Saturday, March 15, 2014

ಹಮ್ ಆಪ್ ಕೆ ಹೈ ಕೌನ್ (ಕಥಾ ಸರಣಿ ಭಾಗ-1)

                  ವಾಣಿಗೆ ವಿನಾಯಕನ ಮೇಲೆ ಸಿಕ್ಕಾಪಟ್ಟೆ ಲವ್ವಾಗಿತ್ತು. ಆದರೆ ತಾನಾಗಿಯೇ ಯಾಕೆ ಹೇಳಬೇಕು. ಅವನೇ ಹೇಳಲಿ ಎನ್ನುವ ಹಮ್ಮು-ಬಿಮ್ಮು.  ಪ್ರತಿದಿನ ಸಿಗುತ್ತಿದ್ದ ವಿನಾಯಕ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದ. ಮಾತಾಡುತ್ತಿದ್ದ. ನಗುತ್ತಿದ್ದ. ನಗಿಸುತ್ತಿದ್ದ. ಮಾತಿಗೊಮ್ಮೆ ಕೆಣಕುತ್ತಿದ್ದ. ಇಂತಹ ಹುಡುಗನ ಮೇಲೆ ವಾಣಿಗೆ ಲವ್ವಾಗದೇ ಇರಲು ಸಾಧ್ಯವೇ ಇರಲಿಲ್ಲ ಬಿಡಿ.
                  ವಾಣಿಗೆ ವಿನಾಯಕನ ಪರಿಚಯ ಆಗಿದ್ದು ವಿಚಿತ್ರ ರೂಪದಲ್ಲಿ. ಆಗಿನ್ನೂ ನೋಕಿಯಾ ಬೇಸಿಕ್ ಸೆಟ್ ಕೂಡ ಮಾರ್ಕೇಟಿಗೆ ಬರದಿದ್ದ ಕಾಲ. ಕಾಲೇಜು ಲೋಕ. ಕಾಲೇಜಿನ ಹುಡುಗ-ಹುಡುಗಿಯರಿಗೆಲ್ಲ `ಹಾಯ್ ಮನಸೆ' ಎಂಬ ಪಾಕ್ಷಿಕವೇ ಗೆಳೆಯ, ಗೆಳತಿ, ಮನಶಾಸ್ತ್ರ ಗೃಂಥಿಕೆ. ಎದೆಗವಚಿಕೊಂಡು ಹೋಗಲು ಇರುವ ಪುಸ್ತಿಕೆ. ಹಾಯ್ ಮನಸೆಯ ಮುಖ್ಯ ಪುಟದಲ್ಲಿ ಬರುವ ಚಿಕ್ಕ ಚಿಕ್ಕ ಮಕ್ಕಳ ಪೋಟೋಗಳನ್ನು ಕತ್ತರಿಸಿ ಇಟ್ಟುಕೊಳ್ಳುವವರು ಅನೇಕ, ಅದರ ಮುಖಪುಟದಲ್ಲಿ ತಮ್ಮದಾದರೂ ಚಿತ್ರ ಬರಬಾರದೇ ಎಂದುಕೊಂಡವರೂ ಹಲವರು. ಇಂತಹ ಹಾಯ್ ಮನಸೆಗೆ ರೆಗ್ಯೂಲರ್ ಆಗಿ ಬರೆಯುತ್ತಿದ್ದವ ವಿನಾಯಕ.
                  ಒಂದು ದಿನ ಅದೇ ಪಾಕ್ಷಿಕದ ಗೆಳೆತನದ ಕಾಲಮ್ಮಿನಲ್ಲಿ ವಿನಾಯಕನ ಪೋಟೋ ಜೊತೆಗೆ ವಿಳಾಸ ಬಂದಾಗ ವಾಣಿ ಕಣ್ಣಿಗೆ ಮೊದಲ ಬಾರಿ ಬಿದ್ದಿದ್ದ ವಿನಾಯಕ. ಯಾಕೋ ಕೀಟಲೆ ಮಾಡೋಣ ಎಂದುಕೊಂಡು ಪತ್ರ ಬರೆದಿದ್ದಳು. ವಿನಾಯಕನಿಂದ ಮರು ಉತ್ತರ ಬಂದಿದ್ದಾಗ ವಾಣಿ ಅಚ್ಚರಿಯ ಜೊತೆಗೆ ಖುಷಿಯನ್ನೂ ಅನುಭವಿಸಿದ್ದಳು ವಾಣಿ. ಪತ್ರಗಳು ಮುಂದುವರಿದವು. ಪರಿಚಯ ಸ್ನೇಹವಾಯಿತು. ಕೊನೆಗೊಮ್ಮೆ ಶಿರಸಿಯ ದೊಡ್ಡ ಕಾಲೇಜಿನಲ್ಲಿ ಓದುತ್ತಿದ್ದ ವಿನಾಯಕ, ಕಾಮರ್ಸ್ ಕಾಲೇಜಿನಲ್ಲಿ ಓದುತ್ತಿದ್ದ ವಾಣಿ ಎದುರು ಸಿಕ್ಕು ಮಾತಾಡಬೇಕಲ್ಲ ಎಂದುಕೊಂಡು ಅದಕ್ಕೊಂದು ದಿನ ನಿಗದಿ ಮಾಡಿಕೊಂಡರು.
                  ಆದರ್ಶ ನಗರದಲ್ಲಿ ಕಾಮರ್ಸ್ ಕಾಲೇಜಿಗೂ ದೊಡ್ಡ ಕಾಲೇಜಿಗೂ ಸಮಾ ಮಧ್ಯ ಜಾಗದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ವರದಮೂರ್ತಿ ಗಣಪತಿ ದೇವಾಲಯದಲ್ಲಿ ಅಂದು ಸಂಕಷ್ಟಿ ಉತ್ಸವ.  ವಾಣಿಗೆ ಸಂಕಷ್ಟಿಯ ನೆಪ. ವಿನಾಯಕನೊಂದಿಗೆ ಮಾತನಾಡುವ ತವಕ. ಪ್ರತಿ ಸಂಕಷ್ಟಿಯಂದೂ ತಪ್ಪದೆ ವಿನಾಯಕ ಗಣಪತಿ ದೇವಾಲಯಕ್ಕೆ ಹೋಗುತ್ತಾನೆ. ಆತನ ದೈವ ಭಕ್ತಿ ಕೊಂಚ ಪ್ರಮಾಣದ್ದು. ಆದರೆ ದೇವಾಲಯಕ್ಕೆ ಬರುವ ಹುಡುಗಿಯರನ್ನು ನೋಡು ಕಣ್ಣು ತಂಪು ಮಾಡಿಕೊಳ್ಳುವುದು ಆತನ ದೇಗುಲ ದರ್ಶನದ ಅಸಲಿಯತ್ತು.
                ಪತ್ರದ ಗೆಳತಿ ವಾಣಿಯೇ ತನ್ನನ್ನು ಭೇಟಿಯಾಗಲು ಹೇಳಿದ್ದಾಳೆ ಎನ್ನುವ ಕಾರಣಕ್ಕೆ ಎಂದಿಗಿಂತ ಸ್ವಲ್ಪ ಹೆಚ್ಚಾಗಿ ತಯಾರಾಗಿ ಆಕೆ ಹೇಳಿದ್ದ ಸಮಯಕ್ಕಿಂತ ಎರಡು ತಾಸು ಮೊದಲೇ ದೇವಾಲಯದ ಪಕ್ಕದಲ್ಲಿರುವ ವಾಹನಗಳ ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರದ ಎದುರು ಹಾಜರಾದ ವಿನಾಯಕ ಕೆಮ್ಮುತ್ತ ನಿಂತಿದ್ದ. ದೋಸ್ತರು ಕಾಡುತ್ತಾರೆ ಎನ್ನುವ ಕಾರಣಕ್ಕೆ ಯಲ್ಲಾಪುರ ನಾಕೆಯಲ್ಲಿದ್ದ ಸರ್ಕೂಲೇಶನ್ ಲೈಬ್ರರಿಗೆ ಹೋಗುವ ಕಾಮನ್ ಸುಳ್ಳನ್ನೂ ಹೇಳಿದ್ದ. ಬರೀ ಓದುಗುಳಿ ಎಂಬ ಆರೋಪವನ್ನು ಹೊಂದಿದ್ದ ವಿನಾಯಕ ಸರ್ಕೂಲೇಶನ್ ಲೈಬ್ರರಿ ಹೆಸರೆತ್ತಿದಾಗ ದೋಸ್ತರೆಲ್ಲ `ಮಾರಾಯಾ ನೀ ಹೋಗಿ ಬಾ.. ನಾವ್ಯಾರೂ ಬರ್ತ್ವಿಲ್ಲೆ' ಎಂದು ಅವನನ್ನು ಸಾಗ ಹಾಕಿದ್ದರು. ಸರ್ಕೂಲೇಶನ್ ಲೈಬ್ರರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹುಡುಗಿಯರು ಬರುತ್ತಾರೆ. ಪಿಯು ಕಾಲೇಜಿನ ಹುಡುಗಿಯರು, ಕಾಮರ್ಸ್ ಕಾಲೇಜಿನ ಹುಡುಗಿಯರು, ದೊಡ್ಡ ಕಾಲೇಜಿನವರು, ಜೆಎಂಜೆಯವರು ಬಂದು ತುಂಬಿ ತುಳುಕುತ್ತಿರುತ್ತಾರೆ. ಅಲ್ಲಿ ಹೋಗಿ ಸಾಯಿಸುತೆಯೋ, ಕೌಂಡಿಣ್ಯ, ಯಂಡಮೂರಿ, ಭೈರಪ್ಪರದ್ದೋ ಕಾದಂಬರಿಗಳನ್ನು ತೆಗೆದುಕೊಂಡು ಹೋಗುವಂತೆ ನಟನೆ ಮಾಡುವುದು ವಿನಾಯಕನ ವಾಡಿಕೆ. ಈ ಬರಹಗಾರರ ಪುಸ್ತಕಗಳನ್ನು ಭಕ್ತಿಯಿಂದ ಹುಡುಗಿಯರು ಓದುತ್ತಾರೆ. ಅವನ್ನು ಒಯ್ಯುವ ಹುಡುಗರ ಕಡೆಗೆ ಆಸಕ್ತಿಯುತವಾದ ನೋಟವನ್ನು ಹರಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದ ವಿನಾಯಕ ಇಂತಹ ಗುಟ್ಟನ್ನು ಯಾವತ್ತೂ ದೋಸ್ತರಿಗೆ ಹೇಳುವ ಕೆಲಸ ಮಾಡಿರಲಿಲ್ಲ.
               ಸಮಯಕ್ಕೆ ಸರಿಯಾಗಿ ಯಲ್ಲಾಪುರ ನಾಕಾ ಕಡೆಯಿಂದ ಬಂದಳು ವಾಣಿ. ಬಹಳಷ್ಗುಟು ಹುಡುಗಿಯರು ಆ ದಾರಿಯಲ್ಲೆ ಬಂದಿದ್ದರೂ ಅವರನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತ ನಿಂತಿದ್ದ ವಿನಾಯಕ ಈಕೆಯನ್ನು ನೋಡಿದವನೇ ಇವಳೇ ವಾಣಿಯಾದರೆ ಸಾಕಿತ್ತು ಗಣೇಶಾ ಎಂದುಕೊಂಡಿದ್ದ. ತನ್ನ ಬಳಿ ಪತ್ರಮೈತ್ರಿಯಲ್ಲಿ ತನ್ನ ಪೋಟೋವನ್ನು ಕಳಿಸಿಕೊಡು ಎಂದು ಗೋಗರೆದು ಪಡೆದುಕೊಂಡಿದ್ದ ಈಕೆ ತಾನು ಮಾತ್ರ ತನ್ನ ಪೋಟೋ ಕಳಿಸದೇ, ಸಮಯ ಸಿಕ್ಕಾಗ ಕೊಡ್ತಿ ಎಂದೋ, ಸಸ್ಪೆನ್ಸ್ ಎಂದೋ ಸಾಗ ಹಾಕುತ್ತಿದ್ದಳು. ಕಾಲೇಜಿಗೆ ಯುನಿಫಾರ್ಮಿರಲಿಲ್ಲ. ಹುಡುಗಿಯರು ಹುಡುಗರನ್ನು ಭೇಟಿ ಮಾಡಬೇಕಾದರೆ ಯುನಿಫಾರ್ಮ್ ಇಲ್ಲದ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದುಕೊಂಡ. ಆಕಾಶ ನೀಲಿ ಕಲರಿನ ಚುಡಿಯಲ್ಲಿ ಚನ್ನಾಗಿ ಕಾಣುತ್ತಿದ್ದಳು ವಾಣಿ. ಯಾಕೋ ವಿನಾಯಕನಿಗೆ ಯಡಳ್ಳಿ ಕಾಲೇಜಿನ ಯುನೀಫಾರ್ಮ್ ತುತ್ತಾ ಸುಣ್ಣಾ ನೆನಪಾಯಿತು. ಬಂದವಳೇ ವರದಮೂರ್ತಿ ದೇವಾಲಯದ ಎದುರು ನಿಂತಿದ್ದ ವಿನಾಯಕನನ್ನು ನೋಡಿದಳು. ಪೋಟೋದಲ್ಲಿ ನೋಡಿದ್ದಕ್ಕೂ ಎದುರಾ ಬದರಾ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ ಎಂದುಕೊಂಡ ವಾಣಿ ಅನುಮಾನದಿಂದಲೇ `ನೀನು ವಿನಾಯಕ ಅಲ್ದಾ..?' ಎಂದು ಮಾತನಾಡಿಸಿದಳು.
ಪೆಚ್ಚುನಗೆಯಿಂದ ಹೌದೆಂದ ವಿನಾಯಕ. ತಾನು ಅಂದುಕೊಂಡಿದ್ದ ಹುಡುಗಿಯೇ ವಾಣಿಯಾಗಿದ್ದಳು ಎನ್ನುವ ಖುಷಿ, ಆಕೆಯೇ ಮೊದಲು ಬಂದು ಮಾತನಾಡಿಸಿದಳು ಎನ್ನುವ ಅಚ್ಚರಿಯಿಂದ ಪೆಚ್ಚಾಗಿ ನಿಂತಿದ್ದ ವಿನಾಯಕ.
                ಮಾಡಲು ಬೇರೇ ಏನೂ ಕೆಲಸವಿರದಿದ್ದ ಕಾರಣ ವಿನಾಯಕ ಅವಳ ಜೊತೆಗೆ ವರದಮೂರ್ತಿ ಗಣಪತಿಯನ್ನು ಸುತ್ತುಹಾಕಲು ಹೊರಟ. ಹುಡುಗಿಯೊಬ್ಬಳ ಜೊತೆಗೆ ಮೊತ್ತಮೊದಲ ಬಾರಿಗೆ ದೇವಸ್ಥಾನವನ್ನು ಸುತ್ತಲು ಹೊರಟಿದ್ದ ವಿನಾಯಕನಿಗೆ ಸಾಕಷ್ಟು ಮುಜುಗರವಾಗಿತ್ತು. ದೇಗುಲದಲ್ಲಿ ನಾಲ್ಕಾರು ಬಿಳಿಕೂದಲ ಮುದುಕಿಯರು ಕುಳಿತಿದ್ದವರು ವಾಣಿ-ವಿನಾಯಕನನ್ನು ದುರುಗುಟ್ಟು ನೊಡಲು ಆರಂಭಿಸಿದಾಗ ವಿನಾಯಕ ಕಸಿವಿಸಿಗೊಂಡ. ಹುಡುಗಿಯರು ಮುಖದ ಮೇಲೆ ಭಾವನೆಗಳನ್ನು ತೋರ್ಪಡಿಸದ ಕಾರಣ ಆಕೆಯ ಮನದಲ್ಲಿ ಯಾವ ಭಾವನೆಗಳೆದ್ದಿರಬಹುದು ಎನ್ನುವುದು ವಿನಾಯಕನಿಗೆ ಗೊತ್ತಾಗಲಿಲ್ಲ.
                 ದೇವಸ್ಥಾನ ಸುತ್ತುವ ಕೆಲಸ ಕೆಲವೇ ಕ್ಷಣಗಳಲ್ಲಿ ಸರಿದುಹೋಯಿತು. ವಾಣಿಗೆ ವಿನಾಯಕನ ಸಾನ್ನಿಧ್ಯ, ವಿನಾಯಕನಿಗೆ ವಾಣಿಯ ಸಾನ್ನಿಧ್ಯ ಖುಷಿಕೊಟ್ಟಿತ್ತು. ವಾಣಿಗೆ ವಿನಾಯಕ ಪರವಾಗಿಲ್ಲ, ಚನ್ನಾಗಿದ್ದಾನೆ ಎನ್ನಿಸಿದ್ದರಿಂದ ಆತನ ಬಳಿ ಮಾತಿಗೆ ನಿಂತಿದ್ದಳು. ದೇಗುಲ ದರ್ಶನದ ಕಾರ್ಯ ಮುಗಿದ ನಂತರ ಮುಂದೇನು ಮಾಡಬೇಕೋ ತಿಳಿಯಲಿಲ್ಲ.
              `ಸುರಭಿಗೆ ಹೋಪನಾ..?' ವಿನಾಯಕನೇ ಕೇಳಿದ್ದ.
              `ಮಂಜಣ್ಣನ ಕಂಡಾಂಗೆ ಆಜಿಲ್ಲೆ.. ಹುಂ ಹೋಪನ ಬಾ..'
              ಸುರಭಿಯಲ್ಲಿ ಮಂಜಣ್ಣನಿದ್ದ. ಮಸಾಲಾಪುರಿಗೆ ಆರ್ಡರ್ ಕೊಟ್ಟು ಮಾತಿಗೆ ನಿಂತರು. ನಿಮಿಷಕ್ಕೊಮ್ಮೆ ಜೋಕ್ ಕಟ್ ಮಾಡುತ್ತ ವಿನಾಯಕ ವಾಣಿಗೆ ಇಷ್ಟವಾದ. ಅಪರೂಪಕ್ಕೆಂಬಂತೆ ಕಾಮರ್ಸ್ ಕಾಲೇಜಿನ ಹುಡುಗಿಯೊಬ್ಬಳು ಆರ್ಟ್ ಎಂಡ್ ಸೈನ್ಸ್ ಕಾಲೇಜು ಹುಡುಗನನ್ನು ಇಷ್ಟಪಟ್ಟಿದ್ದಳು.
               ಆ ನಂತರದ ದಿನಗಳಲ್ಲಿ ವಿನಾಯಕ-ವಾಣಿ ಬಿಡುವಿದ್ದಾಗಲೆಲ್ಲ ಮಾತಾಡುತ್ತಿದ್ದರು. ಸಿಕ್ಕಾಗ ಮಂಜಣ್ಣನ ಸುರಭಿ ಹೊಟೆಲಿನಲ್ಲಿ ಮಸಾಲೆಪುರಿ ಖಾಯಂ ತಿನ್ನುವುದು ವಾಡಿಕೆಯಾಗಿಬಿಟ್ಟಿತ್ತು. ಇವರಿಬ್ಬರೂ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ವಿನಾಯಕನ ದೋಸ್ತರಿಗಾಗಲೀ ವಾಣಿಯ ಗೆಳತಿಯರಿಗಾಗಲೀ ಗೊತ್ತಾಗಲು ಬಿಡಲಿಲ್ಲ. ಅಂದ ಹಾಗೆ ಇಷ್ಟೆಲ್ಲ ನಡೆದಿದ್ದು ಡಿಗ್ರಿ ಫೈನಲ್ ಇಯರಿನಲ್ಲಿ. ಒಂದಾರು ತಿಂಗಳಾಗಿತ್ತು ಪರಿಚಯವಾಗಿ. ಇಬ್ಬರಲ್ಲೂ ಸ್ನೇಹದ ಜಾಗದಲ್ಲಿ ಪ್ರೀತಿ ಮನೆ ಮಾಡಿತ್ತು. ಆದರೆ ಇಬ್ಬರೂ ಅದನ್ನು ಹೇಳಿಕೊಳ್ಳಲು ಧೈರ್ಯ ತೋರಲಿಲ್ಲ. ಬಹುಶಃ ಹುಡುಗ-ಹುಡುಗಿಯರಲ್ಲಿ ಮೊದಲ ಪ್ರೇಮದ ದೊಡ್ಡ ಸಮಸ್ಯೆ ಇದೇ ಇರಬೇಕು. ಗೆಳೆಯ-ಗೆಳತಿಯರ ನಡುವೆ ಪ್ರೇಮಾಂಕುರವಾದಾಗ ಎಲ್ಲಿ ಅದನ್ನು ಹೇಳಿಕೊಂಡು ಬಿಟ್ಟರೆ ಮುಂದೆ ಮಾತುಕತೆ ಇರುವುದಿಲ್ಲವೋ? ಒಪ್ಪದಿದ್ದರೆ ಎಲ್ಲಿ ದೂರವಾಗಿಬಿಡಬೇಕಾಗುತ್ತದೋ ಎನ್ನುವ ಭಯವೇ ಕಾಡಿಬಿಡುತ್ತದೆ. ನಮ್ಮ ಈ ಕಥೆಯ ನಾಯಕ-ನಾಯಕಿಯರಿಗೂ ಹೀಗೆಯೇ ಆಯಿತು.
                 ಬನವಾಸಿ ರಸ್ತೆಯ ವಾಣಿ, ಬಾಳೇಸರ ಬಸ್ಸಿನ ವಿನಾಯಕನ ಪ್ರೇಮ ಕಥಾನಕ ಒಳಗೊಳಗೆ ಹೆಮ್ಮರವಾಗಿತ್ತು. ಹೀಗಿರುವ ವೇಳೆಗೆ ವಾಣಿ-ವಿನಾಯಕ ಇಬ್ಬರ ಕೈಯಲ್ಲೂ ನೋಕಿಯಾ ಬೇಸಿಕ್ ಸೆಟ್ ಬಂದಿತ್ತು. ವಾಣಿಗೆ ಮನೆ ಮನೆಯಲ್ಲೂ ನೆಟ್ ವರ್ಕ್ ಬರುತ್ತಿದ್ದ ಕಾರಣ ಯಾವಾಗಲೂ ಮೊಬೈಲ್ ನಲ್ಲಿ ಇರುತ್ತಿದ್ದರೆ ವಿನಾಯಕ ದಿನದ ಅರ್ಭ ಭಾಗ ನಾಟ್ ರೀಚೆಬಲ್. ಆದರೆ ವಾಣಿ ಮೆಸೇಜ್ ಮಾಡುತ್ತಾಳೆ ಎಂಬ ಕಾರಣಕ್ಕಾಗಿ ತಮ್ಮೂರಿನ ಅರ್ಧ ಕಿಲೋಮೀಟರ್ ಹುಡ್ಡವನ್ನು ಹತ್ತು ನಿಮಿಷದಲ್ಲಿ ಓಡಿ ಹತ್ತಬಂದು ಕುಳಿತು ನಂತರ ಎದುಸಿರು ಬಿಡುತ್ತ ಟೊಯ್ ಎನ್ನುತ್ತಿದ್ದ ಮೆಸೇಜ್ ಟೋನ್ ಕೇಳುತ್ತ ಮುಖವರಳಿಸುತ್ತಿದ್ದ. ರಾತ್ರಿ ಒಂಭತ್ತಾಗುವವರೆಗೂ ಮೆಸೇಜುಗಳ ಲೇವಾದೇವಿ ವ್ಯವಹಾರ ನಡೆಯುತ್ತಿತ್ತು. ಆದರೆ ಈ ಸಂದರ್ಭದಲ್ಲಿಯೂ ಅವಳು ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಲ್ಲ. ವಿನಾಯಕನೂ ಪ್ರೇಮನಿವೇದನೆ ಮಾಡಿಕೊಳ್ಳಲಿಲ್ಲ.
                 ಡಿಗ್ರಿ ಮುಗಿಯಿತು. ವಾಣಿ ಮನೆಯಲ್ಲೇ ಉಳಿದಳು. ವಿನಾಯಕ ಬೆಂಗಳೂರಿಗೆ ಹಾರಲು ಹವಣಿಸುತ್ತಿದ್ದ. ಬೆಂಗಳೂರಿಗೆ ಹೋಗುವ ಮುನ್ನ ಸ್ಥಳೀಯ ಬ್ಯಾಂಕೊಂದರಲ್ಲಿ ಡಾಟಾ ಎಂಟ್ರಿಯ ಕೆಲವೊಂದು ಆತನನ್ನು ಕೈ ಬೀಸಿ ಕರೆದಿತ್ತು. ಅಲ್ಲಿಗೆ ಹೋಗಿ ಕೆಲಸ ಮಾಡಲು ಆರಂಭಿಸಿದ್ದ. ಈ ಸಂದರ್ಭದಲ್ಲಿಯೇ ವಾಣಿಯ ಮನೆಯಲ್ಲಿ ವಾಣಿಯ ಮದುವೆಯ ಪ್ರಸ್ತಾಪ ಶುರುಮಾಡಿದ್ದರು. ಅಲ್ಲಿ ಇಲ್ಲಿ ಜಾತಕ ಕೇಳಲು ಆರಂಭಿಸಿದ್ದರು. ಈ ವಿಷಯ ವಾಣಿಗೆ ತಿಳಿದು ತಲ್ಲಣಗೊಂಡಿದ್ದಳು. ಕೊನೆಗೊಮ್ಮೆ ತನಗೆ ಮದುವೆ ಮಾಡಲು ಮನೆಯಲ್ಲಿ ಹಂಡು ಹುಡುಕುತ್ತಿದ್ದಾರೆ ಎಂದು ವಿನಾಯಕನಿಗೂ ಹೇಳಿದ್ದಳು. ವಿನಾಯಕನಿಗೆ ಈಗ ಅವಳ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬಿಡೋಣ ಎನ್ನಿಸಿತ್ತು. ಆದರೆ ತಾನು ಬೆಂಗಳೂರಿಗೆ ಹೋದ ಮೇಲೆ ತನ್ನಲವ್ ವಿಷಯ ಹೇಳಿಕೊಂಡರೆ ಅದಕ್ಕೆ ಬೆಲೆ ಬರುತ್ತದೆ. ಆಗ ಆಕೆಯ ಮನೆಯಲ್ಲೂ ಒಪ್ಪಿಕೊಳ್ಳುತ್ತಾರೆ ಎಂದುಕೊಂಡು ಸುಮ್ಮನಾದ. ವಾಣಿ ಹತಾಶಳಾಗಿದ್ದಳು. ಆದರೆ ಆಕೆಯೂ ಆತನ ಬಳಿ ಹೇಳಿಕೊಳ್ಳಲಿಲ್ಲ.
                ಕೊನೆಗೊಂದು ಜಾತಕ ಹೊಂದಿಕೆಯಾಯಿತು. ಮನೆಯವರು ಒಪ್ಪಿಕೊಂಡರು. ವಾಣಿಗೆ ಮನಸ್ಸಿರಲಿಲ್ಲ. ಆದರೆ ಮನೆಯ ತೀರ್ಮಾನ ಅಂತಿಮವಾಗಿತ್ತು. ವಿನಾಯಕನ ಬಳಿ ಹೇಳಿದರೆ... ಎಂಬ ಆಲೋಚನೆ ಬಂತಾದರೂ ಏನು ಮಾಡಬೇಕೆಂದು ತೋಚಲಿಲ್ಲ. ತಾನಾಗಿಯೇ ವಿನಾಯಕನ ಬಳಿ ನಾ ನಿನ್ನ ಲವ್ ಮಾಡ್ತಾ ಇದ್ದೀನಿ ಅಂದರೆ ವಿನಾಯಕ ಎಲ್ಲಾದರೂ ವಿರೋಧ ಮಾಡಿದರೆ..? ಎಂಬ ಭೀತಿ ಕಾಡಿತು. ತಳಮಳದೊಂದಿಗೆ ಸುಮ್ಮನಾದಳು. ಇತ್ತ ವಿನಾಯಕ ಚಡಪಡಿಸಿದ.

**
`ವಿನಾಯ್ಕಾ.. ಮುಂದಿನ ವಾರ ನನ್ನ ಮದುವೆ.. ಮನೆಯಲ್ಲಿ ನಿಶ್ಚಯ ಮಾಡಿದ್ದ. ನಿಂಗೆ ಆನು ಸಿಕ್ಕಿ ಕರೆಯಕಾಗಿತ್ತು. ಆದರೆ ಕರೆಯಲಾಜಿಲ್ಲೆ.. ಸಾರಿ.. ಪೋನ್ ಮಾಡಿದ್ದಕ್ಕೆ ಬೇಜಾರಾಗಡಾ.. ಮದುವೆಗೆ ಬಾ. ಶಿರಸಿ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆಕ್ತು. ನೀ ಹೆಂಗಂದ್ರೂ ದೂರದಿಂದ ನೆಂಟರಾಗವಡಲಾ..'
ವಿನಾಯಕನಿಗೆ ಒಮ್ಮೆ ದಿಗ್ಭ್ರಮೆ. ಆದರೆ ತೋರಿಸಿಕೊಳ್ಳದೇ `ವಾವ್.. ವಾಣಿ ಕಂಗ್ರಾಟ್ಸ್.. ಎಷ್ಟು ಖುಷಿಯಾಗ್ತಾ ಇದ್ದು ಗೊತ್ತಿದ್ದ ಯಂಗೆ. ಒಳ್ಳೆ ಸುದ್ದಿ ಹೇಳದೆ ಹಾಂ.. ನೋಡ್ತಿ. ನಾ ರಜಾಕ್ಕೆ ಅಪ್ಲೈ ಮಾಡ್ತಿ. ಕೊಟ್ರೆ ಖಂಡಿತ ಬರ್ತಿ.. ಹಾ..'
ಈಗಲಾದರೂ ತನಗೆ ಪ್ರಪೋಸ್ ಮಾಡುತ್ತಾನೆ ಎಂದುಕೊಂಡಿದ್ದ ವಾಣಿ ನಿಜಕ್ಕೂ ಹತಾಶಳಾದಳು. `ಮತ್ತೆ ವಿನಾಯ್ಕಾ.. ಇನ್ನೆಂತಾದ್ರೂ ಹೇಳದು ಇದ್ದಾ..?'
`ಊಹೂ.. ಎಂತಾ ಇಲ್ಯೆ.. ನಿಮ್ಮನೇಲಿ ಕೇಳಿದ್ದಿ ಹೇಳು..' ವಿನಾಯಕನೂ ಹೇಳು ಸಿದ್ಧನಿರಲಿಲ್ಲ..
`ಎಂತಾದ್ರೂ ಹೇಳದಿದ್ರೆ ಹೇಳಾ.. ಆಮೇಲೆ ನಾ ನಿಂಗೆ ಸಿಗದು ಡೌಟು. ಬ್ಯುಸಿಯಾಗಿಬಿಡ್ತಿ. ಮದುವೆ ತಯಾರಿನಲಾ..'
ವಿನಾಯಕನ ಟ್ಯೂಬ್ ಲೈಟ್ ಈಗಲೂ ಹತ್ತಿಕೊಳ್ಳಲಿಲ್ಲ..`ಮತ್ತೆಂತಾ ಇಲ್ಯೆ.. ನೆನಪಾದ ಕೂಡಲೇ ಮೇಸೇಜ್ ಮಾಡ್ತಿ..' ಖಂಡಿತ ವಿನಾಯಕ ಈ ಸಾರಿ ಖಡ್ಡತನ ಮಾಡಿದ್ದ.
`ಸರಿ ಹಾಗಾದ್ರೆ.. ಮತ್ಯಾವಾಗಾದ್ರೂ ಲೈಫಲ್ಲಿ ಮೀಟ್ ಮಾಡನಾ..' ವಾಣಿ ಪೋನ್ ಇಟ್ಟಿದ್ದಳು.

**
ವಿನಾಯಕನ ಕಣ್ಣು ಹನಿಗೂಡಿತ್ತು. ವಾಣಿ ಪೋನ್ ಇಡುವ ಮುನ್ನ ಹೇಳಿದ ಸಾಲಿನ ಜೊತೆಗಿದ್ದ ಗದ್ಗದಿತ ಭಾವ ಕೊನೆಗೂ ವಿನಾಯಕನಿಗೆ ತಿಳಿಯಲೇ ಇಲ್ಲ. ತಿಳಿದರೂ ಸುಮ್ಮನುಳಿದಿದ್ದ.

No comments:

Post a Comment