Saturday, March 22, 2014

ನಿರಾಸೆಯ ಕವನ

ನಿರಾಸೆಯಲ್ಲಿ ಸೈನಾ?
ನಾ ಉಸಿರು ಕಟ್ಟಿ ಓಡಿ ಮುಟ್ಟಿದ
ಬೆಟ್ಟದ ತುದಿಯಲ್ಲಿ ಏನಿದೆ?
ಬಟ್ಟ ಬಯಲು !
ಓಡಿ ತಲುಪಿದ್ದಷ್ಟೇ ಬಂತು |

ನಾಗರೀಕತೆಯ ಮೆಟ್ಟಿಲೇರಿ
ಪುಟ್ಟ ನಗು ಕಟ್ಟಿ, ನೆಟ್ಟ
ನರನಾದರೇನು ಬಂತು?
ಬಿಡಲೊಲ್ಲ ವಾನರ
ಬದಲಾಗಲು ಪ್ರಯತ್ನಿಸಿದ್ದಷ್ಠ ಬಂತು |

ಮರೀಚಿಕೆ ಮೆರೆಯುವ ಮರಳು
ಗಾಡಿನ ಬಯಲು ನಾಡಿನಲ್ಲಿ
ನಡೆದಿದ್ದಷ್ಟೇ ಬಂತು |
ಕೊನೆಯಾಗದ ಉಸುಕು.
ಸುಮ್ಮನೆ ಹಾದಿ ಸಾಗಿದ್ದಷ್ಟೇ ಬಂತು |

ಉಕ್ಕಿ ಹರಿಯುವ ನದಿ ನೀರೊಳು
ಮಂತ್ರಘೋಷದೊಳು ಹವನ-
ಹೋಮವ ಮಾಡಿದರೇನು ಬಂತು ?
ಉರಿಯಲೊಲ್ಲ ಸಮಿಧ |
ಕಿಚ್ಚಿಗೆ ಪ್ರಯತ್ನಿಸಿದ್ದಷ್ಟೇ ಬಂತು |

ಕರಿ ಕಲ್ಲು ಬಂಡೆಯ ನೆತ್ತಿಯಲಿ
ನೀರ ಧುಮ್ಮೆಂದು ಸುರಿದರೆ
ಏನು ಬಂತು ?
ಕುಡಿಯದು ನೀರ ಕಲ್ಲು |
ನೆತ್ತಿಯಲಿ ಸುರಿದಿದ್ದಷ್ಟೇ ಬಂತು |

ನಿರಾಸೆಯೇ ಮೆರೆದ ಬದುಕಿನೊಳು
ಆಸೆಯ ಬಿಸಿಲ್ಗುದುರೆ ಏರಿ ಸಾಧನೆಯ
ಜೊತೆ ಓಡಿದ್ದಷ್ಟೇ ಬಂತು |
ಸಿಗಲೊಲ್ಲದು ಗುರಿ-ಗೆಲುವು |
ಓಡಿ ಸುಸ್ತಾಗಿದ್ದೇ ಬಂತು |

ಎಲ್ಲ ಅರಿತಾಗ ಮೆರೆದು ನಿಂತಿದ್ದು
ಅನುಭವವೆಂಬ ನಿಘಂಟು|
ಸಾಧಿಸುವ ಛಲದ ಗಂಟು |
ಗಂಟಿದ್ದರೆ ಕುಂಟನ್ನೂ ಗೆದ್ದು
ಮುದ್ದು ಗೆಲುವನ್ನು ಪಡೆಯಬಹುದು ||

**
(ಈ ಕವಿತೆಯನ್ನು ಬರೆದಿದ್ದು 5-01-2007ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯ ಮೊದಲಿನ ಪ್ಯಾರಾ ನೇಮಿಚಂದ್ರರದ್ದು. ಅವರ ಬರಹದಿಂದ ಸ್ಪೂರ್ತಿಯಾಗಿ ಬರೆದದ್ದು. ನಿರಾಸೆಯ ಕೋಡಿಯಲ್ಲಿ ಸಿಲುಕಿದ್ದಾಗ ಬರೆದ ನಿರಾಸೆಯ ಕವಿತೆ )

No comments:

Post a Comment