Thursday, March 13, 2014

ನದಿಯ ಆತ್ಮಕಥೆ

ಗಣೇಶಪಾಲದಲ್ಲಿ ಹರಿಯುತ್ತಿರುವ ಶಾಲ್ಮಲೆ
ದಟ್ಟ ವೃಕ್ಷಗಳ ಮಧ್ಯ ಜನಿಸಿದೆನು ನಾನು
ಸುತ್ತಮುತ್ತಲೂ ತುಂಬಿತ್ತು ಕಾನು |

ಚಿಕ್ಕಂದಿನಲಿ ನಾನು ಕುಣಿಕುಣಿಯುತಿದ್ದೆ
ಜುಳು ಜುಳು ನಾದದಲಿ ನಲಿ ನಲಿಯುತಿದ್ದೆ |

ನನ್ನೆಡೆಗೆ ಹರಿದವು ನೂರಾರು ಹಳ್ಳ
ಹಳ್ಳಗಳ ಹೀರುತಲಿ ನಾನಾದೆ ಕೊಳ್ಳ |

ನೋಡ ನೋಡುತಲೆ ನಾನಾದೆ ಹೊಳೆ
ತೊಳೆಯತೊಡಗಿದೆನು ಎಲ್ಲರ ಕೊಳೆ |

ಮುಂದೊಮ್ಮೆ ಕಣಿವೆಗೆ ಭೋರೆಂದು ಹಾರಿ
ಸೌಂದರ್ಯ ಜಲಪಾತಕ್ಕೆ ನಾನಾದೆ ದಾರಿ |

ಮುಂದೊಮ್ಮೆ ಮರೆಯಿತು ನನ್ನ ಚಿನ್ನಾಟ
ಮೈಮೇಲೆ ಶುರುವಾಯ್ತು ದೋಣಿಗಳ ಕಾಟ |

ಸಹ್ಯಾದ್ರಿ ಕಳೆದು ಬಳಿ ಬಂತು ಬಯಲು
ಇನ್ನೇನು ಸನಿಹ ಕರೆಯುತಿದೆ ಕಡಲು |

ಮುಂದೆಲ್ಲಾ ಬಂತು ಬಹು ಕರಾವಳಿ
ಎಲ್ಲ ಕಡೆ ಮೆರೆಯಿತು ಹಡಗುಗಳ ಹಾವಳಿ |

ನೋಡುತಿರುವಂತೆಯೇ ಕುಡಿಯಿತು ಕಾರ್ಖಾನೆ ನೀರು
ಮೈನದ ತುಂಬೆಲ್ಲ ಕೀವು ಒಸರು |

ನನ್ನನ್ನು ಬಳಸಿ ಮಾನವ ಮೆರೆದ
ಬದುಕಿನ ನಡುವಲ್ಲಿ ಮಾನವತೆ ಮರೆತ |

ಇದ್ದಕ್ಕಿದ್ದಂತೆ ಮರೆಯಿತು ನಲಿವು
ಒಡಲಿನ ತುಂಬ ತುಂಬಿತು ನೋವು |

ಸಾಕಪ್ಪಾ ಸಾಕಯ್ಯ ಈ ನದಿಯ ಬಾಳು
ಕೇಳದೇ ದೇವನೆ ಈ ಬಾಳ ಗೋಳು |

ಕೊನೆಗೊಮ್ಮೆ ನಾನು ಕಡಲಿಗೆ ಜಿಗಿದೆ
ನದಿಯಾಗಿ-ಕೊನೆಯಾಗಿ ಸಾರ್ಥಕ್ಯ ಪಡೆದೆ |

**
(ಈ ಕವಿತೆ ಬರೆದಿದ್ದು 10-04-2007ರಂದು ದಂಟಕಲ್ಲಿನಲ್ಲಿ)
(ಎತ್ತಿನಹೊಳೆ ತಿರುವು ಮಾಡಿ ಬಯಲಿಗೆ ಹರಿಸಿ, ಅಘನಾಶಿನಿಯನ್ನು ಬೆಂಗಳೂರಿಗೆ ಒಯ್ಯಿರಿ, ಶಾಲ್ಮಲೆಗೆ ಅಣೆಕಟ್ಟುಗಳನ್ನು ಕಟ್ಟಿ ಬತ್ತಿಸಿ, ಕೃಷ್ಣ, ತುಂಗಭದ್ರಾ, ಕಾವೇರಿ, ಮಲಪ್ರಭೆ, ನೇತ್ರಾವತಿ, ಕಾಳಿ ನದಿಗಳನ್ನೆಲ್ಲ ಹೊಲಸೆಬ್ಬಿಸಿ... ಮನಸೋ ಇಚ್ಛೆ ನದಿಯ ಮೇಲೆ ದಬ್ಬಾಳಿ ಕಾಡಲಾಗುತ್ತಿದೆ. ಇವುಗಳಲ್ಲಿ ಹಲವು ಯೋಜನೆಗಳು ಕೈಗೊಳ್ಳಲಾಗಿದೆ. ಇನ್ನೂ ಹಲವು ಯೋಜನೆಗಳು ರಾಜಕೀಯದ ಕಣ್ಣಾ ಮುಚ್ಚಾಲೆಯಲ್ಲಿ ನರಳುತ್ತ ಬಿದ್ದಿವೆ. ಹಸಿರು ಹಸಿರಾಗಿ ಹರಿಯುತ್ತಿರುವ ನದಿಯನ್ನು ಯೋಜನೆಯ ನೆಪದಲ್ಲಿ ಬರಿದು ಮಾಡುವುದು, ಆ ಸಂದರ್ಭದಲ್ಲಿ ಏನು ಸಿಗುತ್ತದೋ ಅದೆಲ್ಲವನ್ನೂ ದೋಚಿಕೊಳ್ಳುವುದು ರಾಜಕಾರಣಿಗಳ ಹುನ್ನಾರ. ಸಾಧಕ-ಬಾಧಕ ಚಿಂತಿಸದೇ ಒಟ್ಟೂ ತಮ್ಮ ಬೇಳೆ ಬೆಯ್ದರೆ ಸಾಕು ಎನ್ನುವ ಗೂಸುಂಬೆ ರಾಜಕಾರಣಿಗಳ ದಾಹಕ್ಕೆ ನದಿಗಳು ಬಲಿಯಾಗುತ್ತಿವೆ. ನದಿಯೊಂದು ಹೇಗೆ ಹುಟ್ಟಿ, ಹೇಗೆಲ್ಲಾ ಆಗಿ ಕೊನೆಗೆ ಏನಾಗುತ್ತದೆ ಎನ್ನುವುದರ ಬಗ್ಗೆ ಒಂದು ಚಿಕ್ಕ ಕವಿತೆ ಇದು)
(ನದಿಗಳಲ್ಲಿ ನೀರಿರುವ ಚಿತ್ರಗಳನ್ನು ಅಪ್ ಲೋಡ್ ಮಾಡಲು ಭಯವಾಗುತ್ತದೆ.. ಮತ್ಯಾರಾದರೂ ಅದರಲ್ಲಿ ನೀರನ್ನು ಕಂಡು ಯೋಜನೆಗಳನ್ನು ರೂಪಿಸಿಬಿಟ್ಟಾರು ಎನ್ನುವ ಭಯದೊಂದಿಗೆ ಇಲ್ಲೊಂದು ಪೋಟೋ ಹಾಕಿದ್ದೆನೆ.)


No comments:

Post a Comment