕೂ ಆಯ್ಕೆ ಮಾಡಿ ಕಳಿಸಿದರು.
ಕಾರ್ಯಕ್ರಮ ಬಹಳ ಸಕ್ಸಸ್ಸೂ ಆಯಿತು...

ತೀರಾ ಬಹುಮಾನ ಗೆಲ್ಲದಿದ್ದರೂ 3 ನೇ ಸ್ಥಾನವನ್ನು ಗೆದ್ದುಕೊಂಡೆ...

ಆದರೆ ಮುಂದಿನ ದಿನಗಳು ದುರಂತಮಯವಾಗಿದ್ದವು..

(ಮುಂದುವರಿಯುವುದು...)

Monday, April 1, 2013

ಒಂದಿಷ್ಟು ಹನಿ ಚುಟುಕಗಳು

ಒಂದಿಷ್ಟು ಹನಿ ಚುಟುಕಗಳು


43)ತೋರಿಕೆಗಳು

ಭಾರತ ದೇಶದ
ಮೂರು ಜಗತ್ಪ್ರಸಿದ್ಧ
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ..!!


44)ಲಕ್ ವಾ

ಲಕ್ ಲಕ್ ಎಂದು
ಪದೆ ಪದೇ ಹೇಳುತ್ತಾ
ಸಾಗುತ್ತಿದ್ದವನಿಗೆ
ಲಕ್ಕೋ ಎಂಬಂತೆ
ಲಕ್ವಾ ಹೊಡೆದುಬಿಟ್ಟಿತು..!!

45)ಸ್ಮಿತ

ಅವಳ ಹೆಸರೇನೋ
ಚೆಂದದ ಸ್ಮಿತ.!
ಆಕೆ ಬಾಯಿಬಿಟ್ಟರೆ ಮಾತ್ರ
ತಾಳಲಾರದ ಗಬ್ಬುನಾಥ...!!

 

46)ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರಹೋಗುವ
ಒಂದು way..!!

47)`ಕೋಲಾ'ಹಲ

ನಮ್ಮೂರಿನ ಯಶಸ್ವಿ ರೈತ
ಬೋರನಲ್ಲಿದೆ ಬೆಳೆದ ಸೋಂಪಾದ ಹೊಲ..!!
ಅದಕ್ಕೆ ಕಾರಣ ಹುಡುಕಿದಾಗ
ಸಿಕ್ಕಿದ್ದು ಮಾತ್ರ
ಕೋಕಾ ಕೋಲ..!!!

Saturday, March 23, 2013

ಬೇಡರ ವೇಷದ ಸಡಗರ

ನಗರದಾದ್ಯಂತ ಬೇಡರ ವೇಷದ ಸಡಗರ. ನಗರದ ಪ್ರಮುಖ ವೃತ್ತಗಳಲ್ಲಿ ಬೇಡನ ಅಬ್ಬರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಾದ್ಯಂತ ತಮಟೆಯ ಸದ್ದಿನ ಜೊತೆಗೆ ಬೇಡನ ಹೂಂಕಾರ, ಬೇಡರ ವೇಷವೆಂಬ ಸಂಪ್ರದಾಯದ ಕುಣಿತವನ್ನು ಕಾಣಬಹುದಾಗಿದೆ.
    ಶಿರಸಿ ಹಾಗೂ ಸುತ್ತಮುತ್ತಲಿನ ಕೆಲವೇ ಕಡೆಗಳಲ್ಲಿ ಕಾಣಬಹುದಾದ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಾಣಸಿಗುತ್ತದೆ. ಶಿರಸಿಯ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಬ್ರಮ ಮುಗಿಲುಮುಟ್ಟುತ್ತದೆ. ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತದೆ. ಕಳೆದ 20-22 ದಿವಸಗಳಿಂದಲೇ ಬೇಡರ ವೇಷದ ತಾಲೀಮು ಶುರುವಾಗಿದೆ. ಇದರಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೇಡರ ವೇಷದ ತಾಲೀಮು, ತಮಟೆ ಸದ್ದು ಸವರ್ೇ ಸಾಮಾನ್ಯವಾಗಿದೆ.
    ಕಳೆದ ಒಂದು ದಶಕಗಳ ಹಿಂದೆ ನಗರದಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಬೇಡರ ವೇಷವನ್ನು ಹಾಕಲಾಗುತ್ತಿತ್ತು. ಆದರೆ ಈಗ ಅವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗೆ ಬೇಡರ ವೇಷವನ್ನು ಹಾಕುವ ಗುಂಪೊಂದನ್ನು ಬಂಡಿ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕೆಲವೇ ಕೆಲವಿದ್ದ ಬಂಡಿಗಳ ಸಂಖ್ಯೆ ಈಗ ಬಹಳಷ್ಟು ಹೆಚ್ಚಿದೆ. ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ 15-20 ಬಂಡಿಗಳು ಸಂಚರಿಸಿ ಬೇಡರ ನೃತ್ಯವನ್ನು ಮಾಡಲಾಗುತ್ತದೆ. ಈ ವರ್ಷ ಅಜಮಾಸು 40ಕ್ಕೂ ಹೆಚ್ಚು ಬಂಡಿಗಳಿವೆ ಎಂದು ಹೇಳಲಾಗುತ್ತಿದೆ. ಗಲ್ಲಿಗೊಂದರಂತೆ ಬಂಡಿಗಳು ಹುಟ್ಟಿಕೊಂಡಿದ್ದು ಈಗಾಗಲೇ ತಾಲೀಮಿನಲ್ಲಿ ತೊಡಗಿಕೊಂಡಿವೆ. ನಗರದ ಅಧಿದೇವತೆ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಬಂಡಿ ನಂತರ ನಗರದ ವಿವಿಧ ಬೀದಿಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಸಂಚರಿಸುತ್ತವೆ. ರಾತ್ರಿ 10 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ಬೇಡರ ವೇಷದ ವೈವಿಧ್ಯತೆ ಕಾಣಬಹುದಾಗಿದೆ.
ಹಿನ್ನೆಲೆ
       ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಕಾಣ ಸಿಗಬಹುದಾದ ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆಗೆ ನಾಲ್ಕಾರು ಶತಮಾನಗಳ ಇತಿಹಾಸವಿದೆ. ಶಿರಸಿ ಪ್ರದೇಶಗಳನ್ನು ಆಳ್ವಿಕೆ ನಡೆಸಿದ್ದ ಸೋದೆಯ ಅರಸರ ಕಾಲದಿಂದ ಬೇಡರ ವೇಷವೆಂಬುದು ಚಾಲ್ತಿಗೆ ಬಂದಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತವೆ.
    ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆ ಬೆಳೆದು ಬಂದ ಕುರಿತು ಹಲವಾರು ಕಥೆಗಳೂ ಚಾಲ್ತಿಯಲ್ಲಿವೆ. ಶಿರಸಿ ಭಾಗದಲ್ಲಿ 15-16ನೇ ಶತಮಾನದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ದರೋಡೆಕೋರ ಬೇಡನ ಕಥೆಯನ್ನು ಈ ಕುರಿತು ಉಲ್ಲೇಖಿಸಲಾಗುತ್ತದೆ. ಜನರನ್ನು ಕಾಡುತ್ತಿದ್ದ ಕಾನನ ವಾಸಿ ಬೇಡನನ್ನು ಹಿಡಿಯಲು ಸೋದೆಯ ಅರಸ ಸೈನಿಕರನ್ನು ಅಟ್ಟಿ, ಹರಸಾಹಸದಿಂದ ಆತನನ್ನು ಬಂಧಿಸಲು ಯಶಸ್ವಿಯಾಗುತ್ತಾನೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಿಂದ ಹೂಂಕರಿಸುತ್ತಾನೆ. ಆತನನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ ಎನ್ನುವುದೊಂದು ಕಥೆ.
    ಸೋದೆ ಅರಸರ ಕಾಲದಲ್ಲಿ ಶಿರಸಿಯೆಂಬುದು ಚಿಕ್ಕ ಹಳ್ಳಿ. ಆದರೂ ಇಲ್ಲಿ ನಾಲ್ಕಾರು ಅಂಗಡಿ ಮುಂಗಟ್ಟುಗಳಿದ್ದು, ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಳ್ಳುವ ಪ್ರಮುಖ ಸ್ಥಳವಾಗಿತ್ತು. ಅಲ್ಲದೇ ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪಕರ್ಿಸುವ ಆಯಕಟ್ಟಿನ ಸ್ಥಳವೂ ಇದಾಗಿತ್ತು. ಸಂಪದ್ಭರಿತ ಈ ಸ್ಥಳದ ಮೇಲೆ ಬಹಮನಿ ಅರಸರ ಹಾಗೂ ಮೊಘಲರ ದಾಳಿ ಪದೆ ಪದೆ ನಡೆಯುತ್ತಿತ್ತು. ಅದನ್ನು ತಡೆಯುವ ಸಲುವಾಗಿ ಸೋದೆಯ ಅರಸ ಕಲ್ಯಾಣ ಶೆಟ್ಟಿ ಎನ್ನುವವನನ್ನು ಶಿರಸಿಯಲ್ಲಿ ನೇಮಕ ಮಾಡುತ್ತಾನೆ. ಕಲ್ಯಾಣ ಶೆಟ್ಟಿ ತನ್ನ ಬಂಟರ ಸಹಾಯದಿಂದ ಹೊರ ಭಾಗದ ಧಾಳಿಯನ್ನು ತಡೆಗಟ್ಟಲು ಯಶಸ್ವಿಯಾಗುತ್ತಾನೆ.
    ಮಲ್ಲೇಶಿ ಎನ್ನುವವನು ಕಲ್ಯಾಣ ಶೆಟ್ಟಿಯ ಬಂಟರಲ್ಲೊಬ್ಬ. ಈತನ ಕಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎನ್ನುವ ಕಾರಣದಿಂದಲೇ ವೈರಿಗಳ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಾನೆ. ಕಣ್ಣಿನಲ್ಲಿ ವಿಶೇಷ ಶಕ್ತಿಯುಳ್ಳ ಮಲ್ಲೇಶಿ ರಾತ್ರಿಯ ಸಂದರ್ಭದಲ್ಲಿ ವೈರಿ ಪಡೆಯನ್ನು ಸೋಲಿಸಲು ಕಾರಣನಾಗುತ್ತಾನೆ. ಕೊನೆಗೊಮ್ಮೆ ಕಣ್ಣಿನ ವಿಶೇಷ ಶಕ್ತಿಯೇ ಆತನಲ್ಲಿ ಅಹಂಕಾರ ಬೆಳೆಯುವುದಕ್ಕೆ ಕಾರಣವಾಗುತ್ತದೆ. ವಿಶೇಷ ಶಕ್ತಿಯಿರುವ ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ತಾನೊಬ್ಬ ಮಹಾನ್ ವ್ಯಕ್ತಿ ಎಂದು ಸೊಕ್ಕಿನಿಂದ ಮೆರೆಯುವ ಮಲ್ಲೇಶಿ ಪಟ್ಟಣದ ಮಹಿಳೆಯರ ಮೇಲೆ ಕಣ್ಣು ಹಾಕಲು ಯತ್ನಿಸುತ್ತಾನೆ.
    ಅಂದಿನ ಶಿರಸಿಯ ಮಹಿಳೆಯರು, ಹುಡಿಗಿಯರಿಗೆ ತೊಂದರೆ ನೀಡುವ ಮಲ್ಲೇಶಿ ಅವರನ್ನು ಹೊತ್ತೊಯ್ಯಲು ಪ್ರಾರಂಭಿಸುತ್ತಾನೆ. ಹೀಗಿರಲು ಒಂದು ದಿನ ಕಲ್ಯಾಣ ಶೆಟ್ಟಿಯ ಮಗಳಾದ ರುದ್ರಾಂಬೆಯ ಮೇಲೆ ಮಲ್ಲೇಶಿಯ ದೃಷ್ಟಿ ಹಾಯುತ್ತದೆ. ರುದ್ರಾಂಬೆಯನ್ನು ಬಯಸುವ ಮಲ್ಲೇಶಿ ಆಕೆಯನ್ನು ತನ್ನ ಜೊತೆಗೆ ಬರುವಂತೆ ಕೇಳಿಕೊಳ್ಳುತ್ತಾನೆ. ಆತನ ಹಾವಳಿಯನ್ನು ಅರಿತಿದ್ದ ರುದ್ರಾಂಬೆ ಮಲ್ಲೇಶಿಗೆ ಪಾಠವನ್ನು ಕಲಿಸುವ ಸಲುವಾಗಿ ಆತನ ಜೊತೆಗೆ ಹೋಗಲು ಒಪ್ಪಿಕೊಳ್ಳುತ್ತಾಳೆ.
    ಈ ನಡುವೆ ಮಲ್ಲೇಶಿಯ ಗುಣಾವಗುಣಗಳನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಸೂಕ್ತ ಸಮಯವನ್ನು ಎದುರುನೋಡುತ್ತಿರುತ್ತಾಳೆ. ಪ್ರತಿ ಹುಣ್ಣಿಮೆಯ ದಿನ ಮಾರಿಕಾಂಬೆ (ದೇವಿ)ಯ ಪೂಜೆ ಮಾಡುವ ವಿಷಯವನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ಪಾಠ ಕಲಿಸಲು ಇದೇ ಸೂಕ್ತ ಸಮಯವೆಂದು ನಿರ್ಧರಿಸಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಆತ ಪೂಜೆ ಮಾಡುತ್ತಿದ್ದಾಗ ಮಲ್ಲೇಶಿಯ ಕಣ್ಣಿಗೆ ರಾಸಾಯನಿಕಗಳನ್ನು ಎರಚಿಬಿಡುತ್ತಾಳೆ. ಇದರಿಂದಾಗಿ ಕಣ್ಣಿನ ಶಕ್ತಿ ಕಳೆದುಕೊಳ್ಳುವ ಮಲ್ಲೇಶಿ ವೇದನೆಯಿಂದ ಕೂಗಿಕೊಳ್ಳುತ್ತಾನೆ. ಆತನ ಕಣ್ಣು ಕುರುಡಾಗುತ್ತದೆ. ಇದರಿಂದಾಗಿ ಹಳ್ಳಿಯ ಜನರಿಗೆಲ್ಲ ಸಂತಸವಾಗಿ ಸಂಭ್ರಮಾಚರಣೆಗಳನ್ನು ನಡೆಸುತ್ತಾರೆ. ಮಲ್ಲೇಶಿಯನ್ನು ಹಗ್ಗದಿಂದ ಬಂಧಿಸಿ ಆತನನ್ನು ಊರಿನಾದ್ಯಂತ ಮೆರವಣಿಗೆ ಮಾಡುತ್ತಾರೆ. ಕಣ್ಣಿನ ವೇದನೆ ಹಾಗೂ ಬಂಧನದ ಸಿಟ್ಟಿನಿಂದ ಹೂಂಕರಿಸುವ ಮಲ್ಲೇಶಿಯನ್ನು ರುದ್ರಾಂಬೆ ಕೆಣಕುತ್ತ ಮುಂದೆ ಸಾಗುತ್ತಾಳೆ. ನಂತರ ಸತಿ ಸಹಗಮನದ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ರುದ್ರಾಂಬೆಯ ನೆನಪಿಗಾಗಿ ಬೇಡರ ವೇಷವನ್ನು ಹಾಕಿ ಕುಣಿಯಲಾಗುತ್ತದೆ ಎನ್ನುವುದು ಹಿರಿಯರ, ಪ್ರಾಜ್ಞರ ಅಂಬೋಣವಾಗಿದೆ.
ಆಚಾರ ವಿಚಾರ   
ಬೇಡರ ವೇಷವನ್ನು ಹಾಕಿ ಕುಣಿಯುವವನು ಕೈಗೊಳ್ಳಬೇಕಾದ ಕೆಲವು ವಿಶಿಷ್ಟ ಆಚಾರ ವಿಚಾರಗಳೂ ಇವೆ. ಮೂರು ದಿನಗಳ ಕಾಲ ನಡೆಯುವ ಬೇಡರ ವೇಷದ ಕುಣಿತವನ್ನು ಮೊದಲೇ ನಿರ್ಧರಿಸಿಕೊಳ್ಳಲಾಗುತ್ತದೆ. ಯಾವ ದಿನ ಯಾವ ಭಾಗದ ವ್ಯಕ್ತಿ ವೇಷ ಹಾಕಬೇಕೆಂದು ಮೊದಲೇ ತಿಳಿದುಕೊಂಡು ಅವರದೇ ಆದ ಕೆಲವು ಆಚಾರ ವಿಚಾರ, ಸಂಪ್ರದಾಯಗಳನ್ನು ಕೈಗೊಳ್ಳುತ್ತಾರೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ಬಣ್ಣ ತೊಡುವ ಮೊದಲು ದೇವರಿಗೆ ಕಾಯಿ ಇಟ್ಟು ಪೂಜೆ ಮಾಡುತ್ತಾನೆ. ಆ ದಿನ ಆತನಿಗೆ ಮಾಂಸಾಹಾರ ನಿಷಿದ್ದ. ಕೇವಲ ಹಾಲು ಹಾಗೂ ದೇವರ ನೈವೇದ್ಯದ ಹಣ್ಣುಗಳನ್ನು ಮಾತ್ರ ತಿನ್ನುತ್ತಾನೆ.
          ಬೇಡರ ವೇಷ ತೊಡುವವನಿಗೆ ಇನ್ನೊಬ್ಬ ವ್ಯಕ್ತಿ ಬಣ್ಣ ಹಚ್ಚುತ್ತಾನೆ. ಬಣ್ಣ ಹಚ್ಚುವ ವ್ಯಕ್ತಿ ಮೊದಲೇ ವೀಳ್ಯದೆಲೆ, ದಕ್ಷಿಣೆ, ಕಾಣಿಕೆಗಳನ್ನು ನೀಡಿ ಬಣ್ಣ ಹಚ್ಚಲು ಪ್ರಾರಂಭಿಸುತ್ತಾನೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ದೇವರಿಗೆ ಸಮಾನ ಎನ್ನುವ ನಂಬಿಕೆಯಿರುವ ಕಾರಣ ಆತನನ್ನು ವಿಶೇಷ ಗೌರವದಿಂದ ಕಾಣಲಾಗುತ್ತದೆ. ಬೇಡನ ವೇಷ ತೊಟ್ಟವನು ಬಣ್ಣ ಹಚ್ಚಿದ ನಂತರ ಕನ್ನಡಿಯಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಳ್ಳಬಾರದು ಎನ್ನುವ ಸಂಪ್ರದಾಯವೂ ಚಾಲ್ತಿಯಲ್ಲಿದೆ.
    ನಂತರ ಆತನನ್ನು ನಾಲ್ಕಾರು ಜನರು ತಮಟೆ ಬಡಿಯುವ ಮೂಲಕ ನಗರ ಸಂಚಾರಕ್ಕೆ ಕರೆದೊಯ್ಯುತ್ತಾರೆ. ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ದೇವರಿಗೆ ಸೇರಿದ ಸ್ಥಳಗಳಿವೆ. ಅಂದರೆ ಮಾರಿಕಾಂಬೆಗೆ ಸೇರಿದ ಪ್ರದೇಶ, ದೇವಿಕೆರೆಯಲ್ಲಿ ಭೂತಪ್ಪನ ಕಟ್ಟೆ, ಶಿವಾಜಿ ಚೌಕದಲ್ಲಿ ವೀರಾಂಜನೇಯನಿಗೆ ಸೇರಿದ ಕಟ್ಟೆ ಪ್ರದೇಶ ಹೀಗೆ. ಆ ದೇವರಿಗೆ ಸೇರುವ ಜಾಗದ ಗಡಿಯನ್ನು ಬೇಡರ ವೇಷಧಾರಿ ಕಾಲಿಟ್ಟ ತಕ್ಷಣ ಆತನಿಗೆ ಆ ದೇವರು ರಕ್ಷಣೆ ನೀಡಿ, ದುಷ್ಟ ಶಕ್ತಿಗಳ ಕಾಟವನ್ನು ತಡೆಗಟ್ಟುವಂತೆ ಸುಳಿಕಾಯಿ ಒಡೆಯಲಾಗುತ್ತದೆ. ಇದು ಬೇಡ ವೇಷಧಾರಿಗೆ ಶ್ರೇಯಸ್ಸನ್ನು ತಂದುಕೊಡುತ್ತದೆ ಎನ್ನುವ ನಂಬಿಕೆಯಿದೆ.
    ಬದಲಾದ ಕಾಲಘಟ್ಟದಲ್ಲಿ ಈ ಸಂಪ್ರದಾಯಗಳಲ್ಲಿ ಹಲವು ಬಿಟ್ಟುಹೋಗಿದೆ. ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಪ್ರದಾಯಗಳನ್ನು ಬದಲಾಯಿಸಿಕೊಂಡಿದ್ದಾರೆ. ಕಷ್ಟದ ಕೆಲವು ಸಂಪ್ರದಾಯಗಳು ಮರೆಯಾಗಿದೆ. ಸುಲಭದ ಸಂಪ್ರದಾಯಗಳು ಹಾಗೆಯೇ ಉಳಿದಿವೆ. ಬೇಡರ ವೇಷವನ್ನು ಹಾಕುವ ವ್ಯಕ್ತಿಗೆ ಅಪಾರವಾದ ದೈಹಿಕ ಸಾಮಥ್ರ್ಯದ ಅಗತ್ಯವಿರುತ್ತದೆ. ಮೈಲಿಗಟ್ಟಲೆ ನಡೆಯಬೇಕು, ಕುಣಿಯಬೇಕು. ರಂಜಿಸಬೇಕು. ಇದಕ್ಕಾಗಿ ಸಾಕಷ್ಟು ಶ್ರಮವಹಿಸಬೇಕು ಎಂದು ಬೇಡರ ವೇಷದ ಖ್ಯಾತಿಯ ಸಂತೋಷ ಕುಮಾರ್ ಅಭಿಪ್ರಾಯಪಡುತ್ತಾರೆ.
ವೇಷ-ಭೂಷಣ
    ನವಿಲುಗರಿಯ ಕಿರೀಟ, ಕೈಯಲ್ಲೊಂದು ಕತ್ತಿ, ಗುರಾಣಿ, ಕತ್ತಿಯ ತುದಿಯಲ್ಲಿ ನಿಂಬೆಯಹಣ್ಣು, ಕುತ್ತಿಗೆಗೆ ನೋಟಿನ ಹಾರ, ಕೆಂಪು ಬಣ್ಣದ ಧಿರಿಸು, ಕಡಿ ಕಾರುವ ಕಣ್ಣು, ಕೋಡು ಈ ಮುಂತಾದ ವಿಚಿತ್ರ ರೌದ್ರ ಧಿರಿಸನ್ನು ಧರಿಸುವ ಬೇಡರ ವೇಷಧಾರಿ ಕುಣಿಯುತ್ತ ಸಾಗಿದರೆ ಆತನನ್ನು ಹಗ್ಗದ ಮೂಲಕ ಎರಡೂ ದಿಕ್ಕಿನಲ್ಲಿ ಇಬ್ಬರು ಹಿಡಿದು ನಿಯಂತ್ರಿಸುತ್ತಾರೆ. ತಮಟೆ, ವಾದ್ಯಗಳನ್ನು ಬಾರಿಸುತ್ತ ಸಾಗುತ್ತಿದ್ದರೆ ಬೇಡರ ವೇಷಧಾರಿ ಹೂಂಕರಿಸುತ್ತಾ, ಕುಣಿಯುತ್ತಾ ಸಾಗುವ ದೃಷ್ಯವೇ ಸುಂದರವಾದುದು. ಈ ಬೇಡರವೇಷವನ್ನು ನೋಡುವ ಸಲುವಾಗಿಯೇ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಶಿರಸಿಗೆ ಆಗಮಿಸುತ್ತಾರೆ.
    ಶನಿವಾರ, ಭಾನುವಾರ ಹಾಗೂ ಸೋಮವಾರ ರಾತ್ರಿ ನಡೆಯುವ ಈ ಬೇಡರ ವೇಷವನ್ನು ನೋಡುವ ಸೊಬಗೇ ಬೇರೆ. ಬೇಡರ ವೇಷವೆಂಬ ನಮ್ಮೊಳಗಿನ ವಿಶೇಷ ಸಂಪ್ರದಾಯ, ಕಲೆ, ಜಾನಪದ ಪ್ರಾಕಾರಕ್ಕೆ ಸಾರ್ವಜನಿಕರೂ ಸಹಕರಿಸಿ, ಬೇಡರ ವೇಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ನೃತ್ಯಕ್ಕೆ, ತಲೆದೂಗಿ ಶ್ರಮಕ್ಕೆ ವಿಸ್ಮಯ ಪಡಬೇಕಿದೆ.
ಹಾಗಾದ್ರೆ ಯಾಕೆ ತಡ ಮಾಡ್ತಾ ಇದ್ದೀರಿ... ಈಗ್ಲೇ ಬನ್ನಿ.... ಮುಗಿದು ಹೋಗುವ ಮುನ್ನ ಕಣ್ಮನವನ್ನು ತಣಿಸಿಕೊಳ್ಳಿ....
ಹೋ....... ಹಾ........ಹೀ.....

Tuesday, March 19, 2013

ಕೊನೆ ಗೌಡರೆಡೆಗಿನ ಹೊಣೆ

ಕೊನೆ ಗೌಡರೆಡೆಗಿನ ಹೊಣೆ


ತೀರಾ ಇತ್ತೀಚೆಗೆ ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ ಒಬ್ಬ ಕೊನೆ ಗೌಡ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಸತ್ತೇ ಹೋದ. ಶಿರಸಿ ಸೀಮೆಯಲ್ಲಿ ಇನ್ನೊಬ್ಬ ಮರದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಒಂದೆರಡು ವರ್ಷಗಳ ಹಿಂದೆ ನಮ್ಮೂರ ಬಳಿಯ ಗವಿನಗುಡ್ಡದಲ್ಲಿ ಒಬ್ಬ ಕೊನೆಗೌಡ ಮರದಿಂದ ಬಿದ್ದಿದ್ದ., ಬಿದ್ದವನು ಒಕ್ಕುಡುತೆ ನೀರಿಗೆ ಬಾಯ್ದೆರೆಯಲಿಲ್ಲ. ನಂತರವೇ ಇರಬಹುದು ನಮ್ಮೂರ ಭಾಗದಲ್ಲಿ ಕೊನೆಗೌಡರ ಕಡೆಗಷ್ಟು ಹೊಣೆಗಾರಿಕೆಯನ್ನು ತೋರಿಸಿ ಅದನ್ನು ನೆನಪು ಮಾಡಿಕೊಂಡಿದ್ದು.
 ಕೊನೆಗೌಡ ಎಂದ ಮೇಲೆ ಆತನ ಸ್ಪಷ್ಟ ಚಿತ್ರಣ ನೀಡಬೇಕಲ್ಲ..!! ಇಲ್ಲಿದೆ ಕೇಳಿ., ಕೊನೆಗೌಡನೆಂದಕೂಡಲೇ ನಮಗೆ ನೆನಪಿಗೆ ಬರುವಂತದ್ದು, ಉದ್ದನೆಯ ದೋಟಿ ಅಡಿಕೆ ಮರವನ್ನು ಎಳೆದು ಬಾಗಿಸಿ ತರಲು ಉಪಯೋಗಿಸುವಂತದ್ದು, ಕೊಯ್ದ ಕೊನೆ ಉದುರದಂತೆ, ಚದುರದಂತೆ ಭೂಮಿಗಿಳಿಸಲು ಹನುಮನ ಬಾಲದಂತಹ ಉದ್ದನೆಯ ಹಗ್ಗ, ಕೈಯಲ್ಲಿ ಮೋಟುಗತ್ತಿ, ಕಾಲಲ್ಲಿ ತಳೆ, ಮರದ ಮೇಲೆಯೇ ಕುಳಿತು ಕೆಲಸ ಮಾಡಲು ಕಡಕುಮಣೆ ಹಾಗೂ ಮೀಟರುಗಟ್ಟೆ ದೂರಕ್ಕೆ ಬರುವ ಆತನ ಮೈಯ ಎಣ್ಣೆಯ ವಾಸನೆ.
 ಇವೆಲ್ಲವುಗಳ ಜೊತೆಗೆ ನಮಗೆ ನೆನಪಾಗುವುದು ಮರವೇರುವ ಆತನ ಕೌಶಲ್ಯ. ಜೊತೆ ಜೊತೆಯಲ್ಲಿಯೇ ಮರದಿಂದ ಮರಕ್ಕೆ ದಾಟುವ ಆತನ ಚಾಕಚಕ್ಯತೆ. ಒಂದೆ ಒಂದು ಅಡಿಕೆಯೂ ಉದುರದಂತೆ ಕೊನೆಯನ್ನು ಕೊಯ್ದು ಭೂಮಿಯ ಮೇಲೆ ಹಗ್ಗ ಹಿಡಿದು ನಿಲ್ಲುವ ವ್ಯಕ್ತಿಗೆ ತಲುಪುವಂತೆ ರೊಂಯ್ಯನೆ ಬಿಡುವ ಕೊನೆಗೌಡನ ಕೆಲಸ ಸುಲಭದ್ದಲ್ಲ ಬಿಡಿ. ಹಾಳಾದವ್ನು.., ಇವತ್ತು ಬರ್ಲೇ ಇಲ್ಲ ಮಾರಾಯಾ ಎಂದು ಕೊನೆಗೌಡನನ್ನು ಬಯ್ಯುವುದು ಸುಲಭ.. ಆದರೆ ಆತನ ಕೆಲಸದ ಕುರಿತು ಬಲ್ಲವರೇ ಹೇಳಬೇಕು.
 ಕೊನೆಗೌಡನ ಕುರಿತು ಬರಹದ ಮೂಲಕ ಹೇಳುವುದು ಬಹಳ ಸುಲಭ. ಆದರೆ ಕೊನೆಗೌಡರ ವೃತ್ತಿ ಬಹಳ ಕಠಿಣವಾದುದು. ಮರವೇರಿದ ಕೊನೆಗೌಡನನ್ನು ಕೆಳಗಿನಿಂದ ಯಾರಾದರೂ ನೋಡಿದರೆ ಕೆಳಗಿನವರಿಗೆ ತಲೆ ತಿರುಗುತ್ತದೆ. ಅಂತದ್ದರಲ್ಲಿ ಮಂಗನಿಗಿಂತ ಸಲೀಸಾಗಿ, ಮಿಗಿಲಾಗಿ ಚಕಚಕನೆ ಕುಪ್ಪಳಿಸಿ ಮರವನ್ನೇರುವ, ಅಷ್ಟೇ ಸಲೀಸಾಗಿ ಮರದಿಂದ ಮರಕ್ಕೆ ದಾಟುವ ಕೊನೆಗೌಡರಿಗೆ ಭಯವಾಗುವುದಿಲ್ಲವಾ..? ಗೊತ್ತಿಲ್ಲ. ಜೀವ ಕೈಯಲ್ಲಿ ಹಿಡಿದಾದರೂ ಮರವೇರಿ ಆತ ಅಡಿಕೆ ಕೊಯ್ಯುತ್ತಾನಲ್ಲಾ, ಅಂಥವರೇ ಗ್ರೇಟ್ ಆಗುತ್ತಾರೆ. ಆದರೆ ನಮಗದು ತಿಳಿಯುವುದೇ ಇಲ್ಲ.
 ನಾವು ಕೊಡುವ ನಾನೂರು ರೂಪಾಯಿ ಕಡಿಮೆಯಾಯ್ತು ವಡಿಯಾ ಎಂದು ಕೊನೆಗೌಡ ಕ್ಯಾತೆ ತೆಗೆದ ಸಂದರ್ಭದಲ್ಲಿ ಹಚ್ಚಾಹುಚ್ಚಿ ಬಯ್ಯುವ ನಮಗೆ ಆತನ ಕೆಲಸದ ವೈಖರಿಯೇಕೆ ತಿಳಿದುಬರುವುದಿಲ್ಲ..? ಕೆಲಸಕ್ಕೆ ಬಂದ ವಪ್ಪತ್ತಿನಲ್ಲೆ ಕನಿಷ್ಟವೆಂದರೂ ಮೂರ್ನಾಲ್ಕು ಕ್ವಿಂಟಾಲು ಅಡಿಕೆ ಕೊಯ್ಯುವ ಸಾಮಥ್ರ್ಯವಿರುವ ಕೊನೆಗೌಡರಿಗೆ ನಾನೂರು ರೂಪಾಯಿ ಕಡಿಮೆಯ ಬಾಬ್ತೇ ಸರಿ. ಅವನ ಕೆಲಸದ ವೈಖರಿಗೆ ಅಷ್ಟಾದರೂ ಬೇಡವೇ..? ಅಡಿಕೆಗೆ ಕೊಳೆಮದ್ದು ಹೊಡೆಸಿ, ಕೊನೆಕೊಯ್ಲಿನ ಸಂದರ್ಭದಲ್ಲಿ ಹಸಿಯಡಿಕೆ-ಗೋಟಿನ ಕೊನೆ (ತೆರಿಯಡಿಕೆ ಪ್ರೀ..), ಕೊಯ್ಯುವ ವ್ಯಕ್ತಿಗೆ ಮಾಡಿದ ಶ್ರಮಕ್ಕೆ ತಕ್ಕ ಬೆಲೆ ಬಂದರೆ ಆತ ಹಷರ್ಿಸುತ್ತಾನೆ.
 `ಹ್ವಾಯ್.. ಹೆಗುಡ್ರೂ... ನಾನ್ ಬಂದೇನಿ.. ಜಲ್ದಿ ಆಸ್ರಿಗೆ ರೆಡಿ ಮಾಡಿ.. ಮರಾ ಹತ್ತಾಕ್ ಹೋಗ್ಬೇಕು.. ಇವತ್ತೆಷ್ಟೇ ಹೊತ್ತಾದ್ರೂ.. ದೊಡ್ಡಪಾಲು, ಹೊಳೆಯಂಚಿನ ಪಾಲು ಕೊನೆಕೊಯ್ದೇ ಮರ ಇಳಿಯೂದ್ ಸಯ್ಯಿ... ಕೊನೆ ಕೊಯ್ಯಾಕ್ ನೀವ್ ಗಟ್ಟಿಯಾಗಿರ್ರಿ... ಮಧ್ಯ ಕೈಕೊಟ್ಬುಡ್ಬೇಡಿ... ' ಎಂದು ತಮಾಷೆಯಾಗಿ ಹೇಳುತ್ತಾ... ತನಗೆ ತಾನೇ ಗುರಿಯನ್ನೂ ನಿರ್ಧರಿಸಿಕೊಂಡು ಕೆಲಸ ಪ್ರಾರಂಭಿಸುವ ಕೊನೆಗೌಡನ ಕಾರ್ಯಕ್ಕೆ ತಲೆದೂಗಲೇಬೇಕು.. ಬಿಡಿ ಇದು ಆಗಿನ ಮಾತು. ಈಗಿನ ಕೊನೆಗೌಡರುಗಳು ಆದಷ್ಟು ಕಳ್ಳಬೀಳಲು ಯತ್ನಿಸುತ್ತಾರೆ. ಸಾಕಷ್ಟು ಕಿರಿಕಿರಿಯನ್ನೂ ಮಾಡುತ್ತಾರೆ. ಆದ್ರೂ ಅವರ ಕೆಲಸಕ್ಕೆ ನಮ್ಮದೊಂದು ಹ್ಯಾಟ್ಸಾಫ್ ಹೇಳಲೇ ಬೇಕು. ಅಲ್ವೇ.

Tuesday, March 12, 2013

ಮುಖಗಳು

ಮುಖಗಳು




ಭಾವಗಳು ಉಕ್ಕಿದಂತೆಲ್ಲ
ಪ್ರವಾಹಗಳು ಏರುತ್ತವೆ..!!

**

ಪ್ರೀತಿಗೆ ಬೇಕಿದ್ದುದು
ದೇಹಗಳಲ್ಲ, ಕಾಮವಲ್ಲ.
ಮೋಹವಲ್ಲ, ಆಸೆಯಲ್ಲ
ದೋಷವಲ್ಲ, ದ್ವೇಷವಲ್ಲ
ಬರೀ ನಂಬಿಕೆ ಮಾತ್ರ !!!

**

ಅವಳು ಬಯಸಿದಾಗೆಲ್ಲಾ
ನಾ ಸಿಗಲಿಲ್ಲ....
ನಾ ಬಯಸುತ್ತಿರುವಾಗೆಲ್ಲಾ
ಅವಳು ಸಿಗೋಲ್ಲಾ..!!!

**

ನಿರಾಸೆಯಿದ್ದಾಗ
ಬೀಳುವ ಕನಸೂ
ಕೆಟ್ಟದ್ದಾಗಿರುತ್ತದೆ..!!!

**

ಸಾಯಲಿಕ್ಕೆ ಭೂಕಂಪ,
ನೆರೆ, ಬರ, ಸಾಲವೇ
ಬೇಕೆಂದಿಲ್ಲ..
ಒಂದು ಮರಣಪತ್ರ
ಅಷ್ಟೇ ಸಾಕು.. !!!

**

ಬದುಕಿನಲ್ಲಿ ಸಮಸ್ಯೆಗಳು
ತುಂಡಾಗುವುದೇ ಇಲ್ಲ..
ಒಂದು ಮುಗಿಯುವುದರೊಳಗೆ
ಇನ್ನೊಂದು ಹುಟ್ಟಿರುತ್ತದೆ..!!!

**

ಬರೆದ ಅಕ್ಷರ ಎಷ್ಟೇ
ಸುಂದರವಾಗಿದ್ದರೂ ಕೂಡ
ಒಂದು ಹನಿ ನೀರು ಬಿದ್ದರೆ ಸಾಕು
ಹಿಂಜಿ ಬಿಡುತ್ತದೆ..!!!

**

ವ್ಯಕ್ತಿ ಮರಕಾಲು
ಕಟ್ಟಿಕೊಂಡರೂ
ವ್ಯಕ್ತಿತ್ವ ಎತ್ತರ
ವಾಗುವುದಿಲ್ಲ..!!!

**

ಹೇಗೆ ಇರಲಿ,
ನನ್ನ ಪ್ರೀತಿಯ ಹುಡುಗಿ
ದೇವತೆಯೇ....

**

ಶತಮಾನಗಳ ವೈರಿ
ಸುಮ್ಮನೊಂದು ನಗುವಿಗೆ
ಮಿತ್ರನಾಗಿಬಿಟ್ಟ ..!!

**

ಆಕಳಿಕೆ,
ನಿದ್ದೆಯ ಮೊದಲ
ಮೆಟ್ಟಿಲು..!!

**

ಎಂಥ ಸರ್ವಾಧಿಕಾರಿಯೇ
ಆಗಿರಲಿ... ಆತ
ಮಲಗಿ ನಿದ್ರಿಸುತ್ತಿದ್ದಾಗ
ಮಗುವೇ...!!

(ಬದುಕಿನ ಎಂತದ್ದೋ ದಿನಗಳಲ್ಲಿ... ಏನೋ ಅನುಭವಗಳಾದಾಗ.. ಹಾಗೆ ಸುಮ್ಮನೇ ಗೀಚಿದ್ದು.. ಕೆಲವು ಸತ್ಯ.. ಮತ್ತೆ ಕೆಲವು ಫನ್ನಿ...ಸುಮ್ಮನೇ ಓದಲು... ನಾಲ್ಕಷ್ಟು ಸಾಲುಗಳು... ಖಯಾಲಿಯ, ಲಹರಿಯ ಸಮಯದಲ್ಲಿ ಬರೆಯಲಾಗಿದ್ದಷ್ಟೇ... ಓದಿ ಅನಿಸಿಕೆಗಳನ್ನು ಗೀಚಿ..)

Sunday, February 10, 2013

ತುರಗ ಕರ್ನಾಟಕ


ಬೆಂದ ಕಾಳನ್ನು ಹುಡುಕುತ್ತ
ಕಾಣದೂರಿಗೆ ಹೊರಟಿದೆ
ನಮ್ಮ ತುರಗ..!

ಆಚೆ ಈಚೆ ನೋಡದಂತೆ ತುರಗಕ್ಕೆ
ಕಣ್ಣು ಪಟ್ಟಿ ಕಟ್ಟಿದ್ದಾರೆ..
ತುರಗದ ಬಾಲ ಥೇಟು
ಅವಳ ಜಡೆಯಂತೇ ಕುಣಿಯುತ್ತಿದೆ..
ಅಂತಿಂತದ್ದಲ್ಲ ಈ
ತುರಗಕ್ಕೆ ಕೊಂಬೂ ಇದೆ. !!

ಅಜ್ಜ ಅಜ್ಜಿ ಅಪ್ಪ ಅಮ್ಮ
ಯಾರಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ
ಸಾಕಿ ಬೆಳೆಸಿದವನ ಕೂಗಿಗೆ ಬೆಲೆಯಿಲ್ಲ
ತುರಗಕ್ಕೆ ಹಸಿರು ಹುಲ್ಲು ಬೇಡ
ದಾಣಿ ಬೂಸಾವನ್ನು ಹುಡುಕುತ್ತಿದೆ..!!


ತುರಗಕ್ಕೆ ತುರಗವೇ ಜೊತೆಗಾರ
ಬೆನ್ನ ಮೇಲೆ ಜೀನಿಲ್ಲ..!
ಮಲೆನಾಡಿನ ಕಸುವೆಲ್ಲ
ತಿಂದು ಕೊಬ್ಬಿದರೂ
ನಾಗಾಲೂಟದಲ್ಲಿರುವ ತುರಗಕ್ಕೆ
ಇದೆಲ್ಲ ಕಾಲು ಕಸ..!!

ನುಗ್ಗುವ ಕುದುರೆಗೆ ಅದ್ಯಾರೋ
ಲಗಾಮು ಹಾಕಿ ಗಾಣಕ್ಕೆ ಕಟ್ಟಿದರೂ
ಆಸೆಗೆ ಅಂಕೆಯಿಲ್ಲ..!
ಉಸಿರುಕಟ್ಟಿ ಓಡಿದ ಬೆಟ್ಟದ ತುದಿ
ಬಯಲಾದರೂ ಓಟ ನಿಂತಿಲ್ಲ..!!


ಇಷ್ಟರ ನಡುವೆ ಮನೆಯೊಳಗಣ
ಅಪ್ಪ ಅಮ್ಮ ಅಜ್ಜ ಅಜ್ಜಿಯ ಕಣ್ಣೀರು
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ..!!

ವಸಂತಗಳಾಚೆ
ಮರದ ಹಣ್ಣೆಲೆಗಳು ಉದುರಿದವು
ಇತಿಹಾಸ ಮರುಕಳಿಸಿತು..
ತುರಗ ಹಣ್ಣಾಯಿತು.!!

ಕೊನೆಗೂ ಕಾಲಚಕ್ರದಲ್ಲಿ
ತುರಗ ಅಜ್ಜ ಅಜ್ಜಿ..
ಅನಿವಾರ್ಯ ಅಸಹಾಯಕ ಪಾತ್ರಧಾರಿ..!!

ಕವಿತೆಯನ್ನು ಬರೆಯದೇ ಬಹಳ ದಿವಸಗಳೇ ಕಳೆದಿದ್ದವು ನೋಡಿ...ವರುಷಗಳೆ ಸಂದಿದ್ದವೇನೋ.. ಮೊನ್ನೆ ತಾನೆ ಶಿರಸಿಯಲ್ಲಿ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕವಿ ಸಮಯದಲ್ಲಿ ನನ್ನ ಹೆಸರನ್ನೂ ಹಾಕಿ ಕವಿತೆ ವಾಚನ ಮಾಡಬೇಕೆಂದರು.. ಅದಕ್ಕೆ ಬರೆದು ವಾಚಿಸಿದ ಕವಿತೆ ಇದೆ..

Thursday, January 31, 2013

ಅಬ್ಬ...ಆಲೆಮನೆ ಹಬ್ಬ..!!

ಅಬ್ಬ...ಆಲೆಮನೆ ಹಬ್ಬ..!! 

 ಒಂದು ಕಾಲವಿತ್ತು. ಆಲೆಮನೆ ಅಂದರೆ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತಹ ಕಾಲ ಅದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಲೆಮನೆ ಎಂಬುದು ತೀರಾ ಅಪರೂಪ ಎನ್ನುವಂತಾಗಿದೆ. ಆಲೆಮನೆ ಎಲ್ಲಿ ನಡೆಯುತ್ತಿದೆ ಎಂದು ಹುಡುಕಬೇಕಾದಂತಹ ಸ್ಥಿತಿ ಇಂದಿನದು.
    ಮಲೆನಾಡಿನಲ್ಲಿ ಕಬ್ಬುಬೆಳೆಸುವುದು ಸಾಹಸದ ಕೆಲಸ. ಅರಣ್ಯಗಳು ನಾಶವಾಗಿದ್ದರಿಂದ ಕಾಡುಪ್ರಾಣಿಗಳು ರೈತನ ಹೊಲಗದ್ದೆಗಳಿಗೆ ಮುಗಿ ಬೀಳುತ್ತಿವೆ. ಅದೇ ರೀತಿ ಕಬ್ಬಿನ ಗದ್ದೆಗಳಿಗೂ ಮಂಗ, ಕಾಡುಹಂದಿ, ಇಣಚಿ ಮುಂತಾದವುಗಳ ಕಾಟ. ಇವೆಲ್ಲವನ್ನೂ ಮೀರಿ ಕಬ್ಬು ಬೆಳೆದು ಆಲೆಮನೆ ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಮತ್ತೊಂದೆಡೆ ಕಬ್ಬಿನ ಹಾಲನ್ನು ಬೇಯಿಸಿ ಬೆಲ್ಲ ತಯಾರಿಸಲು ಉರುವಲು ಸಮಸ್ಯೆ. ಉರುವಲು ತರಬೇಕೆಂದರೆ ಅರಣ್ಯ ಇಲಾಖೆಯವರ ಕಾಟ. ಹಾಗಾಗಿ ರೈತಾಪಿ ವರ್ಗ ಆಲೆಮನೆ ಸಹವಾಸದಿಂದಲೇ ದೂರ ಸರಿದಿದೆ. ಬೆಲ್ಲವನ್ನು ಕೊಂಡು ತರುವುದೇ ಸಲೀಸು ಎನ್ನುವ ಧೋರಣೆಯಿಂದಾಗಿ ಆಲೆಮನೆಗಳು ಮಾಯವಾಗುತ್ತಲಿವೆ. ಇನ್ನೊಂದೆಡೆ ಬೆಲ್ಲದ ದರ ವರ್ಷದಿಂದ ವರ್ಷಕ್ಕೆ ಏರುಮುಖದತ್ತ ಸಾಗಿದೆ.
    ಆಲೆಮನೆ ಈ ಪದವೇ ಸಾಕು ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ಕಬ್ಬು ಕಡಿದು ಅದನ್ನು ಗಾಣಕ್ಕೆ ಕೊಟ್ಟು ಹಾಲನ್ನು ಕುಡಿದು ಬೆಲ್ಲವನ್ನು ತಿಂದರೆ ಹಬ್ಬದ ಮೆರುಗು, ಮೆಲುಕು ಅನಿರ್ವಚನೀಯ. ಈಗ ಆಲೆಮನೆಯನ್ನು ಹಬ್ಬವನ್ನಾಗಿ ಮಾಡುವ ಮೂಲಕ ಅಚನಳ್ಳಿಯಲ್ಲಿ ಅದಕ್ಕೊಂದು ವಾಣಿಜ್ಯಾತ್ಮಕ ರೂಪವನ್ನು ನೀಡುತ್ತಿರುವುದು ವಿಶೇಷ.
    ಆಲೆಮನೆಯೆಂದಕೂಡಲೇ ಕಬ್ಬು, ಕಣೆ, ಬೃಹತ್ ಕೋಣಗಳು, ಅವನ್ನು ಓಡಿಸುವವನು, ವಾರಗಟ್ಟಲೆ ಕಬ್ಬು ಕಡಿಯುವ ಸಂಭ್ರಮ, ಕಬ್ಬಿನ ಹಾಲು ಸಂಗ್ರಹಣೆ, ಬಂದ ಅತಿಥಿಗಳಿಗೆಲ್ಲ ಅದನ್ನು ನೀಡುವುದು, ಬೆಲ್ಲ ತಯಾರಿಸುವುದು ಇತ್ಯಾದಿಗಳು ನೆನಪಾಗುತ್ತವೆ. ಬದಲಾದ ಸಂಗತಿಯಲ್ಲಿ ಈ ಆಲೆಮನೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದಿದೆ. ಕೂಲಿ ಕಾಮರ್ಿಕರ ಸಮಸ್ಯೆಯ ಕಾರಣ ವಾರಗಟ್ಟಲೆ ನಡೆಯುತ್ತಿದ್ದ ಆಲೆಮನೆಗಳು ಈಗ ಒಂದೆರಡು ದಿನಕ್ಕೆ ಇಳಿದುಬಿಟ್ಟಿವೆ. ಎಕರೆಗಟ್ಟಲೆ ಕಬ್ಬುಬೆಳೆಯುತ್ತಿದ್ದವರೀಗ ಒಂದೆರಡು ಗದ್ದೆಗಳಿಗೆ ಸೀಮಿತವಾಗಿದ್ದಾರೆ. ಹಳೆಯಕಾಲದ ಕೋಣನ ಕಣೆಯ ಜಾಗದಲ್ಲಿ ಆಧುನಿಕ ಯಂತ್ರದ ಮೂಲಕ ಓಡುವ ಕಣೆ ಬಂದಿದೆ. ಅದರ ಜೊತೆಗೆ ಬೆಲ್ಲ ತಯಾರಿಸುವ ಕೊಪ್ಪರಿಗೆಗೂ ಚಕ್ರಗಳು, ನಲ್ಲಿಗಳನ್ನು ಕೂಡ್ರಿಸುವ ಮೂಲಕ ಆಲೆಯಮನೆಗೆ ಮತ್ತಷ್ಟು ಆಧುನಿಕ ಮೆರಗನ್ನು ನೀಡಲಾಗಿದೆ.
            ಹಿಂದೆಲ್ಲ ಆಲೆಮನೆ ಬಂತೆಂದರೆ ಸುತ್ತಮುತ್ತಲ ಊರುಗಳಲ್ಲಿ ಸಂಭ್ರಮ ಸಡಗರ. ಯಾವುದೇ ಕಡೆಗಳಲ್ಲಿ ಆಲೆಮನೆ ಇದೆಯೆಂಬ ಸುದ್ದಿ ಕಿವಿಗೆ ಬಿದ್ದರೆ ಸಾಕು ತಂಡೋಪತಂಡವಾಗಿ ಬಂದು ಜನರು ಹಾಲುಕುಡಿದು ಕಬ್ಬನ್ನು ಪಡೆದು ಹೋಗುತ್ತಿದ್ದರು. ಎಷ್ಟೇ ಜನ ಬಂದರೂ ಮನೆಯವರು ಬೇಸರಿಸದೇ, ಸಿಟ್ಟಾಗದೇ ಕೇಳಿದಷ್ಟು ಹಾಲುಕೊಟ್ಟು ಕಳಿಸುತ್ತಿದ್ದರು. ಕಬ್ಬಿನ ಹಾಲು ಹಾಗೂ ಕಬ್ಬನ್ನು ಬೇರೆಯವರಿಗೆ ಹೆಚ್ಚು ಹೆಚ್ಚು ಕೊಟ್ಟಷ್ಟೂ ಮುಂದಿನ ವರ್ಷ ನಮ್ಮ ಬೆಳೆ ಜಾಸ್ತಿಯಾಗುತ್ತದೆ ಎಂಬ ಮಾತುಗಳನ್ನು ಹಿರಿಯರು ಆಡುತ್ತಿದ್ದರು. ಆದರೆ ಆಧುನಿಕ ದಿನಮಾನದಲ್ಲಿ ಅವೆಲ್ಲವೂ ಕಳೆದುಹೋಗಿ ಆಲೆಮನೆಯೆಂದರೆ ಸ್ವಂತ ಬಳಕೆಗಷ್ಟೇ ಎಂಬಂತಹ ವಾತಾವರಣ ನಿರ್ಮಾಣವಾಗತೊಡಗಿತ್ತು.
    ತುಂಡು ಹಿಡುವಳಿ, ಕಡಿಮೆ ಪ್ರಮಾಣದಲ್ಲಿ ಕಬ್ಬು ಬೆಳೆಯುವುದು ಇತ್ಯಾದಿಗಳ ಜೊತೆಗೆ ಒಂದೆರಡು ದಿನಗಳಲ್ಲಿ ಮುಗಿದುಹೋಗುವ ಆಲೆಮನೆಗಳಲ್ಲಿ  ಮೊದಲಿದ್ದ ಬಾಂಧವ್ಯದ ವಾತಾವರಣ ಕಾಣಲು ಸಾಧ್ಯವೇ ಇಲ್ಲ. ಅದಕ್ಕೆ ತಕ್ಕಂತೆ ಬೆಲ್ಲದ ಬೆಲೆ ಗಗನವನ್ನು ಮುಟ್ಟಿದಾಗ ಬೆಳೆಗಾರರು ಕಬ್ಬಿನ ಬೆಳೆಯನ್ನು ವಾಣಿಜ್ಯಾತ್ಮಕ ದೃಷ್ಟಿಯಿಂದ ನೋಡುವುದು ಹೆಚ್ಚಾಯಿತು. ಅದು ಅನಿವಾರ್ಯವೂ ಆಯಿತು. ಅದಕ್ಕೆ ತಕ್ಕಂತೆ ಮಾರ್ಪಾಡುಗಳೂ ಬಂದವು.
    ಇಂತಹ ದಿನಗಳಲ್ಲಿ ಆಲೆಮನೆಯನ್ನು ಹಬ್ಬವಾಗಿ ಮಾಡುವ ಆಲೋಚನೆಗೆ ಮುಂದಾಗಿದ್ದು ಅಚ್ಚನಳ್ಳಿಯ ಮಂಜುನಾಥ ಹೆಗಡೆ ಹಾಗೂ ಮಿತ್ರರು. ತುಂಡು ತುಂಡು ಕಬ್ಬು ಬೆಳೆಗಾರರು ಒಂದೆಡೆಗೆ ಸೇರಿ ಒಂದೆರಡು ದಿನಗಳ ಬದಲಾಗಿ ಹಿಂದಿನ ದಿನಮಾನದಲ್ಲಿದ್ದಂತೆ ವಾರಗಟ್ಟಲೆ ಆಲೆಮನೆಯನ್ನು ಮಾಡಿ, ಆಲೆಮನೆಗೆ ಪ್ರವಾಸಿಗರನ್ನು ಕರೆತಂದು, ಮಾಹಿತಿ ನೀಡಿ ಕಬ್ಬು ಟೂರಿಸಂ ಮಾಡುವ ಆಲೋಚನೆಯನ್ನು ರೂಪಿಸಿ ಅದನ್ನು ಯಶಸ್ವಿಯಾಗುವಂತೆ ಮಾಡಿದವರು ಮಂಜುನಾಥ ಹೆಗಡೆ.
    ಮಂಜುನಾಥ ಹೆಗಡೆಯವರ ಕನಸಿನ ಆಲೆಮನೆ ಹಬ್ಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶಿರಸಿಯ ಕದಂಬ ಮಾರ್ಕೇಟಿಂಗ್ ಸೊಸೈಟಿ ಮತ್ತು ಅದರ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ. ಈ ಹಬ್ಬ ಜ.11ರಂದು ನಡೆದು ಜ.16ರಂದು ಮುಕ್ತಾಯಗೊಂಡಿತು. ಅಚನಳ್ಳಿ, ದೊಡ್ನಳ್ಳಿ ಹಾಗೂ ಸುತ್ತಮುತ್ತಲ ಊರುಗಳ ಕಬ್ಬು ಬೆಳೆಗಾರರು ಸೇರಿ ಮಾಡುತ್ತಿರುವ ಈ ಆಲೆಮನೆ ಹಬ್ಬಕ್ಕೆ ಶಿರಸಿಯ ಕದಂಬ ಸಂಸ್ಥೆ ಪ್ರವಾಸೋದ್ಯಮದ ಕಲ್ಪನೆ ನೀಡಿತು. ವಾಣಿಜ್ಯೀಕರಣವನ್ನಾಗಿ ಮಾರ್ಪಡಿಸಿತು. ಹಬ್ಬಕ್ಕೆ ಆಗಮಿಸುವವರು 100 ರು.ನ ಟಿಕೆಟ್ ಖರೀದಿ ಮಾಡುವುದು ಅಗತ್ಯ. ಹಣ ಕೊಟ್ಟು ಟಿಕೆಟ್ ಪಡೆದ ಪ್ರವಾಸಿಗರಿಗೆ ತಕ್ಕ ಆಥಿತ್ಯವನ್ನು ಮಾಡಲಾಗುತ್ತದೆ. ಜೊತೆಯಲ್ಲಿ ಕಬ್ಬು ಬೆಳೆಗಾರನಿಗೆ ಹೆಚ್ಚಿನ ವರಮಾನವನ್ನೂ ಕಲ್ಪಿಸುತ್ತದೆ.
    ಹಬ್ಬಕ್ಕೆ ಆಗಮಿಸಿದವರಿಗೆ ಕಬ್ಬಿನ ಹಾಲಿನ ಜೊತೆಗೆ ನೊರೆಬೆಲ್ಲ ನೀಡಲಾಗುತ್ತದೆ. ನೂರು ರು. ನೀಡಿ ಟಿಕೆಟ್ ತೆಗೆದುಕೊಂಡವರಿಗೆ ಒಂದು ತೊಡದೇವು ಪ್ಯಾಕೇಟ್, ಮಿರ್ಚಿ ಬಜೆ ಪ್ಯಾಕೆಟ್, ಖಾಂದಾ ಬಜೆ ಪ್ಯಾಕ್, ಗೋಬಿ ಮಂಚೂರಿ ಹಾಗೂ ವಿವಿಧ ಸ್ನಾಕ್ಸ್ಗಳ ಪ್ಯಾಕೇಟನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೇ ಆಲೆಮನೆಯ ಹಬ್ಬದಲ್ಲಿ ಸಾದಾ ಕಬ್ಬಿನ ಹಾಲಿನ ಜೊತೆಗೆ ಶುಂಟಿಯ ಕಬ್ಬಿನ ಹಾಲು, ಕಿತ್ತಳೆ ಹಣ್ಣು, ದಾಲ್ಚಿನ್ನಿ, ಲವಂಗ, ಲಿಂಬೆ ಹಾಗೂ ಮಜ್ಜಿಗೆ ಹುಲ್ಲಿನ ಕಬ್ಬಿನ ಹಾಲುಗಳೂ ಸವಿಯಲು ಸಿಗುತ್ತದೆ. ಸಾದಾ ಹಾಲಿಗಿಂತ ಹಾಗೂ ಅದರಷ್ಟೇ ವಿಶಿಷ್ಟ ರುಚಿಯ ಅನುಭವ ನೀಡುವ ಈ ರೀತಿಯ ಆರೋಗ್ಯಪೂರ್ಣ ಸುವಾಸನೆಯುಕ್ತ ಹಾಲುಗಳನ್ನು ಯಾರಾದರೂ ಕುಡಿದಲ್ಲಿ ಅವುಗಳಿಗೆ ಮಾರುಹೋಗುವುದು ಖಂಡಿತ.
    ಬೆಂಗಳೂರು, ಉತ್ತರ ಭಾರತ, ಬಿಹಾರ ಕಡೆಗಳಿಂದ ಬರುವ ಪ್ರವಾಸಿಗರಿಗಾಗಿ ಆಲೆಮನೆಯ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಅಲ್ಲದೇ ಆಗಮಿಸುವ ಪ್ರವಾಸಿಗರಿಗೆ ಆಲೆಮನೆ, ಕಬ್ಬಿನಿಂದ ಬೆಲ್ಲ ತಯಾರಿಸುವ ಬಗೆ, ಕಬ್ಬನ ಹಾಲಿನಿಂದ ತಯಾರಿಸಬಹುದಾದ ಉಪ ಉತ್ಪನ್ನಗಳು,  ಸೇರಿದಂತೆ ಕಬ್ಬನ್ನು ಬೆಳೆಯುವುದು ಹೇಗೆ ಈ ಮುಂತಾದ ಎಲ್ಲ ವಿವರಗಳಿಗೆ ಮಾಹಿತಿಯನ್ನೂ ನೀಡಲಾಯಿತು. ಅನುಭವ ಟೂರಿಸ್ಟ್ ಮುಂತಾದ ಸಂಸ್ಥೆಗಳವರು ಆಲೆಮನೆ ಹಬ್ಬಕ್ಕೆ ಪ್ರವಾಸಿಗರನ್ನು ಕರೆತಂದಿದ್ದರು ಎಂದು ಹಬ್ಬದ ರೂವಾರಿಗಳಲ್ಲೊಬ್ಬರಾದ ಮಂಜುನಾಥ ಹೆಗಡೆ ಮಾಹಿತಿ ನೀಡುತ್ತಾರೆ.

    ಕಳೆದ ವರ್ಷ ಆಲೆಮನೆ ನಡೆಸುತ್ತಿದ್ದ ವೇಳೆ ಈ ಆಲೆಮನೆಯನ್ನೂ ಹಬ್ಬವನ್ನಾಗಿ ಮಾಡಿ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡುವ ಆಲೋಚನೆ ಹೊಳೆಯಿತು. ಅಲ್ಲದೇ ಇದನ್ನೂ ಪ್ರವಾಸಿಗರನ್ನು ಕರೆತರುವ ತಾಣವನ್ನಾಗಿ ಮಾಡಬಹುದು. ಈ ಮೂಲಕ ಆಲೆಮನೆ ಲುಕ್ಸಾನು ಉಂಟು ಮಾಡದೇ, ಪ್ರವಾಸಿಗರನ್ನು ಕರೆತರುವ ಮೂಲಕ ಸಂಪೂರ್ಣ ಪ್ರವಾಸೋದ್ಯಮ ಹಾಗೂ ವಾಣಿಜ್ಯೀಕರಣಗೊಳಿಸುವ ಆಲೋಚನೆ ಬಂದಿತು. ಅದರ ಫಲವಾಗಿಯೇ ಈ ಹಬ್ಬವನ್ನು ನಡೆಸುತ್ತಿದ್ದೇವೆ ಎಂದು ಮಂಜುನಾಥ ಹೆಗಡೆ ವಿವರಿಸುತ್ತಾರೆ.
    ಒಟ್ಟಿನಲ್ಲಿ ಆಲೆಮನೆಯನ್ನು ವಿಶ್ವಕ್ಕೆ ಪರಿಚಯಿಸುವ, ಆಲೆಮನೆಯ ಮೂಲಕ ಪ್ರವಾಸಿಗರನ್ನು ಕರೆತರುವ ಹಾಗೂ ಅದರಲ್ಲಿ ವಿವಿಧತೆಗಳನ್ನು ಬಳಕೆ ಮಾಡಿಕೊಂಡು ವಾಣಿಜ್ಯಾತ್ಮಕವಾಗಿ ಹಬ್ಬವನ್ನಾಗಿ ಮಾಡಿದ ಅಚ್ಚನಳ್ಳಿಯ ಮಂಜುನಾಥ ಹೆಗಡೆಯವರ ಆಲೆಮನೆ ಹಬ್ಬ ಇತರ ಕಬ್ಬಿನ ಬೆಳೆಗಾರರಿಗೂ ಸ್ಫೂತರ್ಿಯಾಗುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಶುಗರ್ಕೇನ್ ಟೂರಿಸಂ ಆಗುವ ಎಲ್ಲ ಸಾಧ್ಯತೆಗಳನ್ನೂ ಆಲೆಮನೆ ಹಬ್ಬ ಹುಟ್ಟುಹಾಕಿದೆ. ಈ ಹಬ್ಬದ ಕುರಿತು ನಿಮ್ಮಲ್ಲೂ ಕುತೂಹಲ ಮೂಡಿದ್ದರೆ ಯಾಕೆ ತಡ.. ಇಂತಹ ಪರಿಕಲ್ಪನೆಯನ್ನು ನೀವೂ ಮಾಡಿ..ಆಲೆಮನೆಯ ಹಬ್ಬ ಆಚರಿಸಿ.. ಹೆಚ್ಚಿನ ಮಾಹಿತಿ ನೀಡಲು ಮಂಜುನಾಥ ಹೆಗಡೆ 9483613900, 9036418230 ಅಥವಾ ಎಂ. ಎಸ್. ಹೆಗಡೆ 9483998511 ಈ ದೂರವಾಣಿ ಸಂಖ್ಯೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

    ಆಲೆಮನೆ ಹಬ್ಬಕ್ಕೆ ಕದಂಬ ಮಾರ್ಕೇಟಿಂಗ್ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಸಹಾಯ, ಸಹಕಾರ, ಸಲಹೆಗಳನ್ನು ನೀಡುವ ಜೊತೆಗೆ ಈ ಆಲೆಮನೆಯಲ್ಲಿ ತಯಾರಾದ ಬೆಲ್ಲವನ್ನು ಸಂಸ್ಥೆ ಕೊಂಡು ಮಾರಾಟ ಮಾಡುತ್ತದೆ. ಕಬ್ಬು ಬೆಳೆಗಾರರಿಗೆ ಬೆಲ್ಲದ ದರ ವಿತರಿಸಲಾಗುತ್ತದೆ. ಆಲೆಮನೆಯನ್ನು ಹೊರ ಪ್ರದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ
ಶಂಭುಲಿಂಗ ಹೆಗಡೆ
ಕೆ.ಎಂ.ಎಫ್. ನಿರ್ದೇಶಕ

    ನಮ್ಮೂರಿನ ಆಲೆಮನೆಯನ್ನೂ ಉದ್ಯಮವನ್ನಾಗಿ ಮಾಡಿ, ಪ್ರವಾಸಿಗರನ್ನು ಆಕಷರ್ಿಸುವುದು ನಮ್ಮ ಉದ್ದೇಶ. ಕೇವಲ ಕಬ್ಬು ಬೆಳೆದು ಆಲೆಮನೆ ಮಾಡಿ ಮುಗಿಸುವುದರ ಬದಲಾಗಿ ಹೀಗೆ ವಿವಿಧತೆಯನ್ನು ಅನುಸರಿಸಿ ಆದಾಯ ಗಳಿಸಬಹುದು. ಕಬ್ಬು ಬೆಳೆಗಾರರಿಗೆ ಇದೊಂದು ಹೊಸ ಆಶಯ ಮೂಡಿಸಬಲ್ಲದು. ಜೊತೆಗೆ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡಬಹುದಾಗಿದೆ.
ಮಂಜುನಾಥ ಹೆಗಡೆ

Saturday, January 5, 2013

ಸೇಡು




ಸುತ್ತೆಲ್ಲ ಹೂವಿನ ಹಾರ
ಮಲ್ಲಿಗೆಯ ದಂಡೆ
ಮೊದಲ ನಿಶೆಯ ನಶೆಯ ದಿನ..|
ಮಿಲನದ ಜೋಡಿಯ ಸುಖದ
ಹುಚ್ಚು ಖೋಡಿಯ ದೇಹದ
ಅಡಿ ಬಿದ್ದು ಹೂ ಹಾರ
ನಲುಗಿತು, ಸೊರಗಿತು,
ಬಾಡಿ ಸೋತಿತು..||


ವ್ಯಕ್ತಿ ಸತ್ತ, ವಸಂತಗಳಾಚೆ
ಜನ ನೆರೆದರು, ಅತ್ತರು
ಹುಯ್ಯಲಿಟ್ಟರು....
ಸತ್ತ ವ್ಯಕ್ತಿಯ ಎದೆಯ
ಮೇಲೆ ನಿಂತಿತು ಹೂ ಹಾರ..|
ಕುಣಿಯಿತು, ಮೆಟ್ಟಿತು,
ಹಾಡಿತು, ನಕ್ಕಿತು..||


ಸೇಡು ತೀರಿಸಿಕೊಂಡಿತು..||


ಬರೆದಿದ್ದು05-10-2008ರಂದು ದಂಟಕಲ್ಲಿನಲ್ಲಿ

Thursday, December 27, 2012

ಹಳೆಯ ನೆನಪು

ಹಳೆಯ ನೆನಪು


ಹಳೆಯ ಸಾಲಿಗೆ ಹೊಸತು ರಾಗವ
ಮನಸು ಸುಮ್ಮನೆ ಬೆಸೆದಿದೆ,
ಅಳಿದ ನೆನಪಿನ ತಳದ ಬುತ್ತಿಯ
ಮನವು ಮತ್ತೆ ಮೀಟಿದೆ..||


ಹಳೆಯ ಕವಿತೆಯ ಪದದ ಸಾಲಿಗೆ
ಹೊಸತು ಅರ್ಥವೆ ಹುಡುಕಿದೆ,
ಮೆಲ್ಲ ಮೆಲ್ಲನೆ ನಿನ್ನ ನೆನಪೇ
ಝಲ್ಲನೆದೆಯನು ತಟ್ಟಿದೆ..||


ಮರೆತು ಹೋದಕವನವೇಕೋ
ಮಧುರವೆನಿಸುತ ಮರಳಿದೆ,
ಕಳೆದು ಹೋಗಿಹ ಪದ ಸಮೂಹವೆ
ಹಾಡಲಾಗದೆ ಉಳಿದಿದೆ..||


ಹಳೆಯ ನೆನಹದು ಅಲೆಯ ತೆರದಲಿ
ಮನದ ದಡವನು ಮುತ್ತಿದೆ,
ಮರೆತೆನೆಂದರೂ ನಿನ್ನ ನೆನಪೇ
ಮನದ ಮಡಿಲಲಿ ಇಣುಕಿದೆ..||


(ಬರೆದಿದ್ದು ದಂಟಕಲ್ಲಿನಲ್ಲಿ ದಿ. 28.092008ರಂದು)

Sunday, December 23, 2012

ಮತ್ತೊಂದಿಷ್ಟು ಹನಿಚುಟುಕುಗಳು

ಮತ್ತೊಂದಿಷ್ಟು ಹನಿಚುಟುಕುಗಳು

38)ಪ್ರೀತಿಗೆ ಕಾರಣ

ಪ್ರಿಯಾ ನೀನು
ನಿನ್ನ ಕೈಯಲ್ಲಿ
ಫಳಫಳನೆ
ಹೊಳೆಯುತ್ತಿರುವ
ಚಿನ್ನದ ನೆಕ್ಲೆಸ್ಸಿನಷ್ಟೇ
ಸುಂದರ..|

39)ಧನ್ವಂತರಿ

ಧನ್ವಂತರಿ ಧನ್ವಂತರಿ
ರೋಗಗಳೆಲ್ಲಾ ಓಡಿ ಹೋಯ್ತ್ರೀ
ಆದ್ರೂ ಮೈ ಮರೀಬ್ಯಾಡ್ರಿ
ಆಗಾಗ ಇಲ್ಲಿಗ್ ಬರ್ತಾ ಇರ್ರಿ||

40)ಜೀಸಸ್

ಜೀಸಸ್
ನೀನು ಬಹಳ
ಜೀನಿಯಸ್
ನಮ್ಮನ್ನು ಕಾಪಾಡುವೆ ಎಂದು ಮಾಡು
ಪ್ರಾಮಿಸ್
ಅಷ್ಟಾದರೆ ನಿನ್ನೆದುರು ಉಳಿದ ದೇವರುಗಳೆಲ್ಲಾ
ನೋ ಯೂಸ್..||

41)ಪ್ರೀತಿ

ಪ್ರೀತಿ, ಪ್ರೀತಿ, ಪ್ರೀತಿ
ನೀ ಯಾಕ್ ಹಿಂಗ್ ಆದ್ತಿ.?
ನಂಗ ಕೋಪ ಬರತೈತಿ
ಆದರ ನೀ ನಂಗ ಎಲ್ಲಿ ಸಿಗ್ತಿ..?

42)ಪರೀಕ್ಷೆ

ಪರೀಕ್ಷೆ ಪರೀಕ್ಷೆ
ಬಹಳ ನಿರೀಕ್ಷೆ|
ಮಾಡಿದರೆ ಸಮೀಕ್ಷೆ
ಹಲವರಿಗಿಲ್ಲ ರಕ್ಷೆ||
ಸರಿಯಾಗಿ ಓದದಿದ್ರೆ ಮಾತ್ರ
ಫೇಲಾಗೋದೆ ಅವರಿಗೆ ಶಿಕ್ಷೆ||

(ಹೈಸ್ಕೂಲಿನ ಕೊನೆಯ ದಿನಗಳಲ್ಲಿ, ಇನ್ನೂ ಬರವಣಿಗೆಯೆಡೆಗೆ ತುಡಿಯುತ್ತಿದ್ದ ಮನಸ್ಸು. ಆ ಸಂದರ್ಭದಲ್ಲಿ ಮೂಡಿ ಬಂದ ಕೆಲವು ಹನಿ ಚುಟುಕುಗಳು. ಮೊದ ಮೊದಲ ಬರಹಗಳು ಇವು.. )

Wednesday, December 19, 2012

ಎಲ್ಲ ಮರೆತಿರುವಾಗ (ಕಥೆ ಭಾಗ-8)

ಎಲ್ಲ ಮರೆತಿರುವಾಗ

ಭಾಗ-8

(ಇಲ್ಲಿಯವರೆಗೆ- ರಚನಾಳಿಗೆ ತನ್ನ ಬದುಕಿನ ದುರಂತ ದಿನಗಳನ್ನು ಹೇಳುತ್ತಿರುವ ಜೀವನ್..)
ರಚನಾ ನೀನು ಏನೇ ಹೇಳು ಕಾಲೇಜು ಲೈಫಿದೆಯಲ್ಲ ಅದರಂತಹ ಸುಂದರ ಜೀವನ ಇನ್ನೊಂದಿಲ್ಲ. ಅಲ್ಲಿ ನಾವು ಏನೆಲ್ಲ ಮಾಡಬಹುದು. ಸಾಧಿಸಬಹುದು. ಬಹುಶಃ ಬದುಕನ್ನು ಸಂಪೂರ್ಣವಾಗಿ ರೂಪಿಸುವುದೇ ಕಾಲೇಜು ಎನ್ನಬಹುದು. ಅಲ್ವಾ?
ರಚನಾ ಸುಮ್ಮನೆ ತಲೆಯಾಡಿಸಿದಳು.
ಜೀವನ್ ಮುಂದುವರಿಸಿದ.
ನನ್ನ ಕಾಲೆಜು ಲೈಫು ಪ್ರಾರಂಭದ ಇರಡು ತಿಂಗಳು ಸೀದಾ ಸಾದಾ ಆಗಿಯೇ ಇತ್ತು. ಹೊಸ ಪರಿಚಯ, ಹೊಸ ವಾತಾವರಣ, ಹೊಸ ಗೆಳೆಯರು, ಹೀಗೆಯೇ ಸಾಗುತ್ತಿತ್ತು. ಯಥಾ ಪ್ರಕಾರ ಲೇಟ್ ಕಮ್ಮರ್ ನಾನಾದ್ದರಿಂದ ಶಿರಸಿಯಲ್ಲಿ ಸೂರ್ಯ ಹೇಗೆ ಹುಟ್ಟುತ್ತಾನೆ ಎಂಬುದು ನನಗೆ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲಿ ಬಿಡು.
ಕಾಲೇಜಿನ ದಿನಗಳು ಸರಿದಂತೆಲ್ಲ ಒಮ್ಮೆ ಆ ದಿನದ ಕ್ಲಾಸುಗಳನ್ನು ಮುಗಿಸಿ ಬೇಗ ಮನೆಗೆ ಹೋಗುವ ತರಾತುರಿಯಲ್ಲಿದ್ದೆ. ಆಫ್ಶನಲ್ ಇಂಗ್ಲೀಶ್ ಆದ್ದರಿಂದ ಹುಡುಗರು ಕಡಿಮೆಯಿದ್ದರು. ಮುಂದಿನ ಕ್ಲಾಸಿಗೆ ಬಂಕ್ ಮಾಡುವುದೆಂದು ತೀರ್ಮಾನಿಸಿ ಹೊರಡಲನುವಾಗಿದ್ದೆ. 
ನಾನು 3 ಗಂಟೆಯ ನಂತರ ಕಾಲೇಜಿನಲ್ಲಿರೋದಿಲ್ಲ ಎಂಬ ಸಂಗತಿ ಹೆಚ್ಚಿನ ಹುಡುಗರಿಗೆ ಗೊತ್ತಿತ್ತಾದ್ದರಿಂದ ನನ್ನೆಡೆಗಿನ ಜೋಕುಗಳಲ್ಲಿ ಅದೂ ಒಂದಾಗಿ ಸೇರಿ ಹೋಗಿತ್ತು. ಹೀಗಿರಲು ಅವಳು ಬಂದು ಇದ್ದಕ್ಕಿದ್ದಂತೆ ನನ್ನನ್ನು ಪರಿಚಯ ಮಾಡಿಕೊಂಡಳು. ಹೆಸರು ಸಂಗೀತಾ. 
ಪರಿಚಯಕ್ಕೆ ಮುನ್ನ ಅನೇಕ ಸಾರಿ ಕ್ಲಾಸಿನಲ್ಲಿ ಕಂಡಿದ್ದೆ. ಮಾತನಾಡಲು ಮುಜುಗರ. ಇನ್ನೂ ಮುಖ್ಯ ಸಂಗತಿ ಎಂದರೆ ನಾನಾಗಿ ಯಾರನ್ನೂ ಮಾತನಾಡಿಸದ ವ್ಯಕ್ತಿ. ಅದಕ್ಕಿಂತ ಹೆಚ್ಚಾಗಿ ನಾನು ಗುಮ್ಮನಗುಸ್ಕನಾಗಿದ್ದೆ. ಅದ್ಯಾರು ನನ್ನ ಬಗ್ಗೆ ಹೇಳಿದ್ದರೋ, ಅಥವಾ ನನ್ನ ಮೇಲಿನ ಲೇಟ್ ಕಮ್ಮರ್ ಜೋಕುಗಳು ಅವಳ ಕಿವಿಗೂ ಬಿದ್ದಿದ್ದವೋ ಏನೋ.. ಪರಿಚಯ ಮಾಡಿಕೊಂಡಳು. ನಾನು ದೊಡ್ಡ ಶಾಕಿನೊಂದಿಗೆ ನನ್ನನ್ನು ಪರಿಚಯಿಸಿಕೊಂಡಿದ್ದೆ. 
ಬಹುಶಃ ಆಕೆ ಪರಿಚಯ ಆದ ಗಳಿಗೆಯಲ್ಲಿ ಆಕಾಶದಲ್ಲಿ ಅದ್ಯಾವುದೋ ದೇವತೆಗಳು ನಮ್ಮನ್ನು ಹರಸಿದ್ದವು ಅಂತ ಕಾಣುತ್ತದೆ. ಒಂದೆರಡು ದಿನಗಳಲ್ಲಿ ಸಂಗೀತಾ ನನ್ನ ಪರಮಾಪ್ತ ಗೆಳತಿಯಾಗಿಬಿಟ್ಟಳು. ರಚನಾ ಇನ್ನೊಂದು ತಮಾಶೆಯ ಸಂಗತಿ ಏನ್ ಗೊತ್ತಾ., ಆಕೆ ಮೊದಲ ದಿನ ನನ್ನ ಪರಿಚಯ ಮಾಡಿಕೊಂಡಿದ್ದಳಲ್ಲ, ಮರು ದಿನ ಮತ್ತೆ ಸಿಕ್ಕಳು. ನನಗೆ ಅವಳು ಪರಿಚಯ ಮಾಡ್ಕೊಂಡಿದ್ದು ಮರೆತಿತ್ತು. ಹಾಯ್ ಅಂದಳು. ನಾನೊಮ್ಮೆ ತಲೆ ಕೆರೆದುಕೊಂಡಿದ್ದೆ. ಹೆಸರೂ ನೆನಪಾಗಿರಲಿಲ್ಲ. ಕೊನೆಗೆ ಪೆಕರನಂತೆ ಹಾಯ್ ಅಂದು ಮತ್ತೊಮ್ಮೆ ಹೆಸರು ಕೇಳಿದ್ದೆ. 
ಸಂಗೀತಾ ಕುರಿತು ಒಂದೆರಡು ಸಂಗತಿ ಹೇಳಲೇ ಬೇಕು. ನನ್ನದೇ ಕ್ಲಾಸಿನ ಹುಡುಗಿ. ನನ್ನೂರಿನ ಬಸ್ಸಿಗೆ ಬರುತ್ತಿದ್ದಳು ಎಂಬುದು ನನ್ನ ಪರಿಚಯ ಆದ ಮೇಲೆ ಗೊತ್ತಾದ ಸಂಗತಿ. ಮನೆಯಲ್ಲಿ ಬೇಜಾನ್ ಆಸ್ತಿ ಇದೆ. ಅಲ್ಲದೆ ಅವರ ಅಪ್ಪ ಸ್ಥಳೀಯ ರಾಜಕಾರಣಿಯಾಗಿ ಹೆಸರು ಮಾಡಿದವರು. ದುಡ್ಡಿಗೆ ಕೊರತೆಯಿರಲಿಲ್ಲ. ಮಗಳು ಆಸೆಪಟ್ಟಿದ್ದರೆ ಎಂಜಿನಿಯರಿಂಗೋ ಅಥವಾ ಇನ್ಯಾವುದೋ ದೊಡ್ಡ ಹೆಸರಿನ ಕೋರ್ಸಿಗೆ ಸೇರಿಸಬಲ್ಲ ತಾಕತ್ತನ್ನು ಹೊಂದಿದ್ದವನು. 
ಆದರೆ ಸಂಗೀತಾಳೇ ವಿಚಿತ್ರ ಸ್ವಭಾವದವಳು. ಆಕೆಗೆ ಇಷ್ಟವಿರಲಿಲ್ಲವೋ, ಅಥವಾ ಅಂತಹ ದೊಡ್ಡ ದೊಡ್ಡ ಕೋರ್ಸುಗಳನ್ನು ಮಾಡಿಕೊಂಡರೆ ಕಾಲೇಜು ಲೈಫಿನಲ್ಲಿ ಬರೀ ಓದು ಓದು ಎಂದು ಆ ಕಾಲದ ರಸನಿಮಿಷಗಳ ಸಂತಸ ಕಳೆದುಹೋಗುತ್ತದೆ ಎಂದುಕೊಂಡಿದ್ದಳೋ ಏನೋ.. ಅಂತೂ ನನ್ನ ಕ್ಲಾಸಿಗೆ ಬರ್ತಿದ್ದಳು. ನನ್ನದೇ ಆಫ್ಶಿನಲ್ ಇಂಗ್ಲೀಶ್ ಕ್ಲಾಸೂ ಆಗಿದ್ದರಿಂದ ನನ್ನ ಪರಿಚಯವಾದಳು ಎನ್ನಬಹುದು.
ಮುಂದಿನ ದಿನಗಳು ಬಹಳ ಸಂತಸದಿಂದ ಕೂಡಿದ್ದವು. ಕಾಲೇಜಿನಲ್ಲಿ ನಾವಿಬ್ಬರೂ ಪರಮಾಪ್ತರಾಗಿದ್ದೆವು. ಒಂದೆ ಬಸ್ ಆದ್ದರಿಂದ ಬಸ್ಸಿನಲ್ಲೂ ಒಟ್ಟಿಗೆ ಬರುತ್ತಿದ್ದೆವು. ಇಬ್ಬರು ಹೊಸದಾಗಿ ಮಿತ್ರರಾದರೆ ಪರಸ್ಪರ ಪ್ರಭಾವ ಬೀರುತ್ತಾರೆ ಎಂಬ ಮಾತಿದೆಯಲ್ಲ.. ಅವಳು ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿದಳೋ ಗೊತ್ತಾಗಲಿಲ್ಲ.ಆದರೆ ಆಕೆ ಮಾತ್ರ ನನ್ನಂತೆಯೇ ಕ್ಲಾಸಿಗೆ ಬಂಕ್ ಹೊಡೆಯಲು ಪ್ರಾರಂಭಿಸಿದ್ದಂತೂ ಸತ್ಯ. ಬೆಳಿಗ್ಗೆ 11ಕ್ಕೆ ಕ್ಲಾಸಿಗೆ ಹೋಗುವುದು, ಮದ್ಯಾಹ್ನ 3ಕ್ಕೆ ವಾಪಸ್ಸು.
ಆ ದಿನಗಳಲ್ಲಿ ಮಾತು, ಮಾತು ಮಾತು ಇವುಗಳೇ ನಮ್ಮ ಜೊತೆಗೆ ಇದ್ದಿದ್ದು. ಇಬ್ಬರು ಹುಡುಗಿಯರೂ ಆ ರೀತಿ ನಾನ್ ಸ್ಟಾಪ್ ಮಾತಾಡುವುದಿಲ್ಲವೇನೋ.. ಆದರೆ ನಾವಿಬ್ಬರು ಹಂಗೆ ಮಾತಾಡ್ತಿದ್ದೆವು.
ನಮ್ಮಿಬ್ಬರ ಈ ದೋಸ್ತಿ ನಿಧಾನವಾಗಿ ಕಾಲೇಜಿನಲ್ಲಿ ಮನೆಮಾತಾಯಿತು. ಅದಕ್ಕೆ ತಕ್ಕಂತೆ ಗಾಸಿಪ್ಪಾಯಣ, ರೂಮರಾಯಣಗಳೂ ಹುಟ್ಟಿಕೊಂಡವು. ಇದಕ್ಕೆ ನಾನು ತಲೆಕೆಡಿಸಿಕೊಂಡಿದ್ದೆನಾದರೂ ಆಕೆ ತಲೆಬಿಸಿ ಮಾಡಿಕೊಳ್ಳಲಿಲ್ಲ. ಹಾಗಾಗಿ ನಮ್ಮ ದೋಸ್ತಿಗೆ ಭಂಗ ಬರಲಿಲ್ಲ. ಜೊತೆಗೆ ದೋಸ್ತಿಯಲ್ಲಿ ಅಪಸವ್ಯಗಳೂ ಕಾಣಲಿಲ್ಲ.
ಈ ಕುರಿತು ಇನ್ನೂ ಹೇಳಬೇಕು. ಈ ಸಂಗೀತಾಳಿಂದಲೇ ನನ್ನ ಬದುಕು ಟರ್ನಾಗಿದ್ದು ಎಂದರೆ ನೀನು ನಂಬಲೇ ಬೇಕು. ಎಂದೋ ಆಕೆಯ ಎದುರು ಒಮ್ಮೆ ಹಾಡು ಗುನುಗಿದ್ದನ್ನು ಕೇಳಿ ಅದನ್ನು ಬೆಳೆಸಿದ್ದೇ ಆಕೆ. 
ಅದೇ ರೀತಿ ಒಂದು ಖಯಾಲಿಯ ದಿನ ಕಾಲೇಜಿನಲ್ಲಿ ಕ್ಲಾಸು ಆಫಾಗಿತ್ತು.
ಮನಸ್ಸು ಯಾವುದೋ ಲಹರಿಯಲ್ಲಿತ್ತು.
ಸುಮ್ಮನೆ ಚಾಕ್ ಪೀಸ್ ಪಡೆದುಕೊಂಡು ಬೋರ್ಡಿನ ಮೇಲೆ
`ನಿನ್ನ ಪ್ರೀತಿಗೆ ನಾನು ಒಳ್ಳೆಯವನಲ್ಲ..
ನಿಜ ಗೆಳತಿ..ಖಂಡಿತವಾಗಿಯೂ
ಒಳ್ಳೆಯವನಲ್ಲ..."
ಎನ್ನುವ ಸಾಲುಗಳನ್ನು ಬರೆದೆ.
ಈ ಸಾಲುಗಳು ಆಕೆಯ ಕಣ್ಣಿಗೆ ಬಿದ್ದವು. ಆಗಿಂದ ಶುರುವಾಯಿತು ನೋಡಿ..ಜೀವನ್ ನೀನು ಬಹಳ ಚನ್ನಾಗಿ ಬರೀತಿಯಾ ಕಣೋ.. ಕೀಪ್ ಇಟ್ ಅಪ್.. ಎಂದು ಮೊದಲು ಅಪ್ರಿಸಿಯೇಶನ್ ಮಾಡಿದ ಆಕೆ ಆ ನಂತರ ನನ್ನಲ್ಲಿ ಬರವಣಿಗೆಯ ಸಾಲುಗಳು ಮೂಡಲು ಕಾರಣವಾದಳು. ಅವಳ ದೆಸೆಯಿಂದಲೇ ನಾನು ಅದೆಂತೆಂತದ್ದೋ ಕವಿತೆಗಳನ್ನು ಬರೆದೆ. ಸಂಗ್ರಹ ಮಾಡಿಯೂ ಇಟ್ಟಿದ್ದೆ. ಈಗ ಅದೆಲ್ಲಿ ಹೋಗಿದೆಯೋ ಗೊತ್ತಿಲ್ಲ.
ಒಂದೊಳ್ಳೆ ಸಂಗತಿಯೆಂದರೆ ಆಕೆ ನನಗೆ ಅದೆಷ್ಟು ಒಳ್ಳೊಳ್ಳೆ ಕಾದಂಬರಿಗಳನ್ನು ಸಜೆಸ್ಟ್ ಮಾಡಿದ್ಲು ಗೊತ್ತಾ. ಆ ದಿನಗಳಲ್ಲಿಯೇ ನಾನು `ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ, ಕರ್ವಾಲೋ, ಭಾರತೀಪುರ, ಚಿದಂಬರ ರಹಸ್ಯ, ಒಂದು ಬದಿ ಕಡಲು, ಆವರಣ, ತಂತು, ಭಿತ್ತಿ ಈ ಮುಂತಾದ ಕನ್ನಡದ ಮೇರು ಕೃತಿಗಳನ್ನು ಓದಿದ್ದೆ. ಈಗಲೂ ನೀನು ನೋಡಬಹುದು ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ನನ್ನ ಐಕಾರ್ಡ್ ನಂಬರ್ 184 ಇದ್ದಷ್ಟು ಬೇರೆ ಯಾರ ನಂಬರುಗಳೂ ಲೈಬ್ರರಿಯ ಪುಸ್ತಕದಲ್ಲಿಲ್ಲ. 
ಇಷ್ಟೇ ಅಲ್ಲ. ಇಂಗ್ಲೀಷು ನನಗೆ ಬಹಳ ತಲೆ ತಿನ್ನುವ ವಿಷಯ ಆಗಿತ್ತು. ಆದರೂ ಕಾಲೇಜಿನಲ್ಲಿ ಅದನ್ನೇ ಒಂದು ವಿಷಯವಾಗಿ ತಗೊಂಡಿದ್ದೆ. 
ಆ ದಿನಗಳಲ್ಲಿ ಕಾರ್ನಾಡರ ತುಘಲಕ್, ಈ ಮುಂತಾದ ನಾಟಕಗಳು ನಮಗೆ ಸಿಲಬಸ್ ಆಗಿ ಇದ್ದವು. ಇಂಗ್ಲೀಷಿನ ಈ ಪುಸ್ತಕಗಳನ್ನು ಕೋಳ್ಳಲು ನನ್ನ ಬಳಿ ದುಡ್ಡಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಇವಳೇ ನನಗೆ ಈ ಪುಸ್ತಕಗಳನ್ನು ಎರವಲು ನೀಡಿದ್ದು. ಈ ಪುಸ್ತಕಗಳೆಲ್ಲ ಕನ್ನಡದಿಂದ ಇಂಗ್ಲೀಷಿನಲ್ಲಿ ಅನುವಾದ ಆಗಿರುವ ಕಾರಣ ನಾನು ಕನ್ನಡದಲ್ಲಿ ಓದುತ್ತಿದ್ದೆ. ನಂತರ ಪರೀಕ್ಷೆಗಳಲ್ಲಿ ನನ್ನದೇ ವಾಕ್ಯಗಳನ್ನು ಬಳಸಿ ಇಂಗ್ಲೀಷಿನಲ್ಲಿ ಬರೆಯುತ್ತಿದ್ದೆ. ಇದರಿಂದಾಗೀ ತೀರಾ 70-80 ಮಾರ್ಕುಗಳು ಬೀಳದಿದ್ದರೂ 45-50ಕ್ಕಂತೂ ಕೊರತೆಯಾಗುತ್ತಿರಲಿಲ್ಲ. ಇದನ್ನು ಅರಿಯದ ಸಂಗೀತಾ ಹಾಗೂ ಇತರ ಮಿತ್ರರು ಯದ್ವಾ ತದ್ವಾ ಓದಿಯೂ ನನ್ನಷ್ಟೇ ಮಾರ್ಕು ಪಡೆಯುತ್ತಿದ್ದರು. ಕೊನೆಗೆ ನನ್ನ ಈ ಐಡಿಯಾವನ್ನು ಹೇಳಿದ್ದೇ ತಡ ಎಲ್ಲರೂ ಅದನ್ನು ಪಾಲಿಸಿ ಮಾರ್ಕುಗಳನ್ನು ಪಡೆದ ಮೇಲೆಯೇ ನನ್ನ ಕುರಿತು ಜೋಕುಗಳನ್ನು ಆಡುತ್ತಿದ್ದುದು ಕಡಿಮೆಯಾಗಿದ್ದು.

(ಮುಂದುವರಿಯುವುದು..)

Tuesday, December 18, 2012

ನೀರೆ ನೀ ಯಾರೆ..?

ನೀರೆ ನೀ ಯಾರೆ..?

ಹೊತ್ತಲ್ಲದ ಹೊತ್ತಿನಲಿ
ಮನದೊಳಗೆ ಕಾಡುತಿಹ
ನೀರೆ ನೀ ಯಾರೆ?
ನನ್ನೆದುರು ಬಾರೆ..||

ನದಿಗುಂಟ ಬಂದಾಗ
ಮೌನವಾಗಿಯೇ ನಗುವ
ಮನವೆಲ್ಲ ಸೆಳೆ-ಸೆಳೆವ
ನೀರೆ, ನೀಯಾರೆ?
ನನ್ನೆದುರು ಬಾರೆ..||

ಕೆಂಪಂಚು ಜರಿ ಸೀರೆ
ಮುಸುಕೊಳಗೆ ನಗು ನಗುವ
ಕಣ್ಣಿನಲೇ ಬರಸೆಳೆವ
ನೀರೆ, ನೀ ಯಾರೆ?
ನನ್ನೆದುರು ಬಾರೆ...||

ಅಚ್ಚಮಲ್ಲೆಯ ಮುಡಿದು
ಕಾಲುಗೆಜ್ಜೆಯ ಬಡಿದು
ನಿಂತಲ್ಲೆ ಸೆಳೆಯುತಿಹ
ನೀರೆ, ನೀಯಾರೆ
ನನ್ನೆದುರು ಬಾರೆ..||

ದೂರದಿಂದಲೇ ಸೆಳೆವ
ಸನಿಹದಲಿ ಬರದಿರುವ
ಸಿಗಸಿಗದೇ ಓಡುವ
ನೀರೆ, ನೀ ಯಾರೆ?
ನನ್ನೆದುರು ಬಾರೆ..||

ಬರೆದಿದ್ದು ದಂಟಕಲ್ಲಿನಲ್ಲಿ ದಿನಾಂಕ 22-11-2007ರಂದು

Monday, December 17, 2012

ನಿಗೂಢ ದೇವರಕಾನಿನ ಜಾಡಿನಲ್ಲಿ...

ನಿಗೂಢ ದೇವರಕಾನಿನ ಜಾಡಿನಲ್ಲಿ... 

ದೇವರ ಕಾನು.. ಹಾಗೊಂದು ಹೆಸರಿನ ಚಿಕ್ಕ ಪ್ರದೇಶ ನಮ್ಮೂರಿನ ಫಾಸಲೆಯಲ್ಲಿದೆ. ನಮ್ಮೂರು ಹಾಗೂ ಹಿತ್ತಲಕೈ ನಡುವೆ ಇರುವ ಚಿಕ್ಕ ಕಾಡಿನಂತಹ ಸ್ಥಳ ಇದು. ಅಘನಾಶಿನಿ ನದಿಯ ದಡದ ಮೇಲೆ ಇದು ಇದೆ. ನಮ್ಮೂರಿನಿಂದ ದೇವರಕಾನಿಗೆ ಹೋಗಬೇಕೆಂದಾದಲ್ಲಿ ಅಘನಾಶಿನಿಯನ್ನು ದಾಟಿ, ವಾಟೆ ಮಟ್ಟಿಯ ಸಾಲನ್ನು ಹಾದು ಹೋಗಬೇಕು.
     ಮೇಲ್ನೋಟಕ್ಕೆ ಅಲ್ಲಿ ಏನೂ ಕಾಣುವುದಿಲ್ಲ. ಏಕೆಂದರೆ ಬೇಸಿಗೆಯ ದರಕು, ಕಾಡು ಬಳ್ಳಿಗಳು, ಗಣಪೆಕಾಯಿಯ ದೊಡ್ಡ ಬಳ್ಳಿಯ ಸಾಲುಗಳು ಅಲ್ಲಿ ಏನನ್ನೂ ಕಾಣದಂತೆ ಮಾಡಿಬಿಟ್ಟಿವೆ. ಆದರೆ ಸ್ವಪಲ್ಪ ಸೂಕ್ಷ್ಮವಾಗಿ, ಕೂಲಂಕಷವಾಗಿ ವೀಕ್ಷಿಸಿದರೋ ಗತಕಾಲದ ಪಳೆಯುಳಿಕೆಗಳ ಅನಾವರಣ ನೋಡುಗರಿಗೆ ಆಗುತ್ತದೆ.
    ಹೌದು ಅಲ್ಲಿ ಯಾವುದೋ ಕಾಲದ ಪ್ರಾಚೀನ ಗೊಂಬೆಗಳು, ಮಣ್ಣಿನ ಮಡಿಕೆಗಳು, ಮೃತ್ತಿಕೆಯಿಂದ ಮಾಡಿದ ಒಡೆದು ಹೋಗಿರುವ ಗೊಂಎಬಗಳು ಕಾಣಬಲ್ಲವು. ಹೂಕುಂಡ, ಸ್ತೀ, ವೇಷಧಾರಿ, ಆಭರಣಗಳು, ಈ ಮುಂತಾದವುಗಳು ಅಲ್ಲಿವೆ. ಪ್ರತಿಯೊಂದು ಮಡಿಕೆಗಳ ತುಂಡಿನ ಮೇಲೂ ಸೂಕ್ಷ್ಮ ಚಿತ್ತಾರಗಳು. ಕಷ್ಟಪಟ್ಟು ಕಣ್ಣಲ್ಲಿ ಕಣ್ಣಿಟ್ಟು ತಯಾರಿಸಿದ ಪರಿಶ್ರಮ ಎದ್ದು ಕಾಣುತ್ತದೆ.
    ಈ ಗೊಂಬೆಗಳನ್ನು ಅದ್ಯಾವ ಗತಶತಮಾನದಲ್ಲಿ ತಯಾರು ಮಾಡಲಾಗಿದೆಯೋ. ಅದ್ಯಾಕೆ ಅಲ್ಲಿ ತಂದಿಟ್ಟರೋ ಒಂದೂ ಗೊತ್ತಿಲ್ಲ. ಇದನ್ನು ಮುಟ್ಟಬಾರದು ಎಂಬ ವಿಚಿತ್ರ ನಿಗೂಢ ನಂಬಿಕೆ ನಮ್ಮೂರು ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿವೆ. ಆ ಕಾರಣದಿಂದಲೇ ದೇವರಕಾನಿನ ಪ್ರದೇಶ ಈಗಲೂ ನಮ್ಮೂರಿಗರಲ್ಲಿ ವಿಚಿತ್ರ ಹಾಗೂ ಭಯಭರಿತ ಪ್ರದೇಶವಾಗಿ ಉಳಿದುಬಿಟ್ಟಿದೆ.
    ಬಹುಶಃ ಈ ಕಾರಣದಿಂದಲೇ ಆ ಗೊಂಬೆಗಳು ಉಳಿದುಕೊಂಡಿದೆಯೇನೋ. ಇಲ್ಲವಾದಲ್ಲಿ ಆ ಗೊಂಬೆಗಳು ಅದೆಷ್ಟು ಮನೆಯ ಶೋಕೆಸುಗಳಲ್ಲಿ ಉಳಿದುಬಿಡುತ್ತಿದ್ದವೋ. ಅದೆಷ್ಟು ಮನೆಯ ಹೂವುಗಳನ್ನು ಇಡುವ ಕುಂಡಗಳಾಗಿಬಿಡುತ್ತಿದ್ದವೋ. ಸೋದೆಯ ಅರಸರ ಕಾಲದ್ದೋ ಅಥವಾ ಕೋಡಸಿಂಗೆಯ, ಕರೂರಿನ ಗೌಡರದ್ದೂ ಅಥವಾ ಬಾಳೂರು ಗೌಡರ ಕಾಲಕ್ಕೆ ಸೇರಿರ ಬಹುದಾದ ಈ ದೇವರ ಕಾನಿನ ಪಳೆಯುಳಿಕೆಗಳ ಕುರಿತು ನಮ್ಮೂರಿನ ಹಿರಿಯರಿಗೂ ಹೆಚ್ಚು ಗೊತ್ತಿಲ್ಲ. ಆ ಬಗ್ಗೆ ಹೇಳಿ ಅಂದರೆ ಅದು ದೇವರ ಕಾಡು. ಅಲ್ಲಿಗೆ ಹೋಗಬೇಡಿ ಎಂದು ಹೇಳಿ ಸುಮ್ಮನಾಗುತ್ತಾರೆ.
    ಅದೇನು ಸ್ಮಶಾನವೋ, ಅಥವಾ ಹೆಸರೇ ಹೇಳಿದಂತೆ ದೇವರಿಗೆ ಸೇರಿದ ತಾಣವೋ, ಚೌಡಿ, ಮಾಸ್ತಿಯ ಸ್ಥಳವೋ, ಅಥವಾ ಒಂದಾನೊಂದು ಕಾಲದಲ್ಲಿ ನಾಗರಬನ ಆಗಿತ್ತೋ ಯಾರಿಗೂ ಗೊತ್ತಿಲ್ಲ. ಮುಂಚೆ ಯಾವಾಗಲೂ ನಾವು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದೆವು. ಕೊನೆ ಕೊನೆಗೆ ಆ ದೇವರ ಕಾನಿನ ಸುತ್ತ ಕಿತ್ತಲಕೈ ಊರಿನವರ್ಯಾರದ್ದೂ ಬೇಲಿಯೂ ಎದ್ದು ನಿಂತಿದೆ. ಸೂರ್ಯನ ಕಿರಣಗಳು ನೆಲವನ್ನು ಏನು ಮಾಡಿದರೂ ಮುಟ್ಟದಂತಿರುವ ಈ ಸ್ಥಳದಲ್ಲಿ ಅದೇನೋ ಒಂದು ರೀತಿಯ ನೀರವ, ಭೀತಿಯುಕ್ತ ವಾತಾವರಣ ನೆಲೆಸಿರುವುದು ವಿಚಿತ್ರವೂ ವಿಶಿಷ್ಟವೂ ಹೌದು.
    ಈ ಕುರಿತು ಹೆಚ್ಚು ತಿಳಿದವರಿಲ್ಲ. ಈ ಸ್ಥಳವನ್ನು ಉತ್ಖನನ ಮಾಡಿದರೆ ಇನ್ನಷ್ಟು ಮಾಹಿತಿ ಸಿಗಬಹುದು. ಅಗೆದರೆ ಅಲ್ಲಿ ನಿಧಿ ಇದೆ, ಅದನ್ನು ಕಾಳಸರ್ಪವೊಂದು ಕಾಯುತ್ತಿದೆ, ಅಲ್ಲೇ ಜೊತೆಯಲ್ಲಿ ಹುತ್ತವೂ ಇದೆ ಎಂದು ವಾಡಿಕೆಯ ಮಾತುಗಳಿವೆ. ನನ್ನ ಕಣ್ಣಿಗೆ ಹುತ್ತ ಕಾಣಿಸಿದೆ. ಅಲ್ಲದೆ ಮಂಟಪದಂತಹ ಸ್ಥಳವೂ ಕಂಡಿದೆ. ನಿಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಶಿರಸಿಯ ನಮ್ಮ ಇತಿಹಾಸ ಪ್ರಾದ್ಯಾಪಕರೂ, ಪ್ರಾಚೀನ ವಸ್ತುವನ್ನು ಸಂಗ್ರಹಿಸಿ ಶಿರಸಿಯಲ್ಲಿ ಮ್ಯೂಸಿಯಂ ಮಾಡುತ್ತಿರುವ ಟಿ. ಎಸ್. ಹಳೆಮನೆ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗೆಲ್ಲ ನಮ್ಮೂರಿಗರು ಹಾಗೂ ಸುತ್ತಮುತ್ತಲ ಭಾಗದವರು ನನ್ನನ್ನು ವಿಚಿತ್ರವಾಗಿ, ಅನುಮಾನದಿಂದ ನೋಡಿದ್ದಿದೆ. ಜೊತೆಗೆ ಅಲ್ಲಿ ಮಣ್ಣಿನಲ್ಲಿ ಬಿದ್ದು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿ ಹೋಗುತ್ತಿದ್ದ ಗೊಂಬೆಗಳನ್ನು ತಂದು ಮ್ಯೂಸಿಯಂನಲ್ಲಿ ಇಡುತ್ತೇನೆ ಎಂಬ ಹಳೆಮನೆ ಸರ್ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
    ಹಾಗಿದ್ದರೆ ಅದೇನಿರಬಹುದು? ನಮ್ಮೂರಿನಲ್ಲೆ, ನಾನು ಓಡಾಡುವ ಜಾಗದಲ್ಲಿಯೇ ಇಂತಹ ಸ್ಥಳ ಇದ್ದರೂ ಅದರ ಹಿನ್ನೆಲೆ ಗೊತ್ತಿಲ್ಲವಲ್ಲಾ.. ಅದನ್ನು ಉಳಿಸೋಣ ಎಂದುಕೊಂಡು ಮಾಡಿದ ಕೆಲಸಗಳೆಲ್ಲ ವ್ಯರ್ಥವಾಗಿದೆಯಲ್ಲ ಎಂಬ ಬೇಸರವಿದೆ. ಮಳೆ, ಗಾಳಿ, ಕಾಡಿನ ಪ್ರಾಣಿಗಳ ಹಾವಳಿಗಳಿಂದ ಮಣ್ಣಾಗುತ್ತಿರುವ ಈ ಗೊಂಬೆಗಳನ್ನು ಕಾಪಾಡಲು ಆಗುತ್ತಿಲ್ಲವೆನ್ನುವ ವ್ಯಥೆಯೂ ಇದೆ. ಮೂಢನಂಬಿಕೆಯಿಂದಲೋ ಅಥವಾ ಇನ್ಯಾವ ಕಾರಣವೋ.. ನಮ್ಮ ಪ್ರಯತ್ನವನ್ನು ವಿರೋಧಿಸಿದ ಈ ಕುರಿತು ಕುತೂಹಲವೂ ಇದೆ. ಇತಿಹಾಸ ಅರಿಯುವ ಅವಕಾಶವಿದ್ದರೂ ಆಗುತ್ತಿಲ್ಲವೆನ್ನುವ ಅಸಹಾಯಕತೆ.
    ಇವೆಲ್ಲದರ ಜೊತೆಗೆ ಹಾಗೆಯೇ ಬಿದ್ದುಕೊಂಡಿರುವ ಆ ನಿಗೂಢ ಗೊಂಬೆಗಳು ಅಲ್ಲೇ ಕಣ್ಮರೆಯಾಗ್ತವಾ? ನಮ್ಮೂರಿನ ದೇವರಕಾನು, ದೇವರ ಹೆಸರಿನ ಮೂಲಕ ಕಾನು ಉಳಿದುಕೊಂಡಿದ್ದೆಲ್ಲ ಮರೆಯಾಗುತ್ತದಾ ಎಂಬ ಆಲೋಚನೆಯಲ್ಲಿದ್ದೇನೆ.

ಒಂದಷ್ಟು ಹನಿಗಳು

ಒಂದಷ್ಟು ಹನಿಗಳು

(ಐದು ಹನಿಚುಟುಕಗಳು, ಚುನಾವಣೆ, ನ್ಯೂ ಈಯರ್, ಹೃದಯದ ಸ್ಥಿತಿ, ಚುನಾವಣಾ ಸಮಯ ಹಾಗೂ ಇಂಡಿಯಾ ಶೈನಿಂಗ್)

33)ಚುನಾವಣೆ

ಚುನಾವಣೆ ಚುನಾವಣೆ
ಜನರ ಜಮಾವಣೆ
ನೋಟು, ಓಟುಗಳ ಚಲಾವಣೆ
ಅಭ್ಯರ್ಥಿಗಳ ಪ್ರಚಾರಣೆ, ಹಣಾಹಣಿ,
ಹೆಂಡ ಸಾರಾಯಿಗಳ ಸಮರ್ಪಣೆ,
ರೌಡಿ ಪಡೆಗಳ ದಬಾವಣೆ
ಗೆದ್ದ ಅಭ್ಯರ್ಥಿ ಹಿಡಿದ ಚುಕ್ಕಾಣಿ
ಇನ್ನೈದು ವರ್ಷ ಅವನ ಮುಖ ನಾಕಾಣೆ|
ನಾ ಕಾಣೆ..||

34) ನ್ಯೂ ಈಯರ್

ಹಳೆ ಸಮಸ್ಯೆ
ಮರೆಸಿ
ಹೊಸ ಸಮಸ್ಯೆಯ
ಜನನಕ್ಕೆ
ನಾಂದಿ ಆಗುವ ದಿನವೇ
ಹೊಸ ವರ್ಷ||

35)ಹೃದಯದ ಸ್ಥಿತಿ

ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದ್ಉ...||

36)ಚುನಾವಣಾ ಸಮಯ

ಹಿಂದೆ ನಡೆದಿತ್ತಂತೆ ಐದು
ವರ್ಷಕ್ಕೊಂದು ಚುನಾವಣೆ
ಆದರೆ ಈಗ ನಡೆಯುತ್ತಿದೆ
ವರ್ಷಕ್ಕೆ ಐದು ಚುನಾವಣೆ||

37)ಇಂಡಿಯಾ ಶೈನಿಂಗ್

ಅಲ್ಲಿ ನೋಡು ಇಲ್ಲಿ ನೋಡು
ಪ್ರಕಾಶಿಸಿದೆ ಭಾರತ
ಕಣ್ಣು ಬಿಟ್ಟು ಸರಿಯಾಗಿ ನೋಡು
ಬೆಳಕಿಲ್ಲದ ಟ್ಯೂಬ್ ಲೈಟಾ..|

Wednesday, December 12, 2012

ವಿಸ್ಮಯಗಳ ಗೂಡು ಈ ಮಲೆನಾಡು : ಭಾಗ-1

ವಿಸ್ಮಯಗಳ ಗೂಡು ಈ ಮಲೆನಾಡು 

ಭಾಗ-1

ಈ ಮಲೆನಾಡು ವಿಸ್ಮಯಗಳ ಆಗರ. ವೈಶಿಷ್ಟ್ಯತೆಗಳ ಸಾಗರ. ಈ ಪ್ರದೇಶವೇ ವಿಶಿಷ್ಟ, ವಿಚಿತ್ರ.. ಮಲೆನಾಡಿನಲ್ಲಿ ಅದರದೇ ಆದ ಬೆರಗಿನ ಲೋಕವಿದೆ. ಅದಕ್ಕೆ ಅದರದೇ ಆದ ಸೊಬಗಿದೆ. ಪ್ರಾಣಿ ಸಮುದಾಯ, ಪಕ್ಷಿ ಲೋಕ, ಚಿಟ್ಟೆ, ಜಂತು, ಕೀಟಗಳ ಸಾಗರವೇ ಇಲ್ಲಿದೆ. ಇತರ ಕಡೆಗಳಿಗಿಂತ ಇವು ಭಿನ್ನ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ಮಣ್ಣು ಹಾಗೂ ಮಣ್ಣಿನ ಗುಣಗಳೇ ಭಿನ್ನ. ಇಲ್ಲಿ ನಿಮ್ಮೆದುರು ನಾನು ಮಲೆನಾಡಿನ ಕೆಲವು ವಿಶಿಷ್ಟತೆಗಳ ಪಟ್ಟಿಮಾಡಿ ಇಡುತ್ತಿದ್ದೇನೆ ನೋಡಿ..,

ವಿಶಿಷ್ಟ ಹಣ್ಣುಗಳು;

    ಮಲೆನಾಡಿನ ಬೆಟ್ಟಗುಡ್ಡಗಳು ಸದಾಕಾಲ ಒಂದಲ್ಲ ಒಂದು ಹಣ್ಣುಗಳಿಂದ ತುಂಬಿಯೇ ಇರುತ್ತದೆ. ಬಿರು ಬೇಸಿಗೆಯಿರಲಿ, ಜೊರಗುಡುವ, ಜಿಟ ಜಿಟಿಯ ಮಳೆಗಾಲವಿರಲಿ ಅಥವಾ ಕೊರೆವ ಚಳಿಗಾಲವಿರಲಿ ಮಲೆನಾಡಿನ ಗುಡ್ಡಗಳಲ್ಲಿ ಒಂದಲ್ಲ ಒಂದು ಜಾತಿಯ ಗಿಡಗಳು ಹಣ್ಣನ್ನು ಬಿಟ್ಟೇ ಬಿಡುತ್ತವೆ. ಸುಮ್ಮನೆ ಗುಡ್ಡದ ಗುಂಟ ನೀವು ಅಲೆದಾಟ ನಡೆಸಿದರೆ ಸಾಕು ಅಲ್ಲೆಲ್ಲ ಒಂದೆಷ್ಟು ಬಗೆ, ರುಚಿಯಾದ, ಸವಿಯ ಹಣ್ಣುಗಳು ಬೊಗಸೆ ತುಂಬಾ ಸಿಗಬಲ್ಲವು. ಇಂತಹ ಹಣ್ಣುಗಳಲ್ಲಿ ಮುಖ್ಯವಾದವುಗಳೆಂದರೆ
    ಬಿಕ್ಕೆ ಹಣ್ಣು(ಬುಕ್ಕೆ ಹಣ್ಣು), ನೇರಲೆ ಹಣ್ಣು, ಕುಂಟ ನೇರಲೆ ಹಣ್ಣು, ಗುಂಡು ನೇರಲೆ ಹಣ್ಣು, ಸಳ್ಳೆ ಹಣ್ಣು, ಇವುಗಳು ಮಳೆಗಾಲಕ್ಕೆ ಮೆರಗುಕೊಟ್ಟರೆ, ಬಿಳಿ ಮುಳ್ಳೆ ಹಣ್ಣು, ಕರಿ ಮುಳ್ಳೆ ಹಣ್ಣು (ಪರಗೆ), ಪೆಟ್ಲ ಹಣ್ಣು, ಜಂಬೆ ಹಣ್ಣು ಇವುಗಳು ಚಳಿಗಾಲವನ್ನು ಸುಂದರವಾಗಿಸುತ್ತವೆ. ಗುಡ್ಡೇ ಗೇರು, ಕವಳೀ, ಬಿಳಿ ಮುಳ್ಳಣ್ಣು, ಹೂಡ್ಲು ಹಣ್ಣು, ದಾಸಾಳ, ಹಲಿಗೆ, ಸಂಪಿಗೆ ಇತ್ಯಾದಿ ಹಣ್ಣುಗಳು ಬೇಸಿಗೆಯ ಬೆಡಗನ್ನು ಹೆಚ್ಚಿಸುತ್ತವೆ. ಆಗೆಲ್ಲ ಮಲೆನಾಡು ಅದರದೇ ವಿಸ್ಮತೆಯನ್ನು ಹೊಂದಿ ಸುತ್ತೆಲ್ಲ ಹರಡುತ್ತದೆ.

ಕೆಲವು ವೈಶಿಷ್ಟ್ಯತೆಗಳು

    ಮಲೆನಾಡಿನ ಹೆಸರಿನಲ್ಲೇ ವೈಶಿಷ್ಟ್ಯತೆಗಳು ಅಡಗಿವೆ. ಇಲ್ಲಿನ ಪ್ರತಿಯೊಂದು ನದಿ-ಗಿರಿ-ಕಾನು-ವಿಷಯ-ವಸ್ತು-ಮೃಗ-ಖಗ-ಸಸ್ಯ-ಸೊಬಗು ಇವೆಲ್ಲವುಗಳಿಗೂ ಅದರದೇ ಆದ ವೈಶಿಷ್ಟ್ಯ ಹಾಗೂ ಸೊಬಗನ್ನು ಹೊಂದಿವೆ.
    ಮಳೆಗಾಲದಲ್ಲಿಯೇ ಕಾಣ ಸಿಗುವ ಸೀತಾದಂಡೆ, ದ್ರೌಪದಿ ದಂಡೆ ಎಂಬ ಎರಡು ಬಗೆಯ ಪರಾವಲಂಬಿ ಸಸ್ಯಗಳ ಹೂಗೊಂಚಲು ಮಲೆನಾಡಿನ ಮಳೆಗಾಲಕ್ಕೆ ದೃಷ್ಟಯಕಾವ್ಯವನ್ನು ಕಟ್ಟುತ್ತವೆ. ಯಾವುದೋ ಮರಗಳಿಗೆ ಅಂಟಿಕೊಂಡು ಬೆಳೆಯುವ ಈ ಸಸ್ಯಗಳು ಪರಾವಲಭಿಯಾಗಿದ್ದರೂ ಸುಂದರ ಹೂಗಳನ್ನು ಅರಳಿಸಿಕೊಂಡು ಮಳೆಗಾಲವನ್ನು ಅದರಲ್ಲೂ ಹೆಚ್ಚಾಗಿ ಜಿಟಿ ಜಿಟಿ ಮಳೆಯನ್ನು ಸ್ವಾಗತಿಸುತ್ತ ನಿಂತಿರುತ್ತವೆ. ಈ ಹೂಗಳ ಬಣ್ಣವೂ ಅಷ್ಟೆ ಸುಂದರ. ಬಿಳಿ-ತಿಳಿ ಗುಲಾಬಿ ಬಣ್ಣಗಳ ಈ ಚಿಕ್ಕ ಚಿಕ್ಕ ಹೂ ಪಕಳೆಗಳು ದಂಡೆಗಳಂತಿರುವ ಪೋಣಿಸಿ ಮಾಲೆಯನ್ನಾಗಿ ಮಾಡಿ ಇಟ್ಟಂತಿರುವ ಹೂಗೊಂಚಲಿನ ಬುಡದ ಹೂಗಳು ಅರಳಿದ್ದರೆ ತುದಿಯ ಹೂಗಳು ಇನ್ನೂ ಮೊಗ್ಗಾಗಿ ಅರಳಲು ಕಾಯುತ್ತ ಕುಳಿತಿರುವ ದೃಶ್ಯ ನೋಡುಗರಿಗಂತೂ ಹಬ್ಬವನ್ನೇ ಉಂಟುಮಾಡುತ್ತವೆ.
    ಅಷ್ಟೇ ಅಲ್ಲ. ಮಲೆನಾಡಿನ ಹೆಜ್ಜೆ ಹೆಜ್ಜೆಗಳಲ್ಲಿ ಕೌತುಕತೆ ಕಾಲಿಗೆ ತೊಡರುತ್ತದೆ. ಪದೆ ಪದೆ ತೊಡಕುತ್ತದೆ. ನೋಡುಗ ಸ್ವಲ್ಪ ಭಾವನಾ ಜೀವಿಯಾಗಿದ್ದರೂ ಸಾಕು ಎಂತಹವನೆ ಆದರೂ ಕವಿಯಾಬಲ್ಲ, ಕವಿತೆ ಕಟ್ಟಬಲ್ಲ. ಮತ್ತೆ ಮತ್ತೆ ಭಾವಲೋಕವನ್ನು ಕವಿತೆಗಳ ಮೂಲಕ ತೆರೆದಿಡಬಲ್ಲ. ಇನ್ನು ಹಾಡುವ ಖಯಾಲಿಯಿದ್ದರಂತೂ ಜಗತ್ತಿನ ಪರಿವೆಯೇ ಇಲ್ಲದಂತೆ ಸುಂದರ ಹಾಡುಗಳಿಗೆ ದನಿಯಾಗಬಲ್ಲ. ಅಂತಹ ಸಾಮರ್ಥ್ಯ ಮಲೆನಾಡಿಗಿದೆ.
    ಮಲೆನಾಡು ಅದೆಷ್ಟೇ ವಿಸ್ಮಿತವಾದರೂ ನೋಡುಗರ ದೃಷ್ಟಿಯೂ ಅಗತ್ಯ. ನೋಡುಗನ ಮನಸ್ಥಿತಿಯಲ್ಲಿ ಪ್ರದೇಶಗಳ ವಿಶೇಷತೆಯೂ ಇರುತ್ತದೆ. ಕೆಲವರಿಗೆ ಯಾವುದೇ ಸ್ಥಳಗಳೂ ಬೆರಗು ಮೂಡಿಸಬಲ್ಲದು. ಮತ್ತೆ ಕೆಲವರಿಗೆ ಊಹೂಂ ಅವರನ್ನು ಜೋಗದ ಒಡಲಿಗೆ ಕರೆದೊಯ್ದರೂ ಇಷ್ಟೇನಾ.. ನೀರು ಮೇಲಿಂದ ಕೆಳಕ್ಕೆ ಬೀಳ್ತದೆ.. ನಾವು ಮೂತ್ರ ಮಾಡಿದರೆ ಬೀಳಲ್ಲವಾ.. ಅನ್ನುವ ಮಾತುಗಳನ್ನು ಆಡುತ್ತಾರೆ.
    ಮಲೆನಾಡೂ ಅಷ್ಟೆ ನಮ್ಮೊಳಗಿನ ವಿಸ್ಮಯದ ಕಣ್ಣನು ತೆರೆದು ನೋಡಿದರೆ ಬಹಳ ಸುಂದರ. ಆಗ ಮಾತ್ರ ಸುತ್ತಲ ಸುಂದರ ವೈಭೋಗಗಳು ಮನದಣಿಸುತ್ತವೆ ಅಲ್ಲವೇ..

Tuesday, December 11, 2012

ಎಲ್ಲ ಮರೆತಿರುವಾಗ (ಕಥೆ ಭಾಗ -7)

ಎಲ್ಲ ಮರೆತಿರುವಾಗ


ಭಾಗ -7

(ಇಲ್ಲಿಯವರೆಗೆ : ಮೆಂಟಲ್ ಆಗಿದ್ದ ಜೀವನ್ ರಚನಾ ಕೈಗೆ ಸಿಕ್ಕಿ ಸರಿಯಾದ.. ಅಂದುಕೊಂಡಂತೆ ಹಾಡುಗಾರನಾದ.. ನೀಯಾಕೆ ಹೀಗಾಗಿದ್ದೆ ಗೆಳೆಯಾ ಎಂದು ಕೇಳಿದ ರಚನಾಗೆ ತನ್ನ ಕಥೆಯನ್ನು ಹೇಳಲು ಪ್ರಾರಂಭ ಮಾಡಿದ್ದ ಆತ..ಮುಂದೆ.. ಓದಿ..)
-----------------
ನಮ್ಮೂರು ಮಲೆನಾಡಿನ ಪುಟ್ಟ ಹಳ್ಳಿ. ನಿಂಗೆ ಗೊತ್ತಲ್ಲ ರಚನಾ ನಿಮ್ಮೂರಿನ ತರಹವೇ. ಹಸಿರು ಗಿರಿ, ಗುಡ್ಡ, ಬೆಟ್ಟ, ಅಡಿಕೆ ತೋಟ, ಕರಡದ ಬ್ಯಾಣ.. ಇವೆಲ್ಲ ನಮ್ಮೂರಿನ ವಿಶೇಷ ಗುಣಲಕ್ಷಣಗಳು. ಅಪ್ಪ-ಅಮ್ಮ ಟಿಪಿಕಲ್ ಶಿರಸಿ ಭಾಗದ ಹವಿಗರು. ನಮ್ಮೂರಿನಲ್ಲಿ 8-10 ಮನೆಗಳಿವೆ. ನಮ್ಮೂರಿನಿಂದ ಮುಖ್ಯ ಪಟ್ಟಣ ಶಿರಸಿಗೆ ಬರಬೇಕೆಂದರೆ ಅನಾಮತ್ತು 6-8 ಕಿ.ಮಿ ನಡೆದು, ಬಸವಳಿದು ಬರುವ ಬಸ್ಸಿಗೆ ಕಾದು ಕಾದು ಸುಸ್ತಾಗಿ ಬರಬೇಕು. ಅಂತಹ ಹಳ್ಳಿ.
ನಮ್ಮೂರಿನ ಸುತ್ತ ಮುತ್ತೆಲ್ಲ ಕಗ್ಗಾಡು. ಕಗ್ಗಾಡೆಂದರೆ ಅಲ್ಲಿ ಕಡವೆ, ಕಾಡೆಮ್ಮೆ, ಕಪ್ಪು ಹುಲಿ, ಚಿರತೆ, ಹಂದಿ ಇವೆಲ್ಲ ಕಾಮನ್ನುಗಳು. ನಾನು ಪ್ರೈಮರಿ ಓದಿದ್ದೆಲ್ಲ ನಮ್ಮೂರು ಬಳಿಯ ಹಿ.ಪ್ರಾ. ಶಾಲೆಯಲ್ಲಿ. ಆಮೇಲೆ ನೆಂಟರ ಮನೆಯಲ್ಲಿ ಉಳಿದು ಹೈಸ್ಕೂಲು, ಪಿಯುಸಿಯನ್ನೂ ಮುಗಿಸಿದೆ. ಸರಿ, ಮುಂದೆ ಓದಬೇಕೋ ಬೇಡವೋ ಎಂಬ ಗೊಡವೆಯಲ್ಲಿದ್ದಾಗ ಹಲವರು ಡಿಗ್ರಿ ಮಾಡು ಅಂದರು. ಮನೆಯಲ್ಲಿ ಹರಪೆ ಬಿದ್ದು ಡಿಗ್ರಿಗೆ ಜಾಯಿನಾದೆ. ಅಲ್ಲಿಂದ ಬದಲಾಯಿತು ನನ್ನ ಬದುಕು. 
ನಾನು ಡಿಗ್ರಿಗೆ ಬರುವ ವೇಳೆಗೆ ಜಗತ್ತೆಂದರೆ ಹಾಗೆ, ಹೀಗೆ ಅಂತೆಲ್ಲ ಕನಸು ಕಂಡಿದ್ದೆ. ಡಿಗ್ರಿಯ ನಂತರವೇ ಜಗತ್ತಿನ ಬವಣೆ ಅರ್ಥವಾಗಿದ್ದು ನನಗೆ. ನಾನಂದುಕೊಂಡಂತಿಲ್ಲ ಜಗತ್ತು. ಅದು ಸಮ್ ಥಿಂಗ್ .. ಬೇರೆಯ ಥರಾ ಅಂದುಕೊಂಡೆ.. ನಿಧಾನವಾಗಿ ಬದಲಾಯಿತು ಬದುಕು.
ಇಷ್ಟರ ಜೊತೆಗೆ ಇನ್ನೊಂದೆರಡು ವಿಷಯ ಹೇಳಲೇ ಬೇಕು ನಿನಗೆ. ನಮ್ಮ ಮನೆಯ ಕುರಿತು ಒಂದು ವಿಷಯ ಆದರೆ ನಮ್ಮೂರಿನ ಕುರಿತು ಇನ್ನೊಂದು.  ನಮ್ಮ ಮನೆ.. ಎಲ್ಲ ಹವ್ಯಕರ ಮನೆಗಳಂತೆಯೇ ಮಧ್ಯಮವರ್ಗದ ಜನ. ಆರಕ್ಕೆ ಏರುವ ಕನಸು, ಮೂರಕ್ಕಿಳಿಯದಂತೆ ಜೀವನ ನಡೆಸುವ ಸರ್ಕಸ್ಸು.. ಮನೆಯ ಸದಸ್ಯರಿಗೆ ತಂದು ಹಾಕಲು ಒದ್ದಾಡುವ ಅಪ್ಪ. ಇದ್ದಿದ್ದರಲ್ಲೇ ಮೃಷ್ಟಾನ್ನ ಭೋಜನ ತಯಾರಿಸುವ ಅಮ್ಮ. ಹೈಸ್ಕೂಲು ಓದಲು 6-8 ಕಿ.ಮಿ ನಡೆಯುವ ತಂಗಿ. ಇದು ನಮ್ಮ ಆಗಿನ ಬದುಕು ಅಂದರೆ ನೀನು ನಂಬ್ತೀಯಾ ರಚನಾ?
ನಾನಂತೂ ಬಿಡು ಹುಡುಗ. ನನ್ನ ತಂಗಿಯ ಪಾಡು ಬಹಳ ಕೆಟ್ಟದಾಗಿತ್ತು. ಜೀವನ ಆ ಸಂದರ್ಭದಲ್ಲಿ ಅದೆಷ್ಟು ಕಷ್ಟವನ್ನು ನೀಡಿತೋ. ಪ್ರೈಮರಿ ಸ್ಕೂಲು ಓದಿದ ನಂತರ ಹೈಸ್ಕೂಲು ಓದಬೇಕಲ್ಲ. ಹೇಗೆ ಓದಿಸಲಿ ಅಂತ ತಿಳಿಯದೆ ಅಸಹಾಯಕನಾಗಿ ಕೈಚೆಲ್ಲಿದ್ದ ಅಪ್ಪ.  ಇಲ್ಲ ಓದಿಸೋಕೆ ಸಾಧ್ಯವೇ ಇಲ್ಲ ಅಂತ ಖಂಡತುಂಡವಾಗಿ ಹೇಳಿಯೂಬಿಟ್ಟಿದ್ದ. ಪಾಪ ತಂಗಿ. ಓದಬೇಕು ಅಂತ ಅಮ್ಮನ ಬಳಿ ಕಾಡಿ ಬೇಡಿದಳು. ಅಮ್ಮ ಅದ್ಯಾವ ಸಾಮಾನು ಡಬ್ಬದಲ್ಲಿ ಯಾವತ್ತು ಹುದುಗಿಸಿ ಇಟ್ಟಿದ್ದಳೋ, ಾ ಹಣವನ್ನು ಕೊಟ್ಟು ಹೈಸ್ಕೂಲಿಗೆ ಸೇರಿಸಿದ್ದಳು.

ಹೈಸ್ಕೂಲಿಗೆ ಹೋದರೆ ಮುಗಿಯಿತಾ? ಯುನಿಫಾರ್ಮ್ ಬೇಡವಾ, ಪಟ್ಟಿ, ಪುಸ್ತಕಗಳು ಬೇಡವಾ..? ಶುರುವಾಯಿತಲ್ಲ ಸಮಸ್ಯೆಗಳ ಸರಮಾಲೆ.. ಆಕೆ ನಮ್ಮೂರಿನಲ್ಲೇ ಇದ್ದ ಅವಳಿಗಿಂತ ಒಂದೆರಡು ವರ್ಷದ ದೊಡ್ಡ ವಾರಿಗೆಯಲ್ಲಿ ಅಕ್ಕನಾಗಬೇಕಾದ ಹುಡುಗಿಯಿಂದ ಹಳೆಯ ಪುಸ್ತಕಗಳನ್ನು ಪಡೆದಿದ್ದೂ ಆಗಿದೆ. ಜೊತೆಗೆ ಆಕೆಯೇ ಬಳಸಿ ಬಿಟ್ಟ ಯುನಿಫಾರ್ಮನ್ನೂ ಕೂಡ. ವಿಷಿತ್ರವೆಂದರೆ ಆ ಯುನಿಫಾರ್ಮ್ ಕೊಡುವಾಗಲೂ ಸಾಕಷ್ಟು ಬಯ್ದು ಕೊಟ್ಟಿದ್ದಳಂತೆ. 
ಯುನಿಫಾರ್ಮು ಡ್ರೆಸ್ಸು, ಹಳೆಯದು ಹೇಗಿತ್ತು ಅಂತೀಯಾ.. ಬಿಳಿಯ ಅಂಗಿ, ನೀಲಿ ಸ್ಕರ್ಟು. ಆ ಸ್ಕರ್ಟು ಕೂಡ ಸೊಂಟದ ಬಳಿ ಹರಿದುಹೋಗಿತ್ತು. ಹಾಕಿಕೊಂಡರೆ ಹಾಗೆಯೇ ಬಿದ್ದು ಬಿಡುತ್ತದೆಯೇನೋ ಎನ್ನಿಸುತ್ತಿತ್ತು. ಅದಕ್ಕೆ ಪಿಟ್ಟಾಗಿ ಪಿನ್ನನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದಳು ನನ್ನ ತಂಗಿ.
ಬಿಡು ಬವಣೆಯ ಕಾಲ ಅದು. ಆದರೂ ಸ್ಪೋರ್ಟ್ಸ್ ಅಂದರೆ ಆಗೆ ಎಂದೂ ಮುಂದು. ಓಡೋಕೆ ಬರ್ತಿರಲಿಲ್ಲ. ಆಡೋಕೆ ಬರ್ತಿರಲಿಲ್ಲ. ಮನೆಯಲ್ಲಿ ಪ್ರತಿದಿನ ಬೆಳಗಿನ ತಿಂಡಿ ಲೇಟಾಗುತ್ತಿತ್ತು. ಹೈಸ್ಕೂಲಿನ ಟೈಮಿಗೆ ಹೋಗಿ ತಲುಪಬೇಕಲ್ಲ. ಗಬಗಬನೆ ತಿಂಡಿ ತಿಂದು ವೇಗವಾಗಿ ನಡೆಯುತ್ತಿದ್ದಳು ನನ್ನ ತಂಗಿ. ಆಕೆ ನಡೆಯುವ ವೇಗ ಹೇಗಿತ್ತು ಅಂದ್ರೆ ಸಾಮಾನ್ಯರು ಅವಳ ಸರಿಸಮಕ್ಕೆ ನಡೆಯಬೇಕೆಂದರೆ ತುಸು ಓಡಲೇಬೇಕಿತ್ತು. ಅದನ್ನೇ ಅವಳ ಶಿಕ್ಷಕರೊಬ್ಬರು ಗುರುತಿಸಿ, ಪ್ರೋತ್ಸಾಹವನ್ನೂ ನಿಡಿದರು. ಅದಕ್ಕೆ ತಕ್ಕಂತೆ ಆಕೆ ಸ್ಥಳೀಯ,ಹೋಬಳಿ, ಜಿಲ್ಲಾಮಟ್ಟ, ವಲಯಮಟ್ಟಗಳಲ್ಲೂ ಗೆದ್ದು ರಾಜ್ಯಮಟ್ಟದವರೆಗೆ ಹೋಗಿಬಂದಿದ್ದಳು ಎಂಬುದನ್ನು ನಂಬುತ್ತೀಯಾ? ಆದರೂ ಚನ್ನಾಗಿ ಓದಿಯೂ ಎಸ್ಸೆಸ್ಸೆಲ್ಸಿಯಲ್ಲಿ ಒಂದು ಸಬ್ಜೆಕ್ಟಿನಲ್ಲಿ ಫೇಲಾದಳು.
ಬಿಡು ಛಲದಂಕಮಲ್ಲಿ ಆಕೆ. ಮತ್ತೆ ಪಾಸಾಗಿ, ಎಕ್ಸಟರ್ನಲ್ ಆಗಿ ಪಿಯು ಪಾಸು ಮಾಡಿ, ನಂತರ ಡಿಗ್ರಿಯನ್ನೂ ಮುಗಿಸಿ ಬಯಸಿದವನನ್ನೇ ಮದುವೆಯಾಗಿ ಈಗ ಆರಾಮಾಗಿದ್ದಾಳೆ. ಯಾಕೆ ಈ ವಿಷಯ ಹೇಳಿದೆ ಅಂದರೆ ನನ್ನ ಮನೆಯ ಹಾಗೂ ನನ್ನ ತಂಗಿಯ ವಿಷಯಗಳನ್ನು ಹೇಳಿದ ಹೊರತು ನನ್ನ ಬಗ್ಗೆ ಹೇಳಿದರೆ ಸರಿಯಾಗಿ ಅರ್ಥವಾಗೋಲ್ಲ.
ಇನ್ನು ನನ್ನ ವಿಷಯಕ್ಕೆ ಬರ್ತೀನಿ. ನಾನು ಕಾಲೇಜು ಸೇರಿದ ಸಮಯದಲ್ಲಿ ನಮ್ಮೂರಿನ ಪರಿಸ್ಥಿತಿ ಹೇಗಿತ್ತೆಂದರೆ ನಮ್ಮೂರಿನಿಂದ ನಾನೊಬ್ಬನೆ ಪ್ರತಿದಿನ ಶಿರಸಿಗೆ ಹೋಗಿ ಬರುತ್ತಿದ್ದೆ. ಆದ್ದರಿಂದ ಇಡೀಯ ನಮ್ಮೂರಿಗರು ತುರ್ತಾಗಿ ಏನಾದರೂ ತರಬೇಕಿದ್ದಲ್ಲಿ ನನ್ನನ್ನು ಸಂಪರ್ಕ ಮಾಡುತ್ತಿದ್ದರು. ಬೆಳಿಗ್ಗೆ ಎಷ್ಟೇ ಬೇಗನೆ ಎದ್ದು ತಯಾರಾದರೂ 6-8 ಕಿಮಿ ನಡೆದು ಕಾಲೇಜು ತಲುಪುವ ವೇಳೆಗೆ ಗಂಟೆ 11 ಆಗುತ್ತಿತ್ತು. ಗೆಳೆಯರೆಲ್ಲ ರೇಗಿಸುತ್ತಿದ್ದರು. ನಿನ್ನ ಮನೆಯಲ್ಲಿ ಸೂರ್ಯ 11ಕ್ಕೆ ಬರ್ತಾನಾ ಅಂತ.
ವಿಚಿತ್ರ ನೋಡಿ ಸುತ್ತ ದಶ ದಿಕ್ಕುಗಳೂ ಕಾಡು ಹಾಗೂ ಗುಡ್ಡಗಳಿಂದ ಆವೃತವಾಗಿದ್ದ ನಮ್ಮೂರಿಗೆ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದುದು ಗಂಟೆ 11ಕ್ಕೆ. ಅಲ್ಲಿಯವರೆಗೂ ನಮ್ಮೂರನ್ನು ಇಬ್ಬನಿ ತಬ್ಬಿ ಆಳುತ್ತದೆ. ಆಗಲೂ.. ಈಗಲೂ.
ಸರಿ ನನ್ನ ಕಾಲೇಜು ಬದುಕಿನ ಕುರಿತು ಸ್ಪಲ್ಪವಾದರೂ ಹೇಳಬೇಕು. ಸ್ಪಲ್ಪವೇನು ಜಾಸ್ತಿಯೇ ಹೇಳಬೇಕು. ಯಾಕಂದರೆ ನನ್ನ ಬದುಕಿನಲ್ಲಿ ಔನ್ನತ್ಯ ಹಾಗೂ ಪಾತಾಳ ಎರಡನ್ನೂ ಕಾಣಿಸಿದ್ದು ಇದೇ ಕಾಲೇಜು ಬದುಕು ಎಂದರೆ ನೀನು ನಂಬಲೇ ಬೇಕು ರಚನಾ.
11 ಗಂಟೆಗೆ ಕಾಲೇಜಿಗೆ ಬರುತ್ತಿದ್ದೆನಾದ್ದರಿಂದ ಮೊದಲ ಎರಡು ಕ್ಲಾಸುಗಳು ಬಂಕಾಗಿರುತ್ತಿದ್ದವು. ಮತ್ತೆ ಮದ್ಯಾಹ್ನ 3ಅಥವಾ4ಕ್ಕೆ ಹೊರಡಲೇ ಬೇಕಿತ್ತು. ಇಲ್ಲವಾದಲ್ಲಿ ನಾನು ಕತ್ತಲೆಯಲ್ಲಿ ಕಾಡುಪಾಲಾಗುತ್ತಿದ್ದೆ. ಹೀಗಾಗಿ ಸಂಜೆಯೂ ಒಂದೆರಡು ಕ್ಲಾಸು ಬಂಕು. ನನ್ನ ಹಣೆಬರಹಕ್ಕೆ ನನಗೆ ದೋಸ್ತರ ದಂಡೂ ಬಹಳ ಇತ್ತು ನೋಡು.  ಆ ಕಾರಣಕ್ಕಾಗಿಯೇ ನಾನು ಅವರ ನಡುವೆ ಗೇಲಿಗೂ ತುತ್ತಾಗಿದ್ದೆ.
ಮೊದಲಿನಿಂದಲೂ ನಾನೊಂಥರಾ ಮೂಡಿ ಹುಡುಗ. ಎಲ್ಲೂ ತೆರೆದುಕೊಳ್ಳದ, ನನ್ನಷ್ಟಕ್ಕೆ ನಾನಿರುವ, ನನ್ನಲ್ಲೆ ನಾನು ಬಚ್ಚಿಟ್ಟುಕೊಳ್ಳುವ ಜಾಯಮಾನದವ. ಆ ಕಾರಣದಿಂದಲೇ ನನಗೆ ಗೊತ್ತಿಲ್ಲದ ನನ್ನೊಳಗಿನ ಅನೇಕ ವೈಶಿಷ್ಟಯಗಳು ಸುಪ್ತವಾಗಿದ್ದವು. ಈಗ ನನ್ನ ಕೈ ಹಿಡಿದಿರುವ ಸಂಗೀತವೂ ಅದರಲ್ಲಿ ಒಂದು.
ನಾನು ಹಾಡಬಲ್ಲೆ, ನಟನೆ ಮಾಡಬಲ್ಲೆ, ಅಪರೂಪಕ್ಕೆ ಬರೆಯಬಲ್ಲೆ ಎಂಬ ಯಾವ ಸಂಗತಿಗಳೂ ನನ್ನಿಂದ ಹೊರಬಂದಿರಲಿಲ್ಲ. ಆದರೆ ಕಾಲೇಜು ಲೈಫು ಅದಕ್ಕೊಂದು ವೇದಿಕೆಯಾಯಿತು.
ಈ ಸಂದರ್ಭದಲ್ಲೆ ನನ್ನ ಲೈಫಿನಲ್ಲಿ ಟರ್ನಿಂಗ್ ಪಾಯಿಂಟೂ ಬಂತು...

(ಮುಂದಿನದು.. ಇನ್ನೊಮ್ಮೆ...)

Monday, December 10, 2012

ನೀನು ಇಲ್ಲದ ವೇಳೆ : ಪ್ರೇಮ ಪತ್ರ-3

ಪ್ರೇಮ ಪತ್ರ-3

ನೀನು ಇಲ್ಲದ ವೇಳೆ

         ಅದೆಷ್ಟು ಸಹಸ್ರ ಸಾರಿ ನಾನು ನಿನ್ನನ್ನು ಮಿಸ ಮಾಡ್ಕೊಂಡಿದ್ದೀನಿ ಗೊತ್ತಾ..! ನಿನ್ನ ನೆನಪು ಬಂದಾಗಲೆಲ್ಲ ಜೊತೆಯಲ್ಲಿ ನೀನಿರಬೇಕಿತ್ತು ಕಣೆ ಅಂದ್ಕೊಂಡಿದ್ದೀನಿ. ಆಗೆಲ್ಲ ನಿನ್ನ ನೆನಪು ನನ್ನ ಕೈ ಹಿಡಿದಿದೆ.
    ಬೆಳಗಿನ ಮುಂಜಾನೆಯ ಸಂದರ್ಭದಲ್ಲಿ ಜಿಮ್ಮಿನಲ್ಲಿ ವರ್ಕೌಟ್ ಮಾಡುವಾಗ, ಸೆಮಿಸ್ಟರ್ ಮುಗಿದ ನಂತರ ಸಿಗುವ 15-20 ದಿನಗಳ ಬಿಡುವಿನ ವೇಳೆಯಲ್ಲಿ, ಸಂಜೆಯ ತಿಳಿ ಬೆಳಕಿನ ಓಡಾಟದಲ್ಲಿ, ಕಲ ಕಲನೆ ಹರಿಯುವ ಅಘನಾಶಿನಿಯ ಆಳದೊಡಲಿಗೆ ಧುಡುಮ್ಮನೆ ಜಿಗಿಯುವ ವೇಳೆಯಲ್ಲಿ, .. ಇನ್ನೂ ಅದೆಷ್ಟೋ ವೇಲೆಯಲ್ಲಿ ನಂಜೊತೆ ನೀನೂ ಇದ್ದಿದ್ರೆ ಅದೆಷ್ಟು ಹಿತವಾಗಿರ್ತಿತ್ತು.. ನನ್ನ ಜೊತೆ ನೀನು ಹೆಜ್ಜೆ ಹಾಕಿದ್ರೆ ಅದೆಷ್ಟು ಸೊಗಸಾಗಿತರ್ಿತ್ತು ಅಂತೆಲ್ಲಾ ಅಂದುಕೊಂದಿದ್ದೇನೆ.
    ನೀನು ನನ್ನ ಮನದಾಳದೊಳಗೆಲ್ಲೋ ಬಿಲ ತೋಡಿಕೊಂಡು ಕುಳಿತಿದ್ದೀಯಾ. ಹಾಗಾಗಿಯೇ ನೀನು ಬರಿ ನೆನಪಿಗೆ ಮಾತ್ರ ಬರ್ತೀಯಾ.. ಹಲೋ ಅಂದ್ರೆ ಮಾತಿಗೆ ಸಿಗೋಲ್ಲ.. ಸುಮ್ ಸುಮ್ನೆ `ಕಾಲ್ ಮಾಡು' ಅಂತೀಯಾ.. ಕಾಲ್ ಮಾಡಿದ್ರೆ ವಿಷಯವೇ ಇಲ್ಲ.. ಬರೀ ಕಾಡು ಹರಟೆ. ಮತ್ತೆ... ಮತ್ತೆ.. ಅನ್ನುವ ಶಬ್ದ ನಮ್ಮ ಒಂದು ಸಾರಿಯ ಸಂಬಾಷಣೆಯಲ್ಲಿ ಅದೆಷ್ಟೋ ಸಹಸ್ರ ಸಾರಿ ಇಣುಕಿ ಹೋಗುತ್ತೆ ಅಲ್ವಾ? ಬಿಡು.. ನೀನು ಅರಾಮಾಗಿ ಇದ್ದೀಯೇನೋ.. ನನಗೆ ನೆಮ್ಮದಿಯಿಂದೆ ನಿದ್ದೆ ಮಾಡೋಕಾದ್ರೂ ಬಿಡ್ತೀಯಾ ..? ಇಲ್ಲ.. ಕನಸ್ಸಿನಲ್ಲಿ ಬಂದುಯ ಕಾಡ್ತೀಯಾ.. !! ನಿಂಗೇನೋ ತುಂಟಾಟ. ತುಂಟ, ತಲರ್ೆ ಕ್ಷಣ. ಆದರೆ ನನ್ನ ಮನದ ಬೇಗುದಿ ನಿಂಗೆ ಹೇಗೆ ಅರ್ಥ ಆಗ್ಬೇಕು ಹೇಳು..
    ಆ ನಿನ್ನ ನಗು.. ಮನಸಾರೆ ಸಿನೆಮಾದಲ್ಲಿ ಐಂದ್ರಿತಾ ರೇ ತಿರುವುತ್ತಿದ್ದಳಲ್ಲ ಅಂತಹ ಮುಂಗುರುಳು ತಿರುಗಿಸುವಿಕೆ.. ಸುಮ್ಮನೆ ನಕ್ಕಂತೆ ಮಾಡುವ ಬಗೆ.. ಸಿಟ್ಟು ಬಂದಾಗ ರಂಗೇರುವ ಕೆನ್ನೆ ಇವೆಲ್ಲವನ್ನೂ ನಾನು ಅದೆಷ್ಟು ಮಿಸ್ ಮಾಡ್ಕೊಳ್ತಾ ಇದ್ದೀನಿ ಗೊತ್ತಾ.. ನಿನ್ನ ಬಯಕೆ ತುಂಬಿದ ಕಣ್ಣುಗಳನ್ನು ನನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ. ಅದಕ್ಕಾಗಿ ಕಾತರಿಸಿ ಕುಳಿತಿದ್ದೇನೆ..
    ದೋಸ್ತರೆಲ್ಲಾ ನಿನ್ನ ನೆನಪಿನ ಬಗ್ಗೆ ನಾನು ಹೇಳುವುದನ್ನು ಕೇಳಿ ನಗ್ತಾ ಇದ್ದಾರೆ. ಆದರೆ ಅವರೂ ಲವ್ ಮಾಡಿದವರೇ ಅಲ್ವಾ.. ಅವರ ಸಂಗತಿ ಬಂದಕೂಡ್ಲೇ ಗಂಭೀರವಾಗೋದನ್ನು ನೋಡಬೇಕು. ಮಜವಾಗಿರುತ್ತದೆ. ಹೇಯ್ ಇನ್ನೊಂದ್ವಿಷ್ಯ, ನಾನು ಕವನ ಬರೀದೆ ಅದೆಷ್ಟು ದಿನ ಆಗಿತ್ತು ಗೊತ್ತಾ. ಬಹು ದಿನಗಳೇ ಸರಿದಿದ್ದವು. ನಿನ್ನ ನೆನಪು ಸವಿ ಸುಖದ ಸಾನ್ನಿಧ್ಯ, ಸಾಂಗತ್ಯ ನನ್ನನ್ನು ಮತ್ತೆ ಮತ್ತೆ ಬರೆಯಲು ಪ್ರೇರೇಪಿಸುತ್ತಿದೆ. ಕವನ ಕಟ್ಟುವಂತೆ ಮಾಡುತ್ತಿದೆ.
    ಗೆಳತೀ, ಯಾಕ್ಹೀಗೆ..?
    ನೀನೆಂಬ ಭೃಂಗವೆದೆಯ
    ಗೂಡಿಗೆ ಕಿಂಡಿಕೊರೆದು
    ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲಾ...!!

ಹೀಗಾಗಿಬಿಟ್ಟಿದೆ ನನ್ನ ಬದುಕು.
    ಓ ಹಲ್ಕಟ್ಟು ಕೂಸೆ.. ಯಾವತ್ತು ಮತ್ತೆ ನನ್ನೆದುರು ಬರ್ತೀಯಾ? ಅದ್ಯಾವಾಗ ಬಂದು ನನ್ನ ಬಳಿ ಮಾತಾಡ್ತೀಯಾ ಅಂತ ಕಾದಿದ್ದೇನೆ.ನಿನ್ನನ್ನ ಭೇಟಿ ಮಾಡಿ ಮಾತಾಡುವ ಸವಿ ಘಳಿಗೆ ಅದೆಷ್ಟು ಬೇಗ ಬರುತ್ತೋ.. ಅಂತ ನನ್ನ ಕಣ್ಣ ಮುಂದೆರಡು ಭೂತಗನ್ನಡಿಗಳನ್ನು ಸಿಕ್ಕಿಸಿಕೊಂಡು ಕಾಯುತ್ತಿದ್ದೇನೆ. ಸವಿ ನೆನಪುಗಳು ಕರಗುವುದರೊಳಗೆ ಸಿಕ್ಕಿಬಿಡು ಮಾರಾಯ್ತಿ.
    ನಿಜ ಹೇಳಬೇಕೆಂದರೆ ನನ್ನ ಬದುಕಿಗೆ ನೀನೆಂಬುದು ಚೈತನ್ಯದ ಚಿಲುಮೆ. ನೀನು ಸಿಕ್ಕಾಗಲೆಲ್ಲ ನನ್ನ ಬದುಕೆಂಬ ಮೊಬೈಲಿನ ಬ್ಯಾಟರಿ ರೀಚಾರ್ಜ್ ಆದಹಂಗೆ ಅನ್ನಿಸುತ್ತದೆ. ನೀನು ಬಹಳ ಕಾಲ ಸಿಕ್ಕದೇ ಇದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ನೀನು ಸಿಕ್ಕಿಲ್ಲ ಅಂದರೆ ಯಾಕೋ ದಿನವೆಂಬದು ಯಾವಾಗಲೂ ಇಳಿ ಸಂಜೆಯ ಥರಾ ಕಾಣಿಸ್ತದೆ ನೋಡು. ನನ್ನ ಪಾಲಿಗೆ ಖುಷಿ ಕೊಡುವ ಅಘನಾಶಿನಿ ನದಿಯೂ ನನ್ನ ಬೇಸರ ಕಂಡು ಬೇಜಾರು ಮಾಡಿಕೊಳ್ಳುತ್ತದೆ. ಅದೇ ನೀನು ಸಿಕ್ಕ ದಿನ ಮಾತ್ರ ನನ್ನ ಉಲ್ಲಾಸ ಕಂಡು ತನಗೆ ಏನೋ ಆಯ್ತೆಂಬಂತೆ ಮತ್ತಷ್ಟು ಜುಳು ಜುಳು ಸದ್ದಿನೊಂದಿಗೆ ಕಾಕಾಲ ಗದ್ದೆಯ ಕಡೆಗೆ ನನ್ನ ಅಘನಾಶಿಸಿ ಹರಿದುಹೋಗುತ್ತಾಳೆ.
    ಇರ್ಲಿ ಬಿಡು. ನಾನೆಂದರೆ ಹೀಗೆ. ಭಾವುಕ. ನೀನು ಸಿಕ್ಕಿದ ಕೂಡಲೇ ಸೆಮಿಸ್ಟರ್ ರಜೆಯಲ್ಲಿ ಪಡೆದುಕೊಂಡ ಎಲ್ಲ ಅನುಭವಗಳ ಮೂಟೆಯನ್ನು ನಿನ್ನೆದುರಿಗೆ ಬಿಚ್ಚಿಡಬೇಕು. ದೇವಿಕೆರೆ ಏರಿಯ ಸಿಂಡೀಕೆಟ್ ಬ್ಯಾಂಕಿನ ಎದುರು ಸಿಗ್ತದಲ್ಲಾ ಬೇಯಿಸಿದ ಸೇಂಗಾ.. ಅದನ್ನು ತಿನ್ನುತ್ತಾ ನೀನು ಕೇಳಬೇಕು. ಬೇಗನೆ ಸಿಗು... ನಾನಂತೂ ಕಾಯ್ತಾ ಇರ್ತೀನಿ... ಅಲ್ಲಿಯವರೆಗೂ
    ನೀನೆಂದರೆ ನನ್ನೊಳಗೆ..
    ಏನೋ ಒಂದು ಸಂಚಲನ..

ಈ ಹಾಡು ಗುನುಗುತಾ ಇರ್ತೀನೀ.. ಬೇಗ ಬಾ ಪ್ಲೀಸ್..

ಇಂತಿ ನಿನ್ನವ
ಸೃಜನ

Sunday, December 9, 2012

ಹರಿಯುತಿರಲಿ ಅಂತರಗಂಗೆ

ಹರಿಯುತಿರಲಿ ಅಂತರಗಂಗೆ


ಹರಿಯುತಿರಲಿ ಎಂದೂ ಹೀಗೆ
ಬಾಳ ಅಂತರಗಂಗೆ
ಬತ್ತದಿರಲಿ ಕೊನೆಯ ತನಕ
ಅಂತರಾಳದ ತುಂಗೆ ||1||

ಕೊನೆಯ ತನಕ ತುಂಬಿಬರಲಿ
ಹೊಸತು ಹರಿವ ನೀರು
ಕೊಚ್ಚಿ ಕೊಚ್ಚಿ ಹೋಗುತಿರಲಿ
ಅಂತರಂಗದ ಕೆಸರು ||2||

ಈ ಗಂಗೆಗೆ ಉಸಿರಾಗಲಿ
ಭುವಿ-ಭಾನು-ಚೇತನಾ
ನೋವು-ದುಃಖ-ಬವಣೆಯೆಡೆಗೆ
ಮಿಡಿಯುತಿರಲಿ ಸ್ಪಂದನಾ ||3||

ಗಂಗೆಯೊಳಗೆ ಜನಿಸಿಬರಲಿ
ಶತ ಕನಸಿನ ಮೀನುಮರಿ
ಕನಸೆಲ್ಲವೂ ನನಸಾಗಲಿ
ಕರಗದಿರಲಿ ಜಾರಿ ||4||

ನಿಲ್ಲದಿರಲಿ ಅಂತರಗಂಗೆ
ಎಂದೂ ಹರಿಯುತಿರಲಿ
ಭಾವ-ಜೀವ-ಸ್ಫುರಿಸುತಿರಲಿ
ಎಂದೂ ನಲಿಯುತಿರಲಿ ||5||

ಒಂದು ಅಂತರಾತ್ಮದ ಕವಿತೆ.. ಭಾವಗಳು ಸ್ಪುರಿಸಿ ಕವಿತೆಯಾಗಿ ಹೊರ ಬರುತ್ತವೆ.. ಅಂತಹ ಭಾವನಾತ್ಮಕ ದಿನದಲ್ಲಿ ಬರೆದ ಕವಿತೆ ಇದು.
ದಂಟಕಲ್ಲಿನಲ್ಲಿ ಬರೆದ ಈ ಕವಿತೆ  ಹುಟ್ಟಿದ್ದು 28-11-2007ರಂದು

Saturday, December 8, 2012

ಉ.ಕ ರೋಧನ : ಭಾಗ-3

ಉ.ಕ ರೋಧನ ಭಾಗ-3

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಗೂಡಿನ ವ್ಯಥೆ

ನನ್ನ ಉ,ಕವೊಂದು ಬೆಚ್ಚನೆಯ ಗೂಡು
ಈಗೀಗ ಆಗುತ್ತಿದೆ ಕಸದ ಬೀಡು|
ಒಡಲೊಳಗೆ ಕುದಿಯುತ್ತಿದೆ ಕೈಗಾ
ನಾಶಮಾಡಲು ಸಿದ್ಧವಾಗುತ್ತಿದೆ ಬೇಗ||

ಗುಬ್ಬಿಯ ಮೇಲೆ

ನನ್ನ ಉ.ಕವೊಂದು ಹಕ್ಕಿಮರಿ ಗುಬ್ಬಿ
ಯಾರೂ ಆದರಿಸಿಲ್ಲ ಬಾಚಿ ಹಿಡಿದು ತಬ್ಬಿ|
ತ್ಯಾಗಿಯಿದು, ಎಂದೆಂದೂ ಹಿಡಿದಿಲ್ಲ ಶಸ್ತ್ರ
ತೂಗುತಿದೆ ಇದರ ಮೇಲೆ ಯೋಜನೆಗಳ ಬ್ರಹ್ಮಾಸ್ತ್ರ||

ಪ್ರಾಣ-ಹರಣ

ನನ್ನ ಉ.ಕವೊಂದು ಯುಗಪುರುಷರ ನಾಡು
ಜೊತೆಗೆ ಉಂಟಲ್ಲ ಗಮ್ಯತೆಯ ಕಾಡು|
ಹಲವು ಮೃಗಜಂತುಗಳೇ ಇದರ ಮಾನ
ಎಲ್ಲವೂ ಕಳೆದುಕೊಳ್ಳುತ್ತಿವೆ ಈಗ ಪ್ರಾಣ||

ಪುಸ್ತಕದ ಕಥೆ

ನನ್ನ ಉ.ಕವೊಂದು ಹಳೇ ಪುಸ್ತಕ
ಓದಿದರೆ ಜ್ಞಾನ ತುಂಬುವುದು ಮಸ್ತಕ|
ತಿಂದುಬಿಟ್ಟಿದೆ ಅಲ್ಲಲ್ಲಿ ಹುಳವಿದರ ಪೇಜು
ಕಣ್ಣೆತ್ತಿ ನೋಡುವವರಿಲ್ಲ ಇದರ ಗೋಜು||

ಮೂರ್ತಿಯ ಕಥೆ

ಉತ್ತರಕನ್ನಡವೊಂದು ಸುಂದರ ಮೂರ್ತಿ
ಇದುವೇ ನನ್ನ ಕವನಕ್ಕೆ ಸ್ಫೂರ್ತಿ|
ಸುತ್ತೆಲ್ಲ ಹಬ್ಬಿಹುಸು ಭವ್ಯ ಮಲೆನಾಡು
ಇಂಚಿಂಚೂ ಸೂರೆಹೋಗುತ್ತಿದೆ ಇಲ್ಲಿಯ ಕಾಡು||

ಸಂಗೀತ-ರೋಗ

ನನ್ನ ಉ.ಕವೊಂದು ಸಂಗೀತದ ರಾಗ
ಆದರೆ ಅದಕ್ಕೆ ಹಿಡಿದಿದೆ ಹೊಸದೊಂದು ರೋಗ|
ಆಲಾಪನೆ ಮಾಡಿದರೆ ಬಾಯಲ್ಲಿ ಕೆಮ್ಮು
ಎದೆಯೊಳಗೆ ಕಟ್ಟಿದೆ ನೋವೆಂಬ ದಮ್ಮು||

 (ಉತ್ತರಕನ್ನಡದ ಬಗ್ಗೆ ಎಷ್ಟು ಬರೆದರೂ ಕಡಿಮೆ ನೋಡಿ... ಅದೊಂಥರಾ ಗಣಿ.. ಬಗೆದಷ್ಟೂ ಕಾಲಿಯಾಗುವುದಿಲ್ಲ.. ಆದರೆ ಯೋಜನೆಗಳ ಬಲಾತ್ಕಾರಕ್ಕೆ ಬಲಿಯಾಗುತ್ತಿರುವ ನನ್ನ ಜಿಲ್ಲೆಯ ಕುರಿತು ಇನ್ನೊಂದಷ್ಟು ಹನಿಗಳು...)

Wednesday, December 5, 2012

ಕತ್ತೆ ಹೇಳಿದ ಭವಿಷ್ಯ

ಕತ್ತೆ ಹೇಳಿದ ಭವಿಷ್ಯ

    ಬಹುತೇಕ ಎಲ್ಲರ ಬದುಕಿನಲ್ಲೂ ಇಂತಹ ಫನ್ನಿ ಅನ್ನಿಸೋ ಸಂದರ್ಭಗಳು ಬಂದೇ ಬಂದಿರ್ತವೆ. ಮಸ್ತ್ ತಮಾಶೆಯ, ಮುಜುಗರ ಉಂಟುಮಾಡಿದ, ವಿಲಕ್ಷಣವಾದ, ವಿಚಿತ್ರ ಅನ್ನಿಸುವ ಇಂತಹ ಘಟನೆಗಳು ಬಾಳ ಗೋಡೆಯಲ್ಲಿ ಹಾಗೇ ಸುಮ್ಮನೆ ಬಂದು ಸಂತಸ ನೀಡಿ ಹೋಗಿರುತ್ತದೆ. ಇಂತವುಗಳಿದ್ದರೇ ಬಾಳು ಸಮರಸ ಎನ್ನಬಹುದು.
    ನನ್ನ ಬಾಳಿನಲ್ಲಿ ನಡೆದ ಒಂದು ವಿಲಕ್ಷಣ ಘಟನೆಯನ್ನು ಹೇಳಬೇಕು. ಇದು ವಿಲಕ್ಷಣವೋ, ತಮಾಶೇಯೋ.. ಏನೋ ಒಂದು. ನಾನು 3 ನೇ ಕ್ಲಾಸೋ ಅಥವಾ ನಾಲ್ಕೋ ಏನೋ ಇರಬೇಕು. ಆಗ ನಡೆದಿದ್ದು. ಅದನ್ನು ನಿಮ್ಮೆದುರು ಹೇಳಲೇ ಬೇಕು... ಬಿಕಾಸ್ ಇಟ್ ಈಸ್ ಸೋ ಫನ್ನಿ ಯು ನೋ..(ಇಲ್ಲಿ ನೀವು.. ಮ್ಯಾಚ್ ಮುಗಿದ ನಂತರ ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಮಾತನಾಡುವ ಧೋನಿ ಸ್ಟೈಲ್ ನೆನಪು ಮಾಡ್ಕೊಳ್ಳಿ..)
    ಸುಮಾರು 15-18 ವರ್ಷಗಳ ಹಿಂದಿನ ಕಥೆ. ಶಿರಸಿಯಲ್ಲಿ ಆ ವರ್ಷ ಜಾತ್ರೆಯ ಸಡಗರ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಬಂತೆಂದರೆ ಆಗ ನಮಗೆಲ್ಲ ಹೊಸದೊಂದು ಲೋಕ ಅನಾವರಣವಾಗುತ್ತಿತ್ತು. ಪ್ರತಿ ಸಾರಿಯೂ ಜಾತ್ರೆ ಅಂದರೆ ನನಗೆ ನಿಂತಲ್ಲಿ ನಿಲ್ಲೋಕಾಗೋಲ್ಲ.. ಕುಂತಲ್ಲಿ ಕೂರೋಕಾಗೋಲ್ಲ.. ತುಂಡುಗುಪ್ಪಳದವನಾದ ನನಗೆ ಜಾತ್ರೆಗೆ ಹೋಗಿ, ಪೀಪಿಳಿ ತಂದು ಪುಂಯ್ ಅಂತ ಊದಿ, ಒತ್ತಿದರೆ ಪೆಕ್ ಪೆಕ್ ಅನ್ನೀ ಕುನ್ನಿ ಗೊಂಬೆಯನ್ನು ತಂದು ಎರಡೇ ದಿನಕ್ಕೆ ಅದನ್ನು ಹಾಳುತೆಗೆಯದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ಅಷ್ಟರ ಜೊತೆಗೆ ಜಾತ್ರೆ ತಿರುಗಬೇಕು, ಸರ್ಕಸ್ ನೋಡಬೇಕು, ತೊಟ್ಟಿಲು(ಜಾಯಿಂಟ್ ವೀಲ್) ಹತ್ತಬೇಕು, ಟೊರ ಟೊರದ ಮೇಲೆ ತಲೆ ತಿರುಗುವಂತೆ ಕುಣಿಯಬೇಕು ಎಂಬೆಲ್ಲ ನೂರೆಂಟು ಕನಸುಗಳ ಗುಚ್ಛ.
    ಜಾತ್ರೆಗೆ 15 ದಿನ ಇದೆ ಎನ್ನುವಾಗಲೇ ಮನೆಯಲ್ಲಿ ಹರಪೆ ಪ್ರಾರಂಭವಾಗುತ್ತಿತ್ತು. ಶಾಲೆಯಲ್ಲಿ ಜಾತ್ರೆಗೆಂತಲೇ ಒಂದೆರಡು ದಿನ ಕಳ್ಳ ಬೀಳುವುದು ಖಾಯಂ ಆಗಿತ್ತು. ಬಿಡಿ ನಮ್ಮ ತಾರಾ ಮೇಡಮ್ಮು (ಪ್ರೀತಿಯಿಂದ ತಾರಕ್ಕೋರು) ಅಂತಹ ನಮ್ಮ ತಪ್ಪನ್ನು ಮಾಫಿ ಮಾಡ್ತಿದ್ದರು. ಜಾತ್ರೆ ಬಂತೆಂದರೆ ಅಪ್ಪನಿಗೆ ನನ್ನ ಹಾಗೂ ತಂಗಿಯ ರಗಳೆಯನ್ನು ತಡೆಯಲು ಆಗುತ್ತಲೇ ಇರಲಿಲ್ಲ. ಓದಿನ ಸಂದರ್ಭಗಳಲ್ಲಿ ಅಮ್ಮ ನಮ್ಮನ್ನು ಹಿಡಿದು ಬಡಿದು, ಬಯ್ಯುತ್ತಿದ್ದರೂ ಇಂತಹ ವಿಷಯಗಳಲ್ಲೆಲ್ಲ ಪಕ್ಷಾಂತರ ಮಾಡುವ ಅಮ್ಮ ನಮ್ಮನ್ನು ಸಪೋರ್ಟ್ ಮಾಡಿ `ಒಂಚೂರು ಅವ್ರನ್ನ ಜಾತ್ರಿಗೆ ಕರ್ಕಂಡು ಹೋಗಿಬಂದ್ರೆ ಬತ್ತಿಲ್ಯನು..? ' ಎಂದು ಕೇಳುತ್ತಿದ್ದಳು. ಆಗ ಅಪ್ಪನಿಗೆ ಅನಿವಾರ್ಯವಾಗಿಬಿಡುತ್ತಿತ್ತು.
    ಸರಿ ಆ ವರ್ಷ ಅಪ್ಪ ಜಾತ್ರೆಗೆ ಕರೆದುಕೊಂಡು ಹೋದ. ಅದೇನು ಕಾರಣವೋ ತಂಗಿ ನನ್ನ ಜೊತೆಗೆ ಬಂದಿರಲಿಲ್ಲ. ಗತ್ತಾಗಿ ಜಾತ್ರೆ ತಿರುಗಿದೆ. ಸಂಜೆ ಟೈಮಿನ ರಶ್ಶಲ್ಲಿ ಮಾರಿಕಾಂಬಾ ಗದ್ದುಗೆಗೆ ಬಂದು ದೇವರಿಗಡ್ಡ ಬಿದ್ದಿದ್ದು ಆಗಿತ್ತು. ಹಣ್ಣು ಕಾಯಿ ಮಾಡಿಸುವಾಗ ಅಲ್ಲಿನ ಗಬ್ಬು ವಾಸನೆ ತಾಳಲಾರದೇ ಹೊಟ್ಟೆ ತೊಳೆಸಿ ಬಂದಂತಾಗಿ ಅಪ್ಪನ ಬಳಿ `ಇದೆಂತಕ್ ಹಿಂಗೆ ಗಬ್ಬು ವಾಸನೆ..? ' ಅಂತ ಕೇಳಿದ್ದಕ್ಕೆ `ಅದೆ ಅಲ್ಲಿ ಕಾಯಿ ವಡಿತ್ವಲಾ.. ಅದು ಅಷ್ಟು ವಾಸನೆ ಬರ್ತಾ ಇದ್ದು' ಎಂದು ಅಪ್ಪ ಹೇಳಿದ್ದಿನ್ನೂ ನೆನಪಿದೆ.
    ಸರಿ ಮುಂದೆ ಜಾತ್ರೆ ಪೇಟೆ ಎಂದು ಕರೆಸಿಕೊಳ್ಳುವ ಬೀಡಕಿ ಬಯಲು ಸುತ್ತಾಡಿ, ಬಳೆ ಪೇಟೆಯಲ್ಲಿ ತಿರುಗಿ, ನಟರಾಜ ರೋಡಿನಲ್ಲಿ ಉದ್ದಾನುದ್ದಕ್ಕೆ ಎರಡೆರಡು ಬಾರಿ ಓಡಾಡಿ, ತೊಟ್ಟಿಲು ಹತ್ತಿ, ಸರ್ಕಸ್ ನಡೆಯುವ ಕೋಟೆಕೆರೆಯ ಗದ್ದೆ ಬಯಲಿಗೆ ಹೋಗಿ ಬಂದದ್ದಾಯ್ತು. ಅಷ್ಟರ ವೇಳಗೆ ಅಪ್ಪನ ಜೇಬೂ ಸುಮಾರು ಬರಿದಾಗಿರಬೇಕು, ಸಿಡಿಮಿಡಿ ಪ್ರಾರಂಭವಾಗಿತ್ತಲ್ಲದೆ `ನೀ ಹಿಂಗೆ ರಗಳೆ ಮಾಡ್ತಾ ಇದ್ರೆ ಜಾತ್ರೆ ಪೇಟೆಲಿ ಬಿಟ್ಟಿಕ್ಕೆ ಹೋಗ್ತಿ ಹಾ..' ಎಂಬ ತಾಕೀತುಗಳೂ ಶುರುವಾಗಿದ್ದವು. ಎಲ್ಲ ಆಯಿತು. ಕೊನೆಯದಾಗಿ `ಭವಿಷ್ಯ ಹೇಳುವ ಕತ್ತೆಯನ್ನು ನೋಡುವ ಅಂತ ಅಪ್ಪನಿಗೆ ಹರಪೆ ಬಿದ್ದೆ. ಅಪ್ಪನಿಗೆ ಸಿಟ್ಟು ಬಂದರೂ, ಬಯ್ಯುತ್ತಲೆ ಕರೆದೊಯ್ದ.
    ಒಳಗಡೆ ದೊಡ್ಡ ವರ್ತುಲಾಕಾರದಲ್ಲಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಅವುಗಳ ಮಾಲಿಕನೋ ಅಥವಾ ಗಾರ್ಡಿಯನ್ನೋ.. ಯಾರೋ ಒಬ್ಬಾತ ಕನ್ನಡ ಹಾಗೂ ಹಿಮದಿ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ, ಪ್ರಶ್ನೆಗಳನ್ನು ಕೇಳುತ್ತಿದ್ದ. ಆತನ ಮಾತನ್ನು ಕೇಳುತ್ತಿದ್ದ ಅವುಗಳು ಪ್ರಶ್ನೆಗೆ ಉತ್ತರ ಎಂಬಂತೆ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿದ್ದವು. `ಅತ್ಯಂತ ಉದ್ದದ ವ್ಯಕ್ತಿ ಯಾರು ತೋರಿಸು..?' ಯಾರ ತಲೆಯಲ್ಲಿ ಅತ್ಯಂತ ಕಡಿಮೆ ಕೂದಲಿವೆ..? ಯಾರಿಗೆ ಅತ್ಯಂತ ಹೆಚ್ಚು ವಯಸ್ಸಾಗಿದೆ..? ಯಾರು ಅತ್ಯಂತ ಕುಳ್ಳರು..? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕತ್ತೆ ಅಂತಹ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಅಂತಹ ಭವಿಷ್ಯ ಸುಮಾರು ಸತ್ಯವೂ ಆಗಿರುತ್ತಿದ್ದು ನನ್ನ ವಿಸ್ಮಯಕ್ಕೆ ಕಾರಣವಾಗಿತ್ತು.
    ಕೊನೆಗೊಮ್ಮೆ ಆ ಹಿಂದಿವಾಲಿ `ಈ ಗುಂಪಿನಲ್ಲಿರುವ ಅತ್ಯಂತ ಬುದ್ಧಿವಂತ ಹಾಗೂ ಚೂಟಿ ಹುಡುಗ ಯಾರು..?' ಎಂದು ಕೇಳಿದಳು. ಕತ್ತೆಗೆ ಬಹುಶಃ ತಲೆಕೆಟ್ಟಿತ್ತೇನೋ.. ಸೀದಾ ನನ್ನ ಎದುರು ಬಂದು ನಿಂತೇಬಿಟ್ಟಿತು. ನಾನೊಮ್ಮೆ ಕಕ್ಕಾಬಿಕ್ಕಿ. ಅಕ್ಕ-ಪಕ್ಕ, ಹಿಂದೆ ಮುಂದೆ ಎಲ್ಲ ನೋಡಿದೆ. ಕತ್ತೆ ನಿಂತಿದ್ದು ನನ್ನ ಬಳಿಯೇ. ನನಗೆ ಖುಷಿಯಾಗಬೇಕಿತ್ತು. ಊಹುಂ.. ಆಗಲಿಲ್ಲ. ಅವರ ಎದುರು ಮರ್ಯಾದೆಯೇ ಹೋದಂತಾಯಿತು. ಈ ಕತ್ತೆಯ ಬದಲು ಆ ನಾಯಿ ಆದ್ರೂ ನನ್ನೆದುರು ಬಂದು ನಿಲ್ಲಬಾರದಿತ್ತಾ.. ಅಂದುಕೊಂಡಿದ್ದಿದೆ.. ಕತ್ತೆ ಭವಿಷ್ಯ ನಿಜವೇ ಎಂದೆಲ್ಲಾ ಆಲೋಚನೆಗಿಟ್ಟುಕೊಂಡೆ ನಾನು. ಕತ್ತೆ ಭವಿಷ್ಯ ನುಡಿಯುವಷ್ಟು ಬುದ್ಧಿವಂತನೆ ನಾನು.. ಎಂಬ ಕ್ವಶ್ಚನ್ ಮಾರ್ಕ್ ಎದೆಯೊಳಗೆ..
    ಆ ಸಂದರ್ಭದಲ್ಲಿ ನಾನು ಹಾಗೆ ಚಿಂತಿಸಿದ್ದಕ್ಕೂ ಕಾರಣ ಇದೆ ನೋಡಿ... ಶಾಲೆಯಲ್ಲಿ ನಾನೆಂದರೆ ಬಹಳ ತಂಟೆಕೋರ, ಕಿಲಾಡಿ ಹುಡುಗ ಎಂಬ ಕುಖ್ಯಾತಿ ಇತ್ತು. `ಇಂವ ಓದಿದ್ರೆ ಜೋರಿದ್ದಿದ್ದ..' ಎಂಬ ಮಾತುಗಳು ನಮ್ಮ ಮಾಸ್ತರರಾದ ಸಿ. ಎಂ. ಹೆಗಡೆ ಅವರಿಂದ ನಾಲ್ಕಾರು ಬಾರಿ ಕೇಳಿದ್ದವು. ವಿಚಿತ್ರವೆಂದರೆ ನಾನು ಚನ್ನಾಗಿ ಓದುತ್ತಿದ್ದೆ. ಚನ್ನಾಗಿ ಬರೆಯುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್ುಗಳು ಬಿದ್ದು ಪಾಸಾಗಿದ್ದೇನೆ. ಆದರೆ ಶಾಲೆಯ ಟೆಸ್ಟುಗಳಲ್ಲಿ ಮಾತ್ರ ಪಾಸಿಗಿಂತ ಒಂದಂಕಿ ಮೇಲೆ ಇರುತ್ತಿದ್ದೆ.. ಅಂದರೆ ಸಕರ್ಾರದ ಲೆಕ್ಕದಲ್ಲಿ ಬಡತನ ರೇಖೆ ಅಂತಾರಲ್ಲ.. ಅಂತಹ ಮಾರ್ಜಿನ್ ಲೈನು. (ಇದಕ್ಕೆ ಕಾರಣ ಕೊನೆಗೆ ಗೊತ್ತಾಗಿದ್ದೆಂದರೆ ಮಾಸ್ತರ್ರು ಮಾಡುತ್ತಿದ್ದ ಹಕ್ಕಿಕತ್ತು ಅಂತ ಕೊನೆಗೆ ಗಿತ್ತಾಯಿತು.. ಅದನ್ನು ಇನ್ನೊಮ್ಮೆ ಹೇಳುವಾ.. ಆ ಸಂಗತಿ ಮಜವಾಗಿದೆ.,.)
    ಸರಿ ಕತ್ತೆ ಭವಿಷ್ಯ ಹೇಳಿತಲ್ಲ. ಇನ್ಯಾರಿದ್ದಾರ್ರೀ ನನ್ನ ಸಾಟಿ.. ಅದೆಂತದ್ದೂ ಹಮ್ಮು-ಬಿಮ್ಮು.. ತಲೆಯ ಮೇಲೆ. ಅಂದಿನಿಂದ ಪುಸ್ತಕ ಹಿಡಿಯುವುದು ಅರ್ಧಕ್ಕರ್ಧ ಬಂದಾಗಿತ್ತು. ಅಪ್ಪ-ಅಮ್ಮ ಬಯ್ದಾಗಲೆಲ್ಲ ಕತ್ತೆ ಭವಿಷ್ಯ ಹೇಳಿದ್ದನ್ನೇ ನೆನಪು ಮಾಡುತ್ತಿದ್ದೆ. ನನ್ನ ಬೆಲೆ ನಿಮಗೆ ಗೊತ್ತಾಗಲಿಲ್ಲ.. ಕತ್ತೆಗೆ ಗೊತ್ತಾಯಿತು ಎಂದು ಹೇಳುತ್ತಿದ್ದೆ. ಅಪ್ಪ-ಅಮ್ಮ ಅದೆಷ್ಟು ನಕ್ಕಿದ್ದರೋ. ಅವರ ನಗುವಿನ ಕಾರಣ ನನಗೆ ಆಗ ತಿಳಿದೇ ಇರಲಿಲ್ಲ.
    ಮುಂದಿನ ಪರಿಣಾಮ ಕೇಳಿ ಇನ್ನೂ ಮಜಬೂತಾಗಿದೆ. ಸರಿ ಆ ವರ್ಷ ಕತ್ತೆಯ ಭವಿಷ್ಯದ ನಶೆ ಯಾವ ರೀತಿ ಕೆಲಸ ಮಾಡ್ತಪ್ಪಾ ಅಂದ್ರೆ ಪಾಸಾಗಿದ್ದೇ ಪುಣ್ಯ ಎಂಬಂತಾಗಿತ್ತು. ಓದಿಗೆ ತಿಲಾಂಜಲಿ ಕೊಟ್ಟಿದ್ದೆ. ಕತ್ತೆ ಭವಿಷ್ಯ ನನ್ನನ್ನು ಮಳ್ಳು ಮಾಡಿತ್ತು. ಬಿಡಿ.. ಈ ಸಂಗತಿ ನನಗೆ ಈಗಲೂ ನೆನಪಾಗ್ತಾ ಇರ್ತದೆ. ಕತ್ತೆಯ ಭವಿಷ್ಯ ನನ್ನ ಪಾಲಿಗೆ ಗ್ರೇಡೋ..? ಡಿ.ಗ್ರೇಡೋ... ಊಹೂಂ.. ಒಂದೂ ತಿಳಿದಿಲ್ಲ. ಕತ್ತೆ ಭವಿಷ್ಯ ಹೇಳಿತ್ತು. ಹಿಂಗಾಗಿತ್ತು. ಅನ್ನೋ ಸುಂದರ ಸಂದರ್ಭ ನೆನಪಿದೆ. ಇದಕ್ಕಾಗಿ ಹೆಮ್ಮೆ ಪಡಲೋ, ಕತ್ತೆ ಭವಿಷ್ಯ ಹೇಳ್ ಬಿಡ್ತು.. ತಥ್ ನನ್ಮಗಂದು... ಅಂತ ವ್ಯಥೆ ಪಡಬೇಕೋ... ಊಹೂಂ ಏನೋಂದು ಗೊತ್ತಾಗಲಿಲ್ಲ.
    ಇಂತಹ ಮಜಬೂತು ಸಂಗತಿಗಳು ನಿಮ್ಮಲ್ಲೂ ಅನೇಕ ಇರುತ್ತವೆ. ಅವೆಲ್ಲ ಏಕಾಕಿತನದಲ್ಲಿ ನೆನಪಾದಾಗ ಕೊಡುವ ಅನುಭೂತಿ ಇದೆಯಲ್ಲ.. ಆಹ್.. ಅದೆಷ್ಟು ಮಜಬೂತು ಅಂತೀರಿ... ಹೋಗ್ಲಿ ಬಿಟ್ಹಾಕಿ.. ಇದು ಹ್ಯಾಂಗಿದೆ ಅನ್ನೋದನ್ನು ಹೇಳಿ ..

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..