Friday, January 24, 2014

ಮುತ್ತಿಗೆ

ಮುತ್ತೇ...
ಅಂದೊಮ್ಮೆ ನೀ
ನನ್ನ ಸ್ವತ್ತೆಂದು
ನಾ ತಿಳಿದಿದ್ದೆ |
ನಿನ್ನೆಡೆಯಲ್ಲಿ ನಾ
ಕನಸು ಕಟ್ಟಿದ್ದೆ |
ಪಡೆಯಬಯಸಿದ್ದೆ |

ಆದರೆ ಇಂದು
ಅರಿವಾಗಿದೆ ನೀ
ಪರರ ಸ್ವತ್ತೆಂದು |
ಹಾಗೇ ನನ್ನ ಪಾಲಿಗೆ
ನೀ ಆಪತ್ತೆಂದು, ಹಾಗೇ
ಒಡಲಿಗೆ ಕುತ್ತೆಂದು |

ಇರಲಿ ಬಿಡು ಮುತ್ತೇ...
ಸಾಗರದ ಗರ್ಭದೊಳೆಲ್ಲೋ
ಅಡಗಿ ಮುಳುಗಿದ್ದ ನಿನ್ನ,
ಕಪ್ಪೆ ಚಿಪ್ಪಿನ ಆ
ಬಾಯೊಳಗಿಂದ ಹೆಕ್ಕಿ
ತಂದ ಸವಿಯಷ್ಟೇ
ನನಗೆ ಸಾಕು |

ಮುತ್ತೇ...
ಇಂದಿನಾ ಜನ್ಮದಲ್ಲಿ
ಮುಗಿಯಿತು.
ಮುಂದೆಯಾದರೂ ನೀ
ನನ್ನ ಸ್ವತ್ತಾಗು |
ಕುತ್ತಾಗದೇ ನೀ
ಬಯಕೆಗೆ ತಂಪಾಗು |

ಹೆಕ್ಕಿ ತಂದ ನಾ, ಎಂಬ
ಸಾಹಸಿಗಷ್ಟು ನೀ
ವರವಾಗು-ಸೆರೆಯಾಗು |

ಮುತ್ತೇ..
ವರ್ತಮಾನದ ಈ
ಬದುಕಿನೊಳು ನೀ,
ಬದುಕನ್ನು ನೀಡಿದ
ಇತಿಹಾಸವ ಮರೆಯಬೇಡ |
ನಿನ್ನ ಹೆಕ್ಕಿ ತಂದ
ಸಾಹಸಿಗನ ನೆನಪಿಡು |

ಮುತ್ತು..
ಒಡೆದರೆ-ಕೊಟ್ಟರೆ
ಮುಗಿಯಿತು. ಮೂಲರೂಪ
ಮರಳುವುದು ಹೇಗೆ ?


(ಈ ಕವಿತೆಯನ್ನು ಬರೆದಿದ್ದು 28.01.2007ರಂದು, ದಂಟಕಲ್ಲಿನಲ್ಲಿ)

No comments:

Post a Comment