Monday, March 3, 2014

ಬಸ್ಸಿನ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು

(ಇಂತದ್ದೇ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು-ಬಾಣದ ಗುರುತಿದ್ದಲ್ಲಿ ಗಮನಿಸಿ)
         ಯಾವಾಗ್ಲೂ ಇವನು ತನ್ನ ಅನುಭವಗಳನ್ನೇ ಬರೆದುಕೊಳ್ಳುತ್ತಾನೆ ಎಂದುಕೊಳ್ಳಬೇಡಿ. ನನ್ನ ಬದುಕಿನಲ್ಲಿ ಕೆಲವೊಂದು ಅಪರೂಪದ ಅನುಭಗಳಾಗಿವೆ. ಅವನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.
           ಇದು ಚಿಕ್ಕವನಿದ್ದಾಗ ಎಂದೋ ನಡೆದ ಘಟನೆ. ನನಗೆ ಆ ಚಿಕ್ಕಂದಿನ ಘಟನೆ ಅಲ್ಪ ಸ್ವಲ್ಪ ನೆನಪಿನಲ್ಲಿದೆ. ಅದಕ್ನಕಿಂತ ಹಿರಿಯರು ಹೆಚ್ಚು ಹೇಳಿದ್ದರಿಂದ ಘಟನೆ ನೆನಪಿದೆ. ಆಗ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸು ಇರಬಹುದು. ಕಿಲಾಡಿ ಹುಡುಗ ನಾನು ಎಂದೇ ವರ್ಡ್ ಫೇಮಸ್ಸು. ನಿಂತಲ್ಲಿ ನಿಲ್ಲದ ಪೋಕರಿ ಮಾಣಿ.
            ಅಂದು ಅಮ್ಮ ಹಾಗೂ ಅರುಂಧತಿ ಅತ್ತೆ (ಅಪ್ಪನ ಅಕ್ಕ. ಅವರು ಈಗಿಲ್ಲ) ಇವರಿಬ್ಬರೂ ಸೇರಿ ನನ್ನನ್ನು ಕರೆದುಕೊಂಡು ಸಾಗರದ ಹತ್ತಿರ ಭೀಮನಕೋಣೆಯಲ್ಲಿರುವ ನೆಂಟರಮನೆಯ ಕಡೆಗೆ ಹೊರಟಿದ್ದರು. ಸಾಗರದಿಂದ ಅನತಿ ದೂರದಲ್ಲಿರುವ ಈ ಊರಿಗೆ ಹೋಗಬೇಕೆಂದರೆ ಖಾಸಗಿ ಬಸ್ಸುಗಳನ್ನೇ ಹಿಡಿಯಬೇಕು. ಸರ್ಕಾರಿ ಬಸ್ಸುಗಳು ಅಲ್ಲೊಂದು ಇಲ್ಲೊಂದು ಇದ್ದ ಕಾಲದಲ್ಲಿ ನಾವು ಒಂದು ಖಾಸಗಿ ಬಸ್ಸನ್ನೇರಿ ಹೊರಟೆವು.
             ನಾನು ಕಿಲಾಡಿ ಎಂದು ಮೊದಲೇ ಹೇಳಿದ್ದೆನಲ್ಲ. ಸುಮ್ಮನೆ ಇರದ ನಾನು ಬಸ್ಸಿನಲ್ಲಿ ಪುಂಡರಪೂಟನ್ನು ಶುರುಹಚ್ಚಿಕೊಂಡೆ. ಅಮ್ಮ ಬೈದು ಹಿಡಿಶಾಪ ಹಾಕಿದರೂ ಕೇಳಲಿಲ್ಲ. ಬಸ್ಸ್ಇನಲ್ಲಿ ಓಡುವುದು, ಸೀಟಿನಿಂದ ಸೀಟಿಗೆ ಜಿಗಿಯುವುದು.. ಹೀಗೆ ಹಲವಾರು ಕೆಲಸಗಳನ್ನು ಮಾಡಿದೆ. ಅದ್ಯಾವುದೋ ಪುಣ್ಯಾತ್ಮ ಬಸ್ಸಿನ ತಲೆಯ ಮೇಲೆ ಹತ್ತಿ ಯಾವುದೋ ಲಗೇಜನ್ನು ಏರಿಸುತ್ತಿದ್ದ. ನನಗೆ ಕುತೂಹಲ ತಡೆಯಲು ಸಾಧ್ಯವಾಗಲಿಲ್ಲ. ಬಸ್ಸಿನಲ್ಲಿ ಕಂಡಕ್ಟರ್ ಕೂರುವ ಸೀಟಿನ ಪಕ್ಕದಲ್ಲಿ ಹಾಕಿರುತ್ತಾರಲ್ಲ ಲಗೇಜ್  ಕಂಬಿಗಳು ಅದರೊಳಗೆ ತಲೆ ತೂರಿಸಿಬಿಟ್ಟೆ.
             ತೂರಿಸುವುದು ತೂರಿಸಿದೆ. ಆದರೆ ತೆಗೆಯಲಿಕ್ಕಾಗಬೇಕಲ್ಲ. ಊಹೂ.. ಏನು ಮಾಡಿದರೂ ತಲೆಯನ್ನು ಹೊರಕ್ಕೆ ತೆಗೆಯಲು ಆಗುತ್ತಿಲ್ಲ. ಬಸ್ಸಿನ ಮೇಲೆ ಲಗೇಜು ಏರಿಸುವವರೆಲ್ಲ ಗದರಲು ಆರಂಭಿಸಿದರು. ನಾನು ಹೋ ಎಂದು ಅರಚಲು ಆರಂಭಿಸಿದೆ.
             ದುರಾದೃಷ್ಟಕ್ಕೆ ಆಗಲೇ ಬಸ್ಸನ್ನೂ ಬಿಟ್ಟುಬಿಟ್ಟರು.ದೇಹ-ತಲೆ ಬೇರೆ ಬೇರೆ ಆದಂತೆ. ದೇಹ ಒಳಗೆ, ತಲೆ ಹೊರಗೆ. ನನ್ನ ಅಳು ಜೋರಾಯಿತು. ಅಮ್ಮ ಹಾಗೂ ಅತ್ತೆಗೆ ದಿಗ್ಭ್ರಮೆ.
             ಅಷ್ಟರಲ್ಲಾಗಲೇ ಬಸ್ಸಿನಲ್ಲಿದ್ದ ಜನರು, ಕಂಡಕ್ಟರ್-ಡ್ರೈವರ್ ಇವರ ಗಮನ ನನ್ನ ಕಡೆಗೆ ಹರಿದಿತ್ತು. ಮಗನನ್ನು ಸರಿಯಾಗಿ ನೋಡಿಕೊಂಡಿಲ್ಲ. ಭಾನಗಡಿ ಮಾಡಿಕೊಂಡಿದೆ ಎಂದು ಎಲ್ಲರೂ ಅಮ್ಮನಿಗೆ ಬೈಯುವವರೇ. ಭಯ ಹಾಗೂ ನಾಚಿಕೆಯಿಂದ ಅಮ್ಮ ಹಾಗೂ ಅತ್ತೆಯ ಮುಖ ಕೆಂಪಾಗಿತ್ತು.
             ಅಮ್ಮ ಅದೇನು ಮಾಡಿದರೂ ತಲೆಯನ್ನು ಸಿಕ್ಕಿಬಿದ್ದ ಕಂಬಿಯಿಂದ ತೆಗೆಯಲಿಕ್ಕಾಗುತ್ತಿಲ್ಲ. ಗಿಲೋಟಿನ್ ಯಂತ್ರಕ್ಕೆ ಹಾಕಿದಾಗ ಹೇಗೆ ತಲೆ ಸಿಕ್ಕಿಬಿದ್ದು ಒದ್ದಾಡುತ್ತೇವೋ ಹಾಗೆ ನಾನು ಒದ್ದಾಡತೊಡಗಿದ್ದೆ. ಕೊನೆಗೊಮ್ಮೆ ಅಮ್ಮ ದೇವರ ಮೇಲೆ ಭಾರ ಹಾಕಿ ಕಣ್ಣು ಮುಚ್ಚಿ ಜೋರಾಗಿ ಎಳೆದಳು. ಪುಣ್ಯಕ್ಕೆ ತಲೆ ಕಂಬಿಯಿಂದ ಬಿಡಿಸಿಕೊಂಡು ಬಂದಿತು. ಉಫ್.. ನನ್ನ ಪ್ರಾಣ ಉಳಿಯಿತು. ಎಳೆದ ರಭಸಕ್ಕೆ ನನ್ನ ತಲೆಯ ಎರಡೂ ಪಕ್ಕ ಕೆಂಪಗಾಗಿ ಕಿನ್ನೆತ್ತರು ಗಟ್ಟಿತ್ತಲ್ಲದೇ ಈಗಲೋ ಆಗಲೋ ರಕ್ತ ಸುರಿಯುತ್ತದೆ ಎನ್ನುವಂತಾಗಿತ್ತು. ಹಿಂಗಾದರೆ ಆಗಲಿ ಜೀವ ಉಳಿಯಿತಲ್ಲ.. ಸಾಕು. ಎಂದು ನಿಟ್ಟುಸಿರಾಗಿದ್ದರು ಮನೆಯಲ್ಲಿ.
**
             ಇಂತಹ ನನ್ನ ಅನೇಕ ಲಿಗಾಡಿತನಗಳನ್ನು ಅಮ್ಮ ಸೈರಿಸಿಕೊಂಡಿದ್ದಾಳೆ. ಹೆಚ್ಚಿನ ಸಾರಿ ಸಹನೆಯಿಂದ ಮತ್ತೆ ಹಲವು ಸಾರಿ ಸಹನೆಯನ್ನೂ ಬಿಟ್ಟು ಏಟು ಹಾಕಿದವಳು ಅಮ್ಮ. ಅವಿಭಕ್ತ ಕುಟುಂಬದಲ್ಲಿ  ಹಿರಿಯ ಮೊಮ್ಮಗನಾಗಿ ಹುಟ್ಟಿದ ತಪ್ಪಿಗೆ ಯಾರೇ ತಪ್ಪು ಮಾಡಿದರೂ ನನ್ನ ಮೇಲೆ ಅದು ಬರುತ್ತಿತ್ತು. ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಆಗೆಲ್ಲ ನನ್ನ ಬೆನ್ನಿಗೆ ನಿಂತು ನನ್ನ ಪರವಾಗಿ ವಾದಿಸಿದವಳು ಅಮ್ಮ. ಪರಿಣಾಮವಾಗಿ ಅಮ್ಮ ಬೈಗುಳಗಳನ್ನು ಕೇಳಬೇಕಿತ್ತು. ನನ್ನ ಬಾಲ್ಯದ ಕಿಲಾಡಿತನಗಳ ದೆಸೆಯಿಂದ ಅನೇಕ ಸಾರಿ ಅಮ್ಮ ಕಣ್ಣೀರು ಹಾಕಿದ್ದೂ ಇದೆ. ಆದರೆ ಈಗ ಅವುಗಳನ್ನು ಮೆಲುಕು ಹಾಕುವ ಅಮ್ಮ ಅವೆಲ್ಲ ಎಷ್ಟು ಮಜವಾಗಿದ್ದವಲ್ಲಾ ಎಂದು ನಗುತ್ತಾಳೆ. ಅಮ್ಮನಿಗೆ ಹಾಗೂ ಅಮ್ಮನ ಪ್ರೀತಿಗೆ ಸಲಾಂ. ಮಾ.8 ವಿಶ್ವಮಹಿಳಾ ದಿನಾಚರಣೆ. ಅಮ್ಮನಿಗೆ ಶುಭಾಷಯ ಹೇಳಲು ಮತ್ತೊಮ್ಮೆ ನೆಪ ಸಿಕ್ಕಂತಾಗಿದೆ.
ಅಮ್ಮಾ. ವಿಶ್ವ ಮಹಿಳಾ ದಿನಾಚರಣೆಯ ಶುಭಾಷಯಗಳು. 

No comments:

Post a Comment