Wednesday, January 1, 2014

ಹವಿವಾಹಿತರ ಸಂಘ

ಚಿತ್ರ ಕೃಪೆ : ಭಾವು ಪತ್ತಾರ

                 ನಮ್ಮೂರಿನಲ್ಲಿರುವ ಈ ಅಘೋಷಿತ ಸಂಘ ಸಾಕಷ್ಟು ಸದಸ್ಯರನ್ನು ಹೊಂದಿರುವ ಮೂಲಕ ಬಹುದೊಡ್ಡ ಗಾತ್ರವನ್ನೇ ಹೊಂದಿದೆ. ಸಂಘದ ಸದಸ್ಯರಿಗೆ ಹೋಲಿಸಿದರೆ ನಮ್ಮೂರಿನಲ್ಲಿರುವುದು ಕೇವಲ ಏಳೆಂಟು ಮನೆಗಳಷ್ಟೇ. ಈ ಮನೆಗಳ ಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಸಂಘದ ಗಾತ್ರ ಅಗಾಧವಾದುದು ಎನ್ನುವುದು ಅರಿವಿಗೆ ಬರುತ್ತದೆ.

                ಈ ಸಂಘಕ್ಕೆ ಕನಿಷ್ಠ ವಯೋಮಿತಿ ಇದೆಯಾದರೂ ಗರಿಷ್ಟ ವಯೋಮಿತಿಯಿಲ್ಲ. ಅನ್ ಲಿಮಿಟೆಡ್ ವಯಸ್ಸಿನ ಸದಸ್ಯರಿರುವ ಕಾರಣ ಗರಿಷ್ಟಕ್ಕೆ ಅವಕಾಶವೇ ಇಲ್ಲ ಎನ್ನಬಹುದು. ಅಂದ ಹಾಗೆ ಈ ಸಂಘದ ಕನಿಷ್ಟ ವಯೋಮಾನ ಇಪ್ಪತ್ತೊಂದು ವರ್ಷ. ತಡೀರಿ ಮಾರಾಯ್ರೆ.. ಸಂಘದ ಬಗ್ಗೆ ಮುಖ್ಯವಾಗಿ ಇರುವ ವಿಷಯವನ್ನೇ ಹೇಳಲು ಮರೆತೆ ನೋಡಿ. ಇದು ಅಂತಿಂತ ಸಂಘವಲ್ಲ. ಹವಿವಾಹಿತರ ಸಂಘ ಎಂಬುದು ಇದರ ನಾಮಧೇಯ.

                ಸರ್ಕಾರಿ ನಿಯಮದಂತೆ ಇಪ್ಪತ್ತೊಂದು ವರ್ಷವನ್ನು ಮೀರಿದ ಯುವಕರು, ಮಧ್ಯವಯಸ್ಕರು ಹಾಗೂ ಮುದುಕರು ಇದರ ಸದಸ್ಯರು. ಮದುವೆಯಾಗಿ ಯಾರ್ಯಾರು ಸಂಸಾರಸ್ಥರ ಪಟ್ಟವನ್ನು ಕಟ್ಟಿಕೊಳ್ಳುತ್ತಾರೋ ಅವರಿಗೆ ಈ ಸಂಘದಿಂದ ರಿಟೈಟ್ ಮೆಂಟ್ ನಿಡಲಾಗುತ್ತದೆ. ಮದುವೆ ಆಗದಿರುವವರು, ಮದುವೆ ಆಗದಿರುವವರಿಗಾಗಿ ಕಟ್ಟಿಕೊಂಡ ಸಂಘ ಇದೆಂದು ಗಂಟಾಘೋಷವಾಗಿ ಹೇಳಬಹುದು.

                 ನಮ್ಮೂರಿನಲ್ಲಿರುವ ಈ ಸಂಘ ಸುಮ್ ಸುಮ್ಮನೆ ಹುಟ್ಟಿಲ್ಲ. ಹುಡುಕುತ್ತ ಹೋದರ ಇದರ ಹಿಂದೆ ಹಲವಾರು ಕಾರಣಗಳು ಗೋಚರಿಸುತ್ತವೆ. ನಮ್ಮೂರು ಹೇಳಿಕೇಳಿ ಹವ್ಯಕರ ಊರು. ಜೊತೆಗೆ ಇಲ್ಲಿರುವ ಮನೆಗಳೆಲ್ಲ ಅವಿಭಕ್ತದ ಗೋಜಲು. ಜಮೀನೇನೋ ಹೇರಳವಾಗಿದೆ. ಆದರೆ ಚಿಂದಿ ಚಿಂದಿ.. ತುಂಡು ತುಂಡು ಜಮೀನು. ಇಲ್ಲಷ್ಟು ಅಲ್ಲಷ್ಟು. ಇನ್ನು ಹವ್ಯಕ ಹುಡುಗಿಯರಿಗೋ ಬೆಂಗಳೂರಿನ ಭ್ರಮೆ. ತಾನು ಹೇಗೆ ಇರಲಿ ಹುಡುಗ ಸಾಪ್ಟ್ ವೇರೇ ಆಗಿರಬೇಕು ಎಂಬ ಭ್ರಮೆ. ಇಂತದ್ದರಲ್ಲಿ ನಮ್ಮೂರಿನ ಹಳ್ಳಿ ಹೈದರನ್ನು ನೋಡುವರ್ಯಾರು?  ಇಂತ ದೊಡ್ಡ-ಸಣ್ಣ ಕಾರಣಗಳೇ ನಮ್ಮೂರ ಹೈದರಿಗೆ ಮದುವೆ ಆಗದೇ ಇರಲು ಇರುವ ಪ್ರಮುಖ ಕಾರಣಗಳು ಎಂದರೆ ತಪ್ಪಾಗಲಿಕ್ಕಿಲ್ಲ.

                  ನಮ್ಮೂರ ಸಂಘದ ಸದಸ್ಯರ ಸಂಖ್ಯೆ ಒಂದೇ ಗುಕ್ಕಿಗೆ ಹದಿನೈದನ್ನು ದಾಟಿಬಿಡುತ್ತದೆ. ಐವತ್ತೆಂಟು ವಸಂತಗಳನ್ನು ಕಂಡ ತುದಿಮನೆ ಗಂಗಣ್ಣ ನಮ್ಮೂರ ಸಂಘದ ಅಧ್ಯಕ್ಷನಾದರೆ, ಮೊನ್ನೆ ತಾನೇ ಅರ್ಧ ಶತಕ ಬಾರಿಸಿದ ಅಡಿಗೆ ಮನೆಯ ನಾಗಣ್ಣ ಐವತ್ತರವನು ಇದರ ಕಾರ್ಯದರ್ಶಿ. ಇನ್ನುಳಿದಂತೆ ಈ ಸಂಘದ ವಿಶೇಷ ವ್ಯಕ್ತಿಗಳಲ್ಲಿ ನಾನೂ ಒಬ್ಬಾತ. ಸಂಘಕ್ಕೆ ಹೊಸ ಮುಖ. ಮೊನ್ನೆ ತಾನೆ ಎಲ್ಲರ ಎದುರು ಇಪ್ಪತ್ತೊಂದು ವರ್ಷದ ಮೇಣದ ಬತ್ತಿ ದೀಪವನ್ನು ಉಫ್ ಎಂದು ಆರಿಸಿದ ಕಾರಣಕ್ಕೆ ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದೇನೆ.

                  ನಮ್ಮೂರಿನ ಸಂಘದ ಪದಾಧಿಕಾರಿಗಳು ಆಗಾಗ ಸಭೆಯನ್ನು ಸೇರಿ ಚರ್ಚೆ ನಡೆಸುವುದುಂಟು. ನಾನು ಹೊಸಬನಾದ್ದರಿಂದ ನಡೆಯುವ ಸಭೆಗಳಲ್ಲಿ ಎಡಬಿಡದೇ ಭಾಗವಹಿಸಿದ್ದೇನೆ. ಹೆಚ್ಚಿನ ಸಂಗತಿಗಳು ಹೆಣ್ಣು ನೋಡುವುದರ ಕುರಿತೇ ಇರುತ್ತದೆಯಾದ್ದರಿಂದ ಅದರ ಕುರಿತು ಗಂಭೀರ ಚಿಂತನೆ ನಡೆಸಿಲ್ಲ. ಒಂದು ಸಭೆಯಲ್ಲಿ ಪದಾಧಿಕಾರಿಗಳೂ ಕಡಿಮೆಯಿದ್ದರು. ಆ ಸಂದರ್ಭದಲ್ಲಿ ಮಾತಿನ ಹುಕಿಗೆ ಬಿದ್ದಿದ್ದ ಅಧ್ಯಕ್ಷ ಐವತ್ತೆಂಟರ ಗಂಗಣ್ಣ ತನ್ನ ಲೈಫ್ ಟೈಮಿನಲ್ಲಿ ನಲವತ್ತೆಂಟು ಸಾರಿ ಹೆಣ್ಣು ನೋಡಲು ಹೋದ ಕಥೆಯನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ನಾನು ವಿಸ್ಮಯದಿಂದ ಕೇಳಿದ್ದೇನೆ. ಇದಕ್ಕೆ ಪ್ರತಿಯಾಗಿ ನಾಗಣ್ಣ ತಾನೇನು ಕಡಿಮೆ ಎನ್ನುವ ಹಾಗೆ ನೆರೆತ ತಲೆಗೂದಲಿಗೆ ಚಿಕ್ ಶಾಂಪೂ ಹಚ್ಚಿ ಕರೀಕಾಗಿಸಿ, ನಿನ್ನೆ ತಾನೆ ಡೈವೋರ್ಸ್ ಆದ ಒಬ್ಬಾಕೆಯನ್ನು ನೋಡಲು ಹೋಗಿ ಬಂದಿದ್ದನ್ನು ವಾಲಿ ವಿಜಯ ಯಕ್ಷಗಾನ ಪ್ರಸಂಗದಂತೆ ಹೇಳಿಕೊಂಡಿದ್ದ. ಇದನ್ನು ಕೇಳಿ ನಕ್ಕಿದ್ದ ನನ್ನನ್ನು ನೋಡಿ ಇವರೆಲ್ಲ `ತಮಾ.. ನೀ ನಗ್ತೆ.. ನಗಾ.. ಮುಂದೆ ಗೊತ್ತಾಗ್ತ ನಿಂಗೆ..' ಎಂದಿದ್ದರು.

                ಇರುವ ಕೆಲವೇ ಕೆಲವು ಮನೆಗಳಿಂದ ಇಷ್ಟು ಸದೃಢ ಸಂಘ ಹೇಗಾಯ್ತು ಅಂತ ಮತ್ತೆ ಮತ್ತೆ ಪ್ರಶ್ನಿಸಬೇಡಿ. ಹಳ್ಳಿ ಹೈದರು ಓದಿದ್ದು ಕಡಿಮೆ. ಹಾಗೆಂದು ಓಸಿ, ಇಸಪೀಟು, ಗುಡಗುಡಿ ಮುಂತಾದ ರಾಷ್ಟ್ರೀಯ ಕ್ರೀಡೆಗಳಲ್ಲೆಲ್ಲಾ ಇವರೇನೂ ಹಿಂದೆ ಬಿದ್ದವರಲ್ಲ. ಇನ್ನು ಬಾಯಲ್ಲಂತೂ ಸದಾ `ಯೆ ದಿಲ್ ಮಾಂಗೇ ಮೋ..ರ್..' ಎಂಬ ಸ್ಲೋಗನ್ನಿನಂತಹ ಮಾತುಗಳ ಜೊತೆಗೆ, ನಕ್ಷತ್ರ, ಬೆಂಕಿ, ಮಾರುತಿ, ಪದ್ಮಶ್ರೀಯಂತಹ ಗುಟಕಾಗಳು ಇವರ ಪ್ರತಾಪದ ಮತ್ತೊಂದು ಭಾಗವೇ ಆಗಿದೆ. ಇಂತವರನ್ನು ಹವಿಗನ್ನೆಯರು ಹೇಗೆ ತಾನೆ ಮೆಚ್ಚಿಯಾರು..?

                 `ನೀನು.. ಕೋಲೇಜಿಗೆ ಹೋಪಂವನಲ.. ಯಾರ್ನಾದ್ರೂ ಲವ್ ಮಾಡಾ. ಇಲ್ದೋದ್ರೆ ಯಂಗ್ಳಾಂಗೆ ಆಗೋಗ್ತೆ ನೋಡು..' ಎಂಬುದು ಹೊಸದಾಗಿ ಸಂಘಕ್ಕೆ ಎಂಟ್ರಿಯಾದ ನನಗೆ ಸದಾ ಹೇಳುತ್ತಿರುವ ಮಾತು, ಕನ್ನಡ ಶಾಲೆಯಲ್ಲಿ ಮಾಸ್ತರ್ರು ಹೇಳಿದ ಪಾಠಗಳಂತೆ ಸದಾ ನೆನಪಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ.

                ನಮ್ಮೂರ ಗುಟ್ಕಾ ಕಿಂಗು, ಮಟ್ಕಾ ಕಿಂಗುಗಳ ಬಗ್ಗೆ ಬೇರೆ-ಬೇರೆ ಪಕ್ಕದ ಊರುಗಳಲ್ಲೆಲ್ಲ `ಆ ಊರಿನವರು ಮದುವೆಯಾದ ಹಾಗೆ..'ಎಂದು ಗಾದೆಯ ಮೂಲ ಛೇಡಿಸುವಷ್ಟು ಸುದ್ದಿ ಹಬ್ಬಿದೆ. ಹೀಗೆ ಗಾದೆ ಬೆಳೆದಿರುವುದು ನಮ್ಮೂರಿಗರ ವರ್ಡ್ ಫೇಮಸ್ಸಿಗೆ ಚಿಕ್ಕ ಸಾಕ್ಷಿ ಅಷ್ಟೇ.

                ನಮ್ಮೂರ ಈ ಸಂಘದಲ್ಲಿ ಕಾಲೇಜು ಮೆಟ್ಟಿಲು ಕಂಡ ಎರಡನೇ ಸದಸ್ಯ ಎಂಬ ದುರದೃಷ್ಟದ ಹೆಮ್ಮೆ ನನಗೆ..` ಏ ತಮಾ.. ಕಾಲೇಜಿನಲ್ಲಿ ಯಂಗೆ ಆಪಂತಾ ಗನಾ ಕೂಸಿದ್ರೆ ಹೇಳಾ..' ಎನ್ನುವ ನಮ್ಮೂರಿಗರ ಮಾತಿಗೆ ನನಗೆ ಏನನ್ನಬೇಕೋ ಎಂದು ತಿಳಿಯದೇ ಅನೇಕ ಬಾರಿ ಒದ್ದಾಡಿದ್ದೇನೆ.

                ಜೀವನದಲ್ಲಿ ಒಂದೇ ಒಂದು ಸಾರಿ ಮದುವೆಯಾದರೆ ಸಾಕು ಎಂದು ನಮ್ಮೂರ ಸಂಘಾರ್ತಿಗಳು ಅದೆಷ್ಟು ಪ್ರಯತ್ನ ಪಟ್ಟಿದ್ದಾರೋ.. ಕೆಲವರು ಸಾವಿರ ಸುಳ್ಳನ್ನು ಹೇಳಿಯೂ ನೋಡಿದ್ದಾರೆ. ಪ್ರತಿ ವರ್ಷದ ಆದಿಯಲ್ಲಿ ಈ ವರ್ಷ ನನ್ನ ಮದುವೆ ಆಗಬೇಕು ಎಂಬ ಹರಕೆಗಳ ಸರಮಾಲೆಗಳನ್ನೇ ಹೊತ್ತು ಹೊತ್ತು ಕತ್ತು ಉಳುಕಿಸಿಕೊಂಡಿದ್ದಾರೆ.

                ಇನ್ನು ಪ್ರಮುಖ ಸದಸ್ಯನೇ ಆದ ಪಿಟಿಂಗ್ ಶಾಂತಣ್ಣನ ಬಗ್ಗೆ ಹೇಳದಿದ್ದರೆ ಏನೋ ಕಳವಳವಾಗುತ್ತದೆ. ಮಾಡುವ ಕೆಲಸ ಎಲೆಕ್ಟ್ರಿಷಿಯನ್ನು..ವಯಸ್ಸಿನಿಂದ ಎರಡು ಅಧ್ಯಕ್ಷನಾಗುವಂತಾಗಿದ್ದರೂ ತನ್ನ ಅಂತರಾತ್ಮದ ಕರೆಗೆ ಓಗೊಟ್ಟು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಇವರನ್ನು ಕಂಡರೆ ಎಲ್ಲರಿಗೂ ಅಚ್ಚು ಮೆಚ್ಚಿನ ಹುಚ್ಚು.

                ಈ ಸಂಘ ಆಗಾಗ ಯಾರದ್ದಾದರೂ ಮನೆಯ ಜಗುಲಿಯ ಮೇಲೆ ಮೀಟಿಂಗ್ ನಡೆಸುತ್ತದೆ. ಅದಕ್ಕೆ ಕಟ್ಟೆ ಪಂಚಾಯ್ತಿ ಎಂದೇ ಹೆಸರು. (ಆಸಕ್ತರು ಪಟ್ಟಂಗ ಎಂದುಕೊಳ್ಳಬಹುದು). ಮೀಟಿಂಗಿನಲ್ಲಿ ಚರ್ಚೆಗೆ ಬರುವ ವಿಷಯ ಎಂದರೆ ಎಷ್ಟೇ ಕೊಂಕಣ ಸುತ್ತಿದರೂ ಕೊನೆಗೆ ಮೈಲಾರಕ್ಕೆ ತಲುಪಬೇಕು ಎಂಬಂತೆ ಹೆಣ್ಣು ನೋಡುವುದೇ ಆಗಿದೆ. ಆಗಾಗ ಅಲ್ಲೊಬ್ಬರು ಇಲ್ಲೊಬ್ಬರು ಹವಿಗನ್ನೆಯರ ಸೊಕ್ಕಿಳಿಸುವ ಮಸೂದೆಯನ್ನು ಮಂಡಿಸಿದರೆ ಎಲ್ಲರೂ ಅದನ್ನು ಅನುಮೋದಿಸುತ್ತಾರೆ. ಕೆಲವೊಮ್ಮೆ ಇವರು `ಸ್ವಯಂವರ' ಎಂಬ ಕಾರ್ಯಕ್ರಮದಂತೆ `ಸ್ವಯಂವಧು' ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಹೇಗೆ ಎಂದು ಚಿಂತಿಸಿ, ಅದಕ್ಕಾಗಿ ಮುಂದಡಿಯಿಟ್ಟದ್ದೂ ಇದೆ. ಆದರೆ ತಾಂತ್ರಿಕ ಹಾಗೂ ಅಭಾವದ ಕಾರಣ ಅದು ಅಲ್ಲಿಗೆ ನಿಂತಿದ್ದು ಸುದ್ದಿಯಾಗಿಲ್ಲ.

                ಊರಿನ ಸುತ್ತಮುತ್ತಲ ಫಾಸಲೆಯಲ್ಲಿ ಅಥವಾ ಹತ್ತಿರದ ಸೀಮೆಗಳಲ್ಲಿ ಎಲ್ಲಾದರೂ ಹೈಗರ ಮನೆಯ ಮದುವೆ ನಡೆದರೂ ಅಲ್ಲೆಲ್ಲ ತೆರಳುವ ಈ ಸಂಘದ ಮಂದಿಗಳು ಅಲ್ಲೆಲ್ಲಾದರೂ ತಮಗೆ ಸೆಟ್ಟಾಗುವ ಕೂಸುಗಳಿದ್ದಾವಾ ಎಂದು ಆಸೆಗಣ್ಣಿನಿಂದ ದಿಟ್ಟಿಸುತ್ತಾರೆ. ಇವರ ರೀತಿ-ನೀತಿ-ನಡೆ-ನುಡಿಗಳನ್ನು ಕಂಡೋ ಏನೋ ಈ ಹವಿಹೈದರನ್ನು ಕಂಡ ಹುಡುಗಿಯರೆಲ್ಲ ಅಲ್ಲಿಂದ ಸದ್ದಿಲ್ಲದೇ ಗುಡ್ ಬಾಯ್ ಹೇಳುತ್ತಾರೆ.

                 ಸಂಘದಲ್ಲಿ ಹೊಸ ಹೊಸ ಆಲೋಚನೆಗಳು ಆವಾಗಾವಾಗ ಮಳೆಗಾಲದಲ್ಲಿ ಸುಮ್ನುಳ (ಕಂಬಳಿಹುಳ) ಹುಟ್ಟಿದಂತೆ ಹುಟ್ಟುತ್ತಿರುತ್ತವೆ. ಬೆಂಗಳೂರಿನಲ್ಲಿ ಬಿಡದಿ ಹೂಡಿರುವ ಹುಡುಗರನ್ನು ಬಯಸುವ ಹವಿ ಹುಡುಗಿಯರ ಕುರಿತು ತಿಳಿದು ತಾವು ಮದುವೆ ಆಗಲಿಕ್ಕಾದರೂ ಬೆಂಗಳೂರಿಗೆ ಹೋಗಬೇಕು ಎಂದು ಮುಂದಾಲೋಚಿಸಿ ಆ ಬಗ್ಗೆ ಪ್ರಯತ್ನ ಪಟ್ಟು ವಿಫಲರಾಗಿದ್ದೂ ಇದೆ. ಈ ಐಡೀರಿಯಾವೂ ವ್ಯರ್ಥವಾದಾಗ ತಮ್ಮ ಹವಿಮುಂದಾಳುಗಳನ್ನು ಹಿಡಿದು ಕಾಶಿ ಸೇರಿದಂತೆ ಉತ್ತರ ಭಾರತದ ಹವ್ಯಕ ಹೆಣ್ಣುಮಕ್ಕಳನ್ನು ತಂದುಕೊಳ್ಳಲು ಪ್ರಯತ್ನವನ್ನೂ ನಡೆಸಿದ್ದಾರೆ. ಆದರೆ ಚಿಕ್ಕ ಹಿಡುವಳಿದಾರರು ದೊಡ್ಡ ಮೊತ್ತ ನೀಡಲು ಕಷ್ಟವಾದ ಕಾರಣ ವಧು ಅನ್ವೇಷಣೆಯ ಕಾಶೀಯಾತ್ರೆ ಕೂಡ ವಿಫಲತೆಯ ಹಾದಿಯನ್ನು ತಲುಪಿದೆ ಬಹಿರಂಗ ಸತ್ಯ. ಸುತ್ತಣ ಊರಿಗಳ ಹವಿಹೈದರು ಹಾವೇರಿಯ ಕಡೆಯಿಂದ ಹೆಣ್ಣುಗಳನ್ನು ಮದುವೆಯಾಗಿ ಬಂದರಂತೆ ಎಂಬ ಸುದ್ದಿ ತಿಳಿದು ಒಮ್ಮೆ ರೋಮಾಂಚನಗೊಂಡಿದ್ದೂ ಇದೆ. ಆದರೆ ನಮ್ಮ ಹವ್ಯಕ ಸಂಸ್ಕ್ಋತಿಗೆ ಇದು ಆಗಿ ಬರುವುದಲ್ಲ, ಹೋಗಿ ಬರುವುದಲ್ಲ ಬಿಡಿ ಎಂದು ತಲೆಕೊಡವಿ ಸುಮ್ಮನಾಗಿದ್ದುದು ಹವಿ ಹೈದರ ನಿಯತ್ತನ್ನು ಎತ್ತಿ ತೋರಿಸುವಂತದ್ದು.

                 ತೀರಾ ಇತ್ತೀಚೆಗೆ ಸಂಘದಲ್ಲಿ ಒಂದೆರಡು ವೈಚಿತ್ರ್ಯವೂ ಜರುಗಿದೆ. ಈಗಾಗಲೇ ಮದುವೆಯಾಗಿ ಸಂಘದಿಂದ ನಿವೃತ್ತಿಯನ್ನು ಪಡೆದಿದ್ದ ಸಣ್ಮನೆಯ ರವಿಚಂದ್ರ ಹಾಗೂ ಮೂಲೆಮನೆಯ ಮಂಜುನಾಥ ಇವರಿಬ್ಬರೂ ಸಂಸಾರದ ಸುಖವನ್ನು ಅರಗಿಸಿಕೊಳ್ಳಲಾಗದೇ ಮತ್ತೆ ಪುನಃ ಸಂಘದ ಸದಸ್ಯತ್ವ ನೀಡಬೇಕೆಂದು ಅರ್ಜಿ ಹಾಕಿರುವುದು ಹಾಲಿ ಪದಾಧಿಕಾರಿಗಳಿಗೆ ತಲೆಬಿಸಿಯನ್ನು ಉಂಟುಮಾಡಿದೆ.

                  ಹೆಣ್ಣು ಸಿಗಲಿಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಕನ್ನಡದ ಭಾಗದಲ್ಲಿ ಓರ್ವ ಹವಿ ಹೈದ ಆತ್ಮಹತ್ಯೆಗೆ ಆರಣಾಗಿರುವ ಸುದ್ದಿಯನ್ನು ಪ್ರಕಟಿಸಿದ ಪತ್ರಿಕೆ ವಾರಗಳ ಕಾಲ ನಮ್ಮೂರಿನ ಸಂಘದ ಪದಾಧಿಕಾರಿಗಳ ಕೆಂಗಣ್ಣಿಗೆ ಹಾಗೂ ಹಿಡಿ ಶಾಪಕ್ಕೆ ಗುರಿಯಾಗಿದೆ. ನಿರಂತರ ಒಂದು ವಾರಗಳ ಕಾಲ ಆತ್ಮಹತ್ಯೆಗೆ ಶರಣಾದ ಹವಿಹೈದನ ನೆನಪಿನಲ್ಲಿ ಮೌನ ಮಾಡುವ ಮೂಲಕ ಶೀಯಾಳ ಕಂಪನಿ ಪ್ರಾಯೋಜಿತ ವಿಶ್ವದಾಖಲೆಯಾಗಿ ಉಳಿದಿದೆ.

                  ಒಂದೆರಡು ವಾರದ ಹಿಂದೆ ಸಂಘದ ಪ್ರಮುಖ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದ ದತ್ತಣ್ಣ ಮದುವೆಯಾಗಿ ಹೋದ ಲಾಗಾಯ್ತಿನಿಂದಲೂ ಗಂಗಣ್ಣ-ನಾಗಣ್ಣನ ಆದಿಯಾಗಿ ತಲೆ ನೆರೆತವರು ಬಣ್ಣ ಹಚ್ಚಿ ಮತ್ತೆ ವಧು ಬೇಟೆಗೆ ಹೊರಡುವುದರೊಂದಿಗೆ ಕಿರಿಯರಿಗೆ ಭಾರಿ ಸ್ಪರ್ಧೆಯನ್ನು ನೀಡಲಾರಂಭಿಸಿದ್ದಾರೆ.

                   ಅವರು ಹೊರಟ ಸ್ಪೀಡು ನೋಡಿದರೆ ಸಧ್ಯವೇ ಊರಿನಲ್ಲಿ ಒಂದಾದರೂ ಮದುವೆ ಆಗುವ ಸಂಭವ ಇರುವ ಸುದ್ದಿ ಗುಟ್ಟಾಗಿಟ್ಟರೂ ಗುಪ್ತಚರ ಇಲಾಖೆಯ ಯಡವಟ್ಟಿನಿಂದಾಗಿ ರಟ್ಟಾಗಿ ಹೋಗಿದೆ. ಪರಿಣಾಮ ಸುತ್ತಲ ಪರಿಚಿತ ಹವಿಗನ್ನೆಯರು ಆತಂಕ ಪಡತೊಡಗಿದ್ದಾರೆ.

                   ಹೀಗಿದೆ ನೋಡಿ ನಮ್ಮೂರ ಹವಿವಾಹಿತರ ಸಂಘ. ಹಾಂ ಅಂದಹಾಗೆ ನಿಮಗೆ ಹೇಳಿಯೇ ಇರಲಿಲ್ಲ ನೋಡಿ. ನಮ್ಮೂರ ಹವಿವಾಹಿತರ ಸಂಘದ ಗೀತೆ ಏನು ಗೊತ್ತಾ

ನಡೆ ಮುಂದೆ..

ನಡೆ ಮುಂದೆ..

ನುಗ್ಗಿ ನಡೆಮುಂದೆ... ಎಂಬುದಾಗಿದೆ.

****

(ಇದನ್ನು ಬರೆದಿದ್ದು 13-09-2008ರಲ್ಲಿ. ಉಳುಮೆ ಮಾಸಪತ್ರಿಕೆಯಲ್ಲಿ ಈ ಲಘು ಬರಹ ಪ್ರಕಟಗೊಂಡಿತ್ತು.ಈ ಬರಹವನ್ನು ಓದಿದ ಕನ್ನಡದ ಖ್ಯಾತ ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆಯವರು `ಇದೊಂದು ಅತ್ಯುತ್ತಮ ಲಘು ಪ್ರಬಂಧ. ಇಲ್ಲಿ ಹಾಸ್ಯದ ಪರದೆಯನ್ನು ಸರಿಸಿದರೆ ದುರಂತ ವಾಸ್ತವ ಸಂಗತಿ ಅರಿವಾಗುತ್ತದೆ.. ಉತ್ತಮ ಹಾಸ್ಯದ ಲಕ್ಷಣ ಅದು.. ಹೀಗೆ ಬರೆಯುತ್ತಿದೆ' ಎಂದು ಹಾರಯಿಸಿದ್ದರು.)

                 

No comments:

Post a Comment