Saturday, March 29, 2014

ಮರುಕಳಿಸಿತು ಇತಿಹಾಸ (ಕಥಾ ಸರಣಿ ಭಾಗ-4)

       ವಸಂತಗಳುರುಳಿದ್ದವು. ಜಾತ್ರೆಯಲ್ಲಿ ಸಿಕ್ಕು ಕಣ್ಣ ಹನಿಯೊಂದಿಗೆ ವಾಣಿಯನ್ನು ಬೀಳ್ಕೊಟ್ಟಿದ್ದ ವಿನಾಯಕನಿಗೆ ಮತ್ತೆ ನೆನಪಾಗಿರಲಿಲ್ಲ. ತಾನಿಲ್ಲದೆಯೂ ಆಕೆ ಚನ್ನಾಗಿದ್ದಾಳಲ್ಲ ಎಂಬ ಭಾವನೆ ವಿನಾಯಕನಲ್ಲಿ ವಾಣಿಯನ್ನು ಮರೆಸುವಂತೆ ಮಾಡಿತ್ತು. ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯೊಂದು ವಿನಾಯಕನನ್ನು ಕೆಲಸಕ್ಕಾಗಿ ಕೈಬೀಸಿ ಕರೆದಿತ್ತು. ವಿನಾಯಕನೂ ಕೆಲವನ್ನು ರಪಕ್ಕನೆ ಬಾಚಿಕೊಂಡಿದ್ದ. ಸಂಬಳ ಐವತ್ತರು ಸಹಸ್ರಗಳ ಮೇಲೆ ಎಣಿಸಲೂ ಆರಂಭಿಸಿದ್ದ. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲಿ ಆತನ ಮದುವೆಯ ಕುರಿತು ಮಾತನಾಡತೊಡಗಿದ್ದರು. ಮನೆಯವರು ಹುಡುಗಿಯನ್ನು ಹುಡುಕಲಿ ಎಂದು ವಿನಾಯಕನೂ ಸುಮ್ಮನುಳಿದಿದ್ದ. ಒಳ್ಳೆಯವಳಾಗಿ ತನ್ನ ಗುಣಗಳನ್ನು ಇಷ್ಟಪಟ್ಟು ಚನ್ನಾಗಿದ್ದರೆ ಸಾಕು. ಅಂತಹ ಹುಡುಗಿಯನ್ನು ಒಪ್ಪಿಕೊಳ್ಳೋಣ ಎಂಬ ನಿರ್ಧಾರಕ್ಕೆ ವಿನಾಯಕ ಬಂದಿದ್ದ.
                   ವಿನಾಯಕ ಸಾಫ್ಟ್ ವೇರ್ ಕಂಪನಿಯ ಕೆಲಸಗಾರನಾಗಿದ್ದ ಕಾರಣ ಸಾಕಷ್ಟು ಜಾತಕಗಳೂ ಬಂದಿದ್ದವು. ಅವುಗಳಲ್ಲಿ ಹಲವು ವಿನಾಯಕನ ಜಾತಕದೊಂದಿಗೆ ಹೊಂದಿಕೆಯಾಗುತ್ತಿದ್ದವು. ಹೊಂದಿಕೆಯಾಗುವ ನಾಲ್ಕೈದು ಜಾತಕಗಳೊಂದಿಗೆ ಬಂದಿದ್ದ ಹುಡುಗಿಯರ ಪೋಟೋಗಳನ್ನು ವಿನಾಯಕನಿಗೆ ಕಳಿಸಲಾಯಿತು. ವಿನಾಯಕ ಅವೆಲ್ಲವನ್ನೂ ನೋಡಿದ. ಅವುಗಳಲ್ಲಿ ಮೂರು ಹುಡುಗಿಯರು ವಿನಾಯಕನಿಗೆ ಇಷ್ಟವಾಗಲಿಲ್ಲ. ನಾಲ್ಕನೆಯ ಹುಡುಗಿ ಚನ್ನಾಗಿದ್ದಳು. ಐದನೆಯವಳು ನಾಲ್ಕನೆಯವಳಷ್ಟು ಚನ್ನಾಗಿರದಿದ್ದರೂ ಲಕ್ಷಣವಾಗಿದ್ದಳು. ಕೊನೆಗೆ ಸಾಕಷ್ಟು ಅಳೆದು-ತೂಗಿ ಐದನೆಯವಳಿಗೆ ಗ್ರೀನ್ ಸಿಗ್ನಲ್ ಕೊಟ್ಟ. ಶುಭದಿನವೊಂದರಂದು ವಿನಾಯಕನ ಮದುವೆ ಆ ಹುಡುಗಿಯ ಜೊತೆಗೆ ತನ್ನ ಹಳ್ಳಿಮನೆಯಲ್ಲಿ ನಡೆಯಿತು. ನಂತರದ ದಿನಗಳು ವಿನಾಯಕನಿಗೆ ಬಹಳ ಸಂತಸವನ್ನು ನೀಡುವಂತವಾಗಿದ್ದವು.

***
                  ಅರ್ಚನಾಳ ಮನೆಯಲ್ಲೂ ಗಂಡು ನೋಡುತ್ತಿದ್ದರು. ಹುಡುಗ ಸಾಫ್ಟ್ ವೇರ್ ಕೆಲಸದಲ್ಲಿಯೇ ಇರಬೇಕು ಎನ್ನುವುದು ಮನೆಯ ಹಿರಿಯರ ಆಸೆಯಾಗಿದ್ದ ಕಾರಣ ಹೆಚ್ಚಿನ ಆಯ್ಕೆಗಳಿರಲಿಲ್ಲ. ಒಂದೆರಡು ಸಂಬಂಧಗಳು ಬಂದಿದ್ದರೂ ಅರ್ಚನಾ ಅವುಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಗೊಂದು ದಿನ ವಿನಾಯಕನ ಜಾತಕ ಬಂದಾಗ ಪೋಟೋ ನೋಡಿದವಳೇ ಇಷ್ಟಪಟ್ಟು ಬಿಟ್ಟಿದ್ದಳು. ಹೀಗಾಗಿ ವಿನಾಯಕ-ಅರ್ಚನಾಳ ಮದುವೆ ಅದ್ಧೂರಿಯಾಗಿ ಜರುಗಿತ್ತು.
                  ಹಳ್ಳಿ ಹುಡುಗಿ ಅರ್ಚನಾ ಪದವಿಯ ವರೆಗೆ ಓದಿದ್ದಾಳೆ. ನಗರಜೀವನ ಹೊಸದಾಗಿದ್ದರೂ ಆಕೆಗದು ಆಕರ್ಷಣೀಯವಾಗಿರುವ ಕಾರಣ ಬೇಗನೆ ಹೊಂದಿಕೊಂಡಳು. ಮದುವೆಯಾದ ನಾಲ್ಕೇ ದಿನದಲ್ಲಿ ವಿನಾಯಕ ಹಾಗೂ ಅರ್ಚನಾ ದಂಪತಿಗಳು ಬೆಂಗಳೂರು ವಾಸಿಯಾಗಿಬಿಟ್ಟರು. ಬೆಂಗಳೂರು ಸೇರಿದ ಕೆಲವೇ ವಾರಗಳಲ್ಲಿ ಅರ್ಚನಾಳಿಗೂ ಒಳ್ಳೆಯ ಕಂಪನಿಯೊಂದರಲ್ಲಿ ಜಾಬ್ ಸಿಕ್ಕಿತು. ನಂತರ ಇವರ ಬದುಕು ಯಾಂತ್ರೀಕೃತವಾಗತೊಡಗಿತು. ವಾರದಲ್ಲಿ ಐದು ದಿನ ಬಿಡುವಿಲ್ಲದ ಕೆಲಸ. ಉಳಿದೆರಡು ದಿನ ಪಂಜರದಿಂದ ಹಾರಿಬಿಟ್ಟಂತೆ ಬದುಕು. ಪುರಸೊತ್ತು ಸಿಗುವ ಎರಡು ದಿನಗಳಲ್ಲಿ ಏನು ಮಾಡೋಣ, ಏನು ಮಾಡಬಾರದು ಎನ್ನುವ ಗೊಂದಲ. ಮೊದ ಮೊದಲು ಈ ಕೆಲಸ-ಬಿಡುವಿಲ್ಲದ ಓಟ ಅರ್ಚನಾ ಹಾಗೂ ವಿನಾಯಕರಿಗೆ ಖುಷಿಕೊಟ್ಟವಾದರೂ ನಂತರದ ದಿನಗಳಲ್ಲಿ ಇಬ್ಬರಲ್ಲೂ ಏನೋ ಅಸಹನೆ ಕಾಡಲು ಆರಂಭವಾಯಿತು. ಯಾಂತ್ರೀಕೃತ ಬದುಕಿನಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ದಟ್ಟವಾಗತೊಡಗಿತು. ಇದನ್ನು ಮರೆಸಲೋ ಎಂಬಂತೆ ವೀಕೆಂಡಿನಲ್ಲಿ ಸಿನೆಮಾ, ಟೂರು, ಪೋಟೋಗ್ರಫಿ, ಟ್ರೆಕ್ಕಿಂಗ್ ಹೀಗೆ ಹಲವು ವಿಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರಂಭಿಸಿದರು.
                  ಆದರೆ ದಿನಗಳೆದಂತೆ ಟೂರು ಬೋರಾಗತೊಡಗಿತು, ಸಿನೆಮಾ ಗಳು ಬಾಲಿಶವೆನ್ನಿಸತೊಡಗಿದವು. ಕ್ಲಿಕ್ಕಿಸುತ್ತಿದ್ದ ಪೋಟೋಗಳೆಲ್ಲ ಬಣ್ಣಕಳೆದುಕೊಂಡಂತೆ ಬಾಸವಾಗಲಾರಂಭಿಸಿದವು. ಟ್ರೆಕ್ಕಿಂಗೂ ಮನಸ್ಸನ್ನು ಆವರಿಸಲಿಲ್ಲ. ಕೆಲಸದ ಕಾರಣವೋ ಎಂಬಂತೆ ಸಂಸಾರವೂ ಯಾಂತ್ರೀಕೃತವಾಗಲಾರಂಭಿಸಿದ್ದವು.  ಸಂಸಾರದಲ್ಲಿ ಎಲ್ಲ ಇದ್ದರೂ ಏನೂ ಇಲ್ಲ ಎನ್ನುವಂತಾಗಲಾರಂಭಿಸಿತ್ತು. ಗಂಡ-ಹೆಂಡತಿಯರಾಗಿ ಬದುಕು ನಡೆಡುತ್ತಿದ್ದರಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕೆಲಸಕ್ಕೆ ಹೊರಡಬೇಕು. ಜಗತ್ತು ನಗುತ್ತ ಓಡಾಡುವ ಹೊತ್ತಿನಲ್ಲಿ ಬಂದು ಮನೆ ಸೇರಿ ನಿದ್ದೆ ಮಾಡಬೇಕು, ಎಲ್ಲ ಬೆಚ್ಚಗೆ ಗೂಡಿನಲ್ಲಿ ಇರುವ ಸಮಯದಲ್ಲಿ ಇವರು ಮಾತ್ರ ಯಾವುದೋ ಕಾಂಕ್ರೀಟು ಕೋಣೆಯಲ್ಲಿ ಕಂಪ್ಯೂಟರಿನ ಮುಂದೆ ಕೆಲಸವನ್ನು ಮಾಡುತ್ತ, ಹಣೆಬರಹವನ್ನು ಹಳಿಯುತ್ತ ಕೂರಬೇಕು. ತಿಂಗಳ ಆರಂಭದಲ್ಲಿ ಶ್ರೀಮಂತರಂತೆ ಅಡ್ಡಾಡುತ್ತ, ತಿಂಗಳಾಂತ್ಯದಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತ, ಪ್ರೆಸ್ಟಿಜ್ ಪ್ರಶ್ನೆಯಾಗಿ ದುಬಾರಿ ಜೀವನದಲ್ಲೇ ಬದುಕುತ್ತ ಹೈರಾಣಾದರು.
                 ಇಂತಹ ಸಮಯದಲ್ಲೇ ವಿನಾಯಕ ಅನೇಕ ಸಾರಿ ಈ ಹಾಳಾದ ಕೆಲಸವನ್ನು ಬಿಟ್ಟು ತಮ್ಮೂರಿಗೆ ವಾಪಾಸಾಗಿಬಿಡಲಾ ಎಂದುಕೊಂಡಿದ್ದಿದೆ. ಆದರೆ ಒಂದು ಚಕ್ರಕ್ಕೆ ಸಿಕ್ಕಿಬಿದ್ದಾಗ ಏನೆಂದರೂ ಬದಲಾವಣೆ ಕಷ್ಟ. ವರ್ಷಗಳೆರಡು ಉರುಳಿದವು. ಕೊನೆಗೊಮ್ಮೆ ಇಬ್ಬರೂ ಬೆಂಗಳೂರಿನ ಬದುಕಿಗೆ ಶರಣು ಹೊಡೆದು ತಮ್ಮೂರಿಗೆ ವಾಪಾಸಾಗಲು ಒಂದು ಬಲವಾದ ನೆಪ ಸಿಕ್ಕೇಬಿಟ್ಟಿತು. ಅರ್ಚನಾ ತಾಯಿಯಾಗಿದ್ದಳು.  ಮುದ್ದಾದ ಕೂಸಿಗೆ ವಿನಾಯಕ ಅಪ್ಪನಾಗಿದ್ದ. ಕೂಸಿನ ನಗು, ಕೂಸಿನ ಸೆಳೆತ, ಕೂಸಿನ ಪ್ರೀತಿ ವಿನಾಯಕ-ಅರ್ಚನಾರನ್ನು ಹಳ್ಳಿಯ ಕಡೆಗೆ ಎಳೆದುಕೊಂಡು ಬಂದಿತ್ತು. ಅಷ್ಟರಲ್ಲಿ ಸಂಪಾದನೆಯೂ ಸಾಕಷ್ಟಾದ್ದರಿಂದ ಇನ್ನು ಬೆಂಗಳೂರು ಸಾಕು ಎನ್ನುವ ನಿರ್ಧಾರವನ್ನು ಮಾಡಿಯೇ ವಿನಾಯಕ-ಅರ್ಚನಾ ದಂಪತಿಗಳು ರಾತ್ರಿಯೇ ಇಲ್ಲದ ಊರನ್ನು ಬಿಟ್ಟು ಬಂದಿದ್ದರು. ಅಲ್ಲೊಂದು ಕಡೆಗೆ ಜಮೀನನ್ನು ಕೊಂಡು ಹಳ್ಳಿಗನಾಗಿ ಬದುಕಲು ತೀರ್ಮಾನಿಸಿದ್ದರು.

***
               ವಿನಾಯಕ ಕೂಸು ಹುಟ್ಟಿದ ಘಳಿಗೆಯಲ್ಲಿ ಹೆಸರಿಗೆ ಆಲೋಚನೆ ಮಾಡಿದ್ದ. ಅರ್ಚನಾಳೂ ಯಾವ ಹೆಸರಿಡಬೇಕೆಂದು ಆಲೋಚಿಸಿದ್ದಳು. ಅದ್ಯಾವುದೋ ಘಳಿಗೆಯಲ್ಲಿ ವಿನಾಯಕನಿಗೆ ಹೊಣೆದ ಹೆಸರು `ವಾಣಿ..'. ಈ ಹೆಸರು ಹೊಳೆದಿದ್ಯಾಕೆ ಎನ್ನುವ ಕಾರಣ ವಿನಾಯಕನಿಗೆ ಅರಿವಾಗಲಿಲ್ಲ. ವಾಣಿಯ ಹೆಸರೇ ಮತ್ತೆ ನೆನಪಾಗಿದ್ದಕ್ಕೆ ವಿನಾಯಕ ತನ್ನೊಳಗೆ ತಾನು ವಿಸ್ಮಿತನೂ ಆಗಿದ್ದ. ಬೆಂಗಳೂರಿನಲ್ಲಿದ್ದಷ್ಟು ದಿನಗಳೂ ವಾಣಿ ನೆನಪಾಗಿರಲಿಲ್ಲ. ಮರಳಿ ಊರಿಗೆ ಬಂದಾಗ ನೆನಪಾದಳೇ ಎಂದುಕೊಂಡ. ಇಷ್ಟೆಲ್ಲ ದಿನಗಳು ಕಳೆದಿದ್ದರೂ ವಾಣಿಯ ಬಗೆಗಿನ ಭಾವನೆ ಹಾಗೂ ಆಕೆಯ ನೆನಪು ತನ್ನಲ್ಲಿನ್ನೂ ಶಾಶ್ವತವಾಗಿದೆಯಲ್ಲ ಎಂದುಕೊಂಡ. ಮೊದಲ ಪ್ರೇಮವೇ ಹೀಗಿರಬೇಕು. ಎಷ್ಟು ಕಷ್ಟಪಟ್ಟು ಮರೆತರೂ ಮರೆಯಲೊಲ್ಲದು. ಮತ್ತೆ ಮತ್ತೆ ನೆನಪಾಗಿ ಬದುಕಿನ ತಿರುವಿನಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಅಚ್ಚರಿಯ ಕಚಗುಳಿಯನ್ನಿತ್ತು, ಬೆಚ್ಚಿ ಬೀಳಿಸುತ್ತದೆ. ಹುಚ್ಚು ಹಿಡಿಸುತ್ತದೆ ಎಂದುಕೊಂಡ. ವಾಣಿಯ ಹೆಸರೇ ಮಗಳಿಗಿರಲಿ. ಮಗಳಲ್ಲಿ ವಾಣಿಯನ್ನು ಕಾಣುತ್ತೇನೆ ಎಂದುಕೊಂಡ. ತನ್ನೂರಿನ ತೋಟದ ನಡುವಿನಿಂದ ಹಾದು ಬಂದ ತಂಗಾಳಿಯೊಂದು ಆತನ ಮುಖದ ಮೇಲೆ ನರ್ತನ ಮಾಡಿದಂತೆ ಸುಳಿದಾಡಿ ಸುಮ್ಮನೆ ಸರಿದುಹೋದಂತಾಯಿತು. ವಿನಾಯಕನ ಮನಸ್ಸು ತಂಪಾಗಿತ್ತು.
                ವಿನಾಯಕ ಹಾಗೂ ವಾಣಿ ಮತ್ತೊಮ್ಮೆ ಹುಟ್ಟಿ ಬಂದಿದ್ದರು. ಇತಿಹಾಸ ಮತ್ತೊಮ್ಮೆ ಮರುಕಳಿಸಿ ನಕ್ಕಿತ್ತು. ಮತ್ತೆ ಹುಟ್ಟಿದ ವಾಣಿ-ವಿನಾಯಕರ ನಡುವೆಯಾದರೂ ಪ್ರೇಮ ಹುಟ್ಟಲಿ.. ಅದು ಸುಖಾಂತ್ಯವಾಗಲಿ ಎಂದು ಹಾರೈಸಿತ್ತು.

**
(ನಮಸ್ಕಾರ
ನಾನು ಈ ಕಥೆಯ ಮೊದಲ ಭಾಗವನ್ನು ಬರೆಯುವಾಗ ಖಂಡಿತ ಇಷ್ಟು ಮುಂದುವರಿಯುತ್ತದೆ ಎಂದುಕೊಂಡಿರಲಿಲ್ಲ. ಮೊದಲ ಭಾಗಕ್ಕೆ ಒಳ್ಳೆಯ ರೆಸ್ಪಾನ್ಸ್ ನೀಡಿದ ಕಾರಣ ಎರಡನೇ ಭಾಗಕ್ಕೆ ಮುಂದುವರಿಯಿತು. ನಂತರ ಇದೇ ಮೂರಾಗಿ ಇದೀಗ ನಾಲ್ಕಕ್ಕೆ ಬಂದು ನಿಂತಿದೆ. ಖಂಡಿತ ಇದೇ ಕೊನೆಯ ಭಾಗ. ಇನ್ನು ಮುಂದುವರಿಸಲಾರೆ. ಈ ಕಥೆಯ ಮೊದಲ ಭಾಗ ಖಂಡಿತ ನಡೆದಿದ್ದು. ಆದರೆ ಉಳಿದ ಭಾಗಗಳು ಮಾತ್ರ ಕಲ್ಪನೆ. ಸ್ವಲ್ಪ ಎಳೆದಿದ್ದು ಹೆಚ್ಚಾಗಿರಬಹುದು.. ಹೇಳಿದ ವಿಷಯವೇ ಮತ್ತೆ ಮತ್ತೆ ಬಂದು ಕಿರಿಕಿರಿಯಾಗಿರಬಹುದು. ಖಂಡಿತ ಇದು ನೆನಪುಗಳೊಂದಿಗೆ ಆಟವಾಡಿದ ಕಥೆ ಎಂದುಕೊಳ್ಳಬಹುದು. ಕಾಡುವ ಮೊದಲ ಪ್ರೇಮದ ಕುರಿತಾದ ಕಥೆ. ಸಲಹೆ ನೀಡಿ ಸೂಚನೆಗಳನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳಲೇ ಬೇಕು.
ಥ್ಯಾಂಕ್ಯೂ )

No comments:

Post a Comment