Tuesday, January 28, 2014

ಬೆಂಗಾಲಿ ಸುಂದರಿ-4

                ವಿನಯಚಂದ್ರ ಹೊರಡುವ ಸಲುವಾಗಿ ತಯಾರಾಗಿ ನಿಂತಿದ್ದ ಹೊತ್ತಿಗೆ ಅವನ ರೂಮಿಗೆ ಏದುಸಿರು ಬಿಡುತ್ತ ಹತ್ತಿಬಂದ ಸುಶೀಲಮ್ಮ `ಇದೇ ಈ ಹಲಸಿನ ಕಾಯಿ ಚಿಪ್ಸ್ ತಗಂಡು ಹೋಗಾ.. ದಾರಿ ಮದ್ಯ ತಿಂಬಲೆ ಆಕ್ತು..' ಎಂದು ಹೇಳುತ್ತಿದ್ದಂತೆ ವಿನಯಚಂದ್ರನಿಗೆ ರೇಗಿಹೋಯಿತು.
                  `ಥೋ ಸುಮ್ಮಂಗಿರೆ ಮಾರಾಯ್ತಿ.. ಹಂಗಿದ್ದೆಲ್ಲಾ ಕೊಟ್ಟು ಕಳಸಡಾ.. ಮೊದಲೇ ಈ ರೀತಿ ಮಣಭಾರ ಲಗೇಜಿದ್ದು.. ಇದರ ಜೊತಿಗೆ ಅಂತವನ್ನೂ ಕೊಡಡಾ...' ಎಂದು ಹೇಳಿದ್ದನ್ನು ಕೇಳಿ ಮನಸ್ಸನ್ನು ಮುದುಡಿದಂತೆ ಮಾಡಿಕೊಂಡು ಸುಶೀಲಮ್ಮ ಹಿಂದಕ್ಕೆ ಮರಳಿದರು.
               ಹೊರಡಲು ಜೀಪಿನ ಬಳಿಗೆ ಬಂದಾಗ ಶಿವರಾಮ ಹೆಗಡೆಯವರು ಬಾಂಗ್ಲಾದೇಶಕ್ಕೆ ಸಂಬಂಧಪಡುವಂತಹ ಒಂದಿಷ್ಟು ಮ್ಯಾಪುಗಳು, ಚಿಕ್ಕ ಪುಟ್ಟ ಪುಸ್ತಕಗಳನ್ನು ವಿನಯಚಂದ್ರನ ಕೈಯಲ್ಲಿ ಇರಿಸಿದರು. ಅಪರೂಪಕ್ಕೆ ತನ್ನ ಅಪ್ಪನ ಮುಂದಾಲೋಚನೆ ನೋಡಿ ವಿನಯಚಂದ್ರ ವಿಸ್ಮಯಗೊಂಡಿದ್ದ. ಅದನ್ನು ಕೈಯಲ್ಲಿ ಹಿಡಿದು ತನ್ನ ಬ್ಯಾಗಿನೊಳಗೆ ತುರುಕಿ ಜೀಪಿನ ಹಿಂಭಾಗದಲ್ಲಿ ಇಟ್ಟ. ತಾನು ಅಪ್ಪನ ಪಕ್ಕದಲ್ಲಿ ಕುಳಿತ. ಶಿವರಾಮ ಹೆಗಡೇರು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರು. ತಂಗಿ ಅಂಜಲಿ ತಾನೂ ಬರುವುದಾಗಿ ಹೇಳಿದ್ದ ಕಾರಣ ಮೊದಲೇ ಜೀಪಿನಲ್ಲಿ ಆಸೀನಳಾಗಿದ್ದಳು.
           ಅಷ್ಟರಲ್ಲಿ ಅಲ್ಲಿಯೇ ಇದ್ದ ಆಳು ರಾಮ `ಹೋಯ್ ಸಣ್ ಹೆಗ್ಡೇರು... ದೊಡ್ ಸುದ್ದಿ ಮಾಡ್ಕಂಡು ಬನ್ನಿ.. ಪೇಪರ್ನಾಗೆ ಪೋಟೋ ಬರ್ತೈತಿ ಅಲ್ಲನ್ರಾ..? ನಾ ಆವಗ ನೋಡ್ತೇನಿ..' ಎಂದ.
             `ಆಗ್ಲೋ ರಾಮಾ.. ಹಂಗೆ ಆಗ್ಲಿ...' ಎಂದು ಜೀಪನ್ನೇರಿದ್ದ ವಿನಯಚಂದ್ರ. ವಿನಯಚಂದ್ರ ಹೊರಡುವುದನ್ನು ಊರಲ್ಲಿದ್ದನ ನಾಲ್ಕೈದು ಮನೆಗಳ ಜನರು ವಿಶೇಷ ಕುತೂಹಲದಿಂದ ನೋಡುತ್ತಿದ್ದರು.
               `ತಮಾ... ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರೋ.. ಅಲ್ಲಿ ಗಲಭೆ ಶುರುವಾಜಡಾ ಮಾರಾಯಾ.. ಅವರವರ ನಡುವೆ ಅದೆಂತದ್ದೋ ಗಲಾಟೆನಡಾ.. ದೇಶದ ತುಂಬಾ ಹಿಂಸಾಚಾರ ತುಂಬಿದ್ದಡಾ.. ಯಾವದಕ್ಕೂ ಸೇಪ್ಟಿ ನೋಡ್ಕ್ಯ..' ಎಂದು ಮತ್ತೆ ಮತ್ತೆ ಹೆಗಡೇರು ಮಗನಿಗೆ ಹೇಳಿದ್ದರು.
                 `ಅಣಾ.. ಬಾಂಗ್ಲಾದೇಶದಲ್ಲಿ ಬೆಂಗಾಲಿ ಸುಂದರಿಯರು ಭಾರಿ ಚೊಲೋ ಇರ್ತ ಹೇಳಿ ಕೇಳಿದ್ದಿ.. ಹುಷಾರೋ..ಯಾರಾದ್ರೂ ನಿನ್ ಪಟಾಯ್ಸಿದ್ರೆ ಹುಷಾರು.. ಅವರನ್ನ ನೋಡ್ಕತ್ತ ಅಲ್ಲೇ ಉಳ್ಕಂಡು ಬಿಡಡಾ.. ' ಎಂದು ಅಂಜಲಿ ಛೇಡಿಸಿದಾಗ ವಿನಯಚಂದ್ರ ಒಮ್ಮೆ ಸಣ್ಣದಾಗಿ ನಕ್ಕ.. `ಅರ್ರೆ .. ಬಾಂಗ್ಲಾದೇಶಕ್ಕೆ ಹೋಗುತ್ತಿರುವವನು ನಾನು.. ಆದರೆ ನನಗಿಂತ ಹೆಚ್ಚು ಇವರು ಹೋಂ ವರ್ಕ್ ಮಾಡಿಕೊಂಡಿದ್ದಾರಲ್ಲ..' ಎನ್ನಿಸಿತ್ತು..
                  ತಮ್ಮೂರಿನ ತಗ್ಗು ದಿಣ್ಣೆಗಳ ರಸ್ತೆಯನ್ನು ಹಾದು ಶಿರಸಿಯನ್ನು ತಲುಪುವ ವೇಳೆಗೆ ಜೀಪಿನಲ್ಲಿ ಕುಳಿತಿದ್ದ ವಿನಯಚಂದ್ರ ಹಣ್ಣಾಗಿದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಂಜಲಿ ಲಟ್ಟು ಜೀಪಿನ ಬಗ್ಗೆ ಸಾಕಷ್ಟು ಸಾರಿ ಮಂತ್ರಾಕ್ಷತೆ ಮಾಡಿದ್ದಳು.. `ಈ ಹಾಳ್ ಜೀಪನ್ ಮಾರಾಟಾ ಮಾಡಿ ಮಾರುತಿ ಕಾರ್ ತಗ ಹೇಳಿ ಅಪ್ಪಯ್ಯಂಗೆ ಆವತ್ತೇ ಹೇಳಿದ್ದಿ.. ಕೇಳಿದ್ನಿಲ್ಲೆ.. ಈ ಹೊಂಡದ ರಸ್ತೆಲ್ಲಿ ಬರತನಕ ಯನ್ ಸ್ವಂಟೆಲ್ಲ ನೊಯಲೆ ಹಿಡದೋತು.. ಮಾರಾಯ್ನೆ.. ಈ ಜೀಪ್ ಕೊಟ್ ಬೇರೆ ಯಾವುದಾದ್ರೂ ತಗಳಾ...' ಎಂದು ಅಂಜಲಿ ಮಾರ್ಗಮಧ್ಯದಲ್ಲಿ ಅದೆಷ್ಟು ಸಾರಿ ಹೇಳಿದ್ದಳೋ.  ಶಿವರಾಮ ಹೆಗಡೆಯವರು ನಕ್ಕು ನಕ್ಕು ಸುಮ್ಮನಾಗಿದ್ದರು. `ಕೂಸಿನ ಸೊಕ್ಕು ಇವತ್ತು ಅರ್ಧಮರ್ಧ ಕಮ್ಮಿ ಆತು ನೋಡು...' ಎಂದು ನಕ್ಕಿದ್ದರು ಹೆಗಡೆಯವರು.
                 ಶಿರಸಿಯಲ್ಲಿ ಊಟ ಮುಗಿಸಿ ಬೆಂಗಳೂರು ಬಸ್ಸನ್ನೇರುವ ವೇಳೆಗೆ ಸರಿಸುಮಾರು ರಾತ್ರಿಯಾಗಿತ್ತು. ಮಗನಿಗೆ ಮತ್ತೆ ಮತ್ತೆ ಸಲಹೆಗಳನ್ನು ಹೇಳಿದ ಶಿವರಾಮ ಹೆಗಡೇರು ಅಂಜಲಿಯ ಜೊತೆಗೆ ಮನೆಗೆ ಮರಳಿದ್ದರು. ಹೀಗೆ ಮರಳುವಾಗ ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ.. ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋದವನು ಸಧ್ಯದಲ್ಲಿ ತಮ್ಮೂರಿಗೆ ಮರಳುವುದಿಲ್ಲ ಎನ್ನುವುದು.. ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರ ಅದೆಷ್ಟು ಬವಣೆಗಳನ್ನು ಅನುಭವಿಸುತ್ತಾನೆ ಎನ್ನುವುದು ಗೊತ್ತಿದ್ದಿದ್ದರೆ ಮೊದಲೇ ತಡೆದುಬಿಡುತ್ತಿದ್ದರೇನೋ. ವಿನಯಚಂದ್ರ ಬಸ್ಸನ್ನೇರಿ, ಮೊದಲೆ ಬುಕ್ಕಿಂಗ್ ಮಾಡಿದ್ದ ಸೀಟಿನಲ್ಲಿ ಕುಳಿತ ತಕ್ಷಣ ಗಾಢ ನಿದ್ದೆ.. ಸಿಹಿ ಕನಸು. ಕನಸಿನ ತುಂಬೆಲ್ಲ ಬಾಂಗ್ಲಾದೇಶ ಹಾಗೂ ಅಲ್ಲಿನ ಕಬ್ಬಡ್ಡಿ ಪಂದ್ಯವೇ ಮತ್ತೆ ಮತ್ತೆ ಕಾಣುತ್ತಿತ್ತು.

**

                   ಬೆಳಗಾಗುವ ವೇಳೆಗೆ ಬೆಂಗಳೂರು ನಗರಿ ಕಣ್ಣೆದುರು ನಿಂತಿತ್ತು. ಬಸ್ಸಿಳಿದ ವಿನಯಚಂದ್ರ ಆಟೋ ಹಿಡಿದು ಸೀದಾ ತನ್ನ ಕಬ್ಬಡ್ಡಿಯ ಅಕಾಡೆಮಿಯತ್ತ ತೆರಳಿದ. ಅಕಾಡೆಮಿಗೆ ಬಂದು ತನ್ನ ಲಗೇಜನ್ನು ತನ್ನ ಎಂದಿನ ಕೊಠಡಿಯಲ್ಲಿ ಇಟ್ಟು ತಿಂಡಿ ತಿಂದು ವಾಪಸಾಗುವುದರೊಳಗಾಗಿ ಅದೇ ಅಕಾಡೆಮಿಯ ಅವನ ಅನೇಕ ಜನ ಜೊತೆಗಾರರು ಅಲ್ಲಿಗೆ ಬಂದಿದ್ದರು. ವಿನಯಚಂದ್ರನನ್ನು ಕಂಡವರೇ ಎಲ್ಲರೂ ಶುಭಾಷಯಗಳನ್ನು ತಿಳಿಸುವವರೇ ಆಗಿದ್ದರು. ತಮ್ಮ ಜೊತೆಗೆ ತರಬೇತಿ ಪಡೆಯುತ್ತಿದ್ದವನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ಪಿಗೆ ತೆರಳುತ್ತಿದ್ದುದರ ಬಗ್ಗೆ ಎಲ್ಲರಿಗೂ ಸಂತೋಷವಾಗಿತ್ತು. ಮನಃಪೂರ್ವಕವಾಗಿ ವಿನಯಚಂದ್ರನನ್ನು ಹಾರೈಸಿದರು.
                 ಮದ್ಯಾಹ್ನದ ವೇಳೆಗೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದ ತಮಿಳುನಾಡಿನ ಇಬ್ಬರು ಆಟಗಾರರು, ಕೇರಳದ ಒಬ್ಬಾತ ಬೆಂಗಳೂರಿನ ಆ ಅಕಾಡೆಮಿಗೆ ಬರುವವರಿದ್ದರು. ಅವರು ಬಂದ ನಂತರ ವಿಮಾನದ ಮೂಲಕ ನವದೆಹಲಿ ತೆರಳುವುದು, ಅಲ್ಲಿ ಉಳಿದ ಆಟಗಾರರ ಜೊತೆಗೆ ಸೇರಿ ಒಂದು ವಾರಗಳ ಕಾಲ ತಾಲೀಮು ನಡೆಸಿ ನಂತರ ಬಾಂಗ್ಲಾದೇಶದತ್ತ ಪ್ರಯಾಣ ಮಾಡುವುದು ಎಂಬ ಯೋಜನೆ ಮಾಡಲಾಗಿತ್ತು. ವಿನಯಚಂದ್ರ ಅವರಿಗಾಗಿ ಕಾಯುತ್ತ ನಿಂತ.
                ಮದ್ಯಾಹ್ನದ ವೇಳೆಗೆ ತಮಿಳುನಾಡಿನ ವೀರಮಣಿ, ಸೂರ್ಯನ್ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಕೇರಳದಿಂದ ರೈಲಿನ ಮೂಲಕ ಕೃಷ್ಣಾ ನಾಯರ್ ಕೂಡ ಬಂದು ತಲುಪಿದ. ಈ ಮೂವರ ಪೈಕಿ ವಿನಯಚಂದ್ರನಿಗೆ ಸೂರ್ಯನ್ ನ ಪರಿಚಯವಿತ್ತು. ಉಳಿದಿಬ್ಬರ ಬಗ್ಗೆ ಕೇವಲ ಕೇಳಿ ತಿಳಿದಿದ್ದ ಅಷ್ಟೇ. ರಾಷ್ಟ್ರೀಯ ತಂಡದಲ್ಲಿ ಆಡಿದ ಇಬ್ಬರೂ ದೇಶದ ಅತ್ಯುತ್ತಮ ಕಬ್ಬಡ್ಡಿ ಆಟಗಾರರು ಎನ್ನುವುದನ್ನು ಕೇಳಿದ್ದ. ಪತ್ರಿಕೆಗಳಲ್ಲೂ ನೋಡಿದ್ದ. ವಿನಯಚಂದ್ರನಿಗೆ ಭಾರತದ ಕಬ್ಬಡ್ಡಿ `ಎ' ತಂಡದಲ್ಲಿ ಆಡುವಾಗ ಸೂರ್ಯನ್ ಪರಿಚಯವಾಗಿತ್ತು. ಉಳಿದಿಬ್ಬರೂ ಸೀನಿಯರ್ ಪ್ಲೇಯರ್ ಆಗಿದ್ದರಿಂದ ಅವರ ಬಗ್ಗೆ ತಿಳಿದಿದ್ದ ಅಷ್ಟೇ. ಮಾತಾಡಿರಲಿಲ್ಲ.
                 ಇವರ ಪೈಕಿ ವಿನಯಚಂದ್ರ ಹಾಗೂ ಸೂರ್ಯನ್ ಗೆ ನಿಧಾನವಾಗಿ ದೋಸ್ತಿ ಬೆಳೆಯಲಾರಂಭವಾಯಿತು. ತಮಿಳುನಾಡಿನ ಮಧುರೈ ಬಳಿಯವನು ಆತ. ತಮಿಳುನಾಡಿನವನು ಎಂಬುದು ಆತನ ಬಣ್ಣ ನೋಡಿದರೇ ಗೊತ್ತಾಗುತ್ತಿತ್ತು. ಕಪ್ಪಗಿದ್ದ. ದೃಢಕಾಯನಾಗಿದ್ದ. ಆದರೆ ಅಸಾಮಾನ್ಯ ವೇಗ ಆತನಲ್ಲಿತ್ತು. ಬೆಂಗಳೂರಿನ ಅಕಾಡೆಮಿಯಲ್ಲಿ ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೇ ಹಲವಾರು ಸಾರಿ ಪ್ರಾಕ್ಟೀಸ್ ಮಾಡಿದರು. ಆಗಲೇ ವಿನಯಚಂದ್ರನಿಗೆ ಸೂರ್ಯನ್ ನಲ್ಲಿದ್ದ ಅಸಾಧಾರಣ ಆಟದ ವೈಖರಿ ಪರಿಚಯವಾಗಿದ್ದು. ಬಲವಾದ ರೈಡಿಂಗ್ ಸೂರ್ಯನ್ನನ ತಾಕತ್ತಾಗಿತ್ತು. ತನ್ನದು ಕ್ಯಾಚಿಂಗ್ ಕೆಲಸವಾಗಿದ್ದ ಕಾರಣ ತರಬೇತಿ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರಿಗೂ ಅನೇಕ ಸಾರಿ ಜಿದ್ದಾ ಜಿದ್ದಿನ ಪೈಪೋಟಿ ಬೀಳುತ್ತಿತ್ತು. ಇಬ್ಬರೂ ಸೋಲೋಪ್ಪಿಕೊಳ್ಳಲು ಇಷ್ಟಪಡದ ಕಾರಣ ಸಾಕಷ್ಟು ರೋಚಕತೆಗೆ ಕಾರಣವಾಗುತ್ತಿದ್ದರು.
                 ವೀರಮಣಿ ಹಾಗೂ ಕೃಷ್ಣ ನಾಯರ್ ಇಬ್ಬರೂ ಪರಸ್ಪರ ಪರಿಚಿತರೇ ಆಗಿದ್ದರು. ಹಲವಾರು ಪಂದ್ಯಗಳಲ್ಲಿ ಒಟ್ಟಾಗಿ ಆಡಿದ್ದರು. ಸೂರ್ಯನ್ ಹಾಗೂ ವಿನಯಚಂದ್ರನಿಗೆ ಇವರಿಬ್ಬರೂ ಸೀನಿಯರ್ ಆದ ಕಾರಣ ತಮ್ಮ ಅನುಭವಗಳನ್ನು ಅವರೆದುರು ತೆರೆದಿಟ್ಟರು. ಈ ಇಬ್ಬರು ಸೀನಿಯರ್ ಆಟಗಾರರ ಜೊತೆಗೆ ಕೆಲ ಪಂದ್ಯಗಳನ್ನೂ ಆಡಿ ಅನುಭವ ಪಡೆದುಕೊಂಡರು.
           ವಿಮಾನ ಹೊರಡಲು ಅರ್ಧಗಂಟೆಯಿದ್ದಾಗ ವಿನಯಚಂದ್ರನ ಕೋಚ್ ಚಿದಂಬರ್ ಅವರಿಂದ ದೂರವಾಣಿ ಕರೆ ಬಂದಿತು. `ಹಲೋ..' ಎಂದ.
              `ಹ್ಯಾಪ್ಪಿ ಜರ್ನಿ.. ಚೊಲೋ ಆಟವಾಡು .. ನಿನ್ನ ಮೇಲೆ ಬಹಳಷ್ಟು ಹೋಪ್ಸ್ ಇದ್ದು.. ನಂಬಿಗೆ ಹುಸಿ ಮಾಡಡಾ.. ನಮ್ಮೆಲ್ಲರ ಕನಸಿನ ಪೊಟ್ಟಣ ನೀನು. ಆ ಪೊಟ್ಟಣ ಹಾಳಾಗದಿರಲಿ. ಅದರಲ್ಲಿ ಸುಂದರ ಫಲ ಸಿಗಲಿ' ಎಂದು ಹೇಳಿದ ಚಿದಂಬರ್ ಅವರು ಮತ್ತಷ್ಟು ಸಲಹೆ ನೀಡಿ `ದೆಹಲಿ ತಲುಪಿದ ನಂತರ ಪೋನ್ ಮಾಡು..'  ಎಂದು ಹೇಳಿ ಪೋನಿಟ್ಟರು.
               ವಿನಯಚಂದ್ರ ನಿರಾಳನಾದ. ಅಷ್ಟರಲ್ಲಿ ವಿಮಾನದ ಬಳಿ ತೆರಳಲು ಸಜ್ಜಾಗುವಂತೆ ಏರ್ ಪೋರ್ಟಿನಲ್ಲಿ ಧ್ವನಿ ಮೊಳಗಿತು. ತನ್ನ ಮೂವರು ಒಡನಾಡಿಗಳೊಂದಿಗೆ ವಿನಯಚಂದ್ರ ಅತ್ತಹೊರಟ.
               ಚೆಕ್ಕಿಂಗು, ಅದೂ ಇದೂ ಕೆಲಸಗಳು ಮುಗಿದು ವಿಮಾನ ಏರಿ ತನ್ನ ಸೀಟಿನಲ್ಲಿ  ಕುಳಿತ ವಿನಯಚಂದ್ರನ ಪಕ್ಕದ ಸೀಟಿನಲ್ಲಿ ಯಾರೋ ಅಪರಿಚಿತರು ಕುಳಿತಿದ್ದರು. ಕೊನೆಗೆ ಸೂರ್ಯನ್ ಬಳಿ ತನ್ನ ಪಕ್ಕದ ಸೀಟಿಗೆ ಬರುವಂತೆ ಹೇಳಿ ತನ್ನ ಪಕ್ಕದ ಅಪರಿಚಿತರನ್ನು ಕನ್ವಿನ್ಸ್ ಮಾಡಿದ. ಅವರು ಒಪ್ಪಿಕೊಂಡರು. ವಿಮಾನ ನಭಕ್ಕೆ ಜಿಗಿಯುವ ವೇಳೆಗೆ ಇವರು ಹಲವಾರು ಸುದ್ದಿಗಳನ್ನು ಹಲುಬಿದ್ದರು. ಬಾಂಗ್ಲಾದೇಶದ ಬಗ್ಗೆಯೂ ಮಾತುಕತೆಗಳು ನಡೆದಿದ್ದವು.
               ಮಧುರೈನ ಗಲ್ಲಿಗಳಲ್ಲಿ ಕಬ್ಬಡ್ಡಿ ಆಡುತ್ತ ಬೆಳೆದ ಸೂರ್ಯನ್ ತಾನು, ತಂದೆ, ತಾಯಿ ಹಾಗೂ ಇಬ್ಬರು ತಂಗಿಯರ ಜೊತೆ ಇರುವ ವಿವರ ಹೇಳಿದ. ತಮಿಳುನಾಡಿನ ಟಿಪಿಕಲ್ ಹಳ್ಳಿಯನ್ನು ತೆರೆದಿಟ್ಟ. ಸುಮ್ಮನೆ ಕೇಳುತ್ತ ಹೋದ ವಿನಯಚಂದ್ರ. ಜೊತೆಗೆ ತನ್ನ ಕುಟುಂಬದ ವಿವರಗಳನ್ನೂ ತಿಳಿಸಿದ. ತಾನು ಬೆಳೆದ ಉತ್ತರ ಕನ್ನಡದ ಹಳ್ಳಿಯ ಬಗ್ಗೆ ಹೇಳುತ್ತ ಹೇಳುತ್ತ ರೋಮಾಂಚನಗೊಂಡ. ಸುಮಾರು ಹೊತ್ತು ಮಾತಾಡಿದ ನಂತರ ಇಬ್ಬರಿಗೂ ಸಾಕೆನ್ನಿಸಿತು. ಮೌನವಾದರು. ವಿನಯಚಂದ್ರ ಕನಸಿನ ಲೋಕಕ್ಕೆ ಜಿಗಿಯಲು ಕಣ್ಣುಮುಚ್ಚಿದ. ಕಣ್ಮುಂದೆ ಚಿದಂಬರ್ ಅವರ ವ್ಯಕ್ತಿಚಿತ್ರಣ ಮೂಡಿಬಂದಿತು.
                 ಕುರುಚಲು ಗಡ್ಡ, ಮಧ್ಯಮ ಗಾತ್ರದ ಚಿದಂಬರ ಮಾಸ್ತರ್ರನ್ನು ತಾನು ಮೊದಲನೇ ಬಾರಿಗೆ ನೋಡಿದ್ದು ಹೈಸ್ಕೂಲಿನಲ್ಲಿ. ಹೈಸ್ಕೂಲಿನ ದೈಹಿಕ ಶಿಕ್ಷಕರ ಬಳಿ ತಾನು ಕಬ್ಬಡ್ಡಿ ಆಡುತ್ತೇನೆ ಎಂದು ಹೇಳಿದಾಗ ಅವರು ವಿಚಿತ್ರವಾಗಿ ನಕ್ಕಿದ್ದರು. ಬ್ರಾಹ್ಮಣ ಹುಡುಗನಾಗಿ ಅಪ್ಪಟ ಸಸ್ಯಾಹಾರಿಯಾಗಿ ಇವನೆಂತ ಕಬ್ಬಡ್ಡಿ ಆಡುತ್ತಾನೆಂದು ವ್ಯಂಗ್ಯವಾಗಿ ನಕ್ಕಿದ್ದು, ಆ ನಂತರದ ದಿನಗಳಲ್ಲಿ ಹೈಸ್ಕೂಲು ಟೀಮಿನಲ್ಲಿ ಕಬ್ಬಡ್ಡಿಯನ್ನು ಆಡಿ ಗೆಲುವನ್ನು ಕಾಣಲು ಹಿಡಿದಾಗಲೇ ದೈಹಿಕ ಶಿಕ್ಷಕರು ತನ್ನ ಕಡೆಗಿದ್ದ ವ್ಯಂಗ್ಯದ ಮನೋಭಾವವನ್ನು ತೊರೆದಿದ್ದು ವಿನಯಚಂದ್ರನಿಗೆ ನನಪಾಯಿತು. ಇಂತಹ ದಿನಗಳಲ್ಲೇ ಅವರು ವಿನಯಚಂದ್ರನಿಗೆ ಚಿದಂಬರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.
                 `ನೋಡ್ರೀ ಚಿದಂಬರ್.. ಇಂವನೂ ನಿಮ್ಮ ಹಾಗೇ.. ಬ್ರಾಮರವನು... ಕಬ್ಬಡ್ಡಿ ಆಡ್ತಾನ್ರೀ.. ಆಟ ಚನ್ನಾಗೈತಿ..ಇವನಿಗೊಂದು ಸ್ವಲ್ಪ ತರಬೇತಿ ಕೊಟ್ಟರೆ ಒಳ್ಳೆ ತಯಾರಾಗಬಲ್ಲ ನೋಡ್ರಿ.. ' ಎಂದು ಹೇಳಿದಾಗ ಚಿದಂಬರ್ ಅವರು ಅಚ್ಚರಿಯಿಂದ ನೋಡಿದ್ದರು. ಕೊನೆಗೆ `ದಿನಾ ಚಿದಂಬರ್ ಅವರ ಬಳಿ ಪ್ರಾಕ್ಟೀಸ್ ಮಾಡು.. ಅವರು ನಿನ್ನಂತೆ ಹಲವು ಜನರಿಗೆ ಕಬ್ಬಡ್ಡಿ ಹೇಳಿಕೊಡ್ತಾರೆ..' ಎಂದಿದ್ದ ನೆನಪು ಆತನ ಮನಸ್ಸಿನಲ್ಲಿನ್ನೂ ಹಸಿಯಾಗಿಯೇ ಇತ್ತು.
                 ಮೊದಲ ದಿನ ಕಬ್ಬಡ್ಡಿ ಆಡಲು ಹೋಗಿದ್ದಾಗ ತುಸು ಅಂಜಿಕೆಯಿಂದ ಆಡಿದ್ದ ವಿನಯಚಂದ್ರ. ನಂತರದ ದಿನಗಳಲ್ಲಿ ಆತ ನಿಧಾನವಾಗಿ ಪಳಗಿದ್ದ. ಕೊನೆಗೆ ಒಂದು ದಿನ ಚಿದಂಬರ್ ಅವರಿಗೆ ಏನನ್ನಿಸಿತೋ ಏನೋ ವಿನಯಚಂದ್ರನಿಗೆ ಆತನ ಅಂಗಿಯನ್ನು ಬಿಚ್ಚಿ ನಂತರ ಕಬ್ಬಡ್ಡಿ ಆಡೆಂದಿದ್ದರು. ಆತ ನಾಚಿಕೊಂಡಿದ್ದ. ಕೊನೆಗೆ ಸಿಕ್ಕಾಪಟ್ಟೆ ಬೈದು ಆತನನ್ನು ಆಟಕ್ಕೆ ಒಪ್ಪಿಸಿದ್ದರು.
                ವಿನಯಚಂದ್ರ ಅಂಜಿಕೆಯಿಂದ ಆಡಿದ. ಮೊದಲನೇ ಸಾರಿ ರೈಡಿಂಗಿಗೆ ಹೋದಾಗಲೇ ಸೋತು ಹೊರ ಬಿದ್ದು ಬಿಟ್ಟಿದ್ದ. ಕೊನೆಗೆ ಚಿದಂಬರ ಅವರು ಪರೀಕ್ಷೆ ಮಾಡಿದಾಗ ವಿನಯಚಂದ್ರನ ಜನಿವಾರ ಆತನ ಆಟಕ್ಕೆ ತೊಡಕನ್ನು ತಂದಿತ್ತು, ಆಡುವ ಭರದಲ್ಲಿ ಅದು ಫಟ್ಟೆಂದು ಹರಿದುಹೋಗಿತ್ತೆಂಬುದು ಗಮನಕ್ಕೆ ಬಂದಿತು. ಇದೇ ಕಾರಣಕ್ಕೆ ಮುಜುಗರಪಟ್ಟಿದ್ದ. ತೀರಾ ಶಾಸ್ತ್ರೀಯವಾಗಿ ಬ್ರಾಹ್ಮಣಿಕೆಯಲ್ಲಿ ತೊಡಗಿಕೊಂಡಿರದಿದ್ದರೂ ಜನಿವಾರ ಹರಿದುಹೋಯಿತು ಎಂದಾಗ ವಿನಯಚಂದ್ರ ನರ್ವಸ್ ಆಗಿದ್ದ. ಅದೇ ಭಾವನೆಯಲ್ಲಿಯೇ ಆಟದಲ್ಲಿ ಸೋತಿದ್ದ.
               ಹಾಗೆಂದ ಮಾತ್ರಕ್ಕೆ ಸಂದ್ಯಾವಂದನೆ ಸೇರಿದಂತೆ ಇತರೆ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಆತ ತೊಡಗಿಕೊಳ್ಳುತ್ತಾನೆಂದುಕೊಳ್ಳಬಾರದು. `ಸರ್.. ಜನೀವಾರ ಹರಿದುಹೋಯ್ತು.. ಎಂತಾ ಆಕ್ತೋ.. ಗೊತ್ತಾಗ್ತಾ ಇಲ್ಲೆ.. ಎಂತಾ ಮಾಡಕಾತು.. ಯಂಗೆ ಬಹಳ ಹೆದರಿಕೆ ಆಕ್ತಾ ಇದ್ದು..' ಎಂದು ತನ್ನ ಮನದಾಳದ ತುಮುಲವನ್ನು ತೋಡಿಕೊಂಡಿದ್ದ.
               `ಓಹೋ ಇದಾ ನಿನ್ ಸಮಸ್ಯೆ.. ಜಕನಿವಾರ ಹರಿದು ಹೋದ್ರೆ ಇನ್ನೊಂದು ಹಾಕ್ಯಂಡ್ರಾತಾ ಮಾರಾಯಾ.. ಆದರೆ ಮುಂದಿನ ಸಾರಿ ಆಡೋವಾಗ ಅಥವಾ ಆಡಲೆ ಬಂದಾಗ ಜನಿವಾರವನ್ನು ಸೊಂಟಕ್ಕೆ ಸಿಕ್ಕಿಸ್ಕ್ಯ..' ಎಂದು ಸಲಹೆ ನೀಡಿದ್ದರು ಚಿದಂಬರ್ ಅವರು.
                 `ಹಂಗೆ ಮಾಡಲೆ ಅಡ್ಡಿಲ್ಯಾ..? ಎಂತಾ ತೊಂದರೆ ಇಲ್ಯಾ?' ಎಂದು ಬೆಪ್ಪನಾಗಿ ಕೇಳಿದ್ದ ವಿನಯಚಂದ್ರ.
                 `ಹುಂ. ನಮ್ಮಲ್ಲಿ ಬಹುತೇಕ ಹಿರಿಯರು ತೋಟಕ್ಕೆ ಇಳಿದು ಕೆಲಸ ಮಾಡ್ತ. ಒಜೆ ಕೆಲಸ ಅಥವಾ ಬೇರೆ ರೀತಿ ಗಟ್ಟಿ ಕೆಲಸ ಮಾಡುವಾಗ ಜನಿವಾರ ಸೊಂಟಕ್ಕೆ ಸುತ್ತಿಕೊಳ್ತ. ಅನಿವಾರ್ಯ ಸಂದರ್ಭದಲ್ಲಿ ಅಡ್ಡಿಲ್ಲೆ.. ಹಿಂಗ್ ಸೊಂಟಕ್ಕೆ ಸುತ್ತಿಕ್ಯಂಡ್ರೆ ಜನಿವಾರ ಹರಿತು ಅನ್ನೋ ಭಯನೂ ಇರ್ತಿಲ್ಲೆ.. ನಿಂಗೆ ಅದರ ಬಗ್ಗೆ ಅಷ್ಟಾಗಿ ಗಮನ ಹರಿಸೋ ಅಗತ್ಯವೂ ಇರ್ತಿಲ್ಲೆ.. ಸೊಂಟಕ್ಕೆ ಜನಿವಾರ ಸುತ್ತಿಕೊಳ್ಳುವುದು ತಪ್ಪಲ್ಲ. ಯಂಗವ್ವೆಲ್ಲಾ ಹಂಗೇ ಮಾಡ್ತಾ ಇದ್ದಿದ್ದು ಮಾರಾಯಾ.. ನಿನ್ ಅಪ್ಪಯ್ಯ ಗದ್ದೆ ಅಥವಾ ತೋಟಕ್ಕೆ ಹೋಗಿ ಕೆಲಸ ಮಾಡ್ತಾ ಹೇಳಾದ್ರೆ ಅವನ ಹತ್ರಾನೇ ಸರಿಯಾಗಿ ಕೇಳ್ಕ್ಯ' ಎಂದು ಹೇಳಿದ್ದರಲ್ಲದೇ ಇಂದಿನ ಜಮಾನಾದಲ್ಲಿ ಹಲವು ಬ್ರಾಹ್ಮಣ ಹುಡುಗರು ಜನಿವಾರ ಕಿತ್ತೆಸೆದಿದ್ದನ್ನೂ ಮಾಡುವ ಆಚಾರ ವಿಚಾರ ಸುಳ್ಳೆಂದು ವಾದ ಮಾಡುವುದನ್ನೂ ಪ್ರತಿದಿನ ನಾನ್ ವೆಜ್ ತಿನ್ನುವುದನ್ನೂ ಹೇಳಿದಾಗಲೇ ವಿನಯಚಂದ್ರ  ಸ್ವಲ್ಪ ಬೇರೆಯ ತರಹ ಆಲೋಚನೆ ಮಾಡಿದ್ದು. ಸುತ್ತಮುತ್ತಲ ಊರುಗಳಿಗೆ ಹೆಗಡೇರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ ಅಪ್ಪ ಶಿವರಾಮ ಹೆಗಡೆಯವರು ಅನೇಕ ಸಾರಿ ತೋಟದ ಕೆಲಸಕ್ಕೋ, ಮರ ಹತ್ತುವ ಕಾರ್ಯದಲ್ಲೋ ತೊಡಗಿಕೊಂಡಿದ್ದಾಗ ಜನಿವಾರವನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದುದನ್ನು ವಿನಯಚಂದ್ರ ಗಮನಿಸಿದ್ದ. ಅದು ಮತ್ತೊಮ್ಮೆ ನೆನಪಿಗೆ ಬಂದಿತು.
                 ಹೈಸ್ಕೂಲು ಮುಗಿದ ನಂತರ ಚಿದಂಬರ್ ಅವರೇ ವಿನಯಚಂದ್ರನನ್ನು ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಪಿಯುಸಿಗೆ ಸೇರಿಸಿದ್ದರು. ಅಲ್ಲಿ ಕಬ್ಬಡ್ಡಿಯ ಬಗ್ಗೆ ತರಬೇತಿಯ ಜೊತೆಗೆ ಬೇರೆ ಬೇರೆ ವಿಭಾಗದ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಬಹುಶಃ ಆಗಲೇ ಇರಬೇಕು ವಿನಯಚಂದ್ರ ತನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಎಗ್ ರೈಸ್ ತಿಂದಿದ್ದು. ಮೊದಲ ಸಾರಿ ತಿನ್ನುವಾಗ ಮನಸ್ಸೊಂಥರಾ ಆಗಿತ್ತು. ಆದರೆ ಚಿದಂಬರ್ ಅವರು ಆತನಿಗೆ ಮತ್ತೆ ಸಲಹೆಗಳ ಸುರಿಮಳೆಯನ್ನು ಸುರಿಸಿದ್ದರು. ಅವರ ಸಲಹೆಯ ಮೇರೆ ಎಗ್ ರೈಸ್ ತಿನ್ನಲು ಆರಂಭಿಸಿದ್ದ.
                  `ಕಬ್ಬಡ್ಡಿ ಆಟಗಾರನಾದವನು ಎಗ್ ರೈಸ್ ಆದರೂ ತಿನ್ನಲೇಬೇಕು.. ಇಲ್ಲವಾದರೆ ಕಷ್ಟವಾಗ್ತು ಮಾರಾಯಾ.. ನಿನ್ನ ಊಟದಲ್ಲಿ ಆಟಕ್ಕೆ ಬೇಕಾದ ತಾಕತ್ತು ಸಿಗಬೇಕು ಅಂದರೆ ಹೇಗೆ ಸಾಧ್ಯ ಹೇಳು. ಎಗ್ ರೈಸ್ ದೇಹಕ್ಕೆ ಸಾಕಷ್ಟು ತಾಕತ್ತನ್ನು ನೀಡ್ತು.. ಅದು ಹಾಲಿನ ಹಂಗೇಯಾ ಮಾರಾಯಾ.. ಹಾಲಿನಷ್ಟೇ ಪೌಷ್ಟಿಕ. ಹಾಲು+ಮೊಟ್ಟೆ ಎರಡೂ ಸೇರಿದರೆ ದೇಹಕ್ಕೆ ಬಹಳ ಶಕ್ತಿದಾಯಕ ' ಎಂದೂ ಹೇಳಿಬಿಟ್ಟಿದ್ದರು. ಈಗ ಸಲೀಸಾಗಿ ತಿನ್ನಲು ತೊಡಗಿದ್ದ. ನಂತರದ ದಿನಗಳಲ್ಲಿ ಎಗ್ ರೈಸ್ ವಿನಯಚಂದ್ರನ ಬದುಕಿನ ಭಾಗವಾಗಿ ಹೋಗಿತ್ತಾದರೂ ಆತನ ಮನೆಯಲ್ಲಿ ಈ ಕುರಿತು ಗೊತ್ತಿರಲಿಲ್ಲ.
                    ಹುಬ್ಬಳ್ಳಿ, ಬೆಳಗಾವಿ ವಲಯ, ರಾಜ್ಯ ತಂಡ, ದಕ್ಷಿಣ ಭಾರತ ವಲಯ ಸೇರಿದಂತೆ ಹಲವಾರು ವಲಯಗಳಲ್ಲಿ ವಿನಯಚಂದ್ರ ಮುಂದಿನ ದಿನಗಳಲ್ಲಿ ಆಡುತ್ತ ಹೋದ. ಚಿದಂಬರ್ ಆತನ ಬೆನ್ನಿಗೆ ನಿಂತಿದ್ದರು. ತಮ್ಮ ಆಟವನ್ನು ವಿನಯಚಂದ್ರನಿಗೆ ಧಾರೆಯೆರೆದು ಕೊಟ್ಟಿದ್ದರು. ತಾನು ಕಬ್ಬಡ್ಡಿ ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನೆಲ್ಲ ವಿನಯಚಂದ್ರ ಮಾಡಬೇಕು ಎನ್ನುವುದು ಚಿದಂಬರ ಸರ್ ಅವರ ಒತ್ತಾಸೆಯಾಗಿತ್ತು. ಆತ ಮೇಲ್ಮೇಲಿನ ಮಟ್ಟಕ್ಕೆ ಹೋದಂತೆಲ್ಲ ಅವರ ತರಬೇತಿ ಕಠಿಣವಾಗುತ್ತಿತ್ತು. ಅವರ ಒತ್ತಾಸೆಯನ್ನು ತಾನು ನಿರಾಸೆ ಮಾಡಿರಲಿಲ್ಲ. ಕಬ್ಬಡ್ಡಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ ಆಡಲು ಹೊರಟಿದ್ದ. ಬಹುಶಃ ತನಗಿಂತಲೂ ಚಿದಂಬರ ಸರ್ ಹೆಚ್ಚು ಸಂತಸ ಪಟ್ಟಿರುತ್ತಾರೆ ಎಂದುಕೊಂಡ ವಿನಯಚಂದ್ರ. ಅವರ ಖುಷಿಗೆ ಪಾರವಿರಲಿಲ್ಲ ಎನ್ನುವುದು ಅವರ ಮಾರಿನಲ್ಲೇ ಸ್ಪಷ್ಟವಾಗುತ್ತಿತ್ತು. ಕಬ್ಬಡ್ಡಿಯನ್ನು ಶಾಸ್ತ್ರೋಕ್ತವಾಗಿ ಕಲಿಸಿದವರಿಗೆ ನಿರಾಸೆ ಮಾಡಲಿಲ್ಲವಲ್ಲ.. ಎಂದು ನಿಟ್ಟುಸಿರು ಬಿಟ್ಟ. ಹೀಗೆ ಚಿದಂಬರ ಸರ್  ನೆನಪುಮಾಡಿಕೊಂಡ ವಿನಯಚಂದ್ರ ಕಣ್ಣು ತೆರೆಯುವ ವೇಳೆಗಾಗಲೇ ವಿಮಾನ ನವದೆಹಲಿಯಲ್ಲಿ ಇಳಿಯಲು ಸಜ್ಜಾಗುತ್ತಿತ್ತು. ಪಕ್ಕದಲ್ಲಿದ್ದ ಸೂರ್ಯನ್ ಹಿತವಾಗಿ ಭುಜವನ್ನು ಅಲುಗಾಡಿಸಿ.. `ಅರೇ.. ಉಠೋ ಭಾಯ್...' ಎನ್ನುತ್ತಿದ್ದ. ನಸುನಕ್ಕು ವಿನಯಚಂದ್ರ ಇಳಿಯಲು ಸಜ್ಜಾಗಿದ್ದ.

(ಮುಂದುವರಿಯುವುದು)

No comments:

Post a Comment