Saturday, March 29, 2014

ಕಲ್ಪನಾ

ಆಕೆಯೊಂದು ಕಲ್ಪನಾ ಕಾವ್ಯ |

ಅಂಗೈ ಮುಷ್ಟಿಯೊಳಗೆ ಇಡಿಯ
ಆಗಸವ ಹಿಡಿಯ ಬಯಸಿದಾಕೆ.. |
ಕಲ್ಲು ಮಣ್ಣುಗಳ ನಡುವೆ
ಸುಮ್ಮನೆ ಅರಳಿದಾಕೆ ..|
ಬಡತನವೇ ಒಡಮೂಡಿದಂತಿಹ
ನಿಘೂಡ ಹಳ್ಳಿಯೊಳು ಜನಿಸಿದಾಕೆ
ನಮ್ಮ ಕಲ್ಪನಾ |

ಹೊಸ ಉತ್ಸಾಹದ ಚಿಲುಮೆ ಚಿಮ್ಮಿ
ಚೆಲ್ಲುವಾಕೆ ಕಲ್ಪನಾ..|
ನಮ್ಮ ನಿಮ್ಮೊಳಗಣ ಮೂರ್ತ-
ಅಮೂರ್ತ ಕನಸು ಕಲ್ಪನಾ,
ಅಂದೊಮ್ಮೆ ಆಗಸಕ್ಕೆ ಹಾರಿ
ಆಗಸವ ಅಂಗೈಯೊಳಗೆ ಹಿಡಿದು
ಮಿನುಗಿದಳು ಕಲ್ಪನಾ |

ಕಾವ್ಯವಾಗಲೇ ಕವನವಾಯಿತು
ಸುಂದರ ಹಾಡಾಯಿತು..
ಕಲ್ಪನೆ ವಾಸ್ತವವಾಯಿತು |

ಆಗಸದ ಚಂದ್ರ ನಕ್ಷತ್ರಗಳೊಳಗೆ
ಅರಳಿ ನಿಂತಳು ಕಲ್ಪನಾ..
ಆಗಸಕ್ಕೇರಿದ ಕಲ್ಪನಾ
ಮರಳಿ ಭುವಿಗೆ ಬಂದು
ಭುವಿ ಭಾರತದ ಕನಸು ಕಂಡು
ಚುಂಬಿಸಬಯಸಿದಳು |
ಬಯಸಿದಾಗಸವೇ ಬೆಂಕಿ
ಮಳೆಯಂತಾಯ್ತು |
ವಾಸ್ತವ ಕಹಿಯಾಯ್ತು |

ರಂಗಿನ ಲೋಕದಲ್ಲಿ ವಿಹಾರ
ಮಾಡಬಯಸಿದ್ದಳು ಕಲ್ಪನಾ
ರಂಗು ರಂಗಾಗಿದ್ದಳು ಕಲ್ಪನಾ |
ರಂಗಿನ ರಂಗಮಂಚವೇ ಹಾವಾಯಿತು |

ಚಿಟ್ಟೆಯಂತಾದ ಕಲ್ಪನಾ
ಆ ಬೆಂಕಿಯೊಳು ಕರಕಲಾಗಿ
ಸುಟ್ಟು-ಬೆಂದು-ಸೀದು ಹೋದಳು...

ಮತ್ತೊಮ್ಮೆ ಕಲ್ಪನೆ
ವಾಸ್ತವವಾಯಿತು |
ಕಲ್ಪನಾ ಮಿನುಗುತಾರೆಯಾದಳು |

(ಈ ಕವಿತೆಯನ್ನು ಬರೆದಿದ್ದು 3.04.2007ರಂದು ದಂಟಕಲ್ಲಿನಲ್ಲಿ)

No comments:

Post a Comment