Wednesday, March 26, 2014

ಪ್ರೇಮಪತ್ರ (ಕಥೆ)

 `ಪ್ರೀತಿಯ ಜಯಾಳಿಗೆ..
ನಿನ್ನ ಕಂಡ್ರೆ ನಂಗೆ ಒಂಥರಾ ಆಕ್ತು. ಮನಸೆಲ್ಲಾ ಹೂವಿನಂಗೆ ಹಾರಾಡಲೆ ಹಿಡಿತು. ನಿನ್ನ ಉದ್ದ ಜಡೆ, ಆಗಾಗ ನೀನು ಹರಡಿಕೊಂಡು ಬರುವ ಕೂದಲು, ಹೈಸ್ಕೂಲಿಗೆ ಬಪ್ಪಕೀದ್ರೆ ಆನು ನೋಡ್ತಾ ಇದ್ದಿ ಹೇಳಿ ಗೊತ್ತಿದ್ರೂ ನನ್ನ ನೋಡದೇ ಸತಾಯಿಸದು ಈ ಮುಂತಾದ ಹಲವಾರು ಕಾರಣಗಳೇ ನನ್ನನ್ನು ಸೆಳೆದಿದ್ದು.
             ಸುಮಾರ್ ದಿನದಿಂದ ಆನು ನಿಂಗೆ ಹೇಳವು ಅಂದ್ ಕಂಡಿದ್ದಿದ್ದಿ. ನಿನ್ನನ್ನು ನೋಡವು ಹೇಳಿ ನಿಮ್ಮನೆ ಹತ್ರನೂ ಬಂದಿದ್ದಿದ್ದಿ. ನಿನ್ ಅಪ್ಪಯ್ಯ ಅಲ್ಲಿ ಕಂಡ ತಕ್ಷಣ ಆನು ಹಂಗೆ ಓಡ್ ಬಂದ್ ಬಿಟ್ಟಿದ್ದಿ. ನನ್ನ ಮನಸ್ಸಿನ ಭಾವನೆ ನಿಂಗೆ ಹೇಳದು ಹೆಂಗೆ ಹೇಳಿ ಆಲೋಚನೆ ಮಾಡ್ತಾ ಇದ್ದಾಗಲೇ ಪಕ್ಕದ ಮನೆಯ ನವೀನ ಹಾಗೂ ರಾಜೇಂದ್ರ ಯನ್ನ ಹತ್ರ ಪತ್ರ ಬರಿ ಹೇಳಿದ್ದ ಅದಕ್ಕೆ ಆನು ಬರೀತಾ ಇದ್ದಿ.
              ನಾನು ಬಹಳ ದಿನಗಳಿಂದ ನಿನ್ನನ್ನು ಇಷ್ಟ ಪಟ್ಟಿದ್ದಿ. ಆದರೆ ಹೇಳ್ ಕ್ಯಂಬಲೆ ಒಂಥರಾ ಆಗ್ತಾ ಇತ್ತು. ಈ ಪತ್ರದ ಮೂಲಕ ನನ್ನ ಮನಸಿನ ಭಾವನೆಗಳನ್ನು ನಿನ್ ಹತ್ರಕ್ಕೆ ಹೇಳ್ತಾ ಇದ್ದಿ...

....

          ಇಷ್ಟು ಬರೆದಿದ್ದ ಪತ್ರವೊಂದು ಗಂಗೆಯ ಕೈಗೆ ಸಿಕ್ಕಾಗ ಇದ್ಯಾರ ಕೆಲಸವಿರಬಹುದು ಎನ್ನುವ ಆಲೋಚನೆ ಮೂಡಿದ್ದಂತೂ ಸತ್ಯ. ಮನೆಯಲ್ಲಿ ನಾಲ್ಕು ಜನ ಮೈದುನರಿದ್ದ. ನಾಲ್ವರಲ್ಲಿ ಹೈಸ್ಕೂಲಿಗೆ ಹೋಗುವ ಮೈದುನರು ಇಬ್ಬರು. ಅವರಲ್ಲಿ ಯಾರೋ ಒಬ್ಬರು ಯಾವುದೋ ಹುಡುಗಿಗೆ ಪತ್ರ ಬರೆದಿದ್ದಾರೆ ಎಂದುಕೊಂಡಳು ಗಂಗೆ.
           ಹೀಗೆ ಒಂದು ದಿನ ಬಟ್ಟೆ ತೊಳೆದು ವಸ್ತ್ರ ಒಣಗಿಸಲು ಮೇಲ್ಮೆತ್ತಿಗೆ ಹೋಗಿದ್ದಾಗ ಗಂಗತ್ತಿಗೆಯ ಕೈಗೆ ಆ ಪತ್ರ ಸಿಕ್ಕಿತ್ತು. ಪತ್ರವನ್ನು ಓದಿದ ತಕ್ಷಣ ಯಾರ ಕೆಲಸ ಇರಬಹುದು ಇರು ಎನ್ನುವುದು ಗಂಗೆಗೆ ಗೊತ್ತಾಗಿರಲಿಲ್ಲ. ಜೊತೆಗಿದ್ದ ವಸುಮತಿ ಪತ್ರವನ್ನು ನೋಡಿ `ಇದು ನಾಗಣ್ಣಯ್ಯನ ಅಕ್ಷರ.. ಅಂವ ಯಾರಿಗೋ ಪತ್ರ ಬರದ್ದಾ..' ಎಂದಾಗಲೇ ನಾಗೇಶ ಹೀಗೂ ಮಾಡುತ್ತಾನೆ ಎನ್ನುವುದರ ಅರಿವಾಗಿದ್ದು. ನಾಗೇಶನ ಪ್ರೇಮ ಪುರಾಣ ಬೆಳಕಿಗೆ ಬಂದಿದ್ದು.
              ತನ್ನ ಪ್ರೇಮಪುರಾಣ ಗಂಗತ್ತಿಗೆಗೆ ತಿಳಿದುಹೋಗಿದೆ ಎಂಬ ಸಂಗತಿ ಗೊತ್ತಾದಾಗಿನಿಂದ ನಾಗೇಶ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯವನ್ನು ಆರಂಭಿಸಿದ್ದ. ಪಕ್ಕದ ಮನೆಯ ಇಬ್ಬರು ಓರಗೆಯ ಹುಡುಗರ ಜೊತೆಗೆ ಸೇರಿಕೊಂಡು ತೋಟದ ಗುಡ್ಡೆಯ ಜಯಾಳಿಗೆ ಪತ್ರಬರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡಿದ್ದ ನಾಗೇಶ.  ಹುಮ್ಮಸ್ಸಿನಲ್ಲಿ ಹಾಗೂ ಪಕ್ಕದ ಮನೆಯ ಇಬ್ಬರ ಬೆಂಬಲಕ್ಕೆ ಪ್ರತಿಯಾಗಿ ಬರೆದಿದ್ದ ಪತ್ರವನ್ನು ಕೊಡುವ ಧೈರ್ಯ ನಾಗೇಶನಿಗೆ ಇರದಿದ್ದ ಕಾರಣ ಮೇಲ್ಮೆತ್ತಿಯ ಟ್ರಂಕಿನ ಮೇಲೆ ಪತ್ರ ಕುಳಿತಿತ್ತು. ಅರ್ಧಮರ್ಧ ಬರೆದ ನಂತರ ಅದನ್ನು ಮುಂದುವರಿಸಿ ಮುಕ್ತಾಯಗೊಳಿಸುವ ಬಗೆಯನ್ನೂ ತಿಳಿಯದೇ ಹಾಗೆ ಬಿಟ್ಟಿದ್ದ ಆತ.
                  ನಾಗೇಂದ್ರ ಇಂತದ್ದೊಂದು ಕೆಲಸಕ್ಕೆ ಕೈಹಾಕಿರುವ ವಿಷಯವನ್ನು ಗಂಗೆ ತನ್ನ ಯಜಮಾನ ಸುಬ್ರಾಯಂಗೆ ತಿಳಿಸಲೇಬೇಕು. ಇಲ್ಲದಿದ್ದರೆ ಮನೆಯ ಮಾನವನ್ನು ನಾಗೇಶ ಹರಾಜು ಮಾಡಿಬಿಡುತ್ತಾನೆ ಎಂದುಕೊಂಡ ಆಕೆ ಸಂಜೆ ಮನೆಯವರಿಗೆ ವಿಷಯವನ್ನು ತಿಳಿಸಿದ್ದಳು. ಅದಕ್ಕೆ ಪ್ರತಿಯಾಗಿ ಸುಬ್ರಾಯ `ಹೌದಾ..? ನಾಗೇಶ ಹಿಂಗೆ ಮಾಡಿದ್ದು ಖರೆ ಹೌದಾ..?' ಎಂದು ಕೇಳಿ ಸುಮ್ಮನಾಗಿದ್ದ.

**

                ಯಲ್ಲಾಪುರ ಕಡೆಯ ಗಂಗೆ ಶಿರಸಿ ಕಡೆಗೆ ಮದುವೆಯಾಗಿ ಬಂದ ಸಂದರ್ಭದಲ್ಲಿ ಹವ್ಯಕರಲ್ಲಿ ಹೆಣ್ಣು ಹೆಚ್ಚಾಗಿತ್ತು. ಅವಿಭಕ್ತ ಕುಟುಂಬ ಹಾಗೂ ಸ್ವಲ್ಪ ದೂರದ ಸೀಮೆ. ಆದರೂ ಪರವಾಗಿಲ್ಲ ಸಾಕಷ್ಟು ಆಸ್ತಿಯಿದೆ. ಒಳ್ಳೆಯ ಜನ ಎನ್ನುವ ಕಾರಣಕ್ಕೆ ಗಂಗೆಯ ಮನೆಯವರು ಶಿರಸಿ ಸೀಮೆಗೆ ಮದುವೆ ಮಾಡಿಕೊಟ್ಟಿದ್ದರು. ಗಂಗೆಯ ಗಂಡ ಸುಬ್ರಾಯ, ಮಾವ ವಿಶ್ವೇಶ್ವರ, ಸುಬ್ರಾಯನ ಐದು ಜನ ತಮ್ಮಂದಿರು, ಆರು ಜನ ಅಕ್ಕತಂಗಿಯರೆಲ್ಲ ಮದುವೆಯಾಗಿ ಆರು ತಿಂಗಳವರೆಗೆ ಗಂಗೆಗೆ ಬಹಳ ಒಳ್ಳೆಯವರಂತೆ ಕಂಡಿದ್ದರು. ಆದರೆ ಆ ನಂತರದ ದಿನಗಳಲ್ಲಿಯೇ ಮನೆಯ ಸದಸ್ಯರೆಲ್ಲರ ದುರ್ಗುಣಗಳು ಒಂದೊಂದಾಗಿ ಹೊರಬರತೊಡಗಿತ್ತು.
              ನಾಗೇಶ ಆಗ ಹೈಸ್ಕೂಲು ಓದುತ್ತಿದ್ದ ಮಾಣಿ. ಆಗ ತಾನೆ ಪಿಯುಸಿಗೆ ಬರಲು ಹಾತೊರೆಯುತ್ತಿದ್ದ. ಸರಿಯಾಗಿ ಓದಿದ್ದರೆ ಪಿಯುಸಿ ಮೆಟ್ಟಿಲನ್ನು ಹಾರಾಡುತ್ತ ಹತ್ತಬಲ್ಲ ಸಾಮರ್ಥ್ಯವಿದ್ದ ನಾಗೇಶ ಜಯಾಳ ಹಿಂದೆ ಬಿದ್ದ ಪರಿಣಾಮ ಆರು ವಿಷಯಗಳಲ್ಲಿ ಮೂರರಲ್ಲಿ ಫೇಲಾಗಿದ್ದ. ಪರಿಣಾಮ ತನ್ನ ಓದಿಗೂ ನಮಸ್ಕಾರ ಹೇಳಿದ್ದ. ಓದು ಮುಗಿದ ನಂತರ ಈತ ಬರೆದ ಪತ್ರ ಗಂಗತ್ತಿಗೆಯ ಕೈಗೆ ಸಿಕ್ಕಿಬಿದ್ದಿತ್ತು. ಮನೆಯಲ್ಲಿ ಎಲ್ಲಾದರೂ ಹೇಳಿಬಿಟ್ಟರೆ ಎನ್ನುವ ಭಯ ಆತನನ್ನು ಆವರಿಸಿದ ಪರಿಣಾಮ ಗಂಗತ್ತಿಗೆಯ ಉಳಿದ ಕೆಲಸಗಳಲ್ಲಿ ತಪ್ಪು ಹುಡುಕಿ ಸುಮ್ಮನಿರಿಸಲು ಪ್ರಯತ್ನ ಮಾಡಿದ್ದ.
              ಪ್ರೇಮಪತ್ರ ಪ್ರಕರಣ ಇಡೀ ಊರಿನಲ್ಲಿ ನಾಲ್ಕೈದು ದಿನ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು. ನಾಗೇಶ ಎಲ್ಲಾದರೂ ರಂಪಾಟ ಮಾಡಿಬಿಟ್ಟರೆ ಎನ್ನುವ ಕಾರಣಕ್ಕಾಗಿ ಊರಿನವರೆಲ್ಲ ಸುಮ್ಮನಿದ್ದರು. ತನ್ನ ಪ್ರೇಮಪುರಾಣ ಗಂಗೆಯಿಂದಾಗಿಯೇ ಲೋಕಾರ್ಪಣೆಯಾಯಿತು ಎನ್ನುವುದು ನಾಗೇಶನ ಸಿಟ್ಟು. ಹೇಗಾದರೂ ತೀರಿಸಿಕೊಳ್ಳಬೇಕೆಂದುಕೊಳ್ಳುತ್ತಿದ್ದ ನಾಗೇಶ.

***
           ದೊಡ್ಡಮನೆ ವಿಶ್ವೇಶ್ವರ ಭಾವ ತೀರಿಕೊಂಡಿದ್ದು ಸುಬ್ರಾಯ ಮನೆಯ ಯಜಮಾನನಾಗಲು ಪ್ರಮುಖ ಕಾರಣವಾಯಿತು. ವಯಸ್ಸಿನಲ್ಲಿ ಹಿರಿಯ ಹಾಗೂ ಮನೆಯ ಹಿರೇ ಅಣ್ಣ ಎನ್ನುವ ಕಾರಣಕ್ಕಾಗಿ ಸುಬ್ರಾಯ ಯಜಮಾನ್ತನಿಗೆ ವಹಿಸಿಕೊಂಡಿದ್ದ. ಮೊದ ಮೊದಲಿಗೆ ಎಲ್ಲ ಸುರಳೀತವೇ ಇತ್ತು. ಆದರೆ ಮೊದಲಿಗೆ ವರಾತ ಆರಂಭಿಸಿದವನೇ ನಾಗೇಶ. ಗಂಗೆಗೆ ಇದು ಗೊತ್ತಾಗಿದ್ದು. ಮನೆಯಲ್ಲಿ ಎಲ್ಲರದ್ದೂ ಒಂದು ದಾರಿಯಾದರೆ ನಾಗೇಶನದ್ದೇ ಇನ್ನೊಂದು ದಾರಿಯೆಂಬಂತಾಗಿತ್ತು. ಬೆಳಗಿನ ಆಸರಿಗೆಯನ್ನು ಎಲ್ಲರೂ ಕುಡಿದು ಗದ್ದೆಯೋ-ತೋಟವೋ ಎಂಬಂತೆ ತಮ್ಮ ತಮ್ಮ ಕೆಲಸಕ್ಕೆ ಹೋದರೆ ಎಲ್ಲರಿಗಿಂತ ತಡವಾಗಿ ಬಂದು ತಿಂಡಿ ತಿನ್ನಲು ಕುಳಿತುಕೊಳ್ಳುವ ನಾಗೇಶ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಸೊಖಾ ಸುಮ್ಮನೆ ಹೇಳತೊಡಗಿದಾಗಲೇ ಗಂಗೆಗೆ ನಾಗೇಶ ವಿಚಿತ್ರವಾಗಿ ಆಡುತ್ತಿದ್ದಾನೆ ಎನ್ನಿಸಿದ್ದು.
             ಇಷ್ಟಕ್ಕೆ ನಿಲ್ಲದ ನಾಗೇಶ ತಾಯಿ ಮಹಾಕಾಳಕ್ಕನ ಬಳಿ ಚಾಡಿ ಮಾತನ್ನು ಹೇಳಲು ಆರಂಭಿಸಿದಾಗ ಗಂಗೆ ಮೊದಲ ಬಾರಿಗೆ ಆಸ್ಫೋಟಿಸಿ ನಾಗೇಶ ಹಾಗೂ ಮಹಾಕಾಳಕ್ಕನ ಬಳಿ ಜಗಳಕ್ಕೆ ನಿಂತಿದ್ದಳು. ಆದರೆ ಮಹಾಕಾಳಕ್ಕ-ನಾಗೇಶರ ಎದುರು ಒಬ್ಬಂಟಿ ಗಂಗೆ ಸೋತು ಸುಮ್ಮನಾಗಿದ್ದಳು. ಆದರೆ ಆ ನಂತರ ಮಾತು ಮಾತಿಗೆ ಜಗಳ, ಕಿರಿ ಕಿರಿ ಹೆಚ್ಚಿ ಕೊನೆಗೊಮ್ಮೆ ಗಂಗೆ ಇನ್ನು ಈ ಮನೆಯಲ್ಲಿರುವುದು ಅಸಾಧ್ಯ. ಮನೆ ಪಾಲಾಗೋದೇ ಸೈ ಎನ್ನುವ ನಿರ್ಧಾರಕ್ಕೂ ಬಂದಿದ್ದಳು. ಪ್ರೇಮಪತ್ರ ಪ್ರಕರಣವೊಂದು ಮನೆಯ ಒಡೆಯುವ ವರೆಗೂ ಬಂದು ನಿಂತಿದ್ದು ವಿಚಿತ್ರವಾಗಿತ್ತು.


***

          ಗಂಗೆ ಬಯಸಿದರೆ ಮನೆ ಪಾಲಾಗಬೇಕಲ್ಲ. ಗಂಗೆಯ ಹಾಗೂ ಮನೆಯ ಯಜಮಾನ ಸುಬ್ರಾಯನೂ ಪಾಲಿನ ಕುರಿತು ಮಾತಾಡಿದಾಗ ಮಾತ್ರ ಒಂದು ನಿರ್ಣಯ ಸಾಧ್ಯವಿದೆ. ಹೀಗಿದ್ದಾಗ ಒಂದಿನ ಸುಬ್ರಾಯನ ಎದುರಿಗೆ ಗಂಗೆಯ ವಿರುದ್ಧ ಚಾಡಿ ಹೇಳಲು ಬಂದ ನಾಗೇಶ. ಸುಬ್ರಾಯನಿಗೂ ಒಳಗಿಂದೊಳಗೆ ಈ ವಿಷಯ ತಿಳಿದಿದ್ದ ಕಾರಣ ಮೊದ ಮೊದಲು ಸುಮ್ಮನಿದ್ದ. ಆದರೆ ಈ ಸಾರಿ ಸುಬ್ರಾಯನಿಂದಲೂ ಸುಮ್ಮನಿರಲು ಆಗಲಿಲ್ಲ.
          `ಎಂತದಾ ನಿನ್ ಹೆಂಡ್ತಿ ಹೇಳಿ ನೀನು ವಹಿಸ್ಕಂಡು ಬರ್ತ್ಯನಾ..?' ನಾಗೇಶ ಸುಬ್ರಾಯನಿಗೆ ಮಾರುತ್ತರ ನೀಡಿದ್ದ.
          `ನಿನ್ ಹಣೆಬರಹ ಯಂಗೆ ಗೊತ್ತಿದ್ದಾ.. ನೀ ಎಂತಕ್ಕೆ ಹಿಂಗೆ ಚಾಡಿ ಹೇಳ್ತಾನೂ ಇದ್ದೆ ಹೇಳೂ ಯಂಗೆ ಗೊತ್ತಿದ್ದು.. ಹೇಳವನಾ..?' ಎಂದು ಸುಬ್ರಾಯ ಗುಡುಗಿದಾಗ ತಬ್ಬಿಬ್ಬಾಗಿದ್ದ ನಾಗೇಶ ಬಾಲಮುಚ್ಚಿಕೊಂಡ ಕುನ್ನಿಯಂತಾಗಿ ಸುಮ್ಮನೆ ಹೋಗಿದ್ದ.
       
***

         ಮನೆಯಲ್ಲಿ ಸ್ಥಿರಾಸ್ತಿ ಪಾಲು ಮಾಡುವ ಸಲುವಾಗಿ ಪಂಚರು ಸೇರಿದ್ದರು. ನಾಗೇಶ ಮತ್ತೆ ಪುನಃ ತನ್ನ ಹಳೆಯ ವರಾತ ಆರಂಭಿಸಿದ. `ಸುಬ್ಬಣ್ಣಯ್ಯ ಮಾಡ್ತಾ ಇದ್ದಿದ್ದು ಸರಿಯಿಲ್ಲೆ.. ಗಂಗತ್ತಿಗೆ ಅವನ ಮನಸ್ಸಿನಲ್ಲಿ ಹಚ್ಚಿಕೊಟ್ಟಿದ್ದಕ್ಕೆ ಹಿಂಗೆ ಮಾಡ್ತಾ ಇದ್ದ...' ಎಂದು ಮಾತನಾಡಲು ಆರಂಭಿಸಿದ.
          ಸುಬ್ರಾಯನಿಗೆ ಇನ್ನು ತಡೆದುಕೊಳ್ಳುವುದು ಅಸಾಧ್ಯ ಎಂಬಂತಾಯಿತು. `ಸುಮ್ಮಂಗಿರಾ ಕಂಡಿದ್ದಿ.. ಆ ಜಯಂಗೆ ಅಲ್ದನಾ ನೀ ಪತ್ರ ಬರೆದಿದ್ದಿದ್ದು. ಅದನ್ನು ಹುಗಸಿಟ್ಟಿದಿದ್ಯಲಾ ಮ್ಯಾಲ್ ಮೆತ್ತಿಗೆ. ಅದು ಯಮ್ಮನೇದರ ಕೈಗೆ ಸಿಕ್ಚು ಹೇಳೆ ಅಲ್ದನಾ ನಿಂಗೆ ಸಿಟ್ಟು ಬಂದಿದ್ದು. ಅಲ್ದಾ.. ಪತ್ರ ಬರೆದ ಮೇಲೆ ಅದನ್ನ ದಾಢಸಿಕ್ಯಂಬಲೆ ಆಕ್ತಿಲ್ಲೆ ಹೇಳಾದ್ರೆ ಪತ್ರ ಎಂತಕ್ಕೆ ಬರಿಯವಾ..? ಹೋಗ್ಲಿ ಬರೆದಿದ್ದಾದ್ರೂ ಅದನ್ನ ಸರಿಯಾದ ಜಾಗದಲ್ಲಿ ಇಡವಾ ಬ್ಯಾಡದಾ.. ಹೋಗಿ ಹೋಗಿ ಎಲ್ಲಾರೂ ಓಡಾಡೋ ಜಾಗದಲ್ಲಿ ಇಟ್ರೆ ಹಿಂಗಾಗದೆ ಇನ್ನೆಂತಾ ಆಕ್ತಾ..? ಸುಮ್ ಸುಮ್ನೆ ಇನ್ನೊಬ್ಬರ ಬಗ್ಗೆ ಹೇಳಕಿಂತಾ ಮೊದಲು ನೀನು ಸರಿ ಆಲೋಚನೆ ಮಾಡ್ಕ್ಯ..' ಎಂದ.
           ಪಂಚರು ಸ್ಥಿರಾಸ್ತಿಗಳನ್ನು ಪಾಲು ಮಾಡಿ, ಚರಾಸ್ತಿಯ ಲೆಕ್ಖಹಾಕಲು ಆರಂಭಿಸಿದ್ದರು.

No comments:

Post a Comment