Monday, January 20, 2014

ಬೆಂಗಾಲಿ ಸುಂದರಿ -3


               ವಿನಯಚಂದ್ರ ಶಿವರಾಮ ಹೆಗಡೆ-ಸುಶೀಲಮ್ಮ ದಂಪತಿಯ ಹಿರಿಯ ಮಗ. ಅಂಜಲಿ ಇವರ ಪುತ್ರಿ, ವಿನಯಚಂದ್ರನ ತಂಗಿ. ಪಿಯುಸಿಯಲ್ಲಿ ಓದುತ್ತಿರುವ ಈಕೆಗೆ ಅಣ್ಣನೇ ವೀಕಿಪೀಡಿಯಾ, ಗೂಗಲ್ ಸರ್ಚ್, ಸ್ಪೋರ್ಟ್ಸ್ ಡಾಟ್ಕಾಮ್ ಎಲ್ಲಾ. ಅಣ್ಣನೆಂಬ ವ್ಯಕ್ತಿಯನ್ನು ಬಿಟ್ಟರೆ ಮತ್ತಿನ್ಯಾರೂ ಅಷ್ಟು ಜೋರಿಲ್ಲ. ಅವನೊಬ್ಬನೇ ಗ್ರೇಟು ಎನ್ನುವ ಆರಾಧನಾ ಮನೋಭಾವ. ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋಗುವುದನ್ನು ಚಿಳಿದು ಓಡಿಬಂದು ಒಂದು ಗುದ್ದನ್ನು ಕೊಟ್ಟಿದ್ದ ಈಕೆ ನಂತರ ತಾನು ಕೊಟ್ಟಿದ್ದು ಶಹಭಾಸ್ ಗಿರಿ ಎಂದು ಹೇಳುವಷ್ಟು ಅಚ್ಚುಮೆಚ್ಚು.
               ಪ್ರತಿದಿನ ಜ್ಯೂನಿಯರ್ ಕಾಲೇಜಿಗೆ ಬರುತ್ತಾಳಾದಳೂ ವಾರಕ್ಕೊಮ್ಮೆ ಶಿರಸಿಗೆ ಬಂದು ತನ್ನಿಷ್ಟದ ಸಿತಾರ್ ಕ್ಲಾಸಿಗೆ ಬಂದು ಅದನ್ನು ಕಲಿಯುವ ಸಾಹಸವನ್ನು ಮಾಡುತ್ತಿದ್ದಾಳೆ. ಆರಂಭದಲ್ಲಿ ಆಕೆ ಸಿತಾರದಲ್ಲಿ ಯದ್ದೋಡಿ ರಾಗದ ಪ್ರಯೋಗ ಮಾಡಿದ್ದಾಳಾದರೂ ಈಗೀಗ ಆಕೆಯ ಸಿತಾರ್ ವಾದನ ಅಲ್ಪಸ್ವಲ್ಪ ಕೇಳೋಣ ಎನ್ನಿಸುವಂತಾಗಿರುವುದು ಅಂಜಲಿ ಬರೀ ಸಿತಾರ್ ಕ್ಲಾಸಿಗೆ ಬರುತ್ತಿಲ್ಲ ಬದಲಾಗಿ ಕಲಿಯುವ ಪ್ರಯತ್ನವನ್ನೂ ಮಾಡುತ್ತಿದ್ದಾಳೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಮನೆಯಲ್ಲಿಯೂ ಆಗಾಗ ಆಕೆ ಸಿತಾರ್ ಪ್ರಾಕ್ಟೀಸ್ ಮಾಡಲು ಶುರುವಿಟ್ಟುಕೊಳ್ಳುತ್ತಾಳೆ. ಟಿ.ವಿಯಲ್ಲಿ ಡಿಸ್ಕವರಿ ಚಾನಲ್ಲೋ, ಎಚ್.ಬಿ.ಒ ಚ್ಯಾನಲ್ಲೋ ಇತ್ಯಾದಿ ಯಾವುದೋ ಚಾನಲ್ಲಿನಲ್ಲಿ ಸಿನೆಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೋಡುತ್ತ ಕೂತಿರುತ್ತಿದ್ದ ವಿನಯಚಂದ್ರ ಆಕೆಯ ಸಿತಾರ್ ಪ್ರಾಕ್ಟಿಸ್ ಶುರುವಾದ ತಕ್ಷಣ ಸದ್ದಿಲ್ಲದೇ ಮೆತ್ತಿಯನ್ನು ಹತ್ತಿತ್ತಾನೆ. ಆಕೆಯ ಪ್ರಾಕ್ಟೀಸಿಗೆ ಡಿಸ್ಟರ್ಬ್ ಮಾಡಬಾರದು ಎನ್ನುವ ಸದ್ಗುಣ ಅವನದಲ್ಲ ಬಿಡಿ. ಆಕೆಯ ಸಿತಾರ್ ವಾದನ ಕೇಳಲಿಕ್ಕಾಗುವುದಿಲ್ಲ ಎಂಬ ಮುಖ್ಯಾಂಶವೇ ಆತ ಮೆತ್ತಿಯನ್ನು ಹತ್ತಲು ಕಾರಣವಾಗುತ್ತದೆ.
               `ಯೇ ಆಯಿ.. ನೋಡೆ ಇಂವನಾ.. ಆನು ಸಿತಾರ್ ಕಲ್ತಕಳವು ಹೇಳಿ ಹಣಕಿದಾಗೆಲ್ಲಾ ಇಂವ ಮೆತ್ತಿ ಹತ್ ಕುತ್ಗತ್ತ ನೋಡೆ.. ಯಂಗೆ ಒಂಥರಾ ಆಕ್ತು.. ಅಂವಂಗೆ ಹೇಳು..ಎಸ್ಟ್ ಕಿಂಡಲ್ ಮಾಡ್ತಾ ನೋಡು..' ಎಂದು ಆಗಾಗ ಆಕೆ ಅಮ್ಮನ ಬಳಿ ಪುಕಾರು ಹೇಳುವುದೂ ಉಂಟು. ಅದಕ್ಕೆ ಪ್ರತಿಯಾಗಿ ಸುಶೀಲಮ್ಮ `ಯಂತದಾ ತಮಾ.. ನಿ ಹಿಂಗ್ ಮಾಡದು ಸರಿಯನಾ.. ಅದು ಚೊಲೋನೆ ಬಾರಿಸ್ತಲಾ.. ಕೇಳಾ..' ಎಂದು ಮಗಳ ಪರವಾಗಿ ಆಗಾಗ ಮಾತನಾಡುವುದೂ ಇದೆ.
               `ಚೊಲೋ ಬಾರಸ್ತು ಹೇಳಾದ್ರೆ ನೀನೆ ಕೇಳೆ.. ಯಂಗೆ ಒತ್ತಾಯ ಮಾಡಡಾ..' ಎಂದು ವಿನಯಚಂದ್ರನೂ ಹೇಳಿ ಮೆತ್ತಿ ಹತ್ತಿ ತನ್ನ ರೂಮಿನ ಬಾಗಿಲನ್ನು ದಢಾರನೆ ಹಾಕಿದನೆಂದರೆ ಸಕಲ ಜಂಜಡಗಳಿಂದ ದೂರನಾದೆ ಎಂಬ ಭಾವ ಆತನನ್ನು ಕಾಡುತ್ತಿದ್ದುದು ಸುಳ್ಳಲ್ಲ. ಮಗಳ ಪರ ವಹಿಸಿ ಮಾತನಾಡುವ ತಾಯಿಯಾದರೂ ಮಗಳ ಸಿತಾರ್ ಸ್ವರ ಕೇಳುತ್ತಾಳಾ ಎಂದರೆ ಇಲ್ಲ ಬಿಡಿ. ಮಗಳ ಸಿತಾರ್ ಶುರುವಾದ ತಕ್ಷಣ ಅವರಿಗೆ ಅಡುಗೆ ಮನೆಯಲ್ಲಿ ಒಲೆಯ ಮೇಲೆ ಇಟ್ಟ ಒಗ್ಗರಣೆಯೋ, ಉಕ್ಕುತ್ತಿರುವ ಹಾಲೋ ನೆನಪಾಗುತ್ತದೆ. `ತಡಿ ತಂಗಿ.. ಆನು ಈಗ ಬಂದಿ...' ಎಂದವರೇ ಅಡುಗೆ ಮನೆಯೊಳಕ್ಕೆ ಹೋಗು ಕಾಣೆಯಾಗುತ್ತಾರೆ.
               ವಿನಯಚಂದ್ರನಿಗೆ ಕಬ್ಬಡ್ಡಿ ಎಷ್ಟು ಇಷ್ಟವೋ ಆತನ ರೂಮೂ ಅಷ್ಟೇ ಇಷ್ಟ. ಅದು ಆತನ ಪಾಲಿನ ಸ್ವರ್ಗ ಎಂದೇ ಹೇಳಬಹುದು. ಆತನಿಗೆ ಬೇಕಾದ ಎಲ್ಲ ವಸ್ತುಗಳನ್ನೂ ತನ್ನ ರೂಮಿನಲ್ಲಿ ಗುಡ್ಡೆ ಹಾಕಿಕೊಂಡಿದ್ದ. `ರೂಮನೆ' ಎಂಬುದು ರೂಮಿಗೆ ಆತ ಇಟ್ಟುಕೊಂಡ ಹೆಸರು. ರೂಮು + ಮನೆ = ರೂಮನೆ ಎಂಬುದು ಅದನ್ನು ಬಿಡಿಸಿ ಹೇಳಿದಾಗಲೇ ಆರ್ಥವಾಗುತ್ತದೆ.
ಚಿಕ್ಕಂದಿನಲ್ಲಿ ಗೆಳೆಯನ ಕಂಪಾಸು ಬಾಕ್ಸಿನಿಂದ ಕದ್ದು ಇಟ್ಟುಕೊಂಡ ಬಿಳಿಯ ಪಾಟಿಕಡ್ಡಿಯಿಂದ ಹಿಡಿದು ಕಾಲೇಜಿನ ಗೆಳತಿಯೊಬ್ಬಳು ಕೊಟ್ಟಿದ್ದ ಪುಟ್ಟ ನವಿಲುಗರಿಯ ವರೆಗೆ ಹತ್ತು ಹಲವು ಚಿಕ್ಕ ದೊಡ್ಡ ವಸ್ತುಗಳು ಅಲ್ಲಿವೆ. ತನ್ನ ರೂಮಿನ ಒಂದು ಪಾರ್ಶ್ವದ ಗೋಡೆಯನ್ನು ಖಾಲಿ ಖಾಲಿಯಾಗಿ ಆತ ಬಿಟ್ಟುಕೊಂಡಿದ್ದಾನೆ. ರೂಮಿನ ಎಲ್ಲಾ ಗೋಡೆಗಳೂ ತರಹೇವಾರಿ ಚಿತ್ರಗಳೋ ಅಂಥವಾ ಇನ್ಯಾವುದೋ ವಸ್ತುಗಳಿಂದ ಅಲಂಕೃತವಾಗಿದ್ದರೆ ಒಂದು ಗೋಡೆ ಮಾತ್ರ ಖಾಲಿ ಖಾಲಿ ಬಿಡಲಾಗಿತ್ತು. ಬಿಳಿ ಬಣ್ಣ ಬಡಿದ ಆ ಗೋಡೆ ಥಟ್ಟನೆ ನೋಡಿದರೆ ಅಮೃತ ವರ್ಷಿಣಿ ಸಿನೆಮಾವನ್ನು ನೆನಪಿಗೆ ತರುತ್ತಿತ್ತು. ಇತ್ತೀಚೆಗೆ ಆ ರೂಮಿನ ಆಸುಪಾಸಿನಲ್ಲಿ ಮೊಬೈಲ್ ಸಿಗ್ನಲ್ ಸುಗುತ್ತಿದೆಯಾದ ಕಾರಣ ರೂಮನೆ ವಿಶ್ವಕ್ಕೆ ತೆರೆದುಕೊಂಡ ಅನುಭವ ವಿನಯಚಂದ್ರನಿಗಾಗುತ್ತಿದೆ.
                ಬೇಜಾರಾದಾಗ, ಖುಷಿಯಾದಾಗ, ಲಹರಿಯಲ್ಲಿದ್ದಾಗ, ಸಿಟ್ಟು ಬಂದಾಗ, ಏನನ್ನೋ ಕಳೆದುಕೊಂಡಾಗ ಇತ್ಯಾದಿ ಇತ್ಯಾದಿ ಭಾವಗಳು ಮನಸ್ಸನ್ನು ಎಡಬಿಡದೇ ಕಾಡಿದಾಗಲೆಲ್ಲ ವಿನಯಚಂದ್ರ ತನ್ನ ರೂಮಿನ ಅಗುಳಿ ಹಾಕಿಕೊಂಡು ಈ ಬಿಳಿ ಗೋಡೆಗೆ  ಎದುರಾಗಿ ಅದನ್ನೇ ನೋಡುತ್ತ ಅಲ್ಲಾಡದಂತೆ ಕುಳಿತುಬಿಡುತ್ತಿದ್ದ. ತನ್ನ ಆಪ್ತನಿವೇದನೆಯ ತಾಣವಾಗಿ ಗೋಡೆಯನ್ನು ಬದಲಾಯಿಸಿಕೊಂಡಿದ್ದ. ತಾನು ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆದ ಖುಷಿಯನ್ನು ಹಂಚಿಕೊಂಡಿದ್ದೂ ಸಹ ಈ ಗೋಡೆಯ ಜೊತೆಗೆ ಎಂದರೂ ತಪ್ಪಿಲ್ಲ ನೋಡಿ. ಈ ಗೋಡೆಯ ಎದುರು ಬಂದಾಗಲೆಲ್ಲ ವಿನಯಚಂದ್ರನ ಮನಸಿನ ಪ್ರೊಜೆಕ್ಟರ್ ಬಿಚ್ಚಿಕೊಂಡು ಗೋಡೆಯ ಮೇಲೆ ಸಿನೆಮಾದಂತೆ ಪ್ರದರ್ಶನವಾಗುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ.
                 ತನ್ನ ತಂಗಿಯನ್ನು ವಿನಯಚಂದ್ರ ಯಾವಾಗಲೂ ಗೋಳು ಹೊಯ್ದುಕೊಳ್ಳುತ್ತಾನೆ ಎಂದು ಅಂದುಕೊಳ್ಳುವಂತಿಲ್ಲ. ಆಕೆಯೆಂದರೆ ಆತನಿಗೆ ಅಚ್ಚು ಮೆಚ್ಚಿನ ಹುಚ್ಚು ಇದ್ದಿದ್ದು ಸುಳ್ಳಲ್ಲ. ಸದಾ ಜಗಳ ಕಾಯುತ್ತಾನಾದರೂ ಹಾಗೆ ಮಾಡದಿದ್ದರೆ ಏನೋ ಕಳೆದುಕೊಂಡ ಭಾವ. ಆಕೆಯೂ ವಿನಯಚಂದ್ರನ ಜೊತೆಗೆ ಆತನ ಸರಿಸಮನಾಗಿ ಜಗಳ ಕಾಯುತ್ತಾಳೆ ಎನ್ನುವುದು ಗಮನಿಸಬೇಕಾದ ಅಂಶ. ಇಬ್ಬರ ಜಗಳವನ್ನು ತಂದೆ-ತಾಯಿ ಅನೇಕ ಸಾರಿ ಪರಿಹರಿಸಿಯೂ ಇದ್ದಾರೆ. ಆದರೆ ಇವೆಲ್ಲ ಹುಚ್ಚಾಟಗಳು ಎಂಬುದು ಗೊತ್ತಾದಾಗ ಜಗಳ ಮಾಡಿಕೊಳ್ಳಲಿ ಬಿಡಿ.. ಮತ್ತಷ್ಟು ಆಪ್ತರಾಗುತ್ತಾರೆ ಎಂದು ಸುಮ್ಮನಾಗಿದ್ದರು. ಆದರೆ ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋಗುತ್ತಾನೆಂಬ ವಿಷಯಕ್ಕೆ ಮಾತ್ರ ಅಂಜಲಿ ಜಗಳ ಕಾಯದೇ ತನ್ನ ಮನದಾಳದ ಆತಂಕ ಹೊರಹಾಕಿದ್ದಳು..
                `ಅಲ್ದಾ. ಅಣಾ.. ನಿಂಗಳ ಆ ಕಬ್ಬಡ್ಡಿ ಮ್ಯಾನೇಜ್ ಮೆಂಟಿನ್ವಕೆ ತಲೆ ಇಲ್ಯಾ.. ಹೋಗಿ ಹೋಗಿ ಬಾಂಗ್ಲಾ ದೇಶದಲ್ಲಿ ಕಬ್ಬಡ್ಡಿ ಇಟ್ ಸತ್ತಿದ್ವಲಾ.. ಬ್ಯಾರೆ ಯಾವ ದೇಶವೂ ಕಂಡಿದ್ದಿಲ್ಯನಾ..?' ಎಂದು ಕೇಳಿದ್ದಳು.
                `ಸುಮ್ನಿರೆ ಮಾರಾಯ್ತಿ.. ಗೊತ್ತಿಲ್ದೆ ಹೋದ್ರೆ ಮಾತಾಡಲೆ ಹೋಗಡಾ.. ಪ್ರತಿ ವರ್ಷ ಒಂದ್ ಸಾರಿ ಕಬ್ಬಡ್ಡಿ ವಿಶ್ವಕಪ್ ನೆಡಿತು. ಕಳೆದ ಸಾರಿ ಭಾರತದಲ್ಲಿ ಆಗಿತ್ತು. ಕ್ರಿಕೆಟ್ ನಲ್ಲಿ ಹೆಂಗೆ ಕ್ರಿಕೆಟ್ ಆಡುವ ಖಾಯಂ ರಾಷ್ಟ್ರಗಳಲ್ಲಿ ವಿಶ್ವಕಪ್ ಪಂದ್ಯಾವಳಿಗಳನ್ನು ಪ್ರತಿ ಸಾರಿ ಬೇರೆ ಬೇರೆ ದೇಶಗಳಲ್ಲಿ ನಡಸ್ತ್ವೋ ಹಂಗೆ ಕಬ್ಬಡ್ಡಿಯನ್ನೂವಾ.. ಭಾರತ ಬಿಟ್ಟರೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಕಬ್ಬಡ್ಡಿಯಲ್ಲಿ ಜೋರಾಗಿರುವ ತಂಡಗಳು. ಅಲ್ಲೆಲ್ಲ ನಡೆಸವು ಅಂತ ಇತ್ತೀಚಗೆ ನಿಯಮಗಳು ಬಂಜು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ರಶಿಯಾ, ಇಂಗ್ಲೆಂಡ್, ಅಪಘಾನಿಸ್ತಾನ, ಶ್ರೀಲಂಕಾ, ಜಪಾನ್, ನೇಪಾಳ, ಚೈನೀಸ್ ತೈಪೆ, ಇರಾನ್, ಕೆನಡಾ ಈ ಮುಂತಾದ ರಾಷ್ಟ್ರಗಳೂ ಕಬ್ಬಡ್ಡಿ ಆಡ್ತ. ಪ್ರಮುಖ ರಾಷ್ಟ್ರಗಳಲ್ಲಿ ವಿಶ್ವಕಪ್ ನೆಡಿತು. ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಜನ್ಮ ತಳೆದ ಕಬ್ಬಡ್ಡಿ ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಕಬ್ಬಡ್ಡಿ. ಸಧ್ಯ ವಿಶ್ವದ 2ನೇ ರಾಂಕ್ ನಲ್ ಇದ್ದು ಆ ದೇಶ. ಕಬ್ಬಡ್ಡಿಯನ್ನು ಬಾಂಗ್ಲಾದಲ್ಲಿ ನೆಡಸವು ಹೇಳದು ಅಂತರಾಷ್ಟ್ರೀಯ ಕಬ್ಬಡ್ಡಿ ಫೆಡರೇಷನ್ನು ನಿರ್ಣಯ ಮಾಡ್ತು. ಮೊದ ಮೊದಲು ಮೂರು ವರ್ಷಕ್ಕೆ ಒಂದ್ ಸಾರಿ ಕಬ್ಬಡ್ಡಿ ವಿಶ್ವಕಪ್ ಆಗ್ತಿತ್ತು. ಈಗ ಪ್ರತಿವರ್ಷ ನಡೀತಾ ಇದ್ದು. ಇಲ್ಲಿವರೆಗೂ ನಡೆದ ಎಲ್ಲಾ ವಿಶ್ವಕಪ್ಪುಗಳಲ್ಲಿ ಭಾರತವೇ ಚಾಂಪಿಯನ್ ಆಜು.. ಈ ಸಾರಿ ಬಾಂಗ್ಲಾದೇಶದಲ್ಲಿ ನಡೆಯುವ ವಿಶ್ವಕಪ್ಪಲ್ಲೂ ಆಗವು ಹೇಳದು ಎಲ್ಲರ ಆಸೆ. ನಂದೂವಾ..' ಎಂದು ತಂಗಿಯ ಬಳಿ ಲೆಕ್ಚರ್ ಬಿಗಿದಿದ್ದ ವಿನಯಚಂದ್ರ.
                 ಆತನ ಉತ್ತರ ಕೇಳಿ ವಿಸ್ಮಯ ಹೊಂದಿದ್ದ ಅಂಜಲಿ ಅಪರೂಪಕ್ಕೆ ಕಬ್ಬಡ್ಡಿಯ ಬಗ್ಗೆಯೂ ಆಸಕ್ತಿಯನ್ನು ಹೊಂದಿದಂತೆ ಅನ್ನಿಸುತ್ತಿತ್ತು. ಒಂದಾನೊಂದು ಕಾಲದಲ್ಲಿ ನಮ್ಮದೇ ದೇಶದ ಒಂದು ಭಾಗವಾಗಿದ್ದ ಬಾಂಗ್ಲಾದೇಶದ ಕುರಿತು ಅವಳಿಗೆ ಅಪರೂಪಕ್ಕೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದೆನ್ನಿಸಿದ್ದೇ ಆವಾಗ. `ಅಣಾ.. ಬಾಂಗ್ಲಾದೇಶದ ಬಗ್ಗೆ ನೀ ಎಷ್ಟೆಲ್ಲಾ ತಿಳಕಂಜ್ಯಲಾ.. ಹೇಳಾ...' ಎಂದು ಆವತ್ತೇ ಅವನ ಬಳಿ ಭಿಡೆ ಬಿಟ್ಟು ಕೇಳಿದ್ದಳು.
                  ಇದೇ ಸಮಯವನ್ನು ಕಾಯ್ತಿದ್ದೆ ಎನ್ನುವಂತೆ ವಿನಯಚಂದ್ರ `ಹಿಂಗ್ ಕೇಳು.. ಕೇಳಿದ್ರೆ ಇಲ್ಲೆ ಹೇಳಿ ಹೇಳ್ತ್ನಿಲ್ಲೆ.. ಒಂದ್ ಕಡಿಗೆ ಬಂಗಾಲಕೊಲ್ಲಿ, ಮೂರು ಕಡೆಗಳಲ್ಲಿ ಭಾರತ ದೇಶ ಕೊನೆಯಲ್ಲೊಂದು ಚೂರು ಬರ್ಮಾ ದೇಶ ಬಾಂಗ್ಲಾದ ಸುತ್ತಮುತ್ತ ಇದ್ದು. ಜಗತ್ತಿನ ಬಡದೇಶಗಳಲ್ಲಿ ಒಂದು ಹೇಳುವ ಕುಖ್ಯಾತಿಯೂ ಇದ್ದು. ಹೆಚ್ಚಿನ ಭಾಗ ಗುಡ್ಡಗಾಡು. ಭಾರತದಿಂದ ಹರಿದುಕೊಂಡು ಹೋಗುವ ಗಂಗಾ, ಬ್ರಹ್ಮಪುತ್ರ ನದಿಗಳು ಸಂಗಮವಾಗಿ ಸಮುದ್ರ ಸೇರದು ಬಾಂಗ್ಲಾದೇಶದಲ್ಲೇಯಾ. ಇಲ್ಲೇ ಸುಂದರಬನ್ಸ್ ಹೇಳೋ ಸ್ಥಳ ಇದ್ದಿದ್ದು. ದಿ ಗ್ರೇಟ್ ಬೆಂಗಾಲ್ ಟೈಗರ್ ಇರುವ ಕೆಲವೇ ಕೆಲವು ಜಾಗಗಳಲ್ಲಿ ಒಂದು. 85%ಕ್ಕಿಂತ ಹೆಚ್ಚು ಮುಸ್ಲಿಮರಿದ್ದ. 12-13% ಹಿಂದುಗಳೂ ಇದ್ದ. ಉಳಿದ ಧರ್ಮಗಳವರೂ ಅಲ್ಪಸ್ವಲ್ಪ ಸಂಖ್ಯೆಯಲ್ಲಿದ್ದ. ಚಿತ್ತಗಾಂಗ್ ಹೇಳದು ಇಲ್ಲಿರೋ ಅತ್ಯಂತ ಸುಂದರ ಗುಡ್ಡಗಾಡು ಸ್ಥಳ. ಬಾಂಗ್ಲಾದೇಶದಲ್ಲಿ ಕಬ್ಬಡ್ಡಿಯನ್ನು ಹಡುಡು ಹೇಳಿ ಕರಿತ. ಹಡುಡು ಹೇಳಿ ಕರೆಯುವ ಈ ಕಬ್ಬಡ್ಡಿಯನ್ನು ಬಾಂಗ್ಲಾದೇಶದಲ್ಲಿ 1985ರ ನಂತರ ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿದ್ದ. ಭಾರತಕ್ಕೆ ಹೆಂಗೆ ಹಾಕಿ ರಾಷ್ಟ್ರೀಯ ಕ್ರೀಡೆಯೋ ಬಾಂಗ್ಲಾದೇಶಕ್ಕೆ ಹಡುಡು. ಕಳೆದ ವರ್ಷ ನಡೆದಿದ್ದ ಮಹಿಳಾ ಕಬ್ಬಡ್ಡಿ ವಿಶ್ವಕಪ್ಪಿಗೆ ಭಾರತದ ತಂಡಕ್ಕೆ ನಮ್ಮ ದಕ್ಷಿಣ ಕನ್ನಡದ ಮಮತಾ ಪೂಜಾರಿ ನಾಯಕಿಯಾಗಿತ್ತು. ಅವರ ವಿಶೇಷ ಪ್ರಯತ್ನದಿಂದಾನೇ ಕಬ್ಬಡ್ಡಿಯಲ್ಲಿ ಚಾಂಪಿಯನ್ ಆಪಲೆ ಸಾಧ್ಯವಾಗಿತ್ತು. ಈ ವರ್ಷ ಹುಡುಗರ ತಂಡಕ್ಕೆ ನಾನು ಸೆಲೆಕ್ಟ್ ಆಜಿ. ಈ ವರ್ಷವೂ ನಂಗವ್ವೇ ಗೆಲ್ಲವು ಎನ್ನೋದು ಎಲ್ಲರ ಆಸೆ. ವರ್ಡ್ ಚಾಂಪಿಯನ್ ಶಿಪ್ ಬಿಟ್ಕೊಡಲಿಲ್ಲೆ ಹೇಳಿ ಅಂದ್ಕತ್ತಾ ಇದ್ಯ..' ಎಂದ.
           `ನಾನು ಅದನ್ನೇ ಬೇಡ್ಕ್ಯತ್ನಾ ಅಣಾ..' ಎಂದಳು. ಅಪರೂಪಕ್ಕೆ ಅವಳ ಬೆನ್ನನ್ನು ನೇವರಿಸಿದ್ದ ವಿನಯಚಂದ್ರ. ಅಂಜಲಿ ಸಂತಸದಿಂದ ಉಬ್ಬಿ ಹೋಗಿದ್ದಳು.

**
              ನಾಲ್ಕೈದು ದಿನಗಳು ಕ್ಷಣಗಳಂತೆ ಉರುಳಿದವು.
                ನೋಡ ನೋಡುತ್ತಿದ್ದಂತೆ ವಿನಯಚಂದ್ರ ನವದೆಹಲಿಗೆ ತೆರಳಬೇಕಾದ ದಿನ ಬಂದೇ ಬಿಟ್ಟಿತು. ಬಾಂಗ್ಲಾದೇಶಕ್ಕೆ ತೆರಳುವ ಮುನ್ನ ನವದೆಹಲಿಯಲ್ಲಿ ಕಬ್ಬಡ್ಡಿ ತಂಡ ವಾರಗಳಿಗೂ ಹೆಚ್ಚಿನ ಕಾಲ ತರಬೇತಿಯನ್ನು ಪಡೆಯಬೇಕಿತ್ತು. ವಿನಯಚಂದ್ರ ನವದೆಹಲಿಗೆ ಹೊರಡಲು ತಯಾರಾದ.
               ಶಿರಸಿಯಿಂದ ಬೆಂಗಳೂರು, ಬೆಂಗಳೂರಿನಿಂದ ವಿಮಾನದ ಮೂಲಕ ನವದೆಹಲಿ ತಲುಪುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೊರಡುವ ಮುನ್ನ ತನ್ನ ಇಷ್ಟ ದೈವ ಗುಡ್ಡೇ ತೋಟದ ಗಣಪನ ಪೂಜೆ ಮಾಡುವುದು ವಿನಯಚಂದ್ರನ ಗುಣ. ಗಣಪನಿಗೆ ವಂದಿಸಬೇಕೆಂಬ ಕಾರಣಕ್ಕಾಗಿ ತನ್ನಿಷ್ಟದ ಗುಡ್ಡೇತೋಟದ ಕೋಟೆವಿನಾಯಕನ ಸನ್ನಿಧಿಗೆ ತೆರಳಿ ದೇವರಿಗೆ ಅಡ್ಡಬಿದ್ದು, ತನ್ನ ಮನದಾಸೆಯನ್ನು ಅಂದುಕೊಂಡು ಹಣ್ಣು-ಕಾಯಿ ಮಾಡಿಸಿಕೊಂಡು ಬಂದ. ದೇವಸ್ಥಾನಕ್ಕೆ ಹೋಗಿ ಬಂದ ನಂತರ ವಿನಯಚಂದ್ರ ಮತ್ತಷ್ಟು ಉಲ್ಲಸಿತನಾದ. ಪ್ರಕೃತಿಯ ರಮ್ಯತಾಣವಾದ ಗುಡ್ಡೇತೋಟ ತನ್ನ ನಿಸರ್ಗ ಸೊಬಗಿನ ಕಾರಣದಿಂದ ಆತನ ಮನಸ್ಸನ್ನು ತಣಿಸಿತು.
                   ಹೊರಡುವ ದಿನ ಬಂದೇ ಬಿಟ್ಟಿತು. ಯಾವಾಗಲೂ ಮಗ ಕಬ್ಬಡ್ಡಿಯ ಕಾರಣಕ್ಕೆ ಮನೆಯಿಂದ ಹೊರಟಾಗಲೂ ಆತನನ್ನು ಬೀಳ್ಕೊಡಲು ಬರದ ಶಿವರಾಮ ಹೆಗಡೆ ಅಂದು ಮಾತ್ರ ತಾವೇ ಬರುತ್ತೇನೆ ಎಂದು ತಮ್ಮ ಹಳೆಯ ಮಹೀಂದ್ರಾ ಗಾಡಿಯನ್ನು ಹೊರತೆಗೆದೇ ಬಿಟ್ಟರು.
                   `ಥೋ.. ಅಪ್ಪಯ್ಯಾ.. ಈ ಗಾಡಿಯಲ್ಲಿ ಹೋದ್ರೆ ಆನು ನಾಳೆ ಬೆಂಗಳೂರು ಮುಟ್ಟತ್ನನಾ ಮಾರಾಯಾ..' ಎಂದು ಗೊಣಗಿಕೊಂಡರೂ ಅಪ್ಪನ ಬಳಿ ಬೇಡ ಎನ್ನಲು ಮನಸ್ಸಾಗಲಿಲ್ಲ. 1990ರ ದಶಕದ ಮಹಿಂದ್ರಾ ಜೀಪನ್ನು ಪ್ರಸ್ಟೀಜ್ ಪ್ರಶ್ನೆಗೆ ಬಲಿಯಾಗಿ 90ರ ದಶಕದಲ್ಲೇ ಹೆಗಡೇರು ಕೊಂಡುಕೊಂಡಿದ್ದರು. `ಥೋ ಶಿವರಾಮಾ.. ಮಾರುತಿ ಕಾರು ತಗಳದು ಬಿಟ್ಟಿಕ್ಕೆ.. ಈ ಮಹಿಂದ್ರಾ ಜೀಪು ಎಂತಕ್ಕೆ ತಗಂಡ್ಯಾ...' ಎಂದು ಅನೇಕರು ಅಪದ್ಧ ಮಾತನಾಡಿದ್ದರೂ ಬಿಡದೇ ಈ ಜೀಪನ್ನು ಕೊಂಡಿದ್ದರು. ಕೊಂಡ ನಂತರ ಅನೇಕ ವರ್ಷಗಳ ವರೆಗೆ ಮಹಿಂದ್ರಾ ಜೀಪು ಸುರಳೀತ ಹಾಗೂ ಸುಲಲಿತವಾಗಿ ಕೆಲಸ ಮಾಡಿತ್ತು. ಆದರೆ 2 ದಶಕ ಕಳೆದು ಹೋಯ್ತಲ್ಲ ನೋಡಿ. ಈಗ ಜೀಪಿಗೂ ಹೆಗಡೇರಂತೆ ವಯಸ್ಸಾಗಿದೆ. ಮೊದಲಿನ ಹುಮ್ಮಸ್ಸಿಲ್ಲ. ಯಾವಾಗ ಬೇಕಂದರೆ ಆವಾಗ ಕೆಲಸಕ್ಕೆ ಚಕ್ಕರ್ ಹಾಕುವ ಗುಣವನ್ನು ಬೆಳೆಸಿಕೊಂಡುಬಿಟ್ಟಿದೆ. ಈ ಜೀಪಿನಲ್ಲಿಯೇ ಮಗನನ್ನು ಬೆಂಗಳೂರಿನ ಬಸ್ಸು ಹತ್ತಿಸಲು ಹೆಡೆಯವರು ಹೊರತೆಗೆದಿದ್ದರು.

(ಮುಂದುವರಿಯುತ್ತದೆ)

No comments:

Post a Comment