Friday, January 17, 2014

ಬೆಂಗಾಲಿ ಸುಂದರಿ-2

              ವಿನಯಚಂದ್ರನ ಅಪ್ಪ ಶಿವರಾಮ ಹೆಗಡೆ ಸಣ್ಣ ಸಾಮಾನ್ಯ ಮನುಷ್ಯನಲ್ಲ. ಪಿರ್ತಾರ್ಜಿತವಾಗಿ ಬಂದ 8 ಎಕರೆ ತೋಟ ತೋಟಕ್ಕೆ ಎಕರೆಗೆ 9 ಎಕರೆಯಂತೆ ಬೆಟ್ಟ, ವರ್ಷಕ್ಕೆ ಎರಡು ಬೆಳೆ ಬೆಳೆಯುವ ಮೂರೆಕರೆ ಗದ್ದೆಯಿತ್ತು. ಇಷ್ಟೆಲ್ಲ ಇದೆ ಎಂದಾದ ಮೇಲೆ ಶಿವರಾಮ ಹೆಗಡೆ ಸಣ್ಣ ಹಿಡುವಳಿದಾರ ಎಂದು ಕರೆದರೆ ತಪ್ಪಾಗುತ್ತದೆ. ಸುತ್ತಮುತ್ತಲ ಊರುಗಳಲ್ಲಿ ಅವರನ್ನು ದೊಡ್ಡ ಹಿಡುವಳಿದಾರ ಎಂದು ಕರೆಯುವ ಬದಲು ಶಿವರಾಮ ಹೆಗಡೇರು ಎಂದೇ ಕರೆಯಲಾಗುತ್ತದೆ. ಜಮೀನ್ದಾರ ಎಂದ ಮೇಲೆ ಅದಕ್ಕೆ ತಕ್ಕಂತೆ ಗತ್ತು ಗಾಂಭೀರ್ಯವನ್ನು ತೋರಿಸದೇ ಇರಲಾದೀತೆ? ಹೆಗಡೇರು ಎನ್ನಿಸಿಕೊಂಡ ಕಾರಣಕ್ಕೆ ತಮ್ಮ ಭಾಗದಲ್ಲಿ ಹಲವು ಮೊದಲುಗಳನ್ನು ಶುರುಮಾಡಿದ ಕೀರ್ತಿಯೂ ಶಿವರಾಮ ಹೆಗಡೆಯವರದ್ದೇ ಎಂದರೆ ತಪ್ಪಲ್ಲ ಬಿಡಿ.
               ತಮ್ಮೂರ ಫಾಸಲೆಯಲ್ಲಿ ಮೊಟ್ಟಮೊದಲು ಎಸ್ಸೆಎಎಲ್ಸಿಯ ನಂತರದ ತರಗತಿಯಲ್ಲಿ ಓದಿದ್ದೆಂದರೆ ಅದು ಶಿವರಾಮ ಹೆಗಡೇರೇ ಸೈ. ಊರಿನವರಿಗೆ ಹಾಗೂ ಸುತ್ತಮುತ್ತಲ ಮಂದಿಗೆ ಅದೇ ಕಾರಣಕ್ಕೆ ಶಿವರಾಮ ಹೆಗಡೆಯವರೆಂದರೆ ಆ ದಿನಗಳಿಂದಲೇ ಭಯ, ಗೌರವ ಹಾಗೂ ಕುತೂಹಲ. ತಮ್ಮೂರು ಮುಖ್ಯ ಹೆದ್ದಾರಿಯಿಂದ ನಾಲ್ಕೈದು ಕಿ.ಮಿ ದೂರವಿದ್ದರೂ ಪ್ರತಿದಿನ ಮನೆಗೆ ಎರಡಾದರೂ ಪೇಪರ್ ಬರುತ್ತಿತ್ತು. ಬೆಳಿಗ್ಗೆಯೇ ಮೇನ್ ರೋಡಿನಲ್ಲಿರುವ ಏಜೆಂಟನ ಕೈಯಿಂದ ಹೊರಡುವ ಪತ್ರಿಕೆ ಹೆಗಡೆಯವರ ಮನೆಗೆ ಮದ್ಯಾಹ್ನ ತಲುಪುವ ವೇಳೆಗೆ ದಾರಿ ಮಧ್ಯದಲ್ಲಿ ಕನಿಷ್ಟ ಐದು ಜನರ ಕೈದಾಟಿ ಬರುತ್ತಿದ್ದುದು ವಿಶೇಷ. ಪೇಪರ್ ಏಜೆಂಟ ವಿಷ್ಣುರಾವ್ ನಿಂದ ಸ್ಥಳೀಯ ಶಾಲೆಗೆ ಬರುವ ಭಂಡಾರ್ಕರ್ ಮಾಸ್ತರ್ರು, ಅಲ್ಲಿಂದ ಹತ್ತಿರದ ಮನೆಗೆ ಬರುವ ನಾಗವೇಣಿ ಅವಳ ಕೈದಾಟಿ ತಿಮ್ಮ ಹಾಗೂ ಕೊನೆಯದಾಗಿ ಶಿವರಾಮ ಹೆಗಡೆಯವರ ಮನೆಯ ಕೆಲಸದ ಆಳು ರಾಮನ ಮೂಲಕ ಹೆಗಡೆಯವರ ಮನೆಗೆ ಬರುತ್ತಿತ್ತು. ಮಾಸ್ತರ್ರು ಪೇಪರ್ ಓದುತ್ತಿದ್ದರಾದರೂ ಉಳಿದವರು ಅಕ್ಷರ ಕಲಿತಿದ್ದು ಅಷ್ಟಕ್ಕಷ್ಟೆ. ಆ ಕಾರಣದಿಂದ ಮದ್ಯಾಹ್ನ ಸಮಯಕ್ಕಾದರೂ ಪೇಪರ್ ಮನೆಗೆ ಬರುತ್ತಿತ್ತು. ಎಲ್ಲರೂ ಓದಲು ಕಲಿತಿದ್ದರೆ ಬಹುಶಃ ಪತ್ರಿಕೆ ಮರುದಿನ ಬಂದು ಮುಟ್ಟುತ್ತಿತ್ತೋ ಏನೋ ಎಂದು ಆಗಾಗ ಹೆಗಡೆಯವರು ಹೇಳುತ್ತಿದ್ದ ಮಾತು ಸುಳ್ಳಲ್ಲ ಬಿಡಿ.
                ಬೆಳಿಗ್ಗೆ ಮುಂಚೆ ಹೆಗಡೆಯವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ರಾಮ ಮಧ್ಯದಲ್ಲಿ ಕೆಲಸವನ್ನು ಬಿಟ್ಟು ಪೇಪರ್ ತರಲಿಕ್ಕೆಂದೇ ತಿಮ್ಮನ ಮನೆಯ ಬಳಿ ಹೋಗುತ್ತಿದ್ದುದು ಪ್ರತಿದಿನದ ವಿಶೇಷ ಕಾಯಕ. ಪೇಪರ್ ಮನೆಗೆ ಬಂದ ತಕ್ಷಣ ಮನೆಯಲ್ಲಿದ್ದಾಗಲೆಲ್ಲ ಮೊಟ್ಟ ಮೊದಲು ಓದುತ್ತಿದ್ದುದು ವಿನಯಚಂದ್ರನೇ. ಆಮೇಲೆ ಉಳಿದವರಿಗೆ ಸಿಗುತ್ತಿತ್ತು.
               `ಯಲ್ಲಾ ಬಿಟ್ಟು ಮಗ ಭಂಗಿ ನೆಟ್ಟ ಹೇಳವಾಂಗೆ ಆಗ್ತಾ ಹೆಂಗೆ ನೀ ಕಬ್ಬಡ್ಡಿ ಆಡದು..?' ಎಂದು ಆಗಾಗ ಮಗನನ್ನು ಬಯ್ಯದಿದ್ದರೆ ಶಿವರಾಮ ಹೆಗಡೆಯವರಿಗೆ ಏನನ್ನೋ ಕಳೆದುಕೊಂಡಂತಹ ಅನುಭವ. ಕೊನೆ ಕೊನೆಗಂತೂ ಮಗನ ಕಬ್ಬಡ್ಡಿ ಗೀಳಿನಿಂದ ಸುಬ್ಬುಲಕ್ಷ್ಮಿಯವರ ಬೆಳಗಿನ ಸುಪ್ರಭಾತವಾದರೂ ತಪ್ಪುತ್ತದೆ, ಶಿವರಾಮ ಹೆಗಡೆಯವರು ಮಗನನ್ನು ಬಯ್ಯುವುದು ತಪ್ಪುವುದಿಲ್ಲ ಎನ್ನುವಂತಾಗಿತ್ತು.
              ಮನೆಗೆ ಬರುತ್ತಿದ್ದ ಆಳುಮಕ್ಕಳು `ಸಣ್ ಹೆಗ್ಡೇರೆ.. ಇವತ್ ನೆಲೆಮಾಂವಿನಾಗೆ ಕಬ್ಬಡ್ಡಿ ಟೂರ್ನಮೆಂಟೈತಿ.. ನಿಮಗೆ ಸುದ್ದಿ ಗೊತ್ತಾಗ್ಲನ್ರಾ?' ಎಂದೋ ಅಥವಾ ಇನ್ನೆಲ್ಲೋ ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದ ಸುದ್ದಿ ಹೇಳಿದರೋ ಮುಗಿದೇ ಹೋಯಿತು. ಆ ದಿನವಿಡಿ ಶಿವರಾಮ ಹೆಗಡೆಯವರ ಸಹಸ್ರನಾಮಾರ್ಚನೆ ಕಟ್ಟಿಟ್ಟದ್ದೇ ಎನ್ನಬಹುದು. ಈ ಕಾರಣದಿಂದಲೇ ವಿನಯಚಂದ್ರ ಕಬ್ಬಡ್ಡಿ ಪಂದ್ಯಾವಳಿಯ ಸುದ್ದಿಯಿದ್ದರೆ ತನ್ನೊಬ್ಬನ ಎದುರಿಗೆ ಹೇಳಬೇಕು ಎಂದು ತಾಕೀತು ಮಾಡಿಬಿಟ್ಟಿದ್ದ.
             `ಈಗ ಹಿಂಗೆಳ್ತೆ ನೀನು.. ಆನೂ ಒಂದಿನ ವರ್ಡ್ ಫೇಮಸ್ ಆಗ್ತಿ.. ಆವಾಗ ಆನು ಮಾತಾಡ್ತ್ನಾ...' ಎಂದು ತಂದೆಯ ಬೈಗುಳಕ್ಕೆ ಉತ್ತರ ನೀಡುವ ಮಗ. ಮಗನ ಉತ್ತರ ಬರುವುದರೊಳಗಾಗಿ ಶಿವರಾಮ ಹೆಗಡೆ `ನೀ ಕಬ್ಬಡ್ಡಿ ಆಡದೇ ಚೊಲೋದೋ ಮಾರಾಯಾ.. ಎಲ್ಲಾ ಹುಡುಗರ ಹಾಂಗೆ ಕ್ರಿಕೆಟ್ ಆಡ್ತಿಲ್ಯಲಾ.. ಸಾಕು ಬಿಡು..' ಎಂದಾಗ ಮಾತ್ರ ವಿನಯಚಂದ್ರ ಮುಗುಳುನಕ್ಕು ಸುಮ್ಮನಾಗುತ್ತಿದ್ದ. ಕಬ್ಬಡ್ಡಿ ಆಟ ಕ್ರಿಕೆಟಿಗಿಂತ ಒಳ್ಳೆಯದು ಎನ್ನುವ ಭಾವನೆ ತಂದೆಯ ಮನಸ್ಸಿನಲ್ಲಿದೆಯಲ್ಲ ಭಗವಂತಾ.. ಅಷ್ಟು ಸಾಕು ಎಂದುಕೊಳ್ಳುತ್ತಿದ್ದ ವಿನಯಚಂದ್ರ.
               ಮಗ ಇಂತದ್ದೇ ಓದಲಿ, ಇಂತದ್ದನ್ನೇ ಮಾಡಲಿ ಎಂದು ಯಾವತ್ತೂ ಶಿವರಾಮ ಹೆಗಡೆಯವರು ಒತ್ತಾಯ ಮಾಡಿಲ್ಲ, ಒತ್ತಡವನ್ನೂ ಹೇರಿಲ್ಲ. ಮಗ ಏನು ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾನೆ. ಆತನಿಗೆ ಉತ್ತಮ ದಾರಿಯಲ್ಲಿ ಹೋಗುವ ಸಂಸ್ಕಾರವನ್ನೇ ಧಾರೆಯೆರೆದು ನೀಡಿದ್ದೇನೆ ಎನ್ನುವ ಆತ್ಮವಿಶ್ವಾಸದ ಕಾರಣ ಶಿವರಾಮ ಹೆಗಡೆಯವರು ಆತನ ಓದಿನ ಕುರಿತು ಅಥವಾ ಕಬ್ಬಡ್ಡಿ ಕೋಚಿಂಗಿನ ಕುರಿತು ಅಥವಾ ಕಬ್ಬಡ್ಡಿಗಾಗಿ ಬೇರೆ ಬೇರೆ ರಾಜ್ಯಗಳಿಗೆ ತೆರಳುವ ಕುರಿತು ಯಾವುದೇ ತಡೆಯೊಡ್ಡಿಲ್ಲ. ಅಪ್ಪಯ್ಯ ಸಿಕ್ಕಾಪಟ್ಟೆ ಸ್ವಾತಂತ್ರ್ಯ ಕೊಟ್ಟಿದ್ದ ಹೇಳಿ ವಿನಯಚಂದ್ರನೂ ಅಂಕೆ ಮೀರಿಲ್ಲ. ಓದಿನಲ್ಲೂ ಹಿಂದೆ ಬಿಳಲಿಲ್ಲ. ಎಲ್ಲ ತಂದೆ-ತಾಯಿಗಳೂ ಮಕ್ಕಳು ಮೊದಲ ರಾಂಕೇ ಬರಬೇಕು, ಶೆ.95ರ ಮೇಲೆ ಅಂಕಗಳು ಬರಲೇಬೇಕು ಎಂದು ಹೇಳಿದ್ದರೆ ವಿನಯಚಂದ್ರನ ಪಾಡು ಇಷ್ಟು ಹೊತ್ತಿಗೆ ಏನಾಗಿಬಿಡುತ್ತಿತ್ತೋ. ಶಿವರಾಮ ಹೆಗಡೆಯವರು ಅಂತಹ ತಪ್ಪನ್ನು ಮಾಡಿರಲಿಲ್ಲ. ವಿನಯಚಂದ್ರ ಕೂಡ ಓದಿನಲ್ಲಿ ಟಠಡಢಣ ಆಗಲಿಲ್ಲ.
                ಮಗನ ಎದುರು ಆತ ಕಬ್ಬಡ್ಡಿ ಆಟ ಆಡುವುದನ್ನು ವಿರೋಧ ಮಾಡಿದಂತೆ ಮಾತನಾಡುವ ಶಿವರಾಮ ಹೆಗಡೆಯವರು ಆತ ಕಬ್ಬಡ್ಡಿಯಿಂದಲೇ ಒಂದೊಂದೇ ಮೆಟ್ಟಿಲು ಹತ್ತಿ ಗೆಲುವನ್ನು ಸಾಧಿಸುತ್ತ ಹೋದುದನ್ನು ಕಂಡು ಒಳಗೊಳಗೆ ಖುಷಿಪಟ್ಟರೂ ಹೊರಗೆ ತೋರಿಸಿಕೊಡಲಿಲ್ಲ. ಇಂತಹ ಶಿವರಾಮ ಹೆಗಡೆಯವರು ಮಗ ನ್ಯಾಷನಲ್ ಟೀಮಿಗೆ ಆಯ್ಕೆಯಾಗಿದ್ದಾನೆ. ವಿಶ್ವಕಪ್ಪಿನಲ್ಲಿ ಆಡುತ್ತಾನೆ ಎಂದಾಗ ಒಂದು ಸಾರಿ ಖುಷಿಯಿಂದ ತುಂಡುಗುಪ್ಪಳ ಹೊಡೆದಿದ್ದರು. ಆದರೆ ವಿಶ್ವಕಪ್ ಪಂದ್ಯಾವಳಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ ಎಂದಾಗ ಮಾತ್ರ ಕಸಿವಿಸಿಯನ್ನು ಅನುಭವಿಸಿದ್ದರು.
              `ಅಲ್ದಾ ತಮಾ.. ನೀ ವಿಶ್ವಕಪ್ಪಿಗೆ ಆಯ್ಕೆಯಾಗಿದ್ದು ಖುಷಿನೇಯಾ.. ಆದರೆ ಬಾಂಗ್ಲಾದೇಶದಲ್ಲಿ ವಿಶ್ವಕಪ್ ಆಕ್ತಡಾ ಮಾರಾಯಾ.. ಅಲ್ಲಿಗೆ ಹೋಗಿ ಹೆಂಗೆ ಆಡತ್ಯಾ..?' ಎಂದು ಮಗನ ಎದುರು ಹೇಳಿಯೂ ಹೇಳಿದ್ದರು. ಆಗ ಮಾತ್ರ ವಿನಯಚಂದ್ರ ಅಪ್ಪನ ಮಾತಿಗೆ ಬೆರಗಾಗಿದ್ದ.
             `ಅಲ್ದಾ ಅಪ್ಪಯ್ಯಾ.. ಆನು ಕಬ್ಬಡ್ಡಿಗೆ ಹೇಳಿ ಸುಮಾರ್ ಸಾರಿ ಮನಿಂದ ಬೇರೆ ಬೇರೆ ಕಡಿಗೆ ಹೋಜಿ. ಈಗ ಮೂರು ವರ್ಷದಿಂದ ರಾಜ್ಯದ ತಂಡದ ಪರವಾಗಿ ಆಡ್ತಾ ಇದ್ದಿ. ಮೊದಲನೇ ವರ್ಷ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಆಮೇಲೆ ಭೋಪಾಲಕ್ಕೆ ಈ ವರ್ಷ ಓರಿಸ್ಸಾದ ಕಟಕ್ ಗೆ ಹೋಗಿ ಬಂಜನಿಲ್ಯನಾ.. ಈಗ್ಲೂ ಹಂಗೇಯಾ.. ಬಾಂಗ್ಲಾದೇಶಕ್ಕೆ ಹೋಗಿ ಬಂದರಾತು..' ಎಂದು ಉತ್ತರಿಸಿದ.
           ಹೇಳುವುದಕ್ಕೇನೋ ಹೇಳಿದ ವಿನಯಚಂದ್ರ. ಅಸಲಿಗೆ ಅಲ್ಲಿಗೆ ಹೋದರೆ ಹೇಗೋ ಏನೋ ಎನ್ನುವ ಭಾವನೆ ಕಾಡದೇ ಇರಲಿಲ್ಲ.
             `ತಮಾ.. ಇಲ್ಲೀವರೆಗೆ ಭಾರತದ್ದೇ ಬೇರೆ ಬೇರೆ ರಾಜ್ಯಗಳಿಗೆ ನೀನು ಹೋಗಿದ್ದೆ ಹಂಗಾಗಿ ಎಂತಾ ಸಮಸ್ಯೆ ಆಜಿಲ್ಯಾ.. ಆದರೆ ಇದು ಬಾಂಗ್ಲಾದೇಶ.. ಹೆಸರು ಚೊಲೋ ಇದ್ದು. ಆದರೆ ಈಗಿತ್ಲಾಗಿ ಸಿಕ್ಕಾಪಟ್ಟೆ ಗಲಾಟೆ ನಡೀತಾ ಇದ್ದಡಾ ಹೇಳಿ ಸುದ್ದಿ.. ಎಂತಾದ್ರೂ ಹೆಚ್ಚೂಕಡಿಮೆ ಆದರೆ ಯಂತಾ ಮಾಡವಾ..?' ಎಂದು ತಮ್ಮ ಮನದಾಳದ ಭೀತಿಯನ್ನು ಮಗನ ಮುಂದಿಟ್ಟರು.
             `ಅಯ್ಯೋ ಮಾರಾಯಾ.. ಅಂತಾ ನಕ್ಸಲೈಟ್ ಹಾವಳಿ ಏರಿಯಾ ಓರಿಸ್ಸಾ, ಛತ್ತೀಸಗಢಕ್ಕೇ ಹೋಗಿ ಬಂಜಿ.. ಇದೆಂತದಾ.. ಎಂತದ್ದೂ ಆಕ್ತಿಲ್ಲೆ.. ನೀ ತಲೆಬಿಸಿ ಮಾಡ್ಕ್ಯಳಡಾ' ಎಂದು ತಂದೆಯ ಮಾತನ್ನು ಹಾರಿಸಿದ್ದ ವಿನಯಚಂದ್ರ.
              ಮಗ ಹೀಗೆಂದಿದ್ದರೂ ಮನದಾಳದಲ್ಲಿ ಭೀತಿಯನ್ನು ಹೊಂದಿದ್ದ ಶಿವರಾಮ ಹೆಗಡೆಯವರು ತಮ್ಮ ಬಳಗದಲ್ಲೆಲ್ಲ ಬಾಂಗ್ಲಾದೇಶದ ಕುರಿತು, ಈಗ ಅಲ್ಲಿನ ಪರಿಸ್ಥತಿಯ ಬಗ್ಗೆ ಮಾಹಿತಿ ಕಲೆಹಾಕತೊಡಗಿದ್ದರು. ಮಗ ಬಾಂಗ್ಲಾದೇಶಕ್ಕೆ ಹೊರಡುವ ಮುನ್ನ ಸಾಧ್ಯವಾದಷ್ಟು ತಾನು ಮಾಹಿತಿ ನೀಡಬಹುದು ಎನ್ನುವ ಆಲೋಚನೆ ಅವರದ್ದು. ಶಿವರಾಮ ಹೆಗಡೆಯವರ ಮಿತ್ರಮಂಡಳಿಗೂ ಬಾಂಗ್ಲಾದೇಶದ ಬಗ್ಗೆ ಗೊತ್ತಿದ್ದುದು ಅಷ್ಟಕ್ಕಷ್ಟೇ ಆಗಿತ್ತು. ಹಿಂದೊಮ್ಮೆ ಭಾರತದ್ದೇ ಆದ ರಾಷ್ಟ್ರ. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ಸೋತ ರಾಜ ಬಾಂಗ್ಲಾದವನು. ಬ್ರಿಟೀಷರ ಆಳ್ವಿಕೆಗೆ ಮೊದಲ ಬಾರಿಗೆ ಒಳಪಟ್ಟ ಪ್ರದೇಶ. ಸುಭಾಷಚಂದ್ರಭೋಸರು ಓಡಾಡಿದ ಸ್ಥಳ. ಸ್ವಾತಂತ್ರ್ಯ ಹೋರಾಟಕ್ಕೆ ಉಗ್ರರೂಪದ ಕೆಚ್ಚು ಹಾಗೂ ಕಿಚ್ಚನ್ನು ನೀಡಿದ ದೇಶ, ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ಬಾಂಗ್ಲಾ ನಿರಾಶ್ರಿತರೆಂಬ ಸಮಸ್ಯೆಯನ್ನು ಭಾರತದೊಳಗೆ ತಳ್ಳುತ್ತಿರುವ ರಾಷ್ಟ್ರ ಇತ್ಯಾದಿ ಇತ್ಯಾದಿ ಮಾಹಿತಿಗಳು ಶಿವರಾಮ ಹೆಗಡೆಯವರಿಗೆ ಲಭ್ಯವಾದವು.
                ಮುಸ್ಲಿಂ ರಾಷ್ಟ್ರವಾಗಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಹಿಂದುಗಳಿದ್ದಾರೆ. ಬೆಂಗಾಲಿ ಬಾಬುಗಳಿದ್ದಾರೆ. ಬಿಳಿ ಸೀರೆಯ ಬೆಂಗಾಲಿ ಹೆಂಗಸರಿದ್ದಾರೆ. ಬ್ರಾಹ್ಮಣರೂ ಇದ್ದಾರೆ. ದೇಶವನ್ನು ಆಳುತ್ತಿರುವುದು ಓರ್ವ ಮಹಿಳೆ. ಮಹಿಳೆಯ ವಿರುದ್ಧ ಹೋರಾಡುತ್ತಿರುವಾಕೆಯೂ ಇನ್ನೊಬ್ಬ ಮಹಿಳೆ ಇತ್ಯಾದಿ ಕೌತುಕಭರಿತ ವಿಷಯಗಳೂ ಶಿವರಾಮ ಹೆಗಡೆಯವರ ಬಳಿ ಸಂಗ್ರಹವಾದವು. ಮಗ ಹೊರಡುವ ಮುನ್ನ ಈ ಎಲ್ಲ ವಿಷಯಗಳನ್ನೂ ತಿಳಿಸಬೇಕು ಎನ್ನುವುದು ಅವರ ಬಯಕೆ. ಅದಕ್ಕೆ ಸಾಧ್ಯವಾದ ಮಟ್ಟಿಗೆ ಎಲ್ಲ ವಿವರಗಳನ್ನೂ ಸಂಗ್ರಹಣೆ ಮಾಡತೊಡಗಿದ್ದರು. ಟಿಪ್ಪಣಿಯ ಮೂಲಕ ಬರೆದಿಡಲು ಆರಂಭಿಸಿದ್ದರು.

**
               
                `ಹೋಯ್.. ಏನೂಂದ್ರೆ... ಇಲ್ ಕೇಳಚ.. ವಿನಯಂಗೆ ಸ್ವಲ್ಪ ಹೇಳಿ.. ಆ ಬಾಂಗ್ಲಾದೇಶಕ್ಕೆಲ್ಲಾ ಹೋಪದು ಬ್ಯಾಡಾ ಹೇಳಿ.. ಎಂತಕ್ಕೆ ಬೇಕು ಹೊರ ದೇಶದ ಉಸಾಬರಿ.. ಒಂಚೂರು ಬುದ್ದಿ ಹೇಳಲಾಗ್ತಿಲ್ಯಾ..?' ಎಂಬ ಮಾತು ಕೇಳಿತೆಂದರೆ ಅದು ಶಿವರಾಮ ಹೆಗಡೆಯವರ ಏಕಮಾತ್ರ ಧರ್ಮಪತ್ನಿ ಸುಶೀಲಾ ಎಂದೇ ಹೇಳಬಹುದು.
               ಟಿಪಿಕಲ್ ಹಳ್ಳಿ ಹೆಂಗಸು. ಆಟಿವಿ, ಈಟಿವಿ, ಊಟಿವಿ ಸೇರಿದಂತೆ ಎಲ್ಲಾ ಕನ್ನಡ ಚಾನಲ್ಲುಗಳಲ್ಲಿ ಬರುವ ಒಂದರಿಂದ ಹತ್ತರವರೆಗಿನ ಬಾಗಿಲುಗಳ ಹೆಸರಿನ ಧಾರಾವಾಹಿಗಳ ಪರಮ ಭಕ್ತೆ. ಲಲಿತಾ ಸಹಸ್ರನಾಮ, ಗಣಪತಿ ಉಪನಿಷತ್ತಿನ ಕನ್ನಡ ಅನುವಾದ,  ಸೇರಿದಂತೆ ಹಲವಾರು ಮಂತ್ರಗಳನ್ನು ಪಠಣ ಮಾಡುವ ಮೂಲಕ ದೇವರು ದಿಂಡರನ್ನೂ ಒಲಿಸಿಕೊಂಡಿದ್ದಾಳೆ. ಮಗನೆಂದರೆ ಅಚ್ಚುಮೆಚ್ಚು. ಆಗಾಗ ಮಗನನ್ನು ಗದರಿಸುತ್ತಾಳಾದರೂ ಅದು ಪ್ರೀತಿಯಿಂದಲೇ ಹೊರತು ಮತ್ತಿನ್ಯಾವ ಭಾವದಿಂದಲ್ಲ.
              ಕಬ್ಬಡ್ಡಿ ಆಟದ ಕಡೆಗೆ ವಿನಯಚಂದ್ರ ಹೊರಳಿದಾಗ ಶಿವರಾಮ ಹೆಗಡೆಯವರು ಅದರ ವಿರುದ್ಧ ಮಾತನಾಡಿದರೂ ಸುಶೀಲಾ ಹೆಗಡೆ ಮಾತ್ರ ಆತನ ಬೆನ್ನಿಗೆ ನಿಂತಿದ್ದಳು. `ಕಬ್ಬಡ್ಡಿ ಆಡು ತಮಾ.. ಅವ್ವುಕೆ ಆನು ಹೇಳ್ತಿ..' ಎಂದು ಗ್ರೀನ್ ಸಿಗ್ನಲ್ ನೀಡಿದ್ದೇ ಸುಶೀಲಾ. ಮಗ ಯಾಕೋ ಉದ್ಧಾರವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಶಿವರಾಮ ಹೆಗಡೆಯವರು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದ ಹೊತ್ತಿನಲ್ಲಿ ಮಗನ ಗುಣಗಾನ ಮಾಡಿ ಶಿವರಾಮ ಹೆಗಡೆಯವರ ಮನಸ್ಸನ್ನು ಬದಲಾಯಿಸಿದ ಶ್ರೇಯಸ್ಸು ಇವರಿಗೇ ದಕ್ಕಬೇಕು. `ಮಗ ಎಂತಾದ್ರೂ ಆಗಿ ಬದುಕು ಹಾಳ್ ಮಾಡ್ಕ್ಯಂದ್ರೆ ಅದ್ಕೆ ನಿಂದೇ ಜವಾಬ್ದಾರಿ... ನೀ ಇದ್ದೆ ನಿನ್ ಮಗ ಇದ್ದಾ..' ಎಂದು ಹೆಗಡೆಯವರು ಆಗಾಗ ಹೆಂಡತಿಯನ್ನು ಬಯ್ಯುವುದೂ ಇತ್ತು.
               ಮಗ ಬಾಂಗ್ಲಾದೇಶಕ್ಕೆ ಹೋಗುತ್ತಾನೆ ಎಂಬುದು ಸುಶೀಲಾ ಅವರ ಮನಸ್ಸಿನಲ್ಲಿ ಭಯಕ್ಕೆ ಕಾರಣವಾಗಿತ್ತು. ಸದಾ ಒಂದಿಲ್ಲೊಂದು ಅರಾಜಕತೆಯ ಕಾರಣದಿಂದ ಸುದ್ದಿ ಮಾಡುತ್ತಿರುವ ಬಾಂಗ್ಲಾ ದೇಶದ ಬಗ್ಗೆ ಸುಶೀಲಾ ಹೆಗಡೆಯವರಿಗೆ ಅದ್ಯಾರು ಹೇಳಿದ್ದರೂ ಅಥವಾ ಅದ್ಯಾವುದೋ ಕ್ರೈಂ, ಡೈರಿಯ ಸ್ಟೋರಿ ತಿಳಿಸಿತ್ತೋ ಏನೋ.. ಬಾಂಗ್ಲಾದೇಶಕ್ಕೆ ಮಗ ಹೋಗುವುದನ್ನು ವಿರೋಧ ಮಾಡಲಾರಂಭಿಸಿದ್ದರು. ಮಗನ ಬಳಿ ಹಲವಾರು ಬಾರಿ `ತಮಾ.. ಹೋಪದೆ ಇಪ್ಪಲೆ ಆಕ್ತಿಲ್ಯನಾ.. ಅಲ್ಲಿ ಪರಿಸ್ಥಿತಿ ಸರಿ ಇಲ್ಯಡಾ ಮಾರಾಯಾ.. ಎಂತಾದ್ರೂ ಹೆಚ್ಚೂ ಕಮ್ಮಿ ಆದ್ರೆ ಎಂತಾ ಮಾಡವಾ..' ಎಂದು ಅಲವತ್ತುಕೊಂಡಿದ್ದರೂ ಮಗ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಅದಕ್ಕೆಂದೇ ತಮ್ಮ ಯಜಮಾನರ ಬಳಿ ಕೊಟ್ಟ ಕೊನೆಯದಾಗಿ ಬುದ್ಧಿ ಹೇಳಬೇಕೆಂದು ದುಂಬಾಲುಬಿದ್ದಿದರು.
                ಆದರೆ ಪ್ರತಿ ಸಾರಿ ಮಗ ಕಬ್ಬಡ್ಡಿ ಆಡುವುದರ ವಿರುದ್ಧ ಕೊಂಕು ಮಾತನಾಡುತ್ತಿದ್ದ ಶಿವರಾಮ ಹೆಗಡೆಯವರು ಈ ಸಾರಿ ಮಗನನ್ನು ಖುಷಿಯಿಂದ ಕಳಿಸಿಕೊಡಲು ಮುಂದಾಗಿದ್ದನ್ನು ನೋಡಿ ಸುಶೀಲಮ್ಮ ಅಚ್ಚರಿಯನ್ನು ಪಟ್ಟಿದ್ದರು.

(ಮುಂದುವರಿಯುತ್ತದೆ..)

1 comment: