Friday, August 30, 2013

ಕಾರಣವಿಲ್ಲದ ಒಂದು ಕಥೆ..

ನಿಜಕ್ಕೂ ಇದೊಂದು ವಿಶಿಷ್ಟ ಕಥೆ.
ನಮ್ಮ ಹವ್ಯಕ ಹುಡುಗ-ಹುಡುಗಿಯ ನಡುವೆ ನಡೆದ ಕಥೆ. ನಿಮ್ಮನ್ನು ಇದು ಚಿಂತನೆಗೆ ಹಚ್ಚಬಹುದೆಂಬ ನಂಬಿಕೆ ನನ್ನದು.
ಕಥೆ ಓದಿ. ನಿಮಗೆ ಏನು ಅನಿಸಿತು ಅಂತ ಬರೆಯಿರಿ.
--------------------

 ಅದು ನಮ್ಮದೆ ಹವ್ಯಕರ ಪಟ್ಟಣ. ತೀರಾ ಚಿಕ್ಕದಲ್ಲ. ದೋಡ್ಡದೂ ಅಲ್ಲ. ಅದಕ್ಕೊಂದು ಕಾಲೇಜು. ಡಿಗ್ರಿಯದು. ಅದರಲ್ಲಿ ನಮ್ಮ ನೂರಾರು ಹವಿ ಹುಡುಗ ಹುಡುಗಿಯರು. ಏನೋ ಸಾಧಿಸಬೇಕು ಎಂಬ ಕನಸು ಹೊತ್ತವರು.
ಆತ ಆ ಕಾಲೇಜಿನ ಹುಡುಗನೇ. ಕೆಲವು ವಿಶಿಷ್ಟ ಅಂಶಗಳನ್ನು ಹೊಂದಿರುವ ಹುಡುಗ. ಉತ್ಸಾಹದ ಬುಗ್ಗೆ. ಆತನಲ್ಲೂ ನೂರಾರು ಕನಸು. ಇನ್ನೂ ಬಹು ವರ್ಷ ಉರಿಯ ಬೇಕಾದ ದೀಪ ಆತ.
ಆತನ ಮನಸ್ಸನ್ನು ಕದ್ದಿದ್ದು ಅದೇ ಕಾಲೇಜಿನ ಓರ್ವ ಬಿಳಿ ಹುಡುಗಿ. ಪಕ್ಕಾ ಹವ್ಯಕರವಳು. ನೋಡೋಕೆ ಚೆನ್ನಾಗೂ ಇದ್ದಳು. ಕಾಡಿ ಬೇಡಿ ಪ್ರೇಮಿಸಿದ. ಒಲಿಸಿಕೊಂಡ. ಅದಾದ ಬಹು ತಿಂಗಳು ಆ ಪಟ್ಟಣದ ತುಂಬೆಲ್ಲ ಅವರೆ ಅವರು. ಎಲ್ಲರ ಬಾಯಿಯಲ್ಲಿಯೂ ದೊಡ್ಡ ಸದ್ದಾಗದ ಸುದ್ದಿ.

ಹೀಗಿರಲು ಆತನಿಗೆ ದೂರದೂರಿನಲ್ಲಿ ಉದ್ಯೋಗ ಸಿಕ್ಕಿತು. ಆಕೆಯೂ ಅಷ್ಟೆ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರೆಂಬ ಮಾಯಾ ನಗರಿಗೆ ಬಂದಳು. ಇಲ್ಲೂ ಅವರ ಪ್ರೀತಿ ಮುಂದುವರಿಯಿತು. ಆದರೆ ಬೆಂಗಳೂರು ಎಂಥವರನ್ನೂ ಎಂಥ ಸನ್ನಿವೇಶವನ್ನೂ ಬದಲಿಸುವ ತಾಕತ್ತು ಉಳ್ಳ ನಗರಿ. ಆ ಹುಡುಗ ಈ ನಗರಿಗೆ ಬಂದ ಮೇಲೆ ತನ್ನ ಉದ್ಯೋಗದಲ್ಲಿ ಬ್ಯೂಸಿ ಆದ. ಆಕೆಯೂ ತನ್ನ ಓದಿನಲ್ಲಿ ತಡಗಿಕೊಂಡಳು.
ಆದರೆ ಈ ಬ್ಯೂಸಿ ಬದುಕು ಅವರ ಪ್ರೀತಿಗೇನೂ ತೊಂದರೆ ಮಾಡಲಿಲ್ಲ. ಪ್ರತಿ ದಿನದಲ್ಲಿ ಪುರಸೊತ್ತು ಇಲ್ಲದಿದ್ದರೂ ಮೊಬೈಲು ಅವರನ್ನು ಬೆಸೆದಿತ್ತು. ಪ್ರತಿ ಶನಿವಾರ- ಭಾನುವಾರದ ವೀಕೆಂಡ್ಗಳು ಈ ಪ್ರೇಮಿಗಳ ಪಾಲಿಗೆ ಜೊತೆಗೂಡುವ ದಿನಗಳಾಗಿತ್ತು. ಆ ದಿನಗಳಂದು ಅವರ ಪಾಲಿಗೆ ಪಾಕರ್ುಗಳು ಕರೆಯುತ್ತಿದ್ದವು, ಸಿನಿಮಾ ಥಿಯೇಟರ್ಗಳು ಕೈ ಬೀಸುತ್ತಿದ್ದವು.
ಈ ದಿನಗಳಲ್ಲಿ ಅವರು ಪಕ್ಕಾ ಪ್ರೇಮಿಗಳಾಗುತ್ತಿದ್ದರು. ಇಷ್ಟರ ಜೊತೆಗೆ ಅವರು ಹಬ್ಬ ಹರಿದಿನಗಳಂದು ಮನೆಗೆ ಹೋಗುವಾಗ ಜೊತೆಗೆ ಹೋಗುತ್ತಿದ್ದರು. ಜೊತೆಗೆ ಬರುತ್ತಿದ್ದರು. ಅಷ್ಟು ಅನ್ಯೋನ್ಯತೆ ಅವರದ್ದು. ಆ ಹುಡುಗನಿಗಂತೂ ಅವಳೇ ಜೀವ, ಜೀವಾಳ. ಅವಳಿಗೂ ಅಷ್ಟೆ, ಇವನೇ ಎಲ್ಲ.

ಇಂತಹ ಸುಂದರ ಪ್ರೀತಿಗೆ ಅದ್ಯಾರ ದೃಷ್ಟಿ ಬಿತ್ತೋ. ಇದ್ದಕ್ಕಿದ್ದಂತೆ ಇವರ ಪ್ರೇಮದಲ್ಲಿ ಒಂದು ದೊಡ್ಡ ಟ್ವಿಸ್ಟ್ ಬಂದಿತು. ಆಕೆಯ ಪಾಲಿಗೆ `ಯೂ ಟರ್ನ್' ಅದು. ಆಕೆ ಉನ್ನತ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲೇ ಅವನಿದ್ದ ರಾಹುಲ್ ದ್ರಾವಿಡ್ನಂತಹ ಆಟಗಾರ ಸಚಿನ್. ಉತ್ತರ ಭಾರತೀಯ. ಎಲ್ಲ ಉತ್ತರ ಭಾರತೀಯರಂತೆ ಬಿಳಿ ಚ್ವಾರೆ. ಅಷ್ಟೇ ಬಡಕಲು. ಉದ್ದುದ್ದ ಕಡ್ಡಿ ಕಡ್ಡಿ ಕೂದಲು. ಮೈತುಂಬಾ ಸ್ಟೈಲೋ ಸ್ಟೈಲು. ಅವನಿಗೆ ನಮ್ಮ ಕಥಾ ನಾಯಕಿ ಅದ್ಯಾವ ಮೋಡಿ ಮಾಡಿದಳೋ. ಅವನಿಗೆ ಈಕೆ ಅದ್ಹೇಗೆ ಚೆಂದ ಕಂಡಳೋ... ಪ್ರಪೋಸ್ ಮಾಡಿಯೇ ಬಿಟ್ಟ.
ಈ ಪ್ರೇಮ ಮಯಿ ಅದನ್ನು ಒಪ್ಪುತ್ತಾಳಾ..? ಊಹು.. ಈಕೆಯ ಪಾಲಿಗೆ ನಮ್ಮ ಕಥಾ ನಾಯಕನೇ ಎಲ್ಲ. ಅದಕ್ಕೆ ಆ ಆಟಗಾರನ ಪ್ರಪೋಸಲ್ಲನ್ನು ತಿರಸ್ಕರಿಸಿದಳು. ಅವ ಬಿಡುವನೆ? ಇಂತಹ ಎಷ್ಟು ಹುಡುಗಿಯರನ್ನು, ಬೌಲರ್ಗಳನ್ನು ನೋಡಿದವನೋ ಅವ.. ಛಲದ ಅಂಕ ಮಲ್ಲ.
ನಮ್ಮ ನಾಯಕಿಯನ್ನು ಮತ್ತೆ ಮತ್ತೆ ಕಾಡಿದ. ಎಡಬಿಡದೇ ಕಾಡಿದ. ಈಕೆಯೂ ಅಹಲ್ಯೆಯಂತೇ ಕಲ್ಲು ಬಂಡೆ. ಆತನ ಪ್ರಪೋಸಲ್ಲಿಗೆ ಈಕೆಯದು ಒಂದೆ ಮಾತು `ನೋ ನೋ ನೋ'...
ಅವ ಬಿಡಲಿಲ್ಲ. ಈಕೆ ಒಪ್ಪಲಿಲ್ಲ.

ನಮ್ಮ ನಾಯಕಿಯೂ ಮನುಷ್ಯಳೇ ತಾನೆ. ಎಷ್ಟು ದಿನ ಅಂತ ತನ್ನ ಮನಸ್ಸನ್ನು ಒಂದೆಡೆಗೆ ಗಟ್ಟಿಯಾಗಿ ಹಿಡಿದಿಡಬಲ್ಲಳು? ಈ ನಡುವೆ ನಮ್ಮ ನಾಯಕನಿಗೆ ಪುರಸೊತ್ತಿಲ್ಲದ ಕೆಲಸ. ಪಾಪ ಹಲವು ದಿನಗಳಾದರೂ ಆತನ ಬಳಿ ಈಕೆಯನ್ನು ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ.
ಇತ್ತ ಬೆಣ್ಣೆ ನಿಧಾನವಾಗಿ ಕರಗುತ್ತಿತ್ತು. ನಮ್ಮ ಕಥಾ ನಾಯಕಿಗೆ ಬೇಡ ಬೇಡವೆಂದರೂ ಮನಸ್ಸು ಆ ಸಚಿನ್ನನೆಡೆಗೆ ಸೆಳೆಯುತ್ತಿತ್ತು. ಏಕೆ ಗೊತ್ತಿಲ್ಲ ಅವಳಿಗೆ ಆತ ಪದೆ ಪದೆ ಕಾಡುತ್ತಿದ್ದ. ಮತ್ತೆ ಮತ್ತೆ ನೆನಪಾಗುತ್ತಿದ್ದ. ಆತ ಅವಳಿಗೆ ನೆನಪಾದಾಗಲೆಲ್ಲ ನಮ್ಮ ಕಥಾ ನಾಯಕ ಮರೆತು ಹೋಗುತ್ತಿದ್ದ. ಇದು ಅವಳ ತಪ್ಪಲ್ಲ ಬಿಡಿ.. ಆತನೂ ಎಡಬಿಡದೇ ಕಾಡಿದರೆ ಆಕೆ ಇನ್ನೇನು ಮಾಡ್ತಾಳೆ ಹೇಳಿ?
ಕೊನೆಗೊಂದು ದಿನ ಆಕೆ ಸಚಿನ್ನನ ಪ್ರೀತಿಗೆ ಓಕೆ ಎಂದಳು. ಆತನ ಇಷ್ಟು ದಿನದ ಡಿಫೆನ್ಸ್ ಆಟಕ್ಕೂ ಸಾರ್ಥಕತೆ ಸಿಕ್ಕಿತ್ತು.
ಇದರ ನಂತರ ನಡೆದದ್ದು ಮತ್ತೂ ಕೆಟ್ಟ ಕಥೆ.
ನಮ್ಮ ನಾಯಕಿ ಮತ್ತೊಬ್ಬನ ಪ್ರೀತಿಗೆ `ಎಸ್' ಎಂದ ವಿಷ್ಯ ತಿಳಿದ ನಾಯಕ ಬಹಳ ಬೇಸರ ಮಾಡಿಕೊಂಡ. ನಂಬಲು ಆತನಿಗೆ ಕಷ್ಟವಾಯಿತು. ಯಾಕೆ ಹೀಗೆ, ಇದು ಹೌದಾ ಅಂತ ನಾಯಕಿಯನ್ನು ಕೇಳಿದ. ಆಕೆ ಇಲ್ಲ ಅನ್ನುತ್ತಾಳೇನೋ ಅಂದುಕೊಂಡಿದ್ದ. ಆದರೆ ಆಕೆ ಹೌದು ಎಂದಳು. ಇದು ಆತನಿಗೆ ಅತ್ಯಂತ ಆಘಾತ ಉಂಟುಮಾಡಿತು.

ಅವನಿಗೆ ಒಮ್ಮೆ ರವಿ ಬೆಳಗೆರೆಯ `ಹೇಳಿ ಹೋಗು ಕಾರಣ'ದ ಪ್ರಾರ್ಥನಾ ನೆನಪಾದಳು. ಈತನೂ ಕಾರಣ ಕೇಳಿದ. ಆದರೆ ಆಕೆ ಉತ್ತರ ನೀಡಲಿಲ್ಲ. ನೆಗ್ಲೆಕ್ಟ್ ಮಾಡಿದಳು. ಈತನಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ನಮ್ಮ ನಾಯಕನನ್ನು ಕೊನೆಗೊಮ್ಮೆ ಬಿಟ್ಟೇ ಬಿಟ್ಟಳು.
ಈಗ ಬೆಂಗಳೂರಿನಲ್ಲಿ ಆಕೆ ಆ ಆಟಗಾರನೊಂದಿಗೆ ಕಳೆಯುತ್ತಿದ್ದಾಳೆ. ಪಾಪ ನಮ್ಮ ನಾಯಕ ಬಹಳ ಬೇಸರದಲ್ಲಿದ್ದಾನೆ. ತೀರಾ ಇತ್ತೀಚೆಗೆ ನಮ್ಮ ನಾಯಕ ನನ್ನ ಬಳಿ ಬಂದು ಈ ಕಥೆಯನ್ನು ಹೇಳಿಕೊಂಡ. ಆ ನಂತರ ನನ್ನಲ್ಲ ಕೆಲವು ಪ್ರಶ್ನೆಗಳು ಮೂಡಿದವು.
ಆಕೆ ಯಾಕೆ ಹೀಗೆ ಮಾಡಿದಳು? ಆಕೆ ಮಾಡಿದ್ದು ಸರಿಯಾ?
ನೋಡಲು ಚೆನ್ನಾಗಿದ್ದ, ಸಖತ್ ಶ್ರೀಮಂತನೂ ಆಗಿದ್ದ ಆತನನ್ನು ಯಾಕೆ ಬಿಟ್ಟು ಬಿಟ್ಟಳು?
ನಮ್ಮ ಹುಡುಗೀರು ಯಾಕೆ ಹೀಗೆ ನಂಬಿದವರಿಗೆ ಕೈ ಕೊಡ್ತಾರೆ?
ಬೆಂಗಳೂರು ಎಂತವರನ್ನೂ ಹಾಳು ಮಾಡುತ್ತದಾ?
ಈ ಕಥೆಯ ಬಗ್ಗೆ ನಿಮಗೆ ಅನಿಸೋದು ಏನು?

Wednesday, August 28, 2013

ಇದು ನನ್ನದು



ಇದು ನನ್ನದು ಇದು ನನ್ನದು
ಈ ಲೋಕವೆ ನನ್ನದು
ಈ ಲೋಕವು ಹೊಂದಿರುವ
ಅಧಿಕಾರವು ನನ್ನದು..!


ಈ ಲೋಕದ ಸೊಬಗೆಲ್ಲವು
ನನ್ನದೇ ಕಲ್ಪನೆ,
ಈ ಕಲ್ಪನೆ ಕೂಡಿರಲು
ಆಗಿರುವುದು ರಚನೆ..!!


ದಿನ ಹುಟ್ಟುವ ಸೂರ್ಯನು
ನನ್ನದೇ ಕಣ್ಗಳು
ದಿನ ಮೂಡುವ ಚಂದ್ರನು
ನನ್ನನೇ ನೆನೆವನು..!!


ಜಗ ಗೆಲ್ಲಲಿ ಜಗ ಸೋಲಲಿ
ಜಯವೆಂದೂ ನನ್ನದೆ
ಇದರಿಂದ ದೊರಕುವ
ನಗುವೆಲ್ಲವೂ ನನ್ನದೆ..!!


ಯಾರಿರಲಿ ಇಲ್ಲದಿರಲಿ
ನಾ ಮೆರೆವೆ ಎಂದಿಗೂ
ಈ ಭಾವನೆ ಲೋಕದಿಂದ
ಹೊರಹೋಗದು ಎಂದಿಗೂ ..!!


ಬರೆದಿದ್ದು : 14-03-2004ರಂದು
ಇದು ನಾನು ಮೊಟ್ಟಮೊದಲು ಬರೆದ ಕವಿತೆ. 9 ವರ್ಷಗಳ ಹಿಂದೆ.. ಇದನ್ನು ನಂತರ ಓದುಗರ ವೇದಿಕೆ ಉಂಚಳ್ಳಿಯ ಯುವ ಕವಿಗೋಷ್ಟಿಯಲ್ಲಿ ಓದಿದ್ದೇನೆ. ನನ್ನ ಮೊದಲ ಕವಿತೆ ನಿಮ್ಮ ಮುಂದೆ ..

Saturday, August 24, 2013

ನೀನಾಗು


 ಮನದೊಳು ನಿನ್ನೆಯ ನೆನಪದು ಮೂಡಿದೆ
 ನೆನಪಾಗು ನೀ ನೆನಪಾಗು..!

 ನನ್ನೆಯ ಮೌನಕೆ ಮಾತಾಗು ನೀ
 ನನ್ನೆಯ ಕನಸಿಗೆ ನನಸಾಗು,
 ಪ್ರೀತಿಯ ಕವಿತೆಯ ಸಾಲಾಗು ನೀ
 ಗೆಲುವಿನ ಹಾದಿಗೆ ಮೊದಲಾಗು..!!

 ನೆನಪಲಿ ನೂರು ಸ್ಫೂರ್ತಿಯ ತುಂಬಿದೆ
 ನಲಿವಿಗೆ ಚೇತನ ನೀನಾಗು,
 ಮನದೊಳು ಹಸಿರಿನ ಚಿಗುರದು ಮೂಡಿದೆ
 ಜೀವ ಜಲಧಿಯೆ ನೀನಾಗು..!!

 ಕವಿದಿಹ ಮೋಡದ ಬಾನಿನ ಮಧ್ಯದಿ
 ಸೆಲೆಯುವ ಚಿನ್ನದ ಮಿಂಚಾಗು,
 ಏನೆ ಬರಲಿ ಹೊತ್ತು ಮುಳುಗಲಿ
 ಬಾಳಿಗೆ ನೀನು ಜೊತೆಯಾಗು..!!

Sunday, August 18, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 7

ಏಳನೇ ಭಾಗ..


ಗುಡಲೂರಿನಲ್ಲಿ ಮಲಗುವ ಮುನ್ನ ಮನಸ್ಸಿನಲ್ಲಿದ್ದುದು ವಯನಾಡಿನ ಟೀ ತೋಟಗಳು..
ಕುತೂಹಲ ಬೀರುವ ಗುಡ್ಡ ಬೆಟ್ಟಗಳು..
ಟಿ.ವಿ ಇರುವ ರೂಮು ಬೇಕೆಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿತ್ತಲ್ಲ.. ಅದ್ಯಾವುದೋ ಚಾನಲ್ಲಿನಲ್ಲಿ ಸಿನೆಮಾ ನೋಡುವ ವ್ಯರ್ಥ ಪ್ರಯತ್ನ ಮಾಡಿದೆವು.. ತಮಿಳು, ಮಲೆಯಾಳಮ್, ಹಿಂದು ಚಾನಲ್ಲುಗಳ ಸಾಲು ಸಾಲಿತ್ತು..
ಉದಯ ಟಿವಿಯೋ ಮತ್ಯಾವುದೋ ಒದೆರಡು ಕನ್ನಡ ಚಾನಲ್ಲುಗಳಿದ್ದವು..
ತೆಲಗು ಸಿನೆಮಾ ಅರ್ಧ ನೋಡಿ ಮುಗಿಸುವುದರೊಳಗೆ ನಿದ್ರಾದೇವಿ ನಮ್ಮನ್ನು ಅಪ್ಪಿಕೊಂಡಿದ್ದಳು..

ಮುಂಜಾನೆ ಎದ್ದು `ದರ್ಶನ ಲಾಡ್ಜಿನ' ಟೆರೆಸ್ ಮೇಲಿನಿಂದ ನೋಡಿದರೆ ಇಬ್ಬನಿಯ ಮಾಲೆ ಗುಡಲೂರನ್ನು ಮುತ್ತಿತ್ತು..
ಯಾವುದೋ ಯೂರಪ್ ರಾಷ್ಟ್ರದಲ್ಲಿ ವಿಹಾರ ಮಾಡಿದ ಅನುಭವ,.
ರಸ್ತೆಯಲ್ಲಿ ವಾಹನಗಳು ಲೈಟ್ ಹಾಕಿ ನಿಧಾನವಾಗಿ ಚಲಿಸುತ್ತಿದ್ದುದನ್ನು ನೋಡುವುದೇ ಚೆಂದ ಮಾರಾಯ್ರೆ..
ರಸ್ತೆಯಲ್ಲ ಬೆಳ್ಳಗೆ.. ವಾಹನಗಳು ಮೆಲ್ಲಗೆ...
ಅದ್ಯಾಕೋ ಗುಡಲೂರು ಬಹಳ ಸೆಳೆಯಿತು..
ತುಂಬ ಇಷ್ಟವಾಯಿತು.. ಪದೆ ಪದೆ ನೆನಪಾಗುವಂತಾಯಿತು..
ಕೊನೆಗೊಮ್ಮೆ ಚೆಕ್ ಔಟ್ ಆಗಿ ಹೊರ ಬಂದು ಅಲ್ಲೇ ಹತ್ತಿರದಲ್ಲಿ `ಸಾಪಡ್' ಖ್ಯಾತಿಯ ಹೊಟೆಲಿಗೆ ಲಗ್ಗೆ ಇಟ್ಟು ಮಸ್ಸಾಲೆ ದೋಸೆಗೆ ಆರ್ಡರ್ ಮಾಡಿದೆವು..
ದೋಸೆ ಬಿಸಿ ಬಿಸ್ಸಿ ಬಂತು.. ತಿಂದು.. ಮಸ್ಸಾಲೆ ಟೀ ಕುಡಿದು ಬೈಕೇರಿದೆವು..

ಊಟಿ ಮೈಸೂರು ದಾರಿಯಲ್ಲಿ ಗುಡಲೂರು ಪಟ್ಟಣದಲ್ಲಿಯೇ ಕೊಂಚ ದೂರ ಸಾಗಿ ನಂತರ ಎಡಕ್ಕೆ ಹೊರಳಿದರೆ ವಯನಾಡಿನ ರಸ್ತೆ ಸಿಗುತ್ತದೆ.. ಇಲ್ಲಿ ಎರಡು ರಸ್ತೆಗಳಿವೆ.. ಒಂದು ರಸ್ತೆ ನೀರ ಕೋಜಿಕ್ಕೋಡ್ ಗೆ ತೆರಳಿದರೆ ಇನ್ನೊಂದು ರಸ್ತೆ ಸುಲ್ತಾನ್ ಬತ್ತೇರಿ ಮೂಲಕ ಸಾಗುತ್ತದೆ.. ಗುಡಲೂರಿನಿಂದ ಸುಲ್ತಾನ್ ಬತ್ತೇರಿಗೆ 50-60 ಕಿಮಿ ದೂರ. ನಾವು ಆರಿಸಿಕೊಂಡಿದ್ದು ಇದೇ ಮಾರ್ಗ. ಸಿನೆಮಾದಲ್ಲಿ ಕಾಡಿದ್ದ ಎಡಕಲ್ಲು ಗುಡ್ಡ ನೋಡುವುದು, ಟೀ ತೋಟಗಳಲ್ಲಿ ಓಡಿ.. ಆಡುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು.. ಇಲ್ಲಿ ನಾನು ರಾಘುವಿನ ಬೈಕೇರಿದೆ.. ಕಿಟ್ಟು ಮೋಹನನ ಬೈಕೇರಿದ..
ಮುಂದೆ ಮುಂದೆ ಸಾಗಿದಂತೆಲ್ಲ ನಮ್ಮ ಕಣ್ಣ ಮುಂದೆ ಟೀ ತೋಟಗಳದ್ದೇ ದೃಶ್ಯ ವೈಭವ.. ಏನೋ ಥ್ರಿಲ್ಲು...

ಈ ರಸ್ತೆ ಥೇಟು ನಮ್ಮ ಶಿರಸಿ-ಹುಲೇಕಲ್ ರಸ್ತೆಯ ಹಾಗೆಯೇ ಇದೆ.. ಇನ್ನೂ ಕಾಡು.. ತಿರುವು, ಮುರುವು.. ಅಪ್ ಎಂಡ್ ಡೌನ್.. ಅದೆಂತದೋ ತರಹೇವಾರಿ ಊರುಗಳು.. ಹೆಸರುಗಳು ನೆನಪಿನಲ್ಲಿ ಉಳಿಯುವಂತದ್ದಲ್ಲ.. ಅಲ್ಲೊಂದು ಕಡೆ ದಟ್ಟ ಕಾಡು.. ಬಹುಶಃ ಬಂಡಿಪುರ-ನಾಗರಹೊಳೆ-ಮಧುಮಲೈ ಅರಣ್ಯಗಳೆಲ್ಲ ಸೇರಿದ ಕಾಡಿನ ಭಾಗವಿರಬೇಕು.. ಅದು ಕಳೆಯುವಷ್ಟರಲ್ಲಿ ತಮಿಳುನಾಡು-ಕೇರಳ ಗಡಿ ಭಾಗದ ಚೆಕ್ ಪೋಸ್ಟ್ ಸಿಕ್ಕಿತು.. ದಾಟಿ ಮುನ್ನಡೆದೆವು.. ಆ ನಂತರದ ವಾತಾವರಣ ವಿಚಿತ್ರ ವೆನ್ನಿಸತೊಡಗಿತು..
ಆ ಕಾಡು ಕಳೆಯುತ್ತಿದ್ದಂತೆಯೇ ಒಂದು ಊರು.. ಊರ ತುಂಬ ಮಸೀದಿಗಳು.. ಗುಮ್ಮಟಗಳು.. ಅದೆಂತದ್ದೋ ವಿಚಿತ್ರ ವಾಸನೆ.. ದೌರ್ಭಾಗ್ಯ ನೋಡಿ ಮನೆಗಳ ಮುಂದೆ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿದ್ದವು.. ಯಾ ಅಲ್ಲಾಹ್... ಇದೆಲ್ಲಿಗೆ ಬಂದೆವು..? ನಮಗೆ ಗೊತ್ತಿಲ್ಲದಂತೆಯೇ ಅದ್ಯಾವುದೋ ಪಾಕಿಸ್ತಾನದ ನಾಡನ್ನು ಹೊಕ್ಕೆವಾ..? ಜೊತೆಯಲ್ಲಿದ್ದ ಮೋಹನ ಕುದ್ದು ಹೋದ.. ಇವ ಎಲ್ಲಿ ಬೈಯಲು ಶುರು ಹಚ್ಚಿಕೊಳ್ಳುತ್ತಾನೋ ಎನ್ನುವ ಭಯ ನಮ್ಮದು.. ಕೇರಳದಲ್ಲಿ ಮುಸ್ಲೀಮರು ಬಹುಸಂಖ್ಯಾತರು ಎಂದು ಕೇಳಿದ್ದ ನಮಗೆ ಪ್ರತ್ಯಕ್ಷವಾಗಿ ಅರಿವಿಗೆ ಬಂದಿತು..

ಆ ಊರು ಕಳೆಯುವಷ್ಟರಲ್ಲಿ ಒಂದಷ್ಟು ಟೀ ತೋಟಗಳು ನಮಗೆ ಕಂಡು ಮನಸ್ಸು ತಿಳಿಯಾಯಿತು..
ಅಲ್ಲಿ ಒಂದು ಕಡೆ ರಸ್ತೆಗೆ ಚಾಚಿಕೊಂಡಿದ್ದ ಟೀ ತೋಟ ಕಂಡೊಡನೆ ನಮ್ಮ ವಾಹನಕ್ಕೆ ಬ್ರೇಕ್ ಬಿದ್ದಿತು..
ಇಳಿದು ಸೀದಾ ತೋಟಕ್ಕೆ ನುಗ್ಗಿದ್ದೇ.. ಆ ಸಂದರ್ಭದಲ್ಲಿ ಅದ್ಯಾರಾದರೂ ತೋಟದ ಮಾಲಿಕ ನಮ್ಮನ್ನು ಕಂಡಿದ್ದರೆ ಯಾರೋ ಕಳ್ಳರು ನಿಗ್ಗಿದ್ದಾರೆ ಎಂದು ಗುಂಡು ಹಚ್ಚಿ ಬಿಡುತ್ತಿದ್ದನೇನೋ..
ಒಂದಷ್ಟು ಪೋಟೋ ಸೆಷನ್ನುಗಳು ಮುಗಿದವು..
ಅಲ್ಲೊಂದು ಅನಾಥ ಗೇಟಿನ ತರಹದ ಆಕೃತಿಯಿತ್ತು.. ಅದಕ್ಕೊಂದು ಕುಣಿಕೆ.. ಅದೆಂತದ್ದು ಎನ್ನುವುಚು ಅರ್ಥವಾಗಲಿಲ್ಲ..
ರಾಘವ ಹೋದವನೇ ನೇಣು ಹಾಕಿದವರ ರೀತಿ ಪೋಸು ಕೊಟ್ಟ.. ಪೋಟೋ ಕ್ಲಿಕ್ಕಿಸಿ ಮುಗಿಯಿತು..
ಕಿಟ್ಟುವಂತೂ ` ಹ್ವಾ.. ಇಲ್ಲೇ ಇಷ್ಟು ಸೊಲಿಡ್ಡಿದ್ದು.. ಇನ್ನು ವಯನಾಡಲ್ಲಿ ಎಷ್ಟು ಮೊಸ್ತಿದ್ದಿಕ್ಕಲೇ..' ಎಂದ..
ಮೋಹನ.. ಮಾರಾಯಾ ಯಾರಿಗೆ ಗೊತ್ತು.. ವಯನಾಡು ಖರಾಬಾಗಿ ಇದ್ದಿರಲಿಕ್ಕೂ ಸಾಕು ಎಂದು ಹೇಳಿದ..
ನಾವು ಮುನ್ನಡೆದೆವು..
ಮಂಜು ಸುರಿಯುವ ದಾರಿಯಲ್ಲಿ ಸೂರ್ಯ ನೆತ್ತಿಗೆ ಬರುವ ಮೊದಲು ನಾವು ಸುಲ್ತಾನ್ ಬತ್ತೇರಿಯನ್ನು ತಲುಪಿದೆವು..
ಇಲ್ಲಿಗೇನೋ ಬಂದೆವು.. ಮುಂದೆಲ್ಲಿ ಹೋಗುವುದು/..?
ಕಾಡಿತು ಗೊಂದಲ.. ವಯನಾಡಿನ ಐಡಿಯಾ ಕೊಟ್ಟ ಮೋಹನನಿಗೂ ವಯನಾಡಿನಲ್ಲಿ ನೋಡುವುದು ಏನನ್ನು ಎನ್ನುವುದು ಗೊತ್ತಿರಲಿಲ್ಲ.. ಕೇಳಬೇಕಲ್ಲ... ಯಾರನ್ನು ಕೇಳುವುದು..?
ಯಾರನ್ನು ನೋಡಿದರೂ ಲುಂಗಿ..ಗಳು.. ಗಡ್ಡಗಳು.. ಹಣೆಯ ಮೇಲೆ ಶ್ರೀಗಂಧದ ಅಡ್ಡ ಗೆರೆಗಳು..
ಸ್ವಾಮಿಯೇ ಅಯ್ಯಪ್ಪಗಳು.. ಅಲ್ಲಾ ಹೋ ಅಕ್ಬರ್ ಗಳು..

ಅದ್ಯಾರೋ ಪುಣ್ಯಾತ್ಮನಿಗೆ ನಮ್ಮ ಪಾಡು ಅರ್ಥವಾಯಿತಿರಬೇಕು..
ಮಲೆಯಾಳಮ್ಮಿನಲ್ಲಿ ಅದೇನೋ ಕೇಳಿದ..
ನಾವು ಕಣ್ಣು ಕಣ್ಣು ಬಿಟ್ಟೆವು.. ಹಿಂದಿಯಲ್ಲಿ ಮೋಹನ, ಕಿಟ್ಟು ಮಾತಾಡಿದೆವು..
ನಾನು ರಾಘು ಸುಮ್ಮನೆ ಪೋಸು ಕೊಟ್ಟೆವು..
ಕೊನೆಗೆ ಆತ ಕೋಜಿಕ್ಕೋಡ್ ರಸ್ತೆಯನ್ನು ತೋರಿಸಿ ಗೋ ಸ್ಟ್ರೇಟ್.. ಟೇಕ್ ಲೆಪ್ಟ್ ಎಂದ.. ವೋಕೆ ವೋಕೆ.. ಥ್ಯಾಂಕ್ಸುಗಳು ಎಂದು ಮುಂದೆ ಹೊರಟೆವು..
ಅಲ್ಲೆಲ್ಲೊ ಕೆಂದಾಳಿ ಮುಮಡಿಗೆ ತರದ ಎಳನೀರು ನಮ್ಮನ್ನು ಬಾ ಕುಡಿ.. ಬಾಕುಡಿ ಎಂದು ಕರೆದವು..
ಕುಡಿಯೋಣ ಎಂದು ಕತ್ತರಿಸಿ ಬಾಯಿಗೆ ಹಾಕಿದರೆ ಅದು ಸೀಯಾಳವಲ್ಲ ಮಾರಾಯ್ರೆ...
ಪುಲ್ ಬೆಳೆದು ಹೋಗಿ ಕಾಯಾಗಿಬಿಟ್ಟಿದೆ.. ಕೊನೆಗೆ 20 ರು. ಕೊಟ್ಟು ಕುಡಿದು ಬಂದೆವು..


ವಯನಾಡು ಕೇರಳದ ಕೊಟ್ಟ ಕೊನೆಯಲ್ಲಿರುವ ಜಿಲ್ಲೆ.. ಒಂದು ಕಡೆ ಕರ್ನಾಟಕ ಇನ್ನೊಂದು ಕಡೆಗೆ ತಮಿಳುನಾಡು.. ನಡುವೆ ಇರುವ ವಯನಾಡಿನಲ್ಲಿ ಸುಲ್ತಾನ್ ಬತ್ತೇರಿ ಪ್ರಮುಖ ಪಟ್ಟಣ.. ಕಲ್ಪೆಟ್ಟಾ ಜಿಲ್ಲಾ ಕೇಂದ್ರ..
ಪ್ರವಾಸೋದ್ಯಮವನ್ನೇ ಮೂಲವಾಗಿಟ್ಟುಕೊಂಡ ಜಿಲ್ಲೆ.. ಕೊಜಿಕ್ಕೋಡ್-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ..
ಎಡಕಲ್ಲು ಗುಡ್ಡ, ಕಲ್ಪೆಟ್ಟಾ,  ಸುಲ್ತಾನ್ ಬತ್ತೇರಿ, ಬ್ರಹ್ಮಗಿರಿ ಬೆಟ್ಟ, ವೈತಿರಿ, ಮಾನಂತವಾಡಿ, ಮೀನಮುಟ್ಟಿ ಜಲಪಾತ ಹೀಗೆ ಹೇರಳವಾದ ಪ್ರವಾಸಿ ತಾಣಗಳು ಇಲ್ಲಿವೆ.. ಗೊತ್ತಿದ್ದವರಿಗೆ ಮಾತ್ರ ವಯನಾಡು ಸುಲಭವಾಗಿ ಅರ್ಥವಾಗುತ್ತದೆ.. ಇಲ್ಲವಾದರೆ ಮ್ಮೆ ಮ್ಮೆ ಮ್ಮೆ ಅಥವಾ.. ಬ್ಬೆ ಬ್ಬೆ ಬ್ಬೆ.. ಯೇ ಗತಿ..

ನಮ್ಮ ಪಾಡು ಅದೇ ರೀತಿಯಾಗಿತ್ತು.. ಸುಲ್ತಾನ್ ಬತ್ತೇರಿಯೆಂಬ ಊರನ್ನು ಕಟ್ಟಿದ ಮೈಸೂರಿಗ ಹೈದರಾಲಿ, ಟಿಪ್ಪು ಸುಲ್ತಾನ್  ಕಟ್ಟಿಸಿದ ಕೋಟೆಯನ್ನು ನೋಡಲಿಲ್ಲ.. ಮಾನಂತವಾಡಿ ಬಳಿ ಇದ್ದ ಕಬಿನಿ ಹಿನ್ನೀರನ್ನೂ ನೋಡಲಿಲ್ಲ.. ಯಾರೊ ಹೇಳಿದರು ಎಡಕಲ್ಲು ಗುಡ್ಡ.. ಚಂದ್ರಶೇಖರ್.. ಜಯಂತಿ ನೆನಪಾದರು.. ಸಂತೋಷಾ.. ಸಂಗೀತಾ.. ರಸಮಯ.. ಎಂದು ಕೊಂಡು ಅತ್ತ ತಿರುಗಿದೆವು...
ಎಡಕಲ್ಲು ಗುಡ್ಡಕ್ಕೆ ಖ್ಯಾತಿ ತಂದಿದ್ದು ಕನ್ನಡಿಗರಾದ ಕಣಗಾಲ್ ಪುಟ್ಟಣ್ಣನವರು.. ಅವರು ಅಲ್ಲಿ ಸಿನೆಮಾ ಶೂಟಿಂಗ್ ಮಾಡುವ ಮುನ್ನ ಆ ಕುರಿತು ಅಷ್ಟು ಪರಿಚಯ ಇರಲಿಲ್ಲವಂತೆ.. ಅವರು ಸಿನೆ ಮಾಡಿದರು.. ಕನ್ನಡಿಗರು ಅದೇನೇನನ್ನೋ ನೆನೆದು ಅಲ್ಲಿಗೆ ಹೋದರು.. ಪ್ರವಾಸೋದ್ಯಮ ಬೆಳೆಯಿತು... ಆದಾಯದ ಮೂಲವಾಯಿತು..
ನಾವು ಹೊರಟೆವು...
15-20 ಕಿ.ಮಿ ದೂರವಿರಬಹುದು.. ಕಿರಿದಾದ ಹಾದಿ.. ಎದುರು ಕಡೆಯಿಂದ ರೊಂಯ್ಯನೆ ಬರುವ ಪ್ರವಾಸಿಗರ ವಾಹನಗಳು..
ಸರ್ಕಸ್ಸಿನ ರೀತಿ ಹೋದೆವು... ಕಾಡು.. ಖುಷಿ ಕೊಟ್ಟಿತು.. ದೂರದಲ್ಲೆಲ್ಲೋ ಮುಗಿಲೆತ್ತರದಲ್ಲಿ ಎಡಕಲ್ಲು ಗುಡ್ಡವನ್ನು ಕಂಡಂತಾಯಿತು.. ಹೋ ಎಂದೆವು.. ಮದಲ್ಲಿ ರೋಮಾಂಚನಾ..
ಬಿಡಿ ನಾವು ದುರದೃಷ್ಟವಂತರು.. ಹುಡುಗರೇ ಬಂದಿದ್ದೇವೆ.. ಜೊತೆಯಲ್ಲಿ ಹುಡುಗಿಯರು ಬರಬೇಕಿತ್ತು ಎನ್ನುವ  ಭಾವನೆ ಮನದಲ್ಲಿ ಮೂಡಿ ತೊಡೆ ಬೆಚ್ಚಗಾಯಿತು.. ನಮ್ಮನ್ನು ನಾವು ಹಳಿದುಕೊಂಡು ಮುನ್ನಡೆದೆವು..
ಅಲ್ಲೊಂದು ಕಡೆ ಅಪ್ ಹತ್ತಿ ಚಿಕ್ಕೊಂದು ಟರ್ನ್ ತೆಗೆದುಕೊಂಡರೆ ಅಲ್ಲಿ ನಮ್ಮ ವಾಹನ ನಿಲ್ಲಿಸುವ ಸ್ಥಳ ಬಂದಿತು.. ನಾವು ಕೊಡೋದಿಲ್ಲ ಎಂದರೂ ಅವರು ಬಿಡೋದಿಲ್ಲ ಎಂಬಂತೆ 30 ರು. ಪಾರ್ಕಿಂಗ್ ಶುಲ್ಕವನ್ನು ನೀಡಿದೆವು.,..
ಅಲ್ಲೊಂದಷ್ಟು ಹೊಟೆಲುಗಳಿವೆ.. ಗಾಡಿ ನಿಲ್ಲಿಸಲು ಸ್ಥಳವಿದೆ.. ವಿಶಾಲವಾಗಿ.. 50-60 ಗಾಡಿಗಳು ಇದ್ದವು..
ಅಲ್ಲಿಂದ 1 ಕಿ.ಮಿ ಜೀಪು ಹೋಗುತ್ತದೆ.. ಗುಡ್ಡವನ್ನು ಹತ್ತಿ.. ಥೇಟು ಕೊಡಚಾದ್ರಿಯಲ್ಲಿ ಕರೆದೊಯ್ಯುತ್ತಾರಲ್ಲ ಹಾಗೇ.. ತಲೆಗೆ 150, 200 ರು.. ಸಿಕ್ಕವರಿಗೆ ಸೀರುಂಡೆ ಎನ್ನುವಂತೆ.. ಕೆತ್ತಲು ಕಾಯುತ್ತಿರುತ್ತಾರೆ...

ನಮ್ಮನ್ನು ಕಂಡು ಬನ್ನಿ ಬನ್ನಿ ಎಂದರು.. ನಾವೊಮ್ಮೆ ನಮ್ಮ ವಿಟಮಿನ್ ಪ್ರಮಾಣವನ್ನು ನೋಡಿಕೊಂಡೆವು..
ಬೇಡ.. ನಟರಾಜ ಸರ್ವೀಸಿಗೆ ಜೈ ಎನ್ನುತ್ತೇವೆ.. ಎಂದು ಹೆಜ್ಜೆ ಹಾಕಿದರೆ.. ನಮ್ಮಂತೆ ಇನ್ನೂ ಹವು ಜನ ಅಲ್ಲಿದ್ದಾರೆ..
ಗುಡ್ಡ ಹತ್ತೋಣ ಬನ್ನಿ.. ಎಂದು ಕರೆ ನೀಡಿದ ನಮಗೆ ಅನೇಕರು ಸಾಥ್ ನೀಡಿದರು.. ಗುಡ್ಡ ಬೆಟ್ಟ ತಿರುಗಿ ರೂಢಿಯಿದ್ದ ನಮ್ಮ ವೇಗಕ್ಕೆ ಉಳಿದವರು ಸಾಥ್ ನೀಡಲು ಸಾಧ್ಯವಾಗಲಿಲ್ಲ. ಾದರೆ ಹತ್ತುತ್ತಿದ್ದ ಹಲವರಲ್ಲಿ ಬಹಳಷ್ಟು ಜನ ಚೆಂದ ಚೆಂದದ ಹುಡುಗಿಯರಿದ್ದರು..
ನಮ್ಮ ವೇಗ ತನ್ನಿಂದ ತಾನೇ ಸ್ಲೋ ಆಯಿತು..
ಎಲ್ಲಿಲ್ಲದ ನಾಟಕೀಯತೆ ನಮ್ಮ ನಡಿಗೆಗೆ ಬಂದಿತು.. ಇದೇ ಮೊದಲ ಬಾರಿಗೆ ಗುಡ್ಡ ಹತ್ತುತ್ತಿದ್ದೇವೇನೋ ಎನ್ನುವ ರೀತಿ ನಟನೆ ಮಾಡತೊಡಗಿದೆವು..
ಎಡಕಲ್ಲು ಗುಡ್ಡ ಬಾ ಎನ್ನುತ್ತಲೇ ಇತ್ತು.. ದಾರಿ ಮಧ್ಯದಲ್ಲಿ ಇದ್ದ ದೊಡ್ಡ ದೊಡ್ಡ ಬಂಡೆಗಳ ಪೋಟೋ ತೆಗೆಯುವ ನೆಪದಲ್ಲಿ ಹುಡುಗಿಯರ ಪೋಟೋ ತೆಗೆಯುವ ಯತ್ನ ಮಾಡಿ ಸಫಲರಾದೆವು..
ಹೀಗಿರುವಾಗ ಎಡಕಲ್ಲು ಗುಡ್ಡದ ಬುಡ ಬಂದಿತು.. ರಸ್ತೆ ಇಲ್ಲಿಗೆ ಮುಕ್ತಾಯವಾಗುತ್ತದೆ.. ಇನ್ನು ಮುಂದೆ ಒರಟು ದಾರಿಯಲ್ಲಿ ಗುಡ್ಡ ಹತ್ತಬೇಕು.. ಹತ್ತಲು ಅಣಿಯಾದರೆ ಬಾಯಾರಿಕೆ..
ಅಲ್ಲೊಂದು ಕಡೆ ಬಾಯಿಗಷ್ಟು ದ್ರವಾಹಾರವನ್ನು ಹಾಕಿ ಮುಂದಕ್ಕೆ ಹೆಜ್ಜೆ ಹಾಕಿದೆವು.. ನೆತ್ತಿಯ ಮೇಲೆ ಬಂದಿದ್ ಸೂರ್ಯ ಸುಡಲು ಪ್ರಾರಂಭಿಸಿದ್ದ..
(ಮುಂದುವರಿಯುತ್ತದೆ..)

Tuesday, August 13, 2013

ಉಂಚಳ್ಳಿ ಜಲಪಾತದ ಕಥೆ ಹಾಗೂ ವ್ಯಥೆ..

ಉಂಚಳ್ಳಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಮಲೆನಾಡಿನಲ್ಲಿ ಚನ್ನಾಗಿ ಮಳೆಯಾಗುತ್ತಿರುವ ಕಾರಣ  ಉಂಚಳ್ಳಿ ಜಲಪಾತ ಸೌಂದರ್ಯವೃದ್ಧಿಸಿಕೊಂಡು ಧುಮ್ಮಿಕ್ಕುತ್ತಿದೆ.
ಈ ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಈ ಜಲಪಾತ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಈ ವರ್ಷದ ಉತ್ತಮ ಮಳೆಯಿಂದಾಗಿ ಜಲಪಾತ ಚೈತನ್ಯವನ್ನು ತುಂಬಿ ಉಕ್ಕುತ್ತಿದೆ.
ಉಕ್ಕೇರಿ ಹರಿಯುವ ಕೆಂಪು ನೀರು ಜಲಪಾತದ ರೂಪದಲ್ಲಿ ಕಣಿವೆಗೆ ಧುಮ್ಮಿಕ್ಕುವುದನ್ನು ನೋಡುವುದೇ ಚಂದ. ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತಿವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಜಲಪಾತವೂ ಚಂಚಲೆಯೇ. ಮಳೆಯ ಬಿಡುವಿನ ನಡುವೆ ಜಲಪಾತ ವೀಕ್ಷಣೆಗೆ ಬರುವವರಿಗೆ ಜಲಪಾತ ಸುಲಭಕ್ಕೆ ತನ್ನ ದರ್ಶನ ಕೊಡುವುದಿಲ್ಲ. ಕಣಿವೆಯಾಳಕ್ಕೆ ಧುಮ್ಮಿಕ್ಕುವ ಜಲಪಾತ ಸೃಷ್ಟಿಸುವ ಮಂಜು ಮುಸುಕಿದ ವಾತಾವರಣಕ್ಕೆ ಜಲಪಾತದ ದರ್ಶನವಾಗುವುದೇ ಇಲ್ಲ. ಆಗೊಮ್ಮೆ ಈಗೊಮ್ಮೆ ಗಾಳಿ ಉಂಟಾದಾಗ ಜಲಪಾತ ಕಾಣಿಸಿಕೊಂಡಾಗ ಸ್ವರ್ಗ ಕೈಗೆ ಸಿಕ್ಕಷ್ಟು ಧನ್ಯತೆ. ಆದರೆ ಈಗ ಜಲಪಾತದ ದರ್ಶನ ಮಂಜಿನ ನಡುವೆ ದಿನಕ್ಕೆ ನಾಲ್ಕೈದು ಬಾರಿ ಮಾತ್ರ ಕಾಣುವಂತಾಗಿದೆ. ಜಲಪಾತ ದರ್ಶನಕ್ಕಾಗಿ 2 ಕಾವಲು ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಜಲಪಾತದ ಸನಿಹದ ವೀಕ್ಷಣೆಗಾಗಿ 200ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ಮಾಡಲಾಗಿದೆ. ಈ ಮೆಟ್ಟಿಲುಗಳ ಮೂಲಕ ಜಲಪಾತದ ಬುಡಕ್ಕೆ ಇಳಿದು ನೋಡಬಹುದಾಗಿದೆ. ಮಂಜಿನ ಧಾರೆ ಉಂಟುಮಾಡುವ ಹನಿಗಳು ಮೈ ಒದ್ದೆ ಮಾಡುತ್ತದೆಯಾದರೂ ಅದರಿಂದ ಸಿಗುವ ಸಂತಸ ಆಪ್ಯಾಯಮಾನವಾದುದು.
 ಇದೇ ಜಲಪಾತದ ಪಕ್ಕದಲ್ಲಿ ಇನ್ನೊಂದು ಮರಿ ಜಲಪಾತವಿದ್ದು ಇದೂ ಕೂಡ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿ ಮಾರ್ಪಾಡಾಗಿದೆ. ಉಂಚಳ್ಳಿ ಜಲಪಾತದಷ್ಟು ಎತ್ತರ, ರೌದ್ರ, ಬೀಖರತೆ ಇದಕ್ಕಿಲ್ಲ. ಸ್ಥಳೀಯ ಹಳ್ಳವೊಂದರಿಂದ ಸೃಷ್ಟಿಯಾಗಿರುವ ಈ ಮರಿ ಜಲಪಾತ ಪ್ರವಾಸಿಗರಿಗೆ ಸಕಲ ರೀತಿಯ ಖುಷಿಯನ್ನು ಕೊಡುತ್ತಿದೆ. ಉಂಚಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಎರಡನೇ ಗೋಪುರದ ಬಳಿ ನಿರ್ಮಾಣ ಮಾಡಲಾದ ಮೆಟ್ಟಿಲುಗಳ ಪಕ್ಕದಲ್ಲಿ ಗುಡ್ಡವನ್ನು ಏರಿದರೆ ಈ ಮರಿ ಜಲಪಾತದ ದರ್ಶನ ಲಭ್ಯವಾಗುತ್ತದೆ. ಕಲ್ಲು ಬಂಡೆಗಳ ಮೇಲೆ ಜುಳು ಜುಳು ಸದ್ದಿನೊಂದಿಗೆ ನರ್ತನ ಮಾಡುತ್ತ, ಆಗಮಿಸುವ ಪ್ರವಾಸಿಗರ ಕಾಲು ತೊಳೆಯುತ್ತ, ನೀರೊಳಗೆ ಇಳಿದರೆ ಸ್ನಾನದ ಸುಖವನ್ನು ನೀಡುವ ಈ ಜಲಪಾತ ಉಂಚಳ್ಳಿಗೆ ಮತ್ತಷ್ಟು ಮೆರಗು ನೀಡುತ್ತಿದೆ.
 ಉಂಚಳ್ಳಿ ಜಲಪಾತ ಇಷ್ಟೆಲ್ಲ ಸೌಂದರ್ಯವನ್ನು ಹೊಂದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದರೂ ಇಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವೀಕ್ಷಣಾ ಗೋಪುರಗಳು ಹಾಗೂ ವೀಕ್ಷಣಾ ಸ್ಥಳಕ್ಕೆ ತೆರಳಲು ಮೆಟ್ಟಿಲುಗಳನ್ನು ಮಾಡಿರುವುದನ್ನು ಬಿಟ್ಟರೆ ಮತ್ಯಾವುದೇ ಸೌಲಭ್ಯ ಇಲ್ಲಿಲ್ಲ. ಕುಳಿತುಕೊಳ್ಳಲು ಎರಡು ಸಿಮೆಂಟಿನ ಆಸನಗಳಿವೆ. ಆದರೆ ಅವು ಈಗಾಗಲೇ ಕಿತ್ತುಹೋಗಿದೆ. ಜಲಪಾತದ ಬಳಿ ಅನೇಕ ಸ್ತಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳನ್ನು ಎಸೆದಿರುವುದು ಜಲಪಾತದ ಸೌಂದರ್ಯಕ್ಕಿಟ್ಟ ಕಪ್ಪುಚುಕ್ಕೆಯಾಗಿದೆ. ಜಲಪಾತದ ಪ್ರದೇಶದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಿದಾಗಿನಿಂದ ಅದರ ಬಳಕೆಯನ್ನೇ ಮಾಡಿಲ್ಲವೇನೋ ಎನ್ನುವಂತಾಗಿದೆ. ಶೌಚಾಲಯದ ಬಾಗಿಲುಗಳು ಮುರಿದುಹೋಗಿದೆ. ಶೌಚಾಲಯದ ಒಳಗೆಲ್ಲ ಗಬ್ಬು ನಾರುತ್ತಿದೆ. ಸುತ್ತಮುತ್ತಲ ಮರಗಳ ಎಲೆಗಳು, ಪ್ರವಾಸಿಗರು ಎಸೆದ ತರಹೇವಾರಿ ವಸ್ತುಗಳು ಈ ಶೌಚಾಲಯದಲ್ಲಿವೆ. ಶೌಚಾಲಯದ ಗೋಡೆಗಳಂತೂ ಪ್ರವಾಸಿಗರ ಬರಹಗಳಿಗೆ ಬಲಿಯಾಗಿ ವಿಕಾರ ರೂಪವನ್ನು ಪಡೆದುಕೊಂಡಿವೆ.
ಸ್ಥಳೀಯ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ಆಗಮಿಸುವ ಯಾತ್ರಾರ್ಥಿಗಳ ಬಳಿ ವಾಹನ ಶುಲ್ಕವನ್ನು ಪಡೆಯುತ್ತದೆ. ಉಂಚಳ್ಳಿ ಊರಿನ ಶಾಲಾ ಮಕ್ಕಳು ಇದೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪಡೆದ ಶುಲ್ಕಕ್ಕೆ ತಕ್ಕ ನಿರ್ವಹಣಾ ಕಾರ್ಯ ನಡೆಯುತ್ತಿಲ್ಲ. ನಿರ್ವಹಣಾ ಶುಲ್ಕ ಪಡೆಯುವುದು ಹಣ ಮಾಡಲು ಎನ್ನುವಂತಾಗಿದೆ. ಜಲಪಾತದ ಪ್ರದೇಶವನ್ನು ಕಾಲ ಕಾಲಕ್ಕೆ ಚೊಕ್ಕಟ ಮಾಡುವ ಕಾರ್ಯ ನಡೆಯುತ್ತಿಲ್ಲ. ಇದರಿಂದಾಗಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ರಾರಾಜಿಸಿ ಜಲಪಾತದ ದುಸ್ಥಿತಿಗೆ ಕನ್ನಡಿಯಂತೆ ಭಾಸವಾಗುತ್ತಿದೆ. ಪ್ರವಾಸಿಗರು ಈ ಸ್ಥಳದಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಎಸೆಯುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಎಲ್ಲೆಂದರಲ್ಲೆ ಬೇಕಾಬಿಟ್ಟಿ ವಸ್ತುಗಳನ್ನು ಎಸೆಯುವುದನ್ನು ತಡೆಗಟ್ಟಿ ಅಂತವರ ವಿರುದ್ಧ ದಂಡ ಹಾಕುವ ಕೆಲಸ ನಡೆಯಬೇಕಾಗಿದೆ. ಜಲಪಾತದ ಕುರಿತು ಮಾಹಿತಿ ನೀಡುವವರ ಕೊರತೆಯೂ ಇಲ್ಲಿದೆ. ಬಂದ ಪ್ರವಾಸಿಗರಿಗೆ ಜಲಪಾತ ನೋಡಿದ ತಕ್ಷಣ ಮುಂದೇನು ಎನ್ನುವ ಗೊಂದಲ ಕಾಡುತ್ತದೆ. ಆಗ ಅವರಿಗೆ ತಿಳಿಹೇಳುವ ಮಾರ್ಗದರ್ಶಕರ ಅಗತ್ಯವಿದೆ.
 ಶಿರಸಿಯಿಂದ ಹೆಗ್ಗರಣಿ ಮಾರ್ಗವಾಗಿ 35 ಕಿ.ಮಿ ದೂರದಲ್ಲಿ ಉಂಚಳ್ಳಿ ಜಲಪಾತವಿದೆ. ಈ ಜಲಪಾತಕ್ಕೆ ಸಿದ್ದಾಪುರದಿಂದಲೂ ಇಷ್ಟೇ ದೂರ. ಜಲಪಾತದ ವರೆಗೆ ಡಾಂಬರ್ ರಸ್ತೆಯಿರುವುದನ್ನು ಬಿಟ್ಟರೆ ಇನ್ಯಾವುದೇ ಸೌಕರ್ಯವನ್ನು ಕೇಳುವಂತಿಲ್ಲ. ಶಿರಸಿಯಿಂದ ಉಂಚಳ್ಳಿಯ ವರೆಗೆ ದಿನಕ್ಕೆರಡು ಬಸ್ ಬರುತ್ತದೆ. ಆದರೆ ಈ ಬಸ್ ನಿಲ್ಲುವ ಸ್ಥಳದಿಂದ 3 ಕಿ.ಮಿ ದೂರ ನಡೆದು ಜಲಪಾತ ನೋಡಬೇಕು. ಜಲಪಾತಕ್ಕೆ ಕನಿಷ್ಟ 4 ಬಸ್ ಗಳನ್ನು ಓಡಿಸಬೇಕು. ಸಿದ್ದಾಪುರದಿಂದಲೂ ಬಸ್ ಸಂಚಾರ ವ್ಯವಸ್ಥೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಆಗಮಿಸುವ ಬಸ್ಸುಗಳನ್ನು ಉಂಚಳ್ಳಿಯಿಂದ ಮುಂದೆ ಬೆಳ್ಕೋಡ್ ವರೆಗೆ ಬಿಡಬೇಕಿದೆ. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಜಲಪಾತದ ಬಳಿ ಮಾರಾಟ ಮಳಿಗೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಬಹುದಿನಗಳ ಬೇಡಿಕೆ. ಯಾತ್ರಿ ನಿವಾಸ ನಿರ್ಮಾಣದ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಡುತ್ತಲೇ ಇದೆ. ಆದರೆ ಯಾತ್ರಿ ನಿವಾಸ ನಿರ್ಮಿಸುವ ಮುಹೂರ್ತ ಇನ್ನೂ ಕೂಡಿಬಂದಂತಿಲ್ಲ. ತ್ವರಿತವಾಗಿ ಯಾತ್ರಿ ನಿವಾಸ ನಿರ್ಮಾಣವಾಗಬೇಕು. ಸ್ಥಳೀಯ ವಸ್ತುಗಳನ್ನು ಮಾರಾಟ ಮಾಡಲು ಮಾರಾಟ ಮಳಿಗೆಯ ನಿರ್ಮಾಣವೂ ನಡೆಯಬೇಕಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಈ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿದಲ್ಲಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಮ್ಮಡಿ ಸ್ಥಳೀಯರಿಗೆ ಉದ್ಯೋಗದ ಮೂಲವೂ ಆಗಬಲ್ಲದು. ಈ ಕುರಿತು ಪ್ರವಾಸೋದ್ಯಮ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆ ಕೂಡಲೇ ಸ್ಪಂದಿಸುವ ಅಗತ್ಯವಿದೆ.
ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ರುದ್ರರಮಣೀಯ ರೂಪ ತಾಳಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಆದರೆ ಜಲಪಾತದ ಪ್ರದೇಶದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಪ್ರವಾಸಿಗರನ್ನು ಹೈರಾಣಾಗಿಸಿದೆ.

Wednesday, August 7, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 6

ದಾರಿಯಂತೂ ಅಂಕುಡೊಂಕು.. ಒಂದೆಡೆ ಕಡಿದಾದ ಗುಡ್ಡಗಳ ಸಾಲು ಸಾಲು.. ಇನ್ನೊಂದು ಕಡೆ ಆಳದ ಕಣಿವೆ..
ಪ್ರಪಾತ.. ನಡು ನಡುವೆ ಇಣುಕುವ ಚಹಾ ತೋಟಗಳು..
ನಮ್ಮ ಮೂಗಿನ ಒಳಗೆ ಹೊಕ್ಕುವ ತಂಪು ಗಾಳಿ ಶ್ವಾಸಕೋಶದಿಂದ ಸಂಪೂರ್ಣ ದೇಹವನ್ನೂ ಪತರಗುಡಿಸುತ್ತಿತ್ತು..
ತಂಪು ಗಾಳಿ ಸೇವನೆ ಮಾಡಿದಂತೆಲ್ಲ ಮೂಗಿನೊಳಗೆ ಅದೇನೋ ಅನಿರ್ವಚನೀಯ ಉರಿ..
ತಲೆಯ ಮೇಲೆ ಮಂಜಿನ ಹನಿಗಳು ಬಿದ್ದು ಕೂದಲುಗಳು ಬೆಳ್ಳಗಾಗಿದ್ದವು..
ಮುತ್ತಿನ ಹನಿಗಳು ಮುಖದ ಮೇಲೆಲ್ಲ ನೀರ ಧಾರೆಯಾಗಿತ್ತು...

ಅಲ್ಲೆಲ್ಲೋ ದಾರಿ ಮಧ್ಯದಲ್ಲಿ ಗಾಡಿ ನಿಲ್ಲಿಸಿದೆವು..
ಮಸಾಲಾ ಟೀ ಕೊಳ್ಳಬೇಕು..
ಅಂಗಡಿಗೆ ಹೋದರೆ 60 ರು.ಗೆ ಕಾಲು ಕೆಜಿ ಪ್ಯಾಕೇಟ್ ಎಂದ..
ಕೊಂಡೆವು..
ನಾಲ್ಕಾರಕ್ಕಿಂತ ಜಾಸ್ತಿ ಇರಬೇಕು ಕೊಂಡಿದ್ದು..
ಅಲ್ಲೇ ಪಕ್ಕದಲ್ಲಿ ಹಸಿರ ಚಾದರ ಹೊದ್ದಿದ್ದ ಚಹಾ ಪ್ಲಾಂಟೇಷನ್ನಿನಲ್ಲಿ ಅಡ್ಡಾಡಬೇಕೆಂಬುದು ನಮ್ಮ ಮನದ ಬಯಕೆ..
ಲಗ್ಗೆ ಇಟ್ಟೆವು..  ಅಂಗಡಿ ಉರುಫ್ ಪ್ಲಾಂಟೇಶನ್ನಿನ ಮಾಲಿಕ ಅರ್ಧಮರ್ಧ ತಮಿಳ್ಗನ್ನಢದಲ್ಲಿ ಒಪ್ಪಿಗೆ ಸೂಚಿಸಿದ್ದು ನಮಗೆ ಲೈಸೆನ್ಸ್ ಸಿಕ್ಕಂತೆ ಆಗಿತ್ತು..
ಪೋಟೋಗಳ ಸರಮಾಲೆ ಕ್ಲಿಕ್ಕಾಯಿತು..
ಮನಸ್ಸು ಹಸಿರಿನಿಂದ ಪಕ್ಕಾಯಿತು..

ಈ ನಡುವೆ ಅಲ್ಲೆಲ್ಲೋ ನಮ್ಮ ಶಿರಸಿಯ ಕೆಎ 31 ರಿಜಿಸ್ಟ್ರೇಶನ್ನಿನ ಟೆಂಪೋ ಒಂದನ್ನು ಕಂಡೆವು..
ನಮಗೋ ಶಿರಸಿಯವರ್ಯಾರೋ ಬಂದಿದ್ದಾರೆ.. ಟೆಂಪೋ ಬೇರೆ..
ಚೆಂದದ ಹುಡುಗಿಯರಿದ್ದರೆ ಕಣ್ಣು ತಂಪು ಮಾಡಿಕೊಳ್ಳಬಹುದು ಎನ್ನುವ ಕಾಮನೆ..
ಮೋಹನ, ಕಿಟ್ಟು ಉತ್ಸಾಹ ತೋರಿಸಲಿಲ್ಲ..
ನಾನು, ರಾಘು ಬೈಕೇರಿದೆವು..
ರಾಘವ ಅಂಕುಡೊಂಕಿನ ಹಾದಿಯಲ್ಲಿ ಟೆಂಪೂವನ್ನು ಹಿಂಬಾಲಿಸಿ, ನಿಲ್ಲಿಸಿ ಉಭಯಕುಶಲೋಪರಿ ಕೇಳುವ ತವಕದಿಂದ ಗಾಡಿ ಓಡಿಸಿದ..
ನಮಗೆ ಎದುರಾದ ಅದೆಷ್ಟೋ ಗಾಡಿಗಳು ತಾವಾಗಿಯೇ ಪಕ್ಕಕ್ಕೆ ಸರಿದು ಬದುಕಿದೆಯಾ ಬಡ ಜೀವವೆ ಎಂದು ಕೊಂಡವು..
ಆದರೂ ಅದೊಂದು ದೊಡ್ಡ ಯು ಟರ್ನಿನಲ್ಲಿ ವೇಗದಿಂದ ಕೂಡಿದ್ದ ನಮ್ಮ ಬೈಕು ಕಟ್ ಆಗಲೇ ಇಲ್ಲ.
ಲಾಂಗ್ ಟರ್ನ್ ತೆಗೆದುಕೊಳ್ಳುವ ಭರದಲ್ಲಿ ಎದುರಿನಿಂದ ಬಸ್ಸಿಗನೊಬ್ಬ ನಮ್ಮಷ್ಟೇ ವೇಗದಿಂದ ಬರುತ್ತಿದ್ದ..
ಮುಗೀತು ಕಥೆ..
ಅಪಘಾತ ಎರಡು ಸಾವು ಸುದ್ದಿಗೆ ನಾವೇ ಹೀರೋಗಳು.. ಆಗುತ್ತೇವೆ ಎಂದು ಕೊಂಡೆವು...
ಸೇಮ್ ಕನ್ನಡ ಸಿನೆಮಾಗಳ ಟ್ವಿಸ್ಟುಗಳಂತೆ..
ಅಲ್ಪಸ್ವಲ್ಪದರಲ್ಲಿ ತಪ್ಪಿತು..
ಅಲ್ಲದೇ ಅದರ ಪಾಡಿಗೆ ಅದು ಹೋಯಿತು.. ನಮ್ಮ ಪಾಡಿಗೆ ನಾವು ಬಂದೆವು...
`ಸಾಯ್ಲಲೆ... ಎಂತಾ ಮಳ್ಳಾಗಿತ್ತು ಮಾರಾಯಾ..' ರಾಘವ ಮುಖದಲ್ಲಿ ಬೆವರು ತುಂಬಿಕೊಂಡು ಹೇಳಿದ್ದ..
ನನಗೂ ಮುಖದಲ್ಲಿ ಬೆವರಿತ್ತು.. ಸಾವರಿಸಿಕೊಂಡ ಬಿಸಿಯುಸಿರು.. ಎದೆಯೊಳಗೆ...

 ಮತ್ತೆ ಶುರು ವೇಗ..
ಮತ್ತೊಂದು ಆರೇಳು ಕಿ.ಮಿ ಆದ ನಂತರ ಆ ಟೆಂಪೋ ಸಿಕ್ಕಿತು..
ಟೆಂಪೋದಲ್ಲಿದ್ದವರು ಶಾಲಾ ಮಕ್ಕಳು.. ತಮ್ಮ ವಾಂತಿ ಪ್ರೋಗ್ರಾಮನ್ನು ಶುರು ಹಚ್ಚಿಕೊಂಡಿದ್ದರು..
ಡ್ರೈವರ್ ಗಾಡಿಯನ್ನು ಪಕ್ಕಕ್ಕೆ ಹಾಕಿದ್ದ..
ನಾವು ಅವರ ಬಳಿ `ಹೇಯ್ ಇದು ಶಿರಸಿ ರಿಜಿಸ್ಟ್ರೇಷನ್ನಿನ ಗಾಡಿಯಲ್ಲವಾ..' ಎಂದರೆ `ಅಲ್ಲರಿ ಇದು ಮಂಡ್ಯದ್ದು ಎಂದ.. ಮತ್ತೆ ನಂಬರ್ ಪ್ಲೇಟ್ ಎಂದಾಗ ಈ ಟೆಂಪೋವನ್ನು ಶಿರಸಿಯ ಒಬ್ಬರ ಬಳಿಯಿಂದ ತಂದೆ ಎಂದ..
ನಾವು ನಮಸ್ಕಾರ ತಂದೆ ಎಂದೆವು...
ಮುಂದೆ ಮತ್ತೊಂದೆರಡು ಕಿ.ಮಿ ಅರಾಮಾಗಿ ಸಾಗಿ ಗುಡ್ಡದ ನೆತ್ತಿಯೊಂದರ ವ್ಯೂ ಪಾಯಿಂಟಿನಲ್ಲಿ ಕಿಟ್ಟು, ಮೋಹನರ ಸವಾರಿಗಾಗಿ ಕಾಯುತ್ತ ಕುಳಿತೆವು..
ಸುಮಾರು 5-6 ನಿಮಿಷದ ನಂತರ ಬಂದರು..
ಬಂದವರೇ ಎತ್ಲಾಗ್ ಹಾಳಾಗ್ ಹೋಗಿದ್ರಲೆ... ಎಂದು ಬೈಗುಳ, ಹಿಡಿಶಾಪದ ಮಂತ್ರಾಕ್ಷತೆಯನ್ನು ಪ್ರೋಕ್ಷಣ್ಯ ಮಾಡಿದರು..
ನಮ್ಮ ಚೇಸಿಂಗ್ ಸೀನಿನ ಸಾರಾಂಶವನ್ನು ಥೇಟು ನಮ್ಮ ಇಂಗ್ಲೀಷ್ ಎಕ್ಸಾಂ ಸಮ್ಮರಿ ಬರೆದಂತೆ ಹೇಳಿದೆವು..

ಒಟ್ಟಾಗು ಮುಂದಡಿ ಇಡುತ್ತಿರಲು ಮದ್ಯಾಹ್ನ ದಾಟಿ ಕತ್ತಲಿನ ಕುರುಹು ಸುಳಿ ಸುಳಿದು ಬರುತ್ತಿತ್ತು,,,
ಕಳಗೆಲ್ಲೋ ಗುಡಲೂರಿನ ದೀಪಗಳು ಮಿಣುಕುತ್ತಿದ್ದವು..
ಸುತ್ತಿ ಬಳಸಿ ಇಳಿಯುತ್ತಿರಲು ಅಲ್ಲೊಂದು ಬೋಳು ಗುಡ್ಡ ಕಣ್ಣಿಗೆ ಬಿತ್ತು..
ಇದನ್ನೆಲ್ಲೋ ನೋಡಿದ್ದೀವಲ್ಲಾ ಎನ್ನುವ ಕ್ವಶ್ಚನ್ ಮಾರ್ಕ್ ತಲೆಯೊಳಗೆ..
ನೋಡಿದರೆ ಅದು ಶೂಟಿಂಗ್ ಸ್ಪಾಟ್ ಅಂತೆ..
ಕನ್ನಡದ ಸೇರಿದಂತೆ ಹಲವಾರು ಭಾಷೆಯ ಸಿನೆಮಾಗಳು ಅಲ್ಲಿ ಶೂಟಿಂಗ್ ಆಗಿವೆ ಎನ್ನುವ ವರದಿಗಳು ಸ್ಥಳೀಯರಿಂದ ಸಿಕ್ಕವು..
ಓಹೋ.. `ಹಂ ಆಪ್ ಕೆ ಹೈ ಕೌನ್...' ನೆನಪಾಯಿತು.. ಅಲ್ಲಿ ನೋಡಿದ್ದು ಕೂಡ ಜ್ಞಾಪಕಕ್ಕೆ ಬಂದಿತು..
ಅಲ್ಲೊಂದು ಗೂಡಂಗಡಿ..
ಕಪ್ಪು ಸುಂದರಿಯೊಬ್ಬಳು ಚಹಾ ತಯಾರಿಸುವಲ್ಲಿ ನಿರತಳಾಗಿದ್ದಳು..
ನಾವು  ಹೇಳುವುದು ಆಕೆಗೆ ಅರ್ಥವಾಗಿಲ್ಲವೇನೋ..
ಚಹಾ ಕೊಡಲು ಹಿಂದು ಮುಂದು ನೋಡಿದಳು..
ಕೊನೆಗೂ ಕೊಟ್ಟಳು ಎನ್ನಿ...

ಅಮತೂ ಇಂತೂ ನಮ್ಮ ಪಯಣ ಗುಡಲೂರನ್ನು ತಲುಪಿತು..
ಇದೊಂತರಾ ವಿಚಿತ್ರ ಊರು..
ಊಟಿಯ ಗುಡ್ಡಗಳು ಆರಂಭಗೊಳ್ಳುವ ಮೊದಲ ಮೆಟ್ಟಿಲ ಮೇಲೇ ಇದೆ.. ಒಂದು ದಿಕ್ಕೆಗೆ ಅಗಾಧ ಗುಡ್ಡ.. ಇನ್ನುಳಿದ ಕಡೆಗಳಲ್ಲಿ ಬಯಲೋ ಬಯಲು..
ಮೂರು ಕಡೆಗಳಲ್ಲಿ ಕರ್ನಾಟಕ, ಕೇರಳ ಸುತ್ತುವರಿದಿದೆ..
ಇನ್ನೊಂದು ಕಡೆ ತಮಿಳುನಾಡಿಗೆ ಜೋತಾಡುತ್ತಿರುವ ಗುಡಲೂರು ತಮುಳುನಾಡಿನ ರಾಜ್ಯದ್ದು..
ಮೈಸೂರಿಗರು, ವಯನಾಡಿಗರ ಬಳಕೆ ಜಾಸ್ತಿ..
ಅಪರೂಪಕ್ಕೆ ಕನ್ನಡ ಮಾತಾಡುವವರೂ ಸಿಗುತ್ತಾರೆ...
ನಮ್ಮ ಸಿರಸಿಯಷ್ಟೇ ದೊಡ್ಡದಿರಬೇಕು..
ಸುಖೋಷ್ಣ ವಾತಾವರಣ..
ಊಟಿಯಂತೆ ಐಸ್ ಪೈಸ್ ಅಲ್ಲ...ಬೆಚ್ಚಗೆ..

ರೂಮು ಹುಡುಕಬೇಕಲ್ಲ...
ಒಂದೆರಡು ಕಡೆಗಳಲ್ಲಿ ಕೇಳಿದೆವು..
ಡಬ್ಬಾ ಆಗಿತ್ತು..
ರೂಮ್ ನೋಡಿದವರೇ ಓಡಿ ಬಂದೆವು..
ಕೊನೆಗೊಂದು ಉತ್ತಮ ಲಾಡ್ಜಿನಲ್ಲಿ ರೂಮು ಹಿಡಿದೆವು..
ನಾಲ್ವರಿಗೆ ಒಂದೇ ಕೋಣೆ..
ರೂಮು ದೊಡ್ಡದಿತ್ತು.. ಚನ್ನಾಗಿತ್ತು..
ಟಿವಿ ಇರಬೇಕೆಂಬ ನಮ್ಮ ಬೇಡಿಕೆಗೆ ಓಕೆ ಸಿಕ್ಕಿತ್ತು..
ಬಂದವರು ಫ್ರೆಷ್ ಆದೆವು..
ಹೊಟ್ಟೆ ತಾಳ ಹಾಕುತ್ತಿತ್ತು...
ಅದ್ಯಾವುದೋ ಹೊಟೆಲಿಗೆ ಹೋಗಿ ಮಸಾಲಾ ದೋಸಾ ಆರ್ಡರ್ ಮಾಡಿ ತಿಂದೆವು..
ನಂತರ ಗುಡಲೂರು ಸುತ್ತಲು ಹೊರಟೆವು..
ಕೊಳ್ಳುವ ಕ್ರಿಯಾ, ಕರ್ಮಗಳು ಮುಗಿದಿತ್ತು..
ಇಲ್ಲಿ ಕೊಳ್ಳಲು ಹೋಗಲಿಲ್ಲ..
ಊರು ಚನ್ನಾಗಿದೆ..ಹುಡುಗಿಯರು ಚಂದ  ಇಲ್ಲ.. ವಾತಾವರಣ ದೂಳು ಧೂಳು..
ಆದರೂ ಒಂಥರಾ ಓಕೆ.. ಎನ್ನುವುದು ಗುಡಲೂರಿನ ಕುರಿತು ನಮ್ಮ ವಿವರಣೆ..
ಇಲ್ಲಿ ವಯನಾಡಿಗೆಷ್ಟು ದೂರ, ಹೋಗುವುದು ಹೇಗೆ ಎನ್ನುವ ಕುರಿತು ಕೇಳಿ ತಿಳಿದುಕೊಂಡೆವು..
ಮುಂಜಾನೆದ್ದು ವಯನಾಡಿಗೆ ಹೋಗಬೇಕು .. ಮಂಝಿನ ಹನಿಯಲ್ಲಿ ಇಬ್ಬನಿಯ ಧಾರೆಯ ನಡುವೆ ಖುಷಿ ಪಡಬೇಕು ಎನ್ನುವ ಕನಸುಗಳ ಸರಮಾಲೆ ನಮ್ಮದು.
ರೂಮಿಗೆ ಮರಳಿದೆವು..
ಊಟಕ್ಕೆ ಹೋಗಬೇಕು..
ಹುಡುಕಿ ಹುಡುಕಿ ಯಾವುದೋ ಒಂದು ಹೊಟೆಲಿಗೆ ಹೋದೆವು..
ಆದರೆ ಆ ಹೋಟೆಲಿನಲ್ಲಿ 10-15 ನಿಮಿಷ ಕಳೆದರೂ ಯಾವೊಬ್ಬ ಸಪ್ಲಾಯರ್ ಆಸಾಮಿಯೂ ನಮ್ಮತ್ತ ಸುಳಿಯುತ್ತಿಲ್ಲ..
ಬೇಸರ, ಹಸಿವೆ.. ಸಿಟ್ಟು ಬರುತ್ತಿತ್ತು..
ದೂರದಿಂದ ಮ್ಯಾನೇಜರ್ ನಮ್ಮನ್ನು ನೋಡುತ್ತಿದ್ದನಾದರೂ ಏನ್ ಬೇಕು ಎಂದು ಕೇಳುತ್ತಿರಲಿಲ್ಲ..
ಹಾಳಾದ ತಮಿಳಿನಲ್ಲಿ ಊಟಕ್ಕೇನೆನ್ನುತ್ತಾರೆ ಎನ್ನುವುದು ಪ್ರಶ್ನೆಯಾಗಿತ್ತು..

ಊಟಿಯ ಬೋಟಾನಿಕಲ್ ಗಾರ್ಡನ್
ನಮ್ಮೂರಿಗೆ ಬಿದಿರಿನ ಚಾಪೆ ಮಾಡಿಕೊಡಲು ಬರುತ್ತಿದ್ದ ಸುಬ್ರಮಣಿ ತರಿಕೆರೆ ಎಂಬಾತ ನನಗೆ ಯಾವಾಗಲೂ ತಮಿಳಿನಲ್ಲಿ ಊಟಕ್ಕೆ ಸಾಪಡ ಎಂದು ಹೇಳಿದ್ದು ನೆನಪಾಗೆ ಮಿತ್ರರ ಬಳಿ ಹೇಳಿದೆ..
ಅವರು ಸಾಪಡ ಕೇಳಿ ನೋಡು.. ಎಂದರು..
ನಾನು ಮ್ಯಾನೇಜರ್ ಬಳಿ ಕುಳಿತಲ್ಲಿಂದಲೇ ಸಾಪಡ ಅಂದೆ..
ಆತ ತಲೆಯಲ್ಲಾಡಿಸಿ ಸಾಪಡ ಅಂದ..
ನಾನು ಮತ್ತೆ ಸಾಪಡ ಅಂದೆ.. ಆತನೂ ಸಾಪಡ ಸಾಪಡ ಅಂದ..
ಅರೇ ಇದೇನಿದು..? ಅಂದುಕೊಂಡೆ...
ಮತ್ತೆರಡು ಬಾರಿ ಸಾಪಡ ಅಂದಾಗಲೂ ಮ್ಯಾನೇಜರ್ ಅದನ್ನು ರಿಪೀಟ್ ಮಾಡಿದ..
ದೋಸ್ತರು ನಗಲು ಆರಂಭಿಸಿದರು..
ಎಲ್ಲಾದರೂ ಬೇರೆ ಶಬ್ದ ಹೇಳಿದೆನೆ..? ಸಾಪಡ್ ಎಂದರೆ ಊಟವೇ ಅಲ್ಲವೇ ಎನ್ನುವ ಅನುಮಾನದ ಕಿಡಿ ಮನದೊಳಗೆ..
ಕೊನೆಗೆ ಮತ್ತೈದು ನಿಮಿಷದ ನಂತರ ಸಪ್ಲಾಯರ್ ಬಂದ ..
ಆತನ ಬಳಿ ನಮ್ಮ ಹರುಕು ಮುರುಕು ಭಾಷೆಯಲ್ಲಿ  ಊಟದ ಕುರಿತು ಹೇಳಿದೆವು..
ಆತ ತಂದ.. ಸಿಕ್ಕಿದ ಖುಷಿಯಲ್ಲಿ ಉಂಡೆವೋ ಉಂಡೆವು..
ರೂಮಿಗೆ ಬಂದವರೇ ಗಡದ್ದು ನಿದ್ದೆ...
ಮರುದಿನದ ವಯನಾಡಿನ ಕನಸು ಬೆಚ್ಚಗೆ ಮೊಳೆಯುತ್ತಿತ್ತು...

(ಮುಂದುವರಿಯುತ್ತದೆ)

Wednesday, July 24, 2013

ಮರೆಯಾದ ರಾಯ್ಕರ್ ಮಾಸ್ತರ್

ರಾಯ್ಕರ್ ಮಾಸ್ತರ್ ಎಂದು ಖ್ಯಾತಿಗಳಿಸಿದ್ದ ರಾಮಚಂದ್ರ ಗುರುರಾವ್ ರಾಯಕರ್ ಅವರು ಕಲಾವಿದರಾಗಿ, ಶಿಕ್ಷಕರಾಗಿ, ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಸಂಗ್ರಹಗಾರರಾಗಿ ಗಳಿಸಿದ ಹೆಸರು ಅಪಾರವಾದುದು. ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ. ವಾಟರ್ ಕಲರ್, ಆಯಿಲ್ ಪೇಂಟಿಂಗ್, ರೇಖಾಚಿತ್ರ ಈ ಮುಂತಾದ ಚಿತ್ರಕಲಾ ಬಗೆಗಳಲ್ಲಿ ರಾಯ್ಕರ್ ಮಾಸ್ತರರದ್ದು ಎತ್ತಿದ ಕೈಯಾಗಿತ್ತು. ಈ ಪ್ರಕಾರಗಳಲ್ಲಿ ಅವರು ಬಿಡಿಸಿದ ಚಿತ್ರಗಳು ಖ್ಯಾತಿಯನ್ನು ಗಳಿಸಿಕೊಂಡಿವೆ.
    ರಾಯ್ಕರ್ ಮಾಸ್ತರರು ಜನಿಸಿದ್ದು 1924ರ ಅಗಸ್ಟ್ 30ರಂದು. ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಸುವರ್ಣ ಕಿರೀಟವನ್ನು ರಚಿಸಿದ ಖ್ಯಾತಿಯನ್ನು ಗಳಿಸಿರುವ ನಟ, ಸಾಹಿತಿ ದಿ. ಗುರುರಾವ್ ರಾಮಚಂದ್ರ ರಾಯಕರ್ ಹಾಗೂ ನಾಗಮ್ಮ ದಂಪತಿಗಳಿಗೆ ಜನಿಸಿದ ರಾಯ್ಕರ್ ಮಾಸ್ತರ್ ಅವರು ಮುಂಬಯಿಯ ಸರ್. ಜೆ. ಜೆ. ಕಲಾ ಶಾಲೆ, ಹುಬ್ಬಳ್ಳಿಯ ಡಾ. ಎಂ. ವಿ. ಮಿಣಜಗಿ ಕಲಾಶಾಲೆ, ಧಾರವಾಡದ ಡಿ. ವಿ. ಹಾಲಭಾವಿ ಕಲಾಶಾಲೆ, ಶಿರಸಿಯ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಮುಂಬಯಿಯ ರಾಜ್ಯಾಧ್ಯಕ್ಷ ಕುಶಲ ಕೈಗಾರಿಕಾ ಶಾಲೆಗಳಲ್ಲಿ ಅಧ್ಯಯನ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು.
    ನಗರದ ಮಾರಿಕಾಂಬಾ ಹೈಸ್ಕೂಲಿನಲ್ಲಿ 1947ರಿಂದ 1980ರ ವರೆಗೆ 33 ವರ್ಷ ಚಿತ್ರಕಲಾ ಶಿಕ್ಷಕರಾಗಿ ವಿದ್ಯಾದಾನ ಮಾಡಿದ ರಾಯ್ಕರ್ ಮಾಸ್ತರರ ಶಿಷ್ಯವೃಂದ ಬಹುದೊಡ್ಡದು. ಅವರ ಶಿಷ್ಯರಲ್ಲಿ ಬಹಳಷ್ಟು ಜನರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ನಾಡಿನ ಹೆಸರಾಂತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಕೂಡ ರಾಯ್ಕರ ಮಾಸ್ತರರ ಶಿಷ್ಯರಾಗಿದ್ದರು. ಕಾರ್ನಾಡರು ಶಿರಸಿಗೆ ಭೇಟಿ ನೀಡಿದಾಗಲೆಲ್ಲ ರಾಯ್ಕರ ಮಾಸ್ತರರನ್ನು ಭೇಟಿಯಾಗದೇ ಮರಳುವುದೇ ಇಲ್ಲ. ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಗಿರೀಶ ಕಾರ್ನಾಡರು ರಾಯಕರ್ ಮಾಸ್ತರರ ಪ್ರಭಾವ ನನ್ನ ಮೇಲೆ ಉಂಟಾಗಿದೆ ಎಂದು ಆಗಾಗ ಹೇಳಿದ್ದೂ ಇದೆ.
    ಜಿಲ್ಲೆಯಲ್ಲಿ ರಾಯ್ಕರ್ ಮಾಸ್ತರ್ ಎಂದರೆ ಅವರಿಗೊಂದು ಘನತೆಯಿದೆ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ರಾಯ್ಕರ್ ಮಾಸ್ತರ್ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಅತ್ಯಂತ ಸಮೀಪವರ್ತಿಗಳಾಗಿದ್ದರು. ರಾಮಕೃಷ್ಣ ಹೆಗಡೆಯವರು ಆಗಾಗ ರಾಯ್ಕರ್ ಮಾಸ್ತರರ ಮನೆಗೆ ಆಗಮಿಸಿ ಅವರ ದೊಡ್ಡ ಮನೆಯ ಮಹಡಿಯ ಮೇಲೆ ಹರಟೆ ಹೊಡೆಯುತ್ತಿದ್ದರು ಎಂಬುದು ರಾಯ್ಕರ್ ಮಾಸ್ತರ್ ಹಾಗೂ ರಾಮಕೃಷ್ಣ ಹೆಗಡೆಯವರ ನಡುವಿನ ಆತ್ಮೀಯತೆಯನ್ನು ವಿವರಿಸುತ್ತದೆ. ಇವರಲ್ಲದೇ ಗೋಪಾಲಕೇಷ್ಣ ಹೆಗಡೆ ಕೆರೆಮನೆ ಮುಂತಾದ ಅನೇಕ ಹಿರಿಯ ಚೇತನಗಳು ರಾಯ್ಕರ್ ಮಾಸ್ತರರ ಒಡನಾಡಿಗಳಾಗಿದ್ದರು. ಮಿತ್ರರ ಬಳಗ ಜೊತೆ ಸೇರಿದಾಗಲೆಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದರು.
    ರಾಯ್ಕರ್ ಮಾಸ್ತರರು ಕಲಾವಿದರಾಗಿ ಮಾಡಿದ ಸಾಧನೆ ಅಪಾರ. ಅಂದಿನ ದಿನಮಾನದಲ್ಲಿ ರಾಜ್ಯದಲ್ಲಿ 15 ಕಡೆಗಳಲ್ಲಿ, ದಿಲ್ಲಿಯಲ್ಲಿ 2 ಸಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. 1957ರಲ್ಲಿ ಶಿರಸಿಯಲ್ಲಿ ಜರುಗಿದ ಅಖಿಲಭಾರತ ಮಲೆನಾಡ ಸಮ್ಮೇಳನ, ಅಖಿಲ ಭಾರತ ಅಡಿಕೆ ಸಮ್ಮೇಳನದ ಬೃಹತ್ ಮಹಾದ್ವಾರಗಳನ್ನು ಶಿಲ್ಪದ ಮಾದರಿಯಲ್ಲಿ ತಯಾರಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅನೇಕ ಪುಸ್ತಕಗಳ, ಸ್ಮರಣ ಸಂಚಿಕೆಗಳ ಮುಖಚಿತ್ರ ರಚಿಸಿದ್ದಾರೆ. ನಾಡಿನ ಹೆಸರಾಂತ ವ್ಯಕ್ತಿಗಳ ಭಾವಚಿತ್ರವನ್ನು ಚಿತ್ರಿಸಿದ ಕೀರ್ತಿ ಇವರದ್ದಾಗಿದೆ. ಇವರು ಚಿತ್ರಿಸಿದ್ದ ಬಾದಾಮಿ, ಕಾರವಾರ, ಯಾಣ ಹಾಗೂ ಹಂಪೆಯ ಜಲವರ್ಣ ಚಿತ್ರಗಳು ಸುಪ್ರಸಿದ್ಧವಾಗಿದೆ. 1959ರಲ್ಲಿ ಕುಮಟಾದ ಗಿಬ್ ಹೈಸ್ಕೂಲಿನ ಚಿನ್ನದ ಹಬ್ಬದ ಸಂದರ್ಭದಲ್ಲಿ ನೀಡಿದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನೋಡಿದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದು ರಾಯ್ಕರರ ಗರಿಮೆಯಾಗಿದೆ.
    ರಾಯ್ಕರ್ ಮಾಸ್ತರರು 12 ವರ್ಷ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ರಾಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರಾಗಿ, ರಾಜ್ಯ ಚಿತ್ರಕಲಾ ಪರೀಕ್ಷಾ ಮಂಡಳಿ ಸದಸ್ಯರಾಗಿ, ಮೈಸೂರು ದಸರಾ ಉತ್ಸವ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ 1991ರಲ್ಲಿ ರಾಜ್ಯದ ಅಕಾಡೆಮಿಗಳ ಸುಧಾರಣಾ ಸಮಿತಿ ಸದಸ್ಯರಾಗಿ, ರಾಜ್ಯ ನಿವೃತ್ತ ಶಿಕ್ಷಕರ ಒಕ್ಕೂಟದ ಸದಸ್ಯರಾಗಿ, ರಾಜ್ಯ ಕಲಾ ಶಿಕ್ಷಣ ಪರಿಶೀಲನಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಉತ್ಸವಗಳಾದ ಕದಂಬೋತ್ಸವ ಹಾಗೂ ಕರಾವಳಿ ಉತ್ಸವ, ಉತ್ತರ ಕನ್ನಡ ಜಿಲ್ಲಾ ಸಂಗೀತ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಯ್ಕರ್ ಮಾಸ್ತರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸೇವೆಯನ್ನು ಮಾಡಿದ್ದು 15 ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕದ ಜಲಪಾತಗಳು, ಕರ್ನಾಟಕದ ಗಿರಿಧಾಮಗಳು, ಕರ್ನಾಟಕದಲ್ಲಿ ಚಿನ್ನ, ಬೆಳ್ಳಿಯ ಕುಶಲ ಕೈಗಾರಿಕೆ ಈ ಮುಂತಾದವುಗಳು ಅವರ ಕೆಲವು ಪ್ರಸಿದ್ಧ ಪುಸ್ತಕಗಳಾಗಿದ್ದವು.
    ಹಲವಾರಿ ಪ್ರಶಸ್ತಿಗಳು, ಗೌರವಗಳು, ಸಂಮಾನಗಳು ದಿ. ಆರ್. ಜಿ. ರಾಯ್ಕರ್ ಅವರನ್ನು ಅರಸಿಕೊಂಡು ಬಂದಿವೆ. 1982ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ, 1989ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ದೆಹಲಿಯ ಅಖಿಲ ಭಾರತ ಕಲೆ ಮತ್ತು ಕೈಗಾರಿಕಾ ಸೊಸೈಟಿಯ ಸುವರ್ಣ ಮಹೋತ್ಸವದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳು ಅವರ ಮುಡಿಗೇರಿವೆ. 1980-85ರ ವರೆಗೆ ಶಿರಸಿಯ ಮಾರಿಕಾಂಬಾ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ, 1986ರಿಂದ 1989ರ ವರೆಗೆ ಶಿರಸಿಯ ಸುವರ್ಣ ಕೋ-ಆಪ್-ಸೊಸೈಟಿ ಲಿ.ಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿಯಾಗಿ, ಉತ್ತರಕನ್ನಡ ಜಿಲ್ಲಾ ಪ್ರವಾಸೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
    ಪುಸ್ತಕ ಸಂಗ್ರಹಗಾರರಾಗಿ ಹೆಸರು ಮಾಡಿದವರು ರಾಯ್ಕರ್ ಮಾಸ್ತರರು. ಇವರ ಬಳಿ ಸ್ವಂತ ಗ್ರಂಥ ಬಂಢಾರವಿತ್ತು. ಕಲೆ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಪ್ರವಾಸ ಸಾಹಿತ್ಯ, ಶಿಕ್ಷಣ, ಚಿಂತನೆ, ಯೋಗ, ಧಾರ್ಮಿಕ, ಜೀವನಚರಿತ್ರೆ, ಗೆಝೆಟಿಯರ್, ವೈದ್ಯಕೀಯ, ಜಾನಪದ, ಕ್ಷೇತ್ರದರ್ಶನ, ಸ್ಮರಣ ಸಂಚಿಕೆ ಸೇರಿದಂತೆ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಅವರ ಸಂಗ್ರಹದಲ್ಲಿದ್ದವು. ತಮ್ಮ ಜೀವನದಲ್ಲಿ 60 ವರ್ಷಗಳ ಕಾಲ ಪುಸ್ತಕ ಸಂಗ್ರಹದ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ಉತ್ತರಕನ್ನಡದ ಮೊಟ್ಟ ಮೊದಲ ಪತ್ರಿಕೆ ಎನ್ನುವ ಖ್ಯಾತಿಗಳಿಸಿರುವ ಹವ್ಯಕ ಸುಬೋಧ ಪತ್ರಿಕೆ ಕೂಡ ಇವರ ಸಂಗ್ರಹದಲ್ಲಿದೆ. ಇಷ್ಟೇ ಅಲ್ಲದೇ ಪ್ರಾಚೀನ ನಾಣ್ಯಗಳು, ವಿವಿಧ ಭಂಗಿಯ ಗಣೇಶನ ಮೂರ್ತಿಗಳು, ಮೆಡಲುಗಳು, ಸ್ಟಾಂಪುಗಳು, ಪ್ರಪ್ರಥಮ ಪೋಸ್ಟ್ ಕವರುಗಳು, ಕೀ ಚೈನುಗಳು, ಅತ್ತರ್ ಬಾಟಲಿಗಳು, ಪ್ರಾಚೀನ ಮೂರ್ತಿಗಳು, ನಿಶಾನೆಗಳು, ಮಾನಪತ್ರಗಳು, ನೆನಪಿನ ಕಾಣಿಕೆಗಳು ಹೀಗೆ ಇನ್ನೂ ಹಲವಾರು ಅಪರೂಪದ ತಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ರಾಯ್ಕರ್ ಮಾಸ್ತರರು ಬೆಳೆಸಿಕೊಂಡಿದ್ದರು.
    ತಮ್ಮ ಇಳಿ ವಯಸ್ಸಿನಲ್ಲಿ ಅಮೇರಿಕಾ ಹಾಗೂ ಸಿಂಗಾಪುರ ಯಾತ್ರೆಗಳನ್ನೂ ರಾಯ್ಕರ್ ಮಾಸ್ತರರು ಕೈಗೊಂಡಿದ್ದರು. ಬಿಡುವಾದಾಗ ಭಾರತ ಸುತ್ತುವ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ರಾಯಕರ್ ಮಾಸ್ತರರು ತಾವು ಪ್ರವಾಸ ಮಾಡಿದ ಕುರಿತು ಸುಂದರವಾಗಿ ಬರಹದ ರೂಪದಲ್ಲಿ ಮೂಡಿಸುತ್ತಿದ್ದರು. ವಯೋಸಹಜ ಕಾರಣದಿಂದಾಗಿ ತಮ್ಮ ಕೊನೆಗಾಲದಲ್ಲಿ ಚಿತ್ರಕಲೆಯನ್ನು ನಿಲ್ಲಿಸಿದರೂ ಬರವಣಿಗೆ, ಸಂಗ್ರಹಕಾರನ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದರು. ಇಷ್ಟೆಲ್ಲ ಸಾಧನೆಗಳನ್ನು ಕೈಗೊಂಡಿದ್ದರೂ ರಾಯ್ಕರ್ ಮಾಸ್ತರರು ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದರು. ಇಂತಹ ಮಹಾನ್ ಚೇತನ ಇನ್ನಿಲ್ಲವಾಗಿದೆ. ಇಂದಿನ ಪೀಳಿಗೆಗೆ, ಸಮಾಜಕ್ಕೆ ಆದರ್ಶಪ್ರಾಯವಾಗಿದ್ದ ಕಲಾವಿದ, ಸಾಧಕ, ಅಪರೂಪದ ವ್ಯಕ್ತಿ, ಹಿರಿಯ ಕೊಂಡಿಯೊಂದು ಕಳಚಿದೆ.
ರಾಜ್ಯದ ಹೆಸರಾಂತ ಕಲಾವಿದಕೊಂಡಿಯೊಂದು ಕಳಚಿದೆ. ಸರಳ, ಸಜ್ಜನಿಕೆಯ ಮೂರ್ತರೂಪದಂತಿದ್ದ ಆರ್. ಜಿ. ರಾಯ್ಕರ್ ಅವರ ನಿಧನದಿಂದಾಗಿ ಕಲಾಲೋಕ ಬಡವಾಗಿದೆ. ಬಹುರಂಗಗಳಲ್ಲಿ ಕೆಲಸ ಮಾಡಿದ್ದ ಅವರ ಸಾಧನೆ ಇಂದಿನವರಿಗೆ ಸ್ಪೂರ್ತಿದಾಯಕವಾದುದು.

Friday, July 19, 2013

ಪ್ರೇಮಪತ್ರ-5, ಕಂಡು ಕಾಡುವ ಗೆಳತಿಯಲ್ಲಿ ಪ್ರೇಮ ನಿವೇದನೆ

ಪ್ರೀತಿಯ ಗೆಳತಿ,
 ಮತ್ತೆ ಮತ್ತೆ ಮಧುರ ಅನುಭವ ನೀಡಲೆಂಬಂತೆ ವರ್ಷಕ್ಕೊಮ್ಮೆ ಅವತರಿಸಿ ಬರುವ ಪ್ರೇಮಿಗಳ ದಿನದ ಮೆಲುಕು ಹಾಕುತ್ತಾ, ನನ್ನೆದೆಯ ಅಂತರಾಳದೊಳಗೆ ಹಲ ದಿನಗಳಿಂದ ಗೂಡು ಕಟ್ಟಿ ಹೊರಬರಲು ತವಕಿಸುತ್ತಿರುವ ಪ್ರೀತಿಯೆಂಬ ರೆಕ್ಕೆ ಬಲಿತ ಹಕ್ಕಿಯ ಬಗ್ಗೆ ತಿಳಿಸುತ್ತೇನೆ.
    ಗೆಳತಿ.., ಸ್ಪಷ್ಟವಾಗಿ ಹೇಳುತ್ತಿದ್ದೇನೆ.. ನಾ ನಿನ್ನ ಮನಸಾರೆ ಇಷ್ಟಪಟ್ಟಿದ್ದೇನೆ. ನನ್ನ ಜೀವಕ್ಕಿಂತ ಹೆಚ್ಚು ನಿನ್ನನ್ನು ನನ್ನ ಮನದೊಳಗೆ ಆದರಿಸಿಕೊಂಡಿದ್ದೇನೆ. ಕಣ್ಣ ರೆಪ್ಪೆಯ ಪರದೆಯ ಮೇಲೆ ನಿನ್ನದೇ ಹೊನ್ನ ಬಿಂಬವನ್ನು ಚಿತ್ರಿಸಿಕೊಂಡಿದ್ದೇನೆ.
ನಿಂಗೊತ್ತಲ್ಲ ಗೆಳತಿ..,
    ಲವ್ ಎಟ್ ಫಸ್ಟ್ ಸೈಟ್ ಅಂತ ಹೇಳ್ತಾರೆ.. ಆವೊತ್ತು ಕಾಲೇಜಿನ ಅಡ್ಮಿಷನ್ನಿಗೆಂದು ನಾ ಬಂದ ದಿನವೇ ನೀನೂ ಬಂದಿದ್ದೆ. ಆಗ ಎದುರಿಗೆ ಸಿಕ್ಕ ನನ್ನ ಗುರುತು ಪರಿಚಯ ಇಲ್ಲದಿದ್ದರೂ ಕೂಡ ಚಿಕ್ಕದೊಂದು ಮುಗುಳು ನಗೆಯನ್ನು ಇರಲಿ ತಗೋ ಎಂದು ಎಸೆದು ಹೋಗಿದ್ದೆ. ಆ ದಿನವೇ ನಿನ್ನದೊಂದು ಬಿಂಬ ನನ್ನ ಮನದೊಳಗೆ ಚಿತ್ರಣಗೊಂಡೆಬಿಟ್ಟಿತ್ತು.
    ಆಮೇಲೆ ಕಾಲೇಜು ಪ್ರಾರಂಭವಾದ ನಂತರ ನಿಧಾನವಾಗಿಯಾದರೂ ನಿನ್ನ ಪರಿಚಯವಾಗಿಬಿಡ್ತು.ಪರಿಚಯವಾದ ನಂತರ ಗೊತ್ತೇ ಇದೆಯಲ್ಲಾ ಮಾತು-ಕಥೆ, ಹರಟೆ, ಇತ್ಯಾದಿ ಇತ್ಯಾ.. ಮೆರೆದು ಬಿಟ್ಟಿತು. ಬಂದ ಕೆಲವೇ ದಿನದಲ್ಲಿಯೇ ನೀನು ನಂಗೆ ಅದೆಷ್ಟು ಆತ್ಮೀಯವಾಗಿಬಿಟ್ಟೆ ಮಾರಾಯ್ತಿ.. ಅಂತಹ ಮಧುರ ಮನದ ಹಲ ಕೆಲ ಮಾತುಗಳ ನಡುವೆಯೇ ನನ್ನ ಎದೆಯೊಳಗೆ ನಿನ್ನ ಎಡೆಗೊಂದು ಪ್ರೀತಿಯ ಬೀಚ ಮೊಳಕೆಯೊಡೆದದ್ದು. ಆ ನಂತರದ ದಿನಗಳಲ್ಲಿ ಆ ಪ್ರೀತಿಯ ಬೀಜಕ್ಕೆ ನಾನು ಮಾತು-ಕತೆ, ಕನಸು-ಕವನಗಳ ಇವುಗಳ ಮೂಲಕವೇ ನೀರೆರೆದೆ. ಕೊನೆಗೆ ಆ ಗಿಡ ದೊಡ್ಡದಾಗಿ ಮನದ ತುಂಬಾ ಬಳುಕಿ ನಿಂತಿತು. ಈಗಲೋ ಸುಂದರವಾದ ಹೂ ಬಿಡಲು ಕಾತರಗೊಂಡಿದೆ.
    ನಿಂಗೊತ್ತಿಲ್ಲ ಗೆಳತಿ, ನೀನು ಅದೆಷ್ಟೋ ಸಾರಿ ನನ್ನ ಹತ್ತಿರ ಮಾತನಾಡಿದಾಗಲೆಲ್ಲಾ, ನಾನು ಹಾಗೆ ಮಾತನಾಡಲು ಹೆದರುತ್ತಿದ್ದೆ. ಮಾತುಗಳು ನನಗೆ ಗೊತ್ತಿಲ್ಲದಂತೆಯೇ ತೊದಲುತ್ತಿದ್ದವು. ಪ್ರೀತಿಯ ಮೊದಲ ಮಜಲೇ ಭಯವಂತೆ.. ಅದಕ್ಕೆ ನನಗೆ ಹಾಗೆ ಆಯ್ತೇನೋ.. ಅಲ್ವೇನೆ..?
    ಆ ನಂತರದ ದಿನಗಳಲ್ಲಿ ಅದೆಷ್ಟೋ ಸಾರಿ ನಾನು ನಿಂಗೆ ನನ್ನ ಮನದಾಳದ ಭಾವನೆಗಳನ್ನು, ನನ್ನೊಳಗೆ ಅಂಕುರಿಸಿದ್ದ ಈ ಪ್ರೀತಿಯ ಕದಿರನ್ನು ತಿಳಿಸಲು ಪ್ರಯತ್ನ ಪಟ್ಟಿದ್ದೆ ಗೊತ್ತಾ.. ಅದೇಕೋ ಆಗೆಲ್ಲಾ ಕಾಲ ಪಕ್ಷವಗೊಂಡಿರಲಿಲ್ಲವೋ ಅಥವಾ ಮುಹೂರ್ತ ಕೂಡಿಬಂದಿರಲಿಲ್ಲೋ ಏನೋ.. ನನ್ನಿಂದ ನನ್ನ ಪ್ರೇಮವನ್ನು ನಿನ್ನೆದುರು ನಿವೇದಿಸಲು ಆಗಿರಲೇ ಇಲ್ಲ.
    ಗೆಳತಿ.., ನಮ್ಮ ಕಾಲೇಜಿನ ಪುಂಡರ ಗುಂಪು ಅದೆಷ್ಟೋ ಸಾರಿ ನೀನು ನಡೆದು ಹೋಗುತ್ತಿದ್ದಾಗ ನಿನ್ನ ಹಿಂದೆ ನಿಂತುಕೊಂಡು ಏರುದನಿಯಲ್ಲಿ ನಿನ್ನ ಕುರಿತು ಕಾಮೆಂಟುಗಳನ್ನು ಮಾಡುತ್ತಿತ್ತಲ್ಲ ಆಗೆಲ್ಲಾ ನಾನು ಒಳಗೊಳಗೆ ಅದ್ಯಾವಪರಿ ಉರಿದುಬಿದ್ದಿದ್ದೇನೆ., ಸಿಟ್ಟು ಮಾಡಿಕೊಂಡಿದ್ದೇನೆ ಗೊತ್ತಾ.. ಆಗೆಲ್ಲಾ ನಾನು ಈ ಪ್ರೇಮದ ಮೋಡಿಯೇ ಹೀಗಾ ಅಂತ ಯೋಚಿಸಿದ್ದಿದೆ.
    ಸತ್ಯವಾಗ್ಲೂ ಹೇಳ್ತೀನಿ ಗೆಳತಿ, ನಿನ್ನ ಬಗ್ಗೆ ಯಾರಾದ್ರೂ ಏನನ್ನಾದ್ರೂ ಹೇಳಿದ್ರು ಅಂತಂದ್ರೆ ನಾನು ಅದೆಷ್ಟು ದುಃಖವನ್ನು-ಸಿಟ್ಟನ್ನು, ಯಾತನೆಯನ್ನು ಅನುಭವಿಸುತ್ತೀನಿ ಗೊತ್ತಾ..? ಪ್ರೇಮ ಅಂದರೆ ಹಸಿರು, ಮಳೆ, ಬದುಕು ಅಂತೆಲ್ಲ ಹೇಳ್ತಾರೆ. ನನ್ನ ಪಾಲಿಗೆ ಅದು ಸತ್ಯವಾಗಿಬಿಟ್ಟಿದೆ. ಆ ಅಡ್ಮಿಷನ್ನಿನ ದಿನದಂದು ನಿನ್ನನ್ನು ಕಾಣುವ ವರೆಗೂ ನಾನು ಒಂದು ರೀತಿ ಒರಟನಾಗಿದ್ದೆ. ಒರಟುತನಕ್ಕಿಂತ ಹೆಚ್ಚು ಸಿಡುಕುತ್ತಿದ್ದೆ. ತಟ್ಟನೆ ರೇಗುತ್ತಿದ್ದೆ. ಕಾರಣವೇ ಇಲ್ಲದೆ ಜಗಳಕ್ಕೆ ನಿಲ್ಲುತ್ತಿದ್ದೆ. ಸಿಟ್ಟಾಗುತ್ತಿದ್ದೆ. ಸಹನೆಯೇ ಇರುತ್ತಿರಲಿಲ್ಲ. ಆದರೆ ಯಾವಾಗ ನನ್ನೊಳಗೆ ನಿನ್ನ ರೂಪ ಆಹ್ವಾನಗೊಂಡು ಬೇರು ಬಿಟ್ಟು ಕುಳಿತುಕೊಂಡಿತೋ ಆ ಕ್ಷಣದಿಂದಲೇ ನಾನು ಮೃದುವಾಗುತ್ತಾ ಹೋದೆ.. ಕ್ರಮೇಣ ನನ್ನ ಸಿಟ್ಟು, ಒರಟುತನ, ರೇಗುವಿಕೆಗೆ ಬ್ರೇಕ್ ಬೀಳಲಾರಂಭವಾಯಿತು. ಜಗಳಗಂಟತನವಂತೂ ನಾಗರಹಾವು ಪೊರೆ ಬಿಟ್ಟುಹೋಗುವಂತೆ ನನ್ನನ್ನು ಬಿಟ್ಟು ಹೋಯಿತು. ಎಲ್ಲೋ ಅಡಗಿದ್ದ, ನನಗೆ ಗೊತ್ತೇ ಇಲ್ಲದಂತಿದ್ದ ಸಾಪ್ಟ್ ನೆಸ್ ನನ್ನಲ್ಲಿ ತುಂಬಿತು. ಅರ್ಧಮರ್ಧ ಮಾತಿಗೆ ಮುಗಿಯಿತು ಎನ್ನುವಂತಿದ್ದ ನಾನು ತಾಳ್ಮೆಯನ್ನು ಪಡೆದುಕೊಮಡೆ. ನೇರವಾಗುತ್ತ ಹೋದೆ. ಮೌನಿಯಾದೆ. ಈಗ ಯೋಚಿಸು ಗೆಳತಿ.., ನಾನು ಅದ್ಯಾವ ಪರಿ ನಿನ್ನನ್ನು ಪ್ರೀತಿಸುತ್ತಿರಬಹುದು ಅಂತ..!!
    ಇಷ್ಟರ ಜೊತೆಗೆ ಇನ್ನೊಂದು ಮಾತನ್ನೂ ನಾನು ನಿನ್ನೆದುರು ಅರುಹಿ ಬಿಡುತ್ತೇನೆ. .. ನನ್ನಲ್ಲಿ ಮೊಳೆತ ಈ ಪ್ರೀತಿ ನಿಸ್ಸಂದೇಹವಾಗಿಯೂ ನಿಷ್ಕಲ್ಮಷವಾದುದು. ಈ ಪ್ರೀತಿಯಲ್ಲಿ ಕಾಮವಿಲ್ಲ. ಲೋಭವಿಲ್ಲ. ಹುಚ್ಚು ಹುಂಭತನವಿಲ್ಲ. ಬರಿ ಆಕರ್ಷಣೆಯೂ ಅಲ್ಲ. ಇದರಲ್ಲಿ ಸಂದೇಹವೂ ಇಲ್ಲ. ಹಾಗೆಯೇ ಸಂಶಯವೂ ಇಲ್ಲ. ಇದು ಕೇವಲ ಶುದ್ಧ-ಸ್ವಚ್ಛ-ಶುಭ್ರ ಪ್ರೇಮವಷ್ಟೆ. ಇದರಲ್ಲಿ ಅನುಮಾನದ ಚಿಕ್ಕ ಹಸ್ತರೇಖೆಯನ್ನೂ ಕಾಣುವಂತಿಲ್ಲ. ನೀನು ಅದೆಷ್ಟು ಸಾರಿ ಪರೀಕ್ಷಿಸದರೂ ಕೂಡ ಇದರೊಳಗೆ ಭಿನ್ನವಿಲ್ಲ-ಬೇಧವಿಲ್ಲ.
    ಗೆಳತಿ..,
    ಇಷ್ಟು ಹೊತ್ತು ನನ್ನ ಮನದಲ್ಲಿ ನಿನ್ನೆಡೆಗಿನ ಪ್ರೇಮಕ್ಕೊಂದು ಅಕ್ಷರ ರೂಪ ಕೊಟ್ಟಿದ್ದೇನೆ. ಎಲ್ಲೋ.. ಎಂದೋ ಕಣ್ಣಿಗೆ ಕಾಣದಂತೆ ವ್ಯರ್ಥವಾಗಿ ಬಸಿದು ಹೋಗುತ್ತಿದ್ದ ಮನಸ್ಸಿನ ಭಾವನೆಗಳಿಗೆ ಅಷ್ಟೋ ಇಷ್ಟೋ ಎಂಬಂತೆ ಬರಹದ ರೂಪ ಕೊಟ್ಟು ಬಿಟ್ಟಿದ್ದೇನೆ...
    ಇಷ್ಟರ ಮೇಲೆ ಆಯ್ಕೆ ನಿನ್ನದು ಗೆಳತಿ., ನನ್ನ ಪ್ರೀತಿಸ್ತೀಯಾ..? ನಿನ್ನದೊಂದು ಅತ್ಯಂತ ಸ್ಪಷ್ಟವಾದ ನಿಲುವೊಂದನ್ನು ನಗೆ ತಿಳಿಸುತ್ತೀಯಾ, ನೀನು ನನ್ನನ್ನು ಇಷ್ಟಪಡ್ತೀಯಾ ಅಂದ್ಕೊಂಡು ಕನಸಿನ ಆಶಾಗೋಪುರದ ಮೇಲೆ ಹನುಮನಂತೆ ಕುಳಿತಿದ್ದೇನೆ. ಆ ಆಶಾಗೋಪುರವನ್ನು ಗಾಳಿಗೋಪುರ ಮಾಡುವುದಿಲ್ಲ ತಾನೆ..?
    ಕೊನೆಯದಾಗಿ ನೀನು ನನ್ನು ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಎಂದು ನಂಬಿ ನಿನ್ನ ನಿರ್ಧಾರಕ್ಕಾ ಕಾದಿದ್ದೇನೆ.. ನಿನ್ನ ನಿರ್ಧಾರ ನನ್ನ ಪಾಲಿಗೆ ನಲಿವಾಗಿರಲಿ, ಹಸಿರಾಗಿರಲಿ, ಹಸಿಯಾಗಿರಲಿ ಎಂದು ಬಯಸುತ್ತಿದ್ದೇನೆ..

ಇಂತಿ ನಿನ್ನ ನಿರ್ಧಾರಕ್ಕಾಗಿ
ಕಾದು ಕುಳಿತಿರುವ
ಜೀವನ್

Sunday, July 14, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 5


 
ಕೊಳ್ಳುವುದು ಏನನ್ನು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿತು..
ನನಗೆ ಕ್ರಾಂತಿ ನಾಯಕ `ಚೆ ಗುವೆರಾ' ನ ಚಿತ್ರವಿರುವ ಟಿ ಷರ್ಟ್ ಕೊಳ್ಳಬೇಕು ಎನ್ನಿಸಿತ್ತು..
ದೋಸ್ತರ ಬಳಿ ಹೇಳಿದೆ..
ಅವರಿಗೂ ಹೇಳಿದೆ..
ಮೋಹನನಿಗೆ ಚೆಗುವೆರಾ ನ ಬಗ್ಗೆ ಗೊತ್ತಿರಲಿಲ್ಲವೋ ಅಥವಾ ಬೇಕಂತಲೇ ಹೇಳಿದನೋ ಗೊತ್ತಿಲ್ಲ..
ಜಾಗ್ವಾರ್ ಷರ್ಟ್ ಜಾಗ್ವಾರ್ ಷರ್ಟ್ ಎನ್ನಲು ಶುರುಹಚ್ಚಿಕೊಂಡ..
ನಮಗೆ ತಮಾಷೆಯಾಗಿ ನಗು ಬಂತು..
ಹಿಂದಿನ ಸಾರಿ ನಾನು, ರಾಘು ಊಟಿಗೆ ಬಂದಾಗ ಒಂದು ಅಂಗಡಿಯಲ್ಲಿ ಜರ್ಕಿನ್ನುಗಳನ್ನು ಕೊಂಡಿದ್ದೆವು.. ಅದರತ್ತ ಮುಖ ಮಾಡಿದೆವು..
ನಮಗೆ ಬೇಕಾದಂತಹ ಯಾವುದೇ ಬಟ್ಟೆ ಅಲ್ಲಿ ಸಿಗಲಿಲ್ಲ..
ಇನ್ನೊಂದು ದೊಡ್ಡ ಮಳಿಗೆ..
ನಾವು ಅಪ್ಪಟ ಕನ್ನಡಿಗರು..
ತಮಿಳಿನ ಸಾಪಡ್ ಬಿಟ್ಟರೆ ಇನ್ನೆಂತದ್ದೂ ಗೊತ್ತಿಲ್ಲ..
ಕೊನೆಗೆ ಆ ಮಳಿಗೆಯಲ್ಲಿ ಕನ್ನಡ ಗೊತ್ತಿದ್ದ ತಮಿಳರಿದ್ದರು...
ಅವರು ತಮಿಳರೋ ಅಥವಾ ಕನ್ನಡಿಗರೇ ಹೊಟ್ಟೆಪಾಡಿಗೆ ಅಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ..
 ಆದರೆ ಅವರ ಪ್ರನೌನ್ಸಿಯೇಷನ್ ಮಾತ್ರ ತಮಿಳಿನಂತೆಯೇ ಇತ್ತು.. ಸೋ ತಮಿಳ್ಗನ್ನಡಿಗರೇ ಇರಬೇಕು...
ಅಂದುಕೊಂಡೆವು..
 
ಅಂಗಡಿ ತುಂಬೆಲ್ಲ ನಮನಮೂನೆಯ ಜರ್ಕಿನ್ನುಗಳು ಸ್ವೆಟ್ಟರುಗಳು..
ಯಾವುದನ್ನೇ ಹಿಡಿದರೂ ಕೊಳ್ಳಬೇಕೆನ್ನಿಸುವ ಮೋಹ..
ನಾವು `ವಿಟಮಿನ್ ಎಂ' ಅನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಬೇಕಲ್ಲ ಮಾರಾಯ್ರೆ..
ಆದ್ದರಿಂದ ನಾವು ನಾಲ್ವರೂ ತಲಾ ಒಂದೊಂದು ಜರ್ಕಿನ್ ಕಂ ಸ್ವೆಟರ್ ಕೊಳ್ಳುವುದು ಎಂಬ ತೀರ್ಮಾನ ಬಹುಮತ ಪಡೆಯಿತು..
ಅದೃಷ್ಟಕ್ಕೆ ಅಲ್ಲಿ ನನ್ನ ಪ್ರೀತಿಯ ಚೆ ಗುವೆರಾ ಷರ್ಟ್ ಇತ್ತು..
ಎಲ್ಲರಿಗೂ ಉಷ್ಟವಾದದ್ದೂ ನನ್ನ ಅದೃಷ್ಟವೇ ಸರಿ..
ನಾಲ್ಕರ ಜೊತೆಗೆ ಒಂದು ಎಕ್ಸ್ ಟ್ರಾ.. ಒಟ್ಟೂ ಐದು ಷರ್ಟ್ ಕೊಂಡೆವು..
ಟ್ರಿಪ್ ಕಳೆದು ಸರಿಸುಮಾರು 3-4 ವರ್ಷ ಕಳೆಯುತ್ತಿದೆ..
ಇಂದಿಗೂ ಚೆಗುವೆರಾ ನನ್ನ ಬಳಿ ಅರಾಮವಾಗಿದೆ.. ಮಳೆಗಾಲದ ತಂಪಿನಲ್ಲಿ, ಚಳಿಗಾಲದ ಕೊರೆಯುವಿಕೆಯಲ್ಲಿ ನನ್ನ ಎದೆಯ ಮೇಲೇರುತ್ತಾನೆ ಆತ.. ಬೆಚ್ಚಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಮಾರಾಯ..
ನಿನ್ನ ಕ್ರಾಂತಿಯ ಕಿಡಿಗಳು ಚಿರಾಯುವಾಗಿರಲಿ..
 
ಅಲ್ಲೊಂದು ಅಂಗಡಿ ನಮ್ಮ ಮನಸ್ಸನ್ನು ತಟ್ಟನೆ ಸೆಳೆಯಿತು..
ಅದೊಂದು ಟೆಡ್ಡಿ ಬೇರ್ ಅಂಗಡಿ..
ಸಾವಿರ ಸಾವಿರ ಸಂಖ್ಯೆಯಲ್ಲಿ ಟೆಡ್ಡಿ ಬೇರ್ ಗಳು ಅಲ್ಲಿದ್ದವು..
ಚಿಕ್ಕವು, ದೊಡ್ಡವು, ಪುಟ್ಟವು, ಕೆಂಪು, ನೀಲಿ, ಹಳದಿ, ಗುಲಾಬಿ.. ನಮ್ಮದು ಕೊರತೆಯ ಅರ್ಥಶಾಸ್ತ್ರ,,
ನೋಡಲು ಅರ್ಥಶಾಸ್ತ್ರದ ಲೆಕ್ಖಾಚಾರ ಬೇಕಿಲ್ಲವಲ್ಲ ನೋಡುತ್ತ ನಿಂತೆವು.,.
ಅರೇ/.. ಟೆಡ್ಡಿ ಬೇರ್ ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದೆ..
ಅರೇ.. ನಗುತ್ತಲೂ ಇದೆ.. ನೋಡ ನೋಡುತ್ತಿದ್ದಂತೆಯೇ ಮಾತನ್ನೂ ಆಡಲು ಪ್ರಾರಂಭಿಸಿತು..
ಇದೇನಿದೆ ಎನ್ನುವಷ್ಟರಲ್ಲಿ ಅದೊಂದು ಹುಡುಗಿ..!!
ಅಂಗಡಿಯ ಒಡತಿಯೋ ಯಾರೋ..
ನೇಪಾಳಿಯಂತೆ ಟಾರಿನ ಬಣ್ಣವಲ್ಲ..
ಕಣ್ಣು ಕಿರಿದು.. ಕಿಟ್ಟುವಂತೂ ``ಹ್ವಾ ಇದು ಜಿಂಪೋ ಛೇ... ಕಡೆಯಿರಬೇಕು'  ಅಂದ
ಅಂದರೆ ನೇಪಾಳಿಯೋ.. ಗೂರಖಾವೋ.. ಟಿಬೇಟಿಯನ್ನರೂ ಇರಬೇಕು ಎಂಬುದು ನಮ್ಮ ಅಂದಿನ ಕೋಡ್ ವರ್ಡ್ ಆಗಿತ್ತು..
ಹೌದು.. ಆಕೆ ನೇಪಾಳಿಯೇ..
ಸರಿ ಟೆಡ್ಡಿಯನ್ನು ಕೊಳ್ಳುವ ಮನಸ್ಸಿಲ್ಲ..
ಗೊಂಬೆಗಳನ್ನು ಕೊಳ್ಳುವ ನಾಟಕ ಶುರುಹಚ್ಚಿಕೊಂಡು ಚೌಕಾಸಿಗಿಳಿದೆವು..
ನಮ್ಮಂತವರನ್ನು ಎಷ್ಟುಮಂದಿಯನ್ನು ಆಕೆ ಕಂಡಿದ್ದಳೋ..
ಬಲೆ ಘಾಟಿ.. ಮಾತಿನಲ್ಲೇ ಮೋಡಿ ಮಾಡುವ ಛಾತಿ.. ವ್ಯಾಪರಾದ ಸಕಲ ಎಬಿಸಿಡಿ ಗೊತ್ತಿದ್ದ ಅವಳ ಮುಂದೆ ನಮ್ಮ ಆಟ ನಡೆಯಲಿಲ್ಲ.. ಹಾಗಂತ ನಾವು ಟೆಡ್ಡಿಬೇರ್ ಕೊಳ್ಳಲಿಲ್ಲ ಮಾರಾಯ್ರೆ..
ಹಾಲುಬಿಳುಪಿ ಟೆಡ್ಡಿಯಂತಹ ಹುಡುಗಿಯನ್ನು ನೋಡಿ ಮಾತನಾಡಿ.. ಪುಳಕಿತರಾಗಿ ಮರಳಿದೆವು..
`ಎದೆಯೊಳಗೆ ಗಿಟಾರು ನೂರು...ಮಿಡಿ ಮಿಡಿ ಮಿಡಿದು...'

 
ನಮ್ಮ ಶಾಪಿಂಗು ಮುಗಿಯಿತು...
ಇನ್ನೇನು ಮಾಡುವುದು..?
ಬೊಟಾನಿಕ್ಕಲ್ ಗಾರ್ಡನ್ ಸೆಳೆಯಲಿಲ್ಲ..
ಪ್ರಾಥಮಿಕ ಶಾಲೆಯ ಪಾಠದಲ್ಲಿ ಓದಿದ್ದ ಅದು ನಮ್ಮಲ್ಲಿ ಬೆರಗನ್ನು ಮೂಡಿಸಲಿಲ್ಲ..
ನೇಮಿ ಚಂದ್ರರ ಅವರು ಹೇಳಿವಂತೆ `ನಾ ಓಡಿ ಓಡಿ ಮುಟ್ಟಿದ ಬೆಟ್ಟದ ತುದಿಯಲ್ಲಿ ಏನಿದೆ ಬಟ್ಟಾ ಬಯಲು' ಎನ್ನುವಂತೆ ಭಾಸವಾಯಿತು.. ಅಲ್ಲಿನ ಮರಗಿಡಗಳನ್ನು ಕತ್ತರಿಸಿ, ಬಗ್ಗಿಸಿ ವಿವಿಧ ಆಕೃತಿಗಳನ್ನಾಗಿ ಮಾಡಿದ್ದು ನಮ್ಮನ್ನು ಕಾಡಲಿಲ್ಲ..
ಸರಿ ಊಟಿ ನೋಡಿದ್ದಾಯ್ತು.. ಚಳಿಯಲ್ಲಿ ಕೂಲ್ ಆಗಿದ್ದಾಯ್ತು.. ಮುಂದೇನು..? ಎನ್ನುವ ಕ್ವಶ್ಚನ್ ಮಾರ್ಕು ನಮ್ಮ ಮನದಲ್ಲಿ ಮೂಡಿ ಉತ್ತರಕ್ಕಾಗಿ ತಡಕಾಡುತ್ತಿತ್ತು..
ಅಷ್ಟರಲ್ಲಿ ನಮಗೆ ಟೀ ಫ್ಯಾಕ್ಟರಿ ನೋಡಬೇಕು ಎನ್ನುವ ಚಿಕ್ಕದೊಂದು ಆಸೆ..
ಆಸೆಯ ಹುಳು ಮನದಲ್ಲಿ ಹೊಕ್ಕ ನಂತರ ಅದಕ್ಕೆ ಅಂತ್ಯ ಹಾಕಲೇ ಬೇಕು..
ಸರಿ ಅಲ್ಲೊಂದು ಫ್ಯಾಕ್ಟರಿ ಕಣ್ಣಿಗೆ ಬಿತ್ತು.. ಹೊರಟರೆ ಅದಕ್ಕೆ ಪ್ರವೇಶಫೀಸಿದೆ.. ಅದೆಷ್ಟೋ ಕೊಟ್ಟು ಹೋಗಬೇಕೆಂದರೆ ಚಿಕ್ಕ ಕ್ಯೂ ಕೂಡ ಇದೆ.. ಸುಮ್ಮನೇ ಲಾಸು ಮಾಡಿಕೊಂಡು ಹೋಗುವುದು ಬೇಡ ಎನ್ನುವ ಎಕನಾಮಿಕ್ಸು ನಮ್ಮ ಮನದಲ್ಲಿ..
ಆದರೆ ಕ್ಯೂನಲ್ಲಿ ನೋಡಿದರೆ ಮೂರ್ನಾಲ್ಕು ಬೆಳ್ಳಗಿನ ಹುಡುಗಿಯರು..!
ಜೈ... 
ನಾವೂ ಕ್ಯೂನಲ್ಲಿ ನಿಂತೆವು..
 
ಹತ್ತುನಿಮಿಷದ ನಂತರ ಫ್ಯಾಕ್ಟರಿಯ ಒಳಭಾಗದಲ್ಲಿ ನಾವು..
ಅದರೊಳಗೆ ಇಂಗ್ಲೀಷ್ ಭಾಷೆಯಲ್ಲಿ ಕಾಮೆಂಟರಿ..
ಏನೋ ಹೇಳುತ್ತಿದ್ದರು..
ನಾವು ನಾಲ್ವರೂ ಘನ ಗಂಬೀರವಾಗಿ ಕೇಳುವ ನಟನೆ ಮಾಡಿದೆವು..
ನಮ್ಮ ನಟನೆ ನೋಡಿದರೆ ನಮಗೆ ಸಂಪೂರ್ಣ ಅರ್ಥವಾಗಿದೆ ಎನ್ನುವಂತಿತ್ತು..
ಹೊರ ಬಂದಾಗ ಕಿಟ್ಟು ಕೇಳಿದ್ದು `ಅಂವ ಎಂತಾ ಹೇಳಿದ್ನಲೆ..' ನನ್ನ ಉತ್ತರ `ಸಾಯ್ಲಾ ಟಸ್ ಪುಸ್ ಅಂದ ಅರ್ಥ ಆಜಿಲ್ಲೆ..' ಮೋಹನ, ರಾಘು ಕೂಡ ಇದಕ್ಕೆ ಹೊರತಾಗಿರಲಿಲ್ಲ ಎನ್ನುವುದು ಅವರ ಮುಖದಿಂದ ಗೊತ್ತಾಗುತ್ತಿತ್ತು..
ಆ ಫ್ಯಾಕ್ಟರಿಯಲ್ಲಿ ಚಾಕಲೇಟುಗಳು ತಯಾರಾಗುತ್ತಿದ್ದವು. ನೋಡಿದ ತಕ್ಷಣ ಬಾಯಲ್ಲಿ ಚವುಳು ನೀರು ಸುರಿಯಬೇಕು.. ಅಷ್ಟು ಚನ್ನಾಗಿದ್ದವು..
ಬೆಲೆ ಕೇಳಿದರೆ ಈಗಿನ ಪೆಟ್ರೂಲ್ ರೇಟಿಗಿಂತ ಜಾಸ್ತಿ... ಅದಕ್ಕೆ ಪ್ರತಿಯಾಗಿ ಅವರು ಕೊಡುವುದು ಕಡಿಮೆ ಗಾತ್ರದ ಚಾಕಲೇಟು..
ನೋಡಿದಷ್ಟರಲ್ಲೇ ಹೊಟ್ಟೆ ತುಂಬಿತು ಎಂದು ಹೇಳಿ ವಾಪಾಸು ಬಂದೆವು...
ಮುಂದೆ... `ಎಲ್ಲಿಗೆ ಪಯಣ..? ಯಾವುದು ದಾರಿ..' ಮರಳಿ ಬೆಂಗಳೂರಿಗಾ..? 
ಊಹೂಂ ಬಗೆ ಹರಿಯಲಿಲ್ಲ..

 
ಅಷ್ಟರಲ್ಲಿ ನಮ್ಮ ಭಭ್ರವಾಹನದ ಹೊಟ್ಟೆ ಖಾಲಿಯಾಗಿದ್ದು ನೆನಪಾಯಿತು..
ಬಂಕಿಗೆ ಹೋಗಿ ನೋಡಿದರೆ ಕರ್ನಾಟಕಕ್ಕಿಂತ 1.5 ರು.ಗಿಂತಲೂ ಕಡಿಮೆ ದರದಲ್ಲಿ ಪೆಟ್ರೂಲು..
ವೀರ ಕನ್ನಡಿಗರಾದ ನಾವು ಕರ್ನಾಟಕವನ್ನು ಹಿಗ್ಗಾ ಮುಗ್ಗಾ ಬೈದು ಟ್ಯಾಂಕ್ ಫುಲ್ ಮಾಡಿಕೊಂಡು ಗಾಡಿಯನ್ನು ಗುರ್ರೆನ್ನಿಸುವಾಗಲೇ ನಮ್ಮ ಹೊಟ್ಟೆ ಖಾಲಿಯಾದದ್ದು ನೆನಪಾಯಿತು...

ಮತ್ತದೆ ದಾರಿ ಮಧ್ಯದ ಹೊಟೆಲನ್ನು ನೆನಪು ಮಾಡಿಕೊಂಡು ಮುಂದಕ್ಕೆ ಹೆಜ್ಜೆಯನ್ನಿಟ್ಟೆವು..
ಹೋಗುವಾಗ ಏದುಸಿರು ಬಿಟ್ಟಿದ್ದ ನಮ್ಮ ಭಭ್ರುವಾಹನರಿಗೆ ಈಗ ವೇಗ ಇಮ್ಮಡಿಸಿತ್ತು..
ಫೇವರ್ಸ್ ಹಾಕಿದ್ದ ರಸ್ತೆ.. ಗಾಡಿಯನ್ನು ಆಫ್ ಮಾಡಿಕೊಂಡರೂ 10-20 ಕಿ.ಮಿ ಅರಾಮವಾಗಿ ಸಾಗಬಹುದು.. ಅಷ್ಟು ಇಳಿಜಾರು..
10-12 ಕಿ.ಮಿ ಬಂದ ನಂತರ ನಮ್ಮ ಅದೇ ಹೊಟೆಲ್ ಸಿಕ್ಕಿತು..
ಬಾಗಿಲು ಹಾಕಿತ್ತು..
ಮತ್ತಷ್ಟು ಬೈಗುಳ.. ಹೊಟ್ಟೆಪಾಡು ತಾಳಹಾಕುತ್ತಿತ್ತು..
ಅಲ್ಲೆಲ್ಲೋ ಇನ್ನೊಂದು ಹೊಟೆಲು ಸಿಕ್ಕಿತು.. ಊಟದ ಶಾಸ್ತ್ರ ಮುಗಿಸಿದೆವು..
ಆಮೇಲೆ ಮತ್ತೆ ನಮ್ಮೆದುರು ಮೂಡಿದ್ದು `ಎಲ್ಲಿಗೆ ಪಯಣ..? ಯಾವುದು ದಾರಿ..?'
ಗಾಡಿ ನಿಲ್ಲಿಸಿ ವಾಪಾಸು ಬೆಂಗಳೂರಿಗೆ ಹೋಗುವುದಾ..?  ಎಂದು ಸಮಾಲೋಚನೆ ಮಾಡಿದೆವು..
 
ಅಷ್ಟರಲ್ಲಿ ಅದ್ಯಾವ ಟ್ಯೂಬ್ ಲೈಟ್ ಹೊತ್ತಿಕೊಂಡಿತೋ.. ಮೋಹನ ಇಲ್ಲೆಲ್ಲೋ ವಯನಾಡಿದೆ ನೋಡಿ ಬರೋಣ ಎಂದ..
ನಮಗೆ ಅನುಮಾನ.. ಸುಮ್ನಿರು ಮಾರಾಯಾ ವಯನಾಡು ಇರುವುದು ಕೇರಳದಲ್ಲಿ ಎಂದೆವು..
ಇಲ್ಲಪ್ಪಾ.. ಎಲ್ಲೋ ನೋಡಿದ್ದೇನೆ.. 
ಊಟಿಯ ಹತ್ತಿರದಲ್ಲೇ ಇದೆ ವಯನಾಡು.. ಎಂದ..
ನಮಗೆ ನಂಬಿಕೆ ಬರಲಿಲ್ಲ..
ಕೊನೆಗೆ ತನ್ನ ಬ್ಯಾಗಿನಲ್ಲಿದ್ದ ಮ್ಯಾಪನ್ನು ತೆಗೆದು ತೋರಿಸಿದ ನಂಬಿಕೆ ಬಂತು..
ಅಲ್ಲೆ ಹತ್ತಿರದಲ್ಲಿದ್ದ ಅಂಗಡಿಯಾತನ ಬಳಿ ಮತ್ತೊಮ್ಮೆ ಕನ್ ಫರ್ಮ್ ಮಾಡಿಕೊಂಡೆವು..
ಆದರೆ ಹೋಗುವುದಾ ಬೇಡ್ವಾ.. ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ..
ನನಗೆ ರಜಾ ಸಿಗುವುದು ಅನುಮಾನವಿತ್ತು..
ಏನ್ ಮಾಡೋದು..?

ಆ ನಾಲ್ವರಲ್ಲಿ ನಾನು ವಾರದ ರಜಾ ಪಡೆದು ಬಂದಿದ್ದೆ..
ರಾಘು ಇನ್ನೂ ಓದುತ್ತಿದ್ದ..
ಕಿಟ್ಟು, ಮೋಹನ ಸ್ವ ಉದ್ಯೋಗದಲ್ಲಿದ್ದರು..
ನನಗೆ ಆಫೀಸಿನಲ್ಲಿ ರಜಾ ಕೊಡ್ತಾರೋ ಇಲ್ಲವೋ ಎನ್ನುವ ಶಂಕೆ..
ಕೊನೆಗೆ ಅಳುಕಿನಿಂದ ಆಫೀಸಿಗೆ ಪೋನ್ ಮಾಡಿದೆ..
ನನ್ನ ಮೇಲಿನವರು `ಏನ್ ವಿನಯ್,ಎಂದರು..
ಸರ್ ನಾಳೆ ಆಫೀಸಿಗೆ ಬರೋದಿಕ್ಕಾಗೋದಿಲ್ಲ ಎಂದೆ..
ಯಾಕೆ ಏನಾಯ್ತು ಎಂದರು/..
ಹುಷಾರಿಲ್ಲ.. ತುಂಬಾ ಕೋಲ್ಡಾಗಿದೆ. ಚಿಕ್ಕದಾಗಿ ಫೀವರ್ರು ಬೇರೆ ಎಂದು ರೈಲು ಬಿಟ್ಟೆ..
ಅದಕ್ಕವರು ಏನ್ರಿ.. ನಿನ್ನೆ ಚನ್ನಾಗಿದ್ರಲ್ರಿ.. ಅಷ್ಟು ಬೇಗ ಏನಾಯ್ತು  ಎಂದರು//
ಗೊತ್ತಿಲ್ಲ ಸಾರ್.. ಏನೋ ಹೆಚ್ಚೂ ಕಡಿಮೆಯಾಗಿದೆ ಅನ್ಸುತ್ತೆ.. ಎಂದೆ..
ನಿಮ್ದೊಳ್ಳೆ ಗೋಳಾಯ್ತು ಕಣ್ರಿ.. ಓಕೆ.. ರೆಸ್ಟ್ ತಗೊಂಡು ಬನ್ನಿ.. ನಾಡಿದ್ದಿನಿಂದ ನೈಟ್ ಡ್ಯೂಟಿ ಎಂದರು..
ಮನದಲ್ಲಿ ಗಾಳಿಯ ಬಲೂನು ಒಡೆದ ಅನುಭವ..
ಆದರೆ ರಜಾ ಸಿಕ್ಕಿತೆಂಬ ಖುಷಿ..

ಅದನ್ನು ಮಿತ್ರವೃಂದದ ಬಳಿ ಹೇಳಿದಾಗ ಅವರಿಗೂ ಖುಷಿಯಾಗದೇ ಇರಲಿಲ್ಲ/..
ವಯನಾಡಿಗೆ ಹೋಗುವ ಮೊದಲು ಊಟಿ ಬೆಟ್ಟವನ್ನಿಳಿದು ಗುಡಲೂರಿಗೆ ಹೋಗಿ ಅಲ್ಲಿಂದ ಹೋಗಬೇಕಿತ್ತು..
ಅದಕ್ಕಾಗಿ ಮೊದಲು ಗುಡಲೂರಿಗೆ ಹೋಗುವಾ ಎಂದು ನಮ್ಮ ಪ್ಲಾನ್ ತಯಾರಾಯಿತು..
ಊಟಿಯಿಂದ 40ಓ, 45ಓ ಕಿ.ಮಿ ದೂರದಲ್ಲಿದ್ದ ಗುಡಲೂರಿನ ಮಾರ್ಗ ರಾಷ್ಟ್ರೀಯ ಹೆದ್ದಾರಿ..
ನಿಸರ್ಗದ ಖನಿ..
ಎಲ್ಲವನ್ನೂ ಕಣ್ತುಂಬಿಕೊಂಡು ಹೋಗಬೇಕೆಂದರೆ ಕನಿಷ್ಟ 4 ತಾಸುಗಳಾದರೂ ಬೇಕೇಬೇಕು..
ಮಾರ್ಗಮಧ್ಯ ತಮಿಳಿನ ಉದ್ದುದ್ದ ಹೆಸರಿನ ಊರುಗಳು..
ಪೈಕರ ಡ್ಯಾಂ, ಉದ್ದುದ್ದ ನೀಲಗಿರಿ ಕಾಡುಗಳು.. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ ಬಿಡಿ..

(ಮುಂದುವರಿಯುತ್ತದೆ.,...,)

Wednesday, July 3, 2013

ಮಹಾಮಳೆಯ ನೋಟಗಳು

ಮಹಾಮಳೆಯ ನೋಟಗಳು


ಕಳೆದೆರಡು ದಿನಗಳ ಹಿಂದೆ ವರುಣ ರಾಯ ರಜಾ ಹಾಕಿದ್ದ.. ಆಮೇಲಿನದೆಲ್ಲ ಓವರ್ ಡ್ಯೂಟಿ...
ಟೈಂ ಪಿಕಪ್ ಮಾಡಲು ನಮ್ಮ ಡ್ರೈವರ್ರುಗಳು ಬಸ್ಸನ್ನು ಯದ್ವಾತದ್ವಾ ಓಡಿಸುವಂತೆ..
ಶುರುವಾಯ್ತು ನೋಡಿ... ಮಹಾಮಳೆ...
ಉತ್ತರಖಂಡವನ್ನು ನೆನಪಿಸಿಬಿಟ್ಟಿತು..


ಸೋಮವಾರ ಸಂಜೆ ಜಿಟಿ ಜಿಟಿ ಎಂದ ಮಲೆ ಮಂಗಳವಾರ ಮದ್ಯಾಹ್ನವೂ ಜಿಟಿಜಿಟಿಯಿತ್ತು..
ಆರಿದ್ರಾ ಮಳೆಯ ಅಬ್ಬರ ಕಾಣ್ತಾ ಇಲ್ಲವೋ ಅಂದುಕೊಂಡಿದ್ದೆವು...
ಮಂಗಳವಾರ ಸಂಜೆ ಶುರುವಾಯ್ತು ನೋಡಿ ಮಳೆ...
ಸ್ಮಾಲ್ ಬ್ರೇಕ್.... ಇಲ್ಲವೇ ಇಲ್ಲ...
ಜೊರ.. ಜೊರ... ಜೊರ...
ಒಂದೇ ವೇಗ... ಮೈಲೇಜ್ ಮೆಂಟೇನ್ ಮಾಡುತ್ತಿತ್ತು...
ಒಂದೇ ಏಟಿಗೆ ಭೂಮಿ ತನ್ನ ಬಿಸಿಯನ್ನೆಲ್ಲ ಕಳೆದುಕೊಂಡು ಹಸಿಯಾಗಿತ್ತು...


ಬುಧವಾರ ಮದ್ಯಾಹ್ನದ ವರೆಗೂ ಮಳೆ ಬ್ರೇಕಿಲ್ಲದೆ ಸುರಿಯುತ್ತಿತ್ತು.
ಪರಿಣಾಮ ನೋಡಿ ಭೀಖರವಾಗಿತ್ತು..
ಹಳ್ಳ, ಕೊಳ್ಳಗಳು ತುಂಬಿದವು.. ಬೋರ್ಘರೆದವು...

ಜೊರಗುಡುವ ಮಳೆ.. ಮಂಗಳವಾರ ರಾತ್ರಿ ನಾನು ಮಲಗಿದ್ದೆ.. ಮಳೆಯ ಸದ್ದಿಗೆ ಮಧ್ಯರಾತ್ರಿ ಪದೆ ಪದೆ ಎಚ್ಚರಾಗುತ್ತಿತ್ತು...
ನಮ್ಮೂರಿನಿಂದ ಅರ್ಧ ಮೈಲಿ ದೂರದಲ್ಲಿ ಅಘನಾಶಿನಿ ಹರಿಯುತ್ತಾಳೆ.. ಅದರ ಸದ್ದು ಮೊದ ಮೊದಲು ಚಿಕ್ಕದಿತ್ತು.. ಕೊನೆ ಕೊನೆಗೆ ದೊಡ್ಡದಾಯಿತು..
ಬೆಳಿಗ್ಗೆಯಾದರೆ ಸಾಕಪ್ಪಾ ಅಂದುಕೊಂಡೆ..
ಅದ್ಯಾವುದೋ ಜಾವದಲ್ಲಿ ಎಚ್ಚರಾಯಿತು..
ಸುತ್ತೆಲ್ಲ ಬೆಳಕು..
ಮಳೆ ಸುರಿಯುತ್ತಲೇ ಇತ್ತು..
ಆದರೆ ಗಂಟೆ ಎಸ್ಟಿರಬಹುದು? ನೋಡಲು ಕರೆಂಟಿರಲಿಲ್ಲ..
ಸಿಕಾಡಗಳ ಟ್ರೊಂಯ್ ಟ್ರೊಂಯ್ ಸದ್ದಿನ ಮೇಲೆ ಸಮಯ ಅಳೆಯಲು ಯತ್ನಿಸಿದೆ. ಊಹುಂ ಕೇಳಲಿಲ್ಲ..
ಅರೇ.. ಇದೆಂತ ಭ್ರಮೆ ಅಂದುಕೊಂಡೆ..
ಆಮೇಲೆ ಮತ್ತೆ ನಿದ್ರೆ.. ಅದೆಷ್ಟೋ ಸಮಯದ ನಂತರ ಶಿರಸಿಯಿಂದ ನಮ್ಮ ಸರ್ ಪೋನ್ ಮಾಡಿದರು.. ಮನೆಯಲ್ಲಿ ಯಾರಿಗೂ ಎಚ್ಚರಿರಲಿಲ್ಲ..
ಟೈಂ ನೋಡಿದರೆ 8.30.. ಆಗಸ ನೋಡಿದೆ.. 6 ಗಂಟೆಗೆ ಆಗುವಂತಹ ಮಬ್ಬು ಬೆಳಗು..
ಇದೆನಾಯ್ತು ಅಂದರೆ ಅದೇ ಮಳೆ...


ತೋಟದ ಕೆಳಗೆ 40 ಅಡಿ ಕೆಳಗೆ ಅಘನಾಶಿನಿ ಹರಿಯುತ್ತಿದ್ದಳು.. ನೋಡಿ ಬರೋಣ ಎಂದು ಹೊರಟೆ..
ಆಕೆ ರೌದ್ರಾವತಾರ ತೋರಿರಲಿಲ್ಲ..
ಬರುವಾಗ ಅಘನಾಶಿನಿ ನೆರೆ ಬಂದರೆ ಪೋಟೋ ತಗೊಂಡು ಬನ್ನಿ.. ಹುಡಾಯಲೆ ಹೋಗಡಿ..ಎನ್ನುವ ನಮ್ಮ ಸರ್ ಮಾತಿಗೆ ಬೆಲೆ ಕೊಟ್ಟು ಪೋಟೋ ತೆಗೆಯೋಣ ಎಂದು ಯತ್ನಿಸಿದರೆ ವಂದೂ ಸರಿ ಬರಲಿಲ್ಲ..
ಹೊಳೆಯ ದಂಡೆಗೆ ಹೋದೆ.. ಕ್ಷಣಕ್ಷಣಕ್ಕೂ ನೀರು ಉಕ್ಕುತ್ತಿತ್ತು.. ಒಂದಷ್ಟು ಪೋಟೋ ಕ್ಲಿಕ್ಕಿಸುವ ವೇಳಗೆ ಒಂದು ಮಹಾಮಳೆ ಸುರಿಯಿತು ನೋಡಿ..
ಎದ್ದೋಡಿ ಬಂದೆ..
ಮನೆಗೆ ಮರಳುವಷ್ಟರಲ್ಲಿ ಮನೆಯೊಳಗೆಲ್ಲ ನೀರು..ನೀರು..

ಹೊಟ್ಟೆಗೆ ಕೊಂಚ ತಿಂಡಿ ತಿಂದು ಮುಗಿಸುವ ವೇಳೆಗೆ ಸುದ್ದಿ ಬಂದಿತ್ತು.. ಶಿರಸಿಯ ಚಿನ್ನಾಪುರ ಕೆರೆ ಒಡೆದಿದೆ.. ಅಂತ.. ಕೋಟೆಕೆರೆ ತುಂಬಿದೆಯಂತೆ.. ಯಾವ ಕ್ಷಣದಲ್ಲೂ ಒಡೆಯಬಹುದು.. ಅಂತಲೂ ಅಂದರು ನಮ್ಮ ವಿಶ್ವಣ್ಣ..
ಸುದ್ದಿ ಮಾಡಲು ಹೋಗಬೇಕು...
ಮಹಾಮಳೆ.. ಎಲ್ಲ ಕಡೆ ನೆರೆ ಬಂದಿದೆ.. ಎಲ್ಲಿ ಸುದ್ದಿ ಮಾಡೋಣ ಹೇಳಿ..?
ಅಷ್ಟರಲ್ಲಿ ಕಾನಸೂರಿನಿಂದ ಸುಭಾಷ ನಾಯ್ಕರು ಪೋನ್ ಮಾಡಿ ಅರ್ಜೆಂಟು ಬನ್ನಿ ನಮ್ಮೂರಿನ ನಾಲ್ಕು ಮನೆ ಮುಳುಗಿದೆ ಎಂದರು.
ದಡಬಡಿಸಿ ಹೋಗಬೇಕೆಂದರೂ ನಮ್ಮೂರಿನ ಗಬ್ಬು ರಸ್ತೆಯಲ್ಲಿ ಹುಗಿಯುತ್ತ ಏಳುತ್ತ, ಬೀಳುತ್ತ ಆರು ಕಿ.ಮಿ ಕಾನಸೂರು ಮುಟ್ಟುವ ವೇಳಗೆ ಅರ್ಧ ಗಂಟೆ...
ಮಳೆ ಅಬ್ಬರಕ್ಕೆ ಅಘನಾಶಿನಿಯ ಸೋದರ ಸಂಬಂಧಿ ಉಕ್ಕಿತ್ತು...
ಪರಿಣಾಮ ನದಿಯ ಪಕ್ಕದಲ್ಲಿದ್ದ ನಾಲ್ಕು ಮನೆಗೆ ನೀರು ನುಗ್ಗಿ ಐದನೇ ಮನೆಯ ಒಳಗೆ ಇಣುಕುತ್ತಿತ್ತು...

ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದರು.. ಸಾಮಾನು ಸರಂಜಾಮು ಸಾಗಾಟದಲ್ಲಿ ನಿರತರಾಗಿದ್ದರು..
ತಾ.ಪಂ, ಗ್ರಾ.ಪಂ, ಸೇರಿದಂತೆ ಇಲಾಖೆಗಳ ಹಲವು ಮಂದಿ ಆಗಲೇ ಆಗಮಿಸಿದ್ದರು.. ಕೊನೆಗೆ ಎಷ್ಟು ನಷ್ಟ.. ಆಯ್ತು ಎನ್ನುವ ಆಲೋಚನೆ ಅವರದ್ದು.. ಓಯ್ ಇವ್ರೆ.. ನಮ್ಮ ಮನೆಯ ಇದೂ ಕೊಚ್ಚಿಕೊಂಡು ಹೋಗಿದೆ... ಎಂದು ಮರೆತಿದ್ದದ್ದನ್ನು ಲೀಸ್ಟಿನಲ್ಲಿ ಸೇರಿಸುತ್ತಿದ್ದರು...
ಕಳೆದ 3 ವರ್ಷದ ಹಿಂದೆ ಅಘನಾಶಿನಿ ನದಿಯ ಬಲದಂಡೆಗೆ ಪಿಚ್ಚಿಂಗ್ ಕಟ್ಟಿ ಅಂತ ಹೇಳಿದ್ವಿ.. ಇಲಾಖೆಯವರು `ಕಾಗೆ' ಹಾರಿಸಿದರು.. ಅಂತ ರಾಜಕಾರಣದಲ್ಲಿ ಮಾತನಾಡುತ್ತಿದ್ದ ಹಲವರು ಅಲ್ಲಿದ್ದರು..

ಪೋಟೋ.. ಅಹವಾಲು ಎಲ್ಲ ಪಡಕೊಂಡು ಹೊಸಗದ್ದೆ ಸೇತುವೆಗೆ ಹೋಗಬೇಕು ಎಂದು ಗಾಡಿ ತಿರುಗಿಸಿದೆ..
ಕಲ್ಮಟ್ಟಿ ಹಳ್ಳದ ನೀರು ಉಕ್ಕುಕ್ಕಿ ಹರಿಯುತ್ತಿತ್ತು...
ಬಾಳೆಸರ ರಸ್ತೆಯನ್ನು ಬಂದು ಮಾಡಿ ಬಿಡುತ್ತೇನೆ ಎಂದು ಮೈಮೇಲೆ ಬಂದವರಂತೆ ಆಡುತ್ತಿತ್ತು..
ಹಾಗೂ ಹೀಗೂ ಮುನ್ನಡೆದೆ..
ಕೋಡ್ಸರಕ್ಕೆ ಹೋಗುವಾಗ ಅಲ್ಲೊಂದು ಕಡೆ ಭೂಕುಸಿತದ ಜಾಗವಿದೆ..
ನಾನು ಹೋಗುವ ಮುನ್ನ ಒಂದಿಷ್ಟು ಭೂ ಕುಸಿತವಾಗಿತ್ತು..
ಪರಿಣಾಮ ಕರೆಂಟು ಕಂಬ ಹಾಗೂ ಕಂಬದ ಜಡೆಗಳಾದ ಲೈನುಗಳನ್ನೆಲ್ಲ ಮುಲಾಜಿಲ್ಲದೇ ಕಿತ್ತು ಹಾಕಿತ್ತು...
ಅದರ ಪೋಟೋ ತೆಗೆಯೋಣ ಅಂತ ಗಾಡಿ ನಿಲ್ಲಿಸಿದೆ..
ಅಲ್ಲಿ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದ ನಾಲ್ಕು ಜನ ಯಂಗ್ ಸ್ಟಾರ್ ಗಳು.. ಹೋಯ್.. ಮೊದ್ಲು ಇತ್ಲಾಗೆ ಬನ್ನಿ.. ಎಂದು ಕೂಗಿದರು..
ಗಡಬಡಿಸಿ ಮುಮದೆ ಹೋದೆ..
ನೀವೆಂತ.. ಬೆಳಿಗ್ಗೆ ಅಲ್ಲಿ ಕುಸಿದಿತ್ತು.. ಈಗ ಅದೇ ಅಲ್ಲಿ ನೋಡಿ ಮಣ್ಣು ಅರ ಸರ ಇಳಿತಾ ಅದೆ.. ಈಗ ಕುಸಿತದೆ ನೋಡಿ ಅಂದರು..

ಲೈವ್ ಆಗಿ ಕಣ್ಣೆದುರು ಕುಸಿಯುತ್ತದೆ ಅಂತಾದರೆ ಪೋಟೋ ಕ್ಲಿಕ್ಕಿಸೋಣ ಅಂತ ಕಾದೆ..
ಊಹೂಂ.. ವಂದಿಂಚೂ ಕುಸಿಯಲಿಲ್ಲ.. ಮಣ್ಣು ಮಾತ್ರ ಆಗಾಗ ನಾ ಬಿದ್ದೆ ನಾ ಬಿದ್ದೆ ಅಂತ ಬೀಳುತ್ತಿತ್ತು..
ಕೊನೆಗೆ ಹೊಸಗದ್ದೆ ಸೇತುವೆ ಮೇಲೆ ನೀರು ಬಂದದೆ ಎಂಬ ಗಾಳಿ ಸುದ್ದಿ ಕೇಳಿ ಗುಡ್ಡ ಕುಸಿತದ ಲೈವ್ ಪ್ರೋಗ್ರಾಮನ್ನು ಅಲ್ಲಿಗೆ ಬಿಟ್ಟು ಹೋದೆ...
ನಾನು ಹೊಸಗದ್ದೆ ಕಡೆಗೆ ಹೋದಂತೆಲ್ಲ ದಾರಿಯಲ್ಲಿ ಸಿಕ್ಕ ಬೈಕುಗಳು, ಬಸ್ಸು, ವಾಹನಗಳು ಹೋಯ್ ದಾರಿ ಬಂದಾಗದೆ.. ಹೋಗ್ಲಿಕ್ಕಾಗೂದಿಲ್ಲ.. ಎನ್ನುತ್ತಿದ್ದರು..ಆದರೂ ಮುಂದುವರಿಯುತ್ತಿದ್ದ ನನ್ನನ್ನು ಪಿರ್ಕಿಯಂತೆ ಕಂಡು ಮುಂದಕ್ಕೆ ಸಾಗುತ್ತಿದ್ದರು..

ಹೊಸಗದ್ದೆ ಸೇತುವೆಯತ್ತ ಹೋದರೆ ಸೇತುವೆ ಮೇಲೆ ನೀರೇ ಇಲ್ಲ..!!!
ಬರೀ ಜನ...
ಅಘನಾಶಿನಿ ಸೇತುವೆಗೆ ಮುತ್ತಿಕ್ಕುತ್ತ ಸಾಗುತ್ತಿತ್ತು..
ಆಗೀಗ ಸೇತುವೆ ಮೇಲೆ ನೀರು ಉಕ್ಕುತ್ತಿತ್ತು..
ಹೊಸಗದ್ದೆ ಹಾಗೂ ಸುತ್ತಮುತ್ತಲ ಜನ ಜಮಾಯಿಸಿದ್ದರು..
ಉಕ್ಕೇರುವ ಹೊಳೆ ನೋಡಲು ಬಂದಿದ್ದಾರೆ ಎಂದುಕೊಂಡೆ..
ಹೊಳೆ ನೋಡುವವರು ಸೇತುವೆ ಮೇಲೆ ಯಾಕೆ ನಿಂತಿದ್ದಾರೆ ಎನ್ನಿಸಿತು..
ಯಾರಾದ್ರೂ ಹೊಳೆಗೆ ಹಾರಿದರೇ..? ಅದರ ಪರಾಮರ್ಶೆ ಮಾಡ್ತಾ ಇದ್ದಾರೆಯೇ ಎಂಬೆಲ್ಲ ಶಂಕೆ ಮೂಡಿ ಮನದಲ್ಲಿ ಭೀತಿ..

ಹೋಗ್ಲಿ ಎಂದು ಮುಂದಕ್ಕೆ ಹೋದರೆ ಅಲ್ಲಿ ಜಮಾಯಿಸಿದ್ದ ಜನರ ಕೆಲಸವೇ ಬೇರೆ ನಮೂನಿಯಾಗಿತ್ತು..
ಹೊಳೆಯಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿಯನ್ನು ಕ್ಯಾಚ್ ಹಿಡಿಯುವುದಕ್ಕಾಗಿ ಜನರು ಸೇರಿದ್ದರು.. ಸೇತುವೆ ಮೇಲೆ ನಿಂತು ಅಲ್ಲ ಬರುವ ತೆಂಗಿನ ಕಾಯಿಯನ್ನು ಹಿಡಿಯಲು ಸ್ಪರ್ಧೆಯೇ ನಡೆಯುತ್ತಿತ್ತು..
ಮಹಿಳೆಯರೂ ಪುರುಷರಿಗೆ ಪೈಪೋಟಿ ನೀಡುತ್ತಿದ್ದರು..
ಆದರೆ ಮಹಿಳೆಯರು ತೆಂಗಿನ ಕಾಯಿಗೆ ಮುಗಿ ಬೀಳುತ್ತಿರಲಿಲ್ಲ.
ಬದಲಾಗಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ಕಟ್ಟಿಗೆ, ಕುಂಟೆಗಳನ್ನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ರು..

ಆಗಾಗ ನದಿ ನೀರು ಸೇತುವೆ ಮೇಲೆ ಉಕ್ಕುತ್ತಿತ್ತುಉ.
ಆಗೆಲ್ಲ ಜನಮಾನಸದಲ್ಲಿ ಹೋ ಎನ್ನುವ ಕೂಗು...
ಆದರೂ ಇವರ ಕಾಯಕ ನಿಲ್ಲುತ್ತಿರಲಿಲ್ಲ..
ನಂಗೆ 12 ಕಾಯ್ ಸಿಕ್ತು .. ನಂಗೆ 14 ಎನ್ನುವ ಲೆಕ್ಕಾಚಾರವೂ ಇತ್ತು..
4 ವರ್ಷದವರಿಂದ ಹಿಡಿದು 85 ವರ್ಷದ ವರೆಗೆ ಎಲ್ಲ ವಯೋಮಾನದ ಗಂಡು ಹಾಗೂ ಹೆಣ್ಣುಗಳು ಎಲ್ಲಿದ್ದವು..

ದಾರಿಯಲ್ಲಿ ಸಾಗುವ ವಾಹನಗಳ ಕಡೆಗೆ ಖಬರಿರಲಿಲ್ಲ..
ಇವರದ್ದೇ ಆಟ..
ದೇವರೇ ಈ ಸೇತುವೆ ಅಘನಾಶಿನಿಯ ಆರ್ಭಟಕ್ಕೆ ಕೊಚ್ಚಿ ಹೋದರೆ ಕತೆಯೇನಪ್ಪಾ.. ಎನ್ನುವ ಭಯದ ಚಿಕ್ಕ ಶಾಕ್..
ಹಳೆ ಸೇತುವೆ.. ಸೇತುವೆಯ ಅಕ್ಕಪಕ್ಕದ ಸೈಡ್ ಬಾರ್ ಗಳು ಕಿತ್ತುಹೋಗಿವೆ..
ಯಾರಾದ್ರೂ ತೆಂಗಿನ ಕಾಯಿ ಅಥವಾ ಕುಂಟೆಗಳನ್ನು ಕ್ಯಾಚ್ ಮಾಡಲು ಹೋಗಿ ಲಗಾಪಾಟಿ ಹೊಡೆದರೆ ಏನಪ್ಪಾ.. ಎಂದು ಕೊಂಡು ಹಗೂರಕ್ಕೆ ಕ್ಯಾಮರಾ ತೆಗೆದೆ..

ಆಗ ಶುರುವಾಯ್ತು ನೋಡಿ..
ಹೈಕಳೆಲ್ಲ..
ಯಾವ ಟೀವಿ? ಎಂದರು..
ಟಿವಿ ಅಲ್ಲ ಕಾಣ್ತದಾ.. ಪೇಪರ್ರಿರಬೇಕು ಎನ್ನುವ ವೇದವಾಕ್ಯ ಇನ್ನೊಬ್ಬನದ್ದು..
ಸುಮ್ನಿರ್ರಾ.. ಪೇಸ್ ಬುಕ್ಕಿಗೆ ಹೊಡ್ಕಳಾಕೆ ಹಿಡಿದಿದ್ದು ಎಂದು ಗುಂಪಲ್ಲಿರುವ ಗೋವಿಂದನ ಮಾತು..
ಎಲ್ಲ ಕಿವಿಗೆ ಬಿತ್ತು..
ನನ್ನ ಪಾಡಿಗೆ ನಾನು ಕ್ಯಾಮರಾ ಕ್ಲಿಕ್ ಕ್ಲಿಕ್..
ಕೊನೆಗೆ ಇಡಿಯ ಸೇತುವೆ ಮೇಲೆ ನಿಧಾನವಾಗಿ ನೀರು ಉಕ್ಕಲಾರಂಭಿಸಿತು..
ಅದರ ಪರಿವೆಯೂ ಇಲ್ಲ..
ಇಡಿ ಸೇತುವೆ ಪೋಟೋ ಹೊಡೆದುಕೊಳ್ಳಬೇಕಿತ್ತು...
ಕೊನೆಗೆ ಆ ಗುಂಪಿನ ಮುಖ್ಯಸ್ಥರ ಬಳಿ ಸ್ವಲ್ಪ ಸೇತುವೆಯಿಂದ ಆಚೆ ಹೋಗಿ ಎಂದೆ..
ನಮ್ ಪೋಟೋ ಹೊಡೀರಿ ಹೋಗ್ತೇವೆ ಅಂದ..
ಸರಿ ಎಂದೆ..
ಆತನಂತೂ ಸ್ವರಗಕ್ಕೆ 12 ಗೇಣು...
ಎಲ್ಲಾರನ್ನೂ ದೂರಕ್ಕೆ ಸರಿಸುವ ಆತನ ಗತ್ತು ಗಾಂಭೀರ್ಯ ಎಲ್ಲಾ ನೋಡಿದಾಗ ಖಂಡಿತವಾಗಿಯೂ ಮುಂದಿನ ಸಾರಿ ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸುತ್ತಾನೆ ಎನ್ನಿಸಿತು. ನೆರೆಯ ಎಫೆಕ್ಟ್ ಪೋಟೋ ಹೊಡೆಯೋಣ ಎಂದುಕೊಂಡರೆ ಈ ಹೈದರ ಪೋಟೋ ಸೆಷನ್ ಮಾಡಬೇಕಾಗಿ ಬಂತಲ್ಲ ದೇವರೆ.. ಅಂದುಕೊಂಡೆ.. ಅಲ್ಲಿದ್ದವನೊಬ್ಬ ವೀಡಿಯೋ ಮಾಡ್ಕೋ ಅಂದ..
ಅಷ್ಟರಲ್ಲಿ ಪೋನು ಕಿಣಿ ಕಿಣಿ..
ಕಾರವಾರದ ಮಂಜು ವೀಡಿಯೋ ಮಾಡ್ಕಳಿ ನನಗೆ ಕಳಿಸಿ ಅಂದ..
ಸಿಕ್ಕಿದ್ದೆ ಸಿವಾ.. ಅದೂ ಆಯ್ತು...

ಸುಮಾರು ಪೋಟೋ ತೆಗೆದ ನಂತರವೂ ಅಗನಾಶಿನಿ ಸೇತುವೆಯ ಮೇಲೆ ಬರಲಿಲ್ಲ..
ಕಾದುಕಾದುವ್ಯರ್ಥ..
ಅದ್ಯಾವನೋ ಪುರ ಜನ ಹೇಳಿದ..
ಬಾಳೂರಲ್ಲಿ ಮನೆಗೆ ನೀರು ನುಗ್ಗಿದೆ ಅಂದ..
ಹೋಗಲು ಸಾಧ್ಯವೇ ಎಂದರೆ ರಸ್ತೆಯಲ್ಲಿ ನೀರು ಬಂದಿದೆ ಎಂದ..
ಟುಸ್ಸಾಯ್ತು ಉತ್ಸಾಹ..
ಅಷ್ಟರಲ್ಲಿ ಶಿರಸಿಯಿಂದ, ಬೇಗ ಆಫೀಸಿಗೆ ಬನ್ನಿ.. ಕೋಟೆಕೆರೆ ಢಂ ಅನ್ನೋ ಛಾನ್ಸಿದೆ ಎನ್ನುವ ದೂರವಾಣಿ...
ಮರಳಿ ದಾರಿ ಹಿಡಿದೆ..
ಕೋಡ್ಸರದ ಭೂಕುಸಿತ ಜಾಗಕ್ಕೆ ಬಂದರೆ.. ಅಲ್ಲಿ ಅದೇ ಯಂಗ್ ಸ್ಟಾರ್ಸ್ ಅವರಿಂದ ಅದೇ ಡೈಲಾಗ್ ಪುನರಾವರ್ತನೆ..
ಭೂಮಿಯೂ ಅಷ್ಟೇ ಈಗ ಕುಸಿತೆನೆ ನೋಡು..
ಈಗ ಕುಸಿತೇನೆ ನೋಡು..ಅನ್ನುತ್ತಿತ್ತು.. ಬಿಟ್ಟು ಹೋದೆ..

ಕಾನಸೂರಿಗೆ ಬರುವ ವೇಳೆಗೆ ಸುಭಾಷ್ ನಿಂದ ಮತ್ತೆ ಪೋನ್..
ಮಾದ್ನಕಳ್ ಸೇತುವೆ ಮೇಲೆ ನೀರು ಹೋಗ್ತಾ ಇದೆ.. ನೋಡಿ.. ಅಂದ..
ಹೋಗಿ ನೋಡಿದರೆ.. ಸೇತುವೆಯೇ ಕಾಣದಂತೆ ಮಳೆ ನೀರು..
ಕೆಂಪು ಕೆನ್ನೀರು.. ರಾಡಿ ರಾಡಿ.. ಪಕ್ಕದ ತೆಂಗಿನ ತೋಟಗಳಲ್ಲೆಲ್ಲ ನೀರೇ ನೀರು..
ಪಾಪ ಅಲ್ಲಿ 4 ಗಂಟೆಗಳಿಂದ ಸೇತುವೆ ದಾಟಲು ನಿಂತುಕೊಂಡಿದ್ದರಂತೆ...
ಮಳೆ ನೀರು ಬಿಡಲೊಲ್ಲದು..

ನಾನೂ ಸೇತುವೆ ಮೇಲೆ ಓಡಾಡಿದೆ...
ಮಳ್ಳಂಡೆ ತನಕ ನೀರು...
ತಂಪು ತಂಪು ಕೂಲ್ ಕೂಲ್ ಆಯಿತು.. ಅವ್ಯಕ್ತ ಬೀತಿ ಬಗಲಿನಲ್ಲಿ ಬೆವರನ್ನೂ ತಂದಿತು...
ಪೋಟೋ ಸಾಕಷ್ಟು ತೆಗೆದುಕೊಂಡೆ..
ಅಷ್ಟರಲ್ಲಿ ಆಗಲೇ ಶಿರಸಿಯಿಂದ ಮತ್ತೆರಡು ಸಾರಿ ಪೋನ್ ಬಂದಿತ್ತು..

ಶಿರಸಿಗೆ ಹಾಗೂ ಹೀಗೂ ಹೋಗುವ ವೇಳೆಗೆ ಮಳೆ ಕಡಿಮೆ ಆಗಿತ್ತು..
ಕೋಟೆಕೆರೆಗೆ ಬಂದರೆ ನೀರಿನ ಪ್ರಮಾಣ ಇಳಿದಿತ್ತು..
ಥೋ ನೀವು ಆಗಲೇ ಬರಬೇಕಿತ್ತು...
ಪೋಟೋ ಮಿಸ್ ಮಾಡಿಕೊಂಡ್ರಿ ಎಂದು ಜೊತೆಗಾರ ಪತ್ರಕರ್ತರು ಛೇಡಿಸಿದರು...
ಅವರಿಗೆ ನಾನು ಬೇರೆ ಕಡೆಯ ನೆರೆ ಪೋಟೋ ತೆಗೆಯಲು ಹೋದ ಸುದ್ದಿಯನ್ನು ಹೇಳಲೇ ಇಲ್ಲ..
ಯಾವಾಗಲೂ ಸತ್ಯ ಹರಿಶ್ಚಂದ್ರನ ಪೋಸು ಕೊಡುತ್ತಿದ್ದ ನನು ಈಗ ಮಾತ್ರ ಸುಳ್ಳು ಹರಿಶ್ಚಂದ್ರನಾದೆ..!!

ಅಂತೂ ಇಂತೂ ಮಳೆಯ ಕುರಿತು ರಿಪೋರ್ಟ್ ಬರೆದು ಕಳಿಸಿದಾಗ.. ಅದೇನೋ ದಿಲ್ ಖುಷ್...
ಪತ್ರಕರ್ತನಾಗಿದ್ದಕ್ಕೆ ಇಂತದ್ದು ಕಾಮನ್ನು ಗುರು ಎಂದು ಅದ್ಯಾರೋ ಹೇಳಿದರು..
ಬೆಂಗಳೂರಲ್ಲಿದ್ದರೆ ಹಿಂಗಾಗ್ತಿತ್ತಾ ಎಂದವರೂ ಇದ್ದಾರೆ,,,
ಏನೋ ಒಂಥರಾ ಎನ್ನಿಸಿದರೂ
ಮನದಲ್ಲಿ ಮಹಾಮಳೆಯ ನೆನಪು..
ಉತ್ತರಕನ್ನಡವೂ ಉತ್ತರಕಾಂಡದಂತಾಯ್ತು.. ಎಂಬಂತೆ...

Monday, June 24, 2013

ಆ ಸಾಲಿಗೆ ಸೇರದ ಹನಿಚುಟುಕಗಳು

ಆ ಸಾಲಿಗೆ ಸೇರದ ಹನಿಚುಟುಕಗಳು

ಮೊದಲೊಂಚೂರು : ಬರಿ ಹನಿಕವಿಯಾಗಬೇಡ ಮಾರಾಯಾ.. ಜಾಸ್ತಿ ಕಾಲ ನಿಲ್ಲೋದಿಲ್ಲ.. ಹನಿಯಿದ್ದದ್ದು ಬನಿಯಾಗಲಿ.. ಎಂದು ಅನೇಕ ಮಿತ್ರರು ಅಮದಕಾಲತ್ತಿಲೆ ಸಲಹೆ ನೀಡುತ್ತಿದ್ದರು.. ಆ ಸಲಹೆಯನ್ನು ಮನ್ನಿಸಿ ಆಗಾಗ ಅನೇಕ  ವ್ಯರ್ಥ ಪ್ರಯತ್ನಗಳನ್ನೂ ಮಾಡಿದ್ದೆ. ಅಂದಿನ ಸಮಯದಲ್ಲಿ ನಾನು ನಡೆಸಿದ ಕೆಲವು ವ್ಯರ್ಥ ಪ್ರಯತ್ನಗಳು ಈ ಹನಿಗಳು.. ಎಲ್ಲೋ ಅಡಿಯಲ್ಲಿ ಬಿದ್ದಿದ್ದು ಸಿಕ್ಕಿತು.. ಓದಿ ಹೇಳಿ.. ನಿಮ್ಮಭಿಪ್ರಾಯ

58.ಬಯಕೆ

ಉರುಳುತ್ತಿರುವ ತಲೆ
ಅರಳುತ್ತಿರುವ ಹೂ
ಎರಡೂ ಬಯಸಿದ್ದು
ಪ್ರೀತಿ ಮಾತ್ರ ||



59.ಸಾಂತ್ವನ
ಅಳುವ ಮನಕ್ಕಷ್ಟು ಸಮಾಧಾನ
ಭಾವನೆಗಳು ಜೋಪಾನ
ಪ್ರೀತಿಯ ಸೋಪಾನ
ಅಳುವೆಡೆಗೆ ನಗುವಿಡುವ ತೀರ್ಮಾನ
ಅದು ಬದುಕ ಸಾಂತ್ವನ ||


60.ಕೊನೆ ಮೊದಲು
ಗೆದ್ದಾಗ ನಗು,
ಅತ್ತಾಗ ದುಃಖ |
ನಡುವೆ ಸಾಧನೆ,
ಒಳಗೆ ವೇದನೆ.|
ಬಾಳಲ್ಲಿ ಸರಸ
ಜೊತೆಯಲ್ಲಿ ವಿರಸ..||
ಕೊನೆಯಿಲ್ಲ ಮೊದಲಿಲ್ಲ
ಎರಡೂ ಬೇರೆ.., ಎರಡೂ ಒಂದೇ ..||

61.ಅಂತ್ಯ
ಅವರೋ ಜೋಡಿ
ಅಮರ ಪ್ರೇಮಿ |
ಅವರಿಗೆ ಸಿಕ್ಕಿದ್ದು ಮಾತ್ರ
ಮರಣ ಭೂಮಿ ||


62.ನನ್ನ-ನಿನ್ನ ಪ್ರೀತಿ
ಗೆಳತೀ.., ನನ್ನ ನಿನ್ನ ಪ್ರೀತಿ
ರೈಲ್ವೆ ಕಂಬಿಗಳಂತೆ,
ಎಂದೂ ಜೊತೆಗೂಡುವುದಿಲ್ಲ..
ಕೊಬೆತನಕ ಬೇರೆ ಬೇರೆ
ಜೊತೆ ಸೇರಿಲ್ಲ..
ಸೇರುವುದೂ ಇಲ್ಲ..!!

63.ಕ-ವನ
ಪ್ರತಿಯೊಂದು
ಉತ್ತಮ ವನಗಳೂ
ಅತ್ಯುತ್ತಮ
ಕ-ವನಗಳು..||


64.ಕುಮಾರ ಸಂಭವ
ಕೆಲವರಿಗೆ ಮಲೆನಾಡು
ಕಾಲೀದಾಸನ ಕಾವ್ಯ..||
ಆದರೆ
ಕುಮಾರ ಸಂಭವವಾಗುವುದು ಎಲ್ಲೋ..?

65.ಗುಲಾಬಿ
ಒಡಲಲ್ಲಿ ಮುಳ್ಳಿದ್ದೂ
ಮೇಲೆ ಮಾತ್ರ
ಚೆಂದನೆಯ ನಗೆ
ಸೂಸುವುದು..|

Sunday, June 16, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಊಟಿಗೆ ಬಂದಿದ್ದರ ಕುರುಹಾಗಿ ಚಳಿ ನಮ್ಮನ್ನು ಆವರಿಸಿತು..
ಬೈಕಿನ ಎಕ್ಸಲರೇಟರ್ ಹಿಡಿದ ಕೈ ಚಳಿಯಿಂದಾಗಿ ಕೊರಟಾಗುತ್ತಿತ್ತು.
ಆದರೂ ನಮ್ಮ ಹುಮ್ಮಸ್ಸಿಗೆ ತಡೆಯಿಲ್ಲ.  ವೇಗಕ್ಕೆ ಮಿತಿಯಿಲ್ಲ ..
ಒಮ್ಮೆ ರಾಘವ-ಕಿಟ್ಟುವಿನ ಬೈಕ್ ಮುಂದೆ.. ಮತ್ತೊಮ್ಮೆ ನಮ್ಮದು..

ಅಂತೂ ಇಂತೂ ಊಟಿಯನ್ನು ತಲುಪಿದೆವು..
ಗುಡ್ಡ ಬೆಟ್ಟಗಳ ನಡುವೆ ತಂಪಾಗಿರುವ ಊರು.. ನಮ್ಮ ಶಿರಸಿಯಷ್ಟು ದೊಡ್ಡದಿರಬಹುದು..
ಕರ್ನಾಟಕ ಹಾಗೂ ಕೇರಳಗಳ ಮಧ್ಯ ಸಿಲುಕಿ ಅಪ್ಪಚ್ಚಿಯಂತಾಗಿರುವ ಊರು.. ಅದ್ಯಾಕೆ ತಮಿಳುನಾಡಿಗೆ ಸೇರಿತೋ..
ಈ ಊರಿನಲ್ಲಿ ಮೋಡಗಳು ಬಂದು ಚುಂಬಿಸುತ್ತವೆ..
ನಮ್ಮನ್ನು ಆವರಿಸುತ್ತವೆ.. ಕಾಡುತ್ತವೆ.. ಗೊತ್ತಿಲ್ಲದಂತೆ ಕವನವಾಗಿ ಹರಿಯುತ್ತವೆ..

ನಾವು ಊಟಿಯನ್ನು ತಲುಪಿದಾಗ ಗಂಟೆ 9 ದಾಟಿರಬೇಕು..
ಇನ್ನೂ ಮಂಜಿನ ಮುಸುಕಿನಿಂದ ಎದ್ದಿರಲಿಲ್ಲ..
ಸೂರ್ಯ ಊಟಿಯ ಪಾಲಿಗೆ ರಜಾ ಡ್ಯೂಟಿ ಇರಬೇಕೇನೋ..
ಕಾಣೆಯಾಗಿದ್ದ..
ಊಟಿಯ ಕೆಳ ಭಾಗದಲ್ಲಿ ನಮ್ಮನ್ನು ಕಂಡು ನೆತ್ತಿ ಸುಡಲು ಯತ್ನಿಸಿದ್ದ ಸೂರ್ಯ ಇಲ್ಲಿ ಸದ್ದಿಲ್ಲದೇ ಓಡಿ ಹೋಗಿದ್ದ..
ಸೂರ್ಯನನ್ನು ಅಣಕಿಸೋಣ ಎನ್ನುವ ಭಾವ ನಮ್ಮಲ್ಲಿ ಕಾಡಿದ್ದು ಸುಳ್ಳಲ್ಲ..
ಹಾಳು ಹೊಟ್ಟೆಗೆ ಎಷ್ಟು ತಿಂದರೂ ಸಾಕಾಗೋದಿಲ್ಲ ಕಣ್ರಿ..
ಮತ್ತೆ ಹಸಿವಾಗಿತ್ತು.... ಏನಾದರೂ ತಿನ್ನಬೇಕು...
ಹೊಟೆಲ್ ಹುಡುಕಾಟ ಜಾರಿಯಾಯಿತು..

ಹಿಂದಿನ ಸಾರಿ ನಾನು, ರಾಘವ ಬಂದಿದ್ದೆವಲ್ಲ..
ಅದೇ ಹೋಟೆಲ್ ಹೋದೆವು..
ಒಳ ಹೋಗಿ ಕೈಕಾಲು ತೊಳೆಯೋಣ ಎಂದು ವಾಷಿಂಗ್ ಸಿಂಕಿಗೆ ಕೈಯೊಡ್ಡಿದರೆ ಆಹಾ ಸ್ವರ್ಗ ಸುಖ...
ನಳದಲ್ಲಿ ಬರುತ್ತಿದ್ದುದು ಬಿಸಿ ನೀರು...
ಮುತ್ತಿಕ್ಕುವ ಚಳಿಯಲ್ಲಿ.. ಕೊರೆಯುವ ಚಳಿಯಲ್ಲಿ... ಕಾಡುವ ಚಳಿಯಲ್ಲಿ...
ಬೆನ್ನಟ್ಟಿ ಆವರಿಸುವ ಚಳಿಯಲ್ಲಿ ಬಿಸಿನೀರನ್ನು ಕೊಟ್ಟರೆ ಏನಾಗಬೇಡ ನೀವೇ ಹೇಳಿ ಸಾರ್...
ಆಹಾ... ಎಷ್ಟು ಹೊತ್ತಾದೂ ಕೈ ತೊಳೆಯುವುದು ಮುಗಿಯುವುದೇ ಇಲ್ಲವೇನೋ..
ಹೊಟೆಲಿನ ಸಪ್ಲಾಯರ್ ಬಂದು ಬಯ್ಯಬಹುದೆಂಬ ಭಯದ ನಡುವೆ ಕೈ ತೊಳೆಯುವ ದೀರ್ಘ ಶಾಸ್ತ್ರ ಮುಗಿಯಿತು..

ಆರ್ಡರ್ ಮಾಡಬೇಕಲ್ಲ..
ನಾನು, ರಾಘು, ಕಿಟ್ಟು ನಮ್ಮ ಎಂದಿನ ಮಸಾಲೆ ದೋಸೆಯನ್ನು ಆರ್ಡರ್ ಮಾಡಿದೆವು..
ಇದೇನಿದು ಊಟಿಗೆ ಹೋಗಿ ಮಸಾಲೆದೋಸೆಯೇ ಎಂದು ಕೇಳಬೇಡಿ..
ನಮಗೆ ತಮಿಳು ಬರೋದಿಲ್ಲ..
ಬೇರೆ ತಿಂಡಿ ಸಿಗುತ್ತಿತ್ತೇನೋ..
ನಮಗೆ ಆರ್ಡರ್ ಮಾಡಲು ಭಾಷೆ ಬರಲಿಲ್ಲ..
ಮಸಾಲೆ ದೋಸೆ ಎಂದೆವು..
ತಿಂದೆವು...

ಮೋಹನ ಮಾತ್ರ ದೋಸೆಯಲ್ಲಿಯೇ ಇನ್ನೊಂದೆನೋ ಬಗೆ ಆರ್ಡರ್ ಮಾಡಿದ..
ತಂದಿಟ್ಟರು ನೋಡಿ.. ಅಬ್ಬಬ್ಬಾ...
ದೋಸೆಯ ತುಂಬಾ ಬೇವಿನ ಸೊಪ್ಪಿನ ರಾಶಿ..
ಆಗ ಮೋಹನನ ಮುಖ ನೋಡಬೇಕಿತ್ತು...
ಅದ್ಹೇಗೆ ತಿಂದನೋ... ಪಾಡು ಪಟ್ಟನೋ... ನಾವಂತೂ ನಕ್ಕೆವು...
ಹೊಟ್ಟೆಗಂತೂ ಬಿದ್ದಿತು.. ಮುಂದೆನು ಮಾಡೋದು..?

ಊಟಿಯಲ್ಲಿ ವರ್ಡ್ ಫೇಮಸ್ಸಾಗಿರುವ ಬೊಟಾನಿಕ್ಕಲ್ ಗಾರ್ಡನ್ ನೋಡೋಣ್ವಾ ಎಂಬ ಚರ್ಚೆ ನಮ್ಮದು..
ನೋಡುವಂತದ್ದು ಎಂತದೂ ಇಲ್ಲ.. ಬರಿ ಗಾರ್ಡನ್ನು ಎನ್ನುವ ತೀರ್ಮಾನಕ್ಕೆ ಬಂದು ಬೇರೆ ಎಲ್ಲಾದರೂ ಹೋಗಬಹುದಾ..? ಎನ್ನುವ ಚರ್ಚೆ ಮತ್ತೆ ಸಾಗಿತು..
ಊಟಿಯಲ್ಲಿಯೇ ಅತ್ಯಂತ ಎತ್ತರವಾದ  ಹಾಗೂ ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಳ ಎಂದು ಹೆಸರಾಗಿರುವ `ದೊಡ್ಡಬೆಟ್ಟ'ಕ್ಕೆ ಹೋಗೋಣ ಎಂದು ಗಾಡಿಯನ್ನು ಗುರ್ರೆನ್ನಿಸಿದೆವು...
ಊಟಿಯ ರಸ್ತೆಗಳು ತುಂಬಾ ವಿಚಿತ್ರ ಕಣ್ರೀ.. ಬಳುಕಿ ಬಳುಕಿ ಸಾಗುತ್ತವೆ.. ಎಲ್ಲಲೆಲ್ಲೋ ಒಳಹೊಕ್ಕಿ ಮತ್ತೆಲ್ಲೋ ಹೊರಬರುತ್ತವೆ..
ಊಟಿಯನ್ನು ತಲುಪುವ ಎರಡು ಪ್ರಮುಖ ರಸ್ತೆಗಳೆಂದರೆ ಒಂದು ಮೈಸರೂ ಇನ್ನೊಂದು ಕೂನೂರು..
ಸುತ್ತಮುತ್ತ ಚಿಕ್ಕ ಪುಟ್ಟ ಊರುಗಳಿವೆ..
ಟೈಮಿದ್ದರೆ ಹೋಗಬಹುದು.. ಆದರೆ ದೊಡ್ಡಬೆಟ್ಟವನ್ನು ಮರೆಯುವ ಹಾಗಿಲ್ಲ..
ಸುತ್ತುಬಳಸಿ, ಇಣುಕಿ, ಬಳುಕಿ ದೊಡ್ಡಬೆಟ್ಟವನ್ನು ಹತ್ತತೊಡಗಿದೆವು..

ದಾರಿಯಲ್ಲೆಲ್ಲೋ ಫಾರಿನ್ನು ಮಂದಿಗಳ ಗುಂಪು ಸಿಕ್ಕಿತು.. ಅದ್ಯಾರೋ ಗೂಡು ಅವರನ್ನು ಪಾದಯಾತ್ರೆಯ ಮೂಲಕ ದೊಡ್ಡಬೆಟ್ಟಕ್ಕೆ ಕರೆದೊಯ್ಯುತ್ತಿದ್ದ.
ಅವರನ್ನು ನಿಲ್ಲಿಸಿ ಹಾಯ್ ಎಂದೆವು... ನಡು ನಡುವೆ ನಮ್ಮ ಕ್ಯಾಮರಾ ಕೆಲಸದಲ್ಲಿ ನಿರತವಾಗಿತ್ತು.

ಅಂತೂ ಇಂತೂ ದೊಡ್ಡ ಬೆಟ್ಟವನ್ನು ಹತ್ತಿದೆವು..
ಆಗಲೇ ಮಂಜಿನ ಮುಸುಕು ಅದನ್ನು ಆವರಿಸಿತ್ತು..
ಏನೋ ಅವ್ಯಕ್ತ ಖುಷಿಯಲ್ಲಿ ಮನಸ್ಸು ಪ್ರಫುಲ್ಲವಾಗಿತ್ತು..
ಬ್ರಿಟೀಷರು ಎಂತ ಚಂದ ಜಾಗ ಹುಡುಕ್ತಾರಲ್ಲ ಅನ್ನಿಸಿತು.

ಯಾಕೋ ಮನಸ್ಸು ಮಾತ್ರ..

ಮಂಜು ತಬ್ಬಿತು ನೆಲವ ಬಿಮ್ಮನೆ... ಎಂದು ಹಾಡೋಣ ಎನ್ನಿಸತು.. ಆದರೆ ಅಶ್ವತ್ ಅವರು ನೆನಪಾಗಿ ಸುಮ್ಮನಾದೆ..
ಚಳಿಯಲಿ ಜೊತೆಯಲಿ.. ಆಗಾ.. ನಿಸರ್ಗ ಸುಂದರ ಸ್ಥಳಕ್ಕೆ ವರ್ಣನೆ ಮಾಡಲು ಪದಪುಂಜಗಳು ಸಾಲುತ್ತಿಲ್ಲ...

ದೊಡ್ಡಬೆಟ್ಟದ ತುದಿಯಲ್ಲೊಂದು ಬಿಎಸ್ಸೆನ್ನೆಲ್ ಟವರ್ ಇದೆ.. ನಮ್ಮಲ್ಲಿ ಟವರ್ ಗಳ ಹಾಗೆ ಸಿಗ್ನಲ್ ಪ್ರಾಬ್ಲಮ್ಮಾ ಗೊತ್ತಿಲ್ಲ..
ನಮ್ಮ ಮೊಬೈಲಿನಲ್ಲಿದ್ದ ಐಡಿಯಾ ಅಲ್ಲಿ ಏರ್ ಸೆಲ್ ಆಗಿ ಧೋನಿಯನ್ನು ನೆನಪು ಮಾಡ್ತಾ ಇತ್ತು..
ದೊಡ್ಡಬೆಟ್ಟದ ತುದಿಯಲ್ಲೊಂದು ದೂರದರ್ಶಕ ಇಡಲಾಗಿದೆ..

ಫೀಸಿನೊಂದಿಗೆ ನೋಡಬಹುದು..
ಬೆಟ್ಟದ ತುದಿಯಿಂದ ಊಟಿಯ ಯಾವುದೋ ಮೂಲೆಯನ್ನೋ, ಜನಜಂಗುಳಿಯನ್ನೋ ತೋರಿಸುತ್ತಾರೆ..
ಎರಡು ಸಾರಿ ನೋಡಿದ ಮೇಲೆ ಮುಗಿಯಿತು..
ಮುಂದಿನವರಿಗೆ ಬಿಟ್ಟುಕೊಡಬೇಕು... ಸಕ್ಕತ್ ಲಾಸ್ ಬಡ್ಡಿಮಕ್ಕಳು ಅಂತ ಬಯ್ದು ಬಂದಿದ್ದಾಯ್ತು..

ಅಲ್ಲೆ ಹತ್ತಿರದಲ್ಲಿ ಡೆತ್ ಪಾಯಿಂಟಿದೆ..
ಅಮೃತವರ್ಷಿಣಿಯಲ್ಲಿ ತೋರಿಸ್ತಾರಲ್ಲ ಅದೇ.. ಸುಹಾಸಿನಿ, ಶರತ್ ಬಾಬು ಬೀಳುವ ಜಾಗ..
ಅಲ್ಲಿಗೆ ಹೋಗಿ ನಿಂತರೆ ಏನೋ ಭಯ ನಮ್ಮನ್ನು ಕಾಡುತ್ತದೆ...

ಸಾಲು ಸಾಲಿಗೆ ಬೇಲಿಗಳು... ವಾರ್ನಿಂಗನ್ನು ಮಾಡುವ ವಾಚ್ ಮೆನ್ನುಗಳು..
ಕಬ್ಬಿಣದ ಬೇಲಿ ಸಾಕಾಗದು ಎಂಬಂತೆ ಹಗ್ಗವನ್ನು ಹಾಕಿರುತ್ತಾರೆ...
ಮುಂದೆ ಹೋಗಬೇಡಿ ಎಂದು ತಮಿಳಿನಲ್ಲಿ ಹೇಳುತ್ತಾರೆ.. ನಮಗೆ ಅರ್ಥವಾಗುವುದಿಲ್ಲ... ಇರಲಿ..


ಅಲ್ಲಿಂದ ಮತ್ತೆ ಮರಳಿ ಬಂದು ದೊಡ್ಡಬೆಟ್ಟದ ತುದಿಯಲ್ಲಿರುವ ಕಲ್ಲಿನ ಬೇಂಚಿನ ಮೇಲೆ ನಾವು ನಾಲ್ವರು ಕುಳಿತುಕೊಳ್ಳುವ ವೇಳೆಗೆ ಆಗಲೇ ನಮ್ಮ ಸುತ್ತಮುತ್ತ ಮಂಜಿನ ಮೋಡ ಬರಲಾರಂಭಿಸಿತ್ತು..
ಮುಖವನ್ನೆಲ್ಲ ತಣ್ಣಗೆ ಮಾಡುತ್ತ.. ಹನಿಯನ್ನು ತೊಟ್ಟಿಕ್ಕುತ್ತ ಮಂಜು ನಮ್ಮನ್ನು ಆವರಿಸಿತು..
ಏನೋ ಸಂತೋಷ.. ಮತ್ತಷ್ಟು ಪೋಟೋಗಳು ಕ್ಲಿಕ್ಕಿಸಲ್ಪಟ್ಟವು...
ಮರಳಿ ಬರುವಾಗ ಅಲ್ಲಿನ ಲೋಕಲ್ ಮಾರ್ಕೆಟ್ ಗೆ ಹೋದೆವು.. ತರಹೇವಾರಿ ಚಸ್ಮಾಗಳಿದ್ದವು.. ಟೋಪಿಗಳಿದ್ದವು.. ಇನ್ನೂ ಏನೇನೋ ಚಿತ್ರ ವಿಚಿತ್ರ ಐಟೆಮ್ಮುಗಳಿದ್ದೆವು..
ಕೊಳ್ಳುವವರ ಪೋಸಿನಲ್ಲಿ ಹೋಗಿ ರೇಟು ಕೇಳಿ.. ಚೌಕಾಸಿ ಮಾಡಿ.. ಬ್ಯಾಡ ಎಂದು ಬಿಟ್ಟು ಬಂದೆವು...
ಹಳೆಯಕಾಲದ ಯಾವುದೋ ಸೇಡನ್ನು ತೀರಿಸಿಕೊಂಡ ಖುಷಿ ನಮಗೆ..
ಕೆಕ್ಕರುಗಣ್ಣಿನ ಉತ್ತರ ನೀಡಿದ್ದ ಅಂಗಡಿಯ ಹುಡುಗಿ.../ಮಧ್ಯವಯಸ್ಸಿನ ಹೆಂಗಸು...
ಅಂತೂ ದೊಡ್ಡ ಬೆಟ್ಟ ನೋಡಿದ್ದಾಯ್ತು.. ಕಣ್ತುಂಬಿಕೊಂಡಿದ್ದಾಯ್ತು.. ಮರಳಬೇಕಲ್ಲ...
ಸೂರ್ಯ ನೆತ್ತಿಗೆ ಬರುವ ಹೊತ್ತಾಗಿದ್ದರೂ ಪತ್ತೆಯಿರಲಿಲ್ಲ.. ಹಾಳು ಹೊಟ್ಟೆ ಮತ್ತೆ ಮತ್ತೆ ಬೆಲ್ಲು ಬಾರಿಸುತ್ತದೆ ನೋಡಿ...

ಬರ್ರೋ ಹೋಗೋಣ ಎಂದು ವಾಪಸ್ಸಾಗಲು ಹೊರಟೆವು...
ಊಟಿಯಲ್ಲಿ ಊಟಕ್ಕೊಂದು ಹೋಟೆಲ್ ಹುಡುಕಬೇಕು... ಲೋಕಲ್ ಮಾರ್ಕೇಟನ್ನು ಸುತ್ತಾಡುವ ಕುತೂಹಲವಿತ್ತು..
ಊಟದ ನಂತರ ಮಾಡೋಣ ಎನ್ನುವ ಚರ್ಚೆ.. ತಿಂಡಿ ತಿಂದು ಹೋಗೋಣ.. ಊಟಿಯಿಂದ ಮರಳುವ ದಾರಿಯಲ್ಲಿ ಒಂದು ಕಡೆ ಒಳ್ಳೆಯ ಊಟ ಸಿಗುತ್ತದೆ.. 60 ರು. ಆದರೂ ಚನ್ನಾಗಿದೆ.. ಎಂದು ರಾಘವ ಐಡೀರಿಯಾ ಕೊಟ್ಟ..
ಸರಿ ಎಂದೆವು..
ಅಲ್ಲಿ ಮಾರ್ಕೇಟ್ ಸುತ್ತಾಡಿ ಕೊಳ್ಳುವುದನ್ನು ಕೊಳ್ಳೊಣ ಎಂದು ಹೊರಟೆವು..

(ಮುಂದುವರಿಯುತ್ತದೆ)

Friday, June 7, 2013

ಸುಜುಕಿ ಸರದಾರ

ಸುಜುಕಿ ಸರದಾರ

        ಅವನು ಹೆಸರಿಗೆ ತಕ್ಕಂತೆ ಸುಝುಕಿಯ ಸರದಾರ. ಊರಿನಲ್ಲೆಲ್ಲಾ ಆತನನ್ನು ಹಾಗೇಯೇ ಕರೆದು ಕರೆದು ಆತನ ಮೂಲನಾಮಧೇಯವೇ ಮರೆತಂತೆ ಆಗಿಬಿಟ್ಟಿತ್ತು. ಹಾಂ. ಸುಝುಕಿ ಸರದಾರನಿಗೆ ಆ ಹೆಸರು ಬರಲು ಮುಖ್ಯ ಕಾರಣವಾದ ಸುಝುಕಿ ಸಮುರಾಯ್ ಎಂಬ ಬೈಕೇ ಆತನ ಅತ್ಯಮೂಲ್ಯ ಆಸ್ತಿ. ಹಳೆಯದಾಗಿ, ಲಟ್ಟು ಹಿಡಿದು, ಪ್ರತಿಭಾಗವೂ ಗಡ ಗಡ ಅಲುಗುತ್ತಿದ್ದ ಆ ಬೈಕನ್ನು ಅದ್ಯಾವ ಕಾಲದಲ್ಲಿ ತಯಾರುಮಾಡಿದ್ದೋ..?
    ಹಾಗೆಯೇ, ಆ ಜುಝುಕಿಗೆ ಈತ ಬಹುಶಃ ಇಪ್ಪತ್ತೈದನೆಯ ಯಜಮಾನನಿರಬೇಕು..! ಸರದಾರನಿಗೂ ಅಷ್ಟೇ ತಂದ ಯಾವುದೇ ಕಂಪನಿಯ ಬೈಕುಗಳೂ ಅದೃಷ್ಟ ತರಲಿಲ್ಲ. ಕೈ ಹಿಡಿಯಲಿಲ್ಲ. ಕೊನೆಗೆ ಈ ಸಮುರಾಯ್ ಸುಝುಕಿ ಬೈಕನ್ನು ಗೆಳೆಯ ಅಮೀರ್ ಖಾನನಿಂದ ಚೌಕಾಸಿಗೆ ಕೊಂಡುಕೊಂಡಿದ್ದ. ಸರದಾರ ಅದನ್ನು ಕೊಂಡುಕೊಂಡ ನಂತರ ಕನಿಷ್ಠವೆಂದರೂ ಒಂದು ದಶಕದಿಂದೀಚೆಗೆ ಅದು ಆತನ ಸಾಥಿಯಾಗಿತ್ತು.
    ಸುಝುಕಿ ಸರದಾರ ಆ ಬೂಕು ಸಿಕ್ಕ ಮೇಲೆ ಅದೆಷ್ಟು ಪ್ರದೇಶಗಳವರೆಗೆ ಸವಾರಿ ಮಾಡಿದ್ದಾನೋ.. ಮೂಡುಬಂತೆಂದರೆ ಸಾಕು ಹೊಟ್ಟೆಗಷ್ಟು ಪೆಟ್ರೂಲು ಸುರಿದು ಯಾವುದಾದರೊಂದು ದಿಕ್ಕಿನ ಹಾದಿ ಹಿಡಿದು ಹೊರಟುಬಿಡುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ಮನೆಯ ನೆನಪಾದಾಗಲೇ.
    ಈ ಸುಝುಕಿ ಸರದಾರನಿಗೆ ಹೆಂಡಲಿಯಿಲ್ಲ. ಮಕ್ಕಳಿಲ್ಲ. ಈತನೊಬ್ಬ ಅಖಂಡ ಬ್ರಹ್ಮಚಾರಿ.. ಹಾಂ. ಈತ ಅನಾಥನೇನಲ್ಲ. . ಹೆತ್ತವರಿದ್ದಾರೆ., ತಕ್ಕಮಟ್ಟಿಗೆ ಇಂಗ್ಲೀಷನ್ನು ಎತ್ತಿ ಬಿಸಾಡುವಷ್ಟು ಓದಿಕೊಂಡಿದ್ದಾನೆ ಕೂಡ. ಹರೆಯದ ಹುಮ್ಮಸ್ಸಿನಲ್ಲಿ ಬೈಕು ಹೊಡೆಯುವ ಚಟ ಆತನಿಗೆ ಅಂಟಿಕೊಳ್ಳದೇ ಇದ್ದಿದ್ದರೆ ಇಷ್ಟುಹೊತ್ತಿಗೆ ಯಾವುದಾದರೂ ದೊಡ್ಡ ಕಾಂಟ್ರಾಕ್ಟ್ ಕೆಲಸ ಸಿಕ್ಕಿ ಮದುವೆಯೂ ಆಗಿ ಹೋಗಿತ್ತು.
    ಇಷ್ಟೆಲ್ಲ ಹೇಳಿಯೂ ಆತನ ಉದ್ಯೋಗದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ ನೋಡಿ.. ಆತ ತನ್ನ ಊರಿನ ಸರಹದ್ದಿನಲ್ಲಿ ಎಲ್ಲೇ ಮನೆಯ ಗಿಲಾವು ಕೆಲಸವಿದ್ದಲ್ಲಿ ಮುದ್ದಾಂ ಮಾಡಿಬರುತ್ತಿದ್ದ.. ಗಿಲಾಯವೇ ಆತನಿಗ ಬರುತ್ತಿದ್ದ ಪರಮೋಚ್ಛ ಕೆಲಸ. ಹೀಗಿರುವ ಈ ಸರದಾರನ ಪರಿಚಯ ನನಗಾಗಿದ್ದು ಆಕಸ್ಮಿಕ. ಕೆಲವು ದಿನಗಳ ಹಿಂದೆ ನನಗೂ ಬೈಕೊಂದನ್ನು ಕೊಳ್ಳುವ ಉಮೇದಿಯಾಯಿತು. ಅದಕ್ಕಾಗಿಯೇ ಹುಡುಕುತ್ತಿದ್ದಾಗ ಯಾರೋ ಒಬ್ಬರು ಈ ಸರದಾರನನ್ನು ಪರಿಚಯಿಸಿ, ಈತನಿಗೆ ಬೈಕುಗಳ ಬಗ್ಗೆ ಸಂಪೂರ್ಣ ಗೊತ್ತು ಎಂದರು..
    ನನಗೆ ಪರಿಚಯವಾದ ಕೂಡಲೇ ಈ ಸರದಾರ ಎಲ್ಲಾ ಬೈಕುಗಳೂ `ವೇಸ್ಟ್..' ಎಂದೂ, ತನ್ನ ಸುಝುಕಿ ಸಮುರಾಯ್ ಬೈಕೇ ಬೆಸ್ಟ್ ಎಂದೂ ಹೇಳಿ, ಬಹಳೇ ಬಹಳ `ಕಾಯ್ದೆ ಕೊಚ್ಚಲಾರಂಭಿಸಿದ..'. ನಾನು ಅವನ ಹೊಗಳಿಕೆಗೆ ಮರುಳುಬಿದ್ದು ಬೈಕನ್ನು ಕೊಂಡುಕೊಳ್ಳುತ್ತಿದ್ದೆನೇನೋ.. ಆದರೆ ಒಮ್ಮೆ ಏಕೋ ಆ ಬೈಕನ್ನು ನೋಡಿಬಿಡಬೇಕೆಂದು ಅನ್ನಿಸಿತು... ನೋಡಿದೆ.. ನೋಡಿದರೆ ಅದನ್ನು ಬೈಕೆಂದು ಕರೆಯುವುದು ಹೇಗೆ..? ಯಾವ ದಿಕ್ಕಿನಿಂದ ಅದು ಬೈಕಿನಂತೆ ಕಾಣುತ್ತದೆ ಎಂಬ ಸಂದೇಹ ಮನದಲ್ಲಿ ಕಾಡಿತು. ಆ ಬೈಕು ಎಲುಬಿನ ಹಂದರವಾಗಿತ್ತು. ಮೂಳೆ ಚಕ್ಕಳವಾಗಿಬಿಟ್ಟಿತ್ತು... ಅಷ್ಟೇ ಅಲ್ಲದೇ ಆ ಬೈಕಿಗೆ ಮೈ ತುಂಬಾ ಕಲೆಗಳು, ಗಾಯದ ಗುರುತು.. `ಸಾಕಪ್ಪಾ ಸಾಕು..' ಎಂದು ಬೈಕನ್ನು ದೂರವಿಟ್ಟೆ.. ಸುಝುಕಿ ಸರದಾರ ನಕ್ಷತ್ರಿಕನಂತೆ ನನ್ನ ಪರಿಚಯಸ್ತನಾಗಿ ಕಾಡಲಾರಂಭಿಸಿದ.
    ಮರೆತೆಬಿಟ್ಟಿದ್ದೆ.. ಅವನ ಒತ್ತಾಯಕ್ಕೆ ಮಣಿದು ನಾಲ್ಕೈದು ಬಾರಿ ಅವನೊಡನೆ ಬೇರೆ ಬೇರೆಯ ಒಂದೆರಡು ಪ್ರಸಿದ್ಧ ತಾಣಗಳಿಗೆ ಆ ಬೈಕಿನೊಂದಿಗೆ ಹೋಗಿದ್ದೆ.. ದಾರಿಯ ನಡುವೆ ಎಲ್ಲಾದರೂ ಕೈ ಕೊಡಬಹುದೇನೋ ಎನ್ನುವ ಭಯ ಕೊನೆಯವರೆಗೂ ನನ್ನನ್ನು ಕಾಡದೇ ಬಿಡಲಿಲ್ಲ. ಕೈಕೊಟ್ಟಿದ್ದರೆ ಕಥೆ ಕರ್ಮಕಾಂಡವಾಗಿಬಿಡುತ್ತಿತ್ತು.. ಅದನ್ನು ನಾನೇ ತಳ್ಳಬೇಕಿತ್ತಲ್ಲ... ಆದರೆ ಸಧ್ಯ ಹಾಗಾಗಲಿಲ್ಲ.. ಬೈಕಿಗೆ ಸಲಾಂ ಹೊಡೆದರೂ ನನ್ನನ್ನು ಯಾವುದೋ ಮಾಯೆಯಲ್ಲಿ ಕಾಡಲು ಪ್ರಾರಂಭಿಸಿಯೂ ಇತ್ತು.
    ಜಪಾನಿನ ಯಾವುದೋ ಕಂಪನಿಯಲ್ಲಿ ತಯಾರಾಗಿ ಭಾರತದ ಮಾರುಕಟ್ಟೆಯನ್ನು ಹೊಕ್ಕಿದ್ದ ಸಮುರಾಯ್ ನ ಸುಝುಕಿ ಬೈಕು ಯಾರ್ಯಾರದ್ದೋ ಮೂಲಕ ನಮ್ಮೂರ ಸರದಾರನ ಕೈ ತಲುಪಿತ್ತು.. ಆ ಬೈಕು ತನ್ನ ಯವ್ವನದ ಹಾದಿಯಲ್ಲಿ ಒಂದು ಗುಟುಕು ಪೆಟ್ರೂಲಿಗೆ ಅದೆಷ್ಟು ದೂರದ ವರೆಗೆ ಕುದುರೆಯಂತೆ ಓಡುತ್ತಿತ್ತೋ.. ಆದರೆ ಈಗ ಅದರ ಹೊಟ್ಟೆಗೆ ಕುಡಿದಷ್ಟೂ ಪೆಟ್ರೂಲು ಸಾಲದು.. ಜೊತೆಗೆ ಬೈಕೂ ಸಹ ಕೆಲವು ಕಿಲೋಮೀಟರುಗಳವರೆಗೆ ಜೋರಾಗಿ ಓಡಿದರೂ ದಮ್ಮು ಹಿಡಿದ ರೋಗಿಯು ಕೆಮ್ಮುವಂತೆ ಆಗಾಗ ಕೆಮ್ಮುತ್ತಾ ನಿಂತುಬಿಡುತ್ತದೆ.
    ಇಷ್ಟರ ಜೊತೆಗೆ ಪೆಟ್ರೂಲಿನ ಬೆಲೆಯೂ ಗಗನಮುಖಿಯಾಗಿದೆ.. 2 ರು. ಕಡಿಮೆ ಯಾಗುವ ಪೆಟ್ರೂಲ್ ಮರುದಿನವೇ 3.50 ರು ಜಾಸ್ತಿಯಾಗಿ ಬಿಡುತ್ತದೆ. ಇಂತಹ ಸಮಯದಲ್ಲಿಯೇ ಸರದಾರ ಬುದ್ಧಿವಂತಿಕೆಯನ್ನು ಪ್ರದರ್ಶಿಸತೊಡಗಿದ್ದಾನೆ. ಸುಮ್ಮನೆ ಆ ಬೈಕಿನ ಹೊಟ್ಟೆಗೆ ಪೆಟ್ರೂಲು ಹಾಕುವ ಬದಲಾಗಿ ಎಷ್ಟು ಬೇಕೋ.. ಅಷ್ಟು ಕುಡಿ ಎಂದು ಸೀಮೆಎಣ್ಣೆಯನ್ನು ಹಾಕತೊಡಗಿದ್ದಾನೆ. ಹಾಗಾಗಿ ಆತನ ಬೈಕು ಆ ದಾರಿಯಲ್ಲಿ ಸಾಗಿಹೋದ ಹತ್ತು ನಿಮಿಷಗಳಾದರೂ ಅಲ್ಲಿ ಸೀಮೆ ಎಣ್ಣೆಯ ಘಮಲು ಮೂಗಿಗೆ ರಪ್ಪಂತ ಬಡಿಯುತ್ತಲೇ ಇರುತ್ತದೆ.
    ಇತ್ತೀಚೆಗೆ ಅವನಿಗೆ ಆ ಬೈಕನ್ನು ಮಾರಾಟ ಮಾಡಬೇಕೆಂಬ ಹುಚ್ಚು ಹತ್ತಿಬಿಟ್ಟಿತ್ತು. ತಾನು ಅಲ್ಲಿ ಇಲ್ಲಿ ಮನೆಯ ಗಿಲಾಯ ಮಾಡಿ ದುಡಿಯುತ್ತಿದ್ದ ಕಾಸನ್ನೆಲ್ಲ ಆ ಬೈಕು ಒಂದೇ ಗುಕ್ಕಿಗೆ ನುಂಗಲಾರಂಭಿಸಿದಾಗ ಆತನಿಗೆ ಆಗ ಬೈಕೆಂಬುದು ಬಿಳಿ ಆನೆಯನ್ನು ಕಟ್ಟಿ ಸಾಕಿದಂತೆ ಅನ್ನಿಸಿತ್ತು.. ಆದರೆ ಲಡಕಾಸಿ ಬೈಕನ್ನು ಕೊಳ್ಳುವವರು ಬೇಕಲ್ಲ..!! ಹಾಗಾಗಿಯೇ ಆತ `ಏನಯ್ಯಾ.. ಸರದಾರ . ಬೈಕನ್ನು ಮಾರ್ತೀಯಂತೆ..' ಎಂದು ಯಾರಾದರೂ ಕೇಳಿದ ತಕ್ಷಣ `ಯಾಕೆ..? ತಗೋಳ್ತೀಯಾ..? ಹೆಚ್ಚೇನೂ ಬೇಡ . ಒಂದು ಸಾವ್ರ ಸಾಕು ಅಷ್ಟೇ ' ಎನ್ನುತ್ತಿದ್ದ. ಕೆಳಿದವರು ನಗುತ್ತ ಸದ್ದಿಲ್ಲದೇ ಎದ್ದು ಬರುತ್ತಿದ್ದರು.

    ಸರದಾರನ ಪುರಾಣ ಹೇಳುವದರಲ್ಲಿ ಮುಳುಗಿದ್ದ ನಾನು ಮುಖ್ಯ ವಿಷಯವನ್ನು ಹೇಳಲು ಮರೆತೇಬಿಟ್ಟಿದ್ದೆ ನೋಡಿ.. ನಾನೊಮ್ಮೆ ಏನೋ ತುರ್ತು ಕಾರಣವೆಂದು ಆ ಬೈಕನ್ನು ತೆಗೆದುಕೊಂಡು ಹೋಗಿದ್ದೆ. ಅದರ ಆತ್ಮಚರಿತ್ರೆಯನ್ನು ನಾನು ತಿಳಿದಿದ್ದರೂ, ಏನೋ ಅರ್ಜೆಂಟು ಕೆಲಸವಿತ್ತಾದ್ದರಿಂದ ಸರ್ದಾರನ ಬಳಿ `ಪೆಟ್ರೂಲ್ ಹಾಕಿಸ್ತೀನಿ ಮಾರಾಯಾ..' ಎನ್ನುವ ಆಣೆ ಮುತ್ತುಗಳನ್ನು ಉದುರಿಸಿ ಬೈಕನ್ನು ಒಯ್ದಿದ್ದೆ.. ಆ ಬೈಕು ನಾನು ಕೊಂಡು ಹೋಗುವಾಗಲೇನೋ ಸರಿಯಾಗಿಯೇ ಇತ್ತು. ತವರಿಗೆ ಹೊರಟ ಹೆಂಡತಿಯಂತೆ.. ಆದರೆ ಮರಳಿ ಬರುವಾಗ ಶುರುಹಚ್ಚಿಕೊಂಡಳು ನೋಡಿ ತನ್ನ ವರಾತವ.. !! ಒಮ್ಮೆ ಕೆಮ್ಮಿತು.. ಸುಮ್ಮನಾಗಿಸಿದೆ. ಚೈನಿನ ಆಳದಲ್ಲೆಲ್ಲೋ ಶಬ್ದಮಾಡಿತು. ಬಿಚ್ಚಿ ಸರಿ ಮಾಡಿದೆ. ಏನೇನೋ ತರಲೆ ತಾಪತ್ರಯ ಶುರುಮಾಡಿತು.. ನಾನು ಸರಿಮಾಡಿಯೇ ಸಿದ್ಧ ಎಂದು ಮುಂದುವರಿದೆ. ಕೊನೆಗೊಮ್ಮೆ ಎಲ್ಲ ಸರಿಯಾಯಿತೆಂದು ಗಾಡಿ ಚಾಲೂಮಾಡಿ ಹೊರಟೆ. ಗಾಡಿಗೂ ಸ್ವಲ್ಪ ಸುಸ್ತಾಗಿತ್ತೇನೆಓ.. ಕೆಲವು ಕಿ.ಮಿಗಳ ವರೆಗೆ ನಿರಾತಂಕವಾಗಿ ಸಾಗಿತು.. ಆದರೆ ನಮ್ಮೂರು ಇನ್ನೂ 5 ಕಿಲೋಮೀಟರ್ ಇದೆ ಎನ್ನುವಾಗ ಮಾತ್ರ ನೋಡಿ.. ಗ್ರಾಚಾರ ಭಯಂಕರ ಖರಾಬ್ ಇತ್ತು.. ವೇಗದೂತನಂತೆ ಸಾಗುತ್ತಿದ್ದೆ. ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿಬಿಟ್ಟಿತು. ಗೇರ್ ಹಾಕಿ ವೇಗ ಕಡಿಮೆ ಮಾಡೋಣ ಎಂದರೆ ಊಹೂಂ ಸರಿಯಾದ ಸಮಯಕ್ಕೆ ಸಿಕ್ಕಿಬಿದ್ದೀದೀಯಾ ಎನ್ನುವಂತೆ ಗೇರಿಗೂ ಬೀಳೋದಿಲ್ಲ.. ಏನೇ ಶತಪ್ರಯತ್ನ ಮಾಡಿದರೂ ಬೈಕು ನಿಲ್ಲುತ್ತಿಲ್ಲ.. ಸಾಬರ ತರಾ ಕಾಲನ್ನು ನೆಲಕ್ಕೆ ಒತ್ತಿ ಹಿಡಿದು ಬೈಕ್ ನಿಲ್ಲಿಸಲು ಯತ್ನಿಸಿದೆ. ಕಾಲು ನೋವು ಮಾಡಿಕೊಂಡದ್ದೇ ಬಂತು.. ಕೊನೆಗೂ ದೇವರು ದೊಡ್ಡವನಿದ್ದ.. ಗಾಡಿ ಅದ್ಹೇಗೋ ನಿಂತಿತು.. ಉಸಿರನ್ನು ಎರಡೆರಡು ಸಲ ಬಿಟ್ಟೆ..
    ಇನ್ನು ಮುಂದೆ ಈ ಬೈಕಿನಲ್ಲಿಯೇ ನಮ್ಮೂರಿಗೆ ಹೋದರೆ `ಬಿದಿರು ಮೋಟಾರಿನ ಪ್ರಯಾಣ' ಕಟ್ಟಿಟ್ಟ ಬುತ್ತಿ ಎನ್ನಿಸಿತು. ತಳ್ಳಲು ಪ್ರಾರಂಭಿಸಿದೆ.. ನಾನು ಬೈಕ್ ತಳ್ಳುವುದನ್ನು ನೋಡಿದ ಇತರರಿಗೆ ನಗುವೋ ನಗು.. ನಾನು, ಸರದಾರನ ಸುಝುಕಿ ಬೈಕನ್ನು ತಳ್ಳುವುದು ಅವರಿಗೆ ಅತ್ಯಾನಂದ ನೀಡಿರಬೇಕು..!! ಯಾರೋ ಒಬ್ಬಿಬ್ಬರು `ಮಾರಾಯ್ರೆ ನಿಮಗೆ ನಾನಾದ್ರೂ ನನ್ನ ಸೈಕಲ್ಲನ್ನಾದ್ರೂ ಕೊಡ್ತಿದ್ದೆ.. ಈ ಸರದಾರನ ಬೈಕೆಂತಕ್ಕೆ ಬೇಕಿತ್ರಾ..? ನೋಡಿ.. ಈಗ ಹಣೆಬರಹ ನಿಮ್ದು.. ತಳ್ಳಿ.. ' ಎಂದು ನನ್ನ ನಸೀಬಿಗಷ್ಟು ಉಪ್ಪುಖಾರ ಹಚ್ಚಿದರು. ಮನಸ್ಸು ಚುರ್ರೆಂದು ಸಿಟ್ಟಾಯಿತಾದರೂ ಸುಮ್ಮನಾದೆ.. ಕೊನೆಗೂ ಮದ್ಯಾಹ್ನದ ಉರಿಬಿಸಿಲಿನಲ್ಲಿ 3-4 ಕಿ.ಮಿ ದೂರ ಬೈಕನ್ನು ತಳ್ಳಿಕೊಂಡು ಸರದಾರನಿಗೆ ಬೈಕನ್ನು ಕೊಟ್ಟೆ.. ಆಗಲೇ ಮಿರಾಕಲ್ ಸಂಭವಿಸಿದ್ದು ನೋಡಿ.. ಹಾಳಾದ ಬೈಕು ತಕ್ಷಣವೇ `ಕೈ ಮರಚಲು ಎಮ್ಮೆಯಂತೆ.. ಆತ ಹೇಳಿದಂತೆ ಕೇಳಲು ಪ್ರಾರಂಭಿಸಿತು.. ನಾನು ಬೈಕಿಗೆ ಸಲಾಮು ಹೊಡೆದೆ..
    ಇಂತಹ ಸುಝುಕಿ ಸಮುರಾಯ್ ಬೈಕನ್ನು ಕೊನೆಗೂ ಕೊಳ್ಳುವವರು ಸಿಗಲಿಲ್ಲ. ಅದು ಮತ್ತೊಮ್ಮೆ ಮಾರಾಟವಾಗಿ ಗಿನ್ನಿಸ್ ದಾಖಲೆಗೆ ಪಾತ್ರವಾಗುವ ಸುಸಂದರ್ಭ ತಪ್ಪಿಹೋಯಿತು ಎಂದು ನಮಗೆ ಅನ್ನಿಸತೊಡಗಿತು. ಆದರೆ ಸರದಾರ ಸುಮ್ಮನೆ ಇರುವವನಲ್ಲ ನೋಡಿ.. ಬುದ್ಧಿ ಓಡಿಸಿದ.. ಪರಿಣಾಮ ಗುಜರಿ ಅಂಗಡಿಗೆ ಕೆ.ಜಿ. ಗೆ 10ರುಪಾಯಿಯಂತೆ 95 ಕೆಜಿಯ ಬೈಕನ್ನು ಮಾರಿ 950 ರೂಪಾಯಿ ಮಾಡಿಕೊಂಡು ಬದುಕಿದೆಯಾ ಬಡಜೀವವೆ ಎಂದುಕೊಂಡ.. ಬೈಕು ಮಾರಿದರೂ ಆತ ಈಗಲೂ ಸುಝುಕಿ ಸರದಾರನಾಗಿಯೇ ಇದ್ದಾನೆ.
    ಈಗಲೂ ನಮ್ಮೂರಿನ ಜಡ್ಡೀರಾಮನ ಗುಜರಿ ಅಂಗಡಿಯ ಟಾಪಿನ ಮೇಲೆ ಸುಝುಕಿ ಸಮುರಾಯ್ ಬೈಕಿನ ಪಳೆಯುಳಿಕೆಗಳಾದ ಎರಡು ಗಾಲಿಗಳು ಹುಡುಕಿದರೆ ಕಣ್ಣಿಗೆ ಬೀಳುತ್ತವೆ.. ಶತಮಾನದ ಪಳೆಯುಳಿಕೆಗಳಂತೆ.. ವೀರಗಲ್ಲುಗಳಂತೆ.

Sunday, June 2, 2013

ಚಿನ್ನು ಮೊಲ ಹಾಗೂ ಕಣ್ಣೀರು..

ಚಿನ್ನು ಮೊಲ ಹಾಗೂ ಕಣ್ಣೀರು..


ಬಾಂಧವ್ಯ ನೋಡಿ ಹೇಗಿರುತ್ತದೆ ಅಂತ,...
ಅದೆಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿ ಹಾಲು ಕುಡಿಯಬೇಕಿತ್ತೋ...
ಅದೆಷ್ಟು ಚೆಂದವಾಗಿ ಚೆಂಗನೆ ನೆಗೆಯುತ್ತ ಹುಲ್ಲು ಹಾಸಿನ ಮೇಲೆ ನರ್ತನ ಮಾಡಬೇಕಿತ್ತೋ...
ಆದರೆ ಹಾಗಾಗಲಿಲ್ಲ...

ಈಗ ಎರಡು ದಿನಗಳ ಹಿಂದೆ  ನನ್ನ ಭಾವ ಬೈಕೇರಿ ಮನೆಯ ಕಡೆಗೆ ಮರಳುತ್ತಿದ್ದಾಗ ರಸ್ತೆ ಮಧ್ಯ ಮಳೆಯಲ್ಲಿ ಏನೋ ಬಿದ್ದುಕೊಂಡಿದ್ದು ಕಾಣಿಸಿತು... ರಾತ್ರಿಯಾಗಿತ್ತು. ಲೈಟಿನ ಬೆಳಕಿನಲ್ಲಿ ಅದೇನೆಂಬುದು ಸ್ಪಷ್ಟವಾಗಿರಲಿಲ್ಲ..
ಗಾಡಿ ನಿಲ್ಲಿಸದಾಗ ನಿಧಾನವಾಗಿ ಪಕ್ಕಕ್ಕೆ ಸರಿದು ಹೋಯಿತೆಂಬುದು ಆತನೇ ಹೇಳಿದ ಸಂಗತಿ..
ಬೈಕಿನಡಿಯಲ್ಲಿ ಬಿತ್ತೇ?
ಹುಡುಕಿದಾಗ ಕಂಡಿದ್ದ ಪುಟ್ಟ ಮೊಲದ ಮರಿ..
ಅದೆಷ್ಟು ಪುಟ್ಟದು ಅಂದರೆ ಗುಬ್ಬಿಗಿಂತ ಸ್ವಲ್ಪ ದೊಡ್ಡ ಗಾತ್ರವಿರಬೇಕು ಅಷ್ಟೇ..

ಮಳೆಯಲ್ಲಿ ನಡುಗುತ್ತಾ.. ಓಡಿಹೋಗಲೂ ಶಕ್ತಿಯಿಲ್ಲದೇ..
ಅಮ್ಮನ ಸುಳಿವಿಲ್ಲದೆ ಕಂಗಾಲಾಗಿತ್ತು...
ಸಾಮಾನ್ಯವಾಗಿ ರಾತ್ರಿಯ ವೇಳೆಯಲ್ಲಿ ನಾನು ಬೈಕ್ ಮೇಲೆ ಹೋಗುವಾಗಲೆಲ್ಲ ದೊಡ್ಡ ದೊಡ್ಡ ಮೊಲಗಳು ಬೈಕಿನ ಲೈಟಿಗೆ ಕಣ್ಣು ಕೊಡುತ್ತ ಬೆಳಕು ಕಂಡಲ್ಲಿ ದಾರಿಗಡ್ಡವಾಗಿ ಓಡುತ್ತವೆ.. ನಮಗಿನಂತ ಮುಂದೆ.. ನಾವು ಅಥವಾ ಮೊಲ ಸ್ವಲ್ಪ ಯಾಮಾರಿದರೂ ಮೈಕಡಿಗೆ ಜೀವ ಕೊನೆಯಾಗುತ್ತದೆ.. ಅದಕ್ಕೆ ರಾತ್ರಿ ನಾನು ಮೊಲ ಕಂಡಾಗಲೆಲ್ಲ ಬಹಳ ಸ್ಲೋ ರೈಡಿಂಗ ಮಾಡುತ್ತೇನೆ..

ಬಹುಶಃ ಆ ಮರಿಯ ತಾಯಿ ಯಾವುದೋ ಬೈಕಿನಡಿ ಬಿದ್ದಿರಬೇಕು..
ಅಥವಾ ಮೊಲವನ್ನು ತಿನ್ನುವವರ ಕೈಗೆ ಸಿಕ್ಕಿತೋ ಕಾಣೆ..
ಮಳೆಯಿತ್ತಲ್ಲ ಪುಟ್ಟಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಾಗ ಅಮ್ಮ ಎಲ್ಲೋ ಕಾಣೆಯಾಯಿತು..
ಮರಿಗೆ ದಿಕ್ಕೇ ತೋಚಲಿಲ್ಲ..
ಭಾವನ ಕೈಗೆ ಸಿಕ್ಕಿತು..
ಕಾಲು ಮೈ, ಕಣ್ಣಲೆಲ್ಲ ಮಣ್ಣುರಾಡಿ.. ಮನ್ಣಿನ ಮುದ್ದೆಯಂತಾಗಿದ್ದ ಮರಿಯನ್ನು ನಾಜೂಕಿನಿಂದ ಎತ್ತಿಕೊಂಡು ಬಂದಿದ್ದ..
ಮನೆಗೆ ಬಂದು ಬೆಚ್ಚನೆಯ ಬಟ್ಟೆಯಲ್ಲಿ ಒರೆಸಿ ಬೆಚ್ಚಗೆ ಗೋಣಿಯ ಚಾದರ ಮಾಡಿ ಹೊದೆಸಿ ಬೆಕ್ಕಿನ ಕಾಟ ತಪ್ಪಿಸುವ ಸಲುವಾಗಿ ಡಬ್ಬಿಯಲ್ಲಿ ಗೂಡು ಮಾಡಿ ಮಲಗಿಸಿದ್ದ..

ಆಮೇಲೆ ಸಮಸ್ಯೆ ಶುರು..
ತಂದಿದ್ದೇವೆ..? ಅದೆಂತ ತಿನ್ನುತ್ತದೆ ಎಂಬುದು ಗೊತ್ತಿಲ್ಲ
ಮೊಲಕೆ ಉಪ್ಪು ಅಂದರೆ ಆಗದು ಹುಷಾರು ಅಂತ ಯಾರೋ ಹೇಳಿದ್ದರು..
ಉಪ್ಪನ್ನು ದೂರವಿಟ್ಟೆವು..
ಮೊಲ ತಾಯಿ ಹಾಲನ್ನು ಬಿಟ್ಟು ಉಳಿದಂತೆ ನೀರನ್ನು ಮಾತ್ರ ಕುಡಿಯುತ್ತದೆ ಎಂದು ಯಾರೋ ಹೇಳಿದರು..
ಗೊಂದಲವಾಯಿತು.. ಒಂದಷ್ಟು ಎಳೆಯ ಹುಲ್ಲು, ಬೆಂಡೆಕಾಯಿ ಮುಂತಾದ ತರಕಾರಿ ತಂದೆವು..
ಚಿಕ್ಕ ಚಿಕ್ಕ ತುಂಡನ್ನಾಗಿ ಮಾಡಿ ಅದರ ಎದುರು ಇಟ್ಟದ್ದೂ ಆಯ್ತು..
ಕ್ಯಾರೇಟ್ ಇಸ್ಟ ಎಂದು ಯಾರದ್ದೋ ಮನೆಯಿಂದ ತಂದು ಇಟ್ಟದ್ದಾಯ್ತು..
ನಮ್ಮೆದುರು ಏನೆಂದರೆ ಏನನ್ನೂ ತಿನ್ನಲಿಲ್ಲ..

ಆದರೆ ನಾವು ಅತ್ತ ಇತ್ತ ಹೋದಾಗ ತಿನ್ನುತ್ತಿತ್ತೆಂದು ಕಾಣುತ್ತದೆ..
ಅರ್ಧ ತಿಂದು ಬಿಟ್ಟಿದ್ದ ಹಣ್ಣಿನ ಸಿಪ್ಪೆಗಳು ಸಾಕ್ಷಿ ಹೇಳುತ್ತಿದ್ದವು..
ಆದರೆ ನಮ್ಮೆದುರು ಮಾತ್ರ ಮಂಗನ ಉಪವಾಸ...

ಈ ಮರಿ ಬಂದದ್ದೇ ತಡ ಮನೆಯಲ್ಲಿ ಜೀವಕಳೆ..
ತಂಗಿಗಂತೂ ಸ್ವರ್ಗವೇ ಧರೆಗಿಳಿದಂತೆ ಆಗಿತ್ತು..
ಇನ್ನು ತಂಗಿ ಮಗನಿಗೆ ಬಹಳ ಸಂತೋಷವಾಗಿತ್ತು..
ಒಂದೂ ವರೆ ವರ್ಷದ ಆತನಿಗೆ ಎಲ್ಲ ಪ್ರಾಣಿಗಳೂ, ಪಕ್ಷಗಳೂ ಸೇರಿದಂತೆ ಸಕಲ ಜಗತ್ತುಗಳೂ ಕುತೂಹಲದ, ಬೆರಗುಹುಟ್ಟಿಸುವ ಅಂಶಗಳು.. ಮನೆಗೆ ಬಂದು ಕಾಟ ಕೊಡುತ್ತಿದ್ದ ಮಾಳಬೆಕ್ಕನ್ನು ಮನೆಯ ಸದಸ್ಯನನ್ನಾಗಿ ಮಾಡಿದ್ದ ಕೀರ್ತಿ ಆತನಿಗೆ ಸಲ್ಲಬೇಕು.. (ಅದಕ್ಕೇ ನಾವು ಕಾಮರಾಜ ಅಂತ ಹೆಸರನ್ನಿಟ್ಟಿದ್ದೆವು.) ಆ ಬೆಕ್ಕೂ ಕೂಡ ಆತನಿಗೆ ಬಹಳ ಒಗ್ಗಿಬಿಟ್ಟಿದೆ...
ನಾವು ಮುಟ್ಟಲು ಹೋದರೆ ಓಡಿಹೋಗುವ ಆಥವಾ ಸಿಟ್ಟನ್ನು ಮಾಡಿಕೊಳ್ಳುವ ಆ ಬೆಕ್ಕಿಗೆ ಆತ ಏನು ಮಾಡಿದರೂ ತೊಂದರೆಯಿಲ್ಲ.. ತಂಗಿಮಗ ಶ್ರೀವತ್ಸ ಅದಕ್ಕಾಗಿಯೇ  ಬೆಕ್ಕಿನ ಬಾಲವನ್ನು ಎಳೆಯುವುದರ ಆದಿಯಾಗಿ ಅದನ್ನು ಗೊಂಬೆಯಂತೆ ತಿರುಗಿಸುವುದು, ಅದರ ಜೊತೆಗೆ ಆಡುವುದು ಮಾಡುತ್ತಿದ್ದ.. ಅದಕ್ಕೆ ತಕ್ಕಂತೆ ಅದೂ ಕೂಡ ಆಡುತ್ತಿತ್ತು...
ಈಗ ಮೊಲದ ಮರಿ ಮನೆಗೆ ಬಂದರೆ ಆತನನ್ನು ತಡೆಯುವವರ್ಯಾರು..?

ಮೊಲವನ್ನು ಇಟ್ಟಿದ್ದ ಡಬ್ಬಿಯತ್ತ ನಿಮಿಷಕ್ಕೊಂದು ಬಾರಿ ಹೋಗಿ ಕುಕ್ಕರುಗಾಲಲ್ಲಿ ಕುಳಿತು ಕುತೂಹಲದಿಂದ ಅದನ್ನು ನೋಡುವುದು ಕಣ್ಣರಳಿಸುವುದು, ಅಚ್ಚರಿಯಿಂದ ಆಮ್ಮನನ್ನು ಕರೆಯುವುದು ಆತನ ಆಟವಾಗಿಬಿಟ್ಟಿತು..
ಮೊಲದ ಮರಿಗೂ ಏನನ್ನಿಸಿತೋ ಗೊತ್ತಿಲ್ಲ..
ಆತ ಬಂದಾಗಲೆಲ್ಲ ಚಂಗನೆ ನೆಗೆದು ಕುಣಿಯುತ್ತಿತ್ತು..
ಡಬ್ಬಿಯಿಂದ ಹೊರಬರಲು ಯತ್ನಿಸುತ್ತಿತ್ತು..
ಇದನ್ನು ನೋಡಿ ಮತ್ತಷ್ಟು ಹರ್ಷ ಗೊಳ್ಳುತ್ತಿದ್ದುದು ಶ್ರೀವತ್ಸ...

ತಂಗಿ ಈ ಮೊಲದ ಮರಿಗೆ ಚಿನ್ನು ಎನ್ನುವ ಹೆಸರನ್ನಿಟ್ಟೇ ಬಿಟ್ಟಳು...
ಮೊದಲಿಂದಲೂ ಮೊಲವನ್ನು ಸಾಕಬೇಕೆಂಬ ನಮ್ಮ ಉತ್ಕಟ ಇಚ್ಛೆ ಈ ಮೂಲಕ ಪೂರ್ತಿಯಾಗಿತ್ತು..
ಜೊತೆಯಲ್ಲಿ ಹೊಸ ಸಮಸ್ಯೆಗಳು ಹುಟ್ಟಿದ್ದವು.. ಬೆಕ್ಕಿನ ಕಾಟ ತಡೆಯುವುದು, ಆಹಾರ ಹುಡುಕುವುದು, ರಕ್ಷಣೆ ಮಾಡುವುದು ಇತ್ಯಾದಿ.. ಇದಕ್ಕೆ ತಕ್ಕಂತೆ ನನ್ನ ಅಪ್ಪನ ಬಳಿ ಅದ್ಯಾರೋ ಮೊಲವನ್ನು ಮನೆಯಲ್ಲಿ ಸಾಕಿದರೆ ಮಕ್ಕಳು ಸಾಯುತ್ತಾರೆ ಎಂದು ಹೇಳಿದರಂತೆ... ಪ್ರಾರಂಭವಾಯಿತು ವಿರೋಧ ಪಕ್ಷದ ಧರಣಿ... ಬಹುಮತ ನಮ್ಮ ಪರವಿತ್ತು... ವಿರೋಧಿಗಳ ಅಲೆ ಸಣ್ಣದಾಯಿತು.. ಬಡಪಾಯಿ ಮೊಲ ಉಳಿಯಿತು..

ಎರಡು ದಿನ ಮೊಲದೊಡನೆ ಸಹಜವಾಗಿ, ತಮಾಷೆಯಾಗಿ ಕಳೆಯಿತು..
ಆದರೆ ನಿನ್ನೆ ರಾತ್ರಿ (ಜೂನ್ 1ರಂದು) ಮೊಲ ಇದ್ದಕ್ಕಿದ್ದಂತೆ ಮಲಗಿತು.. ಎಂದಿನ ಲವಲವಿಕೆಯಿಲ್ಲ.. ಮಲಗಿಯೇ ಇತ್ತು.. ಹುಷಾರಿಲ್ಲವೋ ಗೊತ್ತಾಗಲಿಲ್ಲ.. ಸತ್ತೇ ಹೋಯಿತೆ..? ಊಹುಂ.. ಉಸಿರಾಟ ಮಾಡುತ್ತಿದೆ. ಆದರೆ ಮೊಲವನ್ನು ನಿಲ್ಲಿಸ ಹೋದರೆ ಬುಡುಕ್ಕನೆ ಬೀಳುವುದು, ಮುಂದಿನ ಎರಡು ಕಾಲನ್ನು ಒದ್ದುಕೊಳ್ಳುವುದು ಮಾಡಲು ಆರಮಬಿಸಿತು. ಹಸಿವಾಯಿತೆ ಎಂದುಕೊಂಡು ತಿಂಡಿ ಕೊಟ್ಟೆವು, ಕ್ಯಾರೆಟ್ ಇಟ್ಟೆವು..ಊಹೂಂ ಏನನ್ನೂ ಮುಟ್ಟುತ್ತಿಲ್ಲ...
ಯಾಕೋ ಮನಸ್ಸಿನಲ್ಲಿ ಅಳುಕು..

ಅಷ್ಟರಲ್ಲಿ ಅದನ್ನು ನೋಡಿದ ಅಮ್ಮ `ತಮಾ.. ಇದು ಬದುಕುವುದು ಕಷ್ಟ .. ತಾಯಿ ಹಾಲು ಕುಡಿದು ಬೆಳೆದ ಮೊಲಕ್ಕೆ ನಾವು ತಿಂಡಿಕೊಟ್ಟರೂ ಒಗ್ಗಿಕೊಳ್ಳಲಿಲ್ಲ.. ಏನೋ ಹೆಚ್ಚು ಕಡಿಮೆ ಆದಂತಿದೆ..'ಎಂದಾಗ ಮನಸ್ಸು ಭಾರ ಭಾರ...
`ಮೊಲಕ್ಕೆ ಅಷ್ಟುದ್ದದ ಹಲ್ಲಿದೆ.. ಏನನ್ನಾದರೂ ತಿನ್ನುತ್ತದೆ..' ಎಂದು ವಿಚಿತ್ರ ವಾದವನ್ನು ಮಾಡಿದ್ದು ತಂಗಿ..
ಶ್ರೀವತ್ಸ ಮಲಗಿದ್ದನಾದ್ದರಿಂದ ಈ ಸಂದರ್ಭದಲ್ಲಿ ಅವನ ಉಪಸ್ಥಿತಿ ಇರಲಿಲ್ಲ..
ಭಾವನಿಗೆ ಯಾಕಾದರೂ ತಂದೆನೋ ಎನ್ನುವಷ್ಟು ಮನಸ್ಸು ವಿಚಲಿತವಾಗಿತ್ತು..
ಮಳೆಯಲ್ಲಿ ಸಾಯುತ್ತಿತ್ತು.. ಕಾಗೆ ಗೆ ಆಹಾರವಾಗುತ್ತಿತ್ತು.. ಛೇ.. ಇಲ್ಲಿ ತಂದರೂ ಬದುಕುತ್ತಿಲ್ಲವಲ್ಲ ಎಂದು ಪೇಚಾಡಿದ..

ರಾತ್ರಿ ಅದಕ್ಕೆ ಸಾಕಷ್ಟು ಬಂದೋಬಸ್ತು ಮಾಡಿ ಬೆಚ್ಚಗೆ ಮಲಗಿಸಿದೆವು..
ಬೆಳಗಾಗುವ ವೇಳೆಗೆ ಮೊಲ ಬದುಕಿರಲಿಲ್ಲ..
ಚಿನ್ನು ಜೀವ ಬಿಟ್ಟಿತ್ತು...

ಯಾಕೋ ಮನಸ್ಸೆಲ್ಲ ಒದ್ದೆಯಾದಂತೆನಿಸಿತು..
ಬೆಳಿಗ್ಗೆ ಎದ್ದವನೆ ಓಡಿಬಂದು ಡಬ್ಬಿಯನ್ನು ನೋಡಿದ ಶ್ರೀವತ್ಸ ನೋಡುತ್ತಲೇ ಇದ್ದ..
ನೋಡುತ್ತಲೇ ಇದ್ದ..
ಮೊಲ ಕುಣಿಯುತ್ತಲೇ ಇಲ್ಲ...
ಕೊನೆಗೆ ಆತನಿಗೆ ಏನನ್ನಿಸಿತೋ ಏನೋ.. ಅಳಲು ಪ್ರಾರಂಭಿಸಿದ... ಹೇಳಲು ಆತನಿಗಿನ್ನೂ ಮಾತು ಬರುವುದಿಲ್ಲವಲ್ಲ...
ಅಮ್ಮಾ..  ಮೀ.. ಮೀ... ಅಮ್ಮಾ.. ಮೀ.. ಮೀ.. ಎಂದು ಮೊಲವನ್ನು ತೋರಿಸುತ್ತ ಻ಳಲು ಪ್ರಾರಮಭಿಸಿದ.. ಚಾಕ್ಲೆಟ್ ತೋರಿಸಿ ಆಮಿಷವೊಡ್ಡಿದರೂ ಮರುಳಾಗುತ್ತಿಲ್ಲ..
ಮೊಲದ ಮರಿ ಆತನನ್ನು ಅಷ್ಟು ಕಾಡಿತ್ತು.. ಆತ ಅಷ್ಟು ಹಚ್ಚಿಕೊಂಡಿದ್ದ..

ಈ ಚಿತ್ರಣವನ್ನು ನೋಡಿ ನಮ್ಮ ಕಣ್ಣಂಚಲ್ಲೂ ನೀರು...
ನೆನಪಾದಾಗ ಮನಸ್ಸು ಕಲ್ಲವಿಲ...