Wednesday, August 7, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 6

ದಾರಿಯಂತೂ ಅಂಕುಡೊಂಕು.. ಒಂದೆಡೆ ಕಡಿದಾದ ಗುಡ್ಡಗಳ ಸಾಲು ಸಾಲು.. ಇನ್ನೊಂದು ಕಡೆ ಆಳದ ಕಣಿವೆ..
ಪ್ರಪಾತ.. ನಡು ನಡುವೆ ಇಣುಕುವ ಚಹಾ ತೋಟಗಳು..
ನಮ್ಮ ಮೂಗಿನ ಒಳಗೆ ಹೊಕ್ಕುವ ತಂಪು ಗಾಳಿ ಶ್ವಾಸಕೋಶದಿಂದ ಸಂಪೂರ್ಣ ದೇಹವನ್ನೂ ಪತರಗುಡಿಸುತ್ತಿತ್ತು..
ತಂಪು ಗಾಳಿ ಸೇವನೆ ಮಾಡಿದಂತೆಲ್ಲ ಮೂಗಿನೊಳಗೆ ಅದೇನೋ ಅನಿರ್ವಚನೀಯ ಉರಿ..
ತಲೆಯ ಮೇಲೆ ಮಂಜಿನ ಹನಿಗಳು ಬಿದ್ದು ಕೂದಲುಗಳು ಬೆಳ್ಳಗಾಗಿದ್ದವು..
ಮುತ್ತಿನ ಹನಿಗಳು ಮುಖದ ಮೇಲೆಲ್ಲ ನೀರ ಧಾರೆಯಾಗಿತ್ತು...

ಅಲ್ಲೆಲ್ಲೋ ದಾರಿ ಮಧ್ಯದಲ್ಲಿ ಗಾಡಿ ನಿಲ್ಲಿಸಿದೆವು..
ಮಸಾಲಾ ಟೀ ಕೊಳ್ಳಬೇಕು..
ಅಂಗಡಿಗೆ ಹೋದರೆ 60 ರು.ಗೆ ಕಾಲು ಕೆಜಿ ಪ್ಯಾಕೇಟ್ ಎಂದ..
ಕೊಂಡೆವು..
ನಾಲ್ಕಾರಕ್ಕಿಂತ ಜಾಸ್ತಿ ಇರಬೇಕು ಕೊಂಡಿದ್ದು..
ಅಲ್ಲೇ ಪಕ್ಕದಲ್ಲಿ ಹಸಿರ ಚಾದರ ಹೊದ್ದಿದ್ದ ಚಹಾ ಪ್ಲಾಂಟೇಷನ್ನಿನಲ್ಲಿ ಅಡ್ಡಾಡಬೇಕೆಂಬುದು ನಮ್ಮ ಮನದ ಬಯಕೆ..
ಲಗ್ಗೆ ಇಟ್ಟೆವು..  ಅಂಗಡಿ ಉರುಫ್ ಪ್ಲಾಂಟೇಶನ್ನಿನ ಮಾಲಿಕ ಅರ್ಧಮರ್ಧ ತಮಿಳ್ಗನ್ನಢದಲ್ಲಿ ಒಪ್ಪಿಗೆ ಸೂಚಿಸಿದ್ದು ನಮಗೆ ಲೈಸೆನ್ಸ್ ಸಿಕ್ಕಂತೆ ಆಗಿತ್ತು..
ಪೋಟೋಗಳ ಸರಮಾಲೆ ಕ್ಲಿಕ್ಕಾಯಿತು..
ಮನಸ್ಸು ಹಸಿರಿನಿಂದ ಪಕ್ಕಾಯಿತು..

ಈ ನಡುವೆ ಅಲ್ಲೆಲ್ಲೋ ನಮ್ಮ ಶಿರಸಿಯ ಕೆಎ 31 ರಿಜಿಸ್ಟ್ರೇಶನ್ನಿನ ಟೆಂಪೋ ಒಂದನ್ನು ಕಂಡೆವು..
ನಮಗೋ ಶಿರಸಿಯವರ್ಯಾರೋ ಬಂದಿದ್ದಾರೆ.. ಟೆಂಪೋ ಬೇರೆ..
ಚೆಂದದ ಹುಡುಗಿಯರಿದ್ದರೆ ಕಣ್ಣು ತಂಪು ಮಾಡಿಕೊಳ್ಳಬಹುದು ಎನ್ನುವ ಕಾಮನೆ..
ಮೋಹನ, ಕಿಟ್ಟು ಉತ್ಸಾಹ ತೋರಿಸಲಿಲ್ಲ..
ನಾನು, ರಾಘು ಬೈಕೇರಿದೆವು..
ರಾಘವ ಅಂಕುಡೊಂಕಿನ ಹಾದಿಯಲ್ಲಿ ಟೆಂಪೂವನ್ನು ಹಿಂಬಾಲಿಸಿ, ನಿಲ್ಲಿಸಿ ಉಭಯಕುಶಲೋಪರಿ ಕೇಳುವ ತವಕದಿಂದ ಗಾಡಿ ಓಡಿಸಿದ..
ನಮಗೆ ಎದುರಾದ ಅದೆಷ್ಟೋ ಗಾಡಿಗಳು ತಾವಾಗಿಯೇ ಪಕ್ಕಕ್ಕೆ ಸರಿದು ಬದುಕಿದೆಯಾ ಬಡ ಜೀವವೆ ಎಂದು ಕೊಂಡವು..
ಆದರೂ ಅದೊಂದು ದೊಡ್ಡ ಯು ಟರ್ನಿನಲ್ಲಿ ವೇಗದಿಂದ ಕೂಡಿದ್ದ ನಮ್ಮ ಬೈಕು ಕಟ್ ಆಗಲೇ ಇಲ್ಲ.
ಲಾಂಗ್ ಟರ್ನ್ ತೆಗೆದುಕೊಳ್ಳುವ ಭರದಲ್ಲಿ ಎದುರಿನಿಂದ ಬಸ್ಸಿಗನೊಬ್ಬ ನಮ್ಮಷ್ಟೇ ವೇಗದಿಂದ ಬರುತ್ತಿದ್ದ..
ಮುಗೀತು ಕಥೆ..
ಅಪಘಾತ ಎರಡು ಸಾವು ಸುದ್ದಿಗೆ ನಾವೇ ಹೀರೋಗಳು.. ಆಗುತ್ತೇವೆ ಎಂದು ಕೊಂಡೆವು...
ಸೇಮ್ ಕನ್ನಡ ಸಿನೆಮಾಗಳ ಟ್ವಿಸ್ಟುಗಳಂತೆ..
ಅಲ್ಪಸ್ವಲ್ಪದರಲ್ಲಿ ತಪ್ಪಿತು..
ಅಲ್ಲದೇ ಅದರ ಪಾಡಿಗೆ ಅದು ಹೋಯಿತು.. ನಮ್ಮ ಪಾಡಿಗೆ ನಾವು ಬಂದೆವು...
`ಸಾಯ್ಲಲೆ... ಎಂತಾ ಮಳ್ಳಾಗಿತ್ತು ಮಾರಾಯಾ..' ರಾಘವ ಮುಖದಲ್ಲಿ ಬೆವರು ತುಂಬಿಕೊಂಡು ಹೇಳಿದ್ದ..
ನನಗೂ ಮುಖದಲ್ಲಿ ಬೆವರಿತ್ತು.. ಸಾವರಿಸಿಕೊಂಡ ಬಿಸಿಯುಸಿರು.. ಎದೆಯೊಳಗೆ...

 ಮತ್ತೆ ಶುರು ವೇಗ..
ಮತ್ತೊಂದು ಆರೇಳು ಕಿ.ಮಿ ಆದ ನಂತರ ಆ ಟೆಂಪೋ ಸಿಕ್ಕಿತು..
ಟೆಂಪೋದಲ್ಲಿದ್ದವರು ಶಾಲಾ ಮಕ್ಕಳು.. ತಮ್ಮ ವಾಂತಿ ಪ್ರೋಗ್ರಾಮನ್ನು ಶುರು ಹಚ್ಚಿಕೊಂಡಿದ್ದರು..
ಡ್ರೈವರ್ ಗಾಡಿಯನ್ನು ಪಕ್ಕಕ್ಕೆ ಹಾಕಿದ್ದ..
ನಾವು ಅವರ ಬಳಿ `ಹೇಯ್ ಇದು ಶಿರಸಿ ರಿಜಿಸ್ಟ್ರೇಷನ್ನಿನ ಗಾಡಿಯಲ್ಲವಾ..' ಎಂದರೆ `ಅಲ್ಲರಿ ಇದು ಮಂಡ್ಯದ್ದು ಎಂದ.. ಮತ್ತೆ ನಂಬರ್ ಪ್ಲೇಟ್ ಎಂದಾಗ ಈ ಟೆಂಪೋವನ್ನು ಶಿರಸಿಯ ಒಬ್ಬರ ಬಳಿಯಿಂದ ತಂದೆ ಎಂದ..
ನಾವು ನಮಸ್ಕಾರ ತಂದೆ ಎಂದೆವು...
ಮುಂದೆ ಮತ್ತೊಂದೆರಡು ಕಿ.ಮಿ ಅರಾಮಾಗಿ ಸಾಗಿ ಗುಡ್ಡದ ನೆತ್ತಿಯೊಂದರ ವ್ಯೂ ಪಾಯಿಂಟಿನಲ್ಲಿ ಕಿಟ್ಟು, ಮೋಹನರ ಸವಾರಿಗಾಗಿ ಕಾಯುತ್ತ ಕುಳಿತೆವು..
ಸುಮಾರು 5-6 ನಿಮಿಷದ ನಂತರ ಬಂದರು..
ಬಂದವರೇ ಎತ್ಲಾಗ್ ಹಾಳಾಗ್ ಹೋಗಿದ್ರಲೆ... ಎಂದು ಬೈಗುಳ, ಹಿಡಿಶಾಪದ ಮಂತ್ರಾಕ್ಷತೆಯನ್ನು ಪ್ರೋಕ್ಷಣ್ಯ ಮಾಡಿದರು..
ನಮ್ಮ ಚೇಸಿಂಗ್ ಸೀನಿನ ಸಾರಾಂಶವನ್ನು ಥೇಟು ನಮ್ಮ ಇಂಗ್ಲೀಷ್ ಎಕ್ಸಾಂ ಸಮ್ಮರಿ ಬರೆದಂತೆ ಹೇಳಿದೆವು..

ಒಟ್ಟಾಗು ಮುಂದಡಿ ಇಡುತ್ತಿರಲು ಮದ್ಯಾಹ್ನ ದಾಟಿ ಕತ್ತಲಿನ ಕುರುಹು ಸುಳಿ ಸುಳಿದು ಬರುತ್ತಿತ್ತು,,,
ಕಳಗೆಲ್ಲೋ ಗುಡಲೂರಿನ ದೀಪಗಳು ಮಿಣುಕುತ್ತಿದ್ದವು..
ಸುತ್ತಿ ಬಳಸಿ ಇಳಿಯುತ್ತಿರಲು ಅಲ್ಲೊಂದು ಬೋಳು ಗುಡ್ಡ ಕಣ್ಣಿಗೆ ಬಿತ್ತು..
ಇದನ್ನೆಲ್ಲೋ ನೋಡಿದ್ದೀವಲ್ಲಾ ಎನ್ನುವ ಕ್ವಶ್ಚನ್ ಮಾರ್ಕ್ ತಲೆಯೊಳಗೆ..
ನೋಡಿದರೆ ಅದು ಶೂಟಿಂಗ್ ಸ್ಪಾಟ್ ಅಂತೆ..
ಕನ್ನಡದ ಸೇರಿದಂತೆ ಹಲವಾರು ಭಾಷೆಯ ಸಿನೆಮಾಗಳು ಅಲ್ಲಿ ಶೂಟಿಂಗ್ ಆಗಿವೆ ಎನ್ನುವ ವರದಿಗಳು ಸ್ಥಳೀಯರಿಂದ ಸಿಕ್ಕವು..
ಓಹೋ.. `ಹಂ ಆಪ್ ಕೆ ಹೈ ಕೌನ್...' ನೆನಪಾಯಿತು.. ಅಲ್ಲಿ ನೋಡಿದ್ದು ಕೂಡ ಜ್ಞಾಪಕಕ್ಕೆ ಬಂದಿತು..
ಅಲ್ಲೊಂದು ಗೂಡಂಗಡಿ..
ಕಪ್ಪು ಸುಂದರಿಯೊಬ್ಬಳು ಚಹಾ ತಯಾರಿಸುವಲ್ಲಿ ನಿರತಳಾಗಿದ್ದಳು..
ನಾವು  ಹೇಳುವುದು ಆಕೆಗೆ ಅರ್ಥವಾಗಿಲ್ಲವೇನೋ..
ಚಹಾ ಕೊಡಲು ಹಿಂದು ಮುಂದು ನೋಡಿದಳು..
ಕೊನೆಗೂ ಕೊಟ್ಟಳು ಎನ್ನಿ...

ಅಮತೂ ಇಂತೂ ನಮ್ಮ ಪಯಣ ಗುಡಲೂರನ್ನು ತಲುಪಿತು..
ಇದೊಂತರಾ ವಿಚಿತ್ರ ಊರು..
ಊಟಿಯ ಗುಡ್ಡಗಳು ಆರಂಭಗೊಳ್ಳುವ ಮೊದಲ ಮೆಟ್ಟಿಲ ಮೇಲೇ ಇದೆ.. ಒಂದು ದಿಕ್ಕೆಗೆ ಅಗಾಧ ಗುಡ್ಡ.. ಇನ್ನುಳಿದ ಕಡೆಗಳಲ್ಲಿ ಬಯಲೋ ಬಯಲು..
ಮೂರು ಕಡೆಗಳಲ್ಲಿ ಕರ್ನಾಟಕ, ಕೇರಳ ಸುತ್ತುವರಿದಿದೆ..
ಇನ್ನೊಂದು ಕಡೆ ತಮಿಳುನಾಡಿಗೆ ಜೋತಾಡುತ್ತಿರುವ ಗುಡಲೂರು ತಮುಳುನಾಡಿನ ರಾಜ್ಯದ್ದು..
ಮೈಸೂರಿಗರು, ವಯನಾಡಿಗರ ಬಳಕೆ ಜಾಸ್ತಿ..
ಅಪರೂಪಕ್ಕೆ ಕನ್ನಡ ಮಾತಾಡುವವರೂ ಸಿಗುತ್ತಾರೆ...
ನಮ್ಮ ಸಿರಸಿಯಷ್ಟೇ ದೊಡ್ಡದಿರಬೇಕು..
ಸುಖೋಷ್ಣ ವಾತಾವರಣ..
ಊಟಿಯಂತೆ ಐಸ್ ಪೈಸ್ ಅಲ್ಲ...ಬೆಚ್ಚಗೆ..

ರೂಮು ಹುಡುಕಬೇಕಲ್ಲ...
ಒಂದೆರಡು ಕಡೆಗಳಲ್ಲಿ ಕೇಳಿದೆವು..
ಡಬ್ಬಾ ಆಗಿತ್ತು..
ರೂಮ್ ನೋಡಿದವರೇ ಓಡಿ ಬಂದೆವು..
ಕೊನೆಗೊಂದು ಉತ್ತಮ ಲಾಡ್ಜಿನಲ್ಲಿ ರೂಮು ಹಿಡಿದೆವು..
ನಾಲ್ವರಿಗೆ ಒಂದೇ ಕೋಣೆ..
ರೂಮು ದೊಡ್ಡದಿತ್ತು.. ಚನ್ನಾಗಿತ್ತು..
ಟಿವಿ ಇರಬೇಕೆಂಬ ನಮ್ಮ ಬೇಡಿಕೆಗೆ ಓಕೆ ಸಿಕ್ಕಿತ್ತು..
ಬಂದವರು ಫ್ರೆಷ್ ಆದೆವು..
ಹೊಟ್ಟೆ ತಾಳ ಹಾಕುತ್ತಿತ್ತು...
ಅದ್ಯಾವುದೋ ಹೊಟೆಲಿಗೆ ಹೋಗಿ ಮಸಾಲಾ ದೋಸಾ ಆರ್ಡರ್ ಮಾಡಿ ತಿಂದೆವು..
ನಂತರ ಗುಡಲೂರು ಸುತ್ತಲು ಹೊರಟೆವು..
ಕೊಳ್ಳುವ ಕ್ರಿಯಾ, ಕರ್ಮಗಳು ಮುಗಿದಿತ್ತು..
ಇಲ್ಲಿ ಕೊಳ್ಳಲು ಹೋಗಲಿಲ್ಲ..
ಊರು ಚನ್ನಾಗಿದೆ..ಹುಡುಗಿಯರು ಚಂದ  ಇಲ್ಲ.. ವಾತಾವರಣ ದೂಳು ಧೂಳು..
ಆದರೂ ಒಂಥರಾ ಓಕೆ.. ಎನ್ನುವುದು ಗುಡಲೂರಿನ ಕುರಿತು ನಮ್ಮ ವಿವರಣೆ..
ಇಲ್ಲಿ ವಯನಾಡಿಗೆಷ್ಟು ದೂರ, ಹೋಗುವುದು ಹೇಗೆ ಎನ್ನುವ ಕುರಿತು ಕೇಳಿ ತಿಳಿದುಕೊಂಡೆವು..
ಮುಂಜಾನೆದ್ದು ವಯನಾಡಿಗೆ ಹೋಗಬೇಕು .. ಮಂಝಿನ ಹನಿಯಲ್ಲಿ ಇಬ್ಬನಿಯ ಧಾರೆಯ ನಡುವೆ ಖುಷಿ ಪಡಬೇಕು ಎನ್ನುವ ಕನಸುಗಳ ಸರಮಾಲೆ ನಮ್ಮದು.
ರೂಮಿಗೆ ಮರಳಿದೆವು..
ಊಟಕ್ಕೆ ಹೋಗಬೇಕು..
ಹುಡುಕಿ ಹುಡುಕಿ ಯಾವುದೋ ಒಂದು ಹೊಟೆಲಿಗೆ ಹೋದೆವು..
ಆದರೆ ಆ ಹೋಟೆಲಿನಲ್ಲಿ 10-15 ನಿಮಿಷ ಕಳೆದರೂ ಯಾವೊಬ್ಬ ಸಪ್ಲಾಯರ್ ಆಸಾಮಿಯೂ ನಮ್ಮತ್ತ ಸುಳಿಯುತ್ತಿಲ್ಲ..
ಬೇಸರ, ಹಸಿವೆ.. ಸಿಟ್ಟು ಬರುತ್ತಿತ್ತು..
ದೂರದಿಂದ ಮ್ಯಾನೇಜರ್ ನಮ್ಮನ್ನು ನೋಡುತ್ತಿದ್ದನಾದರೂ ಏನ್ ಬೇಕು ಎಂದು ಕೇಳುತ್ತಿರಲಿಲ್ಲ..
ಹಾಳಾದ ತಮಿಳಿನಲ್ಲಿ ಊಟಕ್ಕೇನೆನ್ನುತ್ತಾರೆ ಎನ್ನುವುದು ಪ್ರಶ್ನೆಯಾಗಿತ್ತು..

ಊಟಿಯ ಬೋಟಾನಿಕಲ್ ಗಾರ್ಡನ್
ನಮ್ಮೂರಿಗೆ ಬಿದಿರಿನ ಚಾಪೆ ಮಾಡಿಕೊಡಲು ಬರುತ್ತಿದ್ದ ಸುಬ್ರಮಣಿ ತರಿಕೆರೆ ಎಂಬಾತ ನನಗೆ ಯಾವಾಗಲೂ ತಮಿಳಿನಲ್ಲಿ ಊಟಕ್ಕೆ ಸಾಪಡ ಎಂದು ಹೇಳಿದ್ದು ನೆನಪಾಗೆ ಮಿತ್ರರ ಬಳಿ ಹೇಳಿದೆ..
ಅವರು ಸಾಪಡ ಕೇಳಿ ನೋಡು.. ಎಂದರು..
ನಾನು ಮ್ಯಾನೇಜರ್ ಬಳಿ ಕುಳಿತಲ್ಲಿಂದಲೇ ಸಾಪಡ ಅಂದೆ..
ಆತ ತಲೆಯಲ್ಲಾಡಿಸಿ ಸಾಪಡ ಅಂದ..
ನಾನು ಮತ್ತೆ ಸಾಪಡ ಅಂದೆ.. ಆತನೂ ಸಾಪಡ ಸಾಪಡ ಅಂದ..
ಅರೇ ಇದೇನಿದು..? ಅಂದುಕೊಂಡೆ...
ಮತ್ತೆರಡು ಬಾರಿ ಸಾಪಡ ಅಂದಾಗಲೂ ಮ್ಯಾನೇಜರ್ ಅದನ್ನು ರಿಪೀಟ್ ಮಾಡಿದ..
ದೋಸ್ತರು ನಗಲು ಆರಂಭಿಸಿದರು..
ಎಲ್ಲಾದರೂ ಬೇರೆ ಶಬ್ದ ಹೇಳಿದೆನೆ..? ಸಾಪಡ್ ಎಂದರೆ ಊಟವೇ ಅಲ್ಲವೇ ಎನ್ನುವ ಅನುಮಾನದ ಕಿಡಿ ಮನದೊಳಗೆ..
ಕೊನೆಗೆ ಮತ್ತೈದು ನಿಮಿಷದ ನಂತರ ಸಪ್ಲಾಯರ್ ಬಂದ ..
ಆತನ ಬಳಿ ನಮ್ಮ ಹರುಕು ಮುರುಕು ಭಾಷೆಯಲ್ಲಿ  ಊಟದ ಕುರಿತು ಹೇಳಿದೆವು..
ಆತ ತಂದ.. ಸಿಕ್ಕಿದ ಖುಷಿಯಲ್ಲಿ ಉಂಡೆವೋ ಉಂಡೆವು..
ರೂಮಿಗೆ ಬಂದವರೇ ಗಡದ್ದು ನಿದ್ದೆ...
ಮರುದಿನದ ವಯನಾಡಿನ ಕನಸು ಬೆಚ್ಚಗೆ ಮೊಳೆಯುತ್ತಿತ್ತು...

(ಮುಂದುವರಿಯುತ್ತದೆ)

No comments:

Post a Comment