Saturday, January 25, 2014

ಊಂಚಾಯಿ (ಕಥೆ)

ಪ್ರೀತಿಯ ಗೆಳತಿ,
        ಇಲ್ಲೀಗ ಅಲ್ಲಿಯಂತೆಯೇ ಸಂಜೆ ಆರು ಗಂಟೆ.. ಆದರೆ ಅಲ್ಲಿ ಹಿತ-ಮಿತವಾದ ಬೆಚ್ಚಗಿನ ವಾತಾವರಣ. ಇಲ್ಲಿ ಚುಮುಗುಡುವ ಅಲ್ಲಲ್ಲ.. ಕೊರೆ ಕೊರೆಯುವ ಚಳಿ..
         ಹುಡ್ಗೀ.. ನಿನ್ನನ್ನು ಬೀಳ್ಕೊಟ್ಟು ಬಂದು ಹತ್ತಿರ ಹತ್ತಿರ ಒಂದೂವರೆ ತಿಂಗಳಾಗುತ್ತ ಬಂದವು. ಪೋಸ್ಟಿಂಗು, ಅದು ಇದು ಎನ್ನುತ್ತ ಸಮಯವೇ ಸಿಕ್ಕಿರಲಿಲ್ಲ ನೋಡು. ಇದೋ ನಾನೀಗ ತಲೆಯಾನಿಸಿ ನಿನಗೆ ಪತ್ರ ಬರೆಯುತ್ತಿರುವ ಊರು ಪಾಕಿಸ್ತಾನ ಆಕ್ರಮಣ ಮಾಡಿಕೊಂಡಿರುವ ಕಾಶ್ಮೀರ ಸರಹದ್ದಿನಿಂದ ಕೇವಲ 6 ಕಿಲೋಮೀಟರಿನಲ್ಲಿದೆ. ಬಂಡೀಪೋರಾ. ನಾನು ಈಗ ನಿನಗೆ ಪತ್ರ ಬರೆಯುತ್ತಿರುವುದು ಇದೇ ಊರಿನಿಂದ. ಈ ಊರಿನ ಹೆಸರನ್ನು ಕೇಳಿದರೆ ನಿನಗೆ ತಟ್ಟನೆ ಬಂಡಿಪುರದ ನೆನಪಾಗಬಹುದಲ್ವಾ..? ಮೊದಲ ಸಾರಿ ಕೇಳಿದಾಗ ನನಗೂ ಹಾಗೇ ಅನ್ನಿಸಿತ್ತು.
          ನಾನು ಈಲ್ಲಿಗೆ ಬರಲು ಹೊರಟಾಗ ನೀನು ನನ್ನನ್ನು ಕಳಿಸಿಕೊಡ್ಬೇಕಂತ ಆ ದಿನ ಬಸ್ ಸ್ಟಾಂಡಿಗೆ ಬಂದಿದ್ಯಲ್ಲಾ ಆಮೇಲೆ ನಾನು ಸೀದಾ ಹುಬ್ಳಿಗೆ ಬಂದೆ. ಅಲ್ಲಿ ರೈಲು ಹತ್ತಿ ಮೂರು ದಿನ ಹಗಲು-ರಾತ್ರಿ ಪ್ರಯಾಣ ಮಾಡಿ ನಮ್ಮ ಡೆಲ್ಲಿ ಕ್ಯಾಂಪಿಗೆ ಬಂದೆ.  ಏನ್ಮಾಡ್ಲಿ ಹೇಳು? ಡೆಲ್ಲಿಗೆ ಹೋದರೂ, ಮಿಲಿಟರಿ ಪೆರೇಡ್ ನಲ್ಲಿ ಭಾಗವಹಿಸಿದರೂ ನಂಗೆ ನಿನ್ನದೇ ನೆನಪು. ಮನದ ತುಂಬ ನಿಂದೇ ಕಾಲುಗೆಜ್ಜೆಯ ರಿಂಗಣ. ಅಲ್ಲಿ ನಾಲ್ಕು ದಿನ ಇದ್ವಿ. ಆ ನಂತ್ರ ಸುಮಾರು 80 ಜನರ ನಮ್ಮ ತುಕಡಿ ಸಿಮ್ಲಾ, ಉಧಾಂಪುರ ಮಾರ್ಗದ ಮೂಲಕ ಮಿಲಿಟರಿ ಗಾಡಿಯಲ್ಲಿ ಮೂರಿ ದಿನಕ್ಕೆ ಇದೋ ಈ ಬಂಡಿಪೋರಾ ಎಂಬ ಹಿಮಚಾದರದ ನಾಡಿಗೆ ನಮ್ಮನ್ನು ಕರೆದುಕೊಂಡು ಬರಲಾಯಿತು.
            ನಿಂಗೊತ್ತಲ್ಲ.. ನಂಗೆ ಹಿಮ ಅದೆದ್ರೆ ಅದೆಷ್ಟು ಇಷ್ಟ ಅಂತ.. ನಂಗೆ ಇಲ್ಲಿಗೆ ಬಂದಾಗ ಒಂದ್ಸಲ ಮರಗಟ್ಟುವ ಆ ಚಳಿಯಲ್ಲೂ ಬಿಳಿ ಹಿಮ ರಾಶಿಯಲ್ಲಿ ಚಿಕ್ಕ ಮಗುವಿನಂತೆ ಹೊರಳಾಡಬೇಕು, ಬೊಗಸೆಯಲ್ಲಿ ಎತ್ತಿಕೊಂಡು ಪಕ್ಕದಲ್ಲಿದ್ದವರ ಮೈಮೇಲೆ ಎಸೆಯಬೇಕು ಅನ್ನಿಸಿತ್ತು... ಕಷ್ಟಪಟ್ಟು.. ನಾನೊಬ್ಬ ಮಿಲಿಟರಿಯ ಸೈನಿಕ ಅನ್ನೋದನ್ನು ನೆನಪಿಗೆ ತಂದ್ಕೊಂಡು ಅಂಥಾ ಆಸೆನ ಹತ್ತಿಕ್ಕಿಕೊಂಡೆ..
           ಇಲ್ಲಿಗೆ ಬಂದು ಆಗಲೇ ತಿಂಗಳಾಗುತ್ತ ಬಂತು ನೋಡು. ನಿನ್ನನ್ನು ಬಿಟ್ಟು ಬಂದು ಹತ್ತಿರ ಹತ್ತಿರ ನಲವತ್ತು ದಿನಗಳ ಮೇಲೆ ಐದೋ ಆರೋ ಹೆಚ್ಚಾಗಿದೆ. ಇಲ್ಲಿಗೆ ಬಂದು ತಲುಪಿದ ಎರಡೇ ದಿನಕ್ಕೆ ನಂಗೆ ರೌಂಡಿಂಗ್ಸ್ ಇತ್ತು. ಅಂದ್ರೆ ಬಂಡಿಪೋರಾದ ಸುತ್ತೆಲ್ಲ ಸುತ್ಹಾಕೋ ಕೆಲಸ. ಆಗಾಗ ಪಾಕಿಸ್ತಾನದ ಗಡಿಯಲ್ಲಿ ನಿಂತು ಗಡಿಯಾಚೆಗಿಂದ ಯಾರಾದರೂ ಇತ್ತಕಡೆ ನುಸುಳುತ್ತಾರಾ ಎಂದು ಮಂಜುಗಟ್ಟಿದ ವಾತಾವರಣದಲ್ಲಿ ನೋಡುವ ಕಾರ್ಯವೂ ನಮ್ಮಪಾಲಿಗಿತ್ತು. ಹೋಗೋವಾಗ ಏನು ಹುಮ್ಮಸ್ಸು ಅಂತೀಯಾ.. ಇಂತದ್ದೊಂದು ಅದ್ಭುತ ತಾಣದಲ್ಲಿ ಕೆಲಸ ಮಾಡಿದ್ರೆ ಹುಮ್ಮಸ್ಸು ತಂತಾನೆ ಬರ್ತಾ ಹೋಗ್ತದಂತಲ್ಲಾ.. ಏನೆಲ್ಲಾ ಸುಂದರ ಪ್ರದೇಶ ನೋಡಬಹುದು, ಮಂಜಿನ-ಹಿಮದ ಪದರು-ಪದರಿನಲ್ಲಿ ಲಗಾಮು ಕಿತ್ತುಕೊಂಡ ಕುದುರೆಯಂತೆ  ಓಡಿಯಾಡಬಹುದು ಅಂತೆಲ್ಲ ಕನಸು ಕಂಡೆ.. ಆ ದಿನ ನಾವು ಹತ್ತು ಜನರದ್ದೊಂದು ಪುಟ್ಟ ಭಾಗ, ಬಂಡಿಪೋರಾದ ರೌಂಡಿಂಗ್ಸ್ ಗೆ ಹೊಂಟಿತ್ತು.
            ಗೋವಾದ ಮಧು ಮಹಾಲೆ ಹಾಗೂ ಆಂಧ್ರದ ಶ್ರೀನಿವಾಸ ನಾಯ್ಡು ನಂಗೆ ಇಲ್ಲಿ ಮಿತ್ರರಾಗಿ ಸಿಕ್ಕಿದ್ದಾರೆ. ನಾವು ಮೂವರೂ ದಕ್ಷಿಣ ಭಾರತದವರಲ್ವಾ.. ಬೇಗ್ನೇ ಮಿತ್ರರಾದ್ವಿ. ಹಾಂ.. ಗೋವಾದವನಿಗೆ ಮದುವೆಯಾಗಿಲ್ಲ. ಆಂಧ್ರದವನಿಗೆ  ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆಯಂತೆ. ವಿಚಿತ್ರವೋ ಎಂತದ್ದೋ ಗೊತ್ತಿಲ್ಲ. ನಾನು ಆ ದಿನ ರೈಲು ಹತ್ತಿದಾಗ ಅಕ್ಕ ಪಕ್ಕದ ಬರ್ತ್ ನಲ್ಲಿದ್ದ ಇವರು ಹಾಗೆ ಸುಮ್ಮನೆ ಪರಿಚಯವಾದರು. ಪರಿಚಯ ಮಾತುಕತೆಯಾಗಿ ಮುಂದುವರಿದಾಗ ಅವರೂ ಮಿಲಿಟರಿ ಮೇಂಬರ್ಸ್, ಅದರ ಜೊತೆಗೆ ನನ್ನದೇ ರೆಜಿಮೆಂಟಿನವರು ಅಂತ. ಆ ಮಧು ಇದ್ದಾನಲ್ಲ ಅಂವ ಅದ್ಯಾವ ಥರಾ ಮಾತಾಡ್ತಾನೆ ಗೊತ್ತಾ.. ಊಹೂಂ.. ಒಂದು ನಿಮಿಷವೂ ಸುಮ್ನೆ ಕೂರೋನಲ್ಲ. ಸಖತ್ ಕ್ರಿಯೆಟಿವ್ ಮನುಷ್ಯ. ಕೀಟಲೆಯ ಖಯಾಲಿಯಿದೆ.. ಥೇಟು ನಿನ್ನ ಥರಾನೆ..!
              ಆ ಬಂಡಿಪೋರಾ.. ಅದರ ಸ್ನಿಗ್ಧ ಸೌಂದರ್ಯಕ್ಕೆ ಸಾಟಿ ಯಾವುದೂ ಇಲ್ಲ. ಒಂದಕ್ಕಿಂತ ಒಂದು ಎತ್ತರ ಎನ್ನಿಸುವಂತಹ ಪರ್ವತಗಳು ಮನಸ್ಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ `ಊಂಚಾಯಿ' ಕವಿತೆಗಳನ್ನು ನೆನಪಿಗೆ ತರ್ತವೆ. ಪರ್ವತಗಳ ಬುಡದಲ್ಲಿ ಹಸಿರು ಅಲ್ಲಲ್ಲಿ ಕಾಣಸಿಕ್ಕರೂ ಪರ್ವತದ ತುದಿ ಮಾತ್ರ ಬೆಳ್ಳಗೆ ಬೆರಗು ಮೂಡಿಸುತ್ತದೆ. ಬಂಡಿಪೋರಾ ಹೇಳಲಿಕ್ಕೆ ಅಂತಹ ದೊಡ್ಡದೇನೂ ಅಲ್ಲ. ಹತ್ತಿರ ಹತ್ತಿರ ನಮ್ಮ ಕಾನಸೂರಿನ ಎರಡೋ ಮೂರೋ ಪಟ್ಟು ದೊಡ್ಡದಿರಬಹುದು. ಇಡೀ ಊರಿಗೆ ನಮ್ಮ ಮಿಲಿಟರಿ ಕ್ಯಾಂಪೆ ಬಹುದೊಡ್ಡ ಕಟ್ಟಡ ಎಂದರೂ ತಪ್ಪಾಗಲಿಕ್ಕಿಲ್ಲ. ಇಂತಹ ಊರನ್ನು ಸುತ್ಹಾಕೋದು ಏನು ಮಹಾ ಅಂದ್ಕೊಂಡೆ. ಹಾಗೇ ನಾವು ಸುತ್ತಲಾರಂಭ ಮಾಡಿದ್ವಿ ಕೂಡ.
               ಗೀಲ್ಗಿಟ್ಟು ನಮ್ಮ ಭಾರತ ಹಾಗೂ ನೆರೆಯ ಪಾಕಿಸ್ತಾನಕ್ಕೂ ನಡುವಣ ಸೀಮಾರೇಖೆಯಾಗಿರೋ ಎಲ್.ಒ.ಸಿ.ಯ ಹತ್ತಿರದಲ್ಲಿದೆ. ಅಂದರೆ ಕೇವಲ ಆರು ಕಿ.ಮಿ ದೂರದಲ್ಲಿ ಇರುವ ಕಾರಣ ಸದಾ ಒತ್ತಡದ ವಾತಾವರಣ ಇದ್ದೇ ಇರುತ್ತದೆ. ಹತ್ತಿರದಲ್ಲೇ ಪಾಕ್ ಆಕ್ರಮಣ ಮಾಡಿಕೊಂಡ ನೆಲದ ಗಡಿ, ನುಸುಳಿ ಬರುವ ಭಯೋತ್ಪಾದಕರು, ಹಾಗೆ ಅವರು ಬರುವ ನಂತರ ನಡೆಸುವ ದಾಂಧಲೆ, ಇವೆಲ್ಲಕ್ಕೂ ಮೂಲ ತಡೆ ಹಾಕಬೇಕೆಂದೇ ನಮ್ಮನ್ನು ಅಲ್ಲಿಗೆ ನಿಯೋಜನೆ ಮಾಡಿದ್ದರು.
              ಪುಟ್ಟಿ.., ನಿಂಗೆ ಗೊತ್ತಿದೆ.. ನಮ್ಮ ದೇಶಕ್ಕೂ, ನೆರೆಯ ಪಾಕಿಸ್ತಾನಕ್ಕೂ ತೊಂಭತ್ತೊಂಭತ್ತರಲ್ಲಿ ಯುದ್ಧ ಆಗಿತ್ತು. ನಾವು ಗೆದ್ದಿದ್ವಿ ಅಂತ. ಆಮೇಲೆ ಶಾಂತಿ ಒಪ್ಪಂದ ಎಲ್ಲಾ ಆಗಿ ಪರಿಸ್ಥಿತಿ ಶಾಂತವಾಗಿತ್ತು. ಪ್ರಸ್ತುತ ಈಗಲೂ ಆಗೊಮ್ಮೆ-ಈಗೊಮ್ಮೆ  ಭಯೋತ್ಪಾದಕರು ಗಡಿಯ ಒಳಗೆ ನುಸುಳಿ ಬರ್ತಿರ್ತಾರೆ. ಅವರ ಜೊತೆಗೆ ಆಗೀಗ ಅಷ್ಟಿಷ್ಟು ಗುಂಡಿನ ಕಾಳಗ ಆಗ್ತದೆ ಅನ್ನೋದು ಬಿಟ್ಟರೆ ಉಳಿದಂತೆ ಶಾಂತಿಯೇ. ಆದರೆ ಹೀಗೆ ಶಾಂತಿಯಿದೆ ಅಂತ ದೇಶ ಕಾಯದೇ ಹೋದ್ರೆ..? ಸರಿಯಲ್ಲ.. ಆ ಕಾರಣಕ್ಕೆ ನಮ್ಮನ್ನ ರೌಂಡಿಂಗ್ಸ್ ಗೆ ಕಳಿಸ್ತಿದ್ದುದ್ದು.
               ನಮ್ಮ ರೌಂಡಿಂಗ್ಸ್ ನಲ್ಲೂ ಎಂತಾ ಶಿಸ್ತಿದೆ ಗೊತ್ತಾ.. ನಾವು ಬೇಕಾಬಿಟ್ಟಿ, ಎಲ್ಲೆಂದರಲ್ಲಿ ಹೋಗೋ ಹಾಗೇ ಇಲ್ಲ. ನಮ್ಮ ಮೇಲಿನವರು ಹೇಳಿದ ಹಾಗೇ ಮಾಡಬೇಕು-ಹೇಳಿದಲ್ಲೇ ನಡೀಬೇಕು. ಸ್ವಲ್ಪ ತಪ್ಪಿದ್ರೂ ತುಂಬಾ ಶಿಕ್ಷೆ. ಮಿಲಿಟರಿಯ ಕಟ್ಟುನಿಟ್ಟು. ಆದರೆ ಮನಸ್ಸು ಕನಸು ಕಾಣೋದಕ್ಕೆ ಮಿಲಿಟರಿಯಿಂದ ತಡೆ ಹಾಕಲು ಸಾಧ್ಯವಿಲ್ಲವಲ್ಲಾ..
               ನಾನು ರೌಂಡಿಂಗ್ಸ್ ತುಂಬಾ ನಿನ್ನದೇ ನೆನಪಲ್ಲಿ ಇದ್ದೆ. ಒಂದ್ಸಲ ನಿನ್ನ ಈ ಬಂಡಿಪೋರಾಕ್ಕೆ ಕರೆದುಕೊಂಡು ಬರಬೇಕು.. ಇಲ್ಲಿನ ಬೀದಿಯಲ್ಲಿ ನಿನ್ನನ್ನು ಅಡ್ಡಾಡಿಸಬೇಕು. ಇಬ್ಬರೂ ಕೈ-ಕೈ ಹಿಡಿದುಕೊಂಡು ಬೆಳದಿಂಗಳಿನಿರುಳಲ್ಲಿ ನಡೆಯುತ್ತಾ ಹಿಮವತ್ಪರ್ವತದ ತುಂಬೆಲ್ಲಾ ಸುತ್ತಾಡಬೇಕು ಅಂದುಕೊಂಡೆ. ನಿನ್ನ ನೆನಪಿನಲ್ಲೇ ಇದ್ದ ನಾನು ಒಂದೆರಡು ಸಾರಿ ಶಿಸ್ತು ತಪ್ಪಿದ್ದೆ. ಇದನ್ನು ಅರಿತ ಮಧು ನಂಗೆ ಆಗೊಮ್ಮೆ ಗದರಿದ್ದ.. ನಾನು ನಕ್ಕುಬಿಟ್ಟಿದ್ದೆ. ಈಗಲೂ ನಂಗೆ ಅವಕಾಶ ಸಿಕ್ಕರೆ ಈ ಹಿಮವತ್ತಾದ ನಾಡಲ್ಲೇ ಜಮೀನು ಕೊಂಡು ಮನೆ ಮಾಡಿ ಇಲ್ಲೇ ವಾಸಮಾಡಿ ಬದುಕಬೇಕೆಂಬ ಆಸೆ.. ಏನಾಗುತ್ತೋ..?
              ಬಂಡೀಪೋರಾದ ತುತ್ತ ತುದಿಯಲ್ಲಿ ಕೆರೆಯೊಂದಿದೆ. ಕೆರೆಯೆಂದರೆ ಕೆರೆಯಲ್ಲ. ಸಮುದ್ರದಂತೆ ದೊಡ್ಡದು. ವರ್ಷದ ಆರು ತಿಂಗಳುಗಳ ಕಾಲ ಅದು ಐಸಾಗಿರುತ್ತದೆ. ಉಳಿದ ಸಮಯ ನೀರು ಕಾಣಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ಅದೇನೇನೋ ಕರೆಯುತ್ತಾರೆ. ನನಗೆ ಅದನ್ನು ಹೇಳಲಿಕ್ಕೆ ಕಷ್ಟವಾಗುತ್ತಿದೆ. ಇಲ್ಲೇ ಕೆಳಗೆ ಕಣಿವೆಯೊಂದಿದೆ. ಕಣಿವೆಯಲ್ಲೊಂದು ಪುಟ್ಟ ನದಿ. ಅದರ ಹೆಸರೇನೋ ಗೊತ್ತಿಲ್ಲ. ಇಲ್ಲಿನ ಭಾಷೆ ವಿಚಿತ್ರವಾದುದು. ನಾನು ಆ ನದಿಯ ಹೆಸರನ್ನು ಬಿಡಿಸಿ ಬಿಡಿಸಿ ಕೇಳಿದಾಗ ಅದು ಚಂಪಾ ಎಂಬ ಅರ್ಥವನ್ನು ನೀಡುತ್ತದೆ. ನಾನು ಅದನ್ನು ಚಂಪಾ ಎಂದೇ ಕರೆಯುತ್ತಿದ್ದೇನೆ. ಅದೆಂತಾ ಓಘವಿದೆ ಅಂತೀಯಾ ಆ ನದಿಗೆ.. ಒಮ್ಮೆ ಜುಳು ಜುಳು, ಮತ್ತೊಮ್ಮೆ ನಿಧಾನ-ನಿನಾದ. ನೀನು ಇಲ್ಲಿದ್ದರೆ ಇಷ್ಟು ಹೊತ್ತಿಗೆಲ್ಲಾ ಆ ಚಂಪಾ ನದಿಯ ದಡದಲ್ಲಿ ನಡೆಯುತ್ತಾ ಹೋಗಿಬಿಡುತ್ತಿದ್ದೆ.
               ನಾ ನಿಂಗೆ ಆಗ್ಲೇ ಮಧು ಗದರಿದ್ದ ಸುದ್ದಿ ಹೇಳ್ದೆ ಅಲ್ವಾ.. ಆಗ್ಲೇ ಒಂದು ಮಜಾ ಸಂಗತಿ ನಡೀತು. ಆತ ನನ್ನ ಬಳಿ ಕೀಟಲೆ ಮಾಡುತ್ತಾ `ಏನ್ ದೋಸ್ತ್, ಯಾರದ್ದೋ ಕನಸು ಕಾಣ್ತಿದ್ದೀಯಾ..?' ಅಂದ. ನಾನು ಹೇಳಲಿಲ್ಲ. ಕೊನೆಗೆ ತುಂಬಾ ಒತ್ತಾಯ ಮಾಡಿದ ನಂತರ ನಿನ್ನ ಪೋಟೋ ತೋರಿಸಿದೆ. ಅಂದೊಮ್ಮೆ, ನಾನೇ ಬಂದು ಪ್ರೀತಿಸ್ತಿದ್ದೀನಿ ಅಂತಂದ ಎರಡನೇ ದಿನಕ್ಕೆ ನೀನು ಒಪ್ಪಿದ ನಂತರ ಒತ್ತಾಯ ಮಾಡಿ ನಿನ್ನಿಂದ ಇಸ್ಕೊಂಡಿದ್ದ ಪೋಟೋ ಅದು. ನೋಡಿದವನೇ ಆತ `ದೋಸ್ತ್..ತುಂಬಾ ಚನ್ನಾಗಿದ್ದಾಳೆ. ಭಾಳ ಲಕ್ಷಣವಂತೆಯಂತೆ ಕಾಣಿಸ್ತಾಳೆ. ನೀನೇನೂ ಅಂದ್ಕೊಳ್ಳೋದಿಲ್ಲ ಅಂದ್ರೆ ಒಂದ್ಮಾತು. ನಂಗೀ ಇಂಥದ್ದೇ, ಲಕ್ಷಣವಂತೆಯಾದ ಹುಡುಗಿ ಸಿಗಬೇಕು ಅಂದ್ಕೊಂಡಿದ್ದೀನಿ.. ನೀನೇ ಹುಡುಕಿ ಕೊಡಬೇಕು.. ದೋಸ್ತ್.. ಏನಂತೀಯಾ..?' ಅಂದ. `ಸಿಗದೇ ಏನು..ಸಿಕ್ಕೇ ಸಿಕ್ತಾಳೆ ಬಿಡು.. ಕೋತಿ ಹಾಗಿರೋಳು..' ಅಂತ ಛೇಡಿಸಿ ನಕ್ಕಿದ್ದೆ..
                ಹೌದೇ.., ನೀನು ತುಂಬಾ ಲಕ್ಷಣವಂತೆ. ಅದಕ್ಕೇ ಅಲ್ವಾ ನಾನಿನ್ನ ಇಷ್ಟಪಟ್ಟಿದ್ದು.. ಕಾಡಿ ಬೇಡಿ ಬೆನ್ನುಬಿದ್ದು ಪ್ರೀತ್ಸಿದ್ದು. ಯಾರಿಗೂ ಸಿಗದಂತಹ ನಿರ್ಮಲ ಪ್ರೀತಿ ನಂಗೆ ಸಿಕ್ಕಿದೆ ಅಂದ್ಕೊಂಡಿದ್ದು.., ಅಲ್ದೇ ಆ ಪ್ರೀತಿಗೆ ನಿಷ್ಟನಾಗಿ ಬದುಕಿದ್ದು.
                ನಿಂಗೆ ಗೊತ್ತಿಲ್ಲ, ನಾನು ನನ್ನಮ್ಮನ ಬಳಿ ನಿನ್ನ ಸುದ್ಧಿ ಹೇಳಿದಾಗೆಲ್ಲಾ `ಒಂದ್ಸಾರಿ ಆಕೇನ ಮನೆಗೆ ಕರ್ಕೊಂಡು ಬಾರೋ, ನಾನು ಆಕೆಯ ಬಳಿ ಮಾತಾಡಬೇಕು. ಆಕೆ ಹೇಗೆ ಎಂದು ನೋಡಬೇಕು..' ಅಂದಿದ್ದಳು. ಆಗ ನಾನು `ಡೋಂಟ್ ವರಿ ಅಮ್ಮ.. ಒಂದಿನ ಅವಳ್ನ ಮದುವೆಯಾಗಿಯೇ ಕರ್ಕೊಂಡು ಬರ್ತೀನಿ..' ಅಂದುಬಿಟ್ಟಿದ್ದೆ. ಈ ಬಂಡೀಪೋರಾದ ಹಿಮದ ಮೆಟ್ಟಿಲ ಮೇಲೆ ಕುಳಿತು ಇದನ್ನೆಲ್ಲ ನೆನಪು ಮಾಡ್ಕೊಂಡ್ರೆ ಮನಸ್ಸೆಷ್ಟು ರೋಮಾಂಚನ ಹೊಂದುತ್ತೆ ಗೊತ್ತಾ..? ಹುಂ. ನನ್ನ ಬದುಕಿನ ಆಳವನ್ನು ಹುಡುಕಿದ್ರೆ ಅಲ್ಲಿ ಕಾಣೋದು ಮೂರೇ ಮೂರು ನೀನು, ನನ್ನ ಕುಟುಂಬ ಹಾಗೂ ಈ ಹಿಮ.
               `ಲೋ.. ಮಿಲಿಟರಿಗೆ ಸೇರ್ತಿದ್ದೀಯಾ.. ಹುಷಾರು ಕಣೋ.. ಟೇಕ್ ಕೇರ್. ಕತ್ತಿ ಅಲುಗಿನ ಮೇಲಿನ ಬದುಕು ಅದು. ಎಂದಿಗೂ ತೀರಾ ಮೈಮರೀಬೇಡ.. ಮೈಯೆಲ್ಲ ಕಣ್ಣಾಗಿರು ಡಿಯರ್..' ಅಂತ ನಾನು ಹೊರಡೋ ಮುನ್ನ ನೀನು ಹೇಳಿದ ಮಾತುಗಳಿನ್ನೂ ನನ್ನ ಕಿವಿಯಲ್ಲಿನ್ನೂ ಗುಣಗುಣಿಸುತ್ತಾ ಇದೆ.
               ಎಲ್ಲಾ ಹೇಳಿದೆ, ನಿಂಗೆ ಇನ್ನೊಂದು ಮುಖ್ಯ ವಿಷಯ ಹೇಳೋದನ್ನು ಮರೆತೇ ಬಿಟ್ಟಿದ್ದೆ ನೋಡು. ಮನದ ತುಂಬಾ ನಿನ್ನದೇ ಬಿಂಬ ಇಟ್ಗೊಂಡು ಆ ದಿನ ಬಂಡಿಪೋರಾದ ರೌಂಡಿಂಗ್ಸ್ ಗೆ ಹೋದೆ. ಜೊತೆಯಲ್ಲಿ ಮಧು, ನಾಯ್ಡು ಇದ್ದರು. ಹಲವು ದಿನಗಳಿಂದ ಶಾಂತವಾಗಿದ್ದ ಬಂಡಿಪೋರಾ ಆವತ್ತು ಕೊಂಚ ಬದಲಾಯ್ತು. ಆ ದಿನ ಎಂದಿನ ಹಾಗೇ ಇರಲೇ ಇಲ್ಲ. ಅದೆಲ್ಲಿದ್ದರೋ ಏನೋ, ಒಮ್ಮೆಲೆ ಐದಾರು ಜನ ಮುಸುಕುಧಾರೀ ಭಯೋತ್ಪಾದಕರು ಗಡಿಯೊಳಗೆ ನುಸುಳಿ ಬಂದು ಬಿಟ್ಟಿದ್ದರು. ಬಂದವರೇ ದಾಂಧಲೆ ಶುರುಹಚ್ಚಿಕೊಂಡರು.
               ಆ ಹೊತ್ತಿನಲ್ಲಿ ನಾವು ಬಂಡೀಪೋರಾದ ಫಾಸಲೆಯಲ್ಲೇ ಇರುವ ನೋ ಮ್ಯಾನ್ಸ್ ಲ್ಯಾಂಡ್ ಬಳಿ ಇದ್ದೆವು. ತಕ್ಷಣ ನಮಗೆ ಸುದ್ದಿ ತಿಳಿಯಿತು. ನಮ್ಮ ಗ್ರೂಪ್ ಅಲ್ಲಿ ಅವರು ದಾಂಧಲೆ ಮಾಡುತ್ತಿದ್ದೆಡೆಗೆ ತೆರಳಿತು. ನಾವು ಅಲ್ಲಿಗೆ ಹೋಗುವ ವೇಳೆಗಾಗಲೇ ಎರಡು ಜನ ಬಂಡೀಪೋರಾ ನಿವಾಸಿಗಳನ್ನು ಕೊಂದು ಅವರು ಅಲ್ಲೆಲ್ಲೋ ಅಡಗಿ ಕುಳಿತಿದ್ದರು.
              ಬಂಡಿಪೋರಾ ಒಂಥರಾ ವಿಚಿತ್ರ ಊರು. ಊರು ವಿಚಿತ್ರವಾದುದಾದರೂ ಓಣಿ ಓಣಿಯಂತಹ ಮನೆಗಳು ನಮ್ಮನ್ನು ಕಾಡುತ್ತವೆ. ಮಣ್ಣಿನ ಗೂಡಿನಂತಹ ಮನೆಗಳು. ಬಹುತೇಕ ಮನೆಗಳಿಗೆ ಕಿಟಕಿಗಳೇ ಇಲ್ಲ. ತೀರಾ ಓದಿಕೊಂಡ ಕೆಲವೊಂದು ಮನೆಗಳಲ್ಲಿ ಮಾತ್ರ ಕಿಡಕಿಗಳನ್ನು ಇರಿಸಲಾಗಿದೆ. ವರ್ಷದ ಬಹುಕಾಲ ಹಿಮಪಾತವಾಗುವ ಕಾರಣ ಮನೆಯ ಮುಂದೆಲ್ಲ ಬಿಳಿ ಬಿಳಿ ಐಸ್ ಹುಡಿಗಳು. ಮನೆಯೊಳಗೆ ಚಳಿ ಕಾಸಲು ಅಗ್ಗಷ್ಟಿಕೆ. ನಮ್ಮ ಭಾಗದಲ್ಲಿ ಹೊಡ್ಸಲು ಅನ್ನುತ್ತಾರಲ್ಲ ಹಾಗೆ. ಅದರ ಎತ್ತರದ ಚಿಮಣಿ ನಮಗೆ ದೂರದಿಂದಲೇ ಕಾಣಿಸುತ್ತವೆ. ಊರಿನ ತುಂಬೆಲ್ಲ ವಿದ್ಯುತ್ ತಂತಿಗಳು ಹಾದುಹೋಗಿವೆ. ಆದರೆ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದರೂ ಯಾರೂ ಹೆಚ್ಚಿಗೆ ಅದನ್ನು ಬಳಕೆ ಮಾಡುವುದಿಲ್ಲ. ಬಂಡಿಪೋರಾದ ಊರುಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಾಣುವುದು ಅಪರೂಪ. ನಮ್ಮಲ್ಲಿಯಂತೆ ಅಡಿಗೆಗೆ ಮಿಕ್ಸರ್, ಗ್ರೈಂಡರ್, ಮಜ್ಜಿಗೆ ಕಡೆಯುವ ನವನೀತ ಮಿಷನ್, ಮನರಂಜನೆಗೆ ಟೀವಿ, ಟೇಪ್ ರೆಕಾರ್ಡರ್, ಸೌಂಡ್ ಸಿಸ್ಟಮ್, ಕಂಪ್ಯೂಟರ್, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಊಹೂಂ.. ಏನೆಂದರೆ ಏನೂ ಇಲ್ಲ. ಹೆಚ್ಚಿನ ಮನೆಗಳಲ್ಲಿ ಸಂಜೆ 8ಗಂಟೆಯ ನಂತರ ಕರೆಂಟ್ ದೀಪವನ್ನೂ ಹಾಕೋದಿಲ್ಲ. ಭಯೋತ್ಪಾದಕರ ಬಗ್ಗೆ ಭಯವಾ..? ಆಧುನಿಕ ಯಂತ್ರಗಳ ಬಳಕೆಯ ಕುರಿತು ಏನಾದರೂ ಮೂಢನಂಬಿಕೆಯಾ..? ಅಥವಾ ಇನ್ಯಾವುದೇ ಸಮಸ್ಯೆಗಳಿವೆಯಾ.? ಊಹೂಂ. ಏನೋಂದೂ ಗೊತ್ತಿಲ್ಲ. ನಾನೂ ಅದನ್ನು ಕೇಳಲು ಯತ್ನಿಸಿಲ್ಲ.
                ಆ ಬಂಡಿಪೋರಾದ ಬೀದಿಗಳಲ್ಲಿ ಭಯೋತ್ಪಾದಕರನ್ನು ಹುಡುಕೋಕೆ ಅದೆಷ್ಟು ಕಷ್ಟ ಪಟ್ವಿ ಗೊತ್ತಾ. ಕೊನೆಗೆ ಅದೊಂದು ಓಣಿಯಲ್ಲಿ ಎರಡು ಜನ ಕಂಡರು. ಗುಂಡಿನ ಚಕಮಕಿ ಶುರುವಾಗಿಯೇ ಬಿಟ್ಟಿತು. ಆ ಉಗ್ರಗಾಮಿಗಳು ಒಳ್ಳೆಯ ಆಯಕಟ್ಟಿನ ಸ್ಥಳದಲ್ಲಿದ್ದರು. ನಮಗೆ ಅಂತಹ ಸ್ಥಳ ಸಿಕ್ಕಿರಲಿಲ್ಲ. ಅವರು ಸಲೀಸಾಗಿಯೇ ನಮ್ಮ ಮೇಲೆ ಫೈರಿಂಗ್ ಮಾಡುತ್ತಿದ್ದರು. ನಾವು ಹಾಗೆ ಮಾಡಿದರೆ ಅವರು ಮರೆಯಾಗುತ್ತಿದ್ದರು. ಬಂಡಿಪೋರಾದ ಓಣಿ, ಹಾಗೂ ವಿಚಿತ್ರ ಇಕ್ಕಟ್ಟಾದ ಮನೆಗಳು ಮಧ್ಯ ಮಧ್ಯ ಹಿಮದ ಪದರದ ಗುಡ್ಡೆ ಇವೇ ಭಯೋತ್ಪಾದಕರಿಗೆ ಶ್ರೀರಕ್ಷೆಯಾಗಿತ್ತು. ನಾನು, ಮಧು, ನಾಯ್ಡು ಆ ಇಬ್ಬರು ಭಯೋತ್ಪಾದಕರನ್ನು ಕಷ್ಟಪಟ್ಟಾದರೂ ಬೆನ್ನಟ್ಟಿದ್ವಿ. ಆದರೆ ಅದೃಷ್ಟ ನಮ್ಮ ಕಡೆಗಿರಲಿಲ್ಲ. ನಾನು ಹಾಗೂ ಮಧುಗಿಂತ ಸ್ವಲ್ಪ ಮುಂದಿದ್ದ ನಾಯ್ಡುವಿನ ಎದೆಗೆ ಒಂದು ಗುಂಡು ಹೊಕ್ಕಿತು. ಅಲ್ಲೇ ಆತ ಕುಸಿಯತೊಡಗಿದ. ತಕ್ಷಣವೇ ನಾನು ಅಲರ್ಟ್ ಆಗಿ ಗುಂಡು ಹೊಡೆದೆ. ಒಬ್ಬ ಭಯೋತ್ಪಾದಕನಿಗೆ ತಾಗಿರಬೇಕು. ನಾನು ಅದನ್ನು ಗಮನಿಸಲೂ ಇಲ್ಲ. ಸೀದಾ ನಾಯ್ಡುವಿನ ಹತ್ತಿರಕ್ಕೆ ಹೋದೆ.
                ಆತನ ಉಸಿರು ಅಡಗುತ್ತಿತ್ತು. ದೇಹವೆಲ್ಲ ರಕ್ತದಲ್ಲಿ ಅದ್ದು ತೆಗೆದಂತಾಗಿತ್ತು. ಬಿಳಿ ಹಿಮವೆಲ್ಲ ಕೆಂಪು ಕೆಂಪಾಗಿತ್ತು. ಗುಂಡು ತಾಗಿದ ಜಾಗದಿಂದ ರಕ್ತ ಒರತೆಯಂತೆ ಉಕ್ಕುತ್ತಿತ್ತು. ನನ್ನಂತಹ ಸಮಚಿತ್ತದ ವ್ಯಕ್ತಿಗೇ ಆ ದೃಶ್ಯ ಒಮ್ಮೆ ಎದೆ ಹಿಂಡಿದಂತಾಯ್ತು. ನಾ ಚಿಕ್ಕದಾಗಿ ಕಂಪಿಸಿದೆ. `ನನ್ನ ಮನೇವ್ರನ್ನ ಚನ್ನಾಗಿ ನೋಡ್ಕೋ..' ಅಂದವನಿಗೆ ನಾನು ಮಾತುಕೊಡುವ ಹೊತ್ತಿಗೆ ನಾಯ್ಡು ಎಚ್ಚರ ತಪ್ಪಿದ.
               ಆ ನಂತರವೂ ಕಾಳಗ ಮುಂದುವರಿಯಿತು. ನಂಗೆ ತುಂಬಾ ಸಿಟ್ಟು ಬಂದಿತ್ತು. ನಾಯ್ಡುಗೆ ಗುಂಡು ಹೊಡೆದವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಮುನ್ನುಗ್ಗಿ, ಇದ್ದೊಬ್ಬ ಭಯೋತ್ಪಾದಕನೆಡೆಗೆ ಓಡಿದೆ. ಇದೇ ನಾ ಮಾಡಿದ ತಪ್ಪಾಗಿತ್ತು.  ಓಡುತ್ತಿದ್ದ ನನಗೆ ಅದೆಲ್ಲಿಂದಲೋ ಬಂದ ಗುಂಡೊಂದು ನನ್ನ ತೊಡೆಗೆ ನಾಟಿತು. ನಾನು ಎಚ್ಚೆತ್ತುಕೊಳ್ಳುವುಷ್ಟರಲ್ಲಿ ಮತ್ತೊಂದು ಗುಂಡು ಹೊಟ್ಟೆಗೆ ಬಡಿಯಿತು. ನಾನೂ ಕೂಡ ಕುಸಿಯತೊಡಗಿದೆ. ಅಷ್ಟರಲ್ಲಿ ಮಧು ಆ ಭಯೋತ್ಪಾದಕನನ್ನು ಕೊಂದು ಹಾಕಿದ. ಆ ನಂತರ ಅಂವ ನನ್ನ ಬಳಿ ಓಡಿ ಬರತೊಡಗಿದ. ಊಹೂಂ.. ಪೂರ್ತಿ ಹತ್ತಿರ ಬರಲಿಲ್ಲ. ಅಷ್ಟರಲ್ಲೇ ನನಗೆ ಎಚ್ಚರ ತಪ್ಪಿತು. ಮನಸ್ಸು ಕತ್ತಲಾಯಿತು.

***

               ಅಷ್ಟರ ನಂತರ ಎಷ್ಟು ದಿನ ಮಲಗಿದ್ದೆನೋ. ಈಗೊಂದೆರಡು ದಿನಗಳ ಹಿಂದೆ ನನಗೆ ಎಚ್ಚರಾಯಿತು. ನನಗೆ ಗುಂಡು ಬಿದ್ದ ದಿನ ಮಧು ನನ್ನ ಕಾಪಾಡಿದ್ನಂತೆ. ಪಾ..ಪ.. ನಾಯ್ಡು ಮರುದಿನ ಸತ್ತು ಹೋದ್ನಂತೆ. ನಿಂಗೆ ನಾನೀಗ ಒಂದು ಸಂಗತಿ ಹೇಳಬೇಕು.
               ಇತ್ತೀವರೆಗೆ ನೀನು ನನ್ನ ಚಂದಾಗಿ ಪ್ರೀತಿಸಿದೆ. ಕನಸಾದೆ.. ಬದುಕಾಗಿದ್ದೆ.. ಉಸಿರಾಗಿದ್ದೆ.. ಆದರೆ ಇನ್ನು ಮುಂದೆ ನೀನು ನನ್ನನ್ನು ಮರೆತುಬಿಡಬೇಕು. ಯಾಕೆ ಗೊತ್ತಾ, ನಂಗೀಗ ನಡೆಯೋಕೆ ಕಾಲಿಲ್ಲ. ಗುಂಡು ತಾಗಿದ ನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇನ್ನೂ ಒಂದು ಸಂಗತಿ ಹೇಳಲಾ..? ಆ ದಿನ ನನ್ನ ಹೊಟ್ಟೆಗೆ ಗುಂಡು ಬರಿದಿತ್ತಲ್ಲಾ, ಅದು ನನ್ನ ಜಠರಕ್ಕೆ ಹಾಗೂ ಪಿತ್ತಜನಕಾಂಗಕ್ಕೆ ತುಂಬಾ ಪೆಟ್ಟು ಮಾಡಿದೆಯಂತೆ. ಸರಿಪಡಿಸಲು ಸಾಧ್ಯವೇ ಇಲ್ಲದಷ್ಟು. ಮಿಲಿಟರಿ ವೈದ್ಯರು ನಾನು ಇನ್ನೆಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ ಎಂದು ಬಿಟ್ಟಿದ್ದಾರೆ. ಅದಕ್ಕೇ ನಾ ಹೇಳಿದ್ದು ನೀ ನನ್ನ ಮರೆತುಬಿಡು ಅಂತ.
               ಹುಂ... ನಿಂಗಾಗಿ ಒಬ್ಬ ಹುಡುಗನನ್ನು ನಾನು ನೋಡಿಟ್ಟಿದ್ದೀನಿ.. ಅಂವನೇ ಮಧು. ಆತ ನನ್ನ ಕುಟುಂಬವನ್ನೂ, ನಿನ್ನನ್ನೂ ಚನ್ನಾಗಿ ನೋಡ್ಕೋತೀನಿ ಅಂತ ನನಗೆ ಮಾತು ನೀಡಿದ್ದಾನೆ. ನಿಂಗೂ ಬೆಳಕಾಗಿ ಜೊತೆಯಲ್ಲೇ ಇರುತ್ತಾನೆ. ಅವನ ಇಷ್ಟದ ಲಕ್ಷಣವಂತೆ ಹುಡುಗಿ ನೀನಾಗಿರು.. ಒಳ್ಳೆ ಹುಡುಗನನ್ನು ಮಿಸ್ ಮಾಡ್ಕೊಳ್ಳಬೇಡ.
               ನೀನು ನಂಗೆ ಕೆಲ ಕಾಲದಲ್ಲೇ ಒಳ್ಳೆಯ ಅನುಭೂತಿ ಕೊಟ್ಟಿದ್ದೀಯಾ.. ಅದನ್ನು ಮರೆಯೋಲ್ಲ.. ಮುಂದೆ ಬರೋ ಜನ್ಮದಲ್ಲಿ ನಿಂಗೇ ನಾನು ಸಿಗ್ಲಿಕ್ಕೆ ಪ್ರಯತ್ನಿಸ್ತೀನಿ.. ನಂಗೀಗ ಎದ್ದು ನಿಲ್ಲಲೂ ಆಗ್ತಿಲ್ಲ ನಿಜ.. ಈ ಮಿಲಿಟರಿ ಆಸ್ಪತ್ರೆಯಲ್ಲಿ ಮಲಗಿ ನಿಂಗೆ ಪತ್ರವನ್ನು ಬರೆಯುತ್ತಿದ್ದೇನೆ. ಜೊತೆಯಲ್ಲೇ ಮಧು ಇದ್ದಾನೆ. ಅವನ ಬಳಿ ನಿನ್ನನ್ನು ಮದುವೆಯಾಗಬೇಕು ಎಂದು ಹೇಳಿ ಮಾತು ತೆಗೆದುಕೊಂಡಿದ್ದಾನೆ. ನೀನು ಅವನನ್ನು ಮದುವೆ ಆಗಲೇ ಬೇಕು. ನನ್ನನ್ನು ನೀನು ಮರೀಲೇ ಬೇಕು. ಮರೀತಿಯಾ ಅಂದ್ಕೊಂಡಿದ್ದೀನಿ. ನಿಂಗಾಗಿ ಮಧು ಇದ್ದಾನೆ. ಇರ್ತಾನೆ.
               ಅಂದಹಾಗೆ ನನಗೆ ಅಟಲ್ ಜಿಯ ಊಂಚಾಯಿ ಕವಿತೆಗಳು ಮತ್ತೆ ಮತ್ತೆ ಸೆಳೆಯುತ್ತಿವೆ. ನೀ ನನ್ನ ಮರೆತರೆ ಮಾತ್ರ ಯಾಕೋ ನಾನು ಧನ್ಯನಾದಂತೆ ಅನ್ನಿಸುತ್ತಿದೆ. ಇನ್ನು ಹೆಚ್ಚು ಬರೆಯಲು ನನ್ನಲ್ಲಿ ತ್ರಾಣವಿಲ್ಲ. ಇದೋ ನಾನು ಈ ಪತ್ರಕ್ಕೊಂದು ಕೊನೆಯ ಬಿಂದು ಇಡುತ್ತಿದ್ದೇನೆ. ಮತ್ತೊಮ್ಮೆ ನೀನು ನನ್ನನ್ನು ಮರೆಯಲೇ ಬೇಕು. ಮರೀತಿಯಾ ಎನ್ನುವ ಆಶಯದೊಂದಿಗೆ
ಜೈಹಿಂದ್

ಅಂದೊಮ್ಮೆ ನಿನ್ನವನು
ವಿನು


***
(ಈ ಕಥೆ ಬರೆದಿದ್ದು 19-06-2008ರಂದು ದಂಟಕಲ್ಲಿನಲ್ಲಿ)

No comments:

Post a Comment